Back to Languages

    Kannada - Chapter 36

    Translation by Abdussalam Puthige

    Verse 1

    ಯುಕ್ತಿಪೂರ್ಣವಾಗಿರುವ ಕುರ್‌ಆನಿನಾಣೆ

    Verse 2

    (ದೂತರೇ,) ನೀವು ಖಂಡಿತ ಒಬ್ಬ ದೇವದೂತರಾಗಿರುವಿರಿ

    Verse 3

    ನೀವು ನೇರ ಮಾರ್ಗದಲ್ಲಿರುವಿರಿ

    Verse 4

    ಪ್ರಬಲನೂ ಕರುಣಾಮಯಿಯೂ ಆಗಿರುವವನು ಇದನ್ನು ಇಳಿಸಿಕೊಟ್ಟಿರುವನು –

    Verse 5

    – ಯಾರ ಗತ ಪೀಳಿಗೆಯನ್ನು ಎಚ್ಚರಿಸಲಾಗಿರಲಿಲ್ಲವೋ ಅವರನ್ನು ಎಚ್ಚರಿಸಲಿಕ್ಕಾಗಿ. ಅವರು ಅರಿವಿಲ್ಲದವರು

    Verse 6

    ಅವರಲ್ಲಿ ಹೆಚ್ಚಿನವರ ಕುರಿತು (ಅಲ್ಲಾಹನ) ಮಾತು ಈಗಾಗಲೇ ಸತ್ಯವಾಗಿದೆ. ಅವರಿನ್ನು ವಿಶ್ವಾಸಿಗಳಾಗುವುದಿಲ್ಲ

    Verse 7

    ನಾವು ಅವರ ಕೊರಳುಗಳಿಗೆ, ಗಲ್ಲದವರೆಗೂ ಬಿಗಿದಿಡುವ ನೊಗಗಳನ್ನು ಹಾಕಿರುವೆವು. ಇದರಿಂದಾಗಿ ಅವರ ತಲೆಗಳು ಸೆಟೆದುಕೊಂಡಿವೆ

    Verse 8

    ನಾವು ಅವರ ಮುಂದೆ ಒಂದು ಗೋಡೆಯನ್ನು ಹಾಗೂ ಅವರ ಹಿಂದೆ ಒಂದು ಗೋಡೆಯನ್ನು ನಿರ್ಮಿಸಿರುವೆವು ಮತ್ತು ಅವರನ್ನು ಮುಚ್ಚಿ ಬಿಟ್ಟಿರುವೆವು. ಆದ್ದರಿಂದ ಅವರಿಗೆ ಏನೂ ಕಾಣಿಸುತ್ತಿಲ್ಲ

    Verse 9

    ನೀವು ಅವರನ್ನು ಎಚ್ಚರಿಸಿದರೂ ಒಂದೇ, ಎಚ್ಚರಿಸದೆ ಬಿಟ್ಟರೂ ಒಂದೇ. ಅವರಂತು ನಂಬುವವರಲ್ಲ

    Verse 10

    ಉಪದೇಶವನ್ನು ಅನುಸರಿಸುವ ಹಾಗೂ ಕಣ್ಣಾರೆ ಕಾಣದೆಯೇ ಆ ಅಪಾರ ದಯಾಳುವಿಗೆ (ಅಲ್ಲಾಹನಿಗೆ) ಅಂಜುತ್ತಿರುವ ವ್ಯಕ್ತಿಯನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಅಂಥವನಿಗೆ ನೀವು ಕ್ಷಮೆ ಹಾಗೂ ಉದಾರ ಪ್ರತಿಫಲದ ಶುಭವಾರ್ತೆ ನೀಡಿರಿ

    Verse 11

    ಖಂಡಿತವಾಗಿಯೂ ನಾವೇ ಸತ್ತವರನ್ನು ಜೀವಂತಗೊಳಿಸುತ್ತೇವೆ ಮತ್ತು ಅವರು ಮುಂದಕ್ಕೆ ಕಳಿಸಿರುವ ಹಾಗೂ ತಮ್ಮ ಹಿಂದೆ ಬಿಟ್ಟು ಹೋಗಿರುವ ಎಲ್ಲವನ್ನೂ ನಾವು ಒಂದು ಸ್ಪಷ್ಟ ಗ್ರಂಥದಲ್ಲಿ ಎಣಿಸಿಟ್ಟಿರುವೆವು

    Verse 12

    ನೀವು ಅವರಿಗೆ ಆ ನಾಡಿನವರ ಸಮಾಚಾರವನ್ನು ತಿಳಿಸಿರಿ; ಅವರ ಬಳಿಗೆ ದೂತರು ಬಂದಿದ್ದರು

    Verse 13

    ನಾವು ಅವರ ಬಳಿಗೆ ಇಬ್ಬರು ದೂತರನ್ನು ಕಳಿಸಿದಾಗ ಅವರಿಬ್ಬರನ್ನೂ ಅವರು ತಿರಸ್ಕರಿಸಿದರು. ಕೊನೆಗೆ ನಾವು ಮೂರನೆಯ ದೂತನ ಮೂಲಕ ಅವರಿಗೆ ಬಲ ಒದಗಿಸಿದೆವು. ‘‘ನಮ್ಮನ್ನು ಖಚಿತವಾಗಿ ನಿಮ್ಮೆಡೆಗೇ ರವಾನಿಸಲಾಗಿದೆ’’ ಎಂದು ಅವರು ಹೇಳಿದರು

    Verse 14

    ಆಗ ಅವರು (ನಾಡಿನವರು) ಹೇಳಿದರು; ನೀವು ನಮ್ಮಂತಹ ಮಾನವರು ಮಾತ್ರ. ಆ ಪರಮ ದಯಾಮಯನು (ಅಲ್ಲಾಹನು) ಏನನ್ನೂ ಇಳಿಸಿಕೊಟ್ಟಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿರುವಿರಿ

    Verse 15

    ಅವರು (ದೂತರು) ಹೇಳಿದರು; ನಾವು ನಿಮ್ಮೆಡೆಗೆ ಕಳಿಸಲ್ಪಟ್ಟವರು ಎಂಬುದನ್ನು ನಮ್ಮೊಡೆಯನು ಖಚಿತವಾಗಿ ಬಲ್ಲನು

    Verse 16

    ನಮ್ಮ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ

    Verse 17

    ಅವರು (ನಾಡಿನವರು) ಹೇಳಿದರು; ನಾವು ನಿಮ್ಮನ್ನು ಕೇವಲ ಅಪಶಕುನಗಳಾಗಿ ಕಂಡಿರುವೆವು. ನೀವು ದೂರ ನಿಲ್ಲದಿದ್ದರೆ (ಸತ್ಯಪ್ರಚಾರವನ್ನು ನಿಲ್ಲಿಸದಿದ್ದರೆ) ನಾವು ನಿಮ್ಮನ್ನು ಕಲ್ಲೆಸೆದು ಕೊಲ್ಲುವೆವು ಮತ್ತು ಖಂಡಿತವಾಗಿಯೂ ನಮ್ಮ ಕಡೆಯಿಂದ ನಿಮಗೆ ಕಠಿಣ ಶಿಕ್ಷೆ ಸಿಗುವುದು

    Verse 18

    ಆಗ ಅವರು (ದೂತರು) ಹೇಳಿದರು; ನಿಮ್ಮ ಅಪಶಕುನವೆಲ್ಲಾ ನಿಮ್ಮ ಜೊತೆಗೇ ಇದೆ. ನಿಮಗೆ ಬೋಧನೆ ತಲುಪಿದೆಯಲ್ಲವೇ? ನಿಜವಾಗಿ ನೀವು ಎಲ್ಲೆ ಮೀರುವವರಾಗಿದ್ದೀರಿ

    Verse 19

    ನಗರದ ಮೂಲೆಯಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದನು; ನನ್ನ ಜನಾಂಗದವರೇ, ದೇವದೂತರನ್ನು ಅನುಸರಿಸಿರಿ

    Verse 20

    ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸದ ಹಾಗೂ ಮಾರ್ಗದರ್ಶನ ಪಡೆದಿರುವ, ಅವರನ್ನು ಅನುಸರಿಸಿರಿ

    Verse 21

    ನನ್ನನ್ನು ರೂಪಿಸಿದಾತನನ್ನು ನಾನೇಕೆ ಪೂಜಿಸಬಾರದು? ಕೊನೆಗಂತು, ನಿಮ್ಮೆಲ್ಲರನ್ನೂ ಅವನ ಕಡೆಗೇ ಮರಳಿಸಲಾಗುವುದು

    Verse 22

    ನಾನೇನು, ಅವನ ಹೊರತು ಇತರ ಯಾರನ್ನಾದರೂ ದೇವರಾಗಿಸಿಕೊಳ್ಳಬೇಕೆ? ನಿಜವಾಗಿ, ಆ ಪರಮ ದಯಾಳು ನನಗೇನಾದರೂ ಹಾನಿಯನ್ನುಂಟು ಮಾಡ ಬಯಸಿದರೆ, ಅವರ (ಅನ್ಯರ) ಶಿಫಾರಸ್ಸು ನನ್ನ ಯಾವ ಕೆಲಸಕ್ಕೂ ಬಾರದು ಮತ್ತು ನನ್ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗದು

    Verse 23

    ಹಾಗೆ ಮಾಡಿದರೆ (ಅನ್ಯರನ್ನು ಪೂಜಿಸಿದರೆ), ನಾನು ಸ್ಪಷ್ಟ ದಾರಿಗೇಡಿತನದಲ್ಲಿ ಇದ್ದಂತಾಗುವುದು

    Verse 24

    ನೀವು ನನ್ನ ಮಾತನ್ನು ಕೇಳಿರಿ ನಾನು ನಿಮ್ಮ ನೈಜ ಒಡೆಯನನ್ನು ನಂಬಿದ್ದೇನೆ

    Verse 25

    (ಅವರು ಆತನನ್ನು ಕೊಂದಾಗ) ‘ಸ್ವರ್ಗವನ್ನು ಪ್ರವೇಶಿಸು’ ಎಂದು ಅವನೊಡನೆ ಹೇಳಲಾಯಿತು. ಅವನು ಹೇಳಿದನು; ‘‘ಅಯ್ಯೋ, ನನ್ನ ಜನಾಂಗದವರಿಗೆ (ಇದು) ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!’’

    Verse 26

    ‘‘ನನ್ನ ಒಡೆಯನು ನನ್ನನ್ನು ಕ್ಷಮಿಸಿರುವನು ಮತ್ತು ನನ್ನನ್ನು ಗೌರವಾನ್ವಿತರ ಸಾಲಿಗೆ ಸೇರಿಸಿರುವನೆಂಬುದು (ಅವರಿಗೆ ತಿಳಿದಿರಬೇಕಿತ್ತು)’’

    Verse 27

    ಆತನ (ಮರಣದ ಬಳಿಕ) ನಾವೇನೂ ಅವನ ಜನಾಂಗದ ವಿರುದ್ಧ ಆಕಾಶದಿಂದ ಯಾವುದೇ ಪಡೆಯನ್ನು ಇಳಿಸಲಿಲ್ಲ. ಇಳಿಸುವ ಅಗತ್ಯವೂ ನಮಗಿರಲಿಲ್ಲ

    Verse 28

    ಅದು (ಅವರ ಶಿಕ್ಷೆ) ಕೇವಲ ಒಂದು ಭೀಕರ ಬಿರುಗಾಳಿಯಾಗಿತ್ತು. ಅಷ್ಟಕ್ಕೇ ಅವರು ಆರಿ ಹೋದರು

    Verse 29

    ಎಷ್ಟೊಂದು ಶೋಚನೀಯವಾಗಿದೆ, ದಾಸರ ಸ್ಥಿತಿ! ಅವರ ಬಳಿಗೆ ಬಂದ ಯಾವ ದೂತನನ್ನೂ ಅವರು ಗೇಲಿ ಮಾಡದೆ ಬಿಟ್ಟದ್ದಿಲ್ಲ

    Verse 30

    ಅವರೇನು ನೋಡಿಲ್ಲವೇ, ಅವರಿಗಿಂತ ಹಿಂದೆ ಅದೆಷ್ಟು ನಾಡುಗಳನ್ನು ನಾವು ನಾಶಗೊಳಿಸಿ ಬಿಟ್ಟಿದ್ದೇವೆಂದು? ಅವರೆಂದೂ ಅವರ ಬಳಿಗೆ ಮರಳಿ ಬರಲಾರರು

    Verse 31

    ಅವರಲ್ಲಿನ ಪ್ರತಿಯೊಬ್ಬರನ್ನೂ ನಮ್ಮ ಬಳಿ ಒಟ್ಟಾಗಿ ಹಾಜರುಪಡಿಸಲಾಗುವುದು

    Verse 32

    ನಿರ್ಜೀವ ಭೂಮಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದನ್ನು ಜೀವಂತಗೊಳಿಸಿದೆವು ಹಾಗೂ ಅದರಿಂದ ಧಾನ್ಯಗಳನ್ನು ಉತ್ಪಾದಿಸಿದೆವು. ಅವುಗಳನ್ನೇ ಅವರು ತಿನ್ನುತ್ತಾರೆ

    Verse 33

    ಮತ್ತು ನಾವು ಅದರಲ್ಲಿ ಖರ್ಜೂರದ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸಿದೆವು ಮತ್ತು ಅದರಲ್ಲಿ ನದಿಗಳನ್ನು ಹರಿಸಿದೆವು

    Verse 34

    ಅವರು ಅದರ ಫಲಗಳನ್ನು ಉಣ್ಣಲೆಂದು (ನಾವು ಇದನ್ನೆಲ್ಲಾ ಮಾಡಿರುವೆವು). ಇದಾವುದನ್ನೂ ಅವರ ಕೈಗಳು ನಿರ್ಮಿಸಿಲ್ಲ. ಇಷ್ಟಾಗಿಯೂ ಅವರೇನು ಕೃತಜ್ಞತೆ ಸಲ್ಲಿಸುವುದಿಲ್ಲವೇ

    Verse 35

    ಭೂಮಿಯು ಬೆಳೆಯುವ ಎಲ್ಲ ವಸ್ತುಗಳನ್ನೂ, ಸ್ವತಃ ಅವರನ್ನೂ, ಅವರಿಗೆ ತಿಳಿದಿಲ್ಲದ (ಹಲವು) ಜೀವಿಗಳನ್ನೂ – ಎಲ್ಲವನ್ನೂ ಜೋಡಿಗಳಾಗಿ ಸೃಷ್ಟಿಸಿದವನು (ಅಲ್ಲಾಹನು), ಪಾವನನು

    Verse 36

    ರಾತ್ರಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದರಿಂದ ಹಗಲನ್ನು ಇಳಿಸಿಬಿಟ್ಟಾಗ, ಅವರು ಕತ್ತಲನ್ನು ಪಡೆಯುತ್ತಾರೆ

    Verse 37

    ಮತ್ತು ಸೂರ್ಯನು, ತನಗೆ ನಿಗದಿ ಪಡಿಸಲಾಗಿರುವ ದಾರಿಯಲ್ಲಿ ಚಲಿಸುತ್ತಿರುತ್ತಾನೆ. ಇದು ಆ ಪ್ರಚಂಡ, ಸರ್ವಜ್ಞನು (ಅಲ್ಲಾಹನು) ಸ್ಥಾಪಿಸಿರುವ ವ್ಯವಸ್ಥೆ

    Verse 38

    ಇನ್ನು ಚಂದ್ರನಿಗೆ ನಾವು ಕೆಲವು ಹಂತಗಳನ್ನು ನಿಗದಿ ಪಡಿಸಿರುವೆವು. ಎಷ್ಟೆಂದರೆ ಅದು (ಬಾಲಚಂದ್ರ) ಖರ್ಜೂರದ ಹಳೆಯ ಗೆಲ್ಲಿನಂತಾಗಿ ಬಿಡುತ್ತದೆ

    Verse 39

    ಚಂದ್ರನನ್ನು ಹಿಡಿಯಲು ಸೂರ್ಯನಿಗೆ ಸಾಧ್ಯವಿಲ್ಲ, ಹಗಲನ್ನು ಮೀರಿ ಬರಲು ರಾತ್ರಿಗೂ ಸಾಧ್ಯವಿಲ್ಲ. ಎಲ್ಲವೂ ಒಂದು ವೃತ್ತದಲ್ಲಿ ಚಲಿಸುತ್ತಿವೆ

    Verse 40

    ನಾವು ಅವರ ಸಂತತಿಯನ್ನು ತುಂಬಿದ ಹಡಗಿಗೆ ಹತ್ತಿಸಿದ್ದು, ಅವರ ಪಾಲಿಗೆ ಪುರಾವೆಯಾಗಿದೆ

    Verse 41

    ಮತ್ತು ನಾವು ಅವರಿಗಾಗಿ, ಅವರು ಸವಾರಿ ಮಾಡುವ ಇನ್ನೂ ಹಲವು ವಸ್ತುಗಳನ್ನು ಸೃಷ್ಟಿಸಿರುವುದು (ಪುರಾವೆಯಾಗಿದೆ)

    Verse 42

    ನಾವು ಬಯಸಿದ್ದರೆ ಅವರನ್ನು ಮುಳುಗಿಸಿ ಬಿಡಬಹುದು. ಆಗ ಅವರ ಮೊರೆ ಕೇಳುವವರು ಯಾರೂ ಇರಲಾರರು ಮತ್ತು ಅವರು ರಕ್ಷಣೆ ಪಡೆಯಲಾರರು

    Verse 43

    ಆದರೆ, ಕೇವಲ ಒಂದು ನಿರ್ದಿಷ್ಟ ಕಾಲದವರೆಗೆ ಅವರು ನಮ್ಮ ಅನುಗ್ರಹದ ಫಲಾನುಭವಿಗಳಾಗಿರುತ್ತಾರೆ

    Verse 44

    ನೀವು (ಅಲ್ಲಾಹನ) ಕೃಪೆಗೆ ಪಾತ್ರರಾಗಲು, ನಿಮ್ಮ ಮುಂದಿನ ಹಾಗೂ ನಿಮ್ಮ ಹಿಂದಿನ (ಕರ್ಮಗಳ) ಕುರಿತು ಎಚ್ಚರವಾಗಿರಿ ಎಂದು ಅವರೊಡನೆ ಹೇಳಿದಾಗಲೆಲ್ಲಾ

    Verse 45

    ಮತ್ತು ತಮ್ಮ ಒಡೆಯನ ಪುರಾವೆಗಳ ಪೈಕಿ ಯಾವುದೇ ಪುರಾವೆ ಅವರ ಬಳಿಗೆ ಬಂದಾಗಲೆಲ್ಲಾ, ಅವರು ಅದನ್ನು ಕಡೆಗಣಿಸಿದ್ದಾರೆ

    Verse 46

    ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ, (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ ಎಂದು ತಮ್ಮೊಡನೆ ಹೇಳಿದಾಗಲೆಲ್ಲಾ (ಅವರು ಕಡೆಗಣಿಸಿದ್ದಾರೆ). ಧಿಕ್ಕಾರಿಗಳು, ವಿಶ್ವಾಸಿಗಳೊಡನೆ ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿದ್ದರೆ ಸ್ವತಃ ಅವನೇ ಯಾರಿಗೆ ಉಣಿಸಿ ಬಿಡುತ್ತಿದ್ದನೋ, ಅಂಥವನಿಗೇನು ನಾವು ಉಣಿಸಬೇಕೇ? ನೀವಂತು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದೀರಿ

    Verse 47

    ಮತ್ತು ಅವರು, ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನ (ಪುನರುತ್ಥಾನ) ಈಡೇರುವುದು ಯಾವಾಗ (ಎಂಬುದನ್ನು ತಿಳಿಸಿ)? ಎಂದು ಕೇಳುತ್ತಾರೆ

    Verse 48

    ನಿಜವಾಗಿ ಅವರು ಯಾವುದಕ್ಕಾಗಿ ಕಾಯುತ್ತಿರುವರೋ ಅದು ಹಠಾತ್ತನೆ ಬಂದೆರಗುವ ಒಂದು ಸಿಡಿಲು ಮಾತ್ರವಾಗಿರುವುದು – ಅವರು ಜಗಳಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳುವುದು

    Verse 49

    ಉಯಿಲನ್ನು ಉಪದೇಶಿಸಲಿಕ್ಕಾಗಲಿ, ತಮ್ಮ ಮನೆಯವರ ಬಳಿಗೆ ಮರಳಿ ಹೋಗಲಿಕ್ಕಾಗಲಿ ಅವರಿಗೆ ಸಾಧ್ಯವಾಗದು

    Verse 50

    ಮತ್ತು (ಇನ್ನೊಮ್ಮೆ) ಕಹಳೆಯನ್ನು ಊದಲಾದಾಗ ಅವರೆಲ್ಲರೂ ಗೋರಿಗಳಿಂದ ಹಠಾತ್ತನೆ ಎದ್ದು ತಮ್ಮ ಒಡೆಯನೆಡೆಗೆ ಧಾವಿಸುವರು

    Verse 51

    ಅವರು ಹೇಳುವರು: ಅಯ್ಯೋ ನಮ್ಮ ದುಸ್ಥಿತಿ! ನಮ್ಮನ್ನು ನಮ್ಮ ಗೋರಿಗಳಿಂದ ಎಬ್ಬಿಸಿದವರು ಯಾರು? ನಿಜವಾಗಿ, ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ. ದೇವದೂತರು ಸತ್ಯವನ್ನೆ ಹೇಳಿದ್ದರು

    Verse 52

    ಅದು ಕೇವಲ ಒಂದು ಸಿಡಿಲಾಗಿರುವುದು. ಅಷ್ಟರಲ್ಲೇ ಅವರೆಲ್ಲರನ್ನೂ ನಮ್ಮ ಮುಂದೆ ಹಾಜರು ಪಡಿಸಲಾಗುವುದು

    Verse 53

    ಇಂದು ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗದು ಮತ್ತು ನಿಮಗೆ, ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲದ ಹೊರತು ಬೇರೇನೂ ಸಿಗದು

    Verse 54

    ಸ್ವರ್ಗವಾಸಿಗಳು ಅಂದು ಖಂಡಿತ ಮೋಜಿನಲ್ಲಿ ನಿರತರಾಗಿರುವರು

    Verse 55

    ಅವರು ಮತ್ತವರ ಜೀವನ ಸಂಗಾತಿಗಳು ನೆರಳುಗಳಲ್ಲಿ ಸುಖವಾಗಿ ಒರಗಿ ಕೊಂಡಿರುವರು

    Verse 56

    ಅಲ್ಲಿ ಅವರಿಗಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳಿರುವವು ಮತ್ತು ಅವರು ಅಪೇಕ್ಷಿಸಿದ್ದೆಲ್ಲವೂ ಅವರಿಗೆ ಸಿಗುವುದು

    Verse 57

    ಸಲಾಮ್ (ಶಾಂತಿ) ಎಂಬ, ಕರುಣಾಳು ಒಡೆಯನ ಮಾತು (ಅಲ್ಲಿ ಮೊಳಗುತ್ತಿರುವುದು)

    Verse 58

    ಅಪರಾಧಿಗಳೇ, ಇಂದು ನೀವು ಪ್ರತ್ಯೇಕವಾಗಿರಿ

    Verse 59

    ಆದಮರ ಸಂತತಿಗಳೇ, ನಾನು ನಿಮಗೆ ಆದೇಶಿಸಿರಲಿಲ್ಲವೇ, ನೀವು ಶೈತಾನನ ಆರಾಧಕರಾಗಬೇಡಿ, ಅವನು ಖಂಡಿತ ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆಂದು

    Verse 60

    ಮತ್ತು ನೀವು ನನ್ನೊಬ್ಬನನ್ನೇ ಆರಾಧಿಸಬೇಕು, ಅದುವೇ ನೇರ ಮಾರ್ಗವೆಂದು

    Verse 61

    ಅವನು ನಿಮ್ಮಲ್ಲಿ ಬಹು ಮಂದಿಯನ್ನು ದಾರಿಗೆಡಿಸಿದ್ದಾನೆ. ನೀವೇನು ಬುದ್ಧಿಯನ್ನು ಬಳಸಿರಲಿಲ್ಲವೇ

    Verse 62

    ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ನರಕ

    Verse 63

    ನೀವು (ಸತ್ಯವನ್ನು) ಧಿಕ್ಕರಿಸಿದ್ದರ ಪ್ರತಿಫಲವಾಗಿ ಇಂದು ಇದರೊಳಗೆ ಪ್ರವೇಶಿಸಿರಿ

    Verse 64

    ಇಂದು ನಾವು ಅವರ (ಧಿಕ್ಕಾರಿಗಳ) ಬಾಯಿಗಳಿಗೆ ಮುದ್ರೆ ಜಡಿದಿರುವೆವು. ನಮ್ಮೊಡನೆ ಅವರ ಕೈಗಳು ಮಾತನಾಡುವವು ಮತ್ತು ಅವರು ಏನೆಲ್ಲಾ ಮಾಡಿದ್ದರೆಂದು ಅವರ ಕಾಲುಗಳು ಸಾಕ್ಷಿ ಹೇಳುವವು

    Verse 65

    ನಾವು ಬಯಸಿದರೆ ಅವರ ಕಣ್ಣುಗಳನ್ನು ನುಚ್ಚು ನೂರುಗೊಳಿಸಿ ಬಿಡಬಲ್ಲೆವು. ಆ ಬಳಿಕ ಅವರು ದಾರಿಯೆಡೆಗೆ ಧಾವಿಸಲಿ. ಅವರು ಏನನ್ನು ತಾನೇ ಕಾಣಬಲ್ಲರು

    Verse 66

    ನಾವು ಬಯಸಿದರೆ, ಅವರು ಇರುವಲ್ಲೇ ಅವರ ರೂಪಗಳನ್ನು ವಿಕೃತಗೊಳಿಸಿ ಬಿಡಬಲ್ಲೆವು – ಆ ಬಳಿಕ ಅವರಿಗೆ ಮುಂದೆ ಹೋಗಲಿಕ್ಕೂ ಸಾಧ್ಯವಾಗದು, ಮರಳಲಿಕ್ಕೂ ಆಗದು

    Verse 67

    ನಾವು ಯಾರಿಗೆ ಧೀರ್ಘ ಆಯುಷ್ಯವನ್ನು ಕೊಡುತ್ತೇವೋ, ಅವರನ್ನು ರಚನೆಯಲ್ಲಿ (ದುರ್ಬಲ ಸ್ಥಿತಿಗೆ) ಮರಳಿಸಿ ಬಿಡುತ್ತೇವೆ. ಅವರೇನು ಬುದ್ದಿಯನ್ನು ಬಳಸುವುದಿಲ್ಲವೇ

    Verse 68

    ನಾವು ಅವರಿಗೆ (ದೂತರಿಗೆ) ಕಾವ್ಯವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶವಾಗಿದೆ ಮತ್ತು ಸ್ಪಷ್ಟವಾದ ಕುರ್‌ಆನ್ ಆಗಿದೆ

    Verse 69

    ಜೀವಂತವಿರುವ ಎಲ್ಲರನ್ನೂ ಅವರು (ದೂತರು) ಎಚ್ಚರಿಸಬೇಕೆಂದು ಹಾಗೂ ಧಿಕ್ಕಾರಿಗಳ ವಿರುದ್ಧ ಸಾಕ್ಷವು ಪೂರ್ತಿಯಾಗಲೆಂದು (ನಾವು ಇದನ್ನು ಕಳಿಸಿರುವೆವು)

    Verse 70

    ಅವರು ನೋಡುತ್ತಿಲ್ಲವೇ, ಅವರು ಮಾಲಕರಾಗಿರುವ ಜಾನುವಾರುಗಳನ್ನು ನಾವು ಅವರಿಗಾಗಿ ನಮ್ಮ ಕೈಯಾರೆ ಸೃಷ್ಟಿಸಿರುವೆವು

    Verse 71

    ನಾವು ಅವುಗಳನ್ನು ಅವರಿಗೆ ವಿಧೇಯಗೊಳಿಸಿರುವೆವು. ಅವರು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸಿದರೆ, ಕೆಲವನ್ನು ಆಹಾರವಾಗಿ ಬಳಸುತ್ತಾರೆ

    Verse 72

    ಅವುಗಳಲ್ಲಿ ಅವರಿಗೆ ಹಲವು ಲಾಭಗಳಿವೆ, ಕುಡಿಯುವ ವಸ್ತುಗಳೂ ಇವೆ. ಇಷ್ಟಿದ್ದೂ ಅವರು ಕೃತಜ್ಞತೆ ತೋರುವುದಿಲ್ಲವೇ

    Verse 73

    ಅವರು ಅಲ್ಲಾಹನ ಹೊರತು ಇತರರಿಂದ ತಮಗೆ ನೆರವು ದೊರಕೀತೆಂದು ಅವರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ

    Verse 74

    ಅವರು ಇವರಿಗೆ ನೆರವಾಗಲು ಶಕ್ತರಲ್ಲ. ಆದರೂ, ಇವರು ಅವರ ಮುಂದೆ ದಂಡುಗಳಂತೆ ಹಾಜರಾಗುತ್ತಾರೆ

    Verse 75

    (ದೂತರೇ,) ಅವರ ಮಾತುಗಳಿಂದ ನೀವು ದುಃಖಿತರಾಗಬೇಡಿ. ಅವರು ಬಚ್ಚಿಡುವ ಹಾಗೂ ಪ್ರಕಟ ಪಡಿಸುವ ಎಲ್ಲವನ್ನೂ ನಾವು ಬಲ್ಲೆವು

    Verse 76

    ಮನುಷ್ಯನು ಕಂಡಿಲ್ಲವೇ, ನಾವು ಅವನನ್ನು ವೀರ್ಯದಿಂದ ಸೃಷ್ಟಿಸಿರುವುದನ್ನು? ಇಷ್ಟಾಗಿಯೂ ಅವನು ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು

    Verse 77

    ಅವನು ನಮ್ಮ ಕುರಿತು (ಏನೇನೋ) ಹೋಲಿಕೆಗಳನ್ನು ಕಟ್ಟುತ್ತಾನೆ. ನಿಜವಾಗಿ ಅವನು ತನ್ನ ಜನನವನ್ನು ಮರೆತಿದ್ದಾನೆ. ಎಲುಬುಗಳು ಕರಗಿ ಹೋದ ಬಳಿಕ ಅವುಗಳನ್ನು ಯಾರು ತಾನೆ ಜೀವಂತಗೊಳಿಸಬಲ್ಲರು? ಎಂದು ಅವನು ಪ್ರಶ್ನಿಸುತ್ತಾನೆ

    Verse 78

    ಹೇಳಿರಿ; ಅವುಗಳನ್ನು ಮೊದಲ ಬಾರಿ ಸೃಷ್ಟಿಸಿದವನೇ ಅವುಗಳನ್ನು ಮತ್ತೆ ಸೃಷ್ಟಿಸುವನು. ಅವನು ಎಲ್ಲ ಬಗೆಯ ಸೃಷ್ಟಿ ಕಾರ್ಯವನ್ನು ಬಲ್ಲವನಾಗಿದ್ದಾನೆ

    Verse 79

    ಅವನೇ, ನಿಮಗಾಗಿ ಹಸಿರು ಮರದಿಂದ ಬೆಂಕಿಯನ್ನು ಉತ್ಪಾದಿಸಿದವನು, ನೀವೀಗ ಅದರಿಂದಲೇ ಬೆಂಕಿಯನ್ನು ಉರಿಸುತ್ತೀರಿ

    Verse 80

    ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಇವರಂಥವರನ್ನು ಸೃಷ್ಟಿಸಲು ಅಸಮರ್ಥನೇ? ಖಂಡಿತ ಅಲ್ಲ. ಅವನಂತು, ಎಲ್ಲವನ್ನೂ ಬಲ್ಲ, ತಜ್ಞ ಸೃಷ್ಟಿಕರ್ತನಾಗಿದ್ದಾನೆ

    Verse 81

    ಅವನು ಏನನ್ನಾದರೂ ಮಾಡಲು ಇಚ್ಛಿಸಿದಾಗ, ಅದಕ್ಕೆ ‘ಆಗು’ ಎಂದಷ್ಟೆ ಹೇಳುತ್ತಾನೆ ಮತ್ತು ಅಷ್ಟರಲ್ಲೇ ಅದು ಆಗಿ ಬಿಟ್ಟಿರುತ್ತದೆ

    Verse 82

    ಅವನು ಪಾವನನು, ಎಲ್ಲ ವಸ್ತುಗಳ ಪರಮಾಧಿಕಾರವು ಅವನ ಕೈಯಲ್ಲಿದೆ. (ಕೊನೆಗೆ) ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು

    Verse 83

    ಶಿಸ್ತು ಬದ್ಧವಾಗಿ ಸಾಲುಗಟ್ಟಿರುವವರ (ಮಲಕ್‌ಗಳ) ಆಣೆ