Kannada

Translation: kan-abdussalamputhi

Author: Abdussalam Puthige

ಆರಂಭ

Surah 1

[1] ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

[2] ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ

[3] ಅವನು ಅಪಾರ ದಯಾಳು, ಕರುಣಾಮಯಿ

[4] ಪ್ರತಿಫಲದ ದಿನದ ಮಾಲಕ

[5] (ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ

[6] ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು

[7] ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ

ಗೋವು

Surah 2

[1] ಅಲಿಫ್ ಲಾಮ್ ಮ್ಮೀಮ್

[2] ಇದು ಗ್ರಂಥ. ಇದರಲ್ಲಿ ಸಂಶಯವಿಲ್ಲ. ಇದು ಧರ್ಮನಿಷ್ಠರಿಗೆ ಸರಿದಾರಿಯನ್ನು ತೋರಿಸುತ್ತದೆ

[3] ಅವರು ಕಾಣದ್ದನ್ನು ನಂಬುವವರು, ಸ್ಥಿರವಾಗಿ ‘ನಮಾಝ್’ ಅನ್ನು ಪಾಲಿಸುವವರು ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡುವವರಾಗಿರುತ್ತಾರೆ

[4] ಮತ್ತು ಅವರು, ನಿಮಗೆ (ದೇವದೂತರಿಗೆ) ಇಳಿಸಿಕೊಡಲಾಗಿರುವ ಹಾಗೂ ನಿಮಗಿಂತ ಹಿಂದೆ ಇಳಿಸಿಕೊಡಲಾಗಿದ್ದ ಸಂದೇಶಗಳಲ್ಲಿ ನಂಬಿಕೆಯುಳ್ಳವರು ಮತ್ತು ಪರಲೋಕದ ಕುರಿತು ದೃಢ ವಿಶ್ವಾಸ ಉಳ್ಳವರಾಗಿರುತ್ತಾರೆ

[5] ಅವರೇ, ತಮ್ಮ ಒಡೆಯನ ಕಡೆಯಿಂದ (ಬಂದಿರುವ) ಸರಿದಾರಿಯಲ್ಲಿರುವವರು ಮತ್ತು ಅವರೇ ವಿಜಯಿಗಳು

[6] (ಸತ್ಯವನ್ನು) ಧಿಕ್ಕರಿಸಿದವರಿಗೆ ನೀವು ಎಚ್ಚರಿಕೆ ನೀಡಿದರೂ ಒಂದೇ, ನೀಡದಿದ್ದರೂ ಒಂದೇ. ಅವರು ಖಂಡಿತ ನಂಬುವವರಲ್ಲ

[7] ಅಲ್ಲಾಹನು ಅವರ ಹೃದಯಗಳ ಮೇಲೆ ಹಾಗೂ ಅವರ ಕಿವಿಗಳ ಮೇಲೆ ಮುದ್ರೆಯೊತ್ತಿದ್ದಾನೆ. ಅವರ ಕಣ್ಣುಗಳ ಮೇಲೆ ತೆರೆ ಬಿದ್ದಿದೆ ಮತ್ತು ಅವರಿಗೆ ಭಾರೀ ದೊಡ್ಡ ಶಿಕ್ಷೆ ಸಿಗಲಿದೆ

[8] ಜನರಲ್ಲಿ ಕೆಲವರು ‘‘ನಾವು ಅಲ್ಲಾಹನನ್ನು ಮತ್ತು ಅಂತಿಮ ದಿನವನ್ನು ನಂಬಿದ್ದೇವೆ’’ಎನ್ನುತ್ತಾರೆ. ನಿಜವಾಗಿ, ಅವರು ನಂಬಿಕೆ ಉಳ್ಳವರಲ್ಲ

[9] (ಮೇಲುನೋಟಕ್ಕೆ) ಅವರು ಅಲ್ಲಾಹನನ್ನು ಮತ್ತು ವಿಶ್ವಾಸಿಗಳನ್ನು ವಂಚಿಸುತ್ತಿದ್ದಾರೆ. ನಿಜವಾಗಿ ಅವರು ಸ್ವತಃ ತಮ್ಮನ್ನೇ ವಂಚಿಸುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ

[10] ಅವರ ಮನಸುಗಳಲ್ಲಿ ರೋಗವಿದೆ. ಅಲ್ಲಾಹನು ಅವರ ರೋಗವನ್ನು ಹೆಚ್ಚಿಸಿದ್ದಾನೆ. ಅವರು ಸುಳ್ಳು ಹೇಳುತ್ತಿದ್ದುದಕ್ಕಾಗಿ ಅವರಿಗೆ ಕಠಿಣ ಶಿಕ್ಷೆ ಸಿಗಲಿದೆ

[11] ‘‘ಭೂಮಿಯಲ್ಲಿ ಅಶಾಂತಿ ಹರಡಬೇಡಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ನಾವು ಕೇವಲ ಸುಧಾರಕರು’’ ಎನ್ನುತ್ತಾರೆ

[12] ನಿಮಗೆ ತಿಳಿದಿರಲಿ! ಖಂಡಿತವಾಗಿಯೂ, ಅವರೇ ಅಶಾಂತಿ ಹರಡುವವರು. ಆದರೆ ಅವರಿಗೆ ಅದರ ಅರಿವಿಲ್ಲ

[13] ‘‘ಇತರರು ನಂಬಿದಂತೆ ನೀವು ನಂಬಿರಿ’’ ಎಂದು ಅವರೊಡನೆ ಹೇಳಿದಾಗ ಅವರು, ‘‘ನಾವೇನು, ಮೂರ್ಖರು ನಂಬಿದಂತೆ ನಂಬಬೇಕೇ?’’ ಎನ್ನುತ್ತಾರೆ. ತಿಳಿದಿರಲಿ, ನಿಜವಾಗಿ ಅವರೇ ಮೂರ್ಖರು. ಆದರೆ ಅವರಿಗೆ ಅದು ತಿಳಿದಿಲ್ಲ

[14] ಅವರು ವಿಶ್ವಾಸಿಗಳನ್ನು ಕಂಡಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ ಮತ್ತು ತಮ್ಮ ಶೈತಾನರುಗಳ ಜೊತೆ ಏಕಾಂತದಲ್ಲಿದ್ದಾಗ ‘‘ನಾವಂತು ನಿಮ್ಮ ಜೊತೆಗೇ ಇದ್ದೇವೆ, ಅವರ ಜೊತೆ ನಾವು ಕೇವಲ ಗೇಲಿ ಮಾಡುತ್ತಿದ್ದೆವು’’ ಎನ್ನುತ್ತಾರೆ

[15] ನಿಜವಾಗಿ ಅಲ್ಲಾಹನು ಅವರನ್ನು ಗೇಲಿ ಮಾಡುತ್ತಿದ್ದಾನೆ ಮತ್ತು ಅವರನ್ನು ಅವರ ವಿದ್ರೋಹದಲ್ಲಿ ಮುಂದುವರಿಸುತ್ತಿದ್ದಾನೆ – ಅವರು ಕುರುಡಾಗಿ ವರ್ತಿಸುತ್ತಿದ್ದಾರೆ

[16] ಅವರೇ ನಿಜವಾಗಿ ಸನ್ಮಾರ್ಗದ ಬದಲು ದಾರಿಗೇಡಿತನವನ್ನು ಖರೀದಿಸಿಕೊಂಡವರು. ಅವರ ಈ ವ್ಯಾಪಾರದಿಂದ ಅವರಿಗೆ ಯಾವ ಲಾಭವೂ ಆಗಿಲ್ಲ ಮತ್ತು ಅವರು ಮಾರ್ಗದರ್ಶನವನ್ನೂ ಪಡೆಯಲಿಲ್ಲ

[17] ಅವರ (ಸ್ಥಿತಿಯ) ಉದಾಹರಣೆ ಹೀಗಿದೆ; ಒಬ್ಬನು ಬೆಂಕಿ ಉರಿಸಿದ್ದಾನೆ. ಅದು ತನ್ನ ಸುತ್ತಮುತ್ತಲನ್ನೆಲ್ಲಾ ಬೆಳಗಿ ಬಿಟ್ಟಾಗ ಅಲ್ಲಾಹನು ಅವರ ದೃಷ್ಟಿಯನ್ನು ಕಿತ್ತುಕೊಂಡನು ಮತ್ತು ಅವರನ್ನು ಕತ್ತಲಲ್ಲಿ ಬಿಟ್ಟು ಬಿಟ್ಟನು. ಅವರಿಗೇನೂ ಕಾಣಿಸುವುದಿಲ್ಲ

[18] ಅವರು ಕಿವುಡರು, ಮೂಗರು ಮತ್ತು ಕುರುಡರು. ಅವರು (ಸತ್ಯದೆಡೆಗೆ) ಮರಳುವವರಲ್ಲ

[19] ಅಥವಾ ಅವರ ಸ್ಥಿತಿಯು ಆಕಾಶದಿಂದ ಸುರಿಯುವ ಮಳೆಯಂತಿದೆ. ಅದರೊಳಗೆ ಕತ್ತಲುಗಳು, ಸಿಡಿಲಬ್ಬರ ಮತ್ತು ಮಿಂಚುಗಳಿವೆ. ಅವರು ಗುಡುಗಿನಿಂದಾಗಿ, ಮರಣ ಭಯದಿಂದ ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿಕೊಳ್ಳುತ್ತಾರೆ. ಅಲ್ಲಾಹನು ಸತ್ಯ ಧಿಕ್ಕಾರಿಗಳನ್ನು ಆವರಿಸಿಕೊಂಡಿದ್ದಾನೆ

[20] ಮಿಂಚು ಅವರ ದೃಷ್ಟಿಗಳನ್ನು ಕಿತ್ತುಕೊಳ್ಳುವುದೋ ಎಂಬಂತಿದೆ. ಅದು ಅವರ ಮುಂದೆ ಬೆಳಗಿದಾಗಲೆಲ್ಲ ಅವರು ಅದರಲ್ಲಿ (ಆ ಬೆಳಕಿನಲ್ಲಿ) ನಡೆಯತೊಡಗುತ್ತಾರೆ. ಮತ್ತೆ ಅವರ ಮೇಲೆ ಕತ್ತಲು ಕವಿದಾಗ ಅವರು ನಿಂತು ಬಿಡುತ್ತಾರೆ. ಅಲ್ಲಾಹನು ಬಯಸಿದ್ದರೆ, ಅವರ ಕೇಳುವ ಮತ್ತು ನೋಡುವ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತಿದ್ದನು. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[21] ಜನರೇ, ನಿಮ್ಮನ್ನು ಮತ್ತು ನಿಮ್ಮ ಹಿಂದಿನವರನ್ನು ಸೃಷ್ಟಿಸಿದ ನಿಮ್ಮ ಒಡೆಯನನ್ನೇ ಪೂಜಿಸಿರಿ – ನೀವು ಸುರಕ್ಷಿತರಾಗಬಹುದು

[22] ಅವನೇ, ನಿಮಗಾಗಿ ಭೂಮಿಯನ್ನು ಹಾಸಾಗಿ ಹಾಗೂ ಆಕಾಶವನ್ನು ಚಪ್ಪರವಾಗಿ ಮಾಡಿದವನು ಮತ್ತು ಆಕಾಶದಿಂದ ನೀರನ್ನು ಇಳಿಸಿದವನು ಹಾಗೂ ಆ ಮೂಲಕ ನಿಮಗೆ ಆಹಾರವಾಗಿ ಫಲಗಳನ್ನು ಬೆಳೆಸಿದವನು. ನೀವು (ಇದನ್ನೆಲ್ಲಾ) ತಿಳಿದಿರುತ್ತಾ, ಯಾರನ್ನೂ ಅಲ್ಲಾಹನಿಗೆ ಸಾಟಿಯಾಗಿಸಬೇಡಿ

[23] ನಾವು ನಮ್ಮ ದಾಸನಿಗೆ ಇಳಿಸಿ ಕೊಟ್ಟಿರುವುದರ (ಕುರ್‌ಆನಿನ) ಕುರಿತು ನಿಮಗೆ ಸಂಶಯವಿದ್ದರೆ, ಅಂತಹ ಒಂದು ಅಧ್ಯಾಯವನ್ನಾದರೂ ನೀವು ರಚಿಸಿ ತನ್ನಿರಿ ಮತ್ತು ಅದಕ್ಕಾಗಿ ಅಲ್ಲಾಹನ ಹೊರತು ನಿಮ್ಮೆಲ್ಲ ಸಹಾಯಕರನ್ನೂ ಕರೆಯಿರಿ – ನೀವು ಸತ್ಯವಂತರಾಗಿದ್ದರೆ (ಇಷ್ಟನ್ನು ಮಾಡಿರಿ)

[24] ನಿಮಗೆ ಅದನ್ನು ಮಾಡಲಾಗದಿದ್ದರೆ – ಮತ್ತು ಖಂಡಿತ ನಿಮಗೆ ಅದನ್ನು ಮಾಡಲಾಗುವುದಿಲ್ಲ – ಮನುಷ್ಯರು ಮತ್ತು ಕಲ್ಲುಗಳೇ ಇಂಧನವಾಗಿರುವ (ನರಕದ) ಬೆಂಕಿಗೆ ಅಂಜಿರಿ – ಸತ್ಯ ಧಿಕ್ಕಾರಿಗಳಿಗಾಗಿ ಅದನ್ನು ಸಿದ್ಧ ಪಡಿಸಲಾಗಿದೆ

[25] ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಹಾಗೂ ಸತ್ಕರ್ಮ ಮಾಡಿದವರಿಗೆ ಸುವಾರ್ತೆ ನೀಡಿರಿ; ಅವರಿಗಾಗಿ (ಸ್ವರ್ಗದಲ್ಲಿ) ತಳದಲ್ಲಿ ನದಿಗಳು ಹರಿಯುವಂತಹ ತೋಟಗಳಿವೆ. ಅವರಿಗೆ ಆ ತೋಟದ ಯಾವುದಾದರೂ ಫಲವನ್ನು ತಿನಿಸಿದಾಗಲೆಲ್ಲ ಅವರು ‘‘ಹಿಂದೆಯೂ ನಮಗೆ ಇದನ್ನೇ ತಿನಿಸಲಾಗಿತ್ತು’’ ಎನ್ನುವರು. ನಿಜವಾಗಿ (ಈ ಹಿಂದೆ) ಅವರಿಗೆ, ಅದಕ್ಕೆ ಹೋಲುವಂತಹದನ್ನು ನೀಡಲಾಗಿತ್ತು. ಅಲ್ಲಿ ಅವರಿಗೆ, ಪಾವನ ಪತ್ನಿಯರಿರುವರು ಮತ್ತು ಅವರು ಅದರಲ್ಲಿ ಸದಾಕಾಲ ಇರುವರು

[26] ಅಲ್ಲಾಹನಂತು ಸೊಳ್ಳೆ ಅಥವಾ ಅದಕ್ಕಿಂತಲೂ ಆಚಿನ ವಸ್ತುಗಳನ್ನು ಉದಾಹರಿಸುವುದಕ್ಕೆ ನಾಚುವುದಿಲ್ಲ. ವಿಶ್ವಾಸಿಗಳು, ಅದು ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ ಎಂಬುದನ್ನು ಅರಿತಿರುತ್ತಾರೆ ಮತ್ತು ಧಿಕ್ಕಾರಿಗಳು, ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎನ್ನುತ್ತಾರೆ. (ನಿಜವಾಗಿ), ಅವನು ಈ ಮೂಲಕ ಅನೇಕರನ್ನು ದಾರಿಗೆಡಿಸಿ ಬಿಡುತ್ತಾನೆ ಮತ್ತು ಅನೇಕರಿಗೆ ಸರಿದಾರಿಯನ್ನು ತೋರುತ್ತಾನೆ ಮತ್ತು ಅವನು ಅವಿಧೇಯರ ಹೊರತು ಇನ್ನಾರನ್ನೂ ಈ ಮೂಲಕ ದಾರಿಗೆಡಿಸುವುದಿಲ್ಲ

[27] ಅವರು (ಅವಿಧೇಯರು) ಅಲ್ಲಾಹನೊಂದಿಗೆ ಪಕ್ವವಾದ ಕರಾರು ಮಾಡಿಕೊಂಡ ಬಳಿಕ ಅದನ್ನು ಮುರಿಯುತ್ತಾರೆ ಮತ್ತು ಅಲ್ಲಾಹನು ಜೋಡಿಸಬೇಕೆಂದು ಆದೇಶಿಸಿರುವ ಸಂಬಂಧವನ್ನು ಕಡಿದು ಹಾಕುತ್ತಾರೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಾರೆ. ಅವರೇ, ನಷ್ಟ ಅನುಭವಿಸುವವರು

[28] (ಮಾನವರೇ,) ಅಲ್ಲಾಹನನ್ನು ಧಿಕ್ಕರಿಸಲು ನಿಮಗೆ ಹೇಗೆ ತಾನೇ ಸಾಧ್ಯವಾಗುತ್ತದೆ? ನೀವು ಜೀವರಹಿತರಾಗಿದ್ದಾಗ ನಿಮಗೆ ಜೀವ ಕೊಟ್ಟವನು ಅವನು. ಮತ್ತೆ ಅವನು ನಿಮ್ಮನ್ನು ಸಾಯಿಸುವನು ಮತ್ತು ಆ ಬಳಿಕ ಪುನಃ ಅವನು ನಿಮ್ಮನ್ನು ಜೀವಂತಗೊಳಿಸುವನು. ಕೊನೆಗೆ ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು

[29] ಭೂಮಿಯಲ್ಲಿರುವ ಎಲ್ಲವನ್ನೂ ನಿಮಗಾಗಿ ಸೃಷ್ಟಿಸಿದವನು ಅವನೇ. ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿ, ಆ ಏಳು ಆಕಾಶಗಳನ್ನು ರೂಪಿಸಿದನು. ಅವನು ಎಲ್ಲವನ್ನೂ ಬಲ್ಲವನಾಗಿದ್ದಾನೆ

[30] ನಿಮ್ಮೊಡೆಯನು ‘ಮಲಕ್’ಗಳೊಡನೆ ‘‘ನಾನು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನೇಮಿಸಲಿದ್ದೇನೆ’’ ಎಂದಾಗ ಅವರು ‘‘ಅಲ್ಲಿ ಅಶಾಂತಿಯನ್ನು ಹಬ್ಬುವ ಮತ್ತು ರಕ್ತ ಹರಿಸುವವನನ್ನು ನೀನು ನೇಮಿಸುವೆಯಾ? ನಾವಂತು, ನಿನ್ನನ್ನು ಪ್ರಶಂಸಿಸುತ್ತಾ ನಿನ್ನ ಪಾವಿತ್ರವನ್ನು ಜಪಿಸುತ್ತಾ ನಿನ್ನ ಪಾವಿತ್ರವನ್ನು ಕೊಂಡಾಡುತ್ತಾ ಇರುತ್ತೇವೆ’’ ಎಂದರು. ಅವನು (ಅಲ್ಲಾಹನು), ‘‘ಖಂಡಿತವಾಗಿಯೂ ನಿಮಗೆ ತಿಳಿಯದೆ ಇರುವುದು ನನಗೆ ತಿಳಿದಿದೆ’’ ಎಂದನು

[31] ಅವನು ಆದಮರಿಗೆ ಎಲ್ಲ (ವಸ್ತುಗಳ) ಹೆಸರುಗಳನ್ನು ಕಲಿಸಿಕೊಟ್ಟನು. ತರುವಾಯ ಅವುಗಳನ್ನು ಮಲಕ್‌ಗಳ ಮುಂದಿಟ್ಟು, ನೀವು ಸತ್ಯವಂತರಾಗಿದ್ದರೆ, ನನಗೆ ಇವುಗಳ ಹೆಸರುಗಳನ್ನು ತಿಳಿಸಿರಿ ಎಂದನು

[32] ಅವರು ಹೇಳಿದರು; ‘‘ನೀನು ಪಾವನನು. ನೀನು ನೀಡಿದ ಜ್ಞಾನದ ಹೊರತು ಬೇರಾವ ಜ್ಞಾನವೂ ನಮ್ಮ ಬಳಿ ಇಲ್ಲ. ಖಂಡಿತವಾಗಿಯೂ ನೀನು ಬಲ್ಲವನು ಮತ್ತು ಯುಕ್ತಿವಂತನು’’

[33] ಅವನು ( ಅಲ್ಲಾಹನು) ‘‘ಆದಮರೇ, ಅವರಿಗೆ (ಮಲಕ್‌ಗಳಿಗೆ) ಅವುಗಳ ಹೆಸರುಗಳನ್ನು ತಿಳಿಸಿರಿ’’ ಎಂದನು. ಅವರು (ಆದಮರು) ಅವರಿಗೆ ಅವುಗಳ ಹೆಸರುಗಳನ್ನು ತಿಳಿಸಿದಾಗ ಅವನು (ಅಲ್ಲಾಹನು) ಹೇಳಿದನು; ‘‘ಆಕಾಶದಲ್ಲಿ ಮತ್ತು ಭೂಮಿಯಲ್ಲಿ, ಅಡಗಿರುವ ಎಲ್ಲವನ್ನೂ ನಾನು ಬಲ್ಲೆನೆಂದು ಮತ್ತು ನೀವು ಪ್ರಕಟಿಸುವ ಹಾಗೂ ಅಡಗಿಸುವ ಎಲ್ಲವೂ ನನಗೆ ತಿಳಿದಿದೆಯೆಂದು ನಾನು ನಿಮಗೆ ಹೇಳಿರಲಿಲ್ಲವೇ?’’

[34] ನಾವು (ಅಲ್ಲಾಹು) ‘ಮಲಕ್’ಗಳೊಡನೆ, ಆದಮರಿಗೆ ಸಾಷ್ಟಾಂಗ ವಂದಿಸಿರಿ ಎಂದಾಗ, ಅವರು ವಂದಿಸಿದರು. ಆದರೆ ಇಬ್ಲೀಸನ ಹೊರತು – ಅವನು ನಿರಾಕರಿಸಿದನು ಹಾಗೂ ಅಹಂಕರಿಸಿದನು ಮತ್ತು ಅವನು ಧಿಕ್ಕಾರಿಗಳ ಸಾಲಿಗೆ ಸೇರಿಕೊಂಡನು

[35] ನಾವು ಹೇಳಿದೆವು; ‘‘ಆದಮರೆ, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ, ನೀವಿಚ್ಛಿಸುವಲ್ಲೆಲ್ಲಾ ಇದರಿಂದ ನಿಶ್ಚಿಂತರಾಗಿ ತಿನ್ನಿರಿ. ಆದರೆ ಆ ಮರದ ಹತ್ತಿರ ಹೋಗದಿರಿ, (ಹೋದರೆ) ನೀವಿಬ್ಬರೂ ಅಕ್ರಮಿಗಳ ಸಾಲಿಗೆ ಸೇರುವಿರಿ’’

[36] ತರುವಾಯ, ಶೈತಾನನು ಅವರಿಬ್ಬರನ್ನೂ ಪುಸಲಾಯಿಸಿದನು ಹಾಗೂ ಅವರನ್ನು, ಅವರು ಇದ್ದಲ್ಲಿಂದ ಹೊರ ಹಾಕಿಸಿದನು ಮತ್ತು ನಾವು ಹೇಳಿದೆವು; ‘‘ತೊಲಗಿ ಹೋಗಿರಿ. ನೀವು (ಮಾನವರು ಮತ್ತು ಶೈತಾನ್) ಪರಸ್ಪರ ಶತ್ರುಗಳು. ಒಂದು ನಿರ್ದಿಷ್ಟ ಕಾಲದವರೆಗೆ ನಿಮಗೆ ಭೂಮಿಯಲ್ಲಿ ವಸತಿ ಹಾಗೂ ಅಗತ್ಯದ ವಸ್ತುಗಳು ಇವೆ’’

[37] ಆ ಬಳಿಕ ಆದಮರು ತಮ್ಮಡೆಯನಿಂದ (ಕ್ಷಮೆ ಬೇಡುವ) ಕೆಲವು ಪದಗಳನ್ನು ಕಲಿತುಕೊಂಡರು (ಮತ್ತು ಪಶ್ಚಾತ್ತಾಪ ಪ್ರಕಟಿಸಿದರು). ಅವನು (ಅಲ್ಲಾಹನು) ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಖಂಡಿತ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[38] ನಾವು (ಅಲ್ಲಾಹು) ಹೇಳಿದೆವು; ‘‘ನೀವೆಲ್ಲರೂ ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ನಿಮ್ಮ ಬಳಿಗೆ ಏನಾದರೂ ಮಾರ್ಗದರ್ಶನ ತಲುಪಿದಾಗ, ಯಾರು ನಾನು ತೋರಿದ ಮಾರ್ಗವನ್ನು ಅನುಸರಿಸುವರೋ ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು’’

[39] ‘‘ಇನ್ನು (ಸತ್ಯವನ್ನು) ಧಿಕ್ಕರಿಸುವವರು ಮತ್ತು ನಮ್ಮ ವಚನಗಳನ್ನು ತಿರಸ್ಕರಿಸುವವರೇ ನರಕಾಗ್ನಿಯವರು ಮತ್ತು ಅವರು ಅದರಲ್ಲಿ ಸದಾಕಾಲ ಇರುವರು’’

[40] ಇಸ್ರಾಈಲರ ಸಂತತಿಗಳೇ, ನಾನು ನಿಮಗೆ ನೀಡಿದ ನನ್ನ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ ಮತ್ತು ನನ್ನ ಜೊತೆ ನೀವು ಮಾಡಿದ್ದ ಕರಾರನ್ನು ಪಾಲಿಸಿರಿ. (ಆಗ) ನಿಮ್ಮ ಜೊತೆ ನಾನು ಮಾಡಿರುವ ಕರಾರನ್ನು ನಾನು ಪಾಲಿಸುವೆನು ಮತ್ತು ನೀವು ನನಗೆ ಮಾತ್ರ ಅಂಜಿರಿ

[41] ಮತ್ತು ನಾನು ಇಳಿಸಿರುವ ಸಂದೇಶದಲ್ಲಿ ನೀವು ನಂಬಿಕೆ ಇಡಿರಿ. ಅದು ಈಗಾಗಲೇ ನಿಮ್ಮ ಬಳಿ ಇರುವ ಸಂದೇಶವನ್ನು ಸಮರ್ಥಿಸುತ್ತದೆ. ಇನ್ನು, ಅದನ್ನು ಧಿಕ್ಕರಿಸುವವರಲ್ಲಿ ನೀವೇ ಮೊದಲಿಗರಾಗಬೇಡಿ ಹಾಗೂ ನನ್ನ ವಚನಗಳನ್ನು ಅಗ್ಗದ ಬೆಲೆಗೆ ಮಾರದಿರಿ ಮತ್ತು ನೀವು ನನಗೆ ಮಾತ್ರ ಅಂಜಿರಿ

[42] ನೀವು ಸತ್ಯವನ್ನು ಮಿಥ್ಯದ ಜೊತೆ ಬೆರೆಸಬೇಡಿ ಹಾಗೂ ಸತ್ಯವನ್ನು ತಿಳಿದಿರುತ್ತಾ ಅದನ್ನು ಅಡಗಿಸಿಡಬೇಡಿ

[43] ಮತ್ತು ನೀವು ಸ್ಥಿರವಾಗಿ ನಮಾಝನ್ನು ಪಾಲಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು (ಅಲ್ಲಾಹನೆದುರು) ಬಾಗುವವರ ಜೊತೆ ಸೇರಿ ಬಾಗಿರಿ

[44] ನೀವೇನು ಜನರಿಗೆ ಒಳಿತನ್ನು ಆದೇಶಿಸಿ, ಸ್ವತಃ ನಿಮ್ಮನ್ನೇ ಮರೆತು ಬಿಡುತ್ತೀರಾ? ನೀವಂತೂ ಗ್ರಂಥವನ್ನು ಓದುವವರಾಗಿದ್ದೀರಿ – ಇಷ್ಟಾಗಿಯೂ ನೀವು ಅರ್ಥ ಮಾಡಿಕೊಳ್ಳುವುದಿಲ್ಲವೇ

[45] ನೀವು ಸಹನೆ ಮತ್ತು ನಮಾಝ್‌ನಿಂದ ನೆರವು ಪಡೆಯಿರಿ. ಖಂಡಿತವಾಗಿಯೂ ಅದು ಭಯಭಕ್ತಿ ಉಳ್ಳವರ ಹೊರತು ಇತರರ ಪಾಲಿಗೆ ಕಷ್ಟದ ಕೆಲಸವಾಗಿದೆ

[46] (ಏಕೆಂದರೆ) ಅವರು, (ಭಯಭಕ್ತಿಯುಳ್ಳವರು) ತಾವು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಮತ್ತು ತಾವು ಅವನ ಕಡೆಗೆ ಮರಳಿ ಹೋಗಬೇಕಾದವರು ಎಂದು ನಂಬುವವರಾಗಿದ್ದಾರೆ

[47] ಇಸ್ರಾಈಲರ ಸಂತತಿಗಳೇ, ನಾನು (ಅಲ್ಲಾಹು) ನಿಮಗೆ ನೀಡಿದ್ದ ಅನುಗ್ರಹಗಳನ್ನು ಮತ್ತು ಜಗತ್ತಿನ ಇತರರ ಮೇಲೆ ನಾನು ನಿಮಗೆ ಹಿರಿಮೆ ನೀಡಿದ್ದನ್ನು ನೆನಪಿಸಿಕೊಳ್ಳಿರಿ

[48] ಮತ್ತು ನೀವು – ಯಾರಿಗೂ ಯಾರಿಂದಲೂ ಸ್ವಲ್ಪವೂ ಪ್ರಯೋಜನವಾಗದ, ಯಾರಿಂದಲೂ ಶಿಫಾರಸನ್ನು ಸ್ವೀಕರಿಸಲಾಗದ, ಯಾರಿಂದಲೂ ಯಾವುದೇ ಪರಿಹಾರವನ್ನು ಪಡೆಯಲಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಯಾವುದೇ ಸಹಾಯ ಸಿಗಲಾರದ ಆ ದಿನದ ಕುರಿತು ಎಚ್ಚರವಾಗಿರಿ

[49] ಮತ್ತು ನಾವು ನಿಮ್ಮನ್ನು (ಇಸ್ರಾಈಲರ ಸಂತತಿಗಳನ್ನು) ಫಿರ್‌ಔನನ ಜನರ ಕೈಯಿಂದ ವಿಮೋಚಿಸಿದ ಆ ಸಂದರ್ಭ(ವನ್ನು ನೆನಪಿಸಿಕೊಳ್ಳಿರಿ)- ಅವರಂತೂ ನಿಮ್ಮನ್ನು ಅತ್ಯಂತ ದಾರುಣ ಪೀಡನೆಗೆ ಒಳಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕಡಿದು ಹಾಕುತ್ತಿದ್ದರು ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. – ಅದರಲ್ಲಿ ನಿಮಗೆ ನಿಮ್ಮ ಒಡೆಯನ ಕಡೆಯಿಂದ ಒಂದು ದೊಡ್ಡ ಪರೀಕ್ಷೆಯಿತ್ತು

[50] ನಾವು ನಿಮಗಾಗಿ ಸಮುದ್ರವನ್ನು ಸೀಳಿದೆವು ಹಾಗೂ ನಿಮ್ಮನ್ನು ರಕ್ಷಿಸಿದೆವು ಮತ್ತು ನೀವು ನೋಡುತ್ತಿದ್ದಂತೆಯೇ ನಾವು ಫಿರ್‌ಔನನ ಜನರನ್ನು ಮುಳುಗಿಸಿ ಬಿಟ್ಟೆವು

[51] ಮತ್ತು ನಾವು ಮೂಸಾರ ಜೊತೆ ನಲ್ವತ್ತು ರಾತ್ರಿಗಳ ಕರಾರು ಮಾಡಿಕೊಂಡಿದ್ದಾಗ – ನೀವು ಅವರ ಬೆನ್ನ ಹಿಂದೆ ಒಂದು ಕರುವನ್ನು (ದೇವರಾಗಿ) ನೆಚ್ಚಿಕೊಂಡಿರಿ – ಮತ್ತು (ಆ ಮೂಲಕ) ನೀವು ಅಕ್ರಮಿಗಳಾಗಿ ಬಿಟ್ಟಿರಿ

[52] ಇಷ್ಟಾದ ಬಳಿಕವೂ ನೀವು ಕೃತಜ್ಞರಾಗಬಹುದೆಂದು ನಾವು ನಿಮ್ಮನ್ನು ಕ್ಷಮಿಸಿದೆವು

[53] ಮತ್ತು ನಾವು ಮೂಸಾರಿಗೆ ಗ್ರಂಥವನ್ನು ಹಾಗೂ ‘ಫುರ್ಕಾನ್’ ಅನ್ನು ನೀಡಿದ ಸಂದರ್ಭ (ನೆನಪಿರಲಿ)- ನೀವು ಸರಿದಾರಿಯಲ್ಲಿ ನಡೆಯಬೇಕೆಂದು (ಅದನ್ನು ನೀಡಲಾಗಿತ್ತು)

[54] ಮತ್ತು ಮೂಸಾ ತಮ್ಮ ಜನಾಂಗದೊಡನೆ; ‘‘ನನ್ನ ಜನಾಂಗದವರೇ, ನೀವು ಕರುವನ್ನು ಪೂಜಿಸುವ ಮೂಲಕ ಸ್ವತಃ ನಿಮಗೇ ಅನ್ಯಾಯ ಮಾಡಿಕೊಂಡಿರುವಿರಿ. ಇದೀಗ ನೀವು ನಿಮ್ಮ ಸೃಷ್ಟಿಕರ್ತನೆದುರು ಪಶ್ಚಾತ್ತಾಪ ಪಡಿರಿ ಮತ್ತು ನಿಮ್ಮೊಳಗಿನ (ಅಪರಾಧಿಗಳ) ಜೀವಗಳನ್ನು ನೀವೇ ವಧಿಸಿರಿ. ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಇದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ’’ ಎಂದಿದ್ದರು. ತರುವಾಯ ಅವನು (ಅಲ್ಲಾಹನು) ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಜಕ್ಕೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವ ಕರುಣಾಮಯಿಯಾಗಿದ್ದಾನೆ

[55] ಮತ್ತು ನೀವು ‘‘ಓ ಮೂಸಾ, ನಾವು ಅಲ್ಲಾಹನನ್ನು ನೇರವಾಗಿ ನೋಡುವ ತನಕ ನಿಮ್ಮನ್ನು ನಾವು ನಂಬಲಾರೆವು’’ ಎಂದು ಹೇಳಿದ್ದ ಸಂದರ್ಭ(ವನ್ನು ಸ್ಮರಿಸಿರಿ). ತರುವಾಯ ನೀವು ನೋಡುತ್ತಿದ್ದಂತೆಯೇ ಒಂದು ಭೀಕರ ಸಿಡಿಲು ನಿಮ್ಮನ್ನು ಆವರಿಸಿಕೊಂಡಿತು

[56] ಮುಂದೆ, ನಿಮ್ಮ ಮರಣಾನಂತರ ನಿಮ್ಮನ್ನು ನಾವು ಜೀವಂತಗೊಳಿಸಿದೆವು – ನೀವು ಕೃತಜ್ಞರಾಗಬೇಕೆಂದು

[57] ಮತ್ತು ನಾವು ನಿಮಗೆ ಮೋಡದ ನೆರಳನ್ನು ಒದಗಿಸಿದೆವು ಹಾಗೂ ನಾವು ಒದಗಿಸಿದ ಶುದ್ಧ ಆಹಾರದಿಂದ ಉಣ್ಣಿರೆಂದು ‘ಮನ್ನ್’ ಮತ್ತು ‘ಸಲ್ವಾ’ಗಳನ್ನು ನಿಮಗೆ ಇಳಿಸಿಕೊಟ್ಟೆವು. ಅವರು (ನಿಮ್ಮ ಪೂರ್ವಜರು) ನಮ್ಮ ಮೇಲೇನೂ ಅಕ್ರಮವೆಸಗಲಿಲ್ಲ. ನಿಜವಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು

[58] ಮತ್ತು ನಾವು ಹೇಳಿದೆವು; ‘‘ಈ ನಾಡನ್ನು (ಜೆರುಸಲೇಮನ್ನು) ಪ್ರವೇಶಿಸಿರಿ ಹಾಗೂ ನಿಮ್ಮಿಚ್ಛೆಯಂತೆ, ಅದರ ಯಾವುದೇ ಭಾಗದಿಂದ ಧಾರಾಳ ಉಣ್ಣಿರಿ ಹಾಗೂ ವಿನಯಪೂರ್ವಕ ಬಾಗಿಕೊಂಡು ಅದರ ದ್ವಾರದೊಳಗೆ ಪ್ರವೇಶಿಸಿರಿ ಮತ್ತು ‘ಹಿತ್ತಃ’ (ನಮ್ಮನ್ನು ಕ್ಷಮಿಸು) ಎಂದು ಹೇಳುತ್ತಲಿರಿ – ನಾವು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವೆವು ಮತ್ತು ನಾವು ಸತ್ಕರ್ಮಿಗಳಿಗೆ ಮತ್ತಷ್ಟು ನೀಡುವೆವು’’

[59] ಆದರೆ ಅಕ್ರಮಿಗಳು, ತಮಗೆ ಹೇಳಲಾಗಿದ್ದ ಮಾತನ್ನು ಬೇರೆಯೇ ಮಾತಾಗಿ ಬದಲಿಸಿಕೊಂಡರು. ಕೊನೆಗೆ ನಾವು ಅಕ್ರಮಿಗಳ ಅವಿಧೇಯತೆಯ ಫಲವಾಗಿ ಅವರ ಮೇಲೆ ಆಕಾಶದಿಂದ ಒಂದು ಶಿಕ್ಷೆಯನ್ನು ಇಳಿಸಿದೆವು

[60] ಮತ್ತು ಮೂಸಾ ತಮ್ಮ ಜನಾಂಗಕ್ಕಾಗಿ ನೀರನ್ನು ಬೇಡಿದಾಗ ನಾವು, ‘‘ನಿಮ್ಮ ಊರುಗೋಲಿನಿಂದ ಆ ಬಂಡೆಗೆ ಹೊಡೆಯಿರಿ’’ ಎಂದೆವು. ಅದರಿಂದ ಹನ್ನೆರಡು ಚಿಲುಮೆಗಳು ಹೊರಟವು. ಎಲ್ಲ ಜನರು (ಎಲ್ಲ ಗೋತ್ರದವರು) ತಾವು ನೀರು ಪಡೆಯಬೇಕಾದ ಸ್ಥಳವನ್ನು ಗುರುತಿಸಿಕೊಂಡರು – ‘‘ಅಲ್ಲಾಹನು ಏನನ್ನು ಅನುಗ್ರಹಿಸಿರುವನೋ ಅದರಿಂದ ಉಣ್ಣಿರಿ ಹಾಗೂ ಕುಡಿಯಿರಿ ಮತ್ತು ಭೂಮಿಯಲ್ಲಿ ಅಶಾಂತಿ ಹರಡುವವರಾಗಿ ತಿರುಗಬೇಡಿ’’ (ಎಂದು ಆಗ ನಿಮಗೆ ಆದೇಶಿಸಲಾಗಿತ್ತು)

[61] ಮತ್ತು (ಸ್ಮರಿಸಿರಿ), ‘‘ಓ ಮೂಸಾ, ಒಂದೇ ಆಹಾರದಲ್ಲಿ ತೃಪ್ತಿಪಟ್ಟುಕೊಳ್ಳಲು ನಮ್ಮಿಂದಾಗದು. ನೀವಿನ್ನು ನಮಗಾಗಿ, ಭೂಮಿಯಲ್ಲಿ ಬೆಳೆಯುವ ಹಸಿರು ತರಕಾರಿ, ಸೌತೆ, ಗೋಧಿ, ತೊಗರಿ, ಈರುಳ್ಳಿ (ಇತ್ಯಾದಿ)ಗಳನ್ನು ಒದಗಿಸಬೇಕೆಂದು ನಿಮ್ಮ ದೇವರನ್ನು ಪ್ರಾರ್ಥಿಸಿರಿ’’- ಎಂದು ನೀವು ಹೇಳಿದ್ದಿರಿ. ಆಗ ಅವರು (ಮೂಸಾ) ‘‘ನೀವೇನು ಶ್ರೇಷ್ಠವಾದ ವಸ್ತುಗಳ ಬದಲಿಗೆ ಕೆಳಸ್ತರದ ವಸ್ತುಗಳನ್ನು ಅಪೇಕ್ಷಿಸುವಿರಾ? ಹಾಗಾದರೆ, ನೀವು (ಯಾವುದಾದರೂ ಬೇರೆ) ನಗರಕ್ಕೆ ಹೊರಟು ಹೋಗಿರಿ, ನೀವು ಬೇಡಿದ್ದು ಅಲ್ಲಿ ನಿಮಗೆ ಸಿಗುವುದು’’ಎಂದಿದ್ದರು. ಕೊನೆಗೆ ಅಪಮಾನ ಹಾಗೂ ದಾರಿದ್ರಗಳು ಅವರನ್ನು (ಇಸ್ರಾಈಲರ ಸಂತತಿಗಳನ್ನು) ಆವರಿಸಿಕೊಂಡವು ಮತ್ತು ಅವರು ಅಲ್ಲಾಹನ ಕ್ರೋಧಕ್ಕೆ ಪಾತ್ರರಾಗಿ ಬಿಟ್ಟರು. ಅದು, ಅವರು ಅಲ್ಲಾಹನ ಪುರಾವೆಗಳನ್ನು ಧಿಕ್ಕರಿಸಿದ ಮತ್ತು ಅನ್ಯಾಯವಾಗಿ ಪ್ರವಾದಿಗಳನ್ನು ಕೊಂದುಬಿಟ್ಟ (ಕೃತ್ಯದ) ಫಲವಾಗಿತ್ತು. ಹಾಗೆಯೇ ಅದು, ಅವರ ಅವಿಧೇಯತೆಯ ಹಾಗೂ ಎಲ್ಲೆ ಮೀರಿದ ನಡವಳಿಕೆಯ ಪರಿಣಾಮವಾಗಿತ್ತು

[62] (ಗತಕಾಲದ) ವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಮತ್ತು ಸಬಯನರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತಿಮ ದಿನ (ಪರಲೋಕ)ದಲ್ಲಿ ನಂಬಿಕೆಯಿಟ್ಟ ಹಾಗೂ ಸತ್ಕರ್ಮ ಮಾಡಿದ ಜನರಿಗಾಗಿ, ಅವರ ಒಡೆಯನ ಬಳಿ ಅವರ ಪ್ರತಿಫಲ ಇದ್ದೇ ಇದೆ ಮತ್ತು ಅವರಿಗೆ ಯಾವುದೇ ಭಯವೂ ಇರದು, ದುಃಖವೂ ಇರದು

[63] ಮತ್ತು ನಾವು ತೂರ್ ಪರ್ವತವನ್ನು ನಿಮ್ಮ (ಇಸ್ರಾಈಲರ ಸಂತತಿಗಳ) ಮೇಲೆ ಎತ್ತರಿಸಿ, ನಿಮ್ಮಿಂದ ಕರಾರು ಪಡೆದ ಸಂದರ್ಭದಲ್ಲಿ -‘‘ನಾವು ನಿಮಗೆ ಕೊಡುತ್ತಿರುವುದನ್ನು (ಮಾರ್ಗದರ್ಶಕ ಗ್ರಂಥವನ್ನು) ನೀವು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರಲ್ಲಿರುವ ವಿಷಯಗಳನ್ನು ನೆನಪಿಟ್ಟುಕೊಳ್ಳಿರಿ, ನೀವು ಧರ್ಮನಿಷ್ಠರಾಗಬಹುದು’’ (ಎಂದು ನಾವು ಹೇಳಿದ್ದೆವು)

[64] ಆ ಬಳಿಕ ನೀವು, ವಿಮುಖರಾಗಿ ಬಿಟ್ಟಿರಿ. ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಇಲ್ಲದೆ ಇದ್ದಿದ್ದರೆ, (ಅಂದೇ) ನೀವು ಸೋತವರ ಸಾಲಿಗೆ ಸೇರಿ ಬಿಡುತ್ತಿದ್ದಿರಿ

[65] ನಿಮ್ಮ ಪೈಕಿ ‘ಸಬ್ತ್’ (ಶನಿವಾರದ) ನಿಯಮವನ್ನು ಉಲ್ಲಂಘಿಸಿದವರ ಕುರಿತು ನಿಮಗೆ ತಿಳಿದೇ ಇದೆ. ನಾವು ಅವರೊಡನೆ ‘‘ನೀವು ನಿಂದಿತ ಕೋತಿಗಳಾಗಿ ಬಿಡಿರಿ’’ ಎಂದೆವು

[66] ಕೊನೆಗೆ ನಾವು ಆ ಘಟನೆಯನ್ನು ಅವರ ಪಾಲಿಗೂ ಅವರ ಮುಂದಿನ ಪೀಳಿಗೆಗಳ ಪಾಲಿಗೂ ಒಂದು ಪಾಠವಾಗಿಸಿದೆವು ಮತ್ತು ಭಕ್ತಿಭಾವವಿರುವವರ ಪಾಲಿಗೆ ಅದನ್ನು ಒಂದು ಉಪದೇಶವಾಗಿಸಿದೆವು

[67] ಮತ್ತು ಮೂಸಾ, ತಮ್ಮ ಜನಾಂಗದವರೊಡನೆ ‘‘ಒಂದು ದನವನ್ನು ಬಲಿಕೊಡಲು ಅಲ್ಲಾಹನು ನಿಮಗೆ ಆದೇಶಿಸಿದ್ದಾನೆ’’ ಎಂದಾಗ ಅವರು ‘‘ನೀವೇನು ನಮ್ಮೊಂದಿಗೆ ತಮಾಶೆ ಮಾಡುತ್ತಿರುವಿರಾ?’’ ಎಂದರು. (ಮೂಸಾ) ಹೇಳಿದರು: ‘’ನಾನು ಅಜ್ಞಾನಿಗಳ ಸಾಲಿಗೆ ಸೇರುವುದರ ವಿರುದ್ಧ ಅಲ್ಲಾಹನ ರಕ್ಷಣೆ ಕೋರುತ್ತೇನೆ’’

[68] ಅವರು ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ, ಆ ದನ ಎಂತಹದ್ದಾಗಿರಬೇಕು ಎಂಬುದನ್ನು ನಮಗೆ ವಿವರಿಸಲು ಹೇಳಿರಿ’’ ಎಂದರು. ಮೂಸಾ ಹೇಳಿದರು; ‘‘ಆ ದನ ಹೆಚ್ಚು ವಯಸ್ಸಾದುದಾಗಲಿ, ತೀರಾ ಎಳೆಯದಾಗಲಿ ಆಗಿರಬಾರದು – ಅದರ ನಡುವಿನ, ಮಧ್ಯಮ ವಯಸ್ಸಿನದ್ದಾಗಿರಬೇಕೆಂದು ದೇವರು ಹೇಳುತ್ತಿದ್ದಾನೆ. ಇನ್ನಾದರೂ ನೀವು ನಿಮಗೆ ಆದೇಶಿಸಿದ್ದನ್ನು ಮಾಡಿಬಿಡಿ’’

[69] ಅವರು (ಮತ್ತೆ) ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ, ಅದರ ಬಣ್ಣ ಹೇಗಿರಬೇಕೆಂದು ವಿವರಿಸಲು ಹೇಳಿರಿ’’ ಎಂದರು. ಅವರು (ಮೂಸಾ) ಹೇಳಿದರು: ‘‘ಅದು ಹಳದಿ ಬಣ್ಣದ, ಉಜ್ವಲ ರಂಗುಳ್ಳ, ಕಂಡವರಿಗೆ ಸಂತೋಷ ನೀಡುವಂತಹ ದನವಾಗಿರಬೇಕು ಎಂದವನು ಹೇಳುತ್ತಿದ್ದಾನೆ’’

[70] ಅವರು (ಇಷ್ಟಕ್ಕೂ ತೃಪ್ತರಾಗದೆ) ‘‘ನಮಗಾಗಿ ನಿಮ್ಮ ದೇವರನ್ನು ಪ್ರಾರ್ಥಿಸಿ ಅದು ಹೇಗಿರಬೇಕೆಂದು (ಇನ್ನಷ್ಟು)ವಿವರಿಸಲು ಹೇಳಿರಿ. ಖಂಡಿತವಾಗಿಯೂ ನಮಗೆ ಆ ದನದ ವಿಷಯದಲ್ಲಿ ಗೊಂದಲವಾಗಿದೆ ಮತ್ತು ಅಲ್ಲಾಹನು ಇಚ್ಛಿಸಿದರೆ (ಈ ಕುರಿತು) ನಮಗೆ ಮಾರ್ಗದರ್ಶನ ಸಿಗಬಹುದು’’ ಎಂದರು

[71] ಮೂಸಾ ಹೇಳಿದರು: ‘‘ಅದು ಕೆಲಸಕ್ಕೆ ಹಚ್ಚಲಾದ ದನವಾಗಿರಬಾರದು ಹಾಗೂ ನೆಲವನ್ನು ಉಳುವುದಕ್ಕಾಗಿ ಮತ್ತು ಹೊಲಕ್ಕೆ ನೀರೆತ್ತುವುದಕ್ಕಾಗಿ ಬಳಸಿದ್ದೂ ಆಗಿರಬಾರದು. ಸಂಪೂರ್ಣ ಸುಸ್ಥಿತಿಯಲ್ಲಿರುವ, ಕಲೆಯಿಲ್ಲದ ದನವಾಗಿರಬೇಕು ಎಂದವನು ಹೇಳುತ್ತಿದ್ದಾನೆ’’. ಆಗ ಅವರು, ‘‘ಈಗ ನೀವು ಸತ್ಯವನ್ನು ತಂದಿರುವಿರಿ’’ ಎಂದರು. ಕೊನೆಗೂ ಅವರು ಅದನ್ನು ಬಲಿಕೊಟ್ಟರು. ನಿಜವಾಗಿ ಅವರಿಗೆ ಅದನ್ನು ಮಾಡಲು ಮನಸ್ಸಿರಲಿಲ್ಲ

[72] ಮತ್ತು ನೀವು (ಇಸ್ರಾಈಲರ ಸಂತತಿಗಳು) ಒಬ್ಬ ವ್ಯಕ್ತಿಯನ್ನು ಕೊಂದು, ಆ ಬಳಿಕ ಆ ಕುರಿತು ಪರಸ್ಪರ ದೂಷಣೆಯಲ್ಲಿ ನಿರತರಾಗಿದ್ದಿರಿ. ಆಗ ಅಲ್ಲಾಹನು ನೀವು ಬಚ್ಚಿಟ್ಟಿದ್ದನ್ನು ಹೊರ ಹಾಕಲು ತೀರ್ಮಾನಿಸಿದ್ದನು

[73] ಕೊನೆಗೆ ನಾವು ಹೇಳಿದೆವು; ‘‘ಅದಕ್ಕೆ (ಶವಕ್ಕೆ) ಅದರಿಂದ (ದನದ ಮಾಂಸದಿಂದ) ತಟ್ಟಿರಿ, ಇದೇ ರೀತಿ ಅಲ್ಲಾಹನು ಸತ್ತವರನ್ನು ಜೀವಂತಗೊಳಿಸುತ್ತಾನೆ ಮತ್ತು ನೀವು ಅರ್ಥಮಾಡಿಕೊಳ್ಳಬೇಕೆಂದು ಅವನು ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸಿ ಕೊಡುತ್ತಾನೆ’’

[74] ಆ ಬಳಿಕ ನಿಮ್ಮ ಹೃದಯಗಳು ಕಠೋರವಾಗಿ ಬಿಟ್ಟವು – ಕಲ್ಲುಗಳಂತೆ ಅಥವಾ ಅವುಗಳಿಗಿಂತಲೂ ಹೆಚ್ಚು ಕಠೋರ. ನಿಜವಾಗಿ, ಕೆಲವು ಕಲ್ಲುಗಳೊಳಗಿಂದ ಚಿಲುಮೆಗಳು ಹೊಮ್ಮುತ್ತವೆ ಹಾಗೂ ಕೆಲವು ಕಲ್ಲುಗಳು ಸಿಡಿದು ಅವುಗಳಿಂದ ನೀರಿನ ಧಾರೆ ಹರಿಯುತ್ತದೆ ಮತ್ತು ಕೆಲವು ಕಲ್ಲುಗಳು ಅಲ್ಲಾಹನ ಭಯದಿಂದ ಉರುಳಿ ಬೀಳುವುದೂ ಇದೆ. ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ

[75] (ವಿಶ್ವಾಸಿಗಳೇ,) ನೀವೇನು, ಅವರು ನಿಮ್ಮಲ್ಲಿ ನಂಬಿಕೆಯಿಡುವರೆಂದು ನಿರೀಕ್ಷಿಸುತ್ತಿರುವಿರಾ? ಅವರಲ್ಲಿನ ಒಂದು ಪಂಗಡವಂತು, ಅಲ್ಲಾಹನ ಸಂದೇಶವನ್ನು ಕೇಳಿದ ಬಳಿಕ ಮತ್ತು ಅದನ್ನು ಅರ್ಥ ಮಾಡಿಕೊಂಡ ಬಳಿಕ ತಿಳಿದೂ ತಿಳಿದೂ ಅದನ್ನು ತಿರುಚಿ ಬಿಡುತ್ತದೆ

[76] ಅವರು ವಿಶ್ವಾಸಿಗಳನ್ನು ಭೇಟಿಯಾದಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ. ಆ ಬಳಿಕ ಗುಟ್ಟಾಗಿ ಪರಸ್ಪರ ಸಂಧಿಸಿದಾಗ ‘‘ಅಲ್ಲಾಹನು ನಿಮಗೆ ತಿಳಿಸಿದ್ದನ್ನು ನೀವು ಅವರಿಗೆ ತಿಳಿಸಿ, ಅವರು ಅದನ್ನೇ ನಿಮ್ಮ ದೇವರ ಬಳಿ ನಿಮ್ಮ ವಿರುದ್ಧ ಪುರಾವೆಯಾಗಿ ಬಳಸುವಂತೆ ಮಾಡುತ್ತೀರಾ? ನಿಮಗೆ ಅಷ್ಟೂ ಅರ್ಥವಾಗುವುದಿಲ್ಲವೇ?’’ ಎನ್ನುತ್ತಾರೆ

[77] ಅವರು ಗುಟ್ಟಾಗಿಡುವ ಮತ್ತು ಬಹಿರಂಗಗೊಳಿಸುವ ಎಲ್ಲ ವಿಚಾರಗಳೂ ಅಲ್ಲಾಹನಿಗೆ ತಿಳಿದಿವೆ ಎಂಬುದು ಅವರಿಗೆ ತಿಳಿಯದೇ

[78] ಅವರಲ್ಲಿ ಕೆಲವರು ‘ಉಮ್ಮಿ’ (ನಿರಕ್ಷರಿ)ಗಳಿದ್ದಾರೆ. ಅವರಿಗೆ ಗ್ರಂಥದ ಜ್ಞಾನವಿಲ್ಲ. ಅವರ ಬಳಿ ಕೇವಲ ಆಶೆಗಳ ಹೊರತು ಬೇರೇನೂ ಇಲ್ಲ ಮತ್ತು ಅವರು ಕೇವಲ ಊಹಾಪೋಹಗಳನ್ನಷ್ಟೇ ಅವಲಂಬಿಸಿಕೊಂಡಿದ್ದಾರೆ

[79] ತಮ್ಮದೇ ಕೈಗಳಿಂದ ಗ್ರಂಥವನ್ನು ಬರೆದು, ಆ ಬಳಿಕ ಅದನ್ನು ಅಗ್ಗದ ಬೆಲೆಗೆ ಮಾರುವುದಕ್ಕಾಗಿ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ’’ ಎನ್ನುವ ಜನರಿಗೆ ವಿನಾಶ ಕಾದಿದೆ. ತಮ್ಮ ಕೈಗಳಿಂದ ಅವರು ಏನನ್ನು ಬರೆದರೋ ಅದಕ್ಕಾಗಿಯೂ ಅವರಿಗೆ ವಿನಾಶವಿದೆ ಮತ್ತು ಆ ಮೂಲಕ ಅವರು ಏನನ್ನು ಸಂಪಾದಿಸಿರುವರೋ ಅದಕ್ಕಾಗಿಯೂ ಅವರಿಗೆ ವಿನಾಶ ಕಾದಿದೆ

[80] ಅವರು ‘‘(ನರಕದ) ಬೆಂಕಿಯು ನಮ್ಮನ್ನು ಮುಟ್ಟಲಾರದು. (ಹೆಚ್ಚೆಂದರೆ) ಕೆಲವು ನಿರ್ದಿಷ್ಟ ದಿನಗಳ ಹೊರತು’’ ಎನ್ನುತ್ತಾರೆ. ಹೇಳಿರಿ; ನೀವೇನು, ಅಲ್ಲಾಹನಿಗೆ ಮುರಿಯಲಾಗದ ವಾಗ್ದಾನವನ್ನೇನಾದರೂ ಅಲ್ಲಾಹನಿಂದ ಪಡೆದುಕೊಂಡಿರುವಿರಾ? ನೀವೇನು, ನಿಮಗೆ ತಿಳಿದಿಲ್ಲದ್ದನ್ನು, ಅಲ್ಲಾಹನ ಮೇಲೆ ಆರೋಪಿಸುತ್ತಿರುವಿರಾ?’’

[81] ನಿಜವಾಗಿ, ಪಾಪಗಳನ್ನು ಸಂಪಾದಿಸಿದವನು ಮತ್ತು ತನ್ನ ಪಾಪಗಳ ಸುಳಿಯೊಳಗೆ ಸಿಕ್ಕಿಕೊಂಡಿರುವವನು – ಅವರೇ ನರಕಾಗ್ನಿಯವರು. ಅವರು ಅದರಲ್ಲಿ ಸದಾಕಾಲ ಇರುವರು

[82] ಇನ್ನು, ಸತ್ಯದಲ್ಲಿ ನಂಬಿಕೆಯಿಟ್ಟವರು ಮತ್ತು ಸತ್ಕರ್ಮ ಮಾಡಿದವರು – ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು

[83] ಮತ್ತು ನಾವು ಇಸ್ರಾಈಲರ ಸಂತತಿಗಳಿಂದ ‘‘ನೀವು ಅಲ್ಲಾಹನ ಹೊರತು ಬೇರಾರನ್ನೂ ಆರಾಧಿಸಬಾರದು. ತಂದೆ-ತಾಯಿಯ ಜೊತೆ ವಿಶೇಷ ಸೌಜನ್ಯ ತೋರಬೇಕು ಮತ್ತು ಬಂಧುಗಳು, ಅನಾಥರು ಹಾಗೂ ದೀನರ ಜೊತೆಗೂ (ಸೌಜನ್ಯ ತೋರಬೇಕು) ಮತ್ತು ಜನರೊಡನೆ ಸೌಜನ್ಯದ ಮಾತನ್ನಾಡಬೇಕು, ನಮಾಝನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕು’’ ಎಂದು ಕರಾರನ್ನು ಪಡೆದಿದ್ದೆವು. ಆದರೆ ಆ ಬಳಿಕ ನಿಮ್ಮಲ್ಲಿನ ಕೆಲವೇ ಜನರ ಹೊರತು, ನೀವೆಲ್ಲರೂ ಆ ಕರಾರಿನಿಂದ ಹಿಂದೆ ಸರಿದು ಬಿಟ್ಟಿರಿ ಮತ್ತು ನೀವು ಅದನ್ನು ಕಡೆಗಣಿಸಿದಿರಿ

[84] (ಇಸ್ರಾಈಲರ ಸಂತತಿಗಳೇ) ‘‘ಪರಸ್ಪರ ರಕ್ತ ಹರಿಸಬೇಡಿ ಮತ್ತು ನಿಮ್ಮವರನ್ನೇ ನಿಮ್ಮ ನಾಡುಗಳಿಂದ ಹೊರಗೋಡಿಸಬೇಡಿ’’ ಎಂದು ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡಿದ್ದೆವು. ನೀವು ಅದನ್ನು ಒಪ್ಪಿಕೊಂಡಿದ್ದಿರಿ ಮತ್ತು ನೀವೇ ಅದಕ್ಕೆ ಸಾಕ್ಷಿಗಳು

[85] ಇಷ್ಟಾಗಿಯೂ, ಸ್ವತಃ ನೀವೇ ನಿಮ್ಮವರ ಕೊಲೆ ಮಾಡುತ್ತೀರಿ ಮತ್ತು ನಿಮ್ಮಾಳಗಿನ ಒಂದು ಪಂಗಡವನ್ನು ಅವರ ನಾಡುಗಳಿಂದ ಹೊರದಬ್ಬುತ್ತೀರಿ ಮತ್ತು ಅವರ ವಿರುದ್ಧ ಪಾಪಕೃತ್ಯ ಹಾಗೂ ಅಕ್ರಮವೆಸಗುವುದರಲ್ಲಿ ನೀವು (ಶತ್ರುಗಳಿಗೆ) ನೆರವಾಗುತ್ತೀರಿ ಮತ್ತು ಅವರು ನಿಮ್ಮವರ ಬಳಿಗೆ ಯುದ್ಧ ಕೈದಿಗಳಾಗಿ ಬಂದಾಗ, ನೀವು ಪರಿಹಾರ ಧನ ಕೊಟ್ಟು ಅವರನ್ನು ಬಿಡಿಸಿಕೊಳ್ಳುತ್ತೀರಿ. ಮೂಲತಃ ಅವರನ್ನು (ನಾಡಿನಿಂದ) ಹೊರಹಾಕುವುದೇ ನಿಮ್ಮ ಪಾಲಿಗೆ ನಿಷಿದ್ಧವಾಗಿತ್ತು. ನೀವೇನು, ಗ್ರಂಥದ ಕೆಲವು ಭಾಗಗಳಲ್ಲಿ ನಂಬಿಕೆಯಿಟ್ಟು ಮತ್ತೆ ಕೆಲವು ಭಾಗಗಳನ್ನು ಧಿಕ್ಕರಿಸುವಿರಾ? ನಿಮ್ಮ ಪೈಕಿ ಹಾಗೆ ಮಾಡುವವರಿಗೆ ಇರುವ ಪ್ರತಿಫಲವೇನೆಂದರೆ – ಇಹ ಜೀವನದಲ್ಲಿ ಅವರು ನಷ್ಟಕ್ಕೊಳಗಾಗುವರು ಮತ್ತು ಪುನರುತ್ಥಾನದ ದಿನ ಅವರನ್ನು ತೀವ್ರ ತರದ ಶಿಕ್ಷೆಯೆಡೆಗೆ ಮರಳಿಸಲಾಗುವುದು. ನೀವು ಎಸಗುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ

[86] ಅವರು ಪರಲೋಕದ ಬದಲಿಗೆ ಈ ಲೌಕಿಕ ಬದುಕನ್ನು ಖರೀದಿಸಿ ಕೊಂಡವರಾಗಿದ್ದಾರೆ. ಅವರ ಶಿಕ್ಷೆಯನ್ನು ಕಿಂಚಿತ್ತೂ ಕಡಿಮೆಗೊಳಿಸಲಾಗದು ಮತ್ತು ಅವರಿಗೆ ಎಲ್ಲಿಂದಲೂ ಸಹಾಯ ಸಿಗದು

[87] ನಾವು (ಅಲ್ಲಾಹ್) ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಆ ಬಳಿಕವೂ ಬೆನ್ನು ಬೆನ್ನಿಗೆ ದೂತರನ್ನು ಕಳಿಸುತ್ತಲೇ ಇದ್ದೆವು. ಮತ್ತು ನಾವು ಮರ್ಯಮರ ಪುತ್ರ ಈಸಾರಿಗೆ ಸ್ಪಷ್ಟ ಪುರಾವೆಗಳನ್ನು ನೀಡಿದೆವು ಹಾಗೂ ಪವಿತ್ರ ಆತ್ಮದ ಮೂಲಕ ಅವರಿಗೆ ಶಕ್ತಿಯನ್ನೊದಗಿಸಿದೆವು. ಆದರೆ ನೀವೇನು, ದೂತರು ನಿಮ್ಮ ಚಿತ್ತಕ್ಕೆ ಇಷ್ಟವಿಲ್ಲದ್ದನ್ನು ತಂದಾಗಲೆಲ್ಲಾ ಅಹಂಕಾರ ತೋರುವಿರಾ? ಅವರಲ್ಲಿ ಕೆಲವರನ್ನು ನೀವು ಧಿಕ್ಕರಿಸಿದಿರಿ ಮತ್ತು ಕೆಲವರನ್ನು ಕೊಂದು ಬಿಟ್ಟಿರಿ

[88] ‘‘ನಮ್ಮ ಹೃದಯಗಳು ಸುರಕ್ಷಿತವಾಗಿವೆ’’ ಎಂದವರು ಹೇಳುತ್ತಾರೆ. ನಿಜವಾಗಿ ಅವರ ಧಿಕ್ಕಾರದ ಕಾರಣ ಅವರನ್ನು ಅಲ್ಲಾಹನು ಶಪಿಸಿದ್ದಾನೆ. ಅವರು ನಂಬುವುದು ಬಹಳ ಕಡಿಮೆ

[89] ಈ ಹಿಂದೆ, ಧಿಕ್ಕಾರಿಗಳ ವಿರುದ್ಧ ತಮಗೆ ವಿಜಯ ನೀಡಬೇಕೆಂದು ಪ್ರಾರ್ಥಿಸುತ್ತಿದ್ದ ಅದೇ ಮಂದಿ – ಇದೀಗ, ಅಲ್ಲಾಹನ ಕಡೆಯಿಂದ, ಈಗಾಗಲೇ ತಮ್ಮ ಬಳಿ ಇರುವ ಗ್ರಂಥಗಳನ್ನು ಸಮರ್ಥಿಸುವ ಗ್ರಂಥವು ತಮ್ಮ ಬಳಿಗೆ ಬಂದಿರುವಾಗ ಮತ್ತು ತಮಗೆ ಪರಿಚಯವಿರುವ ಸತ್ಯ ಗ್ರಂಥವು ತಮ್ಮ ಬಳಿಗೆ ಬಂದಿರುವಾಗ, ಅದನ್ನು ಧಿಕ್ಕರಿಸುತ್ತಿದ್ದಾರೆ. ಧಿಕ್ಕಾರಿಗಳ ಮೇಲೆ ಅಲ್ಲಾಹನ ಶಾಪವಿದೆ

[90] ಎಷ್ಟೊಂದು ಕೆಟ್ಟ ವಸ್ತುವಿಗಾಗಿ ಅವರು ತಮ್ಮನ್ನು ಮಾರಿಕೊಂಡಿದ್ದಾರೆ! ಅಲ್ಲಾಹನು ತನ್ನ ಅನುಗ್ರಹದಿಂದ (ತನ್ನ ಸಂದೇಶವನ್ನು) ತನ್ನ ದಾಸರ ಪೈಕಿ ತನಗಿಷ್ಟವಿದ್ದವರಿಗೆ ಇಳಿಸಿಕೊಟ್ಟನೆಂಬ ಹಗೆತನದಿಂದ ಅವರು, ಅಲ್ಲಾಹನು ಇಳಿಸಿದ್ದನ್ನು (ಕುರ್‌ಆನನ್ನು) ಧಿಕ್ಕರಿಸಿದ್ದಾರೆ. ಈ ರೀತಿ ಅವರು ಬೆನ್ನು ಬೆನ್ನಿಗೆ (ಅಲ್ಲಾಹನ) ಕೋಪಕ್ಕೆ ಪಾತ್ರರಾಗಿ ಬಿಟ್ಟಿದ್ದಾರೆ. ಧಿಕ್ಕಾರಿಗಳಿಗೆ ಒಂದು ಅಪಮಾನಕಾರಿ ಶಿಕ್ಷೆ ಸಿಗಲಿದೆ

[91] ‘‘ಅಲ್ಲಾಹನು ಇಳಿಸಿ ಕೊಟ್ಟಿರುವ ಸಂದೇಶವನ್ನು ನಂಬಿರಿ’’ ಎಂದು ಅವರೊಡನೆ ಹೇಳಿದಾಗ ಅವರು, ‘‘ಅಲ್ಲಾಹನು ನಮಗೆ ಇಳಿಸಿಕೊಟ್ಟಿರುವುದನ್ನು ನಾವು ನಂಬಿದ್ದೇವೆ’’ ಎನ್ನುತ್ತಾರೆ ಮತ್ತು ಅದರಾಚೆಗಿರುವ ಎಲ್ಲವನ್ನೂ ಅವರು ಧಿಕ್ಕರಿಸುತ್ತಾರೆ – ನಿಜವಾಗಿ ಇದು ಅವರ ಬಳಿ ಇರುವುದನ್ನು ಸಮರ್ಥಿಸುವ ಸತ್ಯವೇ ಆಗಿದೆ. ‘‘ನೀವು ನಿಜಕ್ಕೂ ಸತ್ಯವನ್ನು ನಂಬುವವರಾಗಿದ್ದರೆ, ಈ ಹಿಂದೆ ನೀವು ಅಲ್ಲಾಹನ ದೂತರುಗಳನ್ನು ಕೊಂದದ್ದೇಕೆ?’’ ಎಂದು (ಅವರೊಡನೆ) ಕೇಳಿರಿ

[92] ಖಂಡಿತವಾಗಿಯೂ, ಮೂಸಾ ನಿಮ್ಮ ಬಳಿಗೆ ಬಹಳ ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಆ ಬಳಿಕ (ಪೂಜೆಗಾಗಿ) ನೀವು ಕರುವನ್ನು ನೆಚ್ಚಿಕೊಂಡಿರಿ ಮತ್ತು (ಆ ಮೂಲಕ) ನೀವು ಅಕ್ರಮಿಗಳಾಗಿ ಬಿಟ್ಟಿರಿ

[93] ಮತ್ತು ನಾವು ನಿಮ್ಮ (ಇಸ್ರಾಈಲರ ಸಂತತಿಗಳ) ಮೇಲೆ ಪರ್ವತವನ್ನೆತ್ತಿ ‘‘ನಾವು ನಿಮಗೆ ನೀಡುತ್ತಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಆಲಿಸಿರಿ’’ ಎಂದು ನಿಮ್ಮಿಂದ ಕರಾರನ್ನು ಪಡೆದುಕೊಂಡಿದ್ದೆವು. ಅದಕ್ಕೆ ಅವರು (ನಿಮ್ಮ ಪೂರ್ವಜರು) ‘‘ನಾವು ಆಲಿಸಿದೆವು ಮತ್ತು ಉಲ್ಲಂಘಿಸಿದೆವು’’ ಎಂದರು. ಅವರ ಧಿಕ್ಕಾರಿ ಧೋರಣೆಯ ಕಾರಣ ಅವರ ಹೃದಯಗಳಲ್ಲಿ ಕರುವೇ ನೆಲೆಸಿಬಿಟ್ಟಿತ್ತು. (ದೂತರೇ,) ‘‘ನೀವು ನಂಬುವವರಾಗಿದ್ದರೆ, ಆ ನಿಮ್ಮ ನಂಬಿಕೆಯು ನಿಮಗೆ ನೀಡುತ್ತಿರುವ ಆದೇಶಗಳು ಎಷ್ಟು ನಿಕೃಷ್ಟವಾಗಿವೆ!’’ ಎಂದು (ಅವರೊಡನೆ) ಹೇಳಿರಿ

[94] ಹೇಳಿರಿ; ‘‘ಅಲ್ಲಾಹನ ಬಳಿ, ಪರಲೋಕದ ಮನೆಯು, ಇತರೆಲ್ಲ ಮಾನವರನ್ನು ಬಿಟ್ಟು ಕೇವಲ ನಿಮಗಾಗಿಯೇ ಮೀಸಲಾಗಿದ್ದರೆ, (ಮತ್ತು ಹಾಗೆನ್ನುವ) ನೀವು ನಿಜಕ್ಕೂ ಸತ್ಯವಂತರಾಗಿದ್ದರೆ, ನೀವು ಮರಣಕ್ಕಾಗಿ ಹಾತೊರೆಯಿರಿ’’

[95] ಅವರ ಕೈಗಳು ಸಂಪಾದಿಸಿ ಮುಂದಕ್ಕೆ ಕಳಿಸಿರುವ ಕರ್ಮಗಳಿಂದಾಗಿ ಅವರು ಎಂದೆಂದೂ ಅದಕ್ಕಾಗಿ (ಮರಣಕ್ಕಾಗಿ) ಹಾತೊರೆಯಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು

[96] ಖಂಡಿತವಾಗಿಯೂ ನೀವು ಅವರನ್ನು, ಮಾನವರ ಪೈಕಿ, ಬದುಕಿಗಾಗಿ ಅತಿ ಹೆಚ್ಚು ಆಶೆ ಪಡುವವರಾಗಿ ಕಾಣುವಿರಿ. ಈ ವಿಷಯದಲ್ಲಿ ಅವರು ಬಹುದೇವಾರಾಧಕರಿಗಿಂತಲೂ ಮುಂದಿದ್ದಾರೆ. ಅವರಲ್ಲಿನ ಪ್ರತಿಯೊಬ್ಬನೂ ಸಾವಿರ ವರ್ಷ ಬದುಕ ಬಯಸುತ್ತಾನೆ. ಅವನ ಆ ದೀರ್ಘ ಆಯುಷ್ಯವು ಅವನನ್ನು ಶಿಕ್ಷೆಯಿಂದ ರಕ್ಷಿಸಲಾರದು. ಅಲ್ಲಾಹನು, ಅವರು ಮಾಡುತ್ತಿರುವುದನ್ನೆಲ್ಲಾ ನೋಡುತ್ತಲೇ ಇದ್ದಾನೆ

[97] ಹೇಳಿರಿ; ಜಿಬ್ರೀಲರ ಶತ್ರುವಾಗಿರುವವನು (ತಿಳಿದಿರಲಿ) – ಅವರಂತು, ಅಲ್ಲಾಹನ ಆದೇಶದಂತೆ, (ಅವನ ಸಂದೇಶವನ್ನು) ನಿಮ್ಮ (ಮುಹಮ್ಮದರ) ಹೃದಯಕ್ಕೆ ಇಳಿಸುವವರಾಗಿದ್ದಾರೆ. ಅದು ತನಗಿಂತ ಹಿಂದೆ ಬಂದಿರುವ ಸತ್ಯವನ್ನು ಸಮರ್ಥಿಸುವ ಮಾರ್ಗದರ್ಶನವಾಗಿದೆ ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಶುಭವಾರ್ತೆಯಾಗಿದೆ

[98] ಅಲ್ಲಾಹನ ಹಾಗೂ ಅವನ ಮಲಕ್‌ಗಳ ಹಾಗೂ ಅವನ ದೂತರುಗಳ ಮತ್ತು ಜಿಬ್ರೀಲ್ ಹಾಗೂ ಮೀಕಾಯೀಲರ ಶತ್ರುವಾಗಿರುವವನು (ತಿಳಿದಿರಲಿ) – ಖಂಡಿತವಾಗಿಯೂ ಅಲ್ಲಾಹನು ಸತ್ಯಧಿಕ್ಕಾರಿಗಳ ಶತ್ರುವಾಗಿದ್ದಾನೆ

[99] (ದೂತರೇ,) ನಾವು ನಿಮ್ಮೆಡೆಗೆ ಬಹಳ ಸ್ಪಷ್ಟವಾದ ವಾಕ್ಯಗಳನ್ನು ಇಳಿಸಿಕೊಟ್ಟಿರುತ್ತೇವೆ. ಅವಿಧೇಯರ ಹೊರತು ಬೇರಾರೂ ಅವುಗಳನ್ನು ಧಿಕ್ಕರಿಸುವುದಿಲ್ಲ

[100] ಅವರು ಏನಾದರೊಂದು ಕರಾರನ್ನು ಮಾಡಿಕೊಂಡಾಗಲೆಲ್ಲಾ ಅವರಲ್ಲಿನ ಯಾವುದಾದರೂ ಪಂಗಡವು ಅದನ್ನು ಮೂಲೆಗೆಸೆಯಲಿಲ್ಲವೆ? ನಿಜವಾಗಿ ಅವರಲ್ಲಿ ಹೆಚ್ಚಿನವರು ನಂಬುವವರೇ ಅಲ್ಲ

[101] ಮತ್ತು ಈ ಹಿಂದೆ ಗ್ರಂಥ ನೀಡಲಾಗಿದ್ದವರ ಪೈಕಿ ಒಂದು ಗುಂಪಿನವರು, ಈಗಾಗಲೇ ತಮ್ಮ ಬಳಿಯಿರುವ ಸತ್ಯವನ್ನು ಸಮರ್ಥಿಸುವ ದೂತನೊಬ್ಬನು ಅಲ್ಲಾಹನ ಕಡೆಯಿಂದ ತಮ್ಮ ಬಳಿಗೆ ಬಂದಾಗಲೆಲ್ಲಾ, ಆ ಕುರಿತು ತಮಗೆ ಏನೂ ತಿಳಿಯದು ಎಂಬಂತೆ, ಅಲ್ಲಾಹನ ಗ್ರಂಥವನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದು ಬಿಟ್ಟರು

[102] ಮತ್ತು ಅವರು, ಸುಲೈಮಾನರ ಸಾಮ್ರಾಜ್ಯದ ಹೆಸರಲ್ಲಿ ಶೈತಾನರು ಪಠಿಸುತ್ತಿದ್ದವುಗಳ (ಮಾಟ, ಮಂತ್ರಗಳ) ಬೆನ್ನು ಹತ್ತಿದ್ದರು. ನಿಜವಾಗಿ ಸುಲೈಮಾನರು ಸತ್ಯವನ್ನು ಧಿಕ್ಕರಿಸಿರಲಿಲ್ಲ. ಆ ಶೈತಾನರೇ ಸತ್ಯವನ್ನು ಧಿಕ್ಕರಿಸಿದ್ದರು. ಅವರು ಜನರಿಗೆ ಮಾಟಮಂತ್ರವನ್ನು ಕಲಿಸುತ್ತಿದ್ದರು. ಮತ್ತು ಅವರು ಬಾಬಿಲ್‌ನಲ್ಲಿ (ಬ್ಯಾಬಿಲೋನಿಯಾದಲ್ಲಿ) ಹಾರೂತ್ ಮತ್ತು ಮಾರೂತ್ ಎಂಬ ‘ಮಲಕ್’ಗಳಿಗೆ ನೀಡಲಾಗಿದ್ದ ವಿದ್ಯೆಯ ಹಿಂದೆ ಬಿದ್ದಿದ್ದರು. ನಿಜವಾಗಿ ಅವರು (ಹಾರೂತ್ ಮತ್ತು ಮಾರೂತ್)- ‘‘ನಾವು ಒಂದು ಪರೀಕ್ಷೆಯಾಗಿದ್ದೇವೆ. ನೀನು ಧಿಕ್ಕಾರಿಯಾಗಿ ಬಿಡಬಾರದು’’ ಎಂದು ಮುಂಗಡ ಎಚ್ಚರಿಕೆ ನೀಡದೆ ಯಾರಿಗೂ ಅದನ್ನು ಕಲಿಸುತ್ತಿರಲಿಲ್ಲ. ಇಷ್ಟಾಗಿಯೂ ಈ ಜನರು, ಅವರಿಂದ, ಪತಿ-ಪತ್ನಿಯರ ನಡುವೆ ಬಿಕ್ಕಟ್ಟು ಮೂಡಿಸುವ ವಿದ್ಯೆಯನ್ನು ಕಲಿಯುತ್ತಿದ್ದರು. ನಿಜವಾಗಿ, ಅಲ್ಲಾಹನ ಅನುಮತಿ ಇಲ್ಲದೆ, ಆ ಮೂಲಕ ಯಾರೊಬ್ಬರಿಗೂ ಯಾವುದೇ ಹಾನಿಯುಂಟು ಮಾಡಲು ಅವರಿಗೆ ಸಾಧ್ಯವಿರಲಿಲ್ಲ. ನಿಜವಾಗಿ ಅವರು ತಮಗೆ ಹಾನಿಕರವಾದ ಮತ್ತು ತಮಗೆ ಯಾವ ಲಾಭವನ್ನೂ ತರದ ವಿದ್ಯೆಯನ್ನು ಕಲಿಯುತ್ತಿದ್ದರು. ಹಾಗೆಂದು, ಅಂತಹದನ್ನು ಕೊಂಡು ಕೊಂಡವರಿಗೆ ಪರಲೋಕದ ಸುಖದಲ್ಲಿ ಯಾವ ಪಾಲೂ ಇರುವುದಿಲ್ಲವೆಂಬುದು ಅವರಿಗೆ ತಿಳಿದಿತ್ತು. ಮತ್ತು ಅವರು ತಮ್ಮನ್ನು ಮಾರಿಕೊಂಡು ಖರೀದಿಸಿದ ವಸ್ತು ತೀರಾ ಕೆಟ್ಟದಾಗಿತ್ತು. ಅವರು ಅದನ್ನು ಅರಿತಿದ್ದರೆ ಚೆನ್ನಾಗಿತ್ತು

[103] ಅವರು ನಂಬಿಕೆಯಿಟ್ಟಿದ್ದರೆ ಮತ್ತು ಧರ್ಮ ನಿಷ್ಠರಾಗಿದ್ದರೆ, ಅಲ್ಲಾಹನ ಬಳಿ ಅವರಿಗೆ, ಎಷ್ಟೋ ಶ್ರೇಷ್ಠ ಪ್ರತಿಫಲ ಸಿಗುತ್ತಿತ್ತು. ಅವರು ಅದನ್ನು ಅರಿತಿದ್ದರೆ ಚೆನ್ನಾಗಿತ್ತು

[104] ವಿಶ್ವಾಸಿಗಳೇ, ‘ರಾಇನಾ’ ಎನ್ನಬೇಡಿ, ‘ಉನ್‌ಲ್ಹುರ್ನಾ’ ಎನ್ನಿರಿ ಮತ್ತು ಆಲಿಸಿರಿ. ಧಿಕ್ಕಾರಿಗಳಿಗೆ ಯಾತನಾಮಯ ಶಿಕ್ಷೆ ಕಾದಿದೆ

[105] ಗ್ರಂಥದವರಲ್ಲಿನ ಧಿಕ್ಕಾರಿಗಳು ಮತ್ತು ಬಹುದೇವಾರಾಧಕರು, ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಯಾವುದೇ ಒಳಿತು ಇಳಿದು ಬರುವುದನ್ನು ಇಷ್ಟಪಡುವುದಿಲ್ಲ. ಆದರೆ ಅಲ್ಲಾಹನಂತು ತನ್ನ ಅನುಗ್ರಹದಿಂದ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಾನೆ. ಅಲ್ಲಾಹನು ಮಹಾ ಉದಾರಿಯಾಗಿದ್ದಾನೆ

[106] ನಾವು (ಕುರ್‌ಆನಿನ) ಯಾವುದೇ ವಚನವನ್ನು ಅನೂರ್ಜಿತಗೊಳಿಸಿದರೆ ಅಥವಾ ಮರೆಸಿಬಿಟ್ಟರೆ, (ಅದರ ಬದಲಿಗೆ) ಅದಕ್ಕಿಂತ ಉತ್ತಮವಾದ ಅಥವಾ ಅದಕ್ಕೆ ಸಮನಾದ ವಚನವನ್ನು ತರದೆ ಇರುವುದಿಲ್ಲ. ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನೆಂಬುದು ನಿಮಗೆ ತಿಳಿಯದೇ

[107] ಆಕಾಶಗಳ ಮತ್ತು ಭೂಮಿಯ ಆಧಿಪತ್ಯವೆಲ್ಲಾ ಅಲ್ಲಾಹನಿಗೆ ಮಾತ್ರ ಸೇರಿದೆ ಮತ್ತು ನಿಮಗೆ ಅಲ್ಲಾಹನ ಹೊರತು ಬೇರೆ ಯಾರೂ ಪೋಷಕರಾಗಲಿ ಸಹಾಯಕರಾಗಲಿ ಇಲ್ಲ ಎಂಬುದು ನಿಮಗೆ ತಿಳಿಯದೇ

[108] (ವಿಶ್ವಾಸಿಗಳೇ,) ನೀವೇನು, ಈ ಹಿಂದೆ ಮೂಸಾರೊಡನೆ ಕೇಳಲಾದ ಪ್ರಶ್ನೆಗಳನ್ನೇ ನಿಮ್ಮ ದೇವದೂತರೊಡನೆ ಕೇಳ ಬಯಸುವಿರಾ? (ಈ ರೀತಿ) ವಿಶ್ವಾಸವನ್ನು ಧಿಕ್ಕಾರವಾಗಿ ಬದಲಿಸಿಕೊಂಡವನು ನಿಜಕ್ಕೂ ನೇರ ಮಾರ್ಗದಿಂದ ಬಹಳ ದೂರ ಹೋಗಿ ಬಿಟ್ಟನು

[109] ಗ್ರಂಥದವರಲ್ಲಿ ಹೆಚ್ಚಿನವರು, ನೀವು ವಿಶ್ವಾಸಿಗಳಾದ ಬಳಿಕ ನಿಮ್ಮನ್ನು ಮತ್ತೆ ಧಿಕ್ಕಾರದೆಡೆಗೆ ಮರಳಿಸಬಯಸಿದ್ದರು. ಸತ್ಯವು ಅವರಿಗೆ ಸ್ಪಷ್ಟವಾದ ಬಳಿಕವೂ ಅವರು ತಮ್ಮೊಳಗಿನ ಅಸೂಯೆಯಿಂದಾಗಿ (ಹೀಗೆ ಮಾಡುತ್ತಿದ್ದಾರೆ). ನೀವು ಮಾತ್ರ, ಈ ಕುರಿತು ಅಲ್ಲಾಹನು ತನ್ನ ಆದೇಶವನ್ನು ಪ್ರಕಟಿಸುವ ತನಕವೂ (ಅವರನ್ನು) ಕ್ಷಮಿಸುತ್ತಲೂ (ಅವರ ತಪ್ಪನ್ನು) ಕಡೆಗಣಿಸುತ್ತಲೂ ಇರಿ. ಅಲ್ಲಾಹನು ಖಂಡಿತ ಎಲ್ಲವನ್ನು ಮಾಡಬಲ್ಲವನಾಗಿದ್ದಾನೆ

[110] ಮತ್ತು ನೀವು ನಮಾಝನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು ಪಾವತಿಸಿರಿ. ನೀವು ನಿಮಗಾಗಿ ಮುಂದೆ ಕಳಿಸುವ ಎಲ್ಲ ಸತ್ಕಾರ್ಯಗಳನ್ನು ಅಲ್ಲಾಹನ ಬಳಿ ಕಾಣುವಿರಿ. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಖಂಡಿತ ನೋಡುತ್ತಿದ್ದಾನೆ

[111] ಯಹೂದಿಯಾದವನ ಅಥವಾ ಕ್ರೈಸ್ತನಾದವನ ಹೊರತು ಬೇರಾರೂ ಸ್ವರ್ಗವನ್ನು ಪ್ರವೇಶಿಸಲಾರನೆಂದು ಅವರು ಹೇಳುತ್ತಾರೆ. ಅದು ಕೇವಲ ಅವರ ಆಶೆಯಾಗಿದೆ. ‘‘ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ’’ ಎಂದು ಅವರೊಡನೆ ಹೇಳಿರಿ

[112] ನಿಜವಾಗಿ, ತನ್ನನ್ನು ಅಲ್ಲಾಹನಿಗೆ ಶರಣಾಗಿಸಿಕೊಂಡು, ಸತ್ಕರ್ಮಗಳನ್ನು ಮಾಡುತ್ತಲಿದ್ದವನ ಪ್ರತಿಫಲವು ಅವನ ಒಡೆಯನ ಬಳಿ ಇದೆ. ಅಂಥವರಿಗೆ ಯಾವ ಭಯವೂ ಇರದು. ಯಾವ ವ್ಯಥೆಯೂ ಇರದು

[113] ಕ್ರೈಸ್ತರ ಬಳಿ ಏನೂ (ಯಾವ ಸತ್ಯವೂ) ಇಲ್ಲವೆಂದು ಯಹೂದಿಗಳು ಹೇಳುತ್ತಾರೆ ಮತ್ತು ಯಹೂದಿಗಳ ಬಳಿ ಏನೂ ಇಲ್ಲವೆಂದು ಕ್ರೈಸ್ತರು ಹೇಳುತ್ತಾರೆ. ಹಾಗೆಂದು, ಅವರು (ಇಬ್ಬರೂ) ಗ್ರಂಥವನ್ನು ಓದುವವರಾಗಿದ್ದಾರೆ. ತಿಳುವಳಿಕೆ ಇಲ್ಲದವರೂ ಇದೇ ರೀತಿ, ಅವರು ಆಡುತ್ತಿರುವಂತಹ ಮಾತನ್ನೇ ಆಡುತ್ತಾರೆ. ಅವರು ಭಿನ್ನತೆಗೊಳಗಾಗಿದ್ದ ವಿಷಯಗಳಲ್ಲಿ ಪುನರುತ್ಥಾನ ದಿನ, ಅಲ್ಲಾಹನೇ ಅವರ ನಡುವೆ ತೀರ್ಪು ನೀಡುವನು

[114] ಅಲ್ಲಾಹನ ಮಸೀದಿಗಳಲ್ಲಿ ಅವನ ಹೆಸರನ್ನು ಪ್ರಸ್ತಾಪಿಸದಂತೆ ತಡೆಯುವವನಿಗಿಂತ ಹಾಗೂ ಅವುಗಳನ್ನು ಪಾಳುಬೀಳಿಸಲು ಶ್ರಮಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಂಥವರು, ಭಯ ಭಕ್ತಿಯಿಲ್ಲದೆ ಅವುಗಳೊಳಗೆ ಪ್ರವೇಶಿಸಲೇ ಬಾರದಾಗಿತ್ತು. ಅವರಿಗೆ ಇಹಲೋಕದಲ್ಲಿ ನಷ್ಟವಿದೆ ಮತ್ತು ಪರಲೋಕದಲ್ಲೂ ಅವರಿಗೆ ಮಹಾ ಯಾತನೆ ಸಿಗಲಿದೆ

[115] ಪೂರ್ವ ಮತ್ತು ಪಶ್ಚಿಮವು ಅಲ್ಲಾಹನಿಗೇ ಸೇರಿದೆ. ನೀವು ಯಾವೆಡೆಗೆ ತಿರುಗಿದರೂ, ಅಲ್ಲಾಹನ ಸಾನ್ನಿಧ್ಯವು ಅಲ್ಲಿದೆ. ಅಲ್ಲಾಹನು ಖಂಡಿತ ಸರ್ವವ್ಯಾಪಿಯಾಗಿದ್ದಾನೆ ಮತ್ತು ಬಲ್ಲವನಾಗಿದ್ದಾನೆ

[116] ಮತ್ತು ಅವರು ‘‘ಅಲ್ಲಾಹನು ಒಬ್ಬನನ್ನು ತನ್ನ ಪುತ್ರನಾಗಿಸಿಕೊಂಡಿದ್ದಾನೆ’’ ಎನ್ನುತ್ತಾರೆ. ಅವನು ಪಾವನನು. ನಿಜವಾಗಿ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನಿಗೇ ಸೇರಿದೆ. ಎಲ್ಲವೂ ಅವನಿಗೆ ವಿಧೇಯವಾಗಿದೆ

[117] ಅವನೇ ಆಕಾಶಗಳಿಗೆ ಮತ್ತು ಭೂಮಿಗೆ ಚಾಲನೆ ನೀಡಿದವನು. ಅವನು ಒಂದು ನಿರ್ಧಾರ ಮಾಡಿದಾಗ, ಆದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ

[118] ಅರಿವಿಲ್ಲದವರು, ‘‘ಅಲ್ಲಾಹನೇಕೆ ನಮ್ಮೊಡನೆ ಮಾತನಾಡುವುದಿಲ್ಲ? ಅಥವಾ ನಮ್ಮ ಬಳಿಗೊಂದು ಪುರಾವೆಯಾದರೂ ಯಾಕೆ ಬರುವುದಿಲ್ಲ?’’ ಎನ್ನುತ್ತಾರೆ. ಅವರಿಗಿಂತ ಹಿಂದಿನವರೂ ಅವರು ಹೇಳಿದಂತಹ ಮಾತನ್ನೇ ಹೇಳಿದ್ದರು. ಅವರ ಮನಸ್ಸುಗಳು ಒಂದೇ ತರದ್ದಾಗಿವೆ. ದೃಢ ವಿಶ್ವಾಸವಿರುವ ಜನರಿಗಂತೂ ನಾವು ಪುರಾವೆಗಳನ್ನು ಈಗಾಗಲೇ ವಿವರಿಸಿ ಬಿಟ್ಟಿದ್ದೇವೆ

[119] (ದೂತರೇ,) ಖಂಡಿತವಾಗಿಯೂ ನಿಮ್ಮನ್ನು ನಾವು ಸತ್ಯದೊಂದಿಗೆ ಕಳಿಸಿರುತ್ತೇವೆ – ಶುಭ ವಾರ್ತೆ ನೀಡುವವರಾಗಿ ಮತ್ತು ಎಚ್ಚರಿಸುವವರಾಗಿ. ನರಕದವರ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು

[120] ಇನ್ನು, ಯಹೂದಿಗಳಾಗಲಿ, ಕ್ರೈಸ್ತರಾಗಲಿ, ನೀವು ಅವರ ಮಾರ್ಗವನ್ನು ಅನುಸರಿಸುವ ತನಕವೂ ಅವರು ನಿಮ್ಮಿಂದ ಸಂತುಷ್ಟರಾಗಲಾರರು. ‘‘ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ’’ ಎಂದು (ಅವರೊಡನೆ) ಹೇಳಿರಿ. ಒಂದು ವೇಳೆ ನಿಮ್ಮ ಬಳಿಗೆ (ಸತ್ಯದ) ಜ್ಞಾನವು ಬಂದ ಬಳಿಕವೂ ನೀವು ಆ ಜನರ ಅಪೇಕ್ಷೆಗಳನ್ನು ಅನುಸರಿಸಿದರೆ, ಅಲ್ಲಾಹನೆದುರು ನಿಮಗೆ ಯಾವ ಆಪ್ತರೂ ಸಹಾಯಕರೂ ಇರಲಾರರು

[121] ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಅದನ್ನು ಓದಬೇಕಾದ ರೀತಿಯಲ್ಲಿ ಓದುತ್ತಾರೆ (ಮತ್ತು) ಅವರು ಅದನ್ನು ನಂಬುತ್ತಾರೆ. ಇನ್ನು, ಅದನ್ನು ಯಾರು ತಿರಸ್ಕರಿಸುವರೋ ಅವರೇ ನಿಜವಾಗಿ ನಷ್ಟಕ್ಕೊಳಗಾಗುವವರು

[122] ಇಸ್ರಾಈಲರ ಸಂತತಿಗಳೇ, ನಾನು ನಿಮಗೆ ನೀಡಿದ ಅನುಗ್ರಹವನ್ನು ಮತ್ತು ಜಗತ್ತಿನ ಎಲ್ಲರೆದುರು ನಿಮಗೆ ಶ್ರೇಷ್ಠತೆ ನೀಡಿದ್ದನ್ನು ಸ್ಮರಿಸಿರಿ

[123] ಮತ್ತು ಯಾರಿಗೂ ಯಾರಿಂದಲೂ ಯಾವುದೇ ಪ್ರಯೋಜನವಾಗದ ಹಾಗೂ ಯಾರಿಂದಲೂ ಪರಿಹಾರ ಧನ ಸ್ವೀಕರಿಸಲಾಗದ, ಯಾರಿಗೂ ಯಾರದೇ ಶಿಫಾರಸ್ಸಿನಿಂದ ಲಾಭವಾಗದ ಮತ್ತು ಅವರಿಗೆ (ಅಪರಾಧಿಗಳಿಗೆ) ಯಾವುದೇ ಸಹಾಯ ಸಿಗಲಾರದ ಆ ದಿನದ ಬಗ್ಗೆ ಎಚ್ಚರವಾಗಿರಿ

[124] ಮತ್ತು ಇಬ್ರಾಹೀಮರನ್ನು ಅವರ ಒಡೆಯನು (ಅಲ್ಲಾಹನು) ಕೆಲವು ಆದೇಶಗಳ ಮೂಲಕ ಪರೀಕ್ಷೆಗೆ ಒಳಪಡಿಸಿದಾಗ, ಅವರು ಅವುಗಳನ್ನು ಪೂರ್ಣವಾಗಿ ಪಾಲಿಸಿದರು. (ಅಲ್ಲಾಹನು ಅವರೊಡನೆ) ‘‘ನಾನು ನಿಮ್ಮನ್ನು ಎಲ್ಲ ಮಾನವರ ನಾಯಕನಾಗಿ ನೇಮಿಸಲಿದ್ದೇನೆ’’ ಎಂದಾಗ ಅವರು ‘‘ಮತ್ತು ನನ್ನ ಸಂತತಿಯವರನ್ನೂ (ನಾಯಕರಾಗಿಸುವೆಯಾ?)’’ ಎಂದು ಕೇಳಿದರು. ಆಗ ಅವನು (ಅಲ್ಲಾಹನು) ‘‘ನನ್ನ ವಾಗ್ದಾನವು ಅಕ್ರಮಿಗಳಿಗೆ ಅನ್ವಯವಾಗುವುದಿಲ್ಲ’’ ಎಂದನು

[125] ನಾವು ಆ ಭವನ (ಕಅಬ)ವನ್ನು ಜನರಿಗಾಗಿ, ಪರಸ್ಪರ ಒಟ್ಟು ಸೇರುವ ಹಾಗೂ ಸುರಕ್ಷಿತ ಸ್ಥಳವಾಗಿ ಮಾಡಿದೆವು. ಇಬ್ರಾಹೀಮರು ನಿಂತ ಸ್ಥಾನವನ್ನು ನೀವು ನಮಾಝಿನ ಸ್ಥಳವಾಗಿ ಬಳಸಿರಿ (ಎಂದು ನಾವು ಆದೇಶಿಸಿದ್ದೆವು). ಮತ್ತು ತವಾಫ್ (ಪ್ರದಕ್ಷಿಣೆ) ಮಾಡುವವರು, ‘ಇಅ್ತಿಕಾಫ್’ ಮಾಡುವವರು, ಬಾಗುವವರು ಹಾಗೂ ಸಾಷ್ಟಾಂಗವೆರಗುವವರಿಗಾಗಿ ನನ್ನ ಭವನವನ್ನು ನಿರ್ಮಲವಾಗಿಡಬೇಕೆಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ಆದೇಶ ನೀಡಿದ್ದೆವು

[126] ಮತ್ತು ಇಬ್ರಾಹೀಮರು ‘‘ನನ್ನೊಡೆಯಾ! ಈ ನಗರವನ್ನು ಶಾಂತಿಧಾಮವಾಗಿ ಮಾಡು ಮತ್ತು ಇಲ್ಲಿಯವರ ಪೈಕಿ ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುವವರಿಗೆ, ವಿವಿಧ ಫಲಗಳನ್ನು ಆಹಾರವಾಗಿ ನೀಡು’’ ಎಂದು ಪ್ರಾರ್ಥಿಸಿದಾಗ, ಅವನು (ಅಲ್ಲಾಹನು) ಹೇಳಿದನು; ‘‘ಅಲ್ಪ ಕಾಲಕ್ಕಾಗಿ (ಇಹಲೋಕದ ಮಟ್ಟಿಗೆ) ನಾನು ಅದನ್ನೆಲ್ಲಾ ಧಿಕ್ಕಾರಿಗೂ ಕೊಡುವೆನು. ಆದರೆ ಆ ಬಳಿಕ ಆತನನ್ನು ಎಳೆದೊಯ್ದು ನರಕದ ಶಿಕ್ಷೆಗೆ ತುತ್ತಾಗಿಸುವೆನು. ಅದು ತೀರಾ ಕೆಟ್ಟ ನೆಲೆಯಾಗಿದೆ.’’

[127] ಇಬ್ರಾಹೀಮರು ಹಾಗೂ ಇಸ್ಮಾಈಲರು ಆ ಭವನದ ಗೋಡೆಗಳನ್ನು ಎತ್ತರಿಸುತ್ತಾ (ಹೀಗೆಂದು ಪ್ರಾರ್ಥಿಸಿದರು;)- ‘‘ನಮ್ಮೊಡೆಯಾ (ಈ ಸೇವೆಯನ್ನು) ನಮ್ಮಿಂದ ಸ್ವೀಕರಿಸು. ಖಂಡಿತವಾಗಿಯೂ ನೀನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನು.‘‘

[128] ‘‘ನಮ್ಮೊಡೆಯಾ, ನಮ್ಮಿಬ್ಬರನ್ನೂ ಮುಸ್ಲಿಮರಾಗಿಸು ಮತ್ತು ನಮ್ಮ ಸಂತತಿಗಳಲ್ಲಿ ಒಂದು ಮುಸ್ಲಿಮ್ (ನಿನಗೆ ಶರಣಾದ) ಸಮುದಾಯವನ್ನು ಬೆಳೆಸು ಹಾಗೂ ನಮಗೆ ನಮ್ಮ ಆರಾಧನಾ ವಿಧಾನಗಳನ್ನು ಕಲಿಸಿಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನೀನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾಳುವೂ ಆಗಿರುವೆ.’’

[129] ‘‘ನಮ್ಮೊಡೆಯಾ, ಅವರ ನಡುವೆ, ಅವರಿಗೆ ನಿನ್ನ ವಚನಗಳನ್ನು ಓದಿ ಕೇಳಿಸುವ ಹಾಗೂ ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುವ ಮತ್ತು ಅವರನ್ನು ಸಂಸ್ಕರಿಸುವ ಒಬ್ಬ ದೂತನನ್ನು ಅವರೊಳಗಿಂದಲೇ ಬೆಳೆಸು. ಖಂಡಿತವಾಗಿಯೂ ನೀನು ಅತ್ಯಂತ ಸಮರ್ಥನೂ ಯುಕ್ತಿವಂತನೂ ಆಗಿರುವೆ.’’

[130] ಸ್ವತಃ ತನ್ನನ್ನೇ ವಂಚಿಸುವವನ ಹೊರತು ಬೇರೆ ಯಾರು ತಾನೇ ಇಬ್ರಾಹೀಮರ ಮಾರ್ಗದಿಂದ ವಿಮುಖನಾಗಬಲ್ಲನು? ನಾವು ಈ ಲೋಕದಲ್ಲೇ ಅವರನ್ನು ಆರಿಸಿಕೊಂಡಿದ್ದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರ ಸಾಲಲ್ಲಿರುವರು

[131] ಅವರ ಒಡೆಯನು ಅವರೊಡನೆ ‘‘ಮುಸ್ಲಿಮನಾಗು’’ (ಶರಣಾಗು) ಎಂದಾಗಲೇ ಅವರು ‘‘ನಾನು ವಿಶ್ವದೊಡೆಯನಿಗೆ ಮುಸ್ಲಿಮನಾದೆ (ಶರಣಾದೆ)’’ ಎಂದರು

[132] ಇದೇ ಮಾರ್ಗವನ್ನು ಇಬ್ರಾಹೀಮರು ತಮ್ಮ ಸಂತತಿಗೆ ಬೋಧಿಸಿದ್ದರು. ಮತ್ತು ಯಅ್ಕೂಬರೂ ಅಷ್ಟೇ. ‘‘ನನ್ನ ಪುತ್ರರೇ, ಅಲ್ಲಾಹನು ನಿಮಗಾಗಿ ಇದೇ ಧರ್ಮವನ್ನು ಆರಿಸಿದ್ದಾನೆ. ನೀವಿನ್ನು ಮುಸ್ಲಿಮರಲ್ಲದ ಸ್ಥಿತಿಯಲ್ಲಿ ಸಾಯಬಾರದು’’ (ಎಂದು ಅವರು ಬೋಧಿಸಿದ್ದರು)

[133] ಯಅ್ಕೂಬರು ಮರಣದ ಅಂಚಿನಲ್ಲಿದ್ದಾಗ ನೀವು ನೋಡಿದ್ದಿರಾ? ಅವರು ತಮ್ಮ ಪುತ್ರರೊಡನೆ ‘‘ನನ್ನ (ಮರಣದ) ಬಳಿಕ ನೀವು ಯಾರನ್ನು ಆರಾಧಿಸುವಿರಿ?’’ ಎಂದು ಕೇಳಿದಾಗ ಅವರು, ( ಪುತ್ರರು) ‘‘ನಿಮ್ಮ ಒಡೆಯನೂ, ನಿಮ್ಮ ಪೂರ್ವಜರಾದ ಇಬ್ರಾಹೀಮ್, ಇಸ್ಮಾಈಲ್ ಮತ್ತು ಇಸ್ಹಾಕ್‌ರ ಒಡೆಯನೂ ಆಗಿರುವ ಆ ಏಕ ಮಾತ್ರ ಆರಾಧ್ಯನನ್ನು ಮಾತ್ರ ಆರಾಧಿಸುವೆವು ಮತ್ತು ನಾವು ಅವನಿಗೇ ಶರಣಾಗಿರುವೆವು’’ ಎಂದರು

[134] ಅದು ಗತಿಸಿ ಹೋದ ಒಂದು ಸಮುದಾಯ. ಅವರು ಸಂಪಾದಿಸಿದ್ದು ಅವರಿಗೆ ಮತ್ತು ನೀವು ಸಂಪಾದಿಸಿದ್ದು ನಿಮಗೆ. ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಿಮ್ಮನ್ನು ಪ್ರಶ್ನಿಸಲಾಗದು

[135] ‘‘ನೀವು ಯಹೂದಿಗಳಾಗಿರಿ ಅಥವಾ ಕ್ರೈಸ್ತರಾಗಿರಿ, (ಆಗ ಮಾತ್ರ) ನೀವು ಸನ್ಮಾರ್ಗ ಪಡೆದವರಾಗುವಿರಿ’’ ಎಂದು ಅವರು ಹೇಳುತ್ತಾರೆ. ಹೇಳಿರಿ; ‘‘ನಿಜವಾಗಿ ಸತ್ಯದಲ್ಲಿ ಏಕಾಗ್ರಚಿತ್ತರಾಗಿದ್ದ ಇಬ್ರಾಹೀಮರ ಮಾರ್ಗವೇ (ಸನ್ಮಾರ್ಗವಾಗಿದೆ). ಅವರಂತೂ ‘ಮುಶ್ರಿಕ್’ (ಬಹುದೇವಾರಾಧಕ) ಆಗಿರಲಿಲ್ಲ.’’

[136] ‘‘ಅಲ್ಲಾಹನನ್ನು, ಅವನು ನಮಗೆ ಕಳಿಸಿಕೊಟ್ಟಿರುವ ಸಂದೇಶವನ್ನು ಮತ್ತು ಅವನು ಇಬ್ರಾಹೀಮ್, ಇಸ್ಮಾಯೀಲ್, ಇಸ್ಹಾಕ್, ಯಅ್ಕೂಬ್ ಹಾಗೂ ಅವರ (ಯಅ್ಕೂಬ್‌ರ) ಸಂತತಿಗಳಿಗೆ ಕಳಿಸಿಕೊಟ್ಟಿದ್ದ ಸಂದೇಶವನ್ನು ಮತ್ತು ಮೂಸಾ ಹಾಗೂ ಈಸಾರಿಗೆ ಮತ್ತು ಇತರೆಲ್ಲ ಪ್ರವಾದಿಗಳಿಗೆ ಅವರ ಒಡೆಯನ ಕಡೆಯಿಂದ ಏನನ್ನು ನೀಡಲಾಗಿತ್ತೋ ಅದನ್ನು ನಾವು ನಂಬಿದ್ದೇವೆ. ನಾವು ಅವರ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಅವನಿಗೆ ‘ಮುಸ್ಲಿಮ್’ ಆಗಿರುವೆವು (ಶರಣಾಗಿರುವೆವು)’’ಎಂದು ನೀವು ಘೋಷಿಸಿರಿ

[137] ಈ ಸತ್ಯವನ್ನು ನೀವು ನಂಬಿದಂತೆ ಅವರೂ ನಂಬಿದರೆ ಅವರು ಸನ್ಮಾರ್ಗದಲ್ಲಿರುವರು. ಇನ್ನು ಅವರು ತಿರುಗಿ ನಿಂತರೆ ಅವರೇ ಹಠಮಾರಿಗಳು. ನಿಮಗಂತು, ಅವರೆದುರು ಅಲ್ಲಾಹನೇ ಸಾಕು. ಅವನು ಎಲ್ಲವನ್ನೂ ಕೇಳವವನು ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ

[138] ‘‘ಅಲ್ಲಾಹನ ಬಣ್ಣ (ಧರ್ಮ)! ಬೇರಾರ ಬಣ್ಣ ತಾನೇ ಅಲ್ಲಾಹನದಕ್ಕಿಂತ ಉತ್ತಮವಾಗಿರಲು ಸಾಧ್ಯ? ನಾವಂತು, ಅವನನ್ನೇ ಪೂಜಿಸುವವರಾಗಿದ್ದೇವೆ’’ (ಎಂದು ನೀವು ಘೋಷಿಸಿರಿ)

[139] ಹೇಳಿರಿ; ‘‘ನೀವು ನಮ್ಮೊಂದಿಗೆ ಜಗಳಾಡುತ್ತಿರುವುದು ಅಲ್ಲಾಹನ ವಿಷಯದಲ್ಲೇ? (ಹಾಗಾದರೆ) ಅವನು ನಮ್ಮ ಒಡೆಯನೂ ಹೌದು, ನಿಮ್ಮ ಒಡೆಯನೂ ಹೌದು. ಇನ್ನು ನಮ್ಮ ಕರ್ಮಗಳು ನಮಗೆ, ನಿಮ್ಮ ಕರ್ಮಗಳು ನಿಮಗೆ. ನಾವಂತು, ನಮ್ಮನ್ನು ಅವನಿಗೆ ಅರ್ಪಿಸಿಕೊಂಡಿದ್ದೇವೆ.’’

[140] ‘‘ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅ್ಕೂಬ್ ಮತ್ತು ಅವರ ಸಂತತಿಗಳೆಲ್ಲಾ ಯಹೂದಿಗಳು ಅಥವಾ ಕ್ರೈಸ್ತರಾಗಿದ್ದರೆಂದು ನೀವು ಹೇಳುತ್ತೀರಾ? ಹೇಳಿರಿ; ಹೆಚ್ಚು ತಿಳುವಳಿಕೆ ಇರುವುದು ನಿಮಗೋ ಅಲ್ಲಾಹನಿಗೋ? ತನ್ನ ಬಳಿ ಇರುವ, ಅಲ್ಲಾಹನ ಕಡೆಯಿಂದ ಬಂದ ಪುರಾವೆಯನ್ನು ಬಚ್ಚಿಡುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ನಿಮ್ಮ ಕೃತ್ಯಗಳ ಕುರಿತು ಅಲ್ಲಾಹನು ಅಜ್ಞನಾಗಿಲ್ಲ

[141] ಅದು ಗತಿಸಿ ಹೋದ ಒಂದು ಸಮುದಾಯ. ಅವರು ಸಂಪಾದಿಸಿದ್ದು ಅವರಿಗೆ ಮತ್ತು ನೀವು ಸಂಪಾದಿಸಿದ್ದು ನಿಮಗೆ. ಅವರೇನು ಮಾಡುತ್ತಿದ್ದರೆಂದು ನಿಮ್ಮನ್ನು ಪ್ರಶ್ನಿಸಲಾಗದು

[142] ಜನರ ಪೈಕಿ ಕೆಲವು ಮೂರ್ಖರು ‘‘ಅವರೇಕೆ(ನಮಾಝ್‌ನಲ್ಲಿ) ತಮ್ಮ ಈ ಹಿಂದಿನ ‘ಕಿಬ್ಲಾ’ದಿಂದ (ದಿಕ್ಕಿನಿಂದ) ಬೇರೆಡೆಗೆ ತಿರುಗಿಕೊಂಡರು?’’ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ‘‘ಪೂರ್ವವೂ ಪಶ್ಚಿಮವೂ ಅಲ್ಲಾಹನಿಗೇ ಸೇರಿವೆ. ಅವನು ತಾನಿಚ್ಛಿಸಿದವರಿಗೆ ಸ್ಥಿರವಾದ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ.’’

[143] ಈ ರೀತಿ, ಜನರ ಕುರಿತು ನೀವು (ಮುಸ್ಲಿಮರು) ಸಾಕ್ಷಿಯಾಗಬೇಕೆಂದು ಮತ್ತು ದೇವದೂತರು ನಿಮ್ಮ ಕುರಿತು ಸಾಕ್ಷಿಯಾಗಬೇಕೆಂದು, ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ. ಯಾರು ದೇವದೂತರನ್ನು ಅನುಸರಿಸುತ್ತಾರೆ ಮತ್ತು ಯಾರು ಬೆನ್ನು ತಿರುಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯಷ್ಟೇ ಈ ಹಿಂದೆ ನೀವಿದ್ದ ‘ಕಿಬ್ಲಾ’ವನ್ನು (ದಿಕ್ಕನ್ನು) ನಾವು ನಿಶ್ಚಯಿಸಿಕೊಟ್ಟಿದ್ದೆವು. ಸ್ವತಃ ಅಲ್ಲಾಹನೇ ದಾರಿ ತೋರಿದವರ ಹೊರತು ಇತರರ ಪಾಲಿಗೆ ಅದು ದೊಡ್ಡ ಸಮಸ್ಯೆಯಾಗಿತ್ತು. ಅಲ್ಲಾಹನು ಎಂದೂ ನಿಮ್ಮ ನಂಬಿಕೆಯನ್ನು ವ್ಯರ್ಥಗೊಳಿಸಲು ಬಯಸಿರಲಿಲ್ಲ. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ವಾತ್ಸಲ್ಯಪೂರ್ಣನೂ ಕರುಣಾಮಯಿಯೂ ಆಗಿದ್ದಾನೆ

[144] (ದೂತರೇ,) ನಿಮ್ಮ ಮುಖವು ಪದೇ ಪದೇ ಬಾನಿನೆಡೆಗೆ ಹೊರಳುತ್ತಿರುವುದನ್ನು ನಾವು ನೋಡಿರುವೆವು ಮತ್ತು ಖಂಡಿತ ನಾವು ನಿಮ್ಮನ್ನು ನೀವಿಚ್ಛಿಸುವ ದಿಕ್ಕಿನೆಡೆಗೆ ತಿರುಗಿಸುವೆವು. ಸರಿ, ನೀವಿನ್ನು ನಿಮ್ಮ ಮುಖವನ್ನು ‘ಮಸ್ಜಿದುಲ್‌ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ. ನೀವೆಲ್ಲ ಎಲ್ಲಿದ್ದರೂ (ನಮಾಝ್‌ನ ವೇಳೆ) ನಿಮ್ಮ ಮುಖಗಳನ್ನು ಅದರೆಡೆಗೆ ತಿರುಗಿಸಿಕೊಳ್ಳಿರಿ. ಇದು, ತಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವೆಂಬುದು ಗ್ರಂಥದವರಿಗೆ ಖಂಡಿತ ತಿಳಿದಿದೆ. ಅವರು ಎಸಗುತ್ತಿರುವ ಕೃತ್ಯಗಳ ಬಗ್ಗೆ ಅಲ್ಲಾಹನು ಅಜ್ಞನಾಗಿಲ್ಲ

[145] ನೀವು ಗ್ರಂಥದವರಿಗೆ, ಎಲ್ಲ ಬಗೆಯ ಪುರಾವೆಗಳನ್ನು ಒದಗಿಸಿದರೂ ಅವರು ನಿಮ್ಮ ದಿಕ್ಕನ್ನು ಅನುಸರಿಸಲಾರರು. ಹಾಗೆಯೇ, ನೀವೂ ಅವರ ದಿಕ್ಕನ್ನು ಅನುಸರಿಸಲಾರಿರಿ. ಅವರು (ಯಹೂದಿಗಳು ಮತ್ತು ಕ್ರೈಸ್ತರು) ಪರಸ್ಪರರ ದಿಕ್ಕನ್ನೂ ಅನುಸರಿಸಲಾರರು. ಇನ್ನು ನಿಮ್ಮ ಬಳಿಗೆ ಜ್ಞಾನವು ಬಂದು ಬಿಟ್ಟ ಬಳಿಕವೂ ನೀವು ಆ ಜನರ ಇಚ್ಛೆಗಳನ್ನು ಅನುಸರಿಸಿದರೆ, ನೀವು ಅಕ್ರಮಿಗಳ ಸಾಲಿಗೆ ಸೇರುವಿರಿ

[146] ಯಾರಿಗೆ ನಾವು ಗ್ರಂಥವನ್ನು ನೀಡಿರುವೆವೋ ಅವರು, ತಮ್ಮ ಸ್ವಂತ ಪುತ್ರರನ್ನು ಬಲ್ಲಂತೆ ಅದನ್ನು (ಸತ್ಯವನ್ನು) ಬಲ್ಲರು. ಅವರಲ್ಲೊಂದು ಗುಂಪು, ತಿಳಿದೂ ತಿಳಿದೂ ಸತ್ಯವನ್ನು ಬಚ್ಚಿಡುತ್ತಿದೆ

[147] ಇದು ನಿಮ್ಮ ಒಡೆಯನ ಕಡೆಯಿಂದಲೇ ಬಂದಿರುವ ಸತ್ಯ. ನೀವಿನ್ನು ಸಂಶಯಿಸುವವರ ಸಾಲಿಗೆ ಸೇರಬೇಡಿ

[148] ಪ್ರತಿಯೊಂದು ಸಮುದಾಯಕ್ಕೆ, ಅವರು (ಪ್ರಾರ್ಥನೆಗಾಗಿ) ತಿರುಗುವ ಒಂದು ದಿಕ್ಕಿದೆ. ನೀವು ಸತ್ಕಾರ್ಯಗಳಲ್ಲಿ ಪರಸ್ಪರ ಸ್ಪರ್ಧಿಸಿರಿ, ನೀವು ಎಲ್ಲೇ ಇದ್ದರೂ, ಅಲ್ಲಾಹನು ನಿಮ್ಮೆಲ್ಲರನ್ನೂ (ವಿಚಾರಣೆಗಾಗಿ) ಒಟ್ಟುಗೂಡಿಸುವನು. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[149] (ದೂತರೇ,) ನೀವು ಎಲ್ಲಿಂದ ಹೊರಟರೂ (ನಮಾಝ್‌ನ ವೇಳೆ) ನಿಮ್ಮ ಮುಖವನ್ನು ‘ಮಸ್ಜಿದುಲ್ ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ. ಇದು ನಿಮ್ಮ ಒಡೆಯನ ಕಡೆಯಿಂದ (ಬಂದಿರುವ) ಸತ್ಯ, ನಿಮ್ಮೆಲ್ಲರ ಕರ್ಮಗಳ ಕುರಿತು ಅಲ್ಲಾಹನು ಅಜ್ಞನಲ್ಲ

[150] ನೀವು ಎಲ್ಲಿಂದ ಹೊರಟರೂ (ನಮಾಝ್‌ನ ವೇಳೆ) ನಿಮ್ಮ ಮುಖವನ್ನು ‘ಮಸ್ಜಿದುಲ್ ಹರಾಮ್’ನೆಡೆಗೆ ತಿರುಗಿಸಿಕೊಳ್ಳಿರಿ ಮತ್ತು ನೀವೂ (ವಿಶ್ವಾಸಿಗಳೂ) ಎಲ್ಲೇ ಇದ್ದರೂ, ನಿಮ್ಮ ಮುಖವನ್ನು ಆ ದಿಕ್ಕಿಗೆ ತಿರುಗಿಸಿಕೊಳ್ಳಿರಿ. ಜನರ ಪೈಕಿ ಅಕ್ರಮಿಗಳ ಹೊರತು ಬೇರಾರ ಬಳಿಯೂ ನಿಮ್ಮ ವಿರುದ್ಧ ಯಾವುದೇ ವಾದ ಉಳಿಯಬಾರದೆಂದು (ಈ ಆದೇಶ ನೀಡಲಾಗಿದೆ). ನಿಮ್ಮ ಪಾಲಿಗೆ ನಾನು ನನ್ನ ಅನುಗ್ರಹಗಳನ್ನು ಪೂರ್ತಿಗೊಳಿಸುವಂತಾಗಲು ಮತ್ತು ನೀವು ಸನ್ಮಾರ್ಗ ಪಡೆದವರಾಗಲು – ನೀವು ಅವರಿಗೆ ಅಂಜಬೇಡಿ, ನನಗೆ ಅಂಜಿರಿ

[151] ಈ ರೀತಿ ನಾವು ನಿಮ್ಮ ನಡುವೆ ನಿಮ್ಮಿಂದಲೇ ಒಬ್ಬನನ್ನು ‘ರಸೂಲ್’ ಆಗಿ (ದೂತನಾಗಿ) ನೇಮಿಸಿರುವೆವು. ಅವರು ನಿಮಗೆ ನಮ್ಮ ವಚನಗಳನ್ನು ಓದಿ ಕೇಳಿಸುತ್ತಾರೆ. ನಿಮ್ಮನ್ನು ಸಂಸ್ಕರಿಸುತ್ತಾರೆ ಮತ್ತು ನಿಮಗೆ ಗ್ರಂಥವನ್ನು ಹಾಗೂ ಯುಕ್ತಿಯನ್ನು ಕಲಿಸುತ್ತಾರೆ ಮತ್ತು ಈ ಹಿಂದೆ ನಿಮಗೆ ತಿಳಿಯದೆ ಇದ್ದ ವಿಚಾರಗಳನ್ನು ನಿಮಗೆ ಕಲಿಸಿಕೊಡುತ್ತಾರೆ

[152] ನೀವು ನನ್ನನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸ್ಮರಿಸುವೆನು. ನೀವು ನನಗೆ ಕೃತಜ್ಞತೆ ತೋರಿರಿ, ಮತ್ತು ನನಗೆ ಕೃತಘ್ನತೆ ತೋರಬೇಡಿ

[153] ವಿಶ್ವಾಸಿಗಳೇ, ಸಹನೆಯಿಂದ ಮತ್ತು ನಮಾಝ್‌ನಿಂದ ನೆರವನ್ನು ಪಡೆಯಿರಿ. ಖಂಡಿತ, ಅಲ್ಲಾಹನು ಸಹನಶೀಲರ ಜೊತೆಗಿರುತ್ತಾನೆ

[154] ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ಸತ್ತವರೆನ್ನಬೇಡಿ. ನಿಜವಾಗಿ ಅವರು ಜೀವಂತವಿದ್ದಾರೆ. ಆದರೆ ನಿಮಗೆ ಅದರ ಅರಿವಿಲ್ಲ

[155] ಭಯ ಹಾಗೂ ಹಸಿವುಗಳ ಮೂಲಕ ಹಾಗೂ ಸೊತ್ತುಗಳ, ಜೀವಗಳ ಮತ್ತು ಬೆಳೆಗಳ ನಷ್ಟದ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸಲಿದ್ದೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ

[156] ಅವರು ತಮಗೇನಾದರೂ ವಿಪತ್ತು ಎದುರಾದಾಗ ‘‘ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳಲಿಕ್ಕಿರುವವರು’’ ಎನ್ನುತ್ತಾರೆ

[157] ಅವರೇ, ತಮ್ಮ ಒಡೆಯನ ಅನುಗ್ರಹ ಮತ್ತು ಕರುಣೆಗೆ ಪಾತ್ರರಾದವರು ಮತ್ತು ಅವರೇ ಸನ್ಮಾರ್ಗ ಪಡೆದವರು

[158] ಖಂಡಿತ, ‘ಸಫಾ’ ಮತ್ತು ‘ಮರ್ವಃ’ಗಳು ಅಲ್ಲಾಹನ ಸಂಕೇತಗಳ ಸಾಲಿಗೆ ಸೇರಿವೆ. ಅಲ್ಲಾಹನ ಭವನದ ‘ಹಜ್ಜ್’ (ಕಡ್ಡಾಯ ಯಾತ್ರೆ) ಅಥವಾ ‘ಉಮ್ರಃ’ (ಐಚ್ಛಿಕ ಯಾತ್ರೆ) ನಡೆಸುವವನು ಅವೆರಡರ ನಡುವೆ ನಡೆಯುವುದರಲ್ಲಿ ತಪ್ಪಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡ ಹೊರಟವನು (ತಿಳಿದಿರಲಿ); ಅಲ್ಲಾಹನು (ಒಳಿತಿನ) ಪ್ರಶಂಸಕನೂ ಜ್ಞಾನಿಯೂ ಆಗಿದ್ದಾನೆ

[159] ನಾವು ಇಳಿಸಿಕೊಟ್ಟಿರುವ ಸ್ಪಷ್ಟ ಸಂದೇಶಗಳನ್ನು ಹಾಗೂ ಮಾರ್ಗದರ್ಶನವನ್ನು- ನಾವು ಮಾನವರಿಗಾಗಿ ಒಂದು ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ ಬಳಿಕ (ಅವುಗಳನ್ನು) ಬಚ್ಚಿಡುವವರನ್ನು ಅಲ್ಲಾಹನು ಶಪಿಸುತ್ತಾನೆ ಮತ್ತು ಶಪಿಸುವವರೆಲ್ಲರೂ ಶಪಿಸುತ್ತಾರೆ –

[160] – ಪಶ್ಚಾತ್ತಾಪ ಪಟ್ಟು, ತಮ್ಮನ್ನು ಸುಧಾರಿಸಿಕೊಂಡು (ತಾವು ಬಚ್ಚಿಟ್ಟ ಸತ್ಯವನ್ನು) ಸ್ಪಷ್ಟವಾಗಿ ವಿವರಿಸಿದವರ ಹೊರತು. ನಾನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತೇನೆ. ನಾನಂತು ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ಕರುಣಾಳುವೇ ಆಗಿದ್ದೇನೆ

[161] ಸತ್ಯವನ್ನು ಧಿಕ್ಕರಿಸಿದವರು ಮತ್ತು ಸತ್ಯವನ್ನು ಧಿಕ್ಕರಿಸಿದ್ದ ಸ್ಥಿತಿಯಲ್ಲೇ ಮರಣಗೊಂಡವರ ಮೇಲೆ ಅಲ್ಲಾಹನ, ಅವನ ಮಲಕ್‌ಗಳ ಮತ್ತು ಸಕಲ ಮಾನವರ ಶಾಪವಿದೆ

[162] ಅವರು ಶಾಶ್ವತವಾಗಿ ಆ ಸ್ಥಿತಿಯಲ್ಲೇ ಇರುವರು. ಅವರ ಶಿಕ್ಷೆಯನ್ನು ಕಡಿಮೆಗೊಳಿಸಲಾಗದು ಮತ್ತು ಅವರಿಗೆ ಮರು ಅವಕಾಶವನ್ನೂ ನೀಡಲಾಗದು

[163] ನಿಮ್ಮ ದೇವರು ಏಕಮಾತ್ರನು. ಅವನ ಹೊರತು ಬೇರಾರೂ ದೇವರಿಲ್ಲ. ಅವನು ಅಪಾರ ದಯಾಳುವೂ ಕರುಣಾಮಯಿಯೂ ಆಗಿದ್ದಾನೆ

[164] ಖಂಡಿತವಾಗಿಯೂ ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ಇರುಳು ಹಾಗೂ ಹಗಲಿನ ಪರಿವರ್ತನೆಯಲ್ಲಿ ಮತ್ತು ಜನರಿಗೆ ಲಾಭದಾಯಕವಾದ ವಸ್ತುಗಳನ್ನು ಹೊತ್ತು ಕಡಲಲ್ಲಿ ತೇಲುತ್ತಾ ಸಾಗುವ ಹಡಗುಗಳಲ್ಲಿ ಮತ್ತು ಅಲ್ಲಾಹನು ಆಕಾಶದಿಂದ ಇಳಿಸುವ ನೀರಿನಲ್ಲಿ ಮತ್ತು ಆ ಮೂಲಕ ಅವನು ಭೂಮಿಯನ್ನು ಅದರ ಮರಣಾ ನಂತರ ಮತ್ತೆ ಜೀವಂತಗೊಳಿಸುವುದರಲ್ಲಿ ಹಾಗೂ ಅದರಲ್ಲಿ ಎಲ್ಲ ಜೀವಿಗಳನ್ನು ಹರಡುವುದರಲ್ಲಿ ಹಾಗೂ ಗಾಳಿಯ ಚಲನೆಯಲ್ಲಿ ಮತ್ತು ಆಕಾಶ ಹಾಗೂ ಭೂಮಿಯ ನಡುವೆ ವಿಧೇಯ ಸ್ಥಿತಿಯಲ್ಲಿರುವ ಮೋಡಗಳಲ್ಲಿ – ಬುದ್ಧಿಯುಳ್ಳವರಿಗಾಗಿ ಅನೇಕ ನಿದರ್ಶನಗಳಿವೆ

[165] (ಇಷ್ಟಾಗಿಯೂ) ಅನ್ಯರನ್ನು ಅಲ್ಲಾಹನಿಗೆ ಸಾಟಿಗಳಾಗಿ ಪರಿಗಣಿಸುವ ಕೆಲವರಿದ್ದಾರೆ. ಅವರು ಅಲ್ಲಾಹನನ್ನು ಪ್ರೀತಿಸಬೇಕಾದ ರೀತಿಯಲ್ಲಿ ಅವರನ್ನು (ಆ ಅನ್ಯರನ್ನು) ಪ್ರೀತಿಸುತ್ತಾರೆ. ಆದರೆ ವಿಶ್ವಾಸಿಗಳು ಮಾತ್ರ ಅಲ್ಲಾಹನನ್ನೇ ಅತ್ಯಧಿಕ ಪ್ರೀತಿಸುತ್ತಾರೆ. ಆ ಅಕ್ರಮಿಗಳು, ತಾವು (ನಾಳೆ) ಕಾಣಲಿರುವ ಶಿಕ್ಷೆಯನ್ನು ಇಂದೇ ಕಂಡಿದ್ದರೆ, ಶಕ್ತಿಯೆಲ್ಲವೂ ಅಲ್ಲಾಹನಿಗೇ ಸೇರಿದೆ ಮತ್ತು ಅಲ್ಲಾಹನು ಅತ್ಯಂತ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ (ಎಂಬುದನ್ನು ಮನಗಾಣುತ್ತಿದ್ದರು)

[166] (ಇಲ್ಲಿ ಮಿಥ್ಯದ) ಮುಂದಾಳುಗಳಾಗಿದ್ದವರು, ಅಂದು (ಪರಲೋಕದಲ್ಲಿ) ತಮ್ಮ ಅನುಯಾಯಿಗಳೊಂದಿಗೆ (ತಮಗಿದ್ದ) ಸಂಬಂಧವನ್ನು ನಿರಾಕರಿಸುವರು. (ಆದರೂ) ಅವರು ಶಿಕ್ಷೆಯನ್ನು ಕಂಡೇ ತೀರುವರು ಮತ್ತು ಸಕಲ ಸಾಧನಗಳು ಅವರಿಂದ ಕಳೆದು ಹೋಗುವವು

[167] ಅವರ ಅನುಯಾಯಿಗಳಾಗಿದ್ದವರು ‘‘ನಮಗೆ ಇನ್ನೊಂದು ಅವಕಾಶ ಸಿಕ್ಕಿ ಬಿಟ್ಟರೆ, ಅವರೀಗ ನಮ್ಮಿಂದಿಗಿನ ತಮ್ಮ ಸಂಬಂಧವನ್ನು ನಿರಾಕರಿಸಿದಂತೆ, ನಾವೂ ಅವರಿಂದ ಸಂಬಂಧ ಕಡಿದುಕೊಳ್ಳುವೆವು’’ ಎನ್ನುವರು. ಈ ರೀತಿ ಅಲ್ಲಾಹನು, ಅವರಿಗೆ ಶೋಕವಾಗುವಂತೆ ಅವರ ಕರ್ಮಗಳನ್ನೆಲ್ಲಾ ಅವರಿಗೆ ತೋರಿಸಿ ಕೊಡುವನು. ನರಕಾಗ್ನಿಯಿಂದ ಹೊರಬರಲು ಮಾತ್ರ ಅವರಿಗೆಂದೂ ಸಾಧ್ಯವಾಗದು

[168] ಮಾನವರೇ, ಭೂಮಿಯಲ್ಲಿರುವ ಸಮ್ಮತವಾಗಿರುವ, ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ನೀವು ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸಬೇಡಿ. ಅವನು ನಿಮ್ಮ ಸುಸ್ಪಷ್ಟ ಶತ್ರುವಾಗಿದ್ದಾನೆ

[169] ದುಷ್ಟ ಹಾಗೂ ಅಶ್ಲೀಲ ಕೃತ್ಯಗಳನ್ನು ಎಸಗುವಂತೆ ಮತ್ತು ನಿಮಗೆ ತಿಳಿದಿಲ್ಲದ ವಿಷಯಗಳನ್ನು ಅಲ್ಲಾಹನ ಮೇಲೆ ಆರೋಪಿಸುವಂತೆ ಅವನು ನಿಮ್ಮನ್ನು ಪ್ರೇರೇಪಿಸುತ್ತಾನೆ

[170] ‘‘ಅಲ್ಲಾಹನು ಕಳುಹಿಸಿರುವ ಸಂದೇಶವನ್ನು ಅನುಸರಿಸಿರಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ನಾವು ನಮ್ಮ ತಾತ ಮುತ್ತಾತಂದಿರನ್ನು ಯಾವ ದಾರಿಯಲ್ಲಿ ಕಂಡಿದ್ದೆವೋ ಆ ದಾರಿಯನ್ನು ಮಾತ್ರ ಅನುಸರಿಸುವೆವು’’ ಎನ್ನುತ್ತಾರೆ. ಅವರ ತಾತ ಮುತ್ತಾತಂದಿರು ಸ್ವಲ್ಪವೂ ಬುದ್ಧಿ ಇಲ್ಲದವರಾಗಿದ್ದರೂ ಮತ್ತು ದಾರಿಗೆಟ್ಟವರಾಗಿದ್ದರೂ (ಅವರು ಅವರನ್ನೇ ಅನುಸರಿಸುವರೇ)

[171] ಧಿಕ್ಕಾರಿಗಳ ಸ್ಥಿತಿಯು, ಕೂಗಾಟ ಮತ್ತು ಕಿರುಚಾಟದ ಹೊರತು ಬೇರೇನನ್ನೂ ಕೇಳಿಸಿಕೊಳ್ಳದ್ದನ್ನು (ಪ್ರಾಣಿಯನ್ನು) ಕೂಗಿ ಕರೆಯುವಾತನಂತಿದೆ. ಅವರು ಕಿವುಡರು, ಮೂಗರು ಮತ್ತು ಕುರುಡರು. ಅವರಿಗೆ ಏನೂ ಅರ್ಥವಾಗುವುದಿಲ್ಲ

[172] ವಿಶ್ವಾಸಿಗಳೇ, ನೀವು ನಿಜಕ್ಕೂ ಅವನನ್ನೇ (ಅಲ್ಲಾಹನನ್ನೇ) ಆರಾಧಿಸುವವರಾಗಿದ್ದರೆ, ನಾವು ನಿಮಗೆ ನೀಡಿರುವ ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಲಿರಿ

[173] ಶವ, ರಕ್ತ ಹಾಗೂ ಹಂದಿಯ ಮಾಂಸವನ್ನು ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರಲ್ಲಿ ಕಡಿಯಲಾದವುಗಳನ್ನು (ಅಂತಹ ಪ್ರಾಣಿಗಳನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ. ಇನ್ನು ಒಬ್ಬ ವ್ಯಕ್ತಿ ತೀರಾ ಅಸಹಾಯಕ ಸ್ಥಿತಿಯಲ್ಲಿ, ವಿದ್ರೋಹದ ಇರಾದೆಯಿಲ್ಲದೆ, ಹಾಗೂ ಮಿತಿಮೀರದೆ (ಅದರಿಂದೇನಾದರೂ ತಿಂದು ಬಿಟ್ಟರೆ) ಅವನ ಮೇಲೆ ಪಾಪವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[174] ಅಲ್ಲಾಹನು ಕಳಿಸಿಕೊಟ್ಟಿರುವ ಗ್ರಂಥದಲ್ಲಿನ ಆದೇಶಗಳನ್ನು ಬಚ್ಚಿಡುವವರು ಮತ್ತು ಸಣ್ಣ ಲಾಭಕ್ಕೆ ಅವುಗಳನ್ನು ಮಾರುವವರು ತಮ್ಮ ಹೊಟ್ಟೆಗಳಿಗೆ ಬೆಂಕಿಯನ್ನಷ್ಟೇ ತುಂಬುತ್ತಿದ್ದಾರೆ. ಪುನರುತ್ಥಾನ ದಿನ ಅಲ್ಲಾಹನು ಅವರೊಡನೆ ಮಾತನಾಡಲಾರನು ಮತ್ತು ಅವರನ್ನು ಪರಿಶುದ್ಧಗೊಳಿಸಲಾರನು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ

[175] ಅವರೇ ನಿಜವಾಗಿ ಸನ್ಮಾರ್ಗದ ಬದಲು ದಾರಿಗೇಡಿತನವನ್ನು ಮತ್ತು ಕ್ಷಮೆಯ ಬದಲು ಶಿಕ್ಷೆಯನ್ನು ಖರೀದಿಸಿಕೊಂಡವರು. ನರಕಾಗ್ನಿಯನ್ನೆದುರಿಸಲು ಅವರಿಗೆ ಅದೆಷ್ಟು ಹಠ

[176] ಇದಕ್ಕೆ ಕಾರಣವಿಷ್ಟೇ; ಅಲ್ಲಾಹನಂತು ಸತ್ಯದೊಂದಿಗೇ ಗ್ರಂಥವನ್ನು ಕಳಿಸಿದ್ದನು. ಆದರೆ ಆ ಬಳಿಕ ಆ ಗ್ರಂಥದ ವಿಷಯದಲ್ಲಿ ಭಿನ್ನತೆ ತಾಳಿದವರು, ತಮ್ಮ ಜಗಳಗಳ ಭರದಲ್ಲಿ (ಸತ್ಯದಿಂದ) ಬಹಳ ದೂರ ಸಾಗಿಬಿಟ್ಟಿದ್ದಾರೆ

[177] ಧಾರ್ಮಿಕತೆಯು, ನೀವು (ಆರಾಧನೆಗಾಗಿ) ನಿಮ್ಮ ಮುಖಗಳನ್ನು ಪೂರ್ವದೆಡೆಗೆ ತಿರುಗಿಸುವಿರೋ ಪಶ್ಚಿಮದೆಡೆಗೆ ತಿರುಗಿಸುವಿರೋ ಎಂಬುದರಲ್ಲಿಲ್ಲ. ನಿಜವಾಗಿ ಒಬ್ಬ ವ್ಯಕ್ತಿ ಅಲ್ಲಾಹನಲ್ಲಿ, ಪರಲೋಕದಲ್ಲಿ, ಮಲಕ್‌ಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ನಂಬಿಕೆ ಇಟ್ಟು, ಅವನ ಪ್ರೀತಿಯನ್ನು ಸಂಪಾದಿಸಲಿಕ್ಕಾಗಿ ತನ್ನ ಸಂಪತ್ತನ್ನು ಬಂಧುಗಳು, ಅನಾಥರು, ಬಡವರು, ಪ್ರಯಾಣಿಕರು ಮತ್ತು ಯಾಚಕರಿಗಾಗಿ ಹಾಗೂ ದಾಸ್ಯದಲ್ಲಿರುವವರ ವಿಮೋಚನೆಗಾಗಿ ಖರ್ಚು ಮಾಡುತ್ತಾ, ನಮಾಝನ್ನು ಪಾಲಿಸುತ್ತಾ, ಝಕಾತ್ ಅನ್ನು ಪಾವತಿಸುತ್ತಾ ಇರುವುದು ಮತ್ತು ಕರಾರು ಮಾಡಿದ ಮೇಲೆ ತಮ್ಮ ಕರಾರಿನ ಪಾಲಕರಾಗಿರುವುದು ಹಾಗೂ ಸಂಕಷ್ಟದಲ್ಲ್ಲೂ ಕಾಠಿಣ್ಯದಲ್ಲೂ ಹೋರಾಟದ ವೇಳೆಯೂ ಸಹನಶೀಲರಾಗಿರುವುದೇ ನಿಜವಾದ ಧಾರ್ಮಿಕತೆಯಾಗಿದೆ. ಅಂಥವರೇ ನಿಜವಾದ ಸತ್ಯವಂತರು ಮತ್ತು ಅಂಥವರೇ ನಿಜವಾದ ದೇವಭಕ್ತರು

[178] ವಿಶ್ವಾಸಿಗಳೇ, ಕೊಲೆಯ ಪ್ರಕರಣಗಳಲ್ಲಿ ನಿಮಗೆ ‘ಕಿಸಾಸ್’ (ಪ್ರತೀಕಾರದ) ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಸ್ವತಂತ್ರನ ಬದಲಿಗೆ ಸ್ವತಂತ್ರ, ಗುಲಾಮನ ಬದಲಿಗೆ ಗುಲಾಮ ಮತ್ತು ಸ್ತ್ರೀಯ ಬದಲಿಗೆ ಸ್ತ್ರೀ. ಇನ್ನು ಆತನಿಗೆ (ಕೊಲೆಗಾರನಿಗೆ) ಅವನ (ಕೊಲೆಯಾದವನ) ಸಹೋದರನು ಏನಾದರೂ ರಿಯಾಯ್ತಿ ತೋರಲು ಬಯಸಿದರೆ, ಉತ್ತಮ ರೀತಿಯಲ್ಲಿ (ನಿಯಮ ಪ್ರಕಾರ) ಪ್ರಕರಣವು ಇತ್ಯರ್ಥಗೊಳ್ಳಬೇಕು ಮತ್ತು ಕೊಲೆಗಾರನು ಅವನಿಗೆ (ಕೊಲೆಯಾದವನ ಬಂಧುವಿಗೆ) ಉದಾರ ರೀತಿಯಲ್ಲಿ ಪರಿಹಾರ ಧನವನ್ನು ಪಾವತಿಸಬೇಕು. ಇದು ನಿಮ್ಮ ಒಡೆಯನ ಕಡೆಯಿಂದ ನೀಡಲಾಗುತ್ತಿರುವ ರಿಯಾಯ್ತಿ ಮತ್ತು ಅನುಗ್ರಹವಾಗಿದೆ. ಇಷ್ಟಾದ ಬಳಿಕವೂ ಅತಿರೇಕವೆಸಗುವವನಿಗೆ ಯಾತನಾಮಯ ಶಿಕ್ಷೆಯಿದೆ

[179] ಬುದ್ಧಿವಂತರೇ, ಈ ‘ಕಿಸಾಸ್’ ನಿಯಮದಲ್ಲೇ ನಿಮಗೆ ಜೀವನವಿದೆ – ನೀವು ಧರ್ಮನಿಷ್ಠರಾಗಿರಬೇಕೆಂದು (ಇದನ್ನು ವಿಧಿಸಲಾಗಿದೆ)

[180] ನಿಮ್ಮಲ್ಲೊಬ್ಬನು ಮರಣವನ್ನು ಸಮೀಪಿಸಿದ್ದು, ಸಂಪತ್ತನ್ನು ಬಿಟ್ಟು ಹೋಗುತ್ತಿದ್ದರೆ, ಅವನು ತನ್ನ ತಂದೆ ತಾಯಿ ಮತ್ತು ಬಂಧುಗಳ ಪರವಾಗಿ ನಿಯಮಾನುಸಾರ ‘ವಸಿಯ್ಯತ್’ (ಉಯಿಲು) ಮಾಡಬೇಕೆಂಬುದನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಇದು ಧರ್ಮ ನಿಷ್ಠರ ಮೇಲಿರುವ ಹೊಣೆ

[181] ಯಾರಾದರೂ ಅದನ್ನು (ವಸಿಯ್ಯತ್ ಅನ್ನು) ಕೇಳಿಸಿಕೊಂಡ ಬಳಿಕ ಅದನ್ನು ತಿರುಚಿದರೆ, ಅದರ ಪಾಪದ ಹೊರೆಯು, ಆ ರೀತಿ ತಿರುಚುವವರ ಮೇಲೆಯೇ ಇರುವುದು. ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ

[182] ಆದರೆ ವಸಿಯ್ಯತ್ ಮಾಡಿದವನು (ತನ್ನ ಉಯಿಲಿನಲ್ಲಿ) ಪಕ್ಷಪಾತ ಅಥವಾ ಪಾಪಕೃತ್ಯ ಮಾಡಿರಬಹುದೆಂಬ ಭಯವುಳ್ಳವನು, ಅವರ (ಹಕ್ಕುದಾರರ) ನಡುವೆ ಸಂಧಾನ ಏರ್ಪಡಿಸಿದರೆ, ಅವನ ಮೇಲೆ ಪಾಪವಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣೆಯುಳ್ಳವನಾಗಿದ್ದಾನೆ

[183] ವಿಶ್ವಾಸಿಗಳೇ, ನೀವು ಧರ್ಮನಿಷ್ಠರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ

[184] (ಅವು) ಕೆಲವು ನಿಗದಿತ ದಿನಗಳು. ನಿಮ್ಮ ಪೈಕಿ (ಆ ದಿನಗಳಲ್ಲಿ) ರೋಗಿಯಾಗಿರುವವನು ಅಥವಾ ಪ್ರಯಾಣದಲ್ಲಿರುವವನು, ಬೇರೆ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಲಿ ಮತ್ತು ತುಂಬಾ ಕಷ್ಟ ಪಟ್ಟು ಅದನ್ನು ಆಚರಿಸಬಲ್ಲವರು (ಉಪವಾಸ ಆಚರಿಸದಿದ್ದರೆ) ಪರಿಹಾರವಾಗಿ ಒಬ್ಬ ಬಡವನಿಗೆ ಊಟ ನೀಡಬೇಕು. ಯಾರಾದರೂ ತನ್ನಿಚ್ಛೆಯಿಂದ (ಇನ್ನಷ್ಟು) ದಾನ ಮಾಡಿದರೆ ಅದು ಅವನ ಪಾಲಿಗೆ ಹಿತವಾಗಿರುವುದು. ಇನ್ನು ನೀವು ತಿಳಿದವರಾಗಿದ್ದರೆ ಉಪವಾಸ ಆಚರಿಸುವುದೇ ನಿಮ್ಮ ಪಾಲಿಗೆ ಒಳ್ಳೆಯದು

[185] ರಮಝಾನ್ ತಿಂಗಳಲ್ಲೇ ಕುರ್‌ಆನ್‌ಅನ್ನು ಇಳಿಸಿಕೊಡಲಾಯಿತು. ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ. (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿಗೆ ಮತ್ತು ಅದು (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸುವ) ಒರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. (ಈ ತಿಂಗಳಲ್ಲಿ) ರೋಗಿಯಾಗಿದ್ದವನು ಅಥವಾ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ. ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ಅಲ್ಲಾಹನು ನಿಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು (ಇದನ್ನು ವಿಧಿಸಲಾಗಿದೆ)

[186] (ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ (ಅವರಿಗೆ ತಿಳಿಸಿರಿ); ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಕೂಗುವಾತನು ನನ್ನನ್ನು ಕೂಗಿದಾಗ ನಾನು ಅದಕ್ಕೆ ಉತ್ತರ ನೀಡುತ್ತೇನೆ. ಅವರಿನ್ನು ನನ್ನ ಕರೆಗೆ ಉತ್ತರ ನೀಡಲಿ ಮತ್ತು ನನ್ನಲ್ಲಿ ನಂಬಿಕೆ ಇಡಲಿ – ಅವರು ಸರಿದಾರಿಯನ್ನು ಪಡೆದವರಾಗಬಹುದು

[187] ಉಪವಾಸದ ದಿನಗಳಲ್ಲಿ ರಾತ್ರಿ ಹೊತ್ತು ನೀವು ನಿಮ್ಮ ಪತ್ನಿಯರ ಬಳಿ ಹೋಗುವುದನ್ನು ಸಮ್ಮತಿಸಲಾಗಿದೆ. ಅವರು ನಿಮಗೆ ಉಡುಗೆಯಾಗಿರುವರು ಮತ್ತು ನೀವು ಅವರಿಗೆ ಉಡುಗೆಯಾಗಿರುವಿರಿ. ನೀವು ಸ್ವತಃ ನಿಮ್ಮನ್ನು ವಂಚಿಸುತ್ತಿದ್ದ ವಿಷಯವನ್ನು ಅಲ್ಲಾಹನು ಅರಿತಿರುವನು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಮನ್ನಿಸಿ ಅವನು ನಿಮ್ಮನ್ನು ಕ್ಷಮಿಸಿರುವನು. ಇನ್ನು ನೀವು ಅವರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿರಿ ಹಾಗೂ ಅಲ್ಲಾಹನು ನಿಮಗಾಗಿ ವಿಧಿಸಿರುವ ಸುಖವನ್ನು ಅರಸಿರಿ ಮತ್ತು ಮುಂಜಾವಿನಲ್ಲಿ ನಿಮಗೆ ಕಪ್ಪು ನೂಲಿಗೆದುರಾಗಿ ಬಿಳಿ ನೂಲನ್ನು ಗುರುತಿಸಲು ಸಾಧ್ಯವಾಗುವ ತನಕ ನೀವು ತಿನ್ನಿರಿ ಮತ್ತು ಕುಡಿಯಿರಿ. ಆ ಬಳಿಕ ರಾತ್ರಿಯತನಕ ಉಪವಾಸ ಪೂರ್ತಿಗೊಳಿಸಿರಿ ಮತ್ತು ನೀವು ‘ ಇಅ್ತಿಕಾಫ್’ನಲ್ಲಿರುವಾಗ, ಅವರ ಜೊತೆ ಲೈಂಗಿಕ ಸಂಪರ್ಕ ಮಾಡಬಾರದು. ಇವು ಅಲ್ಲಾಹನು ನಿಶ್ಚಯಿಸಿರುವ ಮೇರೆಗಳು. ಅವುಗಳ ಹತ್ತಿರವೂ ಸುಳಿಯಬೇಡಿ. ಈ ರೀತಿ, ಜನರು ಧರ್ಮ ನಿಷ್ಠರಾಗಬೇಕೆಂದು ಅಲ್ಲಾಹನು ಅವರಿಗೆ ತನ್ನ ವಚನಗಳನ್ನು ವಿವರಿಸಿಕೊಡುತ್ತಾನೆ

[188] ನೀವು ಪರಸ್ಪರರ ಸಂಪತ್ತನ್ನು ಅಕ್ರಮವಾಗಿ ಕಬಳಿಸಬೇಡಿ ಮತ್ತು ತಿಳಿದೂ ತಿಳಿದೂ ಜನರ ಸಂಪತ್ತನ್ನು ಪಾಪಮಾರ್ಗದಿಂದ ಕಬಳಿಸುವುದಕ್ಕಾಗಿ ಅದನ್ನು (ಅದರ ವ್ಯಾಜ್ಯವನ್ನು) ಅಧಿಕಾರಿಗಳ ಬಳಿಗೆ ಒಯ್ಯಬೇಡಿ

[189] (ದೂತರೇ) ಅವರು ನಿಮ್ಮೊಡನೆ, ಬಾಲಚಂದ್ರನ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ಇವು ಮನುಷ್ಯರಿಗೆ ಕಾಲವನ್ನು ಸೂಚಿಸುವ ಮತ್ತು ಹಜ್ಜ್ ಯಾತ್ರೆಯ (ಕಾಲ ತಿಳಿಸುವ) ಸಾಧನಗಳಾಗಿವೆ. ಶ್ರೇಷ್ಠತೆಯು, ನೀವು ಮನೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಅವಲಂಬಿಸಿಲ್ಲ. ನಿಜವಾಗಿ, ಭಯ ಭಕ್ತಿ ಉಳ್ಳವನೇ ಶ್ರೇಷ್ಠನು. ನೀವಿನ್ನು ಮನೆಗಳಿಗೆ ಮುಂಬಾಗಿಲಿನಿಂದಲೇ ಪ್ರವೇಶಿಸಿರಿ ಮತ್ತು ಅಲ್ಲಾಹನಿಗೆ ಅಂಜುತ್ತಲಿರಿ – ನೀವು ವಿಜಯಿಗಳಾಗಲಿಕ್ಕಾಗಿ

[190] ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು, ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ

[191] ಮತ್ತು ಅಂಥವರನ್ನು (ಅತಿರೇಕವೆಸಗಿದವರನ್ನು) ನೀವು ಕಂಡಲ್ಲಿ ವಧಿಸಿರಿ ಮತ್ತು ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ – ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ. ಇದುವೇ ಸತ್ಯವನ್ನು ಧಿಕ್ಕರಿಸಿದವರಿಗಿರುವ ಪ್ರತಿಫಲ

[192] ಒಂದು ವೇಳೆ ಅವರು ತಡೆದು ನಿಂತರೆ, ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[193] ಯಾವುದೇ ಅಶಾಂತಿ ಇಲ್ಲವಾಗಿ ಬಿಡುವ ತನಕ ಹಾಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಿರಿ. ಇನ್ನು, ಅವರು ತಡೆದು ನಿಂತರೆ, ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ

[194] ಪವಿತ್ರ ತಿಂಗಳುಗಳಿಗೆ ಪವಿತ್ರ ತಿಂಗಳುಗಳೇ ಪರಿಹಾರ. ಹಾಗೆಯೇ, ಎಲ್ಲ ಪಾವಿತ್ರಗಳು ‘ಕಿಸಾಸ್’ನ (ಪ್ರತೀಕಾರದ) ನಿಯಮಗಳಿಗೆ ಅಧೀನವಾಗಿವೆ. ನಿಮ್ಮ ಮೇಲೆ ಅತಿಕ್ರಮವೆಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಧರ್ಮ ನಿಷ್ಠರ ಜೊತೆಗಿದ್ದಾನೆಂಬುದು ನಿಮಗೆ ತಿಳಿದಿರಲಿ

[195] ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಮತ್ತು ನಿಮ್ಮನ್ನು ಸ್ವತಃ ನಿಮ್ಮ ಕೈಯಾರೆ ವಿನಾಶಕ್ಕೆ ತಳ್ಳಬೇಡಿ. ನೀವು ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಸೌಜನ್ಯಶೀರಲರನ್ನು ಪ್ರೀತಿಸುತ್ತಾನೆ

[196] ನೀವು ‘ಹಜ್ಜ್‌ ಹಾಗೂ ‘ಉಮ್ರಃ’ (ಯಾತ್ರೆ)ಗಳನ್ನು ಅಲ್ಲಾಹನಿಗಾಗಿ ಪೂರ್ತಿಗೊಳಿಸಿರಿ. ಒಂದು ವೇಳೆ ನಿಮ್ಮನ್ನು ತಡೆಯಲಾದರೆ, ನಿಮಗೆ ಸುಲಭವಾಗಿ ಲಭ್ಯವಿರುವುದನ್ನು (ಆಡು, ಗೋವು ಅಥವಾ ಒಂಟೆಯನ್ನು) ಬಲಿ ನೀಡಿರಿ. ಬಲಿ ಪ್ರಾಣಿಯು ತನ್ನ ಬಲಿಸ್ಥಾನವನ್ನು ತಲುಪುವ ತನಕ ನೀವು ನಿಮ್ಮ ತಲೆಗಳನ್ನು ಬೋಳಿಸಿಕೊಳ್ಳಬೇಡಿ. ಆದರೆ ನಿಮ್ಮ ಪೈಕಿ ರೋಗಿಯಾಗಿರುವವನು ಅಥವಾ ತಲೆಯಲ್ಲೇನಾದರೂ ಸಂಕಟವಿರುವವನು (ಸಮಯಕ್ಕೆ ಮುನ್ನ ತಲೆ ಬೋಳಿಸಿಕೊಂಡರೆ, ಅದಕ್ಕೆ) ಪರಿಹಾರವಾಗಿ ಉಪವಾಸ ಆಚರಿಸಲಿ ಅಥವಾ ದಾನ ನೀಡಲಿ ಅಥವಾ ಪ್ರಾಣಿ ಬಲಿ ಅರ್ಪಿಸಲಿ. ಆ ಬಳಿಕ ನಿಮಗೆ ಭದ್ರತೆ ಒದಗಿದಾಗ, ಹಜ್ಜ್‌ಗೆ ಮುಂಚಿತವಾಗಿ ‘ಉಮ್ರಃ’ ಮಾಡಬಯಸುವವನು, ತನಗೆ ಸುಲಭವಾಗಿ ಲಭ್ಯವಿರುವುದನ್ನು ಬಲಿ ನೀಡಲಿ. ಅದು ಲಭ್ಯವಾಗದವನು ಹಜ್ಜ್‌ನ ಅವಧಿಯಲ್ಲೇ ಮೂರು ದಿನ ಮತ್ತು ನೀವು (ಹಜ್ಜ್‌ನಿಂದ) ಮರಳಿದಾಗ ಏಳು ದಿನ ಉಪವಾಸ ಆಚರಿಸಲಿ. ಹೀಗೆ ಇವು ಪೂರ್ಣ ಹತ್ತು ದಿನಗಳಾಗುತ್ತವೆ. ಯಾರ ಪರಿವಾರವು ಮಸ್ಜಿದುಲ್ ಹರಾಮ್‌ನಲ್ಲಿ ಇಲ್ಲವೋ (ಯಾರು ಮಕ್ಕಃದ ನಿವಾಸಿಗಳಲ್ಲವೋ) ಅವರಿಗಾಗಿ ಇರುವ ನಿಯಮ ಇದು. ನೀವು ಸದಾ ಅಲ್ಲಾಹನಿಗೆ ಅಂಜುತ್ತಲಿರಿ. ಅಲ್ಲಾಹನ ಹಿಡಿತವು ತುಂಬಾ ಕಠಿಣವಾಗಿರುತ್ತದೆ ಎಂಬುದು ನಿಮಗೆ ತಿಳಿದಿರಲಿ

[197] ಹಜ್ಜ್‌ಗಾಗಿ ನಿರ್ದಿಷ್ಟ ತಿಂಗಳುಗಳಿವೆ. ಆ ಅವಧಿಯಲ್ಲಿ ಹಜ್ಜ್ ಯಾತ್ರೆಯ ಹೊಣೆ ಹೊತ್ತವನು (ತಿಳಿದಿರಲಿ;) ಹಜ್ಜ್‌ನಲ್ಲಿ ಅಶ್ಲೀಲತೆ ಸಲ್ಲದು, ಯಾವುದೇ ಪಾಪಕೃತ್ಯ ಸಲ್ಲದು ಮತ್ತು ಜಗಳ ಸಲ್ಲದು. ನೀವು ಮಾಡುವ ಪ್ರತಿಯೊಂದು ಸತ್ಕಾರ್ಯವನ್ನೂ ಅಲ್ಲಾಹನು ತಿಳಿದಿರುತ್ತಾನೆ. (ಯಾತ್ರೆಯ ವೇಳೆ) ಅವಶ್ಯಕ ಯಾತ್ರಾಸಾಧನಗಳನ್ನು ಜೊತೆಗಿಟ್ಟುಕೊಳ್ಳಿರಿ. ನಿಜವಾಗಿ, ಧರ್ಮನಿಷ್ಠೆಯೇ ಅತ್ಯುತ್ತಮ ಯಾತ್ರಾಸಾಧನವಾಗಿದೆ. ಬುದ್ಧಿಯುಳ್ಳವರೇ, ನನಗೆ ಮಾತ್ರ ಅಂಜಿರಿ

[198] ನೀವು (ಯಾತ್ರೆಯ ನಡುವೆ) ನಿಮ್ಮೊಡೆಯನ ಅನುಗ್ರಹವನ್ನು ಹುಡುಕುವುದು ತಪ್ಪಲ್ಲ. ಮತ್ತು ನೀವು ಅರಫಾತ್‌ನಿಂದ ಮರಳುವಾಗ (ವಿಶೇಷವಾಗಿ) ‘ಮಶ್‌ಅರಿಲ್ ಹರಾಮ್’ ಬಳಿ ಅಲ್ಲಾಹನನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಕಲಿಸಿಕೊಟ್ಟಿರುವ ರೀತಿಯಲ್ಲೇ ನೀವು ಅವನನ್ನು ಸ್ಮರಿಸಿರಿ. ನಿಜವಾಗಿ ಈ ಹಿಂದೆ ನೀವು ದಾರಿಗೆಟ್ಟವರ ಸಾಲಿಗೆ ಸೇರಿದ್ದಿರಿ

[199] ತರುವಾಯ ಇತರೆಲ್ಲ ಜನರು ಮರಳಿ ಬರುವಲ್ಲಿಂದ ನೀವು ಮರಳಿರಿ ಮತ್ತು ಅಲ್ಲಾಹನೊಡನೆ ಕ್ಷಮೆಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[200] ನೀವು ನಿಮ್ಮ (ಹಜ್ಜ್‌ನ) ಕರ್ಮಗಳನ್ನೆಲ್ಲಾ ಮುಗಿಸಿಕೊಂಡ ಬಳಿಕ, (ಈ ಹಿಂದೆ) ನೀವು ನಿಮ್ಮ ಪೂರ್ವಜರನ್ನು ಸ್ಮರಿಸುತ್ತಿದ್ದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಅಧಿಕವಾಗಿ ಅಲ್ಲಾಹನನ್ನು ಸ್ಮರಿಸಿರಿ. ಜನರಲ್ಲಿ ಕೆಲವರು ‘‘ನಮ್ಮೊಡೆಯಾ, ನಮಗೆ ಈ ಲೋಕದಲ್ಲಿ ನೀಡು’’ ಎಂದು (ಮಾತ್ರ) ಪ್ರಾರ್ಥಿಸುತ್ತಾರೆ. ಅವರಿಗೆ ಪರಲೋಕದಲ್ಲಿ ಯಾವ ಪಾಲೂ ಇರದು

[201] ಅವರಲ್ಲಿ ‘‘ನಮ್ಮೊಡೆಯಾ ನಮಗೆ ಇಹಲೋಕದಲ್ಲೂ ಹಿತವನ್ನು ನೀಡು ಪರಲೋಕದಲ್ಲೂ ಹಿತವನ್ನು ನೀಡು ಮತ್ತು ನಮ್ಮನ್ನು ಬೆಂಕಿಯ ಶಿಕ್ಷೆಯಿಂದ ರಕ್ಷಿಸು’’ ಎಂದು ಪ್ರಾರ್ಥಿಸುವವರೂ ಇದ್ದಾರೆ

[202] ಅಂಥವರಿಗೆ ಅವರು ಶ್ರಮಿಸಿ ಗಳಿಸಿದ ಪಾಲು ಸಿಗಲಿದೆ ಮತ್ತು ಅಲ್ಲಾಹನು ವೇಗವಾಗಿ ವಿಚಾರಣೆ ನಡೆಸುವವನಾಗಿದ್ದಾನೆ

[203] (ವಿಶೇಷವಾಗಿ) ಆ ನಿರ್ದಿಷ್ಟ ದಿನಗಳಲ್ಲಿ ನೀವು ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಅವಸರಪಟ್ಟು ಎರಡೇ ದಿನಗಳಲ್ಲಿ (ಹಜ್ಜ್‌ನಿಂದ) ತೆರಳಿದರೆ ಅವರ ಮೇಲೆ ಪಾಪವೇನಿಲ್ಲ. ಹಾಗೆಯೇ, ತುಸು ವಿಳಂಬಿಸಿದವನ ಮೇಲೂ ಪಾಪವೇನಿಲ್ಲ. ಇದು ಧರ್ಮನಿಷ್ಠರಿಗಾಗಿ (ಇರುವ ನಿಯಮ). ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನಿಮಗೆ ತಿಳಿದಿರಲಿ, ಒಂದು ದಿನ ನಿಮ್ಮೆಲ್ಲರನ್ನೂ ಅವನ ಮುಂದೆ ಸೇರಿಸಲಾಗುವುದು

[204] (ದೂತರೇ,) ಜನರ ಪೈಕಿ ಒಬ್ಬನ ಮಾತು ಈ ಲೌಕಿಕ ಜೀವನದ ದೃಷ್ಟಿಯಿಂದ ನಿಮಗೆ ತುಂಬಾ ಹಿತಕರವೆನಿಸುತ್ತದೆ. ತನ್ನ ಮನಸ್ಸಿನಲ್ಲೇನಿದೆ ಎಂಬುದಕ್ಕೆ ಅವನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತಾನೆ. ನಿಜವಾಗಿ ಅವನೊಬ್ಬ ಬದ್ಧ ವೈರಿಯಾಗಿದ್ದಾನೆ

[205] ಅವನು (ನಿಮ್ಮ ಬಳಿಯಿಂದ) ಹೊರಟು ಹೋದ ಬಳಿಕ ಭೂಮಿಯಲ್ಲಿ ವಿಧ್ವಂಸ ಮೆರೆಯುತ್ತಾ, ಬೆಳೆಗಳನ್ನು ಹಾಗೂ ಜಾನುವಾರುಗಳನ್ನು ನಾಶ ಮಾಡುತ್ತಾ ಓಡಾಡುತ್ತಾನೆ. ಅಲ್ಲಾಹನು ವಿಧ್ವಂಸವನ್ನು ಮೆಚ್ಚುವುದಿಲ್ಲ

[206] ಅವನೊಡನೆ ‘‘ನೀನು ಅಲ್ಲಾಹನಿಗೆ ಅಂಜು’’ ಎನ್ನಲಾದಾಗ, ಅವನ ದುರಭಿಮಾನವು ಅವನನ್ನು ಪಾಪ ಕಾರ್ಯದಲ್ಲಿ ಮತ್ತಷ್ಟು ಸ್ಥಿರಗೊಳಿಸಿ ಬಿಡುತ್ತದೆ. ಅವನಿಗೆ ನರಕವೇ ಸಾಕು. ಅದು ತುಂಬಾ ಕೆಟ್ಟ ನೆಲೆಯಾಗಿದೆ

[207] ಮತ್ತು ಜನರಲ್ಲಿ, ಅಲ್ಲಾಹನ ಮೆಚ್ಚುಗೆ ಗಳಿಸಲಿಕ್ಕಾಗಿ ಸ್ವತಃ ತಮ್ಮನ್ನೇ ಮಾರಿಕೊಳ್ಳುವವರೂ ಇದ್ದಾರೆ. ನಿಜವಾಗಿ ಅಲ್ಲಾಹನು ದಾಸರ ಪಾಲಿಗೆ ವಾತ್ಸಲ್ಯಮಯಿಯಾಗಿದ್ದಾನೆ

[208] ವಿಶ್ವಾಸಿಗಳೇ, ಇಸ್ಲಾಮಿನೊಳಗೆ ಪೂರ್ಣವಾಗಿ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ಖಂಡಿತವಾಗಿಯೂ ಅವನು ನಿಮ್ಮ ಬಹಿರಂಗ ಶತ್ರು

[209] ನಿಮ್ಮ ಬಳಿಗೆ ಸ್ಪಷ್ಟ ಆದೇಶಗಳು ಬಂದ ಬಳಿಕವೂ ನೀವು ಹೆಜ್ಜೆ ತಪ್ಪಿದರೆ, ಅಲ್ಲಾಹನು ಪ್ರಚಂಡನು ಮತ್ತು ಯುಕ್ತಿವಂತನೆಂಬುದು ನಿಮಗೆ ತಿಳಿದಿರಲಿ

[210] ಅವರು ನಿರೀಕ್ಷಿಸುತ್ತಿರುವುದು, ಸಾಕ್ಷಾತ್ ಅಲ್ಲಾಹನೇ ಮೋಡಗಳ ನೆರಳಲ್ಲಿ, ಮಲಕ್‌ಗಳೊಂದಿಗೆ ತಮ್ಮ ಬಳಿಗೆ ಬಂದು ಎಲ್ಲವೂ ಇತ್ಯರ್ಥವಾಗಿ ಬಿಡಬೇಕೆಂದಲ್ಲವೇ? ನಿಜವಾಗಿ, ಎಲ್ಲ ವಿಷಯಗಳೂ ಅಂತಿಮವಾಗಿ ಅಲ್ಲಾಹನ ಬಳಿಗೇ ಮರಳಲಿವೆ

[211] ನಾವು ಅವರಿಗೆ ಅದೆಷ್ಟು ಸ್ಪಷ್ಟ ಪುರಾವೆಗಳನ್ನು ಒದಗಿಸಿದ್ದೆವೆಂದು, ಇಸ್ರಾಈಲರ ಸಂತತಿಗಳೊಂದಿಗೆ ನೀವು ವಿಚಾರಿಸಿರಿ. ನಿಜವಾಗಿ, ಅಲ್ಲಾಹನ ಅನುಗ್ರಹವು ತನ್ನ ಬಳಿಗೆ ಬಂದ ಬಳಿಕ ಅದನ್ನು (ಶಾಪವಾಗಿ) ಪರಿವರ್ತಿಸಿಕೊಂಡವನು (ತಿಳಿದಿರಲಿ); ಖಂಡಿತವಾಗಿಯೂ ಅಲ್ಲಾಹನು ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ

[212] ಧಿಕ್ಕಾರಿಗಳಿಗೆ ಇಹಲೋಕದ ಬದುಕನ್ನು ಚಂದಗಾಣಿಸಲಾಗಿದೆ. ಅವರು ವಿಶ್ವಾಸಿಗಳನ್ನು ಗೇಲಿ ಮಾಡುತ್ತಾರೆ. ನಿಜವಾಗಿ, ಪುನರುತ್ಥಾನದ ದಿನ ಧರ್ಮನಿಷ್ಠರು ಅವರಿಗಿಂತ ಮೇಲಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಎಣಿಸಲಾಗದಷ್ಟು ಅನುಗ್ರಹವನ್ನು ನೀಡುತ್ತಾನೆ

[213] (ಮೂಲತಃ) ಜನರೆಲ್ಲಾ ಒಂದೇ ಸಮುದಾಯವಾಗಿದ್ದರು. ತರುವಾಯ ಅಲ್ಲಾಹನು, ಶುಭವಾರ್ತೆ ನೀಡುವ ಹಾಗೂ ಎಚ್ಚರಿಸುವ ದೂತರನ್ನು ಕಳುಹಿಸಿದನು ಮತ್ತು ಜನರು ಪರಸ್ಪರ ಭಿನ್ನಾಭಿಪ್ರಾಯ ತಾಳಿದ್ದ ವಿಷಯಗಳಲ್ಲಿ ಅವರ ನಡುವೆ ನ್ಯಾಯ ತೀರ್ಮಾನ ಮಾಡಲೆಂದು ಅವರ ಜೊತೆ, ಸತ್ಯವಿರುವ ಗ್ರಂಥವನ್ನಿಳಿಸಿದನು. ಆದರೆ ಯಾರಿಗೆ ಗ್ರಂಥ ನೀಡಲಾಗಿತ್ತೋ ಅದೇ ಜನರು, ತಮ್ಮ ಬಳಿಗೆ ಸ್ಪಷ್ಟ ಪುರಾವೆಗಳು ಬಂದ ಬಳಿಕ, ಪರಸ್ಪರ ವಿದ್ವೇಷದ ಕಾರಣ, ಆ ಕುರಿತು ಭಿನ್ನಾಭಿಪ್ರಾಯ ತಾಳಿದರು. ಕೊನೆಗೆ ಅಲ್ಲಾಹನು ವಿಶ್ವಾಸಿಗಳಿಗೆ, ಸತ್ಯದ ಕುರಿತಾಗಿ ಅವರು ಭಿನ್ನಾಭಿಪ್ರಾಯ ತಾಳಿದ್ದ ವಿಷಯಗಳಲ್ಲಿ ತನ್ನಿಚ್ಛೆಯಿಂದ ಮಾರ್ಗದರ್ಶನ ನೀಡಿದನು. ಅಲ್ಲಾಹನು ತಾನಿಚ್ಛಿಸಿದವರಿಗೆ, ನೇರ ಮಾರ್ಗವನ್ನು ತೋರಿಸಿ ಕೊಡುತ್ತಾನೆ

[214] ನೀವೇನು (ಸುಲಭವಾಗಿ) ನೀವು ಸ್ವರ್ಗ ಪ್ರವೇಶಿಸುವಿರೆಂದು ಕೊಂಡಿರುವಿರಾ? ನಿಜವಾಗಿ, ನಿಮಗಿಂತ ಹಿಂದೆ ಗತಿಸಿದವರಿಗೆ ಎದುರಾಗಿದ್ದ ಸನ್ನಿವೇಶಗಳು ನಿಮಗಿನ್ನೂ ಎದುರಾಗಿಲ್ಲ. ಅವರು ತೀವ್ರ ಸಂಕಷ್ಟಗಳನ್ನು ಹಾಗೂ ಹಿಂಸೆಯನ್ನು ಅನುಭವಿಸಿದ್ದರು ಮತ್ತು ಅವರನ್ನು ಅದೆಷ್ಟು ನರಳಿಸಲಾಗಿತ್ತೆಂದರೆ, (ಅಂದಿನ) ದೇವದೂತರು ಹಾಗೂ ಅವರ ಜೊತೆಗಿದ್ದ ವಿಶ್ವಾಸಿಗಳು, ‘‘ಯಾವಾಗ ಬಂದೀತು ಅಲ್ಲಾಹನ ಸಹಾಯ?’’ ಎನ್ನುವಂತಾಗಿತ್ತು. ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನ ಸಹಾಯವು ಹತ್ತಿರವೇ ಇದೆ

[215] (ದೂತರೇ,) ಅವರು ನಿಮ್ಮೊಡನೆ, ತಾವು ಏನನ್ನು ಖರ್ಚು ಮಾಡಬೇಕು ಎಂದು ವಿಚಾರಿಸುತ್ತಾರೆ. ಹೇಳಿರಿ; ನೀವು ಖರ್ಚು ಮಾಡುವ ಸಂಪತ್ತು ತಂದೆ ತಾಯಿಗೆ, ಬಂಧುಗಳಿಗೆ, ಅನಾಥರಿಗೆ ಹಾಗೂ ಬಡವರಿಗೆ ಮತ್ತು ಪ್ರಯಾಣಿಕರಿಗೆ (ತಲುಪಲಿ). ನೀವು ಮಾಡುವ ಪ್ರತಿಯೊಂದು ಸತ್ಕಾರ್ಯವನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ

[216] ನಿಮಗೆ ಯುದ್ಧವನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಅದು ನಿಮಗೆ ಅಪ್ರಿಯವಾಗಿದೆ. ಆದರೆ ನಿಮಗೆ ಅಪ್ರಿಯವಾಗಿರುವ ಸಂಗತಿಯೊಂದು ನಿಮ್ಮ ಪಾಲಿಗೆ ಹಿತಕರವಾಗಿರಲೂ ಬಹುದು. ಹಾಗೆಯೇ, ನೀವು ತುಂಬಾ ಪ್ರೀತಿಸುವ ಸಂಗತಿಯೊಂದು ನಿಮ್ಮ ಪಾಲಿಗೆ ಕೆಟ್ಟದಾಗಿರಲೂಬಹುದು. ಅಲ್ಲಾಹನಿಗೆ ತಿಳಿದಿದೆ ಮತ್ತು ನಿಮಗೆ ತಿಳಿದಿಲ್ಲ

[217] (ದೂತರೇ,) ಅವರು ನಿಮ್ಮೊಡನೆ, ಪವಿತ್ರ ತಿಂಗಳಲ್ಲಿ ಯುದ್ಧ ಮಾಡುವ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಆ ತಿಂಗಳಲ್ಲಿ ಯುದ್ಧ ಮಾಡುವುದು ದೊಡ್ಡ ಅಪರಾಧವಾಗಿದೆ. ಆದರೆ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನನ್ನು (ಅಲ್ಲಾಹನನ್ನು) ಧಿಕ್ಕರಿಸುವುದು, ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುವುದು ಮತ್ತು ಅದರ ನಿವಾಸಿಗಳನ್ನು ಅಲ್ಲಿಂದ ಹೊರದಬ್ಬುವುದು – ಇವೆಲ್ಲಾ ಅಲ್ಲಾಹನ ದೃಷ್ಟಿಯಲ್ಲಿ ಇನ್ನೂ ದೊಡ್ಡ ಪಾಪಗಳಾಗಿವೆ. ಅಶಾಂತಿಯಂತು ಕೊಲೆಗಿಂತಲೂ ಕೆಟ್ಟದು. ಅವರು (ಧಿಕ್ಕಾರಿಗಳು) ತಮಗೆ ಸಾಧ್ಯವಾದರೆ, ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖರಾಗಿಸಿ ಬಿಡುವ ತನಕವೂ ನಿಮ್ಮ ವಿರುದ್ಧ ಯುದ್ಧ ಹೂಡುತ್ತಲೇ ಇರುವರು. ಇನ್ನು ನಿಮ್ಮ ಪೈಕಿ, ಧರ್ಮದಿಂದ ವಿಮುಖನಾದವನ ಮತ್ತು (ಅದೇ ಸ್ಥಿತಿಯಲ್ಲಿ) ಮೃತನಾದವನ ಕರ್ಮಗಳೆಲ್ಲಾ ಈ ಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾಗಿ ಬಿಟ್ಟವು. ಅಂಥವರು ನರಕದವರು ಮತ್ತು ಅವರು ಅಲ್ಲೇ ಸದಾಕಾಲ ಇರುವರು

[218] ವಿಶ್ವಾಸಿಗಳು ಹಾಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಮತ್ತು ಹೋರಾಡಿದವರೇ, ಅಲ್ಲಾಹನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವರಾಗಿದ್ದಾರೆ. ಅಲ್ಲಾಹನಂತು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[219] ಅವರು ನಿಮ್ಮೊಡನೆ, ಮದ್ಯ ಮತ್ತು ಜೂಜಿನ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಅವೆರಡರಲ್ಲೂ ದೊಡ್ಡ ಪಾಪವಿದೆ ಮತ್ತು ಜನರಿಗೆ ಕೆಲವು ಲಾಭಗಳೂ ಇವೆ. ಆದರೆ ಅವುಗಳ ಪಾಪವು ಅವುಗಳ ಲಾಭಕ್ಕಿಂತ ದೊಡ್ಡದು. ಹಾಗೆಯೇ ಅವರು ನಿಮ್ಮೊಡನೆ (ಸತ್ಕಾರ್ಯಕ್ಕೆ) ತಾವೇನು ಖರ್ಚು ಮಾಡಬೇಕು ಎಂದು ವಿಚಾರಿಸುತ್ತಾರೆ. ‘‘ಅಗತ್ಯಕ್ಕಿಂತ ಹೆಚ್ಚಿನದನ್ನು (ಖರ್ಚು ಮಾಡಿರಿ)’’ ಎಂದು ಹೇಳಿರಿ. ಇದೇ ರೀತಿ, ನೀವು ಚಿಂತನೆ ನಡೆಸಬೇಕೆಂದು ಅಲ್ಲಾಹನು ನಿಮಗಾಗಿ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ

[220] ಇಹಲೋಕಕ್ಕೂ ಪರಲೋಕಕ್ಕೂ (ಅವು ಅನ್ವಯಿಸುತ್ತವೆ). (ದೂತರೇ,) ಅವರು ನಿಮ್ಮೊಡನೆ ಅನಾಥರ ಕರಿತು ವಿಚಾರಿಸುತ್ತಾರೆ. ಹೇಳಿರಿ; ಅವರ ಹಿತಾಸಕ್ತಿಯನ್ನು ಪರಿಗಣಿಸುವುದೊಳ್ಳೆಯದು. ಇನ್ನು ನೀವು ಅವರನ್ನು (ಖರ್ಚಿನಲ್ಲಿ) ನಿಮ್ಮ ಜೊತೆ ಸೇರಿಸಿಕೊಳ್ಳುವುದಾದರೆ, ಅವರು ನಿಮ್ಮ ಸಹೋದರರು. ಅಲ್ಲಾಹನಂತು, ಯಾರು ಹಾಳುಗೆಡಹುವವರು ಮತ್ತು ಯಾರು ಸುಧಾರಕರೆಂಬುದನ್ನು ಚೆನ್ನಾಗಿ ಬಲ್ಲನು. ಅಲ್ಲಾಹನು ಬಯಸಿದ್ದರೆ, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿರುವನು

[221] (ವಿಶ್ವಾಸಿಗಳೇ,) ಬಹುದೇವಾರಾಧಕಿಯರು ವಿಶ್ವಾಸಿನಿಯರಾಗುವ ತನಕ ಅವರನ್ನು ನೀವು ವಿವಾಹವಾಗಬೇಡಿ. ನಿಜವಾಗಿ ವಿಶ್ವಾಸಿ ದಾಸಿಯು, (ಸ್ವತಂತ್ರ) ಬಹು ದೇವರಾಧಕಿಗಿಂತ ಉತ್ತಮಳು – ಆಕೆ ನಿಮಗೆಷ್ಟು ಇಷ್ಟವಿದ್ದರೂ ಸರಿಯೇ. ಹಾಗೆಯೇ, ಬಹುದೇವಾರಾಧಕ ಪುರುಷರು ವಿಶ್ವಾಸಿಗಳಾಗುವ ತನಕ ಅವರನ್ನು ವಿವಾಹವಾಗಬಾರದು. ವಿಶ್ವಾಸಿ ದಾಸನು, (ಸ್ವತಂತ್ರ) ಬಹು ದೇವಾರಾಧಕನಿಗಿಂತ ಉತ್ತಮನು – ಅವನು ನಿಮಗೆಷ್ಟು ಇಷ್ಟವಿದ್ದರೂ ಸರಿಯೇ. ಅವರು (ಬಹುದೇವಾರಾಧಕರು) ನರಕದೆಡೆಗೆ ಕರೆಯುತ್ತಾರೆ. ಆದರೆ ಅಲ್ಲಾಹನು ತನ್ನಿಚ್ಛೆಯಿಂದ ಸ್ವರ್ಗದೆಡೆಗೆ ಮತ್ತು ಕ್ಷಮೆಯೆಡೆಗೆ ಕರೆಯುತ್ತಾನೆ ಮತ್ತು ಅವನು ಜನರಿಗಾಗಿ ತನ್ನ ಆದೇಶಗಳನ್ನು ಸ್ಪಷ್ಟಪಡಿಸುತ್ತಾನೆ – ಅವರು ಉಪದೇಶ ಸ್ವೀಕರಿಸಲೆಂದು

[222] ಮತ್ತು ಅವರು ನಿಮ್ಮೊಡನೆ ರಜಸ್ಸಿನ (ಋತು ಸ್ರಾವದ) ಕುರಿತು ವಿಚಾರಿಸುತ್ತಾರೆ. (ದೂತರೇ) ಹೇಳಿರಿ; ಅದೊಂದು ನರಳಿಕೆಯಾಗಿದೆ. ರಜಸ್ಸಿನ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ ಮತ್ತು ಅವರು ಶುದ್ಧರಾದಾಗ ಅಲ್ಲಾಹನು ನಿಮಗೆ ಆದೇಶಿಸಿರುವ ರೀತಿಯಲ್ಲಿ ಅವರ ಬಳಿಗೆ ಹೋಗಿರಿ. ಅಲ್ಲಾಹನು ಪಶ್ಚಾತ್ತಾಪ ಪಡುವವರನ್ನು ಪ್ರೀತಿಸುತ್ತಾನೆ ಮತ್ತು ಅವನು ನಿರ್ಮಲರಾಗಿರುವವರನ್ನು ಪ್ರೀತಿಸುತ್ತಾನೆ

[223] ನಿಮ್ಮ ಪತ್ನಿಯರು ನಿಮ್ಮ ಪಾಲಿಗೆ, ತೋಟಗಳಾಗಿದ್ದಾರೆ. ನೀವು ನಿಮಗೆ ಬೇಕಾದಂತೆ ನಿಮ್ಮ ತೋಟವನ್ನು ಪ್ರವೇಶಿಸಿರಿ. ಮತ್ತು ನಿಮ್ಮ ಸ್ವಂತಕ್ಕಾಗಿ (ಸತ್ಕರ್ಮಗಳನ್ನು) ಮುಂದೆ ಕಳುಹಿಸಿರಿ ಹಾಗೂ ಅಲ್ಲಾಹನಿಗೆ ಅಂಜಿರಿ. ನೀವು ಅವನನ್ನು ಭೇಟಿಯಾಗಲಿಕ್ಕಿದೆ ಎಂಬುದು ನಿಮಗೆ ತಿಳಿದಿರಲಿ. ವಿಶ್ವಾಸಿಗಳಿಗೆ ನೀವು ಶುಭವಾರ್ತೆ ಕೊಟ್ಟು ಬಿಡಿರಿ

[224] ಸತ್ಕಾರ್ಯದಿಂದ, ಧರ್ಮನಿಷ್ಠೆಯಿಂದ ಹಾಗೂ ಜನರ ನಡುವೆ ಸಂಧಾನ ಏರ್ಪಡಿಸುವ ಕೆಲಸದಿಂದ ನಿಮ್ಮನ್ನು ತಡೆಯುವಂತಹ ಪ್ರತಿಜ್ಞೆಗಳಿಗಾಗಿ ನೀವು ಅಲ್ಲಾಹನ ಹೆಸರನ್ನು ನೆಪವಾಗಿ ಬಳಸಬೇಡಿ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[225] ನೀವು ಮಾಡಿರುವ ತಮಾಶೆಯ (ಗಂಭೀರವಲ್ಲದ) ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ನಿಮ್ಮ ಮನಸಾರೆ ಮಾಡಿದವುಗಳ (ಗಂಭೀರ ಪ್ರತಿಜ್ಞೆಗಳ) ಕುರಿತು ಅವನು ಖಂಡಿತ ನಿಮ್ಮ ವಿಚಾರಣೆ ನಡೆಸುವನು. ಅಲ್ಲಾಹನು ಕ್ಷಮಿಸುವವನೂ ಸಂಯಮಿಯೂ ಆಗಿದ್ದಾನೆ

[226] ತಮ್ಮ ಪತ್ನಿಯರಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿಕೊಂಡವರು ನಾಲ್ಕು ತಿಂಗಳ ತನಕ ಕಾಯಲಿ. ಆ ಬಳಿಕ ಅವರು (ತಮ್ಮ ನಿರ್ಧಾರದಿಂದ) ಮರಳಿದರೆ, ಅಲ್ಲಾಹನು (ಅವರ ಪಾಲಿಗೆ) ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿ ಯಾಗಿದ್ದಾನೆ

[227] ಇನ್ನು ಅವರು ವಿಚ್ಛೇದನವನ್ನೇ ತೀರ್ಮಾನಿಸಿಕೊಂಡಿದ್ದರೆ, (ಅವರಿಗೆ ತಿಳಿದಿರಲಿ) ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[228] ವಿಚ್ಛೇದನ ಪಡೆದ ಸ್ತ್ರೀಯರು ಮೂರು (ಮಾಸಿಕ ಸ್ರಾವದ) ಅವಧಿಗಳ ತನಕ ತಮ್ಮನ್ನು ತಡೆದುಕೊಂಡಿರಬೇಕು (ಬೇರೆ ವಿವಾಹವಾಗಬಾರದು). ಅವರು ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನು ತಮ್ಮ ಗರ್ಭಗಳಲ್ಲಿ ಏನನ್ನು ಸೃಷ್ಟಿಸಿರುವನೆಂಬುದನ್ನು ಬಚ್ಚಿಡುವುದು ಅವರ ಪಾಲಿಗೆ ಸಮ್ಮತವಲ್ಲ. ಅವರ ಪತಿಯು, ಸಂಬಂಧದಲ್ಲಿ ಸುಧಾರಣೆ (ಪುನರ್ಮಿಲನ) ಬಯಸಿದ್ದರೆ ಈ ಅವಧಿಯಲ್ಲಿ ಆ ಸ್ತ್ರೀಯರನ್ನು (ಪತ್ನಿಯರಾಗಿ) ಮರಳಿ ಪಡೆಯಲು ಅವರೇ ಹೆಚ್ಚು ಹಕ್ಕುದಾರರು. ಸ್ತ್ರೀಯರಿಗೆ ಕರ್ತವ್ಯಗಳಿರುವಂತೆಯೇ ಅವರಿಗೆ ಅಧಿಕಾರಗಳೂ ಇವೆ ಮತ್ತು ಸ್ತ್ರೀಯರ ಮೇಲೆ ಪುರುಷರಿಗೆ ಒಂದು ಮಟ್ಟದ ಹಿರಿಮೆ ಇದೆ. ಅಲ್ಲಾಹನಂತು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[229] ‘ತಲಾಕ್’ (ವಿಚ್ಛೇದನ) ಎರಡು ಬಾರಿ (ಎರಡು ಹಂತಗಳಲ್ಲಿ). ಆ ಬಳಿಕ (ಪತಿಯು ಪತ್ನಿಯನ್ನು ಪತ್ನಿಯಾಗಿ) ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಬೇಕು ಅಥವಾ ಉದಾರವಾಗಿ ಬಿಡುಗಡೆಗೊಳಿಸಬೇಕು. ಮತ್ತು ನೀವು ಅವರಿಗೆ (ಪುರುಷರು ಸ್ತ್ರೀಯರಿಗೆ) ಕೊಟ್ಟಿರುವ ಏನನ್ನೂ ಮರಳಿ ಪಡೆಯುವುದು ನಿಮ್ಮ ಪಾಲಿಗೆ ಸಮ್ಮತವಲ್ಲ – ಅವರಿಬ್ಬರಿಗೂ, ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲು ತಮಗೆ ಸಾಧ್ಯವಾಗಲಾರದೆಂಬ ಭಯವಿರುವ ಸ್ಥಿತಿಯ ಹೊರತು. ಇನ್ನು ನಿಮಗೆ, ಅವರಿಬ್ಬರೂ ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲಾರರೆಂಬ ಭಯವಿರುವಾಗ, ಪತ್ನಿಯು ಪರಿಹಾರ ನೀಡಿ ಬಿಡುಗಡೆ ಪಡೆದರೆ ಅವರಿಬ್ಬರಿಗೂ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿಗಳು. ಇವುಗಳನ್ನು ಮೀರಬೇಡಿ. ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಮೀರುವವರೇ ಅಕ್ರಮಿಗಳು

[230] ಇನ್ನು ಅವನು ಆಕೆಗೆ (ಮೂರನೆಯ) ‘ತಲಾಕ್’ ಕೊಟ್ಟು ಬಿಟ್ಟರೆ, ತರುವಾಯ ಆಕೆ ಬೇರೊಬ್ಬ ಪತಿಯನ್ನು ವಿವಾಹವಾಗುವ (ಹಾಗೂ ಆತನಿಂದ ಬಿಡುಗಡೆ ಪಡೆಯುವ) ತನಕವೂ ಆಕೆ ಆತನ (ಮೊದಲ ಪತಿಯ) ಪಾಲಿಗೆ ಸಮ್ಮತಳಾಗುವುದಿಲ್ಲ. ಆ ಬಳಿಕ ಆತ (ಎರಡನೇ ಪತಿ) ಆಕೆಯನ್ನು ವಿಚ್ಛೇದಿಸಿದರೆ – ತಾವು ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಬಲ್ಲೆವೆಂದು ಅವರಿಬ್ಬರೂ ಭಾವಿಸುವುದಾದರೆ – ಅವರಿಬ್ಬರೂ (ಆಕೆ ಮತ್ತು ಮೊದಲನೇ ಪತಿ) ಮತ್ತೆ ಪರಸ್ಪರ ಕೂಡಿಕೊಳ್ಳುವುದರಲ್ಲಿ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳು. ತಿಳುವಳಿಕೆ ಉಳ್ಳವರಿಗಾಗಿ ಅವನು ಇವುಗಳನ್ನು ವಿವರಿಸುತ್ತಿದ್ದಾನೆ

[231] ನೀವು ಸ್ತ್ರೀಯರಿಗೆ ತಲಾಕ್ ನೀಡಿರುವಾಗ ಅವರು ತಮ್ಮ ನಿರ್ದಿಷ್ಟ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ ಉತ್ತಮ ರೀತಿಯಲ್ಲಿ ಅವರನ್ನು ಉಳಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಅವರನ್ನು ಬಿಡುಗಡೆಗೊಳಿಸಿರಿ. ಅವರಿಗೆ ಹಾನಿ ಮಾಡುವುದಕ್ಕಾಗಿ ಹಾಗೂ ಕಿರುಕುಳ ನೀಡುವುದಕ್ಕಾಗಿ ನೀವು ಅವರನ್ನು ತಡೆದಿಟ್ಟುಕೊಳ್ಳಬೇಡಿ. ಹಾಗೆ ಮಾಡಿದವನು ನಿಜವಾಗಿ ಸ್ವತಃ ತನ್ನ ಮೇಲೆಯೇ ಅಕ್ರಮ ವೆಸಗಿಕೊಂಡನು. ನೀವು ಅಲ್ಲಾಹನ ವಚನಗಳನ್ನು ಅಪಹಾಸ್ಯದ ವಸ್ತುವಾಗಿಸಿಕೊಳ್ಳಬೇಡಿ. ಮತ್ತು ನೀವು, ಅಲ್ಲಾಹನು ನಿಮಗೆ ಒದಗಿಸಿರುವ ಅನುಗ್ರಹಗಳನ್ನು ಹಾಗೂ ಅವನು ನಿಮಗೆ ಗ್ರಂಥವನ್ನೂ ಯುಕ್ತಿಯನ್ನೂ ಇಳಿಸಿಕೊಟ್ಟಿರುವುದನ್ನು ಮತ್ತು ಆ ಮೂಲಕ ಅವನು ನಿಮಗೆ ಉಪದೇಶಿಸುತ್ತಿದ್ದಾನೆ ಎಂಬುದನ್ನು ನೆನಪಿಡಿರಿ. ನೀವು, ಅಲ್ಲಾಹನಿಗೆ ಅಂಜಿರಿ ಹಾಗೂ ಅಲ್ಲಾಹನು ಎಲ್ಲವನ್ನೂ ಬಲ್ಲವನೆಂಬುದು ನಿಮಗೆ ತಿಳಿದಿರಲಿ

[232] ಮತ್ತು ನೀವು ಪತ್ನಿಯರಿಗೆ ತಲಾಕ್ ನೀಡಿರುವಾಗ, ಅವರು ತಮ್ಮ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ, ನಿಯಮಾನುಸಾರ, ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ (ಆಯ್ಕೆಯ) ಬೇರೆ ಪತಿಯರನ್ನು ವಿವಾಹವಾಗುವುದಕ್ಕೆ ನೀವು ತಡೆಯೊಡ್ಡಬೇಡಿ. ನಿಮ್ಮ ಪೈಕಿ, ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರಿಗಾಗಿ ಇದನ್ನು ಬೋಧಿಸಲಾಗುತ್ತಿದೆ. ಇದು ನಿಮ್ಮ ಪಾಲಿಗೆ ಹೆಚ್ಚು ಶುದ್ಧ ಹಾಗೂ ನಿರ್ಮಲ ಧೋರಣೆಯಾಗಿದೆ. ಅಲ್ಲಾಹನು ಬಲ್ಲನು ಆದರೆ, ನೀವು ಅರಿತಿಲ್ಲ

[233] ಮತ್ತು ತಾಯಂದಿರು ತಮ್ಮ ಮಕ್ಕಳಿಗೆ ಪೂರ್ತಿ ಎರಡು ವರ್ಷ ಎದೆ ಹಾಲುಣಿಸಲಿ – ಎದೆಹಾಲುಣಿಸುವ ಅವಧಿಯನ್ನು ಪೂರ್ತಿಗೊಳಿಸಲು ಬಯಸುವವರಿಗಾಗಿ ಇರುವ ನಿಯಮವಿದು. ಅಂತಹ ತಾಯಂದಿರಿಗೆ ಅವರ ಆಹಾರ ಮತ್ತು ಉಡುಗೆಯನ್ನು ನಿಯಮ ಪ್ರಕಾರ ಒದಗಿಸುವುದು ಮಗುವಿನ ತಂದೆಯ ಕರ್ತವ್ಯವಾಗಿದೆ. ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸಲಾಗುವುದಿಲ್ಲ. ತಾಯಿಗೆ ಆಕೆಯ ಮಗುವಿನ ಕಾರಣ ಕಿರುಕುಳ ನೀಡಬಾರದು. ಹಾಗೆಯೇ, ತಂದೆಗೂ ಆತನ ಮಗುವಿನ ಕಾರಣ ಕಿರುಕುಳ ನೀಡಬಾರದು. ಉತ್ತರಾಧಿಕಾರಿಗೂ ಇದೇ ನಿಯಮ ಅನ್ವಯವಾಗುತ್ತದೆ. ಇನ್ನು ಅವರಿಬ್ಬರೂ (ತಂದೆ-ತಾಯಿ) ಪರಸ್ಪರ ಒಪ್ಪಿಗೆ ಹಾಗೂ ಸಮಾಲೋಚನೆಯ ಬಳಿಕ (ಮಗುವಿಗೆ) ಎದೆ ಹಾಲು ಬಿಡಿಸಲು ಬಯಸಿದಲ್ಲಿ ಅವರಿಬ್ಬರ ಮೇಲೂ ದೋಷವಿಲ್ಲ. ಮತ್ತು ನೀವು ನಿಮ್ಮ ಮಕ್ಕಳಿಗೆ (ಪರ ಸ್ತ್ರೀಯರಿಂದ) ಎದೆಹಾಲುಣಿಸಲು ಬಯಸಿದ್ದರೆ, ನಿಯಮ ಪ್ರಕಾರ ಅವರಿಗೆ (ಹಾಲುಣಿಸುವವರಿಗೆ) ಕೊಡಬೇಕಾದುದನ್ನು ಕೊಟ್ಟು ಹಾಗೆ ಮಾಡಿಸುವುದರಲ್ಲಿ ನಿಮ್ಮ ಮೇಲೆ ದೋಷವೇನಿಲ್ಲ. ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನೀವು ಮಾಡುವ ಸಕಲವನ್ನೂ ಅಲ್ಲಾಹನು ನೋಡುತ್ತಲೇ ಇದ್ದಾನೆಂಬುದು ನಿಮಗೆ ತಿಳಿದಿರಲಿ

[234] ನಿಮ್ಮ ಪೈಕಿ ಯಾರಾದರೂ ಪತ್ನಿಯರನ್ನು ಬಿಟ್ಟು ಮೃತರಾಗಿದ್ದರೆ ಆ ಪತ್ನಿಯರು ನಾಲ್ಕು ತಿಂಗಳು ಮತ್ತು ಹತ್ತು ದಿನಗಳ ಕಾಲ ತಮ್ಮನ್ನು ತಡೆದಿಟ್ಟುಕೊಳ್ಳಲಿ. ಆ ತಮ್ಮ ಅವಧಿಯನ್ನು (ಇದ್ದತ್) ಪೂರ್ತಿಗೊಳಿಸಿದ ಬಳಿಕ ಅವರು ತಮ್ಮ ವಿಷಯದಲ್ಲಿ, ನಿಯಮ ಪ್ರಕಾರ, ಏನು ಮಾಡಿದರೂ ನಿಮ್ಮ ಮೇಲೇನೂ ದೋಷವಿಲ್ಲ. ನೀವು ಮಾಡುವ ಎಲ್ಲವನ್ನೂ ಅಲ್ಲಾಹನು ಅರಿತಿರುತ್ತಾನೆ

[235] (ಇದ್ದತ್ ಅವಧಿಯಲ್ಲಿ) ನೀವು ಆ ಮಹಿಳೆಯರಿಗೆ ಸೂಚ್ಯವಾಗಿ ವಿವಾಹ ಪ್ರಸ್ತಾಪ ನೀಡಿದರೂ (ಆ ಅಪೇಕ್ಷೆಯನ್ನು) ನಿಮ್ಮೊಳಗೇ ಬಚ್ಚಿಟ್ಟುಕೊಂಡರೂ, ನಿಮ್ಮ ಮೇಲೆ ದೋಷವೇನಿಲ್ಲ. ನೀವು ಸದ್ಯದಲ್ಲೇ ಅವರೊಡನೆ ಈ ವಿಷಯ ಪ್ರಸ್ತಾಪಿಸುವಿರೆಂಬುದನ್ನು ಅಲ್ಲಾಹನು ಬಲ್ಲನು. ಏನಿದ್ದರೂ ನೀವು ಅವರೊಡನೆ (ಈ ವಿಷಯವನ್ನು) ನಿಯಮ ಪ್ರಕಾರ ಹೇಳಬೇಕೇ ಹೊರತು, ಅವರಿಗೆ ರಹಸ್ಯ ವಾಗ್ದಾನ ಮಾಡಬಾರದು ಮತ್ತು ನಿರ್ದಿಷ್ಟ ಅವಧಿಯು (ಇದ್ದತ್) ಮುಗಿಯುವ ತನಕ ನೀವು ವಿವಾಹ ಬಂಧನದ ನಿರ್ಧಾರ ಕೈಗೊಳ್ಳಬಾರದು. ನಿಮ್ಮ ಮನದೊಳಗಿರುವ ವಿಚಾರಗಳನ್ನು ಅಲ್ಲಾಹನು ಬಲ್ಲನೆಂಬುದು ನಿಮಗೆ ತಿಳಿದಿರಲಿ ಮತ್ತು ನೀವು ಅವನ (ಅಲ್ಲಾಹನ) ವಿಷಯದಲ್ಲಿ ಎಚ್ಚರವಾಗಿರಿ. ಹಾಗೆಯೇ ಅಲ್ಲಾಹನು ತುಂಬಾ ಕ್ಷಮಿಸುವವನು ಹಾಗೂ ಸಂಯಮಿ ಎಂಬುದು ನಿಮಗೆ ತಿಳಿದಿರಲಿ

[236] ನೀವು ನಿಮ್ಮ ಮಹಿಳೆಯರನ್ನು ಮುಟ್ಟುವ ಮುನ್ನವೇ ಅಥವಾ ಅವರಿಗೆ ಕೊಡಬೇಕಾದ ‘ಮಹ್ರ್’ಅನ್ನು ನಿಗದಿ ಪಡಿಸುವ ಮುನ್ನವೇ ಅವರನ್ನು ವಿಚ್ಛೇದಿಸಿದರೆ ನಿಮ್ಮ ಮೇಲೆ ದೋಷವಿಲ್ಲ. ಆದರೆ (ಆ ವೇಳೆ) ನೀವು ಅವರಿಗೆ, ಒಂದು ಸೂಕ್ತ ಮೊತ್ತವನ್ನು ಕೊಡಿರಿ, (ಈ ವಿಷಯದಲ್ಲಿ) ಸಂಪನ್ನನಿಗೆ ಅವನ ಶಕ್ತಿಯನುಸಾರ ಮತ್ತು ಬಡವನಿಗೆ ಅವನ ಶಕ್ತಿಯನುಸಾರ ಹೊಣೆಗಾರಿಕೆ ಇದೆ. ನಿಯಮ ಪ್ರಕಾರ ನೀಡಬೇಕಾದ ಈ ಕೊಡುಗೆ ನೀಡುವುದು ಸಜ್ಜನರ ಕರ್ತವ್ಯವಾಗಿದೆ

[237] ನೀವು ಅವರನ್ನು ಮುಟ್ಟುವ ಮುನ್ನವೇ ವಿಚ್ಛೇದಿಸಿದರೆ ಮತ್ತು ಅವರಿಗೆ ಕೊಡಬೇಕಾದ ‘ಮಹ್ರ್’ ಅನ್ನು ನೀವು ಮೊದಲೇ ನಿಗದಿಗೊಳಿಸಿದ್ದರೆ, ನಿಗದಿತ ಮೊತ್ತದ ಅರ್ಧಾಂಶವನ್ನು ಕಡ್ಡಾಯವಾಗಿ ಪಾವತಿಸಬೇಕು – ಆ ಮಹಿಳೆಯರೇ ಅದನ್ನು ಕ್ಷಮಿಸಿಬಿಟ್ಟ ಅಥವಾ ವಿವಾಹದ ನಿಯಂತ್ರಣ ಹೊತ್ತವನು ಅದನ್ನು ಕ್ಷಮಿಸಿ ಬಿಟ್ಟ ಹೊರತು. ಮತ್ತು ನೀವು ಕ್ಷಮಿಸಿದರೆ (ಪೂರ್ಣ ಮೊತ್ತ ಪಾವತಿಸಿದರೆ) ಅದು ಧರ್ಮನಿಷ್ಠೆಗೆ ಹತ್ತಿರವಿರುವ ಧೋರಣೆಯಾಗಿದೆ. ನೀವು ಪರಸ್ಪರ (ವ್ಯವಹಾರಗಳಲ್ಲಿ) ಔದಾರ್ಯವನ್ನು ಮರೆಯಬಾರದು. ಖಂಡಿತವಾಗಿಯೂ ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ

[238] ನೀವು ನಮಾಝನ್ನು ಎಚ್ಚರಿಕೆಯಿಂದ ಪಾಲಿಸಿರಿ. ವಿಶೇಷವಾಗಿ ಮಧ್ಯದ ನಮಾಝನ್ನು (ಪಾಲಿಸಿರಿ) ಮತ್ತು ಅಲ್ಲಾಹನ ಮುಂದೆ ವಿಧೇಯರಾಗಿ (ಆರಾಧನೆಗೆ) ನಿಲ್ಲಿರಿ

[239] ನಿಮಗೆ (ಆಕ್ರಮಣದ) ಭಯವಿದ್ದರೆ (ಅಂತಹ ತುರ್ತು ಸನ್ನಿವೇಶದಲ್ಲೂ) ಕಾಲ್ನಡಿಗೆಯಲ್ಲಿರುವ ಅಥವಾ ಸವಾರರಾಗಿರುವ ಸ್ಥಿತಿಯಲ್ಲೇ (ನಮಾಝ್ ಸಲ್ಲಿಸಿರಿ). ಆ ಬಳಿಕ ನಿಮಗೆ ಶಾಂತಿ ದೊರೆತಾಗ, ಈ ಹಿಂದೆ ನಿಮಗೆ ತಿಳಿಯದೆ ಇದ್ದಾಗ ಅವನು ನಿಮಗೆ ಕಲಿಸಿಕೊಟ್ಟ ಪ್ರಕಾರ ಅಲ್ಲಾಹನನ್ನು ಸ್ಮರಿಸಿರಿ

[240] ನಿಮ್ಮ ಪೈಕಿ, ಪತ್ನಿಯರನ್ನು ಬಿಟ್ಟು ಮೃತರಾಗುವವರು ತಮ್ಮ ಪತ್ನಿಯರ ಪರವಾಗಿ- ಅವರಿಗೆ ಒಂದು ವರ್ಷ ಜೀವನಾಂಶ ಒದಗಿಸಬೇಕೆಂದು ಮತ್ತು ಅವರನ್ನು ಮನೆಯಿಂದ ಹೊರ ಹಾಕಬಾರದೆಂದು ಉಯಿಲು ಮಾಡಿರಬೇಕು. ಇನ್ನು, ಅವರು ತಾವಾಗಿಯೇ ಹೊರಟು ಹೋದಲ್ಲಿ – ಅವರು ನಿಯಮ ಪ್ರಕಾರ ತಮ್ಮ ಸ್ವಂತದ ವಿಷಯದಲ್ಲಿ ಏನೇ ಮಾಡಿದರೂ ನಿಮ್ಮ ಮೇಲೆ ದೋಷವೇನಿಲ್ಲ. ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[241] ಮತ್ತು ವಿಚ್ಛೇದಿತ ಮಹಿಳೆಯರಿಗೆ ನಿಯಮಾನುಸಾರ ಏನಾದರೂ ಕೊಡುಗೆ ನೀಡಬೇಕು. ಅದು ಧರ್ಮ ನಿಷ್ಠರ ಕರ್ತವ್ಯವಾಗಿದೆ

[242] ನೀವು ಅರ್ಥ ಮಾಡಿಕೊಳ್ಳಬೇಕೆಂದು ಈ ರೀತಿ ಅಲ್ಲಾಹನು ತನ್ನ ವಚನಗಳನ್ನು ನಿಮಗೆ ವಿವರಿಸಿ ಕೊಡುತ್ತಾನೆ

[243] ತಮ್ಮ ನೆಲೆಗಳನ್ನು ಬಿಟ್ಟು ಹೊರಟ ಆ ಮಂದಿಯನ್ನು ನೀವು ಕಂಡಿರಾ? ಅವರು ಸಾವಿರಾರು ಸಂಖ್ಯೆಯಲ್ಲಿದ್ದರು, ಆದರೆ ಮರಣಕ್ಕೆ ಅಂಜಿದ್ದರು. ಅಲ್ಲಾಹನು ಅವರೊಡನೆ ‘‘ಸಾಯಿರಿ’’ ಎಂದನು. ಆ ಬಳಿಕ ಅವರನ್ನು ಜೀವಂತಗೊಳಿಸಿದನು. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರನಾಗಿದ್ದಾನೆ. ಆದರೆ ಮಾನವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ

[244] ನೀವು ಅಲ್ಲಾಹನ ಮಾರ್ಗದಲ್ಲೇ ಯುದ್ಧ ಮಾಡಿರಿ ಮತ್ತು ನಿಮಗೆ ತಿಳಿದಿರಲಿ, ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ತಿಳಿದಿರುವವನಾಗಿದ್ದಾನೆ

[245] ಯಾರಿದ್ದಾರೆ, ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುವವರು? ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ ಅವನಿಗೆ (ಮರಳಿಸುವನು). (ಸಂಪತ್ಸಾಧನಗಳನ್ನು) ಸೀಮಿತಗೊಳಿಸುವವನೂ, ವಿಶಾಲಗೊಳಿಸುವವನೂ ಅಲ್ಲಾಹನೇ. ಕೊನೆಗೆ ನೀವು ಅವನೆಡೆಗೇ ಮರಳಿಸಲ್ಪಡುವಿರಿ

[246] ಇಸ್ರಾಈಲರ ಸಂತತಿಯಲ್ಲಿನ, ಮೂಸಾರ ಅನಂತರದ ಒಂದು ಪಂಗಡವನ್ನು ನೀವು ಕಾಣಲಿಲ್ಲವೇ? ಅವರು ತಮ್ಮ ಪ್ರವಾದಿಯೊಡನೆ, ‘‘ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಂತಾಗಲು, ನಮಗಾಗಿ ಒಬ್ಬ ದೊರೆಯನ್ನು ನೇಮಿಸಿರಿ’’ ಎಂದರು. ‘‘ನಿಮ್ಮ ಮೇಲೆ ಯುದ್ಧವು ಕಡ್ಡಾಯವಾಗಿ ಬಿಟ್ಟಾಗ ನೀವು ಯುದ್ಧ ಮಾಡದೆ ಇರುವುದಿಲ್ಲ ತಾನೇ?’’ ಎಂದು ಅವರು (ಪ್ರವಾದಿ) ಕೇಳಿದರು. ಆಗ ಅವರು, ‘‘ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದೆ ಇರಲು ನಮಗೇನಾಗಿದೆ? ನಮ್ಮನ್ನಂತು ನಮ್ಮ ನೆಲೆಗಳಿಂದ ಹೊರದಬ್ಬಲಾಗಿದೆ ಮತ್ತು ನಮ್ಮ ಮಕ್ಕಳಿಂದ ನಮ್ಮನ್ನು ದೂರಗೊಳಿಸಲಾಗಿದೆ’’ ಎಂದರು. ಕೊನೆಗೆ ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲಿನ ಕೇವಲ ಕೆಲವರ ಹೊರತು ಉಳಿದವರು ಮುಖ ತಿರುಗಿಸಿಕೊಂಡರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು

[247] ‘‘ಅಲ್ಲಾಹನು ನಿಮಗಾಗಿ, ತಾಲೂತ್‌ರನ್ನು ದೊರೆಯಾಗಿ ನೇಮಿಸಿದ್ದಾನೆ’’ ಎಂದು ಅವರೊಡನೆ, ಅವರ ಪ್ರವಾದಿಯು ಹೇಳಿದರು. ಆಗ ಅವರು ‘‘ನಮ್ಮ ಮೇಲೆ ಅವನ ದೊರೆತನ ನಡೆಯಲು ಹೇಗೆ ಸಾಧ್ಯ? ದೊರೆತನಕ್ಕಂತು ನಾವೇ ಅವನಿಗಿಂತ ಹೆಚ್ಚು ಅರ್ಹರಾಗಿದ್ದೇವೆ. ಅವನಿಗಂತೂ, ಸಂಪತ್ತಿನಲ್ಲೂ ವೈಶಾಲ್ಯ ನೀಡಲಾಗಿಲ್ಲ’’ ಎಂದರು. ಅವರು (ಪ್ರವಾದಿ) ಹೇಳಿದರು; ‘‘ಖಂಡಿತವಾಗಿಯೂ ಅಲ್ಲಾಹನೇ ನಿಮ್ಮ ಮೇಲೆ ಅವನನ್ನು ಆರಿಸಿಕೊಂಡಿದ್ದಾನೆ ಮತ್ತು ಜ್ಞಾನದಲ್ಲೂ ಶರೀರದಲ್ಲೂ ಅವನಿಗೆ ಹೆಚ್ಚಿನ ಸಾಮರ್ಥ್ಯ ನೀಡಿದ್ದಾನೆ. ಅಲ್ಲಾಹನಂತು ತನ್ನ ಸಾಮ್ರಾಜ್ಯವನ್ನು ತಾನಿಚ್ಛಿಸಿದವರಿಗೆ ನೀಡುತ್ತಾನೆ ಮತ್ತು ಅಲ್ಲಾಹನು ತುಂಬಾ ವಿಶಾಲನೂ ಜ್ಞಾನಿಯೂ ಆಗಿದ್ದಾನೆ’’

[248] ಅವರೊಡನೆ ಅವರ ಪ್ರವಾದಿ ಹೇಳಿದರು; ‘‘ಖಂಡಿತವಾಗಿಯೂ ಅವನ ಆಳ್ವಿಕೆಯ (ಸಿಂಧುತ್ವಕ್ಕೆ) ಪುರಾವೆಯಾಗಿ, ಆ ಪೆಟ್ಟಿಗೆಯು ನಿಮ್ಮ ಬಳಿಗೆ ಬರುವುದು. ಅದರಲ್ಲಿ ನಿಮ್ಮೊಡೆಯನ ಕಡೆಯಿಂದ ಬಂದ ನೆಮ್ಮದಿಯ ಸಾಧನಗಳಿವೆ ಮತ್ತು ಮೂಸಾರ ಸಂತತಿ ಹಾಗೂ ಹಾರೂನರ ಸಂತತಿಯು ಬಿಟ್ಟು ಹೋದ ಉಳಿಕೆಗಳಿವೆ. ಅದನ್ನು ಮಲಕ್‌ಗಳು ಹೊತ್ತಿದ್ದಾರೆ. ನೀವು ವಿಶ್ವಾಸಿಗಳಾಗಿದ್ದರೆ ಖಂಡಿತವಾಗಿಯೂ ಅದರಲ್ಲಿ ನಿಮಗಾಗಿ ಪುರಾವೆ ಇದೆ’’

[249] ತಾಲೂತ್, ಸೇನೆಯೊಂದಿಗೆ ಹೊರಟಾಗ ಹೇಳಿದರು; ‘‘ಅಲ್ಲಾಹನು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಅದರ ನೀರು ಕುಡಿಯುವವನು ನನ್ನವನಲ್ಲ. ಅದರ ರುಚಿಯನ್ನೇ ನೋಡದವನು ಮಾತ್ರ ಖಂಡಿತ ನನ್ನವನು – ಯಾರಾದರೂ ತನ್ನ ಕೈಯಿಂದ, ಒಂದು ಬೊಗಸೆಯಷ್ಟು ಮಾತ್ರ ಕುಡಿದರೆ ತಪ್ಪಲ್ಲ’. ಆದರೆ ಅವರಲ್ಲಿನ ಕೇವಲ ಕೆಲವರ ಹೊರತು ಇತರೆಲ್ಲರೂ ಆ ಹೊಳೆಯ ನೀರನ್ನು ಕುಡಿದರು. ಕೊನೆಗೆ, ಆತ (ತಾಲೂತ್) ಮತ್ತು ಆತನ ಜೊತೆಗಿದ್ದ ವಿಶ್ವಾಸಿಗಳು ನದಿಯನ್ನು ದಾಟಿದಾಗ, ಆ ಮಂದಿ, ‘‘ಇಂದು ನಮ್ಮ ಬಳಿ, ಜಾಲೂತ್ ಮತ್ತವನ ಪಡೆಗಳನ್ನು ಎದುರಿಸುವ ಶಕ್ತಿ ಉಳಿದಿಲ್ಲ’’ ಎಂದು ಬಿಟ್ಟರು. ಆದರೆ ತಾವು ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವರು ‘‘ಅದೆಷ್ಟೋ ಬಾರಿ, ಸಣ್ಣ ಪಡೆಗಳು ಅಲ್ಲಾಹನ ಅನುಗ್ರಹದಿಂದ ದೊಡ್ಡ ಪಡೆಗಳನ್ನು ಸೋಲಿಸಿದ್ದುಂಟು. ಅಲ್ಲಾಹನಂತು ಸಹನಶೀಲರ ಜೊತೆಗಿದ್ದಾನೆ’’ ಎಂದರು

[250] ಹೀಗೆ, ಜಾಲೂತ್ ಮತ್ತವನ ಸೇನೆಯೊಂದಿಗೆ ಅವರ ಮುಖಾಮುಖಿಯಾದಾಗ, ಅವರು ‘‘ನಮ್ಮೊಡೆಯಾ, ನಮಗೆ ಸಹನೆಯನ್ನು ದಯಪಾಲಿಸು ಹಾಗೂ ನಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸು ಮತ್ತು ಧಿಕ್ಕಾರಿ ಸಮೂಹದ ವಿರುದ್ಧ ನಮಗೆ ವಿಜಯ ನೀಡು’’ ಎಂದು ಪ್ರಾರ್ಥಿಸಿದರು

[251] ಕೊನೆಗೆ ಅವರು (ತಾಲೂತರ ಪಡೆ) ಅಲ್ಲಾಹನ ಅನುಗ್ರಹದಿಂದ ಅವರನ್ನು (ಜಾಲೂತನ ಪಡೆಯನ್ನು) ಸೋಲಿಸಿ ಬಿಟ್ಟರು ಮತ್ತು ದಾವೂದರು ಜಾಲೂತನನ್ನು ಕೊಂದರು. ಆ ಬಳಿಕ ಅಲ್ಲಾಹನು ಅವರಿಗೆ (ದಾವೂದರಿಗೆ) ಸಾಮ್ರಾಜ್ಯವನ್ನು ಮತ್ತು ಯುಕ್ತಿಯನ್ನು ನೀಡಿದನು ಮತ್ತು ತಾನಿಚ್ಛಿಸಿದ್ದನ್ನು ಅವರಿಗೆ ಕಲಿಸಿಕೊಟ್ಟನು. ಈ ರೀತಿ ಅಲ್ಲಾಹನು ಕೆಲವರನ್ನು ಮತ್ತೆ ಕೆಲವರ ಮೂಲಕ ತೊಲಗಿಸದೆ ಇದ್ದಿದ್ದರೆ, ಭೂಮಿಯಲ್ಲಿ ಖಂಡಿತ ವಿನಾಶ ಮೆರೆಯುತ್ತಿತ್ತು. ನಿಜವಾಗಿ ಅಲ್ಲಾಹನು ಸಕಲ ಲೋಕಗಳ ಪಾಲಿಗೆ ಉದಾರನಾಗಿದ್ದಾನೆ

[252] (ದೂತರೇ,) ಇವು, ನಾವು ನಿಮಗೆ ಸರಿಯಾಗಿ ಓದಿ ಕೇಳಿಸುತ್ತಿರುವ ಅಲ್ಲಾಹನ ವಚನಗಳು. ಮತ್ತು ನೀವು ನಿಸ್ಸಂದೇಹವಾಗಿ ಅಲ್ಲಾಹನ ಒಬ್ಬ ದೂತರಾಗಿರುವಿರಿ

[253] ಆ ದೂತರಲ್ಲಿ ಕೆಲವರಿಗೆ ನಾವು ಇತರ ಕೆಲವರಿಗಿಂತ ಹೆಚ್ಚಿನ ಹಿರಿಮೆಯನ್ನು ನೀಡಿರುವೆವು. ಅವರಲ್ಲಿ ಒಬ್ಬರೊಡನೆ ಅಲ್ಲಾಹನು ಮಾತನಾಡಿದ್ದನು ಹಾಗೂ ಅವರಲ್ಲಿ ಕೆಲವರ ಸ್ಥಾನವನ್ನು ಅವನು ಉನ್ನತಗೊಳಿಸಿದ್ದನು. ನಾವು ಮರ್ಯಮರ ಪುತ್ರ ಈಸಾರಿಗೆ ಸ್ಪಷ್ಟ ಪುರಾವೆಗಳನ್ನು ನೀಡಿದ್ದೆವು ಮತ್ತು ಪವಿತ್ರ ಆತ್ಮದ (ಜಿಬ್ರೀಲ್‌ರ) ಮೂಲಕ ಅವರಿಗೆ ಬಲ ಒದಗಿಸಿದ್ದನು. ಅಲ್ಲಾಹನು ಬಯಸಿದ್ದರೆ, ಅವರ (ಆ ದೂತರ) ಬಳಿಕ ಬಂದವರು (ಮುಂದಿನ ಪೀಳಿಗೆಗಳು) ಸತ್ಯದ ಸ್ಪಷ್ಟ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕ ಪರಸ್ಪರ ರಕ್ತಪಾತ ನಡೆಸುತ್ತಿರಲಿಲ್ಲ. ಆದರೂ ಅವರು ಪರಸ್ಪರ ಭಿನ್ನಾಭಿಪ್ರಾಯ ತಾಳಿದರು. ಅವರಲ್ಲಿ ವಿಶ್ವಾಸಿಗಳೂ ಇದ್ದರು ಧಿಕ್ಕಾರಿಗಳೂ ಇದ್ದರು. ಅಲ್ಲಾಹನು ಬಯಸಿದ್ದರೆ ಅವರು ಪರಸ್ಪರ ರಕ್ತಪಾತ ನಡೆಸುತ್ತಿರಲಿಲ್ಲ. ಆದರೆ ಅಲ್ಲಾಹನು ತಾನು ಬಯಸಿದ್ದನ್ನೇ ಮಾಡುತ್ತಾನೆ

[254] ವಿಶ್ವಾಸಿಗಳೇ, ಯಾವುದೇ ವ್ಯಾಪಾರವಾಗಲಿ ಸ್ನೇಹವಾಗಲಿ ಶಿಫಾರಸ್ಸಾಗಲಿ ನಡೆಯದ ದಿನವೊಂದು ಬರುವ ಮುನ್ನವೇ, ನಾವು ನಿಮಗೆ ಏನನ್ನು ನೀಡಿರುವೆವೋ ಅದರಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ. ಧಿಕ್ಕಾರಿಗಳೇ ಅಕ್ರಮಿಗಳು

[255] ಅಲ್ಲಾಹ್ – ಅವನ ಹೊರತು ಪೂಜೆಗೆ ಅರ್ಹರು ಬೇರಾರೂ ಇಲ್ಲ. ಅವನು ಸದಾ ಜೀವಂತನು, ಎಲ್ಲರ ನಿಯಂತ್ರಕನು. ತೂಕಡಿಕೆಯಾಗಲಿ ನಿದ್ದೆಯಾಗಲಿ ಅವನನ್ನು ಬಾಧಿಸುವುದಿಲ್ಲ. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನದೇ. ಅವನ ಮುಂದೆ, ಅವನ ಅಪ್ಪಣೆ ಇಲ್ಲದೆ ಶಿಫಾರಸು ಮಾಡಬಲ್ಲವರು ಯಾರು? ಅವರ (ಜನರ) ಮುಂದಿರುವ ಮತ್ತು ಅವರ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅವನ ಜ್ಞಾನದ ಯಾವ ಅಂಶವನ್ನೂ ಗ್ರಹಿಸಲು ಅವರಿಗೆ ಸಾಧ್ಯವಿಲ್ಲ – ಅವನೇ ಇಚ್ಛಿಸುವಷ್ಟರ ಹೊರತು. ಅವನ ಅಧಿಕಾರ ಪೀಠವು ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿದೆ. ಅವುಗಳ ಸಂರಕ್ಷಣೆಯ ಕೆಲಸವು ಅವನನ್ನು ದಣಿಸುವುದಿಲ್ಲ. ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿದ್ದಾನೆ

[256] ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ. ಎಲ್ಲ ಮಿಥ್ಯ ಶಕ್ತಿಗಳನ್ನು ಧಿಕ್ಕರಿಸಿ ಅಲ್ಲಾಹನಲ್ಲಿ ನಂಬಿಕೆ ಇಟ್ಟವನು ಬಲಿಷ್ಠ ಆಶ್ರಯವೊಂದನ್ನು ಅವಲಂಬಿಸಿದನು. ಅದು ಎಂದಿಗೂ ಮುರಿಯದ ಆಶ್ರಯವಾಗಿದೆ ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ

[257] ಅಲ್ಲಾಹನು ವಿಶ್ವಾಸಿಗಳ ಪೋಷಕನಾಗಿದ್ದಾನೆ. ಅವನು ಅವರನ್ನು ಕತ್ತಲುಗಳಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಸತ್ಯವನ್ನು ಧಿಕ್ಕರಿಸಿದವರ ಪಾಲಿಗೆ, ಮಿಥ್ಯ ಶಕ್ತಿಗಳೇ ಪರಮಮಿತ್ರರು. ಅವು ಅವರನ್ನು ಬೆಳಕಿನಿಂದ ಹೊರತೆಗೆದು ಕತ್ತಲುಗಳೆಡೆಗೆ ನಡೆಸುತ್ತವೆ. ಅವರು ನರಕದವರು. ಅವರು ಸದಾಕಾಲ ಅಲ್ಲೇ ಇರುವರು

[258] ಇಬ್ರಾಹೀಮರೊಡನೆ ಅವರ ಒಡೆಯನ ಕುರಿತು ಜಗಳಕ್ಕಿಳಿದಾತನನ್ನ್ನು ನೀವು ಕಾಣಲಿಲ್ಲವೇ? ಅಲ್ಲಾಹನು ಆತನಿಗೆ ಸಾಮ್ರಾಜ್ಯವನ್ನು ನೀಡಿದ್ದನು. ‘‘ಜೀವಂತ ಗೊಳಿಸುವವನು ಮತ್ತು ಸಾಯಿಸುವವನೇ ನನ್ನ ದೇವರು’’ ಎಂದು ಇಬ್ರಾಹೀಮರು ಹೇಳಿದಾಗ ಆತನು ‘‘ನಾನೂ ಜೀವ ನೀಡುತ್ತೇನೆ ಮತ್ತು ನಾನೂ ಸಾಯಿಸುತ್ತೇನೆ’’ ಎಂದನು. ಆಗ ಇಬ್ರಾಹೀಮರು ‘‘ಅಲ್ಲಾಹನು ಸೂರ್ಯವನ್ನು ಪೂರ್ವದಿಂದ ಉದಯಿಸುತ್ತಾನೆ ನೀನು ಅದನ್ನು ಪಶ್ಚಿಮದಿಂದ ಉದಯಿಸು’’ ಎಂದರು. ಆ ಧಿಕ್ಕಾರಿ ಬೆಚ್ಚಿಬಿದ್ದನು. ಅಲ್ಲಾಹನು ಅಕ್ರಮಿಗಳ ಪಂಗಡಕ್ಕೆ ಮಾರ್ಗದರ್ಶನ ನೀಡುವುದಿಲ್ಲ

[259] ಅಥವಾ, ತನ್ನ ಚಪ್ಪರಗಳ ಮೇಲೆ ಕುಸಿದು ಬಿದ್ದಿದ್ದ (ಸಂಪೂರ್ಣ ಬುಡಮೇಲಾಗಿದ್ದ) ಒಂದು ಊರಿನಿಂದ ಹಾದು ಹೋಗುತ್ತಿದ್ದ ವ್ಯಕ್ತಿಯನ್ನು (ನೀವು ಕಾಣಲಿಲ್ಲವೇ)? ಅವನು ‘‘ಇದು (ಈ ಊರು, ಹೀಗೆ) ಸತ್ತು ಬಿದ್ದ ಬಳಿಕ ಇದನ್ನು ಅಲ್ಲಾಹನು ಹೇಗೆ ತಾನೇ ಮತ್ತೆ ಜೀವಂತಗೊಳಿಸುತ್ತಾನೆ?’’ ಎಂದನು. ಅಲ್ಲಾಹನು ಆತನನ್ನು ನೂರು ವರ್ಷಗಳ ಅವಧಿಗೆ ಸಾಯಿಸಿದನು. ಆ ಬಳಿಕ ಅವನನ್ನು ಮತ್ತೆ ಜೀವಂತಗೊಳಿಸಿ ‘‘ನೀನು (ಸತ್ತ ಸ್ಥಿತಿಯಲ್ಲಿ) ಎಷ್ಟು ಕಾಲ ಇದ್ದೆ ?’’ ಎಂದು ವಿಚಾರಿಸಿದನು. ‘‘ನಾನು ಒಂದು ದಿನ ಅಥವಾ ದಿನದ ಒಂದು ಭಾಗದಷ್ಟು ಕಾಲ ಆ ಸ್ಥಿತಿಯಲ್ಲಿದ್ದೆ ’’ ಎಂದು ಆತನು ಹೇಳಿದನು. ಆಗ ಅವನು (ಅಲ್ಲಾಹನು) ಹೇಳಿದನು; ‘‘ನಿಜವಾಗಿ ನೀನು ನೂರು ವರ್ಷ (ಆ ಸ್ಥಿತಿಯಲ್ಲಿ) ಇದ್ದೆ. ಇದೀಗ ನೀನು ನಿನ್ನ ಆಹಾರ ಮತ್ತು ನಿನ್ನ ಪಾನೀಯವನ್ನು ನೋಡು. ಅವು ಹಳಸಲಾಗಿಲ್ಲ. ಹಾಗೆಯೇ ನಿನ್ನ ಕತ್ತೆಯನ್ನೊಮ್ಮೆ ನೋಡು. ನಾವು ನಿನ್ನನ್ನು ಜನರ ಪಾಲಿಗೆ ಒಂದು ಪುರಾವೆಯಾಗಿಸುವೆವು. ಮತ್ತು (ಆ ಸತ್ತ ಕತ್ತೆಯ) ಎಲುಬುಗಳನ್ನು ನಾವು ಯಾವ ರೀತಿ ಮತ್ತೆ ಜೋಡಿಸುತ್ತೇವೆ ಮತ್ತು ಅವುಗಳಿಗೆ ಯಾವ ರೀತಿ ಮಾಂಸದ ಪೋಷಾಕನ್ನು ತೊಡಿಸುತ್ತೇವೆಂದು ನೋಡು’’. ಕೊನೆಗೆ ಆತನಿಗೆ (ಸತ್ಯವು) ಸ್ಪಷ್ಟವಾದಾಗ ಅವನು ‘‘ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನೆಂಬುದು ನನಗೆ ತಿಳಿಯಿತು’’ ಎಂದನು

[260] ಮತ್ತು ಇಬ್ರಾಹೀಮರು, ‘‘ನನ್ನೊಡೆಯಾ, ನೀನು ಸತ್ತವರನ್ನು ಜೀವಂತ ಗೊಳಿಸುವುದು ಹೇಗೆ ಎಂಬುದನ್ನು ನನಗೆ ತೋರಿಸಿಕೊಡು’’ ಎಂದಾಗ ಅವನು (ಅಲ್ಲಾಹನು) ‘‘ನಿಮಗೆ ನಂಬಿಕೆ ಇಲ್ಲವೇ?’’ ಎಂದು ಕೇಳಿದನು. ಅವರು, ‘‘(ನಂಬಿಕೆ) ಖಂಡಿತ ಇದೆ. ಆದರೂ ನನ್ನ ಮನಸ್ಸಿನ ತೃಪ್ತಿಗಾಗಿ (ಕೇಳುತ್ತಿದ್ದೇನೆ)’’ ಎಂದರು. ಅವನು ಹೇಳಿದನು; ‘‘ನೀವೀಗ ನಾಲ್ಕು ಪಕ್ಷಿಗಳನ್ನು ಹಿಡಿದು ತನ್ನಿರಿ ಮತ್ತು ಅವು ನಿಮ್ಮನ್ನು ಗುರುತಿಸುವಂತೆ ಅವುಗಳನ್ನು ಪಳಗಿಸಿರಿ. ಆ ಬಳಿಕ, (ಅವುಗಳನ್ನು ತುಂಡರಿಸಿ) ಅವುಗಳ ಭಾಗಗಳನ್ನು ಪ್ರತ್ಯೇಕ ಬೆಟ್ಟಗಳ ಮೇಲಿಟ್ಟು, ಅವುಗಳನ್ನು ಕೂಗಿ ಕರೆಯಿರಿ. ಅವು ಓಡೋಡಿ ನಿಮ್ಮ ಬಳಿಗೆ ಬರುವವು. ನಿಮಗೆ ತಿಳಿದಿರಲಿ, ಅಲ್ಲಾಹನು ಮಹಾ ಪ್ರಬಲನು ಮತ್ತು ಯುಕ್ತಿವಂತನಾಗಿದ್ದಾನೆ ’’

[261] ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರ ಉದಾಹರಣೆಯು, ಒಂದೊಂದು ತೆನೆಯಲ್ಲೂ ತಲಾ ನೂರು ಕಾಳುಗಳು ಇರುವ ಏಳೇಳು ತೆನೆಗಳನ್ನು ಮೊಳೆಯಿಸುವ ಒಂದು ಕಾಳಿನಂತಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಅಭಿವೃದ್ಧಿಯನ್ನು ನೀಡುತ್ತಾನೆ. ಅಲ್ಲಾಹನು ಬಹಳ ವೈಶಾಲ್ಯ ಉಳ್ಳವನೂ ಜ್ಞಾನಿಯೂ ಆಗಿದ್ದಾನೆ

[262] ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು (ದಾನ) ಮಾಡುವವರು ಮತ್ತು ತಾವು ಖರ್ಚು (ದಾನ) ಮಾಡಿದ ಬೆನ್ನಿಗೇ, (ಫಲಾನುಭವಿಗಳ ಮೇಲೆ) ಋಣಭಾರ ಹೊರಿಸದವರು ಹಾಗೂ (ಅವರನ್ನು)ಪೀಡಿಸದವರು – ಅವರಿಗಾಗಿ ಅವರ ಪ್ರತಿಫಲವು, ಅವರ ಒಡೆಯನ ಬಳಿ ಇದೆ. ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು

[263] ಒಂದು ಒಳ್ಳೆಯ ಮಾತು ಮತ್ತು ಕ್ಷಮಾಯಾಚನೆಯು, ದಾನ ನೀಡಿ ಪೀಡಿಸುವುದಕ್ಕಿಂತ ಉತ್ತಮ. ಅಲ್ಲಾಹನಂತು ಸಕಲ ಅಪೇಕ್ಷೆಗಳಿಂದ ಮುಕ್ತನೂ ಅಪಾರ ಸಂಯಮಿಯೂ ಆಗಿದ್ದಾನೆ

[264] ವಿಶ್ವಾಸಿಗಳೇ, ಜನರಿಗೆ ತೋರಿಸುವುದಕ್ಕಾಗಿ ತನ್ನ ಸಂಪತ್ತನ್ನು ಖರ್ಚು ಮಾಡುವವನಂತೆ ಮತ್ತು ಅಲ್ಲಾಹನಲ್ಲಾಗಲಿ, ಅಂತಿಮ ದಿನದಲ್ಲಾಗಲಿ ನಂಬಿಕೆ ಇಲ್ಲದವನಂತೆ, ನೀವು ಋಣಭಾರ ಹೊರಿಸುವ ಹಾಗೂ ಪೀಡಿಸುವ ಮೂಲಕ ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ. ಅಂಥವನ ಉದಾಹರಣೆಯು, ಮಣ್ಣು ಮುಚ್ಚಿದ, ನುಣುಪಾದ ಬಂಡೆಯಂತಿದೆ. ಅದರ ಮೇಲೆ ಸುರಿಯುವ ಬಿರುಸಾದ ಮಳೆಯು ಅದನ್ನು ಶುಭ್ರಗೊಳಿಸಿಬಿಡುತ್ತದೆ. ತಮ್ಮ ಯಾವ ಸಂಪಾದನೆಯ ಮೇಲೂ ಅವರಿಗೆ ನಿಯಂತ್ರಣವಿಲ್ಲ. ಅಲ್ಲಾಹನು, ಧಿಕ್ಕಾರಿಗಳಿಗೆ ಸರಿದಾರಿಯನ್ನು ತೋರಿಸುವುದಿಲ್ಲ

[265] ಇನ್ನು, ಅಲ್ಲಾಹನ ಮೆಚ್ಚುಗೆಯನ್ನರಸಿ ಹಾಗೂ ಸ್ಥಿರಚಿತ್ತದೊಂದಿಗೆ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಉದಾಹರಣೆಯು, ಎತ್ತರದ ನೆಲದಲ್ಲಿರುವ ಒಂದು ತೋಟದಂತಿದೆ. ಅದರ ಮೇಲೆ ಬಿರುಸಾದ ಮಳೆ ಸುರಿದಾಗ, ಅದು ಎರಡು ಪಟ್ಟು ಫಲ ನೀಡುತ್ತದೆ. ಬಿರುಸಾದ ಮಳೆ ಸುರಿಯದಿದ್ದರೆ, ಕೇವಲ ಜಿನುಗು ಮಳೆಯೂ ಅದಕ್ಕೆ ಸಾಕಾಗಿ ಬಿಡುತ್ತದೆ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ

[266] ನಿಮ್ಮಲ್ಲಿ, ಎಲ್ಲ ಬಗೆಯ ಹಣ್ಣು ಹಂಪಲುಗಳಿರುವ ಹಾಗೂ ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ, ಖರ್ಜೂರ ಮತ್ತು ದ್ರಾಕ್ಷಿಗಳ ಒಂದು ತೋಟವಿರುವ ಯಾರಾದರೂ ತಾನು ವೃದ್ಧನಾಗಿ, ತನ್ನ ಮಕ್ಕಳು ದುರ್ಬಲರಾಗಿರುವಾಗ, ಆ ತೋಟದ ಮೇಲೆ ಬೆಂಕಿ ತುಂಬಿದ ಬಿರುಗಾಳಿಯು ಅಪ್ಪಳಿಸಿ, ಆ ತೋಟವು ಸುಟ್ಟು ಹೋಗುವುದನ್ನು ಇಷ್ಟಪಡುವನೇ? ಈ ರೀತಿ, ನೀವು ಚಿಂತನೆ ನಡೆಸಬೇಕೆಂದು ಅಲ್ಲಾಹನು ತನ್ನ ವಚನಗಳನ್ನು ನಿಮಗೆ ವಿವರಿಸಿಕೊಡುತ್ತಾನೆ

[267] ವಿಶ್ವಾಸಿಗಳೇ, ನಿಮ್ಮ ಸಂಪಾದನೆಯಲ್ಲಿನ ಶುದ್ಧ ಭಾಗವನ್ನು ಹಾಗೂ ನಾವು ನಿಮಗಾಗಿ ಭೂಮಿಯಿಂದ ಉತ್ಪಾದಿಸುವ ಬೆಳೆಗಳ ಒಂದು ಭಾಗವನ್ನು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಮತ್ತು ಯಾವುದನ್ನು ಸ್ವತಃ ನೀವು ಕಣ್ಣು ಮುಚ್ಚಿಕೊಳ್ಳದೆ ಸ್ವೀಕರಿಸಲಾರಿರೋ, ಅಂತಹ ಮಲಿನ ಭಾಗವನ್ನು (ಹೀನ ವಸ್ತುಗಳನ್ನು, ಇತರರಿಗೆ) ನೀಡುವ ಸಂಕಲ್ಪ ಮಾಡಬೇಡಿ. ಅಲ್ಲಾಹನು ಸರ್ವ ಅಪೇಕ್ಷೆಗಳಿಂದ ಮುಕ್ತನಾಗಿರುವನು ಮತ್ತು ಪ್ರಸಂಸೆಗೆ ಪಾತ್ರನಾಗಿರುವನೆಂಬುದು ನಿಮಗೆ ತಿಳಿದಿರಲಿ

[268] ಶೈತಾನನು ನಿಮಗೆ ಬಡತನದ ಬೆದರಿಕೆ ಒಡ್ಡುತ್ತಾನೆ ಮತ್ತು ನಿಮಗೆ ಅನೈತಿಕತೆಯನ್ನು ಆದೇಶಿಸುತ್ತಾನೆ. ಅತ್ತ ಅಲ್ಲಾಹನು ನಿಮಗೆ ತನ್ನ ಕಡೆಯಿಂದ ಕ್ಷಮೆ ಮತ್ತು ಅನುಗ್ರಹದ ವಾಗ್ದಾನ ನೀಡುತ್ತಾನೆ. ಅಲ್ಲಾಹನಂತು ವಿಶಾಲನೂ ಜ್ಞಾನವುಳ್ಳವನೂ ಆಗಿದ್ದಾನೆ

[269] ಅವನು (ಅಲ್ಲಾಹನು) ತಾನಿಚ್ಛಿಸಿದವರಿಗೆ ಯುಕ್ತಿಯನ್ನು ನೀಡುತ್ತಾನೆ. ಇನ್ನು, ಯುಕ್ತಿಯನ್ನು ಪಡೆದವನು ಧಾರಾಳ ಒಳಿತನ್ನು ಪಡೆದನು. ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ

[270] ಮತ್ತು ನೀವು ಮಾಡುವ ಪ್ರತಿಯೊಂದು ಖರ್ಚನ್ನೂ ನೀವು ಹೊರುವ ಪ್ರತಿಯೊಂದು ಹರಕೆಯನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ. ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ

[271] ನೀವು ದಾನವನ್ನು ಬಹಿರಂಗವಾಗಿ ನೀಡಿದರೂ ಒಳ್ಳೆಯದೇ. ಆದರೆ ನೀವು ಅದನ್ನು ಗುಟ್ಟಾಗಿ ಬಡವರಿಗೆ ತಲುಪಿಸಿದರೆ ಅದು ನಿಮ್ಮ ಪಾಲಿಗೆ ಉತ್ತಮವಾಗಿದೆ. ಆಗ ಅವನು ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವನು. ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ

[272] (ದೂತರೇ,) ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆಯೇನೂ ನಿಮ್ಮ ಮೇಲಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. (ವಿಶ್ವಾಸಿಗಳೇ, ಸತ್ಕಾರ್ಯಕ್ಕೆ) ನೀವು ಮಾಡುವ ಎಲ್ಲ ಖರ್ಚುಗಳ ಲಾಭವು ನಿಮಗೇ ಸಿಗಲಿದೆ. ನೀವು ಅಲ್ಲಾಹನ ಮೆಚ್ಚುಗೆಗಾಗಿ ಮಾತ್ರ ಖರ್ಚು ಮಾಡಿರಿ. ಇನ್ನು, ನೀವು ಮಾಡುವ ಪ್ರತಿಯೊಂದು ಖರ್ಚು ಕೂಡಾ ಪೂರ್ಣ (ಪ್ರತಿಫಲದ) ರೂಪದಲ್ಲಿ ನಿಮಗೇ ಸಿಗಲಿದೆ ಮತ್ತು ನಿಮ್ಮ ಮೇಲೆ ಯಾವ ಅಕ್ರಮವೂ ನಡೆಯದು

[273] (ನಿಮ್ಮ ದಾನ ಧರ್ಮವು) ಅಲ್ಲಾಹನ ಮಾರ್ಗದಲ್ಲಿ ನಿರ್ಬಂಧಿತರಾಗಿರುವ ಮಂದಿಗೆ ಸಲ್ಲಲಿ. (ಧನ ಸಂಪಾದನೆಗಾಗಿ) ಭೂಮಿಯಲ್ಲಿ ಓಡಾಡುವ ಸಾಮರ್ಥ್ಯ ಅವರಿಗಿಲ್ಲ. ಅವರ ಸಂಕೋಚದ ಕಾರಣ, ಅಜ್ಞಾನಿಗಳು ಅವರನ್ನು ಶ್ರೀಮಂತರೆಂದು ಗ್ರಹಿಸುತ್ತಾರೆ. ಆದರೆ ನೀವು (ದೂತರು) ಅವರನ್ನು ಅವರ ಮುಖದಿಂದಲೇ ಗುರುತಿಸಬಲ್ಲರಿ. ಅವರು ಜನರ ಬೆನ್ನು ಹಿಡಿದು ಭಿಕ್ಷೆ ಬೇಡುವುದಿಲ್ಲ. ನೀವು ಸತ್ಕಾರ್ಯದಲ್ಲಿ ಮಾಡುವ ಎಲ್ಲ ಖರ್ಚುಗಳ ಕುರಿತು, ಅಲ್ಲಾಹನು ಖಂಡಿತ ಅರಿತಿರುತ್ತಾನೆ

[274] ತಮ್ಮ ಸಂಪತ್ತನ್ನು ಇರುಳಲ್ಲೂ ಹಗಲಲ್ಲೂ, ಗುಟ್ಟಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುವವರಿಗೆ, ಅವರ ಪ್ರತಿಫಲವು ಅವರ ಒಡೆಯನ ಬಳಿ ಇದೆ. ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು

[275] ಬಡ್ಡಿ ತಿನ್ನುವವರು (ಪುನರುತ್ಥಾನ ದಿನ), ಶೈತಾನನ ಸೋಂಕಿನಿಂದಾಗಿ ಹುಚ್ಚು ಹಿಡಿದವನು ನಿಂತಂತೆ ನಿಲ್ಲುವರು. ಏಕೆಂದರೆ ಅವರು, ವ್ಯಾಪಾರವೂ ಬಡ್ಡಿಯೂ ಸಮಾನವೆಂದು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು ವ್ಯಾಪಾರವನ್ನು ಸಮ್ಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. ಇನ್ನು, ತನಗೆ ತನ್ನ ಒಡೆಯನ ಉಪದೇಶವು ತಲುಪಿದ ಬಳಿಕ ಅದರಿಂದ (ಬಡ್ಡಿಯಿಂದ) ದೂರ ಉಳಿದವನ ಗತಕಾಲದ ಸಂಪಾದನೆಯು ಅವನಿಗೇ ಸೇರಿದೆ ಮತ್ತು ಅವನ ವಿಷಯವು ಅಲ್ಲಾಹನಿಗೆ ಬಿಟ್ಟಿದೆ. ಆದರೆ ಅದನ್ನು (ಬಡ್ಡಿ ತಿನ್ನುವ ಪಾಪವನ್ನು) ಪುನರಾವರ್ತಿಸುವವರು, ನರಕಾಗ್ನಿಯವರಾಗಿರುತ್ತಾರೆ. ಅವರು ಶಾಶ್ವತವಾಗಿ ಅಲ್ಲೇ ಇರುವರು

[276] ಅಲ್ಲಾಹನು ಬಡ್ಡಿಯನ್ನು ಅಳಿಸುತ್ತಾನೆ ಹಾಗೂ ದಾನಧರ್ಮಕ್ಕೆ ಸಮೃದ್ಧಿಯನ್ನು ಒದಗಿಸುತ್ತಾನೆ ಮತ್ತು ಅಲ್ಲಾಹನು ಕೃತಘ್ನ ಪಾಪಿಗಳನ್ನು ಪ್ರೀತಿಸುವುದಿಲ್ಲ

[277] ಸತ್ಯದಲ್ಲಿ ನಂಬಿಕೆಯುಳ್ಳವರು, ಸತ್ಕರ್ಮಗಳನ್ನು ಮಾಡಿದವರು ಮತ್ತು ನಮಾಝನ್ನು ಪಾಲಿಸಿದವರು ಹಾಗೂ ಝಕಾತ್‌ಅನ್ನು ಪಾವತಿಸಿದವರು – ಅವರಿಗಾಗಿ ಅವರ ಒಡೆಯನ ಬಳಿ ಪ್ರತಿಫಲವಿದೆ ಮತ್ತು ಅವರಿಗೆ ಯಾವ ಭಯವೂ ಇರದು ಹಾಗೂ ಅವರು ದುಃಖಿಸಲಾರರು

[278] ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ ಮತ್ತು ನೀವು ನಿಜಕ್ಕೂ ನಂಬಿಕೆ ಉಳ್ಳವರಾಗಿದ್ದರೆ, (ನಿಮಗೆ ಬರಲು) ಬಾಕಿ ಇರುವ ಬಡ್ಡಿಯನ್ನು ಬಿಟ್ಟು ಬಿಡಿರಿ

[279] ನೀವು ಹಾಗೆ ಮಾಡುವುದಿಲ್ಲವೆಂದಾದರೆ, (ನಿಮ್ಮ ವಿರುದ್ಧ) ಅಲ್ಲಾಹನ ಮತ್ತು ಅವನ ದೂತನ ಕಡೆಯಿಂದ ಯುದ್ಧ ಘೋಷಿತವಾಗಿದೆ ಎಂಬುದನ್ನು ಅರಿತುಕೊಳ್ಳಿರಿ. ನೀವಿನ್ನು ಪಶ್ಚಾತ್ತಾಪ ಪಡುವುದಾದರೆ, ನಿಮ್ಮ ಸಂಪತ್ತಿನ ಅಸಲು ನಿಮಗೇ ಸೇರಿರುತ್ತದೆ. ನೀವು ಅಕ್ರಮವೆಸಗಲೂ ಬಾರದು ಮತ್ತು ಅಕ್ರಮಕ್ಕೆ ತುತ್ತಾಗಲೂಬಾರದು

[280] ಇನ್ನು ಅವನು (ಸಾಲ ಪಡೆದವನು) ಕಷ್ಟದಲ್ಲಿದ್ದರೆ, ಸುಸ್ಥಿತಿ ಬರುವ ತನಕ (ಅವನಿಗೆ) ಕಾಲಾವಕಾಶ ಕೊಡಿರಿ. ನೀವು ಬಲ್ಲವರಾಗಿದ್ದರೆ (ಆ ಸಾಲವನ್ನು) ದಾನ ಮಾಡಿ ಬಿಡುವುದು ನಿಮ್ಮ ಪಾಲಿಗೆ ಉತ್ತಮವಾಗಿದೆ

[281] ನಿಮ್ಮನ್ನು ಅಲ್ಲಾಹನೆಡೆಗೆ ಮರಳಿಸಲಾಗುವ ದಿನದ ಕುರಿತು ಜಾಗೃತರಾಗಿರಿ. ಅಂದು ಪ್ರತಿಯೊಬ್ಬನಿಗೂ ಅವನ ದುಡಿಮೆಯ ಪೂರ್ಣ ಪ್ರತಿಫಲವನ್ನು ನೀಡಲಾಗುವುದು ಮತ್ತು ಅವರ ಮೇಲೆ ಅನ್ಯಾಯವಾಗದು

[282] ವಿಶ್ವಾಸಿಗಳೇ, ನೀವು ಒಂದು ನಿಶ್ಚಿತ ಅವಧಿಗಾಗಿ ಸಾಲದ ವ್ಯವಹಾರ ಮಾಡುವಾಗ ಅದನ್ನು ಬರೆದಿಡಿರಿ. ನಿಮ್ಮ ನಡುವೆ (ವ್ಯವಹಾರವನ್ನು) ಬರೆಯುವವನು ನ್ಯಾಯವಾಗಿ ಬರೆಯಲಿ. ಬರೆಯುವವನು ಅಲ್ಲಾಹನು ತನಗೆ ಕಲಿಸಿರುವ ಪ್ರಕಾರ ಬರೆಯುವುದಕ್ಕೆ ನಿರಾಕರಿಸಬಾರದು. ಅವನು ಬರೆಯಬೇಕು ಮತ್ತು ಹಕ್ಕುದಾರನು ಬರೆಸಬೇಕು. ಅವನು ತನ್ನ ಒಡೆಯನಾದ ಅಲ್ಲಾಹನಿಗೆ ಅಂಜುತ್ತಿರಬೇಕು ಮತ್ತು ಅವನು ಅದರಲ್ಲಿ ಏನನ್ನೂ ಕಡಿತಗೊಳಿಸಬಾರದು. ಒಂದು ವೇಳೆ ಹಕ್ಕುದಾರನು ಮಂದ ಬುದ್ಧಿಯವನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಅಥವಾ ಸ್ವತಃ ಬರೆಸಲು ಅಸಮರ್ಥನಾಗಿದ್ದರೆ, ಅವನ ಪೋಷಕನು ನ್ಯಾಯೋಚಿತವಾಗಿ ಬರೆಸಲಿ ಮತ್ತು ನೀವು (ಇಂತಹ ಒಪ್ಪಂದಗಳಿಗೆ) ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಗಳಾಗಿಸಿರಿ. ಇನ್ನು, ಇಬ್ಬರು ಪುರುಷರು ಲಭ್ಯರಾಗದಿದ್ದರೆ, ನೀವು ಒಪ್ಪುವ ಒಬ್ಬ ಪುರುಷ ಹಾಗೂ ಇಬ್ಬರು ಸ್ತ್ರೀಯರನ್ನು ಸಾಕ್ಷಿಗಳಾಗಿಸಿರಿ – ಅವರಲ್ಲಿ ಒಬ್ಬಾಕೆ ಮರೆತರೆ ಇನ್ನೊಬ್ಬಾಕೆಯು ಆಕೆಗೆ ನೆನಪಿಸಲಿಕ್ಕಾಗಿ. ಮತ್ತು ಸಾಕ್ಷಿಗಳು ತಮ್ಮನ್ನು ಕರೆಯಲಾದಾಗ ನಿರಾಕರಿಸಬಾರದು. (ವ್ಯವಹಾರವು) ಒಂದು ನಿಶ್ಚಿತ ಅವಧಿಗಾಗಿರುವಾಗ, ಅದು ಸಣ್ಣದಿರಲಿ, ದೊಡ್ಡದಿರಲಿ, ಅದನ್ನು ಬರೆಯುವ ವಿಷಯದಲ್ಲಿ ಆಲಸ್ಯ ತೋರಬೇಡಿ. ಇದು ಅಲ್ಲಾಹನ ದೃಷ್ಟಿಯಲ್ಲಿ ಹೆಚ್ಚು ನ್ಯಾಯೋಚಿತವಾದ ಹಾಗೂ ಸಾಕ್ಷಕ್ಕೆ ಹೆಚ್ಚು ಪೂರಕವಾದ ಮತ್ತು ನೀವು ಗೊಂದಲಕ್ಕೆ ಸಿಲುಕದಂತಾಗಲು ಹೆಚ್ಚು ಸಮರ್ಪಕವಾದ ವಿಧಾನವಾಗಿದೆ. ಸಾಮಾನ್ಯವಾಗಿ ನೀವು ಪರಸ್ಪರ ನಡೆಸುವ (ಪ್ರತ್ಯಕ್ಷ ವ್ಯವಹಾರವು) ಇದಕ್ಕೆ ಹೊರತಾಗಿದೆ – ಅದನ್ನು ನೀವು ಬರೆಯದಿದ್ದರೂ ನಿಮ್ಮ ಮೇಲೆ ಪಾಪವೇನಿಲ್ಲ. ನೀವು ವ್ಯವಹಾರ ಮಾಡುವಾಗ ಸಾಕ್ಷಿಗಳನ್ನು ನೇಮಿಸಿರಿ ಮತ್ತು ಬರೆಯುವವನನ್ನಾಗಲಿ, ಸಾಕ್ಷಿಯನ್ನಾಗಲಿ ಯಾರೂ ಪೀಡಿಸಬಾರದು. ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ಅದು ನಿಮ್ಮ ಪಾಲಿಗೆ ಪಾಪಕೃತ್ಯವೆನಿಸಿಕೊಳ್ಳುವುದು. ನೀವು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನೇ (ಇದನ್ನೆಲ್ಲಾ) ನಿಮಗೆ ಕಲಿಸುತ್ತಿದ್ದಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ

[283] ನೀವು ಪ್ರಯಾಣದಲ್ಲಿದ್ದರೆ ಮತ್ತು ನಿಮಗೆ ಬರೆಯುವವರು ಸಿಗದಿದ್ದರೆ, ಭದ್ರತೆಯ ಅಡವು ಪಡೆಯಿರಿ. ಇನ್ನು ನಿಮ್ಮಲ್ಲೊಬ್ಬರು ಇನ್ನೊಬ್ಬರ ಮೇಲೆ ಭರವಸೆ ಇಟ್ಟಿದ್ದರೆ, ಯಾರ ಮೇಲೆ ಭರವಸೆ ಇಡಲಾಗಿತ್ತೋ ಆತನು ತನಗೆ ವಹಿಸಿಕೊಡಲಾಗಿದ್ದ ವಸ್ತುವನ್ನು (ಅದರ ಹಕ್ಕುದಾರರಿಗೆ) ಮರಳಿಸಬೇಕು ಮತ್ತು ಅವನು ತನ್ನ ಒಡೆಯನಾದ ಅಲ್ಲಾಹನಿಗೆ ಅಂಜುತ್ತಿರಬೇಕು. ಮತ್ತು ನೀವು ಸಾಕ್ಷವನ್ನು ಬಚ್ಚಿಡಬಾರದು. ಸಾಕ್ಷವನ್ನು ಬಚ್ಚಿಡುವವನ ಮನಸ್ಸು ಖಂಡಿತ ಪಾಪಮಯವಾಗುವುದು. ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ಅರಿಯುತ್ತಾನೆ

[284] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ನೀವು ನಿಮ್ಮ ಮನದೊಳಗಿನ ಸಂಗತಿಗಳನ್ನು ವ್ಯಕ್ತಪಡಿಸಿದರೂ ಗುಪ್ತವಾಗಿಟ್ಟರೂ, ಅಲ್ಲಾಹನಂತೂ ಆ ಕುರಿತು ನಿಮ್ಮಡನೆ ವಿಚಾರಣೆ ನಡೆಸುವನು. ಆ ಬಳಿಕ ಅವನು ತಾನಿಚ್ಛಿಸಿದವರನ್ನು ಕ್ಷಮಿಸುವನು ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುವನು. ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[285] ದೂತರು ತಮ್ಮ ಒಡೆಯನ ಕಡೆಯಿಂದ ತಮ್ಮೆಡೆಗೆ ಇಳಿಸಿಕೊಡಲಾಗಿರುವ ಸಂದೇಶದಲ್ಲಿ ನಂಬಿಕೆಯಿಟ್ಟಿದ್ದಾರೆ. ವಿಶ್ವಾಸಿಗಳೂ ಅಷ್ಟೇ. ಅವರೆಲ್ಲ, ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ದೂತರುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ‘‘ನಾವು ಅವನ ದೂತರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ’’ (ಎಂದು ಅವರು ಹೇಳುತ್ತಾರೆ). ಮತ್ತು ಅವರು ‘‘ನಾವು ಕೇಳಿದೆವು ಮತ್ತು ಅನುಸರಿಸಿದೆವು. ನಮ್ಮೊಡೆಯಾ, ನಿನ್ನೊಡನೆ ನಾವು ಕ್ಷಮೆ ಕೋರುತ್ತೇವೆ ಮತ್ತು ಅಂತಿಮವಾಗಿ (ಎಲ್ಲರೂ) ನಿನ್ನೆಡೆಗೇ ಮರಳಬೇಕಾಗಿದೆ’’ಎನ್ನುತ್ತಾರೆ

[286] ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ ಒಳಿತಿನ ಫಲವು ಸಿಗಲಿದೆ ಮತ್ತು ಅವನು ಗಳಿಸಿದ ಕೆಡುಕಿನ ಪ್ರತಿಫಲವೂ ಸಿಗಲಿದೆ. ‘‘ನಮ್ಮೊಡೆಯಾ, ನಾವು ಮರೆತರೆ ಅಥವಾ ನಮ್ಮಿಂದ ಪ್ರಮಾದವಾಗಿ ಬಿಟ್ಟರೆ ನಮ್ಮನ್ನು ದಂಡಿಸಬೇಡ. ನಮ್ಮೊಡೆಯಾ, ನಮಗಿಂತ ಹಿಂದಿನವರ ಮೇಲೆ ನೀನು ಹೊರಿಸಿದಂತಹ ಹೊರೆಗಳನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮೊಡೆಯಾ, ನಮಗೆ ಹೊರಲಾಗದ ಹೊರೆಗಳನ್ನೂ ನಮ್ಮ ಮೇಲೆ ಹೊರಿಸಬೇಡ ಮತ್ತು ನೀನು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕನು. ಧಿಕ್ಕಾರಿಗಳ ವಿರುದ್ಧ ನೀನು ನಮಗೆ ನೆರವಾಗು’’(ಎಂದು ಪ್ರಾರ್ಥಿಸಿರಿ)

ಇಮ್ರಾನ್ ವಂಶ

Surah 3

[1] ಅಲಿಫ್ ಲಾಮ್ ಮ್ಮೀಮ್

[2] ಅಲ್ಲಾಹ್ – ಅವನ ಹೊರತು ಬೇರೆ ದೇವರಿಲ್ಲ. ಅವನು ಸದಾ ಜೀವಂತ ನಾಗಿರುತ್ತಾನೆ (ಮತ್ತು) ಎಲ್ಲವನ್ನೂ ನಿಯಂತ್ರಿಸಿಟ್ಟವನಾಗಿದ್ದಾನೆ

[3] (ದೂತರೇ,) ಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಇಳಿಸಿಕೊಟ್ಟಿರುವನು. ಇದು ತನ್ನ ಹಿಂದಿನವುಗಳನ್ನು (ಗತ ಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ. (ಈ ಹಿಂದೆ) ತೌರಾತ್ ಮತ್ತು ಇಂಜೀಲ್‌ಗಳನ್ನು ಇಳಿಸಿ ಕೊಟ್ಟವನೂ ಅವನೇ

[4] (ಅವು) ಈ ಹಿಂದೆ ಮಾನವರಿಗೆ ಮಾರ್ಗದರ್ಶಿಯಾಗಿದ್ದವು. (ಇದೀಗ) ಅವನು ಈ ‘ಫುರ್ಕಾನ್’ ಅನ್ನು ಇಳಿಸಿಕೊಟ್ಟಿದ್ದಾನೆ. ಖಂಡಿತವಾಗಿಯೂ, ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ. ಅಲ್ಲಾಹನಂತೂ ಪ್ರಚಂಡನೂ (ಕೆಡುಕಿಗೆ) ಪ್ರತೀಕಾರ ತೀರಿಸುವವನೂ ಆಗಿದ್ದಾನೆ

[5] ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಇರುವ ಯಾವ ವಸ್ತುವೂ ಅಲ್ಲಾಹನಿಂದ ಖಂಡಿತ ಮರೆಯಾಗಿಲ್ಲ

[6] ಗರ್ಭದೊಳಗೇ ನಿಮ್ಮನ್ನು ತಾನಿಚ್ಛಿಸಿದಂತೆ ಚಿತ್ರಿಸಿ ರೂಪಿಸುವವನು ಅವನೇ. ಅವನ ಹೊರತು ಪೂಜಾರ್ಹರು ಬೇರಿಲ್ಲ. ಅವನು ಅಪಾರ ಶಕ್ತಿಶಾಲಿ ಹಾಗೂ ತುಂಬಾ ಯುಕ್ತಿವಂತನಾಗಿದ್ದಾನೆ

[7] ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು ಬೇರಾರೂ ಇಲ್ಲ. ಪಕ್ವವಾದ ಜ್ಞಾನ ಉಳ್ಳವರು ಮಾತ್ರ, ‘‘ನಾವು ಇದನ್ನು ನಂಬಿರುವೆವು, ಇದೆಲ್ಲವೂ ನಮ್ಮೊಡೆಯನ ಕಡೆಯಿಂದಲೇ ಬಂದಿದೆ’’ ಎನ್ನುತ್ತಾರೆ. ನಿಜವಾಗಿ ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ

[8] (ಅಂಥವರು ಈ ರೀತಿ ಪ್ರಾರ್ಥಿಸುತ್ತಾರೆ;) ‘‘ನಮ್ಮೊಡೆಯಾ, ನೀನು ನಮಗೆ ಸರಿದಾರಿಯನ್ನು ತೋರಿದ ಬಳಿಕ ನಮ್ಮ ಮನಸ್ಸುಗಳನ್ನು ವಕ್ರಗೊಳಿಸಬೇಡ. ನಿನ್ನ ಕಡೆಯಿಂದ ನಮಗೆ ಅನುಗ್ರಹವನ್ನು ಕರುಣಿಸು. ನೀನು ಖಂಡಿತ ಮಹಾ ಉದಾರಿಯಾಗಿರುವೆ’’

[9] ‘‘ನಮ್ಮೊಡೆಯಾ, ನಿಸ್ಸಂದೇಹವಾಗಿಯೂ ಬರಲಿರುವ ಒಂದು ದಿನ ನೀನು ಖಂಡಿತ ಎಲ್ಲ ಮಾನವರನ್ನು ಒಂದೆಡೆ ಸೇರಿಸಲಿರುವೆ’’. ಅಲ್ಲಾಹನಂತು ಎಂದಿಗೂ ತನ್ನ ಮಾತನ್ನು ಮೀರುವವನಲ್ಲ

[10] ಧಿಕ್ಕಾರಿಗಳ ಸಂಪತ್ತಾಗಲಿ, ಸಂತಾನವಾಗಲಿ ಅಲ್ಲಾಹನೆದುರು ಅವರ ಯಾವ ನೆರವಿಗೂ ಬಾರದು. ಅವರು ನರಕದ ಇಂಧನವಾಗುವರು

[11] ಫಿರ್‌ಔನನ ಜನರಿಗೆ ಮತ್ತು ಅವರಿಗಿಂತ ಹಿಂದಿನವರಿಗೆ ಒದಗಿದ ಗತಿಯೇ ಅವರಿಗೂ ಒದಗುವುದು. ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಅಲ್ಲಾಹನು ಅವರ ಪಾಪಗಳ ಕಾರಣ ಅವರನ್ನು ಶಿಕ್ಷಿಸಿದನು. ನಿಜಕ್ಕೂ ಅಲ್ಲಾಹನು ಬಹಳ ಕಠಿಣವಾಗಿ ದಂಡಿಸುವವನಾಗಿದ್ದಾನೆ

[12] ಧಿಕ್ಕಾರಿಗಳೊಡನೆ ಹೇಳಿರಿ; ‘‘ಶೀಘ್ರವೇ ನೀವು ಸೋತು ಹೋಗುವಿರಿ ಮತ್ತು ನರಕದೆಡೆಗೆ ನಿಮ್ಮನ್ನು ಅಟ್ಟಲಾಗುವುದು. ಅದು ತೀರಾ ಕೆಟ್ಟ ನೆಲೆಯಾಗಿದೆ’’

[13] (ಬದ್ರ್ ಯುದ್ಧದಲ್ಲಿ) ಪರಸ್ಪರ ಯುದ್ಧ ನಿರತರಾಗಿದ್ದ ಆ ಎರಡು ಪಂಗಡಗಳಲ್ಲಿ ನಿಮಗೊಂದು ಸೂಚನೆಯಿತ್ತು. ಅವರಲ್ಲಿ ಒಂದು ಗುಂಪು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಿದ್ದರೆ, ಇನ್ನೊಂದು ಗುಂಪು ಧಿಕ್ಕಾರಿಗಳದ್ದಾಗಿತ್ತು. ಅವರು (ಧಿಕ್ಕಾರಿಗಳು) ತಮಗಿಂತ ದುಪ್ಪಟ್ಟು ಇರುವುದನ್ನು ಅವರು (ವಿಶ್ವಾಸಿಗಳು) ಕಣ್ಣಾರೆ ಕಾಣುತ್ತಿದ್ದರು. ಆದರೆ, ಅಲ್ಲಾಹನು ತಾನಿಚ್ಛಿಸಿದವರಿಗೆ ತನ್ನ ನೆರೆವಿನ ಮೂಲಕ ಬಲವನ್ನು ಒದಗಿಸುತ್ತಾನೆ. ದೃಷ್ಟಿ ಉಳ್ಳವರಿಗೆ ಇದರಲ್ಲಿ ಖಂಡಿತ ಪಾಠವಿದೆ

[14] ಜನರ ಪಾಲಿಗೆ, ಅವರ ಪ್ರೀತಿಪಾತ್ರರಾದ ಮಹಿಳೆಯರು, ಪುತ್ರರು, ಚಿನ್ನ ಮತ್ತು ಬೆಳ್ಳಿಯ ರಾಶಿಗಳು, ಬರೆ ಎಳೆದ (ಪಳಗಿಸಿದ) ಕುದುರೆಗಳು, ಸಾಕು ಪ್ರಾಣಿಗಳು ಮತ್ತು ವ್ಯವಸಾಯದ ಜಮೀನುಗಳು – ಇವುಗಳನ್ನೆಲ್ಲಾ ಚಂದಗಾಣಿಸಲಾಗಿದೆ. ಆದರೆ ಇವೆಲ್ಲಾ ಕೇವಲ ಇಹಲೋಕದ ಬದುಕಿನ ಸಾಧನಗಳು. ನಿಜಕ್ಕೂ ಅತ್ಯುತ್ತಮ ನೆಲೆಯು ಅಲ್ಲಾಹನ ಬಳಿ ಇದೆ

[15] ಹೇಳಿರಿ; ಇವೆಲ್ಲಕ್ಕಿಂತ ಉತ್ತಮವಾದುದನ್ನು ನಾನು ನಿಮಗೆ ತಿಳಿಸಲೇ? ಧರ್ಮನಿಷ್ಠರಿಗಾಗಿ ಅವರ ಒಡೆಯನ ಬಳಿ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗತೋಟಗಳಿವೆ. ಅಲ್ಲಿ ಅವರು ಸದಾಕಾಲ ಇರುವರು. ಅಲ್ಲಿ ಅವರಿಗಾಗಿ ಪಾವನ ಪತ್ನಿಯರಿರುವರು ಮತ್ತು (ಅವರಿಗೆ) ಅಲ್ಲಾಹನ ಮೆಚ್ಚುಗೆಯು ಪ್ರಾಪ್ತವಾಗುವುದು. ಅಲ್ಲಾಹನಂತು ತನ್ನ ದಾಸರ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ

[16] ಅವರು (ಧರ್ಮನಿಷ್ಠರು) ‘‘ನಮ್ಮೊಡೆಯಾ, ನಾವು ಖಂಡಿತ ನಂಬಿರುವೆವು. ನೀನಿನ್ನು ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕಾಗ್ನಿಯ ಹಿಂಸೆಯಿಂದ ರಕ್ಷಿಸು’’ ಎಂದು ಪ್ರಾರ್ಥಿಸುತ್ತಿರುತ್ತಾರೆ

[17] ಅವರು ಸಹನಶೀಲರಾಗಿರುತ್ತಾರೆ. ಸತ್ಯನಿಷ್ಠರಾಗಿರುತ್ತಾರೆ. ಆರಾಧನಾ ನಿರತರಾಗಿರುತ್ತಾರೆ, ದಾನಿಗಳಾಗಿರುತ್ತಾರೆ, ಮತ್ತು ನಿತ್ಯ ಮುಂಜಾವಿಗೆ ಮುನ್ನ (ಅಲ್ಲಾಹನೊಡನೆ) ಕ್ಷಮೆ ಯಾಚಿಸುತ್ತಾರೆ

[18] ತನ್ನ ಹೊರತು ಬೇರೆ ದೇವರಿಲ್ಲವೆಂದು ಅಲ್ಲಾಹನು ಘೋಷಿಸಿರುವನು. ಮಲಕ್‌ಗಳು ಮತ್ತು ಸ್ಥಿರವಾಗಿ ನ್ಯಾಯಮಾರ್ಗದಲ್ಲಿರುವ ಜ್ಞಾನಿಗಳೆಲ್ಲರೂ (ಇದನ್ನೇ ಘೋಷಿಸುತ್ತಾರೆ). ಪ್ರಚಂಡನೂ ಯುಕ್ತಿವಂತನೂ ಆಗಿರುವ ಆತನ ಹೊರತು ಬೇರೆ ದೇವರಿಲ್ಲ

[19] ಖಂಡಿತವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಇಸ್ಲಾಮ್ (ಶರಣಾಗತಿ) ನೈಜ ಧರ್ಮವಾಗಿದೆ. ಈ ಹಿಂದೆ ಗ್ರಂಥ ನೀಡಲಾದವರು, ತಮ್ಮ ಬಳಿಗೆ ಜ್ಞಾನವು ಬಂದ ಬಳಿಕ ಕೇವಲ ಪರಸ್ಪರ ದ್ವೇಷದ ಕಾರಣ ಭಿನ್ನಮತ ತಾಳಿದ್ದರು. ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರು (ತಿಳಿದಿರಲಿ), ಅಲ್ಲಾಹನು ಬಹಳ ವೇಗವಾಗಿ ವಿಚಾರಣೆ ಮುಗಿಸುವವನಾಗಿದ್ದಾನೆ

[20] ಅವರು ನಿಮ್ಮೊಡನೆ ಜಗಳಾಡಲು ಬಂದರೆ ‘‘ನಾನು ಮತ್ತು ನನ್ನ ಅನುಯಾಯಿಗಳಂತು ಅಲ್ಲಾಹನಿಗೆ ಸಂಪೂರ್ಣ ಶರಣಾಗಿರುವೆವು’’ಎಂದು ಬಿಡಿರಿ. ಹಾಗೆಯೇ, ಗ್ರಂಥ ನೀಡಲಾದವರೊಡನೆ ಮತ್ತು ಉಮ್ಮೀ (ನಿರಕ್ಷರಿ)ಗಳೊಡನೆ ‘‘ನೀವೂ ಶರಣಾದಿರಾ?’’ ಎಂದು ಕೇಳಿರಿ. ಅವರು ಶರಣಾದರೆ, ಸನ್ಮಾರ್ಗವನ್ನು ಪಡೆದರು. ಇನ್ನು ಅವರು ಮುಖ ತಿರುಗಿಸಿಕೊಂಡರೆ, ನಿಮ್ಮ ಮೇಲಿರುವುದು, ಕೇವಲ (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ. ಅಲ್ಲಾಹನು ತನ್ನ ದಾಸರನ್ನು ಸದಾ ನೋಡುತ್ತಿರುತ್ತಾನೆ

[21] ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ಮಾನವರ ಪೈಕಿ ನ್ಯಾಯವನ್ನು ಆದೇಶಿಸುವವರನ್ನು ಕೊಲ್ಲುವವರು – ಅವರಿಗೆಲ್ಲಾ ಭಾರೀ ಕಠಿಣ ಶಿಕ್ಷೆಯ ಸುವಾರ್ತೆ ನೀಡಿರಿ

[22] ಅಂಥವರ ಕರ್ಮಗಳೆಲ್ಲಾ ಇಹಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾಗಿ ಬಿಡುವವು ಮತ್ತು ಅವರಿಗೆ ಸಹಾಯಕರು ಯಾರೂ ಇರಲಾರರು

[23] ಗ್ರಂಥದ ಭಾಗವೊಂದನ್ನು ನೀಡಲಾಗಿದ್ದವರನ್ನು ನೀವು ನೋಡಲಿಲ್ಲವೆ? ಅವರ ನಡುವಣ ತೀರ್ಪಿಗಾಗಿ ಅವರನ್ನು ಅಲ್ಲಾಹನ ಗ್ರಂಥದೆಡೆಗೆ ಕರೆಯಲಾದಾಗ, ಅವರಲ್ಲಿನ ಕೆಲವರು ಕಡೆಗಣಿಸುತ್ತಾರೆ ಮತ್ತು ತಪ್ಪಿಸಿಕೊಳ್ಳುತ್ತಾರೆ

[24] ಇದೇಕೆಂದರೆ ಅವರು ‘‘ನರಕಾಗ್ನಿಯು ನಮ್ಮನ್ನು ಮುಟ್ಟದು, (ಹೆಚ್ಚೆಂದರೆ) ಕೆಲವು ದಿನಗಳ ಹೊರತು’’ ಎನ್ನುತ್ತಾರೆ ಮತ್ತು ಅವರು ಸ್ವತಃ ರಚಿಸಿಕೊಂಡಿರುವ ಕೆಲವು ಅಂಶಗಳು ಅವರನ್ನು ಧರ್ಮದ ವಿಷಯದಲ್ಲಿ ಭ್ರಮೆಗೆ ಒಳಪಡಿಸಿವೆ

[25] ನಿಸ್ಸಂದೇಹವಾಗಿ ಬರಲಿರುವ ಒಂದು ದಿನ, ಅವರನ್ನೆಲ್ಲಾ ಒಂದೆಡೆ ಸೇರಿಸಲಾದಾಗ (ಅವರ ಸ್ಥಿತಿ) ಹೇಗಿದ್ದೀತು? (ಅಂದು) ಪ್ರತಿಯೊಬ್ಬ ವ್ಯಕ್ತಿಗೂ ಅವನ ಶ್ರಮದ ಪ್ರತಿಫಲವನ್ನು ನೀಡಲಾಗುವುದು. ಆದರೆ ಅವರ ಮೇಲೆ ಅನ್ಯಾಯ ನಡೆಯದು

[26] ಹೇಳಿರಿ; ‘‘ವಿಶ್ವ ಸಾಮ್ರಾಜ್ಯದ ಒಡೆಯನಾದ ಅಲ್ಲಾಹನೇ, ನೀನು ನೀನಿಚ್ಛಿಸಿದವರಿಗೆ ಅಧಿಕಾರವನ್ನು ನೀಡುವೆ ಮತ್ತು ನೀನಿಚ್ಛಿಸಿದವರಿಂದ ಅಧಿಕಾರವನ್ನು ಕಿತ್ತುಕೊಳ್ಳುವೆ. ಹಾಗೆಯೇ ನೀನಿಚ್ಛಿಸಿದವರಿಗೆ ನೀನು ಗೌರವವನ್ನು ದಯಪಾಲಿಸುವೆ ಮತ್ತು ನೀನಿಚ್ಛಿಸಿದವರನ್ನು ಅಪಮಾನಿತರಾಗಿಸುವೆ. ಒಳಿತೆಲ್ಲವೂ ನಿನ್ನ ಕೈಯಲ್ಲೇ ಇದೆ. ಖಂಡಿತವಾಗಿಯೂ ನೀನು ಎಲ್ಲವನ್ನೂ ಮಾಡಲು ಶಕ್ತನು’’

[27] ‘‘ಹಗಲಿನೊಳಗೆ ರಾತ್ರಿಯನ್ನು ಪೋಣಿಸುವವನು ನೀನೇ ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವವನು ನೀನೇ. ನಿರ್ಜೀವಿಯೊಳಗಿಂದ ಜೀವಿಯನ್ನು ಹೊರ ತೆಗೆಯುವವನೂ ನೀನೇ ಹಾಗೂ ಜೀವಿಯೊಳಗಿಂದ ನಿರ್ಜೀವಿಯನ್ನು ಹೊರತೆಗೆಯುವವನೂ ನೀನೇ. ನೀನು ನೀನಿಚ್ಛಿಸಿದವರಿಗೆ ಅಪಾರ ಸಂಪತ್ಸಾಧನಗಳನ್ನು ಒದಗಿಸುವೆ’’

[28] ವಿಶ್ವಾಸಿಗಳು, ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ತಮ್ಮ ಪೋಷಕ ರಾಗಿಸಿಕೊಳ್ಳಬಾರದು. ಹಾಗೆ ಮಾಡಿದಾತನಿಗೆ ಅಲ್ಲಾಹನೊಂದಿಗೆ ಯಾವ ನಂಟೂ ಉಳಿಯದು – ನೀವು ಅವರಿಂದ ಸುರಕ್ಷಿತರಾಗಿರಲು ಕೇವಲ ಭದ್ರತೆಯ ಕ್ರಮವಾಗಿ ಹಾಗೆ ಮಾಡಿದ್ದರೆ ಅದು ಕ್ಷಮ್ಯ. ಅಲ್ಲಾಹನು ತನ್ನ ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಕೊನೆಗೆ ನೀವು ಅಲ್ಲಾಹನೆಡೆಗೇ ಮರಳಬೇಕಾಗಿದೆ

[29] ಹೇಳಿರಿ; ‘‘ನೀವು ನಿಮ್ಮ ಮನದಲ್ಲಿರುವುದನ್ನು ಗುಟ್ಟಾಗಿಟ್ಟರೂ ಪ್ರಕಟಪಡಿಸಿದರೂ ಅಲ್ಲಾಹನು ಖಂಡಿತ ಅದನ್ನು ಅರಿಯುವನು. ಅವನಂತು, ಆಕಾಶಗಳಲ್ಲಿನ ಮತ್ತು ಭೂಮಿಯಲ್ಲಿನ ಎಲ್ಲವನ್ನೂ ಅರಿತಿರುತ್ತಾನೆ. ಹಾಗೆಯೇ, ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ’’

[30] (ಅಂತಿಮ ವಿಚಾರಣೆಯ) ಆ ದಿನ, ಪ್ರತಿಯೊಬ್ಬನೂ ತಾನು ಮಾಡಿರುವ ಪ್ರತಿಯೊಂದು ಸತ್ಕರ್ಮವನ್ನು ಹಾಗೂ ತಾನು ಮಾಡಿರುವ ಪ್ರತಿಯೊಂದು ದುಷ್ಕರ್ಮವನ್ನು ತನ್ನ ಮುಂದೆ ಕಾಣುವನು. ಆಗ ಅವನು, ತನ್ನ ಹಾಗೂ ಅವುಗಳ (ಆ ತನ್ನ ಪಾಪಗಳ) ನಡುವೆ ಭಾರೀ ಅಂತರವಿರಬೇಕಿತ್ತು ಎಂದು ಹಂಬಲಿಸುವನು. ಅಲ್ಲಾಹನು ತನ್ನ ಕುರಿತು ನಿಮ್ಮನ್ನು ಎಚ್ಚರಿಸುತ್ತಾನೆ. ಅಲ್ಲಾಹನು ತನ್ನ ದಾಸರ ಪಾಲಿಗೆ ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ

[31] (ದೂತರೇ) ಹೇಳಿರಿ; (ಜನರೇ,) ನೀವು ನಿಜಕ್ಕೂ ಅಲ್ಲಾಹನನ್ನು ಪ್ರೀತಿಸುವವರಾಗಿದ್ದರೆ ನನ್ನನ್ನು ಅನುಸರಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮಗಾಗಿ ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[32] (ದೂತರೇ,) ‘‘ಅಲ್ಲಾಹನ ಹಾಗೂ (ಅವನ) ದೂತರ ಆಜ್ಞಾಪಾಲನೆ ಮಾಡಿರಿ’’ ಎಂದು ಆದೇಶಿಸಿರಿ. ಅವರು ಕಡೆಗಣಿಸಿದರೆ (ಅವರಿಗೆ ತಿಳಿದಿರಲಿ;) ಅಲ್ಲಾಹನು ಅಂತಹ ಧಿಕ್ಕಾರಿಗಳನ್ನು ಖಂಡಿತ ಪ್ರೀತಿಸುವುದಿಲ್ಲ

[33] ಅಲ್ಲಾಹನು ಸಮಸ್ತ ಲೋಕದವರಲ್ಲಿ ಆದಮ್, ನೂಹ್, ಇಬ್ರಾಹೀಮ್‌ರ ಸಂತತಿ ಮತ್ತು ಇಮ್ರಾನ್‌ರ ಸಂತತಿಯನ್ನು ವಿಶೇಷವಾಗಿ ಆಯ್ದುಕೊಂಡನು

[34] ಅವರಲ್ಲಿ ಕೆಲವರು ಇತರ ಕೆಲವರ ಸಂತತಿಗಳಾಗಿದ್ದರು (ಅವರೆಲ್ಲಾ ಒಂದೇ ಪರಂಪರೆಯವರಾಗಿದ್ದರು). ಅಲ್ಲಾಹನು ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[35] ಇಮ್ರಾನ್‌ರ ಪತ್ನಿ ಹೇಳಿದರು; ‘‘ನನ್ನೊಡೆಯಾ, ನಾನಿದೋ ನನ್ನ ಗರ್ಭದಲ್ಲಿರುವುದನ್ನು (ಮಗುವನ್ನು) ಸಂಪೂರ್ಣವಾಗಿ ನಿನ್ನ ಸೇವೆಗೆ ಮುಡಿಪಾಗಿ ಇಡುವುದಾಗಿ ಹರಕೆ ಹೊತ್ತಿದ್ದೇನೆ. ನೀನಿದನ್ನು ನನ್ನಿಂದ ಸ್ವೀಕರಿಸು. ನೀನು ಖಂಡಿತ ಎಲ್ಲವನ್ನೂ ಆಲಿಸುವವನು ಮತ್ತು ಎಲ್ಲವನ್ನೂ ಬಲ್ಲವನು.’’

[36] ಕೊನೆಗೆ ಆಕೆ ಅದನ್ನು (ಶಿಶುವನ್ನು) ಹೆತ್ತಾಗ ‘‘ಒಡೆಯಾ, ನಾನು ಹೆಣ್ಣು ಮಗುವನ್ನು ಹೆತ್ತಿರುವೆನು’’ ಎಂದರು. ನಿಜವಾಗಿ ಆಕೆ ಏನನ್ನು ಹೆತ್ತಿದ್ದಳೆಂಬುದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೆ ಗಂಡು ಮಗು ಹೆಣ್ಣಿನಂತಿರುವುದಿಲ್ಲ. (ಆಕೆ ಹೇಳಿದರು;) ‘‘ನಾನು ಈ ಮಗುವನ್ನು ಮರ್ಯಮ್ ಎಂದು ಹೆಸರಿಸಿದ್ದೇನೆ ಮತ್ತು ಇವಳನ್ನು ಹಾಗೂ ಇವಳ ಸಂತತಿಯನ್ನು ಶಪಿತ ಶೈತಾನನಿಂದ ಕಾಪಾಡಲಿಕ್ಕಾಗಿ ನಿನ್ನ ರಕ್ಷಣೆಗೆ ಒಪ್ಪಿಸುತ್ತಿದ್ದೇನೆ’’

[37] ಕೊನೆಗೆ ಆಕೆಯ ಒಡೆಯನು ಆಕೆಯನ್ನು (ಮರ್ಯಮ್‌ರನ್ನು) ಉದಾರವಾಗಿ ಸ್ವೀಕರಿಸಿದನು ಹಾಗೂ ಆಕೆಯನ್ನು ಶ್ರೇಷ್ಠ ರೀತಿಯಲ್ಲಿ ಬೆಳೆಸಿದನು. ತರುವಾಯ ಅವನು ಆಕೆಯ ಪೋಷಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಆಕೆಯ ಕೊಠಡಿಯ ಬಳಿಗೆ ಬಂದಾಗಲೆಲ್ಲಾ ಆಕೆಯ ಬಳಿ ಆಹಾರವನ್ನು ಕಾಣುತ್ತಿದ್ದರು. ಒಮ್ಮೆ ಅವರು ‘‘ಓ ಮರ್ಯಮ್! ಇದು ನಿನ್ನ ಬಳಿಗೆ ಎಲ್ಲಿಂದ ಬಂತು?’’ ಎಂದು ಕೇಳಿದರು. ಆಕೆ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಅಪಾರ ಸಂಪನ್ನತೆಯನ್ನು ದಯಪಾಲಿಸುತ್ತಾನೆ’’ ಎಂದರು

[38] ಆಗ ಝಕರಿಯ್ಯಾ ‘‘ನನ್ನೊಡೆಯಾ! ನಿನ್ನ ವತಿಯಿಂದ ನನಗೆ ಸಜ್ಜನ ಸಂತಾನವನ್ನು ಕರುಣಿಸು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನು’’ ಎಂದು ತಮ್ಮೊಡೆಯನನ್ನು ಪ್ರಾರ್ಥಿಸಿದರು

[39] ಅವರು ಕೊಠಡಿಯಲ್ಲಿ ನಿಂತು ನಮಾಝ್ ಸಲ್ಲಿಸುತ್ತಿದ್ದಾಗ ಮಲಕ್‌ಗಳು ಅವರನ್ನು ಕರೆದು ‘‘ಅಲ್ಲಾಹನು ನಿಮಗೆ ಯಹ್ಯಾರ ಶುಭವಾರ್ತೆ ನೀಡುತ್ತಿದ್ದಾನೆ. ಅವರು ಅಲ್ಲಾಹನ ಕಡೆಯಿಂದ ಬರುವ ವಚನವನ್ನು ಸಮರ್ಥಿಸುವವರು, ಜನನಾಯಕರು, ಆತ್ಮ ನಿಯಂತ್ರಣ ಉಳ್ಳವರು, ಮತ್ತು ಒಬ್ಬ ಸಜ್ಜನ ಪ್ರವಾದಿಯಾಗುವರು’’ಎಂದರು

[40] ಆಗ ಅವರು (ಝಕರಿಯ್ಯ) ‘‘ನನ್ನೊಡೆಯಾ, ನನಗೊಬ್ಬ ಪುತ್ರನು ಜನಿಸುವುದಾದರೂ ಹೇಗೆ? ನಾನು ತುಂಬಾ ವೃದ್ಧನಾಗಿಬಿಟ್ಟಿದ್ದೇನೆ ಮತ್ತು ನನ್ನ ಪತ್ನಿಯಂತು ಬಂಜೆಯಾಗಿದ್ದಾಳೆ ’’ ಎಂದರು. ಅವನು (ಅಲ್ಲಾಹನು) ಹೇಳಿದನು; ‘‘ಹಾಗೆಯೇ ಆಗುವುದು – ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ’’

[41] ಅವರು ‘‘ನನ್ನೊಡೆಯಾ, ನನಗೊಂದು ಪುರಾವೆಯನ್ನು ಒದಗಿಸು’’ ಎಂದರು. ಅವನು ಹೇಳಿದನು; ‘‘ನಿಮಗಿರುವ ಪುರಾವೆಯೇನೆಂದರೆ ಮೂರು ದಿನಗಳ ಕಾಲ ನಿಮಗೆ, ಜನರೊಡನೆ ಕೈಸನ್ನೆಗಳನ್ನು ಮಾಡುವ ಹೊರತು ಬೇರೇನೂ ಮಾತನಾಡಲಿಕ್ಕಾಗದು. (ನೀವೀಗ) ನಿಮ್ಮೊಡೆಯನನ್ನು ಪದೇ ಪದೇ ಸ್ಮರಿಸಿರಿ ಹಾಗೂ ಮುಂಜಾವಿನಲ್ಲೂ ಇರುಳಲ್ಲೂ ಅವನ ಪಾವಿತ್ರವನ್ನು ಜಪಿಸಿರಿ’’

[42] (ಮುಂದೆ) ಮಲಕ್‌ಗಳು ಹೇಳಿದರು; ‘‘ಓ ಮರ್ಯಮ್, ಅಲ್ಲಾಹನು ನಿಮ್ಮನ್ನು ಆರಿಸಿಕೊಂಡಿರುವನು ಹಾಗೂ ನಿಮ್ಮನ್ನು ನಿರ್ಮಲಗೊಳಿಸಿರುವನು ಮತ್ತು ಜಗತ್ತಿನ ಸರ್ವ ಮಹಿಳೆಯರ ಪೈಕಿ ನಿಮ್ಮನ್ನು ಆಯ್ದುಕೊಂಡಿರುವನು’’

[43] ‘‘ಓ ಮರ್ಯಮ್, ನೀವು ನಿಮ್ಮೊಡೆಯನ ಆದೇಶಗಳನ್ನು ಪಾಲಿಸುತ್ತಾ ಅವನಿಗೆ ಸಾಷ್ಟಾಂಗವೆರಗುತ್ತಲೂ ಅವನ ಮುಂದೆ ಬಾಗುವವರ ಜೊತೆ ಸೇರಿ ಬಾಗುತ್ತಲೂ ಇರಿ’’

[44] (ದೂತರೇ,) ಇವೆಲ್ಲಾ ನಾವು ನಿಮಗೆ ದಿವ್ಯ ಸಂದೇಶದ ಮೂಲಕ ತಲುಪಿಸುತ್ತಿರುವ ಗುಪ್ತ ಮಾಹಿತಿಗಳು. ಯಾರು ಮರ್ಯಮರ ಪೋಷಕರಾಗಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆಯುತ್ತಿದ್ದ ವೇಳೆ ನೀವು ಅವರ ಜೊತೆಗಿರಲಿಲ್ಲ. ಹಾಗೆಯೇ, ಅವರು ಪರಸ್ಪರ ಜಗಳಾಡುತ್ತಿದ್ದಾಗಲೂ ನೀವು ಅವರ ಬಳಿ ಇರಲಿಲ್ಲ

[45] ಮಲಕ್‌ಗಳು ಹೇಳಿದರು; ‘‘ಓ ಮರ್ಯಮ್, ಅಲ್ಲಾಹನು ನಿಮಗೆ ತನ್ನೆಡೆಯಿಂದ ಒಂದು ‘ವಚನ’ದ ಶುಭವಾರ್ತೆ ನೀಡುತ್ತಾನೆ. ಅವರ ಹೆಸರು ‘ಮಸೀಹ್ ಈಸಾ ಇಬ್ನು ಮರ್ಯಮ್’ (ಮರ್ಯಮರ ಪುತ್ರ ಈಸಾ ಮಸೀಹ್) ಎಂದಾಗಿರುವುದು. ಅವರು ಇಹಲೋಕದಲ್ಲೂ ಪರಲೋಕದಲ್ಲೂ ಗೌರವಾನ್ವಿತರಾಗಿರುವರು ಮತ್ತು (ಅಲ್ಲಾಹನ) ಆಪ್ತರಾಗಿರುವರು’’

[46] ‘‘ಅವರು ತೊಟ್ಟಿಲಲ್ಲೂ, ವೃದ್ಧಾಪ್ಯದಲ್ಲೂ ಜನರೊಡನೆ ಮಾತನಾಡುವರು ಮತ್ತು ಅವರು ಸಜ್ಜನರಾಗಿರುವರು’’

[47] ‘‘ನನ್ನೊಡೆಯಾ, ಯಾವ ಪುರುಷನೂ ನನ್ನನ್ನು ಸ್ಪರ್ಶಿಸಿಯೇ ಇಲ್ಲದಿರುವಾಗ ನನಗೊಬ್ಬ ಪುತ್ರನು ಜನಿಸುವುದಾದರೂ ಹೇಗೆ?’’ ಎಂದು ಆಕೆ (ಮರ್ಯಮ್) ಕೇಳಿದರು. ಅವನು ಹೇಳಿದನು; ‘‘ಹಾಗೆಯೇ ಆಗುವುದು, ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಒಂದು ನಿರ್ಧಾರ ಕೈಗೊಂಡರೆ, ಅದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ’’

[48] (ಮಲಕ್‌ಗಳು ಹೇಳಿದರು;) ‘‘ಅವನು (ಅಲ್ಲಾಹನು) ಅವರಿಗೆ ಗ್ರಂಥವನ್ನು ಮತ್ತು ಯುಕ್ತಿಯನ್ನು ಹಾಗೂ ತೌರಾತ್ ಮತ್ತು ಇಂಜೀಲ್‌ಗಳನ್ನು ಕಲಿಸುವನು’’

[49] ‘‘ಮತ್ತು ಅವನು ಅವರನ್ನು ಇಸ್ರಾಈಲರ ಸಂತತಿಯೆಡೆಗೆ ತನ್ನ ದೂತನಾಗಿ ನೇಮಿಸುವನು’’. (ಅವರು ಹೇಳುವರು;) ‘‘ನಾನು ನಿಮ್ಮೊಡೆಯನ ಕಡೆಯಿಂದ ಒಂದು ಪುರಾವೆಯೊಂದಿಗೆ ನಿಮ್ಮ ಬಳಿಗೆ ಬಂದಿರುವೆನು. ನಾನಿದೋ ನಿಮಗಾಗಿ ಮಣ್ಣಿನಿಂದ ಒಂದು ಪಕ್ಷಿಯ ರೂಪವನ್ನು ನಿರ್ಮಿಸುವೆನು ಮತ್ತು ಅದರೊಳಗೆ ಊದುವೆನು. ಅದು ಅಲ್ಲಾಹನ ಅಪ್ಪಣೆಯಿಂದ (ಜೀವಂತ) ಪಕ್ಷಿಯಾಗಿ ಬಿಡುವುದು. ಹಾಗೆಯೇ ನಾನು, ಅಲ್ಲಾಹನ ಆದೇಶಾನುಸಾರ ಹುಟ್ಟು ಕುರುಡನನ್ನು ಹಾಗೂ ಕುಷ್ಟರೋಗಿಯನ್ನು ಗುಣಪಡಿಸುವೆನು ಮತ್ತು ಮೃತನನ್ನು ಜೀವಂತಗೊಳಿಸುವೆನು. ನೀವು ಏನನ್ನು ತಿನ್ನುತ್ತೀರಿ ಮತ್ತು ನಿಮ್ಮ ಮನೆಗಳಲ್ಲಿ ಏನನ್ನು ಸಂಗ್ರಹಿಸಿಡುತ್ತೀರಿ ಎಂಬುದನ್ನು ನಾನು ನಿಮಗೆ ತಿಳಿಸುವೆನು. ನೀವು ನಂಬುವವರಾಗಿದ್ದರೆ ಇದರಲ್ಲಿ ನಿಮಗೆ ಪುರಾವೆ ಇದೆ’’

[50] ‘‘ನಾನು ನನಗಿಂತ ಹಿಂದೆ ಇದ್ದ ತೌರಾತ್‌ನ ಭಾಗವನ್ನು ಸಮರ್ಥಿಸುವವನಾಗಿದ್ದೇನೆ ಹಾಗೂ ನಿಮ್ಮ ಮೇಲೆ ನಿಷಿದ್ಧ ಗೊಳಿಸಲಾಗಿದ್ದ ಕೆಲವು ವಿಷಯಗಳನ್ನು ನಿಮ್ಮ ಪಾಲಿಗೆ ಸಮ್ಮತಗೊಳಿಸಲಿಕ್ಕಾಗಿ ಬಂದಿರುತ್ತೇನೆ. ನಾನು ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಪುರಾವೆಯನ್ನು ತಂದಿರುತ್ತೇನೆ. (ಆದುದರಿಂದ) ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನ ಆದೇಶ ಪಾಲಿಸಿರಿ’’

[51] ‘‘ಖಂಡಿತವಾಗಿಯೂ ನನ್ನೊಡೆಯನೂ ನಿಮ್ಮೊಡೆಯನೂ ಅಲ್ಲಾಹನೇ. ನೀವು ಅವನನ್ನೇ ಆರಾಧಿಸಿರಿ. ಅದುವೇ ಸನ್ಮಾರ್ಗವಾಗಿದೆ’’

[52] (ಇಷ್ಟಾಗಿಯೂ) ಅವರ ಕಡೆಯಿಂದ ಧಿಕ್ಕಾರವೇ ಕಂಡಾಗ ಈಸಾ, ‘‘ಯಾರಿದ್ದಾರೆ, ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರು?’’ ಎಂದು ಕೇಳಿದರು. (ಅವರ) ನಿಷ್ಠ ಅನುಯಾಯಿಗಳು ಹೇಳಿದರು; ‘‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ನಂಬಿಕೆ ಇಟ್ಟಿರುವೆವು. ನಾವು ಮುಸ್ಲಿಮರಾಗಿದ್ದೇವೆಂಬುದಕ್ಕೆ ನೀವು ಸಾಕ್ಷಿಯಾಗಿರಿ’’

[53] ‘‘ನಮ್ಮೊಡೆಯಾ, ನೀನು ಇಳಿಸಿಕೊಟ್ಟಿರುವುದನ್ನು (ಸತ್ಯ ಸಂದೇಶವನ್ನು) ನಾವು ನಂಬಿದ್ದೇವೆ ಮತ್ತು ನಾವು ದೇವದೂತರ ಅನುಯಾಯಿಗಳಾಗಿದ್ದೇವೆ. ನೀನು ನಮ್ಮನ್ನು (ಸತ್ಯದ ಪರ) ಸಾಕ್ಷಿಗಳಾಗಿರುವವರ ಸಾಲಲ್ಲಿ ಸೇರಿಸು’’

[54] ಅವರು (ವಿರೋಧಿಗಳು, ಈಸಾರ ಹತ್ಯೆಗೆ) ಒಂದು ಯೋಜನೆಯನ್ನು ರೂಪಿಸಿದರು. ಅತ್ತ ಅಲ್ಲಾಹನೂ ಒಂದು ಯೋಜನೆಯನ್ನು ರೂಪಿಸಿದನು. ಅಲ್ಲಾಹನೇ ಅತ್ಯುತ್ತಮ ಯೋಜನೆಯನ್ನು ರೂಪಿಸುವವನಾಗಿದ್ದಾನೆ

[55] ಅಲ್ಲಾಹನು ಹೇಳಿದನು; ‘‘ಓ ಈಸಾ, ನಾನು ನಿಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದೇನೆ ಹಾಗೂ ನಿಮ್ಮನ್ನು ನನ್ನೆಡೆಗೆ ಎತ್ತಿಕೊಳ್ಳಲಿದ್ದೇನೆ ಮತ್ತು ಧಿಕ್ಕಾರಿಗಳಿಂದ (ಅವರ ಕಿರುಕುಳಗಳಿಂದ) ನಿಮ್ಮನ್ನು ಮುಕ್ತಗೊಳಿಸಲಿದ್ದೇನೆ. ಅಲ್ಲದೆ ಪುನರುತ್ಥಾನ ದಿನದ ತನಕ ನಾನು ನಿಮ್ಮ ಅನುಯಾಯಿಗಳಿಗೆ, ಧಿಕ್ಕಾರಿಗಳೆದುರು ಪ್ರಾಬಲ್ಯವನ್ನು ನೀಡಲಿದ್ದೇನೆ. ಕೊನೆಗೆ ನೀವೆಲ್ಲರೂ ನನ್ನೆಡೆಗೆ ಮರಳಿ ಬರುವಿರಿ. ಆಗ, ನೀವು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಮಾನ ಮಾಡಲಿದ್ದೇನೆ’’

[56] ಧಿಕ್ಕಾರಿಗಳಿಗೆ ನಾನು ಇಹಲೋಕದಲ್ಲೂ ಪರ ಲೋಕದಲ್ಲೂ ಭಾರೀ ಕಠಿಣ ಶಿಕ್ಷೆ ನೀಡಲಿದ್ದೇನೆ – ಅವರಿಗೆ ಸಹಾಯಕರು ಯಾರೂ ಸಿಗಲಾರರು

[57] ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಲಿರುವವರಿಗೆ ಅವನು (ಅಲ್ಲಾಹನು) ಅವರ ಪೂರ್ಣ ಪ್ರತಿಫಲವನ್ನು ನೀಡುವನು. ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ

[58] ಇವೆಲ್ಲಾ ನಾವು ನಿಮಗೆ (ದೂತರಿಗೆ) ಓದಿ ಕೇಳಿಸುತ್ತಿರುವ ದಿವ್ಯ ವಚನಗಳು ಹಾಗೂ ಯುಕ್ತಿ ತುಂಬಿದ ಬೋಧನೆಗಳಾಗಿವೆ

[59] ಅಲ್ಲಾಹನ ಬಳಿ, ಈಸಾರ ಉದಾಹರಣೆಯು ಆದಮ್‌ರಂತಿದೆ. ಅವನು ಅವರನ್ನು ಮಣ್ಣಿನಿಂದ ಸೃಷ್ಟಿಸಿದ್ದನು ಮತ್ತು ಅವರೊಡನೆ ‘‘ಆಗು’’ ಎಂದಷ್ಟೇ ಹೇಳಿದ್ದನು, ಅವರು ಆಗಿ ಬಿಟ್ಟಿದ್ದರು

[60] ಇದು (ಕುರ್‌ಆನ್) ನಿಮ್ಮೊಡೆಯನ ಕಡೆಯಿಂದ ಬಂದಿರುವ ಸತ್ಯ. ನೀವು ಈ ಕುರಿತು ಸಂಶಯಿಸುವವರ ಸಾಲಿಗೆ ಸೇರಬೇಡಿ

[61] ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟ ಬಳಿಕ ಈ ಕುರಿತು ನಿಮ್ಮೊಡನೆ ಜಗಳಾಡುವವರೊಡನೆ ಹೇಳಿರಿ; ‘‘ಬನ್ನಿ, ನಾವು ನಮ್ಮ ಪುತ್ರರನ್ನೂ ನಿಮ್ಮ ಪುತ್ರರನ್ನೂ, ನಮ್ಮ ಮಹಿಳೆಯರನ್ನೂ, ನಿಮ್ಮ ಮಹಿಳೆಯರನ್ನೂ ಕರೆಯೋಣ ಮತ್ತು ಸ್ವತಃ ನಾವೂ ನೀವೂ ಸೇರಿ – ಸುಳ್ಳುಗಾರರ ಮೇಲೆ ಅಲ್ಲಾಹನ ಶಾಪವಿರಲಿ – ಎಂದು ಮೊರೆಯಿಡೋಣ’’

[62] ಇವೆಲ್ಲಾ ನೈಜ ವೃತ್ತಾಂತಗಳಾಗಿವೆ. ಅಲ್ಲಾಹನ ಹೊರತು ಪೂಜಾರ್ಹರು ಬೇರಾರೂ ಇಲ್ಲ. ಅಲ್ಲಾಹನು ಖಂಡಿತ ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[63] ಇಷ್ಟಾಗಿಯೂ ಅವರು (ಸತ್ಯವನ್ನು) ಕಡೆಗಣಿಸುತ್ತಾರೆಂದಾದರೆ (ಅವರಿಗೆ ತಿಳಿದಿರಲಿ) ಅಲ್ಲಾಹನು ಗೊಂದಲ ಹಬ್ಬುವವರನ್ನು ಚೆನ್ನಾಗಿ ಬಲ್ಲನು

[64] ‘‘ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಅಂಶದೆಡೆಗೆ ಬನ್ನಿರಿ. ನಾವು ಅಲ್ಲಾಹನ ಹೊರತು ಬೇರಾರನ್ನೂ ಪೂಜಿಸದಿರೋಣ ಮತ್ತು ಯಾರನ್ನೂ ಅವನ ಜೊತೆ ಪಾಲುಗೊಳಿಸದಿರೋಣ. ಹಾಗೆಯೇ ನಮ್ಮಲ್ಲಿ ಯಾರೂ ಅಲ್ಲಾಹನ ಹೊರತು ಬೇರೆ ಯಾರನ್ನೂ ದೇವರುಗಳಾಗಿಸಬಾರದು’’ ಎಂದು ಹೇಳಿರಿ. ಇಷ್ಟಾಗಿಯೂ ಅವರು ಹಠಮಾರಿತನವನ್ನೇ ತೋರಿದರೆ, ‘‘ನೀವು ಸಾಕ್ಷಿಗಳಾಗಿರಿ, ನಾವಂತು ಖಂಡಿತ ಮುಸ್ಲಿಮರಾಗಿರುವೆವು (ಅಲ್ಲಾಹನಿಗೆ ಶರಣಾಗಿರುವೆವು)’’ ಎಂದು ಘೋಷಿಸಿರಿ

[65] (ಮತ್ತು ಹೇಳಿರಿ:) ‘‘ಗ್ರಂಥದವರೇ, ನೀವೇಕೆ ನಮ್ಮೊಡನೆ ಇಬ್ರಾಹೀಮ್‌ರ ಕುರಿತು ಜಗಳಾಡುತ್ತೀರಿ? ತೌರಾತ್ ಮತ್ತು ಇಂಜೀಲ್‌ಗಳನ್ನು ಅವರ ಅನಂತರವಷ್ಟೇ ಇಳಿಸಲಾಗಿತ್ತು. ನೀವು ಆಲೋಚಿಸುವುದಿಲ್ಲವೇ?’’

[66] ‘‘ನಿಮಗೆ ಅಲ್ಪಸ್ವಲ್ಪ ತಿಳಿದಿರುವ ವಿಷಯಗಳಲ್ಲಂತು ನೀವು ಸಾಕಷ್ಟು ಜಗಳಾಡಿದ್ದಾಯಿತು. (ಇದೀಗ) ನಿಮಗೆ ಏನೇನೂ ತಿಳಿದಿಲ್ಲದ ವಿಷಯದಲ್ಲಿ ನೀವು ಜಗಳಾಡುವುದೇಕೆ? ಬಲ್ಲವನು ಅಲ್ಲಾಹನು ಮಾತ್ರ, ನೀವು ಬಲ್ಲವರಲ್ಲ

[67] ಇಬ್ರಾಹೀಮರು ಯಹೂದಿಯಾಗಲಿ ಕ್ರೈಸ್ತನಾಗಲಿ ಆಗಿರಲಿಲ್ಲ. ಅವರು ನಿಷ್ಠಾವಂತ ಮುಸ್ಲಿಮರಾಗಿದ್ದರು. ಅವರು ಖಂಡಿತ ಬಹುದೇವಾರಾಧಕರಾಗಿರಲಿಲ್ಲ

[68] ಜನರ ಪೈಕಿ ಇಬ್ರಾಹೀಮರೊಂದಿಗೆ ನಿಜವಾದ ನಂಟಿರುವುದು, ಅವರನ್ನು ಅನುಸರಿಸುವವರಿಗೆ – (ಅಂದರೆ) ಈ ದೇವದೂತರಿಗೆ ಮತ್ತು ವಿಶ್ವಾಸಿಗಳಿಗೆ ಮಾತ್ರ. ಅಲ್ಲಾಹನೇ ವಿಶ್ವಾಸಿಗಳ ಪೋಷಕನಾಗಿದ್ದಾನೆ

[69] ಗ್ರಂಥದವರಲ್ಲಿನ ಒಂದು ಪಂಗಡವು, ಹೇಗಾದರೂ ನಿಮ್ಮನ್ನು ದಾರಿ ತಪ್ಪಿಸಲು ಹಂಬಲಿಸುತ್ತಿದೆ. ನಿಜವಾಗಿ ಅವರು ಸ್ವತಃ ತಮ್ಮನ್ನೇ ದಾರಿಗೆಡಿಸುತ್ತಿದ್ದಾರಷ್ಟೇ. ಆದರೆ ಅವರಿಗೆ ಅದರ ಅರಿವಿಲ್ಲ

[70] ಗ್ರಂಥದವರೇ, ಅಲ್ಲಾಹನ ವಚನಗಳಿಗೆ (ಅವು ಸತ್ಯವೆಂಬುದಕ್ಕೆ) ನೀವೇ ಸಾಕ್ಷಿಗಳಾಗಿರುವಾಗ ನೀವೇಕೆ ಅವುಗಳನ್ನು ಧಿಕ್ಕರಿಸುತ್ತಿರುವಿರಿ

[71] ಗ್ರಂಥದವರೇ, ನೀವು ತಿಳಿದವರಾಗಿರುತ್ತಾ ಸತ್ಯವನ್ನು ಅಸತ್ಯದ ಜೊತೆಗೇಕೆ ಬೆರೆಸುತ್ತೀರಿ? ಮತ್ತು ಸತ್ಯವನ್ನು ನೀವೇಕೆ ಬಚ್ಚಿಡುತ್ತೀರಿ

[72] ಗ್ರಂಥದವರಲ್ಲಿನ ಒಂದು ಗುಂಪಿನವರು ‘‘ನೀವು ಹಗಲಿನ ಮೊದಲ ಭಾಗದಲ್ಲಿ (ಮುಂಜಾನೆ), ಸತ್ಯವಿಶ್ವಾಸಿಗಳಿಗೆ ಇಳಿಸಿ ಕೊಡಲಾಗಿರುವ ಸಂದೇಶದಲ್ಲಿ ನಂಬಿಕೆ ಪ್ರಕಟಿಸಿರಿ ಮತ್ತು ಅದರ ಕೊನೆಯ ಭಾಗದಲ್ಲಿ (ಸಂಜೆ) ಅದನ್ನು ಧಿಕ್ಕರಿಸಿರಿ. ಇದರಿಂದ ಅವರು (ತಮ್ಮ ಧರ್ಮವನ್ನು) ತೊರೆಯಬಹುದು’’ ಎನ್ನುತ್ತಾರೆ

[73] ‘‘ನಿಮ್ಮ ಧರ್ಮದ ಅನುಯಾಯಿಗಳ ಹೊರತು ಬೇರೆ ಯಾರನ್ನೂ ನಂಬಬೇಡಿ’’ (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ‘‘ಅಲ್ಲಾಹನು ತೋರಿಸಿದ ಮಾರ್ಗವೇ ಖಚಿತ ಸನ್ಮಾರ್ಗವಾಗಿದೆ. ಅದನ್ನು ಅವನು (ಹಿಂದೊಮ್ಮೆ) ನಿಮಗೆ ನೀಡಿದಂತೆ ಬೇರೊಬ್ಬರಿಗೂ ನೀಡಬಲ್ಲನು. ಅಥವಾ ನಿಮ್ಮೊಡೆಯನ ಬಳಿ ಅವರನ್ನು ನಿಮ್ಮ ವಿರುದ್ಧ ಸಾಕ್ಷಿಯಾಗಿಸಬಲ್ಲನು’’. ಹೇಳಿರಿ; ಅನುಗ್ರಹವು ಖಂಡಿತ ಅಲ್ಲಾಹನ ಕೈಯಲ್ಲಿದೆ. ಅವನು ಅದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ತುಂಬಾ ವಿಶಾಲನೂ ಜ್ಞಾನಿಯೂ ಆಗಿದ್ದಾನೆ’’

[74] ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹಕ್ಕಾಗಿ ವಿಶೇಷವಾಗಿ ಆಯ್ದುಕೊಳ್ಳುತ್ತಾನೆ. ಅಲ್ಲಾಹನಂತು ಭಾರೀ ಭವ್ಯ ಅನುಗ್ರಹಿಯಾಗಿದ್ದಾನೆ

[75] ನೀವು ನಂಬಿಕೆ ಇಟ್ಟು ರಾಶಿಗಟ್ಟಲೆ ಸಂಪತ್ತನ್ನು ವಶಕ್ಕೊಪ್ಪಿಸಿದರೆ ಅದನ್ನು (ಸುರಕ್ಷಿತವಾಗಿ) ನಿಮಗೆ ಮರಳಿಸುವವರೂ ಗ್ರಂಥದವರಲ್ಲಿದ್ದಾರೆ. ಹಾಗೆಯೇ, ನೀವು ನಂಬಿಕೆ ಇಟ್ಟು ಕೇವಲ ಒಂದು ಚಿನ್ನದ ನಾಣ್ಯವನ್ನು ವಶಕ್ಕೊಪ್ಪಿಸಿದರೆ, ನೀವು ಸತತವಾಗಿ ಬೆನ್ನು ಹಿಡಿಯದಿದ್ದರೆ, ಅದನ್ನು ನಿಮಗೆ ಮರಳಿಸದವರೂ ಅವರಲ್ಲಿದ್ದಾರೆ. ಇದೇಕೆಂದರೆ ಅವರು ‘‘ಉಮ್ಮೀಗಳಿಗೆ (ಅನ್ಯ ಸಮುದಾಯದವರಿಗೆ) ನಮ್ಮ ವಿರುದ್ಧ ಯಾವ ಹಕ್ಕೂ ಇಲ್ಲ’’ ಎನ್ನುವವರಾಗಿದ್ದಾರೆ. ನಿಜವಾಗಿ ಅವರು (ಸತ್ಯವು) ತಮಗೆ ತಿಳಿದಿದ್ದರೂ ಅಲ್ಲಾಹನ ಕುರಿತು ಸುಳ್ಳು ಹೇಳುತ್ತಿದ್ದಾರೆ

[76] ವಾಸ್ತವದಲ್ಲಿ ತಾನು ಕೊಟ್ಟ ಮಾತನ್ನು ಪಾಲಿಸುತ್ತಾ ಭಯಭಕ್ತಿಯೊಂದಿಗೆ ಬದುಕುವ ಧರ್ಮನಿಷ್ಠರನ್ನೇ ಅಲ್ಲಾಹನು ಪ್ರೀತಿಸುತ್ತಾನೆ

[77] ತಾವು ಅಲ್ಲಾಹನ ಜೊತೆ ಮಾಡಿಕೊಂಡ ಕರಾರುಗಳನ್ನು ಹಾಗೂ ತಮ್ಮ ಪ್ರತಿಜ್ಞೆಗಳನ್ನು ಸಣ್ಣ ಬೆಲೆಗೆ ಮಾರಿ ಬಿಡುವವರಿಗೆ ಪರಲೋಕದಲ್ಲಿ ಯಾವ ಪಾಲೂ ಸಿಗದು. ಪುನರುತ್ಥಾನ ದಿನ ಅಲ್ಲಾಹನು ಅವರ ಜೊತೆ ಮಾತನಾಡಲಾರನು, ಅವರನ್ನು ನೋಡಲಾರನು ಮತ್ತು ಅವರನ್ನು ಶುದ್ಧೀಕರಿಸಲಾರನು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ

[78] ಅವರ ಪ್ಯೆಕಿ ಒಂದು ಗುಂಪಿನವರು (ಗ್ರಂಥವನ್ನೋದುವಾಗ, ತಾವು ಓದುತ್ತಿರುವುದು) ಗ್ರಂಥದ ಭಾಗವೆಂದು ನಿಮ್ಮನ್ನು ನಂಬಿಸಲಿಕ್ಕಾಗಿ ತಮ್ಮ ನಾಲಿಗೆಯನ್ನು ತಿರುಚುತ್ತಾರೆ. ನಿಜವಾಗಿ ಅದು ಗ್ರಂಥದ ಭಾಗವಾಗಿರುವುದಿಲ್ಲ. ಅದು ಅಲ್ಲಾಹನ ಕಡೆಯಿಂದ ಬಂದುದೆಂದು ಅವರು ಹೇಳುತ್ತಾರೆ. ನಿಜವಾಗಿ ಅದು ಅಲ್ಲಾಹನ ಕಡೆಯಿಂದ ಬಂದಿರುವುದಿಲ್ಲ. ಅವರು (ಸತ್ಯವನ್ನು) ತಿಳಿದಿರುತ್ತಾ, ಅಲ್ಲಾಹನ ಕುರಿತು ಸುಳ್ಳು ಹೇಳುತ್ತಾರೆ

[79] ಅಲ್ಲಾಹನಿಂದ ಗ್ರಂಥವನ್ನು, ಅಧಿಕಾರವನ್ನು ಮತ್ತು ದೂತಸ್ಥಾನವನ್ನು ಪಡೆದಿರುವ ಯಾವ ಮನುಷ್ಯನೂ ಜನರೊಡನೆ ‘‘ನೀವು ಅಲ್ಲಾಹನನ್ನು ಬಿಟ್ಟು ನನ್ನ ದಾಸರಾಗಿರಿ’’ ಎಂದು ಖಂಡಿತ ಹೇಳಲಾರನು. ಅವನಂತು ‘‘ದಿವ್ಯ ಗ್ರಂಥವನ್ನು (ಇತರರಿಗೆ) ಕಲಿಸುತ್ತಿರುವ ಮತ್ತು ಸ್ವತಃ ಅದನ್ನು ಓದುತ್ತಿರುವ ನೀವು ದೇವರ ನಿಷ್ಠಾವಂತ ದಾಸರಾಗಿರಿ’’ ಎಂದೇ ಹೇಳುವನು

[80] ನೀವು ಮಲಕ್‌ಗಳನ್ನು ಹಾಗೂ ಪ್ರವಾದಿಗಳನ್ನು ದೇವರುಗಳಾಗಿಸಿಕೊಳ್ಳಬೇಕೆಂದೂ ಅವನು ಖಂಡಿತ ನಿಮಗೆ ಆದೇಶಿಸಲಾರನು. ಅವನೇನು, ನೀವು ಮುಸ್ಲಿಮರಾದ (ಅಲ್ಲಾಹನಿಗೆ ಶರಣಾದ) ಬಳಿಕ ನಿಮಗೆ ಧಿಕ್ಕಾರವನ್ನು ಆದೇಶಿಸುವನೇ

[81] ‘‘ನಾನು ನಿಮಗೆ ಗ್ರಂಥ ಹಾಗೂ ಯುಕ್ತಿಯನ್ನು ನೀಡಿರುವೆನು. ತರುವಾಯ ನಿಮ್ಮ ಬಳಿ ಇರುವುದನ್ನು (ಸತ್ಯವನ್ನು) ಸಮರ್ಥಿಸುವ ದೇವದೂತರು ನಿಮ್ಮ ಬಳಿಗೆ ಬಂದಾಗ ನೀವು ಖಚಿತವಾಗಿ ಅವರಲ್ಲಿ ವಿಶ್ವಾಸವಿರಿಸಬೇಕು ಹಾಗೂ ಅವರಿಗೆ ನೆರವಾಗಬೇಕು’’ ಎಂದು ಅಲ್ಲಾಹನು ಪ್ರವಾದಿಗಳಿಂದ ಕರಾರನ್ನು ಪಡೆದಿದ್ದನು. ‘‘ನೀವೇನು ಕರಾರನ್ನು ಒಪ್ಪಿಕೊಂಡಿರಾ? ಮತ್ತು ಈ ಕುರಿತು ನನ್ನ ಪ್ರಮಾಣವನ್ನು (ಬಾಧ್ಯತೆಯಾಗಿ) ಸ್ವೀಕರಿಸಿದಿರಾ?’’ ಎಂದು ಅವನು ಕೇಳಿದನು. ‘‘ನಾವು ಕರಾರನ್ನು ಒಪ್ಪಿ ಕೊಂಡೆವು’’ ಎಂದು ಅವರು ಹೇಳಿದರು. ಅವನು, ‘‘ನೀವು ಸಾಕ್ಷಿಗಳಾಗಿರಿ. ನಿಮ್ಮ ಜೊತೆ ನಾನೂ ಸಾಕ್ಷಿಯಾಗಿರುತ್ತೇನೆ’’ ಎಂದನು

[82] ಇಷ್ಟಾದ ಬಳಿಕ, (ಸತ್ಯವನ್ನು) ಕಡೆಗಣಿಸಿದವರೇ ನಿಜವಾದ ಅವಿಧೇಯರು

[83] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ತಮ್ಮಿಚ್ಛೆಯಿಂದಲೂ, ಅನಿವಾರ್ಯವಾಗಿಯೂ ಅವನಿಗೆ (ಅಲ್ಲಾಹನಿಗೆ) ಶರಣಾಗಿ ಬಿಟ್ಟಿರುವಾಗ ಮತ್ತು ಅಂತಿಮವಾಗಿ ಎಲ್ಲರೂ ಅವನೆಡೆಗೇ ಮರಳಬೇಕಾಗಿರುವಾಗ, ಅವರೇನು ಅಲ್ಲಾಹನ ಧರ್ಮದ ಬದಲು ಬೇರೇನನ್ನಾದರೂ ಹುಡುಕುತ್ತಿದ್ದಾರೆಯೇ

[84] ಹೇಳಿರಿ; ‘‘ನಾವು ಅಲ್ಲಾಹನಲ್ಲಿ ಹಾಗೂ ನಮಗೆ ಏನನ್ನು ಇಳಿಸಿಕೊಡಲಾಗಿದೆಯೋ ಅದರಲ್ಲಿ ಹಾಗೂ ಇಬ್ರಾಹೀಮ್, ಇಸ್ಮಾಈಲ್, ಇಸ್‌ಹಾಕ್, ಯಅ್ಕೂಬ್ ಮತ್ತು ಅವರ ಸಂತತಿಗಳಿಗೆ ಏನನ್ನು ಇಳಿಸಿಕೊಡಲಾಗಿತ್ತೋ ಅದರಲ್ಲಿ ಹಾಗೂ ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಒಡೆಯನು ಏನನ್ನು ದಯಪಾಲಿಸಿದ್ದನೋ ಅದರಲ್ಲಿ ವಿಶ್ವಾಸವಿರಿಸಿರುವೆವು. ನಾವು ಅವರ ಪ್ಯೆಕಿ ಯಾರ ವಿಷಯದಲ್ಲೂ ತಾರತಮ್ಯ ತೋರುವುದಿಲ್ಲ. ನಾವು ಅವನಿಗೆ (ಅಲ್ಲಾಹನಿಗೆ) ಮುಸ್ಲಿಮರಾಗಿರುವೆವು (ಶರಣಾಗಿರುವೆವು)’’

[85] ಯಾರಾದರೂ ಇಸ್ಲಾಮ್‌ನ (ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗುವುದರ) ಹೊರತು ಬೇರಾವುದಾದರೂ ಧರ್ಮವನ್ನು ಬಯಸಿದರೆ ಅದು ಅವನಿಂದ ಖಂಡಿತ ಸ್ವೀಕೃತವಾಗದು ಮತ್ತು ಪರಲೋಕದಲ್ಲಿ ಅವನು ಎಲ್ಲವನ್ನೂ ಕಳೆದು ಕೊಂಡವರ ಸಾಲಲ್ಲಿರುವನು

[86] ಒಮ್ಮೆ ವಿಶ್ವಾಸಿಗಳಾದ ಬಳಿಕ ಹಾಗೂ ದೇವದೂತರು ಸತ್ಯವಂತರೆಂದೂ ತಮ್ಮ ಬಳಿಗೆ ಸ್ಪಷ್ಟ ಪುರಾವೆಗಳು ಬಂದಿವೆಯೆಂದೂ ಸಾಕ್ಷ ಹೇಳಿದ ಬಳಿಕ ಮತ್ತೆ ಧಿಕ್ಕಾರಿಗಳಾಗುವವರಿಗೆ ಅಲ್ಲಾಹನು ಸನ್ಮಾರ್ಗ ತೋರುವುದಾದರೂ ಏಕೆ? ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗ ತೋರುವುದಿಲ್ಲ

[87] ಅಂಥವರ ಮೇಲೆ ಅಲ್ಲಾಹನ ಹಾಗೂ ಮಲಕ್‌ಗಳ ಮತ್ತು ಸಕಲ ಮಾನವರ ಶಾಪವಿದೆ. ಇದುವೇ ಅವರಿಗಿರುವ ಪ್ರತಿಫಲ

[88] ಅವರು ಸದಾಕಾಲ ಅದರಲ್ಲೇ (ನರಕದಲ್ಲೇ) ಇರುವರು. ಅವರ ಶಿಕ್ಷೆಯನ್ನು ಕಿಂಚಿತ್ತೂ ಕಡಿತಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವೂ ಸಿಗದು

[89] ಆದರೆ, ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಪಾಲಿಗೆ ಅಲ್ಲಾಹನು ಕ್ಷಮಾಶೀಲನೂ ದಯಾಳುವೂ ಆಗಿರುವನು

[90] ವಿಶ್ವಾಸಿಗಳಾದ ಬಳಿಕ ಧಿಕ್ಕಾರಿಗಳಾದವರು ಮತ್ತು ತಮ್ಮ ಧಿಕ್ಕಾರದ ಧೋರಣೆಯಲ್ಲೇ ಮುನ್ನಡೆದವರ ಪಶ್ಚಾತ್ತಾಪವು ಖಂಡಿತ ಸ್ವೀಕೃತವಾಗದು. ಅವರೇ ನಿಜವಾಗಿ ದಾರಿಗೆಟ್ಟವರು

[91] ಧಿಕ್ಕಾರಿಗಳಾದವರು ಹಾಗೂ ಧಿಕ್ಕಾರಿಗಳಾಗಿಯೇ ಮೃತರಾದವರಲ್ಲಿ ಯಾರಾದರೂ ಸಂಪೂರ್ಣ ಭೂಮಿಯಷ್ಟು ಬಂಗಾರವನ್ನು ಪರಿಹಾರವಾಗಿ ನೀಡಬಯಸಿದರೂ ಅದನ್ನು ಆತನಿಂದ ಖಂಡಿತ ಸ್ವೀಕರಿಸಲಾಗದು. ಅವರೇ ಕಠೋರ ಶಿಕ್ಷೆಗೆ ಪಾತ್ರರಾಗುವವರು ಮತ್ತು ಅವರಿಗೆ ಯಾರೂ ಸಹಾಯಕರಿರಲಾರರು

[92] ನೀವು ನಿಮಗೆ ಪ್ರಿಯವಾಗಿರುವುದನ್ನು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡುವ ತನಕ ನಿಮಗೆ ಶ್ರೇಷ್ಠತೆ ಪ್ರಾಪ್ತವಾಗದು. ನೀವು ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಕುರಿತು ಅಲ್ಲಾಹನು ಅರಿತಿರುತ್ತಾನೆ

[93] ಇಸ್ರಾಈಲರ ಸಂತತಿಗಳ ಪಾಲಿಗೆ (ಅವರಿಂದು ನಿಷಿದ್ದವೆನ್ನುತ್ತಿರುವ) ಎಲ್ಲ ಭೋಜನಗಳೂ ಸಮ್ಮತವಾಗಿದ್ದುವು – ತೌರಾತ್ ಗ್ರಂಥದ ಆಗಮನಕ್ಕೆ ಮುನ್ನ ಇಸ್ರಾಈಲರು (ಪ್ರವಾದಿ ಯಅ್ಕೂಬರು, ಅನಾರೋಗ್ಯದ ಕಾರಣ) ಸ್ವತಃ ತಮ್ಮ ಮೇಲೆ ನಿಷೇಧಿಸಿಕೊಂಡವುಗಳ ಹೊರತು. ‘‘ನೀವು ಸತ್ಯವಂತರಾಗಿದ್ದರೆ ತೌರಾತನ್ನು ತಂದು ಅದನ್ನು ಓದಿ ತೋರಿಸಿರಿ’’ ಎಂದು (ಅವರೊಡನೆ) ಹೇಳಿರಿ

[94] ಇಷ್ಟಾದ ಬಳಿಕವೂ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರೇ ಅಕ್ರಮಿಗಳಾಗಿದ್ದಾರೆ

[95] ಹೇಳಿರಿ; ‘‘ಅಲ್ಲಾಹನು ಸತ್ಯವನ್ನೇ ಹೇಳಿರುವನು. ಏಕನಿಷ್ಠರಾಗಿದ್ದ ಇಬ್ರಾಹೀಮರ ಮತವನ್ನೇ ಅನುಸರಿಸಿರಿ. ಅವರು ಬಹುದೇವಾರಾಧಕರಾಗಿರಲಿಲ್ಲ’’

[96] ಮಾನವರಿಗಾಗಿ (ಸಾಮೂಹಿಕ ಆರಾಧನೆಗೆಂದು) ನಿಗದಿಯಾದ ಪ್ರಥಮ ಭವನವು, ಸಮೃದ್ಧಿ ತುಂಬಿದ ಮಕ್ಕಃದಲ್ಲಿದೆ ಮತ್ತು ಅದು ಲೋಕಕ್ಕೆಲ್ಲಾ ಮಾರ್ಗದರ್ಶಿಯಾಗಿದೆ

[97] ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹೀಮರ ಸ್ಥಾನವಿದೆ. ಅದರೊಳಗೆ ಪ್ರವೇಶಿಸಿದವನು ಸುರಕ್ಷಿತನಾದನು. ಅಲ್ಲಾಹನ ಮೆಚ್ಚುಗೆಗಾಗಿ ಈ ಭವನದ ಹಜ್ಜ್ (ಯಾತ್ರೆ) ಮಾಡುವುದು, (ಇಲ್ಲಿಗೆ) ಪ್ರಯಾಣಿಸಬಲ್ಲ ಜನರ ಕರ್ತವ್ಯವಾಗಿದೆ. ಇದನ್ನು ಧಿಕ್ಕರಿಸುವವನು (ತಿಳಿದಿರಲಿ) – ಖಂಡಿತವಾಗಿಯೂ ಅಲ್ಲಾಹನು ಸರ್ವಲೋಕಗಳಿಂದ ನಿರಪೇಕ್ಷನಾಗಿದ್ದಾನೆ

[98] ಹೇಳಿರಿ; ‘‘ಗ್ರಂಥದವರೇ, ನೀವೇಕೆ ಅಲ್ಲಾಹನ ವಚನಗಳನ್ನು ತಿರಸ್ಕರಿಸುತ್ತೀರಿ? ಅಲ್ಲಾಹನಂತೂ ನೀವು ಮಾಡುತ್ತಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ.’’

[99] ಹೇಳಿರಿ; ‘‘ಗ್ರಂಥದವರೇ, ವಿಶ್ವಾಸಿಗಳನ್ನು ನೀವೇಕೆ ಅಲ್ಲಾಹನ ಮಾರ್ಗದಿಂದ ತಡೆಯುತ್ತೀರಿ? (ಅವರು ಸನ್ಮಾರ್ಗದಲ್ಲಿದ್ದಾರೆಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದರೂ ನೀವು ವಕ್ರತೆಯನ್ನು ಹುಡುಕುತ್ತೀರಿ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನೇನೂ ಅಜ್ಞನಾಗಿಲ್ಲ’’

[100] ವಿಶ್ವಾಸಿಗಳೇ, ನೀವು ಗ್ರಂಥ ನೀಡಲಾಗಿರುವವರ ಯಾವ ಪಂಗಡವನ್ನು ಅನುಸರಿಸಿದರೂ ಅವರು ನಿಮ್ಮನ್ನು ವಿಶ್ವಾಸದ ಬಳಿಕ ಮತ್ತೆ ಧಿಕ್ಕಾರಿಗಳಾಗಿ ಮಾರ್ಪಡಿಸುವರು

[101] ನಿಮಗೆ ಅಲ್ಲಾಹನ ವಚನಗಳನ್ನು ಓದಿ ಕೇಳಿಸಲಾಗುತ್ತಿರುವಾಗ ಮತ್ತು ಅಲ್ಲಾಹನ ದೂತನು ನಿಮ್ಮ ನಡುವೆ ಇರುವಾಗ ನೀವು ಹೇಗೆ ತಾನೇ ಧಿಕ್ಕಾರಿಗಳಾಗಬಲ್ಲಿರಿ? ಸ್ಥಿರವಾಗಿ ಅಲ್ಲಾಹನನ್ನು ಅವಲಂಬಿಸಿದಾತನಿಗೆ ಸನ್ಮಾರ್ಗದರ್ಶನ ಪ್ರಾಪ್ತವಾಗುತ್ತದೆ

[102] ವಿಶ್ವಾಸಿಗಳೇ, ಅಂಜಬೇಕಾದ ರೀತಿಯಲ್ಲಿ ಅಲ್ಲಾಹನಿಗೆ ಅಂಜಿರಿ ಮತ್ತು ನೀವು ಮುಸ್ಲಿಮರಲ್ಲದ ಸ್ಥಿತಿಯಲ್ಲಿ ಮೃತರಾಗಬಾರದು

[103] ನೀವೆಲ್ಲಾ ಜೊತೆಯಾಗಿ ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿಯಿರಿ ಹಾಗೂ ನೀವು ಭಿನ್ನರಾಗಬೇಡಿ. ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅಲ್ಲಾಹನು ನಿಮ್ಮ ಮನಸ್ಸುಗಳನ್ನು ಪರಸ್ಪರ ಪ್ರೀತಿಯಿಂದ ಬೆಸೆದನು ಮತ್ತು ಅವನ ಅನುಗ್ರಹದಿಂದ ನೀವು ಸಹೋದರರಾದಿರಿ. ಹಾಗೆಯೇ ನೀವು ಒಂದು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ನೀವು ಸನ್ಮಾರ್ಗವನ್ನು ಪಡೆಯಬೇಕೆಂದು ಈ ರೀತಿ ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ವಿವರಿಸುತ್ತಾನೆ

[104] ನಿಮ್ಮೊಳಗೆ, (ಜನರನ್ನು) ಒಳಿತಿನೆಡೆಗೆ ಆಮಂತ್ರಿಸುತ್ತಿರುವ, ಸತ್ಕಾರ್ಯವನ್ನು ಆದೇಶಿಸುತ್ತಿರುವ ಮತ್ತು ದುಷ್ಟ ಕೃತ್ಯಗಳಿಂದ ತಡೆಯುತ್ತಿರುವ ಗುಂಪೊಂದು ಸದಾ ಇರಬೇಕು. ಅವರೇ ವಿಜಯಿಗಳಾಗುವರು

[105] ತಮ್ಮ ಬಳಿಗೆ ಬಹಳ ಸ್ಪಷ್ಟವಾದ ಮಾರ್ಗದರ್ಶನವು ಬಂದ ಬಳಿಕ ವಿಂಗಡಿತರಾದ ಹಾಗೂ ಪರಸ್ಪರ ಭಿನ್ನತೆ ತಾಳಿದ ಜನರಂತೆ ನೀವಾಗಬೇಡಿ. ಅವರಿಗಾಗಿ ಭಾರೀ ಘೋರ ಶಿಕ್ಷೆ ಕಾದಿದೆ

[106] (ಪುನರುತ್ಥಾನದ) ಆ ದಿನ ಕೆಲವು ಮುಖಗಳು ಬೆಳಗಿರುವವು ಮತ್ತು ಕೆಲವು ಮುಖಗಳು ಕರಾಳವಾಗಿರುವವು. ಮುಖವು ಕರಾಳವಾಗಿರುವವರೊಡನೆ ‘‘ನೀವೇನು, ಧರ್ಮವನ್ನು ನಂಬಿದ ಬಳಿಕ ಮತ್ತೆ ಧಿಕ್ಕಾರಿಗಳಾದಿರಾ? ಹಾಗಾದರೆ ನೀವೆಸಗಿದ ಧಿಕ್ಕಾರದ ಫಲವಾಗಿ ಇದೀಗ ಶಿಕ್ಷೆಯನ್ನು ಸವಿಯಿರಿ’’ (ಎನ್ನಲಾಗುವುದು)

[107] (ಅಂದು) ಮುಖ ಬೆಳಗಿರುವವರು ಅಲ್ಲಾಹನ ವಿಶೇಷ ಅನುಗ್ರಹದ ಒಳಗಿರುವರು ಮತ್ತು ಅವರು ಸದಾಕಾಲ ಅಲ್ಲೇ ಇರುವರು

[108] ಇವು ಅಲ್ಲಾಹನ ವಚನಗಳು – ನಾವು ಇವುಗಳನ್ನು ನಿಮಗೆ ಸರಿಯಾಗಿ ಓದಿ ಕೇಳಿಸುತ್ತಿದ್ದೇವೆ. ಅಲ್ಲಾಹನಂತೂ ಲೋಕವಾಸಿಗಳ ಮೇಲೆ ಯಾವುದೇ ಅನ್ಯಾಯ ಎಸಗಬಯಸುವುದಿಲ್ಲ

[109] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೆ ಸೇರಿದೆ ಮತ್ತು ಎಲ್ಲ ವಿಚಾರಗಳು ಅಂತಿಮವಾಗಿ ಅಲ್ಲಾಹನೆಡೆಗೇ ಮರಳಲಿವೆ

[110] ನೀವು ಅತ್ಯುತ್ತಮ ಸಮುದಾಯದವರು. ನಿಮ್ಮನ್ನು ಸಂಪೂರ್ಣ ಮಾನವ ಸಮಾಜಕ್ಕಾಗಿ ನಿಯೋಜಿಸಲಾಗಿದೆ. ನೀವು (ಜನರಿಗೆ) ಸತ್ಕಾರ್ಯಗಳನ್ನು ಆದೇಶಿಸುವವರು ಹಾಗೂ (ಅವರನ್ನು) ಕೆಟ್ಟ ಕೃತ್ಯಗಳಿಂದ ತಡೆಯುವವರು ಮತ್ತು ಅಲ್ಲಾಹನಲ್ಲಿ ವಿಶ್ವಾಸ ಉಳ್ಳವರು. ಗ್ರಂಥದವರು (ಸತ್ಯ ಧರ್ಮವನ್ನು) ನಂಬಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು. ಅವರಲ್ಲೂ ಕೆಲವು ವಿಶ್ವಾಸಿಗಳಿದ್ದಾರೆ – ಆದರೆ ಅವರಲ್ಲಿ ಹೆಚ್ಚಿನವರು ಅವಿಧೇಯರು

[111] ನಿಮಗೆ ಒಂದಿಷ್ಟು ಕಿರುಕುಳ ನೀಡುವ ಹೊರತು ಬೇರಾವ ಹಾನಿಯನ್ನೂ ಮಾಡಲು ಅವರಿಗೆ ಸಾಧ್ಯವಾಗದು. ಅವರು ನಿಮ್ಮ ವಿರುದ್ಧ ಯುದ್ಧಕ್ಕಿಳಿದರೂ (ಬೇಗನೇ) ನಿಮಗೆ ಬೆನ್ನು ತೋರಿಸಿ ಓಡುವರು ಮತ್ತು ಅವರಿಗೆ ಯಾವ ನೆರವೂ ಸಿಗದು

[112] ಅವರು ಎಲ್ಲೇ ಇರಲಿ, ಅವರ ಮೇಲೆ ಅಪಮಾನವನ್ನು ಹೇರಲಾಗಿದೆ – ಅಲ್ಲಾಹನ ಜೊತೆಗಿನ ಕರಾರು ಅಥವಾ ಜನರ ಜೊತೆಗಿನ ಕರಾರಿನ ಆಧಾರದಲ್ಲಿ ಅವರು ಪಡೆಯುವ ತಾತ್ಕಾಲಿಕ ರಕ್ಷಣೆಯು ಮಾತ್ರ ಇದಕ್ಕೆ ಹೊರತಾಗಿದೆ. ಅವರು ಅಲ್ಲಾಹನ ಕ್ರೋಧವನ್ನು ಸಂಪಾದಿಸಿಕೊಂಡಿದ್ದಾರೆ ಮತ್ತು ಅವರ ಮೇಲೆ ದಾರಿದ್ರವನ್ನು ಹೇರಿ ಬಿಡಲಾಗಿದೆ. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ಧಿಕ್ಕರಿಸುತ್ತಿದ್ದರು ಹಾಗೂ ಅನ್ಯಾಯವಾಗಿ ಪ್ರವಾದಿಗಳ ಹತ್ಯೆ ನಡೆಸುತ್ತಿದ್ದರು ಮತ್ತು ಅವರು ಅವಿಧೇಯರಾಗಿದ್ದರು ಹಾಗೂ ಮಿತಿ ಮೀರುವವರಾಗಿದ್ದರು

[113] ಅವರೆಲ್ಲರೂ ಸಮಾನರಲ್ಲ. ಗ್ರಂಥದವರಲ್ಲಿ ಒಂದು ಗುಂಪು (ಸನ್ಮಾರ್ಗದಲ್ಲಿ) ಸ್ಥಿರವಾಗಿದೆ. ರಾತ್ರಿ ವೇಳೆ ಅವರು ಅಲ್ಲಾಹನ ವಚನಗಳನ್ನು ಓದುತ್ತಿರುತ್ತಾರೆ ಮತ್ತು ಸಾಷ್ಟಾಂಗವೆರಗುತ್ತಿರುತ್ತಾರೆ

[114] ಅವರು ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟಿರುತ್ತಾರೆ, ಒಳಿತನ್ನು ಆದೇಶಿಸುತ್ತಾರೆ, ಕೆಡುಕಿನಿಂದ ತಡೆಯುತ್ತಾರೆ ಮತ್ತು ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಪಾಲುಗೊಳ್ಳುತ್ತಾರೆ. ಅವರೇ ಸಜ್ಜನರ ಸಾಲಿನವರು

[115] ಅವರು ಮಾಡುವ ಯಾವುದೇ ಸತ್ಕಾರ್ಯವು ತಿರಸ್ಕೃತವಾಗದು. ಅಲ್ಲಾಹನಂತೂ ಧರ್ಮನಿಷ್ಠರನ್ನು ಚೆನ್ನಾಗಿ ಬಲ್ಲನು

[116] ಧಿಕ್ಕಾರಿಗಳಿಗೆ ಅಲ್ಲಾಹನೆದುರು ಅವರ ಸಂಪತ್ತಿನಿಂದಾಗಲಿ, ಸಂತಾನದಿಂದಾಗಲಿ ಯಾವ ಪ್ರಯೋಜನವೂ ಆಗದು ಮತ್ತು ಅವರು ನರಕದವರು. ಅವರು ಶಾಶ್ವತವಾಗಿ ಅಲ್ಲೇ ಉಳಿಯುವರು

[117] ಕೇವಲ ಈ ಲೋಕದ ಬದುಕಿಗಾಗಿ ಖರ್ಚು ಮಾಡುವವರ ಉದಾಹರಣೆಯು, ಹಿಮ ತುಂಬಿದ ಗಾಳಿಯಂತಿದೆ. ಅದು ಸ್ವತಃ ತಮ್ಮ ಮೇಲೆ ಅಕ್ರಮವೆಸಗಿದ್ದವರ ಹೊಲದ ಮೇಲೆರಗಿ ಅದನ್ನು ನಾಶ ಮಾಡಿತು. ನಿಜವಾಗಿ (ಈ ಮೂಲಕ) ಅಲ್ಲಾಹನೇನೂ ಅವರ ಮೇಲೆ ಅಕ್ರಮವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು

[118] ವಿಶ್ವಾಸಿಗಳೇ, ನಿಮ್ಮವರ ಹೊರತು ಅನ್ಯರನ್ನು ನಿಮ್ಮ ಪರಮ ನಂಬಿಗಸ್ಥರಾಗಿಸಿಕೊಳ್ಳಬೇಡಿ. ಅವರು ನಿಮಗೆ ಹಾನಿ ಮಾಡದೆ ಇರುವುದಿಲ್ಲ. ಅವರು ನಿಮಗೆ ಕಿರುಕುಳ ನೀಡಬಯಸುತ್ತಾರೆ. ಅವರ ಹಗೆತನವು ಈಗಾಗಲೇ ಅವರ ಬಾಯಿಗಳಿಂದ ಪ್ರಕಟವಾಗಿದೆ. ಇನ್ನು ಅವರ ಮನದೊಳಗೆ ಅಡಗಿರುವ ಹಗೆತನವು ಇದಕ್ಕಿಂತಲೂ ಮಿಗಿಲಾಗಿದೆ. ನಾವು ನಿಮಗೆ ಸತ್ಯ ವಚನಗಳನ್ನು ವಿವರಿಸುತ್ತಿದ್ದೇವೆ. ನೀವು ಬುದ್ಧಿಯುಳ್ಳವರಾಗಿದ್ದರೆ (ಇದರ ಔಚಿತ್ಯವನ್ನು ಅರಿಯಿರಿ)

[119] ನೀವು ಎಂಥವರೆಂದರೆ, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವಾದರೂ ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ನೀವು ಎಲ್ಲ ಗ್ರಂಥಗಳಲ್ಲಿ ನಂಬಿಕೆ ಇಡುತ್ತೀರಿ. (ಇಷ್ಟಾಗಿಯೂ) ಅವರು ನಿಮ್ಮನ್ನು ಭೇಟಿಯಾದಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ, ಆದರೆ ತಾವು ಒಂಟಿಯಾಗಿರುವಾಗ ನಿಮ್ಮ ವಿರುದ್ಧ ಆಕ್ರೋಶದಿಂದ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. ಹೇಳಿರಿ; ‘‘ನೀವು ಆ ನಿಮ್ಮ ಕೋಪದಲ್ಲೇ ಸಾಯಿರಿ. ಖಂಡಿತವಾಗಿಯೂ ಅಲ್ಲಾಹನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ’’

[120] ನಿಮಗೇನಾದರೂ ಹಿತವಾದಾಗ ಅವರಿಗೆ ಬೇಸರವಾಗುತ್ತದೆ ಮತ್ತು ನಿಮಗೇನಾದರೂ ಅಹಿತವಾದಾಗ ಅವರು ಸಂಭ್ರಮಿಸುತ್ತಾರೆ. ನೀವಿನ್ನು ಸಹನಶೀಲರಾಗಿದ್ದರೆ ಹಾಗೂ ಧರ್ಮನಿಷ್ಠರಾಗಿದ್ದರೆ, ಅವರ ಸಂಚು ನಿಮಗೆ ಯಾವ ಹಾನಿಯನ್ನೂ ಮಾಡದು. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಆವರಿಸಿಕೊಂಡಿದ್ದಾನೆ

[121] (ದೂತರೇ,) ಮುಂಜಾನೆ ನೀವು ನಿಮ್ಮ ಮನೆಯಿಂದ ಹೊರಟು, ವಿಶ್ವಾಸಿಗಳನ್ನು ಯುದ್ಧಕ್ಕಾಗಿ ನಿರ್ದಿಷ್ಟ ನೆಲೆಗಳಲ್ಲಿ ನಿಯೋಜಿಸುತ್ತಿದ್ದಿರಿ. ಅಲ್ಲಾಹನು ಎಲ್ಲವನ್ನೂ ಆಲಿಸುವವನು ಮತ್ತು ಅರಿಯುವವನಾಗಿದ್ದಾನೆ

[122] ನಿಮ್ಮಲ್ಲಿನ ಎರಡು ಗುಂಪುಗಳು, ಅಲ್ಲಾಹನೇ ತಮ್ಮ ಪೋಷಕನಾಗಿದ್ದರೂ (ಶತ್ರುಗಳಿಗೆ ಅಂಜಿ) ಹಿಂದೆ ಸರಿಯ ಹೊರಟಿದ್ದರು. ನಿಜವಾಗಿ ವಿಶ್ವಾಸಿಗಳು ಸದಾ ಅಲ್ಲಾಹನಲ್ಲಿ ಭರವಸೆ ಇಟ್ಟಿರಬೇಕು

[123] ಈ ಹಿಂದೆ ‘ಬದ್ರ್’ನಲ್ಲಿ ನೀವು ತೀರಾ ದುರ್ಬಲರಾಗಿದ್ದಾಗ ಅಲ್ಲಾಹನು ನಿಮಗೆ ನೆರವಾಗಿರುವನು. ಅಲ್ಲಾಹನಿಗೆ ಅಂಜಿರಿ. ನೀವು ಕೃತಜ್ಞರಾಗಬಹುದು

[124] (ದೂತರೇ,) ನೀವು ವಿಶ್ವಾಸಿಗಳೊಡನೆ ‘‘ನಿಮ್ಮೊಡೆಯನು ಮೂರು ಸಾವಿರ ಮಲಕ್‌ಗಳನ್ನು ಇಳಿಸುವ ಮೂಲಕ ನಿಮಗೆ ನೆರವಾದರೆ ಸಾಲದೇ?’’ ಎಂದು ಕೇಳಿದ್ದಿರಿ

[125] ಯಾಕಿಲ್ಲ? ನೀವೆಲ್ಲಾ ಸಹನಶೀಲರಾಗಿದ್ದರೆ ಮತ್ತು ಧರ್ಮನಿಷ್ಠರಾಗಿದ್ದರೆ ಅವರು (ಶತ್ರು ಸೇನೆ) ನಿಮ್ಮ ಮೇಲೆ ಮುಗಿ ಬಿದ್ದಾಗ ನಿಮ್ಮ ಒಡೆಯನು, ಗುರುತಿಸಬಹುದಾದ ಐದು ಸಾವಿರ ಮಲಕ್‌ಗಳ ಮೂಲಕ ನಿಮಗೆ ನೆರವಾಗುವನು

[126] ಅಲ್ಲಾಹನು ನಿಮಗೆ ಶುಭವಾರ್ತೆಯಾಗಿ ಹಾಗೂ ನಿಮ್ಮ ಮನಸ್ಸುಗಳ ಸಂತೃಪ್ತಿಗಾಗಿ ಈ ಮಾಹಿತಿಯನ್ನು ಒದಗಿಸುತ್ತಿದ್ದಾನೆ. ನೆರವಂತು ಪ್ರಚಂಡನೂ, ಯುಕ್ತಿವಂತನೂ ಆಗಿರುವ ಅಲ್ಲಾಹನ ಹೊರತು ಬೇರೆ ಯಾರಿಂದಲೂ ಬರುವುದಿಲ್ಲ

[127] ಧಿಕ್ಕಾರಿಗಳ ಒಂದು ಪಾರ್ಶ್ವವನ್ನೇ ಕಡಿದು ಹಾಕಲು ಅಥವಾ ಅವರನ್ನು ಸಂಪೂರ್ಣ ನಿಂದ್ಯರಾಗಿಸಿ, ಅವರು ಹತಾಶರಾಗಿ ಮರಳುವಂತೆ ಮಾಡಲು (ಅವನ ನೆರವೇ ಸಾಕು)

[128] (ದೂತರೇ,) ಈ ವಿಷಯದಲ್ಲಿ ನಿಮಗೇನೂ ಪಾತ್ರವಿಲ್ಲ. ಅವನು (ಅಲ್ಲಾಹನು) ತಾನಿಚ್ಛಿಸಿದರೆ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ ಅವರು ಅಕ್ರಮಿಗಳು

[129] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[130] ವಿಶ್ವಾಸಿಗಳೇ, ದುಪ್ಪಟ್ಟು ಅಥವಾ ಬಹುಪಟ್ಟು ಬಡ್ಡಿ ತಿನ್ನಬೇಡಿ. ಅಲ್ಲಾಹನಿಗೆ ಅಂಜಿರಿ. ನೀವು ವಿಜಯಿಗಳಾಗಬಲ್ಲಿರಿ

[131] ಮತ್ತು ನೀವು, ಧಿಕ್ಕಾರಿಗಳಿಗಾಗಿಯೇ ಸಜ್ಜುಗೊಳಿಸಿಡಲಾಗಿರುವ ನರಕದ ಕುರಿತು ಎಚ್ಚರವಾಗಿರಿ

[132] ನೀವು ಅಲ್ಲಾಹನ ಹಾಗೂ (ಅವನ) ದೂತರ ಆಜ್ಞಾಪಾಲಕರಾಗಿರಿ – ನೀವು (ಅವನ) ಕರುಣೆಗೆ ಪಾತ್ರರಾಗಬಲ್ಲಿರಿ. 133. ನೀವು ನಿಮ್ಮೊಡೆಯನ ಕ್ಷಮೆಯೆಡೆಗೆ ಹಾಗೂ ಭೂಮ್ಯಾಕಾಶಗಳಷ್ಟು ವ್ಯಾಪಕವಾಗಿರುವ ಸ್ವರ್ಗದೆಡೆಗೆ ಧಾವಿಸಿರಿ. ಅದನ್ನು ಧರ್ಮನಿಷ್ಠರಿಗಾಗಿಯೇ ಸಜ್ಜುಗೊಳಿಸಿಡಲಾಗಿದೆ

[133] ಅವರು ಸುಖದ ಸ್ಥಿತಿಯಲ್ಲೂ ಸಂಕಷ್ಟದಲ್ಲೂ (ಸತ್ಕಾರ್ಯಗಳಿಗಾಗಿ) ಖರ್ಚು ಮಾಡುವವರು, ಕೋಪವನ್ನು ನುಂಗಿ ಕೊಳ್ಳುವವರು ಮತ್ತು ಜನರನ್ನು ಕ್ಷಮಿಸುವವರಾಗಿರುತ್ತಾರೆ. ಅಲ್ಲಾಹನಂತು, ಸೌಜನ್ಯಶೀಲರನ್ನು ಪ್ರೀತಿಸುತ್ತಾನೆ

[134] ಅವರಿಂದ ಅನೈತಿಕ ಕೃತ್ಯವೇನಾದರೂ ಸಂಭವಿಸಿ ಬಿಟ್ಟರೆ ಅಥವಾ ಅವರು ತಮ್ಮ ಮೇಲೇನಾದರೂ ಅಕ್ರಮವೆಸಗಿಕೊಂಡರೆ (ತಕ್ಷಣವೇ) ಅಲ್ಲಾಹನನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು ತಮ್ಮಿಂದಾದ ಪಾಪಕ್ಕಾಗಿ ಕ್ಷಮೆಯಾಚಿಸುತ್ತಾರೆ. ಅಲ್ಲಾಹನಲ್ಲದೆ ಬೇರಾರಿದ್ದಾರೆ, ಪಾಪಗಳನ್ನು ಕ್ಷಮಿಸುವುದಕ್ಕೆ? – ಅವರು (ತಮ್ಮ ತಪ್ಪನ್ನು) ತಿಳಿದಿರುತ್ತಾ ತಮ್ಮ ಕೃತ್ಯದ ಕುರಿತು ಉದ್ಧಟರಾಗಿರುವುದಿಲ್ಲ

[135] ಅಂಥವರಿಗೆ ಅವರ ಪ್ರತಿಫಲವಾಗಿ ಅವರ ಒಡೆಯನ ಕಡೆಯಿಂದ ಕ್ಷಮೆ ಹಾಗೂ ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳು ಸಿಗಲಿವೆ. ಅವರು ಅವುಗಳಲ್ಲಿ ಸದಾ ಕಾಲ ಇರುವರು. ಅದೆಷ್ಟು ಶ್ರೇಷ್ಠವಾಗಿದೆ, ಸತ್ಕರ್ಮಿಗಳ ಪ್ರತಿಫಲ

[136] ನಿಮಗಿಂತ ಹಿಂದೆಯೂ ಹಲವು ಯುಗಗಳು ಉರುಳಿವೆ. ನೀವು ಭೂಮಿಯಲ್ಲಿ ಪ್ರಯಾಣಿಸಿ – (ಸತ್ಯವನ್ನು) ತಿರಸ್ಕರಿಸಿದವರ ಗತಿ ಏನಾಯಿತೆಂದು ನೋಡಿರಿ

[137] ಇದು – ಎಲ್ಲ ಮಾನವರಿಗಾಗಿ ಒಂದು ಸ್ಪಷ್ಟ ಪ್ರಕಟಣೆಯಾಗಿದೆ ಮತ್ತು ಇದು ಧರ್ಮನಿಷ್ಠರಿಗಾಗಿ ಮಾರ್ಗದರ್ಶನ ಹಾಗೂ ಉಪದೇಶವಾಗಿದೆ

[138] ನೀವು ನಿರಾಶರಾಗಬೇಡಿ ಮತ್ತು ದುಃಖಿಸಬೇಡಿ – ನೀವು ವಿಶ್ವಾಸಿಗಳಾಗಿದ್ದರೆ ನೀವೇ ವಿಜಯಿಗಳಾಗುವಿರಿ

[139] (ಇದೀಗ) ನಿಮಗೆ ಘಾಸಿಯಾಗಿದ್ದರೆ, ಈ ಹಿಂದೆ ಆ (ಎದುರಾಳಿ) ಗುಂಪಿಗೂ ಇಂತಹದೇ ಘಾಸಿಯಾಗಿತ್ತು. ಈ ರೀತಿ ನಾವು ಕಾಲವನ್ನು ಜನರ ಮಧ್ಯೆ ಪರಿವರ್ತಿಸುತ್ತಿರುತ್ತೇವೆ – ಅಲ್ಲಾಹನು ನೈಜ ವಿಶ್ವಾಸಿಗಳನ್ನು ಗುರುತಿಸುವಂತಾಗಲು ಹಾಗೂ ನಿಮ್ಮಲ್ಲಿ ಕೆಲವರನ್ನು ಸಾಕ್ಷಿಗಳಾಗಿಸಲು (ಹೀಗಾಗುತ್ತದೆ). ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ

[140] ಅಲ್ಲಾಹನು ವಿಶ್ವಾಸಿಗಳನ್ನು ಸಂಸ್ಕರಿಸಲಿಕ್ಕಾಗಿ ಹಾಗೂ ಧಿಕ್ಕಾರಿಗಳ ಸದ್ದಡಗಿಸಲಿಕ್ಕಾಗಿ ಹೀಗೆ ಮಾಡುತ್ತಾನೆ

[141] ನೀವೇನು, ಅಲ್ಲಾಹನು ನಿಮ್ಮ ಪೈಕಿ ಹೋರಾಟ ನಡೆಸಿದವರನ್ನು ಮತ್ತು ಸಹನಶೀಲರನ್ನು ಗುರುತಿಸುವ ಮುನ್ನವೇ ನೀವು ಸ್ವರ್ಗ ಪ್ರವೇಶಿಸುವಿರಿ ಎಂದು ಕೊಂಡಿರುವಿರಾ

[142] ಮರಣವನ್ನು ಎದುರಿಸುವ ಮುನ್ನ ನೀವು ಅದಕ್ಕಾಗಿ ಹಂಬಲಿಸುತ್ತಿದ್ದಿರಿ. ಇದೀಗ ನೀವು ಅದನ್ನು ಕಣ್ಣಾರೆ ಕಾಣುತ್ತಿರುವಿರಿ

[143] ಮುಹಮ್ಮದರು ದೇವದೂತರಲ್ಲದೆ ಬೇರೇನೂ ಅಲ್ಲ. ಅವರಿಗಿಂತ ಹಿಂದೆಯೂ ಹಲವು ದೇವದೂತರು ಗತಿಸಿದ್ದಾರೆ. ಅವರೀಗ ಮೃತರಾದರೆ ಅಥವಾ ಹತರಾದರೆ ನೀವೇನು ಬೆನ್ನು ತಿರುಗಿಸಿ ಮರಳಿ ಹೋಗುವಿರಾ? ಹಾಗೆ ಬೆನ್ನು ತಿರುಗಿಸಿ ಮರಳುವ ಯಾರೂ (ಆ ಮೂಲಕ) ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರನು. ಅಲ್ಲಾಹನು ಕೃತಜ್ಞರಿಗೆ ಪ್ರತಿಫಲ ನೀಡುವನು

[144] ಲಿಖಿತವಾಗಿರುವ ಒಂದು ನಿರ್ದಿಷ್ಟ ಸಮಯದಲ್ಲಿ ಅಲ್ಲಾಹನು ಅಪ್ಪಣೆ ನೀಡದೆ ಯಾವ ವ್ಯಕ್ತಿಯೂ ಮೃತನಾಗಲಾರನು ಇಹಲೋಕದ ಲಾಭವನ್ನು ಬಯಸುವಾತನಿಗೆ ನಾವು ಅದರಿಂದಲೇ ನೀಡುವೆವು ಮತ್ತು ಪರಲೋಕದ ಲಾಭವನ್ನು ಬಯಸುವಾತನಿಗೆ ನಾವು ಅದರಿಂದ ನೀಡುವೆವು. ಕೃತಜ್ಞರಿಗೆ ನಾವು ಬೇಗನೇ ಪ್ರತಿಫಲವನ್ನು ನೀಡಲಿರುವೆವು

[145] (ಈ ಹಿಂದೆಯೂ) ಹಲವು ದೂತರಿದ್ದರು – ಅವರ ಜೊತೆ ಸೇರಿ ಅನೇಕ ದೇವಭಕ್ತರು (ಮಿಥ್ಯದ ವಿರುದ್ಧ) ಸಮರ ಹೂಡಿದ್ದರು. ಅಲ್ಲಾಹನ ಮಾರ್ಗದಲ್ಲಿ ತಮಗೆದುರಾದ ಸಂಕಷ್ಟಗಳಿಂದ ಅವರು ಖಿನ್ನರಾಗಲಿಲ್ಲ, ದುರ್ಬಲರಾಗಲಿಲ್ಲ ಮತ್ತು ತಲೆ ಬಾಗಲಿಲ್ಲ. (ಅಂತಹ) ಸಹನಶೀಲರನ್ನೇ ಅಲ್ಲಾಹನು ಪ್ರೀತಿಸುತ್ತಾನೆ

[146] ಅವರು ಹೇಳುತ್ತಿದ್ದುದು ಇಷ್ಟೇ; ‘‘ನಮ್ಮೊಡೆಯಾ, ನಮ್ಮ ಪಾಪಗಳನ್ನು ಮತ್ತು ನಮ್ಮ ವಿಷಯದಲ್ಲ್ಲಿ ನಮ್ಮಿಂದಾಗಿರುವ ಅತಿರೇಕಗಳನ್ನು ಕ್ಷಮಿಸು, ನಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸು ಮತ್ತು ಧಿಕ್ಕಾರಿಗಳೆದುರು ನಮಗೆ ನೆರವಾಗು.’’

[147] ಅಲ್ಲಾಹನು ಅವರಿಗೆ ಇಹಲೋಕದ ಪುರಸ್ಕಾರವನ್ನೂ ನೀಡಿದನು ಮತ್ತು ಪರಲೋಕದ ಅತ್ಯುತ್ತಮ ಪುರಸ್ಕಾರವನ್ನೂ ನೀಡಿದನು. ಅಲ್ಲಾಹನಂತು ಸತ್ಕರ್ಮಗಳನ್ನು ಮಾಡುವವರನ್ನು ಪ್ರೀತಿಸುತ್ತಾನೆ

[148] ವಿಶ್ವಾಸಿಗಳೇ, ನೀವು ಧಿಕ್ಕಾರಿಗಳ ಆದೇಶ ಪಾಲಿಸಿದರೆ ಅವರು ನಿಮ್ಮನ್ನು ಹಿಂದಕ್ಕೆ (ಧಿಕ್ಕಾರದ ಪಂಥಕ್ಕೆ) ಮರಳಿಸುವರು ಮತ್ತು (ಹಾಗಾಗಿ ಬಿಟ್ಟರೆ) ನೀವು ಭಾರೀ ನಷ್ಟಕ್ಕೆ ಸಿಲುಕುವಿರಿ

[149] ನಿಜವಾಗಿ ಅಲ್ಲಾಹನೇ ನಿಮ್ಮ ಪೋಷಕನಾಗಿದ್ದಾನೆ ಮತ್ತು ಅವನು ಅತ್ಯುತ್ತಮ ಸಹಾಯಕನಾಗಿದ್ದಾನೆ

[150] ಧಿಕ್ಕಾರಿಗಳು ಅಲ್ಲಾಹನ ಜೊತೆ ಪಾಲುದಾರರನ್ನು ಸೇರಿಸಿದ್ದಕ್ಕಾಗಿ ಶೀಘ್ರವೇ ನಾವು ಅವರ ಮನದಲ್ಲಿ ಭಯವನ್ನು ಬಿತ್ತುವೆವು. ನಿಜವಾಗಿ ಅವನು ಅದರ (ಬಹುದೇವಾರಾಧನೆಯ) ಪರವಾಗಿ ಯಾವುದೇ ಪುರಾವೆಯನ್ನು ಇಳಿಸಿಕೊಟ್ಟಿಲ್ಲ. ನರಕವೇ ಅವರ ನೆಲೆಯಾಗಿದೆ. ಅಕ್ರಮಿಗಳ ಆ ನೆಲೆ ತುಂಬಾ ಕೆಟ್ಟದು

[151] ಅಲ್ಲಾಹನು ನಿಮಗೆ ನೀಡಿದ ತನ್ನ ಭರವಸೆಯನ್ನು ಈಡೇರಿಸಿರುವನು. (ಉಹುದ್ ಯುದ್ಧದ ಆರಂಭದಲ್ಲಿ) ನೀವು ಅವನ ಅನುಮತಿಯಂತೆ, ಅವರನ್ನು (ಶತ್ರು ಸೇನೆಯನ್ನು) ಧ್ವಂಸಗೊಳಿಸತೊಡಗಿದ್ದಿರಿ. ಆದರೆ ನೀವು ಬಯಸಿದ್ದನ್ನು (ಸಮರಾರ್ಜಿತ ಸಂಪತ್ತನ್ನು) ನಿಮಗೆ ತೋರಿಸಲಾದ ಬಳಿಕ ನೀವು ಅಧೈರ್ಯ ಪ್ರದರ್ಶಿಸಿದಿರಿ, (ರಣನೀತಿಗೆ ಸಂಬಂಧಿಸಿದ) ಆದೇಶದ ಕುರಿತು ಜಗಳಾಡತೊಡಗಿದಿರಿ ಮತ್ತು ಅವಿಧೇಯತೆ ತೋರಿದಿರಿ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಅಪೇಕ್ಷಿಸುತ್ತಿದ್ದರು ಮತ್ತು ಕೆಲವರು ಪರಲೋಕವನ್ನು ಅಪೇಕ್ಷಿಸುತ್ತಿದ್ದರು. ಕೊನೆಗೆ ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಅವರೆದುರು ನಿಮಗೆ ಹಿನ್ನಡೆ ನೀಡಿದನು. ಅವನು ಖಂಡಿತ ನಿಮ್ಮನ್ನು ಕ್ಷಮಿಸಿರುವನು. ಅಲ್ಲಾಹನು ವಿಶ್ವಾಸಿಗಳ ಪಾಲಿಗೆ ಸದಾ ಉದಾರಿಯಾಗಿರುತ್ತಾನೆ

[152] (ನೆನಪಿಸಿಕೊಳ್ಳಿರಿ;) ದೇವದೂತರು ನಿಮ್ಮ ಹಿಂದಿನಿಂದ ನಿಮ್ಮನ್ನು ಕೂಗಿ ಕರೆಯುತ್ತಿದ್ದಾಗ ನೀವು ಯಾರ ಕಡೆಗೂ ತಿರುಗಿ ನೋಡದೆ ಧಾವಿಸಿ ಹೋಗುತ್ತಿದ್ದಿರಿ – ಆಗ ಅವನು (ಅಲ್ಲಾಹನು) ನಿಮ್ಮಿಂದ ಏನು ಕಳೆದು ಹೋದರೂ ನಿಮಗೆ ಎಂತಹ ಸಂಕಷ್ಟ ಬಂದೊದಗಿದರೂ ನೀವು ದುಃಖಿಸಬಾರದೆಂದು (ನಿಮಗೆ ಕಲಿಸಲಿಕ್ಕಾಗಿ) ನಿಮ್ಮನ್ನು ಬೆನ್ನು ಬೆನ್ನಿಗೇ ಸಂಕಟಕ್ಕೆ ಸಿಲುಕಿಸಿದನು. ಅಲ್ಲಾಹನಂತೂ ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ

[153] ಕೊನೆಗೆ ಅವನು ಸಂಕಟದ ಬಳಿಕ ನಿಮಗೆ ನೆಮ್ಮದಿಯನ್ನು ಇಳಿಸಿಕೊಟ್ಟನು ಮತ್ತು ನಿಮ್ಮಲ್ಲೊಂದು ಗುಂಪನ್ನು ತೂಕಡಿಕೆಯು ಆವರಿಸಿತು. ಆದರೆ ನಿಮ್ಮಲ್ಲಿನ ಇನ್ನೊಂದು ಗುಂಪಿಗೆ ತನ್ನ ಜೀವದ ಚಿಂತೆ ಕಾಡಿತ್ತು. ಅವರಿಗೆ ಅಲ್ಲಾಹನ ಕುರಿತು ಆಧಾರ ರಹಿತವಾದ ಅಪಗ್ರಹಿಕೆಗಳಿದ್ದುವು – ಅಜ್ಞಾನದ ಅಪಗ್ರಹಿಕೆಗಳು. ಅವರು ‘‘ಯಾವ ವಿಷಯದಲ್ಲೂ ನಮಗೇನೂ ಅಧಿಕಾರವಿಲ್ಲವೇ?’’ಎನ್ನುತ್ತಿದ್ದರು. ‘‘ಅಧಿಕಾರವೆಲ್ಲವೂ ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ’’ ಎಂದು ಹೇಳಿರಿ. ಅವರು ಹಲವು ವಿಷಯಗಳನ್ನು ತಮ್ಮ ಮನದೊಳಗೇ ಅಡಗಿಸಿಡುತ್ತಾರೆ ಮತ್ತು ಅವುಗಳನ್ನು ನಿಮ್ಮ ಮುಂದೆ ಪ್ರಕಟಿಸುವುದಿಲ್ಲ. ‘‘(ರಣನೀತಿಯ ನಿರ್ಧಾರದಲ್ಲಿ) ನಮಗೇನಾದರೂ ಅಧಿಕಾರ ಇದ್ದಿದ್ದರೆ ನಾವಿಲ್ಲಿ ಈ ರೀತಿ ಹತರಾಗುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ. ‘‘ಒಂದು ವೇಳೆ ನೀವು ನಿಮ್ಮ ಮನೆಗಳಲ್ಲೇ ಇದ್ದಿದ್ದರೂ, ಯಾರ ವಿಧಿಯಲ್ಲಿ ಹತ್ಯೆ ಬರೆದಿದೆಯೋ ಅವರು ಖಂಡಿತ ತಮ್ಮ ಹತ್ಯೆಯ ಸ್ಥಾನಕ್ಕೆ ತಾವೇ ಧಾವಿಸಿ ಹೋಗುತ್ತಿದ್ದರು’’ ಎಂದು ಹೇಳಿರಿ. ಅಲ್ಲಾಹನು ನಿಮ್ಮ ಮನದಲ್ಲಿರುವುದನ್ನು ಪರೀಕ್ಷಿಸಲಿಕ್ಕಾಗಿ ಹಾಗೂ ನಿಮ್ಮ ಮನದಲ್ಲಿರುವುದನ್ನು ಶುದ್ಧೀಕರಿಸಲಿಕ್ಕಾಗಿ (ಇದೆಲ್ಲಾ ಸಂಭವಿಸಿದೆ). ಅಲ್ಲಾಹನು ಮನದಾಳದ ವಿಷಯಗಳನ್ನೂ ಬಲ್ಲವನಾಗಿದ್ದಾನೆ

[154] ಎರಡು ಪಡೆಗಳು ಪರಸ್ಪರ ಎದುರಾದ ದಿನ, ನಿಮ್ಮ ಪೈಕಿ ತಿರುಗಿ ನಿಂತಿದ್ದವರನ್ನು, ಅವರ ಕೆಲವು ಕರ್ಮಗಳ ಕಾರಣ, ಶೈತಾನನು ದಾರಿ ತಪ್ಪಿಸಿದ್ದನು. ಕೊನೆಗೆ ಅಲ್ಲಾಹನು ಅವರನ್ನು ಕ್ಷಮಿಸಿ ಬಿಟ್ಟನು. ಅಲ್ಲಾಹನು ಖಂಡಿತ ಮಹಾ ಕ್ಷಮಾಶೀಲನೂ ಅಪಾರ ಸಂಯಮಿಯೂ ಆಗಿದ್ದಾನೆ

[155] ವಿಶ್ವಾಸಿಗಳೇ, ನೀವು ಧಿಕ್ಕಾರಿಗಳಂತಾಗಬೇಡಿ. ಅವರಂತು, ತಮ್ಮ ಸಹೋದರರು ಭೂಮಿಯಲ್ಲಿ ಪ್ರಯಾಣದಲ್ಲಿದ್ದಾಗ ಅಥವಾ ಯುದ್ಧದಲ್ಲಿದ್ದಾಗ (ಮೃತಪಟ್ಟರೆ) ‘‘ಒಂದು ವೇಳೆ ಅವರು ನಮ್ಮ ಜೊತೆ ಇದ್ದಿದ್ದರೆ ಖಂಡಿತ ಮೃತರಾಗುತ್ತಿರಲಿಲ್ಲ ಅಥವಾ ಹತರಾಗುತ್ತಿರಲಿಲ್ಲ’’ ಎನ್ನುತ್ತಾರೆ. ಅಲ್ಲಾಹನು ಈ ಮೂಲಕ ಅವರ ಮನಗಳಲ್ಲಿ ಹತಾಶೆಯನ್ನಷ್ಟೇ ಬೆಳೆಸುತ್ತಾನೆ. ನಿಜವಾಗಿ ಜೀವನ ನೀಡುವವನೂ, ಮರಣ ನೀಡುವವನೂ ಅಲ್ಲಾಹನೇ. ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ

[156] ನೀವು ಅಲ್ಲಾಹನ ಮಾರ್ಗದಲ್ಲಿ ಹತರಾದರೆ ಅಥವಾ ಮೃತರಾದರೆ ಅಲ್ಲಾಹನ ಕಡೆಯಿಂದ ನಿಮಗೆ ಕ್ಷಮೆ ಹಾಗೂ ಕರುಣೆಯು ಪ್ರಾಪ್ತವಾಗುವುದು. ಅದು, ನೀವು ಸಂಗ್ರಹಿಸುತ್ತಿರುವ ಎಲ್ಲಕ್ಕಿಂತಲೂ ಉತ್ತಮವಾಗಿದೆ

[157] ನೀವು ಮೃತರಾದರೂ ಹತರಾದರೂ ನಿಮ್ಮೆಲ್ಲರನ್ನೂ ಅಲ್ಲಾಹನ ಬಳಿ ಒಟ್ಟು ಸೇರಿಸಲಾಗುವುದು

[158] (ದೂತರೇ,) ನೀವು ಅವರ (ವಿಶ್ವಾಸಿಗಳ) ಪಾಲಿಗೆ ಸೌಮ್ಯರಾಗಿರುವುದು ಅಲ್ಲಾಹನ ಕೃಪೆಯೇ ಆಗಿದೆ. ಒಂದು ವೇಳೆ ನೀವು ಒರಟು ಸ್ವಭಾವದವರೂ ಕಠೋರ ಹೃದಯದವರೂ ಆಗಿದ್ದರೆ, ಅವರೆಲ್ಲಾ ನಿಮ್ಮ ಬಳಿಯಿಂದ ಚದುರಿ ಹೋಗುತ್ತಿದ್ದರು. ನೀವು ಅವರನ್ನು ಕ್ಷಮಿಸಿರಿ. ಅವರ ಕ್ಷಮೆಗಾಗಿ (ಅಲ್ಲಾಹನಲ್ಲಿ) ಪ್ರಾರ್ಥಿಸಿರಿ ಮತ್ತು ವಿವಿಧ ವಿಷಯಗಳಲ್ಲಿ ಅವರ ಜೊತೆ ಸಮಾಲೋಚಿಸಿರಿ. ಇನ್ನು ನೀವು ಒಂದು ನಿರ್ಧಾರ ಕೈಗೊಂಡರೆ (ಆ ಕುರಿತು) ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟು ಬಿಡಿರಿ. (ತನ್ನಲ್ಲಿ) ಭರವಸೆ ಇಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ

[159] ಅಲ್ಲಾಹನು ನಿಮ್ಮ ನೆರವಿಗಿದ್ದರೆ ಯಾರೂ ನಿಮ್ಮನ್ನು ಸೋಲಿಸಲಾರರು. ಇನ್ನು ಅವನು ನಿಮ್ಮ ಕೈ ಬಿಟ್ಟರೆ, ಮತ್ತೆ ಯಾರಿದ್ದಾರೆ ನಿಮಗೆ ನೆರವಾಗುವವರು? ವಿಶ್ವಾಸಿಗಳಂತು ಅಲ್ಲಾಹನಲ್ಲೇ ಪೂರ್ಣ ಭರವಸೆ ಇಟ್ಟಿರಬೇಕು

[160] ಮೋಸವು ಯಾವುದೇ ಪ್ರವಾದಿಗೆ ಭೂಷಣವಲ್ಲ. ಮೋಸ ಮಾಡಿದವನು, ಪುನರುತ್ಥಾನ ದಿನ ತಾನು ಮಾಡಿದ್ದ ಆ ಮೋಸದೊಂದಿಗೆ ಹಾಜರಾಗುವನು. ತರುವಾಯ ಪ್ರತಿಯೊಬ್ಬನಿಗೂ ಅವನ ಕರ್ಮದ ಪ್ರತಿಫಲವು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವಾಗದು

[161] ಸದಾ ಅಲ್ಲಾಹನ ಮೆಚ್ಚುಗೆಯನ್ನು ಅರಸುತ್ತಿರುವವನು, ಅಲ್ಲಾಹನ ಕೋಪಕ್ಕೆ ಪಾತ್ರನಾಗಿರುವ ಹಾಗೂ ನರಕವೇ ಅಂತಿಮ ನೆಲೆಯಾಗಿರುವ ವ್ಯಕ್ತಿಯಂತಾಗಬಲ್ಲನೇ? ಅದು (ನರಕವು) ತುಂಬಾ ಕೆಟ್ಟ ನೆಲೆಯಾಗಿದೆ

[162] ಅಲ್ಲಾಹನ ಬಳಿ ಅವರಿಗೆ ವಿಭಿನ್ನ ಸ್ಥಾನಗಳಿವೆ ಮತ್ತು ಅಲ್ಲಾಹನು ಅವರು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿರುತ್ತಾನೆ

[163] ಅಲ್ಲಾಹನು ವಿಶ್ವಾಸಿಗಳ ನಡುವೆ ಅವರಲ್ಲೇ ಒಬ್ಬರನ್ನು ದೂತರಾಗಿ ನೇಮಿಸುವ ಮೂಲಕ ಅವರಿಗೆ ಉಪಕಾರ ಮಾಡಿರುವನು. ಅವರು (ದೂತರು) ಅವರಿಗೆ ಅವನ (ಅಲ್ಲಾಹನ) ವಚನಗಳನ್ನು ಓದಿ ಕೇಳಿಸುತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಯುಕ್ತಿಯ ಜ್ಞಾನವನ್ನು ನೀಡುತ್ತಾರೆ. ಇದಕ್ಕೆ ಮುನ್ನ ಅವರು (ವಿಶ್ವಾಸಿಗಳು) ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದರು

[164] ನಿಮಗೇನಾದರೂ ಹಾನಿ ಸಂಭವಿಸಿದಾಗ ನೀವು ‘‘(ಅಯ್ಯೋ) ಇದೆಲ್ಲಿಂದ ಬಂತು?’’ ಎನ್ನುತ್ತೀರಾ? ನಿಜವಾಗಿ ನೀವು (ಈ ಹಿಂದೆ ನಿಮ್ಮ ಶತ್ರುಗಳಿಗೆ) ಇದರ ದುಪ್ಪಟ್ಟು ಹಾನಿ ಮಾಡಿರುವಿರಿ. (ದೂತರೇ,) ಹೇಳಿರಿ ; ‘‘ಇದು ಸ್ವತಃ ನಿಮ್ಮಿಂದಾಗಿಯೇ ಸಂಭವಿಸಿದೆ. ಅಲ್ಲಾಹನು, ಎಲ್ಲವನ್ನೂ ಮಾಡಲು ಖಂಡಿತ ಶಕ್ತನಾಗಿದ್ದಾನೆ’’

[165] ಎರಡು ಪಡೆಗಳು ಪರಸ್ಪರ ಘರ್ಷಣೆಗಿಳಿದ ದಿನ ಸಂಭವಿಸಿದ ಹಾನಿಯು ಅಲ್ಲಾಹನ ಆದೇಶದಿಂದಲೇ ಸಂಭವಿಸಿತ್ತು. ನಿಜವಾಗಿ ಅದು, ಯಾರು ನೈಜ ವಿಶ್ವಾಸಿಗಳು ಎಂಬುದನ್ನು ತಿಳಿಯುವುದಕ್ಕಾಗಿತ್ತು

[166] ಮತ್ತು ಅದು, ಯಾರು ಕಪಟಿಗಳು ಎಂಬುದನ್ನು ತಿಳಿಯುವುದಕ್ಕಾಗಿತ್ತು. ‘‘ಬನ್ನಿರಿ, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ರಕ್ಷಣಾತ್ಮಕ ಹೋರಾಟ ನಡೆಸಿರಿ’’ ಎಂದು ಅವರೊಡನೆ ಹೇಳಿದಾಗ ಅವರು ‘‘ಯುದ್ಧದ ಕುರಿತು ನಮಗೆ ಮೊದಲೇ ತಿಳಿದಿದ್ದರೆ ನಾವು ನಿಮ್ಮನ್ನು ಅನುಸರಿಸುತ್ತಿದ್ದೆವು’’ ಎಂದರು. ನಿಜವಾಗಿ ಅಂದು ಅವರು ವಿಶ್ವಾಸಕ್ಕಿಂತ ಧಿಕ್ಕಾರಕ್ಕೆ ಹೆಚ್ಚು ನಿಕಟರಾಗಿದ್ದರು. ಅವರು ತಮ್ಮ ಮನಸ್ಸುಗಳಲ್ಲಿ ಇಲ್ಲದ್ದನ್ನು ತಮ್ಮ ಬಾಯಿಗಳಿಂದ ಹೇಳುತ್ತಾರೆ. ಅವರು ಅಡಗಿಸುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು

[167] ಸ್ವತಃ ಸುಮ್ಮನೆ ಕುಳಿತಿದ್ದು, ತಮ್ಮ ಸಹೋದರರ ಕುರಿತು ‘‘ಅವರು ನಮ್ಮ ಮಾತನ್ನು ಅನುಸರಿಸಿದ್ದರೆ ಹತರಾಗುತ್ತಿರಲಿಲ್ಲ’’ ಎನ್ನುವವರೊಡನೆ, ‘‘ನೀವು ಸತ್ಯವಂತರಾಗಿದ್ದರೆ, ಸ್ವತಃ ನಿಮ್ಮಿಂದ ಮರಣವನ್ನು ತೊಲಗಿಸಿ ತೋರಿಸಿರಿ’’ ಎಂದು ಹೇಳಿರಿ

[168] ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ನೀವು ಮೃತರೆಂದು ಪರಿಗಣಿಸಬೇಡಿ. ಅವರು ಜೀವಂತವಿದ್ದಾರೆ ಮತ್ತು ತಮ್ಮ ಒಡೆಯನ ಬಳಿ ಪೋಷಣೆಯನ್ನು ಪಡೆಯುತ್ತಿದ್ದಾರೆ

[169] ಅಲ್ಲಾಹನು ಅವನ ಅನುಗ್ರಹದಿಂದ ತಮಗೆ ನೀಡಿರುವುದರಲ್ಲಿ ಅವರು ಸಂಭ್ರಮಿಸುತ್ತಿದ್ದಾರೆ ಹಾಗೂ ಈವರೆಗೂ ತಮ್ಮ ಜೊತೆ ಸೇರಿಕೊಳ್ಳದೆ ಹಿಂದೆ ಉಳಿದಿರುವವರ (ಹುತಾತ್ಮರಾಗದ ಸತ್ಯವಿಶ್ವಾಸಿಗಳ) ವಿಷಯದಲ್ಲೂ ಅವರು ಸಂತಸದಲ್ಲಿದ್ದಾರೆ – ಅವರಿಗೆ ಯಾವುದೇ ಭಯವಿರದು ಮತ್ತು ಅವರು ದುಃಖಿಸಲಾರರು

[170] ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ನೀಡಿರುವ ಕೊಡುಗೆಗಳಿಂದ ಅವರು ಸಂತುಷ್ಟರಾಗಿದ್ದಾರೆ. ಅಲ್ಲಾಹನು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ಎಂದೂ ವ್ಯರ್ಥಗೊಳಿಸುವುದಿಲ್ಲ

[171] ತಮಗೆ ಘಾಸಿಯಾದ ಬಳಿಕವೂ ಅಲ್ಲಾಹ್ ಮತ್ತವನ ದೂತರ ಕರೆಗೆ ಓಗೊಟ್ಟವರಿಗೆ ಹಾಗೂ ಅವರ ಪೈಕಿ ಸತ್ಕರ್ಮವೆಸಗಿದವರಿಗೆ ಮತ್ತು ಸತ್ಯನಿಷ್ಠರಾಗಿದ್ದವರಿಗೆ ಭವ್ಯ ಪ್ರತಿಫಲವು ಕಾದಿದೆ

[172] (ಅವರು ಎಂಥವರೆಂದರೆ) ಜನರು ಅವರೊಡನೆ ‘‘ನಿಮ್ಮ ವಿರುದ್ಧ ಒಂದು ಭಾರೀ ಪಡೆಯು ಸಜ್ಜಾಗಿ ನಿಂತಿದೆ. ಅವರಿಗೆ ಅಂಜಿರಿ’’ ಎಂದು ಹೇಳಿದಾಗ ಅವರ ವಿಶ್ವಾಸವು ಇನ್ನಷ್ಟು ಹೆಚ್ಚಿತು ಮತ್ತು ಅವರು ‘‘ನಮಗೆ ಅಲ್ಲಾಹನೇ ಸಾಕು. ಅವನು ಅತ್ಯುತ್ತಮ ಪೋಷಕನಾಗಿದ್ದಾನೆ’’ಎಂದರು

[173] ಕೊನೆಗೆ ಅವರು ಅಲ್ಲಾಹನ ಕೊಡುಗೆಗಳು ಹಾಗೂ ಅವನ ಅನುಗ್ರಹಗಳೊಂದಿಗೆ ಮರಳಿದರು. ಯಾವ ಹಾನಿಯೂ ಅವರನ್ನು ತಟ್ಟಲಿಲ್ಲ. ಅವರು ಅಲ್ಲಾಹನ ಮೆಚ್ಚುಗೆಯನ್ನರಸಿದರು. ಅಲ್ಲಾಹನಂತೂ ಭಾರೀ ಭವ್ಯ ಅನುಗ್ರಹಿಯಾಗಿದ್ದಾನೆ

[174] ನಿಮ್ಮನ್ನು ತನ್ನ ಮಿತ್ರರ ಕುರಿತು ಹೆದರಿಸುತ್ತಲೇ ಇದ್ದವನು ಆ ಶೈತಾನನು. ನೀವು ವಿಶ್ವಾಸಿಗಳಾಗಿದ್ದರೆ, ಅವರಿಗೆ ಅಂಜಬೇಡಿ, ನನಗೆ ಮಾತ್ರ ಅಂಜಿರಿ

[175] (ದೂತರೇ,) ಧಿಕ್ಕಾರದ ಪರವಾಗಿ ಹೋರಾಡುತ್ತಿರುವವರ ಕುರಿತು ನೀವೇನೂ ದುಃಖಿಸಬೇಡಿ. ಅವರು ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅಲ್ಲಾಹನು ಅವರಿಗೆ ಪರಲೋಕದಲ್ಲಿ ಯಾವ ಪಾಲನ್ನೂ ನೀಡ ಬಯಸುವುದಿಲ್ಲ. ಅವರಿಗೆ ಭಾರೀ ಶಿಕ್ಷೆ ಕಾದಿದೆ

[176] ವಿಶ್ವಾಸದ ಬದಲಿಗೆ ಧಿಕ್ಕಾರವನ್ನು ಖರೀದಿಸಿಕೊಂಡವರು ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಕಠಿಣ ಶಿಕ್ಷೆ ಕಾದಿದೆ

[177] ಧಿಕ್ಕಾರಿಗಳು, ನಾವು ಅವರಿಗೆ ನೀಡುತ್ತಿರುವ ಕಾಲಾವಕಾಶವು ಅವರ ಪಾಲಿಗೆ ಉತ್ತಮವೆಂದು ನಂಬದಿರಲಿ. ಅವರು ತಮ್ಮ ಪಾಪಗಳನ್ನು ಹೆಚ್ಚಿಸಿಕೊಳ್ಳಲೆಂದು ನಾವು ಅವರಿಗೆ ಕಾಲಾವಕಾಶವನ್ನು ನೀಡುತ್ತಿದ್ದೇವೆ. ಅವರಿಗೆ ಭಾರೀ ಅಪಮಾನಕಾರಿ ಶಿಕ್ಷೆ ಕಾದಿದೆ

[178] ಮಲಿನರನ್ನು ನಿರ್ಮಲರಿಂದ ಪ್ರತ್ಯೇಕಿಸುವ ತನಕ ಅಲ್ಲಾಹನು ವಿಶ್ವಾಸಿಗಳನ್ನು – ಇಂದು ನೀವು ಇರುವಂತಹ ಸ್ಥಿತಿಯಲ್ಲೇ ಬಿಟ್ಟು ಬಿಡಲಾರನು. ಅಲ್ಲಾಹನು ಎಲ್ಲ ಗುಪ್ತ ವಿಷಯಗಳನ್ನು ನಿಮಗೆ ತಿಳಿಸಿ ಬಿಡುವುದಿಲ್ಲ. (ಅದಕ್ಕಾಗಿ) ಅಲ್ಲಾಹನು ತನ್ನ ದೂತರ ಪೈಕಿ ತಾನಿಚ್ಛಿಸುವವರನ್ನು ಆಯ್ದುಕೊಳ್ಳುತ್ತಾನೆ. ನೀವು ಅಲ್ಲಾಹನಲ್ಲಿ ಮತ್ತವನ ದೂತರಲ್ಲಿ ವಿಶ್ವಾಸವಿಡಿರಿ. ಈ ರೀತಿ ನೀವು ವಿಶ್ವಾಸವಿಟ್ಟು, ಸತ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ನಿಮಗೆ ಭವ್ಯ ಪ್ರತಿಫಲ ಸಿಗಲಿದೆ

[179] ಅಲ್ಲಾಹನು ಅವನ ಅನುಗ್ರಹದಿಂದ ತಮಗೆ ದಯಪಾಲಿಸಿರುವುದರಲ್ಲಿ (ಸಂಪತ್ತಿನಲ್ಲಿ) ಜಿಪುಣತೆ ತೋರುವವರು, ಅದು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ನಿಜವಾಗಿ ಅದು (ಜಿಪುಣತೆ) ಅವರ ಪಾಲಿಗೆ ಕೆಟ್ಟದಾಗಿದೆ. ಅವರು ಜಿಪುಣತೆ ತೋರಿದ ಆ ಸಂಪತ್ತನ್ನು ಪುನರುತ್ಥಾನ ದಿನ ಹೊರೆಯಾಗಿಸಿ ಅವರ ಕೊರಳಿಗೆ ಕಟ್ಟಲಾಗುವುದು. ಆಕಾಶಗಳ ಮತ್ತು ಭೂಮಿಯ ಅಂತಿಮ ಒಡೆತನವು ಅಲ್ಲಾಹನಿಗೇ ಸೇರಿದೆ ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು

[180] ‘‘ಅಲ್ಲಾಹನು ಬಡವನು, ನಾವು ಶ್ರೀಮಂತರು’’ ಎಂದು ಹೇಳಿದವರ ಮಾತನ್ನು ಅಲ್ಲಾಹನು ಕೇಳಿದನು. (ಇದೀಗ) ಅವರು ಹೇಳುತ್ತಿರುವುದನ್ನು ಮತ್ತು (ಈ ಹಿಂದೆ) ಅವರು ಅನ್ಯಾಯವಾಗಿ ಪ್ರವಾದಿಗಳ ಹತ್ಯೆ ನಡೆಸಿರುವುದನ್ನು ನಾವು ಬರೆದಿಡುವೆವು ಮತ್ತು (ನಾಳೆ ಪರಲೋಕದಲ್ಲಿ ಅವರೊಡನೆ) ಹೇಳುವೆವು; ’‘ಸುಡುವ ಶಿಕ್ಷೆಯನ್ನು ಸವಿಯಿರಿ.’’

[181] ‘‘ಇದುವೇ ನೀವು ನಿಮ್ಮ ಕೈಗಳಿಂದ ಸಂಪಾದಿಸಿ ಕಳುಹಿಸಿದ ಗಳಿಕೆ’’. ಅಲ್ಲಾಹನು ಖಂಡಿತ ತನ್ನ ದಾಸರ ಮೇಲೆ ಅನ್ಯಾಯವೆಸಗುವವನಲ್ಲ

[182] (ದೂತರೇ,) ‘‘ಬೆಂಕಿಯು (ಬಂದು) ತಿನ್ನುವಂತಹ ಒಂದು ಬಲಿಪ್ರಾಣಿಯನ್ನು ನಮ್ಮ ಮುಂದೆ ತರುವ ತನಕ ನಾವು ಯಾವ ದೂತನನ್ನೂ ನಂಬಬಾರದೆಂದು ಅಲ್ಲಾಹನು ನಮ್ಮ ಜೊತೆ ಕರಾರು ಮಾಡಿರುತ್ತಾನೆ’’ ಎನ್ನುವವರೊಡನೆ ಹೇಳಿರಿ; ‘‘ನನಗಿಂತ ಹಿಂದೆಯೂ ಹಲವು ದೂತರು ಸ್ಪಷ್ಟ ಪುರಾವೆಗಳೊಂದಿಗೆ (ಮಾತ್ರವಲ್ಲ) ನೀವೀಗ ಕೇಳುತ್ತಿರುವ ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ನೀವು ಸತ್ಯವಂತರಾಗಿದ್ದರೆ, ನೀವು ಅವರನ್ನು ಕೊಂದುದೇಕೆ ?’’

[183] ಅವರೀಗ ನಿಮ್ಮನ್ನು ಧಿಕ್ಕರಿಸುತ್ತಿದ್ದರೆ, ನಿಮಗಿಂತ ಮುನ್ನ ಸ್ಪಷ್ಟ ಪುರಾವೆಗಳೊಂದಿಗೆ, ದಿವ್ಯ ಕೃತಿಗಳೊಂದಿಗೆ ಮತ್ತು ಉಜ್ವಲ ಗ್ರಂಥಗಳೊಂದಿಗೆ ಬಂದಿದ್ದ ದೇವದೂತರುಗಳನ್ನೂ ಧಿಕ್ಕರಿಸಲಾಗಿದೆ

[184] ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಪುನರುತ್ಥಾನ ದಿನ ನಿಮಗೆ ನಿಮ್ಮ (ಕರ್ಮಗಳ) ಪೂರ್ಣ ಪ್ರತಿಫಲವು ಸಿಗಲಿದೆ. (ಅಂದು) ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು. ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತು ಬೇರೇನೂ ಅಲ್ಲ

[185] (ವಿಶ್ವಾಸಿಗಳೇ,) ನಿಮ್ಮನ್ನು ನಿಮ್ಮ ಸಂಪತ್ತುಗಳ ಹಾಗೂ ನಿಮ್ಮ ಜೀವಗಳ ವಿಷಯದಲ್ಲಿ ಖಂಡಿತ ಪರೀಕ್ಷಿಸಲಾಗುವುದು. ಹಾಗೆಯೇ ನೀವು, ನಿಮಗಿಂತ ಮುನ್ನ ಗ್ರಂಥ ನೀಡಲಾಗಿದ್ದವರಿಂದ ಹಾಗೂ ಬಹುದೇವಾರಾಧಕರಿಂದ, ಮನನೋಯಿಸುವ ಹಲವು ಮಾತುಗಳನ್ನು ಕೇಳುವಿರಿ. (ಆಗ) ನೀವು ಸಹನಶೀಲರಾಗಿದ್ದರೆ ಹಾಗೂ ಸತ್ಯನಿಷ್ಠರಾಗಿದ್ದರೆ, ಅದು ಖಂಡಿತ ಒಂದು ಮಹಾ ಸಾಹಸದ ಸಾಧನೆಯಾಗಿದೆ

[186] ‘‘ಅದನ್ನು (ದಿವ್ಯಗ್ರಂಥವನ್ನು) ನೀವು ಜನರಿಗೆ ವಿವರಿಸಿ ತಿಳಿಸಬೇಕು ಮತ್ತು ಅದನ್ನು ಬಚ್ಚಿಡಬಾರದು’’ ಎಂದು ಅಲ್ಲಾಹನು ಗ್ರಂಥದವರಿಂದ ಕರಾರನ್ನು ಪಡೆದಿದ್ದನು. ಅವರು ಅದನ್ನು (ಆ ಕರಾರನ್ನು) ಸಂಪೂರ್ಣ ಕಡೆಗಣಿಸಿ ಬಿಟ್ಟರು ಮತ್ತು ತೀರಾ ಸಣ್ಣ ಬೆಲೆಗೆ ಅದನ್ನು ಮಾರಿಬಿಟ್ಟರು. ಎಷ್ಟೊಂದು ಕೆಟ್ಟದು, ಅವರ ಆ ವ್ಯವಹಾರ

[187] ತಾವು ಎಸಗಿದ ಕೃತ್ಯಗಳ ಕುರಿತು ಸಂತುಷ್ಟರಾಗಿರುವವರು ಹಾಗೂ ತಾವು ಮಾಡಿಲ್ಲದ ಕೆಲಸಗಳಿಗಾಗಿ (ಜನರು) ತಮ್ಮನ್ನು ಹೊಗಳಬೇಕೆಂದು ಬಯಸುವವರು (ವಿಜಯಿಗಳೆಂದು) ನೀವು ಭಾವಿಸಬೇಡಿ. ಮತ್ತು ಅವರು ಶಿಕ್ಷೆಯಿಂದ ರಕ್ಷಿತರಾಗುವರೆಂದು ನೀವು ಭಾವಿಸಬೇಡಿ. ಅವರಿಗೆ ಕಠಿಣ ಶಿಕ್ಷೆ ಕಾದಿದೆ

[188] ಆಕಾಶಗಳ ಮತ್ತು ಭೂಮಿಯ ಪ್ರಭುತ್ವವೆಲ್ಲಾ ಅಲ್ಲಾಹನಿಗೇ ಸೇರಿದೆ ಮತ್ತು ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[189] ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ರಾತ್ರಿ ಹಾಗೂ ಹಗಲುಗಳ ಬದಲಾವಣೆಯಲ್ಲಿ ಬುದ್ಧಿವಂತರಿಗೆ ಪುರಾವೆಗಳಿವೆ

[190] ಅವರು ನಿಂತಲ್ಲೂ ಕುಳಿತಲ್ಲೂ ಮಲಗಿರುವಲ್ಲೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯ ಕುರಿತು ಚಿಂತನೆ ನಡೆಸುತ್ತಿರುತ್ತಾರೆ (ಮತ್ತು ಪ್ರಾರ್ಥಿಸುತ್ತಾರೆ;) ‘‘ನಮ್ಮೊಡೆಯಾ, ನೀನು ಇದನ್ನೆಲ್ಲಾ ವೃಥಾ ಸೃಷ್ಟಿಸಿಲ್ಲ. ನೀನು ಪಾವನನು, ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸು’’

[191] ‘‘ನಮ್ಮೊಡೆಯಾ, ನೀನು ಯಾರನ್ನು ನರಕಾಗ್ನಿಯೊಳಗೆ ತಳ್ಳಿದೆಯೋ ಅವನನ್ನು ಅಪಮಾನಿತನಾಗಿಸಿದೆ. ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ’’

[192] ‘‘ನಮ್ಮೊಡೆಯಾ, ವಿಶ್ವಾಸದೆಡೆಗೆ ನಮ್ಮನ್ನು ಕರೆಯುತ್ತಿದ್ದ ಹಾಗೂ ‘‘ನಿಮ್ಮ ಒಡೆಯನಲ್ಲಿ ವಿಶ್ವಾಸವಿಡಿರಿ’’ ಎನ್ನುತ್ತಿದ್ದವನ ಕರೆಯನ್ನು ನಾವು ಕೇಳಿದೆವು ಮತ್ತು ನಾವು ವಿಶ್ವಾಸವಿಟ್ಟೆವು. ನಮ್ಮೊಡೆಯಾ, ನಮಗಾಗಿ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮ ಕೆಡುಕುಗಳನ್ನೆಲ್ಲಾ ನಮ್ಮಿಂದ ದೂರಗೊಳಿಸು ಮತ್ತು ನಮಗೆ ಸಜ್ಜನರ ಸಂಗದಲ್ಲಿ ಮರಣವನ್ನು ನೀಡು’’

[193] ‘‘ನಮ್ಮೊಡೆಯಾ, ನೀನು ನಿನ್ನ ದೂತರ ಮೂಲಕ ನಮಗೆ ನೀಡಿರುವ ವಾಗ್ದಾನಗಳನ್ನು ನೆರವೇರಿಸು ಮತ್ತು ಪುನರುತ್ಥಾನ ದಿನ ನಮ್ಮನ್ನು ಅಪಮಾನಿಸಬೇಡ. ಖಂಡಿತವಾಗಿಯೂ ನೀನು, ಕೊಟ್ಟ ಮಾತನ್ನು ತಪ್ಪುವವನಲ್ಲ’’

[194] ಅವರ ಒಡೆಯನು ಅವರಿಗೆ ಉತ್ತರಿಸಿದನು; ಖಂಡಿತವಾಗಿಯೂ ನಾನು, ನಿಮ್ಮ ಪೈಕಿ ಯಾವುದೇ ಸತ್ಕರ್ಮಿ ಪುರುಷನ ಅಥವಾ ಸ್ತ್ರೀಯ ಕರ್ಮವನ್ನು ವ್ಯರ್ಥಗೊಳಿಸಲಾರೆ. ನೀವು ಪರಸ್ಪರ ಅವಲಂಬಿತರು. (ನನ್ನ ಮಾರ್ಗದಲ್ಲಿ) ವಲಸೆ ಹೋದವರು, ತಮ್ಮ ನಾಡುಗಳಿಂದ ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ಹಿಂಸಿಸಲ್ಪಟ್ಟವರು, ಹೋರಾಡಿದವರು ಹಾಗೂ ಹತರಾದವರು – ಅವರ ಕೆಡುಕುಗಳನ್ನು ನಾನು ಖಂಡಿತ ಅವರಿಂದ ದೂರಗೊಳಿಸುವೆನು ಮತ್ತು ತಳದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನಗಳಲ್ಲಿ ಅವರನ್ನು ಸೇರಿಸುವೆನು. ಇದು ಅಲ್ಲಾಹನ ವತಿಯಿಂದಿರುವ ಪ್ರತಿಫಲ. ನಿಜಕ್ಕೂ ಅಲ್ಲಾಹನ ಬಳಿ ಇರುವ ಪ್ರತಿಫಲವೇ ಅತ್ಯುತ್ತಮವಾಗಿದೆ

[195] ನಾಡುಗಳಲ್ಲಿ ಮೆರೆಯುವ ಧಿಕ್ಕಾರಿಗಳ ವೈಭವವು ನಿಮ್ಮನ್ನು ಮೋಸಗೊಳಿಸದಿರಲಿ

[196] ಇದೆಲ್ಲಾ ತೀರಾ ಸೀಮಿತ ಸಂಪತ್ತು. ಅವರ ಅಂತಿಮ ನೆಲೆ ನರಕವೇ ಆಗಿದೆ. ಅದು ತುಂಬಾ ಕೆಟ್ಟ ನೆಲೆ

[197] ತಮ್ಮ ಒಡೆಯನಿಗೆ ಅಂಜುತ್ತಾ ಬದುಕಿದವರಿಗಾಗಿ, ತಳದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನಗಳಿವೆ. ಅವರು ಸದಾ ಕಾಲ ಅವುಗಳಲ್ಲಿರುವರು. ಇದು ಅಲ್ಲಾಹನ ಆತಿಥ್ಯ. ಸಜ್ಜನರ ಪಾಲಿಗೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ಉತ್ತಮ

[198] ಗ್ರಂಥದವರಲ್ಲಿ ಕೆಲವರಿದ್ದಾರೆ – ಅಲ್ಲಾಹನಲ್ಲಿ ನಂಬಿಕೆ ಉಳ್ಳವರು ಮತ್ತು ನಿಮಗೇನನ್ನು ಇಳಿಸಿ ಕೊಡಲಾಗಿದೆಯೋ ಅದರಲ್ಲಿ (ಕುರ್‌ಆನ್‌ನಲ್ಲಿ) ಹಾಗೂ ತಮಗೆ ಇಳಿಸಿಕೊಡಲಾಗಿರುವುದರಲ್ಲಿ ನಂಬಿಕೆ ಉಳ್ಳವರು. ಅವರು ಅಲ್ಲಾಹನೆದುರು ವಿನಯಶೀಲರಾಗಿರುತ್ತಾರೆ. ಅವರು ಅಲ್ಲಾಹನ ವಚನಗಳನ್ನು ಸಣ್ಣ ಬೆಲೆಗೆ ಮಾರುವುದಿಲ್ಲ. ಅಂಥವರಿಗಾಗಿ ಅವರ ಪ್ರತಿಫಲವು ಅವರ ಒಡೆಯನ (ಅಲ್ಲಾಹನ) ಬಳಿ ಇದೆ. ಖಂಡಿತವಾಗಿಯೂ ಅಲ್ಲಾಹನು ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ

[199] ವಿಶ್ವಾಸಿಗಳೇ, ಸಹನಶೀಲರಾಗಿರಿ, ಸ್ಥಿರ ಚಿತ್ತರಾಗಿರಿ, (ಸತ್ಯದ ಪರ) ಹೋರಾಟಕ್ಕೆ ಸದಾ ಸನ್ನದ್ಧರಾಗಿರಿ ಮತ್ತು ಸದಾ ಅಲ್ಲಾಹನಿಗೆ ಅಂಜಿರಿ – ನೀವು ವಿಜಯಿಗಳಾಗಬಹುದು

[200] ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸೃಷ್ಟಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲಿ) ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ

ಮಹಿಳೆಯರು

Surah 4

[1] ಅನಾಥರ ಸೊತ್ತನ್ನು ಅವರಿಗೇ ಕೊಟ್ಟು ಬಿಡಿರಿ ಹಾಗೂ ನಿರ್ಮಲವಾದುದಕ್ಕೆ ಪರ್ಯಾಯವಾಗಿ ಮಲಿನವಾದುದನ್ನು ಕೊಡಬೇಡಿ. ಅವರ ಸೊತ್ತನ್ನು ನಿಮ್ಮ ಸೊತ್ತಿನ ಜೊತೆ ಬೆರೆಸಿ ತಿನ್ನಬೇಡಿ. ಅದು ಖಂಡಿತ ಮಹಾ ಪಾಪ ಕೃತ್ಯವಾಗಿದೆ

[2] ಅನಾಥರ (ಅನಾಥ ಹೆಣ್ಣು ಮಕ್ಕಳ) ವಿಷಯದಲ್ಲಿ ನ್ಯಾಯ ಪಾಲಿಸಲು ನಿಮಗೆ ಸಾಧ್ಯವಾಗದು ಎಂಬ ಭಯ ನಿಮಗಿದ್ದರೆ (ಇತರ) ಮಹಿಳೆಯರ ಪೈಕಿ ನಿಮಗಿಷ್ಟವಿರುವ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಇನ್ನು (ಪತ್ನಿಯರ ವಿಷಯದಲ್ಲಿ) ನ್ಯಾಯ ಪಾಲಿಸಲು ಸಾಧ್ಯವಾಗದು ಎಂಬ ಭಯ ನಿಮಗಿದ್ದರೆ ಒಬ್ಬಳೇ ಪತ್ನಿಯಲ್ಲಿ ಅಥವಾ ನಿಮ್ಮ ಮಾಲಕತ್ವದಲ್ಲಿರುವ ದಾಸಿಯಲ್ಲಿ (ತೃಪ್ತಿ ಪಡಿರಿ). (ನಿಮ್ಮಿಂದ) ಯಾವುದೇ ಅತಿರೇಕ ಸಂಭವಿಸದೆ ಇರುವುದಕ್ಕೆ ಇದು ಹೆಚ್ಚು ಸಹಾಯಕವಾಗಿದೆ

[3] (ನೀವು ವಿವಾಹವಾಗುವ) ಮಹಿಳೆಯರ ‘ಮೆಹರ್’ ಅನ್ನು ಸಂತೋಷದಿಂದ ಪಾವತಿಸಿರಿ. ಅವರು ಅದರಿಂದ ಏನನ್ನಾದರೂ ಮನಸಾರೆ ನಿಮಗೆ ಬಿಟ್ಟುಕೊಟ್ಟರೆ ಮಾತ್ರ ನೀವು ಅದನ್ನು ಸುಖವಾಗಿ, ಸಂತೋಷದಿಂದ ತಿನ್ನಬಹುದು

[4] ಅಲ್ಲಾಹನು ನಿಮ್ಮ ಪಾಲಿಗೆ ಆದಾಯವಾಗಿಸಿರುವ ನಿಮ್ಮ ಸಂಪತ್ತನ್ನು ಮಂದಮತಿಗಳ ಕೈಗೆ ಒಪ್ಪಿಸಬೇಡಿ. ಆದರೆ, ಅದರಿಂದ ಅವರಿಗೆ ಉಣಿಸಿರಿ ಮತ್ತು ಉಡಿಸಿರಿ (ಆಹಾರ, ವಸ್ತ್ರ ಇತ್ಯಾದಿಯನ್ನು ಒದಗಿಸಿರಿ) ಮತ್ತು ಅವರೊಂದಿಗೆ ಸದಾ ಸೌಜನ್ಯದ ಮಾತನ್ನೇ ಆಡಿರಿ

[5] ಅನಾಥರು ವಿವಾಹದ ವಯಸ್ಸಿನವರಾಗುವ ತನಕ ಅವರನ್ನು ಪರೀಕ್ಷಿಸುತ್ತಲಿರಿ. ನೀವು ಅವರಲ್ಲಿ ಪ್ರಬುದ್ಧತೆಯನ್ನು ಕಂಡಾಗ ಅವರ ಸಂಪತ್ತನ್ನು ಅವರಿಗೆ ಒಪ್ಪಿಸಿ ಬಿಡಿರಿ. ಅವರ ಸಂಪತ್ತನ್ನು ಅಪವ್ಯಯ ಮಾಡದಿರಿ ಹಾಗೂ ಅವರು ಬೆಳೆದು ಬಿಡುವರೆಂದು ಅದನ್ನು ಆತುರದಿಂದ ಕಬಳಿಸಬೇಡಿ. ಸಂಪನ್ನನಾಗಿರುವವನು (ಅನಾಥರ ಸೊತ್ತಿನಿಂದ) ದೂರ ಉಳಿದಿರಲಿ. ಬಡವನು ನಿಯಮಾನುಸಾರ ಮಾತ್ರ ಅದನ್ನು (ಸೀಮಿತವಾಗಿ) ಬಳಸಿಕೊಳ್ಳಲಿ. ನೀವು ಅವರ ಸಂಪತ್ತನ್ನು ಅವರ ವಶಕ್ಕೆ ಒಪ್ಪಿಸುವಾಗ, ಅದಕ್ಕೆ ಅವರ ಮುಂದೆ ಸಾಕ್ಷಿಗಳನ್ನು ನೇಮಿಸಿಕೊಳ್ಳಿರಿ. (ಅಂತಿಮ) ವಿಚಾರಣೆಗೆ ಅಲ್ಲಾಹನೇ ಸಾಕು

[6] ಪುರುಷರಿಗೆ, ಅವರ ತಂದೆ, ತಾಯಿ ಮತ್ತು ಬಂಧುಗಳು ಬಿಟ್ಟು ಹೋದುದರಲ್ಲಿ (ಸೊತ್ತಿನಲ್ಲಿ) ಪಾಲಿದೆ. ಹಾಗೆಯೇ ಸ್ತ್ರೀಯರಿಗೂ, ಅವರ ತಂದೆ, ತಾಯಿ ಮತ್ತು ಬಂಧುಗಳು ಬಿಟ್ಟು ಹೋದುದರಲ್ಲಿ ಪಾಲಿದೆ. ಸ್ವಲ್ಪವಿರಲಿ, ಬಹಳವಿರಲಿ – ಪಾಲು ಮಾತ್ರ ನಿಶ್ಚಿತವಾಗಿದೆ

[7] (ಆಸ್ತಿ) ವಿತರಿಸುವ ವೇಳೆ ಬಂಧುಗಳು, ಅನಾಥರು ಮತ್ತು ಬಡವರು ಹಾಜರಾದಾಗ, ಅವರಿಗೆ ಅದರಿಂದ ಉಣ್ಣಿಸಿರಿ ಮತ್ತು ಅವರ ಜೊತೆ ಸೌಜನ್ಯದ ಮಾತನ್ನಾಡಿರಿ

[8] ತಾವು ಸ್ವತಃ ತಮ್ಮ ದುರ್ಬಲ ಮಕ್ಕಳನ್ನೇ ತಮ್ಮ ಬೆನ್ನ ಹಿಂದೆ ಬಿಟ್ಟು ಹೋಗುವುದಾಗಿದ್ದರೆ (ಮೃತರಾಗುವುದಿದ್ದರೆ) ತಮಗೆ ಅವರ ಕುರಿತು ಎಷ್ಟು ಕಾಳಜಿ ಇರುತ್ತಿತ್ತು ಎಂಬುದನ್ನು ಯೋಚಿಸಿ ಜನರು (ಅನಾಥರ ಹಕ್ಕುಗಳ ಕುರಿತು) ಕಾಳಜಿ ವಹಿಸಬೇಕು. ಅವರು ಅಲ್ಲಾಹನ ಭಯವುಳ್ಳವರಾಗಿರಬೇಕು ಮತ್ತು ಸದಾ ನೇರವಾದ ಮಾತನ್ನೇ ಆಡಬೇಕು

[9] ಅನಾಥರ ಸಂಪತ್ತನ್ನು ಅಕ್ರಮವಾಗಿ ಕಬಳಿಸುತ್ತಿರುವವರು ಖಂಡಿತವಾಗಿಯೂ ತಮ್ಮ ಹೊಟ್ಟೆಗಳಿಗೆ ಬೆಂಕಿಯನ್ನು ತುಂಬುತ್ತಿದ್ದಾರೆ. ಬಹು ಬೇಗನೇ ಅವರನ್ನು ಉರಿಯುತ್ತಿರುವ ನರಕಾಗ್ನಿಗೆ ಎಸೆಯಲಾಗುವುದು

[10] ಅಲ್ಲಾಹನು ನಿಮ್ಮ ಮಕ್ಕಳ ಕುರಿತು ನಿಮಗೆ ಬೋಧಿಸುತ್ತಿದ್ದಾನೆ; ಒಬ್ಬ ಪುರುಷನಿಗೆ ಇಬ್ಬರು ಸ್ತ್ರೀಯರಷ್ಟು ಪಾಲು. ಇನ್ನು ಸ್ತ್ರೀಯರು (ಉತ್ತರಾಧಿಕಾರಿ ಪುತ್ರಿಯರು) ಇಬ್ಬರಿಗಿಂತ ಹೆಚ್ಚಿದ್ದರೆ, ಅವರಿಗೆ (ಮೃತನ ಸೊತ್ತಿನಲ್ಲಿ) ಮೂರನೇ ಎರಡು ಪಾಲು. ಒಬ್ಬಳೇ ಇದ್ದರೆ ಆಕೆಗೆ ಅರ್ಧ ಪಾಲು. ಅವನಿಗೆ (ಮೃತನಿಗೆ) ಮಕ್ಕಳಿದ್ದರೆ ಅವನ ತಂದೆ ತಾಯಿಯರಲ್ಲಿ ಪ್ರತಿಯೊಬ್ಬರಿಗೆ (ಮೃತನ) ಸೊತ್ತಿನಲ್ಲಿ ಆರನೇ ಒಂದಂಶ. ಆತನಿಗೆ ಮಕ್ಕಳಿಲ್ಲವಾದರೆ ಹಾಗೂ ಅವನ ತಂದೆ ತಾಯಿಯೇ ಅವನ ಉತ್ತರಾಧಿಕಾರಿಗಳಾಗಿದ್ದರೆ ತಾಯಿಗೆ ಮೂರನೇ ಒಂದು ಪಾಲು. ಆತನಿಗೆ ಸಹೋದರರು ಮತ್ತು ಸಹೋದರಿಯರಿದ್ದರೆ ಆತನ ತಾಯಿಗೆ ಆರನೇ ಒಂದು ಪಾಲು. ಇದೆಲ್ಲಾ ಆತನ ‘ವಸಿಯ್ಯತ್’ (ಉಯಿಲು ಅಥವಾ ಉಪದೇಶ) ಅನ್ನು ಅನುಷ್ಠಾನಿಸಿದ ಬಳಿಕ ಹಾಗೂ ಅವನ ಸಾಲವನ್ನು ತೀರಿಸಿದ ಬಳಿಕ. ನಿಮ್ಮ ಹೆತ್ತವರು ಮತ್ತು ನಿಮ್ಮ ಪುತ್ರರು (ಮಕ್ಕಳು) – ಇವರ ಪೈಕಿ ಲಾಭದ ದೃಷ್ಟಿಯಿಂದ ಯಾರು ನಿಮಗೆ ಹೆಚ್ಚು ನಿಕಟರೆಂಬುದು ನಿಮಗೆ ತಿಳಿಯದು. ಇವು ಅಲ್ಲಾಹನು ನಿಶ್ಚಯಿಸಿರುವ ಕಡ್ಡಾಯ ಪಾಲುಗಳು. ಅಲ್ಲಾಹನು ಎಲ್ಲವನ್ನೂ ಅರಿತಿರುವವನು ಮತ್ತು ಯುಕ್ತಿವಂತನಾಗಿದ್ದಾನೆ

[11] ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ ಅವರು ಬಿಟ್ಟು ಹೋದುದರಲ್ಲಿ ನಿಮಗೆ ಅರ್ಧ ಪಾಲಿದೆ ಹಾಗೂ ಅವರಿಗೆ ಮಕ್ಕಳಿದ್ದರೆ, ಅವರು ಬಿಟ್ಟು ಹೋದುದರಲ್ಲಿ ನಿಮಗೆ ಕಾಲು ಭಾಗದಷ್ಟು ಪಾಲು – ಅವರ ‘ವಸಿಯ್ಯತ್’ ಅನ್ನು ಅನುಷ್ಠಾನಿಸಿದ ಬಳಿಕ ಮತ್ತು ಅವರ ಸಾಲವನ್ನು ತೀರಿಸಿದ ಬಳಿಕ. ಇನ್ನು ನಿಮಗೆ ಮಕ್ಕಳಿಲ್ಲವಾದರೆ, ನೀವು ಬಿಟ್ಟು ಹೋದುದರಲ್ಲಿ ಅವರಿಗೆ ಕಾಲು ಭಾಗದ ಪಾಲಿದೆ ಹಾಗೂ ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟು ಹೋದುದರಲ್ಲಿ ಎಂಟನೆ ಒಂದು ಪಾಲು ಅವರಿಗೆ ಸೇರುವುದು – ನೀವು ಮಾಡಿದ ವಸಿಯ್ಯತ್ ಅನ್ನು ಅನುಷ್ಠಾನಿಸಿದ ಬಳಿಕ ಮತ್ತು ನಿಮ್ಮ ಸಾಲವನ್ನು ತೀರಿಸಿದ ಬಳಿಕ. ಒಂದು ವೇಳೆ ಸೊತ್ತು ಬಿಟ್ಟು ಮೃತನಾದ ಪುರುಷನು ಅಥವಾ ಅಂತಹ ಸ್ತ್ರೀಯು ಮಕ್ಕಳಿಲ್ಲದವರಾಗಿದ್ದರೆ ಮತ್ತು ಅವರಿಗೆ ಒಬ್ಬ ಸಹೋದರ ಅಥವಾ ಸಹೋದರಿ ಇದ್ದರೆ, ಅವರಲ್ಲಿ ಪ್ರತಿಯೊಬ್ಬರಿಗೆ ಆರನೆ ಒಂದು ಪಾಲು. ಇನ್ನು ಅವರು (ಸಹೋದರ ಸಹೋದರಿಯರು) ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅವರಿಗೆಲ್ಲಾ ಒಟ್ಟು ಮೂರನೆ ಒಂದು ಪಾಲು – ಹಾನಿಕರವಲ್ಲದ ‘ವಸಿಯ್ಯತ್’ ಅನ್ನು ಪೂರ್ತಿಗೊಳಿಸಿದ ಬಳಿಕ ಮತ್ತು ಸಾಲವನ್ನು ತೀರಿಸಿದ ಬಳಿಕ. ಇದು ಅಲ್ಲಾಹನ ವತಿಯಿಂದ ಇರುವ ಆದೇಶ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನು ಮತ್ತು ಸಂಯಮಿಯಾಗಿದ್ದಾನೆ

[12] ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಅಲ್ಲಾಹನ ಹಾಗೂ ಅವನ ದೂತರ ಆಜ್ಞೆ ಪಾಲಿಸುವವನನ್ನು ಅವನು, ತಳದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದುವೇ ಭವ್ಯ ವಿಜಯವಾಗಿದೆ

[13] ಇನ್ನು ಅಲ್ಲಾಹನ ಮತ್ತು ಅವನ ದೂತರ ಆಜ್ಞೆಗಳನ್ನು ಉಲ್ಲಂಘಿಸುವವನನ್ನು ಮತ್ತು ಅವನು ನಿಶ್ಚಯಿಸಿದ ಮಿತಿಗಳನ್ನು ಮೀರಿ ನಡೆದವನನ್ನು ಅವನು ನರಕಾಗ್ನಿಯೊಳಗೆ ಸೇರಿಸುವನು. ಅವನು ಅದರಲ್ಲಿ ಸದಾಕಾಲ ಇರುವನು – ಅವನಿಗೆ ಅಪಮಾನಕಾರಿ ಶಿಕ್ಷೆ ಸಿಗಲಿದೆ

[14] ನಿಮ್ಮ ಮಹಿಳೆಯರ ಪೈಕಿ ಅನ್ಯೆತಿಕ ಕೃತ್ಯವೆಸಗಿರುವವರ ವಿರುದ್ಧ ನಾಲ್ವರು ಸಾಕ್ಷಿಗಳನ್ನು ತನ್ನಿರಿ. ಅವರು ಸಾಕ್ಷಿ ಹೇಳಿದರೆ, ಅವರ ಮರಣದ ತನಕ ಅಥವಾ ಅವರಿಗೆ ಅಲ್ಲಾಹನು ಏನಾದರೂ ದಾರಿ ತೋರುವ ತನಕ ಅವರನ್ನು ಮನೆಗಳಲ್ಲಿ ಬಂಧನದಲ್ಲಿಡಿರಿ

[15] ನಿಮ್ಮ ಪೈಕಿ ಇಬ್ಬರು ಈ ಅಪರಾಧವನ್ನು ಮಾಡಿದ್ದರೆ ಅವರಿಬ್ಬರನ್ನೂ ಚೆನ್ನಾಗಿ ದಂಡಿಸಿರಿ. ತರುವಾಯ ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ತಮ್ಮನ್ನು ಸರಿಪಡಿಸಿಕೊಂಡರೆ, ಅವರನ್ನು ಬಿಟ್ಟು ಬಿಡಿರಿ. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ

[16] ಅಜ್ಞಾನದಿಂದ ಪಾಪಕೃತ್ಯವನ್ನೆಸಗಿ ಆ ಬಳಿಕ ಬೇಗನೇ ಪಶ್ಚಾತ್ತಾಪ ಪಡುವವರ ಪಶ್ಚಾತ್ತಾಪವನ್ನು ಸ್ವೀಕರಿಸುವ ಹೊಣೆ ಅಲ್ಲಾಹನ ಮೇಲಿದೆ. ಅಂಥವರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಅರಿತಿರುವವನೂ ಯುಕ್ತಿವಂತನೂ ಆಗಿದ್ದಾನೆ

[17] ಮರಣವು ತನ್ನ ಮುಂದೆ ಬಂದು ಬಿಡುವ ತನಕವೂ ಪಾಪಕೃತ್ಯಗಳನ್ನು ಮಾಡುತ್ತಲೇ ಇದ್ದು (ಮರಣವನ್ನು ಕಂಡಾಗ) ‘‘ನಾನೀಗ ಪಶ್ಚಾತ್ತಾಪ ಪಡುತ್ತೇನೆ’’ ಎನ್ನುವವರ ಹಾಗೂ ಧಿಕ್ಕಾರಿಗಳಾಗಿಯೇ ಮೃತರಾದವರ ಪಶ್ಚಾತ್ತಾಪವು ಸ್ವೀಕೃತವಾಗದು. ಅವರಿಗಾಗಿ ನಾವು ಕಠಿಣ ಶಿಕ್ಷೆಯನ್ನು ತಯಾರಿಸಿಟ್ಟಿರುವೆವು

[18] ವಿಶ್ವಾಸಿಗಳೇ, ನೀವು ಬಲವಂತದಿಂದ ಮಹಿಳೆಯರ ಉತ್ತರಾಧಿಕಾರಿಗಳಾಗುವುದು ನಿಮ್ಮ ಪಾಲಿಗೆ ಸಮ್ಮತವಲ್ಲ. ಹಾಗೆಯೇ, ನೀವು ಅವರಿಗೆ ಏನನ್ನು ಕೊಟ್ಟಿರುವಿರೋ ಅದರಿಂದ ಏನನ್ನಾದರೂ ಮರಳಿ ಪಡೆಯಲಿಕ್ಕಾಗಿ ಅವರನ್ನು (ಮನೆಯಲ್ಲಿ) ತಡೆದಿಟ್ಟುಕೊಳ್ಳ ಬಾರದು – ಅವರೇನಾದರೂ ವ್ಯಕ್ತ ಅನೈತಿಕ ಕೃತ್ಯ ಎಸಗಿರುವುದರ ಹೊರತು. ಅವರ ಜೊತೆ ನೀವು ನಿಯಮಾನುಸಾರ ಬದುಕು ಸಾಗಿಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ (ನಿಮಗೆ ತಿಳಿದಿರಲಿ;) ನಿಮಗೊಂದು ವಸ್ತು ಅಪ್ರಿಯವಾಗಿರಬಹುದು ಮತ್ತು ಅದರಲ್ಲೇ ಅಲ್ಲಾಹನು (ನಿಮಗೆ) ಬಹಳಷ್ಟು ಹಿತವನ್ನು ಇಟ್ಟಿರಬಹುದು

[19] ನೀವು ಒಬ್ಬ ಪತ್ನಿಯ ಸ್ಥಾನಕ್ಕೆ (ಅವಳನ್ನು ಬಿಟ್ಟು) ಇನ್ನೊಬ್ಬ ಪತ್ನಿಯನ್ನು ತರಬಯಸಿದ್ದರೆ, ಅವರಲ್ಲೊಬ್ಬರಿಗೆ ನೀವು (ಈ ಹಿಂದೆ) ಒಂದು ದೊಡ್ಡ ಭಂಡಾರವನ್ನೇ ನೀಡಿದ್ದರೂ ಅವರಿಂದ ಕಿಂಚಿತ್ತನ್ನೂ ಮರಳಿ ಪಡೆಯಬಾರದು. ನೀವೇನು ಸುಳ್ಳಾರೋಪಗಳನ್ನು ಹೊರಿಸಿ ಹಾಗೂ ಸ್ಪಷ್ಟ ಪಾಪಕೃತ್ಯಗಳನ್ನೆಸಗಿ ಅದನ್ನು ಮರಳಿ ಪಡೆಯುವಿರಾ

[20] ನೀವು ಪರಸ್ಪರರನ್ನು ಸವಿದ ಬಳಿಕ ಮತ್ತು ಅವರು ನಿಮ್ಮಿಂದ ಬಲಿಷ್ಠ ವಾಗ್ದಾನವನ್ನು ಪಡೆದ ಬಳಿಕ ನೀವು ಅದನ್ನು (ಮಹ್ರ್ ಅನ್ನು) ಹೇಗೆ ತಾನೇ ಮರಳಿ ಪಡೆಯುವಿರಿ

[21] ನಿಮ್ಮ ತಂದೆ ವಿವಾಹವಾಗಿದ್ದ ಮಹಿಳೆಯರನ್ನು ನೀವು ವಿವಾಹವಾಗಬೇಡಿ – ಹಿಂದೆ ಗತಿಸಿದ್ದು ಇದಕ್ಕೆ ಹೊರತಾಗಿದೆ. ಖಂಡಿತವಾಗಿಯೂ ಅದು ನಾಚಿಕೆಗೇಡಿನ ಹೀನ ಕಾರ್ಯವಾಗಿತ್ತು ಮತ್ತು ತೀರಾ ದುಷ್ಟ ಮಾರ್ಗವಾಗಿತ್ತು

[22] ನಿಮ್ಮ ಮಾತೆಯರನ್ನು, ನಿಮ್ಮ ಪುತ್ರಿಯರನ್ನು, ನಿಮ್ಮ ಸಹೋದರಿಯರನ್ನು, ನಿಮ್ಮ ತಂದೆಯ ಸಹೋದರಿಯರನ್ನು, ನಿಮ್ಮ ತಾಯಿಯ ಸಹೋದರಿಯರನ್ನು, ನಿಮ್ಮ ಸಹೋದರರ ಪುತ್ರಿಯರನ್ನು, ನಿಮ್ಮ ಸಹೋದರಿಯರ ಪುತ್ರಿಯರನ್ನು, ನಿಮಗೆ ಹಾಲುಣಿಸಿದ್ದ ನಿಮ್ಮ ಮಾತೆಯರನ್ನು, ನಿಮ್ಮ ಜೊತೆ ಹಾಲುಂಡ (ಕಾರಣಕ್ಕಾಗಿ) ನಿಮ್ಮ ಸಹೋದರಿಯರಾದವರನ್ನು, ನಿಮ್ಮ ಪತ್ನಿಯರ ಮಾತೆಯರನ್ನು ಮತ್ತು ನೀವು ಸಂಭೋಗಿಸಿರುವಂತಹ ನಿಮ್ಮ ಪತ್ನಿಯರು ಹೆತ್ತ ಮತ್ತು ನಿಮ್ಮ ಪೋಷಣೆಯಲ್ಲಿರುವ ನಿಮ್ಮ ಮಲ ಪುತ್ರಿಯರನ್ನು (ವಿವಾಹವಾಗುವುದನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ – ನೀವು ಆ ಪತ್ನಿಯರ ಜೊತೆ ಸಂಭೋಗಿಸಿಲ್ಲವಾದರೆ (ಅವರನ್ನು ಬಿಟ್ಟು ಅವರ ಆ ಪುತ್ರಿಯರನ್ನು ವಿವಾಹವಾಗುವುದಕ್ಕೆ) ಆಕ್ಷೇಪವಿಲ್ಲ. ಹಾಗೆಯೇ ನಿಮ್ಮ ಸ್ವಂತ ಪುತ್ರರ ಪತ್ನಿಯರಾಗಿದ್ದವರು (ನಿಮಗೆ ನಿಷಿದ್ಧರಾಗಿದ್ದಾರೆ). ಮತ್ತು ಏಕಕಾಲದಲ್ಲಿ ಇಬ್ಬರು ಸಹೋದರಿಯರನ್ನು ನೀವು ವಿವಾಹವಾಗುವುದು (ನಿಷಿದ್ಧವಾಗಿದೆ) – ಈ ಹಿಂದೆ ನಡೆದು ಹೋಗಿರುವುದರ ಹೊರತು. ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[23] ಮಹಿಳೆಯರ ಪೈಕಿ ಇನ್ನೊಬ್ಬರ ವಿವಾಹ ಬಂಧನದಲ್ಲಿರುವವರು ನಿಮಗೆ ನಿಷಿದ್ಧರಾಗಿದ್ದಾರೆ – (ಯುದ್ಧದಲ್ಲಿ) ದಾಸಿಯರಾಗಿ ನಿಮ್ಮ ವಶಕ್ಕೆ ಬಂದಿರುವವರ ಹೊರತು. ಇದು ನಿಮ್ಮ ಪಾಲಿಗೆ ಅಲ್ಲಾಹನ ಆದೇಶವಾಗಿದೆ. ಅವರ ಹೊರತು ಇತರ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿರುವರು – ಆದರೆ ನೀವು ನಿಮ್ಮ ಸಂಪತ್ತನ್ನು ವ್ಯಯಿಸಿ (ನಿಯಮಾನುಸಾರ ಮಹ್ರ್ ಕೊಟ್ಟು) ಅವರನ್ನು ವಿವಾಹವಾಗಬೇಕು. ಸ್ವೇಚ್ಛಾಚಾರ ನಡೆಸಬಾರದು. ನಿಮ್ಮ ಪೈಕಿ, ಅವರಲ್ಲಿನ ಯಾರನ್ನಾದರೂ ಅನುಭವಿಸಿರುವವರು, ಅವರ ನಿರ್ದಿಷ್ಟ ಹಕ್ಕನ್ನು (ಮಹ್ರ್ ಅನ್ನು) ಅವರಿಗೆ ಪಾವತಿಸಬೇಕು. ಇನ್ನು ನೀವು ಅದನ್ನು ನಿಗದಿಪಡಿಸಿಕೊಂಡ ಬಳಿಕ (ಪಾವತಿಯ ಸಮಯದ ಕುರಿತು) ಪರಸ್ಪರ ಒಪ್ಪಿಕೊಂಡರೆ ತಪ್ಪಿಲ್ಲ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[24] ನಿಮ್ಮ ಪೈಕಿ, ಸ್ವತಂತ್ರ ವಿಶ್ವಾಸಿ ಮಹಿಳೆಯರನ್ನು ವಿವಾಹವಾಗಲು ಸಮರ್ಥರಲ್ಲದವರು, ನಿಮ್ಮ ಮಾಲಕತ್ವದಲ್ಲಿರುವ ವಿಶ್ವಾಸಿ ದಾಸಿಯನ್ನು ವಿವಾಹವಾಗಲಿ. ನಿಮ್ಮ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ನೀವೆಲ್ಲಾ ಒಂದೇ ಮೂಲದವರು. ನೀವು ಅವರ (ದಾಸಿಯರ) ಪೋಷಕರ ಅನುಮತಿ ಪಡೆದು ಅವರನ್ನು ವಿವಾಹವಾಗಿರಿ. ಅವರಿಗೆ ಅವರ ಹಕ್ಕನ್ನು (ಮಹ್ರ್ ಅನ್ನು) ನ್ಯಾಯೋಚಿತವಾಗಿ ಪಾವತಿಸಿರಿ. ಅವರು ಕಟ್ಟು ನಿಟ್ಟಾಗಿ ಸುಶೀಲೆಯರಾಗಿರಬೇಕು. ಬಹಿರಂಗವಾಗಿ ಅನೈತಿಕತೆಯಲ್ಲಿ ನಿರತರಾಗಿರುವವರಾಗಲಿ ಗುಟ್ಟಾಗಿ ಅಕ್ರಮ ನಂಟುಗಳನ್ನು ಪೋಷಿಸುವವರಾಗಲಿ ಆಗಿರಬಾರದು. ವಿವಾಹ ವ್ಯಾಪ್ತಿಯೊಳಗೆ ಬಂದು ಬಿಟ್ಟ ಬಳಿಕ, ಅವರು ಏನಾದರೂ ಅನೈತಿಕ ವ್ಯವಹಾರ ನಡೆಸಿದರೆ, ಅವರು ಸ್ವತಂತ್ರ ಮಹಿಳೆಯರಿಗಿರುವ ಶಿಕ್ಷೆಯ ಅರ್ಧ ಭಾಗಕ್ಕೆ ಅರ್ಹರಾಗುವರು. ಇದು (ದಾಸಿಯರನ್ನು ವಿವಾಹವಾಗುವ ಅನುಮತಿ), ನಿಮ್ಮ ಪೈಕಿ ತಾನು (ಅವಿವಾಹಿತನಾಗಿದ್ದರೆ) ಪಾಪವೆಸಗಬಹುದೆಂಬ ಭಯವುಳ್ಳವರಿಗಾಗಿ ಇರುವ ಸವಲತ್ತಾಗಿದೆ. ಇನ್ನು ನೀವು ಸಹನಶೀಲರಾಗಿದ್ದರೆ ನಿಮ್ಮ ಪಾಲಿಗೆ ಅದುವೇ ಉತ್ತಮ. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[25] ಅಲ್ಲಾಹನು ನಿಮಗೆ (ಸತ್ಯವನ್ನು) ವಿವರಿಸ ಬಯಸುತ್ತಾನೆ ಹಾಗೂ ನಿಮಗಿಂತ ಹಿಂದಿನವರು ನಡೆದ ದಾರಿಗಳ ಕುರಿತು ನಿಮಗೆ ಮಾರ್ಗದರ್ಶನ ನೀಡಬಯಸುತ್ತಾನೆ ಮತ್ತು ಅವನು ನಿಮ್ಮೆಡೆಗೆ ಒಲಿಯ ಬಯಸುತ್ತಾನೆ. ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[26] ಅಲ್ಲಾಹನು ನಿಮ್ಮೆಡೆಗೆ ಒಲಿಯಬಯಸುತ್ತಾನೆ. ಅತ್ತ ಸ್ವೇಚ್ಛೆಯ ಅನುಯಾಯಿಗಳು, ನೀವು (ಸರಿ ದಾರಿಯಿಂದ) ತೀರಾ ದೂರ ಸಾಗಿ ಬಿಡಬೇಕೆಂದು ಬಯಸುತ್ತಾರೆ

[27] ಅಲ್ಲಾಹನು ನಿಮ್ಮ ಮೇಲಿಂದ (ಹೊಣೆಗಳ) ಭಾರವನ್ನು ಹಗುರಗೊಳಿಸ ಬಯಸುತ್ತಾನೆ. ಮಾನವನಂತು ದುರ್ಬಲನಾಗಿಯೇ ಸೃಷ್ಟಿಸಲ್ಪಟ್ಟಿದ್ದಾನೆ

[28] ವಿಶ್ವಾಸಿಗಳೇ, ನೀವು ಪರಸ್ಪರರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸಬೇಡಿ – ಪರಸ್ಪರ ಒಪ್ಪಿಗೆಯಿಂದ ವ್ಯವಹಾರ ನಡೆಸಿ ಆದಾಯ ಸಂಪಾದಿಸುವುದು ತಪ್ಪಲ್ಲ. ಪರಸ್ಪರ ಯಾರದೇ ಹತ್ಯೆ ನಡೆಸಬೇಡಿ – ಅಲ್ಲಾಹನಂತು ನಿಮ್ಮ ಪಾಲಿಗೆ ಸದಾ ಕರುಣಾಮಯಿಯಾಗಿದ್ದಾನೆ

[29] (ಆದಾಯಕ್ಕಾಗಿ) ಆ ರೀತಿ ಅತಿರೇಕ ಹಾಗೂ ಅನ್ಯಾಯ ಎಸಗಿದವರನ್ನು ನಾವು ಶೀಘ್ರವೇ ನರಕದ ಬೆಂಕಿಯೊಳಗೆ ಎಸೆಯಲಿದ್ದೇವೆ. ಅಲ್ಲಾಹನ ಮಟ್ಟಿಗೆ ಇದೆಲ್ಲಾ ಸುಲಭವಾಗಿದೆ

[30] ನಿಮ್ಮ ಪಾಲಿಗೆ ನಿಷೇಧಿಸಲಾಗಿರುವ ಮಹಾ ಪಾತಕಗಳಿಂದ ನೀವು ದೂರ ಉಳಿದರೆ, ನಿಮ್ಮ ಸಣ್ಣ ಪುಟ್ಟ ಪಾಪಗಳನ್ನೆಲ್ಲಾ ನಾವು ನಿವಾರಿಸುವೆವು ಮತ್ತು ಬಹಳ ಗೌರವಾನ್ವಿತ ನೆಲೆಯೊಂದರೊಳಗೆ ನಿಮ್ಮನ್ನು ಸೇರಿಸುವೆವು

[31] ಅಲ್ಲಾಹನು ನಿಮ್ಮಲ್ಲಿನ ಕೆಲವರಿಗೆ ಮತ್ತೆ ಕೆಲವರಿಗಿಂತ ಹೆಚ್ಚಾಗಿ ದಯಪಾಲಿಸಿರುವ ಅನುಗ್ರಹಕ್ಕಾಗಿ ಆಶೆ ಪಡಬೇಡಿ. ಪುರುಷರು ಸಂಪಾದಿಸಿದ್ದು ಅವರಿಗೆ (ಪುರುಷರಿಗೆ) ಮತ್ತು ಸ್ತ್ರೀಯರು ಸಂಪಾದಿಸಿದ್ದು ಅವರಿಗೆ (ಸ್ತ್ರೀ ಯರಿಗೆ) ಸಲ್ಲುವುದು. ಅಲ್ಲಾಹನಲ್ಲಿ ಅವನ ಅನುಗ್ರಹವನ್ನು ಬೇಡಿರಿ. ಅಲ್ಲಾಹನು ಖಂಡಿತವಾಗಿಯೂ ಎಲ್ಲವನ್ನೂ ಚೆನ್ನಾಗಿ ಬಲ್ಲನು

[32] ನಾವು ಪ್ರತಿಯೊಬ್ಬರಿಗೂ ಅವರ ಹೆತ್ತವರು ಅಥವಾ ನಿಕಟ ಬಂಧುಗಳು ತೊರೆದು ಹೋಗುವ ಸೊತ್ತಿನಲ್ಲಿ ಉತ್ತರಾಧಿಕಾರವನ್ನು ನಿಗದಿ ಪಡಿಸಿದ್ದೇವೆ. ಇನ್ನು ಯಾರ ಜೊತೆ ನೀವು ಕರಾರು ಮಾಡಿಕೊಂಡಿರುವಿರೋ ಅವರಿಗೆ ಅವರ ಪಾಲನ್ನು ನೀಡಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ

[33] ಪುರುಷರು ಸ್ತ್ರೀಯರ ಸಂರಕ್ಷಕರು. ಏಕೆಂದರೆ, ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ದಯಪಾಲಿಸಿರುತ್ತಾನೆ ಮತ್ತು ಅವರು (ಪುರುಷರು) ತಮ್ಮ ಸಂಪತ್ತಿನಿಂದ (ಕುಟುಂಬಕ್ಕಾಗಿ) ಖರ್ಚು ಮಾಡುತ್ತಾರೆ. ಸಜ್ಜನ ಸ್ತ್ರೀಯರು ವಿಧೇಯರಾಗಿರುತ್ತಾರೆ ಮತ್ತು ಅಲ್ಲಾಹನು ರಕ್ಷಿಸಬೇಕೆಂದಿರುವುದನ್ನು (ತಮ್ಮ ಮಾನವನ್ನು ಹಾಗೂ ಪತಿಯ ಸೊತ್ತುಗಳನ್ನು) ಗುಪ್ತ ಸ್ಥಿತಿಯಲ್ಲೂ (ಪತಿಯ ಅನುಪಸ್ಥಿತಿಯಲ್ಲೂ) ರಕ್ಷಿಸುವವರಾಗಿರುತ್ತಾರೆ. ನಿಮಗೆ ವಿದ್ರೋಹದ ಆತಂಕವಿರುವಂತಹ ಮಹಿಳೆಯರಿಗೆ ಉಪದೇಶಿಸಿರಿ. (ಅವರು ತಿದ್ದಿಕೊಳ್ಳದಿದ್ದರೆ) ಆ ಬಳಿಕ ಮಲಗುವಲ್ಲಿ ಅವರನ್ನು ಒಂಟಿಯಾಗಿ ಬಿಡಿರಿ ಮತ್ತು (ಆಗಲೂ ಅವರು ತಮ್ಮನ್ನು ತಿದ್ದಿಕೊಳ್ಳದಿದ್ದರೆ,) ಅವರನ್ನು ದಂಡಿಸಿರಿ. ಇನ್ನು ಅವರು ನಿಮಗೆ ವಿಧೇಯರಾದರೆ, ಅವರ ವಿರುದ್ಧ (ಆರೋಪ ಅಥವಾ ಕಿರುಕುಳಕ್ಕೆ) ದಾರಿ ಹುಡುಕುತ್ತಿರಬೇಡಿ. ಅಲ್ಲಾಹನು ಖಂಡಿತವಾಗಿಯೂ ಉನ್ನತನೂ ಮಹಾನನೂ ಆಗಿರುತ್ತಾನೆ

[34] ನಿಮಗಿನ್ನು ಅವರಿಬ್ಬರ (ದಂಪತಿಯರ) ನಡುವೆ ಬಿಕ್ಕಟ್ಟಿನ ಭಯವಿದ್ದರೆ ಆತನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನು ಹಾಗೂ ಆಕೆಯ ಕುಟುಂಬದಿಂದಲೂ ಒಬ್ಬ ಮಧ್ಯಸ್ಥನನ್ನು ನೇಮಿಸಿರಿ. ಅವರಿಬ್ಬರೂ ಸುಧಾರಣೆಯನ್ನು ಬಯಸಿದ್ದರೆ, ಅಲ್ಲಾಹನು ಅವರ ನಡುವೆ ಸಾಮರಸ್ಯವನ್ನು ಬೆಳೆಸುವನು. ಅಲ್ಲಾಹನಂತು ಸರ್ವಜ್ಞನೂ ಎಲ್ಲ ವಿಷಯಗಳ ಕುರಿತು ಜಾಗೃತನೂ ಆಗಿರುವನು

[35] ಅಲ್ಲಾಹನನ್ನೇ ಪೂಜಿಸಿರಿ ಮತ್ತು ಅವನ ಜೊತೆ ಏನನ್ನೂ ಸೇರಿಸಬೇಡಿ. ಹೆತ್ತವರ ವಿಷಯದಲ್ಲಿ ಹಾಗೂ ಆಪ್ತ ಬಂಧುಗಳು, ಅನಾಥರು, ಬಡವರು, ನೆರೆಯಲ್ಲಿರುವ ಬಂಧುಗಳು, ನೆರೆಯಲ್ಲಿರುವ ಅಪರಿಚಿತರು, ಜೊತೆಗಾರರು, ಪ್ರಯಾಣಿಕರು ಮತ್ತು ನಿಮ್ಮ ಮಾಲಕತ್ವದಲ್ಲಿ ಇರುವವರ ವಿಷಯದಲ್ಲಿ ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಅಹಂಕಾರಿಗಳನ್ನು ಮತ್ತು ಸ್ವತಃ ತಮ್ಮನ್ನೇ ಹೊಗಳಿಕೊಳ್ಳುವವರನ್ನು ಪ್ರೀತಿಸುವುದಿಲ್ಲ

[36] (ಹಾಗೆಯೇ,) ಜಿಪುಣತೆ ತೋರುವವರನ್ನು, ಜನರಿಗೆ ಜಿಪುಣತೆ ಬೋಧಿಸುವವರನ್ನು ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ತಮಗೆ ನೀಡಿರುವುದನ್ನು ಬಚ್ಚಿಡುವವರನ್ನು (ಅಲ್ಲಾಹನು ಪ್ರೀತಿಸುವುದಿಲ್ಲ). ಧಿಕ್ಕಾರಿಗಳಿಗಾಗಿ ನಾವು ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೇವೆ

[37] ತಮ್ಮ ಸಂಪತ್ತನ್ನು ಜನರಿಗೆ ತೋರಿಸಲಿಕ್ಕಾಗಿ ಖರ್ಚು ಮಾಡುವವರು ಹಾಗೂ ಅಲ್ಲಾಹನಲ್ಲಾಗಲಿ ಪರಲೋಕದಲ್ಲಾಗಲಿ ನಂಬಿಕೆ ಇಲ್ಲದವರು (ಶಿಕ್ಷಾರ್ಹರು). ಶೈತಾನನು ಯಾರ ಸಂಗಾತಿಯಾದನೋ (ಆತನು ತಿಳಿದಿರಲಿ) ಅವನು ತುಂಬಾ ಕೆಟ್ಟ ಸಂಗಾತಿ

[38] ಅವರು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿದ್ದರೆ ಮತ್ತು ಅಲ್ಲಾಹನು ಅವರಿಗೆ ನೀಡಿರುವುದರಿಂದ ಖರ್ಚು ಮಾಡಿದ್ದರೆ, ಅವರಿಗೇನಾಗುತ್ತಿತ್ತು? ಅಲ್ಲಾಹನಂತು ಅವರನ್ನು ಚೆನ್ನಾಗಿ ಬಲ್ಲನು

[39] ಖಂಡಿತವಾಗಿಯೂ ಅಲ್ಲಾಹನು ಕಿಂಚಿತ್ತೂ ಅನ್ಯಾಯವೆಸಗುವುದಿಲ್ಲ. ಒಂದು ಸತ್ಕರ್ಮವಿದ್ದರೆ, ಅವನು ಅದನ್ನು ಹಲವು ಪಟ್ಟು ಹೆಚ್ಚಿಸಿ, ತನ್ನ ವತಿಯಿಂದ ಭಾರೀ ಭವ್ಯ ಪ್ರತಿಫಲವನ್ನು ನೀಡುತ್ತಾನೆ

[40] (ದೂತರೇ,) ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಮುಂದೆ ತಂದಾಗ ಮತ್ತು ಅವರ (ಧಿಕ್ಕಾರಿಗಳ) ವಿಷಯದಲ್ಲಿ ನಿಮ್ಮನ್ನು ಸಾಕ್ಷಿಯಾಗಿ ಮುಂದೆ ತಂದಾಗ (ಅವರ ಸ್ಥಿತಿ) ಹೇಗಿದ್ದೀತು

[41] ಆ ದಿನ, ಧಿಕ್ಕಾರಿಗಳು ಮತ್ತು ದೇವದೂತರ ಆಜ್ಞೆ ಮೀರಿ ನಡೆದವರು, ತಾವು ನೆಲಸಮರಾಗಿದ್ದರೆ ಚೆನ್ನಾಗಿತ್ತೆಂದು ಹಂಬಲಿಸುವರು. ಏನನ್ನೂ ಅಲ್ಲಾಹನಿಂದ ಬಚ್ಚಿಡಲು ಅವರಿಗೆ ಸಾಧ್ಯವಾಗದು

[42] ವಿಶ್ವಾಸಿಗಳೇ, ನೀವು (ಮದ್ಯದ) ಅಮಲಿನಲ್ಲಿರುವಾಗ – ನೀವೇನು ಹೇಳುತ್ತಿರುವಿರಿ ಎಂಬುದು ನಿಮಗೆ ತಿಳಿಯುವ ತನಕ – ನಮಾಝ್‌ನ ಹತ್ತಿರ ಹೋಗಬಾರದು. ಸಂಭೋಗಾನಂತರದ ಸ್ಥಿತಿಯಲ್ಲೂ – ನೀವು ಸ್ನಾನ ಮಾಡುವ ತನಕ (ನಮಾಝನ್ನು ಸಮೀಪಿಸಬಾರದು) – ನೀವು ಪ್ರಯಾಣಿಸುತ್ತಿರುವಾಗಿನ ಹೊರತು. ಇನ್ನು ನೀವು ರೋಗಿಗಳಾಗಿದ್ದರೆ, ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೊಬ್ಬರು ಶೌಚಾಲಯದಿಂದ ಬಂದಿದ್ದರೆ ಅಥವಾ ನೀವು ಮಹಿಳೆಯರನ್ನು (ಲೈಂಗಿಕವಾಗಿ) ಸಂಪರ್ಕಿಸಿದ್ದರೆ ಮತ್ತು ಆ ಬಳಿಕ ನಿಮಗೆ ನೀರು ಸಿಗದಿದ್ದರೆ ನಿರ್ಮಲ ಮಣ್ಣಿನಿಂದ ‘ತಯಮ್ಮಮ್’ ಮಾಡಿರಿ – (ಅಂದರೆ) ಅದನ್ನು ಸ್ಪರ್ಶಿಸಿ ನಿಮ್ಮ ಮುಖ ಮತ್ತು ಕೈಗಳನ್ನು ಸವರಿಕೊಳ್ಳಿರಿ. ಅಲ್ಲಾಹನು ಖಂಡಿತವಾಗಿಯೂ (ಪ್ರಮಾದಗಳನ್ನು) ಕಡೆಗಣಿಸುವವನೂ (ಪಾಪಗಳನ್ನು) ಕ್ಷಮಿಸುವವನೂ ಆಗಿದ್ದಾನೆ

[43] ನೀವು ಕಾಣಲಿಲ್ಲವೆ, ದಿವ್ಯ ಗ್ರಂಥದಲ್ಲಿನ ಭಾಗವೊಂದನ್ನು ನೀಡಲಾಗಿದ್ದವರು ಸ್ವತಃ ದಾರಿಗೇಡಿತನವನ್ನು ಖರೀದಿಸಿಕೊಳ್ಳುತ್ತಿದ್ದಾರೆ ಮತ್ತು ನಿಮ್ಮನ್ನೂ ಸರಿದಾರಿಯಿಂದ ದೂರಗೊಳಿಸಬಯಸುತ್ತಾರೆ

[44] ನಿಮ್ಮ ಶತ್ರುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. (ನಿಮಗೆ) ರಕ್ಷಕನಾಗಿ ಅಲ್ಲಾಹನೇ ಸಾಕು ಮತ್ತು ಸಹಾಯಕನಾಗಿಯೂ ಅಲ್ಲಾಹನೇ ಸಾಕು

[45] ಯಹೂದಿಗಳ ಪೈಕಿ ಕೆಲವರು, ಮಾತನ್ನು ಅದರ ಮೂಲದಿಂದ ಸರಿಸಿ ವಿಕೃತಗೊಳಿಸಿಬಿಡುತ್ತಾರೆ ಮತ್ತು ಅವರು ‘‘ಸಮಿಅ್ನಾ ವಅಸೈನಾ’’ (ನಾವು ಕೇಳಿದೆವು ಮತ್ತು ಅವಿಧೇಯರಾದೆವು) ಎಂದೂ ‘‘ಇಸ್ಮಅ್ ಗೈರ ಮುಸ್ಮಇನ್’’ (ಕೇಳಿರಿ-ನೀವು ಕೇಳಿಸುವುದಕ್ಕೆ ಅರ್ಹರಲ್ಲ) ಎಂದೂ ‘‘ರಾಇನಾ’’ (ನಮ್ಮ ಕುರಿ ಕಾಯುವವನು) ಎಂದೂ ಹೇಳುತ್ತಾರೆ – ಅವರು ಈ ರೀತಿ ತಮ್ಮ ನಾಲಿಗೆಯನ್ನು ತಿರುಚಿ, ಧರ್ಮಕ್ಕೆ ಅಪಚಾರವೆಸಗುತ್ತಾರೆ. ನಿಜವಾಗಿ ಅವರು ‘ಸಮಿಅ್ನಾ ವಅತಅ್ನಾ’ (ನಾವು ಕೇಳಿದೆವು ಮತ್ತು ಅನುಸರಿಸಿದೆವು) ‘ವಸ್ಮಅ’ (ಕೇಳಿರಿ) ಮತ್ತು ಉಂಝುರ್ನಾ (ನಮ್ಮನ್ನು ನೋಡಿರಿ) ಎಂದಿದ್ದರೆ ಅದು ಅವರ ಪಾಲಿಗೇ ಉತ್ತಮವಾಗಿತ್ತು ಮತ್ತು ಅದು ಹೆಚ್ಚು ಪಕ್ವ ನಡವಳಿಕೆಯಾಗಿರುತ್ತಿತ್ತು. ಆದರೆ ಅವರ ಧಿಕ್ಕಾರಿ ಧೋರಣೆಯ ಕಾರಣ ಅಲ್ಲಾಹನು ಅವರನ್ನು ಶಪಿಸಿರುವನು – ಆದ್ದರಿಂದಲೇ ಅವರಲ್ಲಿ ತೀರಾ ಕಡಿಮೆ ಮಂದಿ ಮಾತ್ರ ನಂಬಿಕೆ ಉಳ್ಳವರಾಗಿದ್ದಾರೆ

[46] ಗ್ರಂಥ ನೀಡಲ್ಪಟ್ಟವರೇ, (ಇದೀಗ) ನಾವು ಇಳಿಸಿಕೊಟ್ಟಿರುವುದರಲ್ಲಿ (ಕುರ್‌ಆನ್‌ನಲ್ಲಿ) ನಂಬಿಕೆ ಇಡಿರಿ – ಅದು, ಹಿಂದಿನಿಂದಲೇ ನಿಮ್ಮ ಬಳಿ ಇರುವುದನ್ನು (ತೌರಾತ್ ಹಾಗೂ ಇಂಜೀಲ್ ಗ್ರಂಥಗಳನ್ನು) ಸಮರ್ಥಿಸುತ್ತದೆ. ನಾವು ಅವರ (ಧಿಕ್ಕಾರಿಗಳ) ಮುಖಗಳನ್ನು ವಿಕೃತಗೊಳಿಸಿ ಅವುಗಳನ್ನು ಹಿಂದಕ್ಕೆ ತಿರುಚಿ ಬಿಡುವ ಅಥವಾ (ಈ ಹಿಂದೆ) ‘ಶನಿವಾರದವರನ್ನು’ ಶಪಿಸಿದಂತೆ ಅವರನ್ನು ಶಪಿಸಿ ಬಿಡುವ ಮುನ್ನ (ಅವರು ನಂಬಿಕೆ ಇಡಲಿ). ಅಲ್ಲಾಹನ ಆದೇಶವಂತೂ ಖಂಡಿತ ಅನುಷ್ಠಾನವಾಗುತ್ತದೆ

[47] ತನ್ನ ಜೊತೆ (ಯಾರನ್ನಾದರೂ) ಪಾಲುದಾರರಾಗಿಸುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ – ಅದರ ಹೊರತು ಬೇರಾವುದನ್ನೂ ಅವನು ತಾನಿಚ್ಛಿಸುವವರ ಪಾಲಿಗೆ ಕ್ಷಮಿಸಿ ಬಿಡುತ್ತಾನೆ. ಅಲ್ಲಾಹನ ಜೊತೆ ಪಾಲುದಾರರನ್ನು ಸೇರಿಸುವವನು ಮಹಾ ಸುಳ್ಳಾರೋಪವನ್ನು ಹೊರಿಸಿದನು

[48] ತಾವು ಭಾರೀ ಪರಿಶುದ್ಧರೆಂದು ಹೇಳಿಕೊಳ್ಳುತ್ತಿರುವವರನ್ನು ನೀವು ಕಂಡಿರಾ? ನಿಜವಾಗಿ ಅಲ್ಲಾಹನೇ ತಾನಿಚ್ಛಿಸಿದವರನ್ನು ಪರಿಶುದ್ಧರಾಗಿಸುತ್ತಾನೆ. (ಅವನ ಕಡೆಯಿಂದ) ಯಾರ ಮೇಲೂ ಎಳ್ಳಷ್ಟೂ ಅನ್ಯಾಯವಾಗದು

[49] ಅವರು ಅಲ್ಲಾಹನ ಮೇಲೆ ಎಂತೆಂತಹ ಸುಳ್ಳಾರೋಪಗಳನ್ನು ಹೊರಿಸುತ್ತಿದ್ದಾರೆಂದು ನೋಡಿರಿ! (ಅವರ ವಿನಾಶಕ್ಕೆ) ಈ ಸ್ಪಷ್ಟ ಸುಳ್ಳಾರೊಪಗಳೇ ಸಾಕು

[50] ಗ್ರಂಥದ ಒಂದು ಭಾಗವನ್ನು ನೀಡಲಾಗಿದ್ದವರನ್ನು ನೀವು ಕಂಡಿರಾ? ಅವರು ಜಿಬ್ತ್ (ಮಾಟ,ಮಂತ್ರ) ಮತ್ತು ತಾಗೂತ್ (ಶೈತಾನ)ನಲ್ಲಿ ನಂಬಿಕೆ ಇಡುತ್ತಾರೆ. ಅವರು ಧಿಕ್ಕಾರಿಗಳ ಕುರಿತು ‘‘ವಿಶ್ವಾಸಿಗಳಿಗಿಂತ ಇವರೇ ಹೆಚ್ಚು ಸರಿದಾರಿಯಲ್ಲಿದ್ದಾರೆ’’ ಎನ್ನುತ್ತಾರೆ

[51] ಅಲ್ಲಾಹನು ಶಪಿಸಿರುವುದು ಅವರನ್ನೇ. ಇನ್ನು ಅಲ್ಲಾಹನು ಯಾರನ್ನಾದರೂ ಶಪಿಸಿ ಬಿಟ್ಟರೆ, ಮತ್ತೆ ಅವನ ಪರವಾಗಿ ನಿಮಗೆ ಯಾವ ಸಹಾಯಕನೂ ಸಿಗಲಾರನು

[52] ಯಾವುದಾದರೂ ಸಾಮ್ರಾಜ್ಯದ ಭಾಗವು ಅವರ ಕೈಯಲ್ಲಿದೆಯೇ? ಹಾಗೆ ಇದ್ದಿದ್ದರೂ ಅವರು ಜನರಿಗೆ ಚಿಕ್ಕಾಸನ್ನೂ ನೀಡುತ್ತಿರಲಿಲ್ಲ

[53] ಅವರೇನು, ಅಲ್ಲಾಹನು ತನ್ನ ಅನುಗ್ರಹದಿಂದ ಜನರಿಗೆ ನೀಡಿರುವುದಕ್ಕಾಗಿ ಅವರ (ಜನರ) ಕುರಿತು ಅಸೂಯೆ ಪಡುತ್ತಿದ್ದಾರೆಯೆ? ನಾವು ಇಬ್ರಾಹೀಮರ ಸಂತತಿಗೆ (ದಿವ್ಯ) ಗ್ರಂಥವನ್ನು ಹಾಗೂ ಯುಕ್ತಿಯನ್ನು ನೀಡಿರುವೆವು ಮತ್ತು ಅವರಿಗೊಂದು ಭವ್ಯ ಸಾಮ್ರಾಜ್ಯವನ್ನೂ ನೀಡಿದ್ದೆವು

[54] ಅವರಲ್ಲಿ ಕೆಲವರು ಅದನ್ನು (ದಿವ್ಯ ಗ್ರಂಥವನ್ನು) ನಂಬಿದರು ಮತ್ತು ಕೆಲವರು ಅದರಿಂದ ದೂರ ಉಳಿದುಕೊಂಡರು. (ಅಂಥವರಿಗೆ) ಭುಗಿಲೆದ್ದು ಉರಿಯುವ ನರಕಾಗ್ನಿಯೇ ಸಾಕು

[55] ನಮ್ಮ ವಚನಗಳನ್ನು ಧಿಕ್ಕರಿಸುವವರನ್ನು ಖಂಡಿತವಾಗಿಯೂ ನಾವು ಬಹುಬೇಗನೇ ನರಕಾಗ್ನಿಯೊಳಗೆ ಎಸೆಯಲಿದ್ದೇವೆ. (ಅಲ್ಲಿ) ಅವರು ಶಿಕ್ಷೆಯನ್ನು ಸವಿಯುತ್ತಲೇ ಇರಲೆಂದು, ಅವರ ಚರ್ಮವು ಬೆಂದು ಕರಗಿ ಹೋದಾಗ, ನಾವು ಅದರ ಬದಲಿಗೆ ಅವರಿಗೆ ಹೊಸ ಚರ್ಮವನ್ನು ತೊಡಿಸುವೆವು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[56] ಮತ್ತು ನಾವು, ವಿಶ್ವಾಸಿಗಳಾಗಿದ್ದವರು ಹಾಗೂ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು, ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳೊಳಗೆ ಸೇರಿಸುವೆವು. ಅಲ್ಲಿ ಅವರು ಸದಾಕಾಲ ಇರುವರು. ಅವರಿಗೆ ಅಲ್ಲಿ ಶುದ್ಧ ಪತ್ನಿಯರು ಇರುವರು ಮತ್ತು ನಾವು ಅವರನ್ನು ದಟ್ಟ ನೆರಳಿನೊಳಗೆ ಸೇರಿಸುವೆವು

[57] ನಿಮ್ಮನ್ನು ನಂಬಿ ನಿಮಗೊಪ್ಪಿಸಲಾದ ಸೊತ್ತನ್ನು ನೀವು ಅದರ ನೈಜ ಮಾಲಕರಿಗೆ ಮರಳಿಸಬೇಕೆಂದು ಹಾಗೂ ನೀವು ಜನರ ನಡುವೆ ತೀರ್ಪು ನೀಡುವಾಗ ನ್ಯಾಯೋಚಿತವಾಗಿ ತೀರ್ಪು ನೀಡಬೇಕೆಂದು ಅಲ್ಲಾಹನು ನಿಮಗೆ ಆದೇಶಿಸುತ್ತಿದ್ದಾನೆ. ಖಂಡಿತವಾಗಿಯೂ ಅಲ್ಲಾಹನು ಅತ್ಯುತ್ತಮ ಉಪದೇಶ ನೀಡುವವನಾಗಿದ್ದಾನೆ. ನಿಸ್ಸಂದೇಹವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುತ್ತಾನೆ, ಎಲ್ಲವನ್ನೂ ಕಾಣುತ್ತಾನೆ

[58] ವಿಶ್ವಾಸಿಗಳೇ, ಅಲ್ಲಾಹನ ಆದೇಶ ಪಾಲಿಸಿರಿ ಮತ್ತು ಅಲ್ಲಾಹನ ದೂತರ ಹಾಗೂ ನಿಮ್ಮ ಪೈಕಿ ಅಧಿಕಾರ ಸ್ಥಾನದಲ್ಲಿರುವವರ ಆದೇಶ ಪಾಲಿಸಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಯಾವುದಾದರೂ ವಿಷಯದಲ್ಲಿ ನಿಮ್ಮ ನಡುವೆ ವಿವಾದ ಉಂಟಾದಾಗ, ಅದನ್ನು ಅಲ್ಲಾಹ್ ಮತ್ತವನ ದೂತರೆಡೆಗೆ ಮರಳಿಸಿರಿ. ಇದುವೇ ಅತ್ಯುತ್ತಮ ಧೋರಣೆಯಾಗಿದೆ ಹಾಗೂ ಇದರ ಪರಿಣಾಮವು ಉತ್ತಮವಾಗಿರುತ್ತದೆ

[59] ನಿಮ್ಮೆಡೆಗೆ ಇಳಿಸಲಾಗಿರುವುದನ್ನೂ (ಕುರ್‌ಆನ್‌ಅನ್ನೂ) ನಿಮಗಿಂತ ಹಿಂದೆ ಇಳಿಸಲಾಗಿರುವುದನ್ನೂ (ತೌರಾತ್ ಮತ್ತು ಇಂಜೀಲ್‌ಗಳನ್ನೂ) ತಾವು ನಂಬಿರುವುದಾಗಿ ಹೇಳಿಕೊಳ್ಳುತ್ತಿರುವವರನ್ನು ನೀವು ಕಂಡಿರಾ? ಅವರು ತಮ್ಮ ವಿವಾದಗಳ ತೀರ್ಪನ್ನು ಅಕ್ರಮ ಶಕ್ತಿಗಳಿಗೆ ಒಪ್ಪಿಸಬಯಸುತ್ತಾರೆ. ನಿಜವಾಗಿ ಆ ಶಕ್ತಿಗಳನ್ನು ಧಿಕ್ಕರಿಸಬೇಕೆಂದು ಅವರಿಗೆ ಆದೇಶಿಸಲಾಗಿದೆ. ಶೈತಾನನು ಅವರನ್ನು ದಾರಿಗೆಡಿಸಿ ದಾರಿಗೇಡಿತನದಲ್ಲಿ ಬಹಳ ದೂರ ಒಯ್ಯ ಬಯಸುತ್ತಾನೆ

[60] (ದೂತರೇ,) ‘‘ಅಲ್ಲಾಹನು ಇಳಿಸಿಕೊಟ್ಟಿರುವುದರ ಕಡೆಗೆ (ಕುರ್‌ಆನ್‌ನೆಡೆಗೆ) ಮತ್ತು (ಅವನ) ದೂತರೆಡೆಗೆ ಬನ್ನಿರಿ’’ ಎಂದು ಕಪಟಿಗಳೊಡನೆ ಹೇಳಿದಾಗ, ಅವರು ನಿಮ್ಮಿಂದ ಹಿಂಜರಿದು ದೂರ ಸರಿಯುವುದನ್ನು ನೀವು ಕಾಣುತ್ತೀರಿ

[61] ಹೇಗಿದೆ! ಸ್ವತಃ ಅವರದೇ ಕೈಗಳ ಗಳಿಕೆಯ ಕಾರಣ ಅವರಿಗೇನಾದರೂ ವಿಪತ್ತು ಎದುರಾದಾಗ ಅವರು ನಿಮ್ಮ ಬಳಿಗೆ ಬಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ‘‘ನಾವು ಕೇವಲ ಹಿತವನ್ನು ಮತ್ತು ಸಾಮರಸ್ಯವನ್ನು ಮಾತ್ರ ಬಯಸಿದ್ದೆವು’’ ಎನ್ನುತ್ತಾರೆ

[62] ಅವರ ಮನಸ್ಸುಗಳೊಳಗೆ ಇರುವುದನ್ನೆಲ್ಲಾ ಅಲ್ಲಾಹನು ಬಲ್ಲನು. ಸದ್ಯ ನೀವು ಅವರನ್ನು ಕಡೆಗಣಿಸಿರಿ ಮತ್ತು (ಅದೇ ವೇಳೆ) ಅವರಿಗೆ ಉಪದೇಶಿಸಿರಿ ಹಾಗೂ ಅವರ ಜೊತೆ, ಅವರ ಅಂತರಾಳಕ್ಕೆ ನಾಟುವಂತಹ ಮಾತನ್ನಾಡಿರಿ

[63] ನಾವು ಪ್ರತಿಯೊಬ್ಬ ದೂತರನ್ನೂ ಅಲ್ಲಾಹನ ಆದೇಶ ಪ್ರಕಾರ (ಜನರು) ಅವರನ್ನು ಅನುಸರಿಸಬೇಕೆಂದೇ ಕಳುಹಿಸಿರುವೆವು. (ದೂತರೇ,) ಒಂದು ವೇಳೆ ಆ ಜನರು ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಾಗಲೇ ನಿಮ್ಮ ಬಳಿಗೆ ಬಂದು ಅಲ್ಲಾಹನ ಬಳಿ ಕ್ಷಮೆಯನ್ನು ಬೇಡಿದ್ದರೆ ಮತ್ತು (ಅಲ್ಲಾಹನ) ದೂತರು ಅವರ ಕ್ಷಮೆಗಾಗಿ ಪ್ರಾರ್ಥಿಸಿದ್ದರೆ – ಖಂಡಿತವಾಗಿಯೂ ಅವರು ಅಲ್ಲಾಹನನ್ನು, ಪಶ್ಚಾತ್ತಾಪ ಸ್ವೀಕರಿಸುವವನಾಗಿಯೂ ಕರುಣಾಮಯಿಯಾಗಿಯೂ ಕಾಣುತ್ತಿದ್ದರು

[64] (ದೂತರೇ,) ನಿಮ್ಮೊಡೆಯನಾಣೆ! ಅವರು ತಮ್ಮ ನಡುವೆ ವಿವಾದವಿರುವ ವಿಷಯಗಳಲ್ಲಿ ನಿಮ್ಮನ್ನು ತೀರ್ಪುಗಾರರಾಗಿ ಒಪ್ಪುವ ತನಕ ಮತ್ತು ನಿಮ್ಮ ತೀರ್ಪಿನ ಕುರಿತು ತಮ್ಮ ಮನದಲ್ಲಿ ಯಾವುದೇ ಹಿಂಜರಿಕೆಯನ್ನು ಕಾಣದೆ ಅದನ್ನು ಮನಸಾರೆ ಒಪ್ಪಿಕೊಳ್ಳುವ ತನಕ – ಅವರು ವಿಶ್ವಾಸಿಗಳಾಗುವುದಿಲ್ಲ

[65] ಒಂದು ವೇಳೆ ನಾವು ಅವರಿಗೆ – ‘‘ನೀವು ನಿಮ್ಮನ್ನೇ ಕೊಂದು ಕೊಳ್ಳಿರಿ’’ ಅಥವಾ ‘‘ನಿಮ್ಮ ಮನೆಗಳನ್ನು ಬಿಟ್ಟು ಹೊರಟು ಹೋಗಿರಿ’’ ಎಂದು ವಿಧಿಸಿದ್ದರೆ, ಅವರಲ್ಲಿ ಕೆಲವೇ ಮಂದಿಯ ಹೊರತು ಬೇರಾರೂ ಅದನ್ನು ಪಾಲಿಸುತ್ತಿರಲಿಲ್ಲ. ನಿಜವಾಗಿ ಅವರು ತಮಗೆ ಉಪದೇಶಿಸಲಾದುದನ್ನು ಅನುಸರಿಸಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು ಮತ್ತು ಅದರಿಂದ ಅವರಿಗೆ ಸಾಕಷ್ಟು ಸ್ಥಿರತೆಯೂ ಒದಗುತ್ತಿತ್ತು

[66] ಮತ್ತು ಹಾಗಿರುತ್ತಿದ್ದರೆ ನಾವು, ನಮ್ಮ ಕಡೆಯಿಂದಲೂ ಅವರಿಗೆ ಭಾರೀ ಪ್ರತಿಫಲವನ್ನು ನೀಡುತ್ತಿದ್ದೆವು

[67] ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿ ಕೊಡುತ್ತಿದ್ದೆವು

[68] ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡುವವರು (ಸ್ವರ್ಗದಲ್ಲಿ), ಅಲ್ಲಾಹನಿಂದ ಪುರಸ್ಕೃತರಾದ ಪ್ರವಾದಿಗಳು, ಅವರ ನಿಷ್ಠಾವಂತ ಸಂಗಾತಿಗಳು, ಹುತಾತ್ಮರು ಮತ್ತು ಸಜ್ಜನರ ಜೊತೆಗಿರುವವರು – ಅವರೇ ಶ್ರೇಷ್ಠ ಸಂಗಾತಿಗಳು

[69] ಇದು ಅಲ್ಲಾಹನ ವತಿಯಿಂದ ಇರುವ ಅನುಗ್ರಹ. ಬಲ್ಲವನಾಗಿ ಅಲ್ಲಾಹನೇ ಸಾಕು

[70] ವಿಶ್ವಾಸಿಗಳೇ, ಸದಾ ಸನ್ನದ್ಧ ಸ್ಥಿತಿಯಲ್ಲಿರಿ. ತರುವಾಯ ನೀವು (ಯುದ್ಧಕ್ಕೆ) ಪ್ರತ್ಯೇಕ ದಂಡುಗಳಾಗಿ ಹೊರಡಿರಿ ಅಥವಾ ಎಲ್ಲರೂ ಜೊತೆಯಾಗಿ ಹೊರಡಿರಿ

[71] ನಿಮ್ಮಲ್ಲಿ (ಯುದ್ಧದ ವೇಳೆ) ಹಿಂದೆಯೇ ಉಳಿದುಕೊಳ್ಳುವ ಕೆಲವರಿದ್ದಾರೆ. ಅವರು ನಿಮ್ಮ ಮೇಲೇನಾದರೂ ವಿಪತ್ತು ಬಂದೆರಗಿದಾಗ ‘‘ಅಲ್ಲಾಹನು ನನ್ನ ಮೇಲೆ ಅನುಗ್ರಹ ತೋರಿದ್ದರಿಂದ, ಆ ವೇಳೆ ನಾನು ಅವರ ಜೊತೆಗಿರಲಿಲ್ಲ’’ ಎನ್ನುತ್ತಾರೆ

[72] ಇನ್ನು, ಅಲ್ಲಾಹನು ನಿಮ್ಮ ಮೇಲೇನಾದರೂ ಅನುಗ್ರಹ ತೋರಿದಾಗ, ಅವನು, ನಿಮ್ಮ ಹಾಗೂ ಅವನ ನಡುವೆ ಎಂದೂ ಯಾವುದೇ ಸ್ನೇಹ ಸಂಬಂಧ ಇರಲೇ ಇಲ್ಲವೆಂಬಂತೆ ‘‘ಅಯ್ಯೋ, ನಾನು ಅವರ ಜೊತೆಗೆ ಇದ್ದಿದ್ದರೆ ನನಗೆ ಭಾರೀ ಸೌಭಾಗ್ಯ ಸಿಕ್ಕಿ ಬಿಡುತ್ತಿತ್ತು’’ ಎನ್ನುತ್ತಾನೆ

[73] ಪರಲೋಕಕ್ಕಾಗಿ ಇಹಲೋಕದ ಬದುಕನ್ನು ಮಾರಿಕೊಂಡವರು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕು. ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವನು, ಹತನಾದರೂ ವಿಜಯಿಯಾದರೂ ನಾವಂತು ಅವನಿಗೆ ಬಹು ಬೇಗನೇ ಭವ್ಯ ಪ್ರತಿಫಲ ನೀಡಲಿದ್ದೇವೆ

[74] ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಮತ್ತು – ‘‘ನಮ್ಮೊಡೆಯಾ, ಅಕ್ರಮಿಗಳ ಈ ನಾಡಿನಿಂದ ನಮ್ಮನ್ನು ವಿಮೋಚಿಸು ಹಾಗೂ ನಿನ್ನ ಕಡೆಯಿಂದ ನಮಗಾಗಿ ಒಬ್ಬ ರಕ್ಷಕನನ್ನು ಕಳಿಸು ಮತ್ತು ನಿನ್ನ ಕಡೆಯಿಂದ ನಮಗಾಗಿ ಒಬ್ಬ ಸಹಾಯಕನನ್ನು ಕಳಿಸು’’ ಎಂದು ಮೊರೆ ಇಡುತ್ತಿರುವ ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಪರವಾಗಿ ನೀವೇಕೆ ಹೋರಾಡುವುದಿಲ್ಲ

[75] ವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ ಮತ್ತು ಧಿಕ್ಕಾರಿಗಳು ಅಕ್ರಮ ಶಕ್ತಿಗಳ ಮಾರ್ಗದಲ್ಲಿ ಹೋರಾಡುತ್ತಾರೆ. ನೀವು ಶೈತಾನನ ಆಪ್ತರ ವಿರುದ್ಧ ಹೋರಾಡಿರಿ. ಖಂಡಿತವಾಗಿಯೂ ಶೈತಾನನ ಸಂಚು ದುರ್ಬಲವಾಗಿರುತ್ತದೆ

[76] ನೀವು ಅವರನ್ನು ಕಂಡಿರಾ? ‘‘ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ (ಆಕ್ರಮಣಕ್ಕೆ ಇಳಿಯಬೇಡಿ), ನಮಾಝ್‌ಅನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು ಪಾವತಿಸಿರಿ’’ ಎಂದು (ಈ ಹಿಂದೆ) ಅವರಿಗೆ ಆದೇಶಿಸಲಾಗಿತ್ತು. ತರುವಾಯ, ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ಗುಂಪು, ಅಲ್ಲಾಹನಿಗೆ ಅಂಜಬೇಕಾದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಜನರಿಗೆ ಅಂಜ ತೊಡಗಿತು. ಅವರು ‘‘ನಮ್ಮೊಡೆಯಾ, ನೀನು ನಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಿದ್ದೇಕೆ? ನಮಗೆ ನೀನು ಇನ್ನಷ್ಟು ಕಾಲಾವಕಾಶವನ್ನೇಕೆ ನೀಡಲಿಲ್ಲ?’’ ಎನ್ನುತ್ತಾರೆ. ಹೇಳಿರಿ; ‘‘ಇಹಲೋಕದ ಬಂಡವಾಳವೆಲ್ಲಾ ತೀರಾ ತಾತ್ಕಾಲಿಕ. ಧರ್ಮನಿಷ್ಠರ ಪಾಲಿಗೆ ಪರಲೋಕವೇ ಉತ್ತಮವಾಗಿದೆ. (ಅಲ್ಲಿ) ನಿಮ್ಮ ಮೇಲೆ ಕಿಂಚಿತ್ತೂ ಅನ್ಯಾಯ ನಡೆಯದು.’’

[77] ನೀವೆಲ್ಲೇ ಇದ್ದರೂ ಮರಣವಂತೂ ಖಂಡಿತ ಬಂದು ನಿಮ್ಮನ್ನು ಆವರಿಸಲಿದೆ – ನೀವು ಸಂಪೂರ್ಣ ಸುಭದ್ರವಾದ ಕೋಟೆಗಳ ಒಳಗಿದ್ದರೂ ಸರಿಯೇ. (ದೂತರೇ,) ಅವರು, ತಮಗೇನಾದರೂ ಹಿತವಾದಾಗ ‘‘ಇದು ಅಲ್ಲಾಹನ ಕಡೆಯಿಂದ ಬಂದಿದೆ’’- ಎನ್ನುತ್ತಾರೆ. ಅವರಿಗೇನಾದರೂ ಅಹಿತ ಸಂಭವಿಸಿದಾಗ ಮಾತ್ರ ‘‘ಇದು ನಿಮ್ಮಿಂದಾಗಿ ಸಂಭವಿಸಿದೆ’’ ಎನ್ನುತ್ತಾರೆ. ನೀವು ‘‘ಎಲ್ಲವೂ ಅಲ್ಲಾಹನಿಂದಲೇ ಬರುತ್ತದೆ’’ ಎಂದು ಬಿಡಿರಿ. ಆ ಜನರಿಗೇನಾಗಿದೆ? ಅವರು ಯಾವ ಮಾತನ್ನೂ ಅರ್ಥಯಿಸಿ ಕೊಳ್ಳುತ್ತಿಲ್ಲವಲ್ಲಾ

[78] (ದೂತರೇ,) ನಿಮಗೆ ತಲುಪುವ ಹಿತವೆಲ್ಲವೂ ಅಲ್ಲಾಹನ ಕಡೆಯಿಂದಲೇ ಬಂದಿರುತ್ತದೆ ಹಾಗೂ ನಿಮಗೆ ತಲುಪುವ ಅಹಿತಕ್ಕೆ ನೀವೇ ಕಾರಣರಾಗಿರುತ್ತೀರಿ. ನಾವಂತೂ ನಿಮ್ಮನ್ನು ಎಲ್ಲ ಮಾನವರೆಡೆಗೆ ದೂತರಾಗಿ ಕಳುಹಿಸಿದ್ದೇವೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು

[79] ದೇವದೂತರ ಆಜ್ಞಾಪಾಲನೆ ಮಾಡಿದವನು ನಿಜವಾಗಿ ಅಲ್ಲಾಹನ ಆಜ್ಞಾಪಾಲನೆ ಮಾಡಿದನು ಮತ್ತು (ಅದನ್ನು) ಯಾರಾದರೂ ಕಡೆಗಣಿಸಿದರೆ (ನಿಮಗೆ ನೆನಪಿರಲಿ), ನಾವೇನೂ ನಿಮ್ಮನ್ನು ಅವರ ಕಾವಲುಗಾರರಾಗಿ ಕಳಿಸಿಲ್ಲ

[80] ಅವರು (ನಿಮ್ಮ ಮುಂದೆ), ನಾವು ವಿಧೇಯರಾದೆವು ಎನ್ನುತ್ತಾರೆ. ತರುವಾಯ ನಿಮ್ಮಲ್ಲಿಂದ ಹೊರಟುಹೋದಾಗ ಅವರಲ್ಲಿನ ಒಂದು ಗುಂಪು, ನಿಮ್ಮೊಡನೆ ಹೇಳಿದ್ದಕ್ಕೆ ವಿರುದ್ಧವಾಗಿ ರಾತ್ರಿ ಸಮಾಲೋಚನೆಗಳನ್ನು ನಡೆಸುತ್ತದೆ. ಅವರು ನಡೆಸುತ್ತಿರುವ ಸಮಾಲೋಚನೆಗಳನ್ನೆಲ್ಲಾ ಅಲ್ಲಾಹನು ದಾಖಲಿಸಿಡುತ್ತಿದ್ದಾನೆ. ನೀವು ಅವರನ್ನು ಕಡೆಗಣಿಸಿರಿ ಮತ್ತು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯಸಾಧಕನಾಗಿ ಅಲ್ಲಾಹನೇ ಸಾಕು

[81] ಅವರೇನು, ಕುರ್‌ಆನ್‌ನ ಕುರಿತು ಚಿಂತನೆ ನಡೆಸುವುದಿಲ್ಲವೆ? ಒಂದು ವೇಳೆ ಇದು ಅಲ್ಲಾಹನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು

[82] ಅವರು, ಶಾಂತಿಯ ಅಥವಾ ಭೀತಿಯ ಯಾವುದಾದರೂ ಮಾಹಿತಿಯು ತಮ್ಮ ಬಳಿಗೆ ಬಂದೊಡನೆ ಅದನ್ನು ಎಲ್ಲೆಡೆ ಹಬ್ಬಿ ಬಿಡುತ್ತಾರೆ. (ಇದರ ಬದಲು) ಅವರು ಆ ಮಾಹಿತಿಯನ್ನು ದೇವದೂತರಿಗೆ ಅಥವಾ ತಮ್ಮಲ್ಲಿನ ಹೊಣೆಗಾರ ವ್ಯಕ್ತಿಗಳಿಗೆ ತಲುಪಿಸಿದ್ದರೆ ಅವರ ಪೈಕಿ ತನಿಖೆ ನಡೆಸುವವರು ಆ ಕುರಿತು (ವಾಸ್ತವವನ್ನು) ಅರಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆ ಇಲ್ಲದಿರುತ್ತಿದ್ದರೆ ಕೆಲವರ ಹೊರತು, ನೀವೆಲ್ಲಾ ಶೈತಾನನನ್ನು ಅನುಸರಿಸುತ್ತಿದ್ದಿರಿ

[83] (ದೂತರೇ,) ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಕೇವಲ ನಿಮ್ಮ ಕುರಿತು ಮಾತ್ರ ಹೊಣೆಗಾರರು. ಇನ್ನು ನೀವು ವಿಶ್ವಾಸಿಗಳನ್ನು (ಹೋರಾಟಕ್ಕೆ) ಸಜ್ಜುಗೊಳಿಸಿರಿ. ಶೀಘ್ರದಲ್ಲೇ ಅಲ್ಲಾಹನು ಧಿಕ್ಕಾರಿಗಳ ಶಕ್ತಿಯನ್ನು ಕುಂದಿಸಿ ಬಿಡಬಹುದು. ಅಲ್ಲಾಹನು ಭಾರೀ ಶಕ್ತಿಯುಳ್ಳವನು ಹಾಗೂ ಕಠೋರ ಶಿಕ್ಷೆ ನೀಡುವವನಾಗಿದ್ದಾನೆ

[84] ಒಂದು ಸತ್ಕಾರ್ಯದ ಪರವಾಗಿ ಶಿಫಾರಸು ಮಾಡಿದಾತನಿಗೆ ಅದರಲ್ಲಿ ಪಾಲು ಸಿಗಲಿದೆ. ಹಾಗೆಯೇ, ಒಂದು ಕೆಟ್ಟ ಕೃತ್ಯದ ಪರವಾಗಿ ಶಿಫಾರಸು ಮಾಡಿದವನಿಗೆ, ಅದರಲ್ಲಿ ಪಾಲು ಸಿಗಲಿದೆ. ಅಲ್ಲಾಹನಂತೂ ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[85] ಯಾರಾದರೂ ನಿಮ್ಮನ್ನು ಹರಸುವ ಮಾತುಗಳನ್ನು ಹೇಳಿದರೆ (ನಿಮಗೆ ಸಲಾಮ್ ಹೇಳಿದರೆ) ನೀವು ಅದಕ್ಕಿಂತ ಉತ್ತಮ ಮಾತುಗಳಲ್ಲಿ (ಆತನನ್ನು) ಹರಸಿರಿ ಅಥವಾ (ಕನಿಷ್ಠ ಪಕ್ಷ) ಅಷ್ಟೇ ಮಾತುಗಳನ್ನು ಮರಳಿ ಹೇಳಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲ ವಿಷಯಗಳ ವಿಚಾರಣೆ ನಡೆಸಲಿದ್ದಾನೆ

[86] ಅಲ್ಲಾಹ್ – ಅವನ ಹೊರತು ಪೂಜಾರ್ಹರು ಬೇರಿಲ್ಲ. ನಿಸ್ಸಂದೇಹವಾಗಿ ಬರಲಿರುವ ಪುನರುತ್ಥಾನ ದಿನ ಅವನು ನಿಮ್ಮೆಲ್ಲರನ್ನೂ ಒಂದೆಡೆ ಸೇರಿಸಲಿರುವನು. ಮಾತಿನಲ್ಲಿ ಅಲ್ಲಾಹನಿಗಿಂತ ಹೆಚ್ಚು ಸತ್ಯವಂತನು ಯಾರಿದ್ದಾನೆ

[87] ಇದೇನಾಗಿದೆ ನಿಮಗೆ? ಕಪಟಿಗಳ ವಿಷಯದಲ್ಲಿ ನಿಮ್ಮೊಳಗೆ ಎರಡು ಪಂಗಡಗಳಿವೆ. ಅವರ ದುಷ್ಟ ಕೃತ್ಯಗಳ ಕಾರಣ ಅಲ್ಲಾಹನೇ ಅವರನ್ನು (ಧಿಕ್ಕಾರದೆಡೆಗೆ) ಹೊರಳಿಸಿ ಬಿಟ್ಟಿದ್ದಾನೆ. ನೀವೇನು, ಅಲ್ಲಾಹನೇ ದಾರಿಗೆಡಿಸಿ ಬಿಟ್ಟಾತನನ್ನು ಸರಿದಾರಿಗೆ ತರ ಬಯಸುವಿರಾ? ಅಲ್ಲಾಹನೇ ದಾರಿ ಗೆಡಿಸಿರುವಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ

[88] ಅವರಂತೂ, ತಾವು ಧಿಕ್ಕಾರಿಗಳಾದಂತೆ ನೀವೂ ಧಿಕ್ಕಾರಿಗಳಾಗಿ ತಮಗೆ ಸಮಾನರಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಂಬಲಿಸುತ್ತಿದ್ದಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ‘ಹಿಜ್ರತ್’ ಮಾಡುವ (ವಲಸೆ ಹೋಗುವ) ತನಕ ನೀವು ಅವರಲ್ಲಿ ಯಾರನ್ನೂ ನಿಮ್ಮ ಆಪ್ತರಾಗಿಸಿಕೊಳ್ಳಬೇಡಿ. ಆ ಬಳಿಕ ಅವರು ಮತ್ತೆ ಮುಖ ತಿರುಗಿಸಿಕೊಂಡರೆ, ನೀವು ಅವರನ್ನು ಕಂಡಲ್ಲಿ ಹಿಡಿಯಿರಿ ಮತ್ತು ಅವರನ್ನು ವಧಿಸಿರಿ. ಅವರಲ್ಲಿ ಯಾರನ್ನೂ ನಿಮ್ಮ ಆಪ್ತ ಮಿತ್ರ ಅಥವಾ ಸಹಾಯಕನಾಗಿಸಿಕೊಳ್ಳಬೇಡಿ –

[89] – ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಜನಾಂಗಕ್ಕೆ ಸೇರಿದವರು ಅಥವಾ ನಿಮ್ಮ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಜನಾಂಗದ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಮನದಲ್ಲಿ ಒಲವಿಲ್ಲದೆ, ನಿಮ್ಮ ಬಳಿಗೆ ಬಂದಿರುವವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹನು ಇಚ್ಛಿಸಿದ್ದರೆ ಅವರನ್ನು ನಿಮ್ಮ ಮೇಲೆ ಹೇರಿ ಬಿಡುತ್ತಿದ್ದನು ಮತ್ತು ಅವರು ನಿಮ್ಮ ವಿರುದ್ಧ ಖಂಡಿತ ಹೋರಾಡುತ್ತಿದ್ದರು. (ಇದೀಗ) ಅವರು ನಿಮ್ಮಿಂದ ದೂರ ಉಳಿದರೆ ಹಾಗೂ ನಿಮ್ಮ ವಿರುದ್ಧ ಹೋರಾಡದಿದ್ದರೆ ಮತ್ತು ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಟ್ಟರೆ – ಅಲ್ಲಾಹನು ಅವರ ವಿರುದ್ಧ (ಹೋರಾಡಲು) ನಿಮಗೆ ಯಾವ ಅವಕಾಶವನ್ನೂ ಇಟ್ಟಿಲ್ಲ

[90] ನೀವು ಮತ್ತೆ ಕೆಲವರನ್ನು ಕಾಣುವಿರಿ – ಅವರು (ತಮ್ಮ ಸ್ವಾರ್ಥಕ್ಕಾಗಿ) ನಿಮ್ಮಿಂದಲೂ ಸುರಕ್ಷಿತರಾಗಿ ಇರಬಯಸುತ್ತಾರೆ ಮತ್ತು ತಮ್ಮ ಜನಾಂಗದಿಂದಲೂ ಸುರಕ್ಷಿತರಾಗಿ ಇರಬಯಸುತ್ತಾರೆ. ಆದರೆ ಕಿಡಿಗೇಡಿತನದತ್ತ ಮರಳುವ ಸನ್ನಿವೇಶ ಬಂದಾಗಲೆಲ್ಲಾ ಅವರು ಅದರೆಡೆಗೆ (ಶತ್ರು ಪಾಳ್ಯದೆಡೆಗೆ) ಹೊರಳಿ ಬಿಡುತ್ತಾರೆ. ಅವರು ನಿಮ್ಮಿಂದ ದೂರ ಉಳಿಯದಿದ್ದರೆ ಹಾಗೂ ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆದಿಟ್ಟುಕೊಳ್ಳದಿದ್ದರೆ ನೀವು ಅವರನ್ನು ಕಂಡಲ್ಲಿ ಹಿಡಿಯಿರಿ ಮತ್ತು ಅವರನ್ನು ವಧಿಸಿರಿ. ಅಂಥವರ ವಿರುದ್ಧ (ಕಾರ್ಯಾಚರಣೆಗೆ) ನಾವು ನಿಮಗೆ ಮುಕ್ತ ಪರವಾನಗಿಯನ್ನು ಒದಗಿಸಿದ್ದೇವೆ

[91] ಒಬ್ಬ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಯನ್ನು ವಧಿಸಬಾರದು – ಪ್ರಮಾದದ ಹೊರತು. ಇನ್ನು, ಪ್ರಮಾದದಿಂದ ಒಬ್ಬ ವಿಶ್ವಾಸಿಯನ್ನು ವಧಿಸಿದವನು ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು ಮತ್ತು ಆತನ (ಹತನ) ಬಂಧುಗಳಿಗೆ ಪರಿಹಾರ ಧನ ನೀಡಬೇಕು – ಅವರೇ (ಬಂಧುಗಳೇ) ಅದನ್ನು ಕ್ಷಮಿಸಿದ್ದರ ಹೊರತು. ಆತನು (ಹಂತಕನು) ನಿಮ್ಮ ಶತ್ರು ಜನಾಂಗದವನಾಗಿದ್ದರೆ ಮತ್ತು ವಿಶ್ವಾಸಿಯೂ ಆಗಿದ್ದರೆ, ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು. ಒಂದು ವೇಳೆ ಆತನು, ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಜನಾಂಗದವನಾಗಿದ್ದರೆ, ಆತನ (ಹತನ) ಬಂಧುಗಳಿಗೆ ಕಡ್ಡಾಯವಾಗಿ ಪರಿಹಾರ ಧನ ನೀಡಬೇಕು ಮತ್ತು ಒಬ್ಬ ವಿಶ್ವಾಸಿ ದಾಸನನ್ನು ಮುಕ್ತಗೊಳಿಸಬೇಕು. (ದಾಸ) ಸಿಗದಿದ್ದವನು ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು – ಇದು ಅಲ್ಲಾಹನು ವಿಧಿಸಿರುವ ಪಶ್ಚಾತ್ತಾಪ ವಿಧಾನ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[92] ಇನ್ನು, ಉದ್ದೇಶಪೂರ್ವಕ ಒಬ್ಬ ವಿಶ್ವಾಸಿಯ ಹತ್ಯೆ ನಡೆಸಿದವನ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಸದಾಕಾಲ ಇರುವನು ಮತ್ತು ಅಲ್ಲಾಹನ ಕ್ರೋಧ ಹಾಗೂ ಶಾಪವು ಅವನ ಮೇಲಿರುವುದು ಮತ್ತು (ಅಲ್ಲಾಹನು) ಆತನಿಗಾಗಿ ಭಾರೀ ಶಿಕ್ಷೆಯನ್ನು ಸಿದ್ಧವಾಗಿಟ್ಟಿರುವನು

[93] ವಿಶ್ವಾಸಿಗಳೇ, ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಟಕ್ಕೆ ಹೊರಟಿರುವಾಗ (ಎಲ್ಲ ವಾಸ್ತವಗಳನ್ನು) ಖಚಿತ ಪಡಿಸಿಕೊಳ್ಳಿರಿ. ನಿಮಗೆ ‘ಸಲಾಮ್’ ಹೇಳಿ ಹರಸಿದಾತನಿಗೆ ‘‘ನೀನು ವಿಶ್ವಾಸಿಯಲ್ಲ’’ ಎನ್ನಬೇಡಿ. ನೀವು ಇಹಲೋಕದ ಸಾಧನಗಳನ್ನು ಹುಡುಕುತ್ತಿರುವಿರಿ – ನಿಜವಾಗಿ ಅಲ್ಲಾಹನ ಬಳಿ ಅಪಾರ ಸಂಪತ್ತುಗಳಿವೆ. ಹಿಂದೆ ನೀವೂ ಅವರಂತೆಯೇ ಇದ್ದಿರಿ. ಕೊನೆಗೆ ಅಲ್ಲಾಹನು ನಿಮ್ಮ ಮೇಲೆ ಔದಾರ್ಯ ತೋರಿದನು. ಆದ್ದರಿಂದ (ಎಲ್ಲ ವಾಸ್ತವಗಳನ್ನು) ಖಚಿತ ಪಡಿಸಿಕೊಳ್ಳಿರಿ. ಅಲ್ಲಾಹನು ಖಂಡಿತವಾಗಿಯೂ ನೀವು ಮಾಡುತ್ತಿರುವ ಎಲ್ಲವನ್ನೂ ಅರಿತಿರುತ್ತಾನೆ

[94] ವಿಶ್ವಾಸಿಗಳ ಪೈಕಿ, ಸೂಕ್ತ ಕಾರಣವಿಲ್ಲದೆ (ಹೋರಾಟದಲ್ಲಿ ಭಾಗವಹಿಸದೆ) ಕುಳಿತಿರುವವರು ಮತ್ತು ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ (ಹೋರಾಟ) ನಡೆಸುವವರು ಸಮಾನರಲ್ಲ. ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಜಿಹಾದ್ ಮಾಡುವವರಿಗೆ ಅಲ್ಲಾಹನು, ಕುಳಿತಿರುವವರಿಗಿಂತ ಹೆಚ್ಚಿನ ಹಿರಿಮೆಯನ್ನು ಅನುಗ್ರಹಿಸಿದ್ದಾನೆ. ಪ್ರತಿಯೊಬ್ಬರಿಗೂ ಅವನು ಸತ್ಫಲದ ವಾಗ್ದಾನವನ್ನೇ ಮಾಡಿರುತ್ತಾನೆ. ಮತ್ತು ಕುಳಿತವರಿಗೆ ಹೋಲಿಸಿದರೆ, ಅಲ್ಲಾಹನು ಹೋರಾಟಗಾರರಿಗೆ ಭಾರೀ ಪ್ರತಿಫಲವನ್ನು ಅನುಗ್ರಹಿಸಿದ್ದಾನೆ

[95] ಅವನ ಕಡೆಯಿಂದ (ಅವರಿಗೆ) ಉನ್ನತ ಸ್ಥಾನಗಳು, ಕ್ಷಮೆ ಮತ್ತು ಕಾರುಣ್ಯವು ಸಿಗಲಿದೆ. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[96] ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿದ್ದವರ ಜೀವಗಳನ್ನು ವಶಪಡಿಸಿಕೊಳ್ಳುವ ಮಲಕ್‌ಗಳು ಅವರೊಡನೆ ‘‘ನೀವು ಎಂತಹ ಸ್ಥಿತಿಯಲ್ಲಿದ್ದಿರಿ?’’ ಎಂದು ಕೇಳುವರು. ಅವರು ‘‘ನಾವು ಭೂಮಿಯಲ್ಲಿ ಮರ್ದಿತರಾಗಿದ್ದೆವು’’ಎನ್ನುವರು. ಆಗ ಅವರು (ಮಲಕ್‌ಗಳು) ‘‘ಅಲ್ಲಾಹನ ಭೂಮಿಯು ವಿಶಾಲವಾಗಿರಲಿಲ್ಲವೇ? ನೀವು (ಮರ್ದಕರ ನಾಡಿನಿಂದ) ವಲಸೆ ಹೋಗಬಹುದಿತ್ತಲ್ಲಾ?’’ ಎನ್ನುವರು. ನರಕವೇ ಅಂಥವರ ನೆಲೆಯಾಗಿದೆ. ಅದು ತುಂಬ ಕೆಟ್ಟ ನೆಲೆ

[97] ಯಾವ ಉಪಾಯವೂ ಇಲ್ಲದಿದ್ದ ಹಾಗೂ ಯಾವ ದಾರಿಯನ್ನೂ ಕಾಣದ, ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಇದಕ್ಕೆ ಹೊರತಾಗಿದ್ದಾರೆ

[98] ಅಲ್ಲಾಹನು ಅವರನ್ನು ಮನ್ನಿಸಬಹುದು. ಅಲ್ಲಾಹನು ತುಂಬಾ ಮನ್ನಿಸುವವನೂ ಕ್ಷಮಾಶೀಲನೂ ಆಗಿದ್ದಾನೆ

[99] ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದಾತನು ಭೂಮಿಯಲ್ಲಿ ಧಾರಾಳ ಆಶ್ರಯಗಳನ್ನು ಹಾಗೂ ಸಾಕಷ್ಟು ವೈಶಾಲ್ಯವನ್ನು ಕಾಣುವನು. ತನ್ನ ಮನೆಯಿಂದ, ಅಲ್ಲಾಹ್ ಮತ್ತವನ ದೂತರೆಡೆಗೆ ವಲಸಿಗನಾಗಿ ಹೊರಟವನು (ದಾರಿಯಲ್ಲಿ) ಮೃತನಾದರೆ, ಖಂಡಿತವಾಗಿಯೂ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ಅಲ್ಲಾಹನಂತೂ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[100] ನೀವು ಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ, ನಿಮಗೆ ಧಿಕ್ಕಾರಿಗಳ ಕಿರುಕುಳದ ಭಯವಿದ್ದರೆ ನೀವು ನಮಾಝ್ ಅನ್ನು ‘ಕಸ್ರ್’ (ಸಂಕ್ಷಿಪ್ತ) ಗೊಳಿಸುವುದು ತಪ್ಪಲ್ಲ. ಧಿಕ್ಕಾರಿಗಳು ಖಂಡಿತ ನಿಮ್ಮ ಬಹಿರಂಗ ಶತ್ರುಗಳಾಗಿದ್ದಾರೆ

[101] (ದೂತರೇ, ಯುದ್ಧ ಸನ್ನಿವೇಶದಲ್ಲಿ) ನೀವು ಅವರ ನಡುವೆ ಇದ್ದು, ಅವರಿಗೆ ನಮಾಝ್ ಮಾಡಿಸುತ್ತಿರುವಾಗ, ಅವರ ಒಂದು ತಂಡವು ತನ್ನ ಆಯುಧಗಳ ಜೊತೆ ಸಜ್ಜಾಗಿ ನಿಮ್ಮ ಜೊತೆಗಿರಲಿ. ಅವರು ಸಾಷ್ಟಾಂಗವೆರಗಿದ ಬಳಿಕ, ನಿಮ್ಮ ಹಿಂದಕ್ಕೆ ಹೋಗಲಿ ಮತ್ತು ಆವರೆಗೆ ನಮಾಝ್ ಸಲ್ಲಿಸಿಲ್ಲದ ಇನ್ನೊಂದು ತಂಡವು ಜಾಗೃತವಾಗಿದ್ದು ತನ್ನ ಆಯುಧಗಳ ಜೊತೆ ಸಜ್ಜಾಗಿ ನಿಮ್ಮ ಜೊತೆ ನಮಾಝ್ ಸಲ್ಲಿಸಲಿ. ನೀವು ನಿಮ್ಮ ಆಯುಧಗಳ ಹಾಗೂ ಇತರ ಸಾಧನಗಳ ವಿಷಯದಲ್ಲಿ ತುಸು ನಿರ್ಲಕ್ಷ ತೋರಿದೊಡನೆ, ಹಠಾತ್ತಾಗಿ ಏಕಕಾಲದಲ್ಲಿ ನಿಮ್ಮ ಮೇಲೆ ಮುಗಿ ಬೀಳುವುದಕ್ಕಾಗಿ ಧಿಕ್ಕಾರಿಗಳು ಹೊಂಚು ಹಾಕುತ್ತಿದ್ದಾರೆ. ಇನ್ನು ಮಳೆಯಿಂದಾಗಿ ನೀವು ಸಂಕಟಕ್ಕೆ ಸಿಲುಕಿದ್ದರೆ ಅಥವಾ ನೀವು ಅನಾರೋಗ್ಯ ಪೀಡಿತರಾಗಿದ್ದರೆ, ನೀವು ನಿಮ್ಮ ಆಯುಧಗಳನ್ನು ಕಳಚಿಡುವುದು ತಪ್ಪಲ್ಲ. ಆದರೆ ಸದಾ ಜಾಗೃತರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಧಿಕ್ಕಾರಿಗಳಿಗೆ ಅಪಮಾನಕಾರಿ ಶಿಕ್ಷೆಯನ್ನು ತಯಾರಿಸಿಟ್ಟಿದ್ದಾನೆ

[102] ನೀವು ನಮಾಝ್ ಅನ್ನು ಮುಗಿಸಿದ ಬಳಿಕವೂ ನಿಂತಲ್ಲೂ, ಕುಳಿತಲ್ಲೂ, ಮಲಗಿರುವಲ್ಲೂ ಅಲ್ಲಾಹನನ್ನು ಸ್ಮರಿಸುತ್ತಲಿರಿ. ತರುವಾಯ ನೀವು (ಭದ್ರತೆಯ ಕುರಿತು) ಸಂತೃಪ್ತರಾದಾಗ (ಪೂರ್ಣ) ನಮಾಝ್ ಅನ್ನು ಪಾಲಿಸಿರಿ. ನಿರ್ದಿಷ್ಟ ಸಮಯಗಳಲ್ಲಿ ನಮಾಝ್ ಅನ್ನು ವಿಶ್ವಾಸಿಗಳ ಮೇಲೆ ಕಡ್ಡಾಯಗೊಳಿಸಲಾಗಿದೆ

[103] (ಶತ್ರುಗಳ) ಆ ಪಡೆಯನ್ನು ಬೆನ್ನಟ್ಟುವ ವಿಷಯದಲ್ಲಿ ಹಿಂಜರಿಯಬೇಡಿ. (ಇಂದು) ನೀವು ಪಾಡು ಪಡುತ್ತಿದ್ದರೆ, ನೀವು ಪಾಡು ಪಟ್ಟಂತೆಯೇ ಅವರೂ ಪಾಡು ಪಡುತ್ತಿದ್ದಾರೆ. ಆದರೆ ಅಲ್ಲಾಹನಿಂದ ಅವರಿಗಿಲ್ಲದ ಶುಭ ನಿರೀಕ್ಷೆ ನಿಮಗಿದೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[104] ಅಲ್ಲಾಹನು ನಿಮಗೆ ತೋರಿಸಿಕೊಟ್ಟಿರುವ ರೀತಿಯಲ್ಲಿ ನೀವು ಜನರ ನಡುವೆ ನ್ಯಾಯ ತೀರ್ಮಾನ ಮಾಡಬೇಕೆಂದು ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಇಳಿಸಿ ಕೊಟ್ಟಿರುವೆವು. ನೀವೆಂದೂ ವಂಚಕರ ಪರವಾಗಿ ವಾದಿಸುವವರಾಗಬಾರದು

[105] ಅಲ್ಲಾಹನ ಬಳಿ ಕ್ಷಮೆ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ

[106] ನೀವು ಆತ್ಮವಂಚಕರ ಪರವಾಗಿ ವಾದಕ್ಕೆ ಇಳಿಯಬೇಡಿ. ಖಂಡಿತವಾಗಿಯೂ ಅಲ್ಲಾಹನು ವಂಚಕ ಪಾಪಿಗಳನ್ನು ಮೆಚ್ಚುವುದಿಲ್ಲ

[107] ಅವರು ಜನರಿಂದ ಅಡಗಿ ಕೊಂಡಿರುತ್ತಾರೆ ಆದರೆ ಅಲ್ಲಾಹನಿಂದ ಅಡಗಿರಲು ಅವರಿಗೆ ಸಾಧ್ಯವಿಲ್ಲ. ಅವರು ರಾತ್ರಿಯ ವೇಳೆ ಅನಪೇಕ್ಷಿತ ವಿಷಯಗಳನ್ನು ಚರ್ಚಿಸುತ್ತಿರುವಾಗ ಅವನು ಅವರ ಜೊತೆಗೇ ಇರುತ್ತಾನೆ. ಅಲ್ಲಾಹನಂತೂ ಅವರ ಎಲ್ಲ ಚಟುವಟಿಕೆಗಳನ್ನು ಆವರಿಸಿಕೊಂಡಿದ್ದಾನೆ

[108] ಸರಿ. ಇಹಲೋಕದ ಬದುಕಿನಲ್ಲಿ ನೀವು ಆ ಜನರ ಪರವಾಗಿ ವಾದಿಸಿದಿರಿ. ಆದರೆ ಪುನರುತ್ಥಾನದ ದಿನ ಅವರ ಪರವಾಗಿ ಅಲ್ಲಾಹನೊಂದಿಗೆ ಯಾರು ತಾನೇ ವಾದಿಸುವರು? ಅಥವಾ ಯಾರು ತಾನೇ (ಅಲ್ಲಿ) ಅವರ ರಕ್ಷಕರಾಗಿರುವರು

[109] ಯಾರಾದರೂ ಒಂದು ಪಾಪಕೃತ್ಯವನ್ನು ಮಾಡಿ ಅಥವಾ ತನ್ನ ಮೇಲೆ ಅಕ್ರಮವೆಸಗಿಕೊಂಡು ಆ ಬಳಿಕ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದರೆ ಅವನು ಅಲ್ಲಾಹನನ್ನು ಕ್ಷಮಾಶೀಲನಾಗಿಯೂ ಕರುಣಾಮಯಿಯಾಗಿಯೂ ಕಾಣುವನು

[110] ಪಾಪವನ್ನು ಸಂಪಾದಿಸುವವನು ನಿಜವಾಗಿ ಸ್ವತಃ ತನಗೆ ವಿರುದ್ಧವಾದುದನ್ನು ಸಂಪಾದಿಸುತ್ತಾನೆ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ

[111] ಇನ್ನು, ಸ್ವತಃ ಒಂದು ಪ್ರಮಾದವನ್ನು ಅಥವಾ ಒಂದು ಪಾಪಕೃತ್ಯವನ್ನು ಮಾಡಿ, ಆ ಬಳಿಕ ಅದರ ಹೊಣೆಯನ್ನು ಒಬ್ಬ ನಿರಪರಾಧಿಯ ಮೇಲೆ ಹೊರಿಸಿ ಬಿಟ್ಟವನು ಸುಳ್ಳಾರೋಪದ ಹಾಗೂ ಒಂದು ಸ್ಪಷ್ಟ ಪಾತಕದ ಹೊರೆಯನ್ನು ಹೊತ್ತನು

[112] (ದೂತರೇ,) ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ವಿಶೇಷ ಅನುಗ್ರಹ ಮತ್ತು ಕೃಪೆ ಇಲ್ಲದಿರುತ್ತಿದ್ದರೆ, ಅವರಲ್ಲಿನ ಒಂದು ಗುಂಪಂತೂ ನಿಮ್ಮನ್ನು ದಾರಿ ತಪ್ಪಿಸುವುದಾಗಿ ನಿರ್ಧರಿಸಿ ಬಿಟ್ಟಿತ್ತು. ನಿಜವಾಗಿ ಸ್ವತಃ ತಮ್ಮ ಹೊರತು ಬೇರಾರನ್ನೂ ದಾರಿಗೆಡಿಸಲು ಅವರಿಂದಾಗದು. ಹಾಗೆಯೇ, ನಿಮಗೆ ಯಾವುದೇ ಹಾನಿಯನ್ನು ಮಾಡಲು ಅವರಿಗೆ ಸಾಧ್ಯವಾಗದು. ಅಲ್ಲಾಹನು ನಿಮಗೆ (ದಿವ್ಯ) ಗ್ರಂಥವನ್ನು ಹಾಗೂ ಯುಕ್ತಿಯನ್ನು ಇಳಿಸಿಕೊಟ್ಟಿರುವನು. ನಿಮಗೆ ತಿಳಿಯದಿದ್ದ ವಿಷಯಗಳನ್ನು ನಿಮಗೆ ತಿಳಿಸಿರುವನು. ನಿಜಕ್ಕೂ ನಿಮ್ಮ ಮೇಲೆ ಅಲ್ಲಾಹನ ಭವ್ಯ ಅನುಗ್ರಹವಿದೆ

[113] ಅವರು ನಡೆಸುತ್ತಿರುವ ಹೆಚ್ಚಿನ ಗುಪ್ತ ಸಮಾಲೋಚನೆಗಳಲ್ಲಿ ಹಿತವೇನೂ ಇಲ್ಲ – ದಾನ ಧರ್ಮವನ್ನು ಆದೇಶಿಸುವ, ಒಳಿತನ್ನು ಬೋಧಿಸುವ ಅಥವಾ ಜನರ ನಡುವೆ ಸಂಧಾನ ಏರ್ಪಡಿಸಲಿಕ್ಕಾಗಿ ನಡೆಸುವ ಸಮಾಲೋಚನೆಗಳ ಹೊರತು. ಅಲ್ಲಾಹನ ಮೆಚ್ಚುಗೆಯನ್ನು ಸಂಪಾದಿಸಲಿಕ್ಕಾಗಿ ಈ ಕಾರ್ಯವನ್ನು (ಸಮಾಲೋಚನೆಗಳನ್ನು) ನಡೆಸುವವರಿಗೆ ನಾವು ಶೀಘ್ರದಲ್ಲೇ ಭಾರೀ ಪ್ರತಿಫಲ ನೀಡಲಿದ್ದೇವೆ

[114] ತನಗೆ ಸನ್ಮಾರ್ಗವು ಬಹಳ ಸ್ಪಷ್ಟವಾಗಿ ಮನವರಿಕೆಯಾದ ಬಳಿಕವೂ, (ಅಲ್ಲಾಹನ) ದೂತರನ್ನು ವಿರೋಧಿಸುವ ಹಾಗೂ ವಿಶ್ವಾಸಿಗಳ ಮಾರ್ಗದ ಬದಲು ಬೇರೇನನ್ನಾದರೂ ಅನುಸರಿಸುವ ವ್ಯಕ್ತಿಯನ್ನು ನಾವು, ಅವನು ಏನನ್ನು ಅವಲಂಬಿಸಿರುವನೋ ಅದರ ವಶಕ್ಕೇ ಒಪ್ಪಿಸಿ ಬಿಡುತ್ತೇವೆ ಮತ್ತು ನಾವು ಆತನನ್ನು ನರಕದೊಳಗೆ ಎಸೆಯಲಿದ್ದೇವೆ. ಅದು ಬಹಳ ಕೆಟ್ಟ ನೆಲೆ

[115] ಯಾರನ್ನಾದರೂ ತನ್ನ ಪಾಲುದಾರರಾಗಿಸುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ. ಅದರ ಹೊರತು ಬೇರೆಲ್ಲವನ್ನೂ ಅವನು ತಾನಿಚ್ಛಿಸುವವರ ಪಾಲಿಗೆ ಕ್ಷಮಿಸಿ ಬಿಡುವನು. ಅಲ್ಲಾಹನ ಜೊತೆ ಯಾರನ್ನಾದರೂ ಪಾಲುದಾರರಾಗಿಸಿದವನು, ದಾರಿ ತಪ್ಪಿ, ತಪ್ಪುದಾರಿಯಲ್ಲಿ ತುಂಬಾ ದೂರ ಸಾಗಿ ಬಿಟ್ಟನು

[116] ಅವರು ಅಲ್ಲಾಹನನ್ನು ಬಿಟ್ಟು ಕೆಲವು ಮಹಿಳೆಯರನ್ನು ಕರೆದು ಪ್ರಾರ್ಥಿಸುತ್ತಾರೆ ಮತ್ತು ವಿದ್ರೋಹಿ ಶೈತಾನನನ್ನು ಕರೆದು ಪ್ರಾರ್ಥಿಸುತ್ತಾರೆ

[117] ಅವನನ್ನು (ಶೈತಾನನನ್ನು) ಅಲ್ಲಾಹನು ಶಪಿಸಿರುವನು. ಅವನು (ಶೈತಾನನು) ‘‘ನಾನು ನಿನ್ನ ದಾಸರ ಪೈಕಿ ಒಂದು ನಿರ್ದಿಷ್ಟ ಪಾಲನ್ನು ಖಂಡಿತ ಪಡೆಯುವೆನು’’ ಎಂದು ಹೇಳಿದ್ದನು

[118] (ಹಾಗೆಯೇ ಅವನು) ‘‘ನಾನು ಖಂಡಿತ ಅವರನ್ನು ದಾರಿಗೆಡಿಸುವೆನು, ಅವರಲ್ಲಿ ಆಶೆಗಳನ್ನು ಹುಟ್ಟಿಸುವೆನು ಮತ್ತು ಅವರಿಗೆ ಆದೇಶ ನೀಡುವೆನು – ಆಗ ಅವರು ಪ್ರಾಣಿಗಳ ಕಿವಿಗಳನ್ನು ಕತ್ತರಿಸುವರು. ಮತ್ತೆ ನಾನು ಅವರಿಗೆ ಆದೇಶ ನೀಡುವೆನು – ಆಗ ಅವರು ಅಲ್ಲಾಹನ ಸೃಷ್ಟಿಗಳ ರೂಪಗಳನ್ನು ವಿಕೃತಗೊಳಿಸುವರು’’ (ಎಂದಿದ್ದನು). ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತನ್ನ ಪೋಷಕನಾಗಿಸಿಕೊಂಡವನು ನಿಜವಾಗಿ ಸ್ಪಷ್ಟವಾದ ನಷ್ಟಕ್ಕೆ ತುತ್ತಾದನು

[119] ಅವನು ಅವರಿಗೆ ವಾಗ್ದಾನ ಮಾಡುತ್ತಾನೆ ಮತ್ತು ಅವರಲ್ಲಿ ಆಶೆಗಳನ್ನು ಮೂಡಿಸುತ್ತಾನೆ – ಶೈತಾನನ ವಾಗ್ದಾನಗಳೆಲ್ಲಾ ಕೇವಲ ಮೋಸಗಳಾಗಿರುತ್ತವೆ

[120] ನರಕವೇ ಅವರ (ಶೈತಾನನ ಅನುಯಾಯಿಗಳ) ಅಂತಿಮ ನೆಲೆಯಾಗಿದೆ. ಅಲ್ಲಿಂದ ಪಲಾಯನಕ್ಕೆ ಅವರು ಯಾವ ದಾರಿಯನ್ನೂ ಕಾಣಲಾರರು

[121] ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನೆಸಗಿದವರು – ಅವರನ್ನು ನಾವು ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆವು. ಅಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನ ವಾಗ್ದಾನವು ಸದಾ ಸತ್ಯವೇ ಆಗಿರುತ್ತದೆ. ಮಾತಿನಲ್ಲಿ ಅಲ್ಲಾಹನಿಗಿಂತ ಹೆಚ್ಚು ಸತ್ಯವಂತರು ಬೇರಾರಿದ್ದಾರೆ

[122] (ಅಂತಿಮ ಗತಿಯು) ನಿಮ್ಮ ಆಶೆಗಳನ್ನಾಗಲಿ, ಗ್ರಂಥದವರ ಆಶೆಗಳನ್ನಾಗಲಿ ಅವಲಂಬಿಸಿಲ್ಲ. ದುಷ್ಕರ್ಮಗಳನ್ನು ಮಾಡಿದವನು ಅದರ ಫಲವನ್ನು ಪಡೆದೇ ತೀರುವನು. ಅವನಿಗೆ ರಕ್ಷಕನಾಗಿ ಮತ್ತು ಸಹಾಯಕನಾಗಿ ಅಲ್ಲಾಹನ ಹೊರತು ಬೇರೆ ಯಾರೂ ಸಿಗಲಾರರು

[123] ಹಾಗೆಯೇ, ಸತ್ಕರ್ಮಗಳನ್ನು ಮಾಡಿದವರು ಪುರುಷರಿರಲಿ ಮಹಿಳೆಯರಿರಲಿ, ಅವರು ವಿಶ್ವಾಸಿಗಳಾಗಿದ್ದರೆ, ಅವರು ಸ್ವರ್ಗತೋಟಗಳನ್ನು ಪ್ರವೇಶಿಸುವರು ಮತ್ತು ಅವರ ಮೇಲೆ ಎಳ್ಳಷ್ಟೂ ಅನ್ಯಾಯವಾಗದು

[124] ಸಂಪೂರ್ಣ ನಿಷ್ಠೆಯೊಂದಿಗೆ ಅಲ್ಲಾಹನಿಗೆ ಶರಣಾಗಿರುವ, ಸತ್ಕರ್ಮಿಯಾಗಿರುವ ಹಾಗೂ ಏಕನಿಷ್ಠರಾಗಿದ್ದ ಇಬ್ರಾಹೀಮರ ದಾರಿಯನ್ನು ಅನುಸರಿಸಿದವನ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಯಾರದ್ದಿದೆ? ಇಬ್ರಾಹೀಮರನ್ನು ಅಲ್ಲಾಹನು ತನ್ನ ಆಪ್ತ ಮಿತ್ರನಾಗಿಸಿ ಕೊಂಡಿದ್ದನು

[125] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಅಲ್ಲಾಹನಂತು, ಪ್ರತಿಯೊಂದು ವಸ್ತುವನ್ನೂ ಆವರಿಸಿಕೊಂಡಿದ್ದಾನೆ

[126] (ದೂತರೇ,) ಅವರು ನಿಮ್ಮೊಡನೆ, ಮಹಿಳೆಯರ ಕುರಿತು ಆದೇಶ ಕೇಳುತ್ತಾರೆ. ಹೇಳಿರಿ; ‘‘ಅವರ ಕುರಿತು ಅಲ್ಲಾಹನು ನಿಮಗೆ ಆದೇಶ ನೀಡುತ್ತಾನೆ ಮತ್ತು ಗ್ರಂಥದಲ್ಲಿರುವುದನ್ನು ನಿಮಗೆ ಓದಿ ಕೇಳಿಸಲಾಗುತ್ತಿದೆ; ನೀವು ಕಡ್ಡಾಯವಾಗಿ ಪಾವತಿಸಬೇಕಾದುದನ್ನು ಪಾವತಿಸಿಲ್ಲದ ಹಾಗೂ ನೀವು ವಿವಾಹವಾಗಲಿಕ್ಕೂ ಹಿಂಜರಿಯುವ ಅನಾಥ ಮಹಿಳೆಯರು, ನಿರ್ಗತಿಕ ಮಕ್ಕಳು ಮತ್ತು ಅನಾಥರ ವಿಷಯದಲ್ಲಿ ನೀವು ನ್ಯಾಯವನ್ನೇ ಪಾಲಿಸಬೇಕು. ನೀವು ಮಾಡುವ ಪ್ರತಿಯೊಂದು ಸತ್ಕಾರ್ಯದ ಕುರಿತೂ ಅಲ್ಲಾಹನು ಚೆನ್ನಾಗಿ ಬಲ್ಲನು

[127] ಒಬ್ಬ ಮಹಿಳೆಗೆ ತನ್ನ ಪತಿಯ ಕಡೆಯಿಂದ ದೌರ್ಜನ್ಯದ ಅಥವಾ ನಿರ್ಲಕ್ಷದ ಭಯವಿದ್ದರೆ ಅವರಿಬ್ಬರೂ ತಮ್ಮ ನಡುವೆ ಸಂಧಾನ ಮಾಡಿಕೊಳ್ಳುವುದು ತಪ್ಪಲ್ಲ. ನಿಜವಾಗಿ, ಸಂಧಾನವೇ ಉತ್ತಮ. ಮನಸ್ಸುಗಳಲ್ಲಿ ಸ್ವಾರ್ಥವಿರುವುದು ಸ್ವಾಭಾವಿಕ. ಆದರೂ ನೀವು ಸೌಜನ್ಯ ತೋರಿದರೆ ಹಾಗೂ ಧರ್ಮನಿಷ್ಠರಾಗಿದ್ದರೆ (ನಿಮಗೆ ತಿಳಿದಿರಲಿ) – ಅಲ್ಲಾಹನಂತು ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ

[128] ನೀವೆಷ್ಟೇ ಬಯಸಿದರೂ ಪತ್ನಿಯರ ನಡುವೆ ಸಂಪೂರ್ಣ ನ್ಯಾಯ ಪಾಲಿಸಲು ನಿಮಗೆ ಸಾಧ್ಯವಾಗದು. ಆದರೆ (ಅವರಲ್ಲಿ ಯಾರ ಕಡೆಗೂ) ಸಂಪೂರ್ಣ ವಾಲಿ ಬಿಡಬೇಡಿ ಹಾಗೂ (ಯಾರನ್ನೂ) ಸಂಪೂರ್ಣವಾಗಿ ನಿರ್ಲಕ್ಷಿಸಿ ಜೋತಾಡುವ ಸ್ಥಿತಿಯಲ್ಲಿ ಬಿಟ್ಟು ಬಿಡಬೇಡಿ. ನೀವು ಸುಧಾರಿಸಿಕೊಂಡರೆ ಮತ್ತು ಧರ್ಮನಿಷ್ಠೆ ಪಾಲಿಸಿದರೆ (ನಿಮಗೆ ತಿಳಿದಿರಲಿ) – ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[129] ಇನ್ನು, ಅವರಿಬ್ಬರು (ದಂಪತಿಯರು) ಬೇರ್ಪಟ್ಟರೆ, ಅಲ್ಲಾಹನು ತನ್ನ ವಿಶಾಲ ಸಾಮರ್ಥ್ಯದಿಂದ ಅವರಲ್ಲಿ ಪ್ರತಿಯೊಬ್ಬರನ್ನೂ (ಪರಸ್ಪರ ಅವಲಂಬನೆಯಿಂದ) ಮುಕ್ತ ಗೊಳಿಸುವನು. ಅಲ್ಲಾಹನಂತು ತುಂಬಾ ವೈಶಾಲ್ಯ ಉಳ್ಳವನೂ ಯುಕ್ತಿವಂತನೂ ಆಗಿದ್ದಾನೆ

[130] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ‘‘ಅಲ್ಲಾಹನಿಗೆ ಅಂಜಿರಿ. ನೀವು ಧಿಕ್ಕಾರಿಗಳಾದರೆ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ (ಎಂಬುದನ್ನು ಮರೆಯಬೇಡಿ)’’ ಎಂದು ಈ ಹಿಂದೆ ಗ್ರಂಥ ನೀಡಲಾಗಿದ್ದವರಿಗೆ ನಾವು ಉಪದೇಶಿಸಿದ್ದೆವು ಮತ್ತು ನಿಮಗೂ ಉಪದೇಶಿಸುತ್ತಿದ್ದೇವೆ. ಅಲ್ಲಾಹನಂತೂ ಎಲ್ಲ ಅಗತ್ಯಗಳಿಂದ ಮುಕ್ತನೂ ಎಲ್ಲ ಪ್ರಶಂಸೆಗಳಿಗೆ ಅರ್ಹನೂ ಆಗಿರುವನು

[131] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. (ಎಲ್ಲರ ಪಾಲಿಗೆ) ಕಾರ್ಯಸಾಧಕನಾಗಿ ಅವನೇ ಸಾಕು

[132] ಜನರೇ, ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಇತರರನ್ನು ತರಬಲ್ಲನು. ಹಾಗೆ ಮಾಡಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ

[133] ಕೇವಲ ಇಹಲೋಕದ ಪ್ರತಿಫಲವನ್ನು ಬಯಸುವಾತನು (ತಿಳಿದಿರಲಿ) – ಅಲ್ಲಾಹನ ಬಳಿ ಇಹಲೋಕದ ಪ್ರತಿಫಲವೂ ಇದೆ ಪರಲೋಕದ ಪ್ರತಿಫಲವೂ ಇದೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ

[134] ವಿಶ್ವಾಸಿಗಳೇ, ನೀವು ಕಟ್ಟುನಿಟ್ಟಾಗಿ ಸದಾ ನ್ಯಾಯವನ್ನು ಪಾಲಿಸುವವರಾಗಿರಿ ಹಾಗೂ ಅಲ್ಲಾಹನಿಗಾಗಿ (ಸತ್ಯದ ಪರ) ಸಾಕ್ಷಿ ಹೇಳುವವರಾಗಿರಿ – ಅದು ಸ್ವತಃ ನಿಮ್ಮ ವಿರುದ್ಧ ಅಥವಾ ನಿಮ್ಮ ತಂದೆ-ತಾಯಿಯ ಅಥವಾ ನಿಕಟ ಬಂಧುಗಳ ವಿರುದ್ಧವಾಗಿದ್ದರೂ ಸರಿಯೇ. ಶ್ರೀಮಂತನಿರಲಿ, ಬಡವನಿರಲಿ, ಅವರಿಬ್ಬರ ಪಾಲಿಗೂ ಇತರೆಲ್ಲರಿಗಿಂತ ಹೆಚ್ಚಾಗಿ ಅಲ್ಲಾಹನೇ ಹಿತೈಷಿಯಾಗಿದ್ದಾನೆ. ನೀವೆಂದೂ ನಿಮ್ಮ ಚಿತ್ತಾಕಾಂಕ್ಷೆಗಳನ್ನು ಅನುಸರಿಸಿ ನ್ಯಾಯಪಾಲನೆಯಲ್ಲಿ ತಪ್ಪಬೇಡಿ. (ನ್ಯಾಯ ಪ್ರಕ್ರಿಯೆಯಲ್ಲಿ) ನೀವು ನಾಲಿಗೆ ತಿರುಚಿದರೆ (ಸಾಕ್ಷವನ್ನು ಬದಲಿಸಿದರೆ) ಅಥವಾ ಜಾರಿಕೊಂಡರೆ, ಅಲ್ಲಾಹನು ನಿಮ್ಮೆಲ್ಲ ಕೃತ್ಯಗಳ ಕುರಿತು ಅರಿವು ಉಳ್ಳವನಾಗಿದ್ದಾನೆ (ಎಂಬುನ್ನು ಮರೆಯಬೇಡಿ)

[135] ವಿಶ್ವಾಸಿಗಳೇ, ಅಲ್ಲಾಹನಲ್ಲಿ, ಅವನ ದೂತರಲ್ಲಿ, ಅವನ ದೂತರಿಗೆ ಇಳಿಸಿಕೊಡಲಾಗಿರುವ ಗ್ರಂಥದಲ್ಲಿ ಮತ್ತು ಈ ಹಿಂದೆ ಇಳಿಸಿಕೊಡಲಾಗಿದ್ದ ಗ್ರಂಥಗಳಲ್ಲಿ ನಂಬಿಕೆ ಇಡಿರಿ. ಅಲ್ಲಾಹನನ್ನು, ಅವನ ಮಲಕ್‌ಗಳನ್ನು, ಅವನ ದೂತರನ್ನು ಮತ್ತು ಅಂತಿಮ ದಿನವನ್ನು ಧಿಕ್ಕರಿಸಿದವನು ದಾರಿಗೆಟ್ಟು, ದಾರಿಗೇಡಿತನದಲ್ಲಿ ತುಂಬಾ ದೂರ ಹೋಗಿಬಿಟ್ಟನು

[136] (ಧರ್ಮದಲ್ಲಿ) ಒಮ್ಮೆ ವಿಶ್ವಾಸವಿರಿಸಿ ಆ ಬಳಿಕ ಧಿಕ್ಕಾರಿಗಳಾದವರು ಹಾಗೂ ಮತ್ತೆ ವಿಶ್ವಾಸವಿರಿಸಿ ಮತ್ತೆ ಧಿಕ್ಕಾರಿಗಳಾದವರು ಮತ್ತು ಧಿಕ್ಕಾರದಲ್ಲೇ ಮುಂದುವರಿದವರು (ತಿಳಿದಿರಲಿ;) ಅವರನ್ನು ಅಲ್ಲಾಹನು ಕ್ಷಮಿಸಲಾರನು ಮತ್ತು ಅವರಿಗೆ ಅವನು ಸರಿದಾರಿಯನ್ನೂ ತೋರಿಸಿಕೊಡಲಾರನು

[137] ಕಪಟಿಗಳಿಗೆ ತುಂಬಾ ಕಠಿಣ ಶಿಕ್ಷೆ ಸಿಗಲಿದೆ ಎಂಬ ಶುಭವಾರ್ತೆ ನೀಡಿರಿ

[138] ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡವರು, ಅವರ (ಧಿಕ್ಕಾರಿಗಳ) ಬಳಿ ಗೌರವವನ್ನು ಹುಡುಕುತ್ತಿದ್ದಾರೆಯೇ? ಗೌರವವಂತೂ ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ

[139] (ವಿಶ್ವಾಸಿಗಳೇ,) ಅವನು (ಅಲ್ಲಾಹನು) ದಿವ್ಯ ಗ್ರಂಥದಲ್ಲಿ ನಿಮಗಾಗಿ ಒಂದು ಆದೇಶವನ್ನು ನೀಡಿದ್ದಾನೆ; ಜನರು ಅಲ್ಲಾಹನ ವಚನಗಳನ್ನು ಧಿಕ್ಕರಿಸುತ್ತಾ ಅದನ್ನು ಅಪಹಾಸ್ಯ ಮಾಡುತ್ತಿರುವುದನ್ನು ನೀವು ಕೇಳಿದಾಗ, ಮತ್ತೆ ಅವರು ಬೇರೆ ಮಾತುಕತೆಗಳಲ್ಲಿ ತಲ್ಲೀನರಾಗುವ ತನಕ ನೀವು ಅವರ ಜೊತೆ ಕೂತಿರಬೇಡಿ. ಅನ್ಯಥಾ ನೀವೂ ಅವರಂತೆಯೇ ಆಗಿ ಬಿಡುವಿರಿ. ಖಂಡಿತವಾಗಿಯೂ ಅಲ್ಲಾಹನು ಎಲ್ಲ ಕಪಟಿಗಳನ್ನು ಮತ್ತು ಧಿಕ್ಕಾರಿಗಳನ್ನು ನರಕದಲ್ಲಿ ಒಟ್ಟು ಸೇರಿಸಲಿರುವನು

[140] (ನಿಮ್ಮ ಗತಿ ಏನಾಗುವುದೆಂದು) ಕಾತರದಿಂದ ನೋಡುತ್ತಿರುವವರು (ಕಪಟಿಗಳು) ಅಲ್ಲಾಹನ ಕಡೆಯಿಂದ ನಿಮಗೆ ವಿಜಯ ಪ್ರಾಪ್ತವಾದರೆ ‘‘ನಾವೇನು ನಿಮ್ಮ ಜೊತೆಗೇ ಇರಲಿಲ್ಲವೆ?’’ ಎನ್ನುತ್ತಾರೆ. ಇನ್ನು ವಿಜಯವು ಧಿಕ್ಕಾರಿಗಳ ಪಾಲಾದರೆ (ಅವರೊಡನೆ) ‘‘ನಮಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತಿದ್ದಾಗ ನಾವೇನು ನಿಮ್ಮನ್ನು ವಿಶ್ವಾಸಿಗಳಿಂದ ರಕ್ಷಿಸಿರಲಿಲ್ಲವೇ?’’ ಎನ್ನುತ್ತಾರೆ. ಪುನರುತ್ಥಾನ ದಿನ ಅಲ್ಲಾಹನೇ ನಿಮ್ಮ ನಡುವೆ ನ್ಯಾಯ ತೀರ್ಮಾನ ಮಾಡುವನು. ಅಲ್ಲಾಹನು ವಿಶ್ವಾಸಿಗಳೆದುರು ವಿಜಯ ಸಾಧಿಸಲು ಧಿಕ್ಕಾರಿಗಳಿಗೆ ಯಾವ ಅವಕಾಶವನ್ನೂ ಬಿಟ್ಟಿಲ್ಲ

[141] ಕಪಟಿಗಳು ಅಲ್ಲಾಹನನ್ನು ವಂಚಿಸುತ್ತಿದ್ದಾರೆ. ಆದರೆ ನಿಜವಾಗಿ ಅವನು ಅವರನ್ನು ವಂಚಿಸುತ್ತಿದ್ದಾನೆ. ಅವರು ನಮಾಝಿಗೆ ನಿಲ್ಲುವಾಗ, ಕೇವಲ ಜನರಿಗೆ ತೋರಿಸುವುದಕ್ಕಾಗಿ, ತೀರಾ ಆಲಸಿಗಳಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ಮರಿಸುವುದು ತೀರಾ ಕಡಿಮೆ

[142] ಅವರು (ಕಪಟಿಗಳು) ಸರಿಯಾಗಿ ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲವೆಂಬಂತೆ, ಅವೆರಡರ (ಸತ್ಯ-ಮಿಥ್ಯಗಳ) ನಡುವೆ ಜೋತಾಡುತ್ತಿರುತ್ತಾರೆ. ಅಲ್ಲಾಹನೇ ದಾರಿಗೆಡಿಸಿ ಬಿಟ್ಟಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ

[143] ವಿಶ್ವಾಸಿಗಳೇ, ನೀವು ವಿಶ್ವಾಸಿಗಳನ್ನು ಬಿಟ್ಟು ಧಿಕ್ಕಾರಿಗಳನ್ನು ನಿಮ್ಮ ಪೋಷಕ ಮಿತ್ರರಾಗಿಸಿಕೊಳ್ಳಬೇಡಿರಿ. ನೀವೇನು, ನಿಮ್ಮ ವಿರುದ್ಧ ಅಲ್ಲಾಹನಿಗೆ ಒಂದು ಸ್ಪಷ್ಟ ಪುರಾವೆಯನ್ನು ಒದಗಿಸಬಯಸುವಿರಾ

[144] ಕಪಟಿಗಳು ನರಕದ ತೀರಾ ಕೆಳಗಿನ ಅಂತಸ್ತಿನಲ್ಲಿರುವರು. ಅವರಿಗೆ ನೀವು ಯಾವ ಸಹಾಯಕನನ್ನೂ ಕಾಣಲಾರಿರಿ

[145] ಪಶ್ಚಾತ್ತಾಪ ಪಟ್ಟು, ತಮ್ಮನ್ನು ಸುಧಾರಿಸಿಕೊಂಡವರು ಹಾಗೂ ಭದ್ರವಾಗಿ ಅಲ್ಲಾಹನನ್ನು ಅವಲಂಬಿಸಿ, ತಮ್ಮ ನಿಷ್ಠೆಯನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿಟ್ಟವರ ಹೊರತು. ಅವರು (ಪರಲೋಕದಲ್ಲಿ) ವಿಶ್ವಾಸಿಗಳ ಜೊತೆಗಿರುವರು. ಅಲ್ಲಾಹನು ಶೀಘ್ರದಲ್ಲೇ ವಿಶ್ವಾಸಿಗಳಿಗೆ ಭಾರೀ ಪ್ರತಿಫಲ ನೀಡುವನು

[146] ನೀವು ಕೃತಜ್ಞರಾದರೆ ಹಾಗೂ ವಿಶ್ವಾಸಿಗಳಾದರೆ, ನಿಮ್ಮನ್ನು ಶಿಕ್ಷಿಸಿ ಅಲ್ಲಾಹನಿಗೆ ಏನಾಗಬೇಕಾಗಿದೆ? ಅಲ್ಲಾಹನಂತೂ (ಒಳಿತಿನ) ಪ್ರಶಂಸಕನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ

[147] ಬಹಿರಂಗವಾದ ಬಯ್ದಾಟವನ್ನು ಅಲ್ಲಾಹನು ಮೆಚ್ಚುವುದಿಲ್ಲ – ಆದರೆ ಮರ್ದಿತನ ಹೊರತು. ಅಲ್ಲಾಹನಂತು ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ

[148] ನೀವು ಸತ್ಕಾರ್ಯವನ್ನು ಬಹಿರಂಗವಾಗಿ ಮಾಡಿದರೆ ಅಥವಾ ಗುಟ್ಟಾಗಿ ಮಾಡಿದರೆ ಅಥವಾ ನೀವು (ಇತರರ) ತಪ್ಪನ್ನು ಕ್ಷಮಿಸಿ ಬಿಟ್ಟರೆ – ಅಲ್ಲಾಹನಂತೂ ಸದಾ ಕ್ಷಮಿಸುವವನೂ ಸಮರ್ಥನೂ ಆಗಿದ್ದಾನೆ

[149] ಖಂಡಿತವಾಗಿಯೂ, ಅಲ್ಲಾಹನನ್ನು ಮತ್ತವನ ದೂತರನ್ನು ಧಿಕ್ಕರಿಸುವವರು ಹಾಗೂ ಅಲ್ಲಾಹನ ಮತ್ತವನ ದೂತರ ನಡುವೆ ತಾರತಮ್ಯ ಮಾಡುವವರು ಮತ್ತು ‘‘ನಾವು ಅವರಲ್ಲಿ (ದೂತರಲ್ಲಿ) ಕೆಲವರನ್ನು ನಂಬುತ್ತೇವೆ ಮತ್ತು ಕೆಲವರನ್ನು ತಿರಸ್ಕರಿಸುತ್ತೇವೆ’’ ಎನ್ನುವವರು ಮತ್ತು ಅವುಗಳ (ಸತ್ಯ-ಮಿಥ್ಯಗಳ) ನಡುವೆ ಬೇರೊಂದು ಮಾರ್ಗವನ್ನು ಹುಡುಕುತ್ತಿರುವವರು –

[150] – ಅವರೇ ನಿಜವಾದ ಧಿಕ್ಕಾರಿಗಳು. (ಇಂತಹ) ಧಿಕ್ಕಾರಿಗಳಿಗಾಗಿ ನಾವು ತೀರಾ ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೇವೆ

[151] ಅಲ್ಲಾಹನಲ್ಲೂ ಅವನ ದೂತರಲ್ಲೂ ನಂಬಿಕೆ ಉಳ್ಳವರಿಗೆ ಹಾಗೂ ಅವರಲ್ಲಿ (ದೂತರಲ್ಲಿ) ಯಾರ ನಡುವೆಯೂ ತಾರತಮ್ಯ ಮಾಡದವರಿಗೆ (ಅಲ್ಲಾಹನು) ಶೀಘ್ರದಲ್ಲೇ ಅವರ ಪ್ರತಿಫಲವನ್ನು ನೀಡುವನು. ಅಲ್ಲಾಹನಂತು ತುಂಬಾ ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ

[152] (ದೂತರೇ,) ಗ್ರಂಥದವರು ನಿಮ್ಮೊಡನೆ, ತಮಗಾಗಿ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಅವರು ಮೂಸಾರ ಮುಂದೆ ಇದಕ್ಕಿಂತ ದೊಡ್ಡ ಆಗ್ರಹಗಳನ್ನು ಮಂಡಿಸಿದ್ದರು ಮತ್ತು ‘‘ನಮಗೆ ವ್ಯಕ್ತವಾಗಿ ಅಲ್ಲಾಹನನ್ನು ತೋರಿಸಿ ಕೊಡಿರಿ’’ ಎಂದಿದ್ದರು. ಕೊನೆಗೆ, ಅವರ ಅಕ್ರಮಗಳ ಕಾರಣ ಅವರ ಮೇಲೆ ಸಿಡಿಲೆರಗಿ ಬಿಟ್ಟಿತು. ಮುಂದೆ, ತಮ್ಮ ಬಳಿಗೆ ಬಹಳ ಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಅವರು ಕರುವನ್ನು (ದೇವರಾಗಿ) ನೆಚ್ಚಿಕೊಂಡರು. ಇಷ್ಟಿದ್ದೂ ನಾವು ಅವರನ್ನು ಕ್ಷಮಿಸಿದೆವು ಮತ್ತು ಮೂಸಾರಿಗೆ ಬಹಳ ಸ್ಪಷ್ಟವಾದ ಪ್ರಾಬಲ್ಯವನ್ನು ನೀಡಿದೆವು

[153] ನಾವು ತೂರ್ ಪರ್ವತವನ್ನು ಅವರ ಮೇಲೆ ಎತ್ತಿ ಹಿಡಿದು (ಅದರ ತಪ್ಪಲಲ್ಲಿ) ಅವರಿಂದ ಪ್ರತಿಜ್ಞೆ ಮಾಡಿಸಿದೆವು ಮತ್ತು ನಾವು ಅವರೊಡನೆ ‘‘ಸಾಷ್ಟಾಂಗವೆರಗುತ್ತಾ (ನಗರದ) ಬಾಗಿಲೊಳಗೆ ಪ್ರವೇಶಿಸಿರಿ’’ ಎಂದೆವು. ಹಾಗೆಯೇ ನಾವು ‘‘ಶನಿವಾರ ದಿನದ ಯಾವ ನಿಯಮವನ್ನೂ ಉಲ್ಲಂಘಿಸಬಾರದು’’ ಎಂದು ಅವರಿಗೆ ಆದೇಶಿಸಿದೆವು. ಮತ್ತು (ಈ ಕುರಿತು) ನಾವು ಅವರಿಂದ ಪ್ರಬಲವಾದ ಪ್ರತಿಜ್ಞೆಯನ್ನು ಪಡೆದೆವು

[154] ಅವರು ತಮ್ಮ ಪ್ರತಿಜ್ಞೆಯನ್ನು ಮುರಿದು, ಅಲ್ಲಾಹನ ವಚನಗಳನ್ನು ಧಿಕ್ಕರಿಸಿದ್ದರಿಂದ, ಅನ್ಯಾಯವಾಗಿ ಪ್ರವಾದಿಗಳನ್ನು ಕೊಂದದ್ದರಿಂದ ಮತ್ತು ‘‘ನಮ್ಮ ಮನಸ್ಸುಗಳು ಸುಭದ್ರವಾಗಿವೆ’’ ಎಂದು ಹೇಳಿದ್ದರಿಂದ (ಅವರನ್ನು ದಂಡಿಸಲಾಯಿತು). ನಿಜವಾಗಿ ಅವರ ಧಿಕ್ಕಾರದ ಕಾರಣ ಅಲ್ಲಾಹನು ಅವರ ಮನಸ್ಸುಗಳಿಗೆ ಮುದ್ರೆ ಒತ್ತಿ ಬಿಟ್ಟನು. ಆದ್ದರಿಂದ ಅವರು (ಸತ್ಯವನ್ನು) ನಂಬುವುದಿಲ್ಲ – ಕೇವಲ ಕೆಲವರ ಹೊರತು

[155] ಹಾಗೆಯೇ, ಅವರ ಧಿಕ್ಕಾರದ ಕಾರಣ ಹಾಗೂ ಮರ್ಯಮರ ಮೇಲೆ ಅವರು ಹೊರಿಸಿದ ಘೋರ ಸುಳ್ಳಾರೋಪದ ಕಾರಣ (ಅವರನ್ನು ದಂಡಿಸಲಾಯಿತು)

[156] ಮತ್ತು ‘‘ಅಲ್ಲಾಹನ ದೂತರಾಗಿದ್ದ, ಮರ್ಯಮರ ಪುತ್ರ ಈಸಾ ಮಸೀಹರನ್ನು ನಾವು ಕೊಂದೆವು’’ ಎಂಬ ಅವರ ಹೇಳಿಕೆಯ ಕಾರಣ (ಅವರನ್ನು ದಂಡಿಸಲಾಯಿತು). ನಿಜವಾಗಿ ಅವರು ಅವರನ್ನು (ಈಸಾರನ್ನು) ಕೊಲ್ಲಲೂ ಇಲ್ಲ, ಶಿಲುಬೆಗೇರಿಸಲೂ ಇಲ್ಲ. ಅವರಿಗೆ ಅದನ್ನು ಆ ರೀತಿ ಕೇವಲ ಕಾಣಿಸಲಾಗಿತ್ತು. ಈ ವಿಷಯದಲ್ಲಿ ಭಿನ್ನತೆ ತಾಳಿರುವವರೆಲ್ಲಾ ಖಂಡಿತ ಈ ಕುರಿತು ಸಂಶಯದಲ್ಲಿದ್ದಾರೆ. ಅವರಿಗೆ ಈ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಅವರು ಆತನನ್ನು ಕೊಲ್ಲಲಿಲ್ಲ ಎಂಬುದಂತೂ ಖಚಿತ

[157] ನಿಜವಾಗಿ ಅಲ್ಲಾಹನು ಅವರನ್ನು (ಈಸಾರನ್ನು) ತನ್ನೆಡೆಗೆ ಎತ್ತಿಕೊಂಡನು. ಅಲ್ಲಾಹನಂತು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿರುವನು

[158] ಖಂಡಿತವಾಗಿಯೂ, ಗ್ರಂಥದವರಲ್ಲಿ ಯಾರೂ ತನ್ನ ಮರಣಕ್ಕೆ ಮುನ್ನ, ಅವರಲ್ಲಿ (ಈಸಾರಲ್ಲಿ) ನಂಬಿಕೆ ಇಡದೆ ಇರಲಾರನು ಮತ್ತು ಪುನರುತ್ಥಾನ ದಿನ ಅವರು (ಈಸಾ) ಅವರ (ಗ್ರಂಥದವರ) ವಿರುದ್ಧ ಸಾಕ್ಷಿಯಾಗುವರು

[159] ಯಹೂದಿಗಳಲ್ಲಿನ ಹಲವರ ಅಕ್ರಮಗಳ ಕಾರಣ, ಅವರ ಪಾಲಿಗೆ (ಹಿಂದೆ) ಧರ್ಮಸಮ್ಮತವಾಗಿದ್ದ ಹಲವು ನಿರ್ಮಲ ವಸ್ತುಗಳನ್ನು ನಾವು ನಿಷೇಧಿಸಿದೆವು. ಅವರು ಅನೇಕರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದುದೂ ಇದಕ್ಕೆ ಕಾರಣವಾಗಿತ್ತು

[160] ಹಾಗೆಯೇ, ಅವರು ತಮ್ಮ ಪಾಲಿಗೆ ನಿಷೇಧಿಸಲಾಗಿದ್ದ ಬಡ್ಡಿಯನ್ನು ತಿನ್ನುತ್ತಿದ್ದುದು ಮತ್ತು ಜನರ ಸಂಪತ್ತನ್ನು ಅಕ್ರಮವಾಗಿ ಕಬಳಿಸುತ್ತಿದ್ದುದು ಕೂಡಾ (ಈ ಶಿಕ್ಷೆಗೆ ಕಾರಣವಾಗಿತ್ತು). ಅವರ ಪೈಕಿ ಧಿಕ್ಕಾರಿಗಳಿಗಾಗಿ ನಾವು ಕಠಿಣ ಶಿಕ್ಷೆಯನ್ನು ತಯಾರಿಸಿಟ್ಟಿದ್ದೇವೆ

[161] ಅವರ ಪೈಕಿ ಪಕ್ವ ಜ್ಞಾನವುಳ್ಳವರು ಹಾಗೂ ವಿಶ್ವಾಸಿಗಳು ಮಾತ್ರ, ನಿಮಗೆ ಇಳಿಸಿಕೊಡಲಾಗಿರುವುದರಲ್ಲಿ (ಕುರ್‌ಆನ್‌ನಲ್ಲಿ) ಮತ್ತು ನಿಮಗಿಂತ ಹಿಂದೆ ಇಳಿಸಿಕೊಡಲಾಗಿದ್ದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಇಡುತ್ತಾರೆ. ನಮಾಝ್ ಅನ್ನು ಪಾಲಿಸುತ್ತಾರೆ, ಝಕಾತ್ ಅನ್ನು ಪಾವತಿಸುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅವರಿಗೆ ನಾವು ಭವ್ಯ ಪ್ರತಿಫಲ ನೀಡಲಿದ್ದೇವೆ

[162] (ದೂತರೇ,) ನೂಹ್‌ರಿಗೆ ಮತ್ತು ಅವರ ಅನಂತರದ ದೇವದೂತರಿಗೆ ಇಳಿಸಿ ಕೊಟ್ಟಂತೆ (ಈ ಸಂದೇಶವನ್ನು) ನಾವೇ ನಿಮಗೆ ಇಳಿಸಿಕೊಟ್ಟಿರುವೆವು. (ಈ ಹಿಂದೆ) ನಾವು ಇಬ್ರಾಹೀಮ್, ಇಸ್ಮಾಈಲ್, ಇಸ್‌ಹಾಕ್, ಯಅ್ಕೂಬ್, ಯಅ್ಕೂಬರ ಸಂತತಿ, ಈಸಾ, ಅಯ್ಯೂಬ್, ಯೂನುಸ್, ಹಾರೂನ್ ಮತ್ತು ಸುಲೈಮಾನ್‌ರಿಗೆ (ದಿವ್ಯ ಸಂದೇಶವನ್ನು) ಇಳಿಸಿಕೊಟ್ಟಿದ್ದೆವು. ಹಾಗೆಯೇ, ದಾವೂದ್‌ರಿಗೆ ನಾವು ‘ಝಬೂರ್’ ಅನ್ನು ನೀಡಿದ್ದೆವು

[163] ಹಾಗೆಯೇ, ನಾವು ಈ ಹಿಂದೆ ನಿಮ್ಮ ಮುಂದೆ ಪ್ರಸ್ತಾಪಿಸಿರುವ ಹಾಗೂ ನಿಮ್ಮ ಮುಂದೆ ಪ್ರಸ್ತಾಪಿಸಿಲ್ಲದ ದೇವದೂತರಿಗೆಲ್ಲಾ (ಸಂದೇಶವನ್ನು ಕಳಿಸಲಾಗಿತ್ತು). ಮತ್ತು ಮೂಸಾರೊಡನೆ ಅಲ್ಲಾಹನು ನೇರವಾಗಿ ಮಾತನಾಡಿದ್ದನು

[164] ದೇವದೂತರು ಬಂದ ಬಳಿಕ ಅಲ್ಲಾಹನೆದುರು ಜನರ ಬಳಿ ಯಾವುದೇ ನೆಪ ಉಳಿಯಬಾರದೆಂದು, ಆ ದೇವದೂತರನ್ನು ಶುಭವಾರ್ತೆ ನೀಡುವವರು ಮತ್ತು ಎಚ್ಚರಿಸುವವರಾಗಿ ಕಳಿಸಲಾಗಿತ್ತು. ಅಲ್ಲಾಹನಂತೂ ಪ್ರಚಂಡನೂ, ಯುಕ್ತಿವಂತನೂ ಆಗಿದ್ದಾನೆ

[165] ಅಲ್ಲಾಹನು ನಿಮಗೆ ಏನನ್ನು ಇಳಿಸಿಕೊಟ್ಟಿರುವನೋ ಅದನ್ನು ಅವನು ತನ್ನ ಜ್ಞಾನದ ಆಧಾರದಲ್ಲಿ ಇಳಿಸಿ ಕೊಟ್ಟಿರುವನೆಂದು ಅವನೇ ಸಾಕ್ಷಿ ಹೇಳುತ್ತಾನೆ ಮತ್ತು ಮಲಕ್‌ಗಳೂ ಸಾಕ್ಷಿ ಹೇಳುತ್ತಾರೆ. ನಿಜವಾಗಿ ಸಾಕ್ಷಿಯಾಗಿ ಅಲ್ಲಾಹನೇ ಸಾಕು

[166] (ಸತ್ಯವನ್ನು) ಧಿಕ್ಕರಿಸಿದವರು ಮತ್ತು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುವವರು ದಾರಿಗೇಡಿತನದಲ್ಲಿ ನಿಜಕ್ಕೂ ತುಂಬಾ ದೂರ ಸಾಗಿಬಿಟ್ಟಿದ್ದಾರೆ

[167] ಧಿಕ್ಕಾರಿಗಳಾದವರನ್ನು ಹಾಗೂ ಅಕ್ರಮವೆಸಗಿದವರನ್ನು ಅಲ್ಲಾಹನು ಕ್ಷಮಿಸಲಾರನು ಮತ್ತು ಅವರಿಗೆ ಯಾವುದೇ ದಾರಿಯನ್ನು ತೋರಲಾರನು –

[168] – ನರಕದ ದಾರಿಯ ಹೊರತು. ಅದರಲ್ಲಿ ಅವರು ಸದಾಕಾಲ ಇರುವರು. ಇದೆಲ್ಲಾ ಅಲ್ಲಾಹನ ಪಾಲಿಗೆ ತೀರಾ ಸುಲಭವಾಗಿದೆ

[169] ಮಾನವರೇ, ನಿಮ್ಮೆಡೆಗೆ ನಿಮ್ಮೊಡೆಯನ ಕಡೆಯಿಂದ ಸತ್ಯದೊಂದಿಗೆ ಒಬ್ಬ ದೂತರು ಬಂದಿರುವರು. ಅವರಲ್ಲಿ ನಂಬಿಕೆ ಇಡಿರಿ. ಅದು ನಿಮ್ಮ ಪಾಲಿಗೆ ಒಳ್ಳೆಯದು. ಇನ್ನು ನೀವು ಧಿಕ್ಕರಿಸಿದರೆ, (ನಿಮಗೆ ತಿಳಿದಿರಲಿ), ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನು ಹಾಗೂ ಯುಕ್ತಿವಂತನಾಗಿದ್ದಾನೆ

[170] ಗ್ರಂಥದವರೇ, ನಿಮ್ಮ ಧರ್ಮದಲ್ಲಿ ಅತಿಶಯವೆಸಗಬೇಡಿ ಮತ್ತು ಅಲ್ಲಾಹನ ಕುರಿತು, ಸತ್ಯವಲ್ಲದ ಏನನ್ನೂ ಹೇಳಬೇಡಿ. ಮರ್ಯಮರ ಪುತ್ರ ಈಸಾ ಮಸೀಹ್, ಅಲ್ಲಾಹನ ದೂತರಾಗಿದ್ದರು ಹಾಗೂ ಅವನು ಮರ್ಯಮರಿಗೆ ಕರುಣಿಸಿದ, ಅವನ ವಚನವಾಗಿದ್ದರು ಮತ್ತು ಅವನ ಕಡೆಯಿಂದ ಕಳಿಸಲಾಗಿದ್ದ ಒಂದು ಆತ್ಮವಾಗಿದ್ದರು. ನೀವು ‘‘(ದೇವರು) ಮೂವರಿದ್ದಾರೆ’’ ಎನ್ನಬೇಡಿ. ಹಾಗೆ ಹೇಳದಿರುವುದೇ ನಿಮ್ಮ ಪಾಲಿಗೆ ಉತ್ತಮ. ಅಲ್ಲಾಹನೊಬ್ಬನು ಮಾತ್ರ ಪೂಜಾರ್ಹನು. ಅವನಿಗೊಬ್ಬ ಪುತ್ರನಿರಲು, ಅವನಂತೂ ತುಂಬಾ ಪಾವನನಾಗಿದ್ದಾನೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿವೆ. ಕಾರ್ಯ ಸಾಧನಕನಾಗಿ (ಎಲ್ಲರಿಗೂ) ಅಲ್ಲಾಹನೇ ಸಾಕು

[171] ಈಸಾ ತಾನು ಅಲ್ಲಾಹನ ದಾಸನಾಗಿರುವುದಕ್ಕೆ ಸಂಕೋಚ ಪಡುವುದಿಲ್ಲ. (ಅಲ್ಲಾಹನ) ಆಪ್ತ ಮಲಕ್‌ಗಳೂ ಅಷ್ಟೇ. ಅವನನ್ನು (ಅಲ್ಲಾಹನನ್ನು) ಪೂಜಿಸುವುದಕ್ಕೆ ಹಿಂಜರಿಯುವ ಹಾಗೂ ಅಹಂಕಾರ ತೋರುವ ಎಲ್ಲರನ್ನೂ ಅವನು (ವಿಚಾರಣೆಗಾಗಿ) ತನ್ನ ಬಳಿ ಸೇರಿಸಲಿದ್ದಾನೆ

[172] ಧರ್ಮದಲ್ಲಿ ನಂಬಿಕೆ ಇಟ್ಟು ಸತ್ಕರ್ಮ ಮಾಡಿದವರಿಗೆ (ಅಲ್ಲಾಹನು) ಅವರ ಸಂಪೂರ್ಣ ಪ್ರತಿಫಲವನ್ನು ನೀಡುವನು, ಮಾತ್ರವಲ್ಲ, ಅವನು ತನ್ನ ಅನುಗ್ರಹದಿಂದ ಅವರಿಗೆ ಇನ್ನೂ ಹೆಚ್ಚಿನದನ್ನು ನೀಡುವನು. (ತಾವು ದೇವರ ದಾಸರೆನ್ನುವುದಕ್ಕೆ) ಸಂಕೋಚ ಪಟ್ಟವರನ್ನು ಹಾಗೂ ಅಹಂಕಾರ ತೋರಿದವರನ್ನು ಅವನು ಯಾತನಾಮಯ ಶಿಕ್ಷೆಗೆ ಗುರಿಪಡಿಸುವನು. ಅವರಿಗೆ ಅಲ್ಲಾಹನ ಹೊರತು ಬೇರಾರೂ ರಕ್ಷಕರಾಗಲಿ ಸಹಾಯಕರಾಗಲಿ ಸಿಗಲಾರರು

[173] ಮಾನವರೇ, ಇದೋ ನಿಮ್ಮ ಬಳಿಗೆ ನಿಮ್ಮೊಡೆಯನ ಕಡೆಯಿಂದ ಬಹಳ ಸ್ಪಷ್ಟವಾದ ಪುರಾವೆಯೊಂದು ಬಂದಿದೆ ಮತ್ತು ನಾವು ಒಂದು ಉಜ್ವಲ ಪ್ರಕಾಶವನ್ನು ನಿಮಗೆ ಇಳಿಸಿ ಕೊಟ್ಟಿರುವೆವು

[174] ಅಲ್ಲಾಹನಲ್ಲಿ ನಂಬಿಕೆ ಇಟ್ಟು ಅವನನ್ನೇ ಭದ್ರವಾಗಿ ಅವಲಂಬಿಸಿರುವವರನ್ನು ಅವನು ತನ್ನ ಕೃಪೆ ಮತ್ತು ಅನುಗ್ರಹದೊಳಗೆ ಸೇರಿಸುವನು ಮತ್ತು ಅವನು ಅವರಿಗೆ ತನ್ನ ಕಡೆಗಿರುವ ನೇರ ದಾರಿಯನ್ನು ತೋರಿಸಿಕೊಡುವನು

[175] (ದೂತರೇ,) ಅವರು ನಿಮ್ಮೊಡನೆ ತೀರ್ಪು ಕೇಳುತ್ತಾರೆ. ಹೇಳಿರಿ; ‘‘ಕಲಾಲಃ (ಉತ್ತರಾಧಿಕಾರಿಗಳಾಗಿ ತಂದೆ-ತಾಯಿಯಾಗಲಿ, ಮಕ್ಕಳಾಗಲಿ ಇಲ್ಲದವರು)ಗಳ ಕುರಿತು ಅಲ್ಲಾಹನು ನಿಮಗೆ ತೀರ್ಪು ನೀಡಿರುವನು. ಒಬ್ಬ ಪುರುಷನು ಮೃತನಾಗಿದ್ದು, ಅವನಿಗೆ ಮಕ್ಕಳಿಲ್ಲದೆ, ಒಬ್ಬ ಸಹೋದರಿ ಇರುವಳೆಂದಾದರೆ ಅವನು ಬಿಟ್ಟು ಹೋದ ಸೊತ್ತಿನಲ್ಲಿ ಆಕೆಗೆ ಅರ್ಧ ಭಾಗ ಸಿಗುವುದು. ಇನ್ನು ಮೃತ ವ್ಯಕ್ತಿ ಮಹಿಳೆಯಾಗಿದ್ದು ಆಕೆಗೆ ಮಕ್ಕಳಿಲ್ಲವಾದರೆ ಅವನು (ಸಹೋದರನು) ಆಕೆಯ ಉತ್ತರಾಧಿಕಾರಿಯಾಗುವನು. ಒಂದು ವೇಳೆ ಮೃತ ವ್ಯಕ್ತಿಗೆ ಇಬ್ಬರು ಸಹೋದರಿಯರು ಇದ್ದರೆ ಆತನು ಬಿಟ್ಟು ಹೋದ ಸೊತ್ತಿನಲ್ಲಿ ಅವರಿಗೆ ಮೂರನೇ ಎರಡು ಪಾಲು ಸಿಗುವುದು. ಹಲವು ಸಹೋದರರು ಮತ್ತು ಹಲವು ಸಹೋದರಿಯರಿದ್ದರೆ, ಸ್ತ್ರೀಯರಿಗೆ (ಸಹೋದರಿಯರಿಗೆ) ಸಿಗುವುದರ ಇಮ್ಮಡಿ ಪಾಲು, ಪುರುಷರಿಗೆ (ಸಹೋದರರಿಗೆ) ಸಿಗುವುದು. ನೀವು ದಾರಿ ತಪ್ಪಬಾರದೆಂದು ಅಲ್ಲಾಹನು ನಿಮಗೆ (ಇದನ್ನೆಲ್ಲಾ) ವಿವರಿಸುತ್ತಿದ್ದಾನೆ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲವನಾಗಿದ್ದಾನೆ

[176] ವಿಶ್ವಾಸಿಗಳೇ, ಪ್ರತಿಜ್ಞೆಗಳನ್ನು ಪಾಲಿಸಿರಿ. ನಾಲ್ಕು ಕಾಲಿನ ಜಾನುವಾರುಗಳನ್ನು ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ – (ಪ್ರತ್ಯೇಕವಾಗಿ) ನಿಮಗೆ ತಿಳಿಸಲಾಗುವವುಗಳ ಹೊರತು. ಹಾಗೆಯೇ ನೀವು ‘ಇಹ್ರಾಮ್’ನಲ್ಲಿ (ಹಜ್ಜ್ ಅಥವಾ ಉಮ್ರಃದ ಸಂದರ್ಭದ ವಿಶೇಷ ಉಡುಗೆಯಲ್ಲಿ) ಇರುವಾಗ, ಬೇಟೆಯಾಡಬಾರದು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸುವುದನ್ನೇ ಆದೇಶಿಸುತ್ತಾನೆ

ಆಹಾರ

Surah 5

[1] ವಿಶ್ವಾಸಿಗಳೇ, ಅಲ್ಲಾಹನ ಕುರುಹುಗಳಿಗೆ, (ನಾಲ್ಕು) ಪಾವನ ತಿಂಗಳುಗಳಿಗೆ, ಹರಕೆಗಳಿಗೆ (ಕಅ್ಬ: ಭವನಕ್ಕೆಂದು ಹರಕೆಗೆ ಬಿಡಲಾದ ಜಾನುವಾರುಗಳಿಗೆ), ಕೊರಳಲ್ಲಿ (ಹರಕೆಯ) ಪಟ್ಟಿ ಇರುವವುಗಳಿಗೆ ಮತ್ತು ತಮ್ಮೊಡೆಯನ ಅನುಗ್ರಹ ಹಾಗೂ ಮೆಚ್ಚುಗೆಯನ್ನು ಹುಡುಕುತ್ತಾ ಪವಿತ್ರ ಭವನ (ಕಅ್ಬ:)ದೆಡೆಗೆ ಹೊರಟವರಿಗೆ ಯಾವುದೇ ಅಪಚಾರ ಎಸಗಬೇಡಿ. ‘ಇಹ್ರಾಮ್’ನಿಂದ ಮುಕ್ತರಾದ ಬಳಿಕ ನೀವು ಬೇಟೆಯಾಡಬಹುದು. ಒಂದು ಜನಾಂಗವು ಪವಿತ್ರ ಭವನ (ಕಅ್ಬ:)ದಿಂದ ನಿಮ್ಮನ್ನು ತಡೆದ ಕಾರಣ ಅವರ ಮೇಲೆ ನಿಮಗಿರುವ ದ್ವೇಷವು, ಯಾವುದೇ ಅನ್ಯಾಯ ನಡೆಸುವುದಕ್ಕೆ ನಿಮ್ಮನ್ನು ಪ್ರಚೋದಿಸಬಾರದು. ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ (ಎಲ್ಲರ ಜೊತೆ) ಸಹಕರಿಸಿರಿ ಮತ್ತು ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರ ಜೊತೆಗೂ) ಸಹಕರಿಸಬೇಡಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಖಂಡಿತ ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ

[2] ಶವವನ್ನು, ರಕ್ತವನ್ನು, ಹಂದಿಯ ಮಾಂಸವನ್ನು, ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಲಿ ನೀಡಲಾಗಿರುವ ಪ್ರಾಣಿಯನ್ನು, ಕೊರಳು ಹಿಸುಕಿ ಕೊಂದಿರುವುದನ್ನು, ಪೆಟ್ಟು ತಿಂದು ಸತ್ತಿರುವುದನ್ನು, ಎತ್ತರದಿಂದ ಬಿದ್ದು ಸತ್ತಿರುವುದನ್ನು, (ಕ್ರೂರ ಪ್ರಾಣಿಯು) ಕೊಂಬಿನಿಂದ ಸೀಳಿ ಕೊಂದಿರುವುದನ್ನು ನಿಮ್ಮ ಪಾಲಿಗೆ ನಿಷಿದ್ಧ ಗೊಳಿಸಲಾಗಿದೆ. ಹಾಗೆಯೇ, ಕ್ರೂರ ಪ್ರಾಣಿಯು ತಿಂದು ಬಿಟ್ಟಿರುವುದು (ನಿಮಗೆ ನಿಷಿದ್ಧವಾಗಿದೆ) – ನೀವು ಜೀವಂತ ಪಡೆದು ದಿಬ್ಹ್ ಮಾಡಿದ್ದರ ಹೊರತು. (ಮಿಥ್ಯ ದೇವರ) ಗುಡಿಗಳಲ್ಲಿ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳ ಮೂಲಕ ಅದೃಷ್ಟ ನಿರ್ಧರಿಸುವುದನ್ನು ನಿಮ್ಮ ಪಾಲಿಗೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲಾ ಪಾಪ ಕೃತ್ಯಗಳಾಗಿವೆ. ಧಿಕ್ಕಾರಿಗಳು ಇಂದು ನಿಮ್ಮ ಧರ್ಮದ ಕುರಿತಂತೆ ನಿರಾಶರಾಗಿದ್ದಾರೆ. ನೀವಿನ್ನು ಅವರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಪಾಲಿಗೆ ನನ್ನ ಕೊಡುಗೆಯನ್ನು ಪೂರ್ತಿಗೊಳಿಸಿದ್ದೇನೆ. ಹಾಗೆಯೇ ನಿಮಗಾಗಿ ನಾನು, ಇಸ್ಲಾಮ್ ಧರ್ಮವನ್ನು ಮೆಚ್ಚಿದ್ದೇನೆ. ಯಾರಾದರೂ ಹಸಿವಿನಿಂದ ನರಳುತ್ತಿದ್ದು, ಪಾಪ ಕೃತ್ಯವೆಸಗುವ ಇರಾದೆ ಇಲ್ಲದವನಾಗಿದ್ದರೆ, (ಅಂಥವನಿಂದ ನಿಯಮದ ಉಲ್ಲಂಘನೆ ನಡೆದರೂ) ಅಲ್ಲಾಹನು ಖಂಡಿತ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ

[3] (ದೂತರೇ,) ಅವರು ನಿಮ್ಮೊಡನೆ, ತಮ್ಮ ಪಾಲಿಗೆ ಯಾವುದನ್ನು ಸಮ್ಮತಗೊಳಿಸಲಾಗಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಶುದ್ಧ ವಸ್ತುಗಳನ್ನೆಲ್ಲಾ ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ. ಅಲ್ಲಾಹನು ನಿಮಗೆ ನೀಡಿದ ಜ್ಞಾನದ ಪ್ರಕಾರ, ನೀವು ಬೇಟೆಯಾಡುವುದಕ್ಕೆಂದು ಪಳಗಿಸಿದ ಪ್ರಾಣಿಗಳು, ನಿಮಗಾಗಿ ಹಿಡಿದಿಟ್ಟ ಪ್ರಾಣಿಗಳನ್ನು ಅಲ್ಲಾಹನ ಹೆಸರನ್ನುಚ್ಚರಿಸಿ (ದಿಬ್ಹ್ ಮಾಡಿ) ತಿನ್ನಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ

[4] ಇಂದು ನಿಮ್ಮ ಪಾಲಿಗೆ ಎಲ್ಲ ಶುದ್ಧ ವಸ್ತುಗಳನ್ನು ಸಮ್ಮತಗೊಳಿಸಲಾಗಿದೆ. ಇನ್ನು, ಗ್ರಂಥದವರ ಆಹಾರವು ನಿಮ್ಮ ಪಾಲಿಗೆ ಸಮ್ಮತವಾಗಿದೆ ಮತ್ತು ನಿಮ್ಮ ಆಹಾರವು ಅವರ ಪಾಲಿಗೆ ಸಮ್ಮತವಾಗಿದೆ. ಹಾಗೆಯೇ, ವಿಶ್ವಾಸಿಗಳಲ್ಲಿನ ಸುಶೀಲ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಧರ್ಮಗ್ರಂಥ ನೀಡಲಾಗಿದ್ದವರಲ್ಲಿನ ಸುಶೀಲ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿದ್ದಾರೆ – ನೀವು ಅವರಿಗೆ ಅವರ ಶುಲ್ಕ (ವಿವಾಹಧನ)ವನ್ನು ಪಾವತಿಸಿದ ಬಳಿಕ. ನೀವು (ಅವರ ಜೊತೆ, ವಿವಾಹದ) ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವವರಾಗಿರಬೇಕು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರಬಾರದು ಮತ್ತು ನೀವು ಗುಪ್ತ ನಂಟುಗಳನ್ನು ಪೋಷಿಸಬಾರದು. ವಿಶ್ವಾಸವನ್ನು ಧಿಕ್ಕರಿಸಿದವನ ಕರ್ಮಗಳೆಲ್ಲಾ ವ್ಯರ್ಥವಾದವು. ಪರಲೋಕದಲ್ಲಿ ಅವನು, ಎಲ್ಲವನ್ನೂ ಕಳೆದುಕೊಂಡವರ ಸಾಲಲ್ಲಿರುವನು

[5] ವಿಶ್ವಾಸಿಗಳೇ, ನೀವು ನಮಾಝ್‌ಗಾಗಿ ಹೊರಟಾಗ ನಿಮ್ಮ ಮುಖಗಳನ್ನು ಮತ್ತು ಮೊಣಗಂಟುಗಳ ತನಕ ನಿಮ್ಮ ಕೈಗಳನ್ನು ತೊಳೆದುಕೊಳ್ಳಿರಿ. ನಿಮ್ಮ ತಲೆಗಳನ್ನು ಸವರಿಕೊಳ್ಳಿರಿ ಮತ್ತು ನಿಮ್ಮ ಕಾಲುಗಳನ್ನು ಕೆಳಗಂಟುಗಳ ತನಕ ತೊಳೆದುಕೊಳ್ಳಿರಿ. ಇನ್ನು ನೀವು ‘ಜನಾಬತ್’ (ಸ್ನಾನ ಕಡ್ಡಾಯವಿರುವ) ಸ್ಥಿತಿಯಲ್ಲಿದ್ದರೆ, ಚೆನ್ನಾಗಿ ಶುದ್ಧೀಕರಿಸಿಕೊಳ್ಳಿರಿ. ಇನ್ನು ನೀವು ಅನಾರೋಗ್ಯ ಪೀಡಿತರಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೊಬ್ಬರು ಶೌಚಾಲಯದಿಂದ ಬಂದಿದ್ದರೆ ಅಥವಾ ಸ್ತ್ರೀ ಸಂಗ ಮಾಡಿದ್ದರೆ ಮತ್ತು ಆ ವೇಳೆ ನಿಮಗೆ ನೀರು ಸಿಗದಿದ್ದರೆ, ಶುದ್ಧ ಮಣ್ಣಿನಿಂದ ‘ತಯಮ್ಮಮ್’ ಮಾಡಿರಿ (ಅಂದರೆ ಮಣ್ಣನ್ನು ಮುಟ್ಟಿ) ನಿಮ್ಮ ಮುಖಗಳನ್ನು ಮತ್ತು ಕೈಗಳನ್ನು ಸವರಿಕೊಳ್ಳಿರಿ. ಅಲ್ಲಾಹನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಒಳಪಡಿಸಬಯಸುವುದಿಲ್ಲ. ಅವನಂತು, ನಿಮ್ಮನ್ನು ಶುದ್ಧಗೊಳಿಸಬಯಸುತ್ತಾನೆ ಮತ್ತು ನಿಮಗೆ ತನ್ನ ಕೊಡುಗೆಗಳನ್ನು ಪೂರ್ತಿಯಾಗಿ ನೀಡಬಯಸುತ್ತಾನೆ – ನೀವು ಕೃತಜ್ಞರಾಗಬೇಕೆಂದು

[6] ಅಲ್ಲಾಹನು ನಿಮಗೆ ನೀಡಿರುವ ಕೊಡುಗೆಯನ್ನು ಮತ್ತು ಅವನ ಜೊತೆ ನೀವು ಮಾಡಿರುವ ಕರಾರನ್ನು ನೆನಪಿಸಿಕೊಳ್ಳಿರಿ. ಆಗ ನೀವು, ‘‘ನಾವು ಕೇಳಿದೆವು ಮತ್ತು ಅನುಸರಿಸಿದೆವು’’ ಎಂದು ಹೇಳಿದ್ದಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು ಮನಸ್ಸಿನ ವಿಚಾರಗಳನ್ನು ಬಲ್ಲವನಾಗಿದ್ದಾನೆ

[7] ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸ ಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ

[8] ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ಕ್ಷಮೆ ಮತ್ತು ಭಾರೀ ಪ್ರತಿಫಲ ಇದೆ ಎಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ

[9] ಇನ್ನು ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರು – ಅವರೇ ನರಕದವರಾಗಿದ್ದಾರೆ

[10] ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ನೆನಪಿಸಿ ಕೊಳ್ಳಿರಿ – ಒಂದು ಜನಾಂಗವು ನಿಮ್ಮ ಮೇಲೆ ಆಕ್ರಮಣ ಮಾಡಲಿದ್ದಾಗ ಅವನು ಅವರ ಕೈಗಳನ್ನು ನಿಮ್ಮಿಂದ ತಡೆದಿಟ್ಟನು. ಸದಾ ಅಲ್ಲಾಹನಿಗೆ ಅಂಜಿರಿ. ವಿಶ್ವಾಸಿಗಳಂತು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ

[11] ಅಲ್ಲಾಹನು ಇಸ್ರಾಈಲರ ಸಂತತಿಗಳಿಂದ ಕರಾರನ್ನು ಪಡೆದಿದ್ದನು. ನಾವು (ಅಲ್ಲಾಹ್) ಅವರ ಪೈಕಿ 12 ಮಂದಿಯನ್ನು ನೇತಾರರಾಗಿ ನೇಮಿಸಿದ್ದೆವು. ಅವರೊಡನೆ ಅಲ್ಲಾಹನು ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ. ನೀವು ನಮಾಝ್‌ನ ಪಾಲನೆ ಮಾಡುತ್ತಲಿದ್ದರೆ, ಝಕಾತ್ ಅನ್ನು ಪಾವತಿಸುತ್ತಲಿದ್ದರೆ, ನನ್ನ ದೂತರಲ್ಲಿ ನಂಬಿಕೆ ಇರಿಸಿ, ಅವರಿಗೆ ನೆರವಾಗುತ್ತಲಿದ್ದರೆ ಮತ್ತು ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುತ್ತಲಿದ್ದರೆ ನಾನು ಖಂಡಿತ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವೆನು ಮತ್ತು ನಿಮ್ಮನ್ನು, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆನು. ಇನ್ನು ಇದಾದ ಬಳಿಕ ನಿಮ್ಮ ಪೈಕಿ ಧಿಕ್ಕಾರಿಯಾದವನು ಖಂಡಿತವಾಗಿಯೂ ಸನ್ಮಾರ್ಗವನ್ನು ಕಳೆದುಕೊಂಡನು – (ಎಂದು ಅವರಿಗೆ ತಿಳಿಸಲಾಗಿತ್ತು)

[12] ಕೊನೆಗೆ, ಅವರು ತಮ್ಮ ಕರಾರನ್ನು ಮುರಿದುದರಿಂದ ನಾವು ಅವರನ್ನು ಶಪಿಸಿದೆವು ಮತ್ತು ಅವರ ಮನಸ್ಸುಗಳನ್ನು ಕಠೋರಗೊಳಿಸಿದೆವು. ಅವರೀಗ ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ತಿರುಚಿ ಬಿಡುತ್ತಿದ್ದಾರೆ ಮತ್ತು ಅವರಿಗೆ ನೀಡಲಾಗಿದ್ದ ಬೋಧನೆಗಳ ದೊಡ್ಡ ಭಾಗವನ್ನು ಅವರು ಮರೆತು ಬಿಟ್ಟಿದ್ದಾರೆ. ಅವರಲ್ಲಿನ ಕೆಲವರ ಹೊರತು ಉಳಿದವರ ವಂಚನೆಯ ಸುದ್ದಿಗಳು ನಿಮಗೆ ಸದಾ ತಲುಪುತ್ತಲೇ ಇರುತ್ತವೆ. ಏನಿದ್ದರೂ ನೀವು ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಖಂಡಿತವಾಗಿಯೂ ಅಲ್ಲಾಹನು ಉದಾರಿಗಳನ್ನು ಪ್ರೀತಿಸುತ್ತಾನೆ

[13] ‘ನಾವು ನಸಾರಾಗಳು’ (ಕ್ರೈಸ್ತರು) ಎಂದು ಹೇಳಿಕೊಳ್ಳುವವರಲ್ಲಿ ಹಲವರಿದ್ದಾರೆ – ನಾವು ಅವರಿಂದ ಕರಾರನ್ನು ಪಡೆದುಕೊಂಡೆವು. ಆದರೆ ಅವರು ತಮಗೆ ನೀಡಲಾದ ಉಪದೇಶದ ಹೆಚ್ಚಿನ ಭಾಗವನ್ನು ಮರೆತು ಬಿಟ್ಟರು. ಕೊನೆಗೆ ನಾವು ಪುನರುತ್ಥಾನ ದಿನದ ತನಕ ಅವರ ನಡುವೆ ದ್ವೇಷ ಮತ್ತು ಹಗೆತನವನ್ನು ಬೆಳೆಸಿ ಬಿಟ್ಟೆವು. ಅವರು ರಚಿಸುತ್ತಿದ್ದುದು ಏನನ್ನು ಎಂಬುದನ್ನು ಅಲ್ಲಾಹನು ಶೀಘ್ರವೇ ಅವರಿಗೆ ತಿಳಿಸಲಿದ್ದಾನೆ

[14] ಗ್ರಂಥದವರೇ, (ಇದೀಗ) ನಿಮ್ಮ ಬಳಿಗೆ ನಮ್ಮ ದೂತರು ಬಂದಿದ್ದಾರೆ. ಗ್ರಂಥದಲ್ಲಿನ, ನೀವು ಅಡಗಿಸಿಟ್ಟಿದ್ದ ಹಲವು ವಿಷಯಗಳನ್ನು ಅವರು ನಿಮಗೆ ಸ್ಪಷ್ಟ ಪಡಿಸುತ್ತಿದ್ದಾರೆ ಮತ್ತು (ನಿಮ್ಮ ತಪ್ಪುಗಳಲ್ಲಿ) ಹೆಚ್ಚಿನವುಗಳನ್ನು ಅವರು ಕ್ಷಮಿಸುತ್ತಿದ್ದಾರೆ. ನಿಜಕ್ಕೂ ನಿಮ್ಮ ಬಳಿಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಬಹಳ ಸ್ಪಷ್ಟವಾದ ಒಂದು ಗ್ರಂಥವು ಬಂದಿದೆ

[15] ಈ ಮೂಲಕ ಅಲ್ಲಾಹನು, ಅವನ ಮೆಚ್ಚುಗೆಯನ್ನು ಬಯಸುವವರಿಗೆ ಶಾಂತಿಯ ಮಾರ್ಗಗಳನ್ನು ತೋರಿಸುತ್ತಾನೆ ಮತ್ತು ತನ್ನ ಆದೇಶದ ಮೂಲಕ ಅವರನ್ನು ಕತ್ತಲಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಅವರಿಗೆ ನೇರ ಮಾರ್ಗವನ್ನು ತೋರಿಸಿಕೊಡುತ್ತಾನೆ

[16] ಖಂಡಿತವಾಗಿಯೂ ಮರ್ಯಮರ ಪುತ್ರ ಮಸೀಹರೇ ಅಲ್ಲಾಹನೆಂದು ವಾದಿಸಿದವರು ಧಿಕ್ಕಾರಿಗಳಾಗಿ ಬಿಟ್ಟರು. ಹೇಳಿರಿ; ಒಂದು ವೇಳೆ ಅಲ್ಲಾಹನು ಮರ್ಯಮರ ಪುತ್ರ ಈಸಾರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಎಲ್ಲರನ್ನೂ ನಾಶ ಮಾಡ ಬಯಸಿದರೆ, ಅವನನ್ನು ಯಾರು ತಾನೇ ತಡೆಯಬಲ್ಲರು? ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಅಧಿಕಾರವು ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[17] ಯಹೂದಿಗಳು ಮತ್ತು ಕ್ರೈಸ್ತರು – ನಾವು ಅಲ್ಲಾಹನ ಪುತ್ರರು ಮತ್ತು ಅವನ ಪ್ರೀತಿ ಪಾತ್ರರು – ಎನ್ನುತ್ತಾರೆ. ಹೇಳಿರಿ; ಹಾಗಾದರೆ ನಿಮ್ಮ ಪಾಪಗಳಿಗಾಗಿ ಅವನು ನಿಮ್ಮನ್ನು ಶಿಕ್ಷಿಸುವುದೇಕೆ? ನಿಜವಾಗಿ ನೀವು, ಅವನು (ಅಲ್ಲಾಹನು) ಸೃಷ್ಟಿಸಿರುವ ಮಾನವರಾಗಿರುವಿರಿ. ಅವನಂತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವಿನ ಎಲ್ಲವುಗಳ ಆಧಿಪತ್ಯವು ಅಲ್ಲಾಹನಿಗೇ ಸೇರಿವೆ. ಅಂತಿಮ ಮರಳಿಕೆ ಕೂಡಾ ಅವನ ಕಡೆಗೇ ಇವೆ

[18] ಗ್ರಂಥದವರೇ, ಇದೋ ನಿಮ್ಮ ಬಳಿಗೆ ನಮ್ಮ ದೂತರು ಬಂದು ಬಿಟ್ಟಿದ್ದಾರೆ ಮತ್ತು ನಿಮಗೆ ಸ್ಪಷ್ಟ ಬೋಧನೆ ನೀಡುತ್ತಿದ್ದಾರೆ. ದೇವದೂತರ ಆಗಮನ ಸರಣಿಯು (ಬಹುಕಾಲ) ಸ್ಥಗಿತಗೊಂಡ ಕಾರಣ ನೀವು, ಸುವಾರ್ತೆ ನೀಡುವ ಅಥವಾ ಎಚ್ಚರಿಕೆ ನೀಡುವ ಯಾರೂ ನಮ್ಮ ಬಳಿಗೆ ಬರಲಿಲ್ಲವೆಂದು ಹೇಳಬಾರದೆಂದು, ಇದೋ ನಿಮ್ಮ ಬಳಿಗೆ ಬಂದು ಬಿಟ್ಟಿದ್ದಾರೆ – ಸುವಾರ್ತೆ ನೀಡುವವರು ಮತ್ತು ಎಚ್ಚರಿಕೆ ನೀಡುವವರು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[19] (ನೆನಪಿಸಿಕೊಳ್ಳಿರಿ) ಮೂಸಾ, ತಮ್ಮ ಜನಾಂಗದವರಿಗೆ ಹೇಳಿದ್ದರು; ನನ್ನ ಜನಾಂಗದವರೇ, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ಅವನು ನಿಮ್ಮ ನಡುವೆ ದೂತರುಗಳನ್ನು ನೇಮಿಸಿದನು, ನಿಮ್ಮನ್ನು ಅವನು ದೊರೆಗಳಾಗಿ ಮಾಡಿದನು ಮತ್ತು ಸರ್ವ ಲೋಕಗಳಲ್ಲಿ ಬೇರೆ ಯಾರಿಗೂ ನೀಡಿಲ್ಲದ್ದನ್ನು ನಿಮಗೆ ನೀಡಿದನು

[20] ನನ್ನ ಜನಾಂಗದವರೇ, ಅಲ್ಲಾಹನು ನಿಮಗೆಂದೇ ಬರೆದಿಟ್ಟಿರುವ ಪಾವನ ನೆಲವನ್ನು ಪ್ರವೇಶಿಸಿರಿ, ಬೆನ್ನು ತಿರುಗಿಸಿ ಹಿಂದಿರುಗಬೇಡಿ – ಅನ್ಯಥಾ ನೀವು ಸೋತವರಾಗಿ ಮರಳುವಿರಿ

[21] ಅವರು ಹೇಳಿದರು; ಓ ಮೂಸಾ, ಅಲ್ಲಿ ತುಂಬಾ ಬಲಿಷ್ಠರ ಒಂದು ಜನಾಂಗವಿದೆ. ಅವರು ಅಲ್ಲಿಂದ ಹೊರಟು ಹೋಗುವ ತನಕ ನಾವು ಆ ನಾಡನ್ನು ಪ್ರವೇಶಿಸಲಾರೆವು. ಅವರು ಅಲ್ಲಿಂದ ಹೊರಟು ಹೋದರೆ ಮಾತ್ರ, ನಾವು ಖಂಡಿತ ಅಲ್ಲಿಗೆ ಪ್ರವೇಶಿಸುವೆವು

[22] ಹೀಗೆ ಭೀತರಾಗಿದ್ದ ಆ ಜನರ ನಡುವೆ, ಅಲ್ಲಾಹನ ಅನುಗ್ರಹಗಳಿಗೆ ಪಾತ್ರರಾಗಿದ್ದ ಇಬ್ಬರು ಹೇಳಿದರು; ನೀವು ಅವರ ಮೇಲೆ, ಬಾಗಿಲಿಂದಲೇ ದಾಳಿ ಮಾಡಿರಿ. ನೀವು ಅದರೊಳಗೆ ಹೊಕ್ಕಾಗ ವಿಜಯಿಗಳಾಗುವಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಡಿರಿ

[23] ಅವರು ಹೇಳಿದರು; ಓ ಮೂಸಾ, ಅವರು (ಶತ್ರುಗಳು) ಅಲ್ಲಿರುವ ತನಕ ನಾವಂತೂ ಆ ಸ್ಥಳವನ್ನು ಪ್ರವೇಶಿಸಲಾರೆವು. ನೀವು ಮತ್ತು ನಿಮ್ಮ ದೇವರು ಹೋಗಿರಿ ಮತ್ತು ನೀವಿಬ್ಬರು ಹೋರಾಡಿರಿ. ನಾವು ಇಲ್ಲೇ ಕುಳಿತಿರುತ್ತೇವೆ

[24] ಅವರು (ಮೂಸಾ) ಹೇಳಿದರು ; ನನ್ನೊಡೆಯಾ, ನನಗಂತೂ ನನ್ನ ಹಾಗೂ ನನ್ನ ಸಹೋದರನ ಹೊರತು ಬೇರೆ ಯಾರ ಮೇಲೂ ನಿಯಂತ್ರಣವಿಲ್ಲ. ನೀನು ನಮ್ಮನ್ನು ಹಾಗೂ ಈ ಅವಿಧೇಯ ಜನಾಂಗವನ್ನು ಪ್ರತ್ಯೇಕಿಸಿಬಿಡು

[25] ಅವನು (ಅಲ್ಲಾಹನು) ಹೇಳಿದನು; ಈ ಭೂಭಾಗವು ನಲ್ವತ್ತು ವರ್ಷಗಳ ತನಕ ಇವರ ಪಾಲಿಗೆ ನಿಷಿದ್ಧವಾಗಿದೆ. ಆ ತನಕ ಅವರು ಭೂಮಿಯಲ್ಲಿ ಅಲೆಯುತ್ತಲೇ ಇರುವರು. ಅವಿಧೇಯ ಜನಾಂಗದ ಕುರಿತು ನೀವು ವಿಷಾದಿಸಬೇಡಿ

[26] ನೀವು ಅವರಿಗೆ ಆದಮರ ಇಬ್ಬರು ಪುತ್ರರ ನೈಜ ಘಟನೆಯನ್ನು ತಿಳಿಸಿರಿ. ಅವರಿಬ್ಬರೂ ಬಲಿದಾನ ನೀಡಿದಾಗ, ಅವರ ಪೈಕಿ ಒಬ್ಬನ ಬಲಿದಾನವು ಸ್ವೀಕೃತವಾಯಿತು ಮತ್ತು ಇನ್ನೊಬ್ಬನದು ಸ್ವೀಕೃತವಾಗಲಿಲ್ಲ. ಅವನು – ‘‘ನಾನು ಖಂಡಿತ ನಿನ್ನನ್ನು ವಧಿಸುತ್ತೇನೆ’’ ಎಂದನು. ಅವನು (ಮೊದಲನೆಯವನು) ಉತ್ತರಿಸಿದನು; ‘‘ಅಲ್ಲಾಹನಂತು, (ಯಾವುದನ್ನೂ) ಧರ್ಮನಿಷ್ಠರಿಂದ ಮಾತ್ರ ಸ್ವೀಕರಿಸುತ್ತಾನೆ‘‘

[27] ‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’

[28] ‘‘ಖಂಡಿತವಾಗಿಯೂ ನೀನೀಗ ನನ್ನ ಪಾಪಗಳನ್ನೂ ನಿನ್ನ ಪಾಪಗಳನ್ನೂ ಹೊತ್ತು ನರಕವಾಸಿಗಳ ಸಾಲಿಗೆ ಸೇರಬೇಕೆಂದು ನಾನು ಬಯಸುತ್ತೇನೆ. ಅಕ್ರಮಿಗಳಿಗೆ ಇರುವುದು ಅದೇ ಪ್ರತಿಫಲ.’’

[29] ಕೊನೆಗೆ ಅವನ ಚಿತ್ತವು ತನ್ನ ಸಹೋದರನ ಹತ್ಯೆಗೆ ಅವನನ್ನು ಸಿದ್ಧಗೊಳಿಸಿತು. ಅವನು ತನ್ನ ಸಹೋದರನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನೂ ಕಳೆದುಕೊಂಡವರ ಸಾಲಿಗೆ ಸೇರಿದನು

[30] ಆ ಬಳಿಕ ಅಲ್ಲಾಹನು (ಅವನೆಡೆಗೆ) ಒಂದು ಕಾಗೆಯನ್ನು ಕಳುಹಿಸಿದನು. ತನ್ನ ಸಹೋದರನ ಶವವನ್ನು ಹೇಗೆ ಅಡಗಿಸಬೇಕೆಂದು ಆತನಿಗೆ ತೋರಿಸಲು ಅದು ನೆಲವನ್ನು ಕೊರೆಯುತ್ತಿತ್ತು . ಆಗ ಅವನು ಹೇಳಿದನು; ’’ಅಯ್ಯೋ ನನ್ನ ಅವಸ್ಥೆ! ನನ್ನ ಸಹೋದರನ ಶವವನ್ನು ಅಡಗಿಸುವ ವಿಷಯದಲ್ಲಿ ಈ ಕಾಗೆಯಂತಾಗಲಿಕ್ಕೂ ನನ್ನಿಂದಾಗಲಿಲ್ಲ’’. ಹೀಗೆ ಅವನು, ಪಶ್ಚಾತ್ತಾಪ ಪಡುವವರ ಸಾಲಿಗೆ ಸೇರಿದನು

[31] ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ

[32] ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ

[33] ನಿಮ್ಮ ನಿಯಂತ್ರಣಕ್ಕೆ ಬರುವ ಮುನ್ನವೇ ಪಶ್ಚಾತ್ತಾಪ ಪಟ್ಟವರು ಇದಕ್ಕೆ ಹೊರತಾಗಿದ್ದಾರೆ. ನಿಮಗೆ ತಿಳಿದಿರಲಿ! ಅಲ್ಲಾಹನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[34] ವಿಶ್ವಾಸಿಗಳೇ, ಸದಾ ಅಲ್ಲಾಹನ ಭಯ ಉಳ್ಳವರಾಗಿರಿ ಹಾಗೂ ಅವನಿಗೆ ಹತ್ತಿರವಾಗುವ ದಾರಿಯನ್ನು ಹುಡುಕುತ್ತಲಿರಿ ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ – ನೀವು ವಿಜಯಿಗಳಾಗಲು

[35] ಖಂಡಿತವಾಗಿಯೂ ಭೂಮಿಯಲ್ಲಿರುವ ಎಲ್ಲವೂ ಧಿಕ್ಕಾರಿಗಳ ಬಳಿ ಇದ್ದರೆ ಮಾತ್ರವಲ್ಲ, ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಅವರ ಬಳಿ ಇದ್ದರೆ ಮತ್ತು ಅವರು ಅದೆಲ್ಲವನ್ನೂ ಪರಿಹಾರವಾಗಿ ಕೊಟ್ಟು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಬಯಸಿದರೆ, ಅವರಿಂದ ಅದನ್ನು ಸ್ವೀಕರಿಸಲಾಗದು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ

[36] ಅವರು ನರಕಾಗ್ನಿಯಿಂದ ಹೊರ ಹೋಗಲು ಹಂಬಲಿಸುವರು. ಆದರೆ ಅದರಿಂದ ಹೊರ ಹೋಗಲು ಅವರಿಗೆಂದೂ ಸಾಧ್ಯವಾಗದು. ಅವರಿಗಿರುವುದು – ಶಾಶ್ವತವಾದ ಯಾತನೆ

[37] ಕಳವು ಮಾಡಿದ ಪುರುಷ ಮತ್ತು ಕಳವು ಮಾಡಿದ ಸ್ತ್ರೀ – ಅವರ ಕೈ ಕತ್ತರಿಸಿರಿ. ಇದು ಅವರದೇ ಗಳಿಕೆಯ ಪ್ರತಿಫಲ (ಮತ್ತು) ಅಲ್ಲಾಹನ ಕಡೆಯಿಂದ ಒಂದು ಪಾಠವಾಗಿದೆ. ಅಲ್ಲಾಹನಂತು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[38] ಯಾರು ತಾನು ಅಕ್ರಮವೆಸಗಿದ ಬಳಿಕ (ತನ್ನನ್ನು) ತಿದ್ದಿಕೊಳ್ಳುವನೋ ಅವನ ಪಶ್ಚಾತ್ತಾಪವನ್ನು ಖಂಡಿತವಾಗಿಯೂ ಅಲ್ಲಾಹನು ಸ್ವೀಕರಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[39] ನಿಮಗೆ ತಿಳಿದಿಲ್ಲವೇ, ಆಕಾಶಗಳ ಮತ್ತು ಭೂಮಿಯ ಅಧಿಕಾರವೆಲ್ಲವೂ ಅಲ್ಲಾಹನಿಗೆ ಸೇರಿದೆ ಎಂದು? ಅವನು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[40] ದೂತರೇ, ನಿಮ್ಮನ್ನು ದುಃಖಕ್ಕೀಡು ಮಾಡಬಾರದು – ‘ನಾವು ನಂಬಿದೆವು’ ಎಂದು ತಮ್ಮ ಬಾಯಿಯಿಂದ ಹೇಳುತ್ತಾ ತಮ್ಮ ಮನಸ್ಸಿನಿಂದ ನಂಬಿಕೆ ಇಟ್ಟಿಲ್ಲದ ಜನರ ಪೈಕಿ, ಧಿಕ್ಕಾರದಲ್ಲಿ ಹುರುಪು ತೋರುವವರು ಮತ್ತು ಯಹೂದಿಗಳ ಪೈಕಿ ಮಿಥ್ಯದ ಪರವಾಗಿ (ಗುಟ್ಟನ್ನು) ಆಲಿಸುವವರು – ಅವರು ನಿಮ್ಮ ಬಳಿಗೆ ಬಂದಿಲ್ಲದ ಇನ್ನೊಂದು ಪಂಗಡದ ಪರವಾಗಿ (ಗುಟ್ಟನ್ನು) ಆಲಿಸುತ್ತಿದ್ದಾರೆ (ಬೇಹುಗಾರಿಕೆ ನಡೆಸುತ್ತಿದ್ದಾರೆ). ಅವರು ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ವಿಕೃತಗೊಳಿಸುತ್ತಾರೆ. ಅವರು (ಜನರೊಡನೆ) ನಿಮಗೆ ಇಂತಹದನ್ನು ನೀಡಲಾದರೆ ಸ್ವೀಕರಿಸಿರಿ ಮತ್ತು ಅದನ್ನು ನಿಮಗೆ ನೀಡದಿದ್ದರೆ ನೀವು ದೂರವಿರಿ ಎಂದು ಹೇಳುತ್ತಾರೆ. ನಿಜವಾಗಿ ಅಲ್ಲಾಹನು ಯಾರನ್ನು ಪರೀಕ್ಷಿಸಬಯಸುತ್ತಾನೋ ಅವರ ವಿಷಯದಲ್ಲಿ ಅಲ್ಲಾಹನಿಗೆದುರಾಗಿ ನಿಮಗೆ ಯಾವ ಅಧಿಕಾರವೂ ಇರುವುದಿಲ್ಲ. ಅವರು ಎಂಥವರೆಂದರೆ, ಅಲ್ಲಾಹನು ಅವರ ಮನಸ್ಸುಗಳನ್ನು ನಿರ್ಮಲ ಗೊಳಿಸಬಯಸುವುದಿಲ್ಲ. ಅವರಿಗೆ ಈ ಲೋಕದಲ್ಲೇ ಅಪಮಾನ ಕಾದಿದೆ ಮತ್ತು ಪರಲೋಕದಲ್ಲಂತೂ ಅವರಿಗೆ ಘೋರ ಯಾತನೆ ಇದೆ

[41] ಅವರು ಮಿಥ್ಯದ ಪರವಾಗಿ ಬೇಹುಗಾರಿಕೆ ನಡೆಸುವವರು ಮತ್ತು ಅಕ್ರಮ ಸಂಪಾದನೆಯನ್ನೇ ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ ಬಂದರೆ ನೀವು ಅವರ ನಡುವೆ ತೀರ್ಮಾನ ಮಾಡಿರಿ ಅಥವಾ ಅವರನ್ನು ಕಡೆಗಣಿಸಿ ಬಿಡಿರಿ. ನೀವು ಅವರನ್ನು ಕಡೆಗಣಿಸಿ ಬಿಟ್ಟರೂ ಅವರು ನಿಮಗೆ ಯಾವ ಹಾನಿಯನ್ನೂ ಮಾಡಲಾರರು. ಇನ್ನು ನೀವು ತೀರ್ಮಾನ ಮಾಡುವುದಾದಲ್ಲಿ ಅವರ ನಡುವೆ ನ್ಯಾಯೋಚಿತ ತೀರ್ಮಾನವನ್ನೇ ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ಪಾಲಿಸುವವರನ್ನು ಪ್ರೀತಿಸುತ್ತಾನೆ

[42] ಅವರ ಬಳಿ, ಅಲ್ಲಾಹನ ಆದೇಶವಿರುವ ತೌರಾತ್ ಗ್ರಂಥವಿರುವಾಗ ಅವರು ನಿಮ್ಮನ್ನು ತೀರ್ಪುಗಾರರಾಗಿ ಮಾಡುವುದಾದರೂ ಹೇಗೆ? ಆದರೆ ಆ ಬಳಿಕ ಅವರು ತಿರುಗಿ ನಿಲ್ಲುತ್ತಾರೆ – ಇನ್ನು ಅವರು ನಂಬುವವರಂತೂ ಅಲ್ಲ

[43] ಖಂಡಿತವಾಗಿಯೂ ತೌರಾತ್‌ಅನ್ನು ನಾವೇ ಇಳಿಸಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ನಮ್ಮ ಆಜ್ಞಾಪಾಲಕರಾಗಿದ್ದ ದೇವದೂತರುಗಳು ಅದರ (ತೌರಾತ್‌ನ) ಮೂಲಕವೇ ಯಹೂದಿಗಳಿಗೆ ಆದೇಶಗಳನ್ನು ನೀಡುತ್ತಿದ್ದರು. (ಅವರಲ್ಲಿನ) ದೇವಭಕ್ತರು ಮತ್ತು ವಿದ್ವಾಂಸರು ಕೂಡ ಹಾಗೆಯೇ ಮಾಡುತ್ತಿದ್ದರು. ಏಕೆಂದರೆ ಅವರನ್ನು ಅಲ್ಲಾಹನ ಗ್ರಂಥದ ರಕ್ಷಕರಾಗಿ ಮಾಡಲಾಗಿತ್ತು ಮತ್ತು ಅವರು ಅದರ ಪರ ಸಾಕ್ಷಿಗಳಾಗಿದ್ದರು. ನೀವು ಜನರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಹಾಗೆಯೇ ನೀವು ನನ್ನ ವಚನಗಳನ್ನು ಸಣ್ಣ ಬೆಲೆಗೆ ಮಾರಬೇಡಿ. ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಧಿಕ್ಕಾರಿಗಳಾಗಿರುತ್ತಾರೆ

[44] ಅದರಲ್ಲಿ (ತೌರಾತ್‌ನಲ್ಲಿ) ನಾವು ಅವರಿಗೆ – ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ ಮತ್ತು ಹಲ್ಲಿಗೆ ಹಲ್ಲು ಪರಿಹಾರವೆಂದು ಮತ್ತು ಗಾಯಗಳಿಗೂ ಪರಿಹಾರವಿದೆ ಎಂದು, ಹಾಗೆಯೇ ಪ್ರತೀಕಾರದ ಹಕ್ಕನ್ನು ಕ್ಷಮಿಸಿ ಬಿಟ್ಟವನಿಗೆ ಅದಕ್ಕಾಗಿ ಪರಿಹಾರ ಧನ ಉಂಟೆಂದು ವಿಧಿಸಿದ್ದೆವು. ಇನ್ನು ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಅಕ್ರಮಿಗಳಾಗಿರುತ್ತಾರೆ

[45] ಅವರ (ಗತಕಾಲದ ದೂತರುಗಳ) ಹೆಜ್ಜೆ ಗುರುತುಗಳ ಮೇಲೆ ನಾವು ಮರ್ಯಮರ ಪುತ್ರ ಈಸಾರನ್ನು ಕಳಿಸಿದೆವು – ತೌರಾತ್‌ನ ಪೈಕಿ ಅವರ (ಯಹೂದಿಗಳ) ಬಳಿ ಉಳಿದಿದ್ದ ಭಾಗವನ್ನು ದೃಢೀಕರಿಸುವವರಾಗಿ. ಹಾಗೆಯೇ ನಾವು ಅವರಿಗೆ (ಈಸಾರಿಗೆ) ಇಂಜೀಲ್ ಅನ್ನು ನೀಡಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಅದು ತೌರಾತ್‌ನ ಪೈಕಿ ಅವರ ಬಳಿ ಉಳಿದಿರುವ ಭಾಗವನ್ನು ಸಮರ್ಥಿಸುತ್ತದೆ ಮತ್ತು ಅದು ದೇವಭಕ್ತರ ಪಾಲಿಗೆ ಮಾರ್ಗದರ್ಶಿ ಹಾಗೂ ಉಪದೇಶವಾಗಿದೆ

[46] ಇಂಜೀಲ್ ಗ್ರಂಥದವರು, ಅಲ್ಲಾಹನು ಅದರಲ್ಲಿ ಇಳಿಸಿಕೊಟ್ಟಿರುವ (ನಿಯಮ) ಪ್ರಕಾರ ತೀರ್ಪು ನೀಡಲಿ. ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮದಂತೆ ತೀರ್ಪು ನೀಡದವರು ಅವಿಧೇಯರಾಗಿದ್ದಾರೆ

[47] (ದೂತರೇ,) ನಾವೀಗ ನಿಮಗೆ ಸತ್ಯವಿರುವ ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದು (ಗತಕಾಲದ) ಗ್ರಂಥದ ಪೈಕಿ ಜನರ ಬಳಿ ಉಳಿದಿರುವುದನ್ನು ಸಮರ್ಥಿಸುವ ಮತ್ತು ಅದನ್ನು ಕಾಪಾಡುವ ಗ್ರಂಥವಾಗಿದೆ. ನೀವಿನ್ನು ಅಲ್ಲಾಹನು ಇಳಿಸಿರುವ ನಿಯಮ ಪ್ರಕಾರವೇ ಅವರ ನಡುವೆ ತೀರ್ಪು ನೀಡಿರಿ. ನಿಮ್ಮ ಬಳಿಗೆ ಸತ್ಯವು ಬಂದಿರುವಾಗ, ನೀವು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ನಾವು ನಿಮ್ಮ ಪೈಕಿ ಪ್ರತಿಯೊಬ್ಬರಿಗೂ (ಪ್ರತಿಯೊಂದು ಸಮುದಾಯಕ್ಕೂ) ನಿರ್ದಿಷ್ಟ ನಿಯಮ ಹಾಗೂ ದಾರಿಯೊಂದನ್ನು ನಿಗದಿ ಪಡಿಸಿದ್ದೇವೆ. ಅಲ್ಲಾಹನು ಬಯಸಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯ ವಾಗಿಸುತ್ತಿದ್ದನು. ಆದರೆ ಅವನು, ನಿಮಗೆ ಏನನ್ನು ನೀಡಿರುವನೋ ಅದರ ಮೂಲಕವೇ ನಿಮ್ಮನ್ನು ಪರೀಕ್ಷಿಸಬಯಸುತ್ತಾನೆ. ನೀವೀಗ ಒಳಿತಿನಲ್ಲಿ ಪರಸ್ಪರ ಸ್ಪರ್ಧಿಸಿರಿ. ಕೊನೆಗೆ ನೀವೆಲ್ಲರೂ ಅಲ್ಲಾಹನೆಡೆಗೇ ಮರಳಲಿಕ್ಕಿದೆ – ಆಗ ಅವನು, ನೀವು ಭಿನ್ನತೆ ತಾಳಿದ್ದ ವಿಷಯಗಳ ಕುರಿತು ನಿಮಗೆ ತಿಳಿಸುವನು

[48] ನೀವಿನ್ನು ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮಕ್ಕನುಸಾರವಾಗಿಯೇ ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅಲ್ಲಾಹನು ನಿಮಗೆ ಇಳಿಸಿಕೊಟ್ಟಿರುವ ನಿಯಮದ ಯಾವುದೇ ಭಾಗದ ವಿಷಯದಲ್ಲಿ ಅವರು ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರ ವಹಿಸಿರಿ. ನಿಮಗೆ ತಿಳಿದಿರಲಿ; ಅಲ್ಲಾಹನು ಅವರ ಕೆಲವು ಪಾಪಗಳ ಕಾರಣ ಅವರನ್ನು ದಂಡಿಸ ಬಯಸುತ್ತಾನೆ. ನಿಜಕ್ಕೂ ಜನರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ

[49] ಅವರೇನು, ಅಜ್ಞಾನ ಕಾಲದ ನಿಯಮವನ್ನು ಅಪೇಕ್ಷಿಸುತ್ತಿದ್ದಾರೆಯೇ? ದೃಢ ವಿಶ್ವಾಸ ಉಳ್ಳವರ ಪಾಲಿಗೆ ಅಲ್ಲಾಹನ ನಿಯಮಕ್ಕಿಂತ ಉತ್ತಮ ನಿಯಮ ಬೇರಾವುದಿದೆ

[50] ವಿಶ್ವಾಸಿಗಳೇ, ಯಹೂದಿಗಳು ಮತ್ತು ಕ್ರೈಸ್ತರನ್ನು ನೀವು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ಅವರು ಪರಸ್ಪರರ ಪಾಲಿಗೆ ಮಾತ್ರ ಪೋಷಕರಾಗಿರುತ್ತಾರೆ. ನಿಮ್ಮ ಪೈಕಿ, ಅವರನ್ನು ತಮ್ಮ ಪೋಷಕರಾಗಿ ನೆಚ್ಚಿಕೊಂಡವನು ಖಂಡಿತ ಅವರಲ್ಲೊಬ್ಬನಾಗಿ ಬಿಡುವನು. ಅಕ್ರಮಿಗಳಿಗಂತೂ ಅಲ್ಲಾಹನು ಖಂಡಿತ ಸರಿ ದಾರಿ ತೋರಿಸುವುದಿಲ್ಲ

[51] ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಅವರೆಡೆಗೆ ಧಾವಿಸಿ ಹೋಗುವುದನ್ನು ನೀವು ಕಾಣುವಿರಿ. ‘‘ನಮ್ಮನ್ನು ಕಾಲಚಕ್ರವು ಬಾಧಿಸೀತೆಂಬ (ಆಪತ್ಕಾಲ ಬಂದೀತೆಂಬ) ಭಯ ನಮಗಿದೆ‘‘ ಎಂದು ಅವರು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು (ಶೀಘ್ರದಲ್ಲೇ) ವಿಜಯವನ್ನು ತಂದು ಕೊಡುವ ಅಥವಾ ತನ್ನ ಕಡೆಯಿಂದ ಒಂದು ವಿಶೇಷ ಆದೇಶವನ್ನು ಕಳುಹಿಸುವ ಸಾಧ್ಯತೆ ಇದೆ. ಆಗ ಅವರು, ತಮ್ಮ ಮನಸ್ಸುಗಳೊಳಗೆ ಬಚ್ಚಿಟ್ಟಿರುವ ವಿಷಯಗಳ ಕುರಿತು ಪಶ್ಚಾತ್ತಾಪ ಪಡಬಹುದು

[52] (ಅಂಥವರ ಕುರಿತು) ವಿಶ್ವಾಸಿಗಳು ‘‘ನಾವು ನಿಮ್ಮ ಜೊತೆಗಿದ್ದೇವೆಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಿದ್ದವರು ಇವರೇ?‘‘ ಎಂದು ಕೇಳುತ್ತಾರೆ. ನಿಜವಾಗಿ ಅವರ ಕರ್ಮಗಳೆಲ್ಲವೂ ವ್ಯರ್ಥವಾದವು ಮತ್ತು ಅವರು ಎಲ್ಲವನ್ನೂ ಕಳೆದು ಕೊಂಡವರಾದರು

[53] ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೂ ತನ್ನ ಧರ್ಮದಿಂದ ವಿಮುಖನಾಗಿದ್ದರೆ (ಅವನಿಗೆ ತಿಳಿದಿರಲಿ;) ಅಲ್ಲಾಹನು ಬಹು ಬೇಗನೇ ಇನ್ನೊಂದು ಜನಾಂಗವನ್ನು ತರುವನು – ಅವನು ಅವರನ್ನು ಪ್ರೀತಿಸುತ್ತಿರುವನು ಮತ್ತು ಅವರು ಅವನನ್ನು ಪ್ರೀತಿಸುತ್ತಿರುವರು. ಅವರು ವಿಶ್ವಾಸಿಗಳ ಪಾಲಿಗೆ ಸೌಮ್ಯರಾಗಿರುವರು ಮತ್ತು ಧಿಕ್ಕಾರಿಗಳ ಪಾಲಿಗೆ ಕಠಿಣರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಾಗಿರುವರು ಮತ್ತು ಮೂದಲಿಸುವವರ ಮೂದಲಿಕೆಗೆ ಅವರು ಅಂಜಲಾರರು. ಇದೆಲ್ಲಾ ಅಲ್ಲಾಹನ ಅನುಗ್ರಹ. ಅವನು ಇದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನಂತು ವಿಶಾಲ ಜ್ಞಾನ ಉಳ್ಳವನಾಗಿದ್ದಾನೆ

[54] ನಿಜವಾಗಿ ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ಮಾತ್ರ ನಿಮ್ಮ ಪೋಷಕರಾಗಿದ್ದಾರೆ. ಅವರು (ವಿಶ್ವಾಸಿಗಳು) ನಮಾಝ್ ಅನ್ನು ಸ್ಥಾಪಿಸುವವರು, ಝಕಾತ್ ಪಾವತಿಸುವವರು ಮತ್ತು (ಅಲ್ಲಾಹನೆದುರು) ಬಾಗುವವರಾಗಿರುತ್ತಾರೆ

[55] ಅಲ್ಲಾಹ್ ಮತ್ತು ಅವನ ದೂತರನ್ನು ಹಾಗೂ ವಿಶ್ವಾಸಿಗಳನ್ನು ಪೋಷಕರಾಗಿ ನೆಚ್ಚಿಕೊಂಡವರು (ತಿಳಿದಿರಲಿ;) – ಅಲ್ಲಾಹನ ಪಡೆಯವರೇ ಖಂಡಿತ ವಿಜಯಿಗಳಾಗುವರು

[56] ವಿಶ್ವಾಸಿಗಳೇ, ನಿಮಗಿಂತ ಮುಂಚೆ ಗ್ರಂಥ ನೀಡಲಾಗಿದ್ದವರ ಪೈಕಿ, ನಿಮ್ಮ ಧರ್ಮವನ್ನು ಕೇವಲ ತಮಾಷೆಯಾಗಿ ಹಾಗೂ ಆಟವಾಗಿ ಕಾಣುವವರನ್ನು ಮತ್ತು ಧಿಕ್ಕಾರಿಗಳನ್ನು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ನೀವು ವಿಶ್ವಾಸಿಗಳಾಗಿದ್ದರೆ, ಅಲ್ಲಾಹನ ಭಯ ಉಳ್ಳವರಾಗಿರಿ

[57] ನೀವು ನಮಾಝಿಗೆ ಕರೆ ನೀಡುವಾಗ ಅವರು ಅದನ್ನು ಒಂದು ತಮಾಷೆ ಹಾಗೂ ಆಟವೆಂಬಂತೆ ಕಾಣುತ್ತಾರೆ – ಏಕೆಂದರೆ ಅವರು ಅರ್ಥ ಮಾಡಿಕೊಳ್ಳುವ ಜನರಲ್ಲ

[58] ನೀವು ಹೇಳಿರಿ: ಗ್ರಂಥದವರೇ, ನಾವು ಅಲ್ಲಾಹನಲ್ಲಿ, ಅವನು ನಮ್ಮೆಡೆಗೆ ಇಳಿಸಿಕೊಟ್ಟಿರುವ ಸಂದೇಶದಲ್ಲಿ ಮತ್ತು ಈ ಹಿಂದೆ ಇಳಿಸಲಾಗಿದ್ದ ಸಂದೇಶದಲ್ಲಿ ನಂಬಿಕೆ ಉಳ್ಳವರು ಎಂಬುದನ್ನು ಬಿಟ್ಟರೆ ನಿಮಗೆ ನಮ್ಮ ವಿರುದ್ಧ ಇರುವ ಹಗೆತನವಾದರೂ ಏನು? ನಿಜವಾಗಿ ಅವರಲ್ಲಿ ಹೆಚ್ಚಿನವರು ಅವಿಧೇಯರು

[59] ನೀವು ಹೇಳಿರಿ; ಅಲ್ಲಾಹನ ಬಳಿ ಇದಕ್ಕಿಂತಲೂ (ಅವಿಧೇಯರಿಗಿಂತಲೂ) ಕೆಟ್ಟ ನೆಲೆ ಯಾರದೆಂದು ನಾನು ನಿಮಗೆ ತಿಳಿಸಲೇ? ಅಲ್ಲಾಹನಿಂದ ನಿಂದಿತರಾದವರು, ಅವನ ಕೋಪಕ್ಕೆ ಪಾತ್ರರಾದವರು ಹಾಗೂ ಅವರ ಪೈಕಿ ಅವನು ಯಾರನ್ನು ಕೋತಿಗಳಾಗಿಯೂ, ಹಂದಿಗಳಾಗಿಯೂ ಮಾಡಿದನೋ ಅವರು ಮತ್ತು ಶೈತಾನನ ದಾಸರಾದವರು. ಅವರ ನೆಲೆಯೇ ತೀರಾ ನೀಚ ನೆಲೆಯಾಗಿರುವುದು ಮತ್ತು ಅವರೇ ನೇರ ಮಾರ್ಗದಿಂದ ತುಂಬಾ ದೂರ ಹೊರಟು ಹೋದವರಾಗಿದ್ದಾರೆ

[60] ಅವರು ನಿಮ್ಮ ಬಳಿ ಬಂದಾಗ, ನಾವು ನಂಬಿದೆವು ಎನ್ನುತ್ತಾರೆ. ನಿಜವಾಗಿ ಅವರು ಧಿಕ್ಕಾರದೊಂದಿಗೇ ಒಳ ಬಂದಿದ್ದರು ಮತ್ತು ಅದರೊಂದಿಗೇ ಮರಳಿ ಹೋದರು. ಅವರು ಬಚ್ಚಿಟ್ಟಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು

[61] ಅವರಲ್ಲಿ ಹೆಚ್ಚಿನವರು ಪಾಪ ಹಾಗೂ ದ್ರೋಹದ ಕೆಲಸಗಳಲ್ಲಿ ಉತ್ಸಾಹ ತೋರುವುದನ್ನು ಮತ್ತು ನಿಷಿದ್ಧ ವಸ್ತುಗಳನ್ನು ತಿನ್ನುವುದನ್ನು ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದು

[62] (ಅವರ) ಧಾರ್ಮಿಕ ನೇತಾರರು ಮತ್ತು ವಿದ್ವಾಂಸರು ಅವರು ಪಾಪದ ಮಾತುಗಳನ್ನಾಡದಂತೆ ಮತ್ತು ನಿಷಿದ್ಧವಾಗಿರುವುದನ್ನು ತಿನ್ನದಂತೆ ಅವರನ್ನೇಕೆ ತಡೆಯುವುದಿಲ್ಲ? ಅವರು ರಚಿಸುತ್ತಿರುವುದೆಲ್ಲವೂ ತೀರಾ ಕೆಟ್ಟದು

[63] ಅಲ್ಲಾಹನ ಕೈಗಳು ಕಟ್ಟಿವೆ ಎಂದು ಯಹೂದಿಗಳು ಹೇಳುತ್ತಾರೆ. ಕಟ್ಟಲ್ಪಡಲಿ ಅವರ ಕೈಗಳು. ಅವರ ಹೇಳಿಕೆಯ ಕಾರಣ ಅವರು ಶಪಿತರಾದರು. ನಿಜವಾಗಿ ಅಲ್ಲಾಹನ ಕೈಗಳು ಧಾರಾಳ ವಿಶಾಲವಾಗಿವೆ. ಅವನು ತಾನಿಚ್ಛಿಸಿದಂತೆ ಖರ್ಚು ಮಾಡುತ್ತಾನೆ. ನಿಮ್ಮ ಒಡೆಯನು ನಿಮಗೇನನ್ನು ಇಳಿಸಿ ಕೊಟ್ಟಿರುವನೋ ಅದರಿಂದಾಗಿ ಅವರಲ್ಲಿ ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವು ಮತ್ತಷ್ಟು ಹೆಚ್ಚಲಿದೆ. ನಾವು ಪುನರುತ್ಥಾನ ದಿನದವರೆಗೂ ಅವರ ನಡುವೆ ವೈರ ಮತ್ತು ವೈಷಮ್ಯವನ್ನು ಬಿತ್ತಿರುವೆವು. ಅವರು ಯುದ್ಧದ ಬೆಂಕಿಯನ್ನು ಭುಗಿಲೆಬ್ಬಿಸಿದಾಗ ಅಲ್ಲಾಹನು ಅದನ್ನು ತಣಿಸಿ ಬಿಡುತ್ತಾನೆ. ಆದರೆ ಅವರು ಭೂಮಿಯಲ್ಲಿ ಅಶಾಂತಿ ಹಬ್ಬಲು ಶ್ರಮಿಸುತ್ತಲೇ ಇರುತ್ತಾರೆ. ಅಲ್ಲಾಹನಂತು, ಅಶಾಂತಿ ಹಬ್ಬುವವರನ್ನು ಖಂಡಿತ ಮೆಚ್ಚುವುದಿಲ್ಲ

[64] ಗ್ರಂಥದವರು ವಿಶ್ವಾಸಿಗಳಾಗಿ, ಧರ್ಮ ನಿಷ್ಠರಾಗಿ ಬಿಟ್ಟಿದ್ದರೆ ನಾವು ಅವರನ್ನು ಅವರ ಎಲ್ಲ ಪಾಪಗಳಿಂದ ಮುಕ್ತಗೊಳಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಗಳೇ ತುಂಬಿರುವ ಸ್ವರ್ಗ ತೋಟಗಳೊಳಗೆ ಅವರನ್ನು ಸೇರಿಸುತ್ತಿದ್ದೆವು

[65] ಒಂದು ವೇಳೆ ಅವರು ತೌರಾತ್ ಮತ್ತು ಇಂಜೀಲ್‌ಗಳನ್ನು ಹಾಗೂ (ಇದೀಗ) ಅವರಿಗೆ ಅವರೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಕುರ್‌ಆನನ್ನು) ಸ್ಥಾಪಿಸಿರುತ್ತಿದ್ದರೆ ಅವರ ಮೇಲಿಂದಲೂ ಅವರ ಕಾಲಡಿಯಿಂದಲೂ ಅವರಿಗೆ ಆಹಾರವು ಹರಿದು ಬರುತ್ತಿತ್ತು. ಅವರಲ್ಲಿ ಮಧ್ಯಮ ನಿಲುವಿನ ಒಂದು ಪಂಗಡವಿದೆ. ಆದರೆ ಅವರಲ್ಲಿ ಹೆಚ್ಚಿನವರು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ

[66] ದೂತರೇ, ನಿಮಗೆ ನಿಮ್ಮೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ, ನೀವು ಅವನ ಪ್ರತಿನಿಧಿತ್ವದ ಹೊಣೆಯನ್ನೇ ಈಡೇರಿಸಲಿಲ್ಲವೆಂದಾಗುವುದು. ಅಲ್ಲಾಹನು ನಿಮ್ಮನ್ನು ಜನರಿಂದ ರಕ್ಷಿಸುವನು. ಅಲ್ಲಾಹನು ಧಿಕ್ಕಾರಿಗಳಿಗೆ ಎಂದೂ ಸರಿದಾರಿಯನ್ನು ತೋರುವುದಿಲ್ಲ

[67] ಹೇಳಿರಿ; ‘‘ಗ್ರಂಥದವರೇ, ನೀವು ತೌರಾತ್ ಅನ್ನು, ಇಂಜೀಲ್ ಅನ್ನು ಮತ್ತು ನಿಮ್ಮ ಒಡೆಯನು ನಿಮ್ಮೆಡೆಗೆ ಇಳಿಸಿಕೊಟ್ಟಿರುವುದನ್ನು ಸಂಸ್ಥಾಪಿಸುವ ತನಕ ನಿಮಗೆ ಯಾವ ನೆಲೆಯೂ ಇಲ್ಲ.’’ ನಿಜವಾಗಿ, ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶವು ಅವರಲ್ಲಿ (ಗ್ರಂಥದವರಲ್ಲಿ) ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಧಿಕ್ಕಾರಿಗಳ ವಿಷಯದಲ್ಲಿ ಬೇಸರಿಸಬೇಡಿ

[68] ಖಂಡಿತವಾಗಿಯೂ ವಿಶ್ವಾಸಿಗಳು, ಯಹೂದಿಗಳು, ಸಬಯನರು ಮತ್ತು ಕ್ರೈಸ್ತರಲ್ಲಿ ಅಲ್ಲಾಹನ ಮೇಲೆ ಹಾಗೂ ಅಂತಿಮ ದಿನದ ಮೇಲೆ ನಂಬಿಕೆ ಉಳ್ಳವರು ಮತ್ತು ಸತ್ಕರ್ಮ ಮಾಡಿದವರಿಗೆ ಯಾವ ಭಯವೂ ಇಲ್ಲ ಮತ್ತು ಅವರು ದುಃಖಿಸಲಾರರು

[69] ನಾವು ಇಸ್ರಾಈಲರ ಸಂತತಿಗಳಿಂದ ಸ್ಪಷ್ಟ ಕರಾರನ್ನು ಪಡೆದಿದ್ದೆವು ಮತ್ತು ನಾವು ಅವರೆಡೆಗೆ ದೂತರನ್ನು ಕಳುಹಿಸಿದೆವು. ಅವರ ಸ್ವೇಚ್ಛೆಗೆ ವಿರುದ್ಧವಾದ ಯಾವುದಾದರೂ ಆದೇಶದೊಂದಿಗೆ ದೂತರು ಅವರ ಬಳಿಗೆ ಬಂದಾಗಲೆಲ್ಲಾ ಅವರಲ್ಲಿ ಕೆಲವರು ಅವರನ್ನು (ದೂತರನ್ನು) ತಿರಸ್ಕರಿಸಿದರು ಮತ್ತು ಕೆಲವರು ಅವರನ್ನು ಕೊಂದು ಬಿಟ್ಟರು

[70] (ತಮಗೆ) ಯಾವುದೇ ಶಿಕ್ಷೆಯಾಗದೆಂದು ಅವರು ಭಾವಿಸಿದ್ದರು. ಮತ್ತು ಅವರು ಕುರುಡರೂ ಕಿವುಡರೂ ಆಗಿದ್ದರು. ಕೊನೆಗೆ ಅಲ್ಲಾಹನು ಅವರೆಡೆಗೆ ಒಲವು ತೋರಿದನು. ಆದರೂ ಅವರಲ್ಲಿ ಹೆಚ್ಚಿನವರು ಕುರುಡರು ಹಾಗೂ ಕಿವುಡರಾಗಿಯೇ ಇದ್ದರು. ಅಲ್ಲಾಹನಂತೂ ಅವರು ಮಾಡುವುದನ್ನೆಲ್ಲ ನೋಡುತ್ತಿರುವವನೇ ಆಗಿದ್ದಾನೆ

[71] ಖಂಡಿತವಾಗಿಯೂ, ಮರ್ಯಮರ ಪುತ್ರ ಮಸೀಹನೇ ಅಲ್ಲಾಹನೆಂದು ಹೇಳಿದವರು ಧಿಕ್ಕಾರಿಗಳಾಗಿ ಬಿಟ್ಟರು. ನಿಜವಾಗಿ ಮಸೀಹರು (ಈಸಾ ಅ.) ಹೀಗೆ ಹೇಳಿದ್ದರು; ಇಸ್ರಾಈಲರ ಸಂತತಿಗಳೇ, ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿರುವ ಅಲ್ಲಾಹನನ್ನೇ ನೀವು ಆರಾಧಿಸಿರಿ. ಅಲ್ಲಾಹನ ಜೊತೆ ಯಾರನ್ನಾದರೂ ಸೇರಿಸುವವನ ಪಾಲಿಗೆ ಅಲ್ಲಾಹನು ಖಂಡಿತವಾಗಿಯೂ ಸ್ವರ್ಗವನ್ನು ನಿಷಿದ್ಧಗೊಳಿಸಿರುವನು ಮತ್ತು ನರಕವೇ ಅವನ ನೆಲೆಯಾಗಿರುವುದು. ಅಕ್ರಮಿಗಳ ಪಾಲಿಗೆ ಯಾರೂ ಸಹಾಯಕರಿಲ್ಲ

[72] ಅಲ್ಲಾಹನು ಮೂವರಲ್ಲಿ ಒಬ್ಬನು ಎಂದು ಹೇಳಿದವರು ಖಂಡಿತ ಧಿಕ್ಕಾರಿಗಳಾದರು. ನಿಜವಾಗಿ ಏಕೈಕ ಪೂಜಾರ್ಹನ ಹೊರತು ಬೇರಾರೂ ಪೂಜಾರ್ಹರಲ್ಲ. ಅವರು ಸದ್ಯ ತಾವು ಏನನ್ನು ಹೇಳುತ್ತಿರುವರೋ ಅದರಿಂದ ದೂರ ಉಳಿಯದಿದ್ದರೆ, ಅವರಲ್ಲಿನ ಧಿಕ್ಕಾರಿಗಳಿಗೆ ತುಂಬಾ ಕಠಿಣ ಶಿಕ್ಷೆ ಸಿಗಲಿದೆ

[73] ಅವರೇನು ಅಲ್ಲಾಹನ ಬಳಿ ಪಶ್ಚಾತ್ತಾಪ ಪಡುವುದಿಲ್ಲವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುವುದಿಲ್ಲವೆ? ಅಲ್ಲಾಹನಂತು ತುಂಬಾ ಕ್ಷಮಾಶೀಲ ಮತ್ತು ಕರುಣಾಮಯಿ ಆಗಿದ್ದಾನೆ

[74] ಮರ್ಯಮರ ಪುತ್ರ ಮಸೀಹರು ಅಲ್ಲಾಹನ ದೂತರಲ್ಲದೆ ಬೇರೇನಲ್ಲ. ಅವರಿಗಿಂತ ಹಿಂದೆಯೂ ದೇವದೂತರಿದ್ದರು. ಅವರ ತಾಯಿ (ಮರ್ಯಮ್) ತುಂಬಾ ಸತ್ಯವಂತ ಮಹಿಳೆಯಾಗಿದ್ದರು. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಯಾವ ರೀತಿಯಲ್ಲಿ ಅವರಿಗೆ ಪುರಾವೆಗಳನ್ನು ವಿವರಿಸಿಕೊಡುತ್ತಿದ್ದೇವೆಂಬುದನ್ನು ನೋಡಿರಿ ಮತ್ತು (ಇಷ್ಟಾಗಿಯೂ) ಅವರು ಎಲ್ಲೆಲ್ಲೋ ಅಲೆಯುತ್ತಿರುವುದನ್ನು ನೋಡಿರಿ

[75] ಹೇಳಿರಿ; ನೀವೇನು ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುವಿರಾ? ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[76] ಹೇಳಿರಿ; ಗ್ರಂಥದವರೇ, ನೀವು ಸತ್ಯಕ್ಕೆದುರಾಗಿ ನಿಮ್ಮ ಧರ್ಮದಲ್ಲಿ ಅತಿಶಯವೆಸಗಬೇಡಿ ಮತ್ತು ನೀವು, ಈ ಹಿಂದೆಯೇ ದಾರಿ ತಪ್ಪಿರುವವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅವರು ಅನೇಕರನ್ನು ದಾರಿಗೆಡಿಸಿದ್ದಾರೆ ಮತ್ತು ಸ್ವತಃ ದಾರಿ ತಪ್ಪಿದವರಾಗಿದ್ದಾರೆ

[77] ಇಸ್ರಾಈಲರ ಸಂತತಿಗಳ ಪೈಕಿ ಧಿಕ್ಕಾರಿಗಳು ದಾವೂದ್‌ರ ಬಾಯಿಯಿಂದ ಹಾಗೂ ಮರ್ಯಮರ ಪುತ್ರ ಈಸಾರಿಂದ ಶಪಿತರಾದರು. ಅವರು ಅವಿಧೇಯರಾಗಿದ್ದುದು ಮತ್ತು ಅತಿರೇಕವೆಸಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು

[78] ಅವರು ದುಷ್ಕೃತ್ಯಗಳನ್ನು ಎಸಗದಂತೆ ಪರಸ್ಪರರನ್ನು ತಡೆಯುತ್ತಿರಲಿಲ್ಲ. ಅವರು ಕೆಟ್ಟದ್ದನ್ನೇ ಮಾಡುತ್ತಿದ್ದರು

[79] ಅವರಲ್ಲಿ ಹೆಚ್ಚಿನವರು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡಿರುವುದನ್ನು ನೀವು ಕಾಣುತ್ತೀರಿ. ಅವರು ತಮಗಾಗಿ ಕೇವಲ ಕೆಡುಕನ್ನು ಮಾತ್ರ ಮುಂದೆ ಕಳುಹಿಸಿದ್ದಾರೆ. ಇದರಿಂದಾಗಿ ಅಲ್ಲಾಹನು ಅವರ ಬಗ್ಗೆ ಕೋಪಗೊಂಡಿರುವನು ಮತ್ತು ಅವರು ಸದಾ ಕಾಲ ಯಾತನೆಯಲ್ಲಿರುವರು

[80] ಒಂದು ವೇಳೆ ಅವರು ಅಲ್ಲಾಹನಲ್ಲಿ, ದೂತರಲ್ಲಿ ಮತ್ತು ಅವರೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಈ ರೀತಿ ಅವರನ್ನು (ಧಿಕ್ಕಾರಿಗಳು) ತಮ್ಮ ಪೋಷಕರಾಗಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ

[81] ಜನರ ಪೈಕಿ ಯಹೂದಿಗಳು ಮತ್ತು ಬಹುದೇವಾರಾಧಕರು ವಿಶ್ವಾಸಿಗಳ ವಿರುದ್ಧ ಹೆಚ್ಚು ಶತ್ರುತ್ವ ಉಳ್ಳವರಾಗಿರುವುದನ್ನು ನೀವು ಕಾಣುವಿರಿ. ಹಾಗೆಯೇ ‘‘ನಾವು ಕ್ರೈಸ್ತರು’’ ಎಂದು ಹೇಳುವವರನ್ನು ನೀವು ವಿಶ್ವಾಸಿಗಳ ಜೊತೆ ಹೆಚ್ಚಿನ ಸ್ನೇಹ ಉಳ್ಳವರಾಗಿ ಕಾಣುವಿರಿ. ಇದೇಕೆಂದರೆ ಅವರ ನಡುವೆ ನಿಸ್ವಾರ್ಥ ಧರ್ಮ ಸೇವಕರು ಹಾಗೂ ಸಾಧುಗಳಿದ್ದಾರೆ ಮತ್ತು ಅವರು ಅಹಂಕಾರ ಪಡುವವರಲ್ಲ

[82] ದೂತರೆಡೆಗೆ ಇಳಿಸಿಕೊಡಲಾಗಿರುವ ಸಂದೇಶವನ್ನು ಕೇಳಿದಾಗ, ಅವರು ಸತ್ಯವನ್ನು ಗುರುತಿಸಿದ್ದರಿಂದ ಅವರ ಕಣ್ಣುಗಳಲ್ಲಿ ಕಣ್ಣೀರು ಉಕ್ಕುವುದನ್ನು ನೀವು ಕಾಣುತ್ತೀರಿ. ಅವರು ಹೇಳುತ್ತಾರೆ; ‘‘ನಮ್ಮೊಡೆಯಾ, ನಾವು ನಂಬಿದೆವು. ನಮ್ಮ ಹೆಸರನ್ನು (ಸತ್ಯದ ಪರ) ಸಾಕ್ಷಿಗಳ ಜೊತೆ ಬರೆ’’

[83] ‘‘ಅಲ್ಲಾಹನನ್ನು ಹಾಗೂ ನಮ್ಮ ಬಳಿಗೆ ಬಂದಿರುವ ಸತ್ಯವನ್ನು ನಾವೇಕೆ ನಂಬಬಾರದು? ನಾವಂತು, ನಮ್ಮೊಡೆಯನು ನಮ್ಮನ್ನು ಸಜ್ಜನರ ಸಾಲಿಗೆ ಸೇರಿಸಬೇಕೆಂದು ಹಂಬಲಿಸುತ್ತಿದ್ದೇವೆ’’

[84] ಅವರ ಈ ಹೇಳಿಕೆಯ ಫಲವಾಗಿ ಅಲ್ಲಾಹನು ಅವರಿಗೆ, ತಳದಲ್ಲಿ ನದಿಗಳು ಹರಿಯುತ್ತಿರುವ ತೋಟಗಳನ್ನು ದಯಪಾಲಿಸಿದನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ಇದು ಸಜ್ಜನರಿಗಿರುವ ಪ್ರತಿಫಲ

[85] ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ತಿರಸ್ಕರಿಸಿದವರು – ನರಕದವರಾಗಿದ್ದಾರೆ

[86] ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ಸಮ್ಮತಗೊಳಿಸಿರುವ ನಿರ್ಮಲ ವಸ್ತುಗಳನ್ನು ನಿಷಿದ್ಧವೆಂದು ಪರಿಗಣಿಸಬೇಡಿ ಮತ್ತು ಮಿತಿ ಮೀರಬೇಡಿ. ಮಿತಿ ಮೀರುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ

[87] ಅಲ್ಲಾಹನು ನಿಮಗೆ ನೀಡಿರುವ ಸಮ್ಮತ ಹಾಗೂ ಶುದ್ಧ ಆಹಾರವನ್ನು ತಿನ್ನಿರಿ ಮತ್ತು ನೀವು ನಂಬುವ ಆ ಅಲ್ಲಾಹನಿಗೆ ಸದಾ ಅಂಜಿರಿ

[88] ನೀವು ಕೇವಲ ತಮಾಷೆಯಾಗಿ ಮಾಡಿದ ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ಮಾಡಿದ ಗಂಭೀರ ಪ್ರತಿಜ್ಞೆಗಳ ಕುರಿತು ಅವನು ಖಂಡಿತ ನಿಮ್ಮನ್ನು ವಿಚಾರಿಸುವನು. (ಅಂತಹ ಪ್ರತಿಜ್ಞೆ ಮುರಿದರೆ) ಅದಕ್ಕೆ ಪರಿಹಾರವಾಗಿ ನೀವು ನಿಮ್ಮ ಮನೆಯವರಿಗೆ ಉಣಿಸುವಂತಹ ಮಧ್ಯಮ ಮಟ್ಟದ ಭೋಜನವನ್ನು ಹತ್ತು ಮಂದಿ ಬಡವರಿಗೆ ಉಣಿಸಬೇಕು ಅಥವಾ ಅವರಿಗೆ (ಅಷ್ಟು ಮಂದಿಗೆ) ಬಟ್ಟೆ ಉಡಿಸಬೇಕು ಅಥವಾ ಒಬ್ಬ ಗುಲಾಮನನ್ನು ದಾಸ್ಯದಿಂದ ಮುಕ್ತಗೊಳಿಸಬೇಕು. ಇದನ್ನು ಮಾಡಲಾಗದವನು ಮೂರು ದಿನ ಉಪವಾಸ ಆಚರಿಸಬೇಕು. ಇದು, ನೀವು ಪ್ರತಿಜ್ಞೆ ಮಾಡಿದ ಬಳಿಕ ಪ್ರತಿಜ್ಞೆಯನ್ನು ಮುರಿದುದಕ್ಕೆ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಸದಾ ಪಾಲಿಸಿರಿ. ನೀವು ಸದಾ ಕೃತಜ್ಞರಾಗಿರಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ

[89] ವಿಶ್ವಾಸಿಗಳೇ, ಮದ್ಯ, ಜೂಜಾಟ, ವಿಗ್ರಹಗಳು ಮತ್ತು ದಾಳದಾಟ ಇವೆಲ್ಲಾ ಶೈತಾನನ ಮಲಿನ ಚಟುವಟಿಕೆಗಳಾಗಿವೆ. ನೀವು ವಿಜಯಿಗಳಾಗಲು ಅವೆಲ್ಲವುಗಳಿಂದ ದೂರ ಉಳಿಯಿರಿ

[90] ಶೈತಾನನಂತು ಮದ್ಯ ಹಾಗೂ ಜೂಜುಗಳ ಮೂಲಕ ನಿಮ್ಮ ನಡುವೆ ದ್ವೇಷ ಹಾಗೂ ಹಗೆತನವನ್ನು ಬೆಳೆಸಬಯಸುತ್ತಾನೆ ಮತ್ತು ನಿಮ್ಮನ್ನು ಅಲ್ಲಾಹನ ನೆನಪಿನಿಂದ ಹಾಗೂ ನಮಾಝ್‌ನಿಂದ ತಡೆಯಬಯಸುತ್ತಾನೆ. ಆದ್ದರಿಂದ ಇನ್ನಾದರೂ ನೀವು (ಅವುಗಳಿಂದ) ದೂರ ಉಳಿಯುವಿರಾ

[91] ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಹಾಗೂ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು (ಕೆಡುಕುಗಳ ವಿರುದ್ಧ) ಸದಾ ಜಾಗೃತರಾಗಿರಿ. ನೀವಿನ್ನು ತಿರುಗಿ ನಿಂತರೆ, ನಿಮಗೆ ತಿಳಿದಿರಲಿ, ನಮ್ಮ ದೂತರ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ

[92] ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡುತ್ತಿರುವವರು (ಗತಕಾಲದಲ್ಲಿ) ಏನನ್ನು ತಿಂದಿದ್ದರೂ, ಅವರು ಧರ್ಮನಿಷ್ಠರೂ, ವಿಶ್ವಾಸಿಗಳೂ ಆಗಿದ್ದು ಸತ್ಕರ್ಮಗಳನ್ನು ಮಾಡುತ್ತಿರುವವರಾಗಿದ್ದರೆ ಮತ್ತು ಸದಾ ಧರ್ಮನಿಷ್ಠರೂ, ಸತ್ಯದಲ್ಲಿ ನಂಬಿಕೆ ಉಳ್ಳವರೂ, ಕೆಡುಕುಗಳಿಂದ ದೂರ ಉಳಿಯುವವರೂ, ಸೌಜನ್ಯ ತೋರುವವರೂ ಆಗಿದ್ದರೆ, ಅವರ ಮೇಲೆ ಪಾಪವೇನಿಲ್ಲ. ಅಲ್ಲಾಹನು ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ

[93] ವಿಶ್ವಾಸಿಗಳೇ, ಕಣ್ಣಾರೆ ಕಾಣದೆ ತನ್ನನ್ನು ಯಾರು ಅಂಜುತ್ತಾರೆಂಬುದನ್ನು ಅರಿಯಲಿಕ್ಕಾಗಿ ನಿಮ್ಮ ಕೈಗಳ ಹಾಗೂ ನಿಮ್ಮ ಈಟಿಗಳ ವ್ಯಾಪ್ತಿಗೆ ಬಂದಿರುವ ಬೇಟೆಯ ಪ್ರಾಣಿಯ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇಷ್ಟಾಗಿಯೂ ಮೇರೆ ಮೀರಿ ಹೋಗುವಾತನಿಗೆ ಕಠಿಣ ಶಿಕ್ಷೆ ಕಾದಿದೆ

[94] ವಿಶ್ವಾಸಿಗಳೇ, ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಬೇಟೆಯ ಪ್ರಾಣಿಯನ್ನು ಕೊಲ್ಲಬೇಡಿ. ಇನ್ನು ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕ ಅದನ್ನು ಕೊಂದಿದ್ದರೆ – ಅವನು ಕೊಂದ ಪ್ರಾಣಿಗೆ ಸಮನಾಗಿರುವ ನಾಡಪ್ರಾಣಿಯೇ ಅದಕ್ಕೆ ಪರಿಹಾರವಾಗಿದೆ. ಈ ವಿಷಯದಲ್ಲಿ ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ತೀರ್ಪು ನೀಡಲಿ. ಈ ಪರಿಹಾರವನ್ನು ಕಾಣಿಕೆಯಾಗಿ ಕಅ್ಬ: ಭವನಕ್ಕೆ ತಲುಪಿಸಬೇಕು. ಅಥವಾ (ಪರಿಹಾರವಾಗಿ) ಕೆಲವು ಬಡವರಿಗೆ ಆಹಾರ ಉಣಿಸಬೇಕು. ಅಥವಾ, ಅದಕ್ಕೆ ಸಮನಾಗುವಷ್ಟು ಉಪವಾಸ ಆಚರಿಸಬೇಕು. ಅವನು ತನ್ನ ಕೃತ್ಯದ ಫಲವನ್ನು ಅನುಭವಿಸಲೆಂದು (ಇದನ್ನು ವಿಧಿಸಲಾಗಿದೆ). ಹಿಂದೆ ಗತಿಸಿ ಹೋದುದನ್ನೆಲ್ಲಾ ಅಲ್ಲಾಹನು ಕ್ಷಮಿಸಿರುವನು. ಇದೀಗ ಅದನ್ನೇ ಪುನರಾವರ್ತಿಸುವವರ ವಿರುದ್ಧ ಅಲ್ಲಾಹನು ಪ್ರತೀಕಾರ ತೀರಿಸುವನು. ಅಲ್ಲಾಹನು ಭಾರೀ ಪ್ರಬಲನೂ ಪ್ರತೀಕಾರ ತೀರಿಸಬಲ್ಲವನೂ ಆಗಿದ್ದಾನೆ

[95] (ಇಹ್ರಾಮಿನ ಸ್ಥಿತಿಯಲ್ಲಿ) ಕಡಲಿನ ಬೇಟೆಯನ್ನು ನಿಮ್ಮ ಪಾಲಿಗೆ ಸಮ್ಮತಿಸಲಾಗಿದೆ. ಅದರ ಆಹಾರವು ನಿಮಗೆ ಹಾಗೂ ಕಡಲ ಪ್ರಯಾಣಿಕರಿಗೆ ಉಪಯುಕ್ತವಾಗಿದೆ. ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಭೂಭಾಗದ ಬೇಟೆಯು ನಿಮ್ಮ ಪಾಲಿಗೆ ನಿಷಿದ್ಧವಾಗಿದೆ. ನೀವು ಅಲ್ಲಾಹನಿಗೆ ಅಂಜಿರಿ. ಕೊನೆಗೆ ಅವನ ಬಳಿಯೇ ನಿಮ್ಮೆಲ್ಲರನ್ನು ಒಟ್ಟು ಸೇರಿಸಲಾಗುವುದು

[96] ಅಲ್ಲಾಹನು ಪವಿತ್ರ ಭವನ ಕಅ್ಬ:ವನ್ನು ಮಾನವರ ಆಶ್ರಯ ಧಾಮವಾಗಿಸಿರುವನು. ಹಾಗೆಯೇ, ಪವಿತ್ರ ತಿಂಗಳುಗಳು, ಬಲಿಪ್ರಾಣಿ ಮತ್ತು ಕೊರಳಪಟ್ಟಿಯಿರುವ (ಹರಕೆಯ) ಪ್ರಾಣಿಗಳು (ಅವನ ಸಂಕೇತಗಳಾಗಿವೆ). ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು ಮತ್ತು ಅಲ್ಲಾಹನು ಪ್ರತಿಯೊಂದು ವಿಷಯದ ಜ್ಞಾನ ಉಳ್ಳವನು ಎಂಬುದು ನಿಮಗೆ ತಿಳಿದಿರಬೇಕೆಂದು (ಇದನ್ನೆಲ್ಲಾ ನಿಮಗೆ ವಿವರಿಸಲಾಗುತ್ತಿದೆ)

[97] ನಿಮಗೆ ತಿಳಿದಿರಲಿ – ಅಲ್ಲಾಹನು ಭಾರೀ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ ಮತ್ತು ಅದೇ ವೇಳೆ ಅಲ್ಲಾಹನು ತುಂಬಾ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ

[98] ದೂತರ ಮೇಲಿರುವುದು (ಸಂದೇಶವನ್ನು) ತಲುಪಿಸುವ ಹೊಣೆಗಾರಿಕೆ ಮಾತ್ರ. ನೀವು ಪ್ರಕಟಪಡಿಸುತ್ತಿರುವ ಮತ್ತು ನೀವು ಬಚ್ಚಿಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು

[99] ಹೇಳಿರಿ; ಮಲಿನ ಮತ್ತು ನಿರ್ಮಲವು ಸಮಾನವಾಗಲು ಸಾಧ್ಯವಿಲ್ಲ. ಮಾಲಿನ್ಯದ ಬಾಹುಳ್ಯವು ನಿಮಗೆಷ್ಟು ಅದ್ಭುತವೆನಿಸಿದರೂ ಸರಿಯೇ. ಆದ್ದರಿಂದ, ಬುದ್ಧಿವಂತರೇ, ನೀವು ಸದಾ ಅಲ್ಲಾಹನ ಭಯಭಕ್ತಿ ಉಳ್ಳವರಾಗಿರಿ – ನೀವು ವಿಜಯಿಗಳಾಗಬಹುದು

[100] ವಿಶ್ವಾಸಿಗಳೇ, ನಿಮಗೆ ತಿಳಿಸಿದರೆ ನಿಮಗೆ ಕೆಟ್ಟದೆನಿಸುವಂತಹ ವಿಷಯಗಳ ಕುರಿತು ಪ್ರಶ್ನಿಸಬೇಡಿ. ಕುರ್‌ಆನ್ ಇಳಿಯುತ್ತಿರುವ ವೇಳೆ ನೀವು ಅಂತಹ ವಿಷಯಗಳನ್ನು ಕೇಳಿದರೆ ಅವುಗಳನ್ನು ನಿಮಗೆ ತಿಳಿಸಲಾಗುವುದು. ಅಲ್ಲಾಹನು ಅವುಗಳನ್ನು ಕ್ಷಮಿಸಿರುವನು. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಸಂಯಮಿಯೂ ಆಗಿದ್ದಾನೆ

[101] ನಿಮಗಿಂತ ಹಿಂದಿನ ಜನಾಂಗಗಳೂ ಅಂತಹ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆ ಬಳಿಕ ಅವರು ಅದನ್ನು (ಸತ್ಯವನ್ನು) ಧಿಕ್ಕರಿಸುವವರಾದರು

[102] ಬಹೀರಃ, ಸಾಯಿಬಃ, ವಸೀಲಾ ಮತ್ತು ಹಾಮ್ – ಇವರ ಪೈಕಿ ಯಾರನ್ನೂ ಅಲ್ಲಾಹನು (ಪೂಜ್ಯರಾಗಿ) ನೇಮಿಸಿಲ್ಲ. ನಿಜವಾಗಿ ಧಿಕ್ಕಾರಿಗಳು ಅಲ್ಲಾಹನ ಮೇಲೆ ಆರೋಪಗಳನ್ನು ಹೊರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಆಲೋಚಿಸುವುದಿಲ್ಲ

[103] ಅಲ್ಲಾಹನು ಇಳಿಸಿಕೊಟ್ಟಿರುವ ಸಂದೇಶದೆಡೆಗೆ ಮತ್ತು ದೇವದೂತರೆಡೆಗೆ ಬನ್ನಿರಿ ಎಂದು ಅವರೊಡನೆ ಹೇಳಿದಾಗ ಅವರು, ‘‘ನಾವು ನಮ್ಮ ಪೂರ್ವಜರನ್ನು ಯಾವ ದಾರಿಯಲ್ಲಿ ಕಂಡಿರುವೆವೋ, ಅದುವೇ ನಮಗೆ ಸಾಕು’’ ಎನ್ನುತ್ತಾರೆ. ಅವರ ಪೂರ್ವಜರು ಏನನ್ನೂ ಅರಿಯದವರು ಹಾಗೂ ಸನ್ಮಾರ್ಗ ಪಡೆಯದವರಾಗಿದ್ದರೂ (ಅವರಿಗೆ ಆ ದಾರಿ ಸಾಕೇ)

[104] ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮ ಕುರಿತು ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿದ್ದರೆ, ದಾರಿ ತಪ್ಪಿದವನಿಂದ ನಿಮಗೇನೂ ನಷ್ಟವಾಗದು. ಕೊನೆಗೆ ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳುವಿರಿ. ನೀವು ಏನೆಲ್ಲ ಮಾಡುತ್ತಿದ್ದಿರೆಂಬುದನ್ನು (ಅಲ್ಲಿ) ಅವನು ನಿಮಗೆ ತಿಳಿಸುವನು

[105] ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೊಬ್ಬರ ಮರಣವು ಸಮೀಪಿಸಿದ್ದರೆ, ಅವನು ಉಯಿಲನ್ನು ಬೋಧಿಸುವ ವೇಳೆ ನಿಮ್ಮೊಳಗಿನ ಇಬ್ಬರು ನ್ಯಾಯವಂತರು ಸಾಕ್ಷಿಗಳಾಗಲಿ. ಅಥವಾ, ನೀವು ಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ ನಿಮಗೆ ಮರಣದ ಆಪತ್ತು ಎದುರಾದರೆ, ನಿಮ್ಮ ಪಾಳಯದ ಹೊರಗಿನ ಇಬ್ಬರು (ಸಾಕ್ಷಿಗಳಾಗಲಿ). ನಿಮಗೆ ಸಂಶಯವಿದ್ದರೆ, ನೀವು ನಮಾಝ್‌ನ ಬಳಿಕ ಅವರನ್ನು ತಡೆದು ನಿಲ್ಲಿಸಿರಿ ಮತ್ತು ಅವರಿಬ್ಬರು ಅಲ್ಲಾಹನ ಆಣೆ ಹಾಕಿ ‘‘ನಾವು ಇದನ್ನು (ಸಾಕ್ಷವನ್ನು) ಯಾವುದೇ ಬೆಲೆಗೆ ಮಾರಲಾರೆವು – ವಿಷಯವು ಆಪ್ತರಿಗೆ ಸಂಬಂಧಿಸಿದ್ದಾದರೂ ಸರಿಯೇ. ಮತ್ತು ನಾವು ಅಲ್ಲಾಹನ ಸಾಕ್ಷವನ್ನು ಮರೆಮಾಚಲಾರೆವು. ಹಾಗೆ ಮಾಡಿದರೆ ನಾವು ಪಾಪಿಗಳಾಗುವೆವು’’ ಎಂದು ಪ್ರಮಾಣ ಮಾಡಲಿ

[106] ತರುವಾಯ ಅವರಿಬ್ಬರೂ ಸತ್ಯವನ್ನು ಮರೆಮಾಚುವ ಪಾಪ ಕೃತ್ಯವನ್ನು ಎಸಗಿರುವರೆಂದು ತಿಳಿದು ಬಂದರೆ, ಅವರ ಸ್ಥಾನದಲ್ಲಿ, ಹಕ್ಕುವಂಚಿತರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ನಿಕಟ ಬಂಧುಗಳಾಗಿರುವ ಇಬ್ಬರು ಸಾಕ್ಷಿಗಳಾಗಿ ನಿಲ್ಲಲಿ. ಅವರಿಬ್ಬರು ಅಲ್ಲಾಹನ ಆಣೆ ಹಾಕಿ, ‘‘ನಮ್ಮ ಸಾಕ್ಷವು ಅವರಿಬ್ಬರ ಸಾಕ್ಷಕ್ಕಿಂತ ಹೆಚ್ಚು ಪಕ್ವವಾಗಿದೆ. ನಾವು ಯಾವುದೇ ಅತಿರೇಕವನ್ನೆಸಗಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದರೆ, ನಾವು ಅಕ್ರಮಿಗಳ ಸಾಲಿಗೆ ಸೇರುವೆವು’’ ಎಂದು ಪ್ರಮಾಣ ಮಾಡಲಿ

[107] ಈ ರೀತಿ ಅವರು ಸರಿಯಾದ ಸಾಕ್ಷ ಹೇಳುವ ಅಥವಾ ತಮ್ಮ ಸಾಕ್ಷವು (ಇತರರ) ಸಾಕ್ಷದ ಮುಂದೆ ತಿರಸ್ಕೃತವಾದೀತೆಂದು ಅಂಜುವ ಸಾಧ್ಯತೆ ಅಧಿಕವಿದೆ. ಅಲ್ಲಾಹನಿಗೆ ಅಂಜಿರಿ ಹಾಗೂ ಆಲಿಸಿರಿ. ಅಲ್ಲಾಹನು ಅವಿಧೇಯರಿಗೆ ಸರಿದಾರಿಯನ್ನು ತೋರಿಸುವುದಿಲ್ಲ

[108] ಅಲ್ಲಾಹನು ಎಲ್ಲ ದೂತರನ್ನು ಒಂದೆಡೆ ಸೇರಿಸುವ ದಿನ, ಅವರೊಡನೆ, ‘‘ನಿಮಗೇನು ಉತ್ತರ ಸಿಕ್ಕಿತು?’’ ಎಂದು ಕೇಳುವನು. ಅವರು ‘‘ನಮಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನು ಖಚಿತವಾಗಿ ಬಲ್ಲವನಾಗಿರುವೆ’’ ಎನ್ನುವರು

[109] ಅಲ್ಲಾಹನು ಹೇಳಿದನು; ‘‘ಓ ಮರ್ಯಮರ ಪುತ್ರ ಈಸಾ! ನಿಮ್ಮ ಮೇಲೆ ಹಾಗೂ ನಿಮ್ಮ ತಾಯಿಯ ಮೇಲೆ ನಾನು ತೋರಿದ ಅನುಗ್ರಹವನ್ನು ಸ್ಮರಿಸಿರಿ. ನಾನು ಪವಿತ್ರ ಆತ್ಮ (ಜಿಬ್ರೀಲ್)ನ ಮೂಲಕ ನಿಮಗೆ ನೆರವಾದಾಗ, ನೀವು ತೊಟ್ಟಿಲಿಂದಲೂ, (ಆ ಬಳಿಕ) ಬೆಳೆದ ಬಳಿಕವೂ ಜನರೊಡನೆ ಮಾತನಾಡಿದಿರಿ. ಹಾಗೆಯೇ, ನಾನು ನಿಮಗೆ ಗ್ರಂಥ ಹಾಗೂ ಜಾಣ್ಮೆಯನ್ನು ಮತ್ತು ತೌರಾತ್ ಹಾಗೂ ಇಂಜೀಲ್‌ಗಳನ್ನು ಕಲಿಸಿಕೊಟ್ಟೆನು ಮತ್ತು ನೀವು ನನ್ನ ಆದೇಶದಂತೆ ಮಣ್ಣಿನಿಂದ ಪಕ್ಷಿಯ ರೂಪವನ್ನು ರಚಿಸಿದಿರಿ ಹಾಗೂ ನೀವು ಅದರೊಳಗೆ ಊದಿದಾಗ ಅದು ನನ್ನ ಆದೇಶದಂತೆ ಹಾರುವ ಪಕ್ಷಿಯಾಗಿ ಬಿಡುತ್ತಿತ್ತು. ಹಾಗೆಯೇ, ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ನೀವು ನನ್ನ ಆದೇಶದಂತೆ ಗುಣಪಡಿಸಿ ಬಿಡುತ್ತಿದ್ದಿರಿ. ಮತ್ತು ನನ್ನ ಆದೇಶದಂತೆ ನೀವು ಮೃತರನ್ನು (ಗೋರಿಯಿಂದ) ಜೀವಂತ ಹೊರತೆಗೆಯುತ್ತಿದ್ದಿರಿ. ನೀವು ಸ್ಪಷ್ಟ ಪುರಾವೆಗಳೊಂದಿಗೆ ಇಸ್ರಾಈಲರ ಸಂತತಿಗಳ ಬಳಿಗೆ ಬಂದಿದ್ದಾಗ (ನಿಮ್ಮ ಮೇಲೆ ಕೈ ಎತ್ತದಂತೆ) ಅವರನ್ನು ನಾನು ತಡೆದಿದ್ದೆನು. ಅವರಲ್ಲಿನ ಧಿಕ್ಕಾರಿಗಳು, ‘‘ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನೂ ಅಲ್ಲ’’ ಎಂದರು

[110] ನಾನು ಹವಾರಿಗಳಿಗೆ (ಈಸಾರ ಶಿಷ್ಯರಿಗೆ), ನನ್ನಲ್ಲೂ ನನ್ನ ದೂತರಲ್ಲೂ ನಂಬಿಕೆ ಇಡಿರಿ ಎಂಬ ದಿವ್ಯ ಸಂದೇಶವನ್ನು ಕಳಿಸಿದಾಗ ಅವರು ‘‘ನಾವು ನಂಬಿದೆವು. ನೀನು ಸಾಕ್ಷಿಯಾಗಿರು, ಖಂಡಿತವಾಗಿಯೂ ನಾವು ಮುಸ್ಲಿಮರಾದೆವು’’ ಎಂದಿದ್ದರು

[111] (ಮುಂದೆ) ಹವಾರಿಗಳು ‘‘ಓ ಮರ್ಯಮರ ಪುತ್ರ ಈಸಾ, ಆಕಾಶದಿಂದ ನಮಗೊಂದು ಭೋಜನ ತುಂಬಿದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಒಡೆಯನಿಗೆ ಸಾಧ್ಯವೆ?’’ ಎಂದು ಕೇಳಿದಾಗ ಅವರು (ಈಸಾ) ‘‘ನೀವು ಸತ್ಯದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನಿಗೆ ಅಂಜುತ್ತಲಿರಿ’’ ಎಂದರು

[112] ಅವರು (ಹವಾರಿಗಳು) ಹೇಳಿದರು; ‘‘ನಾವು ಅದರಿಂದ (ಆ ತಟ್ಟೆಯಿಂದ) ಉಣ್ಣುತ್ತಾ ನಮ್ಮ ಮನಸ್ಸುಗಳನ್ನು ತೃಪ್ತಿಪಡಿಸುತ್ತಿರಬೇಕು ಮತ್ತು ನೀವು ನಮ್ಮ ಮುಂದೆ ಸತ್ಯವನ್ನೇ ಹೇಳಿದ್ದಿರೆಂಬುದು ನಮಗೆ (ಖಚಿತವಾಗಿ) ತಿಳಿದು ನಾವು ಅದಕ್ಕೆ ಸಾಕ್ಷಿಗಳಾಗಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ’’

[113] ಮರ್ಯಮರ ಪುತ್ರ ಈಸಾ ಹೇಳಿದರು; ‘‘ಓ ಅಲ್ಲಾಹ್, ನಮ್ಮೊಡೆಯಾ, ನಮಗೆ ಆಕಾಶದಿಂದ ಭೋಜನ ತುಂಬಿದ ಒಂದು ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮ ಮೊದಲಿಗರಿಗೂ ಕೊನೆಯವರಿಗೂ ಸಂಭ್ರಮವಾಗಲಿ ಮತ್ತು ಅದು ನಿನ್ನ ವತಿಯಿಂದ ಒಂದು ಪುರಾವೆಯಾಗಲಿ. ನಮಗೆ ನೀನು ಆಹಾರವನ್ನು ದಯಪಾಲಿಸು. ನೀನೇ ಅತ್ಯುತ್ತಮ ಆಹಾರ ನೀಡುವವನು’’

[114] ಅಲ್ಲಾಹನು ಹೇಳಿದನು; ‘‘ನಾನು ಖಂಡಿತ ಅದನ್ನು ನಿಮಗೆ ಇಳಿಸಿಕೊಡುವೆನು. ಆದರೆ ಆ ಬಳಿಕವೂ ನಿಮ್ಮಲ್ಲಿ ಯಾರಾದರೂ ಧಿಕ್ಕಾರಿಯಾದರೆ, ಆತನಿಗೆ ನಾನು ಸರ್ವಜಗತ್ತಿನಲ್ಲಿ ಯಾರಿಗೂ ನೀಡಿಲ್ಲದ ಶಿಕ್ಷೆಯನ್ನು ನೀಡುವೆನು’’

[115] (ಪರಲೋಕದಲ್ಲಿ) ಅಲ್ಲಾಹನು; ‘‘ಮರ್ಯಮರ ಪುತ್ರ ಈಸಾ, ನೀವೇನು ಜನರೊಡನೆ – ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿಸಿಕೊಳ್ಳಿರಿ – ಎಂದು ಹೇಳಿದ್ದಿರಾ?’’ ಎಂದು ಕೇಳಿದಾಗ ಅವರು (ಈಸಾ) ಹೇಳುವರು; ‘‘ನೀನು ಪಾವನನು. ನನಗೆ ಹೇಳಲು ಹಕ್ಕೇ ಇಲ್ಲದಂತಹ ಮಾತನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಒಂದು ವೇಳೆ ನಾನು ಹಾಗೇನಾದರೂ ಹೇಳಿದ್ದರೆ ನಿನಗೆ ಅದರ ಅರಿವಿರುತ್ತಿತ್ತು. ನನ್ನ ಮನದೊಳಗೆ ಇರುವುದೆಲ್ಲವೂ ನಿನಗೆ ತಿಳಿದಿದೆ. ನಿನ್ನ ಮನದೊಳಗಿರುವ ಯಾವುದೂ ನನಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನೂ ಖಂಡಿತ ಬಲ್ಲವನು’’

[116] ‘‘ನೀನು ನನಗೆ ಆದೇಶಿಸಿರುವುದರ ಹೊರತು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. – ನನ್ನ ಒಡೆಯನೂ ನಿಮ್ಮ ಒಡೆಯನೂ ಅಗಿರುವ ಅಲ್ಲಾಹನನ್ನೇ ಆರಾಧಿಸಿರಿ (ಎಂದಷ್ಟೇ ನಾನು ಹೇಳಿದ್ದೆ). ನಾನು ಅವರ ನಡುವೆ ಇದ್ದಷ್ಟು ಕಾಲ ಅವರ ವಿಷಯದಲ್ಲಿ ನಾನೇ ಸಾಕ್ಷಿಯಾಗಿದ್ದೆ. ತರುವಾಯ ನೀನು ನನ್ನನ್ನು ಮೇಲೆತ್ತಿಕೊಂಡ ಬಳಿಕ ನೀನೇ ಅವರ ಮೇಲ್ವಿಚಾರಕನಾಗಿದ್ದೆ. ನೀನಂತೂ ಪ್ರತಿಯೊಂದು ವಿಷಯಕ್ಕೂ ಸಾಕ್ಷಿಯಾಗಿರುವೆ’’

[117] ‘‘ನೀನೀಗ ಅವರನ್ನು ಶಿಕ್ಷಿಸುವುದಾದರೆ, ಅವರು ನಿನ್ನ ದಾಸರು. ಇನ್ನು ನೀನು ಅವರನ್ನು ಕ್ಷಮಿಸುವುದಾದರೆ ನೀನಂತು ಪ್ರಚಂಡನೂ, ಯುಕ್ತಿವಂತನೂ ಆಗಿರುವೆ’’

[118] ಅಲ್ಲಾಹನು ಹೇಳುವನು; ಇಂದಿನ ದಿನವು ಸತ್ಯವಂತರಿಗೆ ಅವರ ಸತ್ಯವು ಲಾಭವೊದಗಿಸುವ ದಿನವಾಗಿದೆ. ಅವರಿಗಾಗಿ, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ತೋಟಗಳಿವೆ. ಅವರು ಸದಾಕಾಲ ಅವುಗಳಲ್ಲಿರುವರು. ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಇದುವೇ ಮಹಾ ವಿಜಯ

[119] ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಮಾಲಕತ್ವವು ಅಲ್ಲಾಹನಿಗೆ ಸೇರಿದೆ. ಅವನಂತು ಎಲ್ಲವನ್ನೂ ಮಾಡಬಲ್ಲನು

[120] ಎಲ್ಲ ಪ್ರಶಂಸೆ ಅಲ್ಲಾಹನಿಗೆ. ಅವನೇ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಮತ್ತು ಕತ್ತಲುಗಳನ್ನು ಹಾಗೂ ಬೆಳಕನ್ನು ರೂಪಿಸಿದವನು. ಇಷ್ಟಾಗಿಯೂ ಧಿಕ್ಕಾರಿಗಳು (ಅನ್ಯರನ್ನು) ತಮ್ಮ ಒಡೆಯನಿಗೆ ಸಮಾನರೆಂದು ಪರಿಗಣಿಸುತ್ತಾರೆ

ಜಾನುವಾರುಗಳು

Surah 6

[1] ಅವನೇ ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದವನು ಹಾಗೂ ಆ ಬಳಿಕ (ನಿಮ್ಮ ಮರಣಕ್ಕೆ) ಒಂದು ಸಮಯವನ್ನು ನಿಗದಿಗೊಳಿಸಿದವನು. ಅವನ ಬಳಿಯಂತು (ಎಲ್ಲದಕ್ಕೂ) ಸಮಯವು ನಿಶ್ಚಿತವಾಗಿದೆ. ಆದರೆ ನೀವು ಸಂಶಯಿಸುತ್ತಿರುವಿರಿ

[2] ಆಕಾಶಗಳಲ್ಲೂ ಭೂಮಿಯಲ್ಲೂ ಆ ಅಲ್ಲಾಹನೇ ಇರುವನು. ನಿಮ್ಮ ಗುಪ್ತ ಹಾಗೂ ಬಹಿರಂಗವಾದ ಎಲ್ಲ ಸಂಗತಿಗಳನ್ನೂ ಅವನು ಬಲ್ಲನು ಮತ್ತು ನೀವು ಏನನ್ನು ಸಂಪಾದಿಸುತ್ತಿರುವಿರಿ ಎಂಬುದೂ ಅವನಿಗೆ ತಿಳಿದಿದೆ

[3] ಅಲ್ಲಾಹನ ದೃಷ್ಟಾಂತಗಳ ಪೈಕಿ, ತಮ್ಮ ಬಳಿಗೆ ಬಂದ ಪ್ರತಿಯೊಂದು ದೃಷ್ಟಾಂತವನ್ನೂ ಅವರು ಕಡೆಗಣಿಸಿದರು

[4] ಸತ್ಯವು ತಮ್ಮ ಬಳಿಗೆ ಬಂದಾಗಲೆಲ್ಲಾ ಅವರು ಅದನ್ನು ಸುಳ್ಳೆಂದು ತಿರಸ್ಕರಿಸಿದರು. ಆದರೆ ಅವರು ಈ ತನಕ ಗೇಲಿ ಮಾಡುತ್ತಿದ್ದ ವಿಷಯಗಳ ಸತ್ಯಾಂಶವು ಶೀಘ್ರವೇ ಅವರಿಗೆ ತಿಳಿಯಲಿದೆ

[5] ನಾವು ಅವರಿಗಿಂತ ಮುನ್ನ ಅದೆಷ್ಟು ಜನಾಂಗಗಳನ್ನು ನಾಶಗೊಳಿಸಿರುವೆವೆಂದು ಅವರು ಕಂಡಿಲ್ಲವೇ? ಭೂಮಿಯಲ್ಲಿ ನಿಮಗೆ ನೀಡಿಲ್ಲದಷ್ಟು ಸ್ಥಿರತೆಯನ್ನು ನಾವು ಅವರಿಗೆ ನೀಡಿದ್ದೆವು ಹಾಗೂ ಆಕಾಶದಿಂದಲೂ ಅವರ ಮೇಲೆ ಧಾರಾಳ ಮಳೆಯನ್ನು ಸುರಿಸಿದೆವು ಮತ್ತು ನಾವು ಅವರ ತಳದಲ್ಲಿ ನದಿಗಳನ್ನು ಹರಿಸಿದೆವು – ಕೊನೆಗೆ, ಅವರ ಪಾಪಗಳ ಕಾರಣ ನಾವು ಅವರನ್ನು ನಾಶ ಮಾಡಿದೆವು ಮತ್ತು ಅವರ ಬಳಿಕ ಬೇರೆ ಜನಾಂಗಗಳನ್ನು ಮುಂದೆ ತಂದೆವು

[6] (ದೂತರೇ,) ಒಂದು ವೇಳೆ ನಾವು ನಿಮಗೆ ಕಾಗದದಲ್ಲಿ ಬರೆದಿರುವ ಸಂದೇಶವನ್ನು ಇಳಿಸಿಕೊಟ್ಟಿದ್ದರೆ ಮತ್ತು ಅವರು (ಜನರು) ಅದನ್ನು ತಮ್ಮ ಕೈಗಳಿಂದ ಮುಟ್ಟುವಂತಿದ್ದರೆ, ಆಗಲೂ ಧಿಕ್ಕಾರಿಗಳು – ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನೂ ಅಲ್ಲ – ಎನ್ನುತ್ತಿದ್ದರು

[7] ‘‘ಅವರ (ದೂತರ) ಜೊತೆ ‘ಮಲಕ್’ ಅನ್ನು ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ಒಂದು ವೇಳೆ ನಾವು ಮಲಕ್‌ಗಳನ್ನು ಇಳಿಸಿಬಿಟ್ಟಿದ್ದರೆ ಎಲ್ಲವೂ ಇತ್ಯರ್ಥವಾಗಿ ಬಿಡುತ್ತಿತ್ತು ಮತ್ತು ಅವರಿಗೆ ಕಾಲಾವಕಾಶವೇ ಸಿಗುತ್ತಿರಲಿಲ್ಲ

[8] ಇನ್ನು ನಾವು ಮಲಕ್ ಅನ್ನು ಕಳಿಸಿದ್ದರೂ, ಆತನನ್ನು ಮಾನವ ರೂಪದಲ್ಲೇ ಕಳುಹಿಸುತ್ತಿದ್ದೆವು ಮತ್ತು ಆಗಲೂ, ನಾವು ಅವರಲ್ಲಿ, ಅವರು ಈಗ ಪ್ರಕಟಿಸುತ್ತಿರುವಂತಹ ಸಂದೇಹವನ್ನೇ ಬಿತ್ತುತ್ತಿದ್ದೆವು

[9] (ದೂತರೇ,) ನಿಮಗಿಂತ ಹಿಂದಿನ ದೇವದೂತರುಗಳನ್ನೂ ಗೇಲಿ ಮಾಡಲಾಗಿತ್ತು. ಆದರೆ ಕೊನೆಗೆ, ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರಲ್ಲಿನ ಗೇಲಿ ಮಾಡುವವರನ್ನು ಆವರಿಸಿಕೊಂಡಿತು

[10] ಹೇಳಿರಿ; ಭೂಮಿಯಲ್ಲಿ ಪ್ರಯಾಣಿಸಿರಿ ಮತ್ತು ಧಿಕ್ಕಾರಿಗಳಿಗೆ ಎಂತಹ ಗತಿ ಒದಗಿತೆಂಬುದನ್ನು ನೋಡಿರಿ

[11] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಯಾರಿಗೆ ಸೇರಿದ್ದೆಂದು (ಜನರೊಡನೆ) ಕೇಳಿರಿ (ಮತ್ತು) ಹೇಳಿರಿ; ಅಲ್ಲಾಹನಿಗೇ ಸೇರಿದೆ. ಅವನು ತನ್ನ ಮೇಲೆ ಕರುಣೆಯನ್ನು ಕಡ್ಡಾಯಗೊಳಿಸಿರುತ್ತಾನೆ. ಅವನು ಪುನರುತ್ಥಾನ ದಿನ ನಿಮ್ಮೆಲ್ಲರನ್ನೂ ಸೇರಿಸುವನೆಂಬುದರಲ್ಲಿ ಸಂದೇಹವಿಲ್ಲ. ಸ್ವತಃ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರು (ಸತ್ಯವನ್ನು) ನಂಬಲಾರರು

[12] ಇರುಳಲ್ಲೂ ಹಗಲಲ್ಲೂ ಇರುವ ಎಲ್ಲವೂ ಅವನಿಗೇ (ಅಲ್ಲಾಹನಿಗೇ) ಸೇರಿದೆ. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನು

[13] ಹೇಳಿರಿ; ನಾನೇನು ಅಲ್ಲಾಹನನ್ನು ಬಿಟ್ಟು ಅನ್ಯರನ್ನು ನನ್ನ ಪೋಷಕನಾಗಿಸಿ ಕೊಳ್ಳಬೇಕೇ? ಅವನಂತು ಆಕಾಶಗಳನ್ನು ಮತ್ತು ಭೂಮಿಯನ್ನು ನಿರ್ಮಿಸಿದವನು. ಅವನು (ಎಲ್ಲರಿಗೆ) ಉಣಿಸುತ್ತಾನೆ ಆದರೆ ತಾನು ಉಣ್ಣುವುದಿಲ್ಲ. ಹೇಳಿರಿ; ನನಗಂತು (ಅಲ್ಲಾಹನಿಗೆ) ಶರಣಾದವರಲ್ಲಿ ಪ್ರಥಮನಾಗಬೇಕೆಂದು ಹಾಗೂ ಅವನ ಜೊತೆ (ಅನ್ಯರನ್ನು) ಪಾಲುಗೊಳಿಸುವವನಾಗಬಾರದು ಎಂದು ಆದೇಶಿಸಲಾಗಿದೆ

[14] ಹೇಳಿರಿ; ಒಂದು ವೇಳೆ ನಾನು ಅವಿಧೇಯನಾದರೆ, ಒಂದು ಮಹಾ ದಿನದ ಶಿಕ್ಷೆಯ ಭಯ ನನಗಿದೆ

[15] ಅಂದು ಅದನ್ನು (ಶಿಕ್ಷೆಯನ್ನು) ಯಾರಿಂದ ನಿವಾರಿಸಲಾಯಿತೋ ಅವನ ಮೇಲೆ ಅವನು (ಅಲ್ಲಾಹನು) ಕರುಣೆ ತೋರಿದನು – ಅದು ನಿಜಕ್ಕೂ ಸ್ಪಷ್ಟ ವಿಜಯವಾಗಿದೆ

[16] ಅಲ್ಲಾಹನು ನಿಮಗೇನಾದರೂ ಹಾನಿ ಮಾಡಿದರೆ ಅವನ ಹೊರತು ಬೇರೆ ಯಾರೂ ಅದನ್ನು ನಿವಾರಿಸಲಾರರು. ಹಾಗೆಯೇ, ಅವನು ನಿಮಗೇನಾದರೂ ಹಿತವನ್ನು ಮಾಡಿದರೆ, ಅವನಂತು ಎಲ್ಲವನ್ನೂ ಮಾಡಲು ಶಕ್ತನು

[17] ಅವನು ತನ್ನ ದಾಸರ ಮೇಲೆ ಪ್ರಾಬಲ್ಯ ಉಳ್ಳವನು ಮತ್ತು ಅವನು ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ

[18] (ದೂತರೇ) ‘‘ಯಾರ ಸಾಕ್ಷವು ಹೆಚ್ಚು ದೊಡ್ಡದು?’’ ಎಂದು ಕೇಳಿರಿ (ಮತ್ತು) ಹೇಳಿರಿ; ‘‘ಅಲ್ಲಾಹನದು. ನನ್ನ ಹಾಗೂ ನಿಮ್ಮ ನಡುವೆ ಅವನೇ ಸಾಕ್ಷಿ. ಈ ಕುರ್‌ಆನ್‌ನ ಮೂಲಕ ನಾನು ನಿಮ್ಮನ್ನು ಹಾಗೂ ಇದು ಯಾರಿಗೆಲ್ಲಾ ತಲುಪುವುದೋ ಅವರೆಲ್ಲರನ್ನೂ ಎಚ್ಚರಿಸಬೇಕೆಂದು ಇದನ್ನು ನನಗೆ ದಿವ್ಯ ಸಂದೇಶವಾಗಿ ನೀಡಲಾಗಿದೆ. ಅಲ್ಲಾಹನ ಜೊತೆ ಬೇರೆ ದೇವರಿದ್ದಾರೆಂದು ನೀವೇನು ಸಾಕ್ಷಿ ಹೇಳಬಲ್ಲಿರಾ?’’ ಹೇಳಿರಿ; ‘‘ನಾನಂತು (ಆ ರೀತಿ) ಸಾಕ್ಷಿ ಹೇಳಲಾರೆ.’’ ಹೇಳಿರಿ; ‘‘ಪೂಜಾರ್ಹನು ಅವನೊಬ್ಬನು ಮಾತ್ರ. ನೀವು ಅವನ ಜೊತೆ ಪಾಲುಗೊಳಿಸುವ ಎಲ್ಲವುಗಳಿಂದ ನಾನು ಮುಕ್ತನಾಗಿದ್ದೇನೆ.’’

[19] ಯಾರಿಗೆ ನಾವು ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಪುತ್ರರನ್ನು ಗುರುತಿಸುವಂತೆ ಇದನ್ನು (ಕುರ್‌ಆನನ್ನು) ಗುರುತಿಸುತ್ತಾರೆ. ಆದರೆ ತಮ್ಮನ್ನು ತಾವೇ ನಷ್ಟದಲ್ಲಿ ಸಿಲುಕಿಸಿಕೊಂಡವರು ನಂಬುವವರಲ್ಲ

[20] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವಾತನಿಗಿಂತ ಅಥವಾ ಅವನ (ಅಲ್ಲಾಹನ) ವಚನಗಳನ್ನು ತಿರಸ್ಕರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ

[21] ನಾವು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ, ನಾವು ಬಹುದೇವಾರಾಧಕರೊಡನೆ ‘‘ಎಲ್ಲಿದ್ದಾರೆ ನೀವು ಅಭಿಮಾನ ಪಡುತ್ತಿದ್ದ ಆ ನಿಮ್ಮ ದೇವತ್ವದ ಪಾಲುದಾರರು?’’ ಎಂದು ಪ್ರಶ್ನಿಸುವೆವು

[22] ಆಗ ಅವರ ಬಳಿ ‘‘ನಮ್ಮೊಡೆಯನಾದ ಅಲ್ಲಾಹನಾಣೆ, ನಾವು ಬಹುದೇವಾರಾಧಕರಾಗಿರಲಿಲ್ಲ’’ ಎನ್ನುವುದು ಬಿಟ್ಟರೆ ಬೇರೆ ಯಾವ ಕುತಂತ್ರವೂ ಉಳಿದಿರಲಾರದು

[23] ಅವರು ಯಾವ ರೀತಿ ಸ್ವತಃ ತಮ್ಮ ವಿರುದ್ಧವೇ ಸುಳ್ಳುಗಳನ್ನು ಹೇಳುತ್ತಿದ್ದಾರೆಂಬುದನ್ನು ನೋಡಿರಿ. ಕೊನೆಗೆ ಅವರು ರಚಿಸಿಕೊಂಡಿದ್ದ ಎಲ್ಲವೂ ಅವರಿಂದ ಕಳೆದು ಹೋಗುವುದು

[24] (ದೂತರೇ,) ಅವರಲ್ಲಿ ಕೆಲವರು ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ ಅದು ಅವರಿಗೆ ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆ ಎಳೆದಿರುವೆವು. ಅವರ ಕಿವಿಗಳಲ್ಲಿ ತಡೆ ಇದೆ. ಅವರು (ಸತ್ಯದ ಪರವಾಗಿ) ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಅವರು ನಿಮ್ಮ ಬಳಿಗೆ ಬಂದಾಗ ನಿಮ್ಮೊಡನೆ ಜಗಳಾಡುತ್ತಾರೆ ಮತ್ತು ಧಿಕ್ಕಾರಿಗಳು ‘‘ಇವೆಲ್ಲಾ ಗತಕಾಲದವರ ಕತೆಗಳು ಮಾತ್ರ’’ ಎನ್ನುತ್ತಾರೆ

[25] ಅವರು ಅದರಿಂದ (ಸತ್ಯದಿಂದ) ಇತರರನ್ನು ತಡೆಯುತ್ತಾರೆ ಮತ್ತು ಸ್ವತಃ ಅದರಿಂದ ದೂರ ಉಳಿಯುತ್ತಾರೆ. ನಿಜವಾಗಿ ಅವರು ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ

[26] (ಆ ದೃಶ್ಯವನ್ನು) ನೀವು ಕಾಣಬೇಕಿತ್ತು! ಅವರನ್ನು ನರಕದ ಬೆಂಕಿಯಲ್ಲಿ ನಿಲ್ಲಿಸಲಾದಾಗ ಅವರು ಹೇಳುವರು; ‘‘ಅಯ್ಯೋ, ನಮ್ಮನ್ನು ಮರಳಿ (ಇಹಲೋಕಕ್ಕೆ) ಕಳಿಸಿದ್ದರೆ ಎಷ್ಟು ಚೆನ್ನಾಗಿತ್ತು! ನಾವು ನಮ್ಮೊಡೆಯನ ಯಾವ ದೃಷ್ಟಾಂತವನ್ನೂ ತಿರಸ್ಕರಿಸದೆ, ಸತ್ಯವಿಶ್ವಾಸಿಗಳಾಗಿ ಬಿಡುತ್ತಿದ್ದೆವು’’

[27] ನಿಜವಾಗಿ ಅವರು ಈ ಹಿಂದೆ ಬಚ್ಚಿಟ್ಟಿದ್ದ ಎಲ್ಲವೂ ಅವರ ಮುಂದೆ ಪ್ರಕಟವಾಗಿದೆ. ಅವರನ್ನು ಮತ್ತೆ (ಇಹಲೋಕಕ್ಕೆ) ಮರಳಿಸಿದರೆ, ಅವರನ್ನು ಯಾವುದರಿಂದ ತಡೆಯಲಾಗಿದೆಯೋ, ಅದನ್ನೇ ಅವರು ಮತ್ತೆ ಮಾಡುವರು. ಅವರು ಖಂಡಿತ ಸುಳ್ಳುಗಾರರು

[28] ‘‘ನಮ್ಮ ಬದುಕು ಇರುವುದು ಈ ಲೋಕದಲ್ಲಿ ಮಾತ್ರ. (ಮರಣಾನಂತರ) ನಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದಿಲ್ಲ’’ ಎಂದು ಅವರು ಹೇಳುತ್ತಾರೆ

[29] ಅವರನ್ನು ಅವರ ಒಡೆಯನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ನೀವು ಕಾಣಬೇಕಿತ್ತು! ಅವನು (ಅಲ್ಲಾಹನು) ಅವರೊಡನೆ ‘‘ಇದೆಲ್ಲಾ ಸತ್ಯವಲ್ಲವೆ?’’ ಎಂದು ಕೇಳುವನು. ಅವರು ‘‘ನಮ್ಮೊಡೆಯನಾಣೆ, ಇದೆಲ್ಲವೂ ಖಂಡಿತ ಸತ್ಯ’’ ಎನ್ನುವರು. ಆಗ ಅವನು ‘‘ನೀವು (ಇದನ್ನೆಲ್ಲಾ) ಧಿಕ್ಕರಿಸಿದ ಫಲಿತಾಂಶವಾಗಿ ಇದೀಗ ಶಿಕ್ಷೆಯನ್ನು ಸವಿಯಿರಿ’’ ಎಂದು ಹೇಳುವನು

[30] ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನಿರಾಕರಿಸಿದವರು ಭಾರೀ ನಷ್ಟದಲ್ಲಿರುವರು. ಅಂತಿಮ ಘಳಿಗೆಯು ಹಠಾತ್ತನೆ ಅವರ ಮೇಲೆ ಬಂದೆರಗಿದಾಗ ಅವರು ‘‘ಅಯ್ಯೋ ನಮ್ಮ ದುಸ್ಥಿತಿ! ನಾವು ಇದನ್ನು ಕಡೆಗಣಿಸಿದ್ದೆವು’’ ಎನ್ನುವರು. ಅಂದು ಅವರು ತಮ್ಮ ಬೆನ್ನ ಮೇಲೆ ತಮ್ಮ (ಪಾಪಗಳ) ಭಾರವನ್ನು ಹೊತ್ತುಕೊಂಡಿರುವರು. ತಿಳಿದಿರಲಿ! ತೀರಾ ಕೆಟ್ಟದು, ಅವರ ಆ ಹೊರೆ

[31] ಇಹಲೋಕದ ಬದುಕೆಂಬುದು ಕೇವಲ ಆಟ ಹಾಗೂ ಮನರಂಜನೆಯಾಗಿದೆ. ಸತ್ಯನಿಷ್ಠರ ಪಾಲಿಗಂತು ಪರಲೋಕದ ನಿವಾಸವೇ ಶ್ರೇಷ್ಠವಾಗಿದೆ. ನೀವೇನು ಆಲೋಚಿಸುವುದಿಲ್ಲವೇ

[32] (ದೂತರೇ) ಅವರು ಆಡುತ್ತಿರುವ ಮಾತುಗಳಿಂದ ನಿಮಗೆ ದುಃಖವಾಗುತ್ತಿದೆ ಎಂಬುದು ನಮಗೆ ಖಂಡಿತ ತಿಳಿದಿದೆ. ನಿಜವಾಗಿ ಅವರು ಧಿಕ್ಕರಿಸುತ್ತಿರುವುದು ನಿಮ್ಮನ್ನಲ್ಲ. ಆ ಅಕ್ರಮಿಗಳು ಸಾಕ್ಷಾತ್ ಅಲ್ಲಾಹನ ವಚನಗಳನ್ನು ತಿರಸ್ಕರಿಸುತ್ತಿದ್ದಾರೆ

[33] ನಿಮಗಿಂತ ಹಿಂದಿನ ದೂತರುಗಳನ್ನೂ ಧಿಕ್ಕರಿಸಲಾಗಿತ್ತು. ಆದರೆ ತಮ್ಮನ್ನು ಧಿಕ್ಕರಿಸಲಾದಾಗ ಹಾಗೂ ತಮಗೆ ಕಿರುಕುಳ ನೀಡಲಾದಾಗ ಅವರು ಸಹನೆ ತೋರಿದರು ಕೊನೆಗೆ ಅವರ ಬಳಿಗೆ ನಮ್ಮ ನೆರವು ಬಂದು ಬಿಟ್ಟಿತು. ಅಲ್ಲಾಹನ ವಚನಗಳನ್ನು ಯಾರೂ ಬದಲಿಸುವಂತಿಲ್ಲ. ದೂತರುಗಳ ವೃತ್ತಾಂತವು ಈಗಾಗಲೇ ನಿಮ್ಮ ಬಳಿಗೆ ಬಂದಿದೆ

[34] ಅವರ ಅವಗಣನೆಯು ನಿಮಗೆ ಅಷ್ಟೊಂದು ಅಸಹನೀಯವಾಗಿದ್ದರೆ – ನಿಮಗೆ ಸಾಧ್ಯವಿದ್ದರೆ – ಭೂಮಿಯಲ್ಲೊಂದು ಸುರಂಗವನ್ನು ಅಗೆಯಿರಿ ಅಥವಾ ಆಕಾಶಕ್ಕೊಂದು ಏಣಿಯನ್ನು ಹುಡುಕಿರಿ ಹಾಗೂ (ಅವರಿಗೆ ಬೇಕಾಗಿರುವ) ಪುರಾವೆಯನ್ನು ಅವರಿಗೆ ತಂದು ಕೊಡಿರಿ. ಅಲ್ಲಾಹನು ಬಯಸಿದ್ದರೆ (ಅವನೇ) ಅವರೆಲ್ಲರನ್ನೂ ನೇರ ಮಾರ್ಗದಲ್ಲಿ ಒಂದು ಗೂಡಿಸುತ್ತಿದ್ದನು. ನೀವು ಅರಿವಿಲ್ಲದವರ ಸಾಲಿಗೆ ಸೇರಬೇಡಿ

[35] ನಿಜವಾಗಿ, ಆಲಿಸುವವರು ಮಾತ್ರ ಉತ್ತರಿಸುತ್ತಾರೆ. ಸತ್ತವರನ್ನು ಅಲ್ಲಾಹನು ಜೀವಂತ ಗೊಳಿಸುವನು ಮತ್ತು ಅವರು ಅವನೆಡೆಗೆ ಮರಳುವರು

[36] ‘‘ಅವನಿಗೆ ಅವನ ಒಡೆಯನ ಕಡೆಯಿಂದ ಯಾವುದೇ ಪುರಾವೆಯನ್ನು ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ‘‘ಅಲ್ಲಾಹನಂತು ಪುರಾವೆಯನ್ನು ಇಳಿಸಿಕೊಡಲು ಸದಾ ಶಕ್ತನಾಗಿದ್ದಾನೆ’’ ಎಂದು ಹೇಳಿರಿ; ಆದರೆ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ

[37] ಭೂಮಿಯಲ್ಲಿ ಚಲಿಸುವ ಪ್ರತಿಯೊಂದು ಜೀವಿ ಹಾಗೂ ತನ್ನ ಎರಡು ರೆಕ್ಕೆಗಳ ಮೂಲಕ ಹಾರುವ ಪ್ರತಿಯೊಂದು ಪಕ್ಷಿ – ಅವೆಲ್ಲಾ ನಿಮ್ಮಂತಹದೇ ಸಮುದಾಯಗಳು. ನಾವು ಗ್ರಂಥದಲ್ಲಿ ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ಕೊನೆಗೆ ಎಲ್ಲರನ್ನೂ ಅವರ ಒಡೆಯನ ಬಳಿ ಒಟ್ಟು ಸೇರಿಸಲಾಗುವುದು

[38] ನಮ್ಮ ಪುರಾವೆಗಳನ್ನು ತಿರಸ್ಕರಿಸಿದವರು (ಅಂದು) ಕಿವುಡರೂ, ಮೂಗರೂ ಆಗಿ ಕತ್ತಲಲ್ಲಿರುವರು. ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವನನ್ನು ಸ್ಥಿರವಾದ ನೇರ ಮಾರ್ಗಕ್ಕೆ ಒಯ್ಯುತ್ತಾನೆ

[39] ಹೇಳಿರಿ; ನೀವು ನೋಡಿದಿರಾ? ಒಂದು ವೇಳೆ ನಿಮ್ಮ ಬಳಿಗೆ ಅಲ್ಲಾಹನ ಶಿಕ್ಷೆಯು ಬಂದು ಬಿಟ್ಟರೆ ಅಥವಾ ಅಂತಿಮ ಘಳಿಗೆಯು ನಿಮ್ಮ ಮೇಲೆ ಬಂದೆರಗಿದರೆ, ನೀವೇನು ಅಲ್ಲಾಹನ ಹೊರತು ಬೇರೆ ಯಾರಿಗಾದರೂ ಮೊರೆ ಇಡುವಿರಾ? ನೀವು ಸತ್ಯವಂತರಾಗಿದ್ದರೆ (ಹೇಳಿರಿ)

[40] ನೀವು ಅವನಿಗೆ (ಅಲ್ಲಾಹನಿಗೇ) ಮೊರೆ ಇಡುತ್ತೀರಿ ಮತ್ತು ಅವನು ಇಚ್ಛಿಸಿದರೆ, ಯಾವ (ವಿಪತ್ತಿನ) ಕಾರಣ ನೀವು ಮೊರೆ ಇಟ್ಟಿದ್ದಿರೋ ಅದನ್ನು ಅವನು ನಿಮ್ಮಿಂದ ನಿವಾರಿಸಿ ಬಿಡುತ್ತಾನೆ. ಆಗ ನೀವು, (ದೇವತ್ವದಲ್ಲಿ) ಪಾಲುಗೊಳಿಸಿದ್ದವರನ್ನೆಲ್ಲಾ ಮರೆತು ಬಿಡುತ್ತೀರಿ

[41] ನಿಮಗಿಂತ ಹಿಂದಿನ ಸಮುದಾಯಗಳ ಕಡೆಗೂ ನಾವು ದೂತರನ್ನು ಕಳುಹಿಸಿದ್ದೆವು ಮತ್ತು ಆ ಜನರು ವಿನಯಶೀಲರಾಗಲೆಂದು ನಾವು ಅವರನ್ನು ಕಾಠಿಣ್ಯಗಳಿಗೆ ಹಾಗೂ ಸಂಕಷ್ಟಗಳಿಗೆ ತುತ್ತಾಗಿಸಿದೆವು

[42] ನಾವು ಕಳುಹಿಸಿದ ಸಂಕಷ್ಟವು ಅವರನ್ನು ತಲುಪಿದಾಗ ಅವರು ವಿನಯಶೀಲರಾಗಬೇಕಿತ್ತು. ಆದರೆ ಅವರ ಮನಸ್ಸುಗಳು ಮತ್ತಷ್ಟು ಕಠಿಣಗೊಂಡವು ಮತ್ತು ಅವರು ಮಾಡುತ್ತಿದ್ದ ಎಲ್ಲವನ್ನೂ ಶೈತಾನನು ಅವರಿಗೆ ಚಂದಗಾಣಿಸಿದ್ದನು

[43] ಅವರು ತಮಗೆ ನೀಡಲಾಗಿದ್ದ ಬೋಧನೆಯನ್ನು ಮರೆತು ಬಿಟ್ಟಾಗ ನಾವು ಅವರ ಪಾಲಿಗೆ ಎಲ್ಲ ವಸ್ತುಗಳ ಬಾಗಿಲುಗಳನ್ನು ತೆರೆದುಬಿಟ್ಟೆವು. ಕೊನೆಗೆ ಅವರು, ನಾವು ಅವರಿಗೆ ನೀಡಿದ ಕೊಡುಗೆಗಳಲ್ಲಿ ಮೈ ಮರೆತಾಗ ಹಠಾತ್ತನೆ ನಾವು ಅವರನ್ನು ಹಿಡಿದುಕೊಂಡೆವು – ಆಗ ಅವರು ತೀರಾ ನಿರಾಶರಾಗಿಬಿಟ್ಟರು

[44] ಕೊನೆಗೆ ಅಕ್ರಮಿ ಜನಾಂಗದ ಬುಡವನ್ನೇ ಕಡಿದು ಹಾಕಲಾಯಿತು. ಪ್ರಶಂಸೆಗಳೆಲ್ಲಾ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ

[45] (ದೂತರೇ,) ಹೇಳಿರಿ; ನೀವು ನೋಡಿದಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಶ್ರವಣ ಶಕ್ತಿಯನ್ನು ಹಾಗೂ ದೃಷ್ಟಿಯನ್ನು ಕಿತ್ತುಕೊಂಡರೆ ಮತ್ತು ನಿಮ್ಮ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಟ್ಟರೆ ಅಲ್ಲಾಹನ ಹೊರತು ಬೇರೆ ಯಾವ ದೇವರಿದ್ದಾರೆ, ಅವುಗಳನ್ನು ನಿಮಗೆ ತಂದು ಕೊಡಬಲ್ಲವರು? ನಾವು ಸತ್ಯದ ವಚನಗಳನ್ನು ಯಾವ ರೀತಿ ವಿಧವಿಧವಾಗಿ ವಿವರಿಸುತ್ತೇವೆ ಎಂಬುದನ್ನು ನೋಡಿರಿ – ಇಷ್ಟಾಗಿಯೂ ಅವರು (ಸತ್ಯದಿಂದ) ದೂರ ಉಳಿಯುತ್ತಿದ್ದಾರೆ

[46] ಹೇಳಿರಿ; ನೀವು ತಿಳಿಸುವಿರಾ? ಒಂದು ವೇಳೆ ನಿಮ್ಮ ಮೇಲೆ ಅಲ್ಲಾಹನ ಶಿಕ್ಷೆಯು ಹಠಾತ್ತಾಗಿ ಅಥವಾ ಪೂರ್ವ ಸೂಚನೆಯೊಂದಿಗೆ ಬಂದೆರಗಿದರೆ, ಅಕ್ರಮಿಗಳ ಹೊರತು ಇನ್ನಾರಾದರೂ ನಾಶವಾಗುವರೇ

[47] ನಾವು ಎಲ್ಲ ದೂತರನ್ನೂ ಶುಭವಾರ್ತೆ ನೀಡುವವರು ಹಾಗೂ ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳಿಸಿರುವೆವು. ಸತ್ಯದಲ್ಲಿ ನಂಬಿಕೆ ಇಟ್ಟು ತಮ್ಮನ್ನು ಸುಧಾರಿಸಿಕೊಂಡವರಿಗೆ ಯಾವುದೇ ಭಯವಿರದು ಮತ್ತು ಅವರು ದುಃಖಿಸಲಾರರು

[48] ಇನ್ನು, ನಮ್ಮ ವಚನಗಳನ್ನು ತಿರಸ್ಕರಿಸಿದರಿಗೆ ಅವರ ಅವಿಧೇಯತೆಯ ಕಾರಣ ಶಿಕ್ಷೆ ಸಿಗುವುದು

[49] (ದೂತರೇ), ಹೇಳಿರಿ; ನನ್ನ ಬಳಿ ಅಲ್ಲಾಹನ ಭಂಡಾರಗಳಿವೆ ಎಂದಾಗಲಿ, ಗುಪ್ತ ವಿಷಯಗಳ ಜ್ಞಾನ ನನಗಿದೆ ಎಂದಾಗಲಿ ನಾನು ನಿಮ್ಮೊಡನೆ ಹೇಳಿಲ್ಲ. ಹಾಗೆಯೇ ನಾನು ‘ಮಲಕ್’ ಎಂದು ಕೂಡಾ ನಿಮ್ಮೊಡನೆ ನಾನು ಹೇಳಿಕೊಂಡಿಲ್ಲ. ನಾನಂತು, ನನ್ನೆಡೆಗೆ ಕಳಿಸಲಾಗುತ್ತಿರುವ ದಿವ್ಯ ಸಂದೇಶವನ್ನಷ್ಟೇ ಅನುಸರಿಸುತ್ತಿದ್ದೇನೆ. ಹೇಳಿರಿ; ಕುರುಡರು ಮತ್ತು ಕಾಣಬಲ್ಲವರು ಸಮಾನರೇ? ನೀವೇನು ಚಿಂತಿಸುವುದಿಲ್ಲವೇ

[50] ತಮ್ಮನ್ನು ತಮ್ಮೊಡೆಯನ ಮುಂದೆ ಒಟ್ಟು ಸೇರಿಸಲಾಗುವುದು ಮತ್ತು ಅಲ್ಲಿ ಅವನ ಹೊರತು ತಮಗೆ ಯಾರೂ ರಕ್ಷಕರಾಗಲಿ ಶಿಫಾರಸುದಾರರಾಗಲಿ ಇರಲಾರರು ಎಂಬ ಭಯ ಉಳ್ಳವರಿಗೆ ನೀವು ಈ ಮೂಲಕ ಎಚ್ಚರಿಕೆ ನೀಡಿರಿ – ಅವರು ಸುರಕ್ಷಿತರಾಗಲೂ ಬಹುದು

[51] ಮುಂಜಾನೆಯೂ ಸಂಜೆ ಹೊತ್ತಿನಲ್ಲೂ ತಮ್ಮೊಡೆಯನ ಮೆಚ್ಚುಗೆಯನ್ನು ಅಪೇಕ್ಷಿಸುತ್ತಾ ಅವನನ್ನು ಪ್ರಾರ್ಥಿಸುತ್ತಿರುವ ಜನರನ್ನು ನೀವು ದೂರಗೊಳಿಸಬೇಡಿ. ಅವರ ವಿಚಾರಣೆಯ ಕುರಿತಾದ ಯಾವ ಹೊಣೆಯೂ ನಿಮ್ಮ ಮೇಲಿಲ್ಲ. ಹಾಗೆಯೇ ನಿಮ್ಮ ವಿಚಾರಣೆಯ ಕುರಿತಾದ ಯಾವುದೇ ಹೊಣೆ ಅವರ ಮೇಲಿಲ್ಲ. ನೀವಿನ್ನು ಅವರನ್ನು ದೂರ ಗೊಳಿಸಿದರೆ, ಅಕ್ರಮವೆಸಗಿದವರ ಸಾಲಿಗೆ ಸೇರುವಿರಿ

[52] ಅದೇ ರೀತಿ, ನಾವು ಅವರಲ್ಲಿನ ಕೆಲವರನ್ನು ಮತ್ತೆ ಕೆಲವರ ಮೂಲಕ ಪರೀಕ್ಷಿಸಿದೆವು – ‘‘ನಮ್ಮ ನಡುವೆ ಅಲ್ಲಾಹನು ಅನುಗ್ರಹಿಸಿರುವುದು ಇವರನ್ನೇ?’’ ಎಂದು ಅವರು ಕೇಳಲೆಂದು. ನಿಜವಾಗಿ ಕೃತಜ್ಞರನ್ನು ಹೆಚ್ಚು ಬಲ್ಲವನು ಅಲ್ಲಾಹನೇ ಅಲ್ಲವೇ

[53] ನಮ್ಮ ವಚನಗಳಲ್ಲಿ ನಂಬಿಕೆ ಉಳ್ಳವರು ನಿಮ್ಮ ಬಳಿಗೆ ಬಂದಾಗ ಹೇಳಿರಿ; ನಿಮ್ಮ ಮೇಲೆ ಶಾಂತಿ ಇರಲಿ. ನಿಮ್ಮ ಒಡೆಯನು, ಕೃಪೆಯನ್ನು ತನ್ನ ಮೇಲೆ ಕಡ್ಡಾಯ ಗೊಳಿಸಿಕೊಂಡಿರುವನು. ಎಷ್ಟೆಂದರೆ, ನಿಮ್ಮ ಪೈಕಿ ಅಜ್ಞಾನದಿಂದ ಯಾವುದಾದರೂ ದುಷ್ಕರ್ಮವನ್ನೆಸಗಿದವನು, ಆ ಬಳಿಕ ಪಶ್ಚಾತ್ತಾಪ ಪಟ್ಟು ತನ್ನನ್ನು ಸರಿಪಡಿಸಿಕೊಂಡರೆ, ಅವನು (ಅಲ್ಲಾಹನು) ಖಂಡಿತ ಕ್ಷಮಾಶೀಲನೂ ಕರುಣಾಳುವೂ ಆಗಿರುವನು

[54] ಈ ರೀತಿ ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ – ಅಪರಾಧಿಗಳ ದಾರಿ ಯಾವುದೆಂಬುದು ಸ್ಪಷ್ಟವಾಗಲೆಂದು

[55] ಹೇಳಿರಿ; ನೀವು ಅಲ್ಲಾಹನನ್ನು ಬಿಟ್ಟು ಕೂಗಿ ಪ್ರಾರ್ಥಿಸುವವುಗಳನ್ನು (ಮಿಥ್ಯ ದೇವರುಗಳನ್ನು) ಆರಾಧಿಸದಂತೆ ನನ್ನನ್ನು ತಡೆಯಲಾಗಿದೆ. ಹೇಳಿರಿ; ನಾನು ನಿಮ್ಮ ಅಪೇಕ್ಷೆಗಳನ್ನು ಅನುಸರಿಸಲಾರೆ. ಹಾಗೆ ಮಾಡಿದರೆ ನಾನು ಖಂಡಿತ ದಾರಿಗೆಟ್ಟು ಹೋಗುವೆನು ಮತ್ತು ನಾನೆಂದೂ ಸನ್ಮಾರ್ಗದರ್ಶನ ಪಡೆದವರ ಸಾಲಿಗೆ ಸೇರಲಾರೆನು

[56] (ದೂತರೇ,) ಹೇಳಿರಿ; ನಾನಂತೂ ಖಂಡಿತವಾಗಿಯೂ ನನ್ನ ಒಡೆಯನ ಕಡೆಯಿಂದ ತೋರಲಾಗಿರುವ ಸ್ಪಷ್ಟ ಸನ್ಮಾರ್ಗದಲ್ಲಿದ್ದೇನೆ ಮತ್ತು ನೀವು ಅದನ್ನು ಸುಳ್ಳೆಂದು ತಿರಸ್ಕರಿಸುತ್ತಿರುವಿರಿ. ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದು (ಆ ದಿವ್ಯ ಶಿಕ್ಷೆ) ನನ್ನ ಕೈಯಲ್ಲಿಲ್ಲ. ಅಧಿಕಾರವು ಕೇವಲ ಅಲ್ಲಾಹನೊಬ್ಬನಿಗೇ ಸೇರಿದೆ. ಅವನೇ ಸತ್ಯವನ್ನು ತಿಳಿಸುತ್ತಾನೆ ಮತ್ತು ಅವನೇ ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ

[57] (ದೂತರೇ,) ಹೇಳಿರಿ; ಒಂದು ವೇಳೆ, ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದು (ಆ ದಿವ್ಯ ಶಿಕ್ಷೆ) ನನ್ನ ಕೈಯಲ್ಲಿ ಇದ್ದಿದ್ದರೆ ನನ್ನ ಹಾಗೂ ನಿಮ್ಮ ನಡುವೆ ಈಗಾಗಲೇ ತೀರ್ಮಾನವು ಆಗಿ ಬಿಡುತ್ತಿತ್ತು. ಅಲ್ಲಾಹನಂತು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು

[58] ಗುಪ್ತ ಲೋಕಗಳ ಕೀಲಿ ಕೈಗಳೆಲ್ಲಾ ಅವನ ಬಳಿಯಲ್ಲೇ ಇವೆ. ಅವುಗಳನ್ನು ಬಲ್ಲವರು ಅವನ ಹೊರತು ಬೇರಾರೂ ಇಲ್ಲ. ಅವನಂತೂ ನೆಲಭಾಗ ಹಾಗೂ ಜಲಭಾಗದಲ್ಲಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ. ಅವನ ಅರಿವಿಗೆ ಬರದೆ ಒಂದು ಎಲೆಯೂ ಉದುರಿ ಬೀಳುವುದಿಲ್ಲ. ಭೂಮಿಯ ಕತ್ತಲುಗಳಲ್ಲಿರುವ ಯಾವುದೇ ಧಾನ್ಯವಾಗಲಿ, ಯಾವುದೇ ಹಸಿ ವಸ್ತುವಾಗಲಿ, ಒಣ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ

[59] ಅವನೇ, ಇರುಳಲ್ಲಿ ನಿಮ್ಮನ್ನು ನಿರ್ಜೀವಗೊಳಿಸುವವನು ಹಾಗೂ ಹಗಲಲ್ಲಿ ನೀವು ಏನನ್ನು ಸಂಪಾದಿಸಿದಿರಿ ಎಂಬುದನ್ನು ಅರಿತಿರುವವನು ಮತ್ತು ನಿಗದಿತ ಕಾಲಾವಧಿ ಪೂರ್ತಿಯಾಗಲೆಂದು ನಿಮ್ಮನ್ನು ಅದರಲ್ಲಿ (ಇರುಳಿನ ಬಳಿಕ ಹಗಲಲ್ಲಿ) ಮತ್ತೆ ಜೀವಂತಗೊಳಿಸುವವನು. ಕೊನೆಗೆ ನೀವು ಅವನೆಡೆಗೇ ಮರಳುವಿರಿ ಮತ್ತು ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಅವನು ನಿಮಗೆ ತಿಳಿಸುವನು

[60] ಅವನು ತನ್ನ ದಾಸರ ಮೇಲೆ ಸಂಪೂರ್ಣ ನಿಯಂತ್ರಣ ಉಳ್ಳವನಾಗಿದ್ದಾನೆ ಮತ್ತು ಅವನು ನಿಮ್ಮ ಮೇಲೆ ಕಣ್ಣಿಡುವವರನ್ನು ಕಳುಹಿಸುತ್ತಾನೆ. ಕೊನೆಗೆ ನಿಮ್ಮ ಪೈಕಿ ಯಾರದಾದರೂ ಮರಣವು ಬಂದು ಬಿಟ್ಟಾಗ ನಮ್ಮ ಪ್ರತಿನಿಧಿಗಳು ಆತನ ಜೀವವನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಅವರು ತಪ್ಪುವುದಿಲ್ಲ

[61] ಕೊನೆಗೆ ಎಲ್ಲರೂ ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲ್ಪಡುವರು. ತಿಳಿದಿರಲಿ! ಪರಮಾಧಿಕಾರವು ಅವನಿಗೇ ಸೇರಿದೆ ಮತ್ತು ಅವನು ಅತ್ಯಧಿಕ ವೇಗದಿಂದ ವಿಚಾರಣೆ ನಡೆಸುವವನಾಗಿದ್ದಾನೆ

[62] ಹೇಳಿರಿ; ನೆಲದ ಮತ್ತು ಜಲದ ಕಾರ್ಗತ್ತಲುಗಳಿಂದ ನಿಮ್ಮನ್ನು ರಕ್ಷಿಸುವವನು ಯಾರು? ನೀವಂತು (ಆಪತ್ತಿನಲ್ಲಿದ್ದಾಗ) – ‘‘ಇದರಿಂದ ನಮ್ಮನ್ನು ರಕ್ಷಿಸಿದರೆ ನಾವು ಕೃತಜ್ಞರ ಸಾಲಿಗೆ ಸೇರುವೆವು’’ (ಎನ್ನುತ್ತಾ) ನಡುಗುತ್ತಲೂ, ಗುಟ್ಟಾಗಿಯೂ ಅವನಿಗೆ ಮೊರೆ ಇಡುತ್ತೀರಿ

[63] ಹೇಳಿರಿ; ನಿಮ್ಮನ್ನು ಅದರಿಂದ ರಕ್ಷಿಸುವವನು ಮತ್ತು ಎಲ್ಲ ಸಂಕಷ್ಟಗಳಿಂದ ಕಾಪಾಡುವವನು ಅಲ್ಲಾಹನೇ. ಇಷ್ಟಾಗಿಯೂ ನೀವು (ಇತರರನ್ನು, ಅವನ) ಪಾಲುದಾರರಾಗಿಸುತ್ತೀರಿ

[64] ಹೇಳಿರಿ; ಅವನಿಚ್ಛಿಸಿದರೆ ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲಡಿಯಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಬಲ್ಲನು ಅಥವಾ ಅವನು ನಿಮ್ಮನ್ನು ವಿವಿಧ ಪಂಗಡಗಳಾಗಿ ವಿಂಗಡಿಸಿ ಕೆಲವರಿಗೆ ಮತ್ತೆ ಕೆಲವರ (ಶಕ್ತಿಯ) ರುಚಿಯನ್ನು ಉಣಿಸಬಲ್ಲನು. ಅವರು ಅರಿವು ಉಳ್ಳವರಾಗಬೇಕೆಂದು ನಾವು ಯಾವ ರೀತಿ ಪುರಾವೆಗಳನ್ನು ವಿವರಿಸುತ್ತೇವೆಂಬುದನ್ನು ನೋಡಿರಿ

[65] ಆದರೆ (ದೂತರೇ,) ನಿಮ್ಮ ಜನಾಂಗವು, ಇದು ಸತ್ಯವಾಗಿದ್ದರೂ ಇದನ್ನು ತಿರಸ್ಕರಿಸಿತು. ಹೇಳಿರಿ; ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ

[66] ಪ್ರತಿಯೊಂದು ಘಟನೆಯ ಸಂಭವಕ್ಕೂ ಒಂದು ನಿಗದಿತ ಸಮಯವಿದೆ. ಬೇಗನೇ ನಿಮಗೆ ತಿಳಿಯಲಿದೆ

[67] ನೀವು ನಮ್ಮ ವಚನಗಳ ಕುರಿತು ಜಗಳಾಡುವವರನ್ನು ಕಂಡಾಗ – ಅವರು ಬೇರೊಂದು ವಿಷಯದಲ್ಲಿ ಮಗ್ನರಾಗುವ ತನಕ ನೀವು ಅವರಿಂದ ದೂರ ಉಳಿಯಿರಿ. ಇನ್ನು, ಒಂದು ವೇಳೆ ಶೈತಾನನು ನಿಮಗೆ ಮರೆವನ್ನುಂಟು ಮಾಡಿದರೂ, ನೆನಪಾದ ಬಳಿಕವಂತೂ ಅಕ್ರಮಿಗಳ ಜೊತೆ ಕುಳಿತಿರಬೇಡಿ

[68] ಅವರ (ಅಕ್ರಮಿಗಳ) ಯಾವುದೇ ಕರ್ಮದ ಹೊಣೆಗಾರಿಕೆ ಸತ್ಯಸಂಧರ ಮೇಲಿಲ್ಲ. ಅವರ ಮೇಲಿರುವುದು ಅವರು ಸತ್ಯಸಂಧರಾಗಲೆಂದು ಬೋಧಿಸುವ ಹೊಣೆ ಮಾತ್ರ

[69] ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ತಮಾಷೆಯಾಗಿ ಪರಿಗಣಿಸಿರುವವರನ್ನು (ಅವರ ಪಾಡಿಗೆ) ಬಿಟ್ಟು ಬಿಡಿರಿ. ಈ ಲೋಕದ ಜೀವನವು ಅವರನ್ನು ಮೋಸಗೊಳಿಸಿದೆ. ಯಾವ ಚೇತನವೂ ತನ್ನ ಕರ್ಮಗಳ ಫಲವಾಗಿ ವಿನಾಶಕ್ಕೆ ಗುರಿಯಾಗಬಾರದೆಂದು ನೀವು ಇದರ (ಈ ಕುರ್‌ಆನ್‌ನ) ಮೂಲಕ ಜನರಿಗೆ ಉಪದೇಶಿಸಿರಿ. ಅಂತಹ ಚೇತನಕ್ಕೆ ಅಲ್ಲಾಹನಲ್ಲದೆ ಬೇರಾರೂ ರಕ್ಷಕರು ಇರಲಾರರು ಮತ್ತು ಯಾವ ಶಿಫಾರಸ್ಸುದಾರರೂ ಸಿಗಲಾರರು. ಅದು (ಆ ಚೇತನವು) ಸರ್ವಸ್ವವನ್ನೂ ಪರಿಹಾರವಾಗಿ ನೀಡ ಬಯಸಿದರೂ ಅದನ್ನು ಸ್ವೀಕರಿಸಲಾಗದು. ಅವರೇ, ತಮ್ಮ ಕರ್ಮಗಳ ಕಾರಣ ವಿನಾಶಕ್ಕೆ ಗುರಿಯಾದವರು. ಅವರು ಧಿಕ್ಕಾರಿಗಳಾಗಿದ್ದುದಕ್ಕಾಗಿ ಅವರಿಗಾಗಿ ತೀವ್ರ ಕುದಿಯುವ ಪಾನೀಯ ಮತ್ತು ಅಪಾರ ನೋವಿನ ಶಿಕ್ಷೆ ಕಾದಿದೆ

[70] ಹೇಳಿರಿ; ನಾವೇನು, ಅಲ್ಲಾಹನನ್ನು ಬಿಟ್ಟು ನಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರಿಗೆ ಮೊರೆ ಇಡಬೇಕೇ? ಮತ್ತು ಅಲ್ಲಾಹನು ನಮಗೆ ಸನ್ಮಾರ್ಗವನ್ನು ತೋರಿದ ಬಳಿಕ ನಾವೇನು ಮತ್ತೆ ಬೆನ್ನು ತಿರುಗಿಸಿ ಮರಳಬೇಕೇ? ತನ್ನ ಸಂಗಡಿಗರು ‘ನಮ್ಮೆಡೆಗೆ ಬಾ’ ಎಂದು ತನ್ನನ್ನು ಸರಿದಾರಿಯೆಡೆಗೆ ಕರೆಯುತ್ತಿದ್ದರೂ, ಶೈತಾನರು ಮಂಕುಗೊಳಿಸಿದ್ದರಿಂದ ಭೂಮಿಯಲ್ಲಿ ದಾರಿ ತಪ್ಪಿ ಅಲೆಯುತ್ತಿರುವವನಂತೆ (ನಾವಾಗಬೇಕೇ)? ಹೇಳಿರಿ; ಅಲ್ಲಾಹನು ತೋರಿದ ದಾರಿಯೊಂದೇ ಸರಿದಾರಿಯಾಗಿದೆ. ನಮಗಂತು, ಸಕಲ ವಿಶ್ವಗಳ ಒಡೆಯನಿಗೆ ಶರಣಾಗಬೇಕೆಂದು ಆದೇಶಿಸಲಾಗಿದೆ

[71] ಮತ್ತು ನಮಾಝ್ ಅನ್ನು ಪಾಲಿಸಬೇಕು ಹಾಗೂ ಸದಾ ಅವನ ಭಯಭಕ್ತಿ ಉಳ್ಳವರಾಗಿರಬೇಕು (ಎಂದು ನಮಗೆ ಆದೇಶಿಸಲಾಗಿದೆ) – ಕೊನೆಗೆ ನಿಮ್ಮೆಲ್ಲರನ್ನೂ ಅವನ ಬಳಿಯೇ ಸೇರಿಸಲಾಗುವುದು

[72] ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ನಿಜಕ್ಕೂ ಸೃಷ್ಟಿಸಿದವನು. ಅವನು ‘ಆಗು’ ಎಂದು ಹೇಳುವ ದಿನವೇ ಎಲ್ಲವೂ ಆಗಿ ಬಿಡುತ್ತದೆ. ಅವನ ಮಾತೇ ಸತ್ಯ. (ಅಂತಿಮ) ಕಹಳೆ ಊದಲಾಗುವ ದಿನ ಅಧಿಕಾರವು ಸಂಪೂರ್ಣವಾಗಿ ಅವನಿಗೇ ಸೇರಿರುವುದು. ಅವನು ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಬಲ್ಲವನು ಮತ್ತು ಅತ್ಯಂತ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ

[73] ಇಬ್ರಾಹೀಮರು ತಮ್ಮ ತಂದೆ ಆಝರ್‌ನೊಡನೆ ಹೇಳಿದರು; ‘‘ನೀವೇನು, ವಿಗ್ರಹಗಳನ್ನು ದೇವರಾಗಿಸಿಕೊಂಡಿರುವಿರಾ? ನಾನಂತು ನಿಮ್ಮನ್ನು ಹಾಗೂ ನಿಮ್ಮ ಜನಾಂಗವನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇನೆ’’

[74] ಈ ರೀತಿ ನಾವು ಇಬ್ರಾಹೀಮರು ಅಚಲ ನಂಬಿಕೆ ಉಳ್ಳವರಾಗಲೆಂದು ಅವರಿಗೆ ಆಕಾಶಗಳ ಹಾಗೂ ಭೂಮಿಯ ಆಳ್ವಿಕೆಯನ್ನು ತೋರಿಸಿಕೊಟ್ಟೆವು

[75] (ಒಂದು ಹಂತದಲ್ಲಿ) ಅವರ ಮೇಲೆ ಇರುಳು ಕವಿದಾಗ ಅವರು ನಕ್ಷತ್ರವನ್ನು ಕಂಡರು. ‘‘ಇದುವೇ ನನ್ನ ದೇವರು’’ ಎಂದರು. ಅದು ಮರೆಯಾದಾಗ ‘‘ನಾನು, ಮರೆಯಾಗಿ ಬಿಡುವವರನ್ನು ಮೆಚ್ಚುವುದಿಲ್ಲ’’ ಎಂದರು

[76] ತರುವಾಯ ಅವರು ಬೆಳಗಿದ ಚಂದ್ರನನ್ನು ಕಂಡು, ‘‘ಇದುವೇ ನನ್ನ ದೇವರು’’ ಎಂದರು. ಅದು ಕಣ್ಮರೆಯಾದಾಗ ‘‘ನನ್ನ ದೇವರೇ ನನಗೆ ಸರಿದಾರಿಯನ್ನು ತೋರದಿದ್ದರೆ ನಾನು ದಾರಿಗೆಟ್ಟ ಸಮುದಾಯವನ್ನು ಸೇರುವುದು ಖಚಿತ’’ ಎಂದರು

[77] ಮುಂದೆ ಅವರು ಉರಿಯುವ ಸೂರ್ಯನನ್ನು ಕಂಡಾಗ ‘‘ಇದುವೇ ನನ್ನ ದೇವರು. ಇದು ಇತರೆಲ್ಲರಿಗಿಂತ ದೊಡ್ಡದಾಗಿದೆ’’ ಎಂದರು. ಕೊನೆಗೆ ಅದು ಕಣ್ಮರೆಯಾದಾಗ ಅವರು ಹೇಳಿದರು; ‘‘ಓ ನನ್ನ ಜನಾಂಗದವರೇ, ನೀವು ದೇವರ ಜೊತೆಗೆ ಪಾಲುಗೊಳಿಸುತ್ತಿರುವ ಎಲ್ಲವುಗಳಿಂದಲೂ ನಾನು ಮುಕ್ತನು’’

[78] ‘‘ನಾನು ಏಕಾಗ್ರ ಚಿತ್ತನಾಗಿ ನನ್ನ ಮುಖವನ್ನು, ಆಕಾಶಗಳ ಹಾಗೂ ಭೂಮಿಯ ಸೃಷ್ಟಿಕರ್ತನೆಡೆಗೆ ತಿರುಗಿಸಿಕೊಂಡೆನು. ಖಂಡಿತವಾಗಿಯೂ ನಾನು (ದೇವರಿಗೆ) ಪಾಲುದಾರರನ್ನು ನೇಮಿಸುವವನಲ್ಲ’’

[79] ಅವರ ಜನಾಂಗವು ಅವರ ಜೊತೆ ಜಗಳಾಡಿತು. ಅವರು (ಇಬ್ರಾಹೀಮರು) ಹೇಳಿದರು; ‘‘ನೀವೇನು, ಅಲ್ಲಾಹನ ವಿಷಯದಲ್ಲಿ ನನ್ನೊಡನೆ ಜಗಳಾಡುತ್ತಿರುವಿರಾ? ಅವನೇ ನನಗೆ ಸನ್ಮಾರ್ಗವನ್ನು ತೋರಿರುವನು. ನೀವು ಅವನ ಜೊತೆ ಪಾಲುಗೊಳಿಸುವ ಯಾವುದಕ್ಕೂ ನಾನು ಅಂಜುವುದಿಲ್ಲ. ಸ್ವತಃ ನನ್ನ ಒಡೆಯನೇ ಏನನ್ನಾದರೂ ಮಾಡಲು ಇಚ್ಛಿಸದೆ (ಏನೂ ಆಗುವುದಿಲ್ಲ). ನನ್ನೊಡೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನೀವೇನು ಚಿಂತಿಸುವುದಿಲ್ಲವೆ?’’

[80] ‘‘ಅಲ್ಲಾಹನು ಯಾರ ಪರವಾಗಿ ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅಂಥವರನ್ನು ಅವನ ಪಾಲುದಾರರೆನ್ನುವುದಕ್ಕೆ ನೀವು ಅಂಜದಿರುವಾಗ, ನೀವು ನೇಮಿಸಿಕೊಂಡ ಪಾಲುದಾರರಿಗೆ ನಾನೇಕೆ ಅಂಜಬೇಕು?’’ ನೀವು ತಿಳಿದವರಾಗಿದ್ದರೆ, ಈ ಎರಡು ಗುಂಪುಗಳ ಪೈಕಿ ಶಾಂತಿಗೆ ಹೆಚ್ಚು ಅರ್ಹರು ಯಾರು (ಎಂಬುದನ್ನು ನೀವೇ ತೀರ್ಮಾನಿಸಿರಿ)

[81] ನಿಜವಾಗಿ, ಸತ್ಯದಲ್ಲಿ ನಂಬಿಕೆ ಇಟ್ಟು, ತಮ್ಮ ನಂಬಿಕೆಯನ್ನು ಅಕ್ರಮದ ಜೊತೆ ಬೆರೆಸಿಲ್ಲದವರು – ಶಾಂತಿಯು ಅವರಿಗೇ ಸೇರಿದೆ ಮತ್ತು ಅವರೇ ಸನ್ಮಾರ್ಗಿಗಳು

[82] ನಾವು ಇಬ್ರಾಹೀಮರಿಗೆ ಅವರ ಜನಾಂಗದೆದುರು ನೀಡಿದ ಪುರಾವೆ ಇದೇ ಆಗಿತ್ತು. ನಾವು, ನಾವಿಚ್ಛಿಸಿದವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಖಂಡಿತವಾಗಿಯೂ ನಿಮ್ಮೊಡೆಯನು ಯುಕ್ತಿವಂತನೂ ಜ್ಞಾನಿಯೂ ಆಗಿದ್ದಾನೆ

[83] ಮುಂದೆ ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಅ್ಕೂಬ್‌ರನ್ನು ದಯಪಾಲಿಸಿದೆವು. ಅವರಿಗೆಲ್ಲಾ ನಾವು ಮಾರ್ಗದರ್ಶನ ನೀಡಿದ್ದೆವು. ಈ ಹಿಂದೆ ನಾವು ನೂಹ್‌ರಿಗೆ, ಅವರ ಸಂತತಿಗಳಿಗೆ, ದಾವೂದರಿಗೆ, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನ್‌ರಿಗೆ ಮಾರ್ಗದರ್ಶನ ನೀಡಿದ್ದೆವು. ಸತ್ಕರ್ಮಿಗಳಿಗೆ ನಾವು ಇದೇ ರೀತಿ ಸತ್ಫಲ ನೀಡುತ್ತೇವೆ

[84] ಹಾಗೆಯೇ, ಝಕರಿಯ್ಯ, ಯಹ್ಯಾ, ಈಸಾ ಮತ್ತು ಇಲ್ಯಾಸ್(ರಿಗೂ ಮಾರ್ಗದರ್ಶನ ನೀಡಲಾಗಿತ್ತು). ಅವರೆಲ್ಲರೂ ಸಜ್ಜನರ ಸಾಲಿಗೆ ಸೇರಿದ್ದರು

[85] ಅದೇ ರೀತಿ, ಇಸ್ಮಾಈಲ್, ಅಲ್ ಯಸಅ್, ಯೂನುಸ್ ಮತ್ತು ಲೂತ್ – ಅವರಿಗೆಲ್ಲಾ ನಾವು ಎಲ್ಲ ಲೋಕಗಳವರಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ನೀಡಿದ್ದೆವು

[86] ಅವರ ತಂದೆ-ತಾತಂದಿರು, ಅವರ ಮಕ್ಕಳು ಮತ್ತು ಅವರ ಅನೇಕ ಸೋದರರಲ್ಲೂ ಕೆಲವರಿಗೆ (ನಾವು ಶ್ರೇಷ್ಠತೆಯನ್ನು ನೀಡಿದ್ದೆವು) ಮತ್ತು ನಾವು ಅವರನ್ನು ಆರಿಸಿಕೊಂಡಿದ್ದೆವು ಹಾಗೂ ನಾವು ಅವರಿಗೆ ಸ್ಥಿರವಾದ ಸನ್ಮಾರ್ಗವನ್ನು ದಯಪಾಲಿಸಿದ್ದೆವು

[87] ಇದು ಅಲ್ಲಾಹನ ಮಾರ್ಗದರ್ಶನ – ಅವನು ಈ ಮೂಲಕ ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಒಂದು ವೇಳೆ ಅವರು, (ಅಲ್ಲಾಹನ ಜೊತೆ) ಪಾಲುದಾರಿಕೆ ಮಾಡಿದ್ದರೆ, ಅವರು ಗಳಿಸಿದ್ದೆಲ್ಲವೂ ಅವರಿಂದ ಕಳೆದು ಹೋಗುತ್ತಿತ್ತು

[88] ಅವರಿಗೆ ನಾವು – ಗ್ರಂಥವನ್ನು, ಅಧಿಕಾರವನ್ನು ಮತ್ತು ದೂತ ಪದವಿಯವನ್ನು ನೀಡಿದ್ದೆವು. ಇದೀಗ ಆ ಜನರು ಇದನ್ನು (ಸತ್ಯವನ್ನು) ಧಿಕ್ಕರಿಸಿದರೆ, ಇದನ್ನು ಧಿಕ್ಕರಿಸದ ಇನ್ನೊಂದು ಜನಾಂಗಕ್ಕೆ ನಾವಿದನ್ನು ಒಪ್ಪಿಸುವೆವು

[89] ಅವರೇ, ಅಲ್ಲಾಹನು ಸನ್ಮಾರ್ಗದಲ್ಲಿ ನಡೆಸಿದವರು – ನೀವು ಅವರ ದಾರಿಯನ್ನೇ ಅನುಸರಿಸಿರಿ. ಹೇಳಿರಿ; ಈ ಕುರಿತು ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಇದು ಸರ್ವಲೋಕಗಳಿಗಾಗಿ ಇರುವ ಬೋಧನೆ

[90] ಅವರು ಅಲ್ಲಾಹನನ್ನು ಅರಿಯಬೇಕಾದ ರೀತಿಯಲ್ಲಿ ಅರಿಯಲಿಲ್ಲ. ‘‘ಅಲ್ಲಾಹನು ಯಾವ ಮಾನವನಿಗೂ ಏನನ್ನೂ ಇಳಿಸಿ ಕೊಟ್ಟಿಲ್ಲ’’ – ಎಂದು ಅವರು ಹೇಳಿದಾಗ, ನೀವು ಹೇಳಿರಿ; ‘‘ಮೂಸಾ ಅವರು ತಂದಿದ್ದ , ಎಲ್ಲ ಜನರಿಗಾಗಿ ಪ್ರಕಾಶ ಮತ್ತು ಸನ್ಮಾರ್ಗವಿದ್ದ ಗ್ರಂಥವನ್ನು ಇಳಿಸಿದವರು ಯಾರು? ನೀವು (ಇಸ್ರಾಈಲರ ಸಂತತಿಗಳು) ಅದನ್ನು (ಆ ಗ್ರಂಥವನ್ನು) ಕೇವಲ ಛಿದ್ರ ಹಾಳೆಗಳಾಗಿ ಪರಿವರ್ತಿಸಿದಿರಿ – ಅದರ ತುಸು ಭಾಗವನ್ನು ಮಾತ್ರ ಬಹಿರಂಗ ಪಡಿಸಿ ಹೆಚ್ಚಿನ ಭಾಗವನ್ನು ಬಚ್ಚಿಟ್ಟಿರಿ. ನಿಮಗಾಗಲಿ, ನಿಮ್ಮ ಪೂರ್ವಜರಿಗಾಗಲಿ ತಿಳಿದಿರದ ಅನೇಕ ವಿಷಯಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಟ್ಟವನು ಯಾರು?’’ ಹೇಳಿರಿ; ‘‘ಅಲ್ಲಾಹನು.’’ ತರುವಾಯ ನೀವು ಅವರನ್ನು ಬಿಟ್ಟು ಬಿಡಿರಿ – ಅವರು ತಮ್ಮ ಕುಚೇಷ್ಟೆಗಳಲ್ಲೇ ಮಗ್ನರಾಗಿರಲಿ

[91] ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧಿ ತುಂಬಿದ ಗ್ರಂಥ – ತನಗಿಂತ ಮೊದಲು ಬಂದಿದ್ದ ಗ್ರಂಥಗಳನ್ನು ಇದು ಸಮರ್ಥಿಸುತ್ತದೆ. ಇದರ ಮೂಲಕ ನೀವು ಮಕ್ಕಾದವರನ್ನು ಮತ್ತು ಅದರ ಸುತ್ತ ಮುತ್ತಲಿನವರನ್ನು ಎಚ್ಚರಿಸಬೇಕೆಂದು (ಇದನ್ನು ಕಳಿಸಲಾಗಿದೆ). ಪರಲೋಕದಲ್ಲಿ ನಂಬಿಕೆ ಉಳ್ಳವರು, ಇದರಲ್ಲಿ ನಂಬಿಕೆ ಇರಿಸುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ

[92] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವನಿಗಿಂತ ಅಥವಾ ತನಗೆ ಯಾವ ಸಂದೇಶವೂ ಸಿಗದೆಯೇ, ತನಗೆ ದಿವ್ಯ ಸಂದೇಶ ಸಿಕ್ಕಿದೆ ಎನ್ನುವವನಿಗಿಂತ ಮತ್ತು ಅಲ್ಲಾಹನು ಇಳಿಸಿದಂತಹದನ್ನೇ ತಾನೂ ಇಳಿಸುತ್ತೇನೆ ಎನ್ನುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ನೀವು ಆ ದೃಶ್ಯವನ್ನು ನೋಡಬೇಕಿತ್ತು; ಅಕ್ರಮಿಗಳು ಮರಣದ ಸಂಕಟದಲ್ಲಿ ಸಿಲುಕಿರುವಾಗ, ಮಲಕ್‌ಗಳು ತಮ್ಮ ಕೈಗಳನ್ನು ಚಾಚಿ ‘‘ಹೊರ ತೆಗೆಯಿರಿ ನಿಮ್ಮ ಪ್ರಾಣಗಳನ್ನು, ನೀವು ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳುತ್ತಿದ್ದುದಕ್ಕಾಗಿ ಮತ್ತು ನೀವು ಅವನ ವಚನಗಳ ವಿಷಯದಲ್ಲಿ ಅಹಂಕಾರ ತೋರುತ್ತಿದ್ದುದಕ್ಕಾಗಿ ಇಂದು ನಿಮಗೆ ಭಾರೀ ಅಪಮಾನದ ಶಿಕ್ಷೆಯು ದೊರೆಯಲಿದೆ’’ ಎನ್ನುವರು

[93] ನಾವು ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದಾಗ ಇದ್ದಂತೆ, (ಇಂದು) ನೀವು ಒಂಟಿಯಾಗಿ ನಮ್ಮ ಬಳಿಗೆ ಬಂದಿರುವಿರಿ ಮತ್ತು ನಾವು ನಿಮಗೆ ನೀಡಿದ್ದೆಲ್ಲವನ್ನೂ ನೀವು ನಿಮ್ಮ ಹಿಂದೆ ಬಿಟ್ಟು ಬಂದಿರುವಿರಿ. ಹಾಗೆಯೇ ನೀವು ಅಷ್ಟೊಂದು ನಂಬಿಕೊಂಡಿದ್ದ ಹಾಗೂ ನಿಮ್ಮ ನಡುವೆ (ದೇವರ) ಸಹಭಾಗಿಯಾಗಿದ್ದ ನಿಮ್ಮ ಶಿಫಾರಸುದಾರರನ್ನು ಇಂದು ನಾವು ನಿಮ್ಮ ಜೊತೆ ಕಾಣುತ್ತಿಲ್ಲವಲ್ಲಾ! ನಿಜವಾಗಿ ನಿಮ್ಮ ನಡುವಣ ನಂಟು ಮುರಿದು ಹೋಗಿದೆ ಮತ್ತು ನೀವು ಏನನ್ನು ಅವಲಂಬಿಸಿದ್ದಿರೋ ಅದು ನಿಮ್ಮಿಂದ ಕಳೆದು ಹೋಗಿದೆ

[94] ಖಂಡಿತವಾಗಿಯೂ, ಕಾಳನ್ನು ಮತ್ತು ಗೊರಟನ್ನು ಸೀಳುವವನು ಅಲ್ಲಾಹನೇ. ಅವನೇ, ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುವವನು. ಅವನೇ ನಿಮ್ಮ ಅಲ್ಲಾಹ್ – ಹೀಗಿರುತ್ತಾ, ನೀವು ಅದೆಲ್ಲಿ ಅಲೆಯುತ್ತಿರುವಿರಿ

[95] (ಇರುಳಿನ ಕತ್ತಲನ್ನು ಸೀಳಿ) ಬೆಳಗನ್ನು ಹೊರ ತರುವವನು ಮತ್ತು ಇರುಳನ್ನು ವಿಶ್ರಾಂತಿಯ ಕಾಲವಾಗಿ ಮಾಡಿರುವವನು ಅವನೇ, ಅವನು ಸೂರ್ಯನನ್ನು ಹಾಗೂ ಚಂದ್ರನನ್ನು (ಕಾಲ) ಗಣನೆಯ ಉಪಾಧಿಗಳಾಗಿಸಿರುವನು. ಇದು ಆ ಪ್ರಚಂಡವಾದ ಜ್ಞಾನಿಯು ವಿಧಿಸಿರುವ ನಿಯಮ

[96] ನೆಲ ಮತ್ತು ಜಲದ ಕತ್ತಲುಗಳಲ್ಲಿ ನೀವು ಮಾರ್ಗದರ್ಶನ ಪಡೆಯುವಂತಾಗಲು ನಿಮಗಾಗಿ ನಕ್ಷತ್ರಗಳನ್ನು ಇಟ್ಟಿರುವವನು ಅವನೇ. ಅರಿವು ಉಳ್ಳವರಿಗಾಗಿ ನಾವು ನಮ್ಮ ವಚನಗಳನ್ನು ಸಾಕಷ್ಟು ವಿವರಿಸಿರುವೆವು

[97] ಅವನೇ, ನಿಮ್ಮನ್ನು ಕೇವಲ ಒಂದು ಜೀವದಿಂದ ಸೃಷ್ಟಿಸಿದವನು. ಇನ್ನು ಪ್ರತಿಯೊಬ್ಬರಿಗೂ ಒಂದು ಶಾಶ್ವತ ನೆಲೆ ಇರುತ್ತದೆ. ಹಾಗೆಯೇ ಒಂದು ತಾತ್ಕಾಲಿಕ ನೆಲೆಯೂ ಇರುತ್ತದೆ. ಚಿಂತನೆ ನಡೆಸುವವರಿಗಾಗಿ ನಾವು ವಚನಗಳನ್ನು ವಿವರಿಸಿರುವೆವು

[98] ಅವನೇ ಆಕಾಶದಿಂದ ನೀರನ್ನು ಸುರಿಸಿದವನು ಮತ್ತು ಆ ಮೂಲಕ ನಾವು ಎಲ್ಲ ಬೆಳೆಗಳನ್ನು ಹೊರ ತೆಗೆದೆವು ಮತ್ತು ಅದರಿಂದಲೇ ನಾವು ಹಸಿರನ್ನು ಹೊರತೆಗೆದೆವು ಮತ್ತು ಅದರಿಂದಲೇ, ರಾಶಿರಾಶಿ ಧಾನ್ಯಗಳನ್ನು ಹೊರತೆಗೆದೆವು ಮತ್ತು ಖರ್ಜೂರದ ಗೊನೆಗಳಲ್ಲಿ ಭಾರದಿಂದ ಬಾಗಿರುವ ಗೊಂಚಲುಗಳನ್ನು ಹೊರತೆಗೆದೆವು – ಹಾಗೆಯೇ ದ್ರಾಕ್ಷಿ, ಝೈತೂನ್ ಮತ್ತು ದಾಳಿಂಬೆಗಳ ತೋಟಗಳನ್ನು ಬೆಳೆಸಿದೆವು – ಅವುಗಳಲ್ಲಿ ಕೆಲವು ಒಂದೇ ತೆರನಾಗಿ ಗೋಚರಿಸಿದರೆ ಮತ್ತೆ ಕೆಲವು ತೀರಾ ವಿಭಿನ್ನವಾಗಿ ಗೋಚರಿಸುತ್ತವೆ. ಅವು ಚಿಗುರುವಾಗ ಮತ್ತು ಬೆಳೆದು ಹಣ್ಣಾಗುವಾಗ ನೀವು ಅವುಗಳ ಫಲಗಳನ್ನು ನೋಡಿರಿ – ನಂಬಿಕೆ ಉಳ್ಳವರಿಗೆ ಇದರಲ್ಲಿ ಖಂಡಿತವಾಗಿಯೂ ದೊಡ್ಡ ಪಾಠಗಳಿವೆ

[99] ಅವರು ಜಿನ್ನ್‌ಗಳನ್ನು ಅಲ್ಲಾಹನ ಪಾಲುದಾರರಾಗಿಸಿದ್ದಾರೆ. ನಿಜವಾಗಿ ಅವನೇ ಅವುಗಳ ಸೃಷ್ಟಿಕರ್ತನಾಗಿದ್ದಾನೆ. ಅವರು ಅರಿವಿಲ್ಲದೆ, ಆತನಿಗೆ ಪುತ್ರರು ಹಾಗೂ ಪುತ್ರಿಯರಿದ್ದಾರೆಂದು ಕಥೆ ಕಟ್ಟುತ್ತಾರೆ. ನಿಜವಾಗಿ ಅವನು ಪಾವನನಾಗಿದ್ದಾನೆ ಮತ್ತು ಅವರು ಆರೋಪಿಸುವ ಗುಣಗಳಿಗಿಂತ ತುಂಬಾ ಉನ್ನತನಾಗಿದ್ದಾನೆ

[100] ಅವನೇ, ಆಕಾಶಗಳನ್ನು ಮತ್ತು ಭೂಮಿಯನ್ನು ಹೊಸದಾಗಿ ಆರಂಭಿಸಿದವನು. ಅವನಿಗೆ ಪತ್ನಿಯೇ ಇಲ್ಲವೆಂದ ಮೇಲೆ ಅವನಿಗೆ ಪುತ್ರನಿರಲು ಹೇಗೆ ಸಾಧ್ಯ? ಅವನಂತು ಪ್ರತಿಯೊಂದು ವಸ್ತುವಿನ ಸೃಷ್ಟಿಕರ್ತನಾಗಿದ್ದಾನೆ ಮತ್ತು ಪ್ರತಿಯೊಂದು ವಿಷಯವನ್ನು ಬಲ್ಲವನಾಗಿದ್ದಾನೆ

[101] ಆ ಅಲ್ಲಾಹನೇ ನಿಮ್ಮ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಅವನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು. ಅವನನ್ನೇ ಪೂಜಿಸಿರಿ. ಅವನು ಎಲ್ಲ ವಸ್ತುಗಳ ಮೇಲ್ವಿಚಾರಕನು

[102] ಕಣ್ಣುಗಳು ಅವನನ್ನು ಗ್ರಹಿಸಲಾರವು. ಆದರೆ ಅವನು ಕಣ್ಣುಗಳನ್ನು ಗ್ರಹಿಸಬಲ್ಲನು. ಅವನು ತೀರಾ ಸೂಕ್ಷ್ಮ ಸಂಗತಿಗಳನ್ನೂ ಗುರುತಿಸುವವನು ಮತ್ತು ಅರಿವು ಉಳ್ಳವನಾಗಿದ್ದಾನೆ

[103] (ದೂತರೇ, ಹೇಳಿರಿ) ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಪುರಾವೆಗಳು ಬಂದು ಬಿಟ್ಟಿವೆ. ಅವುಗಳಲ್ಲಿ (ಸತ್ಯವನ್ನು) ಕಾಣುವವನಿಗೆ ಅದರ ಲಾಭವು ಸಿಗುವುದು ಮತ್ತು ಯಾರು (ಅವುಗಳೆಡೆಗೆ) ಕುರುಡನಾಗುವವನು ಅದರ ನಷ್ಟವನ್ನು ಅನುಭವಿಸುವನು. ನಾನು ನಿಮ್ಮ ಮೇಲಿನ ಕಾವಲುಗಾರನೇನಲ್ಲ

[104] ‘‘ನೀವು (ಎಲ್ಲಿಂದಲೋ) ಕಲಿತು ಬಂದಿದ್ದೀರಿ’’ ಎಂದು ಅವರು (ಧಿಕ್ಕಾರಿಗಳು) ಹೇಳಲೆಂದು ಹಾಗೂ ಅರಿವು ಉಳ್ಳವರಿಗೆ ವಿಷಯವನ್ನು ಸ್ಪಷ್ಟ ಪಡಿಸಲೆಂದು ಈ ರೀತಿ ನಾವು ದಿವ್ಯ ವಚನಗಳನ್ನು ವಿಧವಿಧವಾಗಿ ವಿವರಿಸುತ್ತೇವೆ

[105] (ದೂತರೇ,) ನಿಮ್ಮ ಒಡೆಯನ ಕಡೆಯಿಂದ ನಿಮಗೆ ನೀಡಲಾಗಿರುವ ಸಂದೇಶವನ್ನು ಅನುಸರಿಸಿರಿ. ಅವನ ಹೊರತು ಬೇರೆ ದೇವರಿಲ್ಲ. ಹಲವರನ್ನು ಆರಾಧಿಸುವವರಿಂದ ದೂರ ಉಳಿಯಿರಿ

[106] ಅಲ್ಲಾಹನು ಬಯಸಿದ್ದರೆ, ಅವರು ಬಹುದೇವಾರಾಧನೆ ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರ ಕಾವಲುಗಾರನಾಗಿ ನೇಮಿಸಿಲ್ಲ. ನೀವು ಅವರ ಪೋಷಕರೂ ಅಲ್ಲ

[107] (ವಿಶ್ವಾಸಿಗಳೇ,) ಜನರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರನ್ನು ಮೂದಲಿಸಬೇಡಿ – (ನೀವು ಮೂದಲಿಸಿದರೆ) ಅವರು ಹಗೆತನದಿಂದ, ಅರಿವಿಲ್ಲದೆ ಅಲ್ಲಾಹನನ್ನು ಮೂದಲಿಸುವರು. ಈ ರೀತಿ ನಾವು ಪ್ರತಿಯೊಂದು ಸಮುದಾಯದ ಪಾಲಿಗೆ ಅದರ ಕೃತ್ಯವನ್ನು ಚಂದಗಾಣಿಸಿರುವೆವು. ಕೊನೆಗೆ ಅವರು ತಮ್ಮ ಒಡೆಯನ ಬಳಿಗೆ ಮರಳಲಿಕ್ಕಿದೆ. ಆಗ ಅವರು ಮಾಡುತ್ತಿದ್ದುದು ಏನೆಂಬುದನ್ನು ಅವನು ಅವರಿಗೆ ತಿಳಿಸುವನು

[108] ತಮ್ಮ ಬಳಿಗೆ ಪುರಾವೆಯೇನಾದರೂ ಬಂದಿದ್ದರೆ ತಾವು ಖಂಡಿತ ನಂಬುತ್ತಿದ್ದೆವು ಎಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ‘‘ಪುರಾವೆಗಳೆಲ್ಲಾ ಅಲ್ಲಾಹನ ಬಳಿ ಇವೆ’’ ಎಂದು ಹೇಳಿರಿ. ನಿಮಗೇನು ಗೊತ್ತು? ಅವುಗಳು (ಪುರಾವೆಗಳು) ಬಂದ ಬಳಿಕವೂ ಅವರು ನಂಬಲಾರರು

[109] ಅವರು ಮೊದಲ ಬಾರಿಗೆ ಈ ಪುರಾವೆಗಳನ್ನು ನಂಬಲು ನಿರಾಕರಿಸಿದಂತೆ, ನಾವು ಅವರ ಮನಸ್ಸುಗಳನ್ನು ಹಾಗೂ ದೃಷ್ಟಿಗಳನ್ನು ತಿರುಚಿ ಬಿಡುವೆವು. ಮತ್ತು ನಾವು ಅವರನ್ನು, ತಮ್ಮ ವಿದ್ರೋಹ ನೀತಿಯಲ್ಲೇ ದಾರಿಗೆಟ್ಟು ಅಲೆಯುತ್ತಿರುವುದಕ್ಕೆ ಬಿಟ್ಟು ಬಿಡುವೆವು

[110] ಒಂದು ವೇಳೆ ನಾವು ಅವರಲ್ಲಿಗೆ ‘ಮಲಕ್’ಗಳನ್ನು ಇಳಿಸಿದ್ದರೆ ಹಾಗೂ ಶವಗಳು ಅವರ ಜೊತೆ ಮಾತನಾಡುತ್ತಿದ್ದರೆ ಮತ್ತು (ಅವರು ಬಯಸುವ) ಎಲ್ಲ ವಸ್ತುಗಳನ್ನು ನಾವು ಅವರ ಮುಂದೆ ರಾಶಿ ಹಾಕಿದ್ದರೆ – ಆಗಲೂ ಅವರು ನಂಬುತ್ತಿರಲಿಲ್ಲ – ಅಲ್ಲಾಹನು ಬಯಸಿದ್ದರ ಹೊರತು. ನಿಜವಾಗಿ ಅವರಲ್ಲಿ ಹೆಚ್ಚಿನವರು ಅಜ್ಞಾನಿಗಳು

[111] ಈ ರೀತಿ ನಾವು ಪ್ರತಿಯೊಬ್ಬ ಪ್ರವಾದಿಯ ಪಾಲಿಗೆ, ಮಾನವರು ಹಾಗೂ ಜಿನ್ನ್‌ಗಳೊಳಗಿನ ಶೈತಾನರನ್ನು ಶತ್ರುಗಳಾಗಿಸಿರುವೆವು. ಅವರು ಮೋಸದ ಮಾತುಗಳ ಮೂಲಕ ಪರಸ್ಪರರನ್ನು ಪ್ರೋತ್ಸಾಹಿಸುತ್ತಲಿರುತ್ತಾರೆ. ನಿಜವಾಗಿ ನಿಮ್ಮ ಒಡೆಯನು ಬಯಸಿದ್ದರೆ, ಅವರು ಹಾಗೆ ಮಾಡುತ್ತಿರಲಿಲ್ಲ. ನೀವು ಬಿಟ್ಟು ಬಿಡಿರಿ – ಅವರನ್ನು ಮತ್ತು ಅವರ ಕಟ್ಟು ಕತೆಗಳನ್ನು

[112] ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳು ಅವುಗಳೆಡೆಗೆ ಒಲಿದಿರಲಿ, ಅವರು ಅವುಗಳಲ್ಲೇ ತೃಪ್ತರಾಗಿರಲಿ ಮತ್ತು ಅವರು ಸದ್ಯ ಸಂಪಾದಿಸುತ್ತಿರುವುದನ್ನೇ (ಪಾಪವನ್ನೇ) ಸಂಪಾದಿಸುತ್ತಿರಲಿ

[113] (ದೂತರೇ,) ‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು ಬಿಟ್ಟು ತೀರ್ಪುಗಾರನಾಗಿ ಬೇರೊಬ್ಬನನ್ನು ಹುಡುಕಬೇಕೇ?’’ ಎಂದು ಕೇಳಿರಿ. ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರಿಗೆ, ಅದು (ಕುರ್‌ಆನ್) ನಿಮ್ಮೊಡೆಯನ ಕಡೆಯಿಂದ, ಸತ್ಯದೊಂದಿಗೆ ಇಳಿಸಲಾಗಿರುವ ಗ್ರಂಥವೆಂದು ಖಚಿತವಾಗಿ ತಿಳಿದಿದೆ. ನೀವೀಗ ಸಂಶಯಿಸುವವರ ಸಾಲಿಗೆ ಸೇರಬೇಡಿ

[114] ಸತ್ಯದಲ್ಲೂ ನ್ಯಾಯದಲ್ಲೂ ನಿಮ್ಮೊಡೆಯನ ಮಾತೇ ಪರಿಪೂರ್ಣವಾಗಿದೆ. ಅವನ ಮಾತುಗಳಲ್ಲಿ ಬದಲಾವಣೆ ಇಲ್ಲ. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನು

[115] ಭೂಮಿಯಲ್ಲಿರುವ ಹೆಚ್ಚಿನವರನ್ನು ನೀವು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ದಾರಿ ತಪ್ಪಿಸಿ ಬಿಡುವರು. ಅವರು ಕೇವಲ ಊಹೆಯನ್ನು ಅನುಸರಿಸುತ್ತಾರೆ ಮತ್ತು ಸದಾ ಭ್ರಮೆಯ ಲೆಕ್ಕಾಚಾರಗಳಲ್ಲಿ ಮಗ್ನರಾಗಿರುತ್ತಾರೆ

[116] ಯಾರು ತನ್ನ ಮಾರ್ಗದಿಂದ ತಪ್ಪಿ ನಡೆದವರೆಂಬುದನ್ನು ನಿಮ್ಮೊಡೆಯನು ಚೆನ್ನಾಗಿಬಲ್ಲನು ಮತ್ತು ಸರಿ ದಾರಿಯಲ್ಲಿರುವವರನ್ನೂ ಅವನು ಚೆನ್ನಾಗಿ ಬಲ್ಲನು

[117] ನೀವು ಅವನ (ಅಲ್ಲಾಹನ) ವಚನಗಳನ್ನು ನಂಬುವವರಾಗಿದ್ದರೆ, ಅಲ್ಲಾಹನ ಹೆಸರನ್ನು ಉಚ್ಚರಿಸಲಾದುದನ್ನು (ಹಲಾಲ್ ಮಾಂಸವನ್ನು) ತಿನ್ನಿರಿ

[118] ನಿಮಗೇನಾಗಿದೆ? ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿರುವುದನ್ನು ನೀವೇಕೆ ತಿನ್ನುವುದಿಲ್ಲ? ಅವನಂತು, ತಾನು ನಿಮಗೆ ನಿಷಿದ್ಧಗೊಳಿಸಿರುವ ವಸ್ತುಗಳನ್ನು ನಿಮಗೆ ವಿವರವಾಗಿ ತಿಳಿಸಿರುವನು – ನೀವು ನಿರ್ಬಂಧಿತರಾದಾಗಿನ ಸ್ಥಿತಿಯು ಅದಕ್ಕೆ ಅತೀತವಾಗಿದೆ. ಹೆಚ್ಚಿನವರು ಜ್ಞಾನವಿಲ್ಲದೆ ಕೇವಲ ತಮ್ಮ ಇಚ್ಛೆಯನ್ನು ಅನುಸರಿಸಿ (ಜನರನ್ನು) ದಾರಿ ತಪ್ಪಿಸುತ್ತಾರೆ. (ಈ ರೀತಿ) ಮಿತಿ ಮೀರುವವರನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು

[119] ವ್ಯಕ್ತ ಹಾಗೂ ಗುಪ್ತ ಪಾಪಕೃತ್ಯಗಳನ್ನು ನೀವು ಬಿಟ್ಟು ಬಿಡಿರಿ – ಪಾಪಗಳನ್ನು ಸಂಪಾದಿಸುತ್ತಿರುವವರು ಖಂಡಿತವಾಗಿಯೂ ತಮ್ಮ ಗಳಿಕೆಯ ಪ್ರತಿಫಲವನ್ನು ಪಡೆಯುವರು

[120] ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿಲ್ಲದ್ದನ್ನು ತಿನ್ನಬೇಡಿ – ಅದು ಪಾಪಕೃತ್ಯವಾಗಿದೆ. ಶೈತಾನರಂತು ನಿಮ್ಮೊಡನೆ ಜಗಳಾಡಬೇಕೆಂದು ತಮ್ಮ ಆಪ್ತರನ್ನು ಪ್ರಚೋದಿಸುತ್ತಲೇ ಇರುತ್ತಾರೆ. ನೀವು ಅವರನ್ನು ಅನುಸರಿಸಿದರೆ ಖಂಡಿತವಾಗಿಯೂ ಹಲವರ ಆರಾಧಕರಾಗುವಿರಿ

[121] ಮೃತನಾಗಿದ್ದ ಒಬ್ಬ ವ್ಯಕ್ತಿಯನ್ನು ನಾವು ಜೀವಂತಗೊಳಿಸಿ, ಆತನಿಗೆ ಪ್ರಕಾಶವನ್ನು ಒದಗಿಸಿ, ಆತನು ಅದರೊಂದಿಗೆ ಜನರ ನಡುವೆ ನಡೆಯುವಂತೆ ಮಾಡಿದ್ದು, ಅಂತಹ ವ್ಯಕ್ತಿಯು, ಸದಾ ಕತ್ತಲಲ್ಲಿರುವ ಮತ್ತು ಅದರೊಳಗಿಂದ ಹೊರ ಬರಲಾಗದ ವ್ಯಕ್ತಿಗೆ ಸಮಾನನಾಗಲು ಸಾಧ್ಯವೇ? ಈ ರೀತಿ ಧಿಕ್ಕಾರಿಗಳಿಗೆ ಅವರು ಮಾಡುತ್ತಿರುವ ಎಲ್ಲವನ್ನೂ ಚಂದಗಾಣಿಸಲಾಗಿದೆ

[122] ಇದೇ ರೀತಿ ನಾವು ಪ್ರತಿಯೊಂದು ನಾಡಿನಲ್ಲಿ, ಅಲ್ಲಿನ ಮಹಾ ಅಪರಾಧಿಗಳನ್ನು, ಅಲ್ಲಿ ಸಂಚು ಹೂಡುತ್ತಿರಲು ಬಿಟ್ಟು ಬಿಟ್ಟಿದ್ದೇವೆ. ನಿಜವಾಗಿ ಅವರು ಸ್ವತಃ ತಮ್ಮ ವಿರುದ್ಧವೇ ಸಂಚು ಹೂಡುತ್ತಿದ್ದಾರೆ. ಆದರೆ ಅವರಿಗೆ ಅದರ ಅರಿವಿಲ್ಲ

[123] ಅವರ ಬಳಿಗೆ ಒಂದು ಪುರಾವೆಯು ಬಂದಾಗ ಅವರು ‘‘ಅಲ್ಲಾಹನ ದೂತರುಗಳಿಗೆ ನೀಡಿರುವಂತಹದ್ದನ್ನೇ ನಮಗೆ ನೀಡಲಾಗುವ ತನಕ ನಾವು ನಂಬುವುದಿಲ್ಲ’’ ಎನ್ನುತ್ತಾರೆ. ತನ್ನ ದೌತ್ಯವನ್ನು ಹೇಗೆ ಕಳುಹಿಸಬೇಕೆಂದು ಅಲ್ಲಾಹನು ಚೆನ್ನಾಗಿ ಬಲ್ಲನು. ಆ ಅಪರಾಧಿಗಳು ಬೇಗನೇ ಅಲ್ಲಾಹನ ಬಳಿ ಘೋರ ಅಪಮಾನವನ್ನು ಎದುರಿಸಲಿದ್ದಾರೆ ಮತ್ತು ತಮ್ಮ ದುಷ್ಟ ಸಂಚುಗಳ ಕಾರಣ ಭಾರೀ ಯಾತನೆಗೆ ಗುರಿಯಾಗಲಿದ್ದಾರೆ

[124] ಅಲ್ಲಾಹನು ಯಾರಿಗೆ ಸರಿದಾರಿ ತೋರಬಯಸುತ್ತಾನೋ ಅವನ ಮನಸ್ಸನ್ನು ಇಸ್ಲಾಮಿನ ಪಾಲಿಗೆ ತೆರೆದು ಬಿಡುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸ ಬಯಸುತ್ತಾನೋ ಆತನ ಮನಸ್ಸನ್ನು ಮುದುಡಿಸಿ ತೀರಾ ಸಂಕುಚಿತಗೊಳಿಸಿ ಬಿಡುತ್ತಾನೆ. (ಸತ್ಯ ದರ್ಶನವು) ಅವನ ಪಾಲಿಗೆ, ಆಕಾಶಕ್ಕೆ ಮೆಟ್ಟಿಲೇರುವುದೋ ಎಂಬಷ್ಟು ಕಠಿಣ ಕಾರ್ಯವಾಗಿ ಬಿಡುತ್ತದೆ. ಈ ರೀತಿ ಅಲ್ಲಾಹನು ಸತ್ಯವನ್ನು ನಂಬದವರ ಮೇಲೆ ಕಳಂಕವನ್ನು ಹೊರಿಸುತ್ತಾನೆ

[125] ನಿಮ್ಮೊಡೆಯನ ಈ ಮಾರ್ಗವೇ ನೇರ ಮಾರ್ಗವಾಗಿದೆ. ಪಾಠ ಕಲಿಯುವವರಿಗಾಗಿ ನಾವು ನಮ್ಮ ವಚನಗಳನ್ನು ಸವಿಸ್ತಾರವಾಗಿ ವಿವರಿಸಿರುವೆವು

[126] ಅಂಥವರಿಗೆ ಅವರ ಒಡೆಯನ ಬಳಿ ಶಾಂತಿಯ ನಿವಾಸವಿದೆ ಮತ್ತು ಅವರ ಕರ್ಮಗಳ ಫಲವಾಗಿ ಅವನು (ಅಲ್ಲಾಹನು) ಅವರ ಪರಮಾಪ್ತನಾಗಿರುವನು

[127] ಅವನು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ ‘‘ಜಿನ್ನ್‌ಗಳೇ, ನೀವು ಮಾನವರಲ್ಲಿ ಅನೇಕರನ್ನು ವಶೀಕರಿಸಿಕೊಂಡಿರಿ’’ ಎನ್ನಲಾಗುವುದು. ಆಗ ಮಾನವರ ಪೈಕಿ ಅವರ (ಜಿನ್ನ್‌ಗಳ) ಆಪ್ತರು ಹೇಳುವರು; ‘‘ನಮ್ಮೊಡೆಯಾ, ನಮ್ಮಲ್ಲಿನ ಕೆಲವರು ಮತ್ತೆ ಕೆಲವರಿಂದ ಪರಸ್ಪರ ಲಾಭ ಪಡೆದರು. ಕೊನೆಗೆ ನಾವು, ನೀನು ನಮಗಾಗಿ ನಿಗದಿಪಡಿಸಿದ ಅಂತಿಮ ಗಡುವನ್ನು ತಲುಪಿದೆವು.’’ ಅವನು ಹೇಳುವನು; ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ. ಅಲ್ಲಾಹನು ಯಾರನ್ನು ರಕ್ಷಿಸಲಿಚ್ಛಿಸುವನೋ ಅವರ ಹೊರತು ನೀವೆಲ್ಲರೂ ಇದರಲ್ಲೇ ಶಾಶ್ವತವಾಗಿ ಇರುವಿರಿ. ಖಂಡಿತವಾಗಿಯೂ ನಿಮ್ಮೊಡೆಯನು ಯುಕ್ತಿವಂತನೂ ಜ್ಞಾನಿಯೂ ಆಗಿರುವನು

[128] ಈ ರೀತಿ ನಾವು ಅವರ ಗಳಿಕೆಯ ಫಲವಾಗಿ, ಕೆಲವು ಅಕ್ರಮಿಗಳನ್ನು ಮತ್ತೆ ಕೆಲವರ ಮೇಲೆ ಹೇರುತ್ತಲೇ ಇರುತ್ತೇವೆ

[129] ‘‘ಜಿನ್ನ್‌ಗಳೇ ಮತ್ತು ಮಾನವರೇ, ನಿಮಗೆ ನಮ್ಮ ವಚನಗಳನ್ನು ವಿವರಿಸುವ ಮತ್ತು ಈ ದಿನವನ್ನು ನೀವು ಕಾಣಲಿರುವ ಕುರಿತು ನಿಮಗೆ ಮುನ್ನೆಚ್ಚರಿಕೆ ನೀಡುವ ದೂತರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ (ಎಂದು ಕೇಳಲಾದಾಗ) ಅವರು ‘‘ನಮ್ಮ ವಿರುದ್ಧ ಇದೋ ನಾವೇ ಸಾಕ್ಷಿ ಹೇಳುತ್ತೇವೆ’’ ಎನ್ನುವರು. ನಿಜವಾಗಿ, ಇಹಲೋಕದ ಬದುಕು ಅವರನ್ನು ಮೋಸಗೊಳಿಸಿತ್ತು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು

[130] ಇದೇಕೆಂದರೆ, ನಿಮ್ಮ ಒಡೆಯನು, ಅಕ್ರಮಕ್ಕೆ ಶಿಕ್ಷೆಯಾಗಿ ಯಾವುದೇ ನಾಡನ್ನು, ಆ ನಾಡಿನವರಿಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ (ಮುನ್ನೆಚರಿಕೆ ನೀಡದೆ) ನಾಶ ಮಾಡುವವನಲ್ಲ

[131] ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ಅನುಸಾರವಾದ ಸ್ಥಾನವಿದೆ ಮತ್ತು ನಿಮ್ಮ ಒಡೆಯನು ಅವರ ಕರ್ಮಗಳ ಕುರಿತು ಅರಿವಿಲ್ಲದವನಲ್ಲ

[132] ನಿಜವಾಗಿ, ನಿಮ್ಮೊಡೆಯನು ಧಾರಾಳ ಉಳ್ಳವನು ಮತ್ತು ಅನುಗ್ರಹಿಯಾಗಿರುವನು. ಅವನು ಬಯಸಿದರೆ, ಬೇರೊಂದು ಜನಾಂಗದ ಸಂತತಿಯಿಂದ ನಿಮ್ಮನ್ನು ಬೆಳೆಸಿದಂತೆ, ನಿಮ್ಮನ್ನು ತೊಲಗಿಸಿ, ನಿಮ್ಮ ಬಳಿಕ ತಾನಿಚ್ಛಿಸಿದವರನ್ನು ನಿಮ್ಮ ಉತ್ತರಾಧಿಕಾರಿಗಳಾಗಿ ಮಾಡಬಲ್ಲನು

[133] ನಿಮಗೆ ಯಾವುದರ ವಾಗ್ದಾನ ನೀಡಲಾಗುತ್ತಿದೆಯೋ ಅದು ಖಂಡಿತವಾಗಿಯೂ ಬರಲಿದೆ ಮತ್ತು (ಅಲ್ಲಾಹನನ್ನು) ನಿರ್ಬಂಧಿಸಲು ನಿಮ್ಮಿಂದ ಸಾಧ್ಯವಿಲ್ಲ

[134] (ದೂತರೇ,) ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ; ನಾನೂ ಸಕ್ರಿಯನಾಗಿರುತ್ತೇನೆ. ಅಂತಿಮ ನೆಲೆಯು ಯಾರಿಗೆ ಸೇರಿದೆ ಎಂಬುದು ಬೇಗನೇ ನಿಮಗೆ ತಿಳಿಯಲಿದೆ. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ

[135] ಅಲ್ಲಾಹನು ಸೃಷ್ಟಿಸಿರುವ ಹೊಲ ಮತ್ತು ಜಾನುವಾರುಗಳಲ್ಲಿ ಅವರು ಅಲ್ಲಾಹನಿಗೆ ಒಂದು ಪಾಲನ್ನು ನಿಗದಿಪಡಿಸಿ, ತಮ್ಮದೇ ಲೆಕ್ಕಾಚಾರ ಪ್ರಕಾರ, ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ಸಹಭಾಗಿಗಳಿಗೆ ಎನ್ನುತ್ತಾರೆ. ನಿಜವಾಗಿ, ಅವರು ತಮ್ಮ ಪಾಲುದಾರರಿಗೆ ಏನನ್ನು ಮೀಸಲಿಟ್ಟಿರುವರೋ ಅದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವರು ಅಲ್ಲಾಹನಿಗೆ ನಿಗದಿಪಡಿಸಿರುವ ಪಾಲು ಅವರ ಪಾಲುದಾರರಿಗೆ ತಲುಪಿ ಬಿಡುತ್ತದೆ. ತುಂಬಾ ಕೆಟ್ಟದಾಗಿದೆ, ಅವರ ತೀರ್ಮಾನ

[136] ಇದೇ ರೀತಿ, ಹೆಚ್ಚಿನ ಬಹುದೇವಾರಾಧಕರಿಗೆ, (ದೇವತ್ವದಲ್ಲಿನ) ಅವರ ಪಾಲುದಾರರು ತಮ್ಮ ಮಕ್ಕಳ ಹತ್ಯೆಯನ್ನು ಚಂದಗಾಣಿಸಿ ಬಿಟ್ಟಿದ್ದಾರೆ – ಅವರನ್ನು ನಾಶ ಪಡಿಸಲಿಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಅಸ್ಪಷ್ಟಗೊಳಿಸಲಿಕ್ಕಾಗಿ. ಅಲ್ಲಾಹನು ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ನೀವೀಗ ಅವರನ್ನು ಮತ್ತು ಅವರು ಕಟ್ಟುತ್ತಿರುವ ಸುಳ್ಳುಗಳನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ

[137] ‘‘ಈ ಪ್ರಾಣಿಗಳು ಮತ್ತು ಈ ಬೆಳೆಗಳು ನಿಷಿದ್ಧವಾಗಿವೆ. ನಾವು ಬಯಸುವವರ ಹೊರತು ಬೇರಾರೂ ಇವುಗಳನ್ನು ತಿನ್ನಬಾರದು’’ ಎಂದು ಅವರು, ತಮ್ಮ ಭ್ರಮೆಯಲ್ಲಿ ಹೇಳುತ್ತಾರೆ. ಅದೇ ರೀತಿ, ಕೆಲವು ಪ್ರಾಣಿಗಳ ಮೇಲಿನ ಸವಾರಿಯನ್ನು ಅವರು ನಿಷಿದ್ಧಗೊಳಿಸಿದ್ದಾರೆ ಮತ್ತು ಕೆಲವು ಪ್ರಾಣಿಗಳನ್ನು ಅವರು ಅಲ್ಲಾಹನ ಹೆಸರಿನಲ್ಲಿ ವಧಿಸುವುದಿಲ್ಲ – ಇವೆಲ್ಲಾ ಅವರು ಅವನ (ಅಲ್ಲಾಹನ) ಮೇಲೆ ಹೊರಿಸುವ ಆರೋಪಗಳು. ಅವರು ಕಟ್ಟಿಕೊಂಡ ಈ ಸುಳ್ಳುಗಳ ಪ್ರತಿಫಲವನ್ನು ಅವನು (ಅಲ್ಲಾಹನು) ಅವರಿಗೆ ನೀಡಲಿದ್ದಾನೆ

[138] ‘‘ಈ ಪ್ರಾಣಿಗಳ ಗರ್ಭದಲ್ಲೇನಿದೆಯೋ ಅದು ಕೇವಲ ನಮ್ಮ ಪುರುಷರಿಗೆ ಮಾತ್ರ ಮೀಸಲಾಗಿದೆ. ನಮ್ಮ ಪತ್ನಿಯರ ಪಾಲಿಗೆ ಅವು ನಿಷಿದ್ಧವಾಗಿವೆ. ಇನ್ನು ಅವು ಮೃತ ಸ್ಥಿತಿಯಲ್ಲಿ ಜನಿಸಿದರೆ ಮಾತ್ರ ಅವರೂ ಅದರಲ್ಲಿ ಪಾಲುದಾರರಾಗುವರು’’ ಎಂದು ಅವರು ಹೇಳುತ್ತಾರೆ. (ಈ ರೀತಿ) ಸುಳ್ಳುಗಳನ್ನು ಸೃಷ್ಟಿಸಿದ್ದರ ಪ್ರತಿಫಲವನ್ನು ಅವನು (ಅಲ್ಲಾಹನು) ಅವರಿಗೆ ನೀಡುವನು. ಅವನಂತು ಅಪಾರ ಯುಕ್ತಿವಂತನೂ ಜ್ಞಾನಿಯೂ ಆಗಿರುವನು

[139] ಮೂರ್ಖತನದಿಂದ, ಜ್ಞಾನವಿಲ್ಲದೆ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪವನ್ನು ಹೊರಿಸಿ, ಅಲ್ಲಾಹನು ತಮಗೆ ನೀಡಿದ್ದನ್ನು ತಮ್ಮ ಮೇಲೆ ನಿಷೇಧಿಸಿಕೊಂಡವರು ಖಂಡಿತ ನಷ್ಟಕ್ಕೊಳಗಾದರು. ಅವರು ಖಂಡಿತ ದಾರಿಗೆಟ್ಟಿದ್ದರು ಮತ್ತು ಅವರು ನೇರ ಮಾರ್ಗದಲ್ಲಿರಲಿಲ್ಲ

[140] ಅವನೇ, ಮಂಟಪವಿರುವ (ಉದಾ: ದ್ರಾಕ್ಷಿ) ಹಾಗೂ ಮಂಟಪವಿಲ್ಲದ ತೋಟಗಳನ್ನು, ಖರ್ಜೂರವನ್ನು, ವಿವಿಧ ಬಗೆಯ ಬೆಳೆಗಳನ್ನು ಮತ್ತು ಸಮರೂಪಿಗಳಾಗಿಯೂ, ಭಿನ್ನ ರೂಪಿಗಳಾಗಿಯೂ ಇರುವ ಝೈತೂನ್ (ಇಪ್ಪೆ) ಹಾಗೂ ದಾಳಿಂಬೆಗಳನ್ನು ಸೃಷ್ಟಿಸಿದವನು. ಅವು ಫಲ ನೀಡಿದಾಗ ಅವುಗಳ ಫಲವನ್ನು ತಿನ್ನಿರಿ ಮತ್ತು ಅವುಗಳ ಬೆಳೆ ಕೊಯ್ಯುವ ದಿನ ಅವುಗಳ ಬಾಧ್ಯತೆಯನ್ನು (ಉಶ್ರ್ ಅಥವಾ ಹತ್ತನೇ ಒಂದಂಶ ದಾನವನ್ನು) ಪಾವತಿಸಿರಿ. ಅಪವ್ಯಯ ಮಾಡಬೇಡಿ. ಅಪವ್ಯಯ ಮಾಡುವವರನ್ನು ಅವನು (ಅಲ್ಲಾಹನು) ಖಂಡಿತ ಮೆಚ್ಚುವುದಿಲ್ಲ

[141] ಅವನೇ, ಜಾನುವಾರುಗಳ ಪೈಕಿ ಹೊರೆ ಹೊರುವವುಗಳನ್ನು (ದೊಡ್ಡವುಗಳನ್ನು) ಮತ್ತು ಸಣ್ಣವುಗಳನ್ನು ಸೃಷ್ಟಿಸಿದವನು. ಅಲ್ಲಾಹನು ನಿಮಗೆ ದಯ ಪಾಲಿಸಿರುವವುಗಳಿಂದ ತಿನ್ನಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಕರಿಸಬೇಡಿ. ಖಂಡಿತವಾಗಿಯೂ ಅವನು ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆ

[142] (ದೂತರೇ, ಅವನು) ಎಂಟು ಜೊತೆಗಳನ್ನು ಸೃಷ್ಟಿಸಿರುವನು. ಕುರಿಗಳಲ್ಲಿ ಎರಡು ಬಗೆ ಹಾಗೂ ಆಡುಗಳಲ್ಲಿ ಎರಡು ಬಗೆ. ನೀವು ಹೇಳಿರಿ; ‘‘ಈ ಪೈಕಿ ಅಲ್ಲಾಹನು ನಿಷೇಧಿಸಿರುವುದು ಎರಡೂ ಬಗೆಯ ಗಂಡು ವರ್ಗದವುಗಳನ್ನೋ ಅಥವಾ ಹೆಣ್ಣು ವರ್ಗದವುಗಳನ್ನೋ ಅಥವಾ ಎರಡೂ ಬಗೆಯ ಹೆಣ್ಣು ವರ್ಗದ ಪ್ರಾಣಿಗಳ ಗರ್ಭದಲ್ಲಿರುವವುಗಳನ್ನೋ? ನೀವು ಸತ್ಯವಂತರಾಗಿದ್ದರೆ. ಜ್ಞಾನದ ಆಧಾರದಲ್ಲಿ ನನಗೆ ತಿಳಿಸಿರಿ’’

[143] ಹಾಗೆಯೇ, ಒಂಟೆಯ ಜಾತಿಯಲ್ಲಿ ಎರಡು ಹಾಗೂ ಗೋವಿನ ಜಾತಿಯಲ್ಲಿ ಎರಡು ಬಗೆಗಳಿವೆ. ಹೇಳಿರಿ; ‘‘ಈ ಪೈಕಿ ಅಲ್ಲಾಹನು ನಿಷೇಧಿಸಿರುವುದು ಗಂಡು ವರ್ಗದ ಎರಡನ್ನೋ ಅಥವಾ ಹೆಣ್ಣು ವರ್ಗದ ಎರಡನ್ನೋ? ಅಥವಾ ಈ ಪೈಕಿ ಎರಡೂ ಬಗೆಯ ಹೆಣ್ಣು ಪ್ರಾಣಿಗಳ ಗರ್ಭದಲ್ಲಿರುವುದನ್ನೋ? ಅಲ್ಲಾಹನು ಹಾಗೆಂದು ನಿಮಗೆ ಉಪದೇಶಿಸುವಾಗ ನೀವೇನು ಹಾಜರಿದ್ದಿರಾ? ಜ್ಞಾನವಿಲ್ಲದೆ ಜನರನ್ನು ದಾರಿ ತಪ್ಪಿಸಲಿಕ್ಕಾಗಿ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಖಂಡಿತವಾಗಿಯೂ ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿ ತೋರಿಸುವುದಿಲ್ಲ.’’

[144] (ದೂತರೇ) ಹೇಳಿರಿ; ನನ್ನೆಡೆಗೆ ಇಳಿಸಿಕೊಡಲಾಗಿರುವ ದಿವ್ಯ ಸಂದೇಶದಲ್ಲಂತು ತಿನ್ನುವವನ ಪಾಲಿಗೆ ಶವ, ಹರಿಯುತ್ತಿರುವ ರಕ್ತ ಅಥವಾ ಹಂದಿಯ ಮಾಂಸದ ಹೊರತು – ಬೇರೇನನ್ನಾದರೂ ತಿನ್ನುವುದಕ್ಕೆ ನಿಷೇಧ ಹೇರಿರುವುದನ್ನು ನಾನು ಕಾಣುವುದಿಲ್ಲ. ಏಕೆಂದರೆ ಅವು ಮಲಿನ ವಸ್ತುಗಳಾಗಿವೆ. ಹಾಗೆಯೇ ಅಲ್ಲಾಹನ ಹೊರತು ಬೇರೆ ಯಾರದಾದರೂ ಹೆಸರಲ್ಲಿ ವಧಿಸಲಾದ (ಅಥವಾ ಬಲಿ ನೀಡಲಾದ) ಪ್ರಾಣಿಯೂ ನಿಷಿದ್ಧವಾಗಿದೆ. ಏಕೆಂದರೆ ಅದು ಪಾಪಕೃತ್ಯವಾಗಿದೆ. ಇಷ್ಟಾಗಿಯೂ ಒಬ್ಬ ವ್ಯಕ್ತಿ ತೀರಾ ಅಸಹಾಯಕನಾಗಿದ್ದರೆ ಮತ್ತು ಅವನು ಅವಿಧೇಯನಾಗಲಿ ಅಥವಾ ಬಂಡುಕೋರನಾಗಲಿ ಅಲ್ಲದಿದ್ದರೆ ನಿಮ್ಮ ಒಡೆಯನಂತು ಖಂಡಿತವಾಗಿಯೂ ಅಪಾರ ಕ್ಷಮಾಶೀಲನೂ ಕರುಣಾಳುವೂ ಆಗಿರುವನು

[145] ಯಹೂದಿಗಳಾದವರ ಪಾಲಿಗೆ ನಾವು ಉಗುರುಳ್ಳ ಎಲ್ಲ ಜೀವಿಗಳನ್ನು ನಿಷೇಧಿಸಿದ್ದೆವು ಮತ್ತು ದನ ಹಾಗೂ ಆಡುಗಳ, ಬೆನ್ನಲ್ಲಿರುವ, ಕರುಳಲ್ಲಿರುವ ಹಾಗೂ ಮೂಳೆಗಳಿಗೆ ತಗಲಿರುವ ಕೊಬ್ಬಿನ ಹೊರತು ಇತರ ಕೊಬ್ಬನ್ನು ನಾವು ಅವರ ಪಾಲಿಗೆ ನಿಷೇಧಿಸಿದ್ದೆವು. ಇದು ನಾವು ಅವರ ಕಿಡಿಗೇಡಿತನಕ್ಕೆ ನೀಡಿದ ಪ್ರತಿಫಲ. ಖಂಡಿತ ನಾವೇ ಸತ್ಯವಂತರು

[146] (ದೂತರೇ,) ಅವರು ನಿಮ್ಮನ್ನು ತಿರಸ್ಕರಿಸುತ್ತಾರೆಂದಾದರೆ ಹೇಳಿರಿ; ನಿಮ್ಮ ಒಡೆಯನು ಭಾರೀ ವಿಶಾಲ ಅನುಗ್ರಹ ಉಳ್ಳವನಾಗಿದ್ದಾನೆ. ಆದರೆ, ಅಪರಾಧಿಗಳಿಂದ ಅವನ ಶಿಕ್ಷೆಯನ್ನು ನಿವಾರಿಸಲು ಯಾರಿಗೂ ಸಾಧ್ಯವಿಲ್ಲ

[147] ‘‘ಅಲ್ಲಾಹನು ಹಾಗೆ ಬಯಸಿದ್ದರೆ ನಾವಾಗಲಿ ನಮ್ಮ ಪೂರ್ವಜರಾಗಲಿ ಬಹುದೇವಾರಾಧನೆ ಮಾಡುತ್ತಿರಲಿಲ್ಲ ಮತ್ತು ನಾವು ಯಾವುದನ್ನೂ ನಿಷಿದ್ಧವೆಂದು ಪರಿಗಣಿಸುತ್ತಿರಲಿಲ್ಲ’’- ಎಂದು ಬಹುದೇವಾರಾಧಕರು ಖಂಡಿತ ಹೇಳುವರು. ಅವರಿಗಿಂತ ಹಿಂದಿನವರೂ ನಮ್ಮ ಶಿಕ್ಷೆಯ ರುಚಿ ಕಾಣುವ ತನಕ ಇದೇ ರೀತಿಯ ಸುಳ್ಳನ್ನು ಹೇಳಿದ್ದರು. ಹೇಳಿರಿ; ನಿಮ್ಮ ಬಳಿ ಖಚಿತ ಜ್ಞಾನವೇನಾದರೂ ಇದ್ದರೆ ಅದನ್ನು ನಮ್ಮ ಮುಂದೆ ಪ್ರಕಟಿಸಿರಿ. ನೀವಂತು ಕೇವಲ ಊಹೆಯ ಹಿಂದೆ ನಡೆಯುತ್ತಿರುವಿರಿ ಮತ್ತು ಕೇವಲ ಭ್ರಮಿಸುತ್ತಿರುವಿರಿ

[148] (ದೂತರೇ,) ಹೇಳಿರಿ; ಅಂತಿಮ ವಾದವು ಅಲ್ಲಾಹನಿಗೇ ಸೇರಿದೆ. ಅವನು ಬಯಸಿದ್ದರೆ ನಿಮ್ಮೆಲ್ಲರನ್ನೂ ಸರಿದಾರಿಯಲ್ಲಿ ನಡೆಸುತ್ತಿದ್ದನು

[149] (ದೂತರೇ,) ‘‘ಇವುಗಳನ್ನು ಅಲ್ಲಾಹನು ನಿಷೇಧಿಸಿರುವನೆಂದು ಸಾಕ್ಷ್ಯ ಹೇಳಬಲ್ಲ ನಿಮ್ಮ ಸಾಕ್ಷಿಗಳನ್ನು ಕರೆ ತನ್ನಿರಿ’’ ಎಂದು ಹೇಳಿರಿ. ಒಂದು ವೇಳೆ ಅವರು ಹಾಗೆಂದು ಸಾಕ್ಷ್ಯ ಹೇಳಿದರೂ ನೀವು ಅವರ ಜೊತೆ ಸಾಕ್ಷ್ಯ ಹೇಳಬೇಡಿ. ಹಾಗೆಯೇ ನೀವು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ, ಪರಲೋಕದಲ್ಲಿ ವಿಶ್ವಾಸವಿಲ್ಲದವರ ಮತ್ತು (ಮಿಥ್ಯ ದೇವರುಗಳನ್ನು) ತಮ್ಮ ಒಡೆಯನಿಗೆ ಸಮಾನರಾಗಿ ಪರಿಗಣಿಸುವವರ ಅಪೇಕ್ಷೆಗಳನ್ನು ಅನುಸರಿಸಬೇಡಿ

[150] (ದೂತರೇ,) ಹೇಳಿರಿ; ಬನ್ನಿ, ನಿಮ್ಮ ಒಡೆಯನು ನಿಮ್ಮ ಪಾಲಿಗೆ ಏನನ್ನು ನಿಷೇಧಿಸಿರುವನು ಎಂಬುದನ್ನು ನಾನು ನಿಮಗೆ ಓದಿ ಕೇಳಿಸುತ್ತೇನೆ; ನೀವು ಏನನ್ನೂ ಅವನ ಜೊತೆ ಪಾಲುದಾರನಾಗಿ ಮಾಡಬಾರದು. ನಿಮ್ಮ ತಾಯಿ-ತಂದೆಯ ಜೊತೆ ಪರಮ ಸೌಜನ್ಯದ ನೀತಿಯನ್ನು ಪಾಲಿಸಿರಿ. ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ನಾವು ನಿಮಗೆ ಆಹಾರವನ್ನು ಒದಗಿಸುತ್ತಿದ್ದೇವೆ, ಅವರಿಗೂ ಒದಗಿಸುವೆವು. ವ್ಯಕ್ತವಾಗಿರುವ ಅಥವಾ ಗುಪ್ತವಾಗಿರುವ ಯಾವುದೇ ಅಶ್ಲೀಲತೆಯ ಹತ್ತಿರವೂ ಸುಳಿಯಬೇಡಿ. ಅಲ್ಲಾಹನು ಮಾನ್ಯ ಗೊಳಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲಬೇಡಿ. ನೀವು ಬುದ್ಧಿವಂತರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು

[151] ಅನಾಥನು ತನ್ನ ಯವ್ವನವನ್ನು ತಲುಪುವ ತನಕ ನೀವು ಅವನ ಸೊತ್ತನ್ನು ಸಮೀಪಿಸಬಾರದು – ಅತ್ಯುತ್ತಮ ವಿಧಾನದ ಹೊರತು. ಹಾಗೆಯೇ ನೀವು ಅಳತೆ ಮತ್ತು ತೂಕವನ್ನು ನ್ಯಾಯೋಚಿತವಾಗಿ ಪೂರ್ತಿಗೊಳಿಸಿರಿ. ನಾವು ಯಾವುದೇ ಜೀವದ ಮೇಲೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ನೀವು ಮಾತನಾಡುವಾಗ ನ್ಯಾಯವಾದ ಮಾತನ್ನೇ ಆಡಿರಿ – ತೀರಾ ಆಪ್ತರ ವಿಷಯವಾಗಿದ್ದರೂ ಸರಿಯೇ. ಹಾಗೆಯೇ, ಅಲ್ಲಾಹನ ಜೊತೆಗಿನ ಕರಾರನ್ನು ಪೂರ್ಣವಾಗಿ ಪಾಲಿಸಿರಿ – ನೀವು ಉಪದೇಶ ಸ್ವೀಕರಿಸುವವರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು

[152] ಇದು ನನ್ನ ಸ್ಥಿರವಾದ, ನೇರಮಾರ್ಗ – ಇದನ್ನೇ ಅನುಸರಿಸಿ ಮತ್ತು ಇತರ ಮಾರ್ಗಗಳನ್ನು ಅನುಸರಿಸಬೇಡಿ. ಅವು ನಿಮ್ಮನ್ನು ಅವನ (ಅಲ್ಲಾಹನ) ಮಾರ್ಗದಿಂದ ದೂರಗೊಳಿಸುವವು. ನೀವು ಧರ್ಮನಿಷ್ಠರಾಗಬೇಕೆಂದು ಇದನ್ನೆಲ್ಲಾ ಅವನು ನಿಮಗೆ ಬೋಧಿಸಿರುವನು

[153] ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು – ಸತ್ಕರ್ಮಿಯ ಪಾಲಿಗೆ ನಮ್ಮ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ಎಲ್ಲ ವಿಷಯಗಳ ವಿವರವನ್ನು ಒದಗಿಸಲಿಕ್ಕಾಗಿ ಮತ್ತು ಮಾರ್ಗದರ್ಶನ ಹಾಗೂ ಅನುಗ್ರಹವಾಗಿ – ಅವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ನಂಬಲೆಂದು

[154] (ಇದೀಗ) ಈ ಸಮೃದ್ಧಿ ತುಂಬಿದ ಗ್ರಂಥವನ್ನು ನಾವು ಇಳಿಸಿಕೊಟ್ಟಿರುವೆವು. ಇದನ್ನು ಅನುಸರಿಸಿರಿ ಮತ್ತು ಧರ್ಮ ನಿಷ್ಠರಾಗಿರಿ – ನೀವು ಕರುಣೆಗೆ ಪಾತ್ರರಾಗ ಬಹುದು.’’

[155] ಈಗ ನೀವು – ‘‘ನಮಗಿಂತ ಹಿಂದಿನ ಎರಡು ಗುಂಪುಗಳಿಗೆ ಗ್ರಂಥವನ್ನು ಇಳಿಸಿಕೊಡಲಾಗಿತ್ತು. ಆದರೆ ಅವರಿಗೆ ನೀಡಲಾಗಿದ್ದ ಬೋಧನೆಗಳ ಕುರಿತು ನಮಗೇನೂ ತಿಳಿದಿರಲಿಲ್ಲ’’ – ಎಂದು ಹೇಳುವಂತಿಲ್ಲ

[156] ಹಾಗೆಯೇ ನೀವೀಗ – ‘‘ಒಂದು ವೇಳೆ ನಮಗೆ ಗ್ರಂಥವನ್ನು ಇಳಿಸಿಕೊಟ್ಟಿದ್ದರೆ ನಾವು ಅವರಿಗಿಂತ ಹೆಚ್ಚು ಸನ್ಮಾರ್ಗದಲ್ಲಿರುತ್ತಿದ್ದೆವು’’-ಎಂದು ಹೇಳುವಂತಿಲ್ಲ. ಇದೀಗ ನಿಮ್ಮ ಒಡೆಯನ ಕಡೆಯಿಂದ, ವ್ಯಕ್ತವಾದ ಪುರಾವೆ, ಮಾರ್ಗದರ್ಶನ ಹಾಗೂ ಅನುಗ್ರಹವು ನಿಮ್ಮ ಬಳಿಗೆ ಬಂದಿದೆ. ಅಲ್ಲಾಹನ ವಚನಗಳನ್ನು ಸುಳ್ಳೆಂದು ತಿರಸ್ಕರಿಸುವ ಮತ್ತು ಅದರಿಂದ (ಜನರನ್ನು) ತಡೆಯುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಈ ರೀತಿ ನಮ್ಮ ವಚನಗಳಿಂದ (ಜನರನ್ನು) ತಡೆದವರಿಗೆ ನಾವು, ಅವರು ತಡೆದುದರ ಫಲವಾಗಿ ಕಠಿಣ ಶಿಕ್ಷೆಯನ್ನು ನೀಡಲಿದ್ದೇವೆ

[157] ಅವರು ಕಾಯುತ್ತಿರುವುದು ಅವರ ಬಳಿಗೆ ಮಲಕ್‌ಗಳು ಬರಬೇಕು ಅಥವಾ ಸಾಕ್ಷಾತ್ ನಿಮ್ಮ ಒಡೆಯನೇ ಬರಬೇಕು ಅಥವಾ ನಿಮ್ಮ ಒಡೆಯನ ಕೆಲವು ಪುರಾವೆಗಳು ಬರಬೇಕು ಎಂಬುದಕ್ಕೆ ತಾನೇ? ನಿಜವಾಗಿ, ನಿಮ್ಮ ಒಡೆಯನ ಕೆಲವು ಪುರಾವೆಗಳು ಬಂದು ಬಿಡುವ ದಿನ, ಮೊದಲೇ ನಂಬಿಕೆ ಇಟ್ಟಿಲ್ಲದ ಅಥವಾ ತನ್ನ ನಂಬಿಕೆಯ ಮೂಲಕ ಒಳಿತನ್ನು ಸಂಪಾದಿಸಿಲ್ಲದ ಯಾರಿಗೂ ಅವರ ನಂಬಿಕೆಯಿಂದ ಯಾವುದೇ ಪ್ರಯೋಜನವಾಗದು. ಹೇಳಿರಿ; ನೀವು ಕಾಯುತ್ತಲಿರಿ – ನಾವೂ ಕಾಯುತ್ತಿದ್ದೇವೆ

[158] ಖಂಡಿತವಾಗಿಯೂ, ತಮ್ಮ ಧರ್ಮವನ್ನು ವಿಂಗಡಿಸಿದವರು ಮತ್ತು ವಿಚ್ಛಿದ್ರರಾಗಿ ಬಿಟ್ಟವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರಕರಣವು ಅಲ್ಲಾಹನಿಗೆ ಸೇರಿದೆ. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು

[159] (ಅಲ್ಲಾಹನ ಬಳಿಗೆ) ಒಂದು ಸತ್ಕರ್ಮವನ್ನು ತಂದಾತನಿಗೆ ಅದರ ಹತ್ತು ಪಟ್ಟು ಪ್ರತಿಫಲ ಸಿಗಲಿದೆ. ಆದರೆ ಒಂದು ಪಾಪಕೃತ್ಯದೊಂದಿಗೆ ಬಂದಾತನಿಗೆ ಅಷ್ಟು ಮಾತ್ರ ಪ್ರತಿಫಲ ಸಿಗಲಿದೆ. ಅವರ ಮೇಲೆ ಖಂಡಿತ ಅನ್ಯಾಯವಾಗದು

[160] (ದೂತರೇ,) ಹೇಳಿರಿ; ನಿಸ್ಸಂದೇಹವಾಗಿಯೂ ನನ್ನ ಒಡೆಯನು ನನಗೆ ಸ್ಥಿರವಾದ ನೇರಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಇದುವೇ ಪಕ್ವ ಧರ್ಮವಾಗಿದೆ, ಏಕ ನಿಷ್ಠ ಇಬ್ರಾಹೀಮರ ಮಾರ್ಗ – ಅವರು ಖಂಡಿತ ಬಹುದೇವಾರಾಧಕರಾಗಿರಲಿಲ್ಲ

[161] (ದೂತರೇ) ಹೇಳಿರಿ; ಖಂಡಿತವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೇ ಮೀಸಲಾಗಿದೆ

[162] ಅವನಿಗೆ ಯಾರೂ ಪಾಲುದಾರರಿಲ್ಲ. ನನಗೆ ಇದನ್ನೇ ಆದೇಶಿಸಲಾಗಿದೆ ಮತ್ತು ನಾನು ಇತರೆಲ್ಲರಿಗಿಂತ ಮುನ್ನ ಮುಸ್ಲಿಮನಾಗಿದ್ದೇನೆ

[163] ಹೇಳಿರಿ; ಅಲ್ಲಾಹನೇ ಎಲ್ಲ ವಸ್ತುಗಳ ಒಡೆಯನಾಗಿರುವಾಗ ನಾನೇನು ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಸಂಪಾದಿಸಿರುವುದಕ್ಕೆಲ್ಲಾ ತಾನೇ ಹೊಣೆಗಾರನಾಗಿರುತ್ತಾನೆ. ಹೊರೆ ಹೊರುವ ಯಾರೊಬ್ಬರೂ ಇನ್ನೊಬ್ಬರ ಹೊರೆಯನ್ನು ಹೊರಲಾರರು. ಅಂತಿಮವಾಗಿ ನೀವು ನಿಮ್ಮ ಒಡೆಯನ ಕಡೆಗೇ ಮರಳಬೇಕಾಗಿದೆ. ನೀವು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳ ವಾಸ್ತವವನ್ನು ಅವನು ನಿಮಗೆ ತಿಳಿಸುವನು

[164] ಅವನೇ, ಭೂಮಿಯಲ್ಲಿ ನಿಮ್ಮನ್ನು ಪ್ರತಿನಿಧಿಗಳಾಗಿ ಕಳುಹಿಸಿದವನು ಮತ್ತು ನಿಮಗೇನನ್ನು ನೀಡಲಾಗಿದೆಯೋ ಆ ಮೂಲಕ ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಉನ್ನತ ಸ್ಥಾನಗಳನ್ನು ನೀಡಿದವನು. ಖಂಡಿತವಾಗಿಯೂ ನಿಮ್ಮೊಡೆಯನು ಕ್ಷಿಪ್ರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ನಿಸ್ಸಂದೇಹವಾಗಿಯೂ ಅವನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[165] ಅಲಿಫ್ ಲಾಮ್ ಮ್ಮೀಮ್ ಸ್ವಾದ್

ಎತ್ತರಗಳು

Surah 7

[1] (ದೂತರೇ,) ಈ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಡಲಾಗಿದೆ. ಈ ಕುರಿತು ನಿಮ್ಮ ಮನದಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಏಕೆಂದರೆ ಈ ಮೂಲಕ ನೀವು (ಮಾನವ ಕುಲವನ್ನು) ಎಚ್ಚರಿಸಬೇಕಾಗಿದೆ ಮತ್ತು ಇದು ವಿಶ್ವಾಸಿಗಳ ಪಾಲಿಗೆ ಉಪದೇಶವಾಗಿದೆ

[2] (ಜನರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿಕೊಡಲಾಗಿರುವುದನ್ನು (ಕುರ್‌ಆನ್‌ಅನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ಪೋಷಕರನ್ನು ಅನುಸರಿಸಬೇಡಿ. ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ

[3] ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿರುವೆವು – ನಮ್ಮ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ತನೆ ಬಂದೆರಗಿತ್ತು

[4] ನಮ್ಮ ಶಿಕ್ಷೆಯು ಅವರನ್ನು ತಲುಪಿದಾಗ ‘‘ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ವಾದವೂ ಅವರ ಬಳಿ ಉಳಿದಿರಲಿಲ್ಲ

[5] ಯಾರೆಡೆಗೆ ದೂತರನ್ನು ಕಳಿಸಲಾಗಿತ್ತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು ಮತ್ತು ನಾವು ದೂತರನ್ನೂ ಖಂಡಿತ ಪ್ರಶ್ನಿಸುವೆವು

[6] ಖಂಡಿತವಾಗಿಯೂ ಜ್ಞಾನದ ಆಧಾರದಲ್ಲಿ ನಾವು, ನಡೆದುದೆಲ್ಲವನ್ನೂ ಅವರಿಗೆ ತಿಳಿಸುವೆವು – ನಾವು ಎಂದೂ ಅನುಪಸ್ಥಿತರಾಗಿರಲಿಲ್ಲ

[7] ಅಂದು (ಅಂತಿಮ ವಿಚಾರಣೆಯ ದಿನ) ಕರ್ಮಗಳ ತೂಕ ನಡೆಯುವುದು ಖಚಿತ ಸತ್ಯವಾಗಿದೆ. ಅಂದು ಯಾರ (ಸತ್ಕರ್ಮಗಳ) ಭಾರವು ಅಧಿಕವಾಗಿರುವುದೋ ಅವರೇ ವಿಜಯಿಗಳಾಗುವರು

[8] ಮತ್ತು ಯಾರ (ಸತ್ಕರ್ಮಗಳ) ಭಾರವು ಕಡಿಮೆಯಾಗಿರುವುದೋ ಅವರೇ, ನಮ್ಮ ವಚನಗಳ ವಿಷಯದಲ್ಲಿ ಅಕ್ರಮವೆಸಗುವ ಮೂಲಕ ತಮಗೆ ತಾವೇ ನಷ್ಟವನ್ನುಂಟುಮಾಡಿಕೊಂಡವರು

[9] ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಸಿದೆವು ಮತ್ತು ಅದರಲ್ಲಿ ನಿಮಗೆ ವಿವಿಧ ಸಾಧನಗಳನ್ನು ಒದಗಿಸಿಕೊಟ್ಟೆವು. ಆದರೂ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ

[10] ನಾವು ನಿಮ್ಮನ್ನು ಸೃಷ್ಟಿಸಿದೆವು, ಆ ಬಳಿಕ ನಿಮಗೆ ನಾವು ರೂಪವನ್ನು ಕೊಟ್ಟೆವು, ಆ ಬಳಿಕ ಮಲಕ್‌ಗಳೊಡನೆ, ಆದಮರ ಮುಂದೆ ಸಾಷ್ಟಾಂಗವೆರಗಿರಿ ಎಂದು ಹೇಳಿದೆವು. ಅವರೆಲ್ಲಾ ಸಾಷ್ಟಾಂಗವೆರಗಿದರು – ಆದರೆ ಇಬ್ಲೀಸನ (ಶೈತಾನನ) ಹೊರತು. ಅವನು ಮಾತ್ರ ಸಾಷ್ಟಾಂಗವೆರಗಿದವರ ಸಾಲಿಗೆ ಸೇರಲಿಲ್ಲ

[11] ನಾನು ನಿನಗೆ ಆದೇಶಿಸಿದಾಗ, ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದುದು ಯಾವುದು? ಎಂದು ಅವನು (ಅಲ್ಲಾಹನು) ಕೇಳಿದಾಗ ಅವನು (ಶೈತಾನನು) ಹೇಳಿದನು; ನಾನು ಅವನಿಗಿಂತ ಶ್ರೇಷ್ಠನು. ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ

[12] ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ಇಳಿದು ಬಿಡು. ಇಲ್ಲಿ ದೊಡ್ಡಸ್ತಿಕೆ ಮೆರೆಯುವ ಯಾವ ಹಕ್ಕೂ ನಿನಗಿಲ್ಲ – ಹೊರಟು ಹೋಗು. ನೀನು ತೀರಾ ನೀಚನಾಗಿರುವೆ

[13] ಅವನು (ಶೈತಾನನು) ಹೇಳಿದನು; ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡು

[14] ಅವನು (ಅಲ್ಲಾಹನು) ಹೇಳಿದನು; ಖಂಡಿತವಾಗಿಯೂ ನಿನಗೆ ಕಾಲಾವಕಾಶ ನೀಡಲಾಯಿತು

[15] ಅವನು(ಶೈತಾನನು) ಹೇಳಿದನು; ‘‘ನೀನೀಗ ನನ್ನನ್ನು ದಾರಿ ತಪ್ಪಿದವನೆಂದು ತೀರ್ಮಾನಿಸಿರುವುದರಿಂದ ನಾನು ಅವರಿಗಾಗಿ (ಸರಿದಾರಿಯಲ್ಲಿ ಇರುವವರಿಗಾಗಿ) ನಿನ್ನ ನೇರ ಮಾರ್ಗದಲ್ಲಿ ಹೊಂಚು ಹಾಕುತ್ತಿರುತ್ತೇನೆ’’

[16] ‘‘ಮಾತ್ರವಲ್ಲ, ಅವರ ಮುಂಭಾಗದಿಂದಲೂ, ಅವರ ಹಿಂಭಾಗದಿಂದಲೂ, ಅವರ ಬಲ ಭಾಗದಿಂದಲೂ, ಅವರ ಎಡ ಭಾಗದಿಂದಲೂ ನಾನು ಖಂಡಿತ ಅವರನ್ನು ತಲುಪುತ್ತೇನೆ. ಅವರಲ್ಲಿ ಹೆಚ್ಚಿನವರನ್ನು ನೀನು ಕೃತಜ್ಞರಾಗಿ ಕಾಣಲಾರೆ.’’

[17] ಅವನು (ಅಲ್ಲಾಹನು) ಹೇಳಿದನು; ‘‘ನೀನು ನಿಂದಿತನಾಗಿಯೂ ಶಪಿತನಾಗಿಯೂ ಇಲ್ಲಿಂದ ಹೊರಟು ಹೋಗು. ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ಮತ್ತು ನಿಮ್ಮೆಲ್ಲರಿಂದ ನಾನು ನರಕವನ್ನು ತುಂಬಲಿದ್ದೇನೆ.’’

[18] ‘‘ಇನ್ನು, ಓ ಆದಮ್, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ (ಇಲ್ಲಿ) ನಿಮಗೆ ಇಷ್ಟವಾದುದನ್ನೆಲ್ಲಾ ತಿನ್ನಿರಿ. ಆದರೆ, ಆ ಮರದ ಹತ್ತಿರ ಹೋಗದಿರಿ – (ಹೋದರೆ) ನೀವಿಬ್ಬರೂ ಅಕ್ರಮಿಗಳಾಗುವಿರಿ.’’

[19] ಕೊನೆಗೆ ಅವರ ಪಾಲಿಗೆ ಗುಪ್ತವಾಗಿದ್ದ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಲೆಂದು ಶೈತಾನನು ಅವರಿಬ್ಬರ ಮನದಲ್ಲಿ ಸಂಶಯವನ್ನು ಬಿತ್ತಿದನು. ‘‘ನಿಮ್ಮ ಒಡೆಯನು ಆ ಮರದಿಂದ ನಿಮ್ಮಿಬ್ಬರನ್ನು ತಡೆದಿರುವುದು ನೀವಿಬ್ಬರೂ ಮಲಕ್‌ಗಳಾಗಬಾರದು ಅಥವಾ ಚಿರಂಜೀವಿಗಳಾಗಿ ಬಿಡಬಾರದು ಎಂಬ ಕಾರಣಕ್ಕಾಗಿ ಮಾತ್ರ’’ ಎಂದು ಅವನು (ಅವರೊಡನೆ) ಹೇಳಿದನು

[20] ಹಾಗೆಯೇ ಅವನು, ‘‘ಖಂಡಿತವಾಗಿಯೂ ನಾನು ನಿಮ್ಮ ಹಿತೈಷಿ’’ ಎಂದು ಅವರ ಮುಂದೆ ಆಣೆ ಹಾಕಿದನು

[21] ಕೊನೆಗೆ ಅವನು ಮೋಸದಿಂದ ಅವರನ್ನು ಒಲಿಸಿಕೊಂಡನು ಮತ್ತು ಅವರಿಬ್ಬರೂ ಆ ಮರದ ಫಲವನ್ನು ಸವಿದಾಗ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಿ ಬಿಟ್ಟವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳ ತೊಡಗಿದರು. (ಆಗ) ಅವರ ಒಡೆಯನು ಅವರನ್ನು ಕರೆದು ಹೇಳಿದನು; ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಅಥವಾ ಶೈತಾನನು ನಿಮ್ಮಿಬ್ಬರ ಪಾಲಿಗೂ ಸ್ಪಷ್ಟ ಶತ್ರುವಾಗಿದ್ದಾನೆಂದು ನಾನು ನಿಮಗೆ ಹೇಳಿರಲಿಲ್ಲವೇ

[22] ಅವರಿಬ್ಬರೂ ಹೇಳಿದರು; ನಮ್ಮೊಡೆಯಾ! ನಾವು ನಮ್ಮ ಮೇಲೆಯೇ ಅಕ್ರಮವೆಸಗಿದೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ನಾವು ಖಂಡಿತ ನಷ್ಟಕ್ಕೊಳಗಾದವರ ಸಾಲಿಗೆ ಸೇರುವೆವು

[23] ಅವನು (ಅಲ್ಲಾಹನು) ಹೇಳಿದನು; ಇಳಿದು ಹೋಗಿರಿ. ನೀವು ಪರಸ್ಪರರ ಪಾಲಿಗೆ ಶತ್ರುಗಳು. ಒಂದು ನಿರ್ದಿಷ್ಟ ಕಾಲದ ತನಕ ನಿಮಗೆ ಭೂಮಿಯಲ್ಲಿ ನೆಲೆ ಇದೆ ಮತ್ತು ಸಾಧನಗಳಿವೆ

[24] ಅದರಲ್ಲೇ ನೀವು ಬದುಕುವಿರಿ, ಅದರಲ್ಲೇ ನೀವು ಸಾಯುವಿರಿ ಮತ್ತು ಅದರೊಳಗಿಂದಲೇ ನಿಮ್ಮನ್ನು ಹೊರತೆಗೆಯಲಾಗುವುದು

[25] ಆದಮ್‌ರ ಸಂತತಿಗಳೇ, ನಿಮಗೆ ನಾವು, ನಿಮ್ಮ ಮಾನದ ಭಾಗಗಳನ್ನು ಮುಚ್ಚುವ ಮತ್ತು ಅಲಂಕಾರವಾಗುವ ಉಡುಗೆಯನ್ನು ಇಳಿಸಿಕೊಟ್ಟಿರುವೆವು. ನಿಜವಾಗಿ ಧರ್ಮ ನಿಷ್ಠೆಯ ಉಡುಪೇ ಅತ್ಯುತ್ತಮ. ಇದು ಅವರು ಸ್ಮರಿಸುತ್ತಿರಲಿಕ್ಕಾಗಿ ಅಲ್ಲಾಹನು ಒದಗಿಸಿರುವ ಒಂದು ನಿದರ್ಶನ

[26] ಆದಮ್‌ರ ಸಂತತಿಗಳೇ, ಶೈತಾನನು ನಿಮ್ಮ ತಂದೆ ತಾಯಿಯನ್ನು ಸ್ವರ್ಗದಿಂದ ಹೊರ ಹಾಕಿಸಿದಂತೆ (ಹಾಗೂ) ಅವರ ಮೇಲಿಂದ ಅವರ ಉಡುಗೆಗಳನ್ನು ಕಳಚಿಸಿ ಅವರ ಮಾನದ ಭಾಗಗಳನ್ನು ಅವರ ಮುಂದೆ ಪ್ರಕಟಪಡಿಸಿದಂತೆ ಅವನು ನಿಮ್ಮನ್ನು ದಾರಿಗೆಡಿಸದಿರಲಿ. ಖಂಡಿತವಾಗಿಯೂ, ಅವನು ಮತ್ತು ಅವನ ಪಂಗಡದವರು, ನಿಮಗೆ ಅವರನ್ನು ನೋಡಲಾಗದ ಕಡೆಯಿಂದ, ನಿಮ್ಮನ್ನು ನೋಡುತ್ತಿರುತ್ತಾರೆ. ನಾವಂತು ಶೈತಾನರನ್ನು, ವಿಶ್ವಾಸಿಗಳಲ್ಲದವರ ಪೋಷಕರಾಗಿಸಿದ್ದೇವೆ

[27] ಅವರು ಯಾವುದಾದರೂ ಅಶ್ಲೀಲ ಕೆಲಸ ಮಾಡಿದಾಗ, ‘‘ನಮ್ಮ ಪೂರ್ವಜರನ್ನು ನಾವು ಇದೇ ದಾರಿಯಲ್ಲಿ ಕಂಡಿದ್ದೇವೆ ಮತ್ತು ಅಲ್ಲಾಹನು ಇದನ್ನು ನಮಗೆ ಆದೇಶಿಸಿದ್ದಾನೆ’’ ಎನ್ನುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು ಅಶ್ಲೀಲತೆಯನ್ನು ಆದೇಶಿಸುವುದಿಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ

[28] ಹೇಳಿರಿ; ನನ್ನ ಒಡೆಯನು ನ್ಯಾಯವನ್ನೇ ಆದೇಶಿಸಿದ್ದಾನೆ. ನೀವಿನ್ನು ಪ್ರತಿಬಾರಿಯೂ ಸಾಷ್ಟಾಂಗವೆರಗುವಾಗ ನಿಮ್ಮ ಮುಖಗಳನ್ನು ಸರಿಯಾದ ದಿಕ್ಕಿನಲ್ಲಿಡಿರಿ ಮತ್ತು ಧರ್ಮವನ್ನು ಅವನಿಗೇ ಮೀಸಲಾಗಿಟ್ಟು (ಕೇವಲ ಅವನಿಗೆ ನಿಷ್ಠರಾಗಿ) ಅವನನ್ನು ಕೂಗಿರಿ. ಅವನು ಮೊದಲ ಬಾರಿಗೆ ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ಮತ್ತೆ ಸೃಷ್ಟಿಸಲ್ಪಡುವಿರಿ

[29] ಅವನು ಒಂದು ಪಂಗಡಕ್ಕೆ ಮಾರ್ಗದರ್ಶನ ಮಾಡಿರುವನು ಮತ್ತು ಇನ್ನೊಂದು ಪಂಗಡವು ದಾರಿಗೆಟ್ಟಿರುವುದಕ್ಕೆ ಅರ್ಹವೆಂಬುದು ಸಾಬೀತಾಗಿದೆ. ಖಂಡಿತವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತಮ್ಮ ಆಪ್ತಮಿತ್ರರಾಗಿಸಿಕೊಂಡಿರುವರು ಮತ್ತು ತಾವು ಸನ್ಮಾರ್ಗದಲ್ಲೇ ಇದ್ದೇವೆ ಎಂದುಕೊಂಡಿರುವರು

[30] ಆದಮ್‌ರ ಸಂತತಿಗಳೇ, ನೀವು ನಿಮ್ಮ ಎಲ್ಲ ಆರಾಧನಾ ಸ್ಥಳಗಳಲ್ಲಿ ನಿಮ್ಮ ಅಲಂಕಾರಗಳನ್ನು ಧರಿಸಿರಿ. ತಿನ್ನಿರಿ ಮತ್ತು ಕುಡಿಯಿರಿ ಆದರೆ ಅಪವ್ಯಯ ಮಾಡದಿರಿ. ಖಂಡಿತವಾಗಿಯೂ ಅವನು ಅಪವ್ಯಯ ಮಾಡುವವರನ್ನು ಮೆಚ್ಚುವುದಿಲ್ಲ

[31] ಹೇಳಿರಿ; ಅಲ್ಲಾಹನು ತನ್ನ ದಾಸರಿಗಾಗಿ ಉತ್ಪಾದಿಸಿರುವ ಅಲಂಕಾರ ಸಾಮಗ್ರಿಗಳನ್ನು ಮತ್ತು ಶುದ್ಧ ಆಹಾರ ವಸ್ತುಗಳನ್ನು ನಿಷೇಧಿಸಿರುವವರು ಯಾರು? ಹೇಳಿರಿ; ಇಹಲೋಕದಲ್ಲಿ ಇವು ವಿಶ್ವಾಸಿಗಳಿಗೆ ಸಮ್ಮತವಾಗಿವೆ – ಪರಲೋಕದಲ್ಲಂತೂ ಇವು ಅವರಿಗೆಂದೇ ಮೀಸಲಾಗಿರುತ್ತವೆ. ಈ ರೀತಿ ನಾವು ಅರಿವು ಉಳ್ಳವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ

[32] ಹೇಳಿರಿ; ವ್ಯಕ್ತ ಹಾಗೂ ಗುಪ್ತವಾದ ಎಲ್ಲ ಅಶ್ಲೀಲ ಕೃತ್ಯಗಳನ್ನು, ಪಾಪ ಕೃತ್ಯಗಳನ್ನು, ಅಕ್ರಮ ಬಲಪ್ರಯೋಗವನ್ನು, ಯಾವುದರ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅದನ್ನು, ಅಲ್ಲಾಹನ ಜೊತೆ ಪಾಲುಗೊಳಿಸುವುದನ್ನು ಮತ್ತು ಅಲ್ಲಾಹನ ಕುರಿತು ನಿಮಗೆ ತಿಳಿದಿಲ್ಲದ್ದನ್ನು ಹೇಳುವುದನ್ನು – ನನ್ನೊಡೆಯನು ನಿಷೇಧಿಸಿರುವನು

[33] ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲಾವಧಿ ನಿಗದಿತವಾಗಿದೆ. ತಮ್ಮ ಅವಧಿ ಸಮೀಪಿಸಿದಾಗ ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಗೆ ಸಾಧ್ಯವಾಗದು

[34] ಆದಮ್‌ರ ಸಂತತಿಗಳೇ, ನಿಮ್ಮ ಬಳಿಗೆ, ನಿಮ್ಮೊಳಗಿಂದಲೇ, ನಿಮಗೆ ನನ್ನ ವಚನಗಳನ್ನು ಕೇಳಿಸುವ ದೂತರು ಬಂದಾಗ, ಧರ್ಮನಿಷ್ಠನಾಗಿ ತನ್ನ ಸುಧಾರಣೆ ಮಾಡಿಕೊಂಡವನು – ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು

[35] ನಮ್ಮ ವಚನಗಳನ್ನು ಸುಳ್ಳೆಂದವರು ಮತ್ತು ಅದಕ್ಕೆದುರಾಗಿ ಅಹಂಕಾರ ತೋರಿದವರು – ಅವರೇ ನರಕವಾಸಿಗಳು. ಅವರು ಸದಾ ಕಾಲ ಅದರಲ್ಲೇ ಇರುವರು

[36] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಅಥವಾ ಅವನ ವಚನಗಳನ್ನು ಸುಳ್ಳೆಂದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? – ನಮ್ಮ (ಮರಣ) ದೂತರು ಅವರ ಬಳಿಗೆ ಬಂದು ಅವರನ್ನು ಸಾಯಿಸುವ ತನಕ, ವಿಧಿ ಗ್ರಂಥದಲ್ಲಿರುವ ಅವರ ಪಾಲು ಅವರಿಗೆ ಸಿಗುತ್ತಲೇ ಇರುವುದು. ಅವರು (ಮರಣ ದೂತರು) ‘‘ಅಲ್ಲಾಹನ ಹೊರತು ನೀವು ಪ್ರಾರ್ಥಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ?’’ ಎಂದು ಕೇಳುವರು. ಅವರು ‘‘ಅವರು ನಮ್ಮಿಂದ ಕಳೆದು ಹೋಗಿರುವರು’’ ಎನ್ನುವರು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು

[37] ಅವನು (ಅಲ್ಲಾಹನು) ಹೇಳಿದನು; ನೀವು, ಜಿನ್ನ್ ಮತ್ತು ಮಾನವರ ಪೈಕಿ ನಿಮಗಿಂತ ಹಿಂದೆ ಗತಿಸಿದ ಸಮುದಾಯಗಳ ಜೊತೆ ನರಕಾಗ್ನಿಯನ್ನು ಪ್ರವೇಶಿಸಿರಿ. (ಅಲ್ಲಿಗೆ) ಪ್ರವೇಶಿಸುವ ಪ್ರತಿಯೊಂದು ಸಮುದಾಯವೂ ತನ್ನ ಸಂಗಾತಿ (ಪೂರ್ವ) ಸಮುದಾಯವನ್ನು ಶಪಿಸುವುದು. ಕೊನೆಗೆ ಅವರೆಲ್ಲರೂ ಅದರೊಳಗೆ ಸೇರುವರು. (ಅಲ್ಲಿ) ಮುಂದಿನವರು ಹಿಂದಿನವರ ಕುರಿತು – ‘‘ನಮ್ಮೊಡೆಯಾ! ಇವರೇ ನಮ್ಮನ್ನು ದಾರಿಗೆಡಿಸಿದವರು. ಇವರಿಗೆ ನರಕಾಗ್ನಿಯ ಇಮ್ಮಡಿ ಶಿಕ್ಷೆ ನೀಡು’’ ಎನ್ನುವರು. ಅವನು (ಅಲ್ಲಾಹನು) ಹೇಳುವನು; ಇಮ್ಮಡಿ ಶಿಕ್ಷೆ ಎಲ್ಲರಿಗೂ ಇದೆ. ಆದರೆ ನಿಮಗೆ ತಿಳಿದಿಲ್ಲ.’’

[38] ಅದರಲ್ಲಿನ ಹಿಂದಿನವರು, ಮುಂದಿನವರೊಡನೆ ‘‘ನಮ್ಮೆದುರು ನಿಮಗೆ ಯಾವ ಮೇಲ್ಮೆಯೂ ಇಲ್ಲ. ಈಗ, ನಿಮ್ಮ ಗಳಿಕೆಯ ಫಲವಾಗಿ ಯಾತನೆಯನ್ನು ಸವಿಯಿರಿ’’ ಎನ್ನುವರು

[39] ಖಂಡಿತವಾಗಿಯೂ, ನಮ್ಮ ವಚನಗಳನ್ನು ಸುಳ್ಳೆಂದವರ ಮತ್ತು ಆ ಕುರಿತು ಅಹಂಕಾರ ತೋರಿದವರ ಪಾಲಿಗೆ ಆಕಾಶದ ಬಾಗಿಲುಗಳನ್ನು ತೆರೆಯಲಾಗದು ಮತ್ತು ಸೂಜಿಯ ರಂಧ್ರದೊಳಗೆ ಒಂಟೆಯು ಪ್ರವೇಶಿಸುವ ತನಕ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ನಾವು ಇದೇ ರೀತಿ ಅಪರಾಧಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ

[40] ಅವರ ಪಾಲಿಗೆ ನರಕದ ಭಾಗವೇ ಹಾಸಿಗೆ ಮತ್ತು ನರಕದ ಭಾಗವೇ ಹೊದಿಕೆಯಾಗಿರುವುದು. ನಾವು ಇದೇ ರೀತಿ ಅಕ್ರಮಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ

[41] ವಿಶ್ವಾಸಿಗಳು ಮತ್ತು ಸತ್ಕರ್ಮ ಮಾಡಿದವರು (ತಿಳಿದಿರಲಿ) ನಾವು ಯಾರ ಮೇಲೂ ಅವರ ಸಾಮರ್ಥ್ಯವನ್ನು ಮೀರಿದ ಹೊರೆಯನ್ನು ಹೊರಿಸುವುದಿಲ್ಲ – ಅವರೇ ಸ್ವರ್ಗದವರು. ಅವರು ಸದಾ ಕಾಲ ಅದರಲ್ಲಿರುವರು

[42] ಅವರ ಮನದೊಳಗಿನ ವೈಷಮ್ಯಗಳನ್ನೆಲ್ಲಾ ನಾವು ತೊಲಗಿಸಿ ಬಿಡುವೆವು. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅವರು ‘‘ಎಲ್ಲ ಪ್ರಶಂಸೆಗಳು, ನಮಗೆ ಇದರತ್ತ ಮಾರ್ಗದರ್ಶನ ಮಾಡಿದ ಅಲ್ಲಾಹನಿಗೆ ಮೀಸಲು. ಅಲ್ಲಾಹನು ಮಾರ್ಗದರ್ಶನ ಮಾಡಿರದಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ನಮ್ಮ ಒಡೆಯನ ದೂತರು ಸತ್ಯದೊಂದಿಗೆ ನಮ್ಮ ಬಳಿಗೆ ಬಂದಿದ್ದರು’’ ಎನ್ನುವರು. ಇದಕ್ಕುತ್ತರವಾಗಿ, ‘‘ನಿಮ್ಮ ಕರ್ಮಗಳ ಫಲವಾಗಿ, ನೀವು ಸ್ವರ್ಗದ ವಾರಸುದಾರರಾಗುವಿರಿ.’’ ಎಂದು ಅವರನ್ನು ಕರೆದು ಹೇಳಲಾಗುವುದು

[43] ಸ್ವರ್ಗದವರು, ನರಕದವರನ್ನು ಕರೆದು ‘‘ನಮ್ಮ ಒಡೆಯನು ನಮಗೆ ನೀಡಿದ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನಾವು ಕಂಡುಕೊಂಡೆವು. ನಿಮ್ಮ ಒಡೆಯನ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನೀವು ಕಂಡಿರಾ? ಎಂದು ಕೇಳುವರು. ಅವರು ‘‘ಹೌದು’’ ಎನ್ನುವರು. ಆಗ ಅವರ ನಡುವೆ ಕೂಗುವವನೊಬ್ಬನು ಕೂಗಿ ಹೇಳುವನು; ‘‘ಅಲ್ಲಾಹನ ಶಾಪವಿದೆ ಅಕ್ರಮಿಗಳ ಮೇಲೆ.’’

[44] ‘‘ಅವರು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು, ಅದರಲ್ಲಿ ವಕ್ರತೆಯನ್ನು ಹುಡುಕುತ್ತಿದ್ದರು ಮತ್ತು ಅವರು ಪರಲೋಕವನ್ನು ಧಿಕ್ಕರಿಸುವವರಾಗಿದ್ದರು.’’

[45] ಆ ಎರಡು ವರ್ಗಗಳ ನಡುವೆ ಒಂದು ತೆರೆ ಇರುವುದು ಮತ್ತು ‘ಅಅ್ರಾಫ್’ನಲ್ಲಿ (ತೆರೆಯ ಮೇಲು ತುದಿಯಲ್ಲಿ) ಕೆಲವರು ಇರುವರು. ಅವರು ಪ್ರತಿಯೊಬ್ಬರನ್ನೂ ಅವರ ಮುಖದಿಂದಲೇ ಗುರುತಿಸುವರು. ಅವರು ಸ್ವರ್ಗದವರನ್ನು ಕರೆದು ‘‘ನಿಮಗೆ ಶಾಂತಿ ಸಿಗಲಿ’’ ಎನ್ನುವರು. ಅವರು ಆವರೆಗೂ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಲಾರರು, ಆದರೆ ಅದನ್ನು ನಿರೀಕ್ಷಿಸುತ್ತಿರುವರು

[46] ಇನ್ನು ಅವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಅವರು ‘‘ನಮ್ಮೊಡೆಯಾ, ನಮ್ಮನ್ನು ಅಕ್ರಮಿಗಳ ಜೊತೆ ಸೇರಿಸಬೇಡ’’ ಎನ್ನುವರು

[47] ಮತ್ತು ‘ಅಅ್ರಾಫ್’ನವರು, ತಾವು ಮುಖದಿಂದಲೇ ಗುರುತಿಸಿದ ಕೆಲವರನ್ನು ಕರೆದು ಹೇಳುವರು; ನಿಮ್ಮ ಸಂಖ್ಯಾಬಲದಿಂದಾಗಲಿ, ನೀವು ಅಹಂಕಾರ ಪಡುತ್ತಿದ್ದ ವಸ್ತುಗಳಿಂದಾಗಲಿ ನಿಮಗೆ ಯಾವ ಲಾಭವೂ ಆಗಲಿಲ್ಲ

[48] ಇವರಿಗೆ ಅಲ್ಲಾಹನು ತನ್ನ ಯಾವ ಅನುಗ್ರಹವನ್ನೂ ತಲುಪಿಸಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ (ಈ ಸ್ವರ್ಗವಾಸಿಗಳ) ಕುರಿತೇ ಅಲ್ಲವೇ? (ಇಂದು ಅವರೊಡನೆ) ‘‘ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ’’ (ಎಂದು ಹೇಳಲಾಗಿದೆ)

[49] ಅತ್ತ ನರಕದವರು ಸ್ವರ್ಗದವರನ್ನು ಕೂಗಿ ‘‘ನಮ್ಮ ಕಡೆಗೆ ಒಂದಿಷ್ಟು ನೀರನ್ನು ಹರಿಸಿ ಬಿಡಿರಿ ಅಥವಾ ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ (ಒಂದಿಷ್ಟನ್ನು ನಮಗೆ ನೀಡಿರಿ)’’ ಎನ್ನುವರು. ಅವರು ಹೇಳುವರು; ‘‘ಖಂಡಿತವಾಗಿಯೂ ಅಲ್ಲಾಹನು ಅವುಗಳನ್ನು ಧಿಕ್ಕಾರಿಗಳ ಪಾಲಿಗೆ ನಿಷೇಧಿಸಿರುವನು.’’

[50] ‘‘ಅವರು (ಧಿಕ್ಕಾರಿಗಳು) ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ಮೋಜಿನ ವಿಷಯವಾಗಿ ಪರಿಗಣಿಸಿದ್ದರು ಮತ್ತು ಲೌಕಿಕ ಜೀವನವು ಅವರನ್ನು ವಂಚನೆಗೆ ಒಳಪಡಿಸಿತ್ತು. ಅವರು ಈ ದಿನದ ಭೇಟಿಯನ್ನು ಮರೆತಂತೆ ಇಂದು ನಾವು ಅವರನ್ನು ಮರೆತಿರುವೆವು. ಅವರು ನಮ್ಮ ವಚನಗಳನ್ನು ಧಿಕ್ಕರಿಸುತ್ತಿದ್ದರು.’’

[51] ನಾವು ಅವರ ಬಳಿಗೆ ಒಂದು ಗ್ರಂಥವನ್ನು ತಲುಪಿಸಿರುವೆವು. ಅದನ್ನು ನಾವು ಜ್ಞಾನದ ಆಧಾರದಲ್ಲಿ ಸಾಕಷ್ಟು ವಿಶಾಲಗೊಳಿಸಿರುವೆವು. ನಂಬುವವರ ಪಾಲಿಗೆ ಅದು ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ

[52] ಅವರು ಕಾಯುತ್ತಿರುವುದು, ಅದರ (ಲೋಕಾಂತ್ಯದ ಕುರಿತಾದ ಭವಿಷ್ಯ ವಾಣಿಗಳ) ಈಡೇರಿಕೆಯನ್ನಲ್ಲದೆ ಮತ್ತೇನನ್ನು? ನಿಜವಾಗಿ, ಅದರ ಈಡೇರಿಕೆಯ ದಿನ ಬಂದಾಗ, ಹಿಂದೆ ಅದನ್ನು ಮರೆತಿದ್ದವರು, ‘‘ನಮ್ಮ ಒಡೆಯನ ದೂತರು ಖಂಡಿತ ಸತ್ಯದೊಂದಿಗೇ ಬಂದಿದ್ದರು. (ಈಗ) ನಮ್ಮ ಪರವಾಗಿ ಶಿಫಾರಸು ಮಾಡಲು ಶಿಫಾರಸುದಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಹಿಂದೆ ಮಾಡುತ್ತಿದ್ದುದಕ್ಕಿಂತ ಭಿನ್ನವಾದ ಕರ್ಮಗಳನ್ನು ಮಾಡುವಂತಾಗಲು, ನಮ್ಮನ್ನು ಮರಳಿಸಲಾಗುವುದೇ?’’ ಎನ್ನುವರು. ಖಂಡಿತವಾಗಿಯೂ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ಒಳಪಡಿಸಿಕೊಂಡರು ಮತ್ತು ಅವರು ಕಟ್ಟಿಕೊಂಡಿದ್ದ ಸುಳ್ಳುಗಳೆಲ್ಲಾ ಅವರಿಂದ ಕಳೆದು ಹೋದವು

[53] ನಿಮ್ಮ ಒಡೆಯನಾದ ಅಲ್ಲಾಹನೇ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ಅವನು ವಿಶ್ವ ಸಿಂಹಾಸನದಲ್ಲಿ ಆಸೀನನಾದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆವರಿಸುತ್ತಾನೆ – ಅದು (ಹಗಲು) ಅದರ (ರಾತ್ರಿಯ) ಬೆನ್ನಿಗೇ ಧಾವಿಸಿ ಬರುತ್ತದೆ. ಇನ್ನು, ಸೂರ್ಯ ಮತ್ತು ಚಂದ್ರ ಹಾಗೂ ನಕ್ಷತ್ರಗಳು ಅವನ ಆದೇಶದಂತೆ ನಿಯಂತ್ರಿತವಾಗಿವೆ. ತಿಳಿದಿರಲಿ; ಸೃಷ್ಟಿಯೆಲ್ಲವೂ ಅವನಿಗೇ ಸೇರಿದೆ ಮತ್ತು ಅಧಿಕಾರವೂ ಅವನದೇ. ಸರ್ವಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು

[54] ಭಯ ಮತ್ತು ವಿನಯದೊಂದಿಗೆ ನಿಮ್ಮ ಒಡೆಯನನ್ನು ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯೂ ಅವನು ಮಿತಿಮೀರುವವರನ್ನು ಮೆಚ್ಚುವುದಿಲ್ಲ

[55] ಭೂಮಿಯಲ್ಲಿ ಸುಧಾರಣೆ ಆದ ಬಳಿಕ, ಅಶಾಂತಿಯನ್ನು ಹರಡಬೇಡಿ. ಭಯ ಮತ್ತು ನಿರೀಕ್ಷೆಯೊಂದಿಗೆ ಅವನನ್ನು (ಅಲ್ಲಾಹನನ್ನು) ಕೂಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹನ ಅನುಗ್ರಹವು ಸತ್ಕರ್ಮಿಗಳಿಗೆ ನಿಕಟವಾಗಿರುತ್ತದೆ

[56] ಅವನೇ (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ, ಶುಭವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ಬಗೆಯ ಫಲಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು (ಜೀವಂತ) ಹೊರ ತರಲಿದ್ದೇವೆ – ನೀವು ಪಾಠ ಕಲಿಯಬೇಕೆಂದು (ಇದನ್ನು ಹೇಳಲಾಗುತ್ತಿದೆ)

[57] ಶುದ್ಧ ನೆಲದಿಂದ, ಅದರ ಒಡೆಯನ ಆದೇಶದಂತೆ, ಉಪಯುಕ್ತ ಬೆಳೆಯು ಉತ್ಪನ್ನವಾಗುತ್ತದೆ. ಆದರೆ ಅಶುದ್ಧ ನೆಲವು ಕೇವಲ ಕಸಕಡ್ಡಿಗಳನ್ನು ಉತ್ಪಾದಿಸುತ್ತದೆ. ಈ ರೀತಿ ನಾವು ಕೃತಜ್ಞ ಜನರಿಗಾಗಿ ನಮ್ಮ ವಚನಗಳನ್ನು ವಿವಿಧ ರೂಪಗಳಲ್ಲಿ ವಿವರಿಸುತ್ತೇವೆ

[58] ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರಾವ ದೇವರೂ ಇಲ್ಲ. ನೀವು ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ

[59] ಅವರ ಜನಾಂಗದ ಕೆಲವು ನಾಯಕರು ‘‘ನಾವು ನಿಮ್ಮನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇವೆ.’’ ಎಂದರು

[60] ಅವರು (ನೂಹರು) ಹೇಳಿದರು; ನನ್ನ ಜನಾಂಗದವರೇ, ನಾನೇನೂ ದಾರಿಗೆಟ್ಟಿಲ್ಲ. ನಿಜವಾಗಿ ನಾನು ಸರ್ವಲೋಕಗಳ ಒಡೆಯನ ದೂತನಾಗಿದ್ದೇನೆ

[61] ನಾನು ನನ್ನ ಒಡೆಯನ ಸಂದೇಶಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತೈಷಿಯಾಗಿದ್ದೇನೆ ಮತ್ತು ಅಲ್ಲಾಹನ ಕಡೆಯಿಂದ, ನಿಮಗೆ ತಿಳಿದಿಲ್ಲದ ವಿಷಯಗಳು ನನಗೆ ತಿಳಿದಿವೆ

[62] ನಿಮ್ಮನ್ನು ಎಚ್ಚರಿಸಲಿಕ್ಕಾಗಿ, ನಿಮ್ಮನ್ನು ಧರ್ಮನಿಷ್ಠರಾಗಿಸಲಿಕ್ಕಾಗಿ ಮತ್ತು ನೀವು ಕರುಣೆಗೆ ಪಾತ್ರರಾಗುವುದಕ್ಕಾಗಿ, ನಿಮ್ಮ ಒಡೆಯನ ಉಪದೇಶವು ನಿಮ್ಮಾಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ನೀವೇನು ಅಚ್ಚರಿ ಪಡುತ್ತೀರಾ

[63] ಅವರು (ನೂಹರ ಜನಾಂಗದವರು) ಅವರನ್ನು ಸುಳ್ಳುಗಾರನೆಂದು ತಿರಸ್ಕರಿಸಿದರು ಮತ್ತು ನಾವು ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ಖಂಡಿತವಾಗಿಯೂ ಅವರು (ಸತ್ಯದ ಪಾಲಿಗೆ) ಒಂದು ಕುರುಡ ಜನಾಂಗವಾಗಿದ್ದರು

[64] ಅತ್ತ, ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್‌ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ದೇವರೂ ಇಲ್ಲ. ನೀವೇನು ಅಂಜುವುದಿಲ್ಲವೇ

[65] ಅವರ ಜನಾಂಗದಲ್ಲಿನ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ಖಂಡಿತವಾಗಿಯೂ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ

[66] ಅವರು (ಹೂದ್) ಹೇಳಿದರು; ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ನಿಜವಾಗಿ ನಾನು ಸರ್ವ ಲೋಕಗಳ ಒಡೆಯನ ದೂತನಾಗಿದ್ದೇನೆ

[67] ನಾನು ನಿಮಗೆ ನನ್ನ ಒಡೆಯನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಿಮ್ಮ ಪಾಲಿಗೆ ನಾನು ಒಬ್ಬ ನಂಬಲರ್ಹ ಹಿತೈಷಿಯಾಗಿದ್ದೇನೆ

[68] ನೀವೇನು, ನಿಮ್ಮನ್ನು ಎಚ್ಚರಿಸಲು, ನಿಮ್ಮ ಒಡೆಯನ ಉಪದೇಶವು ನಿಮ್ಮಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ಅಚ್ಚರಿಪಡುತ್ತೀರಾ? ಸ್ಮರಿಸಿರಿ; ನೂಹರ ಜನಾಂಗದ ಬಳಿಕ, ಅವನು (ಅಲ್ಲಾಹನು) ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಮತ್ತು ರಚನೆಯಲ್ಲಿ ನಿಮಗೆ ಶ್ರೇಷ್ಠತೆಯನ್ನು ನೀಡಿದನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ – ನೀವು ವಿಜಯಿಗಳಾಗಬಹುದು

[69] ಅವರು ಹೇಳಿದರು; ನೀವೇನು, ಅಲ್ಲಾಹನೊಬ್ಬನನ್ನು ಮಾತ್ರ ನಾವು ಪೂಜಿಸಬೇಕು ಮತ್ತು ನಮ್ಮ ಪೂರ್ವಜರು ಪೂಜಿಸುತ್ತಿದ್ದವುಗಳನ್ನೆಲ್ಲಾ ಬಿಟ್ಟು ಬಿಡಬೇಕೆಂದು ಹೇಳಲು ನಮ್ಮ ಬಳಿಗೆ ಬಂದಿರುವಿರಾ ? ನೀವು ಸತ್ಯವಂತರಾಗಿದ್ದರೆ, ಯಾವುದು ಬರಲಿದೆ ಎಂದು ನಮ್ಮೆಡನೆ ನೀವು ಹೇಳುತ್ತಿರುವಿರೋ ಅದನ್ನು ತಂದು ಬಿಡಿ

[70] ಅವರು (ಹೂದ್) ಹೇಳಿದರು; ಇದೋ, ನಿಮ್ಮ ಮೇಲೆ ಬಂದೆರಗಿತು ನಿಮ್ಮ ಒಡೆಯನ ಶಿಕ್ಷೆ ಮತ್ತು ಅವನ ಆಕ್ರೋಶ. ನೀವೇನು, ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡಿರುವ ಕೇವಲ ಕೆಲವು ಹೆಸರುಗಳ ಕುರಿತು ನನ್ನೊಡನೆ ಜಗಳಾಡುತ್ತಿರುವಿರಾ? ನಿಜವಾಗಿ ಅವುಗಳ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿಲ್ಲ. ಇದೀಗ ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ

[71] ಕೊನೆಗೆ ನಾವು ನಮ್ಮ ಅನುಗ್ರಹದಿಂದ, ಅವರನ್ನು (ಹೂದ್‌ರನ್ನು) ಮತ್ತು ಅವರ ಜೊತೆಗೆ ಇದ್ದವರನ್ನು ರಕ್ಷಿಸಿದೆವು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಮೂಲವನ್ನೇ ಕಡಿದು ಹಾಕಿದೆವು. ಅವರು ನಂಬುವವರಂತು ಆಗಿರಲಿಲ್ಲ

[72] ಹಾಗೆಯೇ, ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸಾಲಿಹ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮೊಡೆಯನ ಕಡೆಯಿಂದ ನಿಮ್ಮ ಬಳಿಗೆ ಒಂದು ಸ್ಪಷ್ಟ ಪುರಾವೆಯು ಬಂದಿದೆ. ಇದು ಅಲ್ಲಾಹನ ಹೆಣ್ಣೊಂಟೆ. ಇದು ನಿಮ್ಮ ಪಾಲಿಗೊಂದು ಸೂಚನೆಯಾಗಿದೆ. ಇದನ್ನು ಇದರ ಪಾಡಿಗೆ ಬಿಟ್ಟು ಬಿಡಿರಿ – ಇದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಕೆಟ್ಟ ಸಂಕಲ್ಪದಿಂದ ಇದನ್ನು ಮುಟ್ಟಬೇಡಿ (ಮುಟ್ಟಿದರೆ) ಭಾರೀ ಕಠಿಣ ಶಿಕ್ಷೆಯು ನಿಮ್ಮನ್ನು ಆವರಿಸಲಿದೆ

[73] ನೆನಪಿಸಿಕೊಳ್ಳಿರಿ; ಅವನು (ಅಲ್ಲಾಹನು)ಆದ್ ಜನಾಂಗದ ಬಳಿಕ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಹಾಗೂ ಅವನು ನಿಮಗೆ ಭೂಮಿಯಲ್ಲಿ ನೆಲೆಯನ್ನು ಒದಗಿಸಿದನು. ನೀವೀಗ ಅದರ ಬಯಲು ಪ್ರದೇಶಗಳಲ್ಲಿ ಅರಮನೆಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳನ್ನು ಕೊರೆದು ನಿವಾಸಗಳನ್ನು ರಚಿಸುತ್ತೀರಿ. ಅಲ್ಲಾಹನ ಕೊಡುಗೆ ಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ಅಲೆಯಬೇಡಿ

[74] ಅವರ ಜನಾಂಗದ ಅಹಂಕಾರಿ ನಾಯಕರು, ಸತ್ಯವನ್ನು ನಂಬಿದ್ದ ತಮ್ಮ ಜನಾಂಗದ ಮರ್ದಿತರೊಡನೆ, ‘‘ಸಾಲಿಹ್, ತನ್ನ ಒಡೆಯನ ಕಡೆಯಿಂದ ಕಳುಹಿಸಲ್ಪಟ್ಟವನೆಂದು ನಿಮಗೆ ಗೊತ್ತೇ?’’ ಎಂದು ಕೇಳಿದರು. ಅವರು; ‘‘ಖಂಡಿತವಾಗಿಯೂ, ಅವರನ್ನು ಯಾವುದರ ಜೊತೆ ಕಳುಹಿಸಲಾಗಿದೆಯೋ ಅದನ್ನು ನಾವು ನಂಬಿರುವೆವು.’’ ಎಂದು ಉತ್ತರಿಸಿದರು

[75] ಅಹಂಕಾರಿಗಳು; ‘‘ನೀವು ನಂಬಿರುವುದನ್ನು ನಾವು ಧಿಕ್ಕರಿಸುತ್ತೇವೆ.’’ ಎಂದರು

[76] ಮುಂದೆ, ಅವರು ಆ ಹೆಣ್ಣೊಂಟೆಯನ್ನು ಕೊಂದು ಬಿಟ್ಟರು ಹಾಗೂ ತಮ್ಮ ಒಡೆಯನ ಆದೇಶವನ್ನು ಮೀರಿ ನಡೆದರು ಮತ್ತು ಹೇಳಿದರು; ‘‘ಓ ಸಾಲಿಹ್, ನಿಜಕ್ಕೂ ನೀನೊಬ್ಬ ದೇವದೂತನಾಗಿದ್ದರೆ, ನೀನು ನಮಗೆ ವಾಗ್ದಾನ ಮಾಡುತ್ತಿದ್ದುದನ್ನು ನಮ್ಮ ಬಳಿಗೆ ತಂದು ಬಿಡು.’’

[77] ಕೊನೆಗೆ, ಭೀಕರ ಭೂಕಂಪವೊಂದು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು

[78] ಸಾಲಿಹ್‌ರು ಅವರನ್ನು ಕಡೆಗಣಿಸಿದರು ಮತ್ತು ‘‘ನನ್ನ ಜನಾಂಗದವರೇ, ನಾನು ನನ್ನ ಒಡೆಯನ ಸಂದೇಶವನ್ನು ನಿಮಗೆ ತಲುಪಿಸಿದೆನು ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆನು. ಆದರೆ ನೀವು ಹಿತೈಷಿಗಳನ್ನು ಪ್ರೀತಿಸುವುದಿಲ್ಲ.’’ ಎಂದರು

[79] ಇನ್ನು ಲೂತ್, ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು ಸರ್ವಲೋಕದಲ್ಲಿ ನಿಮಗಿಂತ ಮೊದಲು ಯಾರೂ ಮಾಡಿಲ್ಲದ ಅಶ್ಲೀಲ ಕೃತ್ಯವನ್ನು ಎಸಗುತ್ತೀರಾ?’’

[80] ‘‘ನೀವಂತು, ಕಾಮಾಪೇಕ್ಷೆಯೊಂದಿಗೆ, ಸ್ತ್ರೀಯರ ಬದಲು ಪುರುಷರ ಬಳಿಗೆ ಹೋಗುತ್ತೀರಿ. ಖಂಡಿತವಾಗಿಯೂ ನೀವು ಅತಿರೇಕವೆಸಗುವವರಾಗಿದ್ದೀರಿ.’’

[81] ಇದಕ್ಕೆ ಅವರ ಜನಾಂಗದ ಉತ್ತರ ‘‘ಇವರನ್ನು ನಿಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡಿರಿ. ಇವರು ಭಾರೀ ಪಾವಿತ್ರ ಬಯಸುವ ಜನರಾಗಿದ್ದಾರೆ’’ ಎನ್ನುವುದಷ್ಟೇ ಆಗಿತ್ತು

[82] ಕೊನೆಗೆ ನಾವು ಅವರನ್ನು (ಲೂತ್‌ರನ್ನು) ಮತ್ತು ಅವರ ಮನೆಯವರನ್ನು ರಕ್ಷಿಸಿದೆವು – ಅವರ ಪತ್ನಿಯ ಹೊರತು. ಏಕೆಂದರೆ ಆಕೆ ಹಿಂದೆ ಉಳಿಯುವವರ ಸಾಲಿಗೆ ಸೇರಿದ್ದಳು

[83] ಅವರ (ಲೂತ್‌ರ ಜನಾಂಗದ) ಮೇಲೆ ನಾವು ಒಂದು ಮಳೆಯನ್ನು ಸುರಿಸಿ ಬಿಟ್ಟೆವು. ನೋಡಿರಿ, ಅಪರಾಧಿಗಳ ಗತಿ ಏನಾಯಿತೆಂದು

[84] ಹಾಗೆಯೇ ನಾವು ಮದ್‌ಯನ್ ಜನಾಂಗದವರೆಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ‘‘ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ, ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಸ್ಪಷ್ಟ ಪುರಾವೆಯು ಬಂದಿದೆ. ನೀವಿನ್ನು, ಪರಿಪೂರ್ಣವಾಗಿ ಅಳೆಯಿರಿ ಮತ್ತು ತೂಗಿರಿ. ಜನರಿಗೆ ಅವರ ಸರಕುಗಳನ್ನು ಕಡಿತಗೊಳಿಸಿ ಕೊಡಬೇಡಿ. ಹಾಗೆಯೇ, ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಅದರಲ್ಲಿ ಅಶಾಂತಿಯನ್ನು ಹಬ್ಬಬೇಡಿ. ನೀವು ನಂಬುವವರಾಗಿದ್ದರೆ, ಈ ಧೋರಣೆಯೇ ನಿಮ್ಮ ಪಾಲಿಗೆ ಉತ್ತಮ.’’

[85] ‘‘ನೀವು ಎಲ್ಲ ದಾರಿಗಳಲ್ಲಿ ಕುಳಿತು, ಜನರನ್ನು ಬೆದರಿಸುವವರೂ ಅಲ್ಲಾಹನಲ್ಲಿ ನಂಬಿಕೆ ಇಟ್ಟವರನ್ನು ಅವನ ದಾರಿಯಿಂದ ತಡೆಯುವವರೂ ಆಗಬೇಡಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕಬೇಡಿ. ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾಗ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದನು. ಹಾಗೆಯೇ, ಅಶಾಂತಿ ಹಬ್ಬುವವರ ಗತಿ ಏನಾಯಿತೆಂಬುದನ್ನು ನೋಡಿರಿ.’’

[86] ಇದೀಗ ನಿಮ್ಮಲ್ಲಿನ ಒಂದು ಗುಂಪು, ನನ್ನನ್ನು ಯಾವುದರ ಜೊತೆಗೆ ಕಳಿಸಲಾಗಿದೆಯೋ ಅದನ್ನು ನಂಬುವವರಾಗಿದ್ದಾರೆ, ಹಾಗೂ ಇನ್ನೊಂದು ಗುಂಪು ಅದನ್ನು ನಂಬುತ್ತಿಲ್ಲ – ಅಲ್ಲಾಹನು ನಮ್ಮ ನಡುವೆ ತೀರ್ಪು ನೀಡುವ ತನಕ ಸಹನೆ ವಹಿಸಿರಿ – ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ

[87] ಅವರ ಜನಾಂಗದ ಅಹಂಕಾರಿ ನಾಯಕರು ಹೇಳಿದರು; ಶುಐಬರೇ, ನಿಮ್ಮನ್ನು ಹಾಗೂ ನಿಮ್ಮ ಜೊತೆ (ಸತ್ಯಧರ್ಮದಲ್ಲಿ) ನಂಬಿಕೆ ಇಟ್ಟವರನ್ನು ನಾವು ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡುವೆವು. ಅಥವಾ (ಅದು ಬೇಡವಾದರೆ) ನೀವು ನಮ್ಮ ಪಂಥಕ್ಕೆ ಮರಳಿಬರಬೇಕು. ಅವರು (ಶುಐಬರು) ಕೇಳಿದರು; ನಮಗೆ ಇಷ್ಟವಿಲ್ಲದಿದ್ದರೂ (ಮರಳಬೇಕೇ)

[88] ಅಲ್ಲಾಹನು ನಿಮ್ಮ ಪಂಥದಿಂದ ನಮ್ಮನ್ನು ರಕ್ಷಿಸಿದ ಬಳಿಕ ನಾವು ಮತ್ತೆ ಅದರೆಡೆಗೆ ಮರಳಿದರೆ ನಾವು ಅಲ್ಲಾಹನ ಮೇಲೆ ಒಂದು ಭಾರೀ ಸುಳ್ಳಾರೋಪವನ್ನು ಹೊರಿಸಿದಂತಾದೀತು. ಹೀಗಿರುತ್ತಾ ನಮ್ಮೊಡೆಯನಾದ ಅಲ್ಲಾಹನೇ ಇಚ್ಛಿಸುವ ತನಕ, ಅದರೆಡೆಗೆ ಮರಳಲು ನಮಗೆ ಸಾಧ್ಯವಿಲ್ಲ. ನಮ್ಮೊಡನೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನಾವು ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನೀಗ ನಮ್ಮ ಹಾಗೂ ನಮ್ಮ ಜನಾಂಗದ ನಡುವೆ ಸತ್ಯದೊಂದಿಗೆ ತೀರ್ಮಾನ ಮಾಡಿಬಿಡು. ನೀನು ಅತ್ಯುತ್ತಮ ತೀರ್ಮಾನ ಮಾಡುವವನಾಗಿರುವೆ

[89] ಅವರ ಜನಾಂಗದ ಧಿಕ್ಕಾರಿ ನಾಯಕರು (ಜನರೊಡನೆ) ಹೇಳಿದರು; ನೀವು ಶುಐಬರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ನಷ್ಟಕ್ಕೊಳಗಾದವರ ಸಾಲಿಗೆ ಸೇರುವಿರಿ

[90] ಕೊನೆಗೆ ಒಂದು ಭಾರೀ ಭೂಕಂಪವು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು

[91] ಶುಐಬರನ್ನು ಧಿಕ್ಕರಿಸಿದವರು, ಹಿಂದೆಂದೂ ಬದುಕಿಯೇ ಇರಲಿಲ್ಲವೋ ಎಂಬಂತೆ ಅಳಿದು ಹೋದರು. ಹೀಗೆ, ಶುಐಬರನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸಿದವರಾದರು

[92] ಅವರು (ಶುಐಬರು) ಆ ಜನರಿಂದ ಮುಖ ತಿರುಗಿಸಿಕೊಂಡು ಹೇಳಿದರು; ನನ್ನ ಜನಾಂಗದವರೇ, ನನ್ನ ಒಡೆಯನ ಸಂದೇಶವನ್ನು ನಾನು ನಿಮಗೆ ತಲುಪಿಸಿದೆ ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆ. ಇದೀಗ ಒಂದು ಧಿಕ್ಕಾರಿ ಜನಾಂಗದ ಕುರಿತು ನಾನು ಹೇಗೆ ತಾನೇ ದುಃಖಿಸಲಿ

[93] ನಾವು ಯಾವೆಲ್ಲ ನಾಡುಗಳಿಗೆ ನಮ್ಮ ದೂತರನ್ನು ಕಳುಹಿಸಿರುವೆವೋ ಆ ಎಲ್ಲ ನಾಡುಗಳ ಜನರು ವಿನಯಶೀಲರಾಗಿರಬೇಕೆಂದು ನಾವು ಅವರನ್ನು ಸಂಕಷ್ಟ ಹಾಗೂ ಕಾಠಿಣ್ಯಕ್ಕೆ ಒಳಪಡಿಸಿರುವೆವು

[94] ಆ ಬಳಿಕ ನಾವು (ಅವರ) ದುಸ್ಥಿತಿಯನ್ನು ಸುಸ್ಥಿತಿಯಾಗಿ ಪರಿವರ್ತಿಸಿದೆವು. ಎಷ್ಟೆಂದರೆ, ಅವರು ಸಮೃದ್ಧರಾಗಿ, ಸಂಕಷ್ಟ ಹಾಗೂ ಸಂತೋಷದ ಪರಿಸ್ಥಿತಿಗಳು ನಮ್ಮ ಪೂರ್ವಜರಿಗೆ ಎದುರಾಗುತ್ತಿದ್ದವು ಎನ್ನತೊಡಗಿದರು. ಕೊನೆಗೆ ನಾವು ಹಠಾತ್ತನೆ ಅವರನ್ನು ಹಿಡಿದುಬಿಟ್ಟೆವು – ಅವರಿಗೆ ಅದರ ಅರಿವೇ ಇರಲಿಲ್ಲ

[95] ಒಂದು ವೇಳೆ ನಾಡುಗಳ ಜನರು (ಸತ್ಯದಲ್ಲಿ) ನಂಬಿಕೆ ಇಟ್ಟು, ಸತ್ಯ ನಿಷ್ಠರಾಗಿದ್ದರೆ ನಾವು ಅವರ ಪಾಲಿಗೆ ಆಕಾಶದಿಂದಲೂ ಭೂಮಿಯಿಂದಲೂ ಸಮೃದ್ಧಿಯ ಬಾಗಿಲುಗಳನ್ನು ತೆರೆದುಬಿಡುತ್ತಿದ್ದೆವು. ಆದರೆ ಅವರು (ಸತ್ಯವನ್ನು) ಸುಳ್ಳೆಂದರು. ಕೊನೆಗೆ ನಾವು ಅವರ ಕೃತ್ಯಗಳ ಕಾರಣ ಅವರನ್ನು ಹಿಡಿದುಕೊಂಡೆವು

[96] ನಾಡುಗಳ ಜನರೇನು, ಇರುಳಲ್ಲಿ ಅವರು ಮಲಗಿರುವಾಗ ನಮ್ಮ ಶಿಕ್ಷೆಯು ಹಠಾತ್ತನೆ ಅವರ ಮೇಲೆ ಬಂದು ಎರಗಲಾರದೆಂದು ನೆಮ್ಮದಿಯಿಂದಿರುವರೇ

[97] ಅಥವಾ ನಾಡುಗಳ ಜನರೇನು, ಹಗಲಲ್ಲಿ ಅವರು ಆಟೋಟಗಳಲ್ಲಿ ನಿರತರಾಗಿರುವಾಗ ನಮ್ಮ ಶಿಕ್ಷೆಯು ಅವರ ಮೇಲೆ ಬಂದೆರಗಲಾರದೆಂದು ನೆಮ್ಮದಿಯಿಂದಿರುವರೇ

[98] ಅವರೇನು, ಅಲ್ಲಾಹನ ಯೋಜನೆಯ ಕುರಿತು ನಿಶ್ಚಿಂತರೇ? ನಿಜವಾಗಿ, ನಷ್ಟಕ್ಕೊಳಗಾಗುವವರ ಹೊರತು ಬೇರಾರೂ ಅಲ್ಲಾಹನ ಯೋಜನೆಗಳ ಕುರಿತು ನಿಶ್ಚಿಂತರಾಗಿರುವುದಿಲ್ಲ

[99] (ತಮಗಿಂತ ಹಿಂದಿನ) ಭೂವಾಸಿಗಳ ಬಳಿಕ ಭೂಮಿಯ ಉತ್ತರಾಧಿಕಾರಿಗಳಾದವರಿಗೆ ಸೂಚನೆ ಸಿಗಲಿಲ್ಲವೇ, ನಾವು ಬಯಸಿದರೆ ಅವರ ಪಾಪಗಳ ಕಾರಣ ಅವರನ್ನು ಸಂಕಷ್ಟಕ್ಕೆ ಗುರಿಪಡಿಸಬಲ್ಲೆವೆಂದು? ನಿಜವಾಗಿ ನಾವು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವೆವು. ಅವರು ಏನನ್ನೂ ಕೇಳುತ್ತಿಲ್ಲ

[100] ಇವು ಆ ನಾಡುಗಳು – ನಾವು ಅವುಗಳ ವೃತ್ತಾಂತವನ್ನು ನಿಮಗೆ ವಿವರಿಸುತ್ತಿದ್ದೇವೆ. ಅವರ ಬಳಿಗೆ ಅವರ ದೇವದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಇಷ್ಟಾಗಿಯೂ, ಯಾವುದನ್ನು ಅವರು ಈ ಹಿಂದೆಯೂ ಧಿಕ್ಕರಿಸಿದ್ದರೋ ಅದನ್ನು ಅವರು ನಂಬಲಿಲ್ಲ. ಈ ರೀತಿ ಅಲ್ಲಾಹನು ಧಿಕ್ಕಾರಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತಾನೆ

[101] ಅವರ ಪೈಕಿ ಹೆಚ್ಚಿನವರಲ್ಲಿ ನಾವು ವಚನ ಪಾಲನೆಯನ್ನು ಕಾಣಲಿಲ್ಲ. ನಿಜವಾಗಿ ಅವರಲ್ಲಿ ಹೆಚ್ಚಿನವರನ್ನು ನಾವು ದುಷ್ಕರ್ಮಿಗಳಾಗಿ ಕಂಡೆವು

[102] ಅವರ ಬಳಿಕ ಮೂಸಾರನ್ನು ನಾವು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‌ಔನ್ ಮತ್ತು ಆತನ (ಜನಾಂಗದ) ನಾಯಕರ ಬಳಿಗೆ ಕಳಿಸಿದೆವು. ಅವರೂ ಅವುಗಳ ವಿಷಯದಲ್ಲಿ ಅಕ್ರಮ ಧೋರಣೆಯನ್ನು ತೋರಿದರು. ನೋಡಿರಿ, ಅಶಾಂತಿ ಹರಡುವವರ ಗತಿ ಏನಾಯಿತೆಂದು

[103] ಮೂಸಾ ಹೇಳಿದರು; ಓ ಫಿರ್‌ಔನ್, ನಾನು ಖಚಿತವಾಗಿಯೂ ಸರ್ವಲೋಕಗಳ ಒಡೆಯನ ದೂತನು

[104] ಅಲ್ಲಾಹನ ಹೆಸರಲ್ಲಿ, ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂಬುದೇ ನನ್ನ ಕರ್ತವ್ಯವಾಗಿದೆ. ನಾನು ನಿಮ್ಮೊಡನೆಯನ ಕಡೆಯಿಂದ ನಿಮ್ಮ ಬಳಿಗೆ ಸ್ಪಷ್ಟ ಪುರಾವೆಗಳನ್ನು ತಂದಿದ್ದೇನೆ. ಇಸ್ರಾಈಲರ ಸಂತತಿಯನ್ನು ನನ್ನ ಜೊತೆ ಕಳಿಸಿಬಿಡು

[105] ಅವನು (ಫಿರ್‌ಔನ್) ಹೇಳಿದನು; ನೀನು ದೃಷ್ಟಾಂತದೊಂದಿಗೆ ಬಂದಿದ್ದರೆ (ಹಾಗೂ) ನೀನು ಸತ್ಯವಂತನಾಗಿದ್ದರೆ ಅದನ್ನು ಮುಂದಿಡು

[106] ಅವರು (ಮೂಸಾ) ತಮ್ಮ ಊರುಗೋಲನ್ನು ಎಸೆದರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಾಗಿ ಬಿಟ್ಟಿತು

[107] ತರುವಾಯ ಅವರು ತಮ್ಮ ಕೈಯನ್ನು ಹೊರತೆಗೆದರು. ಹಠಾತ್ತನೆ ಅದು ನೋಡುವವರಿಗೆ ತುಂಬಾ ಉಜ್ವಲವಾಗಿ ಕಂಡಿತು

[108] ಫಿರ್‌ಔನನ ಜನಾಂಗದ ಸರದಾರರು ಹೇಳಿದರು; ಇವನು ಖಂಡಿತ ಒಬ್ಬ ತಜ್ಞ ಜಾದೂಗಾರನಾಗಿದ್ದಾನೆ

[109] ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ಈಗ ನೀವೇನು ಆದೇಶಿಸುತ್ತೀರಿ

[110] ಅವರು (ಫಿರ್‌ಔನನೊಡನೆ) ಹೇಳಿದರು; ಇವನನ್ನು ಹಾಗೂ ಇವನ ಸಹೋದರನನ್ನು ತಡೆದಿಟ್ಟುಕೊ ಮತ್ತು ವಿವಿಧ ನಗರಗಳಿಗೆ ದೂತರನ್ನು ಕಳುಹಿಸು

[111] ಅವರು ಎಲ್ಲ ತಜ್ಞ ಜಾದೂಗಾರರನ್ನು ನಿನ್ನ ಬಳಿಗೆ ತರಲಿ

[112] ಹೀಗೆ, ಜಾದೂಗಾರರು ಫಿರ್‌ಔನನ ಬಳಿಗೆ ಬಂದರು. ನಾವು ವಿಜಯಿಗಳಾದರೆ ಖಂಡಿತವಾಗಿಯೂ ನಮಗೆ ಪ್ರತಿಫಲ ಸಿಗಲಿದೆ ಎಂದರು

[113] ಅವನು (ಫಿರ್‌ಔನ್) ಹೇಳಿದನು; ಹೌದು, ಜೊತೆಗೆ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ

[114] ಅವರು (ಜಾದೂಗಾರರು), ಓ ಮೂಸಾ, ನೀನು ಎಸೆಯುವೆಯಾ ಅಥವಾ ನಾವು ಎಸೆಯಬೇಕೇ?ಎಂದು ಕೇಳಿದರು

[115] ಅವರು (ಮೂಸಾ), ನೀವೇ ಎಸೆಯಿರಿ ಎಂದರು. ಹೀಗೆ ಅವರು (ಜಾದೂಗಾರರು ದಾಳಗಳನ್ನು) ಎಸೆದರು, ಜನರ ಕಣ್ಣುಗಳನ್ನು ಮಂಕುಗೊಳಿಸಿದರು ಹಾಗೂ ಅವರನ್ನು ಹೆದರಿಸಿಬಿಟ್ಟರು ಮತ್ತು ಭಾರೀ ಭವ್ಯ ಜಾದುವನ್ನು ಮುಂದಿಟ್ಟರು

[116] ಆಗ ನಾವು ಮೂಸಾರ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಎಸೆಯಿರಿ ನಿಮ್ಮ ಊರುಗೋಲನ್ನು, ಅವರ ಎಲ್ಲ ಕೃತಕ ರಚನೆಗಳನ್ನು ಅದು ನುಂಗಿಬಿಡುವುದು – ಎಂದು

[117] ಕೊನೆಗೆ, ಸತ್ಯವು ಸಾಬೀತಾಗಿ ಬಿಟ್ಟಿತು ಮತ್ತು ಅವರು (ಜಾದೂಗಾರರು) ಮಾಡಿದ್ದೆಲ್ಲವೂ ಮಿಥ್ಯವಾಯಿತು

[118] ಹೀಗೆ, ಅವರು (ಫಿರ್‌ಔನನ ಕಡೆಯವರು) ಅಲ್ಲೇ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು

[119] ಅತ್ತ , ಜಾದೂಗಾರರು ಸಾಷ್ಟಾಂಗವೆರಗಿದರು

[120] ಅವರು ಹೇಳಿದರು; ನಾವು ಸರ್ವಲೋಕಗಳ ಒಡೆಯನನ್ನು ನಂಬಿದೆವು

[121] ಮೂಸಾ ಮತ್ತು ಹಾರೂನರ ಒಡೆಯನನ್ನು

[122] ಫಿರ್‌ಔನ್ ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಿ. ಖಂಡಿತವಾಗಿಯೂ ಇದು, ಈ ನಗರದಲ್ಲಿ, ಇಲ್ಲಿಯವರನ್ನು ಇಲ್ಲಿಂದ ಹೊರದಬ್ಬಲು ನೀವು ನಡೆಸಿರುವ ಒಂದು ಸಂಚಾಗಿದೆ. (ಇದರ ಪರಿಣಾಮವನ್ನು) ಬೇಗನೇ ನೀವು ಅರಿಯುವಿರಿ

[123] ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಭಾಗಗಳಲ್ಲಿ ಕಡಿದು ಬಿಡುವೆನು ಆ ಬಳಿಕ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು

[124] ಅವರು (ಜಾದೂಗಾರರು) ಹೇಳಿದರು; ನಾವಂತು ನಮ್ಮ ಒಡೆಯನ ಕಡೆಗೆ ಮರಳುವೆವು

[125] ನಮ್ಮ ಒಡೆಯನ ದೃಷ್ಟಾಂತಗಳು ನಮ್ಮ ಮುಂದೆ ಬಂದಾಗ ಅವುಗಳನ್ನು ನಾವು ನಂಬಿದೆವು ಎಂಬುದಷ್ಟೇ ನಿನಗೆ ನಮ್ಮ ಮೇಲಿರುವ ಕೋಪಕ್ಕೆ ಕಾರಣ. (ಮತ್ತು ಅವರು ಹೀಗೆ ಪ್ರಾರ್ಥಿಸಿದರು) ನಮ್ಮೊಡೆಯಾ, ನಮಗೆ ಸ್ಥಿರತೆಯನ್ನು ದಯಪಾಲಿಸು ಮತ್ತು ನಾವು ಮುಸ್ಲಿಮರಾಗಿರುವ ಸ್ಥಿತಿಯಲ್ಲಿ ನಮಗೆ ಮರಣವನ್ನು ನೀಡು

[126] ಫಿರ್‌ಔನನ ಜನಾಂಗದ ನಾಯಕರು ಹೇಳಿದರು; ನೀನೇನು, ಭೂಮಿಯಲ್ಲಿ ಗೊಂದಲ ಹರಡುತ್ತಿರಲಿಕ್ಕಾಗಿ ಹಾಗೂ ನಿನ್ನನ್ನು ಮತ್ತು ನಿನ್ನ ದೇವರುಗಳನ್ನು ತೊರೆದಿರಲಿಕ್ಕಾಗಿ ಮೂಸಾ ಮತ್ತು ಆತನ ಜನಾಂಗವನ್ನು ಹಾಗೆಯೇ ಬಿಟ್ಟು ಬಿಡುವೆಯಾ? ಅವನು ಹೇಳಿದನು; ನಾನು ಅವರ ಪುತ್ರರನ್ನು ಕೊಂದುಬಿಡುವೆನು ಮತ್ತು ಅವರ ಪುತ್ರಿಯರನ್ನು ಜೀವಂತವಿಡುವೆನು. ಈ ರೀತಿ ನಾವು ಅವರ ಮೇಲೆ ನಿಯಂತ್ರಣ ಸಾಧಿಸುವೆವು

[127] ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನೀವು ಅಲ್ಲಾಹನ ನೆರವನ್ನು ಬೇಡಿರಿ ಮತ್ತು ಸಹನಶೀಲರಾಗಿರಿ. ಭೂಮಿಯು ಅಲ್ಲಾಹನಿಗೇ ಸೇರಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು ಅದರ ಉತ್ತರಾಧಿಕಾರಿಗಳಾಗಿ ಮಾಡುತ್ತಾನೆ. ಅಂತಿಮ ವಿಜಯವು ಸತ್ಯನಿಷ್ಠರಿಗೇ ಸೇರಿದೆ

[128] ಅವರು (ಮೂಸಾರ ಜನಾಂಗದವರು) ಹೇಳಿದರು; ನೀವು ನಮ್ಮ ಬಳಿಗೆ ಬರುವ ಮುನ್ನವೂ ನೀವು ನಮ್ಮ ಬಳಿಗೆ ಬಂದ ಬಳಿಕವೂ ನಮ್ಮನ್ನು ಸತಾಯಿಸಲಾಯಿತು. ಅವರು (ಮೂಸಾ) ಹೇಳಿದರು; ಬಹುಬೇಗನೇ, ನಿಮ್ಮೊಡೆಯನು ನಿಮ್ಮ ಶತ್ರುವನ್ನು ನಾಶಪಡಿಸಿ ಭೂಮಿಯಲ್ಲಿ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡುವನು ಮತ್ತು ನೀವು ಏನೆಲ್ಲ ಮಾಡುವಿರಿ ಎಂಬುದನ್ನು ನೋಡುವನು

[129] ನಾವು ಫಿರ್‌ಔನನ ಜನಾಂಗವನ್ನು ಸತತ ಬರಗಾಲ ಹಾಗೂ ಬೆಳೆಗಳ ನಷ್ಟದಲ್ಲಿ ಸಿಲುಕಿಸಿದೆವು – ಅವರು ಪಾಠಕಲಿಯಬೇಕೆಂದು

[130] ಅವರ ಬಳಿಗೆ ಒಳಿತೇನಾದರೂ ಬಂದಾಗ ಅವರು, ನಾವು ಇದಕ್ಕೇ ಅರ್ಹರು, ಎನ್ನುತ್ತಿದ್ದರು. ಇನ್ನು ಅವರಿಗೆ ಅಹಿತವೇನಾದರೂ ಸಂಭವಿಸಿದಾಗ, ಅದಕ್ಕಾಗಿ ಅವರು ಮೂಸಾ ಮತ್ತು ಅವರ ಜೊತೆಗಾರರ ಭಾಗ್ಯವನ್ನು ಮೂದಲಿಸುತ್ತಿದ್ದರು. ತಿಳಿದಿರಲಿ! ಖಂಡಿತವಾಗಿಯೂ ಅವರ ಭಾಗ್ಯವೆಲ್ಲವೂ ಅಲ್ಲಾಹನ ಬಳಿಯಲ್ಲೇ ಇದೆ. ಆದರೆ ಹೆಚ್ಚಿನವರು ಅರಿತಿರುವುದಿಲ್ಲ

[131] ಅವರು ಹೇಳುತ್ತಿದ್ದರು; ನೀನು ನಮ್ಮನ್ನು ಮಾಟಕ್ಕೆ ಒಳಪಡಿಸಲು ಅದೆಂತಹ ದೃಷ್ಟಾಂತವನ್ನು ತಂದರೂ ನಾವಂತು ನಿನ್ನನ್ನು ನಂಬುವವರಲ್ಲ

[132] ಕೊನೆಗೆ ನಾವು ಅವರ ಮೇಲೆ, ಚಂಡಮಾರುತವನ್ನು ಎರಗಿಸಿದೆವು. ಮಿಡಿತೆಗಳನ್ನು, ಕ್ರಿಮಿಕೀಟಗಳನ್ನು, ಕಪ್ಪೆಗಳನ್ನು ಮತ್ತು ರಕ್ತವನ್ನು ಇಳಿಸಿದೆವು. ಇವೆಲ್ಲಾ ಪ್ರತ್ಯ ಪ್ರತ್ಯೇಕ ಸೂಚನೆಗಳಾಗಿದ್ದವು. ಇಷ್ಟಾಗಿಯೂ ಅವರು ಅಹಂಕಾರ ತೋರಿದರು. ಅವರು ನಿಜಕ್ಕೂ ಒಂದು ಅಪರಾಧಿ ಜನಾಂಗವಾಗಿದ್ದರು

[133] ಅವರ ಮೇಲೆ ವಿಪತ್ತು ಎರಗಿದಾಗಲೆಲ್ಲಾ ಅವರು, ಓ ಮೂಸಾ, ನಿನ್ನ ಬಳಿ ಇರುವ ಅವನ (ಅಲ್ಲಾಹನ) ವಾಗ್ದಾನದ ಆಧಾರದಲ್ಲಿ ನೀನು ನಮ್ಮ ಪರವಾಗಿ ನಿನ್ನ ಒಡೆಯನನ್ನು ಪ್ರಾರ್ಥಿಸು. ಒಂದು ವೇಳೆ ನೀನು ನಮ್ಮ ಮೇಲಿಂದ ಈ ವಿಪತ್ತನ್ನು ತೊಲಗಿಸಿದರೆ ನಾವು ಖಂಡಿತ ನಿನ್ನನ್ನು ನಂಬುವೆವು ಮತ್ತು ಇಸ್ರಾಈಲರ ಸಂತತಿಯನ್ನು ನಿನ್ನ ಜೊತೆ ಕಳುಹಿಸಿಕೊಡುವೆವು, ಎನ್ನುತ್ತಿದ್ದರು

[134] ಮತ್ತೆ ನಾವು, ಅವರು ಅನುಭವಿಸಬೇಕಾಗಿದ್ದ ಒಂದು ಅವಧಿಯವರೆಗಿನ ವಿಪತ್ತನ್ನು ಅವರಿಂದ ದೂರಗೊಳಿಸಿದಾಗ ಅವರು ತಮ್ಮ ವಚನವನ್ನು ಮುರಿದುಬಿಡುತ್ತಿದ್ದರು

[135] ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು-ಏಕೆಂದರೆ ಅವರು ನಮ್ಮ ವಚನಗಳನ್ನು ಸುಳ್ಳೆಂದು ಧಿಕ್ಕರಿಸಿದ್ದರು ಮತ್ತು ಆ ಕುರಿತು ನಿರ್ಲಕ್ಷ್ಯ ತೋರಿದ್ದರು

[136] ಮತ್ತು ನಾವು ಮರ್ದಿತರಾಗಿದ್ದವರನ್ನು, ನಾವೇ ಸಮೃದ್ಧಗೊಳಿಸಿದ್ದ, ಭೂಮಿಯ ಪೂರ್ವಭಾಗಗಳ ಹಾಗೂ ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಹೀಗೆ, ಇಸ್ರಾಈಲರ ಸಂತತಿಗಳು ತೋರಿದ ಸಹನೆಯ ಕಾರಣ, ನಿಮ್ಮ ಒಡೆಯನು ಅವರಿಗೆ ಮಾಡಿದ್ದ ಒಳಿತಿನ ವಾಗ್ದಾನವು ಪೂರ್ತಿಗೊಂಡಿತು ಮತ್ತು ಫಿರ್‌ಔನ್ ಹಾಗೂ ಅವನ ಜನಾಂಗವು ಕಟ್ಟಿದ್ದ ಹಾಗೂ ಎತ್ತರಕ್ಕೆ ಬೆಳೆಸಿದ್ದ ಎಲ್ಲವನ್ನೂ ನಾವು ನೆಲೆಸಮಗೊಳಿಸಿಬಿಟ್ಟೆವು

[137] ಅತ್ತ , ಇಸ್ರಾಈಲರ ಸಂತತಿಗಳನ್ನು ನಾವು ಕಡಲಾಚೆಯ ದಡಕ್ಕೆ ತಲುಪಿಸಿದೆವು. ಮುಂದೆ ಅವರು, ತಮ್ಮಲ್ಲಿನ ವಿಗ್ರಹಗಳ ಆರಾಧನೆಯಲ್ಲಿ ತಲ್ಲೀನರಾಗಿದ್ದ ಒಂದು ಜನಾಂಗವನ್ನು ಎದುರಿಸಿದರು. ಆಗ ಅವರು (ಇಸ್ರಾಈಲರ ಸಂತತಿಗಳು), ಓ ಮೂಸಾ, ಅವರ ಬಳಿ ಇರುವಂತಹದೇ ದೇವರುಗಳನ್ನು ನಮಗೆ ತಯಾರಿಸಿಕೊಡು ಎಂದರು. ಅವರು (ಮೂಸಾ) ಹೇಳಿದರು; ನೀವು ಅಜ್ಞಾನಿಗಳಾಗಿ ವರ್ತಿಸುತ್ತಿರುವಿರಿ

[138] ಅವರು ಯಾವುದರಲ್ಲಿ ನಿರತರಾಗಿರುವರೋ ಅದೆಲ್ಲವೂ ಖಂಡಿತ ನಾಶವಾಗಲಿದೆ ಮತ್ತು ಅವರು ಮಾಡುತ್ತಿರುವುದೆಲ್ಲವೂ ಮಿಥ್ಯವಾಗಿದೆ

[139] ಅವರು (ಮೂಸಾ) ಹೇಳಿದರು; ಅವನು (ಅಲ್ಲಾಹನು) ಸರ್ವಲೋಕಗಳ ಮೇಲೆ ನಿಮಗೆ ಶ್ರೇಷ್ಠತೆಯನ್ನು ದಯಪಾಲಿಸಿರುವಾಗ, ನಾನೇನು ನಿಮಗಾಗಿ ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ

[140] ಮತ್ತು (ಸ್ಮರಿಸಿರಿ;) ನಾವು ನಿಮ್ಮನ್ನು ಫಿರ್‌ಔನನ ಜನಾಂಗದವರಿಂದ ರಕ್ಷಿಸಿದ ವೇಳೆ, ಅವರು ನಿಮ್ಮನ್ನು ಭಾರೀ ಕಠಿಣ ಹಿಂಸೆಗೆ ಗುರಿಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕೊಂದುಬಿಡುತ್ತಿದ್ದರು. ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. ಆ ಸ್ಥಿತಿಯಲ್ಲಿ ನಿಮ್ಮ ಪಾಲಿಗೆ ನಿಮ್ಮ ಒಡೆಯನ ಕಡೆಯಿಂದ ಭಾರೀ ದೊಡ್ಡ ಪರೀಕ್ಷೆ ಇತ್ತು

[141] ಮುಂದೆ, ನಾವು ಮೂಸಾರಿಗೆ ಮೂವತ್ತು ರಾತ್ರಿಗಳ ವಾಗ್ದಾನ ಮಾಡಿದೆವು ಮತ್ತು ಹತ್ತು ರಾತ್ರಿಗಳನ್ನು ಸೇರಿಸಿ ಅದನ್ನು ಪೂರ್ತಿಗೊಳಿಸಿದೆವು. ಹೀಗೆ ಅವರ ಒಡೆಯನು ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣಗೊಂಡಿತು. (ಈ ಅವಧಿಗಾಗಿ ತೆರಳುವಾಗ) ಮೂಸಾ ತಮ್ಮ ಸಹೋದರ ಹಾರೂನರೊಡನೆ ಹೇಳಿದರು; ನೀನು ನನ್ನ ಜನಾಂಗದಲ್ಲಿ ನನ್ನ ಪ್ರತಿನಿಧಿಯಾಗಿರು ಮತ್ತು ಸುಧಾರಣೆಯನ್ನು ಮಾಡು. ಅಶಾಂತಿ ಹಬ್ಬುವವರ ದಾರಿಯನ್ನು ಅನುಸರಿಸಬೇಡ

[142] ಮೂಸಾ, ನಾವು ನಿಗದಿಪಡಿಸಿದ ಅವಧಿಗಾಗಿ ಬಂದಾಗ, ತಮ್ಮ ಒಡೆಯನೊಡನೆ ಮಾತನಾಡಿದರು. ನನ್ನೊಡೆಯಾ, ನಾನು ನಿನ್ನನ್ನು ನೋಡಬಲ್ಲಂತಹ ದೃಷ್ಟಿಯನ್ನು ನೀನು ನನಗೆ ನೀಡು ಎಂದು ಅವರು ಹೇಳಿದರು. ಅವನು (ಅಲ್ಲಾಹನು) ಹೇಳಿದನು; ನನ್ನನ್ನು ನೋಡಲು ನಿನಗೆ ಸಾಧ್ಯವಿಲ್ಲ. ಆದರೆ ನೀನು ಆ ಪರ್ವತದೆಡೆಗೆ ನೋಡು, ಅದು ತನ್ನ ಸ್ಥಾನದಲ್ಲೇ ನಿಂತಿದ್ದರೆ ನೀನು ನನ್ನನ್ನು ನೋಡಬಹುದು. ತರುವಾಯ ಅವರ ಒಡೆಯನು ಪರ್ವತದೆಡೆಗೆ ದಿವ್ಯ ಬೆಳಕನ್ನು ಬೀರಿ ಅದನ್ನು ಚೂರು ಚೂರಾಗಿಸಿ ಬಿಟ್ಟನು ಮತ್ತು ಮೂಸಾ ಪ್ರಜ್ಞೆ ಕಳೆದುಕೊಂಡು ಬಿದ್ದುಬಿಟ್ಟರು. ಆ ಬಳಿಕ ಅವರಿಗೆ ಪ್ರಜ್ಞೆ ಬಂದಾಗ ಅವರು ಹೇಳಿದರು; ನೀನು ಪರಮ ಪಾವನನು, ನಾನು ಪಶ್ಚಾತ್ತಾಪ ಪಟ್ಟು ನಿನ್ನೆಡೆಗೆ ಮರಳುತ್ತೇನೆ ಮತ್ತು ನಂಬುವವರ ಪೈಕಿ ನಾನು ಪ್ರಥಮನಾಗುತ್ತೇನೆ

[143] ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನಾನು ನನ್ನ ಸಂದೇಶಗಳಿಗಾಗಿ ಮತ್ತು ನನ್ನ ಸಂಭಾಷಣೆಗಾಗಿ ಎಲ್ಲ ಮಾನವರ ಪೈಕಿ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವೀಗ ನಾನು ನೀಡುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞರಾಗಿರಿ

[144] ಆ ಬಳಿಕ ನಾವು ಅವರಿಗಾಗಿ (ಮೂಸಾರಿಗಾಗಿ) ಎಲ್ಲ ವಿಷಯಗಳ ಕುರಿತಾದ ಉಪದೇಶಗಳನ್ನು ಮತ್ತು ಎಲ್ಲ ವಿಷಯಗಳ ಕುರಿತಾದ ಸ್ಪಷ್ಟ ಮಾರ್ಗದರ್ಶನಗಳನ್ನು ಫಲಕಗಳಲ್ಲಿ ಬರೆದೆವು (ಮತ್ತು ಹೇಳಿದೆವು); ನೀವು ಇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರ ಉತ್ತಮ ಭಾಗವನ್ನು (ಸದ್ ವ್ಯಾಖ್ಯಾನವನ್ನು) ಸ್ವೀಕರಿಸಬೇಕೆಂದು ನಿಮ್ಮ ಜನಾಂಗದವರಿಗೆ ಆದೇಶಿಸಿರಿ. ಅವಿಧೇಯರ ನೆಲೆಯನ್ನು (ಅವರ ಗತಿ ಏನಾಗುತ್ತದೆಂಬುದನ್ನು) ನಾನು ನಿಮಗೆಲ್ಲಾ ತೋರಿಸುವೆನು

[145] ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆಯುವವರನ್ನು ನಾನು ನನ್ನ ದೃಷ್ಟಾಂತಗಳಿಂದ ದೂರ ಸರಿಸಿ ಬಿಡುವೆನು. ಅವರಂತು, ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಸತ್ಯದ ಮಾರ್ಗವನ್ನು ಕಣ್ಣಾರೆ ಕಂಡರೂ ಆ ಮಾರ್ಗವನ್ನು ಅವರು ಅನುಸರಿಸುವವರಲ್ಲ. ಅವರು ದುಷ್ಟ ಮಾರ್ಗವನ್ನು ಕಂಡರೆ ಅದನ್ನು ಮಾತ್ರ ಮಾರ್ಗವಾಗಿ ಅನುಸರಿಸುವರು. ಇದೇಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದ್ದಾರೆ ಮತ್ತು ಆ ಕುರಿತು ಅರಿವಿಲ್ಲದವರಾಗಿದ್ದಾರೆ

[146] ಇನ್ನು, ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಧಿಕ್ಕರಿಸಿದವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರಿಗೆ, ಅವರೇನು ಮಾಡಿದ್ದರೋ ಅದರ ಹೊರತು ಬೇರೆ ಪ್ರತಿಫಲ ಸಿಕ್ಕೀತೇ

[147] ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಆಭರಣಗಳಿಂದ ಒಂದು ಕರುವಿನ ವಿಗ್ರಹವನ್ನು ರಚಿಸಿಕೊಂಡರು. ಅದರಲ್ಲಿ ಗೋವಿನ ಧ್ವನಿ ಇತ್ತು. ಅದು ತಮ್ಮೊಡನೆ ಮಾತನಾಡುವುದೂ ಇಲ್ಲ ಮತ್ತು ತಮಗೆ ದಾರಿ ತೋರುವುದೂ ಇಲ್ಲ ಎಂಬುದನ್ನು ಅವರು ಕಾಣಲಿಲ್ಲವೇ? ಆದರೂ ಅವರು ಅದನ್ನು ನಂಬಿಕೊಂಡರು. ಅವರು ಅಕ್ರಮಿಗಳಾಗಿದ್ದರು

[148] ಮುಂದೆ, ಅವರಿಗೆ ತಮ್ಮ ತಪ್ಪಿನ ಅರಿವಾದಾಗ ಮತ್ತು ತಾವು ದಾರಿ ತಪ್ಪಿರುವುದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು; ನಮ್ಮ ಒಡೆಯನು ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ಅವನು ನಮ್ಮನ್ನು ಕ್ಷಮಿಸದಿದ್ದರೆ ಖಂಡಿತವಾಗಿಯೂ ನಾವು ನಷ್ಟಕ್ಕೊಳಗಾಗುವೆವು

[149] ಆ ಬಳಿಕ, ಮೂಸಾ ತಮ್ಮ ಜನಾಂಗದೆಡೆಗೆ ಮರಳಿಬಂದಾಗ ಕೋಪಗೊಂಡರು ಹಾಗೂ ದುಃಖಿತರಾದರು. ಅವರು ಹೇಳಿದರು; ನನ್ನ ಅನುಪಸ್ಥಿತಿಯಲ್ಲಿ ನೀವು ನನ್ನ ಪ್ರಾತಿನಿಧ್ಯದ ಹೊಣೆಯನ್ನು ಬಹಳ ಕೆಟ್ಟದಾಗಿ ನಿರ್ವಹಿಸಿದಿರಿ. ನಿಮ್ಮ ಒಡೆಯನ ಆದೇಶದ ಕುರಿತು ನೀವು ಆತುರ ಪಟ್ಟಿರಾ? – ಮತ್ತು ಮೂಸಾ (ಅಲ್ಲಾಹನು ಕೊಟ್ಟ) ಫಲಕಗಳನ್ನು ಚೆಲ್ಲಿಬಿಟ್ಟರು ಹಾಗೂ ತಮ್ಮ ಸಹೋದರ (ಹಾರೂನ್)ರ ತಲೆಯನ್ನು ಹಿಡಿದು ತಮ್ಮಡೆಗೆ ಎಳೆದರು. ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರನೇ! ಈ ಜನಾಂಗದವರು ನನ್ನನ್ನು ತೀರಾ ದುರ್ಬಲಗೊಳಿಸಿ ಬಿಟ್ಟರು. ಅವರಂತು ನನ್ನನ್ನು ಕೊಲ್ಲುವವರಿದ್ದರು. ನೀನೀಗ ನನ್ನ ಬಗ್ಗೆ ಶತ್ರುಗಳು ನಗುವಂತೆ ಮಾಡಬೇಡ ಮತ್ತು ನನ್ನನ್ನು ಅಕ್ರಮಿಗಳ ಸಾಲಿಗೆ ಸೇರಿಸಬೇಡ

[150] ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಹೋದರನನ್ನು ಕ್ಷಮಿಸಿಬಿಡು ಮತ್ತು ನಮ್ಮನ್ನು ನಿನ್ನ ಅನುಗ್ರಹದಲ್ಲಿ ಸೇರಿಸು. ನೀನಂತು ಎಲ್ಲ ಕರುಣಾಳುಗಳಿಗಿಂತ ಮಹಾಕರುಣಾಳುವಾಗಿರುವೆ

[151] ಖಂಡಿತವಾಗಿಯೂ, ಕರುವನ್ನು (ದೇವರಾಗಿ) ನೆಚ್ಚಿಕೊಂಡವರಿಗೆ, ಬಹುಬೇಗನೇ ಅವರ ಒಡೆಯನ ಕೋಪವು ತಟ್ಟಲಿದೆ ಮತ್ತು ಇಹಲೋಕದಲ್ಲಿ ಅವರಿಗೆ ಅಪಮಾನವು ಎದುರಾಗಲಿದೆ. ಸುಳ್ಳುಗಳನ್ನು ಸೃಷ್ಟಿಸುವವರಿಗೆ. ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ

[152] ಪಾಪಕೃತ್ಯಗಳನ್ನು ಮಾಡಿದ ಬಳಿಕ ಪಶ್ಚಾತ್ತಾಪ ಪಟ್ಟವರು ಮತ್ತು ವಿಶ್ವಾಸವಿಟ್ಟವರು – ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮೊಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ

[153] ಮೂಸಾರ ಕೋಪ ತಣಿದಾಗ, ಅವರು ಫಲಕಗಳನ್ನು ಎತ್ತಿಕೊಂಡರು. ಅವುಗಳ ಬರಹಗಳಲ್ಲಿ ಮಾರ್ಗದರ್ಶನ ಹಾಗೂ ಅನುಗ್ರಹವಿತ್ತು – ತಮ್ಮ ಒಡೆಯನ ಭಕ್ತಿ ಉಳ್ಳವರಿಗಾಗಿ

[154] ಮುಂದೆ ಮೂಸಾ, ನಮ್ಮ ಜೊತೆಗಿನ ಕರಾರಿನ ಅವಧಿಗಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿ ಪುರುಷರನ್ನು ಆರಿಸಿಕೊಂಡರು. ತರುವಾಯ ಅವರಿಗೆ ಭೂಕಂಪವು ಎದುರಾದಾಗ, ಅವರು (ಮೂಸಾ) ಹೇಳಿದರು; ‘‘ನನ್ನೊಡೆಯಾ ನೀನಿಚ್ಛಿಸಿದ್ದರೆ, ಇವರನ್ನು ಮತ್ತು ನನ್ನನ್ನು ಈ ಹಿಂದೆಯೇ ನಾಶ ಪಡಿಸುತ್ತಿದ್ದೆ. ಇದೀಗ ನಮ್ಮಲ್ಲಿನ ಮೂರ್ಖರ ಕೃತ್ಯಕ್ಕಾಗಿ ನೀನು ನಮ್ಮನ್ನು ನಾಶ ಪಡಿಸುವೆಯಾ? ಇದು ನಿನ್ನ ಪರೀಕ್ಷೆಯಲ್ಲದೆ ಬೇರೇನಲ್ಲ. ಈ ಮೂಲಕ ನೀನು, ನೀನಿಚ್ಛಿಸಿದವರನ್ನು ದಾರಿಗೆಡಿಸುವೆ ಮತ್ತು ನೀನಿಚ್ಛಿಸಿದವರನ್ನು ಸರಿದಾರಿಗೆ ತರುವೆ. ನಮ್ಮ ಪೋಷಕನು ನೀನೇ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕ್ಷಮಾಶೀಲನು.’’

[155] ‘‘ನೀನು ನಮ್ಮ ಪಾಲಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಒಳಿತನ್ನೇ ವಿಧಿಸು. ನಾವಂತು ನಿನ್ನೆಡೆಗೆ ಮರಳಿರುವೆವು.’’ – ಅವನು (ಅಲ್ಲಾಹನು) ಹೇಳಿದನು; ನಾನು ನನ್ನ ಶಿಕ್ಷೆಯನ್ನು ನಾನಿಚ್ಛಿಸಿದವರಿಗೆ ನೀಡುತ್ತೇನೆ. ಇನ್ನು ನನ್ನ ಅನುಗ್ರಹವು ಎಲ್ಲವನ್ನೂ ಆವರಿಸಿಕೊಂಡಿದೆ. ನಾನು ಅದನ್ನು, ಧರ್ಮನಿಷ್ಠರ, ಝಕಾತ್ ಪಾವತಿಸುವವರ ಮತ್ತು ನಮ್ಮ ವಚನಗಳನ್ನು ನಂಬುವವರ ಪಾಲಿಗೆ ಬರೆದು ಬಿಡುವೆನು

[156] ಅವರು ನಿರಕ್ಷರಿ ಪ್ರವಾದಿಯನ್ನು ಅನುಸರಿಸುತ್ತಾರೆ. ಅವರ (ಆ ಪ್ರವಾದಿಯ) ಕುರಿತು ತಮ್ಮ ಬಳಿ ಇರುವ ತೌರಾತ್ ಮತ್ತು ಇಂಜೀಲ್‌ಗಳಲ್ಲಿ (ಈ ರೀತಿ) ಬರೆದಿರುವುದನ್ನು ಅವರು ಕಾಣುತ್ತಾರೆ; ‘‘ಅವರು (ಆ ಪ್ರವಾದಿ) ಅವರಿಗೆ, ಒಳಿತನ್ನು ಆದೇಶಿಸುವರು, ಅವರನ್ನು ಕೆಡುಕಿನಿಂದ ತಡೆಯುವರು, ನಿರ್ಮಲವಾದವುಗಳನ್ನು ಅವರ ಪಾಲಿಗೆ ಸಮ್ಮತಗೊಳಿಸುವರು, ಮಲಿನ ವಸ್ತುಗಳನ್ನು ಅವರ ಪಾಲಿಗೆ ನಿಷೇಧಿಸುವರು, ಅವರಿಂದ ಅವರ ಭಾರಗಳನ್ನು ಇಳಿಸುವರು ಮತ್ತು ಅವರ ಮೇಲಿದ್ದ ನೊಗಗಳನ್ನು ಕಳಚುವರು – ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಸಮರ್ಥಿಸುವವರು, ಅವರಿಗೆ ನೆರವಾಗುವವರು ಮತ್ತು ಅವರ ಜೊತೆಗೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರೇ ವಿಜಯಿಗಳು.’’

[157] (ದೂತರೇ) ಹೇಳಿರಿ; ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೆ (ಅಲ್ಲಾಹನಿಗೆ) ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ – ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ

[158] ಮೂಸಾರ ಜನಾಂಗದಲ್ಲಿ ಸತ್ಯದೊಂದಿಗೆ ಮಾರ್ಗದರ್ಶನ ಮಾಡುವ ಮತ್ತು ಆ ವಿಷಯದಲ್ಲಿ ನ್ಯಾಯ ಪಾಲಿಸುವ ಒಂದು ಸಮುದಾಯವಿದೆ

[159] ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ ಕಲ್ಲಿನ ಮೇಲೆ ನಿಮ್ಮ ಊರುಗೋಲಿನಿಂದ ಹೊಡೆಯಿರಿ’’ ಎಂದು ನಾವು ಅವರೆಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಆಗ ಅದರಿಂದ ಹನ್ನೆರಡು ಚಿಲುಮೆಗಳು ಹರಿಯತೊಡಗಿದವು. ಪ್ರತಿಯೊಬ್ಬರೂ ತಮ್ಮ ಜಲಮೂಲವನ್ನು ಗುರುತಿಸಿಕೊಂಡರು. ನಾವು ಅವರ ಮೇಲೆ ಮೋಡದ ನೆರಳನ್ನು ಆವರಿಸಿದೆವು. ಅವರಿಗೆ ಮನ್ನ್ ಮತ್ತು ಸಲ್ವಾ (ಎಂಬ ಆಹಾರ ಸಾಮಗ್ರಿ)ಗಳನ್ನು ಇಳಿಸಿಕೊಟ್ಟೆವು.‘‘ನಿಮಗೆ ಒದಗಿಸಲಾಗಿರುವ ಶುದ್ಧ ವಸ್ತುಗಳಿಂದ ತಿನ್ನಿರಿ’’ (ಎಂದು ಅವರಿಗೆ ಆದೇಶಿಸಲಾಗಿತ್ತು. ಇದನ್ನು ಮೀರುವ ಮೂಲಕ) ಅವರು ನಮ್ಮ ಮೇಲೇನೂ ಅಕ್ರಮ ವೆಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು

[160] ಅವರೊಡನೆ ಹೀಗೆನ್ನಲಾಗಿತ್ತು; ನೀವು ಈ ಪಟ್ಟಣದಲ್ಲಿ ವಾಸಿಸಿರಿ, ಇಲ್ಲಿರುವುದರಲ್ಲಿ ನೀವಿಚ್ಛಿಸುವಂತೆ ತಿನ್ನಿರಿ, ’ಹಿತ್ತಃ’ ಎನ್ನುತ್ತಲಿರಿ (ಕ್ಷಮೆಯಾಚಿಸುತ್ತಲಿರಿ) ಮತ್ತು ಸಾಷ್ಟಾಂಗವೆರಗುತ್ತಾ ಪಟ್ಟಣದ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪ್ರಮಾದಗಳನ್ನು ಕ್ಷಮಿಸಿ ಬಿಡುವೆವು. ಸತ್ಕರ್ಮಿಗಳಿಗೆ ನಾವು ಬಹುಬೇಗನೇ ಇನ್ನಷ್ಟನ್ನು ನೀಡುವೆವು

[161] ಆದರೆ ಅವರಲ್ಲಿನ ಅಕ್ರಮಿಗಳು ತಮಗೆ ನೀಡಲಾಗಿದ್ದ ಶಬ್ದವನ್ನು ಬೇರೆಯದಾಗಿ ಬದಲಿಸಿ ಬಿಟ್ಟರು. ಕೊನೆಗೆ ಅವರು ಎಸಗುತ್ತಿದ್ದ ಅಕ್ರಮದ ಫಲವಾಗಿ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಎರಗಿಸಿಬಿಟ್ಟೆವು

[162] ನೀವು ಅವರೊಡನೆ, ಕಡಲ ತೀರದಲ್ಲಿದ್ದ ಆ ಪಟ್ಟಣದ ಕುರಿತು ಕೇಳಿರಿ. ಅವರು ಸಬ್ತ್‌ನ (ಶನಿವಾರದ) ನಿಯಮವನ್ನು ಮೀರಿ ಬಿಟ್ಟರು. ಅವರ ಸಬ್ತ್‌ನ ದಿನವೇ ಮೀನುಗಳು ಅವರ ಮುಂದೆ ಬಂದು ಬಿಡುತ್ತಿದ್ದವು ಮತ್ತು ಸಬ್ತ್ ಅಲ್ಲದ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಈ ರೀತಿ ನಾವು ಅವರನ್ನು ಪರೀಕ್ಷಿಸುತ್ತಿದ್ದೆವು. ಏಕೆಂದರೆ ಅವರು ಅವಿಧೇಯರಾಗಿದ್ದರು

[163] ಅವರಲ್ಲಿನ ಒಂದು ಗುಂಪು ‘‘ಅಲ್ಲಾಹನು ನಾಶಮಾಡಲಿರುವ ಅಥವಾ ತೀವ್ರ ಯಾತನೆಗೆ ಗುರಿಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ?’’ಎಂದಿತು. ಅವರು (ಬೋಧಕರು) ಹೇಳಿದರು; ನಿಮ್ಮ ಒಡೆಯನ ಮುಂದೆ ನೆಪವಾಗಲು ಮತ್ತು ಅವರು ದೇವಭಯ ಉಳ್ಳವರಾಗಲೂ ಬಹುದೆಂದು

[164] ಕೊನೆಗೆ ಅವರು, ತಮಗೆ ನೀಡಲಾದ ಉಪದೇಶವನ್ನು ಮರೆತುಬಿಟ್ಟಾಗ, ಅವರನ್ನು ದುಷ್ಟ ಕೆಲಸಗಳಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರ ಅವಿಧೇಯತೆಯ ಕಾರಣ ಹಿಡಿದು, ಭಾರೀ ಕೆಟ್ಟ ಶಿಕ್ಷೆಗೆ ಗುರಿಪಡಿಸಿದೆವು

[165] ಅವರಿಗೆ ಹೇರಲಾಗಿದ್ದ ನಿರ್ಬಂಧವನ್ನು ಅವರು ಉಲ್ಲಂಘಿಸಿದಾಗ ನಾವು ಅವರಿಗೆ ‘‘ಅಪಮಾನಿತ ಕೋತಿಗಳಾಗಿ ಬಿಡಿರಿ’’ ಎಂದೆವು

[166] ಪುನರುತ್ಥಾನ ದಿನದವರೆಗೂ, ಘೋರ ಹಿಂಸೆಯ ಮೂಲಕ ಅವರನ್ನು ದಂಡಿಸುತ್ತಿರುವವರನ್ನು ಅವರ ಮೇಲೆ ಹೇರುತ್ತಲೇ ಇರುವೆನೆಂದು ನಿಮ್ಮ ಒಡೆಯನು ಘೋಷಿಸಿರುವನು. ನಿಮ್ಮ ಒಡೆಯನು ಕ್ಷಿಪ್ರವಾಗಿ ದಂಡಿಸಬಲ್ಲವನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[167] ತರುವಾಯ ನಾವು ಅವರನ್ನು ಗುಂಪು ಗುಂಪುಗಳಾಗಿ ಭೂಮಿಯಲ್ಲಿ ಹರಡಿ ಬಿಟ್ಟೆವು. ಅವರಲ್ಲಿ ಸಜ್ಜನರೂ ಇದ್ದಾರೆ ಮತ್ತು ಅವರಲ್ಲಿ ಇತರರೂ ಇದ್ದಾರೆ. ಅವರು (ಸನ್ಮಾರ್ಗದೆಡೆಗೆ) ಮರಳಿ ಬರಲೆಂದು ನಾವು ಅವರನ್ನು ಒಳಿತುಗಳ ಮೂಲಕವೂ ಕೆಡುಕುಗಳ ಮೂಲಕವೂ ಪರೀಕ್ಷೆಗೆ ಒಳಪಡಿಸಿದೆವು

[168] ಅವರ ಬಳಿಕ ಒಂದು ದುಷ್ಟ ಪೀಳಿಗೆಯು ಗ್ರಂಥದ ಉತ್ತರಾಧಿಕಾರಿಯಾಯಿತು. ಅವರು ಈ ಲೋಕದ ಸುಖವನ್ನೇ ಆರಿಸಿಕೊಂಡರು ಮತ್ತು ನಮ್ಮನ್ನು ಕ್ಷಮಿಸಲಾಗುವುದು ಎನ್ನುತ್ತಿದ್ದರು. ನಿಜವಾಗಿ ಅದೇ ಸಂಪತ್ತು ಮತ್ತೆ ಅವರ ಬಳಿಗೆ ಬಂದರೆ ಅವರು ಅದನ್ನೇ ಆರಿಸುವರು. ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳಬಾರದೆಂದು ಮತ್ತು ಅದರಲ್ಲಿ (ಗ್ರಂಥದಲ್ಲಿ) ಇರುವುದನ್ನು ಅಧ್ಯಯನ ಮಾಡಬೇಕೆಂದು ಗ್ರಂಥದ ಆಧಾರದಲ್ಲಿ ಅವರಿಂದ ಕರಾರನ್ನು ಪಡೆಯಲಾಗಿರಲಿಲ್ಲವೇ? ಧರ್ಮನಿಷ್ಠರ ಪಾಲಿಗೆ ಪರಲೋಕದ ನೆಲೆಯೇ ಶ್ರೇಷ್ಠವಾದುದು. ನೀವೇನು, ಅರ್ಥಯಿಸಿಕೊಳ್ಳುವುದಿಲ್ಲವೇ

[169] ಗ್ರಂಥವನ್ನು ಭದ್ರವಾಗಿ ಹಿಡಿದುಕೊಂಡ ಹಾಗೂ ನಮಾಝ್‌ಅನ್ನು ಪಾಲಿಸುವಂತಹ ಸತ್ಕರ್ಮಿಗಳ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ

[170] ನಾವು ಪರ್ವತವನ್ನು, ನೆರಳುಕೊಡುವ ಚಪ್ಪರದಂತೆ ಅವರ ಮೇಲೆ ಎತ್ತಿದಾಗ, ಅದು ತಮ್ಮ ಮೇಲೆ ಬಿದ್ದು ಬಿಡುವುದೆಂದು ಅವರು ಭಾವಿಸಿದರು. ‘‘ನಿಮಗೆ ನಾವು ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲೇನಿದೆಯೋ ಅದನ್ನು ನೆನಪಿಟ್ಟುಕೊಳ್ಳಿರಿ. ನೀವು ಸುರಕ್ಷಿತರಾಗಬಹುದು’’ (ಎಂದು ಅವರಿಗೆ ಆದೇಶಿಸಲಾಗಿತ್ತು)

[171] ನಿಮ್ಮೊಡೆಯನು ಆದಮ್‌ರ ಮಕ್ಕಳ ಮೂಲಕ ಜನಿಸಿದ ಅವರ ಸಂತತಿಗಳನ್ನು, ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗಿಸಿ ‘‘ನಾನು ನಿಮ್ಮ ಒಡೆಯನಲ್ಲವೇ?’’ ಎಂದು ಕೇಳಿದಾಗ ಅವರು, ‘‘ಯಾಕಲ್ಲ? ಅದಕ್ಕೆ ನಾವೇ ಸಾಕ್ಷಿಗಳು’’ ಎಂದಿದ್ದರು. ನಾಳೆ ಪುನರುತ್ಥಾನ ದಿನ ನೀವು ಈ ಕುರಿತು ನಮಗೇನೂ ತಿಳಿದಿರಲಿಲ್ಲ ಎನ್ನಬಾರದೆಂದು ಹೀಗೆ ಮಾಡಲಾಯಿತು

[172] ಅಥವಾ ನೀವು, ‘‘ಬಹುದೇವಾರಾಧನೆ ಮಾಡಿದವರು ಗತಕಾಲದ ನಮ್ಮ ಪೂರ್ವಜರು. ನಾವು ಅವರ ಸಂತತಿಗಳು ಮಾತ್ರ. ಆ ದಾರಿಗೆಟ್ಟವರ ಕೃತ್ಯಕ್ಕಾಗಿ ನೀನೇನು ನಮ್ಮನ್ನು ನಾಶಪಡಿಸುವೆಯಾ?’’ ಎನ್ನಬಾರದೆಂದು (ಹೀಗೆ ಮಾಡಲಾಯಿತು)

[173] ಈ ರೀತಿ, ಅವರು (ಸತ್ಯದೆಡೆಗೆ) ಮರಳಬೇಕೆಂದು ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ

[174] ಆ ವ್ಯಕ್ತಿಯ ವಿಷಯವನ್ನು ನೀವು ಅವರಿಗೆ ಓದಿ ಹೇಳಿರಿ; ನಾವು ಆತನಿಗೆ ನಮ್ಮ ಪುರಾವೆಗಳನ್ನು ನೀಡಿದ್ದೆವು. ಅವನು ಅವುಗಳಿಂದ ಜಾರಿಕೊಂಡನು. ಶೈತಾನನು ಅವನ ಬೆನ್ನು ಹತ್ತಿದನು. ಕೊನೆಗೆ ಅವನು ಸಂಪೂರ್ಣ ದಾರಿಗೆಟ್ಟವನಾದನು

[175] ನಾವು ಬಯಸಿದ್ದರೆ ಅವುಗಳ (ಪುರಾವೆ) ಮೂಲಕ ಆತನನ್ನು ಉನ್ನತಿಗೇರಿಸಬಹುದಿತ್ತು. ಆದರೆ ಅವನು ಮಾತ್ರ ನೆಲದೆಡೆಗೇ ಬಾಗಿದ್ದನು ಮತ್ತು ತನ್ನ ಸ್ವೇಚ್ಛೆಯನ್ನೇ ಅನುಸರಿಸಿದನು. ಅವನ ಉದಾಹರಣೆ ನಾಯಿಯಂತಿದೆ. ನೀವು ಅದನ್ನು ಥಳಿಸಿದರೂ ಅದು ನಾಲಗೆಯನ್ನು ಹೊರಚಾಚಿ ಕಂಪಿಸುತ್ತಿರುತ್ತದೆ. ನೀವು ಅದನ್ನು ಹಾಗೆಯೇ ಬಿಟ್ಟರೂ ಅದು ನಾಲಗೆ ಹೊರಚಾಚಿ ಕಂಪಿಸುತ್ತಿರುತ್ತದೆ. ನಮ್ಮ ವಚನಗಳನ್ನು ಧಿಕ್ಕರಿಸುವವರ ಉದಾಹರಣೆಯೂ ಹೀಗೆಯೇ ಇದೆ. ನೀವು ಅವರಿಗೆ (ಇಂತಹ) ವೃತ್ತಾಂತಗಳನ್ನು ವಿವರಿಸಿರಿ. ಅವರು ಚಿಂತನೆ ನಡೆಸಲಿ

[176] ನಮ್ಮ ವಚನಗಳನ್ನು ತಿರಸ್ಕರಿಸಿದ ಹಾಗೂ ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡ ಜನರ ಅವಸ್ಥೆ ತುಂಬಾ ಕೆಟ್ಟದಾಗಿದೆ

[177] ಅಲ್ಲಾಹನು ಯಾರಿಗೆ ದಾರಿ ತೋರಿದನೋ ಅವನೇ ಸರಿದಾರಿಯಲ್ಲಿರುತ್ತಾನೆ. ಅವನು ಯಾರನ್ನು ದಾರಿಗೆಡಿಸಿದನೋ ಅವರೇ ನಷ್ಟ ಅನುಭವಿಸುವವರಾಗಿದ್ದಾರೆ

[178] ನಾವು ಜಿನ್ನ್ ಮತ್ತು ಮಾನವರ ಪೈಕಿ ಅನೇಕರನ್ನು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆ. ಅವರಿಗೆ ಮನಸ್ಸುಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ, ಇನ್ನೂ ಹೆಚ್ಚು ದಾರಿಗೆಟ್ಟಿದ್ದಾರೆ. ಅವರಿಗೆ ಅರಿವಿಲ್ಲ

[179] ಅತ್ಯುತ್ತಮ ಹೆಸರುಗಳು ಅಲ್ಲಾಹನಿಗೆ ಸೇರಿವೆ. ನೀವು ಅವನನ್ನು ಅವುಗಳಿಂದಲೇ ಕರೆಯಿರಿ. ಅವನ ಹೆಸರುಗಳಿಗೆ ಅಗೌರವ ತೋರುವವರನ್ನು ಬಿಟ್ಟುಬಿಡಿರಿ. ಅವರು ಮಾಡುತ್ತಿದ್ದುದರ ಫಲವನ್ನು ಅವರು ಉಣ್ಣಲಿದ್ದಾರೆ

[180] ನಾವು ಸೃಷ್ಟಿಸಿರುವ ಒಂದು ಸಮುದಾಯವಿದೆ. ಅವರು (ಜನರಿಗೆ) ಸತ್ಯದೊಂದಿಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲೇ ನ್ಯಾಯಪಾಲನೆ ಮಾಡುತ್ತಾರೆ

[181] ಇನ್ನು, ನಮ್ಮ ವಚನಗಳನ್ನು ಸುಳ್ಳೆಂದವರನ್ನು (ಶಿಕ್ಷಿಸಲು) ನಾವು, ಅವರಿಗೆ ಅರಿವೇ ಆಗದಂತೆ ಹಂತಹಂತವಾಗಿ ಅವರನ್ನು ಹಿಡಿದುಕೊಳ್ಳುತ್ತೇವೆ

[182] ನಾನು ಅವರಿಗೆ ಧಾರಾಳ ಕಾಲಾವಕಾಶ ನೀಡುತ್ತೇನೆ. ನನ್ನ ಯೋಜನೆ ಖಂಡಿತ ಬಹಳ ಬಲಿಷ್ಠವಾಗಿರುತ್ತದೆ

[183] ಅವರೇನು ಆಲೋಚಿಸುವುದಿಲ್ಲವೇ? ಅವರ ಜೊತೆಗಾರನಿಗೆ (ದೂತರಿಗೆ) ಹುಚ್ಚೇನೂ ಇಲ್ಲ. ಅವರು ಸ್ಪಷ್ಟವಾಗಿ ಎಚ್ಚರಿಸುವವರು ಮಾತ್ರ

[184] ಅವರೇನು, ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯವನ್ನು ಮತ್ತು ಅಲ್ಲಾಹನು ಸೃಷ್ಟಿಸಿರುವ ಯಾವ ವಸ್ತುವನ್ನೂ ನೋಡುವುದಿಲ್ಲವೇ? ಅವರ ಅಂತ್ಯ (ಮರಣವು) ಸಮೀಪಿಸಿರಬಹುದು. ಆ ಬಳಿಕ ಅವರು ಏನನ್ನು ತಾನೇ ನಂಬುವರು

[185] ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವನಿಗೆ ಸರಿದಾರಿ ತೋರಬಲ್ಲವರು ಯಾರೂ ಇಲ್ಲ. ಅವನಂತು ಅವರನ್ನು ತಮ್ಮ ವಿದ್ರೋಹದ ಮರುಳಲ್ಲೇ ಅಲೆಯುತ್ತಿರಲು ಬಿಟ್ಟು ಬಿಡುತ್ತಾನೆ

[186] (ದೂತರೇ,) ಅವರು ನಿಮ್ಮೊಡನೆ, ಪುನರುತ್ಥಾನದ ಘಳಿಗೆಯ ಕುರಿತು, ಅದು ಯಾವಾಗ ಬರಲಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಜ್ಞಾನವು ನನ್ನ ಒಡೆಯನ ಬಳಿ ಇದೆ, ಅದನ್ನು (ಪುನರುತ್ಥಾನವನ್ನು) ಅದರ ಸಮಯದಲ್ಲಿ ಪ್ರಕಟಪಡಿಸುವವನು ಅವನ ಹೊರತು ಬೇರಾರೂ ಅಲ್ಲ. ಅದು ಆಕಾಶಗಳ ಹಾಗೂ ಭೂಮಿಯ ಪಾಲಿಗೆ ತುಂಬಾ ಕಠಿಣವಾಗಿರುವುದು. ನಿಮ್ಮ ಬಳಿಗೆ ಅದು ತೀರಾ ಹಠಾತ್ತನೆ ಬಂದು ಬಿಡುವುದು. ನೀವು ಅದನ್ನೇ ಕಾಯುತ್ತಿರುವಿರೋ ಎಂಬಂತೆ ಅವರು ನಿಮ್ಮೊಡನೆ (ಆ ಕುರಿತು) ಕೇಳುತ್ತಾರೆ. ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರ ಇದೆ. ಆದರೆ ಹೆಚ್ಚಿನ ಜನರು ಅರಿತಿಲ್ಲ

[187] ಹೇಳಿರಿ; ನಾನಂತು, ಅಲ್ಲಾಹನು ಇಚ್ಛಿಸದೆ, ಸ್ವತಃ ನನಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರ ಉಳ್ಳವನಲ್ಲ. ಒಂದು ವೇಳೆ ನನಗೆ ಗುಪ್ತ ವಿಷಯಗಳ ಜ್ಞಾನ ಇದ್ದಿದ್ದರೆ ನಾನು ಭಾರೀ ಪ್ರಮಾಣದಲ್ಲಿ ಒಳಿತನ್ನು (ಸಂಪತ್ತನ್ನು) ಸಂಗ್ರಹಿಸುತ್ತಿದ್ದೆ ಮತ್ತು ಯಾವ ಹಾನಿಯೂ ನನಗೆ ಸಂಭವಿಸುತ್ತಿರಲಿಲ್ಲ. ನಾನು, ಎಚ್ಚರಿಕೆ ನೀಡುವ ಮತ್ತು ನಂಬುವವರಿಗೆ ಶುಭವಾರ್ತೆ ನೀಡುವ ಕೇವಲ ಒಬ್ಬ ಮನುಷ್ಯನಲ್ಲದೆ ಬೇರೇನಾದರೂ ಆಗಿರುವೆನೇ

[188] ಅವನೇ, ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದು ಸುಖ ಪಡೆಯಲೆಂದು ಅದರಿಂದಲೇ ಅದರ ಜೊತೆಯನ್ನು ನಿರ್ಮಿಸಿದವನು. ಮುಂದೆ ಅವನು (ಪುರುಷನು) ಅವಳನ್ನು ಆವರಿಸಿದಾಗ, ಅವಳು ಲಘುವಾದ ಗರ್ಭವನ್ನು ಧರಿಸಿದಳು ಮತ್ತು ಅದರ ಜೊತೆ ನಡೆದಾಡಿದಳು. ತರುವಾಯ ಅದು ಭಾರವಾದಾಗ ಅವರಿಬ್ಬರೂ, ‘‘ನೀನು ನಮಗೆ ಸಜ್ಜನ ಸಂತತಿಯನ್ನು ದಯಪಾಲಿಸಿದರೆ ನಾವು ಖಂಡಿತ ನಿನಗೆ ಕೃತಜ್ಞರಾಗಿರುವೆವು’’ ಎಂದು ತಮ್ಮ ಒಡೆಯನಾದ ಅಲ್ಲಾಹನೊಡನೆ ಪ್ರಾರ್ಥಿಸುತ್ತಾರೆ

[189] ಮುಂದೆ ಅವನು (ಅಲ್ಲಾಹನು) ಅವರಿಗೆ ಸಜ್ಜನ ಮಗುವನ್ನು ನೀಡಿದಾಗ, ಅವರು ತಮಗೆ ಅವನು ನೀಡಿದ್ದರಲ್ಲಿ ಇತರರನ್ನು ಪಾಲುದಾರರಾಗಿಸುತ್ತಾರೆ. ನಿಜವಾಗಿ ಅವರು ಪಾಲುದಾರರಾಗಿ ಮಾಡಿದ ಎಲ್ಲರಿಗಿಂತಲೂ ಅಲ್ಲಾಹನು ಉನ್ನತನಾಗಿದ್ದಾನೆ

[190] ಅವರೇನು, ಏನನ್ನೂ ಸೃಷ್ಟಿಸಿಲ್ಲದವರನ್ನು ಮತ್ತು ಸೃಷ್ಟಿಸಲ್ಪಟ್ಟವರನ್ನು (ದೇವರ) ಪಾಲುದಾರರಾಗಿಸುತ್ತಾರೆಯೇ

[191] ನಿಜವಾಗಿ ಅವರು (ಆ ಪಾಲುದಾರರು) ಅವರಿಗೆ ಯಾವುದೇ ಸಹಾಯಮಾಡಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೂ ಯಾವುದೇ ಸಹಾಯ ಮಾಡಲಾರರು

[192] ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ, ಅವರು ನಿಮ್ಮನ್ನು ಅನುಸರಿಸಲಾರರು. ನೀವು ಅವರನ್ನು ಕರೆದರೂ ಒಂದೇ ಅಥವಾ ಮೌನವಾಗಿದ್ದರೂ ಒಂದೇ

[193] ಅಲ್ಲಾಹನ ಹೊರತಾಗಿ ನೀವು ಯಾರನ್ನು ಕರೆದು ಪ್ರಾರ್ಥಿಸುವಿರೋ ಅವರು ನಿಮ್ಮಂತಹ ದಾಸರು ಮಾತ್ರ. ನೀವು ಸತ್ಯವಂತರಾಗಿದ್ದರೆ, ಅವರನ್ನು ಕರೆದು ನೋಡಿರಿ, ಅವರು ನಿಮಗೆ ಉತ್ತರಿಸಲಿ

[194] ಅವರ ಬಳಿ, ನಡೆದಾಡುವುದಕ್ಕೇನು ಕಾಲುಗಳಿವೆಯೇ? ಹಿಡಿಯುವುದಕ್ಕೇನು ಅವರ ಬಳಿ ಕೈಗಳಿವೆಯೇ? ನೋಡುವುದಕ್ಕೇನು ಅವರ ಬಳಿ ಕಣ್ಣುಗಳಿವೆಯೇ? ಅಥವಾ ಕೇಳುವುದಕ್ಕೇನು ಅವರ ಬಳಿ ಕಿವಿಗಳಿವೆಯೇ? ಹೇಳಿರಿ; ನೀವು ಆ ನಿಮ್ಮ ಪಾಲುದಾರರನ್ನು ಕರೆದು ನೋಡಿರಿ. ಆ ಬಳಿಕ ನನ್ನ ವಿರುದ್ಧ ಸಂಚು ಹೂಡಿರಿ ಮತ್ತು (ನನಗೆ) ಕಾಲಾವಕಾಶವನ್ನೇ ಕೊಡಬೇಡಿರಿ

[195] ಖಂಡಿತವಾಗಿ ದಿವ್ಯಗ್ರಂಥವನ್ನು ಇಳಿಸಿದ ಅಲ್ಲಾಹನೇ ನನ್ನ ಪರಮ ಪೋಷಕನಾಗಿದ್ದಾನೆ ಮತ್ತು ಅವನೇ ಎಲ್ಲ ಸಜ್ಜನರ ಪರಮ ಪೋಷಕನಾಗಿದ್ದಾನೆ

[196] ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುವಿರೋ ಅವರು ನಿಮಗೆ ನೆರವಾಗಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೇ ನೆರವಾಗಲು ಅಶಕ್ತರಾಗಿರುವರು

[197] ನೀವು ಮಾರ್ಗದರ್ಶನಕ್ಕಾಗಿ ಅವರನ್ನು ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನೀವು ಕಾಣುತ್ತೀರಿ. ಆದರೆ ನಿಜವಾಗಿ ಅವರು ಏನನ್ನೂ ನೋಡುವುದಿಲ್ಲ

[198] ನೀವು (ಜನರನ್ನು) ಕ್ಷಮಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅಜ್ಞಾನಿಗಳನ್ನು ನಿರ್ಲಕ್ಷಿಸಿರಿ

[199] (ದೂತರೇ,)ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[200] ಖಂಡಿತವಾಗಿಯೂ, ಧರ್ಮನಿಷ್ಠರಿಗೆ ಶೈತಾನನ ಕಡೆಯಿಂದ ಯಾವುದೇ ದುಷ್ಟ ಪ್ರೇರಣೆ ಉಂಟಾದಾಗ, ಅವರು (ಅಲ್ಲಾಹನನ್ನು) ಸ್ಮರಿಸುತ್ತಾರೆ ಮತ್ತು ಆಗಲೇ ಅವರು (ಸರಿದಾರಿಯನ್ನು) ಕಂಡುಕೊಳ್ಳುತ್ತಾರೆ

[201] ಇನ್ನು ಅವರ (ಶೈತಾನರ) ಸಹೋದರರು ಅವರನ್ನು ತಪ್ಪುದಾರಿಗೆ ಎಳೆಯುತ್ತಲೇ ಇರುತ್ತಾರೆ ಮತ್ತು (ಆ ವಿಷಯದಲ್ಲಿ) ಅವರು ಹಿಂಜರಿಯುವುದಿಲ್ಲ

[202] (ದೂತರೇ,) ನೀವು ಅವರ ಬಳಿಗೆ ಯಾವುದೇ ದಿವ್ಯ ವಚನವನ್ನು ತರದೆ ಇದ್ದಾಗ ಅವರು, ‘‘ಸ್ವತಃ ನೀವೇ ಅದನ್ನೇಕೆ ರಚಿಸಿಕೊಳ್ಳುವುದಿಲ್ಲ?’’ ಎಂದು ಕೇಳುತ್ತಾರೆ. ಹೇಳಿರಿ; ‘‘ನಾನಂತು, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗುವ ದಿವ್ಯವಾಣಿಯನ್ನಷ್ಟೇ ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಒಡೆಯನ ಕಡೆಯಿಂದ ಬಂದಿರುವ, ಕಣ್ಣು ತೆರೆಸುವ ಉಪದೇಶವಾಗಿದೆ ಮತ್ತು ಇದು ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ

[203] ಕುರ್‌ಆನ್ ಅನ್ನು ಓದಲಾದಾಗ ಅದನ್ನು ಕೇಳಿರಿ ಮತ್ತು ಮೌನವಾಗಿರಿ – ನೀವು ಕರುಣೆಗೆ ಪಾತ್ರರಾಗಬಹುದು

[204] (ದೂತರೇ,) ನೀವು ನಿಮ್ಮ ಮನದೊಳಗೇ ನಿಮ್ಮೊಡೆಯನನ್ನು ಸ್ಮರಿಸುತ್ತಲಿರಿ – ವಿನಯದೊಂದಿಗೆ ಹಾಗೂ ಭಯ ಭಕ್ತಿಯೊಂದಿಗೆ, ಧ್ವನಿಯನ್ನು ಎತ್ತರಿಸದೆ, ಮುಂಜಾನೆ ಹಾಗೂ ಸಂಜೆ, ಮತ್ತು ನೀವೆಂದೂ (ಅವನನ್ನು) ನಿರ್ಲಕ್ಷಿಸಿದವರಾಗಿರಬೇಡಿ

[205] ಖಂಡಿತವಾಗಿಯೂ, ನಿಮ್ಮ ಒಡೆಯನ ಬಳಿ ಇರುವವರು ಅವನನ್ನು ಆರಾಧಿಸುವ ವಿಷಯದಲ್ಲಿ ಎಂದೂ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವಿತ್ರವನ್ನು ಜಪಿಸುತ್ತಿರುತ್ತಾರೆ ಹಾಗೂ ಅವನಿಗೇ ಸಾಷ್ಟಾಂಗ ವಂದಿಸುತ್ತಿರುತ್ತಾರೆ

[206] (ದೂತರೇ,) ಅವರು ನಿಮ್ಮೊಡನೆ, ಯುದ್ಧದಲ್ಲಿ ಸಿಕ್ಕಿದ ಸಂಪತ್ತಿನ ಕುರಿತು ಕೇಳುತ್ತಾರೆ. ಹೇಳಿರಿ; ಯುದ್ಧ ಸಂಪತ್ತು ಅಲ್ಲಾಹನಿಗೆ ಮತ್ತು ಅವನ ದೂತನಿಗೆ ಸೇರಿದೆ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಿಗೆ ಅಂಜಿರಿ ಹಾಗೂ ಪರಸ್ಪರ ಸಂಬಂಧಗಳನ್ನು ಸುಧಾರಿಸಿಕೊಳ್ಳಿರಿ ಮತ್ತು ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ

ಯುದ್ಧದ ಲೂಟಿ

Surah 8

[1] ಖಂಡಿತವಾಗಿಯೂ ಅಲ್ಲಾಹನ ಹೆಸರೆತ್ತಿದಾಗ ವಿಶ್ವಾಸಿಗಳ ಹೃದಯಗಳಲ್ಲಿ ಭಕ್ತಿ ಉಕ್ಕುತ್ತದೆ ಹಾಗೂ ಅವರ ಮುಂದೆ ಅವನ ವಚನಗಳನ್ನು ಓದಲಾದಾಗ ಅವರ ವಿಶ್ವಾಸವು ಬಲಿಷ್ಠವಾಗುತ್ತದೆ ಮತ್ತು ಅವರು ತಮ್ಮ ಒಡೆಯನಲ್ಲಿ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ

[2] ಅವರು ನಮಾಝನ್ನು ಪಾಲಿಸುತ್ತಾರೆ ಮತ್ತು ಅವರಿಗೆ ನಾವು ನೀಡಿರುವ ಸಂಪತ್ತಿನಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡುತ್ತಾರೆ

[3] ಅವರೇ ನೈಜ ವಿಶ್ವಾಸಿಗಳು. ಅವರಿಗಾಗಿ ಅವರ ಒಡೆಯನ ಬಳಿ ಉನ್ನತ ಸ್ಥಾನಗಳಿವೆ, ಕ್ಷಮೆ ಇದೆ ಮತ್ತು ಧಾರಾಳ ಸಂಪತ್ತಿದೆ

[4] (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರ ತಂದಿದ್ದಾಗ ವಿಶ್ವಾಸಿಗಳ ಒಂದು ಪಂಗಡವು ಆ ಕುರಿತು ಅತೃಪ್ತವಾಗಿತ್ತು

[5] ಸತ್ಯವು ಬಹಳ ಸ್ಪಷ್ಟವಾಗಿ ಪ್ರಕಟವಾದ ಬಳಿಕವೂ ಅವರು ಆ ಕುರಿತು ನಿಮ್ಮೊಡನೆ ವಾದಕ್ಕಿಳಿಯುತ್ತಿದ್ದರು – ಅವರು ಕಣ್ಣಾರೆ ಕಾಣುತ್ತಿರುವಂತಹ ಮರಣದೆಡೆಗೆ ಅವರನ್ನು ಅಟ್ಟಲಾಗುತ್ತಿದೆಯೇ ಎಂಬಂತೆ

[6] ಎರಡು ಗುಂಪುಗಳ ಪೈಕಿ ಒಂದು ನಿಮ್ಮ ವಶವಾಗುವುದೆಂದು ಅಲ್ಲಾಹನು ನಿಮಗೆ ವಾಗ್ದಾನ ಮಾಡಿದಾಗ, ಆಯುಧವಿಲ್ಲದ ಗುಂಪು ನಿಮ್ಮದಾಗಬೇಕೆಂದು ನೀವು (ದೂತರ ಕೆಲವು ಸಮಕಾಲೀನರು) ಅಪೇಕ್ಷಿಸಿದ್ದಿರಿ. ಆದರೆ ಅಲ್ಲಾಹನು ಮಾತ್ರ ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವೆಂದು ಸಾಬೀತುಪಡಿಸಲು ಹಾಗೂ ಧಿಕ್ಕಾರಿಗಳ ಮೂಲವನ್ನೇ ಮುರಿಯಲು ತೀರ್ಮಾನಿಸಿದ್ದನು

[7] ಸತ್ಯವನ್ನು ಸತ್ಯವೆಂದು ಹಾಗೂ ಮಿಥ್ಯವನ್ನು ಮಿಥ್ಯವೆಂದು ಸಾಬೀತು ಪಡಿಸಲಿಕ್ಕಾಗಿ – ಅದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ

[8] (ನೆನಪಿಸಿಕೊಳ್ಳಿರಿ;) ನೀವು ನಿಮ್ಮ ಒಡೆಯನೊಡನೆ ನೆರವನ್ನು ಬೇಡಿದಾಗ, ಬೆನ್ನು ಬೆನ್ನಿಗೇ ಬರುವ ಸಾವಿರ ಮಲಕ್‌ಗಳ ಮೂಲಕ ನಿಮಗೆ ನೆರವಾಗುವೆನೆಂದು ಅವನು ನಿಮಗೆ ಉತ್ತರಿಸಿದನು

[9] ಅದು, ನಿಮ್ಮ ಮನಸ್ಸುಗಳು ಸಂತೃಪ್ತವಾಗಲೆಂದು ಅಲ್ಲಾಹನು ಕಳುಹಿಸಿದ್ದ ಶುಭವಾರ್ತೆಯಾಗಿತ್ತು. ನಿಜವಾಗಿ, ನೆರವು ಅಲ್ಲಾಹನ ಹೊರತು ಬೇರೆ ಯಾರಿಂದಲೂ ಸಿಗುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[10] ಅವನು (ಯುದ್ಧದ ನಡುವೆ) ನಿಮಗೆ ಮಂಪರು ಬರಿಸಿದಾಗ, ಅದು ಅವನ ಕಡೆಯಿಂದ ಕಳಿಸಲಾದ ನೆಮ್ಮದಿಯಾಗಿತ್ತು. ಇನ್ನು ನಿಮ್ಮನ್ನು ಶುಚೀಕರಿಸಲಿಕ್ಕಾಗಿ, ನಿಮ್ಮಿಂದ ಶೈತಾನನ ಮಾಲಿನ್ಯವನ್ನು ನಿವಾರಿಸಲಿಕ್ಕಾಗಿ, ನಿಮ್ಮ ಮನಸ್ಸುಗಳನ್ನು ಸ್ಥಿರಗೊಳಿಸಲಿಕ್ಕಾಗಿ ಹಾಗೂ ನಿಮ್ಮ ಹೆಜ್ಜೆಗಳನ್ನು ಭದ್ರಗೊಳಿಸುವುದಕ್ಕಾಗಿ ಅವನು ನಿಮ್ಮ ಮೇಲೆ ಆಕಾಶದಿಂದ ನೀರನ್ನು ಸುರಿಸಿದನು

[11] ಮುಂದೆ, ನಿಮ್ಮ ಒಡೆಯನು ಮಲಕ್‌ಗಳಿಗೆ – ‘‘ವಿಶ್ವಾಸಿಗಳನ್ನು ನೀವು ಸ್ಥಿರವಾಗಿಡಿರಿ, ನಾನು ಧಿಕ್ಕಾರಿಗಳ ಮನದಲ್ಲಿ ಆತಂಕವನ್ನು ಬಿತ್ತಲಿದ್ದೇನೆ, ನೀವು ಅವರ ಕೊರಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಬೆರಳ ತುದಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳುಹಿಸಿದನು

[12] ಇದೇಕೆಂದರೆ, ಅವರು (ಧಿಕ್ಕಾರಿಗಳು) ಅಲ್ಲಾಹ್ ಮತ್ತವನ ದೂತರ ವಿರೋಧಿಗಳಾಗಿದ್ದರು. ಅಲ್ಲಾಹ್ ಮತ್ತು ಅವನ ದೂತರ ವಿರೋಧಿಗಳಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ವಿಧಿಸುತ್ತಾನೆ

[13] ನೀವು ಇದನ್ನು ಸವಿಯಿರಿ. ಧಿಕ್ಕಾರಿಗಳಿಗೆ ನರಕಾಗ್ನಿಯ ಶಿಕ್ಷೆಯೇ ಗತಿ (ಎಂದು ಅವರೊಡನೆ ಹೇಳಲಾಗುವುದು)

[14] ವಿಶ್ವಾಸಿಗಳೇ, ಯುದ್ಧರಂಗದಲ್ಲಿ ನಿಮಗೆ ಧಿಕ್ಕಾರಿಗಳು ಎದುರಾದಾಗ ಅವರಿಗೆ ಬೆನ್ನು ತೋರಿಸಬೇಡಿ

[15] ಯುದ್ಧ ತಂತ್ರಕ್ಕಾಗಿ ಅಥವಾ ತನ್ನ ಪಡೆಯನ್ನು ಸೇರಿಕೊಳ್ಳುವುದಕ್ಕಾಗಿಯಲ್ಲದೆ (ಬೇರಾವುದೇ ಕಾರಣಕ್ಕಾಗಿ) ಅಂದು ಬೆನ್ನು ತೋರಿದವನು ಅಲ್ಲಾಹನ ಕೋಪವನ್ನು ಸೆಳೆದುಕೊಂಡನು ಮತ್ತು ನರಕವೇ ಅವನ ನೆಲೆಯಾಗಿರುವುದು – ಅದು ತುಂಬಾ ಕೆಟ್ಟ ನೆಲೆ

[16] (ದೂತರೇ,) ಅವರನ್ನು (ಯುದ್ಧದಲ್ಲಿ ಶತ್ರುಗಳನ್ನು) ಕೊಂದದ್ದು ನೀವಲ್ಲ. ನಿಜವಾಗಿ ಅಲ್ಲಾಹನೇ ಅವರನ್ನು ಕೊಂದಿರುವನು. ನೀವು ಅದನ್ನು (ಹಿಡಿಮಣ್ಣನ್ನು) ಎಸೆದಾಗ, ನಿಜವಾಗಿ ಅದನ್ನು ಎಸೆದವರು ನೀವಲ್ಲ – ಅಲ್ಲಾಹನೇ ಅದನ್ನು ಎಸೆದಿದ್ದನು. ಅವನು ತನ್ನ ಕಡೆಯಿಂದ, ವಿಶ್ವಾಸಿಗಳನ್ನು ಶ್ರೇಷ್ಠ ಪರೀಕ್ಷೆಗೆ ಒಳಪಡಿಸ ಬಯಸಿದ್ದನು. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[17] ಇದಲ್ಲದೆ, ಅಲ್ಲಾಹನು ಧಿಕ್ಕಾರಿಗಳ ಸಂಚುಗಳನ್ನು ಖಂಡಿತ ವಿಫಲಗೊಳಿಸುವನು

[18] ನೀವು ಬಯಸುವುದು ತೀರ್ಪನ್ನಾದರೆ, ಇದೋ ಬಂದು ಬಿಟ್ಟಿತು ನಿಮ್ಮ ಬಳಿಗೆ (ಸತ್ಯದ) ವಿಜಯ. (ಧಿಕ್ಕಾರಿಗಳೇ,) ನೀವಿನ್ನು ದೂರ ನಿಂತರೆ ಅದು ನಿಮ್ಮ ಪಾಲಿಗೇ ಉತ್ತಮ. ಒಂದು ವೇಳೆ ನೀವು (ಹಳೆಯನೀತಿಯನ್ನೇ) ಪುನರಾವರ್ತಿಸಿದರೆ, ನಾವೂ ಪುನರಾವರ್ತಿಸುವೆವು. (ಆಗ) ನಿಮ್ಮ ಪಡೆಯು ಎಷ್ಟು ದೊಡ್ಡದಿದ್ದರೂ, ನಿಮಗೇನೂ ಪ್ರಯೋಜನವಾಗದು. ಅಲ್ಲಾಹನಂತು ಖಂಡಿತ ವಿಶ್ವಾಸಿಗಳ ಜೊತೆಗಿದ್ದಾನೆ

[19] ವಿಶ್ವಾಸಿಗಳೇ, ಅಲ್ಲಾಹನ ಮತ್ತು ಅವನ ದೂತರ ಆಜ್ಞಾಪಾಲನೆ ಮಾಡಿರಿ. (ಅವರ ಆದೇಶಗಳನ್ನು) ಕೇಳುತ್ತಾ ನೀವು ಅವುಗಳನ್ನು ಕಡೆಗಣಿಸಬೇಡಿ

[20] ‘‘ನಾವು ಕೇಳಿದೆವು’’ ಎನ್ನುತ್ತಾ ನಿಜವಾಗಿ ಕೇಳದಿರುವ ಜನರಂತೆ ನೀವಾಗಬೇಡಿ

[21] (ಈ ರೀತಿ) ಕಿವುಡರೂ ಮೂಗರೂ ಆಗಿರುವವರು ಮತ್ತು ಆಲೋಚಿಸದವರೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಜೀವಿಗಳಾಗಿದ್ದಾರೆ

[22] ಅವರಲ್ಲಿ ಒಳಿತೇನಾದರೂ ಉಂಟೆಂದು ಅಲ್ಲಾಹನಿಗೆ ತಿಳಿದಿದ್ದರೆ, ಅವನು ಖಂಡಿತ ಅವರಿಗೆ ಕೇಳಿಸುತ್ತಿದ್ದನು. ಇನ್ನು ಒಂದು ವೇಳೆ ಅವನು ಅವರಿಗೆ ಕೇಳಿಸಿದರೂ ಅವರಂತು (ಸತ್ಯವನ್ನು) ಕಡೆಗಣಿಸುವವರೇ ಆಗಿದ್ದಾರೆ

[23] ವಿಶ್ವಾಸಿಗಳೇ, ಅಲ್ಲಾಹ್ ಮತ್ತವನ ದೂತರು, ನಿಮಗೆ ಬದುಕನ್ನು ಒದಗಿಸಲು ನಿಮ್ಮನ್ನು ಕರೆದಾಗ ಅವರ ಕರೆಯನ್ನು ಸ್ವೀಕರಿಸಿರಿ. – ಅಲ್ಲಾಹನು ಮಾನವ ಮತ್ತವನ ಮನಸ್ಸಿನ ನಡುವೆ ಇರುತ್ತಾನೆ ಮತ್ತು ಕೊನೆಗೆ ನಿಮ್ಮನ್ನೆಲ್ಲಾ ಅವನ ಬಳಿಯೇ ಸೇರಿಸಲಾಗುವುದು ಎಂಬುದು ನಿಮಗೆ ತಿಳಿದಿರಲಿ

[24] ಆ ಪರೀಕ್ಷೆಯ ಕುರಿತು ಎಚ್ಚರ ವಹಿಸಿರಿ – ಅದರ ಬಾಧೆಯು ಕೇವಲ ನಿಮ್ಮಲ್ಲಿನ ಅಕ್ರಮಿಗಳಿಗೆ ಮಾತ್ರ ಸೀಮಿತವಾಗಿ ಉಳಿಯದು. ತಿಳಿದಿರಲಿ, ಅಲ್ಲಾಹನು ಬಹಳ ಉಗ್ರವಾಗಿ ಶಿಕ್ಷಿಸುವವನಾಗಿದ್ದಾನೆ

[25] ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದು, ಭೂಮಿಯಲ್ಲಿ ಮರ್ದಿತರಾಗಿದ್ದಾಗ ಹಾಗೂ ಜನರು ನಿಮ್ಮನ್ನು ನಿರ್ನಾಮಗೊಳಿಸುವರೆಂದು ಅಂಜುತ್ತಿದ್ದಾಗ, ನೀವು ಕೃತಜ್ಞರಾಗಿರಬೇಕೆಂದು, ಅವನು (ಅಲ್ಲಾಹನು) ನಿಮಗೊಂದು ನೆಲೆಯನ್ನೊದಗಿಸಿದನು ಹಾಗೂ ತನ್ನ ನೆರವಿನ ಮೂಲಕ ನಿಮಗೆ ಶಕ್ತಿಯನ್ನು ನೀಡಿದನು ಮತ್ತು ನಿಮಗೆ ಶುದ್ಧ ಆಹಾರವನ್ನು ಪೂರೈಸಿದನು

[26] ವಿಶ್ವಾಸಿಗಳೇ, ಅಲ್ಲಾಹನಿಗೆ ಮತ್ತು ಅವನ ದೂತರಿಗೆ ವಿಶ್ವಾಸ ದ್ರೋಹವೆಸಗಬೇಡಿ. ಹಾಗೆಯೇ ನೀವು, ತಿಳಿದೂ ತಿಳಿದೂ ನಿಮ್ಮಲ್ಲಿ ನಂಬಿಕೆ ಇಡಲಾದ ವಿಷಯಗಳಲ್ಲಿ ವಂಚಿಸಬೇಡಿ

[27] ನಿಮಗೆ ತಿಳಿದಿರಲಿ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ನಿಜವಾಗಿ ಪರೀಕ್ಷೆಗಳಾಗಿವೆ. ಮಹಾ ಪ್ರತಿಫಲವು ಅಲ್ಲಾಹನ ಬಳಿಯಲ್ಲೇ ಇದೆ

[28] ವಿಶ್ವಾಸಿಗಳೇ, ನೀವು ಅಲ್ಲಾಹನ ಭಯವುಳ್ಳವರಾಗಿದ್ದರೆ, ಅವನು ನಿಮಗೆ (ಒಳಿತು-ಕೆಡುಕನ್ನು ಪ್ರತ್ಯೇಕಿಸಿ ತಿಳಿಸುವ) ಒರೆಗಲ್ಲನ್ನು ನೀಡುವನು ಹಾಗೂ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸಿ ನಿಮ್ಮನ್ನು ಕ್ಷಮಿಸಿಬಿಡುವನು. ಅಲ್ಲಾಹನಂತು ಅಪಾರ ಅನುಗ್ರಹಿಯಾಗಿದ್ದಾನೆ

[29] ಧಿಕ್ಕಾರಿಗಳು ನಿಮ್ಮನ್ನು ಬಂಧಿಸಲು ಅಥವಾ ನಿಮ್ಮನ್ನು ಕೊಲ್ಲಲು ಅಥವಾ ನಿಮ್ಮನ್ನು (ಮಕ್ಕಃದಿಂದ) ಹೊರಹಾಕಲು ಗುಪ್ತ ಸಂಚುಗಳನ್ನು ಹೂಡುತ್ತಿದ್ದಾಗ – ಅವರೂ ಸಂಚುಹೂಡುತ್ತಿದ್ದರು ಮತ್ತು ಅಲ್ಲಾಹನೂ ಸಂಚು ಹೂಡುತ್ತಿದ್ದನು. ಅಲ್ಲಾಹನೇ ಅತ್ಯುತ್ತಮ ಸಂಚು ಹೂಡುವವನಾಗಿದ್ದಾನೆ

[30] ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು – ನಾವು ಕೇಳಿದೆವು, ನಾವು ಬಯಸಿದರೆ ಇಂತಹದನ್ನು ನಾವೂ ಹೇಳಬಲ್ಲೆವು. ಇವೆಲ್ಲಾ ಗತಕಾಲದ ಕತೆಗಳು ಮಾತ್ರ ಎನ್ನುತ್ತಾರೆ

[31] ಮತ್ತು ಅವರು, ಓ ಅಲ್ಲಾಹ್, ನಿಜಕ್ಕೂ ಇದೆಲ್ಲಾ ನಿನ್ನ ಕಡೆಯಿಂದಿರುವ ಸತ್ಯವೆಂದಾದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸಿಬಿಡು ಅಥವಾ ನಮಗೊಂದು ಯಾತನಾಮಯ ಶಿಕ್ಷೆಯನ್ನು ತಂದುಕೊಡು – ಎನ್ನುತ್ತಾರೆ

[32] (ದೂತರೇ,) ನೀವು ಅವರ ನಡುವೆ ಇರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು – ಮತ್ತು ಅವರು ಕ್ಷಮೆಯಾಚಿಸುತ್ತಿರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು

[33] ಅವರನ್ನು ಅಲ್ಲಾಹನು ಶಿಕ್ಷಿಸಬಾರದು ಎಂದೇನೂ ಇಲ್ಲ. ಅವರು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳೇನೂ ಅಲ್ಲ. ಆದರೂ ಅವರು ಜನರನ್ನು ಅದರಿಂದ ತಡೆಯುತ್ತಾರೆ. ನಿಜವಾಗಿ, ಧರ್ಮನಿಷ್ಠರು ಮಾತ್ರ ಅದರ ಅಧಿಕಾರಿಗಳಾಗಬಲ್ಲರು – ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ

[34] ದೇವಭವನ (ಕಅ್ಬ:)ದ ಬಳಿ ಅವರ ಆರಾಧನೆಯು ಕೇವಲ ಶಿಳ್ಳು ಮತ್ತು ಚಪ್ಪಾಳೆಗೆ ಸೀಮಿತವಾಗಿತ್ತು. ನೀವು ಸತ್ಯಧಿಕ್ಕಾರಿಗಳಾಗಿದ್ದುದಕ್ಕೆ ಶಿಕ್ಷೆಯನ್ನು ಇದೀಗ ಅನುಭವಿಸಿರಿ

[35] ಧಿಕ್ಕಾರಿಗಳು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ಖಂಡಿತ ಖರ್ಚು ಮಾಡುತ್ತಿದ್ದಾರೆ. ಮುಂದೆಯೂ ಮಾಡುವರು – ಕೊನೆಗೆ ಇದೆಲ್ಲಾ ಅವರ ಪಾಲಿಗೆ ಖೇದದ ವಿಷಯವಾಗುವುದು ಹಾಗೂ ಅವರು ಸಂಪೂರ್ಣ ಸೋಲಿಸಲ್ಪಡುವರು ಮತ್ತು ಧಿಕ್ಕಾರಿಗಳನ್ನೆಲ್ಲಾ ನರಕದಲ್ಲಿ ಒಟ್ಟುಸೇರಿಸಲಾಗುವುದು

[36] ಅಲ್ಲಾಹನು ಅಶುದ್ಧವನ್ನು ಶುದ್ಧದಿಂದ ಪ್ರತ್ಯೇಕಿಸುವಂತಾಗಲಿಕ್ಕಾಗಿ ಮತ್ತು ಅಶುದ್ಧರನ್ನು ಒಬ್ಬರ ಮೇಲೊಬ್ಬರಂತೆ ಎಸೆದು ಅವರನ್ನೆಲ್ಲಾ ಒಂದು ರಾಶಿಯಾಗಿಸಿ ನರಕಕ್ಕೆ ಕಳಿಸಲಿಕ್ಕಾಗಿ. ಅವರೇ ನಿಜಕ್ಕೂ ನಷ್ಟ ಅನುಭವಿಸುವವರು

[37] ಧಿಕ್ಕಾರಿಗಳೊಡನೆ, ಅವರು (ದುರ್ಮಾರ್ಗದಿಂದ) ಹಿಂಜರಿದರೆ, ಹಿಂದೆ ನಡೆದುದೆಲ್ಲವನ್ನೂ ಅವರ ಪಾಲಿಗೆ ಕ್ಷಮಿಸಲಾಗುವುದೆಂದು ಹೇಳಿರಿ. ಇನ್ನು, ಅವರು (ಹಿಂದಿನ ತಪ್ಪನ್ನೇ) ಪುನರಾವರ್ತಿಸಿದರೆ, ಗತಕಾಲದವರಿಗೆ ಒದಗಿದ ಗತಿಯು (ಅವರ ಮುಂದಿದೆ)

[38] ಮರ್ದನವು ಇಲ್ಲವಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಹೋರಾಡಿರಿ. ಇನ್ನು ಅವರು (ಮರ್ದನದಿಂದ) ದೂರ ಉಳಿದರೆ, ಅಲ್ಲಾಹನಂತು ಅವರು ಮಾಡುತ್ತಿರುವುದನ್ನೆಲ್ಲಾ ನೋಡುತ್ತಿದ್ದಾನೆ

[39] ಒಂದು ವೇಳೆ ಅವರು ಮುಖ ತಿರುಗಿಸಿಕೊಂಡರೆ, ನಿಮಗೆ ತಿಳಿದಿರಲಿ – ಅಲ್ಲಾಹನೇ ನಿಮ್ಮ ಪೋಷಕನು. ಅವನು ಅತ್ಯುತ್ತಮ ಪೋಷಕನು ಮತ್ತು ಅತ್ಯುತ್ತಮ ಸಹಾಯಕನು

[40] ನಿಮಗೆ ತಿಳಿದಿರಲಿ, ನಿಮ್ಮ ಯುದ್ಧ ಸಂಪತ್ತಿನಲ್ಲಿ ಐದನೇ ಒಂದು ಭಾಗವು ಅಲ್ಲಾಹನಿಗೆ, (ಅವನ) ದೂತರಿಗೆ, (ನಿಮ್ಮ) ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ. ನೀವು ಅಲ್ಲಾಹನಲ್ಲಿ ನಂಬಿಕೆ ಉಳ್ಳವರಾಗಿದ್ದರೆ ಮತ್ತು (ಸತ್ಯ-ಮಿಥ್ಯಗಳ) ಪ್ರತ್ಯೇಕತೆಯ ದಿನ ಹಾಗೂ ಎರಡು ಪಡೆಗಳು ಎದುರುಗೊಂಡ (ಬದ್ರ್‌ಯುದ್ಧದ) ದಿನ ನಾವು ನಮ್ಮ ದಾಸನಿಗೆ ನೀಡಿದ್ದರಲ್ಲಿ (ದಿವ್ಯ ಸಹಾಯದಲ್ಲಿ) ನಂಬಿಕೆ ಉಳ್ಳವರಾಗಿದ್ದರೆ (ಈ ನಿಯಮವನ್ನು ಪಾಲಿಸಿರಿ). ಅಲ್ಲಾಹನು ಎಲ್ಲವನ್ನೂ ಮಾಡಬಲ್ಲನು

[41] (ವಿಶ್ವಾಸಿಗಳೇ,) ಅಂದು ನೀವು (ಬದ್ರ್ ಮೈದಾನದ) ಒಂದು ಕೊನೆಯಲ್ಲಿದ್ದರೆ, ಅವರು (ಶತ್ರು ಪಡೆ) ಇನ್ನೊಂದು ಕೊನೆಯಲ್ಲಿದ್ದರು ಮತ್ತು ವ್ಯಾಪಾರ ತಂಡವು ನಿಮಗಿಂತ ತಗ್ಗು ಪ್ರದೇಶದಲ್ಲಿತ್ತು. ಒಂದು ವೇಳೆ ನೀವು (ಮುಖಾಮುಖಿಗೆ) ಕಾಲ ನಿಶ್ಚಯಿಸಲು ಹೊರಟಿದ್ದರೆ ನಿಶ್ಚಿತ ಕಾಲದ ಕುರಿತು ಭಿನ್ನತೆ ತಾಳುತ್ತಿದ್ದಿರಿ. ಆದರೆ ನಾಶವಾಗುವವನು ಸ್ಪಷ್ಟ ಪುರಾವೆಯೊಂದಿಗೆ ನಾಶವಾಗಬೇಕು ಮತ್ತು ಬದುಕಿ ಉಳಿಯುವವನು ಸ್ಪಷ್ಟ ಪುರಾವೆಯೊಂದಿಗೆ ಬದುಕಿ ಉಳಿಯಬೇಕೆಂಬ ತನ್ನ ನಿರ್ಧಾರವನ್ನು ಅಲ್ಲಾಹನು ಸಾಧಿಸಿ ತೋರಿಸ ಬಯಸಿದ್ದನು. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ

[42] (ದೂತರೇ,) ಅಲ್ಲಾಹನು ನಿಮಗೆ ನಿಮ್ಮ ಕನಸಿನಲ್ಲಿ ಅವರನ್ನು (ಶತ್ರು ಪಡೆಯನ್ನು) ಕಡಿಮೆಯಾಗಿ ಕಾಣಿಸಿದ್ದನು – ಒಂದು ವೇಳೆ ಅವನು ನಿಮಗೆ, ಅವರನ್ನು ಬಹಳವಾಗಿ ಕಾಣಿಸಿದ್ದರೆ ನೀವೆಲ್ಲಾ ಹಿಂಜರಿಯುತ್ತಿದ್ದಿರಿ ಮತ್ತು ಆ (ಯುದ್ಧದ) ವಿಷಯದಲ್ಲಿ ಭಿನ್ನಮತ ತಾಳುತ್ತಿದ್ದಿರಿ. ಆದರೆ ಅಲ್ಲಾಹನು ರಕ್ಷಿಸಿದನು. ಖಂಡಿತವಾಗಿಯೂ ಅವನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ

[43] ಮುಂದೆ, ನೀವು ಪರಸ್ಪರ ಎದುರಾದಾಗಲೂ, ಅವನು ನಿಮ್ಮ ಕಣ್ಣುಗಳಿಗೆ ಅವರನ್ನು ಕಡಿಮೆಯಾಗಿ ಕಾಣಿಸಿದನು ಮತ್ತು ಅವರ ಕಣ್ಣುಗಳಿಗೆ ನಿಮ್ಮನ್ನು ಕಡಿಮೆಯಾಗಿ ಕಾಣಿಸಿದನು. ಏಕೆಂದರೆ ಅಲ್ಲಾಹನ ತೀರ್ಮಾನವು ಅನುಷ್ಠಾನವಾಗಲೇಬೇಕು. ಕೊನೆಗೆ ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳುತ್ತವೆ

[44] ವಿಶ್ವಾಸಿಗಳೇ, ನೀವು ಯಾವುದೇ ಪಡೆಯನ್ನು ಎದುರಿಸಿದಾಗ, ಸ್ಥಿರವಾಗಿರಿ ಮತ್ತು ನೀವು ವಿಜಯಿಗಳಾಗಲು, ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ

[45] ಹಾಗೆಯೇ, ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ಪರಸ್ಪರ ಜಗಳಗಳಲ್ಲಿ ನಿರತರಾಗಬೇಡಿ. ಅನ್ಯಥಾ, ನಿಮ್ಮ ಧೈರ್ಯ ಕುಂದುವುದು ಮತ್ತು ನಿಮ್ಮ ಶಕ್ತಿಯು ನಷ್ಟವಾಗುವುದು. ನೀವು ಸಹನಶೀಲರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಸಹನ ಶೀಲರ ಜೊತೆಗಿರುತ್ತಾನೆ

[46] ನೀವು, ಜನರಿಗೆ ತೋರಿಸುವುದಕ್ಕಾಗಿ ಆಡಂಬರದಿಂದ ತಮ್ಮ ಮನೆಯಿಂದ ಹೊರಟವರು ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವವರಂತಾಗಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಆವರಿಸಿಕೊಂಡಿದ್ದಾನೆ

[47] ಶೈತಾನನು ಅವರ ಕರ್ಮಗಳನ್ನು ಅವರಿಗೆ ಚಂದಗಾಣಿಸಿರುವನು ಮತ್ತು ‘‘ಇಂದು ಮಾನವರ ಪೈಕಿ ಯಾರೂ ನಿಮ್ಮನ್ನು ಸೋಲಿಸಲಾರರು ಹಾಗೂ ಖಂಡಿತವಾಗಿಯೂ ನಾನು ನಿಮ್ಮ ಜೊತೆಗಿರುವೆನು’’ ಎಂದು ಹೇಳಿರುವನು. ಮುಂದೆ, ಎರಡು ಪಡೆಗಳು ಎದುರುಗೊಂಡಾಗ ಅವನು ತಿರುಗಿನಿಂತನು ಮತ್ತು ‘‘ನಾನು ನಿಮ್ಮಿಂದ ಸಂಪೂರ್ಣ ಮುಕ್ತನು. ನೀವು ಕಾಣದನ್ನು ನಾನು ಕಾಣುತ್ತಿದ್ದೇನೆ. ನಾನಂತು ಖಂಡಿತ ಅಲ್ಲಾಹನಿಗೆ ಅಂಜುತ್ತೇನೆ. ಅಲ್ಲಾಹನು ತುಂಬಾ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ’’ ಎಂದನು

[48] ಕಪಟಿಗಳು ಹಾಗೂ ಮನಗಳಲ್ಲಿ ರೋಗ ಉಳ್ಳವರು (ಧರ್ಮ ನಿಷ್ಠರ ಕುರಿತು) ‘‘ಅವರನ್ನು ಅವರ ಧರ್ಮವು ಮರುಳು ಗೊಳಿಸಿಬಿಟ್ಟಿದೆ’’ ಎನ್ನುತ್ತಾರೆ. ಅಲ್ಲಾಹನಲ್ಲಿ ಭರವಸೆ ಇಟ್ಟವನು ತಿಳಿದಿರಲಿ – ಖಂಡಿತವಾಗಿಯೂ ಅಲ್ಲಾಹನು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿರುತ್ತಾನೆ

[49] ‘ಮಲಕ್’ಗಳು ಧಿಕ್ಕಾರಿಗಳ ಪ್ರಾಣತೆಗೆಯುವುದನ್ನು ನೀವು ನೋಡಿದ್ದರೆ (ಚೆನ್ನಾಗಿರುತ್ತಿತ್ತು.) ಅವರು (ಮಲಕ್‌ಗಳು) ‘‘ಸವಿಯಿರಿ, ಭುಗಿಲೇಳುವ ನರಕಾಗ್ನಿಯ ಹಿಂಸೆಯನ್ನು’’ ಎನ್ನುತ್ತಾ ಅವರ ಮುಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಿರುತ್ತಾರೆ

[50] ‘‘ನಿಮ್ಮ ಕೈಗಳು ಸಂಪಾದಿಸಿ ಕಳಿಸಿರುವುದು ಇದನ್ನೇ. ಅಲ್ಲಾಹನಂತು ಖಂಡಿತ ತನ್ನ ದಾಸರ ಮೇಲೆ ಅನ್ಯಾಯ ಎಸಗುವವನಲ್ಲ’’ (ಎಂದು ಅವರೊಡನೆ ಹೇಳಲಾಗುವುದು)

[51] ಅವರ ಸ್ಥಿತಿಯು ಫಿರ್‌ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ಅಲ್ಲಾಹನ ಸೂಚನೆಗಳನ್ನು ಧಿಕ್ಕರಿಸಿದ್ದರು ಮತ್ತು ಅವರ ಪಾಪಗಳ ಕಾರಣ ಅಲ್ಲಾಹನು ಅವರನ್ನು ಹಿಡಿದನು. ಖಂಡಿತವಾಗಿಯೂ ಅಲ್ಲಾಹನು ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಬಹಳ ಕಠಿಣವಾಗಿ ಹಿಡಿಯುವವನಾಗಿದ್ದಾನೆ

[52] ಇದೇಕೆಂದರೆ, ಒಂದು ಜನಾಂಗವು ತಾನೇ ತನ್ನ ಅಂತರಂಗವನ್ನು ಬದಲಿಸುವ ತನಕ ಅಲ್ಲಾಹನು ಆ ಜನಾಂಗಕ್ಕೆ ತಾನು ನೀಡಿರುವ ಅನುಗ್ರಹವನ್ನು ಬದಲಿಸುವುದಿಲ್ಲ. ಅಲ್ಲಾಹನು ಎಲ್ಲವನ್ನೂ ಕೇಳುವವನೂ ಅರಿತಿರುವವನೂ ಆಗಿದ್ದಾನೆ

[53] ಅವರ ಸ್ಥಿತಿಯು ಫಿರ್‌ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ತಮ್ಮ ಒಡೆಯನ ಸೂಚನೆಗಳನ್ನು ಧಿಕ್ಕರಿಸಿದರು. ಕೊನೆಗೆ ಅವರ ಪಾಪಗಳ ಕಾರಣ ನಾವು ಅವರನ್ನು ನಾಶಗೊಳಿಸಿದೆವು ಮತ್ತು ಫಿರ್‌ಔನನ ಜನರನ್ನು ಮುಳುಗಿಸಿ ಬಿಟ್ಟೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು

[54] ಖಂಡಿತವಾಗಿಯೂ, ಧಿಕ್ಕಾರಿಗಳೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನೀಚ ಜೀವಿಗಳಾಗಿದ್ದಾರೆ. ಅವರು (ಸತ್ಯವನ್ನು) ನಂಬುವುದಿಲ್ಲ

[55] ನೀವು ಅವರಿಂದ ಕರಾರನ್ನು ಪಡೆದಿರುವಿರಿ. ಆದರೆ ಪ್ರತಿಬಾರಿಯೂ ಅವರು ತಮ್ಮ ಕರಾರನ್ನು ಮುರಿದು ಹಾಕುತ್ತಾರೆ. ಅವರು (ಅಲ್ಲಾಹನಿಗೆ) ಅಂಜುವುದಿಲ್ಲ

[56] ಅವರು ಯುದ್ಧದಲ್ಲಿ ನಿಮ್ಮ ವಶಕ್ಕೆ ಸಿಕ್ಕಿದರೆ, ಅವರ ಮೂಲಕ, ಅವರ ಹಿಂದಿರುವ ಇತರರಿಗೆ ಪಾಠವಾಗುವಂತೆ ಅವರ ಜೊತೆ ವ್ಯವಹರಿಸಿರಿ – ಅವರು ಪಾಠಕಲಿಯಬಹುದು

[57] ಯಾವುದಾದರೂ ಜನಾಂಗದಿಂದ ನಿಮಗೆ ಮೋಸದ ಭಯವಿದ್ದರೆ, ಸಮಾನ ಪ್ರತಿಕ್ರಮವಾಗಿ (ಅವರ ಸಂಧಾನವನ್ನು) ಅವರೆಡೆಗೆ ಎಸೆದು ಬಿಡಿರಿ. ಖಂಡಿತವಾಗಿಯೂ ಅಲ್ಲಾಹನು ವಂಚಕರನ್ನು ಮೆಚ್ಚುವುದಿಲ್ಲ

[58] ತಾವು ಗೆದ್ದುಬಿಟ್ಟೆವೆಂದು ಧಿಕ್ಕಾರಿಗಳು ಭಾವಿಸದಿರಲಿ. ಖಂಡಿತವಾಗಿಯೂ (ಸತ್ಯ ಧರ್ಮವನ್ನು) ಅವರೆಂದೂ ಸೋಲಿಸಲಾರರು

[59] ನೀವು ಅವರನ್ನು ಎದುರಿಸಲು, ನಿಮಗೆ ಸಾಧ್ಯವಿರುವಷ್ಟು ಶಕ್ತಿಯೊಂದಿಗೆ ಹಾಗೂ ಪಳಗಿದ ಕುದುರೆಗಳೊಂದಿಗೆ ಸದಾ ಸನ್ನದ್ಧರಾಗಿರಿ. ಈ ಮೂಲಕ ನೀವು ಅಲ್ಲಾಹನ ಶತ್ರುಗಳನ್ನು, ನಿಮ್ಮ ಶತ್ರುಗಳನ್ನು ಮತ್ತು ಅವರಲ್ಲದೆ – ನಿಮಗೆ ತಿಳಿದಿಲ್ಲದ ಹಾಗೂ ಅಲ್ಲಾಹನಿಗೆ ತಿಳಿದಿರುವ ಇತರರನ್ನು (ಇತರ ಶತ್ರುಗಳನ್ನು) – ಹೆದರಿಸಬಹುದು. ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು ಮತ್ತು ನಿಮಗೆ ಕಿಂಚಿತ್ತೂ ಅನ್ಯಾಯವಾಗದು

[60] (ದೂತರೇ,) ಒಂದು ವೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[61] ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೂ ನಿಮಗೆ (ನಿಮ್ಮ ನೆರವಿಗೆ)ಖಂಡಿತವಾಗಿಯೂ ಅಲ್ಲಾಹನೇ ಸಾಕು. ನಿಮಗೆ, ತನ್ನ ನೆರವಿನ ಮೂಲಕ ಹಾಗೂ ವಿಶ್ವಾಸಿಗಳ ಮೂಲಕ ಸದಾ ಬಲ ಒದಗಿಸುತ್ತಾ ಬಂದಿರುವವನು ಅವನೇ

[62] ಮತ್ತು ಅವರ (ವಿಶ್ವಾಸಿಗಳ) ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಿದವನೂ ಅವನೇ. ನೀವು ಭೂಮಿಯಲ್ಲಿನ ಸಂಪೂರ್ಣ ಸಂಪತ್ತನ್ನು ವ್ಯಯಿಸಿದ್ದರೂ ಅವರ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ನಿಜಕ್ಕೂ ಅಲ್ಲಾಹನೇ ಅವರ ನಡುವೆ ಪ್ರೀತಿಯನ್ನು ಬೆಳೆಸಿದನು. ಖಂಡಿತವಾಗಿಯೂ ಅವನು ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿರುವನು

[63] ದೂತರೇ, ನಿಮಗೆ ಮತ್ತು ನಿಮ್ಮ ಅನುಯಾಯಿಗಳಾಗಿರುವ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು

[64] ದೂತರೇ, ವಿಶ್ವಾಸಿಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ನೂರು ಜನರಿದ್ದರೆ, ಅವರು ಸಾವಿರ ಧಿಕ್ಕಾರಿಗಳನ್ನು ಸೋಲಿಸುವರು – ಏಕೆಂದರೆ ಅವರು (ಧಿಕ್ಕಾರಿಗಳು) ತಿಳುವಳಿಕೆ ಇಲ್ಲದವರಾಗಿದ್ದಾರೆ

[65] ಇದೀಗ ಅಲ್ಲಾಹನು ನಿಮ್ಮ ಹೊಣೆಯನ್ನು ಹಗುರಗೊಳಿಸುತ್ತಾನೆ – ನಿಮ್ಮಲ್ಲಿ ದೌರ್ಬಲ್ಯವಿರುವುದನ್ನು ಅವನು ಬಲ್ಲನು. ನಿಮ್ಮಲ್ಲಿ ನೂರು ಜನ ಸಹನಶೀಲರಿದ್ದರೆ, ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ಸಾವಿರ ಜನರಿದ್ದರೆ ಅವರು ಅಲ್ಲಾಹನ ಸಮ್ಮತಿಯಿಂದ ಎರಡು ಸಾವಿರ ಮಂದಿಯನ್ನು ಸೋಲಿಸುವರು. ಅಲ್ಲಾಹನು ಸಹನ ಶೀಲರ ಜೊತೆಗಿದ್ದಾನೆ

[66] ಭೂಮಿಯಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸುವ ತನಕ, ತನ್ನ ಬಳಿಯಲ್ಲಿ ಕೈದಿಗಳನ್ನು ಇಟ್ಟುಕೊಳ್ಳುವುದು ಒಬ್ಬ ದೂತನಿಗೆ ಭೂಷಣವಲ್ಲ. ನೀವು (ಜನರು) ಇಹಲೋಕದ ಲಾಭವನ್ನು ಬಯಸುತ್ತೀರಿ. ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹನು ಬಹಳ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[67] ಅಲ್ಲಾಹನ ಕಡೆಯಿಂದ ಮೊದಲೇ ಲಿಖಿತ ತೀರ್ಮಾನವೊಂದು ಇಲ್ಲದಿರುತ್ತಿದ್ದರೆ, ನೀವು (ಕೈದಿಗಳನ್ನು) ಇಟ್ಟುಕೊಂಡಿದ್ದಕ್ಕಾಗಿ ಒಂದು ಭಾರೀ ಶಿಕ್ಷೆಯು ನಿಮ್ಮನ್ನು ಆವರಿಸುತ್ತಿತ್ತು

[68] ಇದೀಗ ಯುದ್ಧ ಸಂಪಾದನೆಯಾಗಿ ನಿಮಗೆ ದೊರೆತಿರುವುದಲ್ಲಿ ಸಮ್ಮತ ಹಾಗೂ ಶುದ್ಧವಾಗಿರುವುದನ್ನು ತಿನ್ನಿರಿ. ಜೊತೆಗೆ ಅಲ್ಲಾಹನಿಗೆ ಅಂಜುತ್ತಲಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[69] ದೂತರೇ, ನಿಮ್ಮ ಕೈಯಲ್ಲಿ ಕೈದಿಗಳಾಗಿರುವವರೊಡನೆ, ಹೇಳಿರಿ; ‘‘ನಿಮ್ಮ ಮನಸ್ಸುಗಳಲ್ಲಿ ಒಳಿತೇನಾದರೂ ಇರುವುದನ್ನು ಅಲ್ಲಾಹನು ಗುರುತಿಸಿದರೆ, ನಿಮ್ಮಿಂದ ಏನನ್ನು ಪಡೆಯಲಾಗಿದೆಯೋ ಅದಕ್ಕಿಂತ ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮತ್ತು ಅವನು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[70] ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೆ, (ನಿಮಗೆ ತಿಳಿದಿರಲಿ;) ಈ ಹಿಂದೆ ಅವರು ಅಲ್ಲಾಹನನ್ನು ವಂಚಿಸಿರುವರು. ಕೊನೆಗೆ, ಅವನು ಅವರನ್ನು ನಿಮ್ಮ ವಶಕ್ಕೆ ಕೊಟ್ಟನು. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[71] ಖಂಡಿತವಾಗಿಯೂ, ವಿಶ್ವಾಸಿಗಳು, ವಲಸಿಗರು ಮತ್ತು ತಮ್ಮ ಸಂಪತ್ತುಗಳೊಂದಿಗೆ ಹಾಗೂ ತಮ್ಮ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು, ಆಶ್ರಯ ಒದಗಿಸಿದವರು ಮತ್ತು ನೆರವಾದವರು – ಅವರೇ ಪರಸ್ಪರ ಆಪ್ತಮಿತ್ರರು. ಇನ್ನು, ವಿಶ್ವಾಸಿಗಳಾಗಿದ್ದರೂ ವಲಸೆ ಹೋಗದವರು – ವಲಸೆ ಹೋಗುವ ತನಕ ಅವರ ಜೊತೆ ನಿಮಗೆ ಯಾವ ನಂಟೂ ಇಲ್ಲ. ಇನ್ನು ಅವರು ಧರ್ಮದ ವಿಷಯದಲ್ಲಿ ನಿಮ್ಮ ನೆರವು ಬಯಸಿದರೆ, ನೆರವು ನೀಡುವುದು ನಿಮ್ಮ ಕರ್ತವ್ಯವಾಗಿದೆ – ಆದರೆ, ಯಾವ ಜನಾಂಗದ ಹಾಗೂ ನಿಮ್ಮ ನಡುವೆ ಕರಾರು ಇದೆಯೋ ಅವರ ವಿರುದ್ಧವಲ್ಲ. ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ

[72] ಧಿಕ್ಕಾರಿಗಳು ಪರಸ್ಪರರ ಪೋಷಕರಾಗಿರುತ್ತಾರೆ. ನೀವು ಹಾಗೆ ಮಾಡದಿದ್ದರೆ ಭೂಮಿಯಲ್ಲಿ ವ್ಯಾಪಕ ಗೊಂದಲ ಹಾಗೂ ಭಾರೀ ಅಶಾಂತಿ ಉಂಟಾಗುವುದು

[73] ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಹಾಗೂ ಹೋರಾಡಿದವರು ಮತ್ತು ಆಶ್ರಯ ನೀಡಿದವರು ಹಾಗೂ ನೆರವಾದವರು – ಅವರೇ ನೈಜ ವಿಶ್ವಾಸಿಗಳು. ಅವರಿಗೆ ಕ್ಷಮೆ ಇದೆ ಹಾಗೂ ಗೌರವಾನ್ವಿತ ಆಹಾರ ಸಿಗಲಿದೆ

[74] ಆ ಬಳಿಕ ವಿಶ್ವಾಸಿಗಳಾದವರು, ವಲಸೆ ಹೋದವರು ಮತ್ತು ನಿಮ್ಮ ಜೊತೆ ಸೇರಿ ಹೋರಾಡಿದವರು – ಅವರೇ ನಿಮ್ಮವರು. ಆದರೆ ಅಲ್ಲಾಹನ ಗ್ರಂಥದ ಪ್ರಕಾರ, ರಕ್ತ ಸಂಬಂಧಿಗಳು ಪರಸ್ಪರ ಹೆಚ್ಚಿನ ಹಕ್ಕುದಾರರಾಗಿರುತ್ತಾರೆ. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ

[75] (ಬಹು ದೇವಾರಾಧಕರೇ,) ನಾಲ್ಕು ತಿಂಗಳ ಕಾಲ ನೀವು ಭೂಮಿಯಲ್ಲಿ ಧಾರಾಳ ತಿರುಗಾಡಿರಿ. ಆದರೆ ನಿಮಗೆ ತಿಳಿದಿರಲಿ – ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ನಿಜವಾಗಿ ಅಲ್ಲಾಹನೇ ಧಿಕ್ಕಾರಿಗಳನ್ನು ಅಪಮಾನಿತರಾಗಿಸಲಿದ್ದಾನೆ

ಪಶ್ಚಾತ್ತಾಪ

Surah 9

[1] ಮಹಾನ್ ಹಜ್ಜ್ ಯಾತ್ರೆಯ ದಿನ, ಅಲ್ಲಾಹ್ ಮತ್ತು ಅವನ ದೂತರ ಕಡೆಯಿಂದ, ಸಕಲ ಮಾನವರಿಗಾಗಿರುವ ಘೋಷಣೆ ಇದು; ಬಹುದೇವಾರಾಧಕರ ವಿಷಯದಲ್ಲಿ ಅಲ್ಲಾಹ್ ಮತ್ತು ಅವನ ದೂತರು ಹೊಣೆ ಮುಕ್ತರು. ನೀವೀಗ ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಉತ್ತಮ. ಇನ್ನು ನೀವು ಕಡೆಗಣಿಸುವಿರಾದರೆ, ನಿಮಗೆ ತಿಳಿದಿರಲಿ; ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ

[2] ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ

[3] (ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ. ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[4] ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ. ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು

[5] ನೀವು ‘ಮಸ್ಜಿದುಲ್ ಹರಾಮ್’ನಲ್ಲಿ ಕರಾರು ಮಾಡಿಕೊಂಡಿರುವವರ ಹೊರತು (ಇತರ) ಬಹುದೇವಾರಾಧಕರಿಗೆ ಅಲ್ಲಾಹನ ಜೊತೆಗಾಗಲಿ ಅವನ ದೂತರ ಜೊತೆಗಾಗಲಿ ಯಾವುದೇ ಕರಾರು ಇರಲು ಹೇಗೆ ತಾನೇ ಸಾಧ್ಯ? ಅವರು ನಿಮ್ಮ ಜೊತೆ ನೇರವಾಗಿರುವ ತನಕ ನೀವು ಅವರ ಜೊತೆ ನೇರವಾಗಿರಿ. ಖಂಡಿತವಾಗಿಯೂ ಅಲ್ಲಾಹನು, ಸತ್ಯನಿಷ್ಠರನ್ನು ಪ್ರೀತಿಸುತ್ತಾನೆ

[6] ಹೇಗಿದೆ (ಅವರ ಈ ಧೋರಣೆ)? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ಸಿಕ್ಕಿದರೆ ಅವರು ನಿಮ್ಮ ಜೊತೆಗಿನ ಬಾಂಧವ್ಯವನ್ನಾಗಲಿ, ಕರಾರನ್ನಾಗಲಿ ಲೆಕ್ಕಿಸುವವರಲ್ಲ. ಅವರು ಕೇವಲ ತಮ್ಮ ಮಾತುಗಳಿಂದ ನಿಮ್ಮನ್ನು ಒಲಿಸಿಕೊಳ್ಳುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರಲ್ಲಿ ಹೆಚ್ಚಿನವರು ವಚನ ಭ್ರಷ್ಟರಾಗಿದ್ದಾರೆ

[7] ಅವರು ಅಲ್ಲಾಹನ ವಚನಗಳನ್ನು ತೀರಾ ಸಣ್ಣ ಬೆಲೆಗೆ ಮಾರುತ್ತಾರೆ ಮತ್ತು (ಜನರನ್ನು) ಅವನ ಮಾರ್ಗದಿಂದ ತಡೆಯುತ್ತಾರೆ. ಖಂಡಿತವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದಾಗಿದೆ

[8] ಯಾವುದೇ ವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಕರಾರನ್ನಾಗಲಿ ಲೆಕ್ಕಿಸುವುದಿಲ್ಲ. ಅವರೇ ನಿಜವಾಗಿ ಎಲ್ಲೆ ಮೀರುವವರು

[9] ಇಷ್ಟಾಗಿಯೂ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸಿದರೆ ಮತ್ತು ಝಕಾತ್ ಅನ್ನು ಪಾವತಿಸಿದರೆ, ಅವರು ಧರ್ಮದಲ್ಲಿ ನಿಮ್ಮ ಸಹೋದರರು. ನಾವಂತು, ಅರಿಯುವವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ

[10] ಇನ್ನು ಅವರು, ಕರಾರು ಮಾಡಿಕೊಂಡ ಬಳಿಕ ತಮ್ಮ ಪ್ರತಿಜ್ಞೆಗಳನ್ನು ಮುರಿದರೆ ಮತ್ತು ಧರ್ಮದ ವಿಷಯದಲ್ಲಿ ನಿಮ್ಮನ್ನು ನಿಂದಿಸಿದರೆ, ಸತ್ಯಧಿಕ್ಕಾರದ ನೇತಾರರ ವಿರುದ್ಧ ಸಮರ ಹೂಡಿರಿ. ಅವರ ಪ್ರತಿಜ್ಞೆಗಳಂತು ಖಂಡಿತ ನಂಬಲರ್ಹವಲ್ಲ. (ಯುದ್ಧಕ್ಕೆ ಅಂಜಿ) ಅವರು ದೂರ ಉಳಿಯಬಹುದು

[11] ನೀವೇನು, ತಮ್ಮ ಕರಾರನ್ನು ಮುರಿದ ಹಾಗೂ ದೇವದೂತರನ್ನು (ನಾಡಿನಿಂದ) ಹೊರ ಹಾಕಲು ನಿರ್ಧರಿಸಿದ ಹಾಗೂ ನಿಮಗಿಂತ ಮೊದಲು ತಾವೇ (ಆಕ್ರಮಣ) ಆರಂಭಿಸಿದ ಜನರ ವಿರುದ್ಧ ಯುದ್ಧ ಮಾಡುವುದಿಲ್ಲವೇ? ನೀವೇನು ಅವರಿಗೆ ಅಂಜುವಿರಾ? ನಿಜವಾಗಿ, ನೀವು ವಿಶ್ವಾಸಿಗಳಾಗಿದ್ದರೆ, ನಿಮ್ಮ ಅಂಜಿಕೆಗೆ ಅಲ್ಲಾಹನೇ ಹೆಚ್ಚು ಅರ್ಹನು

[12] ನೀವು ಅವರ (ಶತ್ರು ಪಡೆಗಳ) ವಿರುದ್ಧ ಹೋರಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು ಮತ್ತು ಅವರನ್ನು ಅಪಮಾನಿಸುವನು. ಹಾಗೆಯೇ ಅವನು ಅವರ ವಿರುದ್ಧ ನಿಮಗೆ ನೆರವಾಗುವನು ಮತ್ತು ವಿಶ್ವಾಸಿಗಳ ಮನಸ್ಸುಗಳನ್ನು ತಣಿಸಿಬಿಡುವನು

[13] ಅವನು ಅವರ ಮನಸ್ಸುಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಇನ್ನು, ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಅರಿವುಳ್ಳವನೂ ಯುಕ್ತಿವಂತನೂ ಆಗಿರುತ್ತಾನೆ

[14] ಅಲ್ಲಾಹನು, ನಿಮ್ಮ ಪೈಕಿ ಹೋರಾಡುವವರು ಯಾರು ಮತ್ತು ಅಲ್ಲಾಹ್, ಅವನ ದೂತ ಹಾಗೂ ವಿಶ್ವಾಸಿಗಳ ಹೊರತು ಯಾರನ್ನೂ ತಮ್ಮ ಪೋಷಕರಾಗಿಸಿಕೊಳ್ಳದವರು ಯಾರು, ಎಂಬುದನ್ನು ಅರಿಯದೆಯೇ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ನಂಬಿರುವಿರಾ? ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು

[15] ಬಹುದೇವಾರಾಧಕರು, ತಾವು ದೇವ ಧಿಕ್ಕಾರಿಗಳೆಂಬುದಕ್ಕೆ ತಾವೇ ಸಾಕ್ಷಿಗಳಾಗಿರುವಾಗ, ಅಲ್ಲಾಹನ ಭವನಗಳ (ಮಸೀದಿಗಳ) ಅಧಿಕಾರಿಗಳಾಗಲು ಅವರು ಅರ್ಹರಲ್ಲ. ಅವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರು ನರಕಾಗ್ನಿಯಲ್ಲಿ ಸದಾಕಾಲ ಇರುವರು

[16] ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರು, ನಮಾಝ್‌ಅನ್ನು ಪಾಲಿಸುವವರು, ಝಕಾತ್‌ಅನ್ನು ಪಾವತಿಸುವವರು ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಅಂಜದವರು ಮಾತ್ರ ಅಲ್ಲಾಹನ ಭವನಗಳ ಅಧಿಕಾರಿಗಳಾಗಬಲ್ಲರು. ಅಂಥವರು ಸರಿದಾರಿಯಲ್ಲಿರುವರೆಂದು ನಿರೀಕ್ಷಿಸಬಹುದು

[17] ನೀವೇನು, ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದು ಮತ್ತು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳಾಗಿರುವುದು (ಇಷ್ಟನ್ನು ಮಾಡಿದವನು)- ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ವಿಶ್ವಾಸ ವಿಟ್ಟಾತನಿಗೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದಾತನಿಗೆ ಸಮಾನನೆಂದು ನಂಬಿರುವಿರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಾಗಲಾರವು. ಅಲ್ಲಾಹನಂತು, ಅಕ್ರಮಿಗಳಿಗೆ ಮಾರ್ಗದರ್ಶನ ನೀಡುವುದಿಲ್ಲ

[18] ವಿಶ್ವಾಸವಿಟ್ಟವರು, ವಲಸೆ ಹೋದವರು ಮತ್ತು ತಮ್ಮ ಸಂಪತ್ತು ಹಾಗೂ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು – ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನವಿದೆ. ಅವರೇ ನಿಜವಾಗಿ ವಿಜಯಿಗಳು

[19] ಅವರ ಒಡೆಯನು ಅವರಿಗೆ ತನ್ನ ವತಿಯಿಂದ ಅನುಗ್ರಹದ, ಮೆಚ್ಚುಗೆಯ ಹಾಗೂ ಸ್ವರ್ಗೋದ್ಯಾನಗಳ ಶುಭವಾರ್ತೆ ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಕೊಡುಗೆಗಳಿವೆ

[20] ಅವರು ಸದಾಕಾಲ ಅದರಲ್ಲಿರುವರು. ಖಂಡಿತವಾಗಿಯೂ ಅಲ್ಲಾಹನ ಬಳಿ ಮಹಾನ್ ಪ್ರತಿಫಲವಿದೆ

[21] ವಿಶ್ವಾಸಿಗಳೇ, ನಿಮ್ಮ ತಂದೆ – ತಾತಂದಿರು ಮತ್ತು ನಿಮ್ಮ ಸಹೋದರರು, ವಿಶ್ವಾಸಕ್ಕೆದುರಾಗಿ ಧಿಕ್ಕಾರವನ್ನೇ ಪ್ರೀತಿಸುವವರಾಗಿದ್ದರೆ, ಅವರನ್ನು ನೀವು ನಿಮ್ಮ ಪೋಷಕರಾಗಿ ಪರಿಗಣಿಸಬೇಡಿ. ನಿಮ್ಮ ಪೈಕಿ, ಅವರನ್ನು ಪರಮ ಆಪ್ತರಾಗಿಸಿಕೊಂಡವರೇ ಅಕ್ರಮಿಗಳು

[22] ಒಂದು ವೇಳೆ ನಿಮ್ಮ ತಂದೆ – ತಾತಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಬಂಧುಗಳು, ನೀವು ಸಂಪಾದಿಸಿರುವ ಸಂಪತ್ತು, ನಷ್ಟವಾದೀತೆಂದು ನೀವು ಅಂಜುವ ವ್ಯಾಪಾರ ಮತ್ತು ನೀವು ಪ್ರೀತಿಸುವ ನಿವಾಸಗಳು – ನಿಮಗೆ ಅಲ್ಲಾಹನಿಗಿಂತ, ಅವನ ದೂತರಿಗಿಂತ ಮತ್ತು ಅವನ ಮಾರ್ಗದಲ್ಲಿನ ಹೋರಾಟಕ್ಕಿಂತ ಪ್ರಿಯವಾಗಿದ್ದರೆ – ಅಲ್ಲಾಹನು ತನ್ನ ಆದೇಶವನ್ನು ಪ್ರಕಟಿಸುವ ತನಕ ಕಾಯಿರಿ. ಅಲ್ಲಾಹನು ಭ್ರಷ್ಟ ಜನರಿಗೆ ಸರಿದಾರಿ ತೋರುವುದಿಲ್ಲ

[23] ಈ ಹಿಂದೆ ಹಲವು ರಣರಂಗಗಳಲ್ಲಿ ಅಲ್ಲಾಹನು ನಿಮಗೆ ನೆರವಾಗಿರುವನು. ‘ಹುನೈನ್’ನ ದಿನ-ನೀವು ನಿಮ್ಮ ಸಂಖ್ಯಾಬಲದ ಕುರಿತು ಸಂತುಷ್ಟರಾಗಿದ್ದಿರಿ. ಆದರೆ ಅದು (ಸಂಖ್ಯಾಬಲ) ನಿಮಗೆ ಯಾವ ಹಿತವನ್ನೂ ಮಾಡಲಿಲ್ಲ ಮತ್ತು ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ನಿಮ್ಮ ಪಾಲಿಗೆ ತೀರಾ ಸೀಮಿತವಾಗಿ ಬಿಟ್ಟಿತು. ಕೊನೆಗೆ ನೀವು ಬೆನ್ನು ತೋರಿಸಿ ಪಲಾಯನ ಮಾಡಿದಿರಿ

[24] ಕೊನೆಗೆ ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ತನ್ನ ಕಡೆಯಿಂದ ಸಾಂತ್ವನವನ್ನು ಇಳಿಸಿಕೊಟ್ಟನು ಮತ್ತು ನೀವು ಕಾಣದ ಪಡೆಗಳನ್ನು ಇಳಿಸಿ ಧಿಕ್ಕಾರಿಗಳನ್ನು ಶಿಕ್ಷಿಸಿದನು. ಇದುವೇ ಧಿಕ್ಕಾರಿಗಳಿಗಿರುವ ಪ್ರತಿಫಲ

[25] ತರುವಾಯ ಅಲ್ಲಾಹನು ತಾನಿಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[26] ವಿಶ್ವಾಸಿಗಳೇ, ಬಹುದೇವಾರಾಧಕರು ಮಲಿನರು. ಈ ವರ್ಷದ ಬಳಿಕ ಅವರು ‘ಮಸ್ಜಿದುಲ್ ಹರಾಮ್’ನ ಹತ್ತಿರ ಬರಬಾರದು. ನಿಮಗೆ ದಾರಿದ್ರದ ಭಯವಿದ್ದರೆ, ಅಲ್ಲಾಹನಿಚ್ಛಿಸಿದರೆ, ಅವನು ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನರಾಗಿಸುವನು. ಖಂಡಿತವಾಗಿಯೂ ಅವನು ಎಲ್ಲವನ್ನೂ ಅರಿತಿರುವವನೂ ಯುಕ್ತಿವಂತನೂ ಆಗಿರುವನು

[27] ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ವಿಶ್ವಾಸವಿಡದ ಮತ್ತು ಅಲ್ಲಾಹ್ ಮತ್ತವನ ದೂತರು ನಿಷೇಧಿಸಿರುವುದನ್ನು ನಿಷಿದ್ಧವೆಂದು ಪರಿಗಣಿಸದವರ ವಿರುದ್ಧ ಹಾಗೂ ಗ್ರಂಥನೀಡಲ್ಪಟ್ಟವರ ಪೈಕಿ, ಸತ್ಯ ಧರ್ಮವನ್ನು ಸ್ವೀಕರಿಸದವರ ವಿರುದ್ಧ ಯುದ್ಧ ಸಾರಿರಿ – ಅವರು ತಮ್ಮ ಕೈಯಿಂದ ‘ಜಿಝಿಯಾ’ (ದಂಡ) ಪಾವತಿಸಿ, ಅಧೀನರಾಗಿ ಬಿಡುವ ತನಕ

[28] ಯಹೂದಿಗಳು, ಉಝೈರ್ ಅಲ್ಲಾಹನ ಪುತ್ರರೆಂದು ಹೇಳುತ್ತಾರೆ ಮತ್ತು ಕ್ರೈಸ್ತರು ಮಸೀಹರು ಅಲ್ಲಾಹನ ಪುತ್ರರೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು. ಅವರು ಗತಕಾಲದ ಧಿಕ್ಕಾರಿಗಳ ಮಾತನ್ನೇ ಅನುಕರಿಸುತ್ತಿದ್ದಾರೆ. ಅವರ ಮೇಲೆ ಅಲ್ಲಾಹನ ಪ್ರಹಾರವಿದೆ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ

[29] ಅವರು ಅಲ್ಲಾಹನ ಹೊರತಾಗಿ, ತಮ್ಮ ವಿದ್ವಾಂಸರನ್ನು, ಸನ್ಯಾಸಿಗಳನ್ನು ಮತ್ತು ಮರ್ಯಮರ ಪುತ್ರ ಮಸೀಹರನ್ನು ದೇವರಾಗಿಸಿಕೊಂಡಿದ್ದಾರೆ. ನಿಜವಾಗಿ ಅವರಿಗೆ, ಒಬ್ಬ ದೇವರ ಹೊರತು ಬೇರೆ ಯಾರನ್ನೂ ಪೂಜಿಸಬಾರದೆಂದು ಆದೇಶಿಸಲಾಗಿದೆ. ಅವನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ. ಅವರು ಪಾಲುಗೊಳಿಸುವ ಎಲ್ಲದರಿಂದ ಅವನು ಸಂಪೂರ್ಣ ಮುಕ್ತನು

[30] ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸ ಬಯಸುತ್ತಾರೆ. ಅಲ್ಲಾಹನು ಮಾತ್ರ ತನ್ನ ಪ್ರಕಾಶವನ್ನು ಪರಿಪೂರ್ಣವಾಗಿ ವ್ಯಾಪಿಸದೆ ಬಿಡಲಾರನು – ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ

[31] ಅವನೇ, ತನ್ನ ದೂತನನ್ನು ಮಾರ್ಗದರ್ಶನದೊಂದಿಗೆ ಹಾಗೂ ಎಲ್ಲ ಧರ್ಮಗಳಿಗೆದುರಾಗಿ ಬೆಳಗಲು ಸತ್ಯ ಧರ್ಮದೊಂದಿಗೆ ಕಳುಹಿಸಿದವನು. ಬಹುದೇವಾರಾಧಕರಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ

[32] ವಿಶ್ವಾಸಿಗಳೇ, ಖಂಡಿತವಾಗಿಯೂ ಧರ್ಮಗುರುಗಳು ಮತ್ತು ಸನ್ಯಾಸಿಗಳಲ್ಲಿ ಹೆಚ್ಚಿನವರು ಜನರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. (ಅವರಿಗೂ) ಚಿನ್ನ ಹಾಗೂ ಬೆಳ್ಳಿಯನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡದೆ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವವರಿಗೂ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ

[33] ಅವುಗಳನ್ನು (ಆ ಚಿನ್ನ, ಬೆಳ್ಳಿಗಳನ್ನು) ನರಕಾಗ್ನಿಯಲ್ಲಿ ಉರಿಸಲಾಗುವ ದಿನ, ಅದರಿಂದ ಅವರ ಹಣೆಗಳಿಗೆ, ಮಗ್ಗುಲುಗಳಿಗೆ ಮತ್ತು ಬೆನ್ನುಗಳಿಗೆ ಬರೆ ಎಳೆಯಲಾಗುವುದು – ಇದುವೇ ನೀವು ನಿಮಗಾಗಿ ಸಂಗ್ರಹಿಸಿಟ್ಟ ಸಂಪತ್ತು . ಇದೀಗ ಸವಿಯಿರಿ ನೀವು ಸಂಗ್ರಹಿಸಿದ್ದನ್ನು

[34] ಖಂಡಿತವಾಗಿಯೂ ಅಲ್ಲಾಹನ ಬಳಿ, (ವರ್ಷದಲ್ಲಿ) ತಿಂಗಳುಗಳ ಸಂಖ್ಯೆ ಹನ್ನೆರಡು. ಅವನು, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ ದಿನವೇ ಹಾಗೆಂದು ವಿಧಿಸಿರುವನು. ಅವುಗಳಲ್ಲಿ ನಾಲ್ಕು, ಪಾವನ ತಿಂಗಳುಗಳು. ಇದುವೇ ಸರಿಯಾದ ಧರ್ಮ. ಆ ತಿಂಗಳುಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆ ಅಕ್ರಮವೆಸಗಬೇಡಿ. ಮತ್ತು ಬಹುದೇವಾರಾಧಕರೆಲ್ಲ ಒಂದಾಗಿ ನಿಮ್ಮ ವಿರುದ್ಧ ಹೋರಾಡುವಂತೆ, ನೀವೆಲ್ಲ ಒಂದಾಗಿ ಅವರ ವಿರುದ್ಧ ಹೋರಾಡಿರಿ. ನಿಮಗೆ ತಿಳಿದಿರಲಿ, ಅಲ್ಲಾಹನು ಧರ್ಮನಿಷ್ಠರ ಜೊತೆಗಿದ್ದಾನೆ

[35] ಪವಿತ್ರ ತಿಂಗಳ ಮುಂದೂಡಿಕೆಯು, ಧಿಕ್ಕಾರದ (ಧೋರಣೆಯ) ಮೇಲಿನ ಇನ್ನೊಂದು ಹೆಚ್ಚಳವಾಗಿದೆ. ಅಲ್ಲಾಹನು ನಿಷಿದ್ಧ ಗೊಳಿಸಿರುವ ತಿಂಗಳುಗಳ ಎಣಿಕೆ ಪೂರ್ತಿಗೊಳಿಸಲಿಕ್ಕಾಗಿ, ಅವರು ಆ ತಿಂಗಳನ್ನು ಒಂದು ವರ್ಷ ಸಮ್ಮತವಾಗಿಸುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ನಿಷಿದ್ಧವಾಗಿಸುತ್ತಾರೆ – ಈ ರೀತಿ ಅವರು ಅಲ್ಲಾಹನು ನಿಷೇಧಿಸಿರುವುದನ್ನು ಸಮ್ಮತವಾಗಿಸುತ್ತಾರೆ. ಅವರ ಪಾಲಿಗೆ ಅವರ ಕೆಟ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆ. ಅಲ್ಲಾಹನು ಧಿಕ್ಕಾರಿಗಳಿಗೆ ಸರಿ ದಾರಿಯನ್ನು ತೋರಿಸುವುದಿಲ್ಲ

[36] ವಿಶ್ವಾಸಿಗಳೇ, ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಹೊರಡಿರಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ನೆಲಕ್ಕೆ ಅಂಟಿರುತ್ತೀರಿ. ನೀವೇನು ಪರಲೋಕದೆದುರು, ಇಹಲೋಕದ ಜೀವನವನ್ನೇ ಮೆಚ್ಚಿಕೊಂಡಿರುವಿರಾ? ನಿಜವಾಗಿ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಬದುಕು ತೀರಾ ಕ್ಷುಲ್ಲಕ

[37] ನೀವು (ಅಲ್ಲಾಹನ ಮಾರ್ಗದಲ್ಲಿ) ಹೊರಡದಿದ್ದರೆ, ಅವನು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ಬೇರೊಂದು ಜನಾಂಗವನ್ನು ಮುಂದೆ ತರುವನು. ಅವನಿಗೆ ಯಾವ ನಷ್ಟವನ್ನುಂಟುಮಾಡಲಿಕ್ಕೂ ನಿಮ್ಮಿಂದಾಗದು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[38] ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[39] ಹಗುರವಾಗಿ ಅಥವಾ ಭಾರವಾಗಿ ನೀವು ಹೊರಡಿರಿ, ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ, ಇದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ

[40] ಲಾಭವು ತಕ್ಷಣದ್ದಾಗಿದ್ದರೆ ಮತ್ತು ಪ್ರಯಾಣವು ಸುಲಭದ್ದಾಗಿದ್ದರೆ ಅವರು ಖಂಡಿತ ನಿಮ್ಮ ಜೊತೆ ಬರುತ್ತಿದ್ದರು. ಆದರೆ ಅವರ ಪಾಲಿಗೆ ದಾರಿಯು ತುಂಬಾ ಉದ್ದವಾಯಿತು. ಇದೀಗ ಅವರು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ‘‘ನಮಗೆ ಸಾಧ್ಯವಿದ್ದಿದ್ದರೆ ನಾವು ಖಂಡಿತ ನಿಮ್ಮ ಜೊತೆ ಬರುತ್ತಿದ್ದೆವು’’ ಎಂದು ಹೇಳುವರು, ನಿಜವಾಗಿ ಅವರು ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಅವರು ಸುಳ್ಳು ಹೇಳುವವರೆಂಬುದು ಅಲ್ಲಾಹನಿಗೆ ತಿಳಿದಿದೆ

[41] (ದೂತರೇ,) ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. (ಅವರಲ್ಲಿ) ಸತ್ಯವಂತರು ಯಾರು ಎಂಬುದು ನಿಮಗೆ ಸ್ಪಷ್ಟವಾಗುವ ಮುನ್ನ ಹಾಗೂ ಸುಳ್ಳರನ್ನು ನೀವು ಅರಿಯುವ ಮುನ್ನ ನೀವು ಅವರಿಗೆ ಅನುಮತಿ ನೀಡಿದ್ದೇಕೆ

[42] ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರು ತಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಹೋರಾಡುವ ವಿಷಯದಲ್ಲಿ ನಿಮ್ಮ ಬಳಿ ವಿನಾಯಿತಿ ಕೇಳುವುದಿಲ್ಲ. ಧರ್ಮನಿಷ್ಠರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು

[43] ನಿಮ್ಮ ಬಳಿ ವಿನಾಯಿತಿಯನ್ನು ಅಪೇಕ್ಷಿಸುವವರು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಲ್ಲದವರಾಗಿದ್ದಾರೆ. ಅವರ ಮನಸ್ಸುಗಳು ಸಂಶಯ ಪೀಡಿತವಾಗಿದೆ. ಅವರು ತಮ್ಮ ಸಂಶಯದಲ್ಲೇ ದಾರಿತಪ್ಪಿ ಅಲೆಯುತ್ತಿದ್ದಾರೆ

[44] ಅವರು ನಿಜಕ್ಕೂ ಹೊರಡ ಬಯಸಿದ್ದರೆ, ಅದಕ್ಕಾಗಿ ಏನಾದರೂ ಸಾಧನ ಸಿದ್ಧ ಪಡಿಸುತ್ತಿದ್ದರು. ಅವರು ಎದ್ದೇಳುವುದು ಅಲ್ಲಾಹನಿಗೆ ಅಪ್ರಿಯವಾಗಿತ್ತು. ಅವನು ಅವರನ್ನು ತಡೆದನು ಮತ್ತು ಕುಳಿತಿರುವವರ ಜೊತೆ ಕುಳಿತಿರಿ ಎಂದನು

[45] ಒಂದು ವೇಳೆ ಅವರು ನಿಮ್ಮ ಜೊತೆಗೆ ಹೊರಟಿದ್ದರೂ, ಅವರು ನಿಮ್ಮ ಪಾಲಿಗೆ ಗೊಂದಲವನ್ನಷ್ಟೇ ಹೆಚ್ಚಿಸುತ್ತಿದ್ದರು ಮತ್ತು ನಿಮ್ಮ ನಡುವೆ ಹತಾಶೆಯನ್ನು ಬಿತ್ತಲಿಕ್ಕೆಂದೇ ಆಚೀಚೆ ಓಡಾಡುತ್ತಿದ್ದರು. ನಿಮ್ಮಲ್ಲಿ, ಅವರಿಗಾಗಿ ಕೇಳುವವರು (ಅವರ ಗೂಢಚರರು) ಇದ್ದಾರೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು

[46] ಈ ಹಿಂದೆಯೂ ಅವರು ಗೊಂದಲ ಉಂಟುಮಾಡಲು ಮತ್ತು ನಿಮಗಾಗಿ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಶ್ರಮಿಸಿದ್ದರು. ಕೊನೆಗೆ ಸತ್ಯವು ಬಂದು ಬಿಟ್ಟಿತು, ಅಲ್ಲಾಹನ ಆದೇಶವು ಸ್ಪಷ್ಟವಾಗಿ ಪ್ರಕಟವಾಯಿತು ಮತ್ತು ಅವರು ತೀರಾ ಅತೃಪ್ತರಾದರು

[47] ಅವರಲ್ಲಿ (ಒಬ್ಬನು), ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಪರೀಕ್ಷಿಸಬೇಡಿ ಎನ್ನುತ್ತಾನೆ. ಅವರೇನು ಈಗಾಗಲೇ ಪರೀಕ್ಷೆಗೆ ಗುರಿಯಾಗಿಲ್ಲವೇ? ಖಂಡಿತವಾಗಿಯೂ ನರಕವು ಧಿಕ್ಕಾರಿಗಳನ್ನು ಸುತ್ತು ವರಿದಿದೆ

[48] ನಿಮಗೇನಾದರೂ ಹಿತವಾದರೆ ಅವರಿಗೆ ಅದು ಅಪ್ರಿಯವೆನಿಸುತ್ತದೆ. ಇನ್ನು ನಿಮಗೇನಾದರೂ ಸಂಕಟ ಉಂಟಾದರೆ ಅವರು, ‘ನಾವು ಈ ಮೊದಲೇ ನಮಗೆ ಬೇಕಾದ ಮುಂಜಾಗ್ರತೆ ಮಾಡಿಕೊಂಡಿದ್ದೆವು’ ಎಂದು ಸಂಭ್ರಮಿಸುತ್ತಾ ಮರಳಿ ಹೋಗುತ್ತಾರೆ

[49] ಹೇಳಿರಿ; ‘‘ಅಲ್ಲಾಹನು ನಮಗಾಗಿ ಬರೆದಿಟ್ಟಿರುವುದರ ಹೊರತು ಬೇರಾವ ಸಂಕಟವೂ ನಮಗೆ ಎದುರಾಗುವುದಿಲ್ಲ. ಅವನೇ ನಮ್ಮ ರಕ್ಷಕನು. ಧರ್ಮ ವಿಶ್ವಾಸಿಗಳು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ’’

[50] ಹೇಳಿರಿ; ನಮ್ಮ ಕುರಿತಂತೆ ನೀವು ಎರಡು ಒಳಿತುಗಳ ಪೈಕಿ ಒಂದನ್ನಲ್ಲದೆ ಬೇರೇನನ್ನಾದರೂ ನಿರೀಕ್ಷಿಸಬಲ್ಲಿರಾ? ನಿಮ್ಮ ಕುರಿತಂತೆ ನಮ್ಮ ನಿರೀಕ್ಷೆ ಇಷ್ಟೇ; ಒಂದೋ ಅಲ್ಲಾಹನು ತನ್ನ ಕಡೆಯಿಂದ ಶಿಕ್ಷೆ ನೀಡುವ ಮೂಲಕ ನಿಮ್ಮನ್ನು ಪೀಡಿಸುವನು, ಅಥವಾ, ಅವನು ನಮ್ಮ ಕೈಗಳಿಂದ ನಿಮ್ಮನ್ನು ದಂಡಿಸುವನು. ನೀವೀಗ ಕಾಯಿರಿ. ನಿಮ್ಮ ಜೊತೆ ನಾವೂ ಕಾಯುವೆವು

[51] ಹೇಳಿರಿ; ನೀವು ಮನಸಾರೆ ಖರ್ಚು ಮಾಡಿದರೂ, ಒಲ್ಲದ ಮನಸ್ಸಿನಿಂದ ಖರ್ಚು ಮಾಡಿದರೂ ಅದನ್ನು ನಿಮ್ಮಿಂದ ಸ್ವೀಕರಿಸಲಾಗದು. ಏಕೆಂದರೆ ನೀವು ಅವಿಧೇಯರು

[52] ಅವರು ಮಾಡಿದ ಖರ್ಚು ಅವರಿಂದ ಸ್ವೀಕೃತವಾಗದೆ ಇರುವುದಕ್ಕೆ ಕಾರಣವಿಷ್ಟೇ; ಅವರು ಅಲ್ಲಾಹ್ ಮತ್ತು ಅವನ ರಸೂಲರನ್ನು ಧಿಕ್ಕರಿಸುತ್ತಾರೆ, ತೀರಾ ಆಲಸ್ಯದೊಂದಿಗೆ ನಮಾಝ್‌ಗೆ ಬರುತ್ತಾರೆ ಮತ್ತು ತೀರಾ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ

[53] ಅವರ ಸಂಪತ್ತುಗಳು ಮತ್ತು ಅವರ ಸಂತಾನಗಳು ನಿಮ್ಮನ್ನು ಬೆರಗುಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ. ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಅವರ ಪ್ರಾಣಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ

[54] ಅವರು, ತಾವು ನಿಸ್ಸಂದೇಹವಾಗಿಯೂ ನಿಮ್ಮವರೆಂದು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ಆದರೆ ಅವರು ನಿಮ್ಮವರಲ್ಲ. ನಿಜವಾಗಿ ಅವರು ಭೀತರಾಗಿದ್ದಾರೆ

[55] ಅವರಿಗೆ ಒಂದು ಅಭಯ ಸ್ಥಾನವಾಗಲಿ, ಗುಹೆಯಾಗಲಿ, ಅಡಗುದಾಣವಾಗಲಿ ದೊರೆತರೆ ಅವರೆಲ್ಲಾ ಒಂದಾಗಿ ಅದರೆಡೆಗೆ ಧಾವಿಸುವರು

[56] (ದೂತರೇ,) ಅವರಲ್ಲೊಬ್ಬನು, ದಾನಗಳ ವಿಷಯದಲ್ಲಿ ನಿಮ್ಮನ್ನು ಮೂದಲಿಸುತ್ತಾನೆ. ಅದರಲ್ಲಿ ಅವರಿಗೊಂದು ಪಾಲು ಸಿಕ್ಕಿದರೆ ಅವರು ಸಂತುಷ್ಟರಾಗುತ್ತಾರೆ. ಇನ್ನು, ಅದರಿಂದ ಅವರಿಗೇನೂ ಸಿಗದಿದ್ದರೆ ಅವರು ಕೋಪಗೊಳ್ಳುತ್ತಾರೆ

[57] ಅವರು, ತಮಗೆ ಅಲ್ಲಾಹನು ಮತ್ತವನ ದೂತರು ನೀಡಿದ್ದರಲ್ಲಿ ತೃಪ್ತರಾಗಿ, ‘‘ನಮಗೆ ಅಲ್ಲಾಹನೇ ಸಾಕು. ಮುಂದೆಯೂ ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ನೀಡುವನು ಮತ್ತು ಅವನ ದೂತರೂ ನೀಡುವರು. ನಾವು ಖಂಡಿತ ಅಲ್ಲಾಹನಲ್ಲಿ ಒಲವು ಉಳ್ಳವರಾಗಿದ್ದೇವೆ’’-ಎಂದಿದ್ದರೆ ಎಷ್ಟು ಚೆನ್ನಾಗಿತ್ತು

[58] ನಿಜವಾಗಿ ದಾನಗಳು (ಝಕಾತ್) ಇರುವುದು – ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹನು ವಿಧಿಸಿರುವ ಕಡ್ಡಾಯ ನಿಯಮ. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[59] ಅವರಲ್ಲಿ ಕೆಲವರು ದೂತರನ್ನು ಪೀಡಿಸುತ್ತಾರೆ. ಅವರು ‘‘ಇವರು ದುರ್ಬಲ ಕಿವಿಯ ವ್ಯಕ್ತಿ’’ ಎನ್ನುತ್ತಾರೆ. ಹೇಳಿರಿ; (ಅವರ) ಕಿವಿ ದುರ್ಬಲವಾಗಿರುವುದು ನಿಮ್ಮ ಹಿತಕ್ಕಾಗಿ ಮಾತ್ರ. ಅವರು (ದೂತರು) ಅಲ್ಲಾಹನಲ್ಲಿ ನಂಬಿಕೆ ಉಳ್ಳವರು ಹಾಗೂ ಸತ್ಯವಿಶ್ವಾಸಿಗಳಲ್ಲೂ ನಂಬಿಕೆ ಉಳ್ಳವರು. ನಿಮ್ಮ ಪೈಕಿ ವಿಶ್ವಾಸಿಗಳಾಗಿರುವವರ ಪಾಲಿಗೆ ಅವರು ಅನುಗ್ರಹವಾಗಿದ್ದಾರೆ. ಅಲ್ಲಾಹನ ದೂತರನ್ನು ಪೀಡಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ

[60] ಅವರು ನಿಮ್ಮನ್ನು (ಮುಸ್ಲಿಮರನ್ನು) ಮೆಚ್ಚಿಸಲಿಕ್ಕಾಗಿ ಅಲ್ಲಾಹನ ಆಣೆ ಹಾಕುತ್ತಲಿರುತ್ತಾರೆ. ನಿಜವಾಗಿ, ಅವರು ವಿಶ್ವಾಸಿಗಳಾಗಿದ್ದರೆ (ಅವರಿಗೆ ತಿಳಿದಿರಲಿ;) ಅಲ್ಲಾಹ್ ಮತ್ತು ಅವನ ದೂತರು ಮೆಚ್ಚಿಸಲ್ಪಡುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ

[61] ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಘರ್ಷಣೆಗೆ ಇಳಿಯುವವನಿಗಾಗಿ ನರಕಾಗ್ನಿಯು ಖಂಡಿತ ಸಿದ್ಧವಾಗಿದೆ ಮತ್ತು ಅವನು ಅದರಲ್ಲಿ ಸದಾಕಾಲ ಇರುವನೆಂದು ಅವರಿಗೆ ತಿಳಿಯದೇ? ಅದು ನಿಜಕ್ಕೂ ಮಹಾ ಅಪಮಾನವಾಗಿದೆ

[62] ತಮ್ಮ ಮನದೊಳಗಿರುವುದನ್ನೆಲ್ಲಾ ಅವರಿಗೆ (ವಿಶ್ವಾಸಿಗಳಿಗೆ)ತಿಳಿಸಿ ಬಿಡುವ ಅಧ್ಯಾಯವೇನಾದರೂ ಇಳಿದು ಬಂದೀತೆಂಬ ಭಯ ಕಪಟಿಗಳಿಗೆ ಇದೆ. ಹೇಳಿರಿ; ನೀವು ಅಪಹಾಸ್ಯ ಮಾಡುತ್ತಲಿರಿ. ನೀವು ಅಂಜುತ್ತಿರುವುದನ್ನು ಅಲ್ಲಾಹನು ಖಂಡಿತ ಬಹಿರಂಗ ಪಡಿಸುವನು

[63] ನೀವು ಅವರೊಡನೆ ಈ ಕುರಿತು ಕೇಳಿದರೆ, ನಾವಂತು ಕೇವಲ ತಮಾಷೆಮಾಡುತ್ತಿದ್ದೆವು ಹಾಗೂ ಆಟವಾಡುತ್ತಿದ್ದೆವು ಎಂದು ಅವರು ಹೇಳುತ್ತಾರೆ. ಹೇಳಿರಿ; ನೀವೇನು ಅಲ್ಲಾಹ್ ಮತ್ತವನ ವಚನಗಳ ಜೊತೆ ಹಾಗೂ ದೂತರ ಜೊತೆ ಅಪಹಾಸ್ಯ ಮಾಡುತ್ತೀರಾ

[64] ನೀವಿನ್ನು ನೆಪಗಳನ್ನು ಹುಡುಕಬೇಡಿ. ನೀವು ವಿಶ್ವಾಸಿಗಳಾದ ಬಳಿಕ ಧಿಕ್ಕಾರಿಗಳಾಗಿರುವಿರಿ. ನಾವೀಗ ನಿಮ್ಮಲ್ಲಿನ ಒಂದು ಗುಂಪನ್ನು ಕ್ಷಮಿಸಿದರೂ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು – ಏಕೆಂದರೆ ಅವರು ಅಪರಾಧಿಗಳಾಗಿರುವರು

[65] ಕಪಟಿ ಪುರುಷರು ಮತ್ತು ಕಪಟಿ ಸ್ತ್ರೀಯರು ಪರಸ್ಪರ ತುಂಬಾ ಆಪ್ತರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತಿನಿಂದ ತಡೆಯುತ್ತಾರೆ. ಹಾಗೆಯೇ ಅವರು ತಮ್ಮ ಕೈಗಳನ್ನು ಕಟ್ಟಿರುತ್ತಾರೆ (ತೀರಾ ಜಿಪುಣರಾಗಿರುತ್ತಾರೆ). ಅವರು ಅಲ್ಲಾಹನನ್ನು ಮರೆತಿದ್ದಾರೆ ಮತ್ತು ಅಲ್ಲಾಹನು ಅವರನ್ನು ಮರೆತಿದ್ದಾನೆ. ಖಂಡಿತವಾಗಿಯೂ ಕಪಟಿಗಳೇ ನಿಜವಾದ ಅವಿಧೇಯರಾಗಿದ್ದಾರೆ

[66] ಅಲ್ಲಾಹನು ಕಪಟಿ ಪುರುಷರಿಗೆ, ಕಪಟಿ ಸ್ತ್ರೀಯರಿಗೆ ಮತ್ತು ಧರ್ಮ ಧಿಕ್ಕಾರಿಗಳಿಗೆ ನರಕಾಗ್ನಿಯ ವಾಗ್ದಾನ ನೀಡಿರುತ್ತಾನೆ. ಅವರು ಸದಾಕಾಲ ಅದರಲ್ಲೇ ಇರುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೆ ಶಾಶ್ವತ ಶಿಕ್ಷೆ ಇದೆ

[67] ನಿಮ್ಮ ಹಿಂದಿನವರಂತೆ – ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು ಮತ್ತು ನಿಮಗಿಂತ ಹೆಚ್ಚು ಸಂಪತ್ತು ಹಾಗೂ ಸಂತಾನಗಳು ಅವರ ಬಳಿ ಇದ್ದವು. ಅವರು ತಮ್ಮ ಪಾಲನ್ನು ಭೋಗಿಸಿದರು. ಆ ನಿಮ್ಮ ಹಿಂದಿನವರು ತಮ್ಮ ಪಾಲನ್ನು ಭೋಗಿಸಿದಂತೆ, ನೀವು ನಿಮ್ಮ ಪಾಲನ್ನು ಭೋಗಿಸಿದಿರಿ ಮತ್ತು ಅವರಂತೆ ನೀವೂ ವ್ಯರ್ಥ ಚಟುವಟಿಕೆಗಳಲ್ಲಿ ನಿರತರಾಗಿ ಬಿಟ್ಟಿರಿ. ಅವರ ಕರ್ಮಗಳೆಲ್ಲಾ ಇಹಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾದವು. ಅವರೇ ನಿಜವಾಗಿ ನಷ್ಟ ಅನುಭವಿಸುವವರು

[68] ಅವರ ಹಿಂದಿನ, ನೂಹರ ಜನಾಂಗ, ಆದ್ ಹಾಗೂ ಸಮೂದ್ ಜನಾಂಗ, ಇಬ್ರಾಹೀಮರ ಜನಾಂಗ, ಮದ್‌ಯನ್‌ನವರು ಮತ್ತು ಪಲ್ಲಟಗೊಳಿಸಲಾದ ನಾಡುಗಳ ಸುದ್ದಿಯು ಅವರಿಗೆ ತಲುಪಿಲ್ಲವೇ? ಅವರ ಬಳಿಗೆ ಅವರ ದೇವದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗಿರಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು

[69] ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರು ಪರಸ್ಪರ ಪೋಷಕರಾಗಿರುತ್ತಾರೆ. ಅವರು ಒಳಿತನ್ನು ಆದೇಶಿಸುತ್ತಾರೆ ಹಾಗೂ ಕೆಡುಕಿನಿಂದ ತಡೆಯುತ್ತಾರೆ ಮತ್ತು ಅವರು ನಮಾಝ್‌ಅನ್ನು ಪಾಲಿಸುತ್ತಾರೆ ಹಾಗೂ ಝಕಾತ್‌ಅನ್ನು ಪಾವತಿಸುತ್ತಾರೆ. ಹಾಗೆಯೇ ಅವರು ಅಲ್ಲಾಹ್ ಹಾಗೂ ಅವರ ದೂತರ ಆಜ್ಞಾಪಾಲನೆ ಮಾಡುತ್ತಾರೆ. ಅವರ ಮೇಲೆ ಅಲ್ಲಾಹನು ಕರುಣೆ ತೋರುವನು.ಖಂಡಿತವಾಗಿಯೂ ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ

[70] ಅಲ್ಲಾಹನು ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರಿಗೆ, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳ ವಾಗ್ದಾನ ನೀಡಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. (ಹಾಗೆಯೇ, ಅವರಿಗಾಗಿ) ಶಾಶ್ವತ ತೋಟಗಳಲ್ಲಿ ನಿರ್ಮಲ ನಿವಾಸಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ – ಅಲ್ಲಾಹನ ಮೆಚ್ಚುಗೆ. ಇದು ನಿಜಕ್ಕೂ ಮಹಾ ವಿಜಯವಾಗಿದೆ

[71] ದೂತರೇ, ಧಿಕ್ಕಾರಿಗಳು ಮತ್ತು ಕಪಟಿಗಳ ವಿರುದ್ಧ ಹೋರಾಡಿರಿ ಹಾಗೂ ಅವರ ಪಾಲಿಗೆ ಕಠಿಣರಾಗಿರಿ. ನರಕವೇ ಅವರ ನೆಲೆಯಾಗಿದೆ. ಅದು, ತುಂಬಾ ಕೆಟ್ಟ ನೆಲೆಯಾಗಿದೆ

[72] ತಾವು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ನಿಜವಾಗಿ ಅವರು ಧಿಕ್ಕಾರದ ಮಾತನ್ನು ಹೇಳಿದ್ದಾರೆ ಹಾಗೂ ಅವರು ಮುಸ್ಲಿಮರಾದ ಬಳಿಕ ಧಿಕ್ಕಾರಿಗಳಾಗಿದ್ದಾರೆ. ಅವರು, ತಮಗೆ ಸಾಧಿಸಲಾಗದ್ದನ್ನು (ದೂತರ ಹತ್ಯೆಯನ್ನು) ಯೋಜಿಸಿದ್ದರು. ನಿಜವಾಗಿ ಅವರು, ಅಲ್ಲಾಹ್ ಮತ್ತು ಅವನ ದೂತರು ತಮ್ಮ ಔದಾರ್ಯದಿಂದ ಅವರನ್ನು ಸಂಪನ್ನಗೊಳಿಸಿದ್ದಕ್ಕಾಗಿಯಷ್ಟೇ ಪ್ರತೀಕಾರವೆಸಗಿರುವರು. ಇದೀಗ ಅವರು ಪಶ್ಚಾತ್ತಾಪ ಪಟ್ಟರೆ ಅವರಿಗೆ ಹಿತವಾದೀತು. ಅವರು ತಿರುಗಿನಿಂತರೆ ಅಲ್ಲಾಹನು ಅವರಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಬಹಳ ಕಠಿಣ ಶಿಕ್ಷೆ ನೀಡುವನು. ಭೂಮಿಯಲ್ಲಿ ಅವರಿಗೆ ರಕ್ಷಕನಾಗಿ ಹಾಗೂ ಸಹಾಯಕನಾಗಿ ಯಾರೂ ಸಿಗಲಾರರು

[73] ಅವರಲ್ಲಿ ಕೆಲವರು – ಅವನು (ಅಲ್ಲಾಹನು) ತನ್ನ ಅನುಗ್ರಹದಿಂದ ನಮಗೆ ದಯಪಾಲಿಸಿದರೆ ನಾವು ಖಂಡಿತ ದಾನ ಮಾಡುವೆವು ಮತ್ತು ಖಂಡಿತ ನಾವು ಸಜ್ಜನರ ಸಾಲಿಗೆ ಸೇರುವೆವು ಎಂದು ಅಲ್ಲಾಹನೊಡನೆ ಕರಾರು ಮಾಡಿರುವರು

[74] ಆದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿದಾಗ, ಅವರು ಅದರಲ್ಲಿ ಜಿಪುಣತೆ ತೋರಿದರು. ಅವರು ತಿರುಗಿ ನಿಂತರು ಮತ್ತು ವಿಮುಖರಾದರು

[75] ಕೊನೆಗೆ ಅಲ್ಲಾಹನು, ಅವರು ತನ್ನನ್ನು ಭೇಟಿಯಾಗುವ ದಿನದ ತನಕ ಅವರ ಮನಸ್ಸುಗಳಲ್ಲಿ ಕಾಪಟ್ಯವನ್ನು ತುಂಬಿ ಬಿಟ್ಟನು – ಅವರು ಅಲ್ಲಾಹನ ಜೊತೆ ತಾವು ಮಾಡಿದ ವಾಗ್ದಾನಗಳನ್ನು ಉಲ್ಲಂಘಿಸಿದ್ದರ ಮತ್ತು ಸುಳ್ಳು ಹೇಳುತ್ತಿದ್ದುದರ ಫಲಿತಾಂಶವಿದು

[76] ಅಲ್ಲಾಹನು ಅವರ ಗುಟ್ಟುಗಳನ್ನೂ ಗುಪ್ತ ಮಾತುಕತೆಗಳನ್ನೂ ಬಲ್ಲನೆಂಬುದು ಮತ್ತು ಅಲ್ಲಾಹನು ಎಲ್ಲ ಗುಪ್ತ ವಿಚಾರಗಳನ್ನೂ ಚೆನ್ನಾಗಿ ಬಲ್ಲವನೆಂಬುದು ಅವರಿಗೆ ತಿಳಿಯದೇ

[77] ತಮ್ಮ ಸ್ವಂತ ಇಚ್ಛೆಯಿಂದ ದಾನ ನೀಡುವ ವಿಶ್ವಾಸಿಗಳನ್ನು ದೂಷಿಸುವವರು ಮತ್ತು (ದಾನ ಮಾಡುವುದಕ್ಕೆ) ತಮ್ಮ ಶ್ರಮದ ಫಲದ ಹೊರತು ಬೇರೇನೂ ಇಲ್ಲದವರನ್ನು ಗೇಲಿ ಮಾಡುವವರು – ಅವರನ್ನು ಅಲ್ಲಾಹನು ಗೇಲಿಮಾಡುವನು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ

[78] ನೀವು ಅವರನ್ನು ಕ್ಷವಿಸಬೇಕೆಂದು ಪ್ರಾರ್ಥಿಸಿದರೂ ಪ್ರಾರ್ಥಿಸದಿದ್ದರೂ (ಪರಿಣಾಮ ಒಂದೇ). ಅವರನ್ನು ಕ್ಷಮಿಸಬೇಕೆಂದು ನೀವು ಎಪ್ಪತ್ತು ಬಾರಿ ಪ್ರಾರ್ಥಿಸಿದರೂ ಅಲ್ಲಾಹನು ಅವರನ್ನು ಖಂಡಿತ ಕ್ಷಮಿಸಲಾರನು. ಏಕೆಂದರೆ ಅವರು ಅಲ್ಲಾಹ್ ಮತ್ತು ಅವನ ದೂತರನ್ನು ಧಿಕ್ಕರಿಸಿದವರಾಗಿದ್ದಾರೆ. ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ

[79] (ಯುದ್ಧದಿಂದ ತಪ್ಪಿಸಿಕೊಳ್ಳಲು) ಹಿಂದೆ ಉಳಿದುಕೊಂಡವರು, ತಾವು ಅಲ್ಲಾಹನ ದೂತರ ಹಿಂದೆ, ತಮ್ಮ ನೆಲೆಗಳಲ್ಲೇ ಉಳಿದಿರುವೆವೆಂದು ಸಂಭ್ರಮಿಸಿದರು. ಅವರಿಗೆ ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದು ಅಪ್ರಿಯವಾಯಿತು ಮತ್ತು ಅವರು ‘‘ಬಿಸಿಲಲ್ಲಿ ಹೊರಡಬೇಡಿ’’ ಎಂದರು. ಹೇಳಿರಿ; ನರಕದ ಬೆಂಕಿಯು ಅದಕ್ಕಿಂತಲೂ ಬಿಸಿಯಾಗಿರುವುದು. ಅವರು ಅರ್ಥಮಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು

[80] ಅವರು ಕಡಿಮೆ ನಗಬೇಕು ಮತ್ತು ಹೆಚ್ಚು ಅಳಬೇಕು. ಹಾಗಿದೆ, ಅವರ ಗಳಿಕೆಯ ಫಲ

[81] ಒಂದು ವೇಳೆ ಅಲ್ಲಾಹನು ನಿಮ್ಮನ್ನು ಅವರಲ್ಲಿನ ಒಂದು ಗುಂಪಿನೆಡೆಗೆ ಮರಳಿಸಿದರೆ, ಅವರು (ಹೋರಾಟಕ್ಕೆ) ಹೊರಡಲು ನಿಮ್ಮ ಅನುಮತಿ ಕೇಳುವರು. ಹೇಳಿರಿ; ನೀವೆಂದೂ ನನ್ನ ಜೊತೆ ಹೊರಡುವಂತಿಲ್ಲ ಮತ್ತು ನೀವೆಂದೂ ನನ್ನ ಜೊತೆ ಸೇರಿ ಶತ್ರುವಿನ ವಿರುದ್ಧ ಹೋರಾಡುವಂತಿಲ್ಲ. ನೀವು ಮೊದಲ ಬಾರಿ ಕುಳಿತಿರಲು ಇಷ್ಟ ಪಟ್ಟವರು. ಇದೀಗ ನೀವು ಹಿಂದೆ ಉಳಿದಿರುವವರ ಜೊತೆಗೇ ಕುಳಿತಿರಿ

[82] ಅವರ ಪೈಕಿ ಯಾವುದೇ ಮೃತನ ಅಂತಿಮ ನಮಾಝ್‌ಅನ್ನು ನೀವು ಎಂದೂ ಸಲ್ಲಿಸಬೇಡಿ ಮತ್ತು ಅವನ ಗೋರಿಯ ಬಳಿಯೂ ನಿಲ್ಲಬೇಡಿ. ಅವರು ಅಲ್ಲಾಹ್ ಮತ್ತು ಅವನ ದೂತನನ್ನು ಧಿಕ್ಕರಿಸಿದವರಾಗಿದ್ದಾರೆ ಮತ್ತು ಅವರು ಅವಿಧೇಯರಾಗಿಯೇ ಮೃತರಾಗಿದ್ದಾರೆ

[83] ಅವರ ಸಂಪತ್ತುಗಳಾಗಲಿ, ಸಂತಾನಗಳಾಗಲಿ ನಿಮ್ಮನ್ನು ಬೆರಗು ಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ ಮತ್ತು ಅವನು ಧರ್ಮ ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲಿ ಅವರ ಜೀವಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ

[84] ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ದೂತರ ಜೊತೆ ಸೇರಿ ಹೋರಾಡಿರಿ ಎಂದು ಹೇಳುವ ಅಧ್ಯಾಯವೊಂದನ್ನು ಇಳಿಸಲಾದಾಗ ಅವರಲ್ಲಿನ ಸ್ಥಿತಿವಂತರು ನಿಮ್ಮೊಡನೆ ಅನುಮತಿ ಕೇಳುತ್ತಾರೆ ಮತ್ತು ಕುಳಿತಿರುವವರ ಜೊತೆಗಿರಲು ನಮ್ಮನ್ನು ಬಿಟ್ಟು ಬಿಡಿ ಎನ್ನುತ್ತಾರೆ

[85] ಅವರು ಹಿಂದೆ ಉಳಿದಿರುವವರ ಜೊತೆ ಇರುವುದನ್ನು ಮೆಚ್ಚಿಕೊಂಡರು. ಅವರ ಮನಸ್ಸುಗಳಿಗೆ ಮುದ್ರೆ ಒತ್ತಲಾಯಿತು. ಅವರು ಏನನ್ನೂ ಅರಿಯುವವರಲ್ಲ

[86] ಆದರೆ ದೇವ ದೂತರು ಹಾಗೂ ಅವರ ಜೊತೆಗಿರುವ ವಿಶ್ವಾಸಿಗಳು ತಮ್ಮ ಸಂಪತ್ತು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಹೋರಾಡಿದರು. ಒಳಿತುಗಳು ಅವರಿಗೇ ಸೇರಿವೆ ಮತ್ತು ಅವರೇ ವಿಜಯಿಗಳು

[87] ಅಲ್ಲಾಹನು ಅವರಿಗಾಗಿ, ತಳದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿರುವನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ನಿಜಕ್ಕೂ ಇದುವೇ ಮಹಾ ವಿಜಯವಾಗಿದೆ

[88] ತಮಗೆ ಅನುಮತಿ ನೀಡಬೇಕೆಂದು ಕೋರಿ ನೆಪ ಹೂಡುವ ಕೆಲವು ಹಳ್ಳಿಗರು ಬಂದರು ಮತ್ತು ಅಲ್ಲಾಹನೊಡನೆ ಹಾಗೂ ಆತನ ದೂತನೊಡನೆ ಸುಳ್ಳು ಹೇಳಿದವರು (ಯುದ್ಧದಿಂದ ತಪ್ಪಿಸಿ) ಕುಳಿತಿದ್ದರು. ಅವರಲ್ಲಿನ ಧಿಕ್ಕಾರಿಗಳಿಗೆ ಬಹುಬೇಗನೇ ಭಾರೀ ಕಠಿಣ ಶಿಕ್ಷೆ ಎದುರಾಗಲಿದೆ

[89] ದುರ್ಬಲರು, ರೋಗಿಗಳು ಹಾಗೂ ಖರ್ಚುಮಾಡಲಿಕ್ಕೇನೂ ಇಲ್ಲದವರು ಅಲ್ಲಾಹನ ಹಾಗೂ ಅವನ ದೂತನ ಹಿತೈಷಿಗಳಾಗಿದ್ದರೆ (ಅವರು ಹೋರಾಟದಿಂದ ದೂರ ಉಳಿದರೆ) ಅವರ ಮೇಲೇನೂ ದೋಷವಿಲ್ಲ. ಹಾಗೆಯೇ ಸತ್ಕರ್ಮಿಗಳ ಮೇಲೂ ದೋಷವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರಣಾಳುವೂ ಆಗಿದ್ದಾನೆ

[90] ಹಾಗೆಯೇ, ತಮಗೆ ಸವಾರಿ ಬೇಕೆಂದು ನಿಮ್ಮ ಬಳಿಗೆ ಕೆಲವರು ಬಂದಿದ್ದರು. ನಿಮ್ಮನ್ನು (ಹೊತ್ತು ಸಾಗಿಸಲು) ಸವಾರಿಗೊಳಿಸಲು ನನಗೇನೂ ಸಿಗುತ್ತಿಲ್ಲ ಎಂದು ನೀವು ಅವರೊಡನೆ ಹೇಳಿದ್ದಿರಿ. ಅವರ ಮೇಲೂ ಯಾವುದೇ ದೋಷವಿಲ್ಲ. ಅವರು ಮರಳಿ ಹೋಗುತ್ತಿದ್ದಾಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚುಮಾಡಲು ತಮ್ಮ ಬಳಿ ಏನೂ ಇಲ್ಲ ಎಂಬ ದುಃಖದಿಂದ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು

[91] ನಿಜವಾಗಿ ದೋಷವಿರುವುದು, ತಾವು ಸಾಕಷ್ಟು ಸಂಪನ್ನರಾಗಿದ್ದರೂ ನಿಮ್ಮೊಡನೆ ಅನುಮತಿ ಕೇಳಿದವರ ಮೇಲೆ. ಅವರು ಹಿಂದುಳಿಯುವವರ ಜೊತೆಗೆ ಇರುವುದನ್ನೇ ಮೆಚ್ಚಿಕೊಂಡರು. ಅಲ್ಲಾಹನು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವನು. ಅವರು ಏನನ್ನೂ ಅರಿಯುವುದಿಲ್ಲ

[92] ನೀವು ಅವರೆಡೆಗೆ ಮರಳಿದಾಗ, ಅವರು ವಿವಿಧ ನೆಪಗಳೊಂದಿಗೆ ನಿಮ್ಮ ಬಳಿಗೆ ಬರುವರು. ಹೇಳಿರಿ; ನೀವು ನೆಪಗಳನ್ನೊಡ್ಡಬೇಡಿ. ನಾವು ನಿಮ್ಮನ್ನು ನಂಬುವುದಿಲ್ಲ. ಏಕೆಂದರೆ ನಿಮ್ಮ ವಿಷಯವನ್ನು ಅಲ್ಲಾಹನು ನಮಗೆ ತಿಳಿಸಿರುವನು. ಅಲ್ಲಾಹನು ಮತ್ತು ಅವನ ದೂತರು ನಿಮ್ಮ ಕರ್ಮಗಳನ್ನು ನೋಡುವರು. ಕೊನೆಗೆ, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಕಡೆಗೆ ನಿಮ್ಮನ್ನು ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು

[93] ನೀವು ಅವರೆಡೆಗೆ ಮರಳಿದಾಗ, ಅವರನ್ನು ಬಿಟ್ಟು ಬಿಡಬೇಕೆಂದು ಅವರು ನಿಮ್ಮ ಬಳಿ ಅಲ್ಲಾಹನ ಹೆಸರಲ್ಲಿ ಆಣೆಗಳನ್ನು ಹಾಕಿ ಬೇಡುವರು. ನೀವು ಅವರನ್ನು ಬಿಟ್ಟು ಬಿಡಿರಿ. ಅವರು ಮಲಿನರು. ನರಕವೇ ಅವರ ನೆಲೆ. ಅದುವೇ ಅವರು ಸಂಪಾದಿಸಿದ್ದರ ಫಲ

[94] ಅವರ ಕುರಿತು ನೀವು ಸಂತುಷ್ಟರಾಗಬೇಕೆಂದು ಅವರು ನಿಮ್ಮೆದುರು ಆಣೆಗಳನ್ನು ಹಾಕುತ್ತಾರೆ. ಒಂದು ವೇಳೆ ನೀವು ಅವರ ಕುರಿತು ಸಂತುಷ್ಟರಾಗಿ ಬಿಟ್ಟರೂ ಅಲ್ಲಾಹನು ಮಾತ್ರ ಅವಿಧೇಯರ ಕುರಿತು ಖಂಡಿತ ಸಂತುಷ್ಟನಾಗುವುದಿಲ್ಲ

[95] ಅಲೆಮಾರಿ ಅರಬರು ಧಿಕ್ಕಾರ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠೋರರಾಗಿರುತ್ತಾರೆ. ಅಲ್ಲಾಹನು ತನ್ನ ದೂತರಿಗೆ ಇಳಿಸಿಕೊಟ್ಟಿರುವ, ಆದೇಶಗಳ ಕುರಿತು ಅವರಿಗೆ ತಿಳಿಯದೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[96] ಅಲೆಮಾರಿಗಳಲ್ಲಿ ಕೆಲವರು, ತಾವು (ಅಲ್ಲಾಹನ ಮಾರ್ಗದಲ್ಲಿ) ಮಾಡುವ ಖರ್ಚನ್ನು ದಂಡವೆಂದು ಪರಿಗಣಿಸುತ್ತಾರೆ ಮತ್ತು ಅವರು ನಿಮ್ಮ ಮೇಲೆ ವಿಪತ್ತುಗಳು ಬಂದೆರಗುವುದಕ್ಕಾಗಿ ಕಾಯುತ್ತಿದ್ದಾರೆ. ಕೆಟ್ಟ ವಿಪತ್ತುಗಳೆಲ್ಲಾ ಅವರ ಮೇಲೆಯೇ ಎರಗಲಿವೆ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[97] ಹಾಗೆಯೇ, ಅಲೆಮಾರಿಗಳಲ್ಲಿ, ಅಲ್ಲಾಹ್ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರೂ ಇದ್ದಾರೆ. ಅವರು ತಾವು ಮಾಡುವ ಖರ್ಚನ್ನು ಅಲ್ಲಾಹನ ಸಾಮೀಪ್ಯವನ್ನು ಸಂಪಾದಿಸುವುದಕ್ಕೆ ಹಾಗೂ ದೇವದೂತರ ಪ್ರಾರ್ಥನೆಯನ್ನು ಪಡೆಯುವುದಕ್ಕೆ ಸಾಧನವೆಂದು ಪರಿಗಣಿಸುತ್ತಾರೆ. ತಿಳಿದಿರಲಿ! ಖಂಡಿತವಾಗಿಯೂ ಅದು ಅವರ ಪಾಲಿಗೆ ಸಾಮೀಪ್ಯದ ಸಾಧನವಾಗಿದೆ. ಅಲ್ಲಾಹನು ಅವರನ್ನು ತನ್ನ ಅನುಗ್ರಹದೊಳಗೆ ಸೇರಿಸುವನು. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[98] ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯ ಸ್ವೀಕಾರದಲ್ಲಿ) ಇತರೆಲ್ಲರಿಗಿಂತ ಮೊದಲಿಗರಾದವರು ಮತ್ತು ಅತ್ಯುತ್ತಮ ರೀತಿಯಲ್ಲಿ ಅವರನ್ನು ಅನುಸರಿಸಿದವರು – ಅವರಿಂದ ಅಲ್ಲಾಹನು ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಅವನು ಅವರಿಗಾಗಿ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ಸ್ವರ್ಗ ತೋಟಗಳನ್ನು ಸಿಧ್ಧಗೊಳಿಸಿಟ್ಟಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ವಿಜಯವಾಗಿದೆ

[99] ನಿಮ್ಮ ಸುತ್ತ ಮುತ್ತಲಿರುವ ಅಲೆಮಾರಿಗಳ ಪೈಕಿ ಕೆಲವರು ಕಪಟಿಗಳು. ಹಾಗೆಯೇ ಮದೀನಾದವರಲ್ಲೂ ಕೆಲವರು ಕಾಪಟ್ಯಕ್ಕೆ ಅಂಟಿಕೊಂಡಿರುವರು. ನೀವು ಅವರನ್ನು ಬಲ್ಲವರಲ್ಲ. ನಾವು ಅವರನ್ನು ಬಲ್ಲೆವು. ನಾವು ಅವರನ್ನು ಎರಡೆರಡು ಬಾರಿ ಶಿಕ್ಷಿಸುವೆವು ಮತ್ತು ಕೊನೆಗೆ ಅವರನ್ನು ಮಹಾ ಶಿಕ್ಷೆಯೆಡೆಗೆ ಮರಳಿಸಲಾಗುವುದು

[100] (ಅವರಲ್ಲಿ) ಮತ್ತೆ ಕೆಲವರಿದ್ದಾರೆ – ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವವರು. ಅವರು ಸತ್ಕರ್ಮದ ಜೊತೆ ಪಾಪ ಕರ್ಮವನ್ನು ಬೆರೆಸಿಕೊಂಡಿರುವರು. ಅಲ್ಲಾಹನು ಅವರನ್ನು ಕ್ಷಮಿಸುವ ನಿರೀಕ್ಷೆ ಇದೆ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[101] (ದೂತರೇ,) ನೀವು ಅವರ ಸಂಪತ್ತುಗಳಿಂದ (ಕಡ್ಡಾಯ) ದಾನವನ್ನು ಸಂಗ್ರಹಿಸಿರಿ ಮತ್ತು ಆ ಮೂಲಕ ಅವರನ್ನು ನಿರ್ಮಲಗೊಳಿಸಿರಿ ಹಾಗೂ ಶುದ್ಧೀಕರಿಸಿರಿ ಮತ್ತು ಅವರ ಪರವಾಗಿ ಪ್ರಾರ್ಥಿಸಿರಿ. ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಶಾಂತಿದಾಯಕವಾಗಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ

[102] ಅವರಿಗೆ ತಿಳಿದಿಲ್ಲವೇ, ಅಲ್ಲಾಹನೇ ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಅವರ ದಾನಗಳಿಗೆ ಮನ್ನಣೆ ನೀಡುವವನೆಂದು? ನಿಜಕ್ಕೂ ಅಲ್ಲಾಹನೇ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ

[103] ಹೇಳಿರಿ; ನೀವು ಕರ್ಮ ಮಾಡಿರಿ. ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ನಿಮ್ಮ ಕರ್ಮವನ್ನು ನೋಡುವರು. ಕೊನೆಗೆ ನಿಮ್ಮನ್ನು, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ಆಗ ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು

[104] ಮತ್ತೆ ಕೆಲವರಿದ್ದಾರೆ. ಅವರು, ಅಲ್ಲಾಹನು ತಮ್ಮನ್ನು ಶಿಕ್ಷಿಸುವನೋ ಅಥವಾ ತಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸುವನೋ ಎಂದು ಅವನ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲಾಹನೇ ಬಲ್ಲವನು ಮತ್ತು ಯುಕ್ತಿವಂತನು

[105] ಹಾನಿಮಾಡುವುದಕ್ಕಾಗಿ, ಧಿಕ್ಕಾರಕ್ಕಾಗಿ ಮತ್ತು ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಬೆಳೆಸಲಿಕ್ಕಾಗಿ ಹಾಗೂ ಈ ಹಿಂದೆ ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುಧ್ಧ ಸಾರಿದ್ದ ವ್ಯಕ್ತಿಗೆ ಹೊಂಚಿನ ಸ್ಥಳವಾಗಿ ಮಸೀದಿಯನ್ನು ಬಳಸಿಕೊಂಡವರು – ತಾವು ಒಳಿತನ್ನು ಮಾತ್ರ ಬಯಸಿದ್ದೆವೆಂದು ಆಣೆ ಹಾಕಿ ಹೇಳುವರು. ಆದರೆ ಖಂಡಿತವಾಗಿಯೂ ಅವರು ಸುಳ್ಳುಗಾರರೆಂದು ಅಲ್ಲಾಹನು ಸಾಕ್ಷಿ ಹೇಳುತ್ತಾನೆ

[106] ನೀವು ಅದರಲ್ಲಿ (ಆ ಮಸೀದಿಯಲ್ಲಿ) ಖಂಡಿತ ನಿಲ್ಲಬೇಡಿ. ಪ್ರಥಮ ದಿನದಿಂದಲೇ ದೇವಭಯದ ಬುನಾದಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯು, ನೀವು ನಿಲ್ಲುವುದಕ್ಕೆ ಹೆಚ್ಚು ಅರ್ಹವಾಗಿದೆ. ಅದರಲ್ಲಿರುವವರು, ತಾವು ಸದಾ ನಿರ್ಮಲರಾಗಿರಬೇಕೆಂದು ಅಪೇಕ್ಷಿಸುತ್ತಾರೆ ಮತ್ತು ಅಲ್ಲಾಹನು ನಿರ್ಮಲರಾಗಿ ಇರುವವರನ್ನು ಪ್ರೀತಿಸುತ್ತಾನೆ

[107] ತನ್ನ ಕಟ್ಟಡವನ್ನು ಅಲ್ಲಾಹನ ಭಯ ಹಾಗೂ ಅವನ ಮೆಚ್ಚುಗೆಯ ಬುನಾದಿಯ ಮೇಲೆ ಕಟ್ಟಿದವನು ಶ್ರೇಷ್ಠನೋ, ಅಥವಾ ಅವನನ್ನೂ ಹೊತ್ತು ನರಕಕ್ಕೆ ಕುಸಿದು ಬೀಳಲಿರುವ, ಭಾರೀ ಹೊಂಡವೊಂದರ ಅಸ್ಥಿರ ಅಂಚಿನಲ್ಲಿರುವ ಬುನಾದಿಯ ಮೇಲೆ ತನ್ನ ಕಟ್ಟಡವನ್ನು ಕಟ್ಟಿದವನು ಶ್ರೇಷ್ಠನೋ? ಅಕ್ರಮಿಗಳ ಪಂಗಡಕ್ಕೆ ಅಲ್ಲಾಹನು ಸರಿದಾರಿ ತೋರಿಸುವುದಿಲ್ಲ

[108] ಅವರು ಕಟ್ಟಿರುವ ಕಟ್ಟಡವು, ಅವರ ಮನಸ್ಸುಗಳು ಛಿದ್ರವಾಗಿ ಬಿಡುವ ತನಕವೂ ಅವರ ಮನಸ್ಸುಗಳಲ್ಲಿ ಸಂಶಯವನ್ನು ಬಿತ್ತುತ್ತಲೇ ಇರುವುದು – ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[109] ಖಂಡಿತವಾಗಿಯೂ ಅಲ್ಲಾಹನು ವಿಶ್ವಾಸಿಗಳಿಂದ ಅವರ ಜೀವಗಳನ್ನು ಮತ್ತು ಅವರ ಸೊತ್ತುಗಳನ್ನು ಖರೀದಿಸಿರುವನು – ಅವರಿಗೆ ಸ್ವರ್ಗವನ್ನು ನೀಡಲಿಕ್ಕಾಗಿ. ಅವರು ಅಲ್ಲಾಹನ ಮಾರ್ಗದಲ್ಲೇ ಹೋರಾಡುತ್ತಾರೆ, ವಧಿಸುತ್ತಾರೆ ಮತ್ತು ವಧಿಸಲ್ಪಡುತ್ತಾರೆ. ತೌರಾತ್, ಇಂಜೀಲ್ ಮತ್ತು ಕುರ್‌ಆನ್‌ನಲ್ಲಿ ಅವರಿಗೆ ನೀಡಲಾಗಿರುವ ವಾಗ್ದಾನವು ಸತ್ಯವಾಗಿದೆ. ಅಲ್ಲಾಹನಿಗಿಂತ ಉತ್ತಮವಾಗಿ ತನ್ನ ಕರಾರನ್ನು ಪಾಲಿಸುವವನು ಯಾರಿದ್ದಾನೆ? ಆದ್ದರಿಂದ ಅವನ ಜೊತೆ ನೀವು ಮಾಡಿಕೊಂಡಿರುವ ವ್ಯವಹಾರಕ್ಕಾಗಿ ಸಂಭ್ರಮಿಸಿರಿ. ಇದು ನಿಜಕ್ಕೂ ಮಹಾ ವಿಜಯವಾಗಿದೆ

[110] ಪದೇ ಪದೇ ಪಶ್ಚಾತ್ತಾಪ ಪಡುವವರು, ಆರಾಧಿಸುತ್ತಿರುವವರು, (ಅಲ್ಲಾಹನ) ಗುಣಗಾನ ಮಾಡುತ್ತಿರುವವರು, (ಅಲ್ಲಾಹನ ಮಾರ್ಗದಲ್ಲಿ) ಉಪವಾಸ ಆಚರಿಸುತ್ತಿರುವವರು, (ಅಲ್ಲಾಹನಿಗೆ) ಬಾಗುತ್ತಿರುವವರು, ಸಾಷ್ಟಾಂಗ ವಂದಿಸುತ್ತಿರುವವರು, ಸತ್ಕಾರ್ಯವನ್ನು ಆದೇಶಿಸುತ್ತಿರುವವರು, ಕೆಡುಕಿನಿಂದ ತಡೆಯುತ್ತಿರುವವರು ಮತ್ತು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳನ್ನು ಪಾಲಿಸುತ್ತಿರುವವರು – ಇಂತಹ ವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ

[111] ಬಹುದೇವಾರಾಧಕರು ತಮ್ಮ ಆಪ್ತ ಬಂಧುಗಳೇ ಆಗಿದ್ದರೂ, ಅವರು ನರಕದವರೆಂಬುದು ತಮಗೆ ಸ್ಪಷ್ಟವಾದ ಬಳಿಕ ಅವರ ಪರವಾಗಿ ಕ್ಷಮೆಯಾಚಿಸುವುದು ದೇವದೂತರಿಗಾಗಲಿ ವಿಶ್ವಾಸಿಗಳಿಗಾಗಲಿ ಭೂಷಣವಲ್ಲ

[112] ಇಬ್ರಾಹೀಮರು ತಮ್ಮ ತಂದೆಯ ಪರವಾಗಿ ನಡೆಸಿದ ಕ್ಷಮಾಯಾಚನೆಯು, ಅವರು ಆತನಿಗೆ ನೀಡಿದ್ದ ಒಂದು ವಾಗ್ದಾನದ ಪಾಲನೆ ಮಾತ್ರವಾಗಿತ್ತು. ಕೊನೆಗೆ, ಆತನು ಅಲ್ಲಾಹನ ಶತ್ರುವೆಂಬುದು ಅವರಿಗೆ ಸ್ಪಷ್ಟವಾದಾಗ ಅವರು ಆತನಿಂದ ದೂರ ಉಳಿದರು. ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಮೃದು ಸ್ವಭಾವದವರು ಹಾಗೂ ಸಂಯಮಿಯಾಗಿದ್ದರು

[113] ಅಲ್ಲಾಹನು ಯಾವುದೇ ಜನಾಂಗಕ್ಕೆ ಸರಿದಾರಿ ತೋರಿದ ಬಳಿಕ, ಅವರು ಯಾವುದರಿಂದ ದೂರವಿರಬೇಕು ಎಂಬುದನ್ನು ಅವರಿಗೆ ಸ್ಪಷ್ಟ ಪಡಿಸುವ ತನಕ ಅವರನ್ನು ದಾರಿಗೆಡಿಸುವುದಿಲ್ಲ. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ

[114] ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅವನೇ ಜೀವನ ನೀಡುವವನು ಮತ್ತು ಅವನೇ ಮರಣ ನೀಡುವವನು. ನಿಮಗೆ ಅಲ್ಲಾಹನ ಹೊರತು ಬೇರೆ ಯಾರೂ ಪೋಷಕರಾಗಲಿ, ಸಹಾಯಕರಾಗಲಿ ಇಲ್ಲ

[115] ಅಲ್ಲಾಹನು, ದೇವದೂತರೆಡೆಗೆ ಹಾಗೂ ತುಂಬಾ ಕಠಿಣ ಕಾಲದಲ್ಲಿ ಅವರನ್ನು ಅನುಸರಿಸಿದ ‘ಮುಹಾಜಿರ್’ ಮತ್ತು ‘ಅನ್ಸಾರ್’ ಗಳೆಡೆಗೆ ಒಲವು ತೋರಿದನು. ಅವರಲ್ಲಿನ ಒಂದು ಗುಂಪಿನ ಮನಸ್ಸುಗಳು ದಾರಿಗೆಡುವುದರಲ್ಲಿದ್ದುವು. ಆ ಬಳಿಕ ಅವನು ಅವರೆಡೆಗೆ ಒಲವು ತೋರಿದನು.ಅವನು ಅವರ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವನು

[116] ಹಾಗೆಯೇ, ಯಾರ ಪ್ರಕರಣವನ್ನು ಮುಂದೂಡಲಾಗಿತ್ತೋ ಆ ಮೂವರು. ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ಅವರ ಪಾಲಿಗೆ ತೀರಾ ಸಂಕುಚಿತವಾಗಿ ಬಿಟ್ಟಿತ್ತು ಮತ್ತು ಅವರಿಗೆ ಸ್ವತಃ ತಮ್ಮ ಜೀವಗಳ ಕುರಿತು ಜಿಗುಪ್ಸೆ ಉಂಟಾಗಿತ್ತು. ಅಲ್ಲಾಹನೆಡೆಗೆ ಒಲಿಯುವುದನ್ನು ಬಿಟ್ಟರೆ, (ತಮಗೆ) ಅವನ ಕಡೆಯಿಂದ ಬೇರಾವುದೇ ಆಶ್ರಯ ಇಲ್ಲ ಎಂಬುದನ್ನು ಅವರು ಮನಗಂಡಿದ್ದರು. ಕೊನೆಗೆ, ಅವರು ಪಶ್ಚಾತ್ತಾಪ ಪಡಲೆಂದು ಅವನು ಅವರೆಡೆಗೆ ಒಲವು ತೋರಿದನು. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ

[117] ವಿಶ್ವಾಸಿಗಳೇ, ಸದಾ ಅಲ್ಲಾಹನಿಗೆ ಅಂಜಿರಿ ಮತ್ತು ನೀವು ಸತ್ಯವಂತರ ಜೊತೆಗಾರರಾಗಿರಿ

[118] ಮದೀನಾದವರು ಹಾಗೂ ಅವರ ಸುತ್ತ ಮುತ್ತಲಿನ ಗ್ರಾಮೀಣ ಜನರು ಅಲ್ಲಾಹನ ದೂತರನ್ನು ಬಿಟ್ಟು ಹಿಂದುಳಿದುದು ಮತ್ತು ತಮ್ಮ ಜೀವಗಳನ್ನು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಸರಿಯಲ್ಲ. ಏಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರು ಸಹಿಸುವ ಪ್ರತಿಯೊಂದು ದಾಹಕ್ಕೆ, ಪ್ರತಿಯೊಂದು ಸಂಕಷ್ಟಕ್ಕೆ, ಪ್ರತಿಯೊಂದು ಹಸಿವಿಗೆ, ಧಿಕ್ಕಾರಿಗಳ ಕೋಪಕ್ಕೆ ಕಾರಣವಾಗುವ ಅವರ ಪ್ರತಿಯೊಂದು ಹೆಜ್ಜೆಗೆ ಮತ್ತು ಶತ್ರುವಿನಿಂದ ಅವರು ಕಿತ್ತುಕೊಳ್ಳುವ ಪ್ರತಿಯೊಂದು ವಸ್ತುವಿಗೆ ಪ್ರತಿಯಾಗಿ ಅವರ ಪಾಲಿಗೆ ಒಂದು ಸತ್ಕರ್ಮವು ದಾಖಲಾಗದೆ ಇರುವುದಿಲ್ಲ. ಖಂಡಿತವಾಗಿಯೂ ಶ್ರೇಷ್ಠ ಕರ್ಮಗಳನ್ನು ಮಾಡುವವರ ಪ್ರತಿಫಲವನ್ನು ಅಲ್ಲಾಹನು ಖಂಡಿತ ವ್ಯರ್ಥ ಗೊಳಿಸುವುದಿಲ್ಲ

[119] ಸಣ್ಣದಿರಲಿ, ದೊಡ್ಡದಿರಲಿ ಅವರು ಮಾಡಿದ ಪ್ರತಿಯೊಂದು ಖರ್ಚನ್ನು ಹಾಗೂ ಅವರು ಪ್ರತಿಯೊಂದು ಕಣಿವೆ ದಾಟಿದ್ದನ್ನು ಅವರ ಪರವಾಗಿ ದಾಖಲಿಸಿಡಲಾಗುತ್ತದೆ – ಅಲ್ಲಾಹನು ಅವರಿಗೆ, ಅವರು ಮಾಡಿರುವ ಎಲ್ಲ ಸತ್ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ

[120] ವಿಶ್ವಾಸಿಗಳೆಲ್ಲರೂ ಒಟ್ಟಾಗಿ (ಹೋರಾಟಕ್ಕೆ) ಹೊರಟು ಬಿಡುವುದು ಸರಿಯಲ್ಲ. (ಇದರ ಬದಲು) ಅವರ ಪ್ರತಿಯೊಂದು ವಿಭಾಗದಲ್ಲಿನ ಒಂದು ಪಂಗಡವು, ಧರ್ಮ ಜ್ಞಾನಗಳಿಸಲಿಕ್ಕಾಗಿ ಹೊರಟು, ಮರಳಿ ಬಂದು ತಮ್ಮ ಜನಾಂಗದವರನ್ನು ಎಚ್ಚರಿಸಬಹುದಾಗಿತ್ತು. ಈ ರೀತಿ ಅವರು ಜಾಗೃತರಾಗಬಹುದು

[121] ವಿಶ್ವಾಸಿಗಳೇ, ಧಿಕ್ಕಾರಿಗಳ ಪೈಕಿ ನಿಮ್ಮ ಪಕ್ಕದಲ್ಲಿರುವವರ ವಿರುದ್ಧ (ಮೊದಲು) ಹೋರಾಡಿರಿ – ಅವರು ನಿಮ್ಮಲ್ಲಿ ಕಾಠಿಣ್ಯವನ್ನು ಕಾಣಲಿ. ನಿಮಗೆ ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನು ಸತ್ಯನಿಷ್ಠರ ಜೊತೆಗಿದ್ದಾನೆ

[122] (ಕುರ್‌ಆನಿನ) ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರಲ್ಲಿನ ಕೆಲವರು, ಇದು ನಿಮ್ಮ ಪೈಕಿ ಯಾರ ವಿಶ್ವಾಸವನ್ನು ಹೆಚ್ಚಿಸಿತು? ಎಂದು ಪ್ರಶ್ನಿಸುತ್ತಾರೆ. ನಿಜವಾಗಿ, ಅದು ವಿಶ್ವಾಸಿಗಳ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಅವರು ಅದರಿಂದ ಸಂತುಷ್ಟರಾಗಿದ್ದಾರೆ

[123] ಇನ್ನು, ಮನಸ್ಸುಗಳಲ್ಲಿ ರೋಗವಿರುವವರ ಮಾಲಿನ್ಯಕ್ಕೆ ಅದು ಮತ್ತಷ್ಟು ಮಾಲಿನ್ಯವನ್ನು ಸೇರಿಸಿದೆ ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಮೃತರಾಗಿದ್ದಾರೆ

[124] ಪ್ರತಿ ವರ್ಷವೂ ಒಂದು ಅಥವಾ ಎರಡು ಬಾರಿ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಅವರು ಕಾಣಲಿಲ್ಲವೇ? ಇಷ್ಟಾಗಿಯೂ ಅವರು ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಪಾಠ ಕಲಿಯುವುದಿಲ್ಲ

[125] ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರು (ಕಪಟಿಗಳು) ಪರಸ್ಪರರೆಡೆಗೆ ನೋಡುತ್ತಾರೆ ಹಾಗೂ ‘‘ಯಾರಾದರೂ ನಿಮ್ಮನ್ನು ನೋಡುತ್ತಿದ್ದಾರೆಯೇ?’’ ಎನ್ನುತ್ತಾ ಹೊರಟು ಹೋಗುತ್ತಾರೆ. ನಿಜವಾಗಿ ಅಲ್ಲಾಹನು ಅವರ ಮನಸ್ಸುಗಳನ್ನು ತಿರುಚಿ ಬಿಟ್ಟಿದ್ದಾನೆ. ಏಕೆಂದರೆ ಅವರು ವಿವೇಕವಿಲ್ಲದವರು

[126] ನಿಮ್ಮ ಬಳಿಗೆ ನಿಮ್ಮೊಳಗಿಂದಲೇ ಒಬ್ಬ ದೇವದೂತರು ಬಂದಿದ್ದಾರೆ. ನಿಮಗೆ ಎದುರಾಗುವ ಪ್ರತಿಯೊಂದು ತೊಂದರೆಯು ಅವರ ಪಾಲಿಗೆ ಕಠಿಣವಾಗಿರುತ್ತದೆ. ಅವರು ನಿಮ್ಮ ಹಿತಕ್ಕಾಗಿ ಹಂಬಲಿಸುವವರಾಗಿದ್ದಾರೆ ಮತ್ತು ವಿಶ್ವಾಸಿಗಳ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಮಯಿಯಾಗಿದ್ದಾರೆ

[127] (ದೂತರೇ,) ಅವರು ಕಡೆಗಣಿಸಿದರೆ ನೀವು ಹೇಳಿರಿ; ‘‘ನನಗೆ ಅಲ್ಲಾಹನೇ ಸಾಕು. ಅವನ ಹೊರತು ಬೇರೆ ದೇವರಿಲ್ಲ. ನಾನು ಅವನ ಮೇಲೆಯೇ ಸಂಪೂರ್ಣ ಭರವಸೆ ಇಟ್ಟಿದ್ದೇನೆ. ಅವನು ಮಹಾ ವಿಶ್ವ ಸಿಂಹಾಸನದ ಒಡೆಯ

[128] ಅಲಿಫ್ ಲಾಮ್ ರಾ. ಇವು ಯುಕ್ತಿ ಪೂರ್ಣ ಗ್ರಂಥದ ವಾಕ್ಯಗಳು

[129] ‘‘ಮಾನವರನ್ನು ಎಚ್ಚರಿಸಿರಿ ಮತ್ತು ವಿಶ್ವಾಸಿಗಳಿಗೆ, ಅವರ ಒಡೆಯನ ಬಳಿ ಸ್ಥಿರವಾದ ನೆಲೆ ಇದೆ ಎಂಬ ಶುಭವಾರ್ತೆ ನೀಡಿರಿ’’ ಎಂಬ ದಿವ್ಯವಾಣಿಯನ್ನು ನಾವು ಅವರೊಳಗಿನ ಒಬ್ಬ ವ್ಯಕ್ತಿಗೆ ನೀಡಿದೆವೆಂದು ಜನರಿಗೆ ಅಚ್ಚರಿಯಾಗಿ ಬಿಟ್ಟಿತೇ? ಧಿಕ್ಕಾರಿಗಳು, ಖಂಡಿತವಾಗಿಯೂ ಇದೊಂದು ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು

ಯೂನುಸ್

Surah 10

[1] ಆರು ದಿನಗಳಲ್ಲಿ ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಒಡೆಯನು. ತರುವಾಯ ಅವನು ವಿಶ್ವಸಿಂಹಾಸನವನ್ನು ಆವರಿಸಿ (ವಿಶ್ವ ವ್ಯವಸ್ಥೆಯನ್ನು) ನಡೆಸುತ್ತಿದ್ದಾನೆ. ಅವನಿಂದ ಸಮ್ಮತಿ ಪಡೆಯುವ ಮುನ್ನ ಶಿಫಾರಸು ಮಾಡುವವರು ಯಾರೂ ಇಲ್ಲ. ಆ ಅಲ್ಲಾಹನೇ ನಿಮ್ಮ ಒಡೆಯನು. ನೀವು ಅವನನ್ನೇ ಪೂಜಿಸಿರಿ. ನೀವೇನು ಪಾಠಕಲಿಯುವುದಿಲ್ಲವೇ

[2] ನೀವೆಲ್ಲರೂ ಅವನೆಡೆಗೇ ಮರಳುವಿರಿ. ಅಲ್ಲಾಹನ ವಾಗ್ದಾನವು ಖಚಿತ ಸತ್ಯವಾಗಿದೆ. ಖಂಡಿತವಾಗಿಯೂ ಅವನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ಅವನೇ ಅದನ್ನು ಪುನರಾವರ್ತಿಸುತ್ತಾನೆ – ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದವರಿಗೆ ನ್ಯಾಯ ಪ್ರಕಾರ ಪ್ರತಿಫಲ ನೀಡಲಿಕ್ಕಾಗಿ. ಅತ್ತ ಧಿಕ್ಕಾರಿಗಳಿಗೆ, ಕುದಿಯುವ ಪಾನೀಯ ಹಾಗೂ ಕಠಿಣ ಶಿಕ್ಷೆ ಇದೆ – ಅವರು ಧಿಕ್ಕರಿಸಿದ್ದಕ್ಕಾಗಿ

[3] ಅವನೇ, ಸೂರ್ಯನನ್ನು ಉಜ್ವಲವಾಗಿ ಹಾಗೂ ಚಂದ್ರನನ್ನು ಪ್ರಕಾಶಮಾನವಾಗಿ ಮಾಡಿದವನು ಮತ್ತು ಅದಕ್ಕೆ ಹಂತಗಳನ್ನು ನಿಶ್ಚಯಿಸಿದವನು – ನೀವು ವರ್ಷಗಳ ಎಣಿಕೆ ಮತ್ತು ಲೆಕ್ಕವನ್ನು ಅರಿಯುವಂತಾಗಲಿಕ್ಕಾಗಿ. ಅಲ್ಲಾಹನು ಇವೆಲ್ಲವನ್ನೂ ನ್ಯಾಯೋಚಿತವಾಗಿಯೇ ಸೃಷ್ಟಿಸಿರುವನು. ಅರಿವು ಉಳ್ಳವರಿಗಾಗಿ ಅವನು ತನ್ನ ನಿದರ್ಶನಗಳನ್ನು ವಿವರಿಸುತ್ತಾನೆ

[4] ಖಂಡಿತವಾಗಿಯೂ ರಾತ್ರಿ ಮತ್ತು ಹಗಲುಗಳ ಬದಲಾವಣೆಯಲ್ಲಿ ಮತ್ತು ಅಲ್ಲಾಹನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಸೃಷ್ಟಿಸಿರುವ ಎಲ್ಲ ವಸ್ತುಗಳಲ್ಲಿ ಸತ್ಯನಿಷ್ಠರಿಗೆ ಸೂಚನೆಗಳಿವೆ

[5] ಖಂಡಿತವಾಗಿಯೂ, ನಮ್ಮನ್ನು ಭೇಟಿಯಾಗಲಿಕ್ಕಿದೆ ಎಂದು ನಿರೀಕ್ಷಿಸದವರು, ಇಹಲೋಕದ ಬದುಕಿನಲ್ಲೇ ಸಂತುಷ್ಟರಾಗಿದ್ದಾರೆ ಹಾಗೂ ಅದರಲ್ಲೇ ತೃಪ್ತರಾಗಿದ್ದಾರೆ. ಹಾಗೆಯೇ, ನಮ್ಮ ಸೂಚನೆಗಳ ಬಗ್ಗೆ ನಿಶ್ಚಿಂತರಾಗಿರುವವರು

[6] ಅವರೇ – ಅವರ ಸಂಪಾದನೆಯ ಫಲವಾಗಿ ನರಕಾಗ್ನಿಯೇ ಅವರ ಅಂತಿಮ ನೆಲೆ ಯಾಗಿರುವುದು

[7] ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರನ್ನು ಖಂಡಿತವಾಗಿಯೂ ಅವರ ಒಡೆಯನು ಅವರ ವಿಶ್ವಾಸದ ಕಾರಣ ಸರಿದಾರಿಯಲ್ಲಿ ನಡೆಸುವನು. ಕೊಡುಗೆಗಳು ತುಂಬಿದ ಸ್ವರ್ಗತೋಟಗಳಲ್ಲಿ. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು

[8] ‘‘ಅಲ್ಲಾಹನೇ, ನೀನು ಪರಮ ಪಾವನನು’’ ಎಂಬುದೇ ಅಲ್ಲಿ ಅವರ ಮೊರೆಯಾಗಿರುವುದು ಮತ್ತು ‘ಸಲಾಮ್’ (ಶಾಂತಿ) ಎಂಬುದೇ ಅಲ್ಲಿ ಅವರ (ಪರಸ್ಪರ) ಶುಭಾಶಯವಾಗಿರುವುದು ಮತ್ತು ‘‘ಎಲ್ಲ ಹೊಗಳಿಕೆಗಳು ಎಲ್ಲ ಜಗತ್ತುಗಳ ಒಡೆಯನಾದ ಅಲ್ಲಾಹನಿಗೇ ಮೀಸಲು’’ ಎಂಬುದು ಅವರ ಅಂತಿಮ ಮೊರೆಯಾಗಿರುವುದು

[9] ಜನರು ಅವಸರ ಪಡುತ್ತಾರೆಂದು ಅಲ್ಲಾಹನು ಅವಸರವಾಗಿ ಒಳಿತಿನ ಬದಲು ಕೆಡುಕನ್ನು ಕಳುಹಿಸಿ ಬಿಟ್ಟಿದ್ದರೆ, ಅವರ ಅವಧಿಯು ಈಗಾಗಲೇ ಮುಗಿದಿರುತ್ತಿತ್ತು. ನಮ್ಮನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಇಲ್ಲದವರನ್ನು ನಾವು ಅವರ ವಿದ್ರೋಹದಲ್ಲೇ ಅಲೆಯುತ್ತಿರಲು ಬಿಟ್ಟು ಬಿಡುತ್ತೇವೆ

[10] ಮನುಷ್ಯನಿಗೆ ಸಂಕಟವೇನಾದರೂ ಎದುರಾದಾಗ ಅವನು ಮಲಗಿದಲ್ಲೂ, ಕುಳಿತಲ್ಲೂ, ನಿಂತಲ್ಲೂ ನಮ್ಮನ್ನು ಕರೆಯಲಾರಂಭಿಸುತ್ತಾನೆ. ಆದರೆ ನಾವು ಅವನ ಆ ಸಂಕಟವನ್ನು ನಿವಾರಿಸಿದಾಗ ಅವನು, ತನ್ನ ಸಂಕಟದ ವೇಳೆ ತಾನೆಂದೂ ನಮ್ಮನ್ನು ಕರೆದೇ ಇರಲಿಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಈ ರೀತಿ ಅತಿರೇಕವೆಸಗುವವರಿಗೆ, ಅವರು ಮಾಡುವುದೆಲ್ಲವನ್ನೂ ನಾವು ಚಂದಗಾಣಿಸಿಬಿಡುತ್ತೇವೆ

[11] ನಿಮಗಿಂತ ಹಿಂದೆ ನಾವು ಹಲವಾರು ಜನಾಂಗಗಳನ್ನು, ಅವರು ಅಕ್ರಮವೆಸಗಿದಾಗ ನಾಶಮಾಡಿರುವೆವು. ನಿಜವಾಗಿ, ಅವರ ಬಳಿಗೆ ಅವರ (ಕಾಲದ) ದೇವದೂತರುಗಳು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಅವರು ನಂಬುವವರಾಗಿರಲಿಲ್ಲ. ಅಪರಾಧಿ ಜನಾಂಗಗಳಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ

[12] ಅವರ ಬಳಿಕ, ನೀವು ಎಂತಹ ಕರ್ಮಗಳನ್ನು ಮಾಡುತ್ತೀರಿ ಎಂಬುದನ್ನು ನೋಡಲು ನಾವು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳಾಗಿ ಮಾಡಿದೆವು

[13] ಬಹಳ ಸ್ಪಷ್ಟವಾದ ನಮ್ಮ ವಚನಗಳನ್ನು ಅವರಿಗೆ ಓದಿ ಕೇಳಿಸಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ಇದರ ಬದಲಿಗೆ ಬೇರೊಂದು ಕುರ್‌ಆನ್ ಅನ್ನು ತನ್ನಿರಿ ಅಥವಾ ಇದನ್ನು ತಿದ್ದಿರಿ ಎನ್ನುತ್ತಾರೆ. (ದೂತರೇ,) ಹೇಳಿರಿ; ನನ್ನ ಇಚ್ಛೆಯಿಂದ ಇದನ್ನು ತಿದ್ದುವ ಅಧಿಕಾರ ನನಗಿಲ್ಲ. ನಾನಂತು ನನ್ನೆಡೆಗೆ ಕಳಿಸಲಾಗಿರುವ ದಿವ್ಯವಾಣಿಯನ್ನು ಮಾತ್ರ ಅನುಸರಿಸುತ್ತೇನೆ. ಒಂದು ವೇಳೆ ನಾನು ನನ್ನ ಒಡೆಯನ ಆಜ್ಞೆಯನ್ನು ಮೀರಿ ನಡೆದರೆ, ಒಂದು ಮಹಾನ್ ದಿನದ ಶಿಕ್ಷೆಯ ಭಯ ನನಗಿದೆ

[14] ಹೇಳಿರಿ; ಒಂದು ವೇಳೆ ಅಲ್ಲಾಹನು ಹಾಗೆ ಬಯಸಿದ್ದರೆ ನಾನು ಇದನ್ನು ನಿಮಗೆ ಓದಿ ಕೇಳಿಸುತ್ತಿರಲಿಲ್ಲ ಮತ್ತು ಇದರ ಕುರಿತು ನಿಮಗೆ ಮಾಹಿತಿಯನ್ನೂ ನೀಡುತ್ತಿರಲಿಲ್ಲ. ನಾನು ಈ ಹಿಂದೆ ನಿಮ್ಮ ನಡುವೆ ಒಂದು ಜೀವಮಾನವನ್ನೇ ಕಳೆದಿದ್ದೇನೆ. ನೀವೇನು ವಿವೇಚಿಸುವುದಿಲ್ಲವೇ

[15] ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವಾತನಿಗಿಂತ ಅಥವಾ ಅವನ ವಚನಗಳನ್ನು ಸುಳ್ಳೆಂದು ತಿರಸ್ಕರಿಸುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಇಂತಹ ಅಪರಾಧಿಗಳು ಖಂಡಿತ ಸಫಲರಾಗಲಾರರು

[16] ಅವರು ಅಲ್ಲಾಹನ ಹೊರತಾಗಿ, ತಮಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಮತ್ತು ತಮಗೆ ಯಾವುದೇ ಲಾಭವನ್ನುಂಟು ಮಾಡಲಾಗದವರನ್ನು ಪೂಜಿಸುತ್ತಾರೆ ಮತ್ತು ‘‘ಇವರು ಅಲ್ಲಾಹನ ಬಳಿ ತಮ್ಮ ಶಿಫಾರಸ್ಸುದಾರರು’’ ಎನ್ನುತ್ತಾರೆ. ನೀವೇನು ಅಲ್ಲಾಹನಿಗೆ – ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅವನ ತಿಳುವಳಿಕೆಯಲ್ಲಿ ಇಲ್ಲದ ವಿಷಯವೊಂದನ್ನು ತಿಳಿಸುತ್ತಿರುವಿರಾ? ಅವನು (ಅಲ್ಲಾಹನು) ಪಾವನನಾಗಿದ್ದಾನೆ ಮತ್ತು ಅವರು ಪಾಲುದಾರರಾಗಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿದ್ದಾನೆ

[17] ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು. ತರುವಾಯ ಅವರು ಭಿನ್ನತೆ ತಾಳಿದರು. ನಿಮ್ಮ ಒಡೆಯನ ಕಡೆಯಿಂದ ಮೊದಲೇ ಒಂದು ನಿರ್ಧಾರ ಇಲ್ಲದೆ ಇದ್ದಿದ್ದರೆ, ಅವರು ಪರಸ್ಪರ ಭಿನ್ನತೆ ತಾಳಿರುವ ವಿಷಯವನ್ನು ಇತ್ಯರ್ಥಗೊಳಿಸಿ ಬಿಡಲಾಗುತ್ತಿತ್ತು

[18] ಆತನಿಗೆ (ದೂತರಿಗೆ) ಆತನ ಒಡೆಯನ ಕಡೆಯಿಂದ ಯಾವುದೇ ನಿದರ್ಶನವನ್ನು ಯಾಕೆ ಇಳಿಸಿಕೊಡಲಾಗಿಲ್ಲ? ಎಂದು ಅವರು ಕೇಳುತ್ತಾರೆ. ಹೇಳಿರಿ; ಗುಪ್ತ ವಿಚಾರಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಆದ್ದರಿಂದ ನೀವು ಕಾಯಿರಿ. ನಿಮ್ಮ ಜೊತೆ ನಾನೂ ಕಾಯುತ್ತೇನೆ

[19] ಜನರು ಯಾವುದಾದರೂ ಸಂಕಟದಲ್ಲಿ ಸಿಲುಕಿಕೊಂಡ ಬಳಿಕ ನಾವು ಅವರಿಗೆ ಅನುಗ್ರಹದ ರುಚಿ ಉಣಿಸಿದರೆ, ಆಗಲೇ ಅವರು ನಮ್ಮ ವಚನಗಳ ವಿರುದ್ಧ ಯೋಜನೆಗಳನ್ನು ರೂಪಿಸಲಾರಂಭಿಸುತ್ತಾರೆ. ಹೇಳಿರಿ; ಯೋಜನೆಗಳ ವಿಷಯದಲ್ಲಿ ಅಲ್ಲಾಹನು ಹೆಚ್ಚು ಕ್ಷಿಪ್ರನಾಗಿದ್ದಾನೆ. ನಮ್ಮ ದೂತರು (ಮಲಕ್‌ಗಳು) ನೀವು ಮಾಡುತ್ತಿರುವ ಎಲ್ಲ ಯೋಜನೆಗಳನ್ನು ದಾಖಲಿಸಿಡುತ್ತಿದ್ದಾರೆ

[20] ನಿಮ್ಮನ್ನು ನೆಲದಲ್ಲೂ ಜಲದಲ್ಲೂ ಸಾಗಿಸುವವನು ಅವನೇ. ನೀವು ಹಡಗುಗಳಲ್ಲಿರುವಾಗ – ಅವುಗಳು ಜನರನ್ನು ಹೊತ್ತು ಪೂರಕ ಗಾಳಿಯ ನೆರವಿನಿಂದ ಮುನ್ನಡೆಯುತ್ತವೆ ಮತ್ತು ಅವರು ಅದರಿಂದ ತುಂಬಾ ಸಂತುಷ್ಟರಾಗಿ ಬಿಡುತ್ತಾರೆ. (ಆ ಬಳಿಕ) ಹಠಾತ್ತನೆ ಸುಳಿಗಾಳಿಯು ಅವರನ್ನು ತಟ್ಟಿದಾಗ ಹಾಗೂ ಎಲ್ಲ ದಿಕ್ಕುಗಳಿಂದ ಅಲೆಗಳು ಅವರೆಡೆಗೆ ಏರಿ ಬಂದಾಗ, ತಾವು ಅವುಗಳೊಳಗೆ ಸಿಕ್ಕಿಕೊಂಡೆವು ಎಂದು ಅವರಿಗೆ ಅನಿಸುತ್ತದೆ. (ಆಗ) ಅವರು ಧರ್ಮವನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿಟ್ಟು ಅವನಿಗೆ ಮೊರೆ ಇಡುತ್ತಾರೆ (ಮತ್ತು) ‘‘ನೀನು ನಮ್ಮನ್ನು ಇದರಿಂದ ರಕ್ಷಿಸಿದರೆ ನಾವು ಖಂಡಿತ ಕೃತಜ್ಞರ ಸಾಲಿಗೆ ಸೇರುವೆವು’’ (ಎನ್ನುತ್ತಾರೆ)

[21] ಕೊನೆಗೆ ಅವನು ಅವರನ್ನು ರಕ್ಷಿಸಿದಾಗ, ಅವರು ಭೂಮಿಯಲ್ಲಿ ಅನ್ಯಾಯವಾಗಿ ಮೆರೆಯಲಾರಂಭಿಸುತ್ತಾರೆ. ಮಾನವರೇ, ನಿಮ್ಮ ಬಂಡಾಯವು ಖಂಡಿತ ನಿಮ್ಮ ಪಾಲಿಗೇ ವಿನಾಶಕಾರಿಯಾಗಿದೆ. ಇಹಲೋಕ ಜೀವನದ ಬಂಡವಾಳ (ತೀರಾ ಸೀಮಿತ). ಆ ಬಳಿಕ ನೀವು ನಮ್ಮ ಕಡೆಗೇ ಮರಳುವಿರಿ. ಆಗ, ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ನಿಮಗೆ ನಾವು ತಿಳಿಸುವೆವು

[22] ಇಹಲೋಕ ಜೀವನದ ಉದಾಹರಣೆಯು ಹೀಗಿದೆ; ನಾವು ಆಕಾಶದಿಂದ ನೀರನ್ನು ಸುರಿಸಿದೆವು. ಅದರಿಂದ, ಮಾನವರು ಮತ್ತು ಜಾನುವಾರುಗಳು ತಿನ್ನುವಂತಹ ಭೂಮಿಯ ವಿವಿಧ ಬೆಳೆಗಳು ಬೆಳೆದವು. ಕೊನೆಗೆ, ಭೂಮಿಯು ತನ್ನ ಸಹಜ ಆಭರಣಗಳೊಂದಿಗೆ ಸಂಪನ್ನವಾಗಿ, ಅಲಂಕೃತವಾದಾಗ, ಭೂ ಮಾಲಕರುಗಳು, ಅದು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿದೆ ಎಂದು ಭಾವಿಸಿದರು. ಆಗಲೇ, ರಾತ್ರಿ ಅಥವಾ ಹಗಲಲ್ಲಿ ನಮ್ಮ ಆದೇಶ ಬಂದು ಬಿಟ್ಟಿತು ಮತ್ತು ನಾವು, ಅಲ್ಲಿ ನಿನ್ನೆ ಏನೂ ಇರಲೇ ಇಲ್ಲವೆಂಬಂತೆ ಅದನ್ನು ಧ್ವಂಸಗೊಳಿಸಿಬಿಟ್ಟೆವು. ಈ ರೀತಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸುತ್ತೇವೆ – ಚಿಂತಿಸುವವರಿಗಾಗಿ

[23] ಅಲ್ಲಾಹನು ಶಾಂತಿ ಭವನದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸ್ಥಿರವಾದ ಸನ್ಮಾರ್ಗದೆಡೆಗೆ ನಡೆಸುತ್ತಾನೆ

[24] ಒಳಿತನ್ನು ಸಂಪಾದಿಸಿದವರಿಗೆ, ಒಳ್ಳೆಯ ಪ್ರತಿಫಲ, ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದು ಸಿಗಲಿದೆ. ಕರಾಳತೆಯಾಗಲಿ ಅಪಮಾನವಾಗಲಿ ಅವರ ಮುಖವನ್ನು ಆವರಿಸಲಾರದು. ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು

[25] ಇನ್ನು ಕೆಡುಕುಗಳನ್ನು ಸಂಪಾದಿಸಿದವರು – ಅವರ ಪ್ರತಿಯೊಂದು ಕೆಡುಕಿಗೆ ಅಷ್ಟೇ ಪ್ರತಿಫಲ ಸಿಗುವುದು. ಅಪಮಾನವು ಅವರನ್ನು ಆವರಿಸಿರುವುದು. ಅಲ್ಲಾಹನಿಂದ ಅವರನ್ನು ರಕ್ಷಿಸುವವರು ಯಾರೂ ಇರಲಾರರು. ಕಾರ್ಗತ್ತಲು ತುಂಬಿದ ರಾತ್ರಿಯ ಒಂದು ಪದರವು ಅವರ ಮುಖಗಳನ್ನು ಮುಚ್ಚಿದಂತಿರುವುದು. ಅವರೇ ನರಕದವರು. ಅದರಲ್ಲಿ ಅವರು ಸದಾಕಾಲ ಇರುವರು

[26] ನಾವು ಅವರೆಲ್ಲರನ್ನೂ ಒಂದೆಡೆ ಸೇರಿಸುವ ದಿನ, ಬಹುದೇವಾರಾಧಕರೊಡನೆ ನಾವು ಹೇಳುವೆವು; ‘‘ನೀವು ಮತ್ತು ನಿಮ್ಮ ದೇವರುಗಳು ನಿಮ್ಮ ಸ್ಥಾನದಲ್ಲಿ ನಿಂತುಕೊಂಡಿರಿ.’’ ತರುವಾಯ ನಾವು ಅವರ ನಡುವೆ ಒಡಕು ಮೂಡಿಸುವೆವು. ಆಗ ಅವರ ದೇವರುಗಳು (ತಮ್ಮ ಭಕ್ತರೊಡನೆ) ಹೇಳುವರು; ‘‘ನೀವು ಎಂದೂ ನಮ್ಮನ್ನು ಪೂಜಿಸುತ್ತಿರಲಿಲ್ಲ’’

[27] ‘‘ನಿಮ್ಮ ಹಾಗೂ ನಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಮಗಂತು ನೀವು ಮಾಡುತ್ತಿದ್ದ ಪೂಜೆಯ ಅರಿವೇ ಇರಲಿಲ್ಲ.’’

[28] ಅಂದು ಪ್ರತಿಯೊಬ್ಬನೂ ತಾನು ಈ ಹಿಂದೆ ಮಾಡಿದ್ದೆಲ್ಲವನ್ನೂ ಸ್ವತಃ ಅನುಭವಿಸುವನು ಮತ್ತು ಎಲ್ಲವನ್ನೂ ಅವರ ನೈಜ ಪೋಷಕನಾದ ಅಲ್ಲಾಹನೆಡೆಗೆ ಮರಳಿಸಲಾಗುವುದು. ಅವರು ಕಟ್ಟಿಕೊಂಡಿದ್ದ ಎಲ್ಲ ಕೃತಕ ಆಶ್ರಯಗಳೂ ಅವರಿಂದ ಕಳೆದು ಹೋಗಿರುವವು

[29] ಹೇಳಿರಿ; ‘‘ಆಕಾಶದಿಂದಲೂ ಭೂಮಿಯಿಂದಲೂ ನಿಮಗೆ ಆಹಾರವನ್ನು ಒದಗಿಸುವವನು ಯಾರು? ಕೇಳುವ ಹಾಗೂ ನೋಡುವ ಸಾಮರ್ಥ್ಯಗಳ ಒಡೆಯನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುವವನು ಯಾರು? ಮತ್ತು ವಿಶ್ವ ವ್ಯವಸ್ಥೆಯನ್ನು ನಡೆಸುತ್ತಿರುವವನು ಯಾರು?’’- ಅವರು ‘‘ಅಲ್ಲಾಹ್’’ ಎಂದು ಹೇಳುವರು. ಹೇಳಿರಿ; ‘‘(ಇಷ್ಟಾಗಿಯೂ) ನೀವು ಅಂಜುವುದಿಲ್ಲವೇ?’’

[30] ಆ ಅಲ್ಲಾಹನೇ ನಿಮ್ಮ ನಿಜವಾದ ಒಡೆಯನು. ಇನ್ನು ಸತ್ಯದ ಬಳಿಕ ಇರುವುದು ಮಿಥ್ಯವಲ್ಲದೆ ಮತ್ತೇನು? ಹೀಗಿರುತ್ತಾ ನೀವು ಅದೆಲ್ಲಿ ಅಲೆದಾಡುತ್ತಿರುವಿರಿ?’’

[31] ಹೀಗೆ, ‘‘ಅವರು ನಂಬುವವರಲ್ಲ’’ ಎಂಬ ನಿಮ್ಮ ಒಡೆಯನ ಮಾತು, ಅವಿಧೇಯರ ಪಾಲಿಗೆ ಸತ್ಯವಾಯಿತು

[32] ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸೃಷ್ಟಿಯನ್ನು ಆರಂಭಿಸುವವರು ಮತ್ತು ಅದನ್ನು ಪುನರಾವರ್ತಿಸುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ಅವನೇ ಅದನ್ನು ಪುನರಾವರ್ತಿಸುತ್ತಾನೆ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ

[33] ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಅನುಸರಣೆಗೆ ಹೆಚ್ಚು ಅರ್ಹನು, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವನೋ ಅಥವಾ ಯಾರಾದರೂ ತನಗೆ ಸರಿದಾರಿ ತೋರದಿದ್ದರೆ ಸ್ವತಃ ಸರಿದಾರಿಯನ್ನು ಕಾಣಲಾಗದವನೋ? ನಿಮಗೇನಾಗಿದೆ? ನೀವು ಅದೆಂತಹ ನಿರ್ಧಾರಗಳನ್ನ್ನು ಕೈಗೊಳ್ಳುತ್ತಿರುವಿರಿ

[34] ಅವರಲ್ಲಿ ಹೆಚ್ಚಿನವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಾಗಲಾರದು. ಅವರು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು

[35] ಈ ಕುರ್‌ಆನ್, ಅಲ್ಲಾಹನ ಹೊರತು ಬೇರೆ ಯಾರಾದರೂ ರಚಿಸಬಹುದಾದ ಕೃತಿಯಲ್ಲ್ಲ . ನಿಜವಾಗಿ ಇದು, ಈಗಾಗಲೇ ತನ್ನ ಮುಂದಿರುವವುಗಳನ್ನು (ಗತಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ ಮತ್ತು ದಿವ್ಯ ಆದೇಶಗಳನ್ನು ವಿವರಿಸುತ್ತದೆ. ಇದು ಸರ್ವಲೋಕಗಳ ಒಡೆಯನ ಕಡೆಯಿಂದ ಬಂದಿದೆ ಎಂಬ ಬಗ್ಗೆ ಸಂದೇಹವೇ ಇಲ್ಲ

[36] (ದೂತರೇ,) ‘‘ಈತನೇ ಇದನ್ನು ರಚಿಸಿದ್ದಾನೆ’’ ಎಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ನೀವು ಸತ್ಯವಂತರಾಗಿದ್ದರೆ, ಇಂತಹ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಮತ್ತು (ಅದಕ್ಕಾಗಿ) ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ

[37] ನಿಜವಾಗಿ ಅವರು, ತಮ್ಮ ಜ್ಞಾನದ ವ್ಯಾಪ್ತಿಗೆ ಮೀರಿದ ಮತ್ತು ತಮ್ಮ ಮುಂದೆ ಸಾಕ್ಷಾತ್ಕಾರವಾಗಿಲ್ಲದ ಎಲ್ಲವನ್ನೂ ಸುಳ್ಳೆಂದು ಧಿಕ್ಕರಿಸುತ್ತಾರೆ. ಅವರ ಹಿಂದಿನವರೂ ಇದೇ ರೀತಿ (ದಿವ್ಯ ಸಂದೇಶವನ್ನು) ಸುಳ್ಳೆಂದು ಧಿಕ್ಕರಿಸಿದ್ದರು. (ಇಂತಹ) ಅಕ್ರಮಿಗಳ ಗತಿ ಏನಾಯಿತೆಂಬುದನ್ನು ನೋಡಿರಿ

[38] ಇದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಉಳ್ಳವರೂ ಅವರಲ್ಲಿದ್ದಾರೆ ಮತ್ತು ಇದರಲ್ಲಿ ನಂಬಿಕೆ ಇಲ್ಲದವರೂ ಅವರಲ್ಲಿದ್ದಾರೆ. ನಿಮ್ಮ ಒಡೆಯನು ಗೊಂದಲಕೋರರನ್ನು ಚೆನ್ನಾಗಿ ಬಲ್ಲನು

[39] ಅವರು ನಿಮ್ಮನ್ನು ಸುಳ್ಳನೆಂದು ಧಿಕ್ಕರಿಸಿದರೆ ನೀವು ಹೇಳಿರಿ; ನನಗೆ ನನ್ನ ಕರ್ಮ ಮತ್ತು ನಿಮಗೆ ನಿಮ್ಮ ಕರ್ಮ. ನಾನು ಮಾಡುವ ಯಾವ ಕರ್ಮಕ್ಕೂ ನೀವು ಹೊಣೆಗಾರರಲ್ಲ ಮತ್ತು ನೀವು ಮಾಡುವ ಯಾವ ಕರ್ಮಕ್ಕೂ ನಾನು ಹೊಣೆಗಾರನಲ್ಲ

[40] ಅವರಲ್ಲಿ ಕೆಲವರು ನಿಮ್ಮೆಡೆಗೆ ಕಿವಿಗೊಟ್ಟಿರುತ್ತಾರೆ. ಆದರೆ ನೀವೇನು ಕಿವುಡರಿಗೆ ಕೇಳಿಸುವಿರಾ – ಅವರು ವಿವೇಚಿಸಲಾಗದವರಾಗಿದ್ದರೂ

[41] ಇನ್ನು, ಅವರಲ್ಲಿ ಕೆಲವರು ನಿಮ್ಮೆಡೆಗೆ ನೋಡುತ್ತಿರುತ್ತಾರೆ. ಆದರೆ, ನೀವೇನು ಕುರುಡರಿಗೆ ದಾರಿ ತೋರಿಸುವಿರಾ -ಅವರು ಏನನ್ನೂ ನೋಡಲಾಗದವರಾಗಿದ್ದರೂ

[42] ಅಲ್ಲಾಹನಂತು ಮಾನವರಿಗೆ ಖಂಡಿತ ಯಾವುದೇ ಅನ್ಯಾಯವನ್ನು ಮಾಡುವುದಿಲ್ಲ. ನಿಜವಾಗಿ ಮಾನವರೇ ತಮ್ಮ ಮೇಲೆ ಅನ್ಯಾಯವೆಸಗಿಕೊಳ್ಳುತ್ತಾರೆ

[43] ಅವನು ಅವರನ್ನೆಲ್ಲಾ ಒಟ್ಟು ಸೇರಿಸುವ ದಿನ, ತಾವು (ಇಹಲೋಕದಲ್ಲಿ) ಕಳೆದುದು, ಹಗಲಿನ ಕೇವಲ ಒಂದು ಕ್ಷಣಮಾತ್ರ ಎಂದು ಅವರಿಗೆ ಅನಿಸುವುದು ಮತ್ತು ಅವರು ಪರಸ್ಪರರನ್ನು ಗುರುತಿಸುವರು. ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಸುಳ್ಳೆಂದು ತಿರಸ್ಕರಿಸಿದವರು ನಷ್ಟದಲ್ಲಿದ್ದಾರೆ. ಅವರು ಸರಿದಾರಿಗೆ ಬರುವವರೇ ಅಲ್ಲ

[44] (ದೂತರೇ,) ನಾವು ಅವರಿಗೆ ಆಶ್ವಾಸನೆ ನೀಡುತ್ತಿರುವ ಕೆಲವು ವಸ್ತುಗಳನ್ನು (ಈಗಲೇ) ನಿಮಗೆ ತೋರಿಸಿದರೂ, ಅಥವಾ (ಅದಕ್ಕೆ ಮುನ್ನ) ನಾವು ನಿಮ್ಮನ್ನು ಮೃತರಾಗಿಸಿದರೂ – ಅವರಂತು ನಮ್ಮ ಕಡೆಗೇ ಮರಳಿ ಬರಬೇಕಾಗಿದೆ. ಅವರು ಮಾಡುತ್ತಿರುವ ಎಲ್ಲದಕ್ಕೂ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ

[45] ಪ್ರತಿಯೊಂದು ಸಮುದಾಯಕ್ಕೂ ಒಬ್ಬ ದೇವದೂತರಿದ್ದಾರೆ. ಅವರ ದೂತರು ಅವರ ಬಳಿಗೆ ಬಂದಾಗ, ಅವರ ನಡುವೆ ನ್ಯಾಯೋಚಿತವಾದ ತೀರ್ಮಾನ ನಡೆದು ಬಿಡುತ್ತದೆ. ಅವರ ಮೇಲೆ ಯಾವುದೇ ಅನ್ಯಾಯ ನಡೆಯುವುದಿಲ್ಲ

[46] ‘‘ನೀವು ಸತ್ಯವಂತರಾಗಿದ್ದರೆ ಆ ನಿಮ್ಮ ಆಶ್ವಾಸನೆಯು ಈಡೇರುವುದು ಯಾವಾಗ?’’ (ಎಂದು ಅವರು ಕೇಳುತ್ತಾರೆ)

[47] (ದೂತರೇ,) ನೀವು ಹೇಳಿರಿ; ನನಗಂತು, ಅಲ್ಲಾಹನು ಇಚ್ಛಿಸದೆ ಸ್ವತಃ ನನ್ನ ಜೀವಕ್ಕೂ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರವಿಲ್ಲ. ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲ ನಿಶ್ಚಿತವಾಗಿದೆ. ಆ ಕಾಲವು ಬಂದು ಬಿಟ್ಟಾಗ ಅದನ್ನು ಕ್ಷಣಮಾತ್ರಕ್ಕಾದರೂ ಹಿಂದೂಡಲು ಅಥವಾ ಮುಂದೂಡಲು ಅವರಿಗೆ ಸಾಧ್ಯವಾಗದು

[48] ಹೇಳಿರಿ; ಅವನ ಶಿಕ್ಷೆಯು ರಾತ್ರಿ ಅಥವಾ ಹಗಲಲ್ಲಿ ನಿಮ್ಮ ಮೇಲೆ ಬಂದೆರಗಿದರೆ (ಏನಾದೀತೆಂದು) ನೀವು ಚಿಂತಿಸಿ ನೋಡಿರುವಿರಾ? ಅದರಲ್ಲಿ, ಅಪರಾಧಿಗಳು ಆತುರ ಪಡುವ ಅದಾವ ವಿಶೇಷತೆ ಇದೆ

[49] ನೀವೇನು, ಅದು ಬಂದು ಬಿಟ್ಟಾಗ ಮಾತ್ರವೇ ಅದನ್ನು ನಂಬುವಿರಾ? (ಆಗ ಹೇಳಲಾಗುವುದು;) ಈಗ ನಂಬುತ್ತಿರುವಿರಾ? ನೀವಂತು ಇದಕ್ಕಾಗಿ ತುಂಬಾ ಅವಸರ ಪಡುತ್ತಿದ್ದಿರಿ

[50] ಆ ಬಳಿಕ ಅಕ್ರಮಿಗಳೊಡನೆ ಹೇಳಲಾಗುವುದು; ಸವಿಯಿರಿ ಶಾಶ್ವತ ಯಾತನೆಯನ್ನು. ನಿಮ್ಮ ಶ್ರಮದ ಪ್ರತಿಫಲವಲ್ಲದೆ ಬೇರೇನಾದರೂ ನಿಮಗೆ ಸಿಗಲಿಕ್ಕಿದೆಯೇ

[51] ಅದು ಸತ್ಯವೇ? ಎಂದು ಅವರು ನಿಮ್ಮಿಂದ ತಿಳಿಯಬಯಸುತ್ತಾರೆ. ಹೇಳಿರಿ; ಹೌದು, ನನ್ನ ಒಡೆಯನ ಆಣೆ, ಅದು ಖಂಡಿತ ಸತ್ಯವಾಗಿದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ನಿಮಗೆ ಖಂಡಿತ ಸಾಧ್ಯವಾಗದು

[52] ಅಕ್ರಮವೆಸಗಿದ ಪ್ರತಿಯೊಬ್ಬನ ಬಳಿ, ಭೂಮಿಯಲ್ಲಿರುವ ಎಲ್ಲವೂ ಇದ್ದು, ಅವನು ಅದನ್ನು ಪರಿಹಾರವಾಗಿ ಕೊಟ್ಟರೂ (ತಪ್ಪಿಸಿಕೊಳ್ಳಲು ಸಾಧ್ಯವಾಗದು). ಅವರು ಶಿಕ್ಷೆಯನ್ನು ಕಂಡಾಗ, ಒಳಗೊಳಗೇ ಪಶ್ಚಾತ್ತಾಪ ಪಡುವರು. ಅವರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ನಡೆಸಿ ಬಿಡಲಾಗುವುದು ಮತ್ತು ಅವರ ಮೇಲೆ ಯಾವುದೇ ಅನ್ಯಾಯ ನಡೆಯದು

[53] ತಿಳಿಯಿರಿ! ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ತಿಳಿಯಿರಿ! ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ

[54] ಅವನೇ ಜೀವಂತಗೊಳಿಸುವವನು ಮತ್ತು ಅವನೇ ಮರಣ ನೀಡುವವನು, ನೀವೆಲ್ಲಾ ಅವನೆಡೆಗೇ ಮರಳಿಸಲ್ಪಡುವಿರಿ

[55] ಮಾನವರೇ, ಇದೋ ಬಂದಿದೆ ನಿಮ್ಮೆಡೆಗೆ, ನಿಮ್ಮ ಒಡೆಯನ ಕಡೆಯಿಂದ ಒಂದು ಉಪದೇಶ (ಕುರ್‌ಆನ್). ನಿಮ್ಮ ಮನಸ್ಸುಗಳಲ್ಲಿರುವ ಎಲ್ಲದಕ್ಕೂ ಇದು ಪರಿಹಾರವಾಗಿದೆ. ಹಾಗೆಯೇ, ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ

[56] ಹೇಳಿರಿ; ಇದು ಅಲ್ಲಾಹನ ಔದಾರ್ಯ ಮತ್ತು ಅವನ ಅನುಗ್ರಹದ ಫಲವಾಗಿದೆ. ಇದಕ್ಕಾಗಿ ಜನರು ಸಂಭ್ರಮಿಸಲಿ. ಅವರು ಸಂಗ್ರಹಿಸುತ್ತಿರುವ ಎಲ್ಲವುಗಳಿಗಿಂತ ಇದು ಉತ್ತಮವಾಗಿದೆ

[57] ಹೇಳಿರಿ; ಅಲ್ಲಾಹನು ನಿಮಗೆ ಇಳಿಸಿಕೊಟ್ಟಿರುವ ಆಹಾರವನ್ನು ನೀವು ನೋಡಿದಿರಾ? ಅದರಲ್ಲಿ ನೀವೇ ಕೆಲವನ್ನು ನಿಷಿದ್ಧ ಹಾಗೂ ಕೆಲವನ್ನು ಸಮ್ಮತವೆಂದು ಗುರುತಿಸಿಕೊಂಡಿರುವಿರಿ. (ಹಾಗೆಮಾಡಲು) ಅಲ್ಲಾಹನು ನಿಮಗೆ ಅನುಮತಿ ನೀಡಿರುವನೇ? ಅಥವಾ ನೀವು ಅವನ ಮೇಲೆ ಸುಳ್ಳನ್ನು ಆರೋಪಿಸುತ್ತಿರುವಿರಾ

[58] ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವವರು, ಪುನರುತ್ಥಾನ ದಿನದ ಕುರಿತು ಏನೆಂದು ಭಾವಿಸಿಕೊಂಡಿದ್ದಾರೆ? ಖಂಡಿತವಾಗಿಯೂ ಅಲ್ಲಾಹನು ಎಲ್ಲ ಮಾನವರ ಪಾಲಿಗೆ ಉದಾರನಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ

[59] ನೀವು ಇರುವ ಪ್ರತಿಯೊಂದು ಸನ್ನಿವೇಶಕ್ಕೆ , ಕುರ್‌ಆನ್‌ನ ಯಾವುದೇ ಭಾಗವನ್ನು ನೀವು ಓದಿದ್ದಕ್ಕೆ , ಮತ್ತು ನೀವು ನಿರತರಾಗಿರುವ ಪ್ರತಿಯೊಂದು ಕರ್ಮಕ್ಕೆ ನಾವು (ಅಲ್ಲಾಹನು) ಸಾಕ್ಷಿಯಾಗದೆ ಇರುವುದಿಲ್ಲ. ಹಾಗೆಯೇ, ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಇರುವ, ಕಣಗಾತ್ರದ ವಸ್ತು ಕೂಡಾ ನಿಮ್ಮ ಒಡೆಯನಿಂದ ಮರೆಯಾಗಿರುವುದಿಲ್ಲ. ಮಾತ್ರವಲ್ಲ, ಅದಕ್ಕಿಂತಲೂ ಸಣ್ಣದಾದ ಅಥವಾ ದೊಡ್ಡದಾದ ಯಾವ ವಸ್ತುವೂ ಒಂದು ಸ್ಪಷ್ಟವಾದ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ

[60] ತಿಳಿಯಿರಿ! ಅಲ್ಲಾಹನ ಮಿತ್ರರಿಗೆ ಯಾವ ಭಯವೂ ಇಲ್ಲ ಮತ್ತು ಅವರು ದುಃಖಿತರೂ ಆಗಲಾರರು

[61] ಅವರು ಸತ್ಯದಲ್ಲಿ ನಂಬಿಕೆ ಇಟ್ಟು, ಧರ್ಮನಿಷ್ಠರಾಗಿ ಬದುಕಿದವರು

[62] ಅವರಿಗೆ ಈ ಲೋಕದಲ್ಲೂ, ಪರಲೋಕದಲ್ಲೂ ಶುಭವಾರ್ತೆ ಇದೆ. ಅಲ್ಲಾಹನ ಮಾತುಗಳು ಬದಲಾಗುವುದಿಲ್ಲ. ಅದು (ಅವನ ಶುಭವಾರ್ತೆ) ನಿಜಕ್ಕೂ ಮಹಾ ಸಾಫಲ್ಯವಾಗಿದೆ

[63] ಅವರ (ಧಿಕ್ಕಾರಿಗಳ) ಮಾತು ನಿಮ್ಮನ್ನು ದುಃಖಿಸದಿರಲಿ. ಖಂಡಿತವಾಗಿಯೂ ಗೌರವವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[64] ನಿಮಗೆ ತಿಳಿದಿರಲಿ, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ಅಲ್ಲಾಹನ ಹೊರತು ಸಹಭಾಗಿಗಳನ್ನು ಪ್ರಾರ್ಥಿಸುವವರು ಅದೇನನ್ನು ಅನುಸರಿಸುತ್ತಿದ್ದಾರೆ? ನಿಜವಾಗಿ ಅವರು ಅನುಸರಿಸುತ್ತಿರುವುದು ತಮ್ಮ ಊಹೆಯನ್ನು ಮಾತ್ರ. ಅವರು ಕೇವಲ ಭ್ರಮಿಸುತ್ತಿದ್ದಾರೆ

[65] ಅವನೇ, ನೀವು ವಿರಮಿಸಬೇಕೆಂದು ನಿಮಗಾಗಿ ರಾತ್ರಿಯನ್ನು ನಿರ್ಮಿಸಿದವನು ಮತ್ತು (ಅವನೇ) ಹಗಲನ್ನು ಪ್ರಕಾಶಮಾನವಾಗಿಸಿದವನು. ಕೇಳುವ ಜನರಿಗೆ ಇದರಲ್ಲಿ ಖಂಡಿತವಾಗಿಯೂ ನಿದರ್ಶನಗಳಿವೆ

[66] ಅಲ್ಲಾಹನು ಒಬ್ಬನನ್ನು ಪುತ್ರನಾಗಿಸಿಕೊಂಡಿದ್ದಾನೆ ಎಂದು ಅವರು ಹೇಳುತ್ತಾರೆ – ಅವನಂತು ತುಂಬಾ ಪಾವನನು. ಅವನು ಎಲ್ಲ ಅಗತ್ಯಗಳಿಂದ ಮುಕ್ತನು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ. (ಅಲ್ಲಾಹನಿಗೆ ಪುತ್ರನಿದ್ದಾನೆ ಎನ್ನುವವರೇ,) ನಿಮ್ಮ ಬಳಿ ಈ ಕುರಿತು ಯಾವ ಪುರಾವೆಯೂ ಇಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ

[67] ಹೇಳಿರಿ; ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಖಂಡಿತ ಸಫಲರಾಗುವುದಿಲ್ಲ

[68] (ಇದೆಲ್ಲಾ) ಈ ಲೋಕದ ಅಲ್ಪಕಾಲದ ಮೋಜು. ಆ ಬಳಿಕ ಅವರೆಲ್ಲರೂ ನಮ್ಮ ಬಳಿಗೆ ಮರಳಿ ಬರುವರು, ಆಗ ನಾವು, ಅವರ ಧಿಕ್ಕಾರದ ಫಲವಾಗಿ ಅವರಿಗೆ ಭಾರೀ ಕಠಿಣ ಶಿಕ್ಷೆಯ ಸವಿಯನ್ನು ಉಣಿಸುವೆವು

[69] ಅವರಿಗೆ ನೂಹ್‌ರ ಸಂಗತಿಯನ್ನು ಓದಿ ಕೇಳಿಸಿರಿ. ಅವರು ತಮ್ಮ ಜನಾಂಗದೊಡನೆ ಹೇಳಿದರು; ನನ್ನ ಜನಾಂಗದವರೇ, ನನ್ನ ಅಸ್ತಿತ್ವ ಹಾಗೂ ಅಲ್ಲಾಹನ ವಚನಗಳ ಮೂಲಕ ನಾನು ನಿಮಗೆ ನೀಡುತ್ತಿರುವ ಉಪದೇಶವು ನಿಮಗೆ ತುಂಬಾ ಭಾರವಾಗುತ್ತಿದ್ದರೆ (ನಿಮಗೆ ತಿಳಿದಿರಲಿ;) ನಾನಂತು ಅಲ್ಲಾಹನಲ್ಲಿ ಭರವಸೆ ಇಟ್ಟಿದ್ದೇನೆ. ನೀವು ಮತ್ತು (ದೇವತ್ವದಲ್ಲಿನ) ನಿಮ್ಮ ಪಾಲುದಾರರು ಸೇರಿ (ನನ್ನ ವಿರುದ್ಧ) ನಿಮ್ಮ ಯೋಜನೆಯನ್ನು ಪಕ್ವಗೊಳಿಸಿರಿ. ನಿಮ್ಮ ಯೋಜನೆಯಲ್ಲಿ ನಿಮಗೆ ಯಾವುದೇ ಗೊಂದಲ ಉಳಿಯದಿರಲಿ. ಆ ಬಳಿಕ ನೀವು ನನ್ನ ವಿರುದ್ಧ ಕಾರ್ಯಾಚರಣೆಗೆ ಇಳಿಯಿರಿ. ನನಗೆ ನೀವು ಯಾವುದೇ ಕಾಲಾವಕಾಶವನ್ನೂ ಕೊಡಬೇಡಿ

[70] ನೀವೀಗ ಮುಖ ತಿರುಗಿಸಿಕೊಳ್ಳುವಿರಾದರೆ, (ನಿಮಗೆ ತಿಳಿದಿರಲಿ;) ನಾನು ನಿಮ್ಮೊಡನೆ ಯಾವುದೇ ಪ್ರತಿಫಲವನ್ನು ಬೇಡಿಲ್ಲ. ನನ್ನ ಪ್ರತಿಫಲವು ಅಲ್ಲಾಹನ ಹೊರತು ಬೇರಾರ ಬಳಿಯೂ ಇಲ್ಲ. ನಾನು ಮುಸ್ಲಿಮನಾಗಿರಬೇಕು ಎಂದು ನನಗೆ, ಆದೇಶಿಸಲಾಗಿದೆ

[71] ಅವರು (ಜನಾಂಗದವರು) ಅವರನ್ನು (ನೂಹ್‌ರನ್ನು) ಸುಳ್ಳನೆಂದು ತಿರಸ್ಕರಿಸಿದರು. ಕೊನೆಗೆ ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅವರನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ಮಾಡಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ನೋಡಿರಿ, ಎಚ್ಚರಿಸಲ್ಪಟ್ಟವರ ಗತಿ ಏನಾಯಿತೆಂದು

[72] ಅವರ ಬಳಿಕ ನಾವು ಹಲವು ದೂತರುಗಳನ್ನು ಅವರ ಜನಾಂಗಗಳೆಡೆಗೆ ಕಳಿಸಿದೆವು. ಅವರು (ದೂತರು) ಅವರ ಬಳಿಗೆ ಸ್ಪಷ್ಟ ನಿದರ್ಶನಗಳನ್ನು ತಂದರು. ಆದರೆ ಅವರು, ತಾವು ಈ ಹಿಂದೆ ಸುಳ್ಳೆಂದು ತಿರಸ್ಕರಿಸಿದ್ದನ್ನು ನಂಬಲು ಸಿದ್ಧರಿರಲಿಲ್ಲ. ಈ ರೀತಿ ನಾವು ಅಕ್ರಮಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತೇವೆ

[73] ಅವರ ಬಳಿಕ ನಾವು ಮೂಸಾ ಹಾಗೂ ಹಾರೂನ್‌ರನ್ನು ನಮ್ಮ ನಿದರ್ಶನಗಳೊಂದಿಗೆ, ಫಿರ್‌ಔನ್ ಮತ್ತವನ ಅಧಿಕಾರಿಗಳ ಕಡೆಗೆ ಕಳಿಸಿದೆವು. ಆದರೆ ಅವರು ಅಹಂಕಾರ ತೋರಿದರು. ಅವರು ಒಂದು ಅಪರಾಧಿ ಜನಾಂಗವಾಗಿದ್ದರು

[74] ನಮ್ಮ ಕಡೆಯಿಂದ ಅವರ ಬಳಿಗೆ ಸತ್ಯವು ಬಂದಾಗ ಅವರು, ಖಂಡಿತವಾಗಿಯೂ ಇದು ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಹೇಳಿದರು

[75] ಮೂಸಾ ಹೇಳಿದರು; ಸತ್ಯವು ನಿಮ್ಮ ಬಳಿಗೆ ಬಂದಿರುವಾಗ ನೀವು ಇದೇನು ಹೇಳುತ್ತಿರುವಿರಿ? ಇದು ಮಾಟಗಾರಿಕೆಯೇ? ಮಾಟಗಾರರು ಸಫಲರಾಗುವುದಿಲ್ಲ

[76] ಅವರು ಹೇಳಿದರು; ನಾವು ನಮ್ಮ ಪೂರ್ವಜರನ್ನು ಯಾವ ದಾರಿಯಲ್ಲಿ ಕಂಡಿದ್ದೆವೋ ಅದರಿಂದ ನಮ್ಮನ್ನು ದಾರಿಗೆಡಿಸಬೇಕೆಂದು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೂ ಮೇಲ್ಮೆ ಪ್ರಾಪ್ತಿಯಾಗಬೇಕೆಂದು ನೀವು ನಮ್ಮ ಬಳಿಗೆ ಬಂದಿರುವಿರಾ? ನಾವಂತು ನಿಮ್ಮಿಬ್ಬರನ್ನೂ ನಂಬುವವರಲ್ಲ

[77] ಎಲ್ಲ ತಜ್ಞ ಮಾಟಗಾರರನ್ನು ನನ್ನ ಬಳಿಗೆ ಕರೆ ತನ್ನಿರಿ ಎಂದು ಫಿರ್‌ಔನ್ ಹೇಳಿದನು

[78] ಮಾಟಗಾರರು ಬಂದಾಗ ಅವರೊಡನೆ ಮೂಸಾ ಹೇಳಿದರು; ನೀವು ಎಸೆಯಬೇಕಾಗಿರುವುದನ್ನು ಎಸೆಯಿರಿ

[79] ಅವರು (ತಮ್ಮ ದಾಳಗಳನ್ನು) ಎಸೆದು ಬಿಟ್ಟಾಗ ಮೂಸಾ ಹೇಳಿದರು; ನೀವು ತಂದಿರುವುದೆಲ್ಲವೂ ಕೇವಲ ಇಂದ್ರಜಾಲವಾಗಿದೆ. ಖಂಡಿತವಾಗಿಯೂ ಅಲ್ಲಾಹನು ಅದನ್ನು ವ್ಯರ್ಥಗೊಳಿಸಿದನು. ಗೊಂದಲಕೋರರ ಕೃತ್ಯಗಳನ್ನು ಅಲ್ಲಾಹನು ಖಂಡಿತ ಸಫಲಗೊಳಿಸುವುದಿಲ್ಲ

[80] ಅಲ್ಲಾಹನು ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವೆಂದು ಸಾಬೀತು ಪಡಿಸುತ್ತಾನೆ – ಅಪರಾಧಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ

[81] ಮೂಸಾರ ಜನಾಂಗದ ಹೊಸ ಪೀಳಿಗೆಯವರ ಹೊರತು ಬೇರಾರೂ ಅವರನ್ನು ನಂಬಲಿಲ್ಲ – ಏಕೆಂದರೆ, ಫಿರ್‌ಔನ್ ಮತ್ತವನ ಅಧಿಕಾರಿಗಳು ತಮ್ಮನ್ನು ಹಿಂಸಿಸುವರೆಂದು ಅವರು ಅಂಜಿದ್ದರು. ಖಂಡಿತವಾಗಿಯೂ ಫಿರ್‌ಔನನು ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆದಿದ್ದನು ಮತ್ತು ಖಂಡಿತವಾಗಿಯೂ ಅವನು ಅತಿಕ್ರಮಿಯಾಗಿದ್ದನು

[82] ಮೂಸಾ ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನಲ್ಲಿ ವಿಶ್ವಾಸ ಉಳ್ಳವರಾಗಿದ್ದರೆ ಅವನಲ್ಲೇ ಭರವಸೆ ಇಡಿರಿ – ನೀವು ಮುಸ್ಲಿಮರಾಗಿದ್ದರೆ (ಇದುವೇ ನಿಮಗಿರುವ ದಾರಿ)

[83] ಅವರು (ಜನಾಂಗದವರು) ಹೇಳಿದರು; ನಾವು ಅಲ್ಲಾಹನಲ್ಲೇ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನು ನಮ್ಮನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಬೇಡ

[84] ಮತ್ತು ನೀನು, ನಿನ್ನ ಅನುಗ್ರಹದಿಂದ ನಮ್ಮನ್ನು ಧಿಕ್ಕಾರಿಗಳಿಂದ ರಕ್ಷಿಸು

[85] ‘‘ನೀವಿಬ್ಬರೂ ಈಜಿಪ್ತ್‌ನಲ್ಲಿ ನಿಮ್ಮ ಜನಾಂಗದವರಿಗಾಗಿ ಮನೆಗಳನ್ನು ಒದಗಿಸಿರಿ, ನಿಮ್ಮ ಮನೆಗಳನ್ನು ಪ್ರಾರ್ಥನಾಲಯಗಳಾಗಿ ಬಳಸಿಕೊಳ್ಳಿರಿ ಮತ್ತು ನಮಾಝ್ ಅನ್ನು ಪಾಲಿಸಿರಿ. ಮತ್ತು ವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ’’ ಎಂದು ನಾವು ಮೂಸಾ ಮತ್ತು ಅವರ ಸಹೋದರನ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು

[86] ಮೂಸಾ ಹೇಳಿದರು; ನಮ್ಮೊಡೆಯಾ, ನೀನು ಈ ಲೋಕದ ಬದುಕಿನಲ್ಲಿ ಫಿರ್‌ಔನ್ ಮತ್ತು ಅವನ ಅಧಿಕಾರಿಗಳಿಗೆ ಆಡಂಬರದ ವಸ್ತುಗಳನ್ನೂ ಸಂಪತ್ತನ್ನೂ ನೀಡಿರುವೆ. ನಮ್ಮೊಡೆಯಾ, ಅವರು ಜನರನ್ನು ನಿನ್ನ ಮಾರ್ಗದಿಂದ ದೂರ ಗೊಳಿಸಲಿಕ್ಕಾಗಿ (ಇದನ್ನೆಲ್ಲಾ ಬಳಸುತ್ತಿದ್ದಾರೆ). ನಮ್ಮೊಡೆಯಾ, ಅವರ ಸಂಪತ್ತುಗಳನ್ನು ನಾಶಪಡಿಸು ಮತ್ತು ಅವರು ಕಠಿಣ ಶಿಕ್ಷೆಯನ್ನು ಕಾಣುವ ತನಕವೂ ವಿಶ್ವಾಸವಿಡದಂತೆ, ಅವರ ಮನಸ್ಸುಗಳನ್ನು ಕಠೋರ ಗೊಳಿಸು

[87] ಅವನು (ಅಲ್ಲಾಹನು) ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ನೀವಿನ್ನು ಸ್ಥಿರವಾಗಿರಿ ಮತ್ತು ಅರಿವಿಲ್ಲದವರ ದಾರಿಯಲ್ಲಿ ಖಂಡಿತ ನಡೆಯಬೇಡಿ

[88] ಮುಂದೆ ನಾವು ಇಸ್ರಾಈಲರ ಸಂತತಿಗಳನ್ನು ಸಮುದ್ರದಿಂದ ಪಾರುಗೊಳಿಸಿದೆವು. ಫಿರ್‌ಔನ್ ಮತ್ತು ಅವನ ಪಡೆಗಳು ದ್ವೇಷ ಹಾಗೂ ವಿದ್ರೋಹದೊಂದಿಗೆ ಅವರನ್ನು ಹಿಂಬಾಲಿಸಿದರು. ಕೊನೆಗೆ ಅವನು ಮುಳುಗತೊಡಗಿದಾಗ, ‘‘ಇಸ್ರಾಈಲರ ಸಂತತಿಗಳು ಯಾರನ್ನು ನಂಬಿರುವರೋ ಅವನ ಹೊರತು ಬೇರೆ ದೇವರಿಲ್ಲ ಎಂದು ನಾನು ನಂಬುತ್ತೇನೆ ಮತ್ತು ನಾನು ಮುಸ್ಲಿಮನಾಗಿದ್ದೇನೆ’’ ಎಂದನು

[89] ಈಗ ನಂಬುವುದೇ? ನೀನಂತು ಈ ಹಿಂದೆ ಆಜ್ಞೆ ಮೀರುವವನಾಗಿದ್ದೆ ಮತ್ತು ಗೊಂದಲಕೋರನಾಗಿದ್ದೆ

[90] ನೀನು ನಿನ್ನ ಮುಂದಿನವರಿಗೆ ಒಂದು ಪಾಠವಾಗಬೇಕೆಂದು, ಇಂದು ನಾವು ನಿನ್ನ ಶರೀರವನ್ನು ರಕ್ಷಿಸುವೆವು . ಖಂಡಿತವಾಗಿಯೂ ಮಾನವರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಕುರಿತು ಮೂಢರಾಗಿದ್ದಾರೆ

[91] ಮುಂದೆ ನಾವು ಇಸ್ರಾಈಲ್ ಸಂತತಿಗಳಿಗೆ ಒಂದು ಸ್ಥಿರವಾದ ನೆಲೆಯನ್ನು ಒದಗಿಸಿದೆವು ಮತ್ತು ಅವರಿಗೆ ನಿರ್ಮಲ ಆಹಾರವನ್ನು ನೀಡಿದೆವು. ಅವರ ಬಳಿಗೆ ಜ್ಞಾನವು ಬರುವ ತನಕವೂ ಅವರು ಪರಸ್ಪರ ಭಿನ್ನತೆ ತಾಳಿರಲಿಲ್ಲ. ಖಂಡಿತವಾಗಿಯೂ ಪುನರುತ್ಥಾನ ದಿನ ನಿಮ್ಮ ಒಡೆಯನು ಅವರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಅವರ ನಡುವೆ ಇತ್ಯರ್ಥ ಗೊಳಿಸಿಬಿಡುವನು

[92] (ದೂತರೇ,) ಒಂದು ವೇಳೆ ನಾವು ನಿಮ್ಮೆಡೆಗೆ ಇಳಿಸಿ ಕೊಟ್ಟಿರುವ ಸಂದೇಶದ ಕುರಿತು ನಿಮಗೆ ಸಂಶಯವಿದ್ದರೆ, ನಿಮಗಿಂತ ಹಿಂದೆ ಬಂದ ಗ್ರಂಥಗಳನ್ನು ಓದುತ್ತಿರುವವರೊಡನೆ ವಿಚಾರಿಸಿರಿ. ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟಿದೆ. ನೀವಿನ್ನು ಸಂಶಯಿಸುವವರಾಗಬೇಡಿ

[93] ಹಾಗೆಯೇ ನೀವು, ಅಲ್ಲಾಹನ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಸಾಲಿಗೆ ಸೇರಬೇಡಿ. ಅನ್ಯಥಾ ನೀವು ಭಾರೀ ನಷ್ಟಕ್ಕೆ ತುತ್ತಾಗುವಿರಿ

[94] ಯಾರ ವಿರುದ್ಧ ಈಗಾಗಲೇ ನಿಮ್ಮ ಒಡೆಯನ ಆದೇಶವು ಪ್ರಕಟವಾಗಿದೆಯೋ ಅವರು ಖಂಡಿತ ನಂಬುವವರಲ್ಲ

[95] ಅವರ ಬಳಿಗೆ ಎಲ್ಲ ನಿದರ್ಶನಗಳು ಬಂದು ಬಿಟ್ಟರೂ, ಕಠಿಣ ಶಿಕ್ಷೆಯನ್ನು ಕಾಣುವ ತನಕವೂ ಅವರು (ನಂಬುವವರಲ್ಲ)

[96] ಯೂನುಸ್‌ರ ಜನಾಂಗವೊಂದರ ಹೊರತು ಯಾವುದೇ ನಾಡಿನವರು, ತಮ್ಮ ನಂಬಿಕೆಯಿಂದ ತಮಗೆ ಪ್ರಯೋಜನವಾಗುವಂತೆ (ಕಾಲ ಮೀರುವ ಮುನ್ನ) ನಂಬಲಿಲ್ಲ . ಅವರು (ಯೂನುಸ್‌ರ ಜನಾಂಗದವರು) ನಂಬಿದಾಗ, ನಾವು ಈ ಲೋಕದ ಬದುಕಿನಲ್ಲಿ ಅವರಿಗೆ ವಿಧಿಸಲಾಗಿದ್ದ ಅಪಮಾನದ ಶಿಕ್ಷೆಯನ್ನು ಅವರಿಂದ ನಿವಾರಿಸಿದೆವು ಮತ್ತು ಒಂದು ಅವಧಿಯ ತನಕ ಅವರಿಗೆ ಸುಖ ನೀಡಿದೆವು

[97] ನಿಮ್ಮ ಒಡೆಯನು ಬಯಸಿದ್ದರೆ, ಭೂಮಿಯಲ್ಲಿರುವ ಎಲ್ಲರೂ ಜೊತೆಯಾಗಿ (ಸತ್ಯ ಧರ್ಮವನ್ನು) ನಂಬುವವರಾಗಿ ಬಿಡುತ್ತಿದ್ದರು. (ಅವನೇ ಹಾಗೆ ಮಾಡಿಲ್ಲದಿರುವಾಗ) ಜನರೆಲ್ಲಾ ನಂಬುವವರಾಗಿ ಬಿಡುವ ತನಕ ನೀವೇನು ಅವರನ್ನು ನಿರ್ಬಂಧಿಸುವಿರಾ

[98] ಅಲ್ಲಾಹನು ಅನುಮತಿಸದೆ, ವಿಶ್ವಾಸಿಯಾಗಲು ಯಾವ ಜೀವಿಗೂ ಸಾಧ್ಯವಿಲ್ಲ. ಬುದ್ಧಿಯನ್ನು ಬಳಸದ ಜನರ ಮೇಲೆ ಅವನು ಮಾಲಿನ್ಯವನ್ನು ಹೇರಿ ಬಿಡುತ್ತಾನೆ

[99] ಹೇಳಿರಿ; ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದನ್ನೆಲ್ಲಾ ನೀವು ನೋಡಿರಿ. (ಇಲ್ಲಿರುವ) ಪಾಠಗಳು ಹಾಗೂ ಎಚ್ಚರಿಕೆಗಳಿಂದ, ನಂಬಿಕೆ ಇಲ್ಲದವರಿಗೆ ಯಾವ ಲಾಭವೂ ಆಗದು

[100] ಅವರು ಕಾಯುತ್ತಿರುವುದು, ಅವರ ಹಿಂದಿನವರಿಗೆ ಎದುರಾಗಿದ್ದಂತಹ ದಿನಗಳನ್ನೇ ತಾನೇ? ಹೇಳಿರಿ; ನೀವು ಕಾಯುತ್ತಲಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ

[101] ಕೊನೆಗೆ, ಈ ರೀತಿ ನಾವು ನಮ್ಮ ದೂತರನ್ನೂ ವಿಶ್ವಾಸಿಗಳನ್ನೂ ರಕ್ಷಿಸುತ್ತೇವೆ. ವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಮೇಲಿನ ಬಾಧ್ಯತೆಯಾಗಿದೆ

[102] (ದೂತರೇ,) ಹೇಳಿರಿ; ಜನರೇ, ನಿಮಗೆ ನನ್ನ ಧರ್ಮದ ಕುರಿತು ಸಂಶಯವಿದ್ದರೆ (ಕೇಳಿರಿ), ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಪೂಜಿಸುತ್ತೀರೋ ಅವರನ್ನು ನಾನು ಖಂಡಿತ ಪೂಜಿಸಲಾರೆ. ನಾನು ಪೂಜಿಸುವುದು, ನಿಮಗೆ ಮರಣವನ್ನು ನೀಡುವ ಅಲ್ಲಾಹನನ್ನು ಮಾತ್ರ. ನಾನು (ಆತನನ್ನು) ನಂಬುವವನಾಗಿರಬೇಕೆಂದು ನನಗೆ ಆದೇಶಿಸಲಾಗಿದೆ

[103] ನಿನ್ನ ಸಂಪೂರ್ಣ ಗಮನವನ್ನು, ಸ್ಥಿರವಾಗಿ, ಸತ್ಯ ಧರ್ಮದಲ್ಲಿ ಕೇಂದ್ರೀಕರಿಸಬೇಕು ಹಾಗೂ ಬಹುದೇವಾರಾಧಕನಾಗಬಾರದು (ಎಂದು ನನಗೆ ಆದೇಶಿಸಲಾಗಿದೆ)

[104] (ದೂತರೇ,) ನೀವು, ಅಲ್ಲಾಹನ ಹೊರತಾಗಿ, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ಕರೆದು ಪ್ರಾರ್ಥಿಸಬೇಡಿ. ಹಾಗೆ ಮಾಡಿದರೆ, ನೀವು ಅಕ್ರಮಿಗಳ ಸಾಲಿಗೆ ಸೇರುವಿರಿ

[105] ಒಂದು ವೇಳೆ ಅಲ್ಲಾಹನು ನಿಮಗೆ ಏನಾದರೂ ಹಾನಿಮಾಡ ಬಯಸಿದರೆ, ಅವನ ಹೊರತು ಬೇರೆ ಯಾರೂ ಅದನ್ನು ನಿವಾರಿಸಲಾರರು ಮತ್ತು ಅವನು ನಿಮಗೆ ಏನಾದರೂ ಹಿತವನ್ನು ಮಾಡಬಯಸಿದರೆ, ಅವನ ಔದಾರ್ಯವನ್ನು ತಡೆಯಲು ಯಾರಿಗೂ ಸಾಧ್ಯವಾಗದು. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ. ಅವನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[106] (ದೂತರೇ,) ಹೇಳಿರಿ; ಮಾನವರೇ, ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದು ಬಿಟ್ಟಿದೆ. ಸರಿದಾರಿಯನ್ನು ಅನುಸರಿಸುವವನು ಸ್ವತಃ ತನ್ನ ಲಾಭಕ್ಕಾಗಿಯೇ ಸರಿದಾರಿಯನ್ನು ಅನುಸರಿಸುತ್ತಾನೆ ಮತ್ತು ದಾರಿಗೆಟ್ಟವನ ದಾರಿಗೇಡಿತನದ ಹೊಣೆಯೂ ಸ್ವತಃ ಅವನ ಮೇಲೆಯೇ ಇರುವುದು. ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ

[107] (ದೂತರೇ,) ನಿಮಗೆ ನೀಡಲಾಗಿರುವ ದಿವ್ಯವಾಣಿಯನ್ನು ಅನುಸರಿಸಿರಿ ಮತ್ತು ಅಲ್ಲಾಹನು ತೀರ್ಪು ನೀಡುವ ತನಕ ಸಹನೆ ವಹಿಸಿರಿ. ಅವನೇ ಅತ್ಯುತ್ತಮ ತೀರ್ಪು ನೀಡುವವನು

[108] ಅಲಿಫ್ ಲಾಮ್ ರಾ. ಇದು ಪಕ್ವ ವಚನಗಳಿರುವ ಗ್ರಂಥ. ಇದು ಪರಮ ಮುಕ್ತಿವಂತ ಹಾಗೂ ಎಲ್ಲವುಗಳ ಅರಿವು ಉಳ್ಳವನ ಕಡೆಯಿಂದ ಖಚಿತ ತೀರ್ಪನ್ನು ತಲುಪಿಸುತ್ತದೆ

[109] ಅಲ್ಲಾಹನ ಹೊರತು ಬೇರೆ ಯಾರನ್ನೂ ಪೂಜಿಸಬೇಡಿ (ಎಂದು ಇದು ಬೋಧಿಸುತ್ತದೆ). ನಾನಂತು, ಅವನ ಕಡೆಯಿಂದ ನಿಮ್ಮನ್ನು ಎಚ್ಚರಿಸುವವನು ಮತ್ತು ನಿಮಗೆ ಶುಭವಾರ್ತೆ ನೀಡುವವನಾಗಿದ್ದೇನೆ

ಹೂದ್

Surah 11

[1] ನೀವು ನಿಮ್ಮೊಡೆಯನ ಬಳಿ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಒಲಿಯಿರಿ. ಅವನು ನಿಮಗೆ ಒಂದು ನಿರ್ದಿಷ್ಟ ಅವಧಿಯ ತನಕ ಶ್ರೇಷ್ಠ ಸಂಪತ್ಸಾಧನಗಳನ್ನು ದಯಪಾಲಿಸುವನು ಮತ್ತು ಪ್ರತಿಯೊಬ್ಬ ಅನುಗ್ರಹಶಾಲಿಗೆ ತನ್ನ ಅನುಗ್ರಹವನ್ನು ಕರುಣಿಸುವನು. ನೀವು (ಅವನನ್ನು ) ಕಡೆಗಣಿಸಿದರೆ, ಒಂದು ಮಹಾ ದಿನದ ಶಿಕ್ಷೆಯು ನಿಮ್ಮ ಮೇಲೆ ಎರಗುವ ಭಯ ನನಗಿದೆ

[2] ಅಲ್ಲಾಹನ ಕಡೆಗೇ ನೀವು ಮರಳುವಿರಿ. ಅವನು ಎಲ್ಲವನ್ನೂ ಮಾಡಬಲ್ಲವನು

[3] ನಿಮಗೆ ತಿಳಿದಿರಲಿ; ಅವರು ಅವನಿಂದ ಅಡಗಿಸಲಿಕ್ಕಾಗಿ ತಮ್ಮ ಹೃದಯಗಳನ್ನು ಮುಚ್ಚಿಕೊಳ್ಳುತ್ತಾರೆ. ನಿಮಗೆ ತಿಳಿದಿರಲಿ; ಅವರು ತಮ್ಮ ಉಡುಪುಗಳಿಂದ ತಮ್ಮನ್ನು ಮುಚ್ಚಿಕೊಂಡಿರುವಾಗಲೂ, ಅವರು ಗುಪ್ತವಾಗಿಡುವ ಮತ್ತು ಅವರು ಬಹಿರಂಗ ಪಡಿಸುವ ಎಲ್ಲವನ್ನೂ ಅವನು ಅರಿತಿರುತ್ತಾನೆ. ಖಂಡಿತವಾಗಿಯೂ ಅವನು ಮನಸ್ಸಿನಾಳದಲ್ಲಿರುವ ವಿಷಯಗಳನ್ನೂ ಬಲ್ಲವನು

[4] ಭೂಮಿಯಲ್ಲಿನ ಪ್ರತಿಯೊಂದು ಜೀವಿಯ ಆಹಾರದ ಹೊಣೆಯು ಅಲ್ಲಾಹನ ಮೇಲಿದೆ. ಅದರ ವಾಸಸ್ಥಾನವನ್ನು ಮತ್ತು ಅದರ ಅಂತಿಮ ನೆಲೆಯನ್ನು ಅವನು ಚೆನ್ನಾಗಿ ಬಲ್ಲನು. ಎಲ್ಲವೂ ಒಂದು ಸ್ಪಷ್ಟವಾದ ಗ್ರಂಥದಲ್ಲಿದೆ

[5] ಅವನೇ, ಆರು ದಿನಗಳ ಅವಧಿಯಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ಅವನ ಸಿಂಹಾಸನವು ನೀರಿನ ಮೇಲಿತ್ತು. ನಿಮ್ಮಲ್ಲಿ ಯಾರು ಅತ್ಯುತ್ತಮ ಕರ್ಮಗಳನ್ನು ಮಾಡುವವರೆಂದು ಪರೀಕ್ಷಿಸಲಿಕ್ಕಾಗಿ (ಅವನು ನಿಮ್ಮನ್ನು ಸೃಷ್ಟಿಸಿದನು). (ದೂತರೇ,) ‘‘ಮರಣದ ಬಳಿಕ ನಿಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದು’’ ಎಂದು ನೀವು ಹೇಳಿದರೆ, ಧಿಕ್ಕಾರಿಗಳು, ‘‘ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನಲ್ಲ’’ ಎನ್ನುತ್ತಾರೆ

[6] ಒಂದು ವೇಳೆ ನಾವು ಒಂದು ನಿರ್ದಿಷ್ಟ ಅವಧಿಗಾಗಿ ಶಿಕ್ಷೆಯನ್ನು ಅವರಿಂದ ನಿವಾರಿಸಿದರೆ, ‘‘ಅದನ್ನು ಯಾವ ವಸ್ತು ತಡೆದಿಟ್ಟಿದೆ?’’ ಎಂದು ಅವರು ಕೇಳುವರು. ನಿಮಗೆ ತಿಳಿದಿರಲಿ; ಅದು ಅವರ ಮೇಲೆ ಬಂದೆರಗುವ ದಿನ, ಯಾರೂ ಅದನ್ನು ಅವರಿಂದ ನಿವಾರಿಸಲಾರರು. ಅವರು ಯಾವುದನ್ನು ಗೇಲಿಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿ ಬಿಡುವುದು

[7] ನಾವು ಮನುಷ್ಯನಿಗೆ ನಮ್ಮ ಅನುಗ್ರಹದ ರುಚಿ ಕಾಣಿಸಿ ಆ ಬಳಿಕ ಅದನ್ನು ಅವನಿಂದ ಕಿತ್ತುಕೊಂಡರೆ – ಅವನು ತೀರಾ ನಿರಾಶನೂ ಕೃತಘ್ನನೂ ಆಗಿಬಿಡುತ್ತಾನೆ

[8] ಇನ್ನು, ಅವನಿಗೆ ಸಂಕಟ ತಗಲಿದ ಬಳಿಕ ನಾವು ಅವನಿಗೆ ಅನುಗ್ರಹಗಳ ರುಚಿ ಉಣಿಸಿದರೆ, ಅವನು ಸಕಲ ಸಂಕಟಗಳೂ ನನ್ನಿಂದ ದೂರವಾಗಿ ಬಿಟ್ಟವು ಎನ್ನುತ್ತಾನೆ ಮತ್ತು ಅವನು ಸಂತಸದಿಂದ ಬೀಗಿ, ತನ್ನನ್ನೇ ಹೊಗಳತೊಡಗುತ್ತಾನೆ

[9] ಸಹನಶೀಲರು ಮತ್ತು ಸತ್ಕರ್ಮಿಗಳು ಮಾತ್ರ ಹಾಗಿರುವುದಿಲ್ಲ. ಅವರಿಗೆ ಕ್ಷಮೆ ಹಾಗೂ ಮಹಾ ಪ್ರತಿಫಲವಿದೆ

[10] (ದೂತರೇ,) ನಿಮಗೆ ಕಳಿಸಲಾಗಿರುವ ದಿವ್ಯವಾಣಿಯ ಕೆಲವು ಭಾಗಗಳನ್ನು ನೀವು ಬಿಟ್ಟು ಬಿಡಬಹುದು ಮತ್ತು ಈ (ಸತ್ಯ ಪ್ರಸಾರದ) ವಿಷಯದಲ್ಲಿ ನಿಮ್ಮ ಮನಸ್ಸು ರೋಸಿ ಹೋಗಬಹುದು (ಎಂದು ಧಿಕ್ಕಾರಿಗಳು ನಿರೀಕ್ಷಿಸುತ್ತಿದ್ದಾರೆ). ‘‘ ಈತನಿಗೆ ಯಾವುದೇ ಭಂಡಾರವನ್ನೇಕೆ ಇಳಿಸಿಕೊಡಲಾಗಿಲ್ಲ? ಅಥವಾ ಈತನ ಜೊತೆ ಯಾವುದೇ ‘ಮಲಕ್’ ಯಾಕೆ ಬಂದಿಲ್ಲ?’’ ಎಂಬ ಅವರ (ಧಿಕ್ಕಾರಿಗಳ) ಮಾತುಗಳು ನಿಮ್ಮ ಮನಸ್ಸನ್ನು ನೋಯಿಸುತ್ತಿವೆ. ನೀವು ಕೇವಲ ಎಚ್ಚರಿಸುವವರಾಗಿರುವಿರಿ. ಅಲ್ಲಾಹನೇ ಎಲ್ಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ

[11] ಇದನ್ನು (ಕುರ್‌ಆನ್‌ಅನ್ನು) ಈತನೇ ಸ್ವತಃ ರಚಿಸಿದ್ದಾನೆ ಎಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ, ಇಂತಹ ಹತ್ತು ಅಧ್ಯಾಯಗಳನ್ನು ನೀವು ರಚಿಸಿ ತನ್ನಿರಿ ಮತ್ತು (ನಿಮ್ಮ ನೆರವಿಗಾಗಿ) ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ

[12] ನಿಮಗೆ ಉತ್ತರ ನೀಡಲು ಅವರಿಗೆ ಸಾಧ್ಯವಾಗದಿದ್ದರೆ, ನಿಮಗೆ ತಿಳಿದಿರಲಿ; ಅಲ್ಲಾಹನ ಜ್ಞಾನದ ಆಧಾರದಲ್ಲಿ ಇದನ್ನು ಇಳಿಸಿಕೊಡಲಾಗಿದೆ ಮತ್ತು ಅವನ ಹೊರತು ಬೇರಾರೂ ದೇವರಿಲ್ಲ. (ಇನ್ನಾದರೂ) ನೀವು ಮುಸ್ಲಿಮರಾಗುವಿರಾ

[13] ಈ ಲೋಕದ ಬದುಕನ್ನು ಮತ್ತು ಇಲ್ಲಿಯ ಅಲಂಕಾರಗಳನ್ನೇ ಗುರಿಯಾಗಿಸಿಕೊಂಡವರಿಗೆ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಕೊಟ್ಟು ಬಿಡುತ್ತೇವೆ. ಈ ವಿಷಯದಲ್ಲಿ ಅವರಿಗೆ ಯಾವ ಕೊರತೆಯೂ ಆಗದು

[14] ಆದರೆ ಅವರಿಗೆ ಪರಲೋಕದಲ್ಲಿ (ನರಕದ) ಬೆಂಕಿಯ ಹೊರತು ಬೇರೇನೂ ಸಿಗದು. ಇಲ್ಲಿ ಅವರು ನಡೆಸಿದ್ದ ಎಲ್ಲ ಶ್ರಮಗಳೂ ವ್ಯರ್ಥವಾಗಿ ಬಿಡುವವು ಮತ್ತು ಅವರು ಮಾಡಿದ್ದ ಎಲ್ಲ ಕರ್ಮಗಳೂ ತಿರಸ್ಕೃತವಾಗುವವು

[15] ತಮ್ಮ ಒಡೆಯನ ಕಡೆಯಿಂದ (ಬಂದ) ಸ್ಪಷ್ಟ ಸನ್ಮಾರ್ಗದಲ್ಲಿದ್ದು, ಅದನ್ನು (ದಿವ್ಯ ಸಂದೇಶವನ್ನು) ಸದಾ ಓದುತ್ತಾ, ಅದರ ಪರವಾಗಿಯೂ ಈ ಹಿಂದೆ ಮೂಸಾರ ಬಳಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿ ಬಂದಿದ್ದ ಗ್ರಂಥದ ಪರವಾಗಿಯೂ ಸಾಕ್ಷಿಯಾದವರೇ ನಿಜವಾಗಿ ಅದನ್ನು ನಂಬುವವರು. ಇನ್ನು, ವಿವಿಧ ಪಂಗಡಗಳ ಪೈಕಿ ಇದನ್ನು ಧಿಕ್ಕರಿಸಿದವರ ಪಾಲಿಗೆ (ನರಕದ) ಬೆಂಕಿಯೇ ಅಂತಿಮ ನೆಲೆಯಾಗಿರುವುದು. ನೀವು ಈ ಕುರಿತು ಕಿಂಚಿತ್ತೂ ಸಂಶಯ ತಾಳಬೇಡಿ. ಖಂಡಿತವಾಗಿಯೂ ಇದು ನಿಮ್ಮ ಒಡೆಯನ ಕಡೆಯಿಂದಲೇ ಬಂದಿರುವ ಸತ್ಯವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ಇದನ್ನು ನಂಬುವುದಿಲ್ಲ

[16] ಸುಳ್ಳನ್ನು ರಚಿಸಿ ಅಲ್ಲಾಹನ ಮೇಲೆ ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅವರನ್ನು ಅವರ ಒಡೆಯನ ಮುಂದೆ ಹಾಜರುಪಡಿಸಲಾದಾಗ, ‘‘ತಮ್ಮ ಒಡೆಯನ ಮೇಲೆ ಸುಳ್ಳನ್ನು ಆರೋಪಿಸಿದವರು ಇವರೇ’’ ಎಂದು ಸಾಕ್ಷಿಗಳು ಹೇಳುವರು. ನಿಮಗೆ ತಿಳಿದಿರಲಿ; ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ

[17] ಅವರು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುತ್ತಾರೆ ಮತ್ತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಾರೆ. ಅವರೇ ಪರಲೋಕವನ್ನು ಧಿಕ್ಕರಿಸುವವರು

[18] ಭೂಮಿಯಲ್ಲಿ ಅವರೆಂದೂ (ಅಲ್ಲಾಹನನ್ನು) ಸೋಲಿಸಿರಲಿಲ್ಲ ಮತ್ತು ಅವರಿಗೆ ಅಲ್ಲಾಹನಲ್ಲದೆ ಬೇರೆ ಯಾರೂ ಪೋಷಕರಾಗಿರಲಿಲ್ಲ. ಅವರಿಗೆ ದುಪ್ಪಟ್ಟು ಶಿಕ್ಷೆಯನ್ನು ನೀಡಲಾಗುವುದು. (ಭೂಮಿಯಲ್ಲಿ) ಅವರು ಕೇಳಬಲ್ಲವರೂ ಆಗಿರಲಿಲ್ಲ, ನೋಡಬಲ್ಲವರೂ ಆಗಿರಲಿಲ್ಲ

[19] ಅವರೇ, ಸ್ವತಃ ತಮಗೆ ನಷ್ಟಮಾಡಿಕೊಂಡವರು. ಅವರು ರಚಿಸಿಕೊಂಡಿದ್ದ ಮಿಥ್ಯಗಳೆಲ್ಲವೂ ಅವರಿಂದ ಕಳೆದುಹೋದವು

[20] ಖಂಡಿತವಾಗಿಯೂ ಅವರೇ, ಪರಲೋಕದಲ್ಲಿ ಅತ್ಯಧಿಕ ನಷ್ಟದಲ್ಲಿರುವರು

[21] ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮಗಳನ್ನು ಮಾಡಿದವರು ಮತ್ತು ಸದಾ ತಮ್ಮ ಒಡೆಯನೆದುರು ವಿನಯಶೀಲರಾಗಿದ್ದವರು – ಖಂಡಿತವಾಗಿಯೂ ಅವರೇ ಸ್ವರ್ಗದವರು. ಅದರಲ್ಲಿ ಅವರು ಸದಾಕಾಲ ಇರುವರು

[22] ಆ ಎರಡು ಗುಂಪುಗಳ ಉದಾಹರಣೆಯು ಹೀಗಿದೆ; ಒಬ್ಬನು ಕುರುಡ ಹಾಗೂ ಕಿವುಡನಾಗಿದ್ದಾನೆ. ಇನ್ನೊಬ್ಬನು ನೋಡಬಲ್ಲನು ಹಾಗೂ ಕೇಳಬಲ್ಲನು. ಅವರಿಬ್ಬರ ಸ್ಥಿತಿಯೂ ಸಮಾನವಾಗಿರಲು ಸಾಧ್ಯವೇ? ನೀವೇನು, ಚಿಂತನೆ ನಡೆಸುವುದಿಲ್ಲವೇ

[23] ನಾವು ನೂಹ್‌ರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. (ಅವರು ಹೇಳಿದರು;) ನಾನು ನಿಮಗೆ, ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ

[24] ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಪೂಜಿಸಬಾರದು. ನೀವು ಒಂದು ಯಾತನಾಮಯ ದಿನದ ಶಿಕ್ಷೆಗೆ ತುತ್ತಾಗುವಿರೆಂಬ ಭಯ ನನಗಿದೆ

[25] ಅವರ ಜನಾಂಗದ ಧಿಕ್ಕಾರಿ ನಾಯಕರು ಹೇಳಿದರು; ನಾವಂತು ನಿಮ್ಮನ್ನು ನಮ್ಮಂತಹ ಕೇವಲ ಒಬ್ಬ ಮಾನವನಾಗಿ ಕಾಣುತ್ತಿದ್ದೇವೆ. ಇನ್ನು ನಿಮ್ಮ ಅನುಯಾಯಿಗಳಲ್ಲೂ, ನಮ್ಮಲ್ಲಿನ ಕೆಲವು ಅಪ್ರಬುದ್ಧ ಹೀನರ ಹೊರತು ಬೇರಾರನ್ನೂ ನಾವು ಕಾಣುತ್ತಿಲ್ಲ. ಹಾಗೆಯೇ, ಯಾವುದೇ ವಿಷಯದಲ್ಲಿ ನೀವು ನಮಗಿಂತ ಶ್ರೇಷ್ಠರಾಗಿರುವುದು ನಮಗೆ ಕಾಣಿಸುತ್ತಿಲ್ಲ. ನಿಜವಾಗಿ ನೀವು ಸುಳ್ಳರೆಂದು ನಾವು ಭಾವಿಸುತ್ತೇವೆ

[26] ಅವರು (ನೂಹ್) ಹೇಳಿದರು; ನನ್ನ ಜನಾಂಗದವರೇ, ನೀವು ನೋಡುತ್ತಿಲ್ಲವೇ, ನಾನು ನನ್ನ ಒಡೆಯನ ಕಡೆಯಿಂದ (ತೋರಿಸಲಾದ) ಸ್ಪಷ್ಟ ಸನ್ಮಾರ್ಗದಲ್ಲಿದ್ದೇನೆ ಮತ್ತು ಅವನು ತನ್ನ ಕಡೆಯಿಂದ ನನಗೆ ವಿಶೇಷ ಅನುಗ್ರಹವನ್ನು ದಯಪಾಲಿಸಿದ್ದಾನೆ. ಅದನ್ನು ನಿಮಗೆ ಕಾಣದಂತೆ ಮಾಡಲಾಗಿದೆ. ನಿಮಗೆ ಅದು (ಆ ಸನ್ಮಾರ್ಗವು) ಅಷ್ಟೊಂದು ಅಸಹ್ಯವಾಗಿರುವಾಗ ಅದನ್ನು ಒಪ್ಪುವಂತೆ ನಾವೇನು ನಿಮ್ಮನ್ನು ಬಲಾತ್ಕರಿಸಬೇಕೇ

[27] ಮತ್ತು ನನ್ನ ಜನಾಂಗದವರೇ, ಈ ವಿಷಯದಲ್ಲಿ ನಾನು ನಿಮ್ಮಿಂದ ಯಾವುದೇ ಸಂಪತ್ತನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲದ ಹೊಣೆ ಇರುವುದು ಅಲ್ಲಾಹನ ಮೇಲೆ ಮಾತ್ರ. ಇನ್ನು ನಾನು ವಿಶ್ವಾಸಿಗಳನ್ನು ದೂರಗೊಳಿಸಲಾರೆ. ಖಂಡಿತವಾಗಿಯೂ ಅವರು ತಮ್ಮ ಒಡೆಯನನ್ನು ಭೇಟಿಯಾಗಲಿದ್ದಾರೆ. ನಿಮ್ಮನ್ನು ನಾನು ಒಂದು ಅಜ್ಞಾನಿ ಜನಾಂಗವಾಗಿ ಕಾಣುತ್ತಿದ್ದೇನೆ

[28] ಮತ್ತು ನನ್ನ ಜನಾಂಗದವರೇ, ಒಂದು ವೇಳೆ ನಾನು ಅವರನ್ನು ದೂರಗೊಳಿಸಿಬಿಟ್ಟರೆ, ನನ್ನನ್ನು ಅಲ್ಲಾಹನಿಂದ ಯಾರು ತಾನೇ ರಕ್ಷಿಸಬಲ್ಲನು? ನೀವೇನು ಚಿಂತನೆ ನಡೆಸುವುದಿಲ್ಲವೇ

[29] ನನ್ನೊಡನೆ ಅಲ್ಲಾಹನ ಭಂಡಾರಗಳಿವೆ ಎಂದೇನೂ ನಾನು ನಿಮ್ಮೊಡನೆ ಹೇಳಿಲ್ಲ. ಅದೃಶ್ಯದ ಜ್ಞಾನವೂ ನನಗಿಲ್ಲ. ನಾನು ‘ಮಲಕ್’ ಎಂದು ನಾನು ನಿಮ್ಮೊಡನೆ ಹೇಳಿಕೊಂಡಿಲ್ಲ. ಹಾಗೆಯೇ, ನಿಮ್ಮ ಕಣ್ಣುಗಳಿಗೆ ಹೀನರಾಗಿ ಕಾಣಿಸುವವರಿಗೆ ಅಲ್ಲಾಹನು ಯಾವುದೇಹಿತವನ್ನು ನೀಡುವುದಿಲ್ಲ ಎಂದೂ ನಾನು ಹೇಳಿಲ್ಲ, ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು. ಹೀಗಿರುತ್ತಾ (ನಾನು ಅವರನ್ನು ದೂರಗೊಳಿಸಿದರೆ) ಖಂಡಿತವಾಗಿಯೂ ನಾನು ಅಕ್ರಮಿಯಾಗುವೆನು

[30] ಅವರು ಹೇಳಿದರು; ನೂಹರೇ, ನೀವು ನಮ್ಮೊಡನೆ ವಾದಿಸಿದಿರಿ, ಮಾತ್ರವಲ್ಲ, ನಮ್ಮ ಜೊತೆ ಬಹಳಷ್ಟು ಜಗಳಾಡಿದಿರಿ. ನೀವು ಸತ್ಯವಂತರಾಗಿದ್ದರೆ, ಇನ್ನಾದರೂ, ನೀವು ನಮ್ಮನ್ನು ಬೆದರಿಸುತ್ತಿರುವ ಆ ಶಿಕ್ಷೆಯನ್ನು ತಂದುಬಿಡಿರಿ

[31] ಅವರು (ನೂಹರು) ಹೇಳಿದರು; ಅಲ್ಲಾಹನು ಇಚ್ಛಿಸಿದರೆ, ಅದನ್ನು (ಶಿಕ್ಷೆಯನ್ನು) ನಿಮ್ಮ ಮೇಲೆರಗಿಸುವನು. ಮತ್ತು ನಿಮಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು

[32] ಒಂದು ವೇಳೆ ಅಲ್ಲಾಹನು ನಿಮ್ಮನ್ನು ದಾರಿಗೆಟ್ಟ ಸ್ಥಿತಿಯಲ್ಲಿಡಲು ನಿರ್ಧರಿಸಿದ್ದರೆ, ನಾನು ನಿಮಗೆ ಹಿತವನ್ನು ಮಾಡಬಯಸಿದರೂ ನನ್ನ ಹಿತಾಕಾಂಕ್ಷೆಯಿಂದ ನಿಮಗೆ ಯಾವ ಲಾಭವೂ ಆಗದು. ಅವನೇ ನಿಮ್ಮ ಒಡೆಯನು ಮತ್ತು ಅವನ ಕಡೆಗೇ ನೀವು ಮರಳುವಿರಿ

[33] (ದೂತರೇ,) ಇದನ್ನು (ಕುರ್‌ಆನ್‌ಅನ್ನು) ಈತನು ಸ್ವತಃ ರಚಿಸಿದ್ದಾನೆಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ಒಂದು ವೇಳೆ ಇದನ್ನು ನಾನೇ ರಚಿಸಿದ್ದರೆ, ನನ್ನ ಅಪರಾಧದ ಹೊಣೆಯು ನನ್ನ ಮೇಲಿದೆ ಮತ್ತು ನೀವು ಎಸಗುತ್ತಿರುವ ಅಪರಾಧಗಳ ಹೊಣೆಯಿಂದ ನಾನು ಮುಕ್ತನಾಗಿದ್ದೇನೆ

[34] ನೂಹ್‌ರ ಕಡೆಗೆ ಹೀಗೆಂದು ದಿವ್ಯವಾಣಿಯನ್ನು ಕಳಿಸಲಾಯಿತು; ನಿಮ್ಮ ಜನಾಂಗದವರ ಪೈಕಿ ಈಗಾಗಲೇ ನಂಬಿಕೆ ಇಟ್ಟವರ ಹೊರತು ಬೇರೆ ಯಾರೂ (ಸತ್ಯವನ್ನು) ನಂಬುವವರಲ್ಲ. ನೀವಿನ್ನು ಅವರ ಕೃತ್ಯಗಳ ಕುರಿತು ದುಃಖಿಸಬೇಡಿ

[35] ನೀವು ನಮ್ಮ ಕಣ್ಣೆದುರು ಹಾಗೂ ನಮ್ಮ ದಿವ್ಯ ಸಂದೇಶದ ಪ್ರಕಾರ ಒಂದು ಹಡಗನ್ನು ನಿರ್ಮಿಸಿರಿ ಮತ್ತು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರು ಖಂಡಿತ (ಪ್ರವಾಹದಲ್ಲಿ) ಮುಳುಗಲಿದ್ದಾರೆ

[36] ಅವರು (ನೂಹ್) ಹಡಗನ್ನು ನಿರ್ಮಿಸತೊಡಗಿದರು. ಅವರ ಜನಾಂಗದ ಸರದಾರರು, ಅದರ ಪಕ್ಕದಿಂದ ಹಾದು ಹೋಗುವಾಗಲೆಲ್ಲಾ ಅದನ್ನು ಲೇವಡಿ ಮಾಡುತ್ತಿದ್ದರು. ಆಗ ಅವರು (ನೂಹ್) ಹೇಳಿದರು; (ಇಂದು) ನೀವು ನಮ್ಮನ್ನು ಲೇವಡಿ ಮಾಡುತ್ತೀರಾದರೆ, ಖಂಡಿತ, ನೀವು ಲೇವಡಿ ಮಾಡಿದಂತೆಯೇ, ನಾವೂ ನಿಮ್ಮನ್ನು ಲೇವಡಿ ಮಾಡಲಿದ್ದೇವೆ

[37] ಅಪಮಾನಕಾರಿ ಶಿಕ್ಷೆಯು ಯಾರ ಮೇಲೆ ಬಂದೆರಗಲಿದೆ ಎಂಬುದು ಬಹುಬೇಗನೇ ನಿಮಗೆ ತಿಳಿಯಲಿದೆ. ಅದು ಸದಾಕಾಲ ಆತನ ಮೇಲೆ ಹೇರಿ ಕೊಂಡಿರುವ ಯಾತನೆಯಾಗಿರುವುದು

[38] ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಿತು ಮತ್ತು ಕುದಿಯುತ್ತಿದ್ದ ಪಾತ್ರೆಯು ಉಕ್ಕಿ ಹರಿಯಿತು. ಆಗ ನಾವು (ಅಲ್ಲಾಹನು, ನೂಹ್‌ರಿಗೆ) ಹೇಳಿದೆವು; ‘‘ನೀವೀಗ ಎಲ್ಲವುಗಳ (ಎಲ್ಲ ಜೀವಿಗಳ) ಜೊತೆಗಳನ್ನು (ಗಂಡು-ಹೆಣ್ಣನ್ನು) ಹಾಗೂ ಯಾರ ಪರವಾಗಿ ಈಗಾಗಲೇ ತೀರ್ಮಾನ ಆಗಿಬಿಟ್ಟಿದೆಯೋ ಆತನ (ನಿಮ್ಮ ಪುತ್ರನ) ಹೊರತು ನಿಮ್ಮ ಮನೆಯವರನ್ನು ಮತ್ತು ಸತ್ಯದಲ್ಲಿ ವಿಶ್ವಾಸವಿಟ್ಟವರನ್ನು ಅದರಲ್ಲಿ (ಹಡಗಿನಲ್ಲಿ) ಹತ್ತಿಸಿಕೊಳ್ಳಿರಿ’’. ನಿಜವಾಗಿ, ಅವರ ಜೊತೆ ಕೇವಲ ಕೆಲವರು ಮಾತ್ರ ವಿಶ್ವಾಸವಿಟ್ಟಿದ್ದರು

[39] ಮತ್ತು ಅವರು (ನೂಹ್) ಹೇಳಿದರು; ನೀವು ಇದರಲ್ಲಿ ಹತ್ತಿಕೊಳ್ಳಿರಿ. ಇದು ಚಲಿಸುವುದೂ ನಿಲ್ಲುವುದೂ ಅಲ್ಲಾಹನ ಹೆಸರಲ್ಲಿ. ಖಂಡಿತವಾಗಿಯೂ ನನ್ನ ಒಡೆಯನು ಕ್ಷಮಿಸುವವನೂ ಕರುಣಾಳುವೂ ಆಗಿದ್ದಾನೆ

[40] ಅದು (ಆ ಹಡಗು) ಅವರನ್ನು ಹೊತ್ತು, ಬೆಟ್ಟದಂತಹ ಅಲೆಗಳಲ್ಲಿ ಚಲಿಸತೊಡಗಿತು. ಆಗ ನೂಹರು, ದಡದಲ್ಲಿದ್ದ ತಮ್ಮ ಪುತ್ರನನ್ನು ಕೂಗಿ ಕರೆದು, ನನ್ನ ಪುತ್ರ! ನಮ್ಮ ಜೊತೆ (ಹಡಗನ್ನು) ಹತ್ತಿಕೋ. ನೀನು ಧಿಕ್ಕಾರಿಗಳ ಸಾಲಿಗೆ ಸೇರಬೇಡ ಎಂದರು

[41] ಅವನು ಹೇಳಿದನು; ನಾನು ಬಹುಬೇಗನೇ ಯಾವುದಾದರೂ ಬೆಟ್ಟದ ಬಳಿ ಆಶ್ರಯ ಪಡೆಯುವೆನು. ಅದು ನನ್ನನ್ನು ನೀರಿನಿಂದ ರಕ್ಷಿಸುವುದು. ಅವರು (ನೂಹ್) ಹೇಳಿದರು; ‘‘ಇಂದು ಅಲ್ಲಾಹನ ಅಪ್ಪಣೆಗೆದುರಾಗಿ ರಕ್ಷಿಸುವವರು ಯಾರೂ ಇಲ್ಲ – ಸ್ವತಃ ಅವನ ಕರುಣೆಗೆ ಪಾತ್ರರಾದವರ ಹೊರತು’’. ಕೊನೆಗೆ ಅವರ ನಡುವೆ ತೆರೆಯೊಂದು ಅಡ್ಡಬಂದಿತು ಮತ್ತು ಅವನು (ನೂಹ್‌ರ ಪುತ್ರನು) ಮುಳುಗಿದವರ ಸಾಲಿಗೆ ಸೇರಿಬಿಟ್ಟನು

[42] ಆ ಬಳಿಕ ‘‘ಭೂಮಿಯೇ, ನಿನ್ನ ನೀರನ್ನು ನುಂಗಿಬಿಡು, ಆಕಾಶವೇ, ಶಮನವಾಗು’’ ಎನ್ನಲಾಯಿತು ಮತ್ತು ನೀರನ್ನು ಒಣಗಿಸಲಾಯಿತು. ಅದಾಗಲೇ ಕಾರ್ಯವು ಪೂರ್ತಿಯಾಗಿತ್ತು ಮತ್ತು ಅದು (ಹಡಗು) ‘ಜೂದೀ’ ಬೆಟ್ಟವನ್ನು ತಲುಪಿತ್ತು. ಅಕ್ರಮಿಗಳ ಜನಾಂಗದೊಡನೆ ‘‘ತೊಲಗಿರಿ’’ ಎನ್ನಲಾಯಿತು

[43] ನೂಹರು ತಮ್ಮ ಒಡೆಯನನ್ನು ಕೂಗಿದರು ಮತ್ತು ಹೇಳಿದರು; ನನ್ನೊಡೆಯಾ, ನನ್ನ ಪುತ್ರನು ಖಂಡಿತ ನನ್ನ ಮನೆಯವನು. ಆದರೂ ನಿನ್ನ ವಚನವೇ ಸತ್ಯ ಮತ್ತು ನೀನೇ ಎಲ್ಲ ಅಧಿಪತಿಗಳಿಗಿಂತ ದೊಡ್ಡ ಅಧಿಪತಿ

[44] ಅವನು (ಅಲ್ಲಾಹನು) ಹೇಳಿದನು; ನೂಹರೇ, ಅವನು (ಪುತ್ರನು) ಖಂಡಿತ ನಿಮ್ಮ ಮನೆಯವನಲ್ಲ. ಅವನು ಕೇವಲ ಒಂದು ದುಷ್ಟ ಕರ್ಮ ಮಾತ್ರ. ನೀವು ನಿಮಗೆ ತಿಳಿದಿಲ್ಲದ ವಿಚಾರವನ್ನು ನನ್ನೊಡನೆ ಬೇಡಬಾರದು. ನೀವು ಅಜ್ಞಾನಿಗಳ ಸಾಲಿಗೆ ಸೇರಬಾರದೆಂದು ನಾನು ನಿಮಗೆ ಉಪದೇಶಿಸುತ್ತಿದ್ದೇನೆ

[45] ಅವರು (ನೂಹ್) ಹೇಳಿದರು; ನನ್ನೊಡೆಯಾ, ನನಗೆ ಅರಿವಿಲ್ಲದ ವಿಷಯವನ್ನು ನಿನ್ನೊಡನೆ ಬೇಡುವುದರ ವಿರುದ್ಧ ನಾನು ನಿನ್ನ ರಕ್ಷಣೆ ಕೋರುತ್ತೇನೆ. ಇನ್ನು, ನೀನು ನನ್ನನ್ನು ಕ್ಷಮಿಸದಿದ್ದರೆ ಹಾಗೂ ನೀನು ನನ್ನ ಮೇಲೆ ಕರುಣೆ ತೋರದಿದ್ದರೆ, ನಾನು ನಷ್ಟ ಅನುಭವಿಸಿದವರ ಸಾಲಿಗೆ ಸೇರುವೆನು

[46] ಅವರೊಡನೆ ಹೇಳಲಾಯಿತು; ನೂಹರೇ, (ಹಡಗಿನಿಂದ) ಇಳಿಯಿರಿ. ನಿಮಗೆ ಹಾಗೂ ನಿಮ್ಮ ಜೊತೆಗಿರುವ ಸಮುದಾಯಗಳಿಗೆ ನಮ್ಮ ಕಡೆಯಿಂದ ಶಾಂತಿ ಹಾಗೂ ಸಮೃದ್ಧಿಗಳಿವೆ. ಇತರ ಕೆಲವು ಸಮುದಾಯಗಳಿಗೂ ನಾವು (ಲೌಕಿಕ) ಸುಖಸಂಪತ್ತನ್ನು ನೀಡುವೆವು. ಕೊನೆಗೆ ನಮ್ಮ ಕಡೆಯಿಂದ, ಯಾತನಾಮಯ ಶಿಕ್ಷೆಯು ಅವರನ್ನು ಆವರಿಸಲಿದೆ

[47] (ದೂತರೇ,) ಇವೆಲ್ಲಾ ಗುಪ್ತ ಮಾಹಿತಿಗಳು. ನಾವು (ಈ ಕುರಿತು) ದಿವ್ಯವಾಣಿಯನ್ನು ನಿಮ್ಮ ಕಡೆಗೆ ಕಳಿಸುತ್ತಿದ್ದೇವೆ. ಈ ವಿಷಯಗಳನ್ನು ಈ ಮುಂಚೆ ನೀವಾಗಲಿ ನಿಮ್ಮ ಜನಾಂಗವಾಗಲಿ ಅರಿತಿರಲಿಲ್ಲ. ನೀವೀಗ ಸಹನಶೀಲರಾಗಿರಿ. ಅಂತಿಮ ಫಲಿತಾಂಶವು ಖಂಡಿತ ಸತ್ಯನಿಷ್ಠರ ಪರವಾಗಿರುತ್ತದೆ

[48] ಇನ್ನು, ಆದ್ ಜನಾಂಗದ ಕಡೆಗೆ (ದೂತರಾಗಿ) ಅವರ ಸಹೋದರ ಹೂದ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ನೀವು ಕೇವಲ ಸುಳ್ಳುಗಳನ್ನು ರಚಿಸಿಕೊಂಡಿರುವಿರಿ

[49] ನನ್ನ ಜನಾಂಗದವರೇ, ನಾನು ನಿಮ್ಮೊಡನೆ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲವು ನನ್ನನ್ನು ರೂಪಿಸಿದವನ ಬಳಿಯಲ್ಲೇ ಇದೆ. ನೀವೇನು ಆಲೋಚಿಸುವುದಿಲ್ಲವೇ

[50] ನನ್ನ ಜನಾಂಗದವರೇ, ನೀವು ನಿಮ್ಮ ಒಡೆಯನ ಬಳಿ ಕ್ಷಮೆಯನ್ನು ಬೇಡಿರಿ ಮತ್ತು ಅವನ ಕಡೆಗೇ ಸಂಪೂರ್ಣವಾಗಿ ಒಲಿದು ಬಿಡಿರಿ. ಅವನೇ ಆಕಾಶದಿಂದ ನಿಮ್ಮ ಮೇಲೆ ಧಾರಾಳ ಮಳೆಯನ್ನು ಸುರಿಸುವವನು ಮತ್ತು ನಿಮ್ಮ ಶಕ್ತಿಗೆ ಇನ್ನಷ್ಟು ಶಕ್ತಿಯನ್ನು ಸೇರಿಸುವವನು. ನೀವಿನ್ನು ಅಪರಾಧಿಗಳಾಗಿ (ಸತ್ಯವನ್ನು) ಕಡೆಗಣಿಸಬೇಡಿ

[51] ಅವರು (ಹೂದ್‌ರ ಜನಾಂಗದವರು) ಹೇಳಿದರು; ಹೂದರೇ, ನೀವು ನಮ್ಮ ಬಳಿಗೆ ಸ್ಪಷ್ಟ ಪುರಾವೆಯನ್ನೇನೂ ತಂದಿಲ್ಲ. ನಾವೇನೂ ನಿಮ್ಮ ಮಾತು ಕೇಳಿ ನಮ್ಮ ದೇವರುಗಳನ್ನು ತ್ಯಜಿಸಿಬಿಡುವವರಲ್ಲ ಮತ್ತು ನಾವು ನಿಮ್ಮಲ್ಲಿ ನಂಬಿಕೆ ಇಡಲಾರೆವು

[52] ನಮ್ಮ ದೇವರುಗಳ ಪೈಕಿ ಯಾರೋ ಒಬ್ಬರು ನಿಮ್ಮ ಮೇಲೆ ಮಾಡಿರುವ ಬಹಳ ಕೆಟ್ಟ ಸ್ವರೂಪದ ಮಾಟಕ್ಕೆ ನೀವು ತುತ್ತಾಗಿದ್ದೀರಿ ಎಂದೇ ನಾವು ಹೇಳುತ್ತೇವೆ. ಅವರು (ಹೂದ್) ಹೇಳಿದರು; ಖಂಡಿತವಾಗಿಯೂ ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಾಕ್ಷಿಗಳಾಗಿರಿ – ನೀವು (ಅಲ್ಲಾಹನ ಜೊತೆ) ಯಾರನ್ನೆಲ್ಲಾ ಪಾಲುದಾರರಾಗಿಸುತ್ತಿರುವಿರೋ ಅವರೆಲ್ಲರಿಂದ ನಾನು ಮುಕ್ತನಾಗಿದ್ದೇನೆ

[53] ಅವನ (ಅಲ್ಲಾಹನ) ಹೊರತು. ನೀವೀಗ ನನ್ನ ವಿರುದ್ಧ ಎಲ್ಲ ಬಗೆಯ ಸಂಚುಗಳನ್ನು ಹೂಡಿರಿ ಮತ್ತು ನನಗೆ ಸ್ವಲ್ಪವೂ ಕಾಲಾವಕಾಶವನ್ನು ನೀಡಬೇಡಿ

[54] ಖಂಡಿತವಾಗಿಯೂ ನಾನು ಅಲ್ಲಾಹನಲ್ಲೇ ಅಚಲ ಭರವಸೆ ಇಟ್ಟಿದ್ದೇನೆ. ಅವನೇ ನನ್ನ ಒಡೆಯನು ಮತ್ತು ನಿಮ್ಮ ಒಡೆಯನು, ಚಲಿಸುವ ಪ್ರತಿಯೊಂದು ಜೀವಿಯ ಜುಟ್ಟು ಅವನ ಹಿಡಿತದಲ್ಲೇ ಇದೆ. ಖಂಡಿತವಾಗಿಯೂ ನನ್ನ ಒಡೆಯನು ಸ್ಥಿರವಾದ ಸನ್ಮಾರ್ಗದಲ್ಲಿದ್ದಾನೆ

[55] ನೀವೀಗ (ಸತ್ಯವನ್ನು) ಕಡೆಗಣಿಸುವಿರಾದರೆ (ನಿಮಗೆ ತಿಳಿದಿರಲಿ;) ಯಾವ ಸತ್ಯದೊಂದಿಗೆ ನನ್ನನ್ನು ನಿಮ್ಮ ಕಡೆಗೆ ಕಳಿಸಲಾಗಿತ್ತೋ ಅದನ್ನು ನಾನು ನಿಮಗೆ ತಲುಪಿಸಿ ಬಿಟ್ಟಿದ್ದೇನೆ. (ಈಗ) ನನ್ನ ಒಡೆಯನು ನಿಮ್ಮ ಸ್ಥಾನದಲ್ಲಿ ಬೇರೊಂದು ಜನಾಂಗವನ್ನು (ನಾಡಿನ) ಉತ್ತರಾಧಿಕಾರಿಯಾಗಿ ಮಾಡುವನು. ಅವನಿಗೆ (ಅಲ್ಲಾಹನಿಗೆ) ಯಾವ ಹಾನಿಯನ್ನೂ ಮಾಡಲು ನಿಮಗೆ ಸಾಧ್ಯವಾಗದು. ಖಂಡಿತವಾಗಿಯೂ ನನ್ನ ಒಡೆಯನು ಎಲ್ಲವುಗಳ ಸಂರಕ್ಷಕನಾಗಿದ್ದಾನೆ

[56] ಕೊನೆಗೆ, ನಮ್ಮ ಆದೇಶವು ಬಂದು ಬಿಟ್ಟಾಗ, ನಾವು ನಮ್ಮ ಅನುಗ್ರಹದಿಂದ ಹೂದ್‌ರನ್ನು ಮತ್ತು ಅವರ ಜೊತೆಗೆ, ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ರಕ್ಷಿಸಿದೆವು ಮತ್ತು ನಾವು ಅವರನ್ನು ಭಾರೀ ಕಠಿಣ ಶಿಕ್ಷೆಯಿಂದಲೂ ಪಾರುಗೊಳಿಸಿದೆವು

[57] ಹೀಗಿದ್ದರು ಆದ್ (ಜನಾಂಗದವರು). ಅವರು ತಮ್ಮ ಒಡೆಯನ ವಚನಗಳನ್ನು ತಿರಸ್ಕರಿಸಿದರು ಹಾಗೂ ಅವನ ದೂತರ ಆಜ್ಞೆಗಳನ್ನು ಮೀರಿ ನಡೆದರು ಮತ್ತು ಅವರು ಪ್ರತಿಯೊಬ್ಬ ಮರ್ದಕ ವಿದ್ರೋಹಿಯನ್ನು ಅನುಸರಿಸಿದರು

[58] ಈ ಲೋಕದಲ್ಲೂ ಪರಲೋಕದಲ್ಲೂ ಶಾಪವನ್ನು ಅವರ ಬೆನ್ನುಹತ್ತಿಸಲಾಯಿತು. ನಿಮಗೆ ತಿಳಿದಿರಲಿ! ಖಂಡಿತವಾಗಿಯೂ ಆದ್ ಜನಾಂಗದವರು ತಮ್ಮ ಒಡೆಯನನ್ನು ಧಿಕ್ಕ್ಕರಿಸಿದರು. ನಿಮಗೆ ತಿಳಿದಿರಲಿ! ಛೀಮಾರಿ ಇದೆ, ಹೂದ್‌ರ ಆದ್ ಜನಾಂಗಕ್ಕೆ

[59] ಇನ್ನು, ಸಮೂದ್ ಜನಾಂಗದೆಡೆಗೆ, (ದೂತರಾಗಿ) ಅವರ ಸಹೋದರ ಸಾಲಿಹ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅದರಲ್ಲಿ ನಿಮ್ಮನ್ನು ನೆಲೆಸಿದನು. ನೀವು ಅವನಲ್ಲಿ ಕ್ಷಮೆಯನ್ನು ಬೇಡಿರಿ ಮತ್ತು ಅವನೆದುರು ಪಶ್ಚಾತ್ತಾಪ ಪಡಿರಿ. ಖಂಡಿತವಾಗಿಯೂ ನನ್ನ ಒಡೆಯನು ತುಂಬಾ ನಿಕಟನೂ ಸ್ಪಂದಿಸುವವನೂ ಆಗಿದ್ದಾನೆ

[60] ಅವರು (ಜನಾಂಗದವರು) ಹೇಳಿದರು; ಸಾಲಿಹರೇ, ನೀವು ಈ ಹಿಂದೆ ನಮ್ಮ ನಡುವೆ ನಿರೀಕ್ಷೆಯ ಕೇಂದ್ರವಾಗಿದ್ದಿರಿ. ಇದೀಗ ನಮ್ಮ ತಾತ – ಮುತ್ತಾತಂದಿರು ಪೂಜಿಸಿದವುಗಳನ್ನು ನಾವು ಪೂಜಿಸಬಾರದೆಂದು ನೀವು ನಮ್ಮನ್ನು ತಡೆಯುತ್ತಿರುವಿರಾ? ನೀವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಆ ಕುರಿತು ನಮಗೆ ಭಾರೀ ಸಂಶಯವಿದೆ

[61] ಅವರು (ಸಾಲಿಹ್) ಹೇಳಿದರು; ನನ್ನ ಜನಾಂಗದವರೇ, ನೀವು (ಚಿಂತಿಸಿ) ನೋಡಿದಿರಾ, ಒಂದು ವೇಳೆ ನಾನು ನನ್ನ ಒಡೆಯನ ಕಡೆಯಿಂದ (ತೋರಲಾದ) ಸ್ಪಷ್ಟವಾದ ಸರಿ ದಾರಿಯಲ್ಲಿದ್ದು, ಅವನು ತನ್ನ ಕಡೆಯಿಂದ ನನಗೆ ವಿಶೇಷ ಅನುಗ್ರಹವನ್ನು ದಯಪಾಲಿಸಿರುವಾಗ, ನಾನು ಅವನ ಆಜ್ಞೆಯನ್ನು ಮೀರಿನಡೆದರೆ, ಅಲ್ಲಾಹನಿಂದ ಯಾರು ತಾನೇ ನನ್ನನ್ನು ರಕ್ಷಿಸಬಲ್ಲರು? ನೀವಂತು ನನ್ನ ಪಾಲಿಗೆ ಕೇವಲ ನಷ್ಟವನ್ನು ಮಾತ್ರ ಹೆಚ್ಚಿಸುತ್ತಿರುವಿರಿ

[62] ನನ್ನ ಜನಾಂಗದವರೇ, ಇದು ಅಲ್ಲಾಹನ ಒಂಟೆ, ಇದು ನಿಮ್ಮ ಪಾಲಿಗೆ ಒಂದು ಸೂಚನೆಯಾಗಿದೆ. ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲು ಇದನ್ನು ಬಿಟ್ಟುಬಿಡಿರಿ. ಯಾವುದೇ ದುರುದ್ದೇಶದಿಂದ ಇದನ್ನು ಮುಟ್ಟಬೇಡಿ. ಅನ್ಯಥಾ ಬಹುಬೇಗನೇ ನಿಮ್ಮ ಮೇಲೆ ಶಿಕ್ಷೆಯು ಎರಗಲಿದೆ

[63] ಆದರೆ ಅವರು (ಸಾಲಿಹ್‌ರ ಜನಾಂಗದವರು) ಅದನ್ನು ಕೊಂದುಬಿಟ್ಟರು. ಆಗ ಅವರು (ಸಾಲಿಹ್) ಹೇಳಿದರು; ಇನ್ನು ಮೂರು ದಿನಗಳ ಮಟ್ಟಿಗೆ ನೀವು ನಿಮ್ಮ ಮನೆಗಳಲ್ಲಿ ಸುಖವಾಗಿರಿ. ಇದು ಸುಳ್ಳಾಗದ ಎಚ್ಚರಿಕೆಯಾಗಿದೆ

[64] ಕೊನೆಗೆ ನಮ್ಮ ಆದೇಶ ಬಂದು ಬಿಟ್ಟಾಗ ನಾವು ನಮ್ಮ ಅನುಗ್ರಹದಿಂದ ಸಾಲಿಹ್‌ರನ್ನು ಮತ್ತು ಅವರ ಜೊತೆಗೆ ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ರಕ್ಷಿಸಿದೆವು ಮತ್ತು ಅವರನ್ನು ಆ ದಿನದ ಅಪಮಾನದಿಂದ ಕಾಪಾಡಿದೆವು. ನಿಮ್ಮ ಒಡೆಯನು ಖಂಡಿತ ಅತ್ಯಂತ ಬಲಿಷ್ಠನೂ ಪ್ರಚಂಡನೂ ಆಗಿರುವನು

[65] ಅತ್ತ ಒಂದು ಭೀಕರ ಶಬ್ದವು ಅಕ್ರಮಿಗಳನ್ನು ಆವರಿಸಿಕೊಂಡಿತು ಮತ್ತು ಬೆಳಗಾದಾಗ, ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು

[66] ಅವರು ಅಲ್ಲಿ ಎಂದೂ ವಾಸಿಸಿಯೇ ಇರಲಿಲ್ಲ ಎಂಬಂತಿತ್ತು ಅವರ ಸ್ಥಿತಿ. ನಿಮಗೆ ತಿಳಿದಿರಲಿ! ಸಮೂದ್ ಜನಾಂಗದವರು ತಮ್ಮ ಒಡೆಯನನ್ನು ಧಿಕ್ಕರಿಸಿದ್ದರು. ನಿಮಗೆ ತಿಳಿದಿರಲಿ! ಧಿಕ್ಕಾರವಿದೆ, ಸಮೂದ್ ಜನಾಂಗದವರಿಗೆ

[67] ನಮ್ಮ ದೂತರು (ಮಲಕ್‌ಗಳು) ಶುಭವಾರ್ತೆಯೊಂದಿಗೆ, ಇಬ್ರಾಹೀಮ್‌ರ ಬಳಿಗೆ ಬಂದರು. ಅವರು ಸಲಾಮ್ (ಶಾಂತಿ) ಎಂದರು. ಅವರು (ಇಬ್ರಾಹೀಮರು) ‘ಸಲಾಮ್’ ಎಂದು ಹೇಳಿದರು ಮತ್ತು ತಡಮಾಡದೆ, ಹುರಿದ ಒಂದು ಕರುವನ್ನು ತಂದರು

[68] ಆದರೆ ಅವರ (ಅತಿಥಿಗಳ) ಕೈಗಳು ಅದರ (ಆಹಾರದ) ಕಡೆಗೆ ತಲುಪದಿರುವುದನ್ನು ಕಂಡಾಗ ಅವರು (ಇಬ್ರಾಹೀಮರು) ಅವರ ಕುರಿತು ಗಾಬರಿಗೊಂಡರು ಮತ್ತು ಭೀತರಾದರು. ಆಗ ಅವರು (ಅತಿಥಿಗಳು) ಹೇಳಿದರು; ಅಂಜಬೇಡಿ. ನಿಜವಾಗಿ, ನಮ್ಮನ್ನು ಲೂತ್‌ರ ಜನಾಂಗದೆಡೆಗೆ ಕಳಿಸಲಾಗಿದೆ

[69] ಆಗ ಅವರ (ಇಬ್ರಾಹೀಮರ) ಪತ್ನಿಯು ನಿಂತಿದ್ದರು ಮತ್ತು ನಕ್ಕು ಬಿಟ್ಟರು. ನಾವು ಆಕೆಗೆ ಇಸ್‌ಹಾಕ್‌ರ (ಜನನದ) ಹಾಗೂ ಇಸ್‌ಹಾಕ್‌ರ ಪೀಳಿಗೆಯಿಂದ ಯಾಕೂಬ್‌ರ (ಜನನದ) ಶುಭವಾರ್ತೆ ನೀಡಿದೆವು

[70] ಆಕೆ ಹೇಳಿದರು; ಅಯ್ಯೋ! ನನಗೆ ಮಗು ಹುಟ್ಟಲಿದೆಯೇ? ನಾನಂತು ಮುದುಕಿಯಾಗಿದ್ದೇನೆ ಮತ್ತು ಈ ನನ್ನ ಪತಿಯೂ ಮುದುಕರಾಗಿದ್ದಾರೆ. ಇದು ಅಚ್ಚರಿಯ ವಿಷಯವೇ ಸರಿ

[71] ಅವರು ಹೇಳಿದರು; ನೀವೇನು ಅಲ್ಲಾಹನ ಆದೇಶದ ಕುರಿತು ಅಚ್ಚರಿ ಪಡುತ್ತಿರುವಿರಾ? ಮನೆಯವರೇ, ಅಲ್ಲಾಹನ ಅನುಗ್ರಹ ಹಾಗೂ ಸಮೃದ್ಧಿಗಳು ನಿಮ್ಮ ಮೇಲಿವೆ. ಖಂಡಿತವಾಗಿಯೂ ಅವನು ಹೊಗಳಿಕೆಗೆ ಅರ್ಹ ಹಾಗೂ ಗೌರವಾನ್ವಿತನಾಗಿದ್ದಾನೆ

[72] ಹೀಗೆ, ಇಬ್ರಾಹೀಮರ ಆತಂಕವು ತೊಲಗಿ, ಶುಭವಾರ್ತೆಯು ಅವರಿಗೆ ಸಿಕ್ಕಾಗ ಅವರು ಲೂತ್‌ರ ಜನಾಂಗದ ಕುರಿತು ನಮ್ಮೊಡನೆ ವಾದಿಸತೊಡಗಿದರು

[73] ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಸಂಯಮಿ, ಮೃದು ಮನಸ್ಸಿನವರು ಮತ್ತು ಸದಾ ನಮ್ಮತ್ತ ಒಲವು ಉಳ್ಳವರಾಗಿದ್ದರು

[74] (ಅವರೊಡನೆ ಹೇಳಲಾಯಿತು;) ಇಬ್ರಾಹೀಮರೇ, ನೀವು ಇದನ್ನು ಬಿಟ್ಟುಬಿಡಿ. ನಿಮ್ಮ ಒಡೆಯನ ಆದೇಶವು ಖಂಡಿತ ಬಂದು ಬಿಟ್ಟಿದೆ. ಹಿಂದೆಗೆಯಲಾಗದ ಶಿಕ್ಷೆಯು ಅವರ (ಲೂತ್‌ರ ಜನಾಂಗದ) ಮೇಲೆ ಬಂದೆರಗುವುದು ಖಚಿತವಾಗಿದೆ

[75] ನಮ್ಮ ದೂತರು ಲೂತ್‌ರ ಬಳಿಗೆ ಬಂದಾಗ ಅವರಿಂದಾಗಿ ಅವರು (ಲೂತರು) ಚಿಂತೆಗೀಡಾದರು ಮತ್ತು ಅವರ ಮನಸ್ಸು ದುಃಖಿತವಾಗಿತ್ತು. ಅವರು ‘‘ಇದು ಭಾರೀ ಕಠಿಣ ದಿನವಾಗಿದೆ’’ ಎಂದರು

[76] ಅವರ ಜನಾಂಗದವರು ಅವರ ಬಳಿಗೆ ಧಾವಿಸಿ ಬಂದರು. ಅವರು ಈ ಹಿಂದೆ ಪಾಪ ಕಾರ್ಯಗಳಲ್ಲಿ ತೊಡಗಿದ್ದರು. ಅವರು (ಲೂತ್) ಹೇಳಿದರು; ನನ್ನ ಜನಾಂಗದವರೇ, ಇವರು ನನ್ನ ಪುತ್ರಿಯರು. ನಿಮ್ಮ ಪಾಲಿಗೆ ಇವರು ಹೆಚ್ಚು ಪಾವನರಾಗಿದ್ದಾರೆ. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನ ಅತಿಥಿಗಳ ನಡುವೆ ನನ್ನನ್ನು ಅಪಮಾನಿಸಬೇಡಿ. ನಿಮ್ಮಲ್ಲಿ ಚಾರಿತ್ರ್ಯ ಸರಿ ಇರುವ ಒಬ್ಬ ಪುರುಷನೂ ಇಲ್ಲವೇ

[77] ಅವರು ಹೇಳಿದರು; ನಿಮ್ಮ ಪುತ್ರಿಯರ ಮೇಲೆ ನಮಗೆ ಯಾವ ಹಕ್ಕೂ ಇಲ್ಲವೆಂಬುದು ನಿಮಗೆ ತಿಳಿದಿದೆ ಮತ್ತು ನಾವು ಬಯಸುವುದು ಏನನ್ನು ಎಂಬುದು ಕೂಡಾ ನಿಮಗೆ ಖಂಡಿತ ತಿಳಿದಿದೆ

[78] ಅವರು (ಲೂತ್) ಹೇಳಿದರು; ನನಗೆ ನಿಮ್ಮ ಮೇಲೆ ಪ್ರಾಬಲ್ಯ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಒಂದು ಭದ್ರ ಸ್ಥಳದಲ್ಲಿ ನಾನು ಆಶ್ರಯ ಪಡೆಯಬೇಕಿತ್ತು

[79] ಅವರು (ಅತಿಥಿಗಳು) ಹೇಳಿದರು; ಲೂತರೇ, ನಾವು ನಿಮ್ಮ ಒಡೆಯನ ದೂತರು. ಅವರು (ಧಿಕ್ಕಾರಿಗಳು) ನಿಮ್ಮನ್ನು ತಲುಪರಾರರು. ನೀವೀಗ ರಾತ್ರಿಯ ಒಂದು ಭಾಗದಲ್ಲಿ, ನಿಮ್ಮ ಮನೆಯವರೊಂದಿಗೆ ಹೊರಟು ಬಿಡಿರಿ – ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಒಬ್ಬರೂ ಹಿಂದಿರುಗಿ ನೋಡಬಾರದು. ಅವರಿಗೆ (ಧಿಕ್ಕಾರಿಗಳಿಗೆ) ಸಂಭವಿಸಿದ್ದೆಲ್ಲವೂ ಖಂಡಿತ ಆಕೆಗೂ ಸಂಭವಿಸುವುದು. ಅವರಿಗೆ (ಧಿಕ್ಕಾರಿಗಳ ವಿನಾಶಕ್ಕೆ) ಮುಂಜಾನೆಯ ಸಮಯವು ನಿಶ್ಚಿತವಾಗಿದೆ. ಮುಂಜಾನೆ ಏನು ಸಮೀಪವಿಲ್ಲವೇ

[80] ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ ನಾವು ಅದನ್ನು (ಆ ನಾಡನ್ನು) ಬುಡಮೇಲುಗೊಳಿಸಿ ಬಿಟ್ಟೆವು ಮತ್ತು ಅದರ ಮೇಲೆ ಬೆಂದ ಕಲ್ಲಿನ ಹರಳುಗಳ ಮಳೆಯನ್ನು ನಿರಂತರ ಸುರಿಸಿದೆವು. 83. ಅವುಗಳನ್ನು ನಿಮ್ಮ ಒಡೆಯನ ಬಳಿ ಗುರುತಿಸಲಾಗಿತ್ತು ಮತ್ತು ಅದು (ಆ ಪ್ರದೇಶವು) ಅಕ್ರಮಿಗಳಿಂದ ದೂರವೇನಿಲ್ಲ

[81] ಮುಂದೆ ಮದ್‌ಯನ್‌ನ ಕಡೆಗೆ ಅವರ ಸಹೋದರ ಶುಐಬ್‌ರನ್ನು ಕಳಿಸಲಾಯಿತು. ಅವರು ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನನ್ನೇ ಪೂಜಿಸಿರಿ. ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನೀವು ಅಳತೆ, ತೂಕದಲ್ಲಿ ಕಡಿತ ಮಾಡಬೇಡಿ. ಸದ್ಯ ನೀವು ಸುಖದಲ್ಲಿರುವುದನ್ನು ನಾನು ಖಂಡಿತ ಕಾಣುತ್ತಿದ್ದೇನೆ. ಆದರೆ ಸಂಪೂರ್ಣವಾಗಿ ಆವರಿಸಿ ಬಿಡುವ ದಿನವೊಂದರ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುವ ಭಯ ನನಗಿದೆ

[82] ನನ್ನ ಜನಾಂಗದವರೇ, ನೀವು ನ್ಯಾಯೋಚಿತವಾಗಿ ಅಳೆಯಿರಿ ಮತ್ತು ತೂಗಿರಿ. ನೀವೆಂದೂ ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿ ಮತ್ತು ನೀವು ಭೂಮಿಯಲ್ಲಿ ಅಶಾಂತಿ ಹರಡುತ್ತಾ ಅಲೆಯಬೇಡಿ

[83] ನೀವು ನಿಜಕ್ಕೂ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನು ಏನನ್ನು ಉಳಿಸಿಕೊಡುತ್ತಾನೋ ಅದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ. ನಾನು ನಿಮ್ಮ ಮೇಲಿನ ಕಾವಲುಗಾರನೇನೂ ಅಲ್ಲ

[84] ಅವರು (ಜನಾಂಗದವರು) ಹೇಳಿದರು; ಶುಐಬರೇ, ನಮ್ಮ ತಾತ ಮುತ್ತಾತಂದಿರು ಪೂಜಿಸುತ್ತಿದ್ದ ದೇವರುಗಳನ್ನು ನಾವು ಬಿಟ್ಟು ಬಿಡಬೇಕೆಂದು ಹಾಗೂ ಸ್ವತಃ ನಮ್ಮ ಸಂಪತ್ತಿನ ವಿಷಯದಲ್ಲಿ ನಾವು ನಮ್ಮಿಚ್ಛೆಯಂತೆ ವರ್ತಿಸಬಾರದು ಎಂದು ನಿಮ್ಮ ನಮಾಝ್ ನಿಮಗೆ ಆದೇಶಿಸುತ್ತಿದೆಯೇ? ನೀವು ಭಾರೀ ಬುದ್ಧಿವಂತರೂ, ದಾರ್ಶನಿಕರೂ ಆಗಿಬಿಟ್ಟಿದ್ದೀರಿ

[85] ಅವರು ಹೇಳಿದರು; ನನ್ನ ಜನಾಂಗದವರೇ, ನೀವು ನೋಡುತ್ತಿರುವಿರಾ? ನಾನಂತು ನನ್ನ ಒಡೆಯನ ಕಡೆಯಿಂದ (ಬಂದಿರುವ) ಸ್ಪಷ್ಟ ಪುರಾವೆಯನ್ನು ಅನುಸರಿಸುತ್ತಿದ್ದೇನೆ. ಅವನು ತನ್ನ ಕಡೆಯಿಂದ ನನಗೆ ಉತ್ತಮ ಆಹಾರವನ್ನು ನೀಡಿದ್ದಾನೆ. ನಾನು ಯಾವುದರಿಂದ ನಿಮ್ಮನ್ನು ತಡೆಯುತ್ತಿರುವೆನೋ ಅದನ್ನು ಸ್ವತಃ ಉಲ್ಲಂಘಿಸುವ ಇರಾದೆ ನನಗಿಲ್ಲ. ನಾನಂತು, ನನಗೆ ಸಾಧ್ಯವಿರುವಷ್ಟು ಮಟ್ಟಿಗೆ ಸುಧಾರಣೆಯನ್ನಷ್ಟೇ ಬಯಸುತ್ತೇನೆ. ಇನ್ನು, ನನಗೆ ನನ್ನ ಭಾಗ್ಯವನ್ನು ನೀಡುವವನು ಅಲ್ಲಾಹನ ಹೊರತು ಬೇರೆ ಯಾರೂ ಇಲ್ಲ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ನಾನು ಅವನ ಕಡೆಗೇ ಮರಳುತ್ತೇನೆ

[86] ನನ್ನ ಜನಾಂಗದವರೇ, ನನ್ನ ಮೇಲಿನ ಹಗೆತನವು, ನೂಹ್‌ರ ಜನಾಂಗ ಅಥವಾ ಹೂದ್‌ರ ಜನಾಂಗ ಅಥವಾ ಸಾಲಿಹ್‌ರ ಜನಾಂಗದವರ ಮೇಲೆ ಬಂದೆರಗಿದಂತಹ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುವುದಕ್ಕೆ ಕಾರಣವಾಗುವಂತಹ ಕೆಲಸಗಳನ್ನು ನಿಮ್ಮಿಂದ ಮಾಡಿಸದಿರಲಿ. ಲೂತ್‌ರ ಜನಾಂಗವಂತೂ ನಿಮ್ಮಿಂದ ಹೆಚ್ಚು ದೂರವೇನಿಲ್ಲ

[87] ನೀವು ನಿಮ್ಮ ಒಡೆಯನಲ್ಲಿ ಕ್ಷಮೆ ಬೇಡಿರಿ ಮತ್ತು ಅವನ ಕಡೆಗೆ ಒಲಿಯಿರಿ. ಖಂಡಿತವಾಗಿಯೂ ನನ್ನ ಒಡೆಯನು ತುಂಬಾ ಕರುಣಾಳು ಹಾಗೂ ಪ್ರೀತಿಸುವವನಾಗಿದ್ದಾನೆ

[88] ಅವರು (ಜನಾಂಗದವರು) ಹೇಳಿದರು; ಶುಐಬರೇ, ನೀವು ಹೇಳುವ ಹೆಚ್ಚಿನ ವಿಷಯಗಳು ನಮಗೆ ಅರ್ಥವಾಗುವುದಿಲ್ಲ. ನಾವು ನಿಮ್ಮನ್ನು ನಮ್ಮ ನಡುವಿನ ತೀರಾ ದುರ್ಬಲ ವ್ಯಕ್ತಿಯಾಗಿ ಕಾಣುತ್ತಿದ್ದೇವೆ. ನಿಮ್ಮ ಮನೆತನದ ಮುಲಾಜೆ ಇಲ್ಲದಿರುತ್ತಿದ್ದರೆ ನಾವು ನಿಮ್ಮ ಮೇಲೆ ಕಲ್ಲೆಸೆಯುತ್ತಿದ್ದೆವು. ನೀವು ನಮ್ಮ ಮೇಲೆ ಯಾವುದೇ ಪ್ರಾಬಲ್ಯ ಉಳ್ಳವರಲ್ಲ

[89] ಅವರು (ಶುಐಬ್) ಹೇಳಿದರು; ನನ್ನ ಜನಾಂಗದವರೇ, ನನ್ನ ಮನೆತನವೇನು ನಿಮ್ಮ ಪಾಲಿಗೆ ಅಲ್ಲಾಹನಿಗಿಂತ ಹೆಚ್ಚು ಬಲಿಷ್ಠ ವಾಗಿದೆಯೇ? ನಿಜವಾಗಿ ನೀವು ಅವನನ್ನು (ಅಲ್ಲಾಹನನ್ನು) ನಿಮ್ಮ ಬೆನ್ನ ಹಿಂದೆ ಹಾಕಿ ನಿರ್ಲಕ್ಷಿಸಿ ಬಿಟ್ಟಿರುವಿರಿ. ಖಂಡಿತವಾಗಿಯೂ ನನ್ನ ಒಡೆಯನು ನೀವು ಮಾಡುತ್ತಿರುವ ಎಲ್ಲವನ್ನು ಆವರಿಸಿಕೊಂಡಿದ್ದಾನೆ

[90] ನನ್ನ ಜನಾಂಗದವರೇ, ನಿಮ್ಮ ನೆಲೆಯಲ್ಲಿ ನೀವು ಸಕ್ರಿಯರಾಗಿರಿ, ನಾನೂ ಸಕ್ರಿಯನಾಗಿರುತ್ತೇನೆ. ಅಪಮಾನಕಾರಿ ಶಿಕ್ಷೆಯು ಯಾರ ಮೇಲೆ ಬಂದೆರಗಲಿದೆ ಮತ್ತು ಸುಳ್ಳುಗಾರ ಯಾರು ಎಂಬುದು ನಿಮಗೆ ಶೀಘ್ರವೇ ತಿಳಿಯಲಿದೆ. ನೀವು ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ

[91] ಕೊನೆಗೆ ನಮ್ಮ ಆದೇಶವು ಬಂದು ಬಿಟ್ಟಾಗ, ನಾವು ಶುಐಬರನ್ನು ಹಾಗೂ ಅವರ ಜೊತೆ ಸತ್ಯದಲ್ಲಿ ನಂಬಿಕೆ ಇಟ್ಟಿದ್ದ ಜನರನ್ನು ನಮ್ಮ ವಿಶೇಷ ಅನುಗ್ರಹದಿಂದ ರಕ್ಷಿಸಿದೆವು. ಅಕ್ರಮಿಗಳನ್ನು ಒಂದು ಭೀಕರ ಶಬ್ದವು ಆವರಿಸಿಕೊಂಡಿತು ಮತ್ತು ಅವರ ಪಾಲಿಗೆ ಬೆಳಗಾದಾಗ ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು

[92] ಅವರು ಅಲ್ಲಿ ಎಂದೂ ವಾಸಿಸಿಯೇ ಇರಲಿಲ್ಲ ಎಂಬಂತಿತ್ತು ಅವರ ಸ್ಥಿತಿ. ನಿಮಗೆ ತಿಳಿದಿರಲಿ! ಸಮೂದರು ಶಾಪಗ್ರಸ್ತರಾದಂತೆ ಮದ್‌ಯನರು ಶಾಪಗ್ರಸ್ತರಾದರು

[93] ಮತ್ತು ನಾವು ನಮ್ಮ ವಚನಗಳೊಂದಿಗೆ ಹಾಗೂ ಸ್ಪಷ್ಟ ಪುರಾವೆಯೊಂದಿಗೆ ಮೂಸಾರನ್ನು ಕಳಿಸಿದೆವು

[94] ಫಿರ್‌ಔನ್ ಮತ್ತು ಅವನ ಸರದಾರರ ಕಡೆಗೆ. ಅವರು ಫಿರ್‌ಔನ್‌ನ ಆದೇಶವನ್ನೇ ಪಾಲಿಸುತ್ತಿದ್ದರು. ಇನ್ನು ಫಿರ್ಔನನ ಆದೇಶವು ನೇರವಾದುದಾಗಿರಲಿಲ್ಲ

[95] ಪುನರುತ್ಥಾನ ದಿನ ಅವನು ತನ್ನ ಜನಾಂಗದವರಿಗಿಂತ ಮುಂದಿರುವನು ಮತ್ತು ಅವನೇ ಅವರನ್ನು ನರಕದ ಬೆಂಕಿಗೆ ಇಳಿಸುವನು – ಬಹಳ ಕೆಟ್ಟದಾಗಿರುವುದು, ಇಳಿಯುವ ಆ ಸ್ಥಳ

[96] ಈ ಲೋಕದಲ್ಲೂ ಶಾಪವನ್ನು ಅವರ ಬೆನ್ನು ಹತ್ತಿಸಲಾಗಿತ್ತು. ಇನ್ನು ಪರಲೋಕದಲ್ಲಿ ಅವರಿಗೆ ಸಿಗುವ ಬಹುಮಾನವು ತೀರಾ ಕೆಟ್ಟದಾಗಿರುವುದು

[97] (ದೂತರೇ,) ಈ ರೀತಿ ನಾವು ನಿಮಗೆ ಕೆಲವು ನಾಡುಗಳ ಸಮಾಚಾರವನ್ನು ಕೇಳಿಸುತ್ತಿದ್ದೇವೆ. ಆ ಪೈಕಿ ಕೆಲವು ನಾಡುಗಳು ಇಂದಿಗೂ ಇವೆ ಮತ್ತು ಕೆಲವು ನಿರ್ಮೂಲವಾಗಿವೆ

[98] ಅವರ (ನಾಶವಾದ ಜನಾಂಗಗಳ) ಮೇಲೆ ನಾವು ಅಕ್ರಮ ವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮ ವೆಸಗಿಕೊಂಡರು. ಕೊನೆಗೆ ನಿಮ್ಮ ಒಡೆಯನ ಆದೇಶವು ಬಂದು ಬಿಟ್ಟಾಗ, ಅವರು ಅಲ್ಲಾಹನನ್ನು ಬಿಟ್ಟು ಕೂಗಿ ಪ್ರಾರ್ಥಿಸುತ್ತಿದ್ದ ದೇವರುಗಳು ಯಾರೂ ಅವರ ಯಾವ ಕೆಲಸಕ್ಕೂ ಬರಲಿಲ್ಲ. ಅವರು (ಆ ದೇವರುಗಳು) ಅವರ ಪಾಲಿಗೆ, ವಿನಾಶದ ಹೊರತು ಬೇರೇನನ್ನೂ ಹೆಚ್ಚಿಸಲಿಲ್ಲ

[99] ಹೀಗಿರುತ್ತದೆ, ಯಾವುದೇ ನಾಡಿನವರು ಅಕ್ರಮದಲ್ಲಿ ನಿರತರಾದಾಗ, ಅವರನ್ನು ಹಿಡಿಯುವ ನಿಮ್ಮ ಒಡೆಯನ ಹಿಡಿತ. ಖಂಡಿತವಾಗಿಯೂ ಅವನ ಹಿಡಿತವು ತುಂಬಾ ಯಾತನಾಮಯವೂ ಕಠೋರವೂ ಆಗಿರುತ್ತದೆ

[100] ಪರಲೋಕದ ಶಿಕ್ಷೆಯ ಭಯ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ. ಅದು, ಎಲ್ಲ ಮಾನವರೂ ಒಂದೆಡೆ ಸೇರುವ ದಿನವಾಗಿರುವುದು ಮತ್ತು ಅದು (ಪ್ರತಿಯೊಬ್ಬರ ಪಾಲಿಗೆ) ಹಾಜರಿಯ ದಿನವಾಗಿರುವುದು

[101] ನಾವು ಅದನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮಾತ್ರ ಮುಂದೂಡಿರುವೆವು

[102] ಅದು ಬಂದು ಬಿಡುವ ದಿನ, ಅವನ ಅನುಮತಿ ಇಲ್ಲದೆ ಯಾರಿಗೂ ಮಾತನಾಡಲಿಕ್ಕಾಗದು. ಅವರಲ್ಲಿ ಕೆಲವರು ತೀರಾ ಭಾಗ್ಯಹೀನರಾಗಿರುವರು ಮತ್ತು ಕೆಲವರು ತುಂಬಾ ಭಾಗ್ಯಶಾಲಿಗಳಾಗಿರುವರು

[103] ಭಾಗ್ಯಹೀನರು ನರಕಾಗ್ನಿಯಲ್ಲಿರುವರು ಮತ್ತು ಅಲ್ಲಿ ಅವರ ಪಾಲಿಗೆ ಚೀರಾಟ ಹಾಗೂ ಅಬ್ಬರ ಮಾತ್ರ ಇರುವುದು

[104] ಅವರು, ಆಕಾಶಗಳು ಮತ್ತು ಭೂಮಿಯು ಇರುವ ತನಕ ಅದರಲ್ಲಿ ಸದಾಕಾಲ ಇರುವರು – ನಿಮ್ಮ ಒಡೆಯನು ಇಚ್ಛಿಸಿದ್ದರ ಹೊರತು. ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದ್ದನ್ನು ಮಾಡಿಯೇ ಬಿಡುತ್ತಾನೆ

[105] ಇನ್ನು, ಭಾಗ್ಯಶಾಲಿಗಳು ಸ್ವರ್ಗದಲ್ಲಿರುವರು. ಅವರು ಆಕಾಶಗಳು ಮತ್ತು ಭೂಮಿಯು ಇರುವ ತನಕ ಅದರಲ್ಲಿ ಸದಾಕಾಲ ಇರುವರು – ನಿಮ್ಮ ಒಡೆಯನು ಇಚ್ಛಿಸಿದ್ದರ ಹೊರತು. ಅದು ಎಂದೂ ಕೊನೆಗಾಣದ ಕೊಡುಗೆ

[106] ಅವರು (ಧಿಕ್ಕಾರಿಗಳು) ಪೂಜಿಸುವವುಗಳ ಕುರಿತು ನೀವು ಸಂಶಯ ತಾಳಬೇಡಿ. ಅವರು ಈ ಹಿಂದೆ ತಮ್ಮ ತಂದೆ – ತಾತಂದಿರು ಪೂಜಿಸಿದಂತೆಯೇ ಪೂಜಿಸುತ್ತಿದ್ದಾರೆ. ನಾವು ಖಂಡಿತ ಅವರ ಪಾಲನ್ನು ಕಡಿತಗೊಳಿಸದೆ ಅವರಿಗೆ (ಅವರ ಕೃತ್ಯದ) ಪೂರ್ಣ ಪ್ರತಿಫಲ ನೀಡಲಿದ್ದೇವೆ

[107] ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು. ಅದರಲ್ಲಿ ಭಿನ್ನತೆ ತೋರಲಾಯಿತು. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷವು ಮೊದಲೇ ನಿಗದಿಯಾಗದೆ ಇದ್ದಿದ್ದರೆ, ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಆದರೆ ಅವರು ಈ ಕುರಿತು ಭಾರೀ ಸಂಶಯದಲ್ಲಿದ್ದಾರೆ

[108] ನಿಮ್ಮ ಒಡೆಯನು ಅವರಲ್ಲಿ ಪ್ರತಿಯೊಬ್ಬರಿಗೂ ಅವರ ಕರ್ಮಗಳ ಪೂರ್ಣ ಪ್ರತಿಫಲವನ್ನು ನೀಡುವನು. ಖಂಡಿತವಾಗಿಯೂ ಅವರು ಮಾಡುತ್ತಿರುವ ಎಲ್ಲ ಕರ್ಮಗಳ ಅರಿವು ಅವನಿಗಿದೆ

[109] ಇದೀಗ ನೀವು ಮತ್ತು ನಿಮ್ಮ ಜೊತೆ ಪಶ್ಚಾತ್ತಾಪ ಪಟ್ಟವರು, ನಿಮಗೆ ಆದೇಶಿಸಲಾಗಿರುವಂತೆ ಸ್ಥಿರವಾಗಿ ನಿಲ್ಲಿರಿ ಮತ್ತು ವಿದ್ರೋಹವೆಸಗಬೇಡಿ. ಖಂಡಿತವಾಗಿಯೂ ನೀವು ಮಾಡುತ್ತಿರುವ ಎಲ್ಲವನ್ನು ಅವನು ನೋಡುತ್ತಿದ್ದಾನೆ

[110] ಅಕ್ರಮವೆಸಗಿದವರ ಕಡೆಗೆ ನೀವು ವಾಲಬೇಡಿ , (ಅನ್ಯಥಾ) ಬೆಂಕಿಯು ನಿಮಗೆ ತಗಲುವುದು ಮತ್ತು ನಿಮಗೆ ಅಲ್ಲಾಹನ ಹೊರತು ಬೇರಾರೂ ಪೋಷಕರು ಸಿಗಲಾರರು, ನಿಮಗೆ ಸಹಾಯವೂ ಸಿಗದು

[111] ನೀವು ಹಗಲಿನ ಎರಡು ಕೊನೆಗಳಲ್ಲಿ (ಮುಂಜಾನೆ ಹಾಗೂ ಸಂಜೆ) ಮತ್ತು ರಾತ್ರಿಯ ಒಂದು ಭಾಗದಲ್ಲಿ ನಮಾಝನ್ನು ಪಾಲಿಸಿರಿ. ಖಂಡಿತವಾಗಿಯೂ ಒಳಿತುಗಳು – ಕೆಡುಕುಗಳನ್ನು ತೊಲಗಿಸುತ್ತವೆ. ಇದು ಉಪದೇಶ ಸ್ವೀಕರಿಸುವವರಿಗಾಗಿ ಇರುವ ಉಪದೇಶವಾಗಿದೆ

[112] ನೀವು ಸಹನಶೀಲರಾಗಿರಿ. ಅಲ್ಲಾಹನು ಸತ್ಕರ್ಮಿಗಳ ಪ್ರತಿಫಲವನ್ನು ಖಂಡಿತ ವ್ಯರ್ಥಗೊಳಿಸುವುದಿಲ್ಲ

[113] ನಿಮ್ಮ ಹಿಂದಿನ ಜನಾಂಗಗಳಲ್ಲಿ , ಭೂಮಿಯಲ್ಲಿ ಅಶಾಂತಿಯನ್ನು ಮೆರೆಯದಂತೆ ಜನರನ್ನು ತಡೆಯುವ ಸಜ್ಜನರು (ದೊಡ್ಡ ಸಂಖ್ಯೆಯಲ್ಲಿ) ಇರಬೇಕಿತ್ತು. ಆದರೆ ಅಂತಹ ಕೇವಲ ಕೆಲವರು ಮಾತ್ರ ಇದ್ದರು . ನಾವು ಅವರನ್ನು ಅವರಿಂದ (ದುಷ್ಟರಿಂದ) ರಕ್ಷಿಸಿದೆವು. ಅಕ್ರಮಿಗಳು ತಮಗೆ ನೀಡಲಾಗಿದ್ದ ಸುಖ ಭೋಗಗಳ ಹಿಂದೆಯೇ ಬಿದ್ದಿದ್ದರು. ಅವರು ಅಪರಾಧಿಗಳಾಗಿದ್ದರು

[114] ಇನ್ನು, ಒಂದು ನಾಡಿನ ಜನರು ಸುಧಾರಕರಾಗಿರುವಾಗ, ನಿಮ್ಮ ಒಡೆಯನು ಅನ್ಯಾಯವಾಗಿ ಅಂತಹ ನಾಡನ್ನು ನಾಶಮಾಡುವವನಲ್ಲ

[115] ನಿಮ್ಮ ಒಡೆಯನು ಬಯಸಿದ್ದರೆ, ಎಲ್ಲ ಮಾನವರನ್ನೂ ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಅವರಂತು (ಸತ್ಯದ ವಿರುದ್ಧ) ಸದಾ ಭಿನ್ನತೆ ತಾಳುತ್ತಲೇ ಇರುತ್ತಾರೆ –

[116] – ನಿಮ್ಮ ಒಡೆಯನು ಕರುಣೆ ತೋರಿದವರ ಹೊರತು. ಇದಕ್ಕಾಗಿಯೇ ಅವರನ್ನು ಸೃಷ್ಟಿಲಾಗಿದೆ – ನಾನು ಜಿನ್ನ್‌ಗಳನ್ನು ಮತ್ತು ಮಾನವರನ್ನು ಒಟ್ಟು ಸೇರಿಸಿ ಅವರಿಂದ ನರಕವನ್ನು ತುಂಬಲಿದ್ದೇನೆ ಎಂಬ ನಿಮ್ಮ ಒಡೆಯನ ಮಾತು ಪೂರ್ಣವಾಗಬೇಕಾಗಿದೆ

[117] (ಈ ರೀತಿ) ನಾವು ನಿಮ್ಮ ಮನಸ್ಸಿನ ಸ್ಥಿರತೆಗಾಗಿ (ಗತಕಾಲದ) ದೂತರ ವೃತ್ತಾಂತಗಳನ್ನೆಲ್ಲಾ ನಿಮಗೆ ಕೇಳಿಸುತ್ತಿದ್ದೇವೆ ಮತ್ತು ಈ ಮೂಲಕ ನಿಮ್ಮ ಬಳಿಗೆ ಸತ್ಯವು ಬಂದಿದೆ. ಇದು ವಿಶ್ವಾಸಿಗಳ ಪಾಲಿಗೆ ಉಪದೇಶ ಹಾಗೂ ಬೋಧನೆಯಾಗಿದೆ

[118] (ಸತ್ಯವನ್ನು) ನಂಬದ ಜನರೊಡನೆ ನೀವು ಹೇಳಿರಿ; ನೀವು ನಿಮ್ಮ ಸ್ಥಾನದಲ್ಲಿ ಸಕ್ರಿಯರಾಗಿರಿ, ನಾವೂ ಸಕ್ರಿಯರಾಗಿರುವೆವು

[119] ಆ ಬಳಿಕ ನೀವು ಕಾಯಿರಿ, ನಾವೂ ಕಾಯುತ್ತಿರುವೆವು

[120] ಆಕಾಶಗಳ ಮತ್ತು ಭೂಮಿಯ ಎಲ್ಲ ಗುಟ್ಟುಗಳು ಅಲ್ಲಾಹನ ಬಳಿಯಲ್ಲಿವೆ. ಕೊನೆಗೆ ಎಲ್ಲ ವಿಷಯಗಳೂ ಅವನ ಕಡೆಗೇ ಮರಳಲಿವೆ. ನೀವು ಅವನನ್ನೇ ಪೂಜಿಸಿರಿ ಮತ್ತು ಅವನಲ್ಲೇ ಭರವಸೆ ಇಡಿರಿ. ನೀವೇನು ಮಾಡುತ್ತಿರುವಿರೋ ಆ ಕುರಿತು ಅವನು ಅಜ್ಞನಾಗಿಲ್ಲ

[121] ಅಲಿಫ್ ಲಾಮ್ ರಾ. ಇವು ಸ್ಪಷ್ಟವಾಗಿರುವ ಗ್ರಂಥದ ವಚನಗಳು

[122] ನೀವು ಅರ್ಥಯಿಸಬೇಕೆಂದು ನಾವು ಇದನ್ನು ಅರಬೀ ಭಾಷೆಯ ಕುರ್‌ಆನ್ ಆಗಿ ಇಳಿಸಿರುವೆವು

[123] (ದೂತರೇ,) ನಾವೇ ನಿಮಗೆ ದಿವ್ಯವಾಣಿಯ ಮೂಲಕ ಈ ಕುರ್‌ಆನ್‌ಅನ್ನು ಕಳಿಸಿದ್ದು, ನಾವೇ ಈ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತವನ್ನು ಕೇಳಿಸುತ್ತಿರುವೆವು. ಈ ಹಿಂದೆ ನೀವು ಅಜ್ಞರಾಗಿದ್ದಿರಿ

ಯೂಸುಫ್

Surah 12

[1] ಯೂಸುಫ್, ತಮ್ಮ ತಂದೆಯೊಡನೆ, ‘‘ನನ್ನ ತಂದೆಯೇ, ನಾನು (ಕನಸಿನಲ್ಲಿ) ಹನ್ನೊಂದು ನಕ್ಷತ್ರಗಳನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ನೋಡಿದೆ ಮತ್ತು ಅವುಗಳು ನನಗೆ ಸಾಷ್ಟಾಂಗ ವೆರಗುವುದನ್ನು ನಾನು ನೋಡಿದೆ‘‘

[2] ಅವರು (ತಂದೆ) ಹೇಳಿದರು; ನನ್ನ ಪುತ್ರನೇ, ನಿನ್ನ ಕನಸಿನ ವಿಚಾರವನ್ನು ನಿನ್ನ ಸಹೋದರರಿಗೆ ತಿಳಿಸಬೇಡ. ಅವರು ನಿನ್ನ ವಿರುದ್ಧ ಏನಾದರೂ ಸಂಚು ಹೂಡುವರು. ಖಂಡಿತವಾಗಿಯೂ ಶೈತಾನನು ಮಾನವನ ಪಾಲಿಗೆ ಸ್ಪಷ್ಟ ಶತ್ರುವಾಗಿದ್ದಾನೆ

[3] ಈ ರೀತಿ ನಿನ್ನ ಒಡೆಯನು ನಿನ್ನನ್ನು ಆರಿಸಿಕೊಳ್ಳುವನು ಹಾಗೂ ನಿನಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸುವನು ಮತ್ತು ಅವನು ಈ ಹಿಂದೆ ನಿನ್ನ ಪೂರ್ವಜರಾದ ಇಬ್ರಾಹೀಮ್ ಮತ್ತು ಇಸ್‌ಹಾಕ್‌ರ ಪಾಲಿಗೆ ಪೂರ್ತಿಗೊಳಿಸಿದಂತೆ ನಿನ್ನ ಪಾಲಿಗೆ ಹಾಗೂ ಯಅ್ಕೂಬ್‌ರ ಸಂತತಿಯ ಪಾಲಿಗೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸುವನು . ನಿನ್ನ ಒಡೆಯನು ಖಂಡಿತ ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[4] ವಿಚಾರಿಸುವವರ ಪಾಲಿಗೆ, ಯೂಸುಫ್ ಮತ್ತು ಅವರ ಸಹೋದರರಲ್ಲಿ ಅನೇಕ ಪಾಠಗಳಿವೆ

[5] ಅವರು (ಸಹೋದರರು) ಹೇಳಿದರು; ಯೂಸುಫ್ ಮತ್ತು ಅವನ ಸಹೋದರನು ನಮ್ಮ ತಂದೆಗೆ ನಮಗಿಂತ ಹೆಚ್ಚು ಪ್ರಿಯರಾಗಿ ಬಿಟ್ಟಿದ್ದಾರೆ – ನಾವು ಒಂದು ಬಲಿಷ್ಠ ತಂಡವಾಗಿದ್ದೇವೆ. ನಮ್ಮ ತಂದೆ ಸ್ಪಷ್ಟವಾಗಿ ದಾರಿಗೆಟ್ಟಿದ್ದಾರೆ

[6] ನಿಮ್ಮ ತಂದೆಯ ಗಮನವೆಲ್ಲಾ ನಿಮ್ಮೆಡೆಗೆ ಮೀಸಲಾಗಿಬಿಡಲು, ನೀವು ಯೂಸುಫ್‌ನನ್ನು ಕೊಂದು ಬಿಡಿರಿ ಅಥವಾ ಅವನನ್ನು ಯಾವುದಾದರೂ ನಾಡಿನಲ್ಲಿ ಎಸೆದು ಬನ್ನಿರಿ. ಆ ಬಳಿಕ ನೀವು ಸಜ್ಜನರಾಗಿರಬಹುದು

[7] ಅವರಲ್ಲೊಬ್ಬನು ಹೇಳಿದನು; ಯೂಸುಫ್‌ನನ್ನು ಕೊಲ್ಲಬೇಡಿ. ನಿಮಗೇನಾದರೂ ಮಾಡಲೇ ಬೇಕಿದ್ದರೆ, ಅವನನ್ನು ಯಾವುದಾದರೂ ನೀರಿಲ್ಲದ ಬಾವಿಯೊಳಕ್ಕೆ ಎಸೆದು ಬನ್ನಿರಿ. ಯಾರಾದರೂ ಪ್ರಯಾಣಿಕರು ಅವನನ್ನು ಎತ್ತಿಕೊಳ್ಳಬಹುದು

[8] ಅವರು ಹೇಳಿದರು; ನಮ್ಮ ತಂದೆಯೇ, ಯೂಸುಫ್‌ನ ವಿಷಯದಲ್ಲಿ ನೀವೇಕೆ ನಮ್ಮ ಮೇಲೆ ಭರವಸೆ ಇಡುವುದಿಲ್ಲ? ನಾವಂತು ಆತನ ಹಿತೈಷಿಗಳೇ ಆಗಿದ್ದೇವೆ

[9] ನಾಳೆ ಅವನನ್ನು ನಮ್ಮ ಜೊತೆ ಕಳಿಸಿರಿ. ಏನಾದರೂ ತಿನ್ನಲಿ ಹಾಗೂ ಆಟೋಟ ನಡೆಸಲಿ. ನಾವು ಖಂಡಿತ ಅವನ ರಕ್ಷಕರಾಗಿರುವೆವು

[10] ಅವರು (ತಂದೆ) ಹೇಳಿದರು; ನೀವು ಆತನನ್ನು ಕರೆದೊಯ್ಯುವ ಕುರಿತು ನನಗೆ ತುಂಬಾ ಬೇಸರವಿದೆ ಏಕೆಂದರೆ, ನೀವು ಅವನ ಕುರಿತು ಅಜಾಗೃತರಾಗಿದ್ದಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನನಗೆ ಭಯವಾಗುತ್ತಿದೆ

[11] ಅವರು (ಮಕ್ಕಳು) ಹೇಳಿದರು; ನಾವು ಒಂದು ಬಲಿಷ್ಠ ತಂಡವಾಗಿರುವಾಗ ಅವನನ್ನು ತೋಳವು ತಿಂದು ಬಿಡುವುದಾದರೆ, ನಾವು ಖಂಡಿತ ಎಲ್ಲವನ್ನೂ ಕಳೆದು ಕೊಂಡವರೆನಿಸುವೆವು

[12] ಕೊನೆಗೆ ಅವರು ಆತನೊಂದಿಗೆ ಹೊರಟಾಗ, ಆತನನ್ನು ನೀರಿಲ್ಲದ ಬಾವಿಗೆ ಎಸೆಯಬೇಕೆಂದು ಅವರ ನಡುವೆ ಒಮ್ಮತವಾಗಿತ್ತು. ಆಗ ನಾವು ಅವರಿಗೆ (ಯೂಸುಫ್‌ರಿಗೆ) ಒಂದು ಸಂದೇಶವನ್ನು ಕಳಿಸಿದೆವು; ‘‘(ಒಂದು ದಿನ) ಅವರ ಈ ಕೃತ್ಯದ ಕುರಿತು ನೀವು ಅವರಿಗೆ ವಿವರಿಸುವಿರಿ – ಆಗ ಅವರಿಗೆ ಯಾವ ಅರಿವೂ ಇರದು.’’

[13] ಕತ್ತಲು ಕವಿದಾಗ ಅವರು (ಸಹೋದರರು) ಅಳುತ್ತಾ ತಮ್ಮ ತಂದೆಯ ಬಳಿಗೆ ಬಂದರು

[14] ಅವರು ಹೇಳಿದರು; ಓ ನಮ್ಮ ತಂದೆಯೇ, ನಾವು ಓಟದ ಸ್ಪರ್ಧೆಯಲ್ಲಿದ್ದಾಗ, ಯೂಸುಫ್‌ನನ್ನು ನಮ್ಮ ಸೊತ್ತಿನ ಬಳಿ ಬಿಟ್ಟಿದ್ದೆವು. ಅಷ್ಟರಲ್ಲೇ ತೋಳವು ಆತನನ್ನು ತಿಂದು ಬಿಟ್ಟಿತು. ನಾವು ಎಷ್ಟೇ ಸತ್ಯವಂತರಾಗಿದ್ದರೂ ನೀವು ಮಾತ್ರ ನಮ್ಮನ್ನು ನಂಬುವವರಲ್ಲ

[15] ಮತ್ತು ಅವರು (ಸಹೋದರರು) ರಕ್ತದ ನಕಲಿ ಕಲೆಗಳಿದ್ದ, ಅವರ (ಯೂಸುಫ್‌ರ) ಅಂಗಿಯನ್ನು ತಂದರು. ಆಗ ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗಾಗಿ ಒಂದು ವಿಷಯವನ್ನು (ಕಟ್ಟು ಕಥೆಯನ್ನು) ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ನೀವು ಏನನ್ನು ಹೇಳುತ್ತಿರುವಿರೋ ಆ ವಿಷಯದಲ್ಲಿ (ನನಗೆ) ಅಲ್ಲಾಹನು ನೆರವಾಗಲಿ

[16] ಅತ್ತ, ಪ್ರಯಾಣಿಕರ ಒಂದು ತಂಡವು ಬಂದು, ತಮಗಾಗಿ ನೀರು ತುಂಬುವಾತನನ್ನು (ಯೂಸುಫ್‌ರನ್ನು ಎಸೆಯಲಾಗಿದ್ದ ಬಾವಿಯ ಬಳಿಗೆ) ಕಳಿಸಿದರು. ಅವನು ತನ್ನ ಕೊಡವನ್ನು ಇಳಿಸಿದನು (ಮತ್ತು) ‘‘ಇದೋ ಇಲ್ಲಿದೆ ಶುಭವಾರ್ತೆ. ಇಲ್ಲೊಬ್ಬ ಬಾಲಕನಿದ್ದಾನೆ’’ ಎಂದು ಘೋಷಿಸಿದನು. ತರುವಾಯ ಅವರು ಅವರನ್ನು (ಯೂಸುಫ್‌ರನ್ನು) ವ್ಯಾಪಾರದ ಸರಕೆಂದು ಪರಿಗಣಿಸಿ ಅಡಗಿಸಿಟ್ಟರು. ಅವರು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ಅರಿತಿದ್ದನು

[17] ಅವರು ಕೆಲವೇ ದಿರ್‌ಹಮ್‌ಗಳ ಹೀನ ಬೆಲೆಗೆ ಅವರನ್ನು ಮಾರಿಬಿಟ್ಟರು. ಈ ವಿಷಯದಲ್ಲಿ ಅವರು ನಿರಾಸಕ್ತರಾಗಿದ್ದರು

[18] ಅವರನ್ನು ಖರೀದಿಸಿದ್ದ ಈಜಿಪ್ತ್‌ನ ವ್ಯಕ್ತಿ ತನ್ನ ಪತ್ನಿಯೊಡನೆ ‘‘ಅವನಿಗೆ ಗೌರವದ ಸತ್ಕಾರ ನೀಡು. ನಮಗೆ ಅವನು ಲಾಭವನ್ನು ತರಬಹುದು ಅಥವಾ ನಾವು ಅವನನ್ನೇ ಪುತ್ರನಾಗಿಸಿಕೊಳ್ಳಬಹುದು’’ ಎಂದನು. ಈ ರೀತಿ ನಾವು ಯೂಸುಫ್‌ರಿಗೆ ಘಟನೆಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ಕಲಿಸಲಿಕ್ಕಾಗಿ ಅವರಿಗೆ ಭೂಮಿಯಲ್ಲೊಂದು ನೆಲೆಯನ್ನು ಒದಗಿಸಿದೆವು. ಅಲ್ಲಾಹನು ತನ್ನ ಎಲ್ಲ ವ್ಯವಹಾರಗಳ ಮೇಲೂ ಪೂರ್ಣ ಪ್ರಾಬಲ್ಯ ಹೊಂದಿರುತ್ತಾನೆ. ಆದರೆ ಮಾನವರಲ್ಲಿ ಹೆಚ್ಚಿನವರು ಬಲ್ಲವರಲ್ಲ

[19] ಅವರು (ಯೂಸುಫ್) ತಮ್ಮ (ಪ್ರಬುದ್ಧ) ವಯಸ್ಸನ್ನು ತಲುಪಿದಾಗ, ನಾವು ಅವರಿಗೆ ಜಾಣ್ಮೆಯನ್ನು ಮತ್ತು ಜ್ಞಾನವನ್ನು ನೀಡಿದೆವು. ಇದೇ ರೀತಿ ನಾವು ಸಜ್ಜನರನ್ನು ಪುರಸ್ಕರಿಸುತ್ತೇವೆ

[20] ಅವರು ಯಾರ ಮನೆಯಲ್ಲಿದ್ದರೋ ಆಕೆಯು ಅವರನ್ನು ತನ್ನೆಡೆಗೆ ಸೆಳೆಯ ಬಯಸಿದಳು ಮತ್ತು ಬಾಗಿಲುಗಳನ್ನೆಲ್ಲಾ ಮುಚ್ಚಿ ಅವರೊಡನೆ ‘‘ಬಂದು ಬಿಡು’’ ಎಂದಳು. ಅವರು ಹೇಳಿದರು; ಅಲ್ಲಾಹನು ರಕ್ಷಿಸಲಿ. ಆ ನನ್ನ ಒಡೆಯನು ಖಂಡಿತವಾಗಿಯೂ ನನಗೆ ಗೌರವದ ನಿವಾಸವನ್ನು ಒದಗಿಸಿದ್ದಾನೆ. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ

[21] ಆಕೆಯಂತು ಅವರನ್ನು ಬಯಸಿದ್ದಳು. ಅತ್ತ ಅವರು ತಮ್ಮ ಒಡೆಯನ ಒಂದು ಎಚ್ಚರಿಕೆಯನ್ನು ಕಾಣದಿರುತ್ತಿದ್ದರೆ ಅವರೂ ಆಕೆಯನ್ನು ಬಯಸುತ್ತಿದ್ದರು. ಈ ರೀತಿ ನಾವು ಅವರಿಂದ (ಯೂಸುಫ್‌ರಿಂದ) ಒಂದು ಪಾಪ ಹಾಗೂ ಅಶ್ಲೀಲ ಕೃತ್ಯವನ್ನು ನಿವಾರಿಸಿ ಬಿಟ್ಟೆವು. ನಿಜಕ್ಕೂ ಅವರು ನಮ್ಮ ಆಯ್ದ ದಾಸರಲ್ಲೊಬ್ಬರಾಗಿದ್ದರು

[22] ಅವರಿಬ್ಬರೂ ಬಾಗಿಲಿನೆಡೆಗೆ ಧಾವಿಸಿದರು – ಆಕೆ ಅವರ (ಯೂಸುಫ್‌ರ) ಅಂಗಿಯನ್ನು ಹಿಂದಿನಿಂದ (ಎಳೆದು) ಹರಿದಳು ಮತ್ತು ಅವರಿಬ್ಬರಿಗೂ ಬಾಗಿಲ ಬಳಿ ಆಕೆಯ ಗಂಡನು ಎದುರಾದನು. ಆಕೆ ಹೇಳಿದಳು; ನಿನ್ನ ಪತ್ನಿಗೆ ಕೆಡುಕನ್ನು ಮಾಡಬಯಸಿದವನಿಗೆ, ಸೆರೆವಾಸ ಅಥವಾ ಭಾರೀ ಕಠಿಣ ಶಿಕ್ಷೆಯಲ್ಲದೆ ಬೇರೆ ಯಾವ ಪ್ರತಿಫಲವನ್ನು ತಾನೇ ನೀಡಬಹುದು

[23] ಅವರು (ಯೂಸುಫ್) ಹೇಳಿದರು; ಆಕೆ ನನ್ನನ್ನು ಪುಸಲಾಯಿಸ ಬಯಸಿದ್ದಳು. ಮತ್ತು ಆಕೆಯ ಪರಿವಾರದ ಸಾಕ್ಷಿಯೊಬ್ಬನು ಹೀಗೆ ಸಾಕ್ಷಿ ನುಡಿದನು; ಒಂದು ವೇಳೆ ಆತನ ಅಂಗಿಯು ಮುಂಭಾಗದಲ್ಲಿ ಹರಿದಿದ್ದರೆ ಆಕೆ ಸತ್ಯ ಹೇಳುತ್ತಿದ್ದಾಳೆ ಹಾಗೂ ಅವನು ಸುಳ್ಳುಗಾರನಾಗಿದ್ದಾನೆ

[24] ಇನ್ನು ಆತನ ಅಂಗಿಯು ಹಿಂಭಾಗದಲ್ಲಿ ಹರಿದಿದ್ದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಮತ್ತು ಅವನು ಸತ್ಯವಂತನಾಗಿದ್ದಾನೆ

[25] ಅವರ (ಯೂಸುಫ್‌ರ) ಅಂಗಿಯು ಹಿಂಭಾಗದಲ್ಲಿ ಹರಿದಿರುವುದನ್ನು ಕಂಡಾಗ ಅವನು (ಆಕೆಯ ಪತಿ) ಹೇಳಿದನು; ‘‘ಖಂಡಿತವಾಗಿಯೂ ಇದು ನಿಮ್ಮ (ಮಹಿಳೆಯರ) ಸಂಚಾಗಿದೆ. ನಿಜಕ್ಕೂ ನಿಮ್ಮ (ಮಹಿಳೆಯರ) ಸಂಚು ತುಂಬಾ ಘೋರವಾಗಿರುತ್ತದೆ’’

[26] ‘‘ಯೂಸುಫ್! ನೀವು ಈ ವಿಷಯವನ್ನು ಬಿಟ್ಟು ಬಿಡಿರಿ. ಮತ್ತು ನೀನು (ಮಹಿಳೆ) ನಿನ್ನ ಪಾಪಕ್ಕಾಗಿ ಕ್ಷಮೆಯನ್ನು ಬೇಡು. ನೀನು ಖಂಡಿತ ತಪ್ಪಿತಸ್ಥಳು’’

[27] ನಗರದಲ್ಲಿನ ಕೆಲವು ಮಹಿಳೆಯರು ಹೇಳಿದರು; ಸರದಾರನ ಪತ್ನಿಯು ತನ್ನ ತರುಣ ದಾಸನನ್ನು ಪುಸಲಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಅವನ ಮೇಲಿನ ಪ್ರೀತಿಯಲ್ಲಿ ಅವಳು ಮಾರು ಹೋಗಿದ್ದಾಳೆ. ಆಕೆ ಸ್ಪಷ್ಟವಾಗಿ ದಾರಿಗೆಟ್ಟಿರುವುದನ್ನು ನಾವು ಕಾಣುತ್ತಿದ್ದೇವೆ

[28] ಆಕೆಯು ಆ ಮಹಿಳೆಯರ ಈ ಪಿಸು ಮಾತುಗಳನ್ನು ಕೇಳಿದಾಗ ಅವರ ಬಳಿಗೆ ಆಮಂತ್ರಣ ಕಳುಹಿಸಿದಳು ಮತ್ತು ಅವರಿಗಾಗಿ, ಒರಗಿಕೂರುವ ಒಂದು ಸಭೆಯನ್ನು ಸಿದ್ಧಗೊಳಿಸಿದಳು. ಆಕೆ, ಅವರಲ್ಲಿ ಪ್ರತಿಯೊಬ್ಬರಿಗೂ (ಹಣ್ಣು ಮುರಿಯುವ) ಕತ್ತಿಯನ್ನು ಕೊಟ್ಟಳು ಮತ್ತು ಅವರೊಡನೆ (ಯೂಸುಫ್‌ರೊಡನೆ), ಆ ಮಹಿಳೆಯರ ಮುಂದೆ ಹಾದು ಹೋಗಲು ಹೇಳಿದಳು. ಆ ಮಹಿಳೆಯರು, ಅವರನ್ನು ಕಂಡಾಗ ದಂಗಾಗಿ ಬಿಟ್ಟರು ಹಾಗೂ (ಹಣ್ಣುಗಳ ಬದಲು) ತಮ್ಮ ಕೈಗಳನ್ನೇ ಮುರಿದುಕೊಂಡರು. ಅವರು ಹೇಳಿದರು; ಅಲ್ಲಾಹನು ಕಾಪಾಡಲಿ. ಅವನು (ಯೂಸುಫ್) ಮನುಷ್ಯನಂತು ಅಲ್ಲ. ಅವನು ಒಬ್ಬ ಗೌರವಾನ್ವಿತ ಮಲಕ್ ಆಗಿರಬೇಕು

[29] ಆಕೆ ಹೇಳಿದಳು; ನೀವು ನನ್ನನ್ನು ಮೂದಲಿಸುತ್ತಾ ಇದ್ದುದು ಆತನ ಕುರಿತೇ ಆಗಿತ್ತು. ನಾನು ಆತನನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ಅವನು ತನ್ನನ್ನು ರಕ್ಷಿಸಿಕೊಂಡನು. ಇದೀಗ ಅವನು, ನನ್ನ ಆದೇಶದಂತೆ ನಡೆಯದಿದ್ದರೆ, ಅವನನ್ನು ಸೆರಮನೆಗೆ ಸೇರಿಸಲಾಗುವುದು ಅಥವಾ ಅವನು ತೀರಾ ಅಪಮಾನಿತನಾಗುವನು

[30] ಅವರು (ಯೂಸುಫ್) ಹೇಳಿದರು; ನನ್ನೊಡೆಯಾ, ಆಕೆ ಯಾವುದರೆಡೆಗೆ ನನ್ನನ್ನು ಕರೆಯುತ್ತಿರುವಳೋ ಅದಕ್ಕಿಂತ ಸೆರೆಮನೆಯೇ ನನಗೆ ಹೆಚ್ಚು ಪ್ರಿಯವಾಗಿದೆ. ಆ ಮಹಿಳೆಯರ ಜಾಲಗಳನ್ನು ನೀನು ನನ್ನಿಂದ ನಿವಾರಿಸದಿದ್ದರೆ, ನಾನು ಅವರೆಡೆಗೆ ಒಲಿದು ಬಿಡಬಹುದು ಮತ್ತು ನಾನು ಮೂಢರ ಸಾಲಿಗೆ ಸೇರಬಹುದು

[31] ಅವರ ಒಡೆಯನು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು ಮತ್ತು ಆ ಮಹಿಳೆಯರ ಜಾಲಗಳನ್ನು ಅವರಿಂದ ನಿವಾರಿಸಿಬಿಟ್ಟನು. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[32] ಹೀಗೆ ದಿವ್ಯ ಸೂಚನೆಗಳನ್ನೆಲ್ಲಾ ಕಂಡ ಬಳಿಕ ಅವರಿಗೆ (ಆ ನಾಡಿನವರಿಗೆ) ಅವರನ್ನು (ಯೂಸುಫ್‌ರನ್ನು) ಒಂದು ಅವಧಿಯ ತನಕ ಸೆರೆಮನೆಯಲ್ಲಿಡಬೇಕು ಎಂದು ತೋಚಿತು

[33] ಅವರ ಜೊತೆ ಬೇರಿಬ್ಬರು ಯುವಕರೂ ಸೆರೆಮನೆಯನ್ನು ಪ್ರವೇಶಿಸಿದರು. ಅವರಲ್ಲೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ಸಾರಾಯಿ ಹಿಂಡುತ್ತಿರುವುದನ್ನು ನೋಡಿದೆ. ಇನ್ನೊಬ್ಬನು ಹೇಳಿದನು; ನಾನು (ಕನಸಿನಲ್ಲಿ) ನನ್ನ ತಲೆಯ ಮೇಲೆ ರೊಟ್ಟಿಯನ್ನು ಹೊತ್ತಿರುವುದಾಗಿ ನೋಡಿದೆ. ಅದರಿಂದ ಪಕ್ಷಿಗಳು ತಿನ್ನುತ್ತಿದ್ದವು. ನಮಗೆ ಇದರ ಅರ್ಥವನ್ನು ತಿಳಿಸಿರಿ. ನಿಮ್ಮನ್ನು ನಾವು ಒಬ್ಬ ಸಜ್ಜನನಾಗಿ ಕಾಣುತ್ತಿದ್ದೇವೆ

[34] ಅವರು (ಯೂಸುಫ್) ಹೇಳಿದರು; ನಿಮಗೆ (ನಿತ್ಯ) ನೀಡಲಾಗುವ ಆಹಾರವು ನಿಮ್ಮ ಬಳಿಗೆ ಬರುವ ಮುನ್ನವೇ ನಾನು ನಿಮಗೆ ಅದರ ಅರ್ಥವನ್ನು ತಿಳಿಸುತ್ತೇನೆ. ಅದು ನನ್ನ ಒಡೆಯನು ನನಗೆ ಕಲಿಸಿಕೊಟ್ಟಿರುವ ವಿದ್ಯೆಯಾಗಿದೆ. ಅಲ್ಲಾಹನಲ್ಲಿ ನಂಬಿಕೆ ಇಡದವರ ಹಾಗೂ ಪರಲೋಕವನ್ನು ಧಿಕ್ಕರಿಸುವವರ ಧರ್ಮವನ್ನು ನಾನು ಖಂಡಿತ ತೊರೆದಿದ್ದೇನೆ

[35] ನಾನು ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್ ಮತ್ತು ಯಅಕೂಬ್‌ರ ಧರ್ಮವನ್ನು ಅನುಸರಿಸಿದ್ದೇನೆ. ನಾವು ಯಾವುದನ್ನೂ ಅಲ್ಲಾಹನ ಜೊತೆ ಪಾಲುಗೊಳಿಸುವುದು ಸರಿಯಲ್ಲ. ಇದು (ಈ ಅರಿವು) ನಮ್ಮ ಮೇಲೆ ಹಾಗೂ ಎಲ್ಲ ಮಾನವರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ

[36] ಸೆರೆಮನೆಯ ನನ್ನ ಸಂಗಡಿಗರೇ, ಹಲವು ವಿಭಿನ್ನ ದೇವರುಗಳು ಉತ್ತಮರೋ ಅಥವಾ ಎಲ್ಲರ ಮೇಲೆ ಪ್ರಾಬಲ್ಯವಿರುವ ಏಕಮಾತ್ರನಾದ ಅಲ್ಲಾಹನು ಉತ್ತಮನೋ

[37] ಅವನ ಹೊರತು ನೀವು ಯಾರನ್ನು ಪೂಜಿಸುತ್ತಿರುವಿರೋ ಅವರೆಲ್ಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡ ಕೇವಲ ಕೆಲವು ಹೆಸರುಗಳು ಮಾತ್ರ. ಅವುಗಳ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಅಧಿಕಾರವು ಅಲ್ಲಾಹನಿಗೆ ಮಾತ್ರ ಸೇರಿದೆ. ತನ್ನ ಹೊರತು ಬೇರೆ ಯಾರನ್ನೂ ಪೂಜಿಸಬಾರದು ಎಂದು ಅವನು ಆದೇಶಿಸಿದ್ದಾನೆ. ಇದುವೇ ಸ್ಥಿರವಾದ ಧರ್ಮ – ಆದರೆ ಮಾನವರಲ್ಲಿ ಹೆಚ್ಚಿನವರು ಇದನ್ನು ಅರಿತಿಲ್ಲ

[38] ಸೆರೆಮನೆಯ ನನ್ನ ಸಂಗಡಿಗರೇ, ನಿಮ್ಮಲ್ಲಿ ಒಬ್ಬನು ತನ್ನ ಒಡೆಯನಿಗೆ ಮದ್ಯ ಕುಡಿಸುವನು. ಇನ್ನೊಬ್ಬನನ್ನು ಶಿಲುಬೆಗೆ ಏರಿಸಲಾಗುವುದು ಮತ್ತು ಹಕ್ಕಿಗಳು ಅವನ ತಲೆಯಿಂದ ತಿನ್ನುವವು. ಈ ರೀತಿ, ನೀವಿಬ್ಬರೂ ನನ್ನೊಡನೆ ವಿಚಾರಿಸಿದ್ದ ವಿಷಯದ ತೀರ್ಮಾನವಾಯಿತು

[39] ಅವರು (ಯೂಸುಫರು) ಅವರಿಬ್ಬರ ಪೈಕಿ ಯಾರು ಬಿಡುಗಡೆ ಪಡೆಯುವನೆಂದು ನಂಬಿದ್ದರೋ ಅವನೊಡನೆ, ನಿನ್ನ ಒಡೆಯನೊಡನೆ ನನ್ನ ವಿಷಯವನ್ನು ಪ್ರಸ್ತಾಪಿಸು ಎಂದರು. ಆದರೆ ಅವನು ತನ್ನ ಒಡೆಯನ ಬಳಿ ಇದನ್ನು ಪ್ರಸ್ತಾಪಿಸದಂತೆ ಶೈತಾನನು ಅವನಿಗೆ ಮರೆವು ಮೂಡಿಸಿದನು. ಹೀಗೆ ಅವರು (ಯೂಸುಫ್) ಕೆಲವು ವರ್ಷ ಸೆರೆಮನೆಯಲ್ಲಿದ್ದರು

[40] (ಒಮ್ಮೆ) ರಾಜನು ಹೇಳಿದನು; ನಾನು (ಕನಸಿನಲ್ಲಿ) ತೆಳುವಾದ ಏಳು ದನಗಳು ದಷ್ಟಪುಷ್ಟವಾದ ಏಳು ದನಗಳನ್ನು ತಿನ್ನುವುದನ್ನು ನೋಡಿದೆ ಮತ್ತು ಹಸಿರಾಗಿದ್ದ ಏಳು ತೆನೆಗಳನ್ನೂ ಒಣಗಿದ್ದ ಇತರ ತೆನೆಗಳನ್ನೂ ನೋಡಿದೆ. ನನ್ನ ಆಸ್ಥಾನ ಪ್ರಮುಖರೇ, ನೀವು ಸ್ವಪ್ನಗಳ ಅರ್ಥ ಬಲ್ಲವರಾಗಿದ್ದರೆ, ಇದರ ಅರ್ಥವನ್ನು ನನಗೆ ತಿಳಿಸಿರಿ

[41] ಅವರು ಹೇಳಿದರು; ಇವು ಗೊಂದಲದ ಕನಸುಗಳು. ನಾವು ಗೊಂದಲದ ಕನಸುಗಳ ಅರ್ಥವನ್ನು ವಿವರಿಸಬಲ್ಲ ತಜ್ಞರೇನಲ್ಲ

[42] ಆಗ (ಈ ಹಿಂದೆ ಸೆರೆಮನೆಯಲ್ಲಿದ್ದ) ಆ ಇಬ್ಬರ ಪೈಕಿ ಬಿಡುಗಡೆ ಪಡೆದಿದ್ದವನಿಗೆ ಬಹುಕಾಲದ ಬಳಿಕ ನೆನಪಾಯಿತು. ಅವನು ಹೇಳಿದನು; ಇದರ ಅರ್ಥವನ್ನು ನಾನು ನಿಮಗೆ ತಿಳಿಸುವೆನು. ನನ್ನನ್ನು ಕಳುಹಿಸಿರಿ

[43] (ಅವನು ಯೂಸುಫ್‌ರ ಬಳಿಗೆ ಬಂದು ಹೇಳಿದನು;) ನನ್ನ ಸತ್ಯವಂತ ಮಿತ್ರರಾದ ಯೂಸುಫರೇ, ತೆಳುವಾದ ಏಳು ದನಗಳು ಏಳು ದಷ್ಟಪುಷ್ಟ ದನಗಳನ್ನು ತಿನ್ನುವ ಹಾಗೂ ಹಸಿರಾದ ಏಳು ತೆನೆಗಳು ಮತ್ತು ಒಣಗಿದ್ದ ಇತರ ತೆನೆಗಳ ಅರ್ಥವನ್ನು ನಮಗೆ ತಿಳಿಸಿರಿ – ನಾನು ಆ ಸ್ಥಾನಿಗರ ಬಳಿಗೆ ಮರಳಿ ಅವರು ತಿಳಿಯುವಂತಾಗಬಹುದು

[44] ಅವರು (ಯೂಸುಫ್) ಹೇಳಿದರು; ನೀವು ಸತತ ಏಳು ವರ್ಷ ವ್ಯವಸಾಯ ಮಾಡಿರಿ. ಆ ಬಳಿಕ ನೀವು ಬೆಳೆ ಕೊಯ್ಯುವಾಗ, ನಿಮಗೆ ತಿನ್ನಲು ಬೇಕಾಗುವ ಒಂದಿಷ್ಟರ ಹೊರತು, ಉಳಿದ ಫಲವನ್ನು ತೆನೆಯಲ್ಲೇ ಬಿಟ್ಟು ಬಿಡಿರಿ

[45] ಮುಂದೆ, ಏಳು ಕಠಿಣ ವರ್ಷಗಳು ಬರಲಿವೆ. ನೀವು ಸುರಕ್ಷಿತವಾಗಿಟ್ಟ ಒಂದಿಷ್ಟರ ಹೊರತು, ನೀವು ಆ ಅವಧಿಗಾಗಿ ಉಳಿಸಿಟ್ಟಿದ್ದನ್ನೆಲ್ಲಾ ಅವು ತಿಂದು ಬಿಡುವವು

[46] ಆ ಬಳಿಕ ಮತ್ತೆ ಒಂದು ವರ್ಷ ಬರುವುದು. ಅದರಲ್ಲಿ ಜನರ ಮೇಲೆ ಧಾರಾಳ ಮಳೆ ಸುರಿಸಲಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು

[47] (ಈ ವ್ಯಾಖ್ಯಾನ ಕೇಳಿದ) ರಾಜನು, ಅವನನ್ನು ನನ್ನ ಬಳಿಗೆ ತನ್ನಿರಿ ಎಂದನು. (ರಾಜನ) ದೂತನು ಅವರ (ಯೂಸುಫ್‌ರ) ಬಳಿಗೆ ಬಂದಾಗ ಅವರು ಹೇಳಿದರು; ನಿನ್ನ ಒಡೆಯನ ಬಳಿಗೆ ಮರಳಿಹೋಗು ಮತ್ತು ತಮ್ಮ ಕೈಗಳನ್ನು ಕತ್ತರಿಸಿಕೊಂಡ ಮಹಿಳೆಯರ ಸಮಾಚಾರವೇನು? ಎಂದು ಅವನೊಡನೆ ಕೇಳು. ಖಂಡಿತವಾಗಿಯೂ ನನ್ನ ಒಡೆಯನು ಅವರ ಸಂಚುಗಳ ಕುರಿತು ಬಲ್ಲನು

[48] ಅವನು (ದೊರೆಯು, ಮಹಿಳೆಯರೊಡನೆ), ನೀವು ಯೂಸುಫ್‌ರನ್ನು ಪುಸಲಾಯಿಸಲು ಪ್ರಯತ್ನಿಸಿದಾಗ ನಿಮ್ಮ ಸ್ಥಿತಿ ಹೇಗಿತ್ತು? ಎಂದು ಕೇಳಿದನು. ಆ ಮಹಿಳೆಯರು, ‘‘ಅಲ್ಲಾಹನು ಕಾಪಾಡಲಿ. ನಾವಂತು ಅವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ’’ ಎಂದರು. ಆಗ ಸರದಾರನ ಪತ್ನಿ ಹೇಳಿದಳು; ‘‘ಈಗ ಸತ್ಯವು ಬಹಿರಂಗವಾಗಿಬಿಟ್ಟಿದೆ. ನಿಜವಾಗಿ ನಾನೇ ಅವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಅವನು ಖಂಡಿತ ಸತ್ಯವಂತನೇ ಆಗಿದ್ದಾನೆ’’

[49] (ಯೂಸುಫ್ ಹೇಳಿದರು;) ‘‘ನಾನು ಆತನ (ಸರದಾರನ) ಅನುಪಸ್ಥಿತಿಯಲ್ಲೂ ಆತನನ್ನು ವಂಚಿಸಿಲ್ಲ ಮತ್ತು ಖಂಡಿತವಾಗಿಯೂ ಅಲ್ಲಾಹನು ವಂಚಕರ ಸಂಚುಗಳನ್ನು ಮುನ್ನಡೆಯಲು ಬಿಡುವುದಿಲ್ಲ ಎಂಬುದು ಆತನಿಗೆ ತಿಳಿಯಲು (ಇದೆಲ್ಲಾ ಸಂಭವಿಸಿದೆ).’’

[50] (ಯೂಸುಫ್ ಹೇಳಿದರು;) ನನ್ನ ಚಿತ್ತವು ಪಾವನವೆಂದು ನಾನೇನೂ ಹೇಳಿಕೊಳ್ಳುವುದಿಲ್ಲ. ಚಿತ್ತವು ಖಂಡಿತವಾಗಿಯೂ ಕೆಡುಕಿನ ಪ್ರೇರಣೆ ನೀಡುತ್ತದೆ – ನನ್ನ ಒಡೆಯನ ಕರುಣೆಗೆ ಪಾತ್ರರಾದವರ ಹೊರತು. ನನ್ನ ಒಡೆಯನು ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[51] ರಾಜನು ಹೇಳಿದನು; ಅವನನ್ನು ನನ್ನ ಬಳಿಗೆ ತನ್ನಿರಿ. ನಾನು ಆತನನ್ನು ನನಗಾಗಿಯೇ ಮೀಸಲಿಡುತ್ತೇನೆ. ಆತನು ಅವರೊಡನೆ ಮಾತನಾಡಿದ ಬಳಿಕ ಹೇಳಿದನು; ಖಂಡಿತವಾಗಿಯೂ ಇಂದು ನೀನು ನಮ್ಮ ಬಳಿ ಅತ್ಯಂತ ಗೌರವಾನ್ವಿತ ಹಾಗೂ ವಿಶ್ವಾಸಾರ್ಹ ವ್ಯಕ್ತಿಯಾಗಿರುವೆ

[52] ಅವರು (ಯೂಸುಫ್) ಹೇಳಿದರು; ನನ್ನನ್ನು ನಾಡಿನ ಬೊಕ್ಕಸಗಳ ಅಧಿಕಾರಿಯಾಗಿ ಮಾಡು. ನಾನು ಖಂಡಿತ ರಕ್ಷಕನೂ ಬಲ್ಲವನೂ ಆಗಿರುವೆನು

[53] ಈ ರೀತಿ ನಾವು ಯೂಸುಫ್‌ರಿಗೆ ಆ ನಾಡಿನಲ್ಲಿ ಅಧಿಕಾರವನ್ನು ನೀಡಿದೆವು. ಅದರಲ್ಲಿ ಅವರು ತಾವಿಚ್ಛಿಸಿದಲ್ಲಿ ಇರುತ್ತಿದ್ದರು. ನಾವು ನಮ್ಮ ಅನುಗ್ರಹವನ್ನು ನಾವಿಚ್ಛಿಸಿದವರಿಗೆ ತಲುಪಿಸುತ್ತೇವೆ ಮತ್ತು ನಾವು ಸತ್ಕರ್ಮವೆಸಗಿದವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ

[54] ವಿಸ್ವಾಸಿಗಳು ಮತ್ತು ಸತ್ಯನಿಷ್ಠರ ಪಾಲಿಗೆ ಪರಲೋಕದ ಪ್ರತಿಫಲವೇ ಉತ್ತಮವಾಗಿರುತ್ತದೆ

[55] ಯೂಸುಫ್‌ರ ಸಹೋದರರು ಬಂದರು ಮತ್ತು ಅವರು ಇರುವಲ್ಲಿಗೆ ಪ್ರವೇಶಿಸಿದರು. ಅವರು (ಯೂಸುಫರು), ಅವರನ್ನು ಗುರುತಿಸಿದರು. ಆದರೆ ಅವರು ಮಾತ್ರ ಅವರನ್ನು (ಯೂಸುಫರನ್ನು) ಗುರುತಿಸಲಿಲ್ಲ

[56] ಕೊನೆಗೆ ಅವರು (ಯೂಸುಫರು) ಅವರಿಗೆ (ಸಹೋದರರಿಗೆ) ಅವರ ಸರಕನ್ನು ಸಿದ್ಧಗೊಳಿಸಿಕೊಟ್ಟಾಗ ಹೇಳಿದರು; ನಿಮ್ಮ ತಂದೆಯಿಂದ ನಿಮಗಿರುವ (ಇನ್ನೊಬ್ಬ) ಸಹೋದರನನ್ನು ನನ್ನ ಬಳಿಗೆ ತನ್ನಿರಿ. ನಾನು ತೂಗುಪಾತ್ರವನ್ನು ತುಂಬಿಕೊಡುತ್ತೇನೆ ಮತ್ತು ಅತ್ಯುತ್ತಮ ಸತ್ಕಾರ ನೀಡುವವನಾಗಿದ್ದೇನೆಂಬುದನ್ನು ನೀವು ನೋಡುತ್ತಿಲ್ಲವೇ

[57] ನೀವು ಆತನನ್ನು ನನ್ನ ಬಳಿಗೆ ತರದಿದ್ದರೆ ನಿಮಗೆ ನನ್ನ ಬಳಿ ಯಾವ ಪಾಲೂ ಸಿಗದು ಮತ್ತು ನೀವು ನನ್ನ ಹತ್ತಿರವೂ ಬರಬಾರದು

[58] ಅವರು ಹೇಳಿದರು; ನಾವು ಅವನ ಕುರಿತು ಅವನ ತಂದೆಯನ್ನು ಒಲಿಸಲು ಪ್ರಯತ್ನಿಸುವೆವು ಮತ್ತು (ಅಷ್ಟನ್ನು) ನಾವು ಖಂಡಿತ ಮಾಡುವೆವು

[59] ಅವರು (ಯೂಸುಫ್) ತಮ್ಮ ಯುವಕರೊಡನೆ ಹೇಳಿದರು; ಅವರ ಮೊತ್ತವನ್ನು ನೀವು (ಗುಟ್ಟಾಗಿ) ಅವರ ಸರಕಿನಲ್ಲೇ ಇಟ್ಟು ಬಿಡಿರಿ. ಅವರು ತಮ್ಮವರ ಬಳಿಗೆ ಮರಳಿದಾಗ ಅದನ್ನು ಗುರುತಿಸಲಿ – ಹಾಗೆ ಅವರು ಮರಳಿ ಬರಲೂಬಹುದು

[60] ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ನಮ್ಮ ತಂದೆಯೇ, ನಮ್ಮಿಂದ ಪಾಲನ್ನು ತಡೆದಿಡಲಾಗಿದೆ. ನೀವು ನಮ್ಮ ಸಹೋದರನನ್ನು ನಮ್ಮ ಜೊತೆ ಕಳಿಸಿರಿ. ನಾವು ಪಾಲನ್ನು ಪೂಣರ್ವಾಗಿ ತರುವೆವು ಮತ್ತು ಖಂಡಿತ ನಾವು ಅವರ ರಕ್ಷಕರಾಗಿರುವೆವು

[61] ಅವರು (ತಂದೆ) ಹೇಳಿದರು; ಈ ಹಿಂದೆ ಅವನ ಸಹೋದರನ (ಯೂಸುಫ್‌ರ) ವಿಷಯದಲ್ಲಿ ನಾನು ನಿಮ್ಮನ್ನು ನಂಬಿದ್ದಂತೆ ಅವನ ವಿಷಯದಲ್ಲೂ ನಂಬಬೇಕೇ? ಅಲ್ಲಾಹನೇ ಅತ್ಯುತ್ತಮ ರಕ್ಷಕನಾಗಿದ್ದಾನೆ ಮತ್ತು ಅವನೇ ಅತ್ಯಧಿಕ ಕರುಣೆ ತೋರುವವನಾಗಿದ್ದಾನೆ

[62] ಅವರು ತಮ್ಮ ಸರಕನ್ನು ತೆರೆದಾಗ ಅದರಲ್ಲಿ ತಮ್ಮ ಮೊತ್ತವನ್ನು ತಮಗೆ ಹಿಂದಿರುಗಿಸಲಾಗಿರುವುದನ್ನು ಕಂಡರು. ಅವರು ಹೇಳಿದರು; ನಮ್ಮ ತಂದೆಯೇ, ನಾವು ಇನ್ನೇನನ್ನು ತಾನೇ ಅಪೇಕ್ಷಿಸಬಲ್ಲೆವು? ನಮಗೆ ಮರಳಿಸಲಾಗಿರುವ ನಮ್ಮ ಮೊತ್ತವು ಇದೋ, ಇಲ್ಲಿದೆ. ನಾವು ನಮ್ಮ ಮನೆಯವರಿಗಾಗಿ ಧಾನ್ಯವನ್ನು ತರುವೆವು. ನಮ್ಮ ಸಹೋದರರನ್ನು ರಕ್ಷಿಸುವೆವು ಮತ್ತು ಒಂದು ಒಂಟೆಯ ಹೊರೆಯಷ್ಟು ಹೆಚ್ಚಿನದನ್ನು ತರುವೆವು. ಅದು ಸುಲಭವಾಗಿ ಸಿಗುವ ಹೊರೆಯಾಗಿರುವುದು

[63] ಅವರು (ತಂದೆ), ‘‘ನಿಮಗೆ ಸಂಪೂರ್ಣ ಮುತ್ತಿಗೆ ಬೀಳದಿದ್ದರೆ, ನೀವು ಅವನನ್ನು ನನ್ನ ಬಳಿಗೆ (ಮರಳಿ) ಕರೆದುತರುವಿರೆಂದು ನೀವು ಅಲ್ಲಾಹನ ಹೆಸರಲ್ಲಿ ನನಗೆ ಪಕ್ವವಾದ ವಚನ ಕೊಡುವ ತನಕ ನಾನು ಆತನನ್ನು ನಿಮ್ಮ ಜೊತೆ ಕಳಿಸಲಾರೆ’’ ಎಂದರು. ಕೊನೆಗೆ ಅವರು, ಅವರಿಗೆ ಪಕ್ವ ವಚನವನ್ನು ಕೊಟ್ಟಾಗ ಅವರು (ತಂದೆ) ‘‘ ನಾವು ಆಡಿರುವ ಮಾತುಗಳಿಗೆಲ್ಲಾ ಅಲ್ಲಾಹನೇ ಮೇಲ್ವಿಚಾರಕನಾಗಿದ್ದಾನೆ’’ ಎಂದರು

[64] ಮತ್ತು ಅವರು ಹೇಳಿದರು; ‘‘ನನ್ನ ಪುತ್ರರೇ, ನೀವೆಲ್ಲಾ ಒಂದೇ ಬಾಗಿಲಿಂದ ಪ್ರವೇಶೀಸಬೇಡಿ. ಪ್ರತ್ಯೇಕ ಬಾಗಿಲುಗಳಿಂದ ಪ್ರವೇಶಿಸಿರಿ. ಯಾವುದೇ ವಿಷಯದಲ್ಲಿ ನಿಮ್ಮನ್ನು ಅಲ್ಲಾಹನಿಂದ ರಕ್ಷಿಸಲು ಮಾತ್ರ ನನಗೆ ಸಾಧ್ಯವಿಲ್ಲ. ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ಭರವಸೆ ಇಡುವವರೆಲ್ಲರೂ ಅವನಲ್ಲೇ ಭರವಸೆ ಇಡಬೇಕು’’

[65] ಅವರು ತಮ್ಮ ತಂದೆಯು ಆದೇಶಿಸಿದ ರೀತಿಯಲ್ಲೇ ಪ್ರವೇಶಿಸಿದರು. ಆದರೆ ಯಾವುದೇ ವಿಷಯದಲ್ಲಿ ಅವರನ್ನು ಅಲ್ಲಾಹನಿಂದ ರಕ್ಷಿಸಲು ಅವರಿಗೆ (ತಂದೆಗೆ) ಸಾಧ್ಯವಿರಲಿಲ್ಲ. ಯಅ್ಕೂಬ್‌ರು ತಮ್ಮ ಮನದಲ್ಲಿ ಹುಟ್ಟಿದ್ದ ಒಂದು ಅಪೇಕ್ಷೆಯನ್ನಷ್ಟೇ ಪೂರ್ತಿಗೊಳಿಸಿದ್ದರು. ಖಂಡಿವಾಗಿಯೂ ಅವರು ನಾವು ನೀಡಿದ ಜ್ಞಾನದಿಂದ ಜ್ಞಾನಿಯಾಗಿದ್ದರು. ಆದರೆ ಮಾನವರಲ್ಲಿ ಹೆಚ್ಚಿನವರು ಅರಿತಿರುವುದಿಲ್ಲ

[66] ಅವರು ಯೂಸುಫ್‌ರ ಬಳಿಗೆ ಪ್ರವೇಶಿಸಿದಾಗ, ಅವರು ತನ್ನ ಸಹೋದರನನ್ನು ತನ್ನೆಡೆಗೆ ಕರೆದುಕೊಂಡು ‘‘ಖಂಡಿತವಾಗಿಯೂ ನಾನೇ ನಿನ್ನ ಸಹೋದರ, ಅವರು ಮಾಡುತ್ತಿದ್ದ ಕೃತ್ಯಗಳ ಬಗ್ಗೆ ನೀನು ದುಃಖಿತನಾಗಬೇಡ’’ ಎಂದರು

[67] ತರುವಾಯ ಅವರು, ಅವರ (ಸಹೋದರರ) ಸರಕನ್ನು ಸಿದ್ಧಗೊಳಿಸಿದಾಗ ತಮ್ಮ ಸಹೋದರನ ಸರಕಿನಲ್ಲಿ ಒಂದು ಪಾನಪಾತ್ರೆಯನ್ನು ಇಟ್ಟುಬಿಟ್ಟರು. ಆ ಬಳಿಕ ಘೋಷಿಸುವ ಒಬ್ಬಾತನು, ಯಾತ್ರಾ ತಂಡದವರೇ, ನೀವು ಖಂಡಿತ ಕಳ್ಳರು ಎಂದು ಘೋಷಿಸಿದನು

[68] ಅವರು (ಸಹೋದರರು), ಅವರೆಡೆಗೆ ತಿರುಗಿ, ನೀವು ಏನನ್ನು ಕಳೆದುಕೊಂಡಿರುವಿರಿ? ಎಂದು ಕೇಳಿದರು

[69] ಅವರು (ಯೂಸುಫ್), ‘‘ನಮ್ಮ ದೊರೆಯ ಪಾನಪಾತ್ರೆಯು ನಮ್ಮಿಂದ ಕಳೆದು ಹೋಗಿದೆ. ಅದನ್ನು ತಂದುಕೊಡುವಾತನಿಗೆ ಒಂದು ಒಂಟೆಹೊರುವಷ್ಟು ಸಿಗಲಿದೆ. ಅದಕ್ಕೆ ನಾನು ಹೊಣೆಗಾರನಾಗಿದ್ದೇನೆ’’ ಎಂದರು

[70] ಅವರು (ಸಹೋದರರು), ‘‘ಅಲ್ಲಾಹನಾಣೆ, ನಾವು ನಾಡಿನಲ್ಲಿ ಗೊಂದಲ ನಿರ್ಮಿಸುವುದಕ್ಕೆ ಬಂದವರಲ್ಲ ಮತ್ತು ನಾವು ಕಳ್ಳರಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ’’ ಎಂದರು

[71] ಅವರು (ಅಧಿಕಾರಿಗಳು) ಕೇಳಿದರು; ನೀವು ಸುಳ್ಳು ಹೇಳುತ್ತಿದ್ದರೆ, ಅದಕ್ಕೇನು ಶಿಕ್ಷೆ

[72] ಅವರು (ಸಹೋದರರು) ಹೇಳಿದರು; ಅದಕ್ಕೆ ಶಿಕ್ಷೆ ಇಷ್ಟೇ. ಯಾರ ಸರಕಿನಲ್ಲಿ ಅದು ಸಿಕ್ಕಿತೋ ಅವನೇ ಅದಕ್ಕೆ ಪರಿಹಾರವಾಗಲಿ. ನಾವು ಅಕ್ರಮಿಗಳನ್ನು ಇದೇ ರೀತಿ ಶಿಕ್ಷಿಸುತ್ತೇವೆ

[73] ಅವರು (ಯೂಸುಫರು) ತಮ್ಮ ಸಹೋದರನ ಸರಕಿಗೆ ಮುನ್ನ ಅವರ ಸರಕುಗಳ ಶೋಧ ಆರಂಭಿಸಿದರು. ಕೊನೆಗೆ ಅವರು ತಮ್ಮ ಸಹೋದರನ ಸರಕಿನಿಂದ ಅದನ್ನು (ಪಾನಪಾತ್ರೆಯನ್ನು) ಹೊರತೆಗೆದರು. ಈ ರೀತಿ ನಾವು ಯೂಸುಫ್‌ರಿಗೆ ಉಪಾಯ ಕಲಿಸಿದ್ದೆವು. ರಾಜನ ಧರ್ಮದ ಪ್ರಕಾರವಂತು ಅವರು ಆತನನ್ನು (ಸಹೋದರನನ್ನು) ಹಿಡಿಯಲು ಸಾಧ್ಯವಿರಲಿಲ್ಲ – ಅಲ್ಲಾಹನೇ ಇಚ್ಛಿಸಿದ್ದರ ಹೊರತು. ನಾವು, ನಾವಿಚ್ಛಿಸಿದವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಎಲ್ಲ ಜ್ಞಾನಿಗಳ ಮೇಲೊಬ್ಬ ಜ್ಞಾನಿ ಇರುತ್ತಾನೆ

[74] ಅವರು ಹೇಳಿದರು; ಈಗ ಇವನು ಕದ್ದಿದ್ದರೆ, ಈ ಹಿಂದೆ ಇವನ ಸಹೋದರನೂ ಕದ್ದಿದ್ದನು. ಯೂಸುಫರು ತಮ್ಮ ಮನದಲ್ಲಿದ್ದ ಮಾತನ್ನು ಗುಟ್ಟಾಗಿಟ್ಟರು ಮತ್ತು ಅದನ್ನು ಅವರ ಮುಂದೆ ಪ್ರಕಟಿಸಲಿಲ್ಲ. ಅವರು (ಯೂಸುಫರು) ‘‘ನಿಮ್ಮ ಸ್ಥಿತಿಯು ತೀರಾ ಹೀನವಾಗಿದೆ. ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿಬಲ್ಲನು’’ ಎಂದಷ್ಟೇ ಹೇಳಿದರು

[75] ಅವರು (ಮಲ ಸಹೋದರರು), ‘‘ಸರದಾರನೇ, ಅವನಿಗೆ (ಸೆರೆ ಸಿಕ್ಕಿದ ಸಹೋದರನಿಗೆ) ತುಂಬಾ ವಯಸ್ಸಾದ ತಂದೆ ಇದ್ದಾರೆ. ನೀನು ಈತನ ಬದಲಿಗೆ ನಮ್ಮಲ್ಲಿ ಒಬ್ಬನನ್ನು ಇಟ್ಟುಕೋ. ನಿನ್ನನ್ನು ನಾವು ತುಂಬಾ ಉದಾರಿಯಾಗಿ ಕಾಣುತ್ತಿದ್ದೇವೆ’’ ಎಂದರು

[76] ಅವರು (ಯೂಸುಫರು) ಹೇಳಿದರು; ‘‘ಅಲ್ಲಾಹನು ಕಾಪಾಡಲಿ. ಯಾರ ಬಳಿ ನಮಗೆ ನಮ್ಮ ಸೊತ್ತು ಸಿಕ್ಕಿದೆಯೋ ಅವನ ಹೊರತು ಬೇರೊಬ್ಬನನ್ನು ನಾವು ಹಿಡಿದಿಟ್ಟರೆ ನಾವು ಅಕ್ರಮಿಗಳಾಗುವೆವು’’

[77] ಕೊನೆಗೆ ಅವರು ಆತನಿಂದ ನಿರಾಶರಾದಾಗ ಸಮಾಲೋಚಿಸಲೆಂದು ಸೇರಿ ಕುಳಿತರು. ಅವರಲ್ಲಿನ ಹಿರಿಯನು ಹೇಳಿದನು; ನಿಮ್ಮ ತಂದೆ ಅಲ್ಲಾಹನ ಹೆಸರಲ್ಲಿ ನಿಮ್ಮಿಂದ ಪಕ್ವವಾದ ವಚನವನ್ನು ಪಡೆದಿದ್ದರೆಂದು ಹಾಗೂ ಈ ಹಿಂದೆ ಯೂಸುಫನ ವಿಷಯದಲ್ಲಿ ನೀವು ಅದೆಂತಹ ತಪ್ಪು ಮಾಡಿದ್ದಿರೆಂದು ನಿಮಗೆ ತಿಳಿಯದೆ? ನಾನಂತು ನನ್ನ ತಂದೆ ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನೇ ನನಗೆ ಒಂದು ಆದೇಶವನ್ನು ನೀಡುವ ತನಕ ಈ ನೆಲವನ್ನು ಬಿಟ್ಟು ಮಿಸುಕಾಡಲಾರೆ. ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ

[78] ನೀವು ನಿಮ್ಮ ತಂದೆಯ ಬಳಿಗೆ ಮರಳಿರಿ ಮತ್ತು ಹೀಗೆಂದು ಹೇಳಿರಿ; ನಮ್ಮ ತಂದೆಯೇ, ನಿಮ್ಮ ಪುತ್ರನು ನಿಜಕ್ಕೂ ಕಳ್ಳತನ ಮಾಡಿದ್ದನು. ನಾವಂತು ನಮಗೆ ತಿಳಿದಷ್ಟು ಮಾತ್ರ ಸಾಕ್ಷ್ಯ ಹೇಳಿದ್ದೆವು. ಇನ್ನು, ಗುಪ್ತ ವಿಚಾರಗಳ ಮೇಲ್ವಿಚಾರಕರು ನಾವಾಗಿರಲಿಲ್ಲ

[79] ನಾವು ಇದ್ದ ಊರಲ್ಲಿ ಹಾಗೂ ನಾವು ಯಾವ ಯಾತ್ರಾ ತಂಡದ ಜೊತೆ ಬಂದಿದ್ದೆವೋ, ಅವರಲ್ಲಿ ಕೇಳಿ ನೋಡಿರಿ. ನಾವು ಖಂಡಿತ ಸತ್ಯವಂತರಾಗಿದ್ದೇವೆ

[80] ಅವರು (ತಂದೆ) ಹೇಳಿದರು; ನಿಜವಾಗಿ ನಿಮ್ಮ ಚಿತ್ತಗಳು ನಿಮಗೆ ಏನನ್ನೋ ರಚಿಸಿಕೊಟ್ಟಿವೆ. (ಆದ್ದರಿಂದ) ಸಹನೆಯೇ ಉತ್ತಮ. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತರಬಹುದು. ಅವನು ಖಂಡಿತ ಎಲ್ಲವನ್ನೂ ಬಲ್ಲವನು ಹಾಗೂ ಜಾಣನಾಗಿದ್ದಾನೆ

[81] ಆ ಬಳಿಕ ಅವರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಅಯ್ಯೋ ಯೂಸುಫ್ ಎಂದರು. ದುಃಖದಿಂದ ಅವರ ಕಣ್ಣುಗಳು ಬಿಳಿಯಾಗಿಬಿಟ್ಟವು ಮತ್ತು ಅವರು ಎಲ್ಲವನ್ನೂ ಸಹಿಸಿಕೊಂಡಿದ್ದರು

[82] ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ, ನೀವಂತು ಸಂಪೂರ್ಣ ರೋಗಪೀಡಿತರಾಗುವ ತನಕ ಅಥವಾ ಸಾಯುವ ತನಕವೂ ಸದಾ ಯೂಸುಫನನ್ನೇ ಸ್ಮರಿಸುತ್ತಾ ಇರುವಿರಿ

[83] ಅವರು (ತಂದೆ) ಹೇಳಿದರು; ನಾನು ನನ್ನ ಸಂಕಟ ಹಾಗೂ ನನ್ನ ದುಃಖವನ್ನಷ್ಟೇ ಅಲ್ಲಾಹನಲ್ಲಿ ಹೇಳಿಕೊಳ್ಳುತ್ತಿದ್ದೇನೆ. ನಿಜವಾಗಿ ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿವೆ

[84] ನನ್ನ ಪುತ್ರರೇ, ನೀವು ಹೋಗಿರಿ ಹಾಗೂ ಯೂಸುಫ್ ಮತ್ತು ಅವನ ಸಹೋದರನನ್ನು ಪತ್ತೆ ಹಚ್ಚಿರಿ. ಅಲ್ಲಾಹನ ಅನುಗ್ರಹದ ಕುರಿತು ನೀವೆಂದೂ ನಿರಾಶರಾಗಬೇಡಿ. ಧಿಕ್ಕಾರಿಗಳ ಹೊರತು ಬೇರಾರೂ ಅಲ್ಲಾಹನ ಅನುಗ್ರಹದ ಕುರಿತು ಖಂಡಿತ ನಿರಾಶರಾಗುವುದಿಲ್ಲ

[85] ಕೊನೆಗೆ ಆತನ (ಸರದಾರನ) ಬಳಿಗೆ ಹೋಗಿ ಅವರು (ಸಹೋದರರು) ಹೇಳಿದರು; ಸರದಾರರೇ, ನಮಗೆ ಹಾಗೂ ನಮ್ಮ ಪರಿವಾರಕ್ಕೆ ಸಂಕಟ ತಟ್ಟಿದೆ. ನಾವು ನಿಕೃಷ್ಟ ಬಂಡವಾಳದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ನೀವು ನಮಗೆ ಪೂರ್ಣ ಪಾಲನ್ನು ಕೊಡಿರಿ ಮತ್ತು ನಮಗೆ ದಾನವನ್ನು ನೀಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನಿಗಳಿಗೆ ಪ್ರತಿಫಲವನ್ನು ನೀಡುವನು

[86] ಅವರು (ಯೂಸುಫ್) ಹೇಳಿದರು; ನೀವು ಮೂಢರಾಗಿದ್ದಾಗ, ಯೂಸುಫ್ ಮತ್ತು ಆತನ ಸಹೋದರನಿಗೆ ನೀವು ಏನು ಮಾಡಿದ್ದಿರಿ ಎಂಬುದು ನಿಮಗೆ ಗೊತ್ತೇ

[87] ಅವರು ಹೇಳಿದರು; ನಿಜಕ್ಕೂ ನೀನೇ ಯೂಸುಫನೇ? ಅವರು (ಯೂಸುಫ್) ಹೇಳಿದರು; ನಾನೇ ಯೂಸುಫ್‌ ಮತ್ತು ಇವನು ನನ್ನ ಸಹೋದರನು. ಅಲ್ಲಾಹನು ನಮ್ಮ ಮೇಲೆ ಔದಾರ್ಯ ತೋರಿದ್ದಾನೆ. ಧರ್ಮನಿಷ್ಠರು ಮತ್ತು ಸಹನಶೀಲರಿಗೆ (ತಿಳಿದಿದೆ); ಅಲ್ಲಾಹನು ಸತ್ಕರ್ಮಿಗಳ ಪ್ರತಿಫಲವನ್ನು ಖಂಡಿತ ವ್ಯರ್ಥಗೊಳಿಸುವುದಿಲ್ಲ

[88] ಅವರು (ಸಹೋದರರು) ಹೇಳಿದರು; ಅಲ್ಲಾಹನಾಣೆ! ಅಲ್ಲಾಹನು ನಮ್ಮೆದುರು ನಿನಗೆ ಮೇಲ್ಮೆಯನ್ನು ನೀಡಿದ್ದಾನೆ. ನಾವು ನಿಜಕ್ಕೂ ತಪ್ಪಿತಸ್ಥರಾಗಿದ್ದೆವು

[89] ಅವರು (ಯೂಸುಫ್) ಹೇಳಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪವೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತ ಹೆಚ್ಚು ಕರುಣೆ ತೋರುವವನಾಗಿದ್ದಾನೆ

[90] ನೀವು ಈ ನನ್ನ ಅಂಗಿಯನ್ನು ಕೊಂಡುಹೋಗಿ ನನ್ನ ತಂದೆಯ ಮುಖದ ಮೇಲೆ ಹಾಕಿರಿ. ಅವರ ದೃಷ್ಟಿಯು ಮರಳುವುದು ಮತ್ತು ನೀವು ನಿಮ್ಮ ಕುಟುಂಬದ ಎಲ್ಲರ ಜೊತೆ ನನ್ನ ಬಳಿಗೆ ಬನ್ನಿರಿ

[91] ಯಾತ್ರಾ ತಂಡವು ಹೊರಟುಬಿಟ್ಟಾಗ, ಅವರ ತಂದೆ ಹೇಳಿದರು; ನನಗೆ ಯೂಸುಫ್‌ರ ಸುವಾಸನೆ ಬರುತ್ತಿದೆ. ನೀವು ನನ್ನನ್ನು ಭ್ರಮೆಯಲ್ಲಿರುವವನೆಂದು ಭಾವಿಸಬೇಡಿ

[92] ಅವರು (ಸಹಯಾತ್ರಿಗಳು) ಹೇಳಿದರು; ಅಲ್ಲಾಹನಾಣೆ, ನೀವು ಖಂಡಿತ ಅದೇ ನಿಮ್ಮ ಹಳೆಯ ಭ್ರಮೆಯಲ್ಲಿದ್ದೀರಿ

[93] ಆ ಬಳಿಕ, ಶುಭವಾರ್ತೆ ತರುವವನೊಬ್ಬನು ಬಂದು ಅದನ್ನು (ಯೂಸುಫರ ಅಂಗಿಯನ್ನು) ಅವರ (ಯಾಕೂಬರ) ಮುಖದ ಮೇಲೆ ಹಾಕಿದಾಗ ಅವರು (ಯಅ್ಕೂಬ್‌ರು) ಮತ್ತೆ ನೋಡಬಲ್ಲವರಾದರು. ಅವರು ಹೇಳಿದರು; ‘‘ ನಿಮಗೆ ತಿಳಿದಿಲ್ಲದ ವಿಷಯಗಳು ಅಲ್ಲಾಹನ ಮೂಲಕ ನನಗೆ ತಿಳಿದಿರುತ್ತವೆಂದು ನಾನು ನಿಮ್ಮೆಡನೆ ಹೇಳಿರಲಿಲ್ಲವೇ?’’

[94] ಅವರು ಹೇಳಿದರು; ನಮ್ಮ ತಂದೆಯೇ, ನಮ್ಮ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸಿರಿ. ನಾವು ಖಂಡಿತ ತಪ್ಪಿತಸ್ಥರಾಗಿದ್ದೆವು

[95] ಅವರು (ತಂದೆ) ಹೇಳಿದರು; ನಾನು ಬಹುಬೇಗನೇ ನಿಮ್ಮ ಕ್ಷಮೆಗಾಗಿ ನನ್ನ ಒಡೆಯನನ್ನು ಪ್ರಾರ್ಥಿಸುತ್ತೇನೆ. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ

[96] ಅವರು ಯೂಸುಫರ ಬಳಿಗೆ ಹೋದಾಗ, ಅವರು (ಯೂಸುಫರು) ತಮ್ಮ ತಂದೆ ತಾಯಿಗೆ ತಮ್ಮ ಬಳಿ ಸ್ಥಳ ಕೊಟ್ಟರು ಮತ್ತು ಅಲ್ಲಾಹನು ಇಚ್ಛಿಸಿದರೆ ನೀವು ಮನಃಶಾಂತಿಯೊಂದಿಗೆ ಈಜಿಪ್ತ್ ಅನ್ನು ಪ್ರವೇಶಿಸಿರಿ, ಎಂದರು

[97] ಅವರು ತಮ್ಮ ತಂದೆ ತಾಯಿಯನ್ನು ರಾಜಪೀಠದಲ್ಲಿ ಎತ್ತರದಲ್ಲಿ ಕೂರಿಸಿದರು ಮತ್ತು ಅವರು, (ಸಹೋದರರು) ಅವರ (ಯೂಸುಫ್‌ರ) ಮುಂದೆ ಸಾಷ್ಟ್ಟಾಂಗವೆರಗಿದರು, ಅವರು (ಯೂಸುಫ್) ಹೇಳಿದರು; ನನ್ನ ತಂದೆಯೇ, ಇದುವೇ ಈ ಹಿಂದಿನ ನನ್ನ ಕನಸಿನ ತಾತ್ಪರ್ಯ. ನನ್ನ ಒಡೆಯನು ಅದನ್ನು ಸತ್ಯವಾಗಿಸಿರುವನು. ಅವನು ನನ್ನನ್ನು ಸೆರೆಮನೆಯಿಂದ ಹೊರತೆಗೆದಾಗ ಮತ್ತು ಶೈತಾನನು ನನ್ನ ಹಾಗೂ ನನ್ನ ಸಹೋದರರ ನಡುವೆ ಜಗಳ ಬೆಳೆಸಿದ ಬಳಿಕ ನಿಮ್ಮನ್ನು ಗ್ರಾಮದಿಂದ (ಇಲ್ಲಿಗೆ) ತಂದಾಗ (ಆ ಮೂಲಕ) ಅವನು ನನ್ನ ಮೇಲೆ ಔದಾರ್ಯ ತೋರಿದ್ದನು. ನನ್ನ ಒಡೆಯನು ಖಂಡಿತ ತಾನಿಚ್ಛಿಸಿದವರ ಪಾಲಿಗೆ ಸೌಮ್ಯನಾಗಿರುತ್ತಾನೆ. ಅವನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[98] ನನ್ನೊಡೆಯಾ, ನೀನು ನನಗೆ ಒಂದು ಸಾಮ್ರಾಜ್ಯವನ್ನು ನೀಡಿರುವೆ ಮತ್ತು ವಿಷಯ (ಸ್ವಪ್ನ) ಗಳನ್ನು ವ್ಯಾಖ್ಯಾನಿಸುವ ವಿದ್ಯೆಯನ್ನು ನನಗೆ ಕಲಿಸಿರುವೆ. (ನೀನೇ) ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿದವನು. ಈ ಲೋಕದಲ್ಲೂ ಪರಲೋಕದಲ್ಲೂ ನೀನೇ ನನ್ನ ಪೋಷಕನು. ನಿನಗೆ ಶರಣಾಗಿರುವ ಸ್ಥಿತಿಯಲ್ಲಿ (ಮುಸ್ಲಿಮನಾಗಿ) ನನ್ನನ್ನು ಸಾಯಿಸು ಮತ್ತು ಸಜ್ಜನರ ಸಾಲಿಗೆ ನನ್ನನ್ನು ಸೇರಿಸು

[99] (ದೂತರೇ,) ಇವು ನಿಮ್ಮೆಡೆಗೆ ದಿವ್ಯವಾಣಿಯನ್ನು ಕಳಿಸಿ ನಾವು ನಿಮಗೆ ತಿಳಿಸುತ್ತಿರುವ ಗುಪ್ತ ವಿಷಯಗಳು. ಅವರು ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದಾಗ ಹಾಗೂ ಅವರು ಸಂಚುಗಳನ್ನು ಹೂಡುತ್ತಿದ್ದಾಗ ನೀವೇನೂ ಅವರ ಬಳಿ ಇರಲಿಲ್ಲ

[100] ಹೆಚ್ಚಿನ ಮಾನವರು, ನೀವು ಎಷ್ಟೇ ಅಪೇಕ್ಷಿಸಿದರೂ ವಿಶ್ವಾಸಿಗಳಾಗುವುದಿಲ್ಲ

[101] ಇದಕ್ಕಾಗಿ ನೀವು ಅವರೊಡನೆ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಇದು, ಲೋಕದವರಿಗೆಲ್ಲಾ ಇರುವ ಉಪದೇಶವಾಗಿದೆ

[102] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಅವರು ಅದೆಷ್ಟೋ ಪುರಾವೆಗಳನ್ನು ಕಾಣುತ್ತಾರೆ. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಡುತ್ತಾರೆ

[103] ಅವರಲ್ಲಿ ಹೆಚ್ಚಿನವರು, ಪಾಲುದಾರರನ್ನು ನೇಮಿಸದೆ ಅಲ್ಲಾಹನನ್ನು ನಂಬುವುದಿಲ್ಲ

[104] ಅವರೇನು, ಅಲ್ಲಾಹನ ಸರ್ವವ್ಯಾಪಿ ಶಿಕ್ಷೆಯೊಂದು ತಮ್ಮ ಮೇಲೆ ಬಂದೆರಗುವ ಕುರಿತು, ಅಥವಾ ಅವರಿಗೆ ಅರಿವೇ ಇಲ್ಲದಿರುವಾಗ ಹಠಾತ್ತನೆ ಅಂತಿಮ ಘಳಿಗೆಯು ಬಂದು ಬಿಡುವ ಕುರಿತು ನಿಶ್ಚಿಂತರಾಗಿರುವರೇ

[105] ಹೇಳಿರಿ; ಇದುವೇ ನನ್ನ ಮಾರ್ಗ. ನಾನು ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ. ನಾನು ಹಾಗೂ ನನ್ನ ಅನುಯಾಯಿಗಳು ಸ್ಪಷ್ಟವಾದ ಸಾಕ್ಷಾಧಾರಗಳಿರುವ ದಾರಿಯಲ್ಲಿದ್ದೇವೆ. ಅಲ್ಲಾಹನು ಸಂಪೂರ್ಣ ನಿರ್ಮಲನು. ನಾನು (ಅಲ್ಲಾಹನಿಗೆ) ಪಾಲುದಾರರನ್ನು ಆರೋಪಿಸುವವನಲ್ಲ

[106] ನಿಮಗಿಂತ ಹಿಂದೆಯೂ ನಾವು ನಾಡಿನವರ ಪೈಕಿ ಪುರುಷರ ಕಡೆಗೇ ದಿವ್ಯ ಸಂದೇಶವನ್ನು ರವಾನಿಸಿದ್ದು ಅವರನ್ನೇ (ದೂತರಾಗಿ) ಕಳಿಸಿದ್ದೇವೆ. ಅವರೇನು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಹಿಂದಿನ ಜನರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಪಾಲಿಗೆ ಪರಲೋಕದ ನೆಲೆಯೇ ಉತ್ತಮವಾಗಿದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ

[107] ಕೊನೆಗೆ ದೂತರುಗಳು ನಿರಾಶರಾಗಿ, ತಮ್ಮೊಡನೆ ಸುಳ್ಳುಹೇಳಲಾಗಿತ್ತೇ ಎಂದು ಸಂಶಯಿಸಲಾರಂಭಿಸುವಾಗಲೇ ನಮ್ಮ ನೆರವು ಬಂದು ಬಿಟ್ಟಿತು ಮತ್ತು ನಾವಿಚ್ಛಿಸಿದವರನ್ನು ನಾವು ರಕ್ಷಿಸಿದೆವು. ಅಪರಾಧಿಗಳ ಮೇಲಿಂದ ನಮ್ಮ ಶಿಕ್ಷೆಯನ್ನು ನಿವಾರಿಸಲಾಗುವುದಿಲ್ಲ

[108] ಬುದ್ಧಿ ಉಳ್ಳವರಿಗೆ ಅವರ ಕಥೆಗಳಲ್ಲಿ ಖಂಡಿತ ಪಾಠವಿದೆ. ಇದು ಸ್ವರಚಿತ ಹೇಳಿಕೆಯೇನಲ್ಲ. ನಿಜವಾಗಿ ಇದು ಈಗಾಗಲೇ ಇರುವುದರ (ಗತಕಾಲದ ಗ್ರಂಥಗಳಲ್ಲಿರುವ ಸತ್ಯದ) ಸಮರ್ಥನೆಯಾಗಿದೆ, ಎಲ್ಲ ವಿಷಯಗಳ ವಿವರವಾಗಿದೆ ಮತ್ತು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ

[109] ಅಲಿಫ್, ಲಾಮ್ ಮ್ಮೀಮ್, ರಾ – ಇವು ದಿವ್ಯ ಗ್ರಂಥದ ವಚನಗಳು. ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶವು ಸಾಕ್ಷಾತ್ ಸತ್ಯವಾಗಿದೆ. ಆದರೆ ಮಾನವರಲ್ಲಿ ಹೆಚ್ಚಿನವರು ನಂಬುವುದಿಲ್ಲ

[110] ಅಲ್ಲಾಹನೇ, ನಿಮಗೆ ಕಾಣುವ ಆಧಾರಸ್ತಂಭಗಳಿಲ್ಲದೆ ಆಕಾಶಗಳನ್ನು ಎತ್ತರಗೊಳಿಸಿದವನು. ಆ ಬಳಿಕ ವಿಶ್ವಪೀಠದಲ್ಲಿ ಸ್ಥಿರನಾದವನು ಮತ್ತು ಸೂರ್ಯನನ್ನೂ ಚಂದ್ರನನ್ನೂ ಅಧೀನಗೊಳಿಸಿದವನು. ಒಂದು ನಿರ್ದಿಷ್ಟ ಅವಧಿಯವರೆಗೆ ಎಲ್ಲವೂ ಚಲಿಸುತ್ತಿರುತ್ತದೆ. ಅವನೇ, ಎಲ್ಲ ಯೋಜನೆಗಳನ್ನು ರೂಪಿಸುವವನು (ಮತ್ತು) ನಿಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನೀವು ದೃಢವಾಗಿ ನಂಬುವಂತೆ ಸತ್ಯ ವಚನಗಳನ್ನು ವಿವರಿಸುವವನು

[111] ಮತ್ತು ಅವನೇ, ಭೂಮಿಯನ್ನು ಹರಡಿದವನು ಹಾಗೂ ಅದರಲ್ಲಿ ಗುಡ್ಡಗಳನ್ನು ಹಾಗೂ ನದಿಗಳನ್ನು ನಿರ್ಮಿಸಿದವನು. ಮತ್ತು (ಅವನೇ) ಎಲ್ಲ ಬಗೆಯ ಫಲಗಳನ್ನು ಹಾಗೂ ಅವುಗಳ ಎರಡೆರಡು ಜೋಡಿಗಳನ್ನು ಸೃಷ್ಟಿಸಿದವನು ಮತ್ತು ಹಗಲಮೇಲೆ ರಾತ್ರಿಯನ್ನು ಆವರಿಸಿದನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪಾಠಗಳಿವೆ

ಗುಡುಗು

Surah 13

[1] ಭೂಮಿಯಲ್ಲಿ ಪರಸ್ಪರ ನಿಕಟವಾಗಿರುವ ಹಲವು (ವಿಭಿನ್ನ) ಭಾಗಗಳಿವೆ. ದ್ರಾಕ್ಷಾ ತೋಟಗಳು ಹಾಗೂ ಹೊಲಗಳಿವೆ. ಕವಲೊಡೆದ ಮತ್ತು ಕವಲೊಡೆಯದ ಖರ್ಜೂರದ ಗಿಡಗಳಿವೆ. ಅವುಗಳಿಗೆಲ್ಲಾ ನೀರು ಒಂದೇ ಮೂಲದಿಂದ ಒದಗುತ್ತದೆ. ಆದರೆ ರುಚಿಯ ದೃಷ್ಟಿಯಿಂದ ನಾವು ಕೆಲವು ಫಲಗಳಿಗೆ ಮತ್ತೆ ಕೆಲವು ಫಲಗಳಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ನೀಡಿರುತ್ತೇವೆ. ಆಲೋಚಿಸುವವರಿಗೆ ಖಂಡಿತ ಇದರಲ್ಲಿ ಪಾಠಗಳಿವೆ

[2] ನಿಮಗೆ ಅಚ್ಚರಿ ಪಡಬೇಕಿದ್ದರೆ, ‘‘ನಾವು ಮಣ್ಣಾದ ಬಳಿಕ ನಮ್ಮನ್ನು ಮತ್ತೆ ಹೊಸದಾಗಿ ಸೃಷ್ಟಿಸಲಾಗುವುದೇ?’’ ಎಂಬ ಅವರ ಮಾತು ಅಚ್ಚರಿಗೆ ಯೋಗ್ಯವಾಗಿದೆ. ಅವರೇ, ತಮ್ಮ ಒಡೆಯನನ್ನು ಧಿಕ್ಕರಿಸಿದವರು. ಅವರೇ, ತಮ್ಮ ಕೊರಳುಗಳಲ್ಲಿ ನೊಗಗಳಿರುವವರು ಮತ್ತು ಅವರೇ ನರಕದವರು. ಅವರು ಸದಾಕಾಲ ಅದರಲ್ಲೇ ಇರುವರು

[3] (ದೂತರೇ,) ಅವರು ನಿಮ್ಮ ಬಳಿ, ಒಳಿತಿಗಿಂತ ಮುನ್ನ ಕೆಡುಕಿಗಾಗಿ ಆತುರ ಪಡುತ್ತಾರೆ. ಹಲವು ಪಾಠದಾಯಕ ಉದಾಹರಣೆಗಳು ಅವರಿಗಿಂತ ಹಿಂದೆ ಗತಿಸಿವೆ. ಖಂಡಿತವಾಗಿಯೂ ನಿಮ್ಮ ಒಡೆಯನು ಮಾನವರ ಅಕ್ರಮದ ಹೊರತಾಗಿಯೂ ಅವರನ್ನು ಕ್ಷಮಿಸುವವನಾಗಿದ್ದಾನೆ. ಹಾಗೆಯೇ, ಖಂಡಿತವಾಗಿಯೂ ನಿಮ್ಮ ಒಡೆಯನು ತೀವ್ರವಾಗಿ ದಂಡಿಸುವವನಾಗಿದ್ದಾನೆ

[4] ‘‘ಅವನ ಒಡೆಯನ ಕಡೆಯಿಂದ ಅವನ ಬಳಿಗೆ ಯಾವುದೇ ಪುರಾವೆ ಇಳಿದು ಬಂದಿಲ್ಲವೇಕೆ?’’ ಎಂದು ಧಿಕ್ಕಾರಿಗಳು ಕೇಳುತ್ತಾರೆ. ನಿಜವಾಗಿ, ನೀವು ಎಚ್ಚರಿಸುವವರಾಗಿರುವಿರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಮಾರ್ಗದರ್ಶಿ ಗಳಿರುತ್ತಾರೆ

[5] ಪ್ರತಿಯೊಬ್ಬ ಹೆಣ್ಣು ತನ್ನ ಹೊಟ್ಟೆಯಲ್ಲಿ ಏನನ್ನು ಹೊತ್ತಿರುವಳು ಮತ್ತು ಗರ್ಭಗಳಲ್ಲಿ ಅರಳುತ್ತಿರುವುದೇನು ಹಾಗೂ ಮುದುಡುತ್ತಿರುವುದೇನು ಎಂಬುದನ್ನು ಅಲ್ಲಾಹನು ಬಲ್ಲನು. ಅವನ ಬಳಿ ಪ್ರತಿಯೊಂದಕ್ಕೂ ಒಂದು ಪ್ರಮಾಣವು ನಿಶ್ಚಿತವಾಗಿದೆ

[6] ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಅವನು ಬಲ್ಲನು. ಅವನು ಎಲ್ಲರಿಗಿಂತಲೂ ದೊಡ್ಡವನು ಮತ್ತು ಸದಾ ಉನ್ನತನು

[7] ನಿಮ್ಮಲ್ಲಿ ಗುಟ್ಟಾಗಿ ಮಾತನಾಡುವವನಿರಲಿ, ಜೋರಾಗಿ ಮಾತನಾಡುವವನಿರಲಿ, ಇರುಳಲ್ಲಿ ಅಡಗಿಕೊಂಡವನಿರಲಿ, ಹಗಲಲ್ಲಿ ನಡೆದಾಡುತ್ತಿರುವವನಿರಲಿ – (ಅಲ್ಲಾಹನ ಮಟ್ಟಿಗೆ) ಅವರೆಲ್ಲರೂ ಸಮಾನರು

[8] ಅಲ್ಲಾಹನ ಅಪ್ಪಣೆಯಂತೆ, ಸರದಿ ಪ್ರಕಾರ ಬಂದು ಅವನನ್ನು (ಮಾನವನನ್ನು) ರಕ್ಷಿಸುವ, ಕಾವಲುಗಾರರು ಅವನ ಮುಂದೆಯೂ ಹಿಂದೆಯೂ ಸದಾ ಇರುತ್ತಾರೆ. ಒಂದು ಸಮುದಾಯವು ಸ್ವತಃ ತನ್ನ ಸ್ಥಿತಿಯನ್ನು ಬದಲಿಸುವ ತನಕ, ಅಲ್ಲಾಹನು ಅದರ ಸ್ಥಿತಿಯನ್ನು ಖಂಡಿತ ಬದಲಿಸುವುದಿಲ್ಲ. ಇನ್ನು ಅಲ್ಲಾಹನು ಒಂದು ಸಮುದಾಯಕ್ಕೆ ಕೇಡನ್ನು ಬಗೆದರೆ, ಅದನ್ನು ನಿವಾರಿಸಬಲ್ಲವರು ಯಾರೂ ಇಲ್ಲ ಮತ್ತು ಅವರಿಗೆ ಅವನ ಹೊರತು ಬೇರಾರೂ ಸಹಾಯಕರಿಲ್ಲ

[9] ನಿಮಗೆ ಭಯದ ಮತ್ತು ನಿರೀಕ್ಷೆಯ ಮಿಂಚನ್ನು ತೋರಿಸುವವನು ಮತ್ತು ಭಾರವಾದ ಮೋಡವನ್ನು ಚಲಿಸುವವನು ಅವನೇ

[10] ಗುಡುಗು ಅವನ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಾ ಅವನ ಗುಣಗಾನ ಮಾಡುತ್ತದೆ. ಮಲಕ್‌ಗಳೂ ಭಕ್ತಿಯೊಂದಿಗೆ ( ಇದನ್ನೇ ಮಾಡುತ್ತಿರುತ್ತಾರೆ). ಅವನೇ, ಅಬ್ಬರಿಸುವ ಸಿಡಿಲನ್ನು ಕಳಿಸುತ್ತಾನೆ ಮತ್ತು ತಾನಿಚ್ಛಿಸಿದವರ ಮೇಲೆ ಅದನ್ನು ಬೀಳಿಸುತ್ತಾನೆ. ಅವರು (ಧಿಕ್ಕಾರಿಗಳು) ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ. ಅವನು ಬಹಳ ಕಠೋರವಾಗಿ ಹಿಡಿಯುವವನಾಗಿದ್ದಾನೆ

[11] ಅವನನ್ನು (ಅಲ್ಲಾಹನನ್ನು) ಪ್ರಾರ್ಥಿಸುವುದು ಮಾತ್ರ ಸರಿ. ಅವರು ಅವನ ಹೊರತು ಬೇರೆ ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರು ಯಾರೂ ಅವರಿಗೆ ಯಾವ ಉತ್ತರವನ್ನೂ ನೀಡುವುದಿಲ್ಲ. (ಅವರ ಅವಸ್ಥೆಯು) ನೀರು ತನ್ನ ಬಾಯಿಗೆ ತಲುಪಬೇಕೆಂದು ನೀರಿನೆಡೆಗೆ ಕೈಚಾಚಿ ನಿಂತವನಂತಿದೆ. ನೀರು ಎಂದೂ ಅವನ ಬಳಿಗೆ ತಲುಪುವುದಿಲ್ಲ. ಧಿಕ್ಕಾರಿಗಳ ಎಲ್ಲ ಪ್ರಾರ್ಥನೆಗಳು ದಿಕ್ಕೆಟ್ಟು ಹೋಗುತ್ತವೆ

[12] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಮತ್ತು ಅವುಗಳ ನೆರಳುಗಳೂ ತಮ್ಮಿಚ್ಛೆಯಿಂದ ಅಥವಾ ಅನಿವಾರ್ಯವಾಗಿ ಮುಂಜಾನೆ ಹಾಗೂ ಸಂಜೆ ಅಲ್ಲಾಹನಿಗೆ ಸಾಷ್ಟಾಂಗ ವಂದಿಸುತ್ತಿವೆ

[13] (ದೂತರೇ,) ‘‘ಆಕಾಶಗಳ ಹಾಗೂ ಭೂಮಿಯ ಒಡೆಯನು ಯಾರು? ಎಂದು ಕೇಳಿರಿ. ‘‘ಅಲ್ಲಾಹನು’’ ಎಂದು ಹೇಳಿರಿ. ‘‘ನೀವೇನು ಅವನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ನಿಮ್ಮ ಪೋಷಕರಾಗಿಸಿಕೊಂಡಿರುವಿರಾ?’’ ಎಂದು ಕೇಳಿರಿ. ‘‘ಕಾಣುವವನು ಮತ್ತು ಕುರುಡನು ಸಮಾನರೇ? ಅಥವಾ ಕತ್ತಲುಗಳು ಮತ್ತು ಬೆಳಕು ಸಮನಾಗಬಲ್ಲವೇ? ಸೃಷ್ಟಿ ಕಾರ್ಯದ ಕುರಿತು (ಯಾವುದನ್ನು ಯಾರು ಸೃಷ್ಟಿಸಿದ್ದೆಂದು) ಅವರಿಗೆ ಗೊಂದಲವಾಗುವುದಕ್ಕೆ, ಅವರು ಅಲ್ಲಾಹನ ಪಾಲುದಾರೆಂದು ನಂಬಿಕೊಂಡಿರುವವರು, ಅವನು ಸೃಷ್ಟಿಸಿದಂತೆ (ಏನನ್ನಾದರೂ) ಸೃಷ್ಟಿಸಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನು ಅನನ್ಯನೂ ಪ್ರಬಲನೂ ಆಗಿದ್ದಾನೆ

[14] ಅವನು ಆಕಾಶದಿಂದ ನೀರನ್ನು ಸುರಿಸಿದನು. ಅದರಿಂದ ನದಿ ನಾಲೆಗಳು ತಮ್ಮ ಪ್ರಮಾಣಕ್ಕನುಸಾರ ತುಂಬಿ ಹರಿಯತೊಡಗಿದವು. ಈ ವೇಳೆ (ಮೇಲ್ಮಟ್ಟದಲ್ಲಿದ್ದ) ಉಬ್ಬಿದ ನೊರೆಯನ್ನು ಪ್ರವಾಹವು ಒಯ್ದು ಬಿಟ್ಟಿತು. ಜನರು ಆಭರಣಗಳನ್ನು ಅಥವಾ ಇತರ ಸಾಧನಗಳನ್ನು ತಯಾರಿಸಲೆಂದು ಬೆಂಕಿಯಲ್ಲಿ ಕುದಿಸುವ ವಸ್ತುಗಳಲ್ಲೂ ಇಂತಹದೇ ನೊರೆ ಹೊಮ್ಮುತ್ತದೆ. ಇದೇರೀತಿ ಅಲ್ಲಾಹನು ಸತ್ಯ-ಮಿಥ್ಯಗಳನ್ನು ಉದಾಹರಣೆಯೊಂದಿಗೆ ಸ್ಪಷ್ಟ ಪಡಿಸುತ್ತಾನೆ. ನೊರೆಯು ಆರಿ ತೊಲಗಿ ಹೋಗುತ್ತದೆ. ಆದರೆ ಮಾನವರಿಗೆ ಉಪಯುಕ್ತವಾದುದು ಭೂಮಿಯಲ್ಲಿ ಸ್ಥಿರಗೊಳ್ಳುತ್ತದೆ. ಹೀಗೆ ಅಲ್ಲಾಹನು ಉದಾಹರಣೆಗಳನ್ನು ನೀಡುತ್ತಾನೆ

[15] ತಮ್ಮ ಒಡೆಯನ ಆದೇಶ ಪಾಲಿಸಿದವರಿಗೆ ಹಿತವಿದೆ. ಅತ್ತ, ಅವನ ಆದೇಶಗಳನ್ನು ಉಲ್ಲಂಘಿಸಿದವರ ಬಳಿ, ಭೂಮಿಯಲ್ಲಿರುವುದೆಲ್ಲವೂ ಇದ್ದು, ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಇದ್ದು, ಅದನ್ನೆಲ್ಲಾ ಅವರು ಪರಿಹಾರವಾಗಿ ನೀಡಿದರೂ, ಅವರ ವಿಚಾರಣೆಯ ಫಲಿತಾಂಶವು ತುಂಬಾ ಕೆಟ್ಟದಾಗಿರುವುದು. ನರಕವೇ ಅವರ ನೆಲೆಯಾಗಿರುವುದು ಮತ್ತು ಅದು ತುಂಬಾ ಕೆಟ್ಟ ವಾಸಸ್ಥಾನವಾಗಿದೆ

[16] (ದೂತರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮ ಬಳಿಗೆ ಸತ್ಯ ಸಂದೇಶವನ್ನು ಇಳಿಸಿಕೊಡಲಾಗಿದೆ ಎಂಬುದನ್ನು ಬಲ್ಲ ವ್ಯಕ್ತಿಯು ಕುರುಡನಂತಾಗಲು ಸಾಧ್ಯವೇ? ನಿಜಕ್ಕೂ ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ

[17] ಅವರು ಅಲ್ಲಾಹನ ಜೊತೆಗಿನ ಕರಾರನ್ನು ಪಾಲಿಸುತ್ತಾರೆ ಹಾಗೂ ಅವರು ಒಪ್ಪಂದವನ್ನು ಮುರಿಯುವುದಿಲ್ಲ

[18] ಅಲ್ಲಾಹನು ರಕ್ಷಿಸಬೇಕೆಂದು ಅದೇಶಿಸಿರುವ ಬಾಂಧವ್ಯಗಳನ್ನು ಅವರು ರಕ್ಷಿಸುತ್ತಾರೆ. ಅವರು ತಮ್ಮ ಒಡೆಯನ ಭಯ ಭಕ್ತಿ ಉಳ್ಳವರಾಗಿರುತ್ತಾರೆ ಮತ್ತು ಭಯಾನಕ ವಿಚಾರಣೆಯ ಕುರಿತು ಭೀತರಾಗಿರುತ್ತಾರೆ

[19] ಇನ್ನು, ತಮ್ಮ ಒಡೆಯನ ಮೆಚ್ಚುಗೆಗಾಗಿ ಸಹನಶೀಲರಾಗಿರುವವರು, ನಮಾಝ್ ಅನ್ನು ಪಾಲಿಸುವವರು, ತಮಗೆ ನಾವು ನೀಡಿರುವ ಸಂಪತ್ತಿನಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ ಖರ್ಚುಮಾಡುವವರು ಮತ್ತು ಒಳಿತಿನ ಮೂಲಕ ಕೆಡುಕನ್ನು ನಿವಾರಿಸುವವರು – ಅವರಿಗಾಗಿಯೇ ಇದೆ, ಪರಲೋಕದ ಮನೆ

[20] ಅವರು ಶಾಶ್ವತ ತೋಟಗಳನ್ನು ಪ್ರವೇಶಿಸುವರು. ಹಾಗೆಯೇ ಅವರ ತಂದೆ – ತಾತಂದಿರು, ಪತ್ನಿಯರು ಮತ್ತು ಸಂತತಿಗಳ ಪೈಕಿ ಸಜ್ಜನರಾಗಿದ್ದವರು ಮತ್ತು ಮಲಕ್‌ಗಳು ಎಲ್ಲ ಬಾಗಿಲುಗಳಿಂದ ಅವರ ಬಳಿಗೆ ಬರುವರು

[21] ‘‘ನೀವು ತೋರಿದ ಸಹನೆಗಾಗಿ ನಿಮಗೆ ಶಾಂತಿ ಸಿಗಲಿ’’ ಎನ್ನುತ್ತಾ (ಅವರು ಬರುವರು). ಪರಲೋಕದ ಆ ಮನೆಯು ಬಹಳ ಶ್ರೇಷ್ಠವಾಗಿರುವುದು

[22] ಇನ್ನು, ಅಲ್ಲಾಹನ ಜೊತೆಗೆ ಮಾಡಿದ ಕರಾರನ್ನು ಪಕ್ವಗೊಳಿಸಿದ ಬಳಿಕ ಉಲ್ಲಂಘಿಸುವವರು ಹಾಗೂ ಅಲ್ಲಾಹನು ರಕ್ಷಿಸಬೇಕೆಂದು ಆದೇಶಿಸಿರುವ ಬಾಂಧವ್ಯಗಳನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಅಶಾಂತಿ ಹರಡುವವರು – ಅವರೇ ಶಾಪಕ್ಕೆ ತುತ್ತಾಗುವವರು. ಅವರಿಗೆ ತೀರಾ ಕೆಟ್ಟ ನೆಲೆ ಸಿಗುವುದು

[23] ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ಆದಾಯವನ್ನು ವಿಸ್ತರಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಲೋಕದ ಬದುಕಿನಲ್ಲೇ ಸಂತುಷ್ಟರಾಗಿದ್ದಾರೆ. ನಿಜವಾಗಿ, ಪರಲೋಕದೆದುರು ಈ ಲೋಕವು ತೀರಾ ಕ್ಷುಲ್ಲಕ ಸೊತ್ತಾಗಿದೆ

[24] ‘‘ಅವನ ಒಡೆಯನ ಕಡೆಯಿಂದ ಅವನಿಗೆ ಯಾವುದೇ ಪುರಾವೆಯು ಇಳಿದು ಬಂದಿಲ್ಲವೇಕೆ?’’ ಎಂದು ಧಿಕ್ಕಾರಿಗಳು ಕೇಳುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು, ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ಅವನು ತನ್ನ ಕುರಿತು ಒಲವು ಉಳ್ಳವರಿಗೆ ತನ್ನೆಡೆಗಿರುವ ದಾರಿಯನ್ನು ತೋರುತ್ತಾನೆ

[25] ಅವರು ಸತ್ಯದಲ್ಲಿ ನಂಬಿಕೆ ಉಳ್ಳವರಾಗಿರುತ್ತಾರೆ ಮತ್ತು ಅವರ ಮನಸ್ಸುಗಳು ಅಲ್ಲಾಹನ ನೆನಪಿನಲ್ಲಿ ಸಂತೃಪ್ತಿಯನ್ನು ಪಡೆದಿರುತ್ತವೆ. ನಿಮಗೆ ತಿಳಿದಿರಲಿ – ಮನಸ್ಸಿನ ಸಂತೃಪ್ತ್ತಿಯು ಅಲ್ಲಾಹನನ್ನು ನೆನಪಿಸುವುದರಲ್ಲೇ ಇದೆ

[26] ಸತ್ಯದಲ್ಲಿ ನಂಬಿಕೆ ಉಳ್ಳವರು ಮತ್ತು ಸತ್ಕರ್ಮ ಮಾಡುವವರಿಗೆ ಶುಭವಾರ್ತೆ ಇದೆ ಮತ್ತು ಅವರಿಗೆ ಶ್ರೇಷ್ಠ ನೆಲೆ ಸಿಗಲಿವೆ

[27] (ದೂತರೇ,) ಈ ರೀತಿ, ನಾವು ದಿವ್ಯವಾಣಿಯ ಮೂಲಕ ನಿಮ್ಮೆಡೆಗೆ ಕಳುಹಿಸಿದ್ದನ್ನು ನೀವು ಅವರಿಗೆ ಓದಿ ಕೇಳಿಸಬೇಕೆಂದು ನಾವು ನಿಮ್ಮನ್ನು ಒಂದು ಸಮುದಾಯದೆಡೆಗೆ ಕಳಿಸಿರುವೆವು. ಅವರಿಗಿಂತ ಹಿಂದೆ ಹಲವು ಸಮುದಾಯಗಳು ಗತಿಸಿವೆ. ಅವರಂತು ಆ ಪರಮ ದಯಾಳುವನ್ನೇ ಧಿಕ್ಕರಿಸುತ್ತಿದ್ದಾರೆ. ಹೇಳಿರಿ; ಅವನೇ ನನ್ನ ಒಡೆಯನು. ಅವನಲ್ಲದೆ ಬೇರೆ ದೇವರಿಲ್ಲ. ನಾನು ಅವನಲ್ಲೇ ಭರವಸೆ ಇಟ್ಟಿರುವೆನು. ಕೊನೆಗೆ ಅವನೆಡೆಗೇ (ಎಲ್ಲರೂ) ಮರಳಬೇಕಾಗಿದೆ

[28] ಒಂದು ವೇಳೆ ಈ ಕುರ್‌ಆನ್‌ನಿಂದಾಗಿ ಪರ್ವತಗಳು ಚಲಿಸಲಾರಂಭಿಸಿದ್ದರೆ, ಭೂಮಿಯು ಛಿದ್ರವಾಗಿದ್ದರೆ, ಅಥವಾ ಶವಗಳು ಮಾತನಾಡತೊಡಗಿದ್ದರೆ – ಆಗಲೂ ಅವರು ನಂಬುತ್ತಿರಲಿಲ್ಲ. ನಿಜವಾಗಿ ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ಅಲ್ಲಾಹನು ಬಯಸಿದ್ದರೆ, ಎಲ್ಲ ಮಾನವರನ್ನೂ ಸನ್ಮಾರ್ಗದಲ್ಲಿ ನಡೆಸಿ ಬಿಡುತ್ತಿದ್ದನು ಎಂಬ ಮಾಹಿತಿಯಿಂದ ವಿಶ್ವಾಸಿಗಳಿಗೆ ನೆಮ್ಮದಿಸಿಗಲಿಲ್ಲವೇ? ಧಿಕ್ಕಾರಿಗಳ ಕರ್ಮಗಳ ಫಲವಾಗಿ, ಅಲ್ಲಾಹನ ಮಾತು ಈಡೇರುವ ತನಕ, ಅವರ ಮೇಲೆ ಅಥವಾ ಅವರ ನಿವಾಸಗಳ ಅಕ್ಕ ಪಕ್ಕದಲ್ಲಿ ತೀವ್ರ ವಿಪತ್ತುಗಳು ಎರಗುತ್ತಲೇ ಇರುವವು . ಖಂಡಿತವಾಗಿಯೂ ಅಲ್ಲಾಹನು ತಾನು ಕೊಟ್ಟ ಮಾತನ್ನು ಮೀರುವುದಿಲ್ಲ

[29] (ದೂತರೇ,) ನಿಮಗಿಂತ ಹಿಂದಿನ ದೂತರನ್ನೂ ಗೇಲಿ ಮಾಡಲಾಗಿದೆ. ನಾನು ಧಿಕ್ಕಾರಿಗಳಿಗೆ ಅವಕಾಶ ನೀಡಿದೆನು. ಆ ಬಳಿಕ ಅವರನ್ನು (ಶಿಕ್ಷಿಸಲಿಕ್ಕಾಗಿ) ಹಿಡಿದುಕೊಂಡೆನು. ಹೇಗಿತ್ತು ನನ್ನ ದಂಡನೆ

[30] (ಅವನು) ಪ್ರತಿಯೊಬ್ಬ ಜೀವಿಯು ಏನೆಲ್ಲಾ ಮಾಡುತ್ತಿರುವನೆಂದು ಸದಾ ಮೇಲ್ವಿಚಾರಣೆ ನಡೆಸುತ್ತಿರುವವನು. ಇಷ್ಟಿದ್ದೂ ಅವರು ಅಲ್ಲಾಹನಿಗೆ ಪಾಲುದಾರರನ್ನು ಆರೋಪಿಸುತ್ತಿದ್ದಾರೆ. ಹೇಳಿರಿ; ನೀವು ಅವರ ಹೆಸರುಗಳನ್ನಾದರೂ ತಿಳಿಸಿರಿ. ನೀವೇನು, ಭೂಮಿಯಲ್ಲಿ ಅವನಿಗೆ (ಅಲ್ಲಾಹನಿಗೆ) ತಿಳಿದೇ ಇಲ್ಲದ ವಿಷಯವೊಂದನ್ನು ಅವನಿಗೆ ತಿಳಿಸುತ್ತಿರುವಿರಾ! ಅಥವಾ ನೀವು ಕೇವಲ ಮಾತಿನ ಮಟ್ಟಿಗೆ (ಹಾಗೆ) ಹೇಳುತ್ತಿರುವಿರಾ? ನಿಜವಾಗಿ ಧಿಕ್ಕಾರಿಗಳ ಪಾಲಿಗೆ ಅವರ ವಂಚನೆಯನ್ನು ಚಂದಗಾಣಿಸಿ ಕೊಡಲಾಗಿದೆ ಮತ್ತು ಅವರನ್ನು ಸರಿದಾರಿಯಿಂದ ತಡೆದಿಡಲಾಗಿದೆ. ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವರಿಗೆ ದಾರಿ ತೋರಬಲ್ಲವರು ಯಾರೂ ಇಲ್ಲ

[31] ಅವರಿಗೆ ಈಲೋಕದ ಬದುಕಿನಲ್ಲೂ ಶಿಕ್ಷೆ ಇದೆ. ಇನ್ನು ಪರಲೋಕದ ಶಿಕ್ಷೆಯಂತೂ ತುಂಬಾ ಕಠಿಣವಾಗಿರುವುದು ಮತ್ತು ಅವರನ್ನು ಅಲ್ಲಾಹನಿಂದ ರಕ್ಷಿಸ ಬಲ್ಲವರು ಯಾರೂ ಇಲ್ಲ

[32] ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸ್ವರೂಪ (ಹೀಗಿರುವುದು); ಅದರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅದರ ಫಲಗಳು ಮತ್ತು ಅದರ ನೆರಳು ಶಾಶ್ವತವಾಗಿರುವುದು. ಹೀಗಿರುವುದು, ಧರ್ಮನಿಷ್ಠರ ಅಂತಿಮ ಗತಿ. ಇನ್ನು, (ನರಕದ) ಬೆಂಕಿಯೇ ಧಿಕ್ಕಾರಿಗಳ ಅಂತಿಮ ಗತಿಯಾಗಿರುವುದು

[33] ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು, ನಿಮಗೆ ಇಳಿಸಿಕೊಡಲಾಗಿರುವ ಸಂದೇಶದ ಕುರಿತು ಸಂತೋಷ ಪಡುತ್ತಾರೆ. ಇದರ ಕೆಲವು ಭಾಗಗಳನ್ನು ತಿರಸ್ಕರಿಸುವ ಕೆಲವು ಪಂಗಡಗಳೂ ಇವೆ. ಹೇಳಿರಿ; ನನಗಂತು, ನಾನು ಅಲ್ಲಾಹನನ್ನೇ ಪೂಜಿಸಬೇಕು ಮತ್ತು ಅವನ ಜೊತೆ ಯಾರನ್ನೂ ಪಾಲುಗೊಳಿಸಬಾರದು ಎಂದು ಆದೇಶಿಸಲಾಗಿದೆ. ನಾನು ಅವನ ಕಡೆಗೇ ಆಮಂತ್ರಿಸುತ್ತೇನೆ ಮತ್ತು ನಾನು ಅವನಲ್ಲಿಗೇ ಮರಳಲಿದ್ದೇನೆ

[34] ಇದೇ ರೀತಿ ನಾವು ಈ ಕುರ್‌ಆನ್‌ಅನ್ನು ಅರಬೀ ಭಾಷೆಯಲ್ಲಿರುವ ಆದೇಶದ ರೂಪದಲ್ಲಿ ಇಳಿಸಿರುವೆವು. ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ನೀವು ಅವರ ಅಪೇಕ್ಷೆಗಳನ್ನು ಅನುಸರಿಸಿದರೆ ನಿಮಗೆ ಅಲ್ಲಾಹನೆದುರು ಸಹಾಯಕರಾಗಿ ಮತ್ತು ರಕ್ಷಕರಾಗಿ ಯಾರೂ ಸಿಗಲಾರರು

[35] ನಿಮಗಿಂತ ಹಿಂದೆಯೂ ನಾವು ದೂತರನ್ನು ಕಳಿಸಿದ್ದೆವು ಮತ್ತು ಅವರಿಗೆ ಮಡದಿಯರನ್ನೂ ಮಕ್ಕಳನ್ನೂ ನೀಡಿದ್ದೆವು. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ಪುರಾವೆಯನ್ನು ತರಲು ಯಾವ ದೂತನಿಗೂ ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಕಾಲವು ನಿಶ್ಚಿತವಾಗಿದೆ

[36] ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸಿ ಬಿಡುತ್ತಾನೆ ಮತ್ತು (ತಾನಿಚ್ಛಿಸಿದ್ದನ್ನು) ಉಳಿಸುತ್ತಾನೆ. ಗ್ರಂಥಗಳ ಮಾತೆಯು (ಮೂಲ ಗ್ರಂಥವು) ಅವನ ಬಳಿ ಇದೆ

[37] (ದೂತರೇ,) ನಾವು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವ ಶಿಕ್ಷೆಯ ಒಂದಂಶವನ್ನು (ನಿಮ್ಮ ಜೀವನಾವಧಿಯಲ್ಲೇ) ನಿಮಗೆ ತೋರಿಸಬಹುದು ಅಥವಾ ನಿಮ್ಮನ್ನು ನಾವು ಮೃತರಾಗಿಸಬಹುದು. ಏನಿದ್ದರೂ ನಿಮ್ಮ ಮೇಲಿರುವುದು (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ. ವಿಚಾರಣೆಯ ಹೊಣೆಯು ನಮ್ಮ ಮೇಲಿದೆ

[38] ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಮುದುಡಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅಲ್ಲಾಹನು ಆದೇಶಿಸುತ್ತಾನೆ. ಅವನ ಆದೇಶವನ್ನು ಹಿಂದಿಕ್ಕಬಲ್ಲವರು ಯಾರೂ ಇಲ್ಲ. ಅವನು ಬಹಳ ವೇಗವಾಗಿ ವಿಚಾರಣೆ ಮುಗಿಸುತ್ತಾನೆ

[39] ಅವರಿಗಿಂತ ಹಿಂದಿನವರೂ ಯೋಜನೆಗಳನ್ನು ರೂಪಿಸಿದ್ದಾರೆ. ಅಂತಿಮವಾಗಿ ಎಲ್ಲ ಯೋಜನೆಗಳೂ ಅಲ್ಲಾಹನಿಗೇ ಸೇರಿವೆ. ಪ್ರತಿಯೊಬ್ಬರೂ ಏನನ್ನು ಸಂಪಾದಿಸುತ್ತಿದ್ದಾರೆ ಎಂಬುದು ಅವನಿಗೆ ತಿಳಿದಿದೆ. ಪರಲೋಕದ ಸದ್ಗತಿಯು ಯಾರಿಗೆ ಸಿಗುವುದು ಎಂಬುದನ್ನು ಧಿಕ್ಕಾರಿಗಳು ಬೇಗನೇ ತಿಳಿಯುವರು

[40] (ದೂತರೇ,) ನೀವು ದೂತರಲ್ಲ ಎಂದು ಧಿಕ್ಕಾರಿಗಳು ಹೇಳುತ್ತಾರೆ. ಹೇಳಿರಿ; ನನ್ನ ಹಾಗೂ ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನು ಸಾಕು ಮತ್ತು ಗ್ರಂಥದ ಜ್ಞಾನ ಉಳ್ಳವನು ಸಾಕು

[41] ಅಲಿಫ್, ಲಾಮ್, ರಾ. (ದೂತರೇ,) ಇದು, ನಿಮಗೆ ನಾವು ಇಳಿಸಿಕೊಟ್ಟಿರುವ ಗ್ರಂಥ. ನೀವು ಮಾನವರನ್ನು ಅವರ ಒಡೆಯನ ಆದೇಶದಂತೆ, ಕತ್ತಲುಗಳಿಂದ ಹೊರತಂದು ಬೆಳಕಿನೆಡೆಗೆ ನಡೆಸಬೇಕೆಂದು (ಹಾಗೂ) ಅತ್ಯಂತ ಪ್ರಬಲನೂ ಹೊಗಳಿಕೆಗೆ ಅರ್ಹನೂ ಆಗಿರುವಾತನ (ಅಲ್ಲಾಹನ) ಮಾರ್ಗದತ್ತ ನಡೆಸಬೇಕೆಂದು (ಇದನ್ನು ಕಳಿಸಲಾಗಿದೆ)

[42] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲವೂ ಅಲ್ಲಾಹನಿಗೇ ಸೇರಿದೆ. ಇನ್ನು, ಧಿಕ್ಕಾರಿಗಳಿಗೆ ಕಠೋರ ಶಿಕ್ಷೆಯ ಮೂಲಕ ವಿನಾಶವಿದೆ

[43] ಅವರು ಪರಲೋಕಕ್ಕಿಂತ ಹೆಚ್ಚಾಗಿ ಈ ಲೋಕದ ಬದುಕನ್ನು ಪ್ರೀತಿಸುತ್ತಾರೆ, (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಿರುತ್ತಾರೆ. ಅವರು ದುರ್ಮಾರ್ಗದಲ್ಲಿ ಬಹುದೂರ ಸಾಗಿಬಿಟ್ಟಿದ್ದಾರೆ

ಇಬ್ರಾಹೀಂ

Surah 14

[1] ನಾವು ಜನರಿಗೆ (ಸತ್ಯವನ್ನು) ವಿವರಿಸಲಿಕ್ಕಾಗಿ ಪ್ರತಿಯೊಬ್ಬ ದೂತನನ್ನೂ ಆತನ ಸಮುದಾಯದ ಭಾಷೆಯಲ್ಲೇ ಕಳಿಸಿರುವೆವು. ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸರಿದಾರಿಯಲ್ಲಿ ನಡೆಸುತ್ತಾನೆ. ಅವನು ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[2] ನಿಮ್ಮ ಜನಾಂಗವನ್ನು ಕತ್ತಲುಗಳಿಂದ ಹೊರತಂದು ಬೆಳಕಿನೆಡೆಗೆ ನಡೆಸಿರಿ ಹಾಗೂ ಅವರಿಗೆ ಅಲ್ಲಾಹನ ದಿನಗಳನ್ನು ನೆನಪಿಸಿರಿ ಎನ್ನುತ್ತಾ ನಾವು ಮೂಸಾರನ್ನು ನಮ್ಮ ಸೂಚನೆಗಳ ಜೊತೆ ಕಳುಹಿಸಿದ್ದೆವು. ಇದರಲ್ಲಿ, ಪ್ರತಿಯೊಬ್ಬ ಸಹನಶೀಲ, ಕೃತಜ್ಞ ವ್ಯಕ್ತಿಗೆ ಖಂಡಿತ ಸೂಚನೆಗಳಿವೆ

[3] ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನಿಮಗೆ ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. (ವಿಶೇಷವಾಗಿ) ಅವನು ನಿಮ್ಮನ್ನು ಫಿರ್‌ಔನನ ಜನಾಂಗದವರಿಂದ ವಿಮೋಚಿಸಿದನು. ಅವರು ನಿಮ್ಮನ್ನು ಬಹಳ ಕೆಟ್ಟದಾಗಿ ಪೀಡಿಸುತ್ತಿದ್ದರು, ನಿಮ್ಮ ಪುತ್ರರ ಕೊರಳು ಕೊಯ್ಯುತ್ತಿದ್ದರು ಮತ್ತು ನಿಮ್ಮ ಪುತ್ರಿಯರನ್ನು ಮಾತ್ರ ಜೀವಂತ ವಿಡುತ್ತಿದ್ದರು. ಅದು ನಿಮ್ಮ ಒಡೆಯನ ಕಡೆಯಿಂದ (ನಿಮ್ಮ ಪಾಲಿಗೆ) ಭಾರೀ ಪರೀಕ್ಷೆಯಾಗಿತ್ತು

[4] ಮತ್ತು ‘‘ನೀವು ಕೃತಜ್ಞತೆ ಸಲ್ಲಿಸಿದರೆ ನಾನು ನಿಮಗೆ ಇನ್ನಷ್ಟು ಹೆಚ್ಚಿಸಿ ಕೊಡುವೆನು ಮತ್ತು ನೀವು ಕೃತಘ್ನರಾದರೆ ಖಂಡಿತವಾಗಿಯೂ ನನ್ನ ಶಿಕ್ಷೆಯು ಬಹಳ ತೀವ್ರ ತರದ್ದಾಗಿದೆ’’ ಎಂದು ನಿಮ್ಮೊಡೆಯನು ನಿಮ್ಮನ್ನು ಎಚ್ಚರಿಸಿದ್ದನು

[5] ಮತ್ತು ಮೂಸಾ ಹೇಳಿದರು; ನೀವು ಮಾತ್ರವಲ್ಲ, ಭೂಮಿಯಲ್ಲಿರುವ ಎಲ್ಲರೂ ಕೃತಘ್ನರಾದರೂ (ನಿಮಗೆ ತಿಳಿದಿರಲಿ;) ಅಲ್ಲಾಹನು ಖಂಡಿತವಾಗಿಯೂ ಎಲ್ಲ ಅಪೇಕ್ಷೆಗಳಿಂದ ಮುಕ್ತ್ತನೂ ಪ್ರಶಂಸಾರ್ಹನೂ ಆಗಿದ್ದಾನೆ

[6] ನಿಮಗೇನು, ನಿಮ್ಮ ಹಿಂದಿನ ನೂಹ್‌ರ ಜನಾಂಗ, ಆದ್ ಹಾಗೂ ಸಮೂದ್ ಜನಾಂಗಗಳು ಮತ್ತು ಅವರ ಅನಂತರದವರ ಸುದ್ದಿ ತಲುಪಿಲ್ಲವೇ? ನಿಜವಾಗಿ ಅವರ ಕುರಿತು (ವಾಸ್ತವವು) ಅಲ್ಲಾಹನ ಹೊರತು ಬೇರಾರಿಗೂ ತಿಳಿದಿಲ್ಲ. ಅವರ (ಕಾಲದ) ದೇವದೂತರು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೆ ಅವರು ತಮ್ಮ ಕೈಗಳನ್ನು ಅವರ (ದೂತರ) ಬಾಯಿಗಳಿಗೆ ತಳ್ಳಿದರು ಮತ್ತು ‘‘ಯಾವುದರೊಂದಿಗೆ ನಿಮ್ಮನ್ನು ಕಳಿಸಲಾಗಿದೆಯೋ ಅವನ್ನು ನಾವು ಧಿಕ್ಕರಿಸುತ್ತೇವೆ ಮತ್ತು ಯಾವುದರ ಕಡೆಗೆ ನೀವು ನಮ್ಮನ್ನು ಆಮಂತ್ರಿಸುತ್ತಿರುವಿರೋ ಆ ಕುರಿತು ನಾವು ಘೋರ ಸಂಶಯದಲ್ಲಿದ್ದೇವೆ’’ ಎಂದರು

[7] ಅವರ (ಕಾಲದ) ದೇವದೂತರು, ‘‘ಆಕಾಶಗಳನ್ನು ಮತ್ತು ಭೂಮಿಯನ್ನು ರೂಪಿಸಿದ ಅಲ್ಲಾಹನ ಕುರಿತು ಸಂಶಯವೇ? ಅವನಂತು ನಿಮ್ಮನ್ನು ನಿಮ್ಮ ಪಾಪಗಳಿಂದ ಮುಕ್ತ ಗೊಳಿಸಲಿಕ್ಕಾಗಿ ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲಿಕ್ಕಾಗಿ ನಿಮ್ಮನ್ನು ಆಮಂತ್ರಿಸುತ್ತಿದ್ದಾನೆ’’ ಎಂದರು. ಅದಕ್ಕವರು ಹೇಳಿದರು; ನೀವು ಕೇವಲ ನಮ್ಮಂತಹ ಮಾನವರು. ನಮ್ಮ ತಂದೆ ತಾತಂದಿರು ಪೂಜಿಸುತ್ತಿದ್ದವುಗಳಿಂದ ನೀವು ನಮ್ಮನ್ನು ತಡೆಯ ಬಯಸುತ್ತೀರಿ. ನೀವೀಗ ನಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯನ್ನು (ಪವಾಡವನ್ನು) ತನ್ನಿರಿ

[8] ಅವರ (ಕಾಲದ) ದೇವದೂತರು ಅವರೊಡನೆ ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮಂತಹ ಮಾನವರು, ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಮೇಲೆ ಉಪಕಾರ ತೋರುತ್ತಾನೆ. ಅಲ್ಲಾಹನ ಅಪ್ಪಣೆ ಇಲ್ಲದೆ ನಿಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯನ್ನು (ಪವಾಡವನ್ನು) ತರಲು ನಮಗೆ ಸಾಧ್ಯವಿಲ್ಲ. ವಿಶ್ವಾಸಿಗಳು, ಅಲ್ಲಾಹನಲ್ಲಿ ಮಾತ್ರ ಭರವಸೆ ಇಡಬೇಕು

[9] ಇನ್ನು, ನಾವು ಅಲ್ಲಾಹನಲ್ಲಿ ಭರವಸೆ ಯಾಕಿಡಬಾರದು? ನಿಜವಾಗಿ, ನಮಗೆ ನಮ್ಮ ದಾರಿಗಳನ್ನು ತೋರಿಸಿಕೊಟ್ಟವನು ಅವನೇ. ನೀವು ನಮಗೆ ನೀಡುವ ಸಕಲ ಕಿರುಕುಳಗಳನ್ನು ನಾವು ಸಹಿಸಿಕೊಳ್ಳುವೆವು. ಭರವಸೆ ಇಡುವವರೆಲ್ಲಾ ಅಲ್ಲಾಹನಲ್ಲೇ ಭರವಸೆ ಇಡಬೇಕು

[10] ಧಿಕ್ಕಾರಿಗಳು, ತಮ್ಮ (ಕಾಲದ) ದೂತರೊಡನೆ, ‘‘ನಾವು ಖಂಡಿತ ನಿಮ್ಮನ್ನು ನಮ್ಮ ನಾಡಿನಿಂದ ಹೊರಗಟ್ಟುವೆವು. ಅನ್ಯಥಾ ನೀವು ನಮ್ಮ ಸಮಾಜಕ್ಕೆ ಮರಳಿ ಬರಬೇಕು’’ ಎಂದರು. ಆಗ ಅವರೆಡೆಗೆ (ದೂತರೆಡೆಗೆ) ಅವರ ಒಡೆಯನು ಹೀಗೆಂದು ದಿವ್ಯ ಸಂದೇಶವನ್ನು ಕಳಿಸಿದನು; ನಾವು ಅಕ್ರಮಿಗಳನ್ನು ಖಂಡಿತ ನಾಶಮಾಡುವೆವು –

[11] ಮತ್ತು ಅವರ ಬಳಿಕ ನಾವು ಭೂಮಿಯಲ್ಲಿ ನಿಮ್ಮನ್ನು ನೆಲೆಸುವೆವು. ಇದು, ನನ್ನೆದುರು ನಿಲ್ಲುವ ಭಯ ಹಾಗೂ ನನ್ನ ಎಚ್ಚರಿಕೆಗಳ ಭಯ ಉಳ್ಳವರಿಗೆ (ಇರುವ ಶುಭವಾರ್ತೆ)

[12] ಅವರು ಒಂದು ತೀರ್ಪನ್ನು ಅಪೇಕ್ಷಿಸಿದರು ಮತ್ತು ಪ್ರತಿಯೊಬ್ಬ ಹಠಮಾರಿ, ಅಹಂಕಾರಿಯು ನಾಶವಾದನು

[13] ಅವನ ಮುಂದೆ ನರಕವಿದೆ – (ಅಲ್ಲಿ) ಅವನಿಗೆ ಕೀವು ತುಂಬಿದ ಪಾನೀಯವನ್ನು ಕುಡಿಸಲಾಗುವುದು

[14] ಅವನು ಅದನ್ನು ನುಂಗಲು ಯತ್ನಿಸುವನು. ಆದರೆ ಅದನ್ನು ಗಂಟಲಿಂದ ಕೆಳಗಿಳಿಸಲು ಅವನಿಂದಾಗದು. ಮರಣವು ಎಲ್ಲೆಡೆಯಿಂದಲೂ ಅವನೆಡೆಗೆ ಧಾವಿಸಿ ಬರುವುದು. ಆದರೆ ಅವನು ಸಾಯಲಾರನು. ಭಾರೀ ಘೋರವಾದ ಇನ್ನೊಂದು ಶಿಕ್ಷೆಯನ್ನು ಅವನು ಎದುರಿಸಬೇಕಾಗುವುದು

[15] ತಮ್ಮ ಒಡೆಯನನ್ನು ಧಿಕ್ಕರಿಸಿದವರ ಸ್ಥಿತಿಯು ಹೀಗಿದೆ; ಅವರ ಕರ್ಮಗಳು, ಬಿರುಗಾಳಿ ಬೀಸಿದ ದಿನ ಅದರ ಜೊತೆ ಹಾರಿ ಹೋಗುವ ಬೂದಿಗೆ ಸಮಾನವಾಗಿವೆ. ತಮ್ಮ ಯಾವ ಸಂಪಾದನೆಯ ಮೇಲೂ ಅವರಿಗೆ ಯಾವುದೇ ನಿಯಂತ್ರಣ ಇರಲಾರದು. ಇದುವೇ ದುರ್ಮಾರ್ಗದಲ್ಲಿನ ಬಹುದೂರದ ಹಂತವಾಗಿದೆ

[16] ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಕರಾರುವಕ್ಕಾಗಿ ಸೃಷ್ಟಿಸಿರುವುದನ್ನು ನೀವು ಕಾಣುತ್ತಿಲ್ಲವೇ,? ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸ ಜೀವ ಜಾತಿಯೊಂದನ್ನು ತರಬಲ್ಲನು

[17] ಅಲ್ಲಾಹನ ಮಟ್ಟಿಗೆ ಅದು ಕಷ್ಟದ ಕೆಲಸವೇನಲ್ಲ

[18] ಅವರೆಲ್ಲರೂ ಅಲ್ಲಾಹನೆದುರು ಹಾಜರಾಗುವರು. (ಆಗ) ದೊಡ್ಡಸ್ತಿಕೆ ತೋರುತ್ತಿದ್ದವರೊಡನೆ ದುರ್ಬಲರು, ‘‘ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ನಮ್ಮ ಮೇಲಿಂದ ಅಲ್ಲಾಹನ ಶಿಕ್ಷೆಯನ್ನು ಸ್ವಲ್ಪವಾದರೂ ನಿವಾರಿಸಬಲ್ಲಿರಾ?’’ ಎಂದು ಕೇಳುವರು. ಅವರು ಹೇಳುವರು; ಒಂದುವೇಳೆ ಅಲ್ಲಾಹನು ನಮಗೆ ಸರಿ ದಾರಿಯನ್ನು ತೋರಿದ್ದರೆ ನಾವು ನಿಮಗೆ ಸರಿ ದಾರಿ ತೋರಿಸುತ್ತಿದ್ದೆವು. ಈಗ ನಾವು ರೋದಿಸಿದರೂ ಒಂದೇ, ಸಹಿಸಿಕೊಂಡರೂ ಒಂದೇ. ನಮಗೆ ಉಳಿವಂತೂ ಇಲ್ಲ

[19] (ಅಂತಿಮ ವಿಚಾರಣೆಯ ದಿನ) ಎಲ್ಲವೂ ತೀರ್ಮಾನವಾದ ಬಳಿಕ ಶೈತಾನನು ಹೇಳುವನು; ನಿಮಗೆ ಅಲ್ಲಾಹನು ಮಾಡಿದ ವಾಗ್ದಾನವೇ ಸತ್ಯದ ವಾಗ್ದಾನವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆನು. ಆದರೆ ನಾನು ಅದನ್ನು ಮುರಿದು ಬಿಟ್ಟೆನು. ನನಗೆ ನಿಮ್ಮ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ನಾನು ನಿಮ್ಮನ್ನು ಆಮಂತ್ರಿಸಿದೆ. ನೀವು ನನ್ನ ಕರೆಗೆ ಓಗೊಟ್ಟಿರಿ. (ಇಂದು) ನನ್ನನ್ನು ದೂಷಿಸಬೇಡಿ. ನೀವು ಸ್ವತಃ ನಿಮ್ಮನ್ನೇ ದೂಷಿಸಿರಿ. (ಇಂದು) ನಿಮ್ಮ ನೋವನ್ನು ನಾನು ನೀಗಿಸಲಾರೆ ಮತ್ತು ನನ್ನ ನೋವನ್ನು ನೀವು ನೀಗಿಸಲಾರಿರಿ. ಈ ಹಿಂದೆ ನೀವು ನನ್ನನ್ನು (ದೇವರ) ಪಾಲುದಾರನಾಗಿಸಿದ್ದನ್ನು ನಾನು ಧಿಕ್ಕರಿಸುತ್ತೇನೆ. ಅಕ್ರಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ಕಾದಿದೆ

[20] ಸತ್ಯವನ್ನು ನಂಬಿದ್ದವರು ಹಾಗೂ ಸತ್ಕರ್ಮವೆಸಗಿದವರು, ತಳಭಾಗದಲ್ಲಿ ನದಿಗಳು ಹರಿಯುವಂತಹ ಉದ್ಯಾನಗಳೊಳಗೆ ಸೇರಿಸಲ್ಪಡುವರು. ಅಲ್ಲಿ ಅವರು ತಮ್ಮ ಒಡೆಯನ ಅಪ್ಪಣೆಯಂತೆ ಸದಾ ಕಾಲ ಇರುವರು. ಅಲ್ಲಿ ‘ಸಲಾಮ್’ (ಶಾಂತಿ) ಎಂಬುದೇ ಅವರ ಶುಭಾಶಯವಾಗಿರುವುದು

[21] ಅಲ್ಲಾಹನು ಎಂತಹ ಉದಾಹರಣೆ ನೀಡಿರುವನೆಂದು ನೀವು ಕಂಡಿರಾ? ಪಾವನ ವಚನವು, ಕಾಂಡವು ಬಲಿಷ್ಠವಾಗಿರುವ ಹಾಗೂ ಗೆಲ್ಲುಗಳು ಆಕಾಶದ ವರೆಗಿರುವ ಒಂದು ಪಾವನ ಮರದಂತಿದೆ

[22] ಅದು ತನ್ನ ಒಡೆಯನ (ಅಲ್ಲಾಹನ ) ಅಪ್ಪಣೆಯಂತೆ. ಪ್ರತಿಯೊಂದು ಕೊಯ್ಲಿನ ವೇಳೆ ತನ್ನ ಫಲವನ್ನು ನೀಡುತ್ತಲೇ ಇರುತ್ತದೆ. (ಈರೀತಿ) ಅಲ್ಲಾಹನು, ಮಾನವರು ಪಾಠ ಕಲಿಯಬೇಕೆಂದು ಅವರಿಗೆ ಉದಾಹರಣೆಗಳನ್ನು ನೀಡುತ್ತಾನೆ

[23] ಅತ್ತ, ಮಲಿನ ವಚನದ ಸ್ಥಿತಿಯು, ನೆಲದ ಮೇಲಿಂದ ಕೀಳಲಾದ ಮಲಿನ ಗಿಡದಂತಿದೆ. ಅದಕ್ಕೆ ಸ್ಥಿರತೆ ಎಂಬುದಿಲ್ಲ

[24] ಅಲ್ಲಾಹನು ವಿಶ್ವಾಸಿಗಳನ್ನು ಈ ಲೋಕದಲ್ಲೂ ಪರಲೋಕದಲ್ಲೂ ಸ್ಥಿರವಾದ ಮಾತಿನಲ್ಲಿ (ಸನ್ಮಾರ್ಗದಲ್ಲಿ) ಸ್ಥಿರವಾಗಿಡುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸಿಬಿಡುತ್ತಾನೆ. ಅಲ್ಲಾಹನು ತಾನಿಚ್ಛಿಸಿದ್ದನ್ನೇ ಮಾಡುತ್ತಾನೆ

[25] ಅಲ್ಲಾಹನ ಅನುಗ್ರಹಗಳಿಗೆ ಪ್ರತಿಯಾಗಿ ಕೃತಘ್ನತೆ ತೋರಿದವರನ್ನು ಹಾಗೂ ತಮ್ಮ ಜನಾಂಗವನ್ನು ವಿನಾಶದ ಮನೆಗೆ ಇಳಿಸಿದವರನ್ನು ನೀವು ಕಂಡಿರಾ

[26] ನರಕ! ಅವರು ಅದರೊಳಗೆ ಪ್ರವೇಶಿಸುವರು ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ

[27] ಅವರು ಅಲ್ಲಾಹನ ಹಾದಿಯಿಂದ ತಮ್ಮನ್ನು ದೂರಗೊಳಿಸಲಿಕ್ಕಾಗಿ ಅವನಿಗೆ ಪಾಲುದಾರರನ್ನು ನೇಮಿಸಿಕೊಂಡರು. ಹೇಳಿರಿ; ಸದ್ಯ ಸುಖ ಅನುಭವಿಸಿಕೊಳ್ಳಿರಿ. ಆದರೆ ಅಂತಿಮವಾಗಿ ನೀವು ಖಂಡಿತ ಬೆಂಕಿಯ ಕಡೆಗೇ ಮರಳಬೇಕಾಗುವುದು

[28] ಸತ್ಯದಲ್ಲಿ ನಂಬಿಕೆ ಇಟ್ಟಿರುವ ನನ್ನ ದಾಸರೊಡನೆ ಹೇಳಿರಿ; ಯಾವುದೇ ವ್ಯವಹಾರಕ್ಕಾಗಲಿ ಸ್ನೇಹಕ್ಕಾಗಲಿ ಅವಕಾಶವಿಲ್ಲದ ದಿನವು ಬರುವುದಕ್ಕೆ ಮುನ್ನ ಅವರು ನಮಾಝ್ ಅನ್ನು ಪಾಲಿಸಲಿ ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಗುಪ್ತವಾಗಿಯೂ ಬಹಿರಂಗವಾಗಿಯೂ ಖರ್ಚುಮಾಡಲಿ

[29] ಅಲ್ಲಾಹನೇ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು, ಆಕಾಶದಿಂದ ನೀರನ್ನು ಸುರಿಸಿದವನು, ಅದರ ಮೂಲಕ ನಿಮಗೆ ಆಹಾರವಾಗಿ ಬೆಳೆಗಳನ್ನು ಬೆಳೆಸಿದವನು ಮತ್ತು ತನ್ನ ಆದೇಶ ಪ್ರಕಾರ ಕಡಲಲ್ಲಿ ಚಲಿಸುವಂತೆ ಹಡಗನ್ನು ನಿಮಗೆ ಅಧೀನಗೊಳಿಸಿದವನು ಮತ್ತು (ಅವನೇ) ನದಿಗಳನ್ನು ನಿಮಗೆ ಅಧೀನಗೊಳಿಸಿದವನು

[30] (ಅವನೇ) ನಿರ್ದಿಷ್ಟ ಕಕ್ಷೆಯಲ್ಲಿ ಚಲಿಸುವ ಸೂರ್ಯ ಮತ್ತು ಚಂದ್ರರನ್ನು ನಿಮಗೆ ಅಧೀನಗೊಳಿಸಿದವನು ಹಾಗೂ ರಾತ್ರಿ ಮತ್ತು ಹಗಲನ್ನು ನಿಮಗೆ ಅಧೀನಗೊಳಿಸಿದವನು

[31] (ಅವನೇ) ನೀವು ಕೇಳಿದ ಎಲ್ಲವನ್ನೂ ನಿಮಗೆ ನೀಡಿದವನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲಾರಂಭಿಸಿದರೆ ಅದನ್ನು ಪೂರ್ತಿಗೊಳಿಸಲಾರಿರಿ. ಖಂಡಿತವಾಗಿಯೂ ಮಾನವನು ಮಹಾ ಅಕ್ರಮಿ ಹಾಗೂ ಕೃತಘ್ನನಾಗಿದ್ದಾನೆ

[32] ಇಬ್ರಾಹೀಮರು ಹೇಳಿದ್ದರು; ನನ್ನೊಡೆಯಾ, ಈ ನಾಡನ್ನು ಶಾಂತಿಯ ನಾಡಾಗಿ ಮಾಡು ಹಾಗೂ ನನ್ನನ್ನು ಮತ್ತು ನನ್ನ ಸಂತತಿಯನ್ನು ಮೂರ್ತಿ ಪೂಜೆಯಿಂದ ದೂರವಿಡು

[33] ನನ್ನೊಡೆಯಾ, ಖಂಡಿತವಾಗಿಯೂ ಅವರು ಬಹಳಷ್ಟು ಮಾನವರನ್ನು ದಾರಿಗೆಡಿಸಿದ್ದಾರೆ. ನನ್ನನ್ನು ಅನುಸರಿಸಿದವನು ಖಂಡಿತ ನನ್ನವನು. ಇನ್ನು, ನನಗೆ ಅವಿಧೇಯನಾದವನು – ನೀನು ಖಂಡಿತವಾಗಿಯೂ ಕ್ಷಮಿಸುವವನು ಮತ್ತು ಕರುಣಾಳುವಾಗಿರುವೆ

[34] ನಮ್ಮೊಡೆಯಾ, ನಾನು ನನ್ನ ಮಕ್ಕಳನ್ನು ನಿನ್ನ ಪವಿತ್ರ ಭವನದ ಬಳಿ, ಬೆಳೆ ಇಲ್ಲದ ಬಯಲಲ್ಲಿ ನೆಲೆಸುತ್ತಿದ್ದೇನೆ. ನಮ್ಮೊಡೆಯಾ, ಅವರು ನಮಾಝ್‌ಅನ್ನು ಪಾಲಿಸಬೇಕೆಂದು (ಹೀಗೆ ಮಾಡಿದ್ದೇನೆ). ಅವರು ಕೃತಜ್ಞರಾಗಲೆಂದು, ನೀನು, ಜನರ ಮನಗಳು ಅವರೆಡೆಗೆ ಒಲಿಯುವಂತೆ ಮಾಡು ಮತ್ತು ಅವರಿಗೆ ಫಲಗಳ ಆಹಾರವನ್ನು ಒದಗಿಸು

[35] ನಮ್ಮೊಡೆಯಾ, ಖಂಡಿತವಾಗಿಯೂ ನಾವು ಬಚ್ಚಿಡುವ ಮತ್ತು ನಾವು ಬಹಿರಂಗಗೊಳಿಸುವ ಎಲ್ಲವನ್ನೂ ನೀನು ಬಲ್ಲೆ. ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಯಾವ ವಸ್ತುವೂ ಅಲ್ಲಾಹನಿಂದ ಅಡಗಿರುವುದಿಲ್ಲ

[36] ನನ್ನ ಮುದಿ ವಯಸ್ಸಿನಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್ಹಾಕ್‌ರನ್ನು ದಯಪಾಲಿಸಿದ ಅಲ್ಲಾಹನಿಗೆ ಎಲ್ಲ ಪ್ರಶಂಸೆಗಳು. ಖಂಡಿತವಾಗಿಯೂ ನನ್ನ ಒಡೆಯನು ಪ್ರಾರ್ಥನೆಯನ್ನು ಕೇಳುವವನಾಗಿದ್ದಾನೆ

[37] ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಂತತಿಗಳನ್ನು ನಮಾಝ್‌ನ ಪಾಲಕರಾಗಿ ಮಾಡು. ಮತ್ತು ನಮ್ಮೊಡೆಯಾ, ಪ್ರಾರ್ಥನೆಯನ್ನು ಸ್ವೀಕರಿಸು

[38] ನಮ್ಮೊಡೆಯಾ, ವಿಚಾರಣೆಯ ದಿನ ನನ್ನನ್ನು, ನನ್ನ ತಂದೆ ತಾಯಿಯನ್ನು ಮತ್ತು ವಿಶ್ವಾಸಿಗಳನ್ನು ಕ್ಷಮಿಸು

[39] ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನಿಗೇನೂ ತಿಳಿದಿಲ್ಲವೆಂದು ನೀವು ಭಾವಿಸಬೇಡಿ. ನಿಜವಾಗಿ ಅವನು, ಕಣ್ಣುಗಳು ಕೋರೈಸುವ ಒಂದು ದಿನದ ತನಕ ಅವರಿಗೆ ಕಾಲಾವಕಾಶ ನೀಡುತ್ತಿದ್ದಾನೆ

[40] ಅಂದು ಅವರು ತಮ್ಮ ತಲೆಗಳನ್ನು ಮೇಲೆತ್ತಿ ಓಡುತ್ತಿರುವರು, ಅವರ ದೃಷ್ಟಿಗಳು ಅವರೆಡೆಗೆ ಮರಳಲಾರವು ಮತ್ತು ಅವರ ಮನಸ್ಸುಗಳು ತೀರಾ ಹತಾಶವಾಗಿರುವವು

[41] ಅವರ ಮೇಲೆ ಶಿಕ್ಷೆಯು ಬಂದೆರಗುವ ಆ ದಿನದ ಕುರಿತು ಜನರನ್ನು ಎಚ್ಚರಿಸಿರಿ. ಅಂದು ಅಕ್ರಮಿಗಳು ಹೇಳುವರು; ನಮ್ಮೊಡೆಯಾ, ನಮಗೆ ಸ್ವಲ್ಪ ಸಮಯದ ಮಟ್ಟಿಗೆ ಕಾಲಾವಕಾಶವನ್ನು ನೀಡು. ನಾವು ನಿನ್ನ ಕರೆಯನ್ನು ಸ್ವೀಕರಿಸುವೆವು ಮತ್ತು ನಿನ್ನ ದೂತರನ್ನು ಅನುಸರಿಸುವೆವು. (ಅವರಿಗೆ ಉತ್ತರಸಿಗುವುದು;) ‘‘ನಿಮಗೆ ಅಂತ್ಯವೇ ಇಲ್ಲವೆಂದು ನೀವು ಈ ಹಿಂದೆ ಆಣೆ ಹಾಕುತ್ತಿರಲಿಲ್ಲವೇ?’’

[42] ಸ್ವತಃ ತಮ್ಮ ಮೇಲೆ ಅಕ್ರಮವೆಸಗಿದ್ದವರ ನಿವಾಸಗಳಲ್ಲಿ ನೀವು ವಾಸವಾಗಿದ್ದಿರಿ. ಅವರಿಗೆ ನಾವೇನು ಮಾಡಿದೆವು ಎಂಬುದನ್ನು ನಾವು ನಿಮಗೆ ವಿವರಿಸಿರುವೆವು. ನಾವು(ಅವರನ್ನು) ನಿಮ್ಮ ಪಾಲಿಗೆ ಪಾಠವಾಗಿಸಿದ್ದೆವು

[43] ಅವರು ಸಂಚುಗಳನ್ನು ಹೂಡಿದ್ದರು. ಅವು ಪರ್ವತಗಳನ್ನು ನಡುಗಿಸಬಲ್ಲ ಸಂಚುಗಳಾಗಿದ್ದರೂ, (ಇದೀಗ) ಅವರ ಸಂಚುಗಳೆಲ್ಲಾ ಅಲ್ಲಾಹನ ಮುಂದಿವೆ

[44] ಅಲ್ಲಾಹನು ತನ್ನ ದೂತರಿಗೆ ನೀಡಿದ ವಚನವನ್ನು ಉಲ್ಲಂಘಿಸುವನೆಂದು ನೀವೆಂದೂ ಭಾವಿಸಬೇಡಿ. ಖಂಡಿತವಾಗಿಯೂ ಅಲ್ಲಾಹನು ಭಾರೀ ಬಲಿಷ್ಠ ಪ್ರತೀಕಾರ ತೀರಿಸುವವನಾಗಿದ್ದಾನೆ

[45] ಭೂಮಿಯನ್ನು ಬೇರೊಂದು ಭೂಮಿಯಾಗಿ ಬದಲಿಸಲಾಗುವ ಮತ್ತು ಆಕಾಶಗಳನ್ನು (ಬದಲಿಸಲಾಗುವ) ಆ ದಿನ ಅವರೆಲ್ಲರೂ ಆ ಪ್ರಚಂಡ ಶಕ್ತಿವಂತನಾದ ಏಕಮಾತ್ರ ಅಲ್ಲಾಹನೆಡೆಗೆ ಧಾವಿಸುವರು

[46] ಅಂದು ನೀವು ಕಾಣುವಿರಿ, ಅಪರಾಧಿಗಳನ್ನು ಪರಸ್ಪರರ ಜೊತೆಗೆ, ಸರಪಣಿಗಳಿಂದ ಬಿಗಿದಿಡಲಾಗುವುದು

[47] ಅವರ ಉಡುಗೆಗಳು ಗಂಧಕದ್ದಾಗಿರುವವು ಮತ್ತು ಬೆಂಕಿಯ ಜ್ವಾಲೆಗಳು ಅವರ ಮುಖಗಳನ್ನು ಆವರಿಸಿರುವವು

[48] ಅಲ್ಲಾಹನು ಪ್ರತಿಯೊಬ್ಬ ಜೀವಿಗೂ ಅವನ ಸಂಪಾದನೆಯ ಫಲ ನೀಡಲಿಕ್ಕಾಗಿ (ಹೀಗಾಗುವುದು). ಖಂಡಿತವಾಗಿಯೂ ಅಲ್ಲಾಹನು ಬಹಳ ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ

[49] ಇದು (ಕುರ್‌ಆನ್) ಎಲ್ಲ ಮಾನವರಿಗಾಗಿ ಇರುವ ಒಂದು ಪ್ರಕಟಣೆಯಾಗಿದೆ. ಈ ಮೂಲಕ ಅವರು ಎಚ್ಚರಗೊಳ್ಳಲಿ ಹಾಗೂ ಅವನೊಬ್ಬನು (ಅಲ್ಲಾಹನು) ಮಾತ್ರ ಪೂಜೆಗೆ ಅರ್ಹನು ಎಂಬುದನ್ನು ಅವರು ಅರಿಯಲಿ ಮತ್ತು ಬುದ್ಧಿಯುಳ್ಳವರು ಪಾಠಕಲಿಯಲಿ ಎಂದು (ಇದನ್ನು ಕಳಿಸಲಾಗಿದೆ)

[50] ಅಲಿಫ್ ಲಾಮ್ ರಾ – ಇವು ಗ್ರಂಥದ ಹಾಗೂ ಬಹಳ ಸ್ಪಷ್ಟವಾಗಿರುವ ಕುರ್‌ಆನ್‌ನ ವಚನಗಳು

[51] ತಾವು ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಧಿಕ್ಕಾರಿಗಳು ಅಪಾರ ಆಶೆ ಪಡುವರು

[52] ಸದ್ಯ ಅವರನ್ನು ಬಿಟ್ಟು ಬಿಡಿರಿ. ಅವರು ತಿನ್ನುತ್ತಲೂ, ಸುಖ ಭೋಗಗಳಲ್ಲೂ ತಲ್ಲೀನರಾಗಿರಲಿ. ಅವರ ಹುಸಿ ನಿರೀಕ್ಷೆಯು ಅವರನ್ನು ಭ್ರಮೆಯಲ್ಲಿರಿಸಲಿ. (ವಾಸ್ತವವನ್ನು) ಅವರು ಬಹುಬೇಗನೇ ಅರಿಯುವರು

ಶಿಲಾಮಯ ಪ್ರದೇಶ

Surah 15

[1] ಒಂದು ಲಿಖಿತ ಕಾಲವನ್ನು ನಿಗದಿಪಡಿಸದೆ ನಾವು ಯಾವ ಜನಾಂಗವನ್ನೂ ನಾಶ ಮಾಡಿದ್ದಿಲ್ಲ

[2] ತನ್ನ ನಿಗದಿತ ಅವಧಿಯನ್ನು ಮೀರಿ ಮುನ್ನಡೆಯಲು ಅಥವಾ ಅದರಿಂದ ಹಿಂದೆ ಉಳಿಯಲು ಯಾವ ಸಮುದಾಯಕ್ಕೂ ಸಾಧ್ಯವಾಗದು

[3] ಅವರು (ಧಿಕ್ಕಾರಿಗಳು) ಹೇಳಿದರು; ‘‘ದಿವ್ಯ ಉಪದೇಶ ಇಳಿಸಿ ಕೊಡಲಾಗಿರು ವವನೇ, ನೀನೊಬ್ಬ ಹುಚ್ಚನೇ ಸರಿ

[4] ನೀನು ಸತ್ಯವಂತನಾಗಿದ್ದರೆ, ನೀನೇಕೆ ನಮ್ಮ ಬಳಿಗೆ ಮಲಕ್‌ಗಳನ್ನು ಕರೆತರುವುದಿಲ್ಲ?’’

[5] ನಿಜವಾಗಿ ನಾವು ಮಲಕ್‌ಗಳನ್ನು ಸತ್ಯದೊಂದಿಗೆ ಮಾತ್ರ ಕಳುಹಿಸುತ್ತೇವೆ. ಆದರೆ ಆಗ ಅವರಿಗೆ (ಧಿಕ್ಕಾರಿಗಳಿಗೆ) ಹೆಚ್ಚಿನ ಕಾಲಾವಧಿ ನೀಡಲಾಗುವುದಿಲ್ಲ

[6] ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿ ಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ

[7] ನಿಮಗಿಂತ ಹಿಂದಿನ ಜನವರ್ಗಗಳಲ್ಲೂ ನಾವು (ದೂತರನ್ನು) ರವಾನಿಸಿದ್ದೆವು

[8] ಅವರ ಬಳಿಗೆ ಬಂದ ದೂತರಲ್ಲಿ ಯಾರೂ ಅಪಹಾಸ್ಯಕ್ಕೆ ತುತ್ತಾಗದೆ ಇರಲಿಲ್ಲ

[9] ಈ ರೀತಿ ನಾವು ಅದನ್ನು (ಅಪಹಾಸ್ಯವನ್ನು) ಅಪರಾಧಿಗಳ ಮನಸ್ಸುಗಳೊಳಗೆ ಬಿತ್ತಿರುತ್ತೇವೆ

[10] ಅವರು ಇದನ್ನು (ಈ ಉಪದೇಶವನ್ನು) ನಂಬಲಾರರು. ಅದುವೇ, ಹಿಂದಿನವರ ಸಂಪ್ರದಾಯವಾಗಿದೆ

[11] ಒಂದು ವೇಳೆ ನಾವು ಅವರ ಪಾಲಿಗೆ ಆಕಾಶದ ಒಂದು ಬಾಗಿಲನ್ನು ತೆರೆದಿದ್ದರೆ ಮತ್ತು ಅವರು ಆ ಮೂಲಕ ಮೇಲೇರುತ್ತಲೇ ಇದ್ದಿದ್ದರೆ –

[12] ಆಗಲೂ ಅವರು, ‘‘ನಮ್ಮ ದೃಷ್ಟಿಗಳನ್ನು ವಂಚಿಸಲಾಗಿದೆ, ನಿಜವಾಗಿ ನಮ್ಮನ್ನು ಮಂತ್ರ ಮುಗ್ಧಗೊಳಿಸಲಾಗಿದೆ’’ ಎಂದೇ ಹೇಳುತ್ತಿದ್ದರು

[13] ಖಂಡಿತವಾಗಿಯೂ ನಾವು ಆಕಾಶದಲ್ಲಿ ತಾರಾ ಮಂಡಲಗಳನ್ನು ನಿರ್ಮಿಸಿದೆವು ಮತ್ತು ನಾವು ಅವುಗಳನ್ನು ನೋಡುವವರ ಪಾಲಿಗೆ ಅಲಂಕಾರವಾಗಿಸಿದೆವು

[14] ಮತ್ತು ನಾವು ಅವುಗಳನ್ನು ಎಲ್ಲ ಶಪಿತ ಶೈತಾನರಿಂದ ಸುರಕ್ಷಿತವಾಗಿಟ್ಟೆವು

[15] ಕದ್ದು ಆಲಿಸಲು ಪ್ರಯತ್ನಿಸುವಾತನನ್ನು ಒಂದು ಉಜ್ವಲ ಬೆಂಕಿಯು ಹಿಂಬಾಲಿಸುತ್ತದೆ

[16] ಹಾಗೆಯೇ ನಾವು ಭೂಮಿಯನ್ನು ಹರಡಿದೆವು ಮತ್ತು ಅದರಲ್ಲಿ ಬೆಟ್ಟಗಳನ್ನು ನೆಟ್ಟೆವು ಹಾಗೂ ಅದರಲ್ಲಿ ಎಲ್ಲವನ್ನೂ ಸಮರ್ಪಕ ಪ್ರಮಾಣದಲ್ಲಿ ಬೆಳೆಸಿದೆವು

[17] ಅದರಲ್ಲಿ ನಾವು ನಿಮಗೂ ನೀವು ಯಾರ ಅನ್ನದಾತರಲ್ಲವೋ ಅವರಿಗೂ ಜೀವನೋಪಾಯಗಳನ್ನು ಒದಗಿಸಿದೆವು

[18] ನಮ್ಮ ಬಳಿ ಪ್ರತಿಯೊಂದು ವಸ್ತುವಿನ ಭಂಡಾರಗಳೇ ಇವೆ. (ಆದರೆ) ನಾವು ಅವುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಇಳಿಸಿಕೊಡುತ್ತೇವೆ

[19] ನಾವು ನೀರು ತುಂಬಿದ ಗಾಳಿಯನ್ನು ರವಾನಿಸಿದೆವು ಮತ್ತು ನಾವು ಆಕಾಶದಿಂದ ನೀರನ್ನು ಇಳಿಸಿ ಅದನ್ನು ನಿಮಗೆ ಕುಡಿಸಿದೆವು. ಅದೇನೂ ನಿಮ್ಮ ಸಂಗ್ರಹದಲ್ಲಿರಲಿಲ್ಲ

[20] ಖಂಡಿತ ನಾವೇ (ಎಲ್ಲರನ್ನೂ) ಜೀವಂತಗೊಳಿಸುವವರು ಹಾಗೂ ಸಾಯಿಸುವವರಾಗಿದ್ದೇವೆ ಮತ್ತು (ಅಂತಿಮವಾಗಿ) ನಾವೇ ಎಲ್ಲರ ಉತ್ತರಾಧಿಕಾರಿಗಳಾಗಿರುತ್ತೇವೆ

[21] ನಿಮ್ಮಲ್ಲಿ ಮುಂದೆ ದಾಟಿ ಹೋದವರನ್ನೂ ನಾವು ಖಂಡಿತ ಬಲ್ಲೆವು ಮತ್ತು ಹಿಂದೆ ಉಳಿದಿರುವವರನ್ನೂ ನಾವು ಖಂಡಿತ ಬಲ್ಲೆವು

[22] ಖಂಡಿತ ನಿಮ್ಮ ಒಡೆಯನೇ ಅವರೆಲ್ಲರನ್ನೂ ಒಂದೆಡೆ ಸೇರಿಸುವನು. ಅವನು ಖಂಡಿತ ತುಂಬಾ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ

[23] ಖಂಡಿತವಾಗಿಯೂ ನಾವೇ ಮಾನವನನ್ನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವೆವು

[24] ಅದಕ್ಕಿಂತಲೂ ಮುನ್ನ ನಾವು ತೀಕ್ಷ್ಣವಾದ ಬೆಂಕಿಯಿಂದ ಜಿನ್ನ್‌ಗಳನ್ನು ಸೃಷ್ಟಿಸಿದ್ದೆವು

[25] ನಿಮ್ಮ ಒಡೆಯನು, ಮಲಕ್‌ಗಳೊಡನೆ ಹೀಗೆಂದಿದ್ದನು; ನಾನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ

[26] ನಾನು ಅವನನ್ನು ಸಜ್ಜುಗೊಳಿಸಿ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ

[27] ಅದರಂತೆ, ಎಲ್ಲ ಮಲಕ್‌ಗಳೂ ಸಾಷ್ಟಾಂಗವೆರಗಿದರು

[28] ಆದರೆ ಇಬ್ಲೀಸನ ಹೊರತು. ಅವನು, ಸಾಷ್ಟಾಂಗ ವೆರಗಿದವರ ಜೊತೆ ಸೇರಲು ನಿರಾಕರಿಸಿದನು

[29] ಅವನು (ಅಲ್ಲಾಹನು) ಕೇಳಿದನು; ಓ ಇಬ್ಲೀಸ್, ನೀನೇಕೆ ಸಾಷ್ಟಾಂಗವೆರಗಿದವರ ಜೊತೆ ಸೇರಲಿಲ್ಲ

[30] ಅವನು (ಇಬ್ಲೀಸ್) ಹೇಳಿದನು; ನೀನು ಆವೆಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವ ಮಾನವನಿಗೆ ಸಾಷ್ಟಾಂಗ ವೆರಗುವವನು ನಾನಲ್ಲ

[31] ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ಖಂಡಿತವಾಗಿಯೂ ನೀನು ಶಪಿತನು

[32] ಅಂತಿಮ ವಿಚಾರಣೆಯ ದಿನದವರೆಗೂ ನಿನ್ನ ಮೇಲೆ ಶಾಪವಿರುವುದು

[33] ಅವನು ಹೇಳಿದನು; ‘‘ನನ್ನೊಡೆಯಾ, (ಎಲ್ಲ ನಿರ್ಜೀವಿಗಳನ್ನು) ಜೀವಂತಗೊಳಿಸಲಾಗುವ ದಿನದ ತನಕ ನನಗೆ ಕಾಲಾವಕಾಶವನ್ನು ನೀಡು.’’

[34] ಅವನು (ಅಲ್ಲಾಹನು) ಹೇಳಿದನು; ಇದೋ, ನಿನಗೆ ಕಾಲಾವಕಾಶ ನೀಡಲಾಗಿದೆ

[35] – ಒಂದು ನಿರ್ದಿಷ್ಟ ದಿನದ ವರೆಗೆ

[36] ಅವನು (ಇಬ್ಲೀಸ್) ಹೇಳಿದನು; ನನ್ನೊಡೆಯಾ, ನೀನು ನನ್ನನ್ನು ದಾರಿ ತಪ್ಪಿಸಿರುವುದರಿಂದ ನಾನು (ತಪ್ಪು ದಾರಿಯನ್ನು) ಭೂಮಿಯಲ್ಲಿರುವವರಿಗೆ ಚಂದಗಾಣಿಸುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸಿ ಬಿಡುವೆನು

[37] ಅವರ ಪೈಕಿ ನಿನ್ನ ಆಯ್ದ ದಾಸರ ಹೊರತು

[38] ಅವನು (ಅಲ್ಲಾಹನು) ಹೇಳಿದನು; ಇದು ನನ್ನ ಕಡೆಗಿರುವ ನೇರ ಮಾರ್ಗ

[39] ಖಂಡಿತವಾಗಿಯೂ ಆ ನನ್ನ ದಾಸರ ಮೇಲೆ ನಿನ್ನ ಅಧಿಕಾರವೇನೂ ನಡೆಯದು – ನಿನ್ನನ್ನು ಅನುಸರಿಸಿದ ದಾರಿಗೇಡಿಗಳ ಹೊರತು

[40] ಖಂಡಿತವಾಗಿಯೂ, ನರಕವೇ ಅವರೆಲ್ಲರಿಗೆ ವಾಗ್ದಾನ ಮಾಡಲಾದ ನೆಲೆಯಾಗಿದೆ

[41] ಅದಕ್ಕೆ ಏಳು ಬಾಗಿಲುಗಳಿರುವವು. ಪ್ರತಿಯೊಂದು ಬಾಗಿಲಿಗೂ ಅವರಲ್ಲಿನ ಒಂದು ಪಾಲು ನಿಗದಿತವಾಗಿದೆ

[42] ಧರ್ಮನಿಷ್ಠರು ಖಂಡಿತ ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು

[43] ‘‘ಶಾಂತಿಯೊಂದಿಗೆ ಹಾಗೂ ಸುರಕ್ಷಿತರಾಗಿ ಇವುಗಳೊಳಗೆ ಪ್ರವೇಶಿಸಿರಿ’’ (ಎನ್ನುತ್ತಾ ಅವರನ್ನು ಸ್ವಾಗತಿಸಲಾಗುವುದು)

[44] ಅವರ ಎದೆಗಳಲ್ಲಿ ಉಳಿದಿದ್ದ ವೈಷಮ್ಯವನ್ನೆಲ್ಲಾ ನಾವು ಕಿತ್ತೆಸೆದೆವು – ಅವರು ಸಹೋದರರಾಗಿ ಆಸನಗಳಲ್ಲಿ ಎದುರು ಬದುರಾಗಿ ಕುಳಿತಿರುವರು

[45] ಅಲ್ಲಿ ಯಾವ ಸಂಕಟವೂ ಅವರನ್ನು ಬಾಧಿಸದು ಮತ್ತು ಅವರನ್ನೆಂದೂ ಅಲ್ಲಿಂದ ಹೊರ ಹಾಕಲಾಗದು

[46] ನನ್ನ ದಾಸರಿಗೆ ತಿಳಿಸಿ ಬಿಡಿರಿ; ನಾನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ತುಂಬಾ ಕರುಣಾಳುವೆಂದು

[47] ಮತ್ತು ನನ್ನ ಶಿಕ್ಷೆಯೂ ತುಂಬಾ ಕಠೋರ ಶಿಕ್ಷೆಯಾಗಿರುವುದೆಂದು

[48] ಇಬ್ರಾಹೀಮರ ಅತಿಥಿಗಳ ಕುರಿತು ಅವರಿಗೆ ತಿಳಿಸಿರಿ

[49] ಅವರು, ಅವರ ಬಳಿಗೆ ಬಂದಾಗ ‘ಸಲಾಮ್’ (ಶಾಂತಿ) ಎಂದರು. ಆಗ ಅವರು (ಇಬ್ರಾಹೀಮರು), ನಮಗೆ ನಿಮ್ಮ ಕುರಿತು ಆತಂಕವಿದೆ ಎಂದರು

[50] ಅವರು ಹೇಳಿದರು; ಆತಂಕ ಪಡಬೇಡಿ. ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡುತ್ತೇವೆ

[51] ಅವರು (ಇಬ್ರಾಹೀಮ್) ಹೇಳಿದರು; ನೀವೇನು ಮುದಿತನ ಆವರಿಸಿರುವ ನನಗೆ ಶುಭವಾರ್ತೆ ನೀಡುತ್ತಿರುವಿರಾ – ಅದೆಂತಹ ಶುಭವಾರ್ತೆ ನೀಡುತ್ತಿರುವಿರಿ ನೀವು

[52] ಅವರು ಹೇಳಿದರು; ನಾವು ನಿಮಗೆ ಸತ್ಯದ ಶುಭವಾರ್ತೆ ನೀಡುತ್ತಿದ್ದೇವೆ. ನೀವು ನಿರಾಶರ ಸಾಲಿಗೆ ಸೇರಬೇಡಿ

[53] ಅವರು (ಇಬ್ರಾಹೀಮ್) ಹೇಳಿದರು; ದಾರಿಗೆಟ್ಟವರ ಹೊರತು ಇನ್ನಾರು ತಾನೇ ತನ್ನ ಒಡೆಯನ ಅನುಗ್ರಹದ ಬಗ್ಗೆ ನಿರಾಶನಾಗಬಲ್ಲನು

[54] ಅವರು (ಇಬ್ರಾಹೀಮ್) ಕೇಳಿದರು; ದೂತರುಗಳೇ, ನಿಮ್ಮ ಹೊಣೆಗಾರಿಕೆ ಏನು

[55] ಅವರು ಹೇಳಿದರು; ನಮ್ಮನ್ನು ಅಪರಾಧಿ ಜನಾಂಗದೆಡೆಗೆ ಕಳಿಸಲಾಗಿದೆ

[56] ಲೂತ್‌ರ ಮನೆಯವರ ಹೊರತು – ಅವರನ್ನೆಲ್ಲಾ ನಾವು ರಕ್ಷಿಸುವೆವು –

[57] ಆದರೆ, ಅವರ ಪತ್ನಿಯ ಹೊರತು. ಖಂಡಿತವಾಗಿಯೂ ಆಕೆಯು ಹಿಂದುಳಿದವರಲ್ಲಿ ಒಬ್ಬಳಾಗಿರುವಳೆಂದು ನಾವು ತೀರ್ಮಾನಿಸಿರುವೆವು

[58] ಕೊನೆಗೆ ಆ ದೂತರು ಲೂತ್‌ರ ಮನೆಯವರ ಬಳಿಗೆ ಬಂದರು

[59] ಅವರು (ಲೂತ್); ನೀವು ತೀರಾ ಅಪರಿಚಿತರು! ಎಂದರು

[60] ಅವರು ಹೇಳಿದರು; ನಿಜವಾಗಿ, ಅವರು (ಲೂತ್‌ರ ನಾಡಿನವರು) ಯಾವುದರ ಕುರಿತು ಸಂಶಯದಲ್ಲಿದ್ದರೋ ಅದನ್ನೇ (ದೇವರ ಶಿಕ್ಷೆಯನ್ನೇ) ನಾವು ತಂದಿರುವೆವು

[61] ಮತ್ತು ನಾವು ಸತ್ಯದೊಂದಿಗೆ ನಿಮ್ಮ ಬಳಿಗೆ ಬಂದಿರುವೆವು – ನಾವು ಖಂಡಿತ ಸತ್ಯವಂತರು

[62] ನೀವು ರಾತ್ರಿಯ ಒಂದು ಹಂತದಲ್ಲಿ ನಿಮ್ಮ ಮನೆಯವರ ಜೊತೆ ಹೊರಟು ಹೋಗಿರಿ ಮತ್ತು ನೀವು ಸ್ವತಃ ಅವರನ್ನು ಹಿಂಬಾಲಿಸುತ್ತಾ ಅವರ ಬೆನ್ನು ಬೆನ್ನಿಗೇ ನಡೆಯಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡಬಾರದು ಮತ್ತು ನೀವು ನಿಮಗೆ ಆದೇಶಿಸಲಾಗಿರುವ ಕಡೆಗೇ ಹೋಗಿರಿ

[63] ಬೆಳಗಾಗುವ ಹೊತ್ತಿಗೆ ಆ ಜನರ ಮೂಲವನ್ನೇ ಕಡಿದು ಬಿಡಲಾಗಿರುವುದು ಎಂಬ ಆ ವಿಷಯವನ್ನು ನಾವು ಅವರಿಗೆ (ಲೂತ್‌ರಿಗೆ) ಖಚಿತವಾಗಿ ತಿಳಿಸಿದೆವು

[64] ನಗರದವರು ಸಂಭ್ರಮಿಸುತ್ತಾ ಬಂದರು

[65] ಅವರು (ಲೂತ್) ಹೇಳಿದರು; ಇವರು ನನ್ನ ಅತಿಥಿಗಳು . ನೀವು ನನ್ನನ್ನು ನಗೆಪಾಟಲಿಗೆ ಗುರಿಮಾಡಬೇಡಿ

[66] ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನನ್ನು ಅಪಮಾನಿಸಬೇಡಿ

[67] ಅವರು (ನಾಡಿನವರು) ಹೇಳಿದರು; ನೀವು ಸರ್ವ ಜಗತ್ತಿನವರ ಬೆಂಬಲಕ್ಕೆ ನಿಲ್ಲಬಾರದೆಂದು ನಾವು ನಿಮ್ಮನ್ನು ತಡೆದಿರಲಿಲ್ಲವೇ

[68] ಅವರು (ಲೂತ್) ಹೇಳಿದರು; ನೀವೇನಾದರೂ (ವಿವಾಹ) ಮಾಡಿ ಕೊಳ್ಳುವುದಿದ್ದರೆ, ಇದೋ ನನ್ನ ಪುತ್ರಿಯರು ಇಲ್ಲಿದ್ದಾರೆ

[69] (ದೂತರೇ,) ನಿಮ್ಮ ವಯಸ್ಸಿನಾಣೆ, ಆ ಜನರು ತಮ್ಮ ಮದದಲ್ಲಿ ಖಂಡಿತ ಕುರುಡಾಗಿದ್ದರು

[70] ಕೊನೆಗೆ, ಸೂರ್ಯೋದಯದ ವೇಳೆಗೆ ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿಕೊಂಡಿತು

[71] ನಾವು ಆ ನಾಡನ್ನು ಬುಡಮೇಲು ಗೊಳಿಸಿಬಿಟ್ಟೆವು ಮತ್ತು ನಾವು ಅವರ ಮೇಲೆ ಬೆಂದ ಕಣಗಳ ಮಳೆ ಸುರಿಸಿದೆವು

[72] ಚಿಂತನೆ ನಡೆಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ

[73] ಅದು (ಆ ನಾಡು) ಒಂದು ಪರಿಚಿತ ದಾರಿಯಲ್ಲೇ ಇದೆ

[74] ವಿಶ್ವಾಸಿಗಳಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆ ಇದೆ

[75] ಇನ್ನು, ‘ಐಕಃ’ ದವರು ಖಂಡಿತ ಅಕ್ರಮಿಗಳಾಗಿದ್ದರು

[76] ನಾವು ಅವರ ವಿರುದ್ಧವೂ ಪ್ರತೀಕಾರ ತೀರಿಸಿದೆವು – ಆ ಎರಡೂ ನಾಡುಗಳು ಹೆದ್ದಾರಿಯಲ್ಲೇ ಇವೆ

[77] ‘ಹಿಜ್ರ್’ ಎಂಬಲ್ಲಿನವರು ದೂತರನ್ನು ಧಿಕ್ಕರಿಸಿದ್ದರು

[78] ನಾವು ಅವರಿಗೆ ನಮ್ಮ ಅನೇಕ ಸೂಚನೆಗಳನ್ನು ನೀಡಿದೆವು. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಟ್ಟರು

[79] ಅವರು ನಿರ್ಭೀತರಾಗಿ ಪರ್ವತಗಳಲ್ಲಿ ನಿವಾಸಗಳನ್ನು ಕೊರೆಯುತ್ತಿದ್ದರು

[80] (ಒಂದು ದಿನ) ಸೂರ್ಯೋದಯದ ವೇಳೆಗೆ, ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿತು

[81] ಅವರ ಯಾವ ಸಂಪಾದನೆಯೂ ಅವರ ಯಾವ ಕೆಲಸಕ್ಕೂ ಬರಲಿಲ್ಲ

[82] ಆಕಾಶಗಳನ್ನು ಹಾಗೂ ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತಿಮ ಘಳಿಗೆಯು ಖಂಡಿತ ಬರಲಿದೆ. ನೀವು (ಜನರನ್ನು) ಕ್ಷಮಿಸಿರಿ – ಅದು ಅತ್ಯಂತ ಸುಂದರ ಕ್ಷಮೆಯಾಗಿರಲಿ

[83] (ದೂತರೇ,) ಖಂಡಿತವಾಗಿಯೂ ನಿಮ್ಮ ಒಡೆಯನೇ ಮಹಾನ್ ಸೃಷ್ಟಿಕರ್ತನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ

[84] ಖಂಡಿತವಾಗಿಯೂ ನಾವು ನಿಮಗೆ ಮತ್ತೆ ಮತ್ತೆ ಓದಲಾಗುವ ಏಳು ವಾಕ್ಯಗಳನ್ನು (ಪ್ರಥಮ ಅಧ್ಯಾಯವನ್ನು) ಮತ್ತು ಭವ್ಯವಾದ ಕುರ್‌ಆನನ್ನು ನೀಡಿರುವೆವು

[85] ಅವರಲ್ಲಿನ ( ಧಿಕ್ಕಾರಿಗಳಲ್ಲಿನ) ವಿವಿಧ ವರ್ಗಗಳಿಗೆ ನಾವು ಏನನ್ನು ನೀಡಿರುವೆವೋ ಅವುಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ ಮತ್ತು ನೀವು ಅವರ ಕುರಿತು ದುಃಖಿಸಬೇಡಿ. ಹಾಗೆಯೇ, ವಿಶ್ವಾಸಿಗಳ ಪಾಲಿಗೆ ನೀವು (ವಿನಯದೆೊಂದಿಗೆ) ನಿಮ್ಮ ಭುಜವನ್ನು ತಗ್ಗಿಸಿಡಿರಿ

[86] ಮತ್ತು ನೀವು ‘‘ಖಂಡಿತವಾಗಿಯೂ ನಾನು, ಸುಸ್ಪಷ್ಟ ಎಚ್ಚರಿಕೆ ನೀಡು ವವನಾಗಿದ್ದೇನೆ’’ ಎಂದು ಸಾರಿ ಬಿಡಿರಿ

[87] (ಈ ಹಿಂದೆ) ವಿಭಜನವಾದಿಗಳ ಮೇಲೆ ನಾವು (ಶಿಕ್ಷೆಯನ್ನು) ಎರಗಿಸಿದ್ದೆವು

[88] ಅವರು ಕುರ್‌ಆನನ್ನು ಛಿದ್ರಗೊಳಿಸಿದ್ದರು (ತಾವಿಚ್ಛಿಸಿದ್ದನ್ನು ಪಾಲಿಸಿ, ಉಳಿದುದನ್ನು ತಿರಸ್ಕರಿಸಿದ್ದರು)

[89] ನಿಮ್ಮಡೆಯನಾಣೆ! ನಾವು ಅವರೆಲ್ಲರನ್ನೂ ಖಂಡಿತ ಪ್ರಶ್ನಿಸುವೆವು –

[90] – ಅವರು ಮಾಡುತ್ತಿದ್ದ ಕರ್ಮಗಳ ಕುರಿತು

[91] ನಿಮಗೆ ಆದೇಶಿಸಲಾಗಿರುವುದನ್ನು ನೀವು ಸ್ಪಷ್ಟವಾಗಿ ಸಾರಿ ಬಿಡಿರಿ ಮತ್ತು ಬಹುದೇವಾರಾಧಕರನ್ನು ಲೆಕ್ಕಿಸಬೇಡಿ

[92] ಗೇಲಿ ಮಾಡುವವರ ವಿಷಯದಲ್ಲಿ ನಿಮಗೆ ನಾವೇ ಸಾಕು

[93] ಅವರು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿ ಕೊಂಡಿದ್ದಾರೆ. (ಇದರ ಫಲಿತಾಂಶವನ್ನು) ಬಹುಬೇಗನೇ ಅವರು ಅರಿಯುವರು

[94] ನಮಗೆ ತಿಳಿದಿದೆ – ಅವರು ಆಡುವ ಮಾತುಗಳಿಂದ ನಿಮ್ಮ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆಂದು

[95] ನೀವು ನಿಮ್ಮ ಒಡೆಯನನ್ನು ಸ್ತುತಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಸಾಷ್ಟಾಂಗ ವಂದಿಸುವವರಾಗಿರಿ

[96] ಇನ್ನು, ಖಚಿತವಾದ ಆ ಘಳಿಗೆ (ಮರಣ) ಬರುವ ತನಕವೂ ನೀವು ನಿಮ್ಮ ಒಡೆಯನ ಆರಾಧನೆ ನಡೆಸಿರಿ

[97] ಬಂದು ಬಿಟ್ಟಿತು, ಅಲ್ಲಾಹನ ಆದೇಶ – ನೀವು ಅದಕ್ಕಾಗಿ ಆತುರ ಪಡಬೇಡಿ. ಅವನು ತುಂಬಾ ಪಾವನನು ಮತ್ತು ಅವರು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತಲೂ ಅವನು ತುಂಬಾ ಉನ್ನತನು

[98] ‘‘ನನ್ನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ ನನಗೆ ಮಾತ್ರ ಅಂಜಿರಿ’’ – ಎಂದು (ಜನರನ್ನು) ಎಚ್ಚರಿಸಲಿಕ್ಕಾಗಿ ಅವನು ತನ್ನ ಆದೇಶದಂತೆ ದಿವ್ಯವಾಣಿಯನ್ನು ಕೊಟ್ಟು, ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಬಳಿಗೆ, ಮಲಕ್‌ಗಳನ್ನು ಇಳಿಸಿಕೊಡುತ್ತಾನೆ

[99] ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅವರು (ಅವನ ಜೊತೆ) ಪಾಲುಗೊಳಿಸುತ್ತಿರುವ ಎಲ್ಲವುಗಳಿಗಿಂತ ಅವನು ಉನ್ನತನು

ಜೇನುನೊಣ

Surah 16

[1] ಅವನು (ಅಲ್ಲಾಹನು) ಮಾನವನನ್ನು ವೀರ್ಯದ ಮೂಲಕ ಸೃಷ್ಟಿಸಿರುವನು. ಇಷ್ಟಾಗಿಯೂ ಅವನು (ಮಾನವನು) ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು

[2] ಇನ್ನು, ಜಾನುವಾರುಗಳನ್ನು ಅವನು ಸೃಷ್ಟಿಸಿದನು. ಅವುಗಳಲ್ಲಿ ನಿಮಗಾಗಿ ಬೆಚ್ಚನೆಯ ಉಡುಗೆ ಇದೆ, ಇತರ ಲಾಭಗಳೂ ಇವೆ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ

[3] ಹಾಗೆಯೇ, ನೀವು ಸಂಜೆ ಅವುಗಳನ್ನು ತರುವಾಗ ಮತ್ತು ಮುಂಜಾನೆ ಅವುಗಳನ್ನು ಕೊಂಡೊಯ್ಯುವಾಗ ಅವುಗಳಲ್ಲಿ ನಿಮಗೆ ಸೌಂದರ್ಯವಿದೆ

[4] ನಿಮಗೆ, ತುಂಬಾ ಪ್ರಯಾಸ ಪಡದೆ ತಲುಪಲು ಸಾಧ್ಯವಿಲ್ಲದ ನಾಡುಗಳಿಗೆ ಅವು ನಿಮ್ಮ ಸರಕುಗಳನ್ನು ತಲುಪಿಸುತ್ತವೆ. ಖಂಡಿತವಾಗಿಯೂ ನಿಮ್ಮ ಒಡೆಯನು ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿದ್ದಾನೆ

[5] ನೀವು ಅವುಗಳ ಮೇಲೆ ಸವಾರಿ ನಡೆಸಬೇಕೆಂದು ಹಾಗೂ (ನಿಮಗೆ) ಭೂಷಣವಾಗಿರಲೆಂದು ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ಕತ್ತೆಗಳನ್ನೂ (ಅವನು ಸೃಷ್ಟಿಸಿದನು). ಮತ್ತು ನಿಮಗೆ ತಿಳಿದೇ ಇಲ್ಲದ ಇತರ ಹಲವನ್ನೂ ಅವನು ಸೃಷ್ಟಿಸಿರುತ್ತಾನೆ

[6] ನೇರ ಮಾರ್ಗವನ್ನು ತೋರಿಸಿ ಕೊಡುವ ಹೊಣೆ ಅಲ್ಲಾಹನ ಮೇಲಿದೆ. ಅದರಿಂದ ಕೆಲವು ವಕ್ರ ಮಾರ್ಗಗಳೂ ಹೊರಡುತ್ತವೆ. ಅವನು ಬಯಸಿದ್ದರೆ ನಿಮ್ಮೆಲ್ಲರನ್ನೂ ಸರಿದಾರಿಯಲ್ಲಿ ನಡೆಸುತ್ತಿದ್ದನು

[7] ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು. ಅದರಿಂದ ಪಾನೀಯ ದೊರೆಯುತ್ತದೆ ಮತ್ತು ಸಸ್ಯಗಳು ಬೆಳೆಯುತ್ತವೆ – ಅವುಗಳಲ್ಲಿ ನೀವು (ಜಾನುವಾರುಗಳನ್ನು) ಮೇಯಿಸುತ್ತೀರಿ

[8] ಅದರ (ಆ ನೀರಿನ) ಮೂಲಕವೇ ಅವನು ನಿಮಗಾಗಿ ಹೊಲಗಳನ್ನು ಹಾಗೂ ಝೈತೂನ್, ಖರ್ಜೂರ, ದ್ರಾಕ್ಷಿ ಹಾಗೂ ಎಲ್ಲ ಬಗೆಯ ಫಲಗಳನ್ನು ಬೆಳಸುತ್ತಾನೆ. ಖಂಡಿತವಾಗಿಯೂ, ಚಿಂತನೆ ನಡೆಸುವವರಿಗೆ ಇದರಲ್ಲಿ ಪಾಠವಿದೆ

[9] ಅವನು ಇರುಳು ಹಗಲುಗಳನ್ನು ನಿಮಗೆ ಅಧೀನಗೊಳಿಸಿರುವನು. ಹಾಗೆಯೇ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಅವನ ಆದೇಶದಂತೆ, ನಿಯಂತ್ರಿತವಾಗಿವೆ. ಖಂಡಿತವಾಗಿಯೂ ಬುದ್ಧಿವಂತರಿಗೆ ಇದರಲ್ಲಿ ಸೂಚನೆಗಳಿವೆ

[10] ಹಾಗೆಯೇ, ಅವನು ನಿಮಗಾಗಿ ಭೂಮಿಯಲ್ಲಿ ವಿವಿಧ ಬಣ್ಣದ ಬೆಳಗಳನ್ನು ಬೆಳೆಸಿದನು. ಪಾಠ ಕಲಿಯುವವರಿಗೆ ಇದರಲ್ಲಿ ಒಂದು ದೊಡ್ಡ ಸೂಚನೆ ಇದೆ

[11] ಅವನೇ ಸಮುದ್ರವನ್ನು ನಿಯಂತ್ರಣಕ್ಕೆ ಒಳಪಡಿಸಿದವನು – ನೀವು ಅದರಿಂದ (ಮೀನಿನ) ತಾಜಾ ಮಾಂಸವನ್ನು ತೆಗೆದು ತಿನ್ನಬೇಕು ಮತ್ತು ಅದರೊಳಗಿಂದ (ವಿವಿಧ) ಆಭರಣಗಳನ್ನು ಹೊರ ತೆಗೆದು ಧರಿಸಬೇಕೆಂದು. ಹಾಗೆಯೇ ನೀವು ಅವನ ಅನುಗ್ರಹವನ್ನು ಹುಡುಕಲು, ಅದರೊಳಗೆ (ನೀರನ್ನು) ಸೀಳುತ್ತಾ ಸಾಗುವ ಹಡಗುಗಳನ್ನು ನೀವು ಕಾಣುತ್ತೀರಿ. (ಇವೆಲ್ಲಾ ಇರುವುದೇ) ನೀವು ಕೃತಜ್ಞರಾಗಬೇಕೆಂದು

[12] ಅವನೇ, ಭೂಮಿಯು ನಿಮ್ಮ ಜೊತೆಗೆ ಉರುಳಿ ಬಿಡಬಾರದೆಂದು ಅದರಲ್ಲಿ ಭಾರೀ ಪರ್ವತಗಳನ್ನು ಸ್ಥಿರವಾಗಿ ನೆಟ್ಟಿರುವವನು. ಮತ್ತು ನೀವು ದಾರಿಕಾಣಬೇಕೆಂದು ಅವನು ನದಿಗಳನ್ನು ಹಾಗೂ (ಸಹಜ) ದಾರಿಗಳನ್ನು ನಿರ್ಮಿಸಿರುವನು

[13] ಹಾಗೆಯೇ ಅವನು (ನಿರ್ಮಿಸಿರುವ) ಗುರುತುಗಳ ಹಾಗೂ ನಕ್ಷತ್ರಗಳ ಮೂಲಕ ಅವರು ದಾರಿ ಕಂಡುಕೊಳ್ಳುತ್ತಾರೆ

[14] ಸೃಷ್ಟಿಸಿದವನು ಮತ್ತು ಸೃಷ್ಟಿಸಿಲ್ಲದವರು ಸಮಾನರಾಗಬಲ್ಲರೇ? ನೀವೇನು ಚಿಂತನೆ ನಡೆಸುವುದಿಲ್ಲವೇ

[15] ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಹೊರಟರೆ, ಅವುಗಳನ್ನು ಪೂರ್ಣವಾಗಿ ಎಣಿಸಲು ನಿಮಗೆಂದೂ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹನು ತುಂಬಾ ಕ್ಷಮಾಶೀಲನು ಹಾಗೂ ಕರುಣಾಮಯಿಯಾಗಿದ್ದಾನೆ

[16] ನೀವು ಬಚ್ಚಿಡುವ ಹಾಗೂ ಬಹಿರಂಗ ಪಡಿಸುವ ಎಲ್ಲವನ್ನೂ ಅಲ್ಲಾಹನು ಅರಿತಿರುತ್ತಾನೆ

[17] ಅವರು ಅಲ್ಲಾಹನ ಹೊರತು ಯಾರನ್ನೆಲ್ಲಾ ಕೂಗಿ ಪ್ರಾರ್ಥಿಸುತ್ತಾರೋ ಅವರು ಏನನ್ನೂ ಸೃಷ್ಟಿಸಿದವರಲ್ಲ. ನಿಜವಾಗಿ ಸ್ವತಃ ಅವರೇ ಸೃಷ್ಟಿಸಲ್ಪಟ್ಟಿದ್ದಾರೆ

[18] ಅವರು ಸತ್ತವರು, ಜೀವಂತರಲ್ಲ. ತಮ್ಮನ್ನು ಮತ್ತೆ ಯಾವಾಗ ಎಬ್ಬಿಸಲಾಗುವುದು ಎಂಬುದರ ಅರಿವೂ ಅವರಿಗಿಲ್ಲ

[19] ಆ ಏಕಮಾತ್ರ ಒಡೆಯನೇ ನಿಮ್ಮ ಒಡೆಯನು. ಆದರೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳು ವಿದ್ರೋಹಿಯಾಗಿವೆ ಮತ್ತು ಅವರು ಅಹಂಕಾರಿಗಳಾಗಿದ್ದಾರೆ

[20] ಅವರು ಬಚ್ಚಿಡುತ್ತಿರುವ ಮತ್ತು ಪ್ರಕಟಪಡಿಸುತ್ತಿರುವ ಎಲ್ಲವನ್ನೂ ಅಲ್ಲಾಹನು ಖಚಿತವಾಗಿ ಬಲ್ಲನು. ಖಂಡಿತವಾಗಿಯೂ ಅವನು ಅಹಂಕಾರಿಗಳನ್ನು ಮೆಚ್ಚುವುದಿಲ್ಲ

[21] ನಿಮ್ಮ ಒಡೆಯನು ಏನನ್ನು ಇಳಿಸಿ ಕೊಟ್ಟಿರುವನು ಎಂದು ಅವರೊಡನೆ ಕೇಳಲಾದಾಗ, ಅವರು, ಅವೆಲ್ಲಾ ಗತಕಾಲದವರ ಕತೆಗಳು – ಎನ್ನುತ್ತಾರೆ

[22] ಪುನರುತ್ಥಾನ ದಿನ ಅವರು ತಮ್ಮ ಹೊರೆಗಳನ್ನು ಪೂರ್ಣವಾಗಿ ತಾವೇ ಹೊರಲಿದ್ದಾರೆ. ಜೊತೆಗೇ, ಜ್ಞಾನವಿಲ್ಲದೆ ಅವರು ಯಾರನ್ನೆಲ್ಲಾ ದಾರಿ ತಪ್ಪಿಸಿದ್ದರೋ ಅವರೆಲ್ಲರ ಹೊರೆಗಳನ್ನೂ ಹೊರಲಿದ್ದಾರೆ. ನಿಮಗೆ ತಿಳಿದಿರಲಿ, ಅವರು ಹೊರುವ ಹೊರೆ ತುಂಬಾ ಕೆಟ್ಟದು

[23] ಅವರಿಗಿಂತ ಹಿಂದಿನವರೂ ಸಂಚುಗಳನ್ನು ಹೂಡಿದ್ದರು. ಕೊನೆಗೆ ಅಲ್ಲಾಹನು ಅವರ ಭವನಗಳ ಬುನಾದಿಗಳನ್ನೇ ನಾಶ ಮಾಡಿದನು ಮತ್ತು ಅವುಗಳ ಚಪ್ಪರಗಳು ಅವರ ಮೇಲೆ ಕುಸಿದು ಬಿದ್ದವು. ಇನ್ನು ಶಿಕ್ಷೆಯು, ಅವರೆಂದೂ ಊಹಿಸಿಯೂ ಇಲ್ಲದಿದ್ದ ಕಡೆಯಿಂದ ಅವರ ಮೇಲೆ ಬಂದೆರಗಿತು

[24] ಮುಂದೆ ಪುನರುತ್ಥಾನ ದಿನ ಅವನು ಅವರನ್ನು ಮತ್ತೆ ಅಪಮಾನಿಸುವನು ಮತ್ತು – ಯಾರ ವಿಷಯದಲ್ಲಿ ನೀವು ಜಗಳಾಡುತ್ತಿದ್ದಿರೋ ಆ ನನ್ನ ಪಾಲುದಾರರು ಎಲ್ಲಿದ್ದಾರೆ? ಎಂದು ಪ್ರಶ್ನಿಸುವನು. ಜ್ಞಾನ ನೀಡಲ್ಪಟ್ಟವರು ಹೇಳುವರು; ಇಂದಿನ ದಿನ ಧಿಕ್ಕಾರಿಗಳ ಪಾಲಿಗೆ ಅಪಮಾನ ಹಾಗೂ ಕಾಠಿಣ್ಯ ಮಾತ್ರವಿದೆ

[25] ಅವರು (ಆ ಧಿಕ್ಕಾರಿಗಳು) ಸ್ವತಃ ತಮ್ಮ ಮೇಲೆ ಅಕ್ರಮವೆಸಗುತ್ತಿದ್ದ ಸ್ಥಿತಿಯಲ್ಲಿ ‘ಮಲಕ್’ಗಳು ಅವರ ಜೀವಗಳನ್ನು ವಶಪಡಿಸಿಕೊಳ್ಳುವರು. ಆಗ ಅವರು ಶರಣಾಗತಿಯ ಪ್ರಸ್ತಾಪ ಮಂಡಿಸಿ, ‘‘ನಾವು ಕೆಟ್ಟದೇನನ್ನೂ ಮಾಡುತ್ತಿರಲಿಲ್ಲ’’- ಎನ್ನುವರು. ಯಾಕಿಲ್ಲ? ನೀವು ಏನು ಮಾಡುತ್ತಿದ್ದಿರೆಂಬುದನ್ನು ಅಲ್ಲಾಹನು ಖಚಿತವಾಗಿ ಬಲ್ಲನು

[26] ನೀವೀಗ ನರಕದ ಬಾಗಿಲುಗಳೊಳಗೆ ಪ್ರವೇಶಿಸಿರಿ. ನೀವು ಅದರಲ್ಲಿ ಸದಾಕಾಲ ಇರುವಿರಿ. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತುಂಬಾ ಕೆಟ್ಟದಾಗಿರುವುದು. 30.ಧರ್ಮನಿಷ್ಠರಾಗಿದ್ದ ಮಂದಿಯೊಡನೆ, ‘‘ನಿಮ್ಮ ಒಡೆಯನು ಏನನ್ನು ಇಳಿಸಿ ಕೊಟ್ಟಿರುವನು?’’ ಎಂದು ಕೇಳಲಾದಾಗ ಅವರು, ‘‘ಅತ್ಯುತ್ತಮವಾದುದನ್ನು’’ ಎಂದು ಉತ್ತರಿಸುತ್ತಾರೆ. ಹಿತವಾದುದನ್ನು ಮಾಡಿದವರಿಗೆ ಈ ಲೋಕದಲ್ಲೂ ಹಿತವಿದೆ. ಇನ್ನು ಪರಲೋಕದ ನೆಲೆಯೇ ಅತ್ಯುತ್ತಮವಾಗಿದೆ ಮತ್ತು ಧರ್ಮ ನಿಷ್ಠರ ಅಂತಿಮ ನೆಲೆಯು ನಿಜಕ್ಕೂ ಶ್ರೇಷ್ಠವಾಗಿರುತ್ತದೆ

[27] ಅವರು ಪ್ರವೇಶಿಸುವ ಶಾಶ್ವತ ತೋಟಗಳು – ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗುವುದು. ಈ ರೀತಿ ಅಲ್ಲಾಹನು ಧರ್ಮ ನಿಷ್ಠರನ್ನು ಪುರಸ್ಕರಿಸುವನು

[28] ಅವರು ನಿರ್ಮಲರಾಗಿರುವ ಸ್ಥಿತಿಯಲ್ಲಿ ಅವರ ಜೀವಗಳನ್ನು ಮಲಕ್‌ಗಳು ವಶಪಡಿಸಿಕೊಳ್ಳುವರು. (ಮತ್ತು)‘‘ನಿಮಗೆ ಸಲಾಮ್ (ಶಾಂತಿ). ನಿಮ್ಮ ಕರ್ಮಗಳ ಪ್ರತಿಫಲವಾಗಿ ನೀವು ಸ್ವರ್ಗವನ್ನು ಪ್ರವೇಶಿಸಿರಿ’’ ಎಂದು ಅವರು (ಮಲಕ್‌ಗಳು) ಹೇಳುವರು

[29] ತಮ್ಮ ಬಳಿಗೆ ಮಲಕ್‌ಗಳು ಬರಬೇಕು ಅಥವಾ ನಿಮ್ಮ ಒಡೆಯನ ಆದೇಶವೇ ಬಂದು ಬಿಡಬೇಕು ಎಂಬುದಕ್ಕಲ್ಲವೇ ಅವರು (ಧಿಕ್ಕಾರಿಗಳು) ಕಾಯುತ್ತಿರುವುದು? ಅವರಿಗಿಂತ ಹಿಂದಿನವರೂ ಹಾಗೆಯೇ ಮಾಡಿದ್ದರು. ಅವರ ಮೇಲೆ ಅಲ್ಲಾಹನೇನೂ ಅಕ್ರಮವೆಸಗಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು

[30] ಅವರು ಎಸಗುತ್ತಿದ್ದ ಕರ್ಮಗಳ ದುಷ್ಪರಿಣಾಮವು ಅವರನ್ನು ತಲುಪಿತು ಮತ್ತು ಅವರು ಏನನ್ನು ಗೇಲಿಮಾಡುತ್ತಿದ್ದರೋ (ದೇವರ ಶಿಕ್ಷೆ) ಅದುವೇ ಅವರನ್ನು ಆವರಿಸಿ ಕೊಂಡಿತು

[31] ಬಹುದೇವಾರಾಧಕರು ‘‘ಒಂದು ವೇಳೆ ಅಲ್ಲಾಹನು ಹಾಗೆ ಬಯಸಿದ್ದರೆ, ನಾವಾಗಲಿ ನಮ್ಮ ಪೂರ್ವಜರಾಗಲಿ ಅವನ ಹೊರತು ಬೇರೆ ಯಾರನ್ನೂ ಪೂಜಿಸುತ್ತಿರಲಿಲ್ಲ ಮತ್ತು ಅವರು ಅವನ ಆದೇಶವಿಲ್ಲದೆ ಯಾವುದನ್ನೂ ನಿಷಿದ್ಧವೆಂದು ಪರಿಗಣಿಸುತ್ತಿರಲಿಲ್ಲ’’ ಎನ್ನುತ್ತಾರೆ. ಅವರಿಗಿಂತ ಹಿಂದಿನವರೂ ಹೀಗೆಯೇ ಮಾಡಿದ್ದರು. ಏನಿದ್ದರೂ, ದೂತರುಗಳಿಗೆ, ಸ್ಪಷ್ಟವಾಗಿ (ಸಂದೇಶ) ತಲುಪಿಸುವ ಹೊರತು ಬೇರೆ ಹೊಣೆಗಾರಿಕೆ ಇದೆಯೇ

[32] ‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಎಲ್ಲ ಮಿಥ್ಯ ದೇವರುಗಳಿಂದ ದೂರ ಉಳಿಯಿರಿ’’ ಎಂದು ಸಾರುವ ದೂತರನ್ನು ನಾವು ಎಲ್ಲ ಸಮುದಾಯಗಳಲ್ಲೂ ಕಳುಹಿಸಿದ್ದೇವೆ. ಅವರಲ್ಲಿ ಕೆಲವರಿಗೆ (ಕೆಲವು ಸಮುದಾಯಗಳಿಗೆ) ಅಲ್ಲಾಹನು ಸನ್ಮಾರ್ಗ ತೋರಿದರೆ ಮತ್ತೆ ಕೆಲವರ ಪಾಲಿಗೆ ದಾರಿಗೇಡಿತನವೇ ಗತಿಯಾಗಿ ಬಿಟ್ಟಿತು. ನೀವು ಭೂಮಿಯಲ್ಲಿ ನಡೆದಾಡಿ, (ಸತ್ಯವನ್ನು) ತಿರಸ್ಕರಿಸುವವರ ಅಂತ್ಯ ಏನಾಯಿತೆಂದು ನೋಡಿರಿ

[33] (ದೂತರೇ,) ನೀವು ಅವರ ಮಾರ್ಗದರ್ಶನಕ್ಕಾಗಿ ಆಶೆ ಪಟ್ಟ ಮಾತ್ರಕ್ಕೆ ಅಲ್ಲಾಹನು, ತಾನು ದಾರಿಗೆಡಿಸಿರುವವರಿಗೆ ಸರಿದಾರಿ ತೋರಲಾರನು. ಅವರಿಗೆ ಯಾರೂ ಸಹಾಯಕರಿಲ್ಲ

[34] ಅವರು ಜೋರು ಜೋರಾಗಿ ಅಲ್ಲಾಹನ ಆಣೆ ಹಾಕಿ, ‘‘ಸತ್ತವನನ್ನು ಅಲ್ಲಾಹನು ಜೀವಂತ ಗೊಳಿಸುವುದಿಲ್ಲ’’ ಎನ್ನುತ್ತಾರೆ. ಯಾಕಿಲ್ಲ? ಈ ಕುರಿತು ಅವನು ಮಾಡಿರುವ ವಾಗ್ದಾನವು ಸತ್ಯವಾಗಿದೆ. ಆದರೆ ಮಾನವನಲ್ಲಿ ಹೆಚ್ಚಿನವರು ಅರಿತಿಲ್ಲ

[35] ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅವರಿಗೆ (ಸತ್ಯವನ್ನು) ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಧಿಕ್ಕಾರಿಗಳಿಗೆ, ಅವರು ಸುಳ್ಳರಾಗಿದ್ದರೆಂದು ಮವನರಿಕೆ ಮಾಡಿಸಲಿಕ್ಕಾಗಿ (ಸತ್ತವರನ್ನು ಜೀವಂತಗೊಳಿಸಲಾಗುವುದು)

[36] ನಾವು ಏನನ್ನಾದರೂ ಮಾಡಲಿಚ್ಛಿಸಿದಾಗ, ಅದಕ್ಕೆ ನಾವು ‘‘ಆಗು’’ ಎಂಬ ಒಂದು ಮಾತನ್ನಷ್ಟೇ ಹೇಳಿ ಬಿಡುತ್ತೇವೆ – ಮತ್ತು ಅದು ಆಗಿ ಬಿಡುತ್ತದೆ

[37] ತಮ್ಮ ಮೇಲೆ ದೌರ್ಜನ್ಯ ನಡೆದ ಬಳಿಕ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ, ನಾವು ಈ ಲೋಕದಲ್ಲಿ ಉತ್ತಮ ನೆಲೆಯನ್ನು ಒದಗಿಸುತ್ತೇವೆ. ಇನ್ನು, ಪರಲೋಕದ ಪ್ರತಿಫಲವಂತು ಇದಕ್ಕಿಂತ ತುಂಬಾ ದೊಡ್ಡದಾಗಿರುತ್ತದೆ. ಅವರು ಇದನ್ನು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು

[38] (ಅವರು) ಸಹನಶೀಲರು ಮತ್ತು ತಮ್ಮ ಒಡೆಯನ ಮೇಲೆ ಭರವಸೆ ಇಟ್ಟವರಾಗಿರುತ್ತಾರೆ

[39] (ದೂತರೇ,) ನಿಮಗಿಂತ ಹಿಂದೆಯೂ ನಾವು ಪುರುಷರನ್ನೇ ದೂತರಾಗಿ ರವಾನಿಸಿ, ಅವರೆಡೆಗೆ ದಿವ್ಯ ಸಂದೇಶವನ್ನು ಕಳುಹಿಸಿದ್ದೆವು. ನಿಮಗೆ ತಿಳಿದಿಲ್ಲವಾದರೆ (ಈ ಹಿಂದಿನ ದಿವ್ಯ ಗ್ರಂಥಗಳನ್ನು) ಬಲ್ಲವರೊಡನೆ ಕೇಳಿ ನೋಡಿರಿ

[40] (ಅವರನ್ನೆಲ್ಲಾ) ಸ್ಪಷ್ಟ ಪುರಾವೆಗಳೊಂದಿಗೆ ಹಾಗೂ ಗ್ರಂಥಗಳೊಂದಿಗೆ (ಕಳಿಸಲಾಗಿತ್ತು). ಇನ್ನು ನಾವು ಜನರಿಗಾಗಿ ಇಳಿಸಿಕೊಟ್ಟಿರುವುದನ್ನು (ಸತ್ಯವನ್ನು) ನೀವು ಅವರಿಗೆ ವಿವರಿಸಬೇಕೆಂದು ಮತ್ತು ಅವರು ಚಿಂತನೆ ನಡೆಸಬೇಕೆಂದು ನಾವು ನಿಮ್ಮೆಡೆಗೆ ಈ ಉಪದೇಶವನ್ನು ಇಳಿಸಿಕೊಟ್ಟಿರುವೆವು

[41] ದುಷ್ಟ ಸಂಚುಗಳನ್ನು ನಡೆಸುವವರೇನು, ಅಲ್ಲಾಹನು ಅವರನ್ನು ಭೂಮಿಯಲ್ಲಿ ಹೂತು ಬಿಡುವ ಅಥವಾ ಅವರೆಂದೂ ಊಹಿಸಿಲ್ಲದ ಕಡೆಯಿಂದ ಒಂದು ಶಿಕ್ಷೆಯು ಅವರ ಬಳಿಗೆ ಬಂದೆರಗುವ ಸಾಧ್ಯತೆಯ ಕುರಿತು ನಿಶ್ಚಿಂತರಾಗಿರುವರೇ

[42] ಅಥವಾ ಅವರು ನಡೆದಾಡುತ್ತಿರುವಾಗಲೇ, ಅವರಿಗೆ ತಪ್ಪಿಸಿಕೊಳ್ಳಲಿಕ್ಕಾಗದ ಶಿಕ್ಷೆಯೊಂದು ಅವರನ್ನು ಆವರಿಸಿ ಬಿಡುವ ಕುರಿತು

[43] ಅಥವಾ ಅವರು ಭಯಭೀತರಾಗಿರುವ ಸ್ಥಿತಿಯಲ್ಲೇ ಅದು (ಆ ಶಿಕ್ಷೆಯು) ಅವರನ್ನು ಹಿಡಿದುಕೊಳ್ಳುವ ಕುರಿತು (ಅವರು ನಿಶ್ಚಿಂತರಾಗಿರುವರೇ)? ನಿಜವಾಗಿ ನಿಮ್ಮ ಒಡೆಯನು ವಾತ್ಸಲ್ಯಮಯಿಯೂ ಕರುಣಾಳುವೂ ಆಗಿದ್ದಾನೆ

[44] ಅಲ್ಲಾಹನು ಸೃಷ್ಟಿಸಿರುವ ವಿವಿಧ ವಸ್ತುಗಳೆಡೆಗೆ ಅವರು ನೋಡುವುದಿಲ್ಲವೇ? ಅವುಗಳ ನೆರಳುಗಳು ಬಲಗಡೆಗೂ ಎಡಗಡೆಗೂ ಬಾಗಿ ಅಲ್ಲಾಹನಿಗೆ ಸಾಷ್ಟಾಂಗ ವೆರಗುತ್ತಲಿರುತ್ತವೆ – ಮತ್ತು ಅವು ವಿಧೇಯವಾಗಿರುತ್ತವೆ

[45] ಆಕಾಶಗಳಲ್ಲಿ ಇರುವ ಎಲ್ಲವೂ ಮತ್ತು ಭೂಮಿಯಲ್ಲಿರುವ ಎಲ್ಲ ಜೀವಿಗಳು ಹಾಗೂ ಮಲಕ್‌ಗಳು ಅಲ್ಲಾಹನಿಗೇ ಸಾಷ್ಟಾಂಗ ವೆರಗುತ್ತಾರೆ ಮತ್ತು ಅವರು ಅಹಂಕಾರ ತೋರುವುದಿಲ್ಲ

[46] ಅವರು ತಮ್ಮ ಮೇಲೆ ಪ್ರಾಬಲ್ಯ ಹೊಂದಿರುವ ತಮ್ಮ ಒಡೆಯನಿಗೆ ಅಂಜುತ್ತಾರೆ ಮತ್ತು ತಮಗೆ ಆದೇಶಿಸಲಾಗಿರುವುದನ್ನೇ ಮಾಡುತ್ತಾರೆ

[47] ಮತ್ತು ಅಲ್ಲಾಹನು ಹೇಳುತ್ತಾನೆ; ಇಬ್ಬರನ್ನು ಪೂಜಾರ್ಹರಾಗಿ ಪರಿಗಣಿಸಬೇಡಿ. ಏಕೆಂದರೆ ಕೇವಲ ಅವನೊಬ್ಬನು ಮಾತ್ರ ಪುಜಾರ್ಹನು. ನೀವಿನ್ನು ನನಗೆ ಮಾತ್ರ ಅಂಜಿರಿ

[48] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ ಮತ್ತು ಅವನು ವಿಧಿಸಿದ ಧರ್ಮ ಮಾತ್ರ ಅನುಸರಣಾರ್ಹವಾಗಿದೆ. ಹೀಗಿರುತ್ತಾ, ನೀವೇನು ಅಲ್ಲಾಹನ ಹೊರತು ಅನ್ಯರ ಭಕ್ತರಾಗುತ್ತೀರಾ

[49] ನಿಮ್ಮ ಬಳಿ ಇರುವ ಅನುಗ್ರಹಗಳೆಲ್ಲವೂ ಅಲ್ಲಾಹನ ಕಡೆಯಿಂದಲೇ ಬಂದಿದೆ ಮತ್ತು ನಿಮಗೆ ಸಂಕಟವೇನಾದರೂ ತಟ್ಟಿದಾಗ ನೀವು ಅವನಲ್ಲೇ ಮೊರೆ ಇಡುತ್ತೀರಿ

[50] ಮುಂದೆ ಅವನು ನಿಮ್ಮಿಂದ ಸಂಕಟವನ್ನು ನಿವಾರಿಸಿದಾಗ ನಿಮ್ಮಲ್ಲಿನ ಒಂದು ಗುಂಪಿನವರು ತಮ್ಮ ಒಡೆಯನ ಜೊತೆ (ಅನ್ಯರನ್ನು) ಪಾಲುಗೊಳಿಸುತ್ತಾರೆ –

[51] – ಅವರಿಗೆ ನಾವು ನೀಡಿದ ಕೊಡುಗೆಗಳಿಗೆ ಪ್ರತಿಯಾಗಿ ಕೃತಘ್ನತೆ ತೋರಲಿಕ್ಕಾಗಿ. ಸದ್ಯ ನೀವು ಸಂಭ್ರಮಿಸಿರಿ. ಆದರೆ ಬಹುಬೇಗನೇ ನೀವು ಅರಿಯುವಿರಿ

[52] ಅವರು, ನಾವು ಅವರಿಗೆ ನೀಡಿದ್ದರಲ್ಲಿ, ತಮಗೆ ತಿಳಿದಿಲ್ಲದವರಿಗಾಗಿ (ಮಿಥ್ಯ ದೇವರುಗಳಿಗಾಗಿ) ಒಂದು ಪಾಲನ್ನು ನಿಗದಿಪಡಿಸುತ್ತಾರೆ. ಅಲ್ಲಾಹನಾಣೆ! ನೀವು ಕಟ್ಟಿಕೊಂಡಿದ್ದ ಸುಳ್ಳುಗಳ ಕುರಿತು ಖಂಡಿತ ನಿಮ್ಮನ್ನು ಪ್ರಶ್ನಿಸಲಾಗುವುದು

[53] ಅವರು ಅಲ್ಲಾಹನಿಗೆ ಪುತ್ರಿಯರಿದ್ದಾರೆಂದು ಆರೋಪಿಸುತ್ತಾರೆ. ಅವನು ಪಾವನನು. ಮತ್ತು ಅವರು ತಮಗೆ ಪ್ರಿಯವಾಗಿರುವುದನ್ನು ತಮ್ಮದೆನ್ನುತ್ತಾರೆ

[54] ಅವರಲ್ಲಿ ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ಶುಭವಾರ್ತೆಯನ್ನು ತಲುಪಿಸಲಾದಾಗ ಅವನ ಮುಖವು ತೀರಾ ಕಪ್ಪಿಟ್ಟು ಬಿಡುತ್ತದೆ ಮತ್ತು ಅವನು ರೋಷಭರಿತನಾಗಿ ಬಿಡುತ್ತಾನೆ

[55] ತನಗೆ ನೀಡಲಾದ ಶುಭವಾರ್ತೆಯ ಅನಿಷ್ಟದ ಕಾರಣ ಅವನು, ಅದನ್ನು ಅಪಮಾನದೊಂದಿಗೆ ಇಟುಕೊಳ್ಳಲೇ ಅಥವಾ ಮಣ್ಣಲ್ಲಿ ಹೂತು ಬಿಡಲೇ (ಎಂದು ಆಲೋಚಿಸುತ್ತಾ) ತನ್ನ ಜನಾಂಗದವರಿಂದ ಮುಖಮುಚ್ಚಿಕೊಂಡು ಅಲೆಯುತ್ತಿರುತ್ತಾನೆ. ನಿಮಗೆ ತಿಳಿದಿರಲಿ – ಬಹಳ ಕೆಟ್ಟದು, ಅವರ ಆ ತೀರ್ಮಾನ

[56] ಕೆಟ್ಟ ಉಪಮೆಗಳು ಪರಲೋಕದಲ್ಲಿ ನಂಬಿಕೆ ಇಲ್ಲದವರಿಗೆ ಅನ್ವಯಿಸುತ್ತವೆ. ಅಲ್ಲಾಹನಿಗೆ ಮಾತ್ರ ಅತ್ಯುನ್ನತ ಉಪಮೆಗಳು ಅನ್ವಯಿಸುತ್ತವೆ. ಅವನು ಅತ್ಯಂತ ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[57] ಒಂದು ವೇಳೆ ಅಲ್ಲಾಹನು, ಜನರು ಎಸಗುವ ಅಕ್ರಮಕ್ಕಾಗಿ ಅವರನ್ನು (ಆಗಲೇ) ದಂಡಿಸಲು ಹೊರಟಿದ್ದರೆ, ಅವನು ಇದರ (ಭೂಮುಖದ) ಮೇಲೆ ಯಾವ ಜೀವಿಯನ್ನೂ ಜೀವಂತ ಉಳಿಸುತ್ತಿರಲಿಲ್ಲ. ನಿಜವಾಗಿ ಅವನು ಒಂದು ನಿರ್ದಿಷ್ಟ ಅವಧಿಯ ತನಕ ಅವರಿಗೆ ಕಾಲಾವಕಾಶವನ್ನು ನೀಡುತ್ತಿದ್ದಾನೆ. ಕೊನೆಗೆ ಅವರ ಕಾಲವು ಬಂದು ಬಿಟ್ಟಾಗ, ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಂದ ಸಾಧ್ಯವಿಲ್ಲ

[58] ಅವರು ಸ್ವತಃ ತಮಗಾಗಿ ತೀರಾ ಇಷ್ಟಪಡದವುಗಳನ್ನೆಲ್ಲಾ ಅಲ್ಲಾಹನ ಮೇಲೆ ಆರೋಪಿಸಿ ಬಿಡುತ್ತಾರೆ ಮತ್ತು ಅವರ ನಾಲಿಗೆಗಳು, (ಅವರೇನು ಮಾಡಿದರೂ) ಅವರಿಗೆ ಖಂಡಿತ ಹಿತವಿದೆ ಎಂಬ ಸುಳ್ಳನ್ನು ರಚಿಸುತ್ತವೆ. ಅವರ ಪಾಲಿಗೆ ನರಕಾಗ್ನಿಯೇ ಖಚಿತವಾಗಿದೆ ಮತ್ತು ಇತರರಿಗಿಂತ ಮೊದಲು ಅವರನ್ನೇ (ಅಲ್ಲಿಗೆ) ಕಳಿಸಲಾಗುವುದು

[59] ಅಲ್ಲಾಹನಾಣೆ! ಖಂಡಿತವಾಗಿಯೂ ನಾವು ನಿಮಗಿಂತ ಹಿಂದಿನ ಸಮುದಾಯಗಳ ಕಡೆಗೂ ದೂತರನ್ನು ಕಳುಹಿಸಿದ್ದೆವು. ಆದರೆ ಶೈತಾನನು ಅವರಿಗೆ ತಮ್ಮ ಕರ್ಮಗಳನ್ನು ಚಂದಗಾಣಿಸಿದನು. ಇಂದು ಅವನೇ ಅವರ ಪರಮಾಪ್ತನಾಗಿರುವನು. ಅವರಿಗೆ ಯಾತನಾಮಯ ಶಿಕ್ಷೆ ಸಿಗಲಿದೆ

[60] ನೀವು ಈ ಗ್ರಂಥದ ಕುರಿತು ಭಿನ್ನತೆ ತಾಳುವವರಿಗೆ ಇದನ್ನು ಸ್ಪಷ್ಟವಾಗಿ ವಿವರಿಸಿಕೊಡಬೇಕೆಂದೇ ನಾವು ಇದನ್ನು ನಿಮಗೆ ಇಳಿಸಿಕೊಟ್ಟಿರುತ್ತೇವೆ. ಹಾಗೆಯೇ ಇದು, ವಿಶ್ವಾಸಿಗಳ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ

[61] ಅಲ್ಲಾಹನೇ ಆಕಾಶದಿಂದ ನೀರನ್ನಿಳಿಸಿದನು ಮತ್ತು ಅದರ ಮೂಲಕ, ಭೂಮಿಗೆ ಅದರ ಮರಣಾನಂತರ ಜೀವ ನೀಡಿದನು. ಖಂಡಿತವಾಗಿಯೂ ಇದರಲ್ಲಿ ಕೇಳುವ ಜನರಿಗೆ ಪಾಠವಿದೆ

[62] ನಿಮಗೆ ಜಾನುವಾರುಗಳಲ್ಲಿ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಗಳಲ್ಲಿರುವ ಮಲ ಹಾಗೂ ರಕ್ತಗಳ ಮಧ್ಯದಿಂದ ನಾವು ನಿಮಗೆ ಶುದ್ಧ ಹಾಲನ್ನು ಕುಡಿಸುತ್ತೇವೆ – ಅದು, ಕುಡಿಯುವವರಿಗೆ ತುಂಬಾ ಹಿತಕರವಾಗಿರುತ್ತದೆ

[63] ಹಾಗೆಯೇ ಖರ್ಜೂರ ಮತ್ತು ದ್ರಾಕ್ಷಿಯ ಫಲಗಳಿಂದ ನೀವು ಮಾದಕ ಪಾನೀಯಗಳನ್ನೂ ಉತ್ತಮ ಆಹಾರವನ್ನೂ ತಯಾರಿಸುತ್ತೀರಿ. ಇದರಲ್ಲೂ ಖಂಡಿತ ಪಾಠವಿದೆ – ಬುದ್ಧಿಯನ್ನು ಬಳಸುವವರಿಗೆ

[64] ಇನ್ನು ನಿಮ್ಮೊಡೆಯನು, ಜೇನು ನೊಣಗಳಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದನು; ‘‘ಕೆಲವು ಬೆಟ್ಟಗಳಲ್ಲೂ, ಮರಗಳಲ್ಲೂ ಅವರು (ಜನರು) ನಿರ್ಮಿಸುವ ಚಪ್ಪರಗಳಲ್ಲೂ ನೀನು ಮನೆ (ಗೂಡು)ಗಳನ್ನು ನಿರ್ಮಿಸು’’

[65] ‘‘ತರುವಾಯ ನೀನು ಎಲ್ಲ ಬಗೆಯ ಫಲಗಳನ್ನು ತಿನ್ನು ಮತ್ತು ನಿನ್ನ ಒಡೆಯನು ಒದಗಿಸಿರುವ ಸುಗಮವಾದ ಹಾದಿಗಳಲ್ಲಿ ಚಲಿಸು.’’ ಅವುಗಳ ಹೊಟ್ಟೆಯಿಂದ ಒಂದು ಪಾನೀಯವು ಹೊರಡುತ್ತದೆ. ಅದು ವಿವಿಧ ಬಣ್ಣಗಳಲ್ಲಿರುತ್ತದೆ. ಅದರಲ್ಲಿ ಜನರಿಗೆ ಗುಣವಿದೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪಾಠವಿದೆ

[66] ಹಾಗೆಯೇ, ಅಲ್ಲಾಹನೇ ನಿಮ್ಮನ್ನು ಸೃಷ್ಟಿಸುತ್ತಾನೆ ಮತ್ತು (ಅವನೇ) ನಿಮ್ಮನ್ನು ಸಾಯಿಸುತ್ತಾನೆ. ಇನ್ನು ನಿಮ್ಮಲ್ಲಿ ಕೆಲವರನ್ನು ಅತಿ ವೃದ್ಧಾಪ್ಯಕ್ಕೆ – ಅಂದರೆ ಎಲ್ಲವನ್ನೂ ತಿಳಿದ ಬಳಿಕ ಏನೂ ತಿಳಿದಿಲ್ಲದಂತಹ ಸ್ಥಿತಿಗೆ ಮರಳಿಸಲಾಗುತ್ತದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಬಲ್ಲವನೂ, ಸಮರ್ಥನೂ ಆಗಿದ್ದಾನೆ

[67] ಇನ್ನು ಅಲ್ಲಾಹನು ಸಂಪತ್ತಿನ ವಿಷಯದಲ್ಲಿ ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಮೇಲ್ಮೆಯನ್ನು ನೀಡಿದ್ದಾನೆ. ಆದರೆ ಮೇಲ್ಮೆ ನೀಡಲ್ಪಟ್ಟವರು ಯಾರೂ ತಮ್ಮ ಸಂಪತ್ತನ್ನು ತಮ್ಮ ದಾಸರಿಗೆ ಮರಳಿಸಿ, ಆ ವಿಷಯದಲ್ಲಿ ಅವರನ್ನು ತಮಗೆ ಸಮಾನರಾಗಿಸಿ ಕೊಳ್ಳುವುದಿಲ್ಲ. ಅವರೇನು ಅಲ್ಲಾಹನ ಅನುಗ್ರಹಗಳನ್ನು ತಿರಸ್ಕರಿಸುತ್ತಿರುವರೇ

[68] ಮತ್ತು ಅಲ್ಲಾಹನು ನಿಮಗಾಗಿ ನಿಮ್ಮಳಗಿಂದಲೇ ಜೊತೆಗಳನ್ನು ಸೃಷ್ಟಿಸಿದನು ಹಾಗೂ ಆ ನಿಮ್ಮ ಜೊತೆಗಳ ಮೂಲಕ ನಿಮಗೆ ಮಕ್ಕಳನ್ನೂ ಮೊಮ್ಮಕ್ಕಳನ್ನೂ ನೀಡಿದನು ಮತ್ತು ಅವನು ನಿಮಗೆ ಶುದ್ಧವಾದ ಜೀವನಾವಶ್ಯಕ ವಸ್ತುಗಳನ್ನು ನೀಡಿದನು. (ಹೀಗಿರುತ್ತಾ) ಅವರೇನು ಅಸತ್ಯವನ್ನು ನಂಬುತ್ತಾರೆಯೇ? ಮತ್ತು ಅಲ್ಲಾಹನ ಅನುಗ್ರಹಗಳನ್ನು ಅಲ್ಲಗಳೆಯುತ್ತಾರೆಯೇ

[69] ಮತ್ತು ಅವರೇನು ಅಲ್ಲಾಹನ ಹೊರತಾಗಿ, ಆಕಾಶದಿಂದಾಗಲಿ ಭೂಮಿಯಿಂದಾಗಲಿ ಅವರಿಗೆ ಯಾವ ಆಹಾರವನ್ನೂ ಒದಗಿಸುವ ಅಧಿಕಾರವಿಲ್ಲದವರನ್ನು ಮತ್ತು ಅಂತಹ ಸಾಮರ್ಥ್ಯವೂ ಇಲ್ಲದವರನ್ನು ಪೂಜಿಸುತ್ತಿದ್ದಾರೆಯೇ

[70] ಅಲ್ಲಾಹನಿಗೆ ಹೋಲಿಕೆಗಳನ್ನು ಕಲ್ಪಿಸಬೇಡಿ (ಏನನ್ನೂ ಅಲ್ಲಾಹನಿಗೆ ಹೋಲಿಸಬೇಡಿ). ಅಲ್ಲಾಹನು ಖಚಿತವಾಗಿ ಬಲ್ಲವನು ಮತ್ತು ನೀವು ಬಲ್ಲವರಲ್ಲ

[71] ಅಲ್ಲಾಹನು, ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು (ಯಾರದೋ) ಮಾಲಕತ್ವದಲ್ಲಿರುವ ಅಧಿಕಾರವಿಲ್ಲದ ದಾಸನಾಗಿದ್ದಾನೆ ಹಾಗೂ ಇನ್ನೊಬ್ಬನಿಗೆ ನಾವು ಉತ್ತಮ ಸಂಪತ್ತನ್ನು ದಯಪಾಲಿಸಿದ್ದು, ಅವನು ಅದರಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ವೆಚ್ಚ ಮಾಡುತ್ತಾನೆ. ಅವರೇನು ಸಮಾನರೇ? ಪ್ರಶಂಸೆಗಳು ಅಲ್ಲಾಹನಿಗೆ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ

[72] ಮತ್ತೆ ಅಲ್ಲಾಹನು ಇಬ್ಬರು ಪುರುಷರ ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು ಮೂಗನಾಗಿದ್ದಾನೆ ಹಾಗೂ ಏನನ್ನೂ ಮಾಡುವ ಸಾಮರ್ಥ್ಯ ಇಲ್ಲದವನಾಗಿದ್ದಾನೆ. ಅವನು ತನ್ನ ಒಡೆಯನ ಪಾಲಿಗೆ ಹೊರೆಯಾಗಿದ್ದಾನೆ. ಅವನು (ಒಡೆಯನು) ಆತನನ್ನು ಎಲ್ಲಿಗೆ ಕಳಿಸಿದರೂ ಅವನು ಯಾವುದೇ ಹಿತವನ್ನು ತರುವುದಿಲ್ಲ. ಅವನು ಮತ್ತು ಸದಾ ನ್ಯಾಯವನ್ನು ಆದೇಶಿಸುವವನು ಹಾಗೂ ಸ್ವತಃ ಸನ್ಮಾರ್ಗದಲ್ಲಿ ಇರುವಾತನು ಸಮಾನರಾಗಬಲ್ಲರೇ

[73] ಇನ್ನು, ಆಕಾಶಗಳ ಮತ್ತು ಭೂಮಿಯ ಗುಪ್ತ ಜ್ಞಾನವೆಲ್ಲವೂ ಅಲ್ಲಾಹನಿಗೇ ಸೇರಿದೆ. (ಲೋಕಾಂತ್ಯದ) ಆ ಕ್ಷಣವು, ಕಣ್ಮುಚ್ಚಿ ತೆರೆಯುವ ಹೊತ್ತಿಗೆ ಅಥವಾ ಅದಕ್ಕಿಂತಲೂ ಬೇಗನೆ ಸಂಭವಿಸಲಿದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[74] ಮತ್ತು ನಿಮಗೇನೂ ತಿಳಿಯದಿದ್ದಾಗ ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರ ತಂದನು ಮತ್ತು ನೀವು ಕೃತಜ್ಞರಾಗಬೇಕೆಂದು ನಿಮಗೆ ಕೇಳುವ ಸಾಮರ್ಥ್ಯವನ್ನೂ ನೋಡುವ ಸಾಮರ್ಥ್ಯವನ್ನೂ ಹೃದಯಗಳನ್ನೂ ರಚಿಸಿಕೊಟ್ಟನು

[75] ಅವರು ಕಾಣುವುದಿಲ್ಲವೇ, ಆಕಾಶ ಮಧ್ಯದಲ್ಲಿ ವಿಧೇಯ ಸ್ಥಿತಿಯಲ್ಲಿ ಹಾರಾಡುವ ಪಕ್ಷಿಗಳನ್ನು? ಅವುಗಳನ್ನು ಆಧರಿಸುವವನು ಅಲ್ಲಾಹನಲ್ಲದೆ ಬೇರಾರೂ ಅಲ್ಲ. ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ, ನಂಬುವ ಜನರಿಗೆ

[76] ಮತ್ತು ಅಲ್ಲಾಹನು ನಿಮ್ಮ ನಿವಾಸಗಳನ್ನು ನಿಮ್ಮ ಪಾಲಿಗೆ ನೆಮ್ಮದಿಯ ನೆಲೆಗಳಾಗಿ ಮಾಡಿದನು ಮತ್ತು ಜಾನುವಾರುಗಳ ಚರ್ಮಗಳನ್ನು ನಿಮ್ಮ ಪಾಲಿನ ಪ್ರಯಾಣ ಶಿಬಿರಗಳಾಗಿ ಮಾಡಿದನು. ಪ್ರಯಾಣ ಹೊರಡುವ ದಿನ ಹಾಗೂ ವಿಶ್ರಾಮದ ದಿನ ನೀವು ಅವುಗಳನ್ನು ಹಗುರವಾಗಿ (ಅನುಕೂಲಕರವಾಗಿ) ಕಾಣುತ್ತೀರಿ. ಇನ್ನು ಅವನು ಅವುಗಳ (ಜಾನುವಾರುಗಳ) ಉಣ್ಣೆ, ಮೃದುರೋಮ ಮತ್ತು ರೋಮಗಳಿಂದ ನಿಮಗೆ ಹಲವು ನಿತ್ಯ ಬಳಕೆಯ ವಸ್ತುಗಳನ್ನೂ ನಿರ್ದಿಷ್ಟ ಕಾಲದ ವರೆಗೆ ಬಳಸುವ ವಸ್ತುಗಳನ್ನೂ ಒದಗಿಸಿದನು

[77] ಮತ್ತು ಅಲ್ಲಾಹನು, ತಾನು ಸೃಷ್ಟಿಸಿದ ವಸ್ತುಗಳ ಮೂಲಕ ನಿಮಗೆ ನೆರಳನ್ನು ಒದಗಿಸಿದನು ಹಾಗೂ ನಿಮಗಾಗಿ ಬೆಟ್ಟಗಳಲ್ಲಿ ಆಶ್ರಯಗಳನ್ನು ನಿರ್ಮಿಸಿದನು ಮತ್ತು ನಿಮಗಾಗಿ, ನಿಮ್ಮನ್ನು ಸೆಖೆಯಿಂದ ರಕ್ಷಿಸುವ ಉಡುಗೆಗಳನ್ನೂ, ನಿಮ್ಮನ್ನು ನಿಮ್ಮ ಯುದ್ಧಗಳಲ್ಲಿ ರಕ್ಷಿಸುವ ಕವಚಗಳನ್ನೂ ರಚಿಸಿಕೊಟ್ಟನು. ಈ ರೀತಿ ಅವನು ನಿಮ್ಮ ಪಾಲಿಗೆ ತನ್ನ ಅನುಗ್ರಹವನ್ನು ಪೂರ್ತಿಗೊಳಿಸಿರುವನು

[78] (ದೂತರೇ,) ಇದೀಗ ಅವರು ಮುಖ ತಿರುಗಿಸಿಕೊಂಡರೆ, ನಿಮ್ಮ ಮೇಲಿರುವುದು, ಸ್ಪಷ್ಟವಾಗಿ ತಲುಪಿಸುವ ಹೊಣೆ ಮಾತ್ರ

[79] ಅವರು ಅಲ್ಲಾಹನ ಅನುಗ್ರಹಗಳನ್ನು ಗುರುತಿಸುತ್ತಾರೆ. ಆದರೆ ಆ ಬಳಿಕ ಅದನ್ನು ಅಲ್ಲಗಳೆದು ಬಿಡುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಕೃತಘ್ನರು

[80] ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಎಬ್ಬಿಸುವ ದಿನ, ಯಾವ ಧಿಕ್ಕಾರಿಗೂ (ಸಬೂಬು ಮಂಡಿಸಲು) ಅನುಮತಿ ಸಿಗಲಾರದು ಮತ್ತು ಪರಿತಪಿಸಿ ಮರಳಿರೆಂಬ ಬೇಡಿಕೆಯನ್ನೂ ಅವರ ಮುಂದೆ ಮಂಡಿಸಲಾಗದು

[81] ಅಕ್ರಮಿಗಳು ಶಿಕ್ಷೆಯನ್ನು ಕಂಡ ಬಳಿಕ, ಅವರ ಪಾಲಿಗೆ ಅದನ್ನು ಹಗುರಗೊಳಿಸಲಾಗುವುದಿಲ್ಲ ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ

[82] ಅನೇಕರನ್ನು ಪೂಜಿಸಿದ್ದವರು, ತಮ್ಮ ಪೂಜ್ಯರನ್ನು ಕಂಡಾಗ (ಅಲ್ಲಾಹನೊಡನೆ); ‘‘ನಮ್ಮೊಡೆಯಾ, ನಿನ್ನನ್ನು ಬಿಟ್ಟು ನಾವು ಕರೆದು ಪ್ರಾರ್ಥಿಸುತ್ತಿದ್ದ ನಮ್ಮ ಪಾಲುದಾರ ದೇವರುಗಳು ಇವರೇ’’ ಎನ್ನುವರು. ಆದರೆ ಅವರು (ಆ ಪಾಲುದಾರರು) ‘‘ಖಂಡಿತ ನೀವು ಸುಳ್ಳರು’’ ಎಂದು ಅವರಿಗೆ ಉತ್ತರಿಸುವರು

[83] ಮತ್ತು ಅವರು ಆ ದಿನ ಅಲ್ಲಾಹನ ಸನ್ನಿಧಿಯಲ್ಲಿ ಶರಣಾಗುವರು. ಅವರು ನಂಬಿಕೊಂಡಿದ್ದ ಎಲ್ಲ ಕೃತಕ ಆಶ್ರಯಗಳು ಅವರಿಂದ ಕಳೆದು ಹೋಗುವವು

[84] ಸತ್ಯವನ್ನು ಧಿಕ್ಕರಿಸಿದವರಿಗೆ ಮತ್ತು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರಿಗೆ, ಅವರು ಹಬ್ಬಿದ ಅಶಾಂತಿಯ ಕಾರಣ ನಾವು (ಪರಲೋಕದಲ್ಲಿ) ಹಿಂಸೆಯ ಮೇಲೆ ಮತ್ತಷ್ಟು ಹಿಂಸೆಯನ್ನು ಹೆಚ್ಚಿಸುವೆವು

[85] (ದೂತರೇ,) ನಾವು ಪ್ರತಿಯೊಂದು ಸಮುದಾಯದ ಕುರಿತು ಸಾಕ್ಷಿಯಾಗಿ ಅವರೊಳಗಿಂದಲೇ ಒಬ್ಬ ವ್ಯಕ್ತಿಯನ್ನು ಎಬ್ಬಿಸುವ ದಿನ, ಅವರೆಲ್ಲರ ಕುರಿತು ಸಾಕ್ಷಿಯಾಗಿ ನಿಮ್ಮನ್ನು ಮುಂದೆ ತರುವೆವು. ಎಲ್ಲ ವಿಷಯಗಳನ್ನೂ ವಿವರಿಸುವ ಗ್ರಂಥವನ್ನು (ಕುರ್‌ಆನ್‌ಅನ್ನು) ನಾವು ನಿಮಗೆ ಇಳಿಸಿಕೊಟ್ಟಿರುವೆವು – ಇದು ಶರಣಾಗಿರುವವರ ಪಾಲಿಗೆ ಮಾರ್ಗದರ್ಶಿಯೂ ಅನುಗ್ರಹವೂ ಶುಭವಾರ್ತೆಯೂ ಆಗಿದೆ

[86] ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ. ನೀವುಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ

[87] ನೀವು ಅಲ್ಲಾಹನ ಜೊತೆ ಕರಾರು ಮಾಡಿರುವಾಗ ಆ ಕರಾರನ್ನು ತಪ್ಪದೆ ಪಾಲಿಸಿರಿ. ಮತ್ತು ಪ್ರತಿಜ್ಞೆ ಮಾಡಿ ಅದನ್ನು ದೃಢಪಡಿಸಿದ ಬಳಿಕ ಹಾಗೂ ನೀವು ಖಚಿತವಾಗಿ ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷಿಯಾಗಿಸಿಕೊಂಡ ಬಳಿಕ ಆ ಪ್ರತಿಜ್ಞೆಯನ್ನು ಮುರಿಯಬೇಡಿ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು

[88] ತನ್ನ ನೂಲನ್ನು ಕಷ್ಟಪಟ್ಟು ನುಲಿದ ಬಳಿಕ ತಾನೇ ಅದನ್ನು ಚೂರು ಚೂರಾಗಿಸಿ ಬಿಟ್ಟವಳಂತೆ ನೀವಾಗಬೇಡಿ. ಒಂದು ಪಂಗಡವು ಇನ್ನೊಂದು ಪಂಗಡದೆದುರು ಮೇಲ್ಮೆ ಸಾಧಿಸಬಾರದೆಂದು, ಪರಸ್ಪರ ವಂಚಿಸಲಿಕ್ಕಾಗಿ ನೀವು ನಿಮ್ಮ ಪ್ರತಿಜ್ಞೆಗಳನ್ನು ನೆಪವಾಗಿ ಬಳಸುತ್ತೀರಿ. ನಿಜವಾಗಿ, ಈ (ಪ್ರತಿಜ್ಞೆಗಳ) ಮೂಲಕ ಅಲ್ಲಾಹನು ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ನೀವು (ಪರಸ್ಪರ) ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಅವನು ಪುನರುತ್ಥಾನ ದಿನ ನಿಮಗೆ ವಿವರಿಸಲಿದ್ದಾನೆ

[89] ಅಲ್ಲಾಹನು ಬಯಸಿದ್ದರೆ ನಿಮ್ಮನ್ನು ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾನೆ. ನೀವು ಮಾಡುತ್ತಿದ್ದ ಕರ್ಮಗಳ ಕುರಿತು ನಿಮ್ಮನ್ನು ಖಂಡಿತ ಪ್ರಶ್ನಿಸಲಾಗುವುದು

[90] ಮತ್ತು ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನೆಯ ನೆಪವಾಗಿ ಬಳಸಿಕೊಳ್ಳಬೇಡಿ. ಅನ್ಯಥಾ ಹೆಜ್ಜೆಯು ಸ್ಥಿರವಾದ ಬಳಿಕ ಅಸ್ಥಿರವಾಗಿ ಬಿಡುವುದು ಮತ್ತು ನೀವು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದುದರ ದುಷ್ಫಲವನ್ನು ಅನುಭವಿಸುವಿರಿ ಮತ್ತು ನಿಮಗೆ ಭಾರೀ ಶಿಕ್ಷೆ ಸಿಗಲಿದೆ

[91] ಮತ್ತು ನೀವು ಅಲ್ಲಾಹನ ಜೊತೆಗಿನ ಕರಾರನ್ನು ಕ್ಷುಲ್ಲಕ ಬೆಲೆಗೆ ಮಾರಬೇಡಿ. ನೀವು ಬಲ್ಲವರಾಗಿದ್ದರೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ

[92] ನಿಮ್ಮ ಬಳಿ ಇರುವುದೆಲ್ಲವೂ ಮುಗಿದು ಹೋಗುವುದು. ಆದರೆ ಅಲ್ಲಾಹನ ಬಳಿ ಇರುವ ಎಲ್ಲವೂ, ಸದಾಕಾಲ ಉಳಿದಿರುವುದು. ಖಂಡಿತವಾಗಿಯೂ ನಾವು, ಸಹನಶೀಲರಾಗಿದ್ದವರಿಗೆ, ಅವರು ಎಸಗಿದ ಕರ್ಮಕ್ಕಿಂತ ತುಂಬಾ ಶ್ರೇಷ್ಠವಾದ ಪ್ರತಿಫಲವನ್ನು ನೀಡಲಿದ್ದೇವೆ

[93] ಸತ್ಕರ್ಮವೆಸಗಿದ ವ್ಯಕ್ತಿ – ಪುರುಷನಿರಲಿ ಸ್ತ್ರೀ ಇರಲಿ – ವಿಶ್ವಾಸಿಯಾಗಿದ್ದಲ್ಲಿ, ನಾವು ಆತನಿಗೆ ಶುದ್ಧವಾದ ಬದುಕನ್ನು ನೀಡುವೆವು ಮತ್ತು ಅವರಿಗೆ ನಾವು ಅವರು ಎಸಗಿದ ಕರ್ಮಕ್ಕಿಂತಲೂ ತುಂಬಾ ಶ್ರೇಷ್ಠ ಪ್ರತಿಫಲವನ್ನು ನೀಡುವೆವು

[94] ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ

[95] ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ

[96] ಅವನಿಗೆ (ಶೈತಾನನಿಗೆ) ನಿಯಂತ್ರಣವಿರುವುದು ಅವನನ್ನು ತಮ್ಮ ಆಪ್ತನಾಗಿಸಿಕೊಂಡವರು ಹಾಗೂ ಅವನ (ಅಲ್ಲಾಹನ) ಜೊತೆ ಇತರರನ್ನು ಪಾಲುಗೊಳಿಸುವವರ ಮೇಲೆ ಮಾತ್ರ

[97] (ದೂತರೇ,) ನಾವು ಒಂದು ವಚನದ ಸ್ಥಾನದಲ್ಲಿ ಇನ್ನೊಂದು ವಚನವನ್ನು ತಂದಾಗ ಅವರು, ‘‘(ಇದನ್ನೆಲ್ಲಾ) ನೀವೇ ರಚಿಸುತ್ತೀರಿ’’ ಎನ್ನುತ್ತಾರೆ.- ತಾನು ಇಳಿಸಿರುವುದು ಏನೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿರುತ್ತಾನೆ. ನಿಜವಾಗಿ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ

[98] ಸತ್ಯ ಸಹಿತವಾಗಿ, ವಿಶ್ವಾಸಿಗಳನ್ನು ಸ್ಥಿರಗೊಳಿಸಲಿಕ್ಕಾಗಿ ಹಾಗೂ ಶರಣಾದವರಿಗೆ ಮಾರ್ಗದರ್ಶನ ಮತ್ತು ಶುಭವಾರ್ತೆಯಾಗಿ ಇದನ್ನು ನಿಮ್ಮ ಒಡೆಯನ ಕಡೆಯಿಂದ, ಪವಿತ್ರ ಆತ್ಮ (ಜಿಬ್ರೀಲರು) ಇಳಿಸಿರುವರೆಂದು ನೀವು ಹೇಳಿರಿ

[99] ಒಬ್ಬ ಮಾನವನು (ನಿಮಗೆ) ಇದನ್ನು ಕಲಿಸಿ ಕೊಡುತ್ತಾನೆಂದು ಅವರು ಆರೋಪಿಸುತ್ತಿರುವುದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಆ ಸುಳ್ಳಾರೋಪವನ್ನು ಯಾರೆಡೆಗೆ ಸೂಚಿಸುತ್ತಿರುವರೋ ಆತನದು ‘ಅಜಮಿ’ (ಅರಬಿ ಅಲ್ಲದ) ಭಾಷೆಯಾಗಿದೆ ಮತ್ತು ಇದು (ಕುರ್‌ಆನ್) ಸ್ಪಷ್ಟವಾದ ಅರಬಿ ಭಾಷೆಯಲ್ಲಿದೆ

[100] ಅಲ್ಲಾಹನ ವಚನಗಳಲ್ಲಿ ನಂಬಿಕೆ ಇಲ್ಲದವರಿಗೆ ಖಂಡಿತವಾಗಿಯೂ ಅಲ್ಲಾಹನು ಸರಿದಾರಿಯನ್ನು ತೋರುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆ ಇದೆ

[101] ಅಲ್ಲಾಹನ ವಚನಗಳಲ್ಲಿ ನಂಬಿಕೆ ಇಲ್ಲದವರು ಮಾತ್ರವೇ, ಸುಳ್ಳಾರೋಪಗಳನ್ನು ಸೃಷ್ಟಿಸುತ್ತಾರೆ. ಅವರೇ ಸುಳ್ಳುಗಾರರು

[102] (ಧಿಕ್ಕಾರವನ್ನು ಪ್ರಕಟಿಸಲು) ನಿರ್ಬಂಧಿತನಾಗಿದ್ದು, ಮನಸಾರೆ ವಿಶ್ವಾಸದಲ್ಲೇ ಸಂತೃಪ್ತನಾಗಿರುವವನ ಹೊರತು – ಅಲ್ಲಾಹನಲ್ಲಿ ವಿಶ್ವಾಸವಿಟ್ಟ ಬಳಿಕ ಆತನನ್ನು ಧಿಕ್ಕರಿಸಿದವನು ಮತ್ತು ಧಿಕ್ಕಾರಕ್ಕಾಗಿ ತನ್ನ ಮನಸ್ಸನ್ನು ತೆರೆದವನು, ಅಲ್ಲಾಹನ ಕ್ರೋಧಕ್ಕೆ ತುತ್ತಾಗುವನು ಮತ್ತು ಅವರಿಗೆ ಭಾರೀ ಘೋರ ಶಿಕ್ಷೆ ಸಿಗಲಿದೆ

[103] ಇದೇಕೆಂದರೆ, ಅವರು ಪರಲೋಕದೆದುರು ಈ ಲೋಕವನ್ನು ಮೆಚ್ಚಿದರು. ಮತ್ತು ಅಲ್ಲಾಹನು ಧಿಕ್ಕಾರಿಗಳಿಗೆ ಸರಿದಾರಿ ತೋರುವುದಿಲ್ಲ

[104] ಅಲ್ಲಾಹನು ಅವರ ಮನಸ್ಸುಗಳ ಮೇಲೂ ಕಿವಿಗಳ ಮೇಲೂ ಕಣ್ಣುಗಳ ಮೇಲೂ ಮುದ್ರೆ ಒತ್ತಿರುವನು. ಅವರೇ ಅರಿವಿಲ್ಲದವರು

[105] ಪರಲೋಕದಲ್ಲಿ ನಷ್ಟ ಅನುಭವಿಸುವವರು ಅವರೇ ಎಂಬುದರಲ್ಲಿ ಸಂದೇಹವಿಲ್ಲ

[106] ಅತ್ತ ಖಂಡಿತವಾಗಿಯೂ ನಿಮ್ಮ ಒಡೆಯನು, ಪರೀಕ್ಷೆಗೆ ತುತ್ತಾದ ಬಳಿಕ ವಲಸೆ ಹೋದ ಮತ್ತು ಆ ಬಳಿಕ ಹೋರಾಡಿದ ಹಾಗೂ ಸಹನಶೀಲರಾಗಿದ್ದವರ ಪರವಾಗಿದ್ದಾನೆ. ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮ ಒಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ

[107] ಪ್ರತಿಯೊಬ್ಬನೂ ಕೇವಲ ತನ್ನ ಪರವಾಗಿ ಮಾತ್ರ ವಾದಿಸಲಿರುವ ಮತ್ತು ಪ್ರತಿಯೊಬ್ಬನಿಗೂ ತನ್ನ ಕರ್ಮದ ಪರಿಪೂರ್ಣ ಪ್ರತಿಫಲ ನೀಡಲಾಗುವ ಆ ದಿನ, ಅವರ ಮೇಲೆ ಅನ್ಯಾಯ ನಡೆಯದು

[108] ಅಲ್ಲಾಹನು ಒಂದು ನಾಡಿನ ಉದಾಹರಣೆ ನೀಡಿರುವನು; ಅದು ತುಂಬಾ ಶಾಂತ ಹಾಗೂ ಸಂತೃಪ್ತವಾಗಿತ್ತು. ಅದರ (ವಾಸಿಗಳ) ಆಹಾರವು ಧಾರಾಳವಾಗಿ ಅದರ ಬಳಿಗೆ ತಲುಪುತ್ತಿತ್ತು. ಮುಂದೆ ಅದು, ಅಲ್ಲಾಹನ ಅನುಗ್ರಹಗಳೆದುರು ಕೃತಘ್ನತೆ ತೋರಿತು. ಅವರ ಈ ಕೃತ್ಯಗಳ ಫಲವಾಗಿ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯಗಳ ರುಚಿ ಉಣಿಸಿದನು

[109] ಖಂಡಿತವಾಗಿಯೂ ಅವರ ಬಳಿಗೆ, ಅವರೊಳಗಿಂದಲೇ ದೂತರು ಬಂದರು. ಆದರೆ ಅವರು (ನಾಡಿನವರು) ಅವರನ್ನು ತಿರಸ್ಕರಿಸಿದರು. ಕೊನೆಗೆ (ಅಲ್ಲಾಹನ) ಶಿಕ್ಷೆಯು ಅವರ ಮೇಲೆರಗಿತು. ಅವರು ಅಕ್ರಮಿಗಳಾಗಿದ್ದರು

[110] ನೀವು ನಿಜಕ್ಕೂ ಅವನನ್ನೇ (ಅಲ್ಲಾಹನನ್ನೇ) ಪೂಜಿಸುವವರಾಗಿದ್ದರೆ, ಅಲ್ಲಾಹನು ನಿಮಗೆ ನೀಡಿರುವ ಸಮ್ಮತ ಹಾಗೂ ಶುದ್ಧ ಆಹಾರವನ್ನು ತಿನ್ನಿರಿ ಮತ್ತು ಅಲ್ಲಾಹನ ಅನುಗ್ರಹಗಳಿಗಾಗಿ ಕೃತಜ್ಞತೆ ಸಲ್ಲಿಸಿರಿ

[111] ಶವ,ರಕ್ತ, ಹಂದಿಯ ಮಾಂಸ ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರನ್ನು ಉಚ್ಚರಿಸಲಾದವುಗಳು ನಿಮ್ಮ ಪಾಲಿಗೆ ನಿಷಿದ್ಧವಾಗಿವೆ. ಇನ್ನು, ತೀರಾ ಅಸಹಾಯಕನಾಗಿ ಬಿಟ್ಟವನು ಅವಿಧೇಯತೆಯ ಅಥವಾ ವಿದ್ರೋಹದ ಇರಾದೆ ಇಲ್ಲದೆ (ತಪ್ಪು ಮಾಡಿದರೂ) ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[112] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲು ‘‘ಇದು ಹಲಾಲ್’’ ಹಾಗೂ ‘‘ಇದು ಹರಾಮ್’’ ಎಂದು ನಿಮ್ಮ ನಾಲಿಗೆಗಳು ಸೃಷ್ಟಿಸುವ ಸುಳ್ಳುಗಳನ್ನು ನೀವು ಹೇಳಬೇಡಿ. ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವವರು ಎಂದೂ ವಿಜಯಿಗಳಾಗುವುದಿಲ್ಲ

[113] ತೀರಾ ಅಲ್ಪ ಲಾಭ(ವನ್ನು ಅವರು ಅರಸುತ್ತಿದ್ದಾರೆ). (ಕೊನೆಗೆ) ಅವರಿಗೆ ಯಾತನಾಮಯ ಶಿಕ್ಷೆ ಸಿಗಲಿದೆ

[114] ನಾವು ಈ ಹಿಂದೆ ನಿಮಗೆ ತಿಳಿಸಿರುವ ವಸ್ತುಗಳನ್ನು ನಾವು ಯಹೂದಿಗಳ ಪಾಲಿಗೆ ನಿಷೇಧಿಸಿದ್ದೆವು. ನಾವು ಅವರ ಮೇಲೆ ಯಾವ ಅಕ್ರಮವನ್ನೂ ಎಸಗಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮ ವೆಸಗಿಕೊಂಡಿದ್ದರು

[115] ಖಂಡಿತವಾಗಿಯೂ ನಿಮ್ಮಡೆಯನು, ಅಜ್ಞಾನದಿಂದ ದುಷ್ಕರ್ಮಗಳನ್ನೆಸಗಿ ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಪರವಾಗಿದ್ದಾನೆ. ಆ ಬಳಿಕ ನಿಮ್ಮ ಒಡೆಯನು (ಅವರ ಪಾಲಿಗೆ) ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ

[116] ನಿಜಕ್ಕೂ ಇಬ್ರಾಹೀಮರು ಸ್ವತಃ ತಾವೇ ಒಂದು ಸಮುದಾಯವಾಗಿದ್ದರು. ಅವರು ಸಂಪೂರ್ಣ ಏಕಾಗ್ರಚಿತ್ತರಾಗಿ ಅಲ್ಲಾಹನಿಗೆ ವಿಧೇಯರಾಗಿದ್ದರು. ಅವರು ಬಹುದೇವಾರಾಧಕರಾಗಿರಲಿಲ್ಲ

[117] ಅವರು ಅವನ ಅನುಗ್ರಹಗಳಿಗೆ ಕೃತಜ್ಞರಾಗಿದ್ದರು. ಅವನು ಅವರನ್ನು ಆರಿಸಿಕೊಂಡನು ಮತ್ತು ಅವರನ್ನು ನೇರಮಾರ್ಗದೆಡೆಗೆ ನಡೆಸಿದನು

[118] ಮತ್ತು ನಾವು ಅವರಿಗೆ ಈ ಲೋಕದಲ್ಲಿ ಹಿತವನ್ನು ನೀಡಿದೆವು. ಇನ್ನು ಪರಲೋಕದಲ್ಲಿ ಖಂಡಿತ ಅವರು ಸಜ್ಜನರ ಸಾಲಲ್ಲಿರುವರು

[119] ಮುಂದೆ, ನೀವು ಏಕಾಗ್ರಚಿತ್ತರಾಗಿದ್ದ ಇಬ್ರಾಹೀಮರ ದಾರಿಯನ್ನು ಅನುಸರಿಸಬೇಕೆಂದು ನಾವು ನಿಮ್ಮೆಡೆಗೆ ದಿವ್ಯವಾಣಿಯನ್ನು ರವಾನಿಸಿದೆವು. ಅವರು ಬಹುದೇವಾರಾಧಕರಾಗಿರಲಿಲ್ಲ

[120] ‘ಸಬ್ತ್’ನ (ಶನಿವಾರದ) ನಿರ್ಬಂಧಗಳನ್ನು, ಆಕುರಿತು ಭಿನ್ನಾಭಿಪ್ರಾಯ ತಾಳಿದವರ ಮೇಲೆ ಮಾತ್ರ ವಿಧಿಸಲಾಗಿತ್ತು. ಖಂಡಿತವಾಗಿಯೂ ನಿಮ್ಮ ಒಡೆಯನು, ಅವರು ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು, ಪುನರುತ್ಥಾನ ದಿನ, ಅವರ ನಡುವೆ ಇತ್ಯರ್ಥಗೊಳಿಸಿ ಬಿಡುವನು

[121] ನೀವು (ಜನರನ್ನು) ಯುಕ್ತಿಯೊಂದಿಗೆ ಹಾಗೂ ಸದುಪದೇಶದೊಂದಿಗೆ ನಿಮ್ಮ ಒಡೆಯನ ಕಡೆಗೆ ಕರೆಯಿರಿ – ಮತ್ತು ಅತ್ಯುತ್ತಮ ರೀತಿಯಲ್ಲಿ ಅವರೊಡನೆ ವಾದಿಸಿರಿ. ಖಂಡಿತವಾಗಿಯೂ ತನ್ನ ದಾರಿಯಿಂದ ದೂರ ಸರಿದವನು ಯಾರು ಎಂಬುದನ್ನು ನಿಮ್ಮ ಒಡೆಯನು ಬಲ್ಲನು ಮತ್ತು ಸರಿದಾರಿಯಲ್ಲಿರುವವರನ್ನೂ ಅವನು ಬಲ್ಲನು

[122] ಒಂದು ವೇಳೆ ನೀವು ದಂಡಿಸುವುದಿದ್ದರೂ, ಅವರು ನಿಮ್ಮನ್ನು ನೋಯಿಸಿದಷ್ಟು ಮಾತ್ರ ನೀವು ಅವರನ್ನು ನೋಯಿಸಿರಿ. ಇನ್ನು ನೀವು ಸಹನೆಯನ್ನು ಪಾಲಿಸಿದರೆ, ಸಹನ ಶೀಲರ ಪಾಲಿಗೆ ಅದುವೇ ಉತ್ತಮ

[123] ನೀವು ಸಹನೆಯನ್ನು ಪಾಲಿಸಿರಿ – ನಿಮ್ಮ ಸಹನೆಯು ಅಲ್ಲಾಹನ ನೆರವಿನದೇ ಫಲವಾಗಿದೆ. ಮತ್ತು ನೀವು ಅವರ ವಿಷಯದಲ್ಲಿ ದುಃಖಿಸಬೇಡಿ ಹಾಗೂ ಅವರ ಕುತಂತ್ರಗಳ ಕುರಿತಂತೆ ಬೇಸರಿಸಬೇಡಿ

[124] ಖಂಡಿತವಾಗಿಯೂ ಅಲ್ಲಾಹನು ಧರ್ಮ ನಿಷ್ಠರ ಹಾಗೂ ಸತ್ಕರ್ಮಿಗಳ ಜೊತೆಗಿದ್ದಾನೆ

[125] ಜುಝ್

[126] ರಾತ್ರಿಯ ವೇಳೆ ತನ್ನ ದಾಸನನ್ನು, ಮಸ್ಜಿದುಲ್ ಹರಾಮ್‌ನಿಂದ, ನಾವು ಪರಿಸರವನ್ನು ಸಮೃದ್ಧ ಗೊಳಿಸಿರುವ ಮಸ್ಜಿದುಲ್ ಅಕ್ಸಾದೆಡೆಗೆ ಕರೆದೊಯ್ದವನು ಪಾವನನು. ಇದು ಆತನಿಗೆ ನಮ್ಮ ಸಂಕೇತಗಳನ್ನು ತೋರಿಸಿಕೊಡುವುದಕ್ಕಾಗಿತ್ತು. ಅವನು (ಅಲ್ಲಾಹನು) ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ

[127] ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು ಮತ್ತು ಅದನ್ನು ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು – ನೀವು ನನ್ನ ಹೊರತು ಬೇರೆ ಯಾರನ್ನೂ ಕಾರ್ಯ ಸಾಧಕನಾಗಿ ಅಂಗೀಕರಿಸಬಾರದು (ಎಂದು ಅದರಲ್ಲಿ ಬೋಧಿಸಲಾಗಿತ್ತು)

[128] ನಾವು ನೂಹ್‌ರ ಜೊತೆ (ಹಡಗನ್ನು) ಹತ್ತಿಸಿದ್ದವರ ಸಂತತಿಗಳೇ, ಅವರು (ನೂಹ್) ಖಂಡಿತ ಒಬ್ಬ ಕೃತಜ್ಞ ದಾಸರಾಗಿದ್ದರು

ರಾತ್ರಿಯ ಪಯಣ

Surah 17

[1] ನಾವು ಇಸ್ರಾಈಲರ ಸಂತತಿಗಳಿಗೆ ಗ್ರಂಥದಲ್ಲೇ (ಹೀಗೆಂದು) ತಿಳಿಸಿಬಿಟ್ಟಿದ್ದೆವು: ನೀವು ಭೂಮಿಯಲ್ಲಿ ಎರಡು ಬಾರಿ ಅಶಾಂತಿಯನ್ನು ಹಬ್ಬುವಿರಿ ಮತ್ತು ಭಾರೀ ಪ್ರಕ್ಷೋಭೆಯನ್ನುಂಟು ಮಾಡುವಿರಿ

[2] ಅವೆರಡರ ಪೈಕಿ ಮೊದಲ ಅವಧಿ ಬಂದಾಗ, ತುಂಬಾ ಬಲಿಷ್ಠ ಹೋರಾಟಗಾರ ರಾಗಿರುವ ನಮ್ಮ ದಾಸರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು ಮತ್ತು ಅವರು ನಾಡುಗಳಿಗೆ ನುಗ್ಗಿ ವ್ಯಾಪಕ ವಿನಾಶವನ್ನು ಮೆರೆಯುವರು – ಈ ವಾಗ್ದಾನವು ಖಂಡಿತ ಈಡೇರುವುದು

[3] ಮುಂದೆ ನಾವು ಅವರ ವಿರುದ್ಧ ನಿಮಗೆ ಪ್ರಾಬಲ್ಯವನ್ನು ನೀಡುವೆವು ಮತ್ತು ಸಂಪತ್ತು ಹಾಗೂ ಸಂತಾನಗಳ ಮೂಲಕ ನಿಮಗೆ ನಾವು ನೆರವಾಗುವೆವು ಮತ್ತು ನಿಮ್ಮನ್ನು ಒಂದು ದೊಡ್ಡ ಪಡೆಯಾಗಿ ಬೆಳೆಸುವೆವು

[4] ನೀವು ಒಳಿತನ್ನು ಮಾಡಿದರೆ, ನಿಮಗಾಗಿಯೇ ಮಾಡುವಿರಿ ಮತ್ತು ಕೆಡುಕನ್ನು ಮಾಡಿದರೂ ನಿಮಗಾಗಿಯೇ ಮಾಡುವಿರಿ. ಮುಂದೆ, ಆ ಎರಡನೆಯ ಅವಧಿಯು ಬಂದು ಬಿಟ್ಟಾಗ (ಮತ್ತೆ ಕೆಲವರನ್ನು ನಾವು ನಿಮ್ಮ ಮೇಲೆ ಹೇರಿ ಬಿಡುವೆವು) – ನಿಮ್ಮ ಮುಖಗಳನ್ನು ವಿಕೃತಗೊಳಿಸಲಿಕ್ಕಾಗಿ, ಮೊದಲ ಬಾರಿ ನುಗ್ಗಿದಂತೆ (ಅಲ್‌ಅಕ್ಸಾ) ಮಸೀದಿಯೊಳಗೆ ನುಗ್ಗಲಿಕ್ಕಾಗಿ ಮತ್ತು ತಮ್ಮ ನಿಯಂತ್ರಣಕ್ಕೆ ಸಿಗುವ ಎಲ್ಲವನ್ನೂ ನಾಶಮಾಡಲಿಕ್ಕಾಗಿ

[5] ನಿಮ್ಮ ಒಡೆಯನು ನಿಮ್ಮ ಮೇಲೆ ಕರುಣೆ ತೋರ ಬಹುದು. ಆದರೆ ನೀವು ಮತ್ತೆ ಅದನ್ನೇ ಮಾಡಿದರೆ ನಾವೂ ಅದನ್ನೇ ಮಾಡುವೆವು. ನಾವು ನರಕವನ್ನೇ ಧಿಕ್ಕಾರಿಗಳ ಪಾಲಿನ ಸೆರೆಮನೆಯಾಗಿಸಿರುವೆವು

[6] ಈ ಕುರ್‌ಆನ್ ಬಹಳ ಸ್ಥಿರವಾದ ದಾರಿಯೆಡೆಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಇದು, ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಬಹುದೊಡ್ಡ ಪ್ರತಿಫಲವಿದೆ ಎಂಬ ಶುಭವಾರ್ತೆಯನ್ನು ನೀಡುತ್ತದೆ

[7] ಮತ್ತು ಪರಲೋಕದಲ್ಲಿ ನಂಬಿಕೆ ಇಲ್ಲದವರಿಗಾಗಿ ನಾವು ಕಠಿಣ ಶಿಕ್ಷೆಯನ್ನು ಸಿದ್ಧ ಪಡಿಸಿಟ್ಟಿದ್ದೇವೆ ಎಂದು ಇದು ಎಚ್ಚರಿಸುತ್ತದೆ

[8] ಮಾನವನು ಒಳಿತನ್ನು ಬೇಡಬೇಕಾದ ರೀತಿಯಲ್ಲಿ ಕೆಡುಕನ್ನು ಬೇಡುತ್ತಾನೆ. ಮಾನವನು ತುಂಬಾ ಆತುರ ಜೀವಿಯಾಗಿದ್ದಾನೆ

[9] ನಾವು ರಾತ್ರಿ ಹಾಗೂ ಹಗಲನ್ನು ಎರಡು ಪುರಾವೆಗಳಾಗಿಸಿದ್ದೇವೆ ಮತ್ತು ನೀವು ನಿಮ್ಮ ಒಡೆಯನ ಅನುಗ್ರಹವನ್ನು ಅರಸಬೇಕೆಂದು ಹಾಗೂ ವರ್ಷಗಳ ಸಂಖ್ಯೆ ಮತ್ತು (ಇತರ) ಪ್ರಮಾಣಗಳನ್ನು ತಿಳಿಯಬೇಕೆಂದು, ನಾವು ರಾತ್ರಿಯ ಪುರಾವೆಯನ್ನು ಮಂದಗೊಳಿಸಿ, ಹಗಲಿನ ಪುರಾವೆಯನ್ನು ಉಜ್ವಲವಾಗಿಸಿದ್ದೇವೆ. ಮತ್ತು ನಾವು ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದ್ದೇವೆ

[10] ನಾವು ಪ್ರತಿಯೊಬ್ಬ ಮಾನವನ ಅದೃಷ್ಟವನ್ನು ಅವನ ಕೊರಳಿಗೆ ಕಟ್ಟಿದ್ದೇವೆ. ಪುನರುತ್ಥಾನ ದಿನ ನಾವು ಅವನಿಗಾಗಿ ಒಂದು ಪುಸ್ತಕವನ್ನು ಹೊರತೆಗೆಯುವೆವು. ಅವನು ಅದನ್ನು ತೆರೆದಿರುವ ಸ್ಥಿತಿಯಲ್ಲಿ ಕಾಣುವನು

[11] (ಅಂದು ಅವನೊಡನೆ) ‘‘ಓದು ನಿನ್ನ (ಕರ್ಮಗಳ)ಗ್ರಂಥವನ್ನು ಇಂದು ನಿನ್ನ ವಿಚಾರಣೆಗೆ ನೀನೇ ಸಾಕು’’ ಎನ್ನಲಾಗುವುದು

[12] ಸನ್ಮಾರ್ಗದಲ್ಲಿ ನಡೆಯುವಾತನು ಸ್ವತಃ ತನ್ನ ಲಾಭಕ್ಕಾಗಿಯಷ್ಟೇ ಸನ್ಮಾರ್ಗದಲ್ಲಿ ನಡೆಯುತ್ತಾನೆ. ಇನ್ನು ದಾರಿಗೆಟ್ಟವನ ದಾರಿಗೇಡಿತನದ ದುಷ್ಪರಿಣಾಮ ಕೂಡಾ ಅವನ ಮೇಲೆಯೇ ಇರುವುದು. (ಪುನರುತ್ಥಾನ ದಿನ) ಹೊರೆ ಹೊರುವ ಯಾವೊಬ್ಬನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. ನಾವಂತು ದೂತರನ್ನು ಕಳಿಸುವ ತನಕ ಯಾರನ್ನೂ ಶಿಕ್ಷಿಸುವವರಲ್ಲ

[13] ನಾವು ಒಂದು ನಾಡನ್ನು ನಾಶಗೊಳಿಸ ಬಯಸಿದಾಗ ಅದರಲ್ಲಿನ ಸ್ಥಿತಿವಂತರಿಗೆ (ನೀವಿಚ್ಛಿಸಿದ್ದನ್ನು ಮಾಡಿರಿ ಎಂದು) ಆದೇಶಿಸಿ ಬಿಡುತ್ತೇವೆ ಮತ್ತು ಅವರು ಅಲ್ಲಿ ಅವಿಧೇಯತೆಯನ್ನು ಮೆರೆಯಲಾರಂಭಿಸುತ್ತಾರೆ. ಆಗ ಅವರ ಮೇಲೆ ನಮ್ಮ ಶಿಕ್ಷೆಯು ಕಡ್ಡಾಯವಾಗಿ ಬಿಡುತ್ತದೆ ಮತ್ತು ನಾವು ಅವರನ್ನು ಸಂಪೂರ್ಣ ನಿರ್ನಾಮಗೊಳಿಸಿ ಬಿಡುತ್ತೇವೆ

[14] ನೂಹ್‌ರ ಬಳಿಕ ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿ ಬಿಟ್ಟೆವು. ತನ್ನ ದಾಸರ ಪಾಪಗಳ ವಿಚಾರಣೆಗೆ ನಿಮ್ಮ ಒಡೆಯನೇ ಸಾಕು. ಅವನು ಎಲ್ಲವನ್ನೂ ಅರಿತಿರುವವನು ಮತ್ತು ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ

[15] ಆತುರವಾಗಿ ಸಿಗುವುದನ್ನು (ಇಹದ ಸುಖವನ್ನು) ಬಯಸುವವರ ಪೈಕಿ, ನಾವಿಚ್ಛಿಸಿದಾತನಿಗೆ ನಾವು , ನಾವಿಚ್ಛಿಸುವಷ್ಟನ್ನು ಆತುರವಾಗಿಯೇ (ಇಹದಲ್ಲೇ) ಕೊಟ್ಟು ಬಿಡುತ್ತೇವೆ. ಆದರೆ ಮುಂದೆ ನಾವು ಆತನಿಗೆ ನರಕವನ್ನು ವಿಧಿಸಿ ಬಿಡುತ್ತೇವೆ. ನಿಂದ್ಯನಾಗಿಯೂ ಅಪಮಾನಿತನಾಗಿಯೂ ಅವನು ಅದರೊಳಗೆ ಸೇರುವನು

[16] ಇನ್ನು, ಪರಲೋಕವನ್ನು ಅಪೇಕ್ಷಿಸಿ, ಅದಕ್ಕಾಗಿ, ಸಾಕಷ್ಟು ಶ್ರಮಿಸುವವನು ಮತ್ತು ವಿಶ್ವಾಸಿಯೂ ಆಗಿರುವವನು – ಅವರ ಶ್ರಮವೆಲ್ಲಾ ಸ್ವೀಕೃತವಾಗುವುದು

[17] ನಿಮ್ಮಡೆಯನ ಅನುಗ್ರಹಗಳಿಂದ ನಾವು ಇವರಿಗೂ ನೀಡುವೆವು, ಅವರಿಗೂ ನೀಡುವೆವು. ನಿಮ್ಮ ಒಡೆಯನ ಅನುಗ್ರಹಗಳನ್ನು ತಡೆಹಿಡಿಯಲಾಗುವುದಿಲ್ಲ

[18] ನಾವು (ಈ ಲೋಕದಲ್ಲೇ) ಯಾವ ರೀತಿ ಅವರಲ್ಲಿ ಕೆಲವರಿಗೆ ಕೆಲವರಿಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುತ್ತೇವೆಂಬುದನ್ನು ನೋಡಿರಿ. ಇನ್ನು ಪರಲೋಕವಂತು ಸ್ಥಾನಮಾನಗಳಲ್ಲೂ, ಶ್ರೇಷ್ಠತೆಯಲ್ಲೂ ತುಂಬಾ ಹಿರಿದಾಗಿರುತ್ತದೆ

[19] ಅಲ್ಲಾಹನ ಜೊತೆ ಬೇರೆಯಾರನ್ನೂ ದೇವರಾಗಿಸಿಕೊಳ್ಳಬೇಡಿ. ಹಾಗೆ ಮಾಡಿದರೆ ನೀವು ಸದಾ ನಿಂದಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾಗುವುದು

[20] ನಿಮಗೆ ನಿಮ್ಮ ಒಡೆಯನು (ಹೀಗೆಂದು) ವಿಧಿಸಿರುತ್ತಾನೆ; ನೀವು ಅವನೊಬ್ಬನ ಹೊರತು ಬೇರಾರನ್ನೂ ಪೂಜಿಸಬಾರದು ಮತ್ತು ತಂದೆ ತಾಯಿಯ ಜೊತೆ ಸೌಜನ್ಯಶೀಲರಾಗಿರಬೇಕು. ಒಂದು ವೇಳೆ ಅವರಲೊಬ್ಬರು ಅಥವಾ ಅವರಿಬ್ಬರೂ ನಿಮ್ಮ ಮುಂದೆ ಮುದಿ ವಯಸ್ಸನ್ನು ತಲುಪಿದರೆ, ಅವರೆದುರು ಚಕಾರ ವೆತ್ತಬೇಡಿ ಮತ್ತು ಅವರನ್ನು ಗದರಿಸಬೇಡಿ. ಅವರ ಜೊತೆ ಗೌರವದೊಂದಿಗೆ ಮಾತನಾಡಿರಿ

[21] ವಿನಯ ಹಾಗೂ ವಾತ್ಸಲ್ಯದೊಂದಿಗೆ ಅವರೆದುರು ಸದಾ ಬಾಗಿಕೊಂಡಿರಿ ಮತ್ತು ‘‘ನನ್ನೊಡೆಯಾ, ನನ್ನ ಬಾಲ್ಯದಲ್ಲಿ ಅವರಿಬ್ಬರೂ ನನ್ನನ್ನು ಪೋಷಿಸಿದಂತೆಯೇ ನೀನು ಅವರಿಬ್ಬರ ಮೇಲೂ ಕೃಪೆ ತೋರು’’ ಎಂದು ಪ್ರಾರ್ಥಿಸಿರಿ

[22] ನಿಮ್ಮ ಒಡೆಯನು ನಿಮ್ಮ ಮನಸ್ಸಿನೊಳಗಿನ ವಿಚಾರಗಳನ್ನೂ ಚೆನ್ನಾಗಿಬಲ್ಲನು. ನೀವು ಸಜ್ಜನರಾಗಿ ಬಾಳಿದ್ದರೆ, ಖಂಡಿತವಾಗಿಯೂ ಅವನು, ಅವನೆಡೆಗೆ ಸದಾ ಒಲಿಯುತ್ತಿದ್ದವರ ಪಾಲಿಗೆ ಕ್ಷಮಾಶೀಲನಾಗಿರುತ್ತಾನೆ

[23] ನೀವು ಬಂಧುಗಳಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಅವರ ಹಕ್ಕನ್ನು ಸಲ್ಲಿಸಿರಿ ಮತ್ತು ನೀವು ದುಂದು ವೆಚ್ಚ ಮಾಡಬೇಡಿ

[24] ದುಂದು ವೆಚ್ಚ ಮಾಡುವವರು ಖಂಡಿತ ಶೈತಾನನ ಸಹೋದರರು. ಶೈತಾನನು ತನ್ನ ಒಡೆಯನಿಗೆ ಕೃತಘ್ನನಾಗಿದ್ದನು

[25] ಒಂದು ವೇಳೆ, ನೀವಿನ್ನೂ ನಿಮ್ಮ ಒಡೆಯನ ನಿರೀಕ್ಷಿತ ಅನುಗ್ರಹವನ್ನು ಕಾಯುತ್ತಿರುವ ಕಾರಣ, ಅವರಿಂದ (ಬಂಧುಗಳು, ಬಡವರು ಮುಂತಾದವರಿಂದ) ಮುಖ ತಿರುಗಿಸಿಕೊಳ್ಳಬೇಕಾಗಿ ಬಂದರೂ ಅವರೊಂದಿಗೆ ಬಹಳ ಸೌಮ್ಯವಾದ ಮಾತನ್ನೇ ಆಡಿರಿ

[26] ನೀವು (ತೀರಾ ಜಿಪುಣರಾಗಿ) ನಿಮ್ಮ ಕೈಯನ್ನು ಕೊರಳಿಗೆ ಕಟ್ಟಿಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ಬಿಚ್ಚಿ ಬಿಡಲೂ ಬೇಡಿ – (ಅನ್ಯಥಾ) ಅಪಮಾನಿತರಾಗಿಯೂ ಅಸಹಾಯಕರಾಗಿಯೂ ಕುಳಿತಿರಬೇಕಾದೀತು

[27] ಖಂಡಿತವಾಗಿಯೂ ನಿಮ್ಮ ಒಡೆಯನು ತಾನಿಚ್ಛಿಸಿದವರ ಪಾಲಿಗೆ ಸಂಪತ್ತನ್ನು ಧಾರಾಳಗೊಳಿಸಿ ಬಿಡುತ್ತಾನೆ. ಮತ್ತು (ತಾನಿಚ್ಛಿಸಿದವರ ಪಾಲಿಗೆ ಅದನ್ನು) ಸೀಮಿತ ಗೊಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ

[28] ನೀವು ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ಅವರಿಗೂ ನಿಮಗೂ ನಾವೇ ಆಹಾರವನ್ನು ನೀಡುತ್ತೇವೆ. ಅವರ ಹತ್ಯೆಯು ಖಂಡಿತ ಮಹಾ ಪಾಪವಾಗಿದೆ

[29] ನೀವು ವ್ಯಭಿಚಾರದ ಹತ್ತಿರವೂ ಸುಳಿಯಬೇಡಿ – ಅದು ಖಂಡಿತ ನಿರ್ಲಜ್ಜ ಕೃತ್ಯವಾಗಿದೆ ಮತ್ತು ತೀರಾ ಕೆಟ್ಟ ದಾರಿಯಾಗಿದೆ

[30] ಅಲ್ಲಾಹನು ನಿಷಿದ್ಧಗೊಳಿಸಿರುವ (ಕೊಲ್ಲಬಾರದೆಂದಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ. ಮತ್ತು ನಾವು, ಅನ್ಯಾಯವಾಗಿ ಕೊಲೆಯಾದವನ ಉತ್ತರಾಧಿಕಾರಿಗೆ (ಪ್ರತೀಕಾರದ) ಅಧಿಕಾರವನ್ನು ನೀಡಿದ್ದೇವೆ. ಆದರೆ ಅವನು ಕೊಲೆಯ ವಿಷಯದಲ್ಲಿ ಮಿತಿಮೀರಬಾರದು. ಅವನು ಖಂಡಿತ ನೆರವಿಗೆ ಅರ್ಹನಾಗಿದ್ದಾನೆ

[31] ಮತ್ತು ಅನಾಥನು ಪ್ರೌಢನಾಗುವ ತನಕ – ಉತ್ತಮ ರೀತಿಯಿಂದಲ್ಲದೆ – ನೀವು ಅವನ ಸಂಪತ್ತಿನ ಹತ್ತಿರ ಹೋಗಬಾರದು. ಮತ್ತು ನೀವು ಕರಾರನ್ನು ಪಾಲಿಸಿರಿ. ಕರಾರಿನ ಕುರಿತು ಖಂಡಿತ ವಿಚಾರಿಸಲಾಗುವುದು

[32] ನೀವು ಅಳೆಯುವಾಗ ಪೂರ್ಣವಾಗಿ ಅಳೆಯಿರಿ ಮತ್ತು ಸರಿಯಾಗಿರುವ ತಕ್ಕಡಿಯಲ್ಲೇ ತೂಗಿರಿ. ಇದುವೇ ಶ್ರೇಷ್ಠ ಕ್ರಮವಾಗಿದೆ ಮತ್ತು ಫಲಿತಾಂಶದ ದೃಷ್ಟಿಯಿಂದಲೂ ಉತ್ತಮವಾಗಿದೆ

[33] ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ. ಖಂಡಿತವಾಗಿಯೂ, ಕಿವಿ, ಕಣ್ಣು ಮತ್ತು ಮನಸ್ಸು ಇವೆಲ್ಲವುಗಳ ಕುರಿತು ವಿಚಾರಣೆ ನಡೆಯಲಿದೆ

[34] ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ

[35] ಈ ಎಲ್ಲ ಕೆಡುಕುಗಳು ನಿನ್ನ ಒಡೆಯನ ದೃಷ್ಟಿಯಲ್ಲಿ ಅಪ್ರಿಯವಾಗಿವೆ

[36] ಇದು, ನಿಮ್ಮ ಒಡೆಯನು ಯುಕ್ತಿಯಿಂದ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿದ ಸಂದೇಶವಾಗಿದೆ. (ಮಾನವನೇ,) ನೀನೆಂದೂ ಅಲ್ಲಾಹನ ಜೊತೆ ಬೇರೆ ಯಾರನ್ನಾದರೂ, ಪುಜಾರ್ಹನೆಂದು ಪರಿಗಣಿಸಬೇಡ. ಹಾಗೆ ಮಾಡಿದರೆ, ನಿನ್ನನ್ನು ಅಪಮಾನಿತನಾಗಿಸಿ ಹಾಗೂ ತಿರಸ್ಕೃತನಾಗಿಸಿ ನರಕಕ್ಕೆ ಎಸೆದು ಬಿಡಲಾಗುವುದು

[37] (ಸ್ವಲ್ಪ ಯೋಚಿಸಿ ನೋಡಿ:) ನಿಮ್ಮ ಒಡೆಯನೇನು ಪುತ್ರರನ್ನು ನಿಮಗೆ ಮೀಸಲಾಗಿಟ್ಟು ಮಲಕ್‌ಗಳನ್ನು ತನ್ನ ಪುತ್ರಿಯರಾಗಿಸಿಕೊಂಡನೇ? ನಿಜಕ್ಕೂ ನೀವು ಭಾರೀ ದೊಡ್ಡ (ಪಾಪದ) ಮಾತೊಂದನ್ನು ಆಡುತ್ತಿರುವಿರಿ

[38] ಜನರು ಉಪದೇಶ ಸ್ವೀಕರಿಸಬೇಕೆಂದು ನಾವು ಈ ಕುರ್‌ಆನ್‌ನಲ್ಲಿ, (ಸತ್ಯವನ್ನು) ವಿವಿಧ ರೀತಿಯಲ್ಲಿ ವಿವರಿಸಿದ್ದೇವೆ. ಇಷ್ಟಾಗಿಯೂ ಅವರ (ಧಿಕ್ಕಾರಿಗಳ) ದ್ವೇಷವಷ್ಟೇ ಹೆಚ್ಚುತ್ತಿದೆ

[39] ಹೇಳಿರಿ; ಒಂದು ವೇಳೆ ಅವರು ಹೇಳುವಂತೆ ನಿಜಕ್ಕೂ ಅವನ (ಅಲ್ಲಾಹನ) ಜೊತೆ ಬೇರೆ ದೇವರುಗಳು ಇದ್ದಿದ್ದರೆ ಅವರು ವಿಶ್ವ ಸಿಂಹಾಸನದ ಒಡೆಯನ ಕಡೆಗಿರುವ ದಾರಿಯನ್ನು ಹುಡುಕುತ್ತಿದ್ದರು

[40] ಅವನು ಪಾವನನು ಮತ್ತು ಅವರು ಏನೆಲ್ಲಾ ಹೇಳುತ್ತಿರುವರೋ ಅವೆಲ್ಲವುಗಳಿಗಿಂತ ಉನ್ನತನು, ಶ್ರೇಷ್ಠನು ಮತ್ತು ಮಹಾನನು

[41] ಏಳು ಆಕಾಶಗಳು ಮತ್ತು ಭೂಮಿ ಹಾಗೂ ಅವುಗಳಲ್ಲಿ ಇರುವ ಎಲ್ಲವೂ ಅವನ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿವೆ. ನಿಜವಾಗಿ, ಅವನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸದ ಯಾವ ವಸ್ತುವೂ ಇಲ್ಲ. ಆದರೆ ಅವುಗಳು ಮಾಡುವ ಪಾವಿತ್ರಜಪವು ನಿಮಗೆ ಅರ್ಥವಾಗುವುದಿಲ್ಲ. ಖಂಡಿತವಾಗಿಯೂ ಅವನು ಸಂಯಮಿ ಹಾಗೂ ಕ್ಷಮಾಶೀಲನು

[42] ನೀವು ಕುರ್‌ಆನ್ ಅನ್ನು ಓದುವಾಗ, ನಾವು ನಿಮ್ಮ ಹಾಗೂ ಪರಲೋಕವನ್ನು ನಂಬದವರ ನಡುವೆ, ಸುಪ್ತ ತೆರೆಯೊಂದನ್ನು ಎಳೆದು ಬಿಡುತ್ತೇವೆ

[43] ಮತ್ತು ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆಯುತ್ತೇವೆ ಮತ್ತು ಅವರ ಕಿವಿಗಳಲ್ಲಿ ಕಿವುಡುತನವಿದೆ. ನೀವು ಕುರ್‌ಆನ್‌ನಲ್ಲಿ, ನಿಮ್ಮ ಒಡೆಯನ ಕುರಿತು ಅವನು ಏಕಮಾತ್ರನೆಂದು ಪ್ರಸ್ತಾಪಿಸಿದೊಡನೆ ಅವರು ದ್ವೇಷದಿಂದ ಮುಖ ತಿರುಗಿಸಿ ಓಡಲಾರಂಭಿಸುತ್ತಾರೆ

[44] ಅವರು ನಿಮ್ಮ ಕಡೆಗೆ ಕಿವಿಗೊಟ್ಟು ಕೇಳುತ್ತಿರುವಾಗ, ಅವರು (ಆ ರೀತಿ) ಕೇಳುವುದೇಕೆಂಬುದನ್ನು ಮತ್ತು ಅವರು ಗುಟ್ಟಾಗಿ ಸಮಾಲೋಚಿಸಿದ ಸಂದರ್ಭವನ್ನು ನಾವು ಚೆನ್ನಾಗಿ ಬಲ್ಲೆವು. ‘‘ನೀವು ಮಾಟಕ್ಕೆ ತುತ್ತಾದ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತಿದ್ದೀರಿ’’ ಎಂದು ಅಕ್ರಮಿಗಳು ಹೇಳುತ್ತಾರೆ

[45] ನೋಡಿರಿ, ಅವರು ಎಂತೆಂತಹ (ದೂಷಣೆಯ) ಮಾತುಗಳನ್ನು ನಿಮಗೆ ಅನ್ವಯಿಸುತ್ತಾರೆ! ನಿಜವಾಗಿ ಅವರು ದಾರಿಗೆಟ್ಟಿದ್ದಾರೆ ಮತ್ತು ಅವರಿಗೆ ಸರಿದಾರಿ ಸಿಗುತ್ತಿಲ್ಲ

[46] ‘‘ನಾವು ಎಲುಬುಗಳಾಗಿ ತೀರಾ ಚೂರು ಚೂರಾಗಿ ಬಿಟ್ಟ ಬಳಿಕ ನಮ್ಮನ್ನೇನು ಹೊಸದಾಗಿ ಜೀವಂತಗೊಳಿಸಲಾಗುವುದೇ?’’ಎಂದು ಅವರು ಕೇಳುತ್ತಾರೆ

[47] ಹೇಳಿರಿ; ನೀವು ಕಲ್ಲುಗಳಾಗಿ ಅಥವಾ ಉಕ್ಕಾಗಿ ಬಿಟ್ಟ ಬಳಿಕವೂ

[48] ಅಥವಾ ನೀವು, ಅವುಗಳಿಗಿಂತಲೂ ದೊಡ್ಡದೆಂದು ನಿಮ್ಮ ಮನಸ್ಸಿನಲ್ಲಿರುವ ಬೇರೇನಾದರೂ ಆಗಿಬಿಟ್ಟ ಬಳಿಕವೂ (ನಿಮ್ಮನ್ನು ಜೀವಂತಗೊಳಿಸಲಾಗುವುದು). ‘‘(ಆ ರೀತಿ) ನಮ್ಮನ್ನು ಮತ್ತೆ ಜೀವಂತಗೊಳಿಸುವವರು ಯಾರು?’’ ಎಂದು ಅವರು ಕೇಳುವರು; ಹೇಳಿರಿ; ನಿಮ್ಮನ್ನು ಮೊದಲ ಬಾರಿ ರೂಪಿಸಿದವನು (ಅವನೇ ಆ ಕೆಲಸಮಾಡುವನು). ಮತ್ತೆ ಅವರು ತಮ್ಮ ತಲೆಗಳನ್ನು ನಿಮ್ಮೆಡೆಗೆ ವಾಲಿಸುತ್ತಾ, ‘‘ಅದು (ಆ ದಿನ) ಬರುವುದು ಯಾವಾಗ?’’ ಎಂದು ಕೇಳುವರು. ‘‘ಅದು ತುಂಬಾ ಹತ್ತಿರವೇ ಇರಲೂಬಹುದು’’ ಎಂದು ಹೇಳಿರಿ

[49] ಅಂದು ಅವನು (ಅಲ್ಲಾಹನು) ನಿಮ್ಮನ್ನು ಕೂಗಿ ಕರೆಯುವನು ಮತ್ತು ನೀವು ಅವನ ಗುಣಗಾನ ಮಾಡುತ್ತಾ ಓಗೊಡುವಿರಿ ಮತ್ತು (ಈ ಲೊಕದಲ್ಲಿ) ನೀವು ಬದುಕಿದ್ದುದು ತೀರಾ ಅಲ್ಪಕಾಲ ಮಾತ್ರ ಎಂದು ಆಗ ನೀವು ಭಾವಿಸುತ್ತಿರುವಿರಿ

[50] ಮತ್ತು ಒಳ್ಳೆಯ ಮಾತನ್ನೇ ಆಡಬೇಕೆಂದು ನನ್ನ ದಾಸರೊಡನೆ ಹೇಳಿರಿ. ಖಂಡಿತವಾಗಿಯೂ ಶೈತಾನನು ಅವರ ನಡುವೆ ಹಗೆತನವನ್ನು ಬಿತ್ತುತ್ತಾನೆ. ಖಂಡಿತವಾಗಿಯೂ ಶೈತಾನನು ಮನುಷ್ಯನ ಪಾಲಿಗೆ ಬಹಿರಂಗ ಶತ್ರುವಾಗಿದ್ದಾನೆ

[51] ನಿಮ್ಮ ಒಡೆಯನು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಬಯಸಿದರೆ ನಿಮ್ಮ ಮೇಲೆ ಕರುಣೆ ತೋರಬಹುದು ಅಥವಾ ಅವನು ಬಯಸಿದರೆ ನಿಮ್ಮನ್ನು ಶಿಕ್ಷಿಸಬಹುದು. (ದೂತರೇ,) ನಿಮ್ಮನ್ನು ನಾವು ಅವರ ಮೇಲಿನ ಕಾವಲುಗಾರನಾಗಿ ಕಳುಹಿಸಿಲ್ಲ

[52] ನಿಮ್ಮ ಒಡೆಯನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಬಲ್ಲನು. ಮತ್ತು ನಾವು, ಕೆಲವು ದೂತರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ನೀಡಿರುವೆವು ಮತ್ತು ದಾವೂದ್‌ರಿಗೆ ನಾವು ಝಬೂರ್ (ಗ್ರಂಥ)ವನ್ನು ನೀಡಿದ್ದೆವು

[53] ಹೇಳಿರಿ; ಅವನ ಹೊರತು ಬೇರೆ ಯಾರೆಲ್ಲಾ (ದೇವರೆಂದು) ನಿಮ್ಮ ಭ್ರಮೆಯಲ್ಲಿರುವರೋ ಅವರೆಲ್ಲರನ್ನೂ ನೀವು ಕರೆದು ಪ್ರಾರ್ಥಿಸಿ ನೋಡಿರಿ. ನಿಮ್ಮ ಯಾವುದೇ ಸಂಕಟವನ್ನು ನಿವಾರಿಸುವ ಅಥವಾ ಹಗುರಗೊಳಿಸುವ ಸಾಮರ್ಥ್ಯ ಅವರಲ್ಲಿಲ್ಲ

[54] ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ, ನಿಜವಾಗಿ ಅವರೆಲ್ಲಾ ತಮ್ಮ ಒಡೆಯನ ಮೆಚ್ಚುಗೆಗಳಿಸಲು ಮತ್ತು ಅವನಿಗೆ ಇತರರಿಗಿಂತ ಹೆಚ್ಚು ನಿಕಟರಾಗಲು ದಾರಿ ಹುಡುಕುತ್ತಿರುತ್ತಾರೆ, ಅವನ ಅನುಗ್ರಹದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ಅವನ ಶಿಕ್ಷೆಗೆ ಅಂಜುತ್ತಿರುತ್ತಾರೆ. ನಿಮ್ಮೊಡೆಯನ ಶಿಕ್ಷೆಯು ನಿಜಕ್ಕೂ ಅಂಜಲೇ ಬೇಕಾದ ಶಿಕ್ಷೆಯಾಗಿದೆ

[55] ಪುನರುತ್ಥಾನದಿನಕ್ಕೆ ಮುಂಚೆ ನಾವು ನಾಶ ಮಾಡದ ಅಥವಾ ತೀವ್ರ ಶಿಕ್ಷೆಗೆ ಒಳಪಡಿಸದ ಯಾವ ನಾಡೂ ಇಲ್ಲ. ಇದು ಗ್ರಂಥದಲ್ಲಿ ಬರೆದಿರುವ ವಿಷಯವಾಗಿದೆ

[56] ನಾವು (ಹೊಸ) ಪುರಾವೆಗಳನ್ನು ಕಳಿಸದೆ ಇರುವುದಕ್ಕೆ, ಹಿಂದಿನವರು ಅವುಗಳನ್ನು ಧಿಕ್ಕರಿಸಿದ್ದೇ ಕಾರಣವಾಗಿದೆ. ಮತ್ತು ನಾವು ಸಮೂದ್ ಜನಾಂಗದವರಿಗೆ, ಎದ್ದು ಕಾಣುವ (ಪುರಾವೆಯಾಗಿ) ಒಂದು ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರ ಮೇಲೆ ಅಕ್ರಮ ವೆಸಗಿದರು. ನಿಜವಾಗಿ ನಾವು ಪುರಾವೆಗಳನ್ನು ಕಳಿಸುವುದು ಎಚ್ಚರಿಸುವುದಕ್ಕಾಗಿ ಮಾತ್ರ

[57] ನಿಮ್ಮ ಒಡೆಯನು ಜನರನ್ನೆಲ್ಲಾ ಸುತ್ತುವರಿದಿರುವನು ಎಂದು ನಾವು ನಿಮಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ನಾವು ನಿಮಗೆ ತೋರಿಸಿದ ಆ ದೃಶ್ಯಗಳನ್ನು ಮತ್ತು ಕುರ್‌ಆನ್‌ನಲ್ಲಿ ಶಪಿಸಲಾಗಿರುವ ಆ ಮರವನ್ನು ನಾವು ಜನರ ಪಾಲಿಗೆ ಪರೀಕ್ಷೆಯಾಗಿಸಿದ್ದೇವೆ. ನಾವು ಅವರನ್ನು ಎಚ್ಚರಿಸುತ್ತಿದ್ದೇವೆ. ಆದರೆ ಅದು ಅವರ ಭಾರೀ ವಿದ್ರೋಹವನ್ನಷ್ಟೇ ಹೆಚ್ಚಿಸುತ್ತಿದೆ

[58] ನಾವು ಮಲಕ್‌ಗಳೊಡನೆ, ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲರೂ ಸಾಷ್ಟಾಂಗವೆರಗಿದರು – ಇಬ್ಲೀಸ್‌ನ ಹೊರತು. ಅವನು ಹೇಳಿದನು; ನಾನೇನು, ಮಣ್ಣಿನಿಂದ ಸೃಷ್ಟಿಸಲ್ಪಟ್ಟವನಿಗೆ ಸಾಷ್ಟಾಂಗವೆರಗಬೇಕೇ

[59] ಅವನು ಹೇಳಿದನು; ನೀನು ನನಗಿಂತ ಹೆಚ್ಚಿನ ಮೇಲ್ಮೆಯನ್ನು ನೀಡಿರುವ ಆತನನ್ನು ನೋಡು. ನೀನು ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡಿದರೆ, ಕೇವಲ ಕೆಲವರ ಹೊರತು ಅವನ ಸಂತತಿಯವರನ್ನೆಲ್ಲಾ ನಾನು ನನ್ನ ವಶಕ್ಕೆ ತೆಗೆದುಕೊಳ್ಳುವೆನು

[60] ಅವನು (ಅಲ್ಲಾಹನು) ಹೇಳಿದನು; ನೀನು ಹಾಗೂ ಅವರ ಪೈಕಿ ನಿನ್ನ ಅನುಕರಣೆ ಮಾಡಿದವರು – ಹೊರಟು ಹೋಗಿರಿ. ನಿಮಗೆ ಖಂಡಿತವಾಗಿಯೂ ನರಕವೇ ಪ್ರತಿಫಲವಾಗಿರುವುದು – ಪರಿಪೂರ್ಣ ಪ್ರತಿಫಲ

[61] ಅವರ ಪೈಕಿ ನಿನಗೆ ಸಾಧ್ಯವಿರುವವನನ್ನು ನೀನು ನಿನ್ನ ಧ್ವನಿಯ ಮೂಲಕ ಪುಸಲಾಯಿಸು ಮತ್ತು ನಿನ್ನ (ಪಡೆಯ) ಸವಾರರನ್ನೂ ಕಾಲಾಳುಗಳನ್ನ್ನೂ ಅವರ ಮೇಲೆ ಹೇರಿ ಬಿಡು ಮತ್ತು ನೀನು ಸಂಪತ್ತು ಹಾಗೂ ಸಂತಾನಗಳಲ್ಲಿ ಅವರ ಪಾಲುದಾರನಾಗು ಮತ್ತು ನೀನು ಅವರಿಗೆ ವಾಗ್ದಾನವನ್ನು ನೀಡು. ಶೈತಾನನು ಅವರಿಗೆ ನೀಡುವ ವಾಗ್ದಾನವು ಕೇವಲ ವಂಚನೆಯಾಗಿರುತ್ತದೆ

[62] ಖಂಡಿತವಾಗಿಯೂ ನನ್ನ (ನಿಷ್ಠ) ದಾಸರ ಮೇಲೆ ನಿನಗೆ ಯಾವ ನಿಯಂತ್ರಣವೂ ಸಿಗದು. (ದೂತರೇ,) ಕಾರ್ಯ ಸಾಧನೆಗೆ ನಿಮ್ಮ ಒಡೆಯನೇ ಸಾಕು

[63] ನಿಮ್ಮ ಒಡೆಯನೇ, ನೀವು ಅವನ ಅನುಗ್ರಹವನ್ನು ಹುಡುಕುವಂತಾಗಲು ಸಮುದ್ರದಲ್ಲಿ ನಿಮಗಾಗಿ ಹಡಗುಗಳನ್ನು ಚಲಿಸುತ್ತಾನೆ. ಅವನು ಖಂಡಿತ ನಿಮ್ಮ ಪಾಲಿಗೆ ಕರುಣಾಳುವಾಗಿದ್ದಾನೆ

[64] ಸಮುದ್ರದಲ್ಲಿ ನಿಮಗೇನಾದರೂ ಆಪತ್ತು ಎದುರಾದಾಗ, ಅವನೊಬ್ಬನ ಹೊರತು ನೀವು ಕರೆದು ಪ್ರಾರ್ಥಿಸುವ ಇತರೆಲ್ಲರೂ ಕಳೆದು ಹೋಗುವರು. ಕೊನೆಗೆ ಅವನು ನಿಮ್ಮನ್ನು ರಕ್ಷಿಸಿ ದಡದೆಡೆಗೆ ತಲುಪಿಸಿದಾಗ, ನೀವು ತಿರುಗಿ ಬಿಡುತ್ತೀರಿ. ಮಾನವನು ಖಂಡಿತ ಕೃತಘ್ನನು

[65] ಅವನು (ಅಲ್ಲಾಹನು), ದಡದ ಭಾಗದಲ್ಲೇ ನಿಮ್ಮನ್ನು (ಭೂಮಿಯೊಳಗೆ) ಹೂತು ಬಿಡುವ ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸುವ ಸಾಧ್ಯತೆಯ ಕುರಿತು ನೀವೇನು ನಿಶ್ಚಿಂತರಾಗಿರುವಿರಾ? (ಹಾಗೇನಾದರೂ ಆದರೆ) ನೀವು ನಿಮ್ಮ ಪಾಲಿಗೆ ಯಾವ ಕಾರ್ಯಸಾಧಕನನ್ನೂ ಕಾಣಲಾರಿರಿ

[66] ಅಥವಾ, ಅವನು ನಿಮ್ಮನ್ನು ಮತ್ತೊಮ್ಮೆ ಅದರೊಳಕ್ಕೆ (ಸಮುದ್ರದೊಳಕ್ಕೆ) ಒಯ್ದುಬಿಡುವ ಹಾಗೂ ನಿಮ್ಮ ಕೃತಘ್ನತೆಯ ಕಾರಣ ಭಾರೀ ಬಿರುಗಾಳಿಯ ಸುಳಿಯೊಂದು ನಿಮ್ಮನ್ನು ಮುಳುಗಿಸಿಬಿಡುವ ಸಾಧ್ಯತೆಯ ಕುರಿತು ನೀವು ನಿರ್ಭೀತರಾಗಿರುವಿರಾ? ಆಗಲೂ ನಿಮಗೆ ನಮ್ಮ ಕಡೆಯಿಂದ ಬೆಂಬಲಿಗರು ಯಾರೂ ಸಿಗಲಾರರು

[67] ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು ಹಾಗೂ ಅವರನ್ನು ನೆಲದಲ್ಲೂ ಜಲದಲ್ಲೂ ಪ್ರಯಾಣಿಸುವವರಾಗಿ ಮಾಡಿದೆವು ಮತ್ತು ಅವರಿಗೆ ಶುದ್ಧ

[68] ಆಹಾರಗಳನ್ನು ಒದಗಿಸಿದೆವು ಮತ್ತು ನಮ್ಮ ಇತರ ಅನೇಕ ಸೃಷ್ಟಿಗಳೆದುರು ಅವರಿಗೆ ಸ್ಪಷ್ಟವಾದ ಶ್ರೇಷ್ಠತೆಯನ್ನು ದಯಪಾಲಿಸಿದೆವು

[69] ನಾವು ಎಲ್ಲ ಮಾನವರನ್ನೂ ಅವರ ನಾಯಕರ ಜೊತೆ ಕರೆದು ಕೂಡಿಸುವ ದಿನ, (ಕರ್ಮಗಳ) ಗ್ರಂಥವನ್ನು ಬಲಗೈಯಲ್ಲಿ ನೀಡಲಾದವರು ತಮ್ಮ ಗ್ರಂಥವನ್ನು ಓದುವರು ಮತ್ತು ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು

[70] ಇಲ್ಲಿ (ಈ ಲೋಕದಲ್ಲಿ, ಸತ್ಯದ ಪಾಲಿಗೆ) ಕುರುಡಾಗಿದ್ದವನು ಪರಲೋಕದಲ್ಲೂ ಕುರುಡನಾಗಿರುವನು ಮತ್ತು ಇನ್ನಷ್ಟು ದಾರಿಗೆಟ್ಟಿರುವನು

[71] (ದೂತರೇ,) ಅವರು (ಧಿಕ್ಕಾರಿಗಳು), ನಾವು ನಿಮಗೆ ದಿವ್ಯವಾಣಿಯ ಮೂಲಕ ನೀಡಿರುವ ಸಂದೇಶದಿಂದ ನಿಮ್ಮನ್ನು ದೂರ ಸರಿಸಿ, ನೀವು ನಮ್ಮ ಹೆಸರಲ್ಲಿ ಬೇರೇನನ್ನಾದರೂ ರಚಿಸಿ ತರುವಂತೆ ಮಾಡಲು ಶ್ರಮಿಸಿದ್ದರು. ಒಂದು ವೇಳೆ ಹಾಗೆ ಆಗಿ ಬಿಟ್ಟಿದ್ದರೆ ಅವರು ನಿಮ್ಮನ್ನು ಪರಮ ಆಪ್ತನಾಗಿ ಕಾಣುತ್ತಿದ್ದರು

[72] ನಾವು ನಿಮಗೆ ಸ್ಥಿರತೆಯನ್ನು ನೀಡದೆ ಇದ್ದಿದ್ದರೆ ನೀವು ಸ್ವಲ್ಪವಾದರೂ ಅವರೆಡೆಗೆ ವಾಲಿ ಬಿಡುತ್ತಿದ್ದಿರಿ

[73] ಹಾಗೇನಾದರೂ ಆಗಿ ಬಿಟ್ಟಿದ್ದರೆ ನಾವು ನಿಮಗೆ ಬದುಕಿನಲ್ಲೂ ಸಾವಿನಲ್ಲೂ ದುಪ್ಪಟ್ಟು ಶಿಕ್ಷೆಯ ರುಚಿ ಉಣಿಸುತ್ತಿದ್ದೆವು ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕನೂ ಸಿಗುತ್ತಿರಲಿಲ್ಲ

[74] ಅವರು ನಿಮ್ಮನ್ನು ಇಲ್ಲಿಂದ ಹೊರದಬ್ಬಲಿಕ್ಕಾಗಿ, ಈ ನಾಡಿನಲ್ಲಿ ನಿಮ್ಮನ್ನು ಅಸ್ಥಿರಗೊಳಿಸಲು ಶ್ರಮಿಸುತ್ತಿದ್ದಾರೆ. ಒಂದು ವೇಳೆ ಹಾಗೆ ಆಗಿಬಿಟ್ಟರೆ, ನಿಮ್ಮ ಬಳಿಕ ಅವರೇನೂ ಹೆಚ್ಚುಕಾಲ ಉಳಿಯಲಾರರು

[75] ನಾವು ನಿಮಗಿಂತ ಮುಂಚೆ ಕಳಿಸಿದ ನಮ್ಮ ದೂತರ ವಿಷಯದಲ್ಲಿ ನಾವು ಪಾಲಿಸಿದ ನಿಯಮ (ನೆನಪಿರಲಿ). ನೀವು ನಮ್ಮ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ

[76] ಸೂರ್ಯನ ಇಳಿಮುಖ ಆರಂಭವಾಗಿ ರಾತ್ರಿಯ ಕತ್ತಲು ಆವರಿಸಿಬಿಡುವ ತನಕ ನಮಾಝ್‌ಅನ್ನು ಪಾಲಿಸಿರಿ ಮತ್ತು ಮುಂಜಾವಿನ ಕುರ್‌ಆನ್ (ಪಠಣ) – ಖಂಡಿತವಾಗಿಯೂ ಮುಂಜಾವಿನ ಕುರ್‌ಆನ್ ಸಾಕ್ಷಿಯಾಗಿರುತ್ತದೆ

[77] ಇನ್ನು ರಾತ್ರಿಯ ಒಂದು ಭಾಗದಲ್ಲಿ ‘ತಹಜ್ಜುದ್’ ನಮಾಝ್‌ಅನ್ನು ಸಲ್ಲಿಸಿರಿ. ಇದು ನಿಮ್ಮ ಮೇಲಿನ ಹೆಚ್ಚುವರಿ ಹೊಣೆಯಾಗಿದೆ – ನಿಮ್ಮ ಒಡೆಯನು ನಿಮ್ಮನ್ನು ‘ಮಹ್ಮೂದ್’(ವ್ಯಾಪಕವಾಗಿ ಹೊಗಳಲ್ಪಡುವ) ಸ್ಥಾನಕ್ಕೆ ತಲುಪಿಸಲೂ ಬಹುದು

[78] ಮತ್ತು ಹೇಳಿರಿ; ನನ್ನೊಡೆಯಾ, ನೀನು ನನ್ನನ್ನು ತಲುಪಿಸುವಲ್ಲಿಗೆಲ್ಲಾ ಸತ್ಯದೊಂದಿಗೇ ತಲುಪಿಸು ಹಾಗೂ ನನ್ನನ್ನು ನೀನು ಹೊರಡಿಸುವ ಎಲ್ಲೆಡೆಯಿಂದಲೂ ಸತ್ಯದೊಂದಿಗೇ ಹೊರಡಿಸು ಮತ್ತು ನಿನ್ನ ಕಡೆಯಿಂದ ನನಗೆ ಸಹಾಯಕ ಶಕ್ತಿಯನ್ನು ಒದಗಿಸು

[79] ಮತ್ತು ಹೇಳಿರಿ; ಸತ್ಯವು ಬಂದು ಬಿಟ್ಟಿತು ಮತ್ತು ಅಸತ್ಯವು ಅಳಿದು ಹೋಯಿತು – ಖಂಡಿತವಾಗಿಯೂ ಅಸತ್ಯವು ಅಳಿಯುವಂತಹದೇ ಆಗಿದೆ

[80] ನಾವು ಇಳಿಸಿಕೊಡುವ ಕುರ್‌ಆನ್‌ನ ಭಾಗವು ವಿಶ್ವಾಸಿಗಳ ಪಾಲಿಗೆ ಗುಣ ಹಾಗೂ ಅನುಗ್ರಹವಾಗಿರುತ್ತದೆ. ಆದರೆ ಅಕ್ರಮಿಗಳ ಮಟ್ಟಿಗೆ ಇದು ಅವರ ನಷ್ಟವನ್ನಷ್ಟೇ ಹೆಚ್ಚಿಸುತ್ತದೆ

[81] ನಾವು ಮಾನವನಿಗೆ ಕೊಡುಗೆಗಳನ್ನು ದಯಪಾಲಿಸಿದಾಗ ಅವನು (ನಮ್ಮನ್ನು ಕಡೆಗಣಿಸುತ್ತಾ) ಮುಖ ತಿರುಗಿಸಿಕೊಳ್ಳುತ್ತಾನೆ ಮತ್ತು ಮಗ್ಗಲು ಬದಲಾಯಿಸುತ್ತಾನೆ. ಇನ್ನು ಅವನಿಗೇನಾದರೂ ಹಾನಿ ಸಂಭವಿಸಿದರೆ, ಅವನು ಹತಾಶನಾಗಿ ಬಿಡುತ್ತಾನೆ

[82] ಹೇಳಿರಿ; ಪ್ರತಿಯೊಬ್ಬನೂ ತನ್ನದೇ ಶೈಲಿಯಲ್ಲಿ ಕೆಲಸಮಾಡುತ್ತಾನೆ – ಯಾರು ಸರಿದಾರಿಯಲ್ಲಿರುವರು ಎಂಬುದನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು

[83] ಅವರು ನಿಮ್ಮೊಡನೆ ‘ರೂಹ್’ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ರೂಹ್ ನನ್ನ ಒಡೆಯನ ಆದೇಶಗಳಲ್ಲೊಂದು. ನಿಮಗೆ ತೀರಾ ಸೀಮಿತ ಜ್ಞಾನವನ್ನಷ್ಟೇ ನೀಡಲಾಗಿದೆ

[84] ನಾವು ಬಯಸಿದರೆ, ದಿವ್ಯವಾಣಿಯ ಮೂಲಕ ನಿಮಗೆ ಕೊಟ್ಟಿರುವುದನ್ನೆಲ್ಲಾ ಕಿತ್ತುಕೊಳ್ಳಬಲ್ಲೆವು. ಮತ್ತು ನಮ್ಮೆದುರು ನಿಮಗೆ ಯಾವ ಸಹಾಯಕರೂ ಸಿಗಲಾರರು

[85] – ನಿಮ್ಮ ಒಡೆಯನ ಕೃಪೆಯ ಹೊರತು. ನಿಮ್ಮ ಮೇಲಿರುವ ಅವನ ಅನುಗ್ರಹವು ನಿಜಕ್ಕೂ ದೊಡ್ಡದು

[86] (ದೂತರೇ,) ಹೇಳಿರಿ; ಇಂತಹ ಇನ್ನೊಂದು ಕುರ್‌ಆನ್‌ಅನ್ನು ರಚಿಸಲಿಕ್ಕೆಂದು ಎಲ್ಲ ಮಾನವರು ಮತ್ತು ಜಿನ್ನ್‌ಗಳು ಒಂದು ಗೂಡಿದರೂ, ಇಂತಹದೊಂದನ್ನು ರಚಿಸಿ ತರಲು ಅವರಿಂದಾಗದು – ಅವರು (ಇದಕ್ಕಾಗಿ) ಪರಸ್ಪರ ನೆರವಾದರೂ ಸರಿಯೇ

[87] ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ಬಗೆಯ ಸಕಲ ಉದಾಹರಣೆಗಳನ್ನು ಮುಂದಿಟ್ಟಿರುವೆವು – ಆದರೆ ಜನರಲ್ಲಿ ಹೆಚ್ಚಿನವರು ಧಿಕ್ಕರಿಸಿದರು

[88] ಅವರು ಹೇಳುತ್ತಾರೆ; ನೀವು ನಮಗಾಗಿ ಭೂಮಿಯಿಂದ ಒಂದು ಚಿಲುಮೆಯನ್ನು ಹೊರಡಿಸುವ ತನಕ. ನಾವು ನಿಮ್ಮ ಮಾತನ್ನು ನಂಬಲಾರೆವು

[89] ಅಥವಾ ನಿಮ್ಮ ಬಳಿ ಖರ್ಜೂರ ಹಾಗೂ ದ್ರಾಕ್ಷಿಗಳ ಒಂದು ತೋಟವಿದ್ದು, ನೀವು ಅದರ ನಡು ಮಧ್ಯದಲ್ಲಿ ಕಾಲುವೆಗಳನ್ನು ಹರಿಸುವ ತನಕ (ನಾವು ನಂಬಲಾರೆವು)

[90] ಅಥವಾ ನೀವೇ ಹೇಳಿಕೊಳ್ಳುವಂತೆ, ಆಕಾಶದಿಂದ ತುಂಡುಗಳನ್ನು ನೀವು ನಮ್ಮ ಮೇಲೆ ಬೀಳಿಸುವ ತನಕ ಅಥವಾ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುವ ತನಕ (ನಾವು ನಂಬಲಾರೆವು). 93. ಅಥವಾ ನಿಮ್ಮ ಬಳಿ ಬಂಗಾರದ ಒಂದು ಮನೆ ಇರುವ ತನಕ ಅಥವಾ ನೀವು ಆಕಾಶಕ್ಕೆ ಏರಿ ಹೋಗುವ ತನಕ (ನಾವು ನಂಬಲಾರೆವು). ಇನ್ನು ನೀವು ಅಲ್ಲಿಂದ, ನಾವು ಓದಬಹುದಾದ ಒಂದು ಗ್ರಂಥವನ್ನು ನಮಗಾಗಿ ಇಳಿಸಿ ಕೊಡುವ ತನಕ ನೀವು ಏರಿ ಹೋಗಿರುವುದನ್ನೂ ನಾವು ನಂಬಲಾರೆವು (ಎಂದು ಅವರು ಹೇಳುತ್ತಾರೆ). ನೀವು ಹೇಳಿರಿ; ನನ್ನ ಒಡೆಯನು ಪರಮ ಪಾವವನು. ನಾನು ದೂತನಾಗಿರುವ ಒಬ್ಬ ಮಾನವ ಮಾತ್ರನಲ್ಲವೇ

[91] ನಿಜವಾಗಿ, ಜನರ ಬಳಿಗೆ ಮಾರ್ಗದರ್ಶನ ಬಂದಾಗಲೆಲ್ಲಾ, ‘‘ಅಲ್ಲಾಹನೇನು ಒಬ್ಬ ಮಾನವನನ್ನು ದೂತನಾಗಿ ಕಳಿಸಿರುವನೇ?’’ ಎಂಬ ಪ್ರಶ್ನೆಯೇ ಅದನ್ನು ನಂಬದಂತೆ ಅವರನ್ನು ತಡೆದಿತ್ತು

[92] ಹೇಳಿರಿ; ಒಂದು ವೇಳೆ ಭೂಮಿಯಲ್ಲಿ ಮಲಕ್‌ಗಳು ನೆಮ್ಮದಿಯಿಂದ ನಡೆದಾಡುತ್ತಾ ಇದ್ದಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಅವರಿಗಾಗಿ ಒಬ್ಬ ಮಲಕ್‌ನನ್ನೇ ದೂತನಾಗಿ ಇಳಿಸುತ್ತಿದ್ದೆವು

[93] ಹೇಳಿರಿ; ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿತವಾಗಿಯೂ ಅವನು ತನ್ನ ದಾಸರ ಕುರಿತು ಸಂಪೂರ್ಣ ಅರಿವು ಉಳ್ಳವನಾಗಿದ್ದಾನೆ ಮತ್ತು ಅವರನ್ನು ಸದಾ ನೋಡುತ್ತಿರುವವನಾಗಿದ್ದಾನೆ

[94] ಯಾರಿಗೆ ಅಲ್ಲಾಹನು ದಾರಿ ತೋರಿದನೋ ಅವನು ಮಾತ್ರ ಸರಿದಾರಿಯಲ್ಲಿರುತ್ತಾನೆ. ಇನ್ನು ಅವನು ದಾರಿಗೆಡಿಸಿ ಬಿಟ್ಟವರಿಗಾಗಿ ನೀವು ಅವನ ಹೊರತು ಬೇರಾವ ರಕ್ಷಕನನ್ನೂ ಕಾಣಲಾರಿರಿ. ಪುನರುತ್ಥಾನ ದಿನ ನಾವು ಅವರನ್ನು, ಅವರ ಮುಖಗಳು ನೆಲಕ್ಕೆ ಒರಗಿರುವ ಸ್ಥಿತಿಯಲ್ಲಿ, ಕುರುಡರಾಗಿಯೂ ಮೂಗರಾಗಿಯೂ ಕಿವುಡರಾಗಿಯೂ ಒಟ್ಟು ಸೇರಿಸುವೆವು. ನರಕವೇ ಅವರ ನೆಲೆಯಾಗಿರುವುದು. ಅದರ ಬೆಂಕಿಯು ಮಂದವಾದಂತೆಲ್ಲಾ ನಾವು ಮತ್ತೆ ಅದನ್ನು ಭುಗಿಲೆಬ್ಬಿಸುತ್ತಿರುವೆವು

[95] ಇದು, ಅವರು ನಮ್ಮ ವಚನಗಳನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ‘‘ನಾವು ಕೇವಲ ಎಲುಬುಗಳಾಗಿಯೂ ಛಿದ್ರ ಛಿದ್ರರಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಹೊಸದಾಗಿ ಸೃಷ್ಟಿಸಿ ಜೀವಂತಗೊಳಿಸಲಾಗುವುದೇ?’’ ಎಂದುದಕ್ಕಾಗಿ ಅವರಿಗೆ ಸಿಗಲಿರುವ ಪ್ರತಿಫಲವಾಗಿದೆ

[96] ಅವರೇನು ಕಾಣುತ್ತಿಲ್ಲವೇ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು, ಅವರಂತಹವರನ್ನು ಸೃಷ್ಟಿಸಲು ಖಂಡಿತ ಶಕ್ತನಾಗಿರುವನೆಂದು? ನಿಜವಾಗಿ ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿರುವನು – ಅದರಲ್ಲಿ ಸಂಶಯವೇನೂ ಇಲ್ಲ. ಆದರೂ ಅಕ್ರಮಿಗಳು ಧಿಕ್ಕಾರದ ನೀತಿಯಲ್ಲೇ ಸ್ಥಿರರಾಗಿದ್ದಾರೆ

[97] ಹೇಳಿರಿ; ಒಂದು ವೇಳೆ ನನ್ನ ಒಡೆಯನ ಭಂಡಾರಗಳೆಲ್ಲಾ ನಿಮ್ಮ ಮಾಲಕತ್ವದಲ್ಲಿ ಇದ್ದಿದ್ದರೆ, ಎಲ್ಲಿ ಖರ್ಚಾಗಿ ಬಿಡುವುದೋ ಎಂಬ ಭಯದಿಂದ ನೀವು ಅದನ್ನೆಲ್ಲಾ ತಡೆದಿಟ್ಟುಕೊಳ್ಳುತ್ತಿದ್ದಿರಿ – ಮಾನವನು ನಿಜಕ್ಕೂ ತೀರಾ ಸಣ್ಣ ಮನಸ್ಸಿನವನಾಗಿದ್ದಾನೆ

[98] ನಾವು ಮೂಸಾರಿಗೆ ಸ್ಪಷ್ಟವಾದ ಒಂಭತ್ತು ಪುರಾವೆಗಳನ್ನು ನೀಡಿದ್ದೆವು. ನೀವು ಇಸ್ರಾಈಲರ ಸಂತತಿಗಳೊಡನೆ ಕೇಳಿ ನೋಡಿರಿ. ಅವರ ಬಳಿಗೆ ಅವರು (ಮೂಸಾ) ಬಂದಾಗ ಅವರೊಡನೆ ಫಿರ್‌ಔನ್ ಹೇಳಿದನು; ಓ ಮೂಸಾ, ನಾನಂತು ನಿನ್ನನ್ನು ಮಾಟಪೀಡಿತನೆಂದೇ ಭಾವಿಸುತ್ತೇನೆ

[99] ಅವರು (ಮೂಸಾ) ಹೇಳಿದರು; ಇವುಗಳನ್ನೆಲ್ಲಾ (ಜನರ) ಕಣ್ಣು ತೆರೆಸಲಿಕ್ಕಾಗಿ ಆಕಾಶಗಳ ಮತ್ತು ಭೂಮಿಯ ಒಡೆಯನೇ ಇಳಿಸಿ ಕೊಟ್ಟಿರುವನೆಂಬುದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್, ನಾನಂತು ನಿನ್ನನ್ನು ಸರ್ವನಾಶವಾಗುವವನೆಂದು ಭಾವಿಸುತ್ತೇನೆ

[100] ಆ ಬಳಿಕ ಅವನು ಅವರನ್ನು ಭೂಮಿಯಿಂದ ನಿರ್ಮೂಲನ ಗೊಳಿಸಬಯಸಿದನು. ಆದರೆ ನಾವು ಅವನನ್ನು ಹಾಗೂ ಅವನ ಜೊತೆಗಿದ್ದ ಎಲ್ಲರನ್ನೂ ಮುಳುಗಿಸಿಬಿಟ್ಟೆವು

[101] ಆ ಬಳಿಕ ನಾವು ಇಸ್ರಾಈಲರ ಸಂತತಿಯೊಡನೆ, ‘‘ನೀವು ಭೂಮಿಯಲ್ಲಿ ವಾಸಿಸಿರಿ. ಕೊನೆಗೆ ಲೋಕಾಂತ್ಯದ ವಾಗ್ದಾನಿತ ಸಮಯ ಬಂದಾಗ ನಾವು ನಿಮ್ಮೆಲ್ಲರನ್ನು ಒಂದಾಗಿ ಹೊರತರುವೆವು’’ ಎಂದೆವು

[102] ನಾವು ಇದನ್ನು (ಕುರ್‌ಆನನ್ನು) ಸತ್ಯದೊಂದಿಗೆ ಇಳಿಸಿಕೊಟ್ಟಿರುವೆವು ಮತ್ತು ಇದು ಸತ್ಯದೊಂದಿಗೇ ಇಳಿದು ಬಂದಿದೆ. ಇನ್ನು ನಿಮ್ಮನ್ನು ನಾವು ಸುವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿಯೇ ಕಳಿಸಿರುತ್ತೇವೆ

[103] ನೀವು ಅದನ್ನು ಸ್ವಲ್ಪ ಸ್ವಲ್ಪವಾಗಿ ಜನರಿಗೆ ಕೇಳಿಸುತ್ತಿರಬೇಕೆಂದು, ನಾವು ಕುರ್‌ಆನನ್ನು ಭಾಗ ಭಾಗವಾಗಿ ಇಳಿಸಿ ಕೊಟ್ಟಿರುವೆವು. ಮತ್ತು ನಾವು ಅದನ್ನು ಬಹಳ ಯೋಜಿತ ರೀತಿಯಲ್ಲಿ ಇಳಿಸಿಕೊಟ್ಟಿರುವೆವು

[104] ಹೇಳಿರಿ; ನೀವು ಇದನ್ನು ನಂಬಿರಿ ಅಥವಾ ನಂಬದೆ ಇರಿ – ಆದರೆ ಈ ಹಿಂದೆ ಜ್ಞಾನ ಪ್ರಾಪ್ತವಾಗಿದ್ದವರು ಮಾತ್ರ ತಮಗೆ ಇದನ್ನು ಕೇಳಿಸಲಾದಾಗ, ತಮ್ಮ ಮುಖಗಳನ್ನು ನೆಲಕ್ಕಿಟ್ಟು ಸಾಷ್ಟಾಂಗವೆರಗಿ ಬಿಡುತ್ತಾರೆ

[105] ಮತ್ತು ಅವರು, ‘‘ನಮ್ಮೊಡೆಯನು ಪರಮ ಪಾವವನು. ನಮ್ಮ ಒಡೆಯನು ಮಾಡಿರುವ ವಾಗ್ದಾನವು ಖಂಡಿತ ಪೂರ್ತಿಯಾಗಲಿದೆ’’ಎನ್ನುತ್ತಾರೆ

[106] ಹಾಗೆಯೇ ಅವರು ರೋದಿಸುತ್ತಾ ತಮ್ಮ ಮುಖಗಳನ್ನು ನೆಲಕ್ಕಿಟ್ಟು ಬಿಡುತ್ತಾರೆ ಮತ್ತು ಇದು (ಕುರ್‌ಆನ್) ಅವರ ಭಕ್ತಿ ಭಾವವನ್ನು ಹೆಚ್ಚಿಸುತ್ತಲೇ ಇರುತ್ತದೆ

[107] ನೀವು (ಅವನನ್ನು) ಅಲ್ಲಾಹನೆಂದು ಕರೆಯಿರಿ ಅಥವಾ ರಹ್ಮಾನನೆಂದು ಕರೆಯಿರಿ. ನೀವು ಅವನನ್ನು ಏನೆಂದು ಕರೆದರೂ ಅತ್ಯುತ್ತಮ ಹೆಸರುಗಳೆಲ್ಲಾ ಅವನಿಗಾಗಿಯೇ ಇವೆ. ನೀವು ನಿಮ್ಮ ನಮಾಝ್‌ಗಳಲ್ಲಿ ಹೆಚ್ಚು ಧ್ವನಿಯೇರಿಸಬೇಡಿ ಮತ್ತು ಅವುಗಳನ್ನು ತೀರಾ ನಿಶ್ಯಬ್ದಗೊಳಿಸಲೂ ಬೇಡಿ. ಅವೆರಡರ ನಡುವಿನ (ಮಧ್ಯಮ) ಮಾರ್ಗವನ್ನು ಅನುಸರಿಸಿರಿ

[108] ಹೇಳಿರಿ; ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ ಮೀಸಲು. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ. ವಿಶ್ವಾಧಿಪತ್ಯದಲ್ಲಿ ಅವನಿಗೆ ಯಾರೂ ಪಾಲುದಾರರಿಲ್ಲ. ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ನೀವು ಅವನ ಮಹಿಮೆಯನ್ನು ಕೊಂಡಾಡಬೇಕಾದ ರೀತಿಯಲ್ಲಿ ಕೊಂಡಾಡಿರಿ

[109] ಎಲ್ಲ ಹೊಗಳಿಕೆ ಅಲ್ಲಾಹನಿಗೆ. ಅವನೇ ತನ್ನ ದಾಸನಿಗೆ ಗ್ರಂಥವನ್ನು (ಕುರ್‌ಆನ್‌ಅನ್ನು) ಇಳಿಸಿ ಕೊಟ್ಟವನು ಮತ್ತು ಅವನು ಅದರಲ್ಲಿ ಯಾವುದೇ ವಕ್ರತೆಯನ್ನಿಟ್ಟಿಲ್ಲ

[110] ಅದು (ಕುರ್‌ಆನ್) ಸಂಪೂರ್ಣ ನೇರವಾಗಿದೆ. ಅವನ ಕಡೆಯಿಂದ (ದುಷ್ಟರಿಗೆ) ತೀವ್ರ ಶಿಕ್ಷೆಯ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಸತ್ಕರ್ಮ ಮಾಡುವ ವಿಶ್ವಾಸಿಗಳಿಗೆ ಶ್ರೇಷ್ಠ ಪ್ರತಿಫಲವಿದೆ ಎಂಬ ಶುಭವಾರ್ತೆ ನೀಡಲಿಕ್ಕಾಗಿ (ಅದನ್ನು ಕಳಿಸಲಾಗಿದೆ)

[111] ಅವರು ಅದರಲ್ಲಿ ಸದಾಕಾಲ ಇರುವರು

ಗುಹೆ

Surah 18

[1] ಮತ್ತು ಅಲ್ಲಾಹನು ಒಬ್ಬನನ್ನು (ತನ್ನ) ಪುತ್ರನಾಗಿಸಿಕೊಂಡಿರುವನೆಂದು ಹೇಳುವವರನ್ನು ಎಚ್ಚರಿಸಲಿಕ್ಕಾಗಿ (ಅದನ್ನು ಕಳಸಿಲಾಗಿದೆ)

[2] ನಿಜವಾಗಿ, ಅವರಿಗಾಗಲಿ ಅವರ ಪೂರ್ವಜರಿಗಾಗಲಿ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರ ಬಾಯಿಗಳಿಂದ ಹೊರಡುತ್ತಿರುವ ಆ ಮಾತು ತುಂಬಾ ಗಂಭೀರವಾದುದು. ಅವರು ಕೇವಲ ಸುಳ್ಳನ್ನು ಹೇಳುತ್ತಿದ್ದಾರೆ

[3] (ದೂತರೇ,) ಅವರು ಈ ಸಂದೇಶವನ್ನು ನಂಬುತ್ತಿಲ್ಲ ಎಂಬ ದುಃಖದಿಂದ, ಅವರ ಚಿಂತೆಯಲ್ಲಿ ಬಹುಶಃ ನೀವು ಸ್ವತಃ ನಿಮಗೇ ಹಾನಿಮಾಡಿಕೊಳ್ಳುವಿರಿ

[4] ಖಂಡಿತವಾಗಿಯೂ ನಾವು ಭೂಮಿಯಲ್ಲಿರುವ ಎಲ್ಲವನ್ನೂ ಅದಕ್ಕೇ (ಭೂಮಿಗೇ) ಭೂಷಣವಾಗಿಸಿದ್ದೇವೆ. ಅವರಲ್ಲಿ ಯಾರು ಅತ್ಯುತ್ತಮ ಕರ್ಮಗಳನ್ನು ಮಾಡುತ್ತಾರೆಂದು ಅವರನ್ನು ಪರೀಕ್ಷಿಸಲಿಕ್ಕಾಗಿ (ಹೀಗೆ ಮಾಡಲಾಗಿದೆ)

[5] ನಾವು ಅದರ (ಭೂಮಿಯ) ಮೇಲಿರುವ ಎಲ್ಲವನ್ನೂ ಖಂಡಿತ ಬರಡು ಬಯಲಾಗಿಸಲಿದ್ದೇವೆ

[6] ನೀವೇನು, ಗುಹೆಯವರು ಮತ್ತು ರಕೀಮ್‌ನವರು ನಮ್ಮ ವಿಚಿತ್ರ ಪುರಾವೆಗಳ ಸಾಲಿಗೆ ಸೇರಿದ್ದರೆಂದು ಕೊಂಡಿರುವಿರಾ

[7] ಆ ಯುವಕರು ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು ಮತ್ತು, ‘‘ನಮ್ಮೊಡೆಯಾ, ನಿನ್ನ ಬಳಿಯಿಂದ ನಮಗಾಗಿ ವಿಶೇಷ ಅನುಗ್ರಹವನ್ನು ಕರುಣಿಸು ಮತ್ತು ನಮ್ಮ ಸನ್ನಿವೇಶವನ್ನು ಸುಲಭಗೊಳಿಸು’’ ಎಂದು ಪ್ರಾರ್ಥಿಸಿದ್ದರು

[8] ನಾವು ಅವರ ಕಿವಿಗಳಿಗೆ ಹೊಡೆದು (ಮೂರ್ಛೆ ಬರಿಸಿ) ಅವರನ್ನು ಹಲವಾರು ವರ್ಷ ಗುಹೆಯಲ್ಲೇ ಉಳಿಸಿದೆವು

[9] ಮುಂದೆ, ಅವರು ಎಷ್ಟು ಕಾಲ ಹಾಗಿದ್ದರೆಂಬುದನ್ನು, ಎರಡು ಗುಂಪುಗಳ ಪೈಕಿ ಯಾರು ಹೆಚ್ಚು ಖಚಿತವಾಗಿ ಗ್ರಹಿಸುತ್ತಾರೆಂಬುದನ್ನು ಅರಿಯಲು – ನಾವು ಅವರನ್ನು ಎಬ್ಬಿಸಿದೆವು

[10] ನಾವಿದೋ ನಿಮಗೆ ಅವರ ನೈಜ ವೃತ್ತಾಂತವನ್ನು ತಿಳಿಸುತ್ತಿದ್ದೇವೆ; ಅವರು ನಿಜವಾಗಿ, ತಮ್ಮ ಒಡೆಯನಲ್ಲಿ ನಂಬಿಕೆ ಇಟ್ಟ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದ್ದೆವು

[11] ಅವರು ಎದ್ದು ನಿಂತಾಗ ನಾವು ಅವರ ಮನಸ್ಸುಗಳಿಗೆ ದೃಢತೆಯನ್ನೊದಗಿಸಿದೆವು ಮತ್ತು ಅವರು,‘‘ಆಕಾಶಗಳ ಹಾಗೂ ಭೂಮಿಯ ಒಡೆಯನೇ ನಮ್ಮ ಒಡೆಯ. ನಾವು ಅವನ ಹೊರತು ಬೇರಾವ ದೇವರನ್ನೂ ಪ್ರಾರ್ಥಿಸಲಾರೆವು. ಅನ್ಯಥಾ ನಾವು ಅರ್ಥಹೀನ ಮಾತನ್ನಾಡಿದಂತಾಗುವುದು’’ ಎಂದು ಘೋಷಿಸಿದರು

[12] ‘‘ಈ ನಮ್ಮ ಜನಾಂಗದ ಜನರು ಅವನ ಹೊರತು ಅನ್ಯರನ್ನು ದೇವರಾಗಿಸಿಕೊಂಡಿದ್ದಾರೆ. ಆದರೆ ಅವರು ಅವರ (ಆ ದೇವರುಗಳ) ಪರವಾಗಿ ಯಾವುದೇ ಸ್ಪಷ್ಟ ಪುರಾವೆಯನ್ನೇಕೆ ತರುವುದಿಲ್ಲ? ಅಲ್ಲಾಹನ ಕುರಿತು ಸುಳ್ಳನ್ನು ರಚಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ?’’ (ಎಂದು ಅವರು ಹೇಳಿದರು)

[13] ‘‘ಇದೀಗ ನೀವು ಅವರನ್ನು ಮತ್ತು ಅವರು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ಎಲ್ಲವನ್ನೂ ತ್ಯಜಿಸಿ ಬಂದಿರುವುದರಿಂದ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಒಡೆಯನು ನಿಮಗಾಗಿ ತನ್ನ ಅನುಗ್ರಹವನ್ನು ವಿಸ್ತರಿಸುವನು ಮತ್ತು ನಿಮ್ಮ ಸನ್ನಿವೇಶದಲ್ಲಿ ನಿಮಗೆ ನೆರವನ್ನು ಒದಗಿಸುವನು’’ (ಎಂಬ ಶುಭವಾರ್ತೆಯನ್ನು ಅವರಿಗೆ ನೀಡಲಾಯಿತು)

[14] ನೀವು ಕಾಣುವಿರಿ – ಸೂರ್ಯನು ಉದಯಿಸಿದಾಗ ಅದು (ಅದರ ಬೆಳಕು) ಅವರ ಗುಹೆಯ ಬಲಭಾಗದಿಂದ ಹಾದು ಹೋಗುತ್ತಿತ್ತು ಮತ್ತು ಅದು ಅಸ್ತಮಿಸುವಾಗ ಅವರನ್ನು ತಪ್ಪಿಸಿಕೊಂಡು ಅವರ ಎಡಭಾಗದಿಂದ ಹಾದು ಹೋಗುತ್ತಿತ್ತು. ಅವರು ಅದರ (ಗುಹೆಯ) ಒಂದು ವಿಶಾಲ ಭಾಗದಲ್ಲಿದ್ದರು. ಇವೆಲ್ಲಾ ಅಲ್ಲಾಹನ ಸೂಚನೆಗಳು. ಅಲ್ಲಾಹನು ಯಾರಿಗೆ ದಾರಿತೋರಿದನೋ ಅವನು ಸರಿದಾರಿಯನ್ನು ಪಡೆದನು. ಇನ್ನು ಅವನು ಯಾರನ್ನು ದಾರಿಗೆಡಿಸಿದನೋ ಅವನು ತನಗಾಗಿ ಯಾವುದೇ ರಕ್ಷಕ ಅಥವಾ ಮಾರ್ಗದರ್ಶಿಯನ್ನು ಕಾಣಲಾರನು

[15] ಅವರು ಎಚ್ಚರವಿದ್ದಾರೆಂದು ನೀವು ಗ್ರಹಿಸುತ್ತಿದ್ದಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಎಡಕ್ಕೂ ಬಲಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ತನ್ನ ಮುಂದಿನ ಎರಡೂ ಕಾಲುಗಳನ್ನು ಊರಿ (ಗುಹೆಯ) ಬಾಗಿಲಲ್ಲೇ ಕುಳಿತಿರುತ್ತಿತ್ತು. ಒಂದು ವೇಳೆ ನೀವು ಅವರೆಡೆಗೆ ಇಣುಕಿ ನೋಡಿದ್ದರೆ ಅಲ್ಲಿಂದ ಓಡಿ ಬಿಡುತ್ತಿದ್ದಿರಿ ಮತ್ತು ಅವರ ಕುರಿತು ಅಂಜುತ್ತಿದ್ದಿರಿ

[16] ಹೀಗೆ, ಅವರು ಪರಸ್ಪರ ವಿಚಾರಿಸಲೆಂದು ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬನು, ‘‘ನೀವು (ಇಲ್ಲಿ) ಎಷ್ಟುಕಾಲ ಇದ್ದಿರಿ?’’ ಎಂದು ವಿಚಾರಿಸಿದನು. ‘‘ಒಂದು ದಿನ ಅಥವಾ ಒಂದು ದಿನದ ಒಂದು ಭಾಗ’’ ಎಂದು ಅವರು ಹೇಳಿದರು. ತರುವಾಯ ಅವರು ಹೇಳಿದರು; ‘‘ನೀವೆಷ್ಟು ಕಾಲ (ಇಲ್ಲಿ) ಇದ್ದಿರೆಂಬುದನ್ನು ನಿಮ್ಮೊಡೆಯನೇ ಹೆಚ್ಚು ಬಲ್ಲನು. ನೀವೀಗ ಈ ನಿಮ್ಮ ಮೊತ್ತವನ್ನು ಕೊಟ್ಟು ನಿಮ್ಮಲ್ಲೊಬ್ಬನನ್ನು ನಗರಕ್ಕೆ ಕಳಿಸಿರಿ. ಅವನು (ಅಲ್ಲಿ) ಯಾವ ಆಹಾರ ಹೆಚ್ಚು ಶುದ್ಧವಾಗಿದೆ ಎಂದು ನೋಡಲಿ ಮತ್ತು ಅದರಿಂದ ನಿಮಗಾಗಿ ಆಹಾರವನ್ನು ತರಲಿ ಮತ್ತು ಯಾರಿಗೂ ನಿಮ್ಮ ಕುರಿತು ಮಾಹಿತಿ ದೊರೆಯದಂತೆ ಅವನು ಗೌಪ್ಯ ಕಾಪಾಡಲಿ’’

[17] ‘‘ಒಂದು ವೇಳೆ ಅವರಿಗೆ ನಿಮ್ಮ ಕುರಿತು ತಿಳಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು ಅಥವಾ ನಿಮ್ಮನ್ನು ತಮ್ಮ ಸಮುದಾಯಕ್ಕೆ ಮರಳಿಸುವರು. ಹಾಗಾಗಿ ಬಿಟ್ಟಲ್ಲಿ ನೀವೆಂದೂ ವಿಜಯಿಗಳಾಗಲಾರಿರಿ

[18] ಹೀಗೆ, ಅಲ್ಲಾಹನ ವಾಗ್ದಾನವು ಸತ್ಯವೆಂಬುದನ್ನು ಮತ್ತು (ಲೋಕಾಂತ್ಯದ) ಆ ಘಳಿಗೆ ಬರುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಅವರು (ಊರವರು) ಅರಿಯಬೇಕೆಂದು ನಾವು ಅವರಿಗೆ, ಅವರ (ಗುಹೆಯವರ) ಕುರಿತು ಮಾಹಿತಿ ನೀಡಿದೆವು. (ನಿಮಗೆ ತಿಳಿದಿರಲಿ;) ಅವರು (ಊರವರು) ಅವರ ಕುರಿತು ಜಗಳಾಡಿದಾಗ,ಕೆಲವರು ‘‘ಅವರ (ಗುಹೆಯ) ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ’’ ಎಂದರು. ಅವರನ್ನು ಅವರ ಒಡೆಯನು ಚೆನ್ನಾಗಿಬಲ್ಲನು. ಕೊನೆಗೆ ಅವರ ಮೇಲೆ ಪ್ರಾಬಲ್ಯ ಹೊಂದಿದ್ದ ಕೆಲವರು ‘‘ನಾವು ಅವರ (ಗುಹೆಯ) ಮೇಲೆಒಂದು ಮಸೀದಿಯನ್ನು ಕಟ್ಟೋಣ’’ ಎಂದರು

[19] (ದೂತರೇ), ಇದೀಗ ಕೆಲವರು, ‘‘ಅವರು ಮೂವರಿದ್ದರು, ನಾಲ್ಕನೆಯದು ಅವರ ನಾಯಿ’’ ಎನ್ನುವರು. ಮತ್ತೆ ಕೆಲವರು, ‘‘ಅವರು ಐವರಿದ್ದರು, ಆರನೆಯದು ಅವರ ನಾಯಿ’’ ಎಂದೂ ಹೇಳುವರು. ಇದೆಲ್ಲಾ ಕೇವಲ ಊಹೆಮಾತ್ರ. ಇನ್ನು, ‘‘ಅವರು ಏಳುಮಂದಿ ಇದ್ದರು ಮತ್ತು ಎಂಟನೆಯದು ಅವರ ನಾಯಿ’’ ಎಂದು ಕೂಡಾ ಕೆಲವರು ಹೇಳುವರು. ನೀವು ಹೇಳಿರಿ; ಅವರ ನೈಜ ಸಂಖ್ಯೆಯನ್ನು ನನ್ನ ಒಡೆಯನು ಮಾತ್ರ ಬಲ್ಲನು. ಅವರ ಕುರಿತು (ವಾಸ್ತವವನ್ನು)ಕೇವಲ ಕೆಲವರು ಮಾತ್ರ ಬಲ್ಲರು. ನೀವು ಸ್ಪಷ್ಟ ಪುರಾವೆ ಇಲ್ಲದೆ ಅವರ ಕುರಿತು ವಾದಿಸಬೇಡಿ ಮತ್ತು ಅವರ ಕುರಿತು ಯಾರನ್ನೂ ಪ್ರಶ್ನಿಸಬೇಡಿ

[20] ಯಾವುದೇ ವಿಷಯದಲ್ಲಿ ‘‘ನಾಳೆ ನಾನು ಖಂಡಿತ ಅದನ್ನು ಮಾಡಿ ಬಿಡುತ್ತೇನೆ’’ ಎನ್ನಬೇಡಿ

[21] ಅಲ್ಲಾಹನು ಇಚ್ಛಿಸಿದರೆ ಮಾತ್ರ (ನೀವು ಏನನ್ನಾದರೂ ಮಾಡಬಲ್ಲಿರಿ). ಮತ್ತು ನೀವು (ಇದನ್ನು) ಮರೆತಾಗಲೆಲ್ಲಾ ನಿಮ್ಮ ಒಡೆಯನನ್ನು ನೆನಪಿಸಿಕೊಳ್ಳಿರಿ ಮತ್ತು ‘‘ನನ್ನ ಒಡೆಯನು ನನಗೆ ಅದಕ್ಕಿಂತಲೂ ಉತ್ತಮವಾದುದನ್ನು ತೋರಿಸಿ ಕೊಡಬಹುದು’’ ಎಂದು ಹೇಳಿರಿ

[22] ಅವರು ಮುನ್ನೂರು ವರ್ಷ ಹಾಗೂ ಇನ್ನೂ ಒಂಭತ್ತು ವರ್ಷಗಳ ಕಾಲ ಗುಹೆಯಲ್ಲಿದ್ದರು

[23] ಹೇಳಿರಿ; ಅವರು ಅದೆಷ್ಟು ಕಾಲ (ಅಲ್ಲಿ) ಇದ್ದರೆಂಬುದನ್ನು ಅಲ್ಲಾಹನೇ ಹೆಚ್ಚು ಬಲ್ಲನು. ಅವನು ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ಸಮಾಚಾರಗಳನ್ನೂ ಬಲ್ಲನು. ಅವನು ಇತರೆಲ್ಲರಿಗಿಂತ ಚೆನ್ನಾಗಿ ಅವುಗಳನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ. ಅವುಗಳಿಗೆ (ಭೂಮ್ಯಾಕಾಶಗಳಿಗೆ) ಅವನ ಹೊರತು ಬೇರೆ ಪೋಷಕರಿಲ್ಲ. ಅವನು ತನ್ನ ಆಧಿಪತ್ಯದಲ್ಲಿ ಯಾರನ್ನೂ ಪಾಲುಗೊಳಿಸುವುದಿಲ್ಲ

[24] (ದೂತರೇ,) ನಿಮ್ಮ ಒಡೆಯನ ಗ್ರಂಥದಿಂದ ನಿಮ್ಮ ಕಡೆಗೆ ದಿವ್ಯವಾಣಿಯ ಮೂಲಕ ಕಳಿಸಲಾಗಿರುವ ಸಂದೇಶವನ್ನು ಓದಿರಿ. ಅವನ ವಚನವನ್ನು ಬದಲಿಸ ಬಲ್ಲವರು ಯಾರೂ ಇಲ್ಲ. ಅವನ ಬಳಿಯಲ್ಲಲ್ಲದೆ ಬೇರೆಲ್ಲೂ ನಿಮಗೆ ಆಶ್ರಯ ಸಿಗದು

[25] ತಮ್ಮ ಒಡೆಯನ ಮೆಚ್ಚುಗೆಯನ್ನು ಅಪೇಕ್ಷಿಸುತ್ತಾ ಮುಂಜಾನೆಯೂ ಸಂಜೆಯೂ ಅವನನ್ನು ಕೂಗಿ ಪ್ರಾರ್ಥಿಸುತ್ತಿರುವವರ ಜೊತೆ ನೀವು ಸಂತೃಪ್ತರಾಗಿರಿ ಮತ್ತು ಅವರನ್ನು ಎಂದೂ ಕಡೆಗಣಿಸಬೇಡಿ. ನೀವೇನು, ಲೌಕಿಕ ಬದುಕಿನ ಮೆರುಗನ್ನು ಬಯಸುತ್ತೀರಾ? ನಾವು ಯಾರ ಮನಸ್ಸಿನಿಂದ ನಮ್ಮ ನೆನಪನ್ನು ಮರೆಸಿ ಬಿಟ್ಟಿರುವೆವೋ ಅವನನ್ನು, ತನ್ನ ಸ್ವೇಚ್ಛೆಯನ್ನೇ ಅನುಸರಿಸುವವನನ್ನು ಮತ್ತು ಎಲ್ಲೆ ಮೀರಿ ವರ್ತಿಸುವಾತನನ್ನು ನೀವೆಂದೂ ಅನುಸರಿಸಬೇಡಿ

[26] ನೀವು ಹೇಳಿ ಬಿಡಿ; ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ. (ಇದನ್ನು) ಇಷ್ಟ ಉಳ್ಳವನು ನಂಬಲಿ ಮತ್ತು ಧಿಕ್ಕರಿಸ ಬಯಸುವವನು ಧಿಕ್ಕರಿಸಲಿ. ನಾವಂತು ಅಕ್ರಮಿಗಳಿಗಾಗಿ ನರಕಾಗ್ನಿಯನ್ನು ಸಿದ್ಧಗೊಳಿಸಿಟ್ಟಿದ್ದೇವೆ. ಅದರ ಜ್ವಾಲೆಗಳು ಅವರನ್ನು ಸುತ್ತುವರಿದಿರುವವು. ಅವರು ನೀರಿಗಾಗಿ ಮೊರೆ ಇಟ್ಟರೆ, ಕರಗಿದ ತಾಮ್ರದಂತಹ ನೀರನ್ನು ಅವರಿಗೆ ಒದಗಿಸಲಾಗುವುದು. ಅದು ಅವರ ಮುಖಗಳನ್ನು ಸುಟ್ಟು ಬಿಡುವುದು – ಅದು ತುಂಬಾ ಕೆಟ್ಟ ಪಾನೀಯವಾಗಿರುವುದು ಮತ್ತು ಅದು ತುಂಬಾ ಕೆಟ್ಟ ನೆಲೆಯಾಗಿರುವುದು

[27] ನಂಬಿಕೆ ಇಟ್ಟವರು ಮತ್ತು ಸತ್ಕರ್ಮಗಳನ್ನು ಮಾಡಿದವರು – (ಇಂತಹ) ಶ್ರೇಷ್ಠ ಕೆಲಸಗಳನ್ನು ಮಾಡುವವರ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ

[28] ಶಾಶ್ವತವಾದ ತೋಟಗಳು ಅವರಿಗಾಗಿ ಕಾದಿವೆ. ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರಿಗೆ ಬಂಗಾರದ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರು ರೇಶ್ಮೆ ಹಾಗೂ ಜರತಾರಿಯ ಹಸಿರು ಉಡುಗೆಗಳನ್ನು ಧರಿಸಿ ಅಲ್ಲಿರುವ ದಿಂಬುಗಳ ಮೇಲೆ ಒರಗಿಕೊಂಡಿರುವರು. ಅದು ಬಹಳ ಶ್ರೇಷ್ಠವಾದ ಪ್ರತಿಫಲ ಮತ್ತು ಅತ್ಯುತ್ತಮ ವಿಶ್ರಾಂತಿಧಾಮವಾಗಿರುವುದು

[29] ಆ ಇಬ್ಬರ ಉದಾಹರಣೆಯನ್ನು ಅವರ ಮುಂದಿಡಿರಿ: ಅವರಲ್ಲೊಬ್ಬನಿಗೆ ನಾವು ದ್ರಾಕ್ಷಿಯ ಎರಡು ತೋಟಗಳನ್ನು ನೀಡಿದ್ದೆವು ಹಾಗೂ ಅವುಗಳ ಸುತ್ತಲೂ ಖರ್ಜೂರದ ಗಿಡಗಳನ್ನು ಬೆಳೆಸಿದ್ದೆವು ಮತ್ತು ಅವುಗಳ ನಡುವೆ ಹೊಲವನ್ನೂ ಬೆಳೆಸಿದ್ದೆವು

[30] ಎರಡೂ ತೋಟಗಳು ಧಾರಾಳ ಫಲನೀಡಿದವು ಮತ್ತು ಆ ಮಟ್ಟಿಗೆ ಯಾವ ಕೊರತೆಯನ್ನೂ ಮಾಡಲಿಲ್ಲ. ನಾವು ಆ ಎರಡೂ ತೋಟಗಳ ಮಧ್ಯೆ ಒಂದು ಕಾಲುವೆಯನ್ನೂ ಹರಿಸಿದೆವು

[31] ಅವುಗಳು ಫಲ ನೀಡುವ ಸಮಯ ಬಂದಾಗ ಅವನು ತನ್ನ ಜೊತೆಗಾರನೊಂದಿಗೆ ಮಾತನಾಡುತ್ತಾ, ‘‘ನಾನು ಸಂಪತ್ತಿನಲ್ಲೂ ಜನಬಲದಲ್ಲೂ ನಿನಗಿಂತ ಹೆಚ್ಚು ಸಂಪನ್ನನಾಗಿದ್ದೇನೆ’’ ಎಂದನು

[32] ಹೀಗೆ, ಅವನು ಸ್ವತಃ ತನ್ನ ಮೇಲೆ ಅಕ್ರಮವೆಸಗುತ್ತಾ ತನ್ನ ತೋಟವನ್ನು ಪ್ರವೇಶಿಸಿದನು. ಅವನು ಹೇಳಿದನು; ‘‘ಇದು (ಈ ತೋಟ) ಎಂದಾದರೂ ನಾಶವಾಗುವುದೆಂದು ನಾನು ಭಾವಿಸುವುದಿಲ್ಲ’’

[33] ‘‘ಲೋಕಾಂತ್ಯದ ಘಳಿಗೆಯೊಂದು ಇದೆಯೆಂದೂ ನಾನು ಭಾವಿಸುವುದಿಲ್ಲ. ಇನ್ನು, ಒಂದು ವೇಳೆ ನನ್ನನ್ನು ನನ್ನ ಒಡೆಯನ ಬಳಿಗೆ ಮರಳಿಸಲಾದರೂ ಅಲ್ಲಿ ಇದಕ್ಕಿಂತಲೂ ಉತ್ತಮ ನೆಲೆ ನನಗೆ ದೊರಕೀತು’’

[34] ಅವನ ಜೊತೆಗಾರನು ಅವನೊಡನೆ ಮಾತನಾಡುತ್ತಾ ಹೇಳಿದನು; ‘‘ನೀನೇನು, ನಿನ್ನನ್ನು ಮಣ್ಣಿನಿಂದಲೂ ಆ ಬಳಿಕ ವೀರ್ಯದಿಂದಲೂ ಸೃಷ್ಟಿಸಿ ಒಬ್ಬ ಪುರುಷನಾಗಿ ನಿನ್ನನ್ನು ಬೆಳೆಸಿದಾತನನ್ನು ಧಿಕ್ಕರಿಸುತ್ತಿರುವೆಯಾ?’’

[35] ‘‘ ನನಗೆ ಮಾತ್ರ ಆ ಅಲ್ಲಾಹನೇ ಒಡೆಯನು. ನಾನು ನನ್ನ ಒಡೆಯನ ಜೊತೆ ಯಾರೊಬ್ಬರನ್ನೂ ಪಾಲುಗೊಳಿಸುವುದಿಲ್ಲ.’’

[36] ‘‘ನೀನು ನಿನ್ನ ತೋಟವನ್ನು ಪ್ರವೇಶಿಸುವಾಗ, ‘‘ಎಲ್ಲವೂ ಅಲ್ಲಾಹನ ಇಚ್ಛೆ. ಅಲ್ಲಾಹನ ಹೊರತು ಬೇರಾವ ಶಕ್ತಿಯೂ ಇಲ್ಲ’’ ಎಂದೇಕೆ ಹೇಳಲಿಲ್ಲ? ಸದ್ಯ ನೀನು ನನ್ನನ್ನು ಸಂಪತ್ತಿನಲ್ಲೂ ಸಂತಾನದಲ್ಲೂ ನಿನಗಿಂತ ಸಣ್ಣವನಾಗಿ ಕಾಣುತ್ತಿರುವೆ’’

[37] ‘‘ಆದರೆ ನನ್ನ ಒಡೆಯನು ನಿನ್ನ ತೋಟಕ್ಕಿಂತಲೂ ಉತ್ತಮವಾದುದನ್ನು ನನಗೆ ನೀಡಬಹುದು. ಹಾಗೆಯೇ ಅವನು ನಿನ್ನ ತೋಟದ ಮೇಲೆ ಆಕಾಶದಿಂದ ಸುಂಟರಗಾಳಿಯೊಂದನ್ನು ಕಳಿಸಿ ಅದನ್ನು ಬಟ್ಟಬಯಲಾಗಿಸಿ ಬಿಡಬಹುದು’’

[38] ‘‘ಅಥವಾ ಅದರಲ್ಲಿನ ನೀರೆಲ್ಲವೂ ಆರಿ ಹೋಗಬಹುದು ಮತ್ತು ಅದನ್ನು ಮತ್ತೆ ಮೇಲೆ ತರಲು ನಿಮಗೆಂದೂ ಸಾಧ್ಯವಾಗದಿರಬಹುದು’’

[39] ಕೊನೆಗೆ ಅದರ (ಆ ತೋಟದ) ಬೆಳೆಗಳಿಗೆ ಆಪತ್ತು ಆವರಿಸಿದಾಗ ಅವನು, ತಾನು ಅದಕ್ಕಾಗಿ ಮಾಡಿದ ಖರ್ಚಿನ ಕುರಿತು ಕೈ ಹೊಸೆದುಕೊಂಡು ಪರಿತಪಿಸ ತೊಡಗಿದನು. ಆ ತೋಟವು ಬುಡಮೇಲಾಗಿ ನಾಶವಾಯಿತು. ಆಗ ಅವನು, ಅಯ್ಯೋ, ನಾನು ನನ್ನ ಒಡೆಯನ ಜೊತೆ ಯಾರನ್ನೂ ಪಾಲುಗೊಳಿಸದೆ ಇದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು’’ ಎಂದನು

[40] ಆಗ ಅವನ ಬಳಿ, ಅವನಿಗೆ ನೆರವಾಗಲು ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಇರಲಿಲ್ಲ. ಮತ್ತು ಪ್ರತೀಕಾರ ತೀರಿಸುವುದಕ್ಕೂ ಅವನು ಅಶಕ್ತನಾಗಿದ್ದನು

[41] ಇಲ್ಲಿ, ಅಧಿಕಾರವೆಲ್ಲಾ ಅಲ್ಲಾಹನಿಗೆ ಮಾತ್ರ ಸೇರಿದೆ. ಅವನು ಅತ್ಯುತ್ತಮ ಪ್ರತಿಫಲ ನೀಡುವವನು ಮತ್ತು ಅತ್ಯುತ್ತಮ ಫಲಿತಾಂಶ ಒದಗಿಸುವವನಾಗಿದ್ದಾನೆ

[42] ಈ ಲೋಕದ ಬದುಕಿನ ಕುರಿತು ಅವರಿಗೆ ಒಂದು ಉದಾಹರಣೆ ನೀಡಿರಿ. ಅದು, ನಾವು ಆಕಾಶದಿಂದ ಇಳಿಸಿದ ಮಳೆ ನೀರಿನಂತಿದೆ. ಭೂಮಿಯ ಸಸ್ಯಗಳೆಲ್ಲವೂ ಅದರಿಂದಾಗಿ ದಷ್ಟಪುಷ್ಟವಾಗಿ ಬೆಳೆಯುತ್ತವೆ. ಕೊನೆಗೆ ಅವೆಲ್ಲಾ ಒಣಗಿ ಚೂರು ಚೂರಾದಾಗ ಗಾಳಿಯು ಅವುಗಳನ್ನು ಎತ್ತಿಕೊಂಡು ಅಲೆದಾಡುತ್ತದೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲನು

[43] ಸಂಪತ್ತು ಸಂತಾನಗಳೆಲ್ಲಾ ಕೇವಲ ಈ ಲೋಕದ ಮೆರುಗುಗಳಾಗಿವೆ. ನಿಜವಾಗಿ ಬಹುಕಾಲ ಉಳಿಯುವ ಸತ್ಕರ್ಮಗಳು ಮಾತ್ರವೇ ಬಹುಮಾನದ ದೃಷ್ಟಿಯಿಂದಲೂ ನಿರೀಕ್ಷೆಯ ದೃಷ್ಟಿಯಿಂದಲೂ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ

[44] ನಾವು ಪರ್ವತಗಳನ್ನು ಚಲಾಯಿಸುವ ಮತ್ತು ಭೂಮಿಯು ತೀರಾ ಸಮತಟ್ಟಾಗಿರುವುದನ್ನು ನೀವು ಕಾಣುವ ಆ ದಿನ ನಾವು ಅವರೆಲ್ಲರನ್ನೂ ಸೇರಿಸುವೆವು ಮತ್ತು ಅವರ ಪೈಕಿ ಯಾರನ್ನೂ ಬಿಡಲಾರೆವು

[45] (ಅಂದು, ಪರಲೋಕದಲ್ಲಿ) ಅವರನ್ನೆಲ್ಲಾ ಸಾಲುಸಾಲಾಗಿ ನಿಮ್ಮ ಒಡೆಯನ ಮುಂದೆ ಒಪ್ಪಿಸಲಾಗುವುದು. (ಆಗ ಅವನು ಹೇಳುವನು;) ಇದೋ, ನಾವು ಪ್ರಥಮ ಬಾರಿಗೆ ನಿಮ್ಮನ್ನು ಸೃಷ್ಟಿಸಿದ್ದ ರೂಪದಲ್ಲೇ ನೀವೀಗ ನಮ್ಮ ಮುಂದೆ ಬಂದಿರುವಿರಿ. ನೀವಂತು, ನಾವು ನಿಮಗಾಗಿ ನಿಶ್ಚಯಿಸಿರುವ ಕಾಲವನ್ನು ನಾವೆಂದೂ ತರಲಾರೆವು ಎಂದುಕೊಂಡಿದ್ದಿರಿ

[46] ಮತ್ತು (ಕರ್ಮಗಳ) ದಾಖಲೆ ಗ್ರಂಥವನ್ನು ಮುಂದೆ ತರಲಾದಾಗ, ಅಪರಾಧಿಗಳು ಅದರೊಳಗೆ ಏನಿದೆಯೆಂದು ಆತಂಕದಲ್ಲಿರುವುದನ್ನು ನೀವು ಕಾಣುವಿರಿ. ‘‘ಅಯ್ಯೋ,ಐ ನಮ್ಮ ದೌರ್ಭಾಗ್ಯ! ಇದೆಂತಹ ಗ್ರಂಥ! ಸಣ್ಣದಿರಲಿ ದೊಡ್ಡದಿರಲಿ ಯಾವ ವಿಷಯವನ್ನೂ ಇದು ದಾಖಲಿಸದೆ ಬಿಟ್ಟಿಲ್ಲ’’ ಎಂದು ಅವರು ಹೇಳುವರು. ತಾವು ಮಾಡಿದ್ದೆಲ್ಲವನ್ನೂ ಅವರು ತಮ್ಮ ಮುಂದೆಯೇ ಕಾಣುವರು. ನಿಮ್ಮ ಒಡೆಯನು ಯಾರ ಮೇಲೂ ಅಕ್ರಮವೆಸಗಲಾರನು

[47] ನಾವು ಮಲಕ್‌ಗಳೊಡನೆ, ‘‘ಆದಮರಿಗೆ ಸಾಷ್ಟಾಂಗವೆರಗಿರಿ’’ ಎಂದಾಗ ಅವರು ಸಾಷ್ಟಾಂಗವೆರಗಿದರು – ಆದರೆ ಇಬ್ಲೀಸನ ಹೊರತು. ಅವನು ಜಿನ್ನ್‌ಗಳ ಸಾಲಿಗೆ ಸೇರಿದ್ದನು ಮತ್ತು ಅವನು ತನ್ನ ಒಡೆಯನ ಆದೇಶವನ್ನು ಮೀರಿ ನಡೆದನು. ಅವನು ನಿಮ್ಮ ಶತ್ರುವಾಗಿರುವಾಗ ನೀವೇನು, ನನ್ನನ್ನು ಬಿಟ್ಟು, ಅವನನ್ನು ಹಾಗೂ ಅವನ ಸಂತತಿಯನ್ನು ನಿಮ್ಮ ಪೋಷಕರಾಗಿಸಿಕೊಳ್ಳುವಿರಾ? ಅಕ್ರಮಿಗಳಿಗೆ ಬಹಳ ಕೆಟ್ಟ ಫಲ ಸಿಗಲಿದೆ

[48] ನಾನು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವಾಗ ಅಥವಾ ಸ್ವತಃ ಅವರನ್ನು ಸೃಷ್ಟಿಸುವಾಗ ಅವರನ್ನು ಕರೆದಿರಲಿಲ್ಲ. ಅಕ್ರಮಿಗಳನ್ನು ನಾನೆಂದೂ ನನ್ನ ಆಪ್ತರಾಗಿಸಿಲ್ಲ

[49] ಅಂದು (ಪುನರುತ್ಥಾನ ದಿನ) ಅವನು ಹೇಳುವನು; ನೀವು ಯಾರನ್ನೆಲ್ಲಾ ನನ್ನ ಪಾಲುದಾರರೆಂದು ನಂಬಿದ್ದಿರೋ ಅವರನ್ನೆಲ್ಲಾ ಕರೆಯಿರಿ. ಜನರು ಅವರನ್ನು (ತಾವು ನಂಬಿದ್ದ ಹುಸಿ ದೇವರುಗಳನ್ನು) ಪ್ರಾರ್ಥಿಸಿ ಕರೆಯುವರು. ಆದರೆ ಅವರಲ್ಲಿ ಯಾರೂ ಅವರಿಗೆ ಉತ್ತರಿಸಲಾರರು. ನಾವು ಅವರ ನಡುವೆ ಒಂದು ತೆರೆಯನ್ನು ನಿರ್ಮಿಸುವೆವು

[50] ಅಪರಾಧಿಗಳು ನರಕಾಗ್ನಿಯನ್ನು ಕಂಡು, ಇದುವೇ ತಮ್ಮ ನೆಲೆ ಎಂಬುದನ್ನು ಮನಗಾಣುವರು ಮತ್ತು ಅಲ್ಲಿಂದ ಪರಾರಿಯಾಗಲು ಯಾವುದೇ ದಾರಿಯನ್ನು ಕಾಣಲಾರರು

[51] ನಾವು ಈ ಕುರ್‌ಆನ್‌ನಲ್ಲಿ ಜನರ ಮಾರ್ಗದರ್ಶನಕ್ಕೆಂದು ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು. ಇಷ್ಟಾಗಿಯೂ ಮಾನವನು ಅತ್ಯಧಿಕ ಜಗಳಗಂಟನಾಗಿದ್ದಾನೆ

[52] ಜನರ ಬಳಿಗೆ ಮಾರ್ಗದರ್ಶನ ಬಂದಾಗ ಅವರೇಕೆ ಅದನ್ನು ನಂಬಿ ತಮ್ಮ ಒಡೆಯನ ಮುಂದೆ ಕ್ಷಮೆ ಯಾಚಿಸುವುದಿಲ್ಲ? ನಿಜವಾಗಿ, ತಮಗಿಂತ ಹಿಂದಿನವರ ಬಳಿಗೆ ಬಂದವುಗಳು (ಪುರಾವೆಗಳು) ಅಥವಾ ಶಿಕ್ಷೆಯು ತಮ್ಮ ಮುಂದೆ ಬರಬೇಕು ಎಂಬ ಅವರ ಅಪೇಕ್ಷೆಯೇ (ಅವರ ಧೋರಣೆಗೆ ಕಾರಣವಾಗಿದೆ)

[53] ನಾವು ದೂತರನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳಿಸಿರುವೆವು. ಅದರೆ ಧಿಕ್ಕಾರಿಗಳು ಮಿಥ್ಯದ ಆಧಾರದಲ್ಲಿ ಜಗಳಾಡುತ್ತಾರೆ. ಅವರು ಆ ಮೂಲಕ ಸತ್ಯವನ್ನು ಹತ್ತಿಕ್ಕಲು ಶ್ರಮಿಸುತ್ತಾರೆ ಮತ್ತು ಅವರು ನಮ್ಮ ವಚನಗಳನ್ನು ಹಾಗೂ ತಮಗೆ ನೀಡಲಾಗಿರುವ ಎಚ್ಚರಿಕೆಯನ್ನು ಗೇಲಿ ಮಾಡುತ್ತಾರೆ

[54] ತನಗೆ ತನ್ನ ಒಡೆಯನ ವಚನಗಳ ಮೂಲಕ ಎಚ್ಚರಿಸಲಾದಾಗ ಅದನ್ನು ಕಡೆಗಣಿಸುವ ಹಾಗೂ ತಾನೇ ಸಂಪಾದಿಸಿರುವ ತನ್ನ ಕರ್ಮಗಳನ್ನು ಮರೆತು ಬಿಡುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅವರಿಗೆ ಇದು ಅರ್ಥವಾಗದಂತೆ ನಾವು ಅವರ ಮನಸ್ಸುಗಳ ಮೇಲೆ ತೆರೆಯನ್ನು ಎಳೆದಿರುವೆವು. ಅವರ ಕಿವಿಗಳನ್ನು ಕಿವುಡಾಗಿಸಿರುವೆವು. ನೀವು ಅವರನ್ನು ಸನ್ಮಾರ್ಗದೆಡೆಗೆ ಎಷ್ಟು ಕರೆದರೂ ಅವರೆಂದೂ ಸರಿ ದಾರಿಯನ್ನು ಕಾಣಲಾರರು

[55] ಮತ್ತು ನಿಮ್ಮೊಡೆಯನು ಕ್ಷಮಾಶೀಲನೂ ಕರುಣಾಳುವೂ ಅವನು ಅವರ ಎಲ್ಲ ಕರ್ಮಗಳ ಆಧಾರದಲ್ಲಿ ಅವರನ್ನು ದಂಡಿಸಲು ಹೊರಟಿದ್ದರೆ, ಅವರ ಮೇಲೆ ಶಿಕ್ಷೆಯನ್ನೆರಗಿಸಲು ಆತುರಪಡುತ್ತಿದ್ದನು. ಆದರೆ ಅವನು ಅವರಿಗೆಂದು ಒಂದು ಸಮಯವನ್ನು ನಿಶ್ಚಯಿಸಿಟ್ಟಿರುವನು. ಅದರ ವಿರುದ್ಧ ಅವರಿಗೆ ಯಾವ ಆಶ್ರಯವೂ ಸಿಗದು

[56] ಅವು, ಅಕ್ರಮವಸಗಿದರೆಂಬ ಕಾರಣಕ್ಕಾಗಿ ನಾವು ನಾಶ ಮಾಡಿ ಬಿಟ್ಟ ನಾಡುಗಳು. ಇವರ ವಿನಾಶಕ್ಕೂ ನಾವು ಒಂದು ಕಾಲವನ್ನು ನಿಶ್ಚಯಿಸಿರುವೆವು

[57] ಮೂಸಾ, ತಮ್ಮ ಸೇವಕನೊಡನೆ, ‘‘ಎರಡು ಕಡಲುಗಳು ಒಂದುಗೂಡುವ ಸಂಗಮವು ಸಿಗುವ ತನಕ ನಾನು ವಿರಮಿಸಲಾರೆ. ಅನ್ಯಥಾ ನಾನು ವರ್ಷಗಟ್ಟಲೆ ನಡೆಯುತ್ತಲೇ ಇರುವೆನು’’ ಎಂದರು

[58] ಕೊನೆಗೆ ಅವರಿಬ್ಬರೂ ಎರಡು ಕಡಲುಗಳ ಸಂಗಮವನ್ನು ತಲುಪಿದಾಗ, ಅವರು ತಮ್ಮ ಮೀನನ್ನು ಮರೆತರು. ಅದು, ಸುರಂಗದಿಂದಲೋ ಎಂಬಂತೆ ಸಮುದ್ರದೊಳಕ್ಕೆ ತನ್ನ ದಾರಿಯನ್ನು ಕಂಡು ಕೊಂಡಿತ್ತು

[59] ಹೀಗೆ, ಅವರಿಬ್ಬರೂ ಮುಂದೆ ಹೋದಾಗ ಅವರು ತಮ್ಮ ಶಿಷ್ಯನೊಡನೆ, ನಮಗೆ ನಮ್ಮ ಆಹಾರವನ್ನು ತಂದು ಕೊಡು. ನಾವು ಈ ನಮ್ಮ ಪ್ರಯಾಣದಲ್ಲಿ ತುಂಬಾ ದಣಿದಿದ್ದೇವೆ ಎಂದರು

[60] ಅವನು ಹೇಳಿದನು; ನೋಡಿದಿರಾ, ನಾವು ಆ ಬಂಡೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾನು ಆ ಮೀನನ್ನು ಮರೆತುಬಿಟ್ಟಿದ್ದೆ ನಿಜವಾಗಿ ನಾನು ಅದನ್ನು ಮರೆಯಲು ಶೈತಾನನೇ ಕಾರಣ. ಅದು (ಮೀನು) ವಿಚಿತ್ರ ರೀತಿಯಲ್ಲಿ ನದಿಯೊಳಕ್ಕೆ ತನ್ನ ದಾರಿಯನ್ನು ಕಂಡುಕೊಂಡಿತು

[61] ಅವರು, ‘‘ನಾವು ಹುಡುಕುತ್ತಿದ್ದುದು ಅದೇ ಸ್ಥಳವನ್ನು’’ ಎಂದರು. ಹೀಗೆ, ಅವರು ತಾವು ಬಂದ ದಾರಿಯಲ್ಲೇ ಹಿಂದಕ್ಕೆ ಹೊರಟರು

[62] ಕೊನೆಗೆ ಅವರು, ನಮ್ಮ ಒಬ್ಬ ದಾಸನನ್ನು ಕಂಡರು. ನಾವು ನಮ್ಮ ಕಡೆಯಿಂದ ಆತನಿಗೆ ವಿಶೇಷ ಅನುಗ್ರಹವನ್ನು ನೀಡಿದ್ದೆವು ಮತ್ತು ನಮ್ಮ ಕಡೆಯಿಂದ ವಿಶೇಷ ಜ್ಞಾನವನ್ನು ದಯಪಾಲಿಸಿದ್ದೆವು

[63] ‘‘ನಿಮಗೆ ಕಲಿಸಲಾಗಿರುವ ಜ್ಞಾನವನ್ನು ನೀವು ನನಗೆ ಕಲಿಸುವಂತಾಗಲು ನಾನು ನಿಮ್ಮ ಜೊತೆಗೆ ಬರಲೇ?’’ ಎಂದು ಅವರೊಡನೆ ಮೂಸಾ ಕೇಳಿದರು

[64] ಅವರು ಹೇಳಿದರು; ‘‘ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದು

[65] ನಿಮ್ಮ ತಿಳುವಳಿಕೆಯ ವ್ಯಾಪ್ತಿಯಲ್ಲಿ ಇಲ್ಲದ ವಿಷಯಗಳ ಕುರಿತು ನೀವು ಸಹನೆ ತೋರುವುದಾದರೂ ಹೇಗೆ?’’

[66] ಅವರು (ಮೂಸಾ) ಹೇಳಿದರು; ಅಲ್ಲಾಹನು ಇಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ ಮತ್ತು ನಾನು ನಿಮ್ಮ ಯಾವ ಆಜ್ಞೆಯನ್ನೂ ಮೀರಲಾರೆ

[67] ‘‘ನೀವು ನನ್ನ ಜೊತೆಗಿರಬೇಕಿದ್ದರೆ, ಯಾವುದೇ ವಿಷಯದಲ್ಲಿ ನಾನೇ ನಿಮ್ಮೊಡನೆ ಪ್ರಸ್ತಾಪಿಸುವ ತನಕ ನೀವು ನನ್ನನ್ನು ಪ್ರಶ್ನಿಸಬಾರದು’’ ಎಂದು ಅವರು ಹೇಳಿದರು

[68] ಕೊನೆಗೆ ಅವರಿಬ್ಬರೂ ಹೊರಟರು. ಮುಂದೆ ಅವರು ಒಂದು ಹಡಗನ್ನೇರಿದಾಗ ಆ ವ್ಯಕ್ತಿಯು ಹಡಗಿನಲ್ಲಿ ಒಂದು ರಂಧ್ರವನ್ನು ಕೊರೆದರು. ಆಗ ಅವರು (ಮೂಸಾ) ‘‘ನೀವೇನು ಹಡಗಿನವರನ್ನು ಮುಳುಗಿಸಲಿಕ್ಕಾಗಿ ಆ ರಂಧ್ರವನ್ನು ಕೊರೆದಿರಾ? ನೀವು ತೀರಾ ವಿಚಿತ್ರ ಕೆಲಸ ಮಾಡಿದಿರಿ’’ ಎಂದರು

[69] ಅವರು ಹೇಳಿದರು; ‘‘ನನ್ನ ಜೊತೆ ಸಹನಶೀಲನಾಗಿರಲು ನಿಮಗೆ ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳಿರಲಿಲ್ಲವೇ?’’

[70] ಅವರು (ಮೂಸಾ) ‘‘ಮರೆವಿನಿಂದಾಗಿ ನನ್ನಿಂದ ಆದ ತಪ್ಪಿಗಾಗಿ ನೀವು ನನ್ನನ್ನು ದಂಡಿಸಬೇಡಿ ಮತ್ತು ನನ್ನ ವಿಷಯದಲ್ಲಿ ಕಠೋರ ನೀತಿಯನ್ನು ಅನುಸರಿಸಬೇಡಿ’’ ಎಂದರು

[71] ತರುವಾಯ ಅವರಿಬ್ಬರೂ ಮುಂದೆ ಸಾಗಿದರು. ಅವರೊಬ್ಬ ಹುಡುಗನನ್ನು ಎದುರುಗೊಂಡರು. ಆ ವ್ಯಕ್ತಿ ಆ ಹುಡುಗನನ್ನು ಕೊಂದು ಬಿಟ್ಟರು. ಆಗ ಅವರು (ಮೂಸಾ) ‘‘ಯಾರದೇ ಹತ್ಯೆ ನಡೆಸಿಲ್ಲದ ಒಬ್ಬ ಮುಗ್ಧ ಜೀವಿಯನ್ನು ನೀವು ಕೊಂದು ಬಿಟ್ಟಿರಾ? ನೀವು ನಿಜಕ್ಕೂ ಒಂದು ದೊಡ್ಡ ಪಾಪ ಕೃತ್ಯವನ್ನು ಮಾಡಿದಿರಿ’’ ಎಂದರು

[72] ಆ ವ್ಯಕ್ತಿ ಹೇಳಿದರು; ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದೆಂದು ನಾನು ನಿಮ್ಮೊಡನೆ ಹೇಳಿರಲಿಲ್ಲವೇ

[73] ಅವರು (ಮೂಸಾ) ಹೇಳಿದರು; ಇನ್ನು ನಾನು ನಿಮ್ಮೊಡನೆ ಏನಾದರೂ ಪ್ರಶ್ನೆ ಕೇಳಿದರೆ, ಮತ್ತೆ ನೀವು ನನ್ನನ್ನು ನಿಮ್ಮ ಜೊತೆಗಾರನಾಗಿ ಇಟ್ಟು ಕೊಳ್ಳಬೇಡಿ. ನಿಮ್ಮ ಮುಂದಿಡುವುದಕ್ಕೆ ನನ್ನ ಬಳಿ ಇನ್ನಾವುದೇ ನೆಪ ಉಳಿದಿಲ್ಲ

[74] ಅವರಿಬ್ಬರೂ ಮತ್ತೆ ಹೊರಟರು. ಅವರು ಒಂದು ಗ್ರಾಮದವರ ಬಳಿಗೆ ತಲುಪಿ, ಅವರೊಡನೆ ಆಹಾರವನ್ನು ಕೇಳಿದರು. ಆದರೆ ಅವರು ಇವರಿಗೆ ಆತಿಥ್ಯ ನೀಡಲು ನಿರಾಕರಿಸಿದರು. ಮುಂದೆ ಅವರು ಅಲ್ಲಿ ಒಂದು ಗೋಡೆಯನ್ನು ಕಂಡರು. ಅದು ಬೀಳುವುದರಲ್ಲಿತ್ತು. ಆ ವ್ಯಕ್ತಿ ಅದನ್ನು ಸ್ಥಿರಗೊಳಿಸಿದರು. ಆಗ ಅವರು (ಮೂಸಾ), ‘‘ನೀವು ಬಯಸಿದ್ದರೆ ಈ ಕೆಲಸಕ್ಕಾಗಿ ವೇತನ ಪಡೆಯ ಬಹುದಿತ್ತು’’ ಎಂದರು

[75] ಆ ವ್ಯಕ್ತಿ ಹೇಳಿದರು; ಇದು ನನ್ನ ಮತ್ತು ನಿಮ್ಮ ನಡುವಿನ ವಿದಾಯದ ಹಂತವಾಗಿದೆ. ನಾನೀಗ, ನಿಮಗೆ ಅಸಹನೀಯವಾಗಿದ್ದ ವಿಷಯಗಳ ವಾಸ್ತವವನ್ನು ತಿಳಿಸುತ್ತೇನೆ

[76] ಆ ಹಡಗು ಕಡಲಲ್ಲಿ ಶ್ರಮಿಸುವ ಕೆಲವು ಬಡವರದಾಗಿತ್ತು. ನಾನು ಅದಕ್ಕೆ ಹಾನಿ ಮಾಡಲು ಹೊರಟಿದ್ದೇಕೆಂದರೆ, (ಪ್ರಯಾಣದ) ಮುಂದಿನ ಹಂತದಲ್ಲಿ ಒಬ್ಬ ರಾಜನಿದ್ದನು – ಅವನು (ಸುಸ್ಥಿತಿಯಲ್ಲಿರುವ) ಪ್ರತಿಯೊಂದು ಹಡಗನ್ನೂ ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದನು

[77] ಇನ್ನು ಆ ಬಾಲಕ. ಅವನ ತಾಯಿ – ತಂದೆ ವಿಶ್ವಾಸಿಗಳಾಗಿದ್ದರು. ಅವನು ತನ್ನ ವಿದ್ರೋಹ ಹಾಗೂ ಧಿಕ್ಕಾರದ ಮೂಲಕ ಅವರನ್ನು ಪೀಡಿಸಬಹುದೆಂಬ ಆಶಂಕೆ ನಮಗಿತ್ತು

[78] ಆದ್ದರಿಂದ ಆತನ ಬದಲಿಗೆ, ಆತನಿಗಿಂತ ಹೆಚ್ಚು ಶುದ್ಧ ಚರಿತನಾದ ಹಾಗೂ ಹೆಚ್ಚು ದಯೆ ಇರುವ ಒಬ್ಬಾತನನ್ನು ಅವರ ಒಡೆಯನು ಅವರಿಗೆ ಕೊಡಬೇಕೆಂದು ನಾವು ಬಯಸಿದೆವು

[79] ಇನ್ನು ಆ ಗೋಡೆಯ ಸಂಗತಿ ಏನೆಂದರೆ, ಅದು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅವರಿಗೆ ಸೇರಿದ ಖಜಾನೆಯೊಂದು ಅದರ ತಳದಲ್ಲಿತ್ತು. ಅವರ ತಂದೆ ಒಬ್ಬ ಸಜ್ಜನನಾಗಿದ್ದನು. ಅವರಿಬ್ಬರೂ ತಮ್ಮ ಯವ್ವನವನ್ನು ತಲುಪಿ, ತಮ್ಮ ಖಜಾನೆಯನ್ನು ಹೊರ ತೆಗೆಯಬೇಕೆಂಬುದು ನಿಮ್ಮ ಒಡೆಯನ ನಿರ್ಧಾರವಾಗಿತ್ತು. ಇದೆಲ್ಲಾ ನಿಮ್ಮ ಒಡೆಯನ ಕರುಣೆ. ನಾನು ಇದಾವುದನ್ನೂ ನನ್ನ ಇಚ್ಛೆಯಿಂದ ಮಾಡಿಲ್ಲ. ನಿಮಗೆ ಸಹಿಸಲಿಕ್ಕಾಗದ ವಿಷಯಗಳ ವಾಸ್ತವ ಇದು

[80] (ದೂತರೇ), ಅವರು ನಿಮ್ಮೊಡನೆ ‘ಝಲ್‌ಕರ್‌ನೈನ್’ ಕುರಿತು ವಿಚಾರಿಸುತ್ತಾರೆ. ಹೇಳಿರಿ; ನಾನಿದೋ ಅವರ ವಿಷಯವನ್ನು ನಿಮಗೆ ಕೇಳಿಸುತ್ತೇನೆ

[81] ನಾವು ಅವರಿಗೆ ಭೂಮಿಯಲ್ಲಿ ಭಾರೀ ಅಧಿಕಾರವನ್ನು ನೀಡಿದ್ದೆವು ಮತ್ತು ಎಲ್ಲ ಬಗೆಯ ಸಂಪತ್ಸಾಧನಗಳನ್ನು ಒದಗಿಸಿದ್ದೆವು

[82] ಒಮ್ಮೆ ಅವರು, ಒಂದು ಸಾಧನೆಗಾಗಿ ಹೊರಟರು

[83] ಕೊನೆಗೆ ಅವರು, ಸೂರ್ಯನು ಅಸ್ತಮಿಸುವ ಸ್ಥಳವನ್ನು ತಲುಪಿದರು. ಅದು ಕೆಸರು ತುಂಬಿದ ಒಂದು ಚಿಲುಮೆಯಲ್ಲಿ ಮುಳುಗುವುದನ್ನು ಅವರು ಕಂಡರು. ಅಲ್ಲಿ ಅವರಿಗೆ ಒಂದು ಜನಾಂಗವು ಸಿಕ್ಕಿತು. ನಾವು ಹೇಳಿದೆವು; ಓ ಝಲ್‌ಕರ್‌ನೈನ್, ನೀನು ಅವರನ್ನು ದಂಡಿಸಬಹುದು ಅಥವಾ ಅವರ ಜೊತೆ ಸೌಜನ್ಯದ ವರ್ತನೆಯನ್ನೂ ತೋರಬಹುದು

[84] ಅವರು ಹೇಳಿದರು; ಅಕ್ರಮವೆಸಗಿದಾತನನ್ನು ನಾವು ಶಿಕ್ಷಿಸುವೆವು ಮತ್ತು ಆ ಬಳಿಕ ಅವನನ್ನು ತನ್ನ ಒಡೆಯನ ಬಳಿಗೆ ಮರಳಿಸಲಾದಾಗ ಅವನು ಆತನಿಗೆ ತುಂಬಾ ಉಗ್ರ ಶಿಕ್ಷೆಯನ್ನು ನೀಡುವನು

[85] ಇನ್ನು, ವಿಶ್ವಾಸವಿಟ್ಟು, ಸತ್ಕರ್ಮ ಮಾಡುವಾತನಿಗೆ (ಅಲ್ಲಾಹನ ಬಳಿ) ಅತ್ಯುತ್ತಮ ಪ್ರತಿಫಲವಿದೆ. ಜೊತೆಗೆ, ನಾವೂ ಆತನೊಂದಿಗೆ ಸೌಮ್ಯವಾಗಿ ವರ್ತಿಸುವೆವು

[86] ಆ ಬಳಿಕ ಅವರು ಇನ್ನೊಂದು ಸಾಧನೆಗಾಗಿ ಹೊರಟರು

[87] ಕೊನೆಗೆ ಅವರು, ಸೂರ್ಯನು ಉದಯಿಸುವ ಸ್ಥಳವನ್ನು ತಲುಪಿದರು ಮತ್ತು ಅಲ್ಲಿ ಅದು, ಜನಾಂಗವೊಂದರ ಮೇಲೆ ಉದಯಿಸುವುದನ್ನು ಕಂಡರು. ಸೂರ್ಯನಿಂದ ಮರೆಯಾಗುವುದಕ್ಕೆ ಯಾವುದೇ ಆಶ್ರಯವನ್ನು ನಾವು ಆ ಜನಾಂಗದವರಿಗೆ ಒದಗಿಸಿರಲಿಲ್ಲ

[88] ಹೀಗಿತ್ತು ಅವರ ಸ್ಥಿತಿ. ಅತ್ತ, ಅವರ (ಝಲ್‌ಕರ್‌ನೈನ್‌ರ) ಬಳಿ ಏನಿತ್ತೆಂಬುದು ನಮಗೆ ಚೆನ್ನಾಗಿ ತಿಳಿದಿತ್ತು

[89] ಅವರು ಮತ್ತೊಂದು ಸಾಧನೆಗಾಗಿ ಹೊರಟರು

[90] ಕೊನೆಗೆ ಅವರು ಎರಡು ಪರ್ವತಗಳ ನಡುವೆ ಇದ್ದ ಸ್ಥಳವನ್ನು ತಲುಪಿದರು ಮತ್ತು ಅವೆರಡರ ನಡುವೆ ಒಂದು ಜನಾಂಗವನ್ನು ಕಂಡರು. ಅವರಿಗೆ ಯಾವ ಮಾತೂ ಅರ್ಥವಾಗುತ್ತಿರಲಿಲ್ಲ

[91] ಅವರು (ಆ ನಾಡಿನವರು) ಹೇಳಿದರು; ಓ ಝಲ್‌ಕರ್‌ನೈನ್, ಯಾಜೂಜ್ ಮತ್ತು ಮಾಜೂಜ್ ಭೂಮಿಯಲ್ಲಿ ಅಶಾಂತಿ ಹಬ್ಬುತ್ತಿದ್ದಾರೆ. ನಾವು ನಿಮಗೆ ಶುಲ್ಕ ನೀಡಿದರೆ ನೀವು ನಮ್ಮ ಹಾಗೂ ಅವರ ನಡುವೆ ಒಂದು ಗೋಡೆಯನ್ನು ನಿರ್ಮಿಸುವಿರಾ

[92] ಅವರು ಹೇಳಿದರು; ‘‘ನನಗೆ ನನ್ನ ಒಡೆಯನು ಧಾರಾಳ ಕೊಡುಗೆಗಳನ್ನು ನೀಡಿದ್ದಾನೆ. ನೀವು ಜನ ಬಲದ ಮೂಲಕ ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು.’’

[93] ‘‘ನೀವು ನನಗೆ ಉಕ್ಕಿನ ಹಾಳೆಗಳನ್ನು ತಂದು ಕೊಡಿರಿ.’’ ಹೀಗೆ, ಅವರು ಎರಡು ಪರ್ವತಗಳ ನಡುವಣ ಅಂತರವನ್ನು ಮುಚ್ಚಿದ ಬಳಿಕ, ‘‘ಇದನ್ನು ಚೆನ್ನಾಗಿ ಉರಿಸಿರಿ’’ ಎಂದು ಆದೇಶಿಸಿದರು. ಕೊನೆಗೆ ಅವರು ಅದನ್ನು ಬೆಂಕಿಯಾಗಿಸಿದರು. ಆಗ ಅವರು, ‘‘ಈಗ ನನ್ನ ಬಳಿಗೆ ಕರಗಿದ ತಾಮ್ರವನ್ನು ತನ್ನಿರಿ, ನಾನು ಅದನ್ನು ಇದರ ಮೇಲೆ ಸುರಿಯುತ್ತೇನೆ’’ ಎಂದರು

[94] ಅವರಿಗೆ (ಯಾಜೂಜ್, ಮಾಜೂಜ್ ಮತ್ತು ಅವರ ಪಡೆಗಳಿಗೆ) ಅದರ ಮೇಲೆ ಹತ್ತಿ ಬರಲಿಕ್ಕಾಗಲಿ, ಅದರಲ್ಲಿ ಕನ್ನ ಕೊರೆಯಲಿಕ್ಕಾಗಲಿ ಸಾಧ್ಯವಿರಲಿಲ್ಲ

[95] ಅವರು (ಝುಲ್ ಕರ್‌ನೈನ್) ಹೇಳಿದರು; ಇದೆಲ್ಲಾ ನನ್ನ ಒಡೆಯನ ಕೃಪೆ. ಅವನ ವಾಗ್ದಾನಿತ ಸಮಯ ಬಂದಾಗ ಅವನು ಇದನ್ನೆಲ್ಲಾ ನೆಲಸಮ ಗೊಳಿಸಿಬಿಡುವನು ಮತ್ತು ನನ್ನ ಒಡೆಯನ ವಾಗ್ದಾನ ಖಂಡಿತ ಸತ್ಯವಾಗಿರುತ್ತದೆ

[96] ಮತ್ತು ಆ ದಿನ ನಾವು ಜನರನ್ನು ಬಿಟ್ಟು ಬಿಡುವೆವು. ಅವರು ಅಲೆಗಳಂತೆ ಪರಸ್ಪರ ಘರ್ಷಿಸುವರು. ಕೊನೆಗೆ ಕಹಳೆಯನ್ನು ಊದಲಾಗುವುದು. ಮತ್ತು ನಾವು ಅವರೆಲ್ಲರನ್ನೂ ಒಟ್ಟು ಸೇರಿಸುವೆವು

[97] ಆ ದಿನ ನಾವು ನರಕವನ್ನು ಧಿಕ್ಕಾರಿಗಳ ಮುಂದೆಯೇ ತಂದಿಡುವೆವು

[98] ನಮ್ಮ ಉಪದೇಶಗಳ ಪಾಲಿಗೆ ಅವರ ಕಣ್ಣುಗಳ ಮೇಲೆ ತೆರೆ ಬಿದ್ದಿತ್ತು ಮತ್ತು ಏನನ್ನೂ ಕೇಳುವ ಸಾಮರ್ಥ್ಯ ಅವರಲ್ಲಿರಲಿಲ್ಲ

[99] ಧಿಕ್ಕಾರಿಗಳೇನು, ನನ್ನ ಬದಲಿಗೆ ನನ್ನ ದಾಸರನ್ನೇ ತಮ್ಮ ರಕ್ಷಕರಾಗಿಸಿಕೊಳ್ಳಬಹುದು ಎಂದು ಕೊಂಡಿರುವರೇ? ಖಂಡಿತವಾಗಿಯೂ ಈ ಧಿಕ್ಕಾರಿಗಳ ಆತಿಥ್ಯಕ್ಕಾಗಿಯೇ ನಾನು ನರಕವನ್ನು ಸಿದ್ಧಗೊಳಿಸಿಟ್ಟಿದ್ದೇನೆ

[100] ಹೇಳಿರಿ; ಕರ್ಮಗಳ ದೃಷ್ಟಿಯಿಂದ ಅತ್ಯಧಿಕ ನಷ್ಟದಲ್ಲಿರುವವರು ಯಾರೆಂದು ನಾವು ನಿಮಗೆ ತಿಳಿಸಬೇಕೇ

[101] ಅವರ ಶ್ರಮವೆಲ್ಲವೂ ಈ ಲೋಕದ ಬದುಕಿಗಾಗಿ ವ್ಯರ್ಥವಾಯಿತು. ಆದರೂ ಅವರು ತಾವು ಭಾರೀ ಸತ್ಕಾರ್ಯಗಳನ್ನೇ ಮಾಡುತ್ತಿದ್ದೇವೆ ಎಂದು ಕೊಂಡಿದ್ದರು

[102] ಅವರೇ, ತಮ್ಮ ಒಡೆಯನ ವಚನಗಳನ್ನು ಹಾಗೂ ಆತನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಧಿಕ್ಕರಿಸಿದವರು. ಅವರ ಕರ್ಮಗಳೆಲ್ಲವೂ ವ್ಯರ್ಥವಾದವು ಮತ್ತು ಪುನರುತ್ಥಾನ ದಿನ ನಾವು ಅವರಿಗೆ (ಅವರ ಕರ್ಮಗಳಿಗೆ) ಯಾವ ಮಾನ್ಯತೆಯನ್ನೂ ನೀಡಲಾರೆವು

[103] ಅವರು (ಸತ್ಯವನ್ನು) ಧಿಕ್ಕರಿಸಿದ್ದಕ್ಕಾಗಿ ಮತ್ತು ನನ್ನ ವಚನಗಳನ್ನೂ ನನ್ನ ದೂತರನ್ನೂ ಕೇವಲ ತಮಾಷೆಯಾಗಿ ಪರಿಗಣಿಸಿದ್ದಕ್ಕಾಗಿ, ಈ ನರಕವೇ ಅವರಿಗಿರುವ ಪ್ರತಿಫಲವಾಗಿದೆ

[104] ಇನ್ನು, ಧರ್ಮದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರ ಆತಿಥ್ಯಕ್ಕಾಗಿ ಫಿರ್‌ದೌಸ್‌ನ (ಅತ್ಯುನ್ನತ ಸ್ವರ್ಗದ) ತೋಟಗಳಿವೆ

[105] ಅವರು ಅವುಗಳಲ್ಲಿ ಸದಾಕಾಲ ಇರುವರು ಮತ್ತು ಅವರು ಅಲ್ಲಿಂದ ಯಾವುದೇ ವರ್ಗಾವಣೆಯನ್ನು ಬಯಸಲಾರರು

[106] ಹೇಳಿರಿ; ಒಂದು ವೇಳೆ ನನ್ನ ಒಡೆಯನ ವಚನಗಳಿಗಾಗಿ (ಅವುಗಳನ್ನು ದಾಖಲಿಸಲಿಕ್ಕಾಗಿ), ಸಾಗರವೇ ಮಶಿಯಾಗಿ ಬಿಟ್ಟರೂ, ನನ್ನ ಒಡೆಯನ ವಚನಗಳು ಮುಗಿಯುವ ಮುನ್ನವೇ ಸಾಗರವು ಒಣಗಿ ಹೋದೀತು – ಅದರ ನೆರವಿಗಾಗಿ ನಾವು ಅಂತಹದೇ ಇನ್ನೊಂದು ಸಾಗರವನ್ನು ತಂದರೂ ಸರಿಯೇ

[107] (ದೂತರೇ), ಹೇಳಿರಿ; ನಾನಂತು ನಿಮ್ಮಂತೆ ಒಬ್ಬ ಮಾನವ ಮಾತ್ರನಾಗಿದ್ದೇನೆ. ಪೂಜೆಗರ್ಹನಾದ ನಿಮ್ಮ ದೇವನು ಒಬ್ಬನು ಮಾತ್ರನೆಂದು ನನಗೆ ದಿವ್ಯಸಂದೇಶವನ್ನು ನೀಡಲಾಗಿದೆ. ಇನ್ನು, ತನ್ನ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬ ನಿರೀಕ್ಷೆ ಉಳ್ಳವನು, ಒಳ್ಳೆಯ ಕೆಲಸವನ್ನೇ ಮಾಡಲಿ ಮತ್ತು ತನ್ನ ಒಡೆಯನ ಪೂಜೆಯಲ್ಲಿ ಬೇರೆ ಯಾರನ್ನೂ ಪಾಲುಗೊಳಿಸದಿರಲಿ

[108] ಕಾಫ್ ಹಾ ಯಾ ಐನ್ ಸ್ವಾದ್

[109] ಇದು ನಿಮ್ಮ ಒಡೆಯನು, ತನ್ನ ದಾಸ ಝಕರಿಯ್ಯರ ಮೇಲೆ ತೋರಿದ ಅನುಗ್ರಹದ ಪ್ರಸ್ತಾಪ

[110] ಅವರು ಮೆಲುದನಿಯಲ್ಲಿ ತಮ್ಮ ಒಡೆಯನಿಗೆ ಮೊರೆ ಇಟ್ಟರು

ಮರ್ಯಮ್

Surah 19

[1] ಅವರು ಹೇಳಿದರು; ನನ್ನೊಡೆಯಾ, ನನ್ನ ಮೂಳೆಗಳೆಲ್ಲಾ ಟೊಳ್ಳಾಗಿವೆ. ವೃದ್ಧಾಪ್ಯದಿಂದಾಗಿ ನನ್ನ ತಲೆಯೆಲ್ಲಾ ಹಣ್ಣಾಗಿದೆ. (ಆದರೂ) ನನ್ನೊಡೆಯಾ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ನಿರಾಶನಾಗಿಲ್ಲ

[2] ನನ್ನ ಬಳಿಕ ನನ್ನ ಬಂಧುಗಳ ಕುರಿತು ನನಗೆ ಆಶಂಕೆ ಇದೆ. ನನ್ನ ಪತ್ನಿ ಬಂಜೆ. ನೀನು ನಿನ್ನ ಕಡೆಯಿಂದ ನನಗೆ ಒಬ್ಬ ಉತ್ತರಾಧಿಕಾರಿಯನ್ನು ನೀಡು

[3] ಅವನು ನನ್ನ ಉತ್ತರಾಧಿಕಾರಿಯೂ ಯಾಕೂಬರ ಸಂತತಿಯ ಉತ್ತರಾಧಿಕಾರಿಯೂ ಆಗಿರಬೇಕು ಮತ್ತು ನನ್ನೊಡೆಯಾ, ಅವನನ್ನು ನೀನು ನಿನ್ನ ಪ್ರೀತಿ ಪಾತ್ರನಾಗಿ ಮಾಡು

[4] (ಅಲ್ಲಾಹನು ಹೇಳಿದನು;) ಓ ಝಕರಿಯ್ಯ! ಇದೋ ನಾವು ನಿಮಗೆ ಒಬ್ಬ ಪುತ್ರನ ಶುಭವಾರ್ತೆ ನೀಡುತ್ತೇವೆ. ಆತನ ಹೆಸರು ಯಹ್ಯಾ ಎಂದಾಗಿರುವುದು. ನಾವು ಈ ಹಿಂದೆ ಯಾರಿಗೂ ಅಂತಹ ಹೆಸರಿಟ್ಟಿಲ್ಲ

[5] ಅವರು ಹೇಳಿದರು; ನನಗೆ ಪುತ್ರನಾಗುವುದಾದರೂ ಹೇಗೆ? ನನ್ನ ಪತ್ನಿ ಬಂಜೆಯಾಗಿದ್ದಾಳೆ ಮತ್ತು ನಾನು ವೃದ್ಧಾಪ್ಯದ ಕೊನೆಯ ಹಂತದಲ್ಲಿದ್ದೇನೆ

[6] ಅವನು (ಅಲ್ಲಾಹನು) ಹೇಳಿದನು; ಹಾಗೆಯೇ ಆಗುವುದು. ಹಾಗೆಂದು ನಿನ್ನ ಒಡೆಯನೇ ಹೇಳುತ್ತಿದ್ದಾನೆ. ಇದು ನನ್ನ ಪಾಲಿಗೆ ಸುಲಭ. ಈ ಹಿಂದೆ ನೀನು ಏನೂ ಅಲ್ಲದೆ ಇದ್ದಾಗ ನಾನು ನಿನ್ನನ್ನು ಸೃಷ್ಟಿಸಿರುವೆನು

[7] ಅವರು ಹೇಳಿದರು; ನನ್ನೊಡೆಯಾ, ನನಗೊಂದು ಸೂಚನೆಯನ್ನು ಒದಗಿಸು. ಅವನು ಹೇಳಿದನು; (ಮುಂದಿನ) ಮೂರು ರಾತ್ರಿಗಳ ಮಟ್ಟಿಗೆ, ನೀನು ಆರೋಗ್ಯವಂತನಾಗಿದ್ದರೂ, ಜನರೊಡನೆ ಮಾತನಾಡಲು ನಿನಗೆ ಸಾಧ್ಯವಾಗದು. ಅದುವೇ ನಿನಗಿರುವ ಸೂಚನೆ

[8] ಕೊನೆಗೆ ಅವರು ಪೂಜೆಯ ಸ್ಥಳದಿಂದ ಹೊರಟು ತಮ್ಮ ಜನಾಂಗದವರ ಬಳಿಗೆ ಬಂದು, ಮುಂಜಾನೆಯೂ ಸಂಜೆಯೂ ಅವನ (ಅಲ್ಲಾಹನ) ಗುಣಗಾನ ಮಾಡಿರಿ ಎಂದು ಅವರಿಗೆ ಸೂಚಿಸಿದರು

[9] ಓ ಯಹ್ಯಾ! ಗ್ರಂಥವನ್ನು ಬಲವಾಗಿ ಹಿಡಿಯಿರಿ (ಎಂದು ಯಹ್ಯಾರಿಗೆ ಆದೇಶಿಸಲಾಯಿತು.) ಮತ್ತು ನಾವು ಬಾಲ್ಯದಲ್ಲೇ ಅವರಿಗೆ ತೀರ್ಮಾನದ ಸಾಮರ್ಥ್ಯವನ್ನು ನೀಡಿದ್ದೆವು

[10] ಹಾಗೆಯೇ ನಾವು ನಮ್ಮ ಕಡೆಯಿಂದ ಅವರಿಗೆ ಸ್ಪಂದಿಸುವ ಮನಸ್ಸನ್ನೂ, ಪಾವಿತ್ರವನ್ನೂ ನೀಡಿದ್ದೆವು. ಮತ್ತು ಅವರು ತುಂಬಾ ಭಕ್ತಿಭಾವ ಉಳ್ಳವರಾಗಿದ್ದರು

[11] ಅವರು ತಮ್ಮ ಹೆತ್ತವರಿಗೆ ವಿಧೇಯರಾಗಿದ್ದರು. ದರ್ಪ ತೋರುವವನಾಗಲಿ. ಅವಿಧೇಯನಾಗಲಿ ಆಗಿರಲಿಲ್ಲ

[12] ಅವರಿಗೆ ಶಾಂತಿ ಸಿಗಲಿ – ಅವರು ಹುಟ್ಟಿದ ದಿನ, ಅವರು ಸಾಯುವ ದಿನ ಮತ್ತು ಅವರನ್ನು ಮತ್ತೆ ಜೀವಂತಗೊಳಿಸಿ ಎಬ್ಬಿಸಲಾಗುವ ದಿನ

[13] ಮತ್ತು ನೀವು ಈ ಗ್ರಂಥದಲ್ಲಿ ಮರ್ಯಮ್‌ರನ್ನು ಪ್ರಸ್ತಾಪಿಸಿರಿ – ಆಕೆ ತನ್ನ ಮನೆಯವರಿಂದ ಬೇರ್ಪಟ್ಟು, ಪೂರ್ವ ದಿಕ್ಕಿಗಿದ್ದ ಸ್ಥಳವೊಂದರಲ್ಲಿ ತಂಗಿದ್ದರು

[14] ಆಕೆ ತನ್ನನ್ನು ಅವರಿಂದ ಮರೆಯಾಗಿಟ್ಟಿದ್ದರು. ನಾವು ಆಕೆಯ ಬಳಿಗೆ ನಮ್ಮ ಒಬ್ಬ ರೂಹ್ ಅನ್ನು (ವಿಶೇಷ ಮಲಕ್‌ಅನ್ನು) ಕಳಿಸಿದೆವು. ಅವನು ಒಬ್ಬ ಪರಿಪೂರ್ಣ ಮಾನವನ ರೂಪದಲ್ಲಿ ಆಕೆಯ ಮುಂದೆ ಕಾಣಿಸಿಕೊಂಡನು

[15] ಆಕೆ ಹೇಳಿದರು; ನೀನು ಭಯಭಕ್ತಿ ಉಳ್ಳವನಾಗಿದ್ದರೆ, ನಾನು ನಿನ್ನ ವಿರುದ್ಧ ಪರಮ ದಯಾಳುವಿನ ರಕ್ಷಣೆ ಕೋರುತ್ತೇನೆ

[16] ಅವನು ಹೇಳಿದನು; ನಾನು ನಿನ್ನ ಒಡೆಯನ ದೂತ. ಮತ್ತು ನಾನು ನಿನಗೆ ಒಬ್ಬ ಪಾವನ ಪುತ್ರನನ್ನು ನೀಡಲು ಬಂದಿದ್ದೇನೆ

[17] ಆಕೆ ಹೇಳಿದರು; ನನಗೆ ಪುತ್ರನಾಗುವುದಾದರೂ ಹೇಗೆ? ನನ್ನನ್ನು ಯಾವ ಮನುಷ್ಯನೂ ಮುಟ್ಟಿದ್ದಿಲ್ಲ ಮತ್ತು ನಾನು ಅನಾಚಾರ ಎಸಗುವವಳೂ ಅಲ್ಲ

[18] ಅವನು ಹೇಳಿದನು; ಹಾಗೆಯೇ ಆಗುವುದು. ಇದು ನನಗೆ ತೀರಾ ಸುಲಭವೆಂದು ಹಾಗೂ ನಾವು ಆತನನ್ನು ಮಾನವರ ಪಾಲಿಗೆ ಪುರಾವೆಯಾಗಿಸುವೆವು ಮತ್ತು ನನ್ನ ಕಡೆಯಿಂದ ಬಂದ ಅನುಗ್ರಹವಾಗಿಸುವೆವು ಎಂದು ನಿನ್ನ ಒಡೆಯನೇ ಹೇಳುತ್ತಾನೆ. ಇದೊಂದು ಪೂರ್ವ ನಿಶ್ಚಿತ ತೀರ್ಮಾನವಾಗಿದೆ

[19] ಮುಂದೆ ಆಕೆ ಗರ್ಭಿಣಿಯಾದರು. ಆಕೆ ಅದನ್ನು ಹೊತ್ತು ದೂರದ ಒಂದೆಡೆಗೆ ಹೋದರು

[20] ಹೆರಿಗೆಯ ನೋವು ಆಕೆಯನ್ನು ಖರ್ಜೂರ ಗಿಡದ ಬುಡದೆಡೆಗೆ ಕೊಂಡೊಯ್ಯಿತು. ಆಕೆ ಹೇಳಿದರು; ನಾನು ಇದಕ್ಕೆ ಮುನ್ನವೇ ಸತ್ತಿದ್ದರೆ ಅಥವಾ ಸಂಪೂರ್ಣ ಮರೆಯಲ್ಪಟ್ಟವಳಾಗಿದ್ದರೆ ಎಷ್ಟು ಚೆನ್ನಾಗಿತ್ತು

[21] ಕೊನೆಗೆ ಅವನು (ಮಲಕ್) ಅದರ (ಖರ್ಜೂರ ಗಿಡದ) ಒಳಗಿಂದ ಆಕೆಯನ್ನು ಕರೆದು ಹೇಳಿದನು; ನೀನು ದುಃಖಿಸಬೇಡ. ನಿನ್ನ ಒಡೆಯನು ನಿನ್ನ ಕಾಲ ತಳದಲ್ಲಿ ಒಂದು ಚಿಲುಮೆಯನ್ನು ಹೊರಡಿಸಿರುವನು

[22] ನೀನು ಖರ್ಜೂರದ ಕಾಂಡವನ್ನು ನಿನ್ನೆಡೆಗೆ ಎಳೆ. ಖರ್ಜೂರದ ತಾಜಾ ಹಣ್ಣುಗಳು ನಿನ್ನ ಮೇಲೆ ಉದುರಿ ಬೀಳುವವು

[23] ನೀನು ತಿನ್ನು, ಕುಡಿ ಮತ್ತು ನಿನ್ನ ಕಣ್ಣುಗಳನ್ನು ತಣಿಸಿಕೋ. ಇನ್ನು ನೀನು ಯಾರಾದರೊಬ್ಬ ವ್ಯಕ್ತಿಯನ್ನು ಕಂಡರೆ, ನಾನು ಆ ಪರಮ ದಯಾಮಯನಿಗಾಗಿ ಉಪವಾಸ ಆಚರಿಸುವ ಹರಕೆ ಹೊತ್ತಿದ್ದೇನೆ. ಇಂದು ನಾನು ಯಾವ ವ್ಯಕ್ತಿಯ ಜೊತೆಗೂ ಖಂಡಿತ ಮಾತನಾಡಲಾರೆ – ಎಂದು ಹೇಳು

[24] ಮುಂದೆ ಆಕೆ ಅದನ್ನು (ಮಗುವನ್ನು) ಹೊತ್ತು ತನ್ನ ಜನಾಂಗದವರ ಬಳಿಗೆ ಬಂದರು. ಅವರು (ಜನಾಂಗದವರು) ಹೇಳಿದರು; ಓ ಮರ್ಯಮ್, ನೀನು ಬಹಳ ಕೆಟ್ಟ ವಸ್ತುವನ್ನು ತಂದಿರುವೆ

[25] ಓ ಹಾರೂನನ ಸಹೋದರಿಯೇ, ನಿನ್ನ ತಂದೆ ದುಷ್ಟನಾಗಿರಲಿಲ್ಲ ಮತ್ತು ನಿನ್ನ ತಾಯಿಯೂ ದುರಾಚಾರಿಯಾಗಿರಲಿಲ್ಲ

[26] ಆಕೆ ಅದರೆಡೆಗೆ (ಮಗುವಿನೆಡೆಗೆ) ಸನ್ನೆ ಮಾಡಿದರು. ಆಗ ಅವರು; ತೊಟ್ಟಿಲಲ್ಲಿರುವ ಪುಟ್ಟ ಮಗುವಿನ ಜೊತೆ ನಾವು ಮಾತನಾಡುವುದಾದರೂ ಹೇಗೆ? ಎಂದರು

[27] ಆಗ ಅದು(ಮಗು) ಹೇಳಿತು; ನಾನು ಖಂಡಿತ, ಅಲ್ಲಾಹನ ದಾಸನು. ಅವನು ನನಗೆ ಗ್ರಂಥವನ್ನು ನೀಡಿರುವನು ಹಾಗೂ ನನ್ನನ್ನು ಪ್ರವಾದಿಯಾಗಿ ನೇಮಿಸಿರುವನು

[28] ಮತ್ತು ನಾನೆಲ್ಲೇ ಇರಲಿ, ಅವನು ನನ್ನನ್ನು ಸಮೃದ್ಧನಾಗಿಸಿರುವನು ಮತ್ತು ನಾನು ಬದುಕಿರುವಷ್ಟು ಕಾಲ ನಮಾಝ್ ಸಲ್ಲಿಸುತ್ತಿರಬೇಕು ಹಾಗೂ ಝಕಾತ್ ಪಾವತಿಸುತ್ತಿರಬೇಕು ಎಂದು ಅವನು ಆದೇಶಿಸಿರುವನು

[29] ಹಾಗೆಯೇ, ಅವನು ನನ್ನನ್ನು ನನ್ನ ತಾಯಿಗೆ ವಿಧೇಯನಾಗಿಸಿರುವನು ಮತ್ತು ನನ್ನನ್ನು ಅವನು ಅಹಂಕಾರಿ ಹಾಗೂ ದುಷ್ಟನಾಗಿ ಮಾಡಿಲ್ಲ

[30] ನಾನು ಜನಿಸಿದ ದಿನ, ನಾನು ಸಾಯುವ ದಿನ ಮತ್ತು ನನ್ನನ್ನು ಪುನಃ ಜೀವಂತಗೊಳಿಸಲಾಗುವ ದಿನ ನನಗೆ ಶಾಂತಿ ಇದೆ

[31] ಇದು, ಮರ್ಯಮ್‌ರ ಪುತ್ರ ಈಸಾ ಅವರ ಕುರಿತಂತೆ ಜನರು ಜಗಳಾಡುತ್ತಿರುವ ವಿಷಯಗಳ ಸತ್ಯಾಂಶ

[32] ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪಾವನನು. ಅವನು ಏನನ್ನಾದರೂ ನಿರ್ಧರಿಸಿದರೆ, ಅದರೊಡನೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ

[33] ಖಂಡಿತವಾಗಿಯೂ ಅಲ್ಲಾಹನೇ ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿದ್ದಾನೆ. ಆದ್ದರಿಂದ ನೀವು ಅವನನ್ನೇ ಪೂಜಿಸಿರಿ. ಇದುವೇ ನೇರ ಮಾರ್ಗ

[34] ಮುಂದೆ, ವಿವಿಧ ಗುಂಪುಗಳು ಪರಸ್ಪರ ಭಿನ್ನತೆ ತಾಳಿದವು. ಧಿಕ್ಕಾರಿಗಳ ಪಾಲಿಗೆ, ಅವರು ಕಾಣಲಿರುವ ಮಹಾನ್ ದಿನವು ವಿನಾಶಕಾರಿಯಾಗಿರುವುದು

[35] ನಮ್ಮ ಬಳಿಗೆ ಬರುವಂದು ಅವರು ತುಂಬಾ ಸಮರ್ಥವಾಗಿ ಕೇಳಬಲ್ಲವರೂ ನೋಡಬಲ್ಲವರೂ ಆಗಿರುವರು. ಇಂದು ಮಾತ್ರ ಆ ಅಕ್ರಮಿಗಳು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ

[36] (ದೂತರೇ,) ಅಂತಿಮ ತೀರ್ಪು ನೀಡಿ ಬಿಡಲಾಗುವ, ಆ ಹತಾಶೆಯ ದಿನದ ಕುರಿತು ಅವರನ್ನು ಎಚ್ಚರಿಸಿರಿ – ಸದ್ಯ ಅವರು ನಿರ್ಲಕ್ಷ ತೋರುತ್ತಿದ್ದಾರೆ ಮತ್ತು ಅವರು ನಂಬುತ್ತಿಲ್ಲ

[37] ಖಂಡಿತವಾಗಿಯೂ ನಾವೇ ಈ ಭೂಮಿ ಮತ್ತು ಇದರಲ್ಲಿರುವ ಎಲ್ಲರ ವಾರಸುದಾರರು ಮತ್ತು ಕೊನೆಗೆ ಎಲ್ಲರನ್ನೂ ನಮ್ಮೆಡೆಗೇ ಮರಳಿಸಲಾಗುವುದು

[38] ಮತ್ತು (ದೂತರೇ), ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ಕುರಿತು ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವರು ಪರಮ ಸತ್ಯವಂತ ದೂತರಾಗಿದ್ದರು

[39] ಅವರು ತಮ್ಮ ತಂದೆಯೊಡನೆ ಹೇಳಿದ್ದರು; ನನ್ನ ಅಪ್ಪಾ, ಏನನ್ನೂ ಕೇಳಲಾಗದ, ಏನನ್ನೂ ಕಾಣಲಾಗದ ಮತ್ತು ನಿಮಗೆ ಯಾವುದೇ ಉಪಕಾರ ಮಾಡಲಾಗದ ವಸ್ತುಗಳನ್ನು ನೀವೇಕೆ ಪೂಜಿಸುತ್ತೀರಿ

[40] ನನ್ನ ಅಪ್ಪಾ, ಇದೀಗ ನಿಮ್ಮ ಬಳಿ ಇಲ್ಲದ ಜ್ಞಾನವೊಂದು ನನ್ನ ಬಳಿಗೆ ಬಂದಿದೆ. ನೀವು ನನ್ನನ್ನು ಅನುಸರಿಸಿರಿ, ನಾನು ನಿಮಗೆ ನೇರ ಮಾರ್ಗವನ್ನು ತೋರಿಸುವೆನು

[41] ನನ್ನ ಅಪ್ಪಾ, ನೀವು ಶೈತಾನನನ್ನು ಪೂಜಿಸಬೇಡಿ. ಖಂಡಿತವಾಗಿಯೂ ಶೈತಾನನು ಆ ಪರಮ ದಯಾಮಯನಿಗೆ ಅವಿಧೇಯನಾಗಿದ್ದಾನೆ

[42] ನನ್ನ ಅಪ್ಪಾ, ಆ ಪರಮ ದಯಾಮಯನ ಶಿಕ್ಷೆಯು ನಿಮ್ಮ ಮೇಲೆ ಬಂದೆರಗೀತು ಮತ್ತು (ಆವರೆಗೂ) ನೀವು ಶೈತಾನನ ಮಿತ್ರರಾಗಿಯೇ ಉಳಿಯುವಿರಿ ಎಂಬ ಭಯ ನನಗಿದೆ

[43] ಅವನು (ಅವರ ತಂದೆ) ಹೇಳಿದನು; ಓ ಇಬ್ರಾಹೀಮ್, ನೀನೇನು ನನ್ನ ದೇವರುಗಳಿಂದ ದೂರವಾಗಿ ಬಿಟ್ಟೆಯಾ? ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಲ್ಲುವೆನು. ನೀನು ಶಾಶ್ವತವಾಗಿ ನನ್ನನ್ನು ಬಿಟ್ಟು ತೊಲಗು

[44] ಇಬ್ರಾಹೀಮರು ಹೇಳಿದರು; ನಿಮಗೆ ಸಲಾಮ್ (ಶಾಂತಿ). ನಾನು ನನ್ನ ಒಡೆಯನೊಡನೆ ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುವೆನು. ಅವನಂತೂ ನನ್ನ ಪಾಲಿಗೆ ತುಂಬಾ ಉದಾರಿಯಾಗಿದ್ದಾನೆ

[45] ನಾನೀಗ ನಿಮ್ಮನ್ನೂ, ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಿದ್ದಿರೋ ಅವರೆಲ್ಲರನ್ನೂ ಬಿಟ್ಟು ಹೊರಡುತ್ತಿದ್ದೇನೆ. ಮತ್ತು ನಾನು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ. ನನ್ನ ಒಡೆಯನನ್ನು ಪ್ರಾರ್ಥಿಸಿದರೆ ನಾನೆಂದೂ ನಿರಾಶನಾಗಬೇಕಾಗಿಲ್ಲ

[46] ಕೊನೆಗೆ ಅವರು, ಅವರನ್ನೂ, ಅಲ್ಲಾಹನ ಹೊರತು ಅವರು ಏನನ್ನೆಲ್ಲಾ ಪೂಜಿಸುತ್ತಿದ್ದರೋ ಅವೆಲ್ಲವನ್ನೂ ಬಿಟ್ಟುಬಿಟ್ಟಾಗ ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬ್‌ರನ್ನು ನೀಡಿದೆವು. ಅವರಿಬ್ಬರನ್ನೂ ನಾವು ದೂತರಾಗಿಸಿದೆವು

[47] ನಾವು ಅವರಿಗೆ ನಮ್ಮ ಅನುಗ್ರಹವನ್ನು ದಯಪಾಲಿಸಿದೆವು ಮತ್ತು ಅವರಿಗೆ ನಿಜಕ್ಕೂ ಉನ್ನತವಾದ ಖ್ಯಾತಿಯನ್ನು ಕರುಣಿಸಿದೆವು

[48] (ದೂತರೇ,) ಈ ಗ್ರಂಥದಲ್ಲಿ ನೀವು ಮೂಸಾರನ್ನು ಪ್ರಸ್ತಾಪಿಸಿರಿ. ಅವರು ಖಂಡಿತ ಆಯ್ದ ವ್ಯಕ್ತಿಯಾಗಿದ್ದರು ಮತ್ತು ದೂತರೂ ಪ್ರವಾದಿಯೂ ಆಗಿದ್ದರು

[49] ನಾವು ‘ತೂರ್’ ಪರ್ವತದ ಬಲಭಾಗದಿಂದ ಅವರನ್ನು ಕರೆದೆವು ಮತ್ತು ಆತ್ಮೀಯ ಮಾತುಕತೆಗಾಗಿ ಅವರನ್ನು ನಾವು ಹತ್ತಿರ ತಂದೆವು

[50] ಮತ್ತು ನಾವು ನಮ್ಮ ಅನುಗ್ರಹದಿಂದ ಅವರ ಸಹೋದರ ಹಾರೂನ್‌ರನ್ನು ಪ್ರವಾದಿಯಾಗಿಸಿ, ಅವರಿಗೆ (ಸಹಾಯಕರಾಗಿ) ಒದಗಿಸಿದೆವು

[51] ಇನ್ನು (ದೂತರೇ), ನೀವು ಈ ಗ್ರಂಥದಲ್ಲಿ ಇಸ್ಮಾಈಲ್‌ರನ್ನು ಪ್ರಸ್ತಾಪಿಸಿರಿ. ಅವರು ತಾನು ಕೊಟ್ಟ ಮಾತನ್ನು ಪಾಲಿಸುವವರಾಗಿದ್ದರು ಮತ್ತು ದೂತರೂ ಪ್ರವಾದಿಯೂ ಆಗಿದ್ದರು

[52] ಅವರು ತಮ್ಮ ಜನರಿಗೆ ನಮಾಝ್ ಹಾಗೂ ಝಕಾತ್ ಅನ್ನು ಆದೇಶಿಸುತ್ತಿದ್ದರು ಮತ್ತು ಅವರು ತಮ್ಮ ಒಡೆಯನ ಬಳಿ ಪ್ರೀತಿಪಾತ್ರರಾಗಿದ್ದರು

[53] (ದೂತರೇ), ನೀವಿನ್ನು ಈ ಗ್ರಂಥದಲ್ಲಿ ಇದ್ರೀಸ್‌ರನ್ನು ಪ್ರಸ್ತಾಪಿಸಿರಿ. ಅವರು ತುಂಬಾ ಸತ್ಯವಂತ ಪ್ರವಾದಿಯಾಗಿದ್ದರು

[54] ನಾವು ಅವರನ್ನು ಬಹಳ ಉನ್ನತ ಸ್ಥಾನಕ್ಕೆ ಏರಿಸಿದ್ದೆವು

[55] ಅವರೆಲ್ಲಾ ಅಲ್ಲಾಹನ ಪುರಸ್ಕಾರಕ್ಕೆ ಪಾತ್ರರಾದ ಪ್ರವಾದಿಗಳು, ಆದಮ್‌ರ ಸಂತತಿಗೆ ಸೇರಿದವರು, ನಾವು ನೂಹ್ರ ಜೊತೆ (ಹಡಗಿನೊಳಕ್ಕೆ) ಹತ್ತಿಸಿದವರು ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲರ ಸಂತತಿಯವರಾಗಿದ್ದರು. ನಾವು ಅವರಿಗೆ ಸರಿದಾರಿಯನ್ನು ತೋರಿದ್ದೆವು ಮತ್ತು ಅವರನ್ನು ಆಯ್ದುಕೊಂಡಿದ್ದೆವು. ಅವರ ಮುಂದೆ ಪರಮ ದಯಾಮಯನ ವಚನಗಳನ್ನು ಓದಿದಾಗಲೆಲ್ಲಾ ಅವರು ಬಿದ್ದು, ಸಾಷ್ಟಾಂಗವೆರಗಿ, ಅತ್ತು ಬಿಡುತ್ತಿದ್ದರು

[56] ಅವರ ಬಳಿಕ ಅವರ ಉತ್ತರಾಧಿಕಾರಿಗಳಾದವರು, ನಮಾಝ್ ಅನ್ನು (ಪಾಲಿಸದೆ)ಕಳೆದುಕೊಂಡರು ಮತ್ತು ಸ್ವೇಚ್ಛೆಗಳ ಹಿಂದೆ ನಡೆದರು. ಅವರು ಬಹುಬೇಗನೇ ವಿನಾಶಕ್ಕೆ ತುತ್ತಾಗುವರು

[57] ಪಶ್ಚಾತ್ತಾಪ ಪಟ್ಟು, ನಂಬಿಕೆ ಇಟ್ಟು, ಸತ್ಕರ್ಮ ಮಾಡಿದವರ ಹೊರತು. ಅವರು ಸ್ವರ್ಗವನ್ನು ಪ್ರವೇಶಿಸುವರು ಮತ್ತು ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು

[58] ಪರಮ ದಯಾಮಯನು, ತನ್ನ ದಾಸರಿಗೆ ಪರೋಕ್ಷವಾಗಿ ವಾಗ್ದಾನ ಮಾಡಿರುವ ಶಾಶ್ವತ ತೋಟಗಳು (ಅವರಿಗೆ ಸಿಗಲಿವೆ.) ಅವನ ವಾಗ್ದಾನವು ಖಂಡಿತ ಪೂರ್ತಿಯಾಗುವುದು

[59] ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನು ಕೇಳಲಾರರು. ಅಲ್ಲಿ ಅವರು ಶಾಂತಿಯ ಹಾರೈಕೆಯನ್ನು ಮಾತ್ರ ಕೇಳುವರು. ಮುಂಜಾನೆ ಹಾಗೂ ಸಂಜೆ ಅವರಿಗೆ ಅವರ ಆಹಾರವು ಸಿಗುತ್ತಿರುವುದು

[60] ಇದುವೇ, ನಮ್ಮ ದಾಸರ ಪೈಕಿ ದೇವನಿಷ್ಠರಾಗಿದ್ದವರು ಉತ್ತರಾಧಿಕಾರಿಗಳಾಗಲಿರುವ ಸ್ವರ್ಗ (ಎಂದು ಅಲ್ಲಿ ಘೋಷಿಸಲಾಗುವುದು)

[61] (ಮಲಕ್‌ಗಳು ಹೇಳುತ್ತಾರೆ;) ನಾವು ನಿಮ್ಮ ಒಡೆಯನ ಆದೇಶವಿಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದಿರುವ, ನಮ್ಮ ಹಿಂದಿರುವ ಹಾಗೂ ಅವುಗಳ ನಡುವೆ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ನಿಮ್ಮ ಒಡೆಯನು ಯಾವ ವಿಷಯವನ್ನೂ ಮರೆಯುವುದಿಲ್ಲ

[62] ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಅವನನ್ನು ಪೂಜಿಸಿರಿ ಮತ್ತು ಅವನನ್ನು ಪೂಜಿಸುವುದರಲ್ಲೇ ಸ್ಥಿರವಾಗಿರಿ. ಅವನಿಗೆ ಸಮನಾದ ಇನ್ನೊಬ್ಬನು ನಿಮಗೆ ಗೊತ್ತೇ

[63] ಇನ್ನು ಮನುಷ್ಯನು ‘‘ನಾನು ಸತ್ತುಹೋದ ಬಳಿಕ ನನ್ನನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ?’’ ಎಂದು ಪ್ರಶ್ನಿಸುತ್ತಾನೆ

[64] ಹಿಂದೊಮ್ಮೆ, ಅವನ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೆವು ಎಂಬುದು ಅವನಿಗೆ ನೆನಪಿಲ್ಲವೇ

[65] ನಿಮ್ಮೊಡೆಯನಾಣೆ, ಅವರನ್ನು ಹಾಗೂ ಶೈತಾನನನ್ನು ನಾವು ಖಂಡಿತ ಒಂದೆಡೆ ಸೇರಿಸುವೆವು. ಮುಂದೆ ನಾವು ಅವರನ್ನು, ಮೊಣಕಾಲೂರಿ ಬಿದ್ದಿರುವ ಸ್ಥಿತಿಯಲ್ಲಿ ನರಕದ ಸುತ್ತ ಹಾಜರು ಪಡಿಸುವೆವು

[66] ಆ ಬಳಿಕ ನಾವು ಪ್ರತಿಯೊಂದು ಗುಂಪಿನಿಂದ, ಆ ಪರಮ ದಯಾಮಯನ ವಿರುದ್ಧ ಅತ್ಯಧಿಕ ವಿದ್ರೋಹಿಗಳಾಗಿದ್ದವರನ್ನು ಎಳೆದು ಪ್ರತ್ಯೇಕಿಸುವೆವು

[67] ಅದನ್ನು (ನರಕವನ್ನು) ಪ್ರವೇಶಿಸಲು ಹೆಚ್ಚು ಅರ್ಹರು ಯಾರು ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು

[68] ನಿಮ್ಮಲ್ಲಿ ಪ್ರತಿಯೊಬ್ಬರೂ ಅಲ್ಲಿಂದ ಹಾದು ಹೋಗಲೇಬೇಕು. ಇದು ನಿಮ್ಮ ಒಡೆಯನ ಮೇಲಿರುವ ಖಚಿತ ಬಾಧ್ಯತೆಯಾಗಿದೆ

[69] ತರುವಾಯ ನಾವು, ಧರ್ಮ ನಿಷ್ಠರಾಗಿದ್ದವರಿಗೆ ಮುಕ್ತಿ ನೀಡುವೆವು ಮತ್ತು ಅಕ್ರಮಿಗಳನ್ನು, ಮೊಣಕಾಲೂರಿ ಬಿದ್ದಿರುವ ಸ್ಥಿತಿಯಲ್ಲಿ ಅದರೊಳಗೇ ಬಿಟ್ಟು ಬಿಡುವೆವು

[70] ಧಿಕ್ಕಾರಿಗಳ ಮುಂದೆ ನಮ್ಮ ಸುಸ್ಪಷ್ಟ ವಚನಗಳನ್ನು ಓದಿ ಕೇಳಿಸಲಾದಾಗ, ಅವರು ವಿಶ್ವಾಸಿಗಳೊಡನೆ, ‘‘ನಮ್ಮಿಬ್ಬರ ಪೈಕಿ ಯಾವ ಗುಂಪು ಹೆಚ್ಚು ಉತ್ತಮ ಸ್ಥಾನದಲ್ಲಿದೆ ಮತ್ತು ಯಾರ ಸಭೆ ಹೆಚ್ಚು ಸಂಪನ್ನವಾಗಿದೆ?’’ ಎಂದು ಕೇಳುತ್ತಾರೆ

[71] ನಿಜವಾಗಿ ಅವರಿಗಿಂತ ಮುಂಚೆ, ಸಂಪತ್-ಸಾಧನಗಳಲ್ಲೂ ವೈಭವದಲ್ಲೂ ಅವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದ ಅದೆಷ್ಟೋ ಗುಂಪುಗಳನ್ನು ನಾವು ನಾಶ ಪಡಿಸಿದ್ದೇವೆ

[72] ಹೇಳಿರಿ; ಆ ಪರಮ ದಯಾಮಯನು, ದಾರಿಗೆಟ್ಟವರಿಗೆ ಧಾರಾಳ ಕಾಲಾವಕಾಶವನ್ನು ನೀಡುತ್ತಾನೆ. ಕೊನೆಗೆ, ಅವರಿಗೆ ವಾಗ್ದಾನ ಮಾಡಲಾಗಿದ್ದ ಶಿಕ್ಷೆಯನ್ನು ಅಥವಾ ಆ ಅಂತಿಮ ಘಳಿಗೆಯನ್ನು ಅವರು ಕಣ್ಣಾರೆ ಕಾಣುತ್ತಾರೆ. ಯಾರ ನೆಲೆ ಹೆಚ್ಚು ಕೆಟ್ಟದು ಮತ್ತು ಯಾರ ಪಡೆ ಹೆಚ್ಚು ದುರ್ಬಲ ಎಂಬುದನ್ನು ಆಗ ಅವರು ಮನಗಾಣುವರು

[73] ಸನ್ಮಾರ್ಗವನ್ನು ಅನುಸರಿಸುವವರಿಗೆ ಅಲ್ಲಾಹನು ಇನ್ನಷ್ಟು (ಸ್ಪಷ್ಟ) ಮಾರ್ಗದರ್ಶನವನ್ನು ನೀಡುತ್ತಿರುತ್ತಾನೆ. ಪ್ರತಿಫಲದ ದೃಷ್ಟಿಯಿಂದಲೂ, ಶ್ರೇಷ್ಠ ಫಲಿತಾಂಶದ ದೃಷ್ಟಿಯಿಂದಲೂ ಬಹುಕಾಲ ಉಳಿದಿರುವ ಸತ್ಕಾರ್ಯಗಳೇ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ

[74] ನಮ್ಮ ವಚನಗಳನ್ನು ಧಿಕ್ಕರಿಸುವ ಹಾಗೂ ನನಗೆ ಖಂಡಿತ ಮತ್ತಷ್ಟು ಸಂಪತ್ತು ಹಾಗೂ ಸಂತಾನ ಸಿಗಲಿದೆ ಎನ್ನುವಾತನನ್ನು ನೀವು ಕಂಡಿರಾ

[75] ಅವನಿಗೇನು, ಕಾಣದ ಲೋಕದ ಮಾಹಿತಿ ಸಿಕ್ಕಿದೆಯೇ, ಅಥವಾ ಆ ಪರಮ ದಯಾಳುವಿನ ಜೊತೆ ಅವನೇನಾದರೂ ಕರಾರು ಮಾಡಿಕೊಂಡಿರುವನೇ

[76] ಖಂಡಿತ ಇಲ್ಲ. ಅವನು ಹೇಳುತ್ತಿರುವುದನ್ನು ನಾವು ಬರೆದಿಡುವೆವು ಮತ್ತು ನಾವು ಅವನ ಶಿಕ್ಷೆಯನ್ನು ಮತ್ತಷ್ಟು ಹೆಚ್ಚಿಸುವೆವು

[77] ಅವನು ಕೊಚ್ಚಿಕೊಳ್ಳುತ್ತಿರುವ ಎಲ್ಲವುಗಳಿಗೂ ನಾವೇ ಉತ್ತರಾಧಿಕಾರಿಗಳಾಗುವೆವು ಮತ್ತು ಅವನು ಒಬ್ಬಂಟಿಯಾಗಿ ನಮ್ಮ ಬಳಿಗೆ ಬರುವನು

[78] ಅವರು ತಮಗೆ ಗೌರವ ಸಿಗಬೇಕೆಂದು, ಅಲ್ಲಾಹನನ್ನು ಬಿಟ್ಟು ಇತರರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ

[79] ಖಂಡಿತ ಇಲ್ಲ. ಅವರು (ಆ ದೇವರುಗಳು) ಅವರ ಆರಾಧನೆಯನ್ನೇ ತಿರಸ್ಕರಿಸುವರು ಮತ್ತು ಅವರ ಶತ್ರುಗಳಾಗಿ ಬಿಡುವರು

[80] ನೀವು ಕಂಡಿರಾ? ನಾವು ಧಿಕ್ಕಾರಿಗಳ ಮೇಲೆ ಶೈತಾನರನ್ನು ಹೇರಿರುತ್ತೇವೆ. ಅವು ಅವರನ್ನು ಪ್ರಚೋದಿಸುತ್ತಿರುತ್ತವೆ

[81] (ದೂತರೇ,) ನೀವು ಅವರ ಕುರಿತು ಆತುರ ಪಡಬೇಡಿ. ನಾವು ಅವರ ಅವಧಿಯ ದಿನಗಳನ್ನು ಎಣಿಸುತ್ತಲೇ ಇದ್ದೇವೆ

[82] (ಪ್ರತಿಫಲದ) ಆ ದಿನ, ನಾವು ಧರ್ಮನಿಷ್ಠರನ್ನು ಆ ಪರಮ ದಯಾಮಯನ ಮುಂದೆ ಅತಿಥಿಗಳಾಗಿ ಹಾಜರು ಪಡಿಸುವೆವು

[83] ಮತ್ತು ನಾವು ಅಪರಾಧಿಗಳನ್ನು ತೀವ್ರವಾಗಿ ಬಾಯಾರಿದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟಿಕೊಂಡು ಹೋಗುವೆವು

[84] ಆ ಪರಮ ದಯಾಮಯನಿಂದ ವಾಗ್ದಾನ ಪಡೆದಿರುವವರ ಹೊರತು ಬೇರಾರಿಗೂ ಅಂದು ಶಿಫಾರಸಿನ ಅಧಿಕಾರ ಇರಲಾರದು

[85] ಆ ಪರಮ ದಯಾಮಯನಿಗೆ ಪುತ್ರನಿದ್ದಾನೆ ಎಂದು ಅವರು ಹೇಳುತ್ತಾರೆ

[86] ನೀವು ಹೇಳುತ್ತಿರುವ ಈ ಮಾತು ತೀರಾ ಕೆಟ್ಟದು

[87] ಇದರಿಂದ – ಆಕಾಶಗಳು ಸ್ಫೋಟಗೊಳ್ಳಬಹುದು, ಭೂಮಿಯು ಛಿದ್ರವಾದೀತು ಮತ್ತು ಪರ್ವತಗಳು ಚೂರು ಚೂರಾಗಬಹುದು

[88] ರಹ್ಮಾನನಿಗೆ (ಅಲ್ಲಾಹನಿಗೆ) ಪುತ್ರನಿರುವನೆಂದು ಅವರು ಆರೋಪಿಸಿದ್ದರಿಂದ

[89] ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳುವುದು ಆ ಪರಮ ದಯಾಮಯನಿಗೆ ಭೂಷಣವಲ್ಲ

[90] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲರೂ ಆ ಪರಮ ದಯಾಮಯನ ಮುಂದೆ ದಾಸರಾಗಿಯೇ ಬರುವರು

[91] ಅವನು ಅವರೆಲ್ಲರನ್ನೂ ಆವರಿಸಿರುವನು ಮತ್ತು ಅವರನ್ನು ಎಣಿಸಿಟ್ಟಿರುವನು

[92] ಪುನರುತ್ಥಾನ ದಿನ ಅವರೆಲ್ಲರೂ ಒಂಟಿಯಾಗಿಯೇ ಅವನ ಬಳಿಗೆ ಬರುವರು

[93] ಆ ಪರಮ ದಯಾಮಯನು, ವಿಶ್ವಾಸಿಗಳು ಮತ್ತು ಸತ್ಕರ್ಮಿಗಳ ಪರವಾಗಿ (ಜನಮನಗಳಲ್ಲಿ) ಖಂಡಿತ ವಾತ್ಸಲ್ಯವನ್ನು ಬೆಳೆಸುವನು

[94] (ದೂತರೇ,) ನೀವು ಈ ಮೂಲಕ ಧರ್ಮನಿಷ್ಠರಿಗೆ ಶುಭವಾರ್ತೆ ನೀಡಬೇಕೆಂದು ಹಾಗೂ ಜಗಳಗಂಟರಿಗೆ ಎಚ್ಚರಿಕೆ ನೀಡಬೇಕೆಂದು ನಾವು ಇದನ್ನು (ಈ ಗ್ರಂಥವನ್ನು) ನಿಮ್ಮ ಭಾಷೆಯಲ್ಲಿ ಸರಳಗೊಳಿಸಿರುವೆವು

[95] ಅವರಿಗಿಂತ ಮುಂಚೆ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿರುವೆವು – ಇಂದು ಅವರಲ್ಲೊಬ್ಬರಾದರೂ ನಿಮಗೆ ಕಾಣಸಿಗುತ್ತಾರೆಯೇ? ಅಥವಾ ಅವರ ಸಪ್ಪಳವೇನಾದರೂ ನಿಮಗೆ ಕೇಳಿಸುತ್ತದೆಯೇ

[96] ತ್ವಾಹಾ

[97] (ದೂತರೇ,) ನಾವು ಈ ಕುರ್‌ಆನನ್ನು ನಿಮಗೆ ಇಳಿಸಿ ಕೊಟ್ಟಿರುವುದು ನಿಮ್ಮನ್ನು ಕಷ್ಟದಲ್ಲಿ ಸಿಲುಕಿಸಲಿಕ್ಕಲ್ಲ

[98] ಇದು ಭಕ್ತಿಯುಳ್ಳವರಿಗಾಗಿ ಇರುವ ಉಪದೇಶವಾಗಿದೆ

ತಾ-ಹಾ

Surah 20

[1] ಭೂಮಿಯನ್ನು ಹಾಗೂ ಎತ್ತರದ ಆಕಾಶಗಳನ್ನು ಸೃಷ್ಟಿಸಿದವನೇ ಇದನ್ನು ಇಳಿಸಿಕೊಟ್ಟಿರುವನು

[2] ಅವನು ಪರಮ ದಯಾಳು – ವಿಶ್ವಸಿಂಹಾಸನದಲ್ಲಿ ನೆಲೆಸಿರುವನು

[3] ಆಕಾಶಗಳಲ್ಲಿರುವ, ಭೂಮಿಯಲ್ಲಿರುವ, ಅವುಗಳ ನಡುವೆ ಇರುವ ಮತ್ತು ಭೂಮಿಯ ತಳದಲ್ಲಿರುವ ಎಲ್ಲವೂ ಅವನಿಗೇ ಸೇರಿದೆ

[4] ನೀವು ಅದೆಷ್ಟು ಧ್ವನಿ ಏರಿಸಿದರೂ, ಅವನಂತು ಅತ್ಯಂತ ಗುಟ್ಟಿನ ಹಾಗೂ ಗುಪ್ತವಾಗಿಡಲಾದ ವಿಷಯಗಳನ್ನೂ ಖಂಡಿತ ಬಲ್ಲವನಾಗಿದ್ದಾನೆ

[5] ಅಲ್ಲಾಹ್- ಅವನ ಹೊರತು ಬೇರೆ ದೇವರಿಲ್ಲ. ಅವನಿಗೆ ಅತ್ಯುತ್ತಮ ಹೆಸರುಗಳಿವೆ

[6] ಇನ್ನು ನಿಮಗೆ ಮೂಸಾರ ಸುದ್ದಿ ತಲುಪಿದೆಯೇ

[7] ಅವರು (ದೂರದಲ್ಲಿ) ಬೆಂಕಿಯನ್ನು ಕಂಡಾಗ, ತಮ್ಮ ಮನೆಯವರೊಡನೆ ಹೇಳಿದರು; ನೀವು ಇಲ್ಲೇ ಇರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ಅಲ್ಲಿಂದ ನಿಮಗಾಗಿ ಕೆಂಡವನ್ನು ತರಲು ನನಗೆ ಸಾಧ್ಯವಾದೀತು ಅಥವಾ ಬೆಂಕಿಯ ಬಳಿ ನನಗೆ (ಮುಂದಿನ ದಾರಿಯ ಕುರಿತು) ಮಾರ್ಗದರ್ಶನ ಸಿಕ್ಕೀತು

[8] ಅವರು ಅದರ ಬಳಿಗೆ ತಲುಪಿದಾಗ ನಾವು ಕರೆದೆವು; ಓ ಮೂಸಾ

[9] ನಾನೇ ನಿಮ್ಮ ಒಡೆಯ. ನೀವು ನಿಮ್ಮ ಬೂಟುಗಳನ್ನು ಕಳಚಿರಿ. ನೀವು ಪವಿತ್ರವಾದ ‘ತುವಾ’ ಕಣಿವೆಯಲ್ಲಿದ್ದೀರಿ

[10] ನಾನು ನಿಮ್ಮನ್ನು ಆರಿಸಿಕೊಂಡಿರುವೆನು. ಇದೀಗ ನಿಮಗೆ ನೀಡಲಾಗುವ ದಿವ್ಯವಾಣಿಯನ್ನು ಕೇಳಿರಿ

[11] ಖಂಡಿತವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು ಬೇರೆ ದೇವರಿಲ್ಲ. ನನ್ನನ್ನೇ ಪೂಜಿಸಿರಿ ಮತ್ತು ನನ್ನ ನೆನಪನ್ನು ಉಳಿಸಿಕೊಳ್ಳಲು ನಮಾಝ್ ಅನ್ನು ಪಾಲಿಸಿರಿ

[12] ಆ ಅಂತಿಮ ಕ್ಷಣವು ಖಂಡಿತ ಬರಲಿದೆ. ಪ್ರತಿಯೊಬ್ಬನಿಗೂ ಅವನ ಶ್ರಮದ ಫಲ ನೀಡಲಿಕ್ಕಾಗಿ, ನಾನು ಅದನ್ನು (ಅದರ ಖಚಿತ ಸಮಯವನ್ನು) ಗುಟ್ಟಾಗಿಡ ಬಯಸುತ್ತೇನೆ

[13] ಅದರಲ್ಲಿ ನಂಬಿಕೆ ಇಲ್ಲದವನು ಮತ್ತು ತನ್ನ ಇಚ್ಛೆಯನ್ನು ಅನುಸರಿಸುವವನು ನಿಮ್ಮನ್ನು ಅದರಿಂದ ತಡೆಯದಿರಲಿ. ಅನ್ಯಥಾ ನೀವು ನಾಶವಾಗುವಿರಿ

[14] ಓ ಮೂಸಾ, ಆ ನಿಮ್ಮ ಬಲಗೈಯಲ್ಲಿ ಏನಿದೆ

[15] ಅವರು ಹೇಳಿದರು; ಇದು ನನ್ನ ಊರುಗೋಲು. ನಾನು ಇದನ್ನು ಆಧರಿಸಿ ನಿಲ್ಲುತ್ತೇನೆ ಮತ್ತು ನಾನು ಇದರಿಂದ ನನ್ನ ಆಡುಗಳಿಗಾಗಿ ಎಲೆಗಳನ್ನು ಉದುರಿಸುತ್ತೇನೆ. ನನಗೆ ಇದರಿಂದ ಇತರ ಹಲವು ಪ್ರಯೋಜನಗಳೂ ಇವೆ

[16] ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಅದನ್ನು ಕೆಳಗಿಡಿರಿ

[17] ಅವರು ಅದನ್ನು ಕೆಳಗಿಟ್ಟರು. ಕೂಡಲೇ ಅದು ಓಡಾಡುವ ಸರ್ಪವಾಗಿ ಬಿಟ್ಟಿತ್ತು

[18] ಅವನು ಹೇಳಿದನು; ನೀವು ಅದನ್ನು ಹಿಡಿಯಿರಿ ಮತ್ತು ನೀವು ಅಂಜಬೇಡಿ. ನಾವು ಬಹು ಬೇಗನೇ ಅದನ್ನು ಮೊದಲಿನ ಸ್ಥಿತಿಗೆ ಮರಳಿಸುವೆವು

[19] ನೀವೀಗ ನಿಮ್ಮ ಕೈಯನ್ನು ನಿಮ್ಮ ತೋಳಿನಡಿಯಲ್ಲಿಡಿರಿ. ಅದು ಯಾವ ಕಷ್ಟವೂ ಇಲ್ಲದೆ ಉಜ್ವಲ ರೂಪದಲ್ಲಿ ಹೊರ ಬರುವುದು. ಇದು ಇನ್ನೊಂದು ಪುರಾವೆ

[20] ಇದೇಕೆಂದರೆ, ಮುಂದೆ ನಾವು ನಿಮಗೆ ನಮ್ಮ ದೊಡ್ಡ ಪುರಾವೆಗಳನ್ನು ತೋರಿಸಲಿರುವೆವು

[21] ನೀವು ಫಿರ್‌ಔನ್‌ನ ಬಳಿಗೆ ಹೋಗಿರಿ. ಅವನು ಭಾರೀ ವಿದ್ರೋಹಿಯಾಗಿ ಬಿಟ್ಟಿದ್ದಾನೆ

[22] ಅವರು (ಮೂಸಾ) ಪ್ರಾರ್ಥಿಸಿದರು; ನನ್ನೊಡೆಯಾ ನನಗಾಗಿ ನನ್ನ ಮನಸ್ಸನ್ನು ವಿಶಾಲ ಗೊಳಿಸಿಬಿಡು

[23] ನನ್ನ ಕೆಲಸವನ್ನು ನನ್ನ ಪಾಲಿಗೆ ಸುಲಭಗೊಳಿಸು

[24] ನನ್ನ ನಾಲಿಗೆಯಲ್ಲಿನ ಗಂಟನ್ನು ಬಿಚ್ಚು

[25] ಅವರೆಲ್ಲಾ ನನ್ನ ಮಾತನ್ನು ಅರ್ಥಯಿಸುವಂತಾಗಲಿ

[26] ನನ್ನ ಒಬ್ಬ ಬಂಧುವನ್ನೇ ನನ್ನ ಸಹಾಯಕನಾಗಿಸು

[27] (ಅದಕ್ಕಾಗಿ) ನನ್ನ ಸಹೋದರ ಹಾರೂನರಿದ್ದಾರೆ

[28] ಅವರ ಮೂಲಕ ನನ್ನ ಬಲವನ್ನು ಹೆಚ್ಚಿಸು

[29] ನನ್ನ ಕೆಲಸಗಳಲ್ಲಿ ಅವರನ್ನು ನನ್ನ ಪಾಲುದಾರನಾಗಿಸು

[30] ನಾವು ಪದೇ ಪದೇ ನಿನ್ನ ಗುಣಗಾನ ಮಾಡುವಂತಾಗಲಿ

[31] ಮತ್ತು ಪದೇ ಪದೇ ನಿನ್ನನ್ನು ನೆನಪಿಸುವಂತಾಗಲಿ

[32] ನೀನು ಸದಾ ನಮ್ಮನ್ನು ನೋಡುತ್ತಿರುವೆ

[33] ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನೀವು ಕೇಳಿದ್ದನ್ನೆಲ್ಲಾ ಇದೋ ನಿಮಗೆ ನೀಡಲಾಯಿತು

[34] ನಿಜವಾಗಿ ನಾವು ಇದೀಗ ಇನ್ನೊಂದು ಬಾರಿ ನಿಮಗೆ ಉಪಕರಿಸುತ್ತಿದ್ದೇವೆ

[35] (ಹಿಂದೆ) ನಾವು ನಿಮ್ಮ ತಾಯಿಗೆ ಹೀಗೆಂದು ದಿವ್ಯವಾಣಿಯನ್ನು ಕಳಿಸಿದ್ದೆವು

[36] ನೀನು ಅದನ್ನು (ಮಗುವನ್ನು) ಪೆಟ್ಟಿಗೆಯಲ್ಲಿಡು ಮತ್ತು ಪೆಟ್ಟಿಗೆಯನ್ನು ನದಿಯಲ್ಲಿ ಹಾಕಿ ಬಿಡು. ನದಿಯು ಅದನ್ನು ದಡಕ್ಕೆ ತಲುಪಿಸುವುದು. ಆ ಬಳಿಕ ನನ್ನ ಶತ್ರು ಹಾಗೂ ಅದರ (ಆ ಮಗುವಿನ) ಶತ್ರು ಅದನ್ನು ಎತ್ತಿಕೊಳ್ಳುವನು. ಮತ್ತು (ಕಂಡವರೆಲ್ಲಾ ಪ್ರೀತಿಸುವಂತೆ) ನಾವು ನಮ್ಮ ಕಡೆಯಿಂದ ನಿಮ್ಮ ಮೇಲೆ ವಾತ್ಸಲ್ಯವನ್ನು ಆವರಿಸಿ ಬಿಟ್ಟಿದ್ದೆವು. ಮತ್ತು ನನ್ನ ಕಣ್ಣ ಮುಂದೆಯೇ ನಿಮ್ಮ ಪೋಷಣೆ ನಡೆಯುವಂತಾಯಿತು

[37] ನಿಮ್ಮ ಸಹೋದರಿಯು ನಡೆದು ಹೋಗುತ್ತಿದ್ದಳು ಮತ್ತು ಆಕೆ (ಫಿರ್‌ಔನ್‌ನೊಡನೆ) ‘‘ಈತನನ್ನು ಪೋಷಿಸಬಲ್ಲವರನ್ನು ನಾನು ನಿಮಗೆ ತೋರಿಸಲೇ?’’ ಎಂದು ಕೇಳಿದಳು. ಹೀಗೆ ನಾವು ಮತ್ತೆ ನಿಮ್ಮನ್ನು ನಿಮ್ಮ ತಾಯಿಯೆಡೆಗೆ ಮರಳಿಸಿದೆವು – ಆಕೆಯ ಕಣ್ಣು ತಂಪಾಗಲೆಂದು ಹಾಗೂ ಆಕೆ ದುಃಖಿಸದಿರಲೆಂದು. ಮುಂದೆ ನೀವು ಒಬ್ಬನ ಹತ್ಯೆ ನಡೆಸಿದಿರಿ. ಆಗ ನಾವು ನಿಮ್ಮನ್ನು ಸಂಕಟದಿಂದ ಪಾರುಗೊಳಿಸಿದೆವು ಮತ್ತು ನಿಮ್ಮನ್ನು ನಾವು ಹಲವು ಪರೀಕ್ಷೆಗಳಿಗೆ ಒಳಪಡಿಸಿದೆವು. ಆ ಬಳಿಕ ನೀವು ಹಲವು ವರ್ಷ ಮದ್‌ಯನ್‌ನವರ ಜೊತೆ ಇದ್ದಿರಿ. ಇದೀಗ ಓ ಮೂಸಾ, ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ

[38] ನಾನು ನಿಮ್ಮನ್ನು ನನಗಾಗಿಯೇ ಆರಿಸಿಕೊಂಡಿರುವೆನು

[39] ನೀವು ಮತ್ತು ನಿಮ್ಮ ಸಹೋದರ (ಹಾರೂನ್) ನನ್ನ ಪುರಾವೆಗಳೊಂದಿಗೆ ಹೋಗಿರಿ ಮತ್ತು ನನ್ನನ್ನು ಸ್ಮರಿಸುವ ವಿಷಯದಲ್ಲಿ ಆಲಸ್ಯ ತೋರಬೇಡಿ

[40] ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿರಿ. ಅವನು ಖಂಡಿತ ಬಂಡಾಯವೆದ್ದಿರುವನು

[41] ನೀವಿಬ್ಬರೂ ಅವನೊಡನೆ ಸೌಮ್ಯವಾದ ಮಾತನ್ನೇ ಆಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ದೇವ ಭಯ ಉಳ್ಳವನಾಗಲೂ ಬಹುದು (ಎಂದು ನಿರೀಕ್ಷಿಸುತ್ತಾ)

[42] ಅವರಿಬ್ಬರೂ ಹೇಳಿದರು; ನಮ್ಮೊಡೆಯಾ, ಅವನು ನಮ್ಮ ಮೇಲೆ ದೌರ್ಜನ್ಯವೆಸಗುವ ಅಥವಾ ಮತ್ತಷ್ಟು ವಿದ್ರೋಹಿಯಾಗುವ ಭಯ ನಮಗಿದೆ

[43] ಅವನು (ಅಲ್ಲಾಹನು) ಹೇಳಿದನು; ನೀವಿಬ್ಬರೂ ಅಂಜಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ಎಲ್ಲವನ್ನೂ ಕೇಳುತ್ತಿರುತ್ತೇನೆ ಮತ್ತು ನೋಡುತ್ತಿರುತ್ತೇನೆ

[44] ನೀವೀಗ ಅವನ ಬಳಿಗೆ ಹೋಗಿರಿ ಮತ್ತು ಹೇಳಿರಿ; ನಾವು ಖಂಡಿತ ನಿನ್ನ ಒಡೆಯನ ದೂತರು. ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿಕೊಡು. ನೀನು ಅವರನ್ನು ಹಿಂಸಿಸಬೇಡ. ನಾವು ನಿನ್ನ ಒಡೆಯನ ಕಡೆಯಿಂದ, ಪುರಾವೆಯೊಂದಿಗೆ ನಿನ್ನ ಬಳಿಗೆ ಬಂದಿರುವೆವು. ಸನ್ಮಾರ್ಗವನ್ನು ಅನುಸರಿಸುವವರಿಗೆ ಶಾಂತಿ ಸಿಗಲಿ

[45] ನಮಗೆ ದಿವ್ಯಸಂದೇಶವನ್ನು ನೀಡಲಾಗಿದೆ – (ಇದನ್ನು) ಸುಳ್ಳೆಂದವನು ಹಾಗೂ ಕಡೆಗಣಿಸಿದವನು ಶಿಕ್ಷೆಗೆ ಪಾತ್ರನಾಗುವನು

[46] ಅವನು (ಫಿರ್‌ಔನ್) ಕೇಳಿದನು; ಓ ಮೂಸಾ, ನಿಮ್ಮಿಬ್ಬರ ದೇವರು ಯಾರು

[47] ಅವರು (ಮೂಸಾ) ಹೇಳಿದರು; ಪ್ರತಿಯೊಂದು ವಸ್ತುವಿಗೆ ರೂಪ ಕೊಟ್ಟವನು ಮತ್ತು ಮಾರ್ಗದರ್ಶನ ನೀಡಿದವನೇ ನನ್ನ ದೇವರು

[48] ಅವನು ಹೇಳಿದನು; ಹಾಗಾದರೆ ಹಿಂದಿನ ಕಾಲಗಳ ಜನರ ಸ್ಥಿತಿಯೇನು

[49] ಅವರು ಹೇಳಿದರು; ಅವರ ಕುರಿತಾದ ಮಾಹಿತಿಯು ನನ್ನ ದೇವರ ಬಳಿ ಒಂದು ಗ್ರಂಥದಲ್ಲಿದೆ. ನನ್ನ ದೇವರು ಎಂದೂ ತಪ್ಪುವುದಿಲ್ಲ ಮತ್ತು ಎಂದೂ ಮರೆಯುವುದಿಲ್ಲ

[50] ಅವನೇ ನಿಮ್ಮ ಪಾಲಿಗೆ ಭೂಮಿಯನ್ನು ತೊಟ್ಟಿಲಾಗಿಸಿದವನು ಮತ್ತು ಅದರಲ್ಲಿ ನಿಮಗಾಗಿ ದಾರಿಗಳನ್ನು ತೆರೆದವನು ಮತ್ತು ಆಕಾಶದಿಂದ ನೀರನ್ನು ಸುರಿಸಿದವನು. ನಾವು ಅದರಿಂದ ವಿವಿಧ ಜಾತಿಯ ಸಸ್ಯಗಳ ಜೊತೆಗಳನ್ನು ಬೆಳೆಸಿದೆವು

[51] ನೀವೂ ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ಖಂಡಿತವಾಗಿಯೂ ಬುದ್ಧಿ ಉಳ್ಳವರಿಗೆ ಇದರಲ್ಲಿ ಪುರಾವೆಗಳಿವೆ

[52] ನಾವು ಅದರಿಂದಲೇ (ಮಣ್ಣಿನಿಂದಲೇ) ನಿಮ್ಮನ್ನು ಸೃಷ್ಟಿಸಿರುವೆವು. ಅದರೊಳಕ್ಕೇ ನಾವು ನಿಮ್ಮನ್ನು ಮರಳಿಸುವೆವು ಮತ್ತು ಇನ್ನೊಮ್ಮೆ ಅದರೊಳಗಿಂದಲೇ ನಿಮ್ಮನ್ನು ನಾವು ಹೊರತರುವೆವು

[53] ನಾವು ಆತನಿಗೆ (ಫಿರ್‌ಔನನಿಗೆ) ನಮ್ಮ ಎಲ್ಲ ಪುರಾವೆಗಳನ್ನು ತೋರಿಸಿದೆವು. ಆದರೆ ಅವನು ಅವೆಲ್ಲವನ್ನೂ ಸುಳ್ಳೆಂದು ತಿರಸ್ಕರಿಸಿದನು ಮತ್ತು ನಿರಾಕರಿಸಿದನು

[54] ಅವನು ಹೇಳಿದನು; ಓ ಮೂಸಾ, ನೀನೇನು, ನಿನ್ನ ಜಾದೂಗಾರಿಕೆಯ ಮೂಲಕ ನಮ್ಮನ್ನು ನಮ್ಮ ನಾಡಿನಿಂದ ಹೊರಹಾಕಲಿಕ್ಕಾಗಿ ನಮ್ಮ ಬಳಿಗೆ ಬಂದಿರುವೆಯಾ

[55] ಹಾಗಾದರೆ ನಿನ್ನೆದುರಿಗೆ ನಾವು ಇಂತಹದೇ ಜಾದೂಗಾರಿಕೆಯನ್ನು ತರುವೆವು. ಅದಕ್ಕಾಗಿ ನಮ್ಮ ಹಾಗೂ ನಿನ್ನ ನಡುವೆ ಒಂದು ದಿನವನ್ನು ನಿಗದಿ ಪಡಿಸು. ನಾವಾಗಲಿ ನೀನಾಗಲಿ ಅದನ್ನು ಉಲ್ಲಂಘಿಸಬಾರದು. ಇದು ಒಂದು ತೆರೆದ ಬಯಲಲ್ಲಿ ನಡೆಯಲಿ

[56] ಅವರು (ಮೂಸಾ) ಹೇಳಿದರು; ಉತ್ಸವದ ದಿನವೇ ನಿಮ್ಮ ನಿಶ್ಚಿತ ದಿನವಾಗಲಿ. ಅಂದು ಮುಂಜಾನೆ ಜನರನ್ನು ಸೇರಿಸುವ ಕೆಲಸ ನಡೆಯಲಿ

[57] ಹಾಗೆ ಹೊರಟು ಹೋದ ಫಿರ್‌ಔನನು ತನ್ನೆಲ್ಲಾ ದಾಳಗಳನ್ನು ಸಂಗ್ರಹಿಸಿ ಮತ್ತೆ ಬಂದನು

[58] ಅವನೊಡನೆ (ಫಿರ್‌ಔನ್ ಮತ್ತವನ ಜಾದೂಗಾರರೊಡನೆ) ಮೂಸಾ ಹೇಳಿದರು; ನಿಮಗೆ ನಾಶವಿದೆ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಅವನು ನಿಮ್ಮನ್ನು ಶಿಕ್ಷಿಸಿ ನಾಶಗೊಳಿಸುವನು. ಸುಳ್ಳನ್ನು ಸೃಷ್ಟಿಸಿದವನು ಸೋಲುಣ್ಣುವನು

[59] ಅವರು (ಜಾದೂಗಾರರು) ತಾವೇನು ಮಾಡಬೇಕೆಂಬ ಕುರಿತು ಪರಸ್ಪರ ಜಗಳಾಡಿದರು ಮತ್ತು ಗುಟ್ಟಾಗಿ ಸಮಾಲೋಚಿಸಿದರು

[60] ಅವರು (ಜನರೊಡನೆ) ಹೇಳಿದರು; ಇವರಿಬ್ಬರು ಜಾದೂಗಾರರು ತಮ್ಮ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಬಯಸುತ್ತಾರೆ ಮತ್ತು ನಿಮ್ಮ ಶ್ರೇಷ್ಠ ಪಂಥವನ್ನು ನಾಶ ಪಡಿಸಬಯಸುತ್ತಾರೆ

[61] ನೀವೀಗ ನಿಮ್ಮೆಲ್ಲ ಉಪಾಯಗಳನ್ನು ಒಟ್ಟು ಸೇರಿಸಿ ಸಾಲಾಗಿ ಬನ್ನಿರಿ. ಇಂದು ಮೇಲುಗೈ ಸಾಧಿಸುವವನೇ ವಿಜಯಿಯಾಗುವನು

[62] ಅವರು (ಜಾದೂಗಾರರು) ಹೇಳಿದರು; ಓ ಮೂಸಾ, ನೀವು (ದಂಡವನ್ನು) ಎಸೆಯುವಿರಾ? ಅಥವಾ ಮೊದಲು ನಾವು ಎಸೆಯಬೇಕೇ

[63] ಅವರು (ಮೂಸಾ), ‘‘ಮೊದಲು ನೀವೇ ಎಸೆಯಿರಿ’’ ಎಂದರು. ಅಷ್ಟರಲ್ಲೇ ಅವರಿಗೆ (ಮೂಸಾರಿಗೆ), ಅವರ (ಜಾದೂಗಾರರ) ಜಾದುವಿನಿಂದಾಗಿ ಅವರ ಹಗ್ಗಗಳು ಹಾಗೂ ದಂಡಗಳೆಲ್ಲಾ ಚಲಿಸುತ್ತಿರುವಂತೆ ತೋರಿದವು

[64] ಮೂಸಾ ತಮ್ಮ ಮನದೊಳಗೇ ಅಂಜಿದರು

[65] ನಾವು ಹೇಳಿದೆವು; ನೀವು ಅಂಜಬೇಡಿ. ಖಂಡಿತ ನೀವೇ ವಿಜಯಿಯಾಗುವಿರಿ

[66] ನೀವೀಗ ನಿಮ್ಮ ಬಲಗೈಯಲ್ಲಿರುವುದನ್ನು ಎಸೆದು ಬಿಡಿರಿ. ಅವರು ರಚಿಸಿ ತಂದಿರುವ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ರಚಿಸಿ ತಂದಿರುವುದೆಲ್ಲವೂ ಖಂಡಿತವಾಗಿಯೂ ಕೇವಲ ಜಾದೂಗಾರಿಕೆಯ ಮೋಸವಾಗಿದೆ. ಜಾದೂಗಾರನು ಎಲ್ಲಿಗೆ ಹೋದರೂ ವಿಜಯಿಯಾಗಲಾರನು

[67] ಕೊನೆಗೆ ಜಾದೂಗಾರರು ಸಾಷ್ಟಾಂಗವೆರಗಿಬಿಟ್ಟರು. ಅವರು ಹೇಳಿದರು; ನಾವು ಹಾರೂನ್ ಮತ್ತು ಮೂಸಾರ ದೇವರನ್ನು ನಂಬಿದೆವು

[68] ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಲ್ಲಾ! ಖಂಡಿತವಾಗಿಯೂ ಅವನೇ (ಮೂಸಾ) ನಿಮಗೆ ಜಾದೂಗಾರಿಕೆ ಕಲಿಸಿದ ನಿಮ್ಮ ಹಿರಿಯನು. ನಾನೀಗ ನಿಮ್ಮ ಕೈಗಳನ್ನು ಮತ್ತು ನಿಮ್ಮ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುತ್ತೇನೆ ಮತ್ತು ಖರ್ಜೂರದ ಕಂಬಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ನಮ್ಮ ಪೈಕಿ, ಹೆಚ್ಚು ತೀವ್ರವಾಗಿರುವ ಮತ್ತು ಬಹುಕಾಲ ಉಳಿಯುವ ಶಿಕ್ಷೆಯನ್ನು ನೀಡಬಲ್ಲವರು ಯಾರು ಎಂಬುದು ಆಗ ನಿಮಗೆ ತಿಳಿಯುವುದು

[69] ಅವರು (ಜಾದೂಗಾರರು) ಹೇಳಿದರು; ನಮ್ಮ ಮುಂದೆ ಬಂದಿರುವ ಸ್ಪಷ್ಟ ಪುರಾವೆಗಳೆದುರು ಹಾಗೂ ನಮ್ಮನ್ನು ಸೃಷ್ಟಿಸಿದವನೆದುರು ನಾವು ಖಂಡಿತ ನಿನಗೆ ಪ್ರಾಶಸ್ತ್ಯ ನೀಡಲಾರೆವು. ನೀನೇನು ತೀರ್ಮಾನಿಸುವೆಯೋ ಅದನ್ನು ತೀರ್ಮಾನಿಸಿಬಿಡು. ನಿನಗೆ ಹೆಚ್ಚೆಂದರೆ ಈ ಲೋಕದ ಬದುಕಿನ ಕುರಿತು ಮಾತ್ರ ತೀರ್ಮಾನಿಸಲು ಸಾಧ್ಯ

[70] ನಾವಂತು ನಮ್ಮ ಒಡೆಯನಲ್ಲಿ ನಂಬಿಕೆ ಇಟ್ಟಿರುವೆವು – ನಮ್ಮ ತಪ್ಪುಗಳನ್ನು ಮತ್ತು ಜಾದುವಿನ ಹೆಸರಲ್ಲಿ ನೀನು ಬಲವಂತವಾಗಿ ನಮ್ಮಿಂದ ಮಾಡಿಸಿದ ಎಲ್ಲ ಕೃತ್ಯಗಳನ್ನು ಅವನು ಕ್ಷಮಿಸಬೇಕೆಂದು (ನಾವು ಈ ನಿರ್ಧಾರ ಮಾಡಿರುವೆವು). ಅಲ್ಲಾಹನು ಸರ್ವಶ್ರೇಷ್ಠನಾಗಿದ್ದಾನೆ ಮತ್ತು ಸದಾಕಾಲ ಇರುವವನಾಗಿದ್ದಾನೆ

[71] ತನ್ನ ಒಡೆಯನ ಬಳಿ ಅಪರಾಧಿಯಾಗಿ ಹಾಜರಾದವನಿಗೆ ಖಂಡಿತ ನರಕವೇ ಗತಿ. ಅಲ್ಲಿ ಅವನು ಸಾಯಲಾರನು ಮತ್ತು ಬದುಕಿಯೂ ಇರಲಾರನು

[72] ಇನ್ನು, ವಿಶ್ವಾಸಿಯಾಗಿ ಅವನ ಮುಂದೆ ಹಾಜರಾದವನು – ಅವನು ಸತ್ಕರ್ಮಗಳನ್ನೂ ಮಾಡಿದ್ದರೆ, ಅವರಿಗೆ ಉನ್ನತವಾದ ಸ್ಥಾನಗಳಿವೆ

[73] ಶಾಶ್ವತವಾದ ತೋಟಗಳಿವೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿರುವವು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ತನ್ನನ್ನು ಸಂಸ್ಕರಿಸಿಕೊಂಡವನಿಗೆ ಇರುವ ಪ್ರತಿಫಲ

[74] ಮುಂದೆ, ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನೀವು ರಾತ್ರಿ ಹೊತ್ತು ನನ್ನ ದಾಸರೊಂದಿಗೆ ಹೊರಡಿರಿ ಮತ್ತು ಅವರಿಗಾಗಿ ಸಮುದ್ರದಲ್ಲಿ ಒಣದಾರಿಗಳನ್ನು ನಿರ್ಮಿಸಿರಿ. ನಿಮಗೆ, ಬಂಧಿತನಾಗುವ ಭಯವೂ ಇರದು (ಮುಳುಗಿ ಬಿಡುವ) ಆಶಂಕೆಯೂ ಇರದು

[75] ಫಿರ್‌ಔನನು ತನ್ನ ಪಡೆಗಳೊಂದಿಗೆ ಅವರನ್ನು ಹಿಂಬಾಲಿಸಿ ಬಂದನು. ಕೊನೆಗೆ ಸಮುದ್ರವು ಅವರನ್ನು ಸಂಪೂರ್ಣವಾಗಿ ಮುತ್ತಿಕೊಂಡಿತು

[76] ಫಿರ್‌ಔನನು ತನ್ನ ಜನಾಂಗವನ್ನು ದಾರಿಗೆಡಿಸಿದ್ದನು – ಅವನು ಅವರನ್ನು ಸರಿದಾರಿಯಲ್ಲಿ ನಡೆಸಲಿಲ್ಲ

[77] ಇಸ್ರಾಈಲರ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಹಾಗೂ ತೂರ್ ಪರ್ವತದ ಬಲ ಭಾಗದಲ್ಲಿ ನಾವು ನಿಮಗೆ ಮಾತು ಕೊಟ್ಟೆವು ಮತ್ತು ನಿಮಗಾಗಿ ಮನ್ನ್ ಹಾಗೂ ಸಲ್ವಾ (ಎಂಬ ವಿಶೇಷ ಆಹಾರ)ಗಳನ್ನು ಇಳಿಸಿಕೊಟ್ಟೆವು

[78] ನಾವು ನಿಮಗೆ ಕೊಟ್ಟಿರುವುದರಲ್ಲಿ ನಿರ್ಮಲವಾಗಿರುವುದನ್ನು ತಿನ್ನಿರಿ ಮತ್ತು ಈ ವಿಷಯದಲ್ಲಿ ವಿದ್ರೋಹವೆಸಗಬೇಡಿ. ಅನ್ಯಥಾ ನನ್ನ ಕೋಪವು ನಿಮ್ಮ ಮೇಲೆರಗುವುದು. ನನ್ನ ಕೋಪವು ಯಾರ ಮೇಲೆರಗಿತೋ ಅವನು ನಾಶವಾದನು

[79] ಪಶ್ಚಾತ್ತಾಪ ಪಡುವವರು, ವಿಶ್ವಾಸಿಗಳಾಗಿರುವವರು, ಸತ್ಕರ್ಮ ಮಾಡುವವರು ಮತ್ತು ಸರಿದಾರಿಯಲ್ಲಿರುವವರ ಪಾಲಿಗೆ ನಾನು ಖಂಡಿತ ತುಂಬಾ ಕ್ಷಮಾಶೀಲನಾಗಿದ್ದೇನೆ

[80] (ಮುಂದೆ ಅಲ್ಲಾಹನು ಕೇಳಿದನು;) ಓ ಮೂಸಾ, ನೀವು ನಿಮ್ಮ ಜನಾಂಗದವರಿಗಿಂತ ಮೊದಲು ಬರಲು ಕಾರಣವೇನು

[81] ಅವರು ಹೇಳಿದರು; ಅವರು ನನ್ನ ಹಿಂದೆಯೇ ಬರುತ್ತಿದ್ದಾರೆ. ನನ್ನೊಡೆಯಾ, ನಾನು ನಿನ್ನನ್ನು ವೆುಚ್ಚಿಸಬೇಕೆಂದು ಆತುರವಾಗಿ ಬಂದೆ

[82] ಅವನು (ಅಲ್ಲಾಹನು) ಹೇಳಿದನು; ನೀವು ಹೊರಟ ಬಳಿಕ ನಾವು ನಿಮ್ಮ ಜನಾಂಗವನ್ನು ಪರೀಕ್ಷಿಸಿದೆವು ಮತ್ತು ಅವರನ್ನು ಸಾಮಿರೀ ದಾರಿ ತಪ್ಪಿಸಿದನು

[83] ಮೂಸಾ ತುಂಬಾ ಕೋಪಗೊಂಡು ದುಃಖದೊಂದಿಗೆ ತಮ್ಮ ಜನಾಂಗದ ಬಳಿಗೆ ಮರಳಿದರು. ಅವರು ಹೇಳಿದರು; ನನ್ನ ಜನಾಂಗದವರೇ, ನಿಮ್ಮ ಒಡೆಯನು ನಿಮಗೆ ಬಹಳ ಶ್ರೇಷ್ಠ ವಾಗ್ದಾನವನ್ನು ನೀಡಿರಲಿಲ್ಲವೇ? ವಾಗ್ದಾನದ ಕಾಲಾವಧಿಯು ನಿಮಗೆ ತುಂಬಾ ದೀರ್ಘವೆನಿಸಿಬಿಟ್ಟಿತೇ? ಅಥವಾ ನೀವು ನಿಮ್ಮ ಒಡೆಯನ ಕೋಪವನ್ನು ಆಮಂತ್ರಿಸಲು ಬಯಸಿ ಅದಕ್ಕಾಗಿ ನನ್ನ ಜೊತೆಗಿನ ಕರಾರನ್ನು ಮುರಿದಿರಾ

[84] ಅವರು ಹೇಳಿದರು; ನಾವು ನಿಮ್ಮ ಜೊತೆಗಿನ ಕರಾರನ್ನು ಮುರಿದುದು ನಮ್ಮಿಷ್ಟದಿಂದಲ್ಲ. ಒಂದು ಜನಾಂಗದವರ ಆಭರಣಗಳನ್ನು ನಮ್ಮ ಮೇಲೆ ಹೇರಲಾಗಿತ್ತು. ನಾವು ಅದನ್ನು ಎಸೆದು ಬಿಟ್ಟೆವು. ಹಾಗೆಂದೇ ಸಾಮಿರೀ ನಮಗೆ ಸೂಚಿಸಿದ್ದನು

[85] ಅವನು (ಸಾಮಿರೀ) ಅವರಿಗಾಗಿ ಒಂದು ಕರುವಿನ ಆಕೃತಿಯನ್ನು ರಚಿಸಿದನು. ಅದರಿಂದ ಒಂದು ಕೂಗು ಹೊರಡುತ್ತಿತ್ತು. ಆಗ ಅವರು ‘‘ಇದುವೇ ನಿಮ್ಮ ದೇವರು ಹಾಗೂ ಮೂಸಾರ ದೇವರು. ಆದರೆ ಅವರು (ಮೂಸಾ) ಮರೆತಿದ್ದಾರೆ’’ ಎಂದು ಬಿಟ್ಟರು

[86] ಅದು (ಕರುವಿನ ಆಕೃತಿ) ಅವರ ಯಾವ ಮಾತಿಗೂ ಉತ್ತರಿಸುವುದಿಲ್ಲ ಮತ್ತು ಅವರಿಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಸಾಮರ್ಥ್ಯ ಅದಕ್ಕಿಲ್ಲ – ಎಂಬುದನ್ನು ಅವರು ಕಾಣುತ್ತಿಲ್ಲವೇ

[87] ಈ ಮೊದಲು ಹಾರೂನರು ಅವರೊಡನೆ ಹೇಳಿದರು; ನನ್ನ ಜನಾಂಗದವರೇ, ನಿಮ್ಮನ್ನು ಈ (ಕರುವಿನ ಆಕೃತಿಯ) ಮೂಲಕ ಪರೀಕ್ಷಿಸಲಾಗುತ್ತಿದೆ. ಖಂಡಿತವಾಗಿಯೂ ಆ ಪರಮ ದಯಾಳುವೇ ನಿಮ್ಮ ಒಡೆಯನು. ನೀವು ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ

[88] ಅವರು (ಜನಾಂಗದವರು) ಹೇಳಿದರು; ಮೂಸಾರು ನಮ್ಮ ಬಳಿಗೆ ಮರಳಿ ಬರುವವರೆಗೂ ನಾವು ಇದನ್ನು ಅಗಲಿ ದೂರ ನಿಲ್ಲಲಾರೆವು

[89] ಅವರು (ಮೂಸಾ) ಹೇಳಿದರು; ಓ ಹಾರೂನರೇ, ಅವರು ದಾರಿಗೆಟ್ಟಾಗ (ಅವರನ್ನು ಸರಿಪಡಿಸದಂತೆ) ನಿಮ್ಮನ್ನೇನು ತಡೆದಿತ್ತು

[90] ನೀವೇಕೆ ನನ್ನನ್ನು ಅನುಸರಿಸಲಿಲ್ಲ? ನೀವು ನನ್ನ ಆದೇಶವನ್ನು ಉಲ್ಲಂಘಿಸಿ ಬಿಟ್ಟಿರಾ

[91] ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರರೇ, ನೀವು ನನ್ನ ಗಡ್ಡವನ್ನು ಮತ್ತು ನನ್ನ ತಲೆಯನ್ನು ಹಿಡಿಯಬೇಡಿ. ನಿಜವಾಗಿ, ‘‘ನೀನು ನನ್ನ ಹಾಗೂ ಇಸ್ರಾಈಲರ ಸಂತತಿಯ ನಡುವೆ ಭಿನ್ನತೆ ಮೂಡಿಸಿದೆ ಮತ್ತು ನನ್ನ ಆದೇಶಕ್ಕಾಗಿ ನೀನು ಕಾಯಲಿಲ್ಲ’’ ಎಂದು ನೀವು ಹೇಳುವಿರೆಂಬ ಭಯ ನನಗಿತ್ತು

[92] ಅವರು (ಮೂಸಾ) ಹೇಳಿದರು; ಸಾಮಿರೀ, ನಿನ್ನ ಸಂಗತಿ ಏನು

[93] ಅವನು ಹೇಳಿದನು; ಅವರು ಕಾಣದ್ದನ್ನು ನಾನು ಕಂಡಿದ್ದೇನೆ. ದೇವದೂತರ ಹೆಜ್ಜೆ ಗುರುತು ಇದ್ದಲ್ಲಿಂದ ನಾನು ಒಂದು ಹಿಡಿ ಮಣ್ಣು ಹೆಕ್ಕಿ ಅದರ (ಕರುವಿನ ಆಕೃತಿಯ) ಮೇಲೆ ಹಾಕಿ ಬಿಟ್ಟಿದ್ದೆ. ನನ್ನ ಚಿತ್ತವು ನನಗೆ ಹಾಗೆಯೇ ಮಾಡಲು ಸೂಚಿಸಿತು

[94] ಅವರು (ಮೂಸಾ) ಹೇಳಿದರು; ನೀನು ತೊಲಗಿಬಿಡು. ಈ ಲೋಕದ ಬದುಕಿನಲ್ಲಿ ನಿನಗಿರುವ ಶಿಕ್ಷೆಯೇನೆಂದರೆ ‘‘ನನ್ನನ್ನು ಮುಟ್ಟಬೇಡಿ’’ ಎಂದು ನೀನು, ಹೇಳುತ್ತಿರಬೇಕು. ನಿನಗಾಗಿ ಒಂದು ಸಮಯ ನಿಗದಿಯಾಗಿದೆ. ಅದನ್ನು ಬದಲಿಸಲು ನಿನ್ನಿಂದಾಗದು. ನೀನು ಅಷ್ಟೊಂದು ನಿಷ್ಠೆಯಿಂದ ನಂಬಿಕೊಂಡಿದ್ದ ಆ ನಿನ್ನ ದೇವರನ್ನೊಮ್ಮೆ ನೋಡು. ನಾವೀಗ ಅದನ್ನು ಸುಟ್ಟು ಬಿಡುವೆವು ಮತ್ತು ಅದರ ಬೂದಿಯನ್ನು ನದಿಯಲ್ಲಿ ಹರಿಸಿಬಿಡುವೆವು

[95] ಖಂಡಿತ, ಅಲ್ಲಾಹನೇ ನಿಮ್ಮ ದೇವರು. ಅವನ ಹೊರತು ಬೇರೆ ದೇವರಿಲ್ಲ. ಅವನ ಜ್ಞಾನವು ಎಲ್ಲವನ್ನೂ ಆವರಿಸಿದೆ

[96] (ದೂತರೇ,) ಈ ರೀತಿ ನಾವು ನಿಮಗೆ ಗತಕಾಲದ ಸಂಗತಿಗಳನ್ನು ತಿಳಿಸುತ್ತೇವೆ. ಖಂಡಿತವಾಗಿಯೂ ನಾವು ನಿಮಗೆ ನಮ್ಮ ಕಡೆಯಿಂದ ಉಪದೇಶವನ್ನು ನೀಡಿರುತ್ತೇವೆ

[97] ಅದನ್ನು ಕಡೆಗಣಿಸಿದವನು ಪುನರುತ್ಥಾನ ದಿನ ಭಾರೀ ಹೊರೆಯನ್ನು ಹೊರುವನು

[98] ಅವರು ಸದಾ ಅದೇ ಸ್ಥಿತಿಯಲ್ಲಿರುವರು. ಪುನರುತ್ಥಾನ ದಿನ ಆ ಹೊರೆಯು ಅವರ ಪಾಲಿಗೆ ತೀರಾ ಕೆಟ್ಟದಾಗಿರುವುದು

[99] ಕಹಳೆ ಊದುವ ಆ ದಿನ ನಾವು ಅಪರಾಧಿಗಳನ್ನು ಒಂದೆಡೆ ಸೇರಿಸುವೆವು. ಆಗ ಅವರ ಕಣ್ಣುಗಳು (ನಿಸ್ತೇಜವಾಗಿ) ನೀಲವಾಗಿರುವವು

[100] ಅವರು ಗುಟ್ಟಾಗಿ, ‘‘ನೀವು (ಇಹಲೋಕದಲ್ಲಿ) ಹತ್ತುದಿನ ಮಾತ್ರ ಇದ್ದಿರಿ’’ ಎಂದು ಪರಸ್ಪರ ಹೇಳಿಕೊಳ್ಳುವರು

[101] ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ಅವರಲ್ಲಿನ ಅತ್ಯಂತ ಜಾಣನು, ‘‘ನೀವು ಬದುಕಿದ್ದುದು ಕೇವಲ ಒಂದು ದಿನ ಮಾತ್ರ’’ ಎನ್ನುವನು

[102] (ದೂತರೇ,) ಅವರು ನಿಮ್ಮೊಡನೆ ಪರ್ವತಗಳ ಕುರಿತು ಕೇಳುತ್ತಾರೆ. ನೀವು ಹೇಳಿರಿ; ನನ್ನ ಒಡೆಯನು ಅವುಗಳನ್ನು ಛಿದ್ರಗೊಳಿಸಿ ಹಾರಿಸಿ ಬಿಡುವನು

[103] ಆ ಬಳಿಕ ಅವನು ಇದನ್ನು (ಈ ನೆಲವನ್ನು) ಸಮತಟ್ಟಾಗಿಸಿ ಬಿಡುವನು

[104] ನೀವು ಇದರಲ್ಲಿ ಯಾವುದೇ ಏರು-ತಗ್ಗುಗಳನ್ನು ಕಾಣಲಾರಿರಿ

[105] ಅಂದು ಅವರೆಲ್ಲರೂ ಒಬ್ಬ ಕರೆಯುವಾತನ ಹಿಂದೆ ನಡೆಯುವರು ಮತ್ತು ಆತನ ಮಟ್ಟಿಗೆ ಯಾವ ಅಡೆತಡೆಯೂ ಇರದು. ಆ ಪರಮ ದಯಾಳುವಿನ ಮುಂದೆ ಎಲ್ಲ ಧ್ವನಿಗಳೂ ಅಡಗಿಬಿಡುವವು. ಅಂದು, ಹೆಜ್ಜೆಗಳ ಸಪ್ಪಳದ ಹೊರತು ನೀವು ಬೇರೇನನ್ನೂ ಕೇಳಲಾರಿರಿ

[106] ಅಂದು ಆ ಪರಮ ದಯಾಳುವಿನ ಅನುಮತಿ ಪಡೆದವರ ಹೊರತು ಬೇರೆ ಯಾರ ಶಿಫಾರಸ್ಸಿನಿಂದಲೂ ಯಾರಿಗೂ ಪ್ರಯೋಜನವಾಗದು

[107] ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ. ಅವರಿಗೆ ತಮ್ಮ ಜ್ಞಾನದಿಂದ ಗ್ರಹಿಸಲು ಸಾಧ್ಯವಿಲ್ಲದ್ದನ್ನೂ ಅವನು ಬಲ್ಲನು

[108] ಅಂದು ಎಲ್ಲ ಮುಖಗಳೂ, ಸದಾ ಜೀವಂತನಾಗಿರುವ ಹಾಗೂ ಸದಾ ಸುಸ್ಥಿರನಾಗಿರುವಾತನ (ಅಲ್ಲಾಹನ) ಮುಂದೆ ಬಾಗಿರುವವು. ಅನ್ಯಾಯದ ಹೊರೆ ಹೊತ್ತವನು ಅಂದು ಸೋತು ಹೋಗುವನು

[109] ವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವನಿಗೆ ಅಂದು ಯಾವುದೇ ಅನ್ಯಾಯದ ಅಥವಾ ನಷ್ಟದ ಭಯ ಇರಲಾರದು

[110] ಈ ರೀತಿ ನಾವು ಅವರಿಗೆ (ದೂತರಿಗೆ) ಅರಬೀ ಭಾಷೆಯ ಕುರ್‌ಆನನ್ನು ಇಳಿಸಿಕೊಟ್ಟಿರುವೆವು ಮತ್ತು ಜನರು ಸತ್ಯನಿಷ್ಠರಾಗಬೇಕು ಅಥವಾ ಆ ಮೂಲಕ ಅವರು ಪಾಠಕಲಿಯಬೇಕೆಂದು ಅದರಲ್ಲಿ ನಾವು ವಿವಿಧ ಬಗೆಯಲ್ಲಿ ಎಚ್ಚರಿಕೆ ನೀಡಿರುವೆವು

[111] (ದೂತರೇ,) ಅಲ್ಲಾಹನೇ ಮಹೋನ್ನತನು. ಅವನೇ ನೈಜ ದೊರೆ. ನೀವು ನಿಮ್ಮೆಡೆಗೆ ಕಳಿಸಲಾಗುವ ದಿವ್ಯವಾಣಿಯು ಪೂರ್ತಿಯಾಗುವ ಮುನ್ನ ಕುರ್‌ಆನ್‌ನ ವಿಷಯದಲ್ಲಿ ಆತುರ ಪಡಬೇಡಿ. ಮತ್ತು , ನನ್ನೊಡೆಯಾ, ನನಗೆ ಇನ್ನಷ್ಟು ಜ್ಞಾನವನ್ನು ನೀಡು ಎಂದು ಪ್ರಾರ್ಥಿಸಿರಿ

[112] ಈ ಹಿಂದೆ ನಾವು ಆದಮರ ಜೊತೆ ಒಂದು ಕರಾರನ್ನು ಮಾಡಿದ್ದೆವು. ಆದರೆ ಅವರು ಅದನ್ನು ಮರೆತು ಬಿಟ್ಟರು. ನಾವು ಅವರಲ್ಲಿ ಸ್ಥಿರತೆಯನ್ನು ಕಾಣಲಿಲ್ಲ

[113] ನಾವು ಮಲಕ್‌ಗಳೊಡನೆ, ನೀವು ಆದಮರಿಗೆ ಸಾಷ್ಟಾಂಗವೆರಗಿರಿ ಎಂದಾಗ ಅವರೆಲ್ಲಾ ಸಾಷ್ಟಾಂಗ ವೆರಗಿದರು. ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು

[114] ನಾವು ಹೇಳಿದೆವು; ಆದಮರೇ, ಖಂಡಿತವಾಗಿಯೂ ಅವನು ನಿಮ್ಮ ಹಾಗೂ ನಿಮ್ಮ ಪತ್ನಿಯ ಶತ್ರುವಾಗಿದ್ದಾನೆ. ಅವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರ ಹಾಕುವಂತಾಗಬಾರದು. ಹಾಗಾಗಿ ಬಿಟ್ಟರೆ ನೀವು ಭಾರೀ ಸಂಕಟಕ್ಕೆ ಸಿಲುಕುವಿರಿ

[115] ಇಲ್ಲಿ (ಸ್ವರ್ಗದಲ್ಲಿ) ನಿಮಗೆ ಖಂಡಿತ ಹಸಿವೂ ಬಾಧಿಸದು, ನಗ್ನತೆಯೂ ಇರದು

[116] ಇಲ್ಲಿ ಖಂಡಿತ ನಿಮಗೆ ದಾಹವೂ ಆಗದು, ಬಿಸಿಲಿನ ತಾಪವೂ ತಾಗದು

[117] ಆದರೆ ಶೈತಾನನು ಅವರನ್ನು ಗೊಂದಲಕ್ಕೆ ಸಿಲುಕಿಸಿದನು. ಅವನು ಹೇಳಿದನು; ಆದಮರೇ, ನಾನು ನಿಮಗೆ ಶಾಶ್ವತ ಬದುಕನ್ನು ಹಾಗೂ ಎಂದೂ ಪತನವಾಗದ ಸಾಮ್ರಾಜ್ಯವನ್ನು ನೀಡಬಲ್ಲ ಮರವನ್ನು ತೋರಿಸಲೇ

[118] ಕೊನೆಗೆ ಅವರಿಬ್ಬರೂ ಅದರಿಂದ (ಆ ಮರದಿಂದ) ತಿಂದರು. ಕೂಡಲೇ ಅವರ ಗುಪ್ತಾಂಗಗಳು ಅವರ ಮುಂದೆ ಪ್ರಕಟವಾದುವು ಮತ್ತು ಅವರು ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳತೊಡಗಿದರು. ಹೀಗೆ ಆದಮರು ತಮ್ಮ ಒಡೆಯನ ಆಜ್ಞೆಯನ್ನು ಮೀರಿ ನಡೆದಾಗ, ದಾರಿ ತಪ್ಪಿದರು

[119] ಮುಂದೆ ಅವರ ಒಡೆಯನು ಅವರನ್ನು ಆರಿಸಿಕೊಂಡು, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ನೀಡಿದನು

[120] ಅವನು (ಅಲ್ಲಾಹ್) ಹೇಳಿದನು; ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರ ಶತ್ರುಗಳಾಗುವರು. ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ, ನನ್ನ ಮಾರ್ಗದರ್ಶನವನ್ನು ಅನುಸರಿಸುವವನು ಎಂದಿಗೂ ದಾರಿಗೆಡಲಾರನು ಮತ್ತು ಅವನೆಂದೂ ಭಾಗ್ಯಹೀನನಾಗಲಾರನು

[121] ಇನ್ನು, ನನ್ನನ್ನು ಸ್ಮರಿಸುವ ವಿಷಯದಲ್ಲಿ ಅಸಡ್ಡೆ ತೋರಿದವನ ಪಾಲಿಗೆ ಖಂಡಿತವಾಗಿಯೂ ಬದುಕಿನ ಸಾಧನಗಳು ತೀರಾ ಸಂಕುಚಿತವಾಗಿಬಿಡುವವು ಮತ್ತು ಪುನರುತ್ಥಾನ ದಿನ ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು

[122] ಅವನು, ‘‘ನನ್ನೊಡೆಯಾ! ನೀನು ನನ್ನನ್ನು ಕುರುಡನಾಗಿ ಎಬ್ಬಿಸಿರುವುದೇಕೆ? ಈ ಹಿಂದೆ ನಾನು (ಇಹಲೋಕದಲ್ಲಿ) ನೋಡಬಲ್ಲವನಾಗಿದ್ದೆನಲ್ಲಾ?‘‘ ಎನ್ನುವನು

[123] ಅವನು (ಅಲ್ಲಾಹನು) ಹೇಳುವನು; ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದುವು. ನೀನು ಅವುಗಳನ್ನು ಮರೆತು ಬಿಟ್ಟಿದ್ದೆ. ಆದ್ದರಿಂದ ಇಂದು ನಿನ್ನನ್ನು ಮರೆಯಲಾಗಿದೆ

[124] ಮಿತಿ ಮೀರಿ ನಡೆದವನಿಗೆ ಹಾಗೂ ತನ್ನ ಒಡೆಯನ ವಚನಗಳನ್ನು ನಂಬದವನಿಗೆ ನಾವು ಇಂತಹದೇ ಪ್ರತಿಫಲವನ್ನು ನೀಡುತ್ತೇವೆ. ಪರಲೋಕದ ಶಿಕ್ಷೆಯು ತುಂಬಾ ತೀವ್ರವಾಗಿರುತ್ತದೆ ಮತ್ತು ಬಹುಕಾಲ ಉಳಿಯುತ್ತದೆ

[125] ಅವರಿಗಿಂತ ಮುಂಚೆ ನಾವು ಅನೇಕ ಜನಾಂಗಗಳನ್ನು ನಾಶಪಡಿಸಿದ್ದೇವೆಂಬುದು ಅವರಿಗೆ ಮಾರ್ಗದರ್ಶಿಯಲ್ಲವೇ? ಅವರು, ಅವರ (ನಾಶವಾದವರ) ಆ ಪಾಳು ಬಿದ್ದ ನಿವಾಸಗಳಲ್ಲಿ ನಡೆದಾಡುತ್ತಿರುತ್ತಾರೆ. ನಿಜವಾಗಿ ಬುದ್ಧಿ ಉಳ್ಳವರಿಗೆ ಇದರಲ್ಲಿ ಹಲವು ಪಾಠಗಳಿವೆ

[126] ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ ಮತ್ತು ಒಂದು ಅವಧಿ ನಿಶ್ಚಿತವಾಗದೆ ಇದ್ದಿದ್ದರೆ, (ಶಿಕ್ಷೆಯು) ಈಗಾಗಲೇ ಬಂದಿರುತ್ತಿತ್ತು

[127] (ದೂತರೇ,) ನೀವೀಗ ಅವರ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತಮಾನಕ್ಕೆ ಮುಂಚೆಯೂ ರಾತ್ರಿಯ ಕೆಲವು ಕ್ಷಣಗಳಲ್ಲೂ ನಿಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಹಗಲಿನ ಗಡಿಭಾಗದಲ್ಲಿ (ಅಲ್ಲಾಹನ) ಪಾವಿತ್ರವನ್ನು ಜಪಿಸಿರಿ – ನೀವು ಸಂತೃಪ್ತರಾಗಬಹುದು

[128] ಅವರಲ್ಲಿನ ಕೆಲವು ಗುಂಪುಗಳಿಗೆ, ಕೇವಲ ಇಹಲೋಕದ ಬದುಕಿನ ಶೋಭೆಯಾಗಿ ನಾವು ನೀಡಿರುವ ಬಳಕೆಯ ವಸ್ತುಗಳೆಡೆಗೆ ನೀವು ದೃಷ್ಟಿ ಹಾಯಿಸಬೇಡಿ. ನಾವು ಆ ಮೂಲಕ ಅವರನ್ನು ಪರೀಕ್ಷಿಸುತ್ತಿದ್ದೇವೆ. ನಿಜವಾಗಿ ನಿಮ್ಮ ಒಡೆಯನ ಕೊಡುಗೆಯೇ ಹೆಚ್ಚು ಶ್ರೇಷ್ಠವಾಗಿದೆ ಹಾಗೂ ಹೆಚ್ಚು ಕಾಲ ಉಳಿಯುತ್ತದೆ

[129] ನೀವು ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ಸ್ವತಃ ನೀವು ಅದನ್ನು ಪಾಲಿಸಿರಿ. ನಾವು ನಿಮ್ಮೊಡನೆ ಆಹಾರವನ್ನೇನೂ ಬೇಡುವುದಿಲ್ಲ. ನಿಜವಾಗಿ ನಾವೇ ನಿಮಗೆ ಆಹಾರ ನೀಡುತ್ತೇವೆ. ಅಂತಿಮ ಸಾಫಲ್ಯವು ಧರ್ಮನಿಷ್ಠೆಗೇ ಸಲ್ಲುವುದು

[130] ‘‘ಆತನು ತನ್ನ ಒಡೆಯನ ಕಡೆಯಿಂದ ನಮ್ಮ ಬಳಿಗೆ ಯಾವುದೇ ಪುರಾವೆಯನ್ನೇಕೆ ತಂದಿಲ್ಲ?’’ ಎಂದು ಅವರು ಕೇಳುತ್ತಾರೆ. ಗತಕಾಲದ ಗ್ರಂಥಗಳಲ್ಲಿರುವ ಸ್ಪಷ್ಟ ಪುರಾವೆಗಳು ಅವರ ಬಳಿಗೆ ಬಂದಿಲ್ಲವೇ

[131] ಒಂದು ವೇಳೆ ನಾವು ಇದಕ್ಕೆ (ಕುರ್‌ಆನ್‌ನ ಆಗಮನಕ್ಕೆ) ಮುಂಚೆಯೇ ಅವರನ್ನು ಒಂದು ಶಿಕ್ಷೆಯ ಮೂಲಕ ನಾಶಮಾಡಿ ಬಿಟ್ಟಿದ್ದರೆ ಅವರು ‘‘ನಮ್ಮೊಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು, ಅಪಮಾನಿತರಾಗುವ ಹಾಗೂ ನಿಂದ್ಯರಾಗುವ ಮುನ್ನ ನಿನ್ನ ವಚನಗಳನ್ನು ಅನುಸರಿಸುತ್ತಿದ್ದವು’’ ಎನ್ನುತ್ತಿದ್ದರು

[132] ನೀವು ಹೇಳಿರಿ; ಎಲ್ಲರೂ ಕಾಯುತ್ತಿದ್ದಾರೆ, ನೀವೂ ಕಾಯಿರಿ. ನೇರಮಾರ್ಗದವರು ಯಾರು ಹಾಗೂ ಮಾರ್ಗದರ್ಶನ ಪಡೆದವರು ಯಾರು ಎಂಬುದು ನಿಮಗೆ ಬಹುಬೇಗನೇ ತಿಳಿಯಲಿದೆ

[133] ಜನರ ವಿಚಾರಣೆಯ ಸಮಯವು ಹತ್ತಿರವೇ ಇದೆ. ಆದರೂ ಅವರು ನಿಶ್ಚಿಂತರಾಗಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ

[134] ಅವರ ಒಡೆಯನ ಕಡೆಯಿಂದ ಅವರ ಬಳಿಗೆ ಪ್ರತಿಯೊಂದು ಹೊಸ ಉಪದೇಶ ಬಂದಾಗಲೂ ಅವರು ಅದನ್ನು ಕೇಳಿ ಗೇಲಿ ಮಾಡಿದ್ದಾರೆ

[135] ಅವರ ಮನಸ್ಸುಗಳು (ಆ ಕುರಿತು) ನಿರಾತಂಕವಾಗಿವೆ. ಮತ್ತು ಅಕ್ರಮಿಗಳು ಗುಟ್ಟಾಗಿ ಪರಸ್ಪರ (ಹೀಗೆಂದು) ಮಾತನಾಡಿಕೊಳ್ಳುತ್ತಿದ್ದಾರೆ;‘‘ಅವನು (ಮುಹಮ್ಮದ್.ಸ.) ನಿಮ್ಮಂತಹ ಒಬ್ಬ ಮಾನವನಲ್ಲದೆ ಬೇರೇನಾದರೂ ಆಗಿರುವನೇ? ನೀವೇನು ಕಣ್ಣಾರೆ ಕಂಡೂ, ಮಾಟದ ಬಳಿಗೆ ಬರುವಿರಾ?’’

ಪ್ರವಾದಿಗಳು

Surah 21

[1] ಅವರು (ದೂತರು) ಹೇಳಿದರು; ನನ್ನ ಒಡೆಯನು ಆಕಾಶ ಹಾಗೂ ಭೂಮಿಯಲ್ಲಿನ ಪ್ರತಿಯೊಂದು ಮಾತನ್ನೂ ಬಲ್ಲನು. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[2] ‘‘ಇವೆಲ್ಲಾ ಕೇವಲ ವಿಕೃತ ಕನಸುಗಳು. ನಿಜವಾಗಿ ಇವುಗಳನ್ನೆಲ್ಲಾ ಸ್ವತಃ ಅವನೇ ರಚಿಸಿ ತರುತ್ತಾನೆ. ಅವನು ಕವಿಯಾಗಿದ್ದಾನೆ. ಗತಕಾಲದಲ್ಲಿ ಕಳಿಸಲ್ಪಟ್ಟವರು (ದೂತರು) ತಂದಂತೆ ಅವನು ಏನಾದರೂ ಪುರಾವೆಯನ್ನು ತರಲಿ’’ ಎಂದು ಅವರು ಹೇಳುತ್ತಾರೆ

[3] ನಾವು ನಾಶ ಮಾಡಿದ, ಅವರಿಗಿಂತ ಹಿಂದಿನ ಯಾವುದೇ ನಾಡಿನವರು (ಪುರಾವೆಯನ್ನು ಕಂಡ ಬಳಿಕವೂ) ನಂಬಿರಲಿಲ್ಲ. ಹೀಗಿರುವಾಗ ಅವರು ನಂಬುವರೇ

[4] (ದೂತರೇ,) ನಿಮಗಿಂತ ಮುಂಚೆಯೂ ನಾವು (ದೂತರಾಗಿ) ಮಾನವರನ್ನು ಮಾತ್ರ ಕಳುಹಿಸಿದ್ದೆವು. ನಾವು ಅವರಿಗೆ ದಿವ್ಯವಾಣಿಯನ್ನು ತಲುಪಿಸಿದ್ದೆವು. (ಜನರೇ) ನಿಮಗೆ ತಿಳಿದಿಲ್ಲವಾದರೆ ಬಲ್ಲವರೊಡನೆ ಕೇಳಿರಿ

[5] ಆಹಾರ ಸೇವಿಸದ ಶರೀರವನ್ನೇನೂ ನಾವು ಅವರಿಗೆ ನೀಡಿರಲಿಲ್ಲ ಮತ್ತು ಅವರು ಶಾಶ್ವತ ಜೀವಿಗಳೂ ಆಗಿರಲಿಲ್ಲ

[6] ನಾವು ಅವರಿಗೆ ನೀಡಿದ್ದ ವಚನಗಳನ್ನು ಸತ್ಯವಾಗಿಸಿದೆವು ಮತ್ತು ನಾವು ಅವರನ್ನೂ ನಾವಿಚ್ಛಿಸಿದ ಇತರರನ್ನೂ ಸಂರಕ್ಷಿಸಿದೆವು ಮತ್ತು ನಾವು, ಎಲ್ಲೆ ಮೀರುವವರನ್ನು ನಾಶ ಮಾಡಿದೆವು

[7] ನಾವಿದೋ ನಿಮ್ಮೆಡೆಗೆ ನಿಮ್ಮ ಪ್ರಸ್ತಾಪವಿರುವ ಒಂದು ಗ್ರಂಥವನ್ನು (ಕುರ್‌ಆನ್)ಇಳಿಸಿರುವೆವು. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ

[8] ಅದೆಷ್ಟು ನಾಡುಗಳನ್ನು ನಾವು ನಾಶಮಾಡಿ ಬಿಟ್ಟೆವು! ಅವು ಅಕ್ರಮಿ ನಾಡುಗಳಾಗಿದ್ದವು. ಅವರ ಬಳಿಕ ನಾವು ಬೇರೆ ಜನಾಂಗಗಳನ್ನು ಹುಟ್ಟಿಸಿದೆವು

[9] ನಮ್ಮ ಶಿಕ್ಷೆಯ ಸಪ್ಪಳ ಕೇಳಿಸಿದಾಗ ಅವರು ಅಲ್ಲಿಂದ ಓಡತೊಡಗಿದರು

[10] ‘‘ಓಡಬೇಡಿ! ನಿಮ್ಮ ವಿಚಾರಣೆ ನಡೆಯುವಂತಾಗಲು, ನೀವೀಗ ನಿಮ್ಮ ಸುಖ ಭೋಗದ ಸ್ಥಳಕ್ಕೆ ಮತ್ತು ನಿಮ್ಮ ನಿವಾಸಗಳಿಗೆ ಮರಳಿರಿ’’ (ಎಂದು ಅವರೊಡನೆ ಹೇಳಲಾಯಿತು)

[11] ಅವರು ಹೇಳಿದರು; ಅಯ್ಯೋ ನಮ್ಮ ದೌರ್ಭಾಗ್ಯವೇ! ನಾವು ಖಂಡಿತ ಅಕ್ರಮಿಗಳಾಗಿದ್ದೆವು

[12] ನಾವು ಅವರನ್ನು ಫಸಲು ಕೊಯ್ದ ಹೊಲವಾಗಿ ಮತ್ತು ಕಿಡಿ ಆರಿದ ಬೂದಿಯ ರಾಶಿಯಾಗಿ ಮಾರ್ಪಡಿಸುವ ತನಕವೂ ಅವರ ಈ ರೋದನವು ಮುಂದುವರಿದಿತ್ತು

[13] ಆಕಾಶವನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಕೇವಲ ಮೋಜಿಗಾಗಿ ಸೃಷ್ಟಿಸಿಲ್ಲ

[14] ಒಂದು ವೇಳೆ ನಮಗೆ ಮೋಜು ಮಾಡಬೇಕಿದ್ದರೆ, (ಮತ್ತು) ನಿಜಕ್ಕೂ ನಾವು ಹಾಗೆ ಮಾಡ ಬಯಸಿದ್ದರೆ, ನಾವು ಅದನ್ನು ನಮ್ಮಲ್ಲೇ ಮಾಡಿಕೊಳ್ಳುತ್ತಿದ್ದೆವು

[15] ನಾವು ಸತ್ಯವನ್ನು ಮಿಥ್ಯದ ಮೇಲೆ ಅಪ್ಪಳಿಸಿದಾಗ ಅದು (ಸತ್ಯವು) ಅದನ್ನು (ಮಿಥ್ಯವನ್ನು) ಹೊಸಕಿ ಹಾಕುತ್ತದೆ ಮತ್ತು ಅದು (ಮಿಥ್ಯವು) ನುಚ್ಚು ನೂರಾಗಿ ಬಿಡುತ್ತದೆ. ನೀವು ರಚಿಸಿಕೊಂಡವುಗಳಿಂದಾಗಿ (ನಿಮ್ಮ ಮಿಥ್ಯ ನಂಬಿಕೆಗಳಿಂದಾಗಿ) ನಿಮಗೆ ವಿನಾಶ ಕಾದಿದೆ

[16] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನಿಗೇ ಸೇರಿರುವರು. ಇನ್ನು, ಅವನ ಬಳಿ ಇರುವವರಂತು, ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ ಮತ್ತು ಅವರು ದಣಿಯುವುದೂ ಇಲ್ಲ

[17] ಅವರು ಇರುಳಲ್ಲೂ ಹಗಲಲ್ಲೂ ಅವನ ಪಾವಿತ್ರವನ್ನು ಜಪಿಸುತ್ತಿರುತ್ತಾರೆ ಮತ್ತು ಅವರು ಆಲಸ್ಯ ತೋರುವುದಿಲ್ಲ

[18] ಅವರು ಭೂಮಿಯಿಂದ ಆರಿಸಿ ಕೊಂಡಿರುವ ದೇವರುಗಳು, (ಸತ್ತವರನ್ನು) ಮತ್ತೆ ಜೀವಂತಗೊಳಿಸಬಲ್ಲರೇ

[19] ಒಂದು ವೇಳೆ ಅವುಗಳಲ್ಲಿ (ಭೂಮಿ – ಆಕಾಶಗಳಲ್ಲಿ) ಅಲ್ಲಾಹನ ಹೊರತು ಬೇರೆ ದೇವರುಗಳು ಇದ್ದಿದ್ದರೆ ಅವೆರಡೂ ಅಸ್ತವ್ಯಸ್ತವಾಗಿ ಬಿಡುತ್ತಿದ್ದವು. ವಿಶ್ವಸಿಂಹಾಸನದ ಒಡೆಯನಾದ ಅಲ್ಲಾಹನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನು

[20] ಅವನ ಯಾವುದೇ ಕೃತ್ಯದ ಕುರಿತು ಯಾರೂ ಅವನನ್ನು ವಿಚಾರಿಸಲಾರರು. ಅದರೆ ಅವರ (ಇತರೆಲ್ಲರ) ವಿಚಾರಣೆ ಖಂಡಿತ ನಡೆಯುವುದು

[21] ಅವರೇನು, ಅವನ (ಅಲ್ಲಾಹನ) ಹೊರತು ಇತರರನ್ನು ದೇವರಾಗಿಸಿಕೊಂಡಿರುವರೇ? ಹೇಳಿರಿ; ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು (ಕುರ್‌ಆನ್) ನನ್ನ ಬಳಿ ಇರುವ ಉಪದೇಶವೂ ಇದುವೇ ಮತ್ತು ನನ್ನ ಹಿಂದಿನವರ ಬಳಿ ಇದ್ದ ಉಪದೇಶವೂ ಇದುವೇ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಬಲ್ಲವರಲ್ಲ. ಆದ್ದರಿಂದಲೇ ಅವರು ಮುಖ ತಿರುಗಿಸಿಕೊಂಡಿದ್ದಾರೆ

[22] (ದೂತರೇ,) ನಾವು ನಿಮಗಿಂತ ಮುಂಚೆ ಕಳಿಸಿದ್ದ ಎಲ್ಲ ದೂತರಿಗೂ, – ನನ್ನ ಹೊರತು ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ – ಎನ್ನುವ ದಿವ್ಯಸಂದೇಶವನ್ನೇ ಕಳಿಸಿದ್ದೆವು

[23] ಆ ಪರಮ ದಯಾಮಯನಿಗೊಬ್ಬ ಪುತ್ರನಿದ್ದಾನೆ ಎಂದು ಅವರು ಹೇಳುತ್ತಾರೆ. ಅವನು ಪರಮ ಪಾವನನು. ಅವರು (ಮಲಕ್‌ಗಳು) ಅವನ ಗೌರವಾನ್ವಿತ ದಾಸರು

[24] ಅವರೆಂದೂ ಅವನಿಗೆದುರಾಗಿ ಮಾತನಾಡುವುದಿಲ್ಲ ಮತ್ತು ಅವನು ಆದೇಶಿಸಿದ್ದನ್ನೇ ಅವರು ಮಾಡುತ್ತಾರೆ

[25] ಅವನಂತು ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಬಲ್ಲನು. ಅವನು (ಅಲ್ಲಾಹನು) ಮೆಚ್ಚುವವರ ಹೊರತು ಬೇರೆ ಯಾರ ಪರವಾಗಿಯೂ ಅವರು ಶಿಫಾರಸು ಮಾಡಲಾರರು. ಸ್ವತಃ ಅವರೇ ಅವನ ಭಯದಿಂದ ನಡುಗುತ್ತಿರುವರು

[26] ಅವರ ಪೈಕಿ ಯಾರಾದರೂ ಅವನ (ಅಲ್ಲಾಹನ) ಜೊತೆಗೆ ತಾನೂ ದೇವರು – ಎಂದು ಹೇಳಿದರೆ, ನಾವು ಆತನಿಗೆ ನರಕದ ಶಿಕ್ಷೆಯನ್ನು ನೀಡುವೆವು. ಇದುವೇ ಅಕ್ರಮಿಗಳಿಗಾಗಿ ನಮ್ಮಲ್ಲಿರುವ ಪ್ರತಿಫಲ

[27] ಧಿಕ್ಕಾರಿಗಳು ಅರಿತಿಲ್ಲವೇ, ಆಕಾಶಗಳು ಮತ್ತು ಭೂಮಿ ಕೂಡಿಕೊಂಡಿದ್ದವು. ಕೊನೆಗೆ ನಾವು ಅವೆರಡನ್ನೂ ಬೇರ್ಪಡಿಸಿದೆವು. ಇನ್ನು ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು. ಅವರೇನು ನಂಬುವುದಿಲ್ಲವೇ

[28] ಭೂಮಿಯು ಅವರೊಂದಿಗೆ ವಾಲಿ ಬಿಡಬಾರದೆಂದು ನಾವು ಅದರಲ್ಲಿ ಪರ್ವತಗಳನ್ನು ಇಟ್ಟಿರುವೆವು ಮತ್ತು ಅವರಿಗೆ ದಾರಿ ಸಿಗಲೆಂದು ನಾವು ಅದರಲ್ಲಿ, ವಿಶಾಲವಾದ ಮಾರ್ಗಗಳನ್ನು ಇಟ್ಟಿರುವೆವು

[29] ಇನ್ನು, ಆಕಾಶವನ್ನು ನಾವು ಸುಭದ್ರ ಚಪ್ಪರವಾಗಿಸಿರುವೆವು. ಆದರೆ ಅವರು ನಮ್ಮ ಎಲ್ಲ ಪುರಾವೆಗಳನ್ನು ಕಡೆಗಣಿಸುತ್ತಿದ್ದಾರೆ

[30] ರಾತ್ರಿಯನ್ನೂ ಹಗಲನ್ನೂ ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಸಿದವನು ಅವನೇ. ಅವೆಲ್ಲವೂ ತಮ್ಮ ನಿರ್ದಿಷ್ಟ ದಾರಿಯಲ್ಲೇ ಚಲಿಸುತ್ತಿವೆ

[31] (ದೂತರೇ) ನಿಮಗಿಂತ ಮುಂಚೆಯೂ ನಾವು ಯಾವುದೇ ಮನುಷ್ಯನಿಗೆ ಶಾಶ್ವತ ಬದುಕನ್ನು ನೀಡಿರಲಿಲ್ಲ. ಇದೀಗ (ಅವರು ಬಯಸುವಂತೆ) ನೀವು ಮೃತರಾದರೆ ಅವರೇನು ಶಾಶ್ವತವಾಗಿ ಉಳಿಯುವರೇ

[32] ಪ್ರತಿಯೊಂದು ಜೀವವೂ ಮರಣದ ರುಚಿಯನ್ನು ಸವಿಯಲೇಬೇಕು. ಇನ್ನು ನಾವು ಕೆಡುಕುಗಳ ಮತ್ತು ಒಳಿತುಗಳ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಇರುವೆವು. ಕೊನೆಗಂತು ನೀವು ನಮ್ಮ ಕಡೆಗೇ ಮರಳಿ ಬರುವಿರಿ

[33] (ದೂತರೇ,) ಧಿಕ್ಕಾರಿಗಳು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಕೇವಲ ತಮಾಷೆಯಾಗಿ ಪರಿಗಣಿಸುತ್ತಾರೆ. ಮತ್ತು ‘‘ನಿಮ್ಮ ದೇವರುಗಳ ಕುರಿತು ಮಾತನಾಡುತ್ತಿದ್ದವನು ಇವನೇ ತಾನೇ?’’ ಎನ್ನುತ್ತಾರೆ. ನಿಜವಾಗಿ ಅವರು ಆ ಪರಮ ದಯಾಮಯನ ಪ್ರಸ್ತಾಪವನ್ನೇ ಧಿಕ್ಕರಿಸುತ್ತಾರೆ

[34] ಮನುಷ್ಯನನ್ನು ಆತುರ ಜೀವಿಯಾಗಿಯೇ ಸೃಷ್ಟಿಸಲಾಗಿದೆ. ನಾನು ನಿಮಗೆ ನನ್ನ ಪುರಾವೆಗಳನ್ನು ತೋರಿಸಲಿದ್ದೇನೆ. ಆದ್ದರಿಂದ ನೀವು ಆತುರ ಪಡಬೇಡಿ

[35] ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನಿತ ಸಮಯ ಬರುವುದು ಯಾವಾಗ? ಎಂದು ಅವರು ಕೇಳುತ್ತಾರೆ

[36] ಆ ಸಮಯದ ಕುರಿತು ಧಿಕ್ಕಾರಿಗಳು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು. ಅಂದು ತಮ್ಮ ಮುಖಗಳನ್ನಾಗಲಿ ಬೆನ್ನುಗಳನ್ನಾಗಲಿ ಬೆಂಕಿಯಿಂದ ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಯಾವುದೇ ಸಹಾಯವೂ ಸಿಗದು

[37] ನಿಜವಾಗಿ, ಅದು ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರು ಆಘಾತಕ್ಕೆ ಒಳಗಾಗುವರು. ಅದನ್ನು ನಿವಾರಿಸಲಿಕ್ಕೂ ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು

[38] ನಿಮಗಿಂತ ಮುಂಚೆಯೂ ದೇವದೂತರನ್ನು ಗೇಲಿ ಮಾಡಲಾಗಿದೆ. ಕೊನೆಗೆ, ಅವರ ಪೈಕಿ ಗೇಲಿ ಮಾಡುತ್ತಿದ್ದವರನ್ನು, ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಆವರಿಸಿ ಬಿಟ್ಟಿತು

[39] ಹೇಳಿರಿ; ಇರುಳಲ್ಲೂ ಹಗಲಲ್ಲೂ ಆ ದಯಾಮಯನಿಂದ ನಿಮ್ಮನ್ನು ಕಾಪಾಡುತ್ತಿರುವವನು ಯಾರು? ಇಷ್ಟಾಗಿಯೂ ಅವರು ತಮ್ಮ ಒಡೆಯನನ್ನು ಸ್ಮರಿಸುವ ವಿಷಯದಲ್ಲಿ ನಿರಾಸಕ್ತರಾಗಿದ್ದಾರೆ

[40] ಅವರನ್ನು ರಕ್ಷಿಸಲು ಅವರ ಬಳಿ ನಾವಲ್ಲದೆ ಬೇರೆ ದೇವರುಗಳಿದ್ದಾರೆಯೇ? ನಿಜವಾಗಿ ಅವರು (ಆ ದೇವರುಗಳು), ಸ್ವತಃ ತಮ್ಮ ನೆರವಿಗೂ ಅಶಕ್ತರಾಗಿದ್ದಾರೆ ಮತ್ತು ನಮಗೆದುರಾಗಿ ಅವರಿಗೆ ನೆರವಾಗಲು ಯಾರಿಗೂ ಸಾಧ್ಯವಿಲ್ಲ

[41] ನಾವು ಅವರಿಗೂ ಅವರ ಪೂರ್ವಜರಿಗೂ ಧಾರಾಳ ಸಂಪತ್ತನ್ನು ದಯಪಾಲಿಸಿದ್ದೆವು. ಅವರು ಬಹುಕಾಲ ಅದೇ (ಸಂಪನ್ನ) ಸ್ಥಿತಿಯಲ್ಲಿದ್ದರು. ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಸಂಕುಚಿತಗೊಳಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅವರೇನು ವಿಜಯಿಗಳಾಗಬಲ್ಲರೇ

[42] (ದೂತರೇ,) ಹೇಳಿರಿ; ನಾನು, ದಿವ್ಯವಾಣಿಯ ಮೂಲಕ ನಿಮನ್ನು ಎಚ್ಚರಿಸುವವನು ಮಾತ್ರ. ಆದರೆ ಕಿವುಡರನ್ನು ಎಚ್ಚರಿಸಲಾದಾಗ, ಅವರು ಯಾವ ಕರೆಯನ್ನೂ ಕೇಳುವುದಿಲ್ಲ

[43] ಕೊನೆಗೆ ನಿಮ್ಮ ಒಡೆಯನ ಶಿಕ್ಷೆಯ ಒಂದು ಪುಟ್ಟ ಅಲೆಯು ಅವರನ್ನು ಮುಟ್ಟಿದಾಗ ಅವರು, ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಖಂಡಿತ ಅಕ್ರಮಿಗಳಾಗಿದ್ದೆವು’’ ಎನ್ನುವರು

[44] ಪುನರುತ್ಥಾನ ದಿನ ನಾವು ನ್ಯಾಯದ ತಕ್ಕಡಿಯನ್ನು ಸ್ಥಾಪಿಸುವೆವು. (ಅಂದು) ಯಾರ ಮೇಲೂ ಕಿಂಚಿತ್ತೂ ಅಕ್ರಮ ನಡೆಯದು. (ಕರ್ಮವು) ಕೇವಲ ಒಂದು ಸಾಸಿವೆ ಕಾಳಿನಷ್ಟಿದ್ದರೂ ನಾವು ಅದನ್ನು ಮುಂದೆ ತರುವೆವು. ವಿಚಾರಣೆಗೆ ನಾವೇ ಸಾಕು

[45] ನಾವು ಮೂಸಾ ಮತ್ತು ಹಾರೂನರಿಗೆ ಅಲ್‌ಫುರ್‌ಕಾನ್ ಅನ್ನು (ಸತ್ಯ – ಮಿಥ್ಯಗಳನ್ನು ಪ್ರತ್ಯೇಕಿಸಿ ತಿಳಿಸುವ ಗ್ರಂಥವನ್ನು) ಮತ್ತು ಸತ್ಯನಿಷ್ಠರ ಪಾಲಿಗೆ ಜ್ಯೋತಿ ಹಾಗೂ ಉಪದೇಶವನ್ನು ನೀಡಿದೆವು

[46] ಕಣ್ಣಾರೆ ಕಾಣದೆಯೇ ತಮ್ಮ ಒಡೆಯನಿಗೆ ಅಂಜುತ್ತಿರುವವರು ಹಾಗೂ ಆ ಅಂತಿಮ ಕ್ಷಣದ ಕುರಿತು ಜಾಗೃತರಾಗಿರುವವರಿಗಾಗಿ

[47] ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧ ಬೋಧನೆ. ನೀವು ಇದನ್ನು ತಿರಸ್ಕರಿಸುವಿರಾ

[48] ಈ ಹಿಂದೆ ನಾವು ಇಬ್ರಾಹೀಮರಿಗೆ ವಿಶೇಷ ವಿವೇಕವನ್ನು ನೀಡಿದ್ದೆವು ಮತ್ತು ಆ ಕುರಿತು ನಾವು ಬಲ್ಲವರಾಗಿದ್ದೆವು

[49] ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೆಂತಹ ವಿಗ್ರಹಗಳನ್ನು ನಂಬಿಕೊಂಡು ತೃಪ್ತರಾಗಿರುವಿರಿ?’’ ಎಂದು ಕೇಳಿದರು

[50] ಅವರು ಹೇಳಿದರು; ನಮ್ಮ ಪೂರ್ವಜರು ಅವುಗಳನ್ನೇ ಪೂಜಿಸುವುದನ್ನು ನಾವು ಕಂಡಿದ್ದೇವೆ

[51] ಅವರು (ಇಬ್ರಾಹೀಮ್) ಹೇಳಿದರು; ಖಂಡಿತವಾಗಿಯೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವಿರಿ

[52] ಅವರು (ಜನಾಂಗದವರು) ಹೇಳಿದರು; ನೀವೇನು ನಮ್ಮ ಬಳಿಗೆ ಸತ್ಯವನ್ನು ತಂದಿರುವಿರಾ? ಅಥವಾ ನೀವು ಕೇವಲ ತಮಾಷೆ ಮಾಡುತ್ತಿರುವಿರಾ

[53] ಅವರು ಹೇಳಿದರು; ಆಕಾಶಗಳ ಹಾಗೂ ಭೂಮಿಯ ಒಡೆಯನು ಹಾಗೂ ಅವುಗಳಿಗೆ ರೂಪ ನೀಡಿದವನೇ ನಿಜವಾಗಿ ನಿಮ್ಮ ಒಡೆಯನು. ಇದಕ್ಕೆ ನಿಮ್ಮ ಮುಂದೆ ನಾನೇ ಒಬ್ಬ ಸಾಕ್ಷಿಯಾಗಿದ್ದೇನೆ

[54] ಅಲ್ಲಾಹನಾಣೆ, ನೀವು ಇಲ್ಲಿಂದ ಹೊರಟುಹೋದ ಬಳಿಕ ಈ ನಿಮ್ಮ ವಿಗ್ರಹಗಳ ಕುರಿತಂತೆ (ಏನು ಮಾಡಬೇಕೆಂದು) ನಾನು ಒಂದು ಯೋಜನೆ ಹಾಕಿಕೊಂಡಿದ್ದೇನೆ

[55] ಕೊನೆಗೆ ಅವರು ಅವೆಲ್ಲವನ್ನೂ ನುಚ್ಚುನೂರು ಮಾಡಿಬಿಟ್ಟರು. ಆದರೆ ಜನರೆಲ್ಲಾ ಅದರ ಬಳಿಗೆ ಮರಳಲೆಂದು ದೊಡ್ಡದೊಂದನ್ನು ಬಿಟ್ಟು ಬಿಟ್ಟರು

[56] ಅವರು (ಊರವರು), ‘‘ನಮ್ಮ ದೇವರುಗಳಿಗೆ ಹೀಗೆಲ್ಲಾ ಮಾಡಿದವನು ಯಾರು? ಅವನು ಖಂಡಿತ ಅಕ್ರಮಿ’’ ಎಂದರು

[57] ಕೆಲವರು, ‘‘ಇಬ್ರಾಹೀಮ್ ಎಂಬೊಬ್ಬ ಯುವಕನು ಅವುಗಳ ಕುರಿತು ಮಾತನಾಡುವುದನ್ನು ನಾವು ಕೇಳಿದ್ದೇವೆ’’ ಎಂದರು

[58] ಅವರು, ‘‘ಅವನನ್ನು ಜನರ ಮುಂದೆ ತನ್ನಿರಿ. ಅವರು ಕಣ್ಣಾರೆ ಕಾಣಲಿ’’ಎಂದು ಘೋಷಿಸಿದರು

[59] ‘‘ಓ ಇಬ್ರಾಹೀಮ್, ನಮ್ಮ ದೇವರುಗಳಿಗೆ ಈ ಗತಿ ಒದಗಿಸಿದ್ದು ನೀನೇ?’’ ಎಂದು ಅವರು ವಿಚಾರಿಸಿದರು

[60] ಅವರು (ಇಬ್ರಾಹೀಮ್) ಹೇಳಿದರು; ‘‘ಅವರ (ಆ ವಿಗ್ರಹಗಳ) ಹಿರಿಯನಾದ ಅವನೇ ಈ ಕೃತ್ಯವನ್ನು ಎಸಗಿರುವನು. ಅವುಗಳಿಗೆ ಮಾತನಾಡುವ ಶಕ್ತಿ ಇದ್ದರೆ ನೀವು ಅವುಗಳೊಡನೆ ಕೇಳಿ ನೋಡಿರಿ.’’

[61] ಆಗ ಅವರು ಸ್ವತಃ ತಮ್ಮನ್ನುದ್ದೇಶಿಸಿ, ‘‘ನಿಜಕ್ಕೂ ನೀವೇ ಅಕ್ರಮಿಗಳು’’ ಎಂದು ಹೇಳಿಕೊಂಡರು

[62] ಆ ಬಳಿಕ ತಲೆ ತಗ್ಗಿಸಿ ‘‘ಅವುಗಳು ಮಾತನಾಡುವುದಿಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲಾ?’’ ಎಂದರು

[63] ಅವರು (ಇಬ್ರಾಹೀಮ್) ಹೇಳಿದರು; ನೀವೇನು, ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುತ್ತೀರಾ

[64] ನಿಮಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುವ ಎಲ್ಲವುಗಳಿಗೂ ಧಿಕ್ಕಾರ. ನೀವೇನು ಆಲೋಚಿಸುವುದಿಲ್ಲವೇ

[65] ಅವರು (ಪರಸ್ಪರ) ಹೇಳಿದರು; ನಿಮ್ಮ ದೇವರುಗಳಿಗೆ ನೆರವಾಗಲು ನೀವೇನಾದರೂ ಮಾಡುವವರಾಗಿದ್ದರೆ, ಅವನನ್ನು ಸುಟ್ಟು ಬಿಡಿರಿ

[66] ‘‘ಓ ಅಗ್ನಿ, ನೀನು ಇಬ್ರಾಹೀಮರ ಪಾಲಿಗೆ ತಣ್ಣಗಾಗು ಹಾಗೂ ಕ್ಷೇಮವಾಗಿಬಿಡು’’ ಎಂದು ನಾವು ಆದೇಶಿಸಿದೆವು

[67] ಅವರು (ಊರವರು) ಅವರಿಗೆ (ಇಬ್ರಾಹೀಮರಿಗೆ) ಹಾನಿ ಮಾಡಲು ಯೋಜಿಸಿದ್ದರು. ಆದರೆ ನಾವು ಅವರನ್ನು (ಊರವರನ್ನು) ಸಂಪೂರ್ಣ ಸೋಲಿಸಿಬಿಟ್ಟೆವು

[68] ಮತ್ತು ನಾವು ಅವರನ್ನು (ಇಬ್ರಾಹೀಮರನ್ನು) ಹಾಗೂ ಲೂತ್‌ರನ್ನು ರಕ್ಷಿಸಿ, ಲೋಕದವರಿಗೆಲ್ಲಾ ನಾವು ಶುಭವನ್ನಿಟ್ಟಿರುವ ನಾಡಿಗೆ ಕಳಿಸಿದೆವು

[69] ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್‌ರನ್ನು ನೀಡಿದೆವು ಮತ್ತು ಹೆಚ್ಚುವರಿಯಾಗಿ (ಮೊಮ್ಮಗನಾಗಿ) ಯಅ್ಕೂಬ್‌ರನ್ನು ನೀಡಿದೆವು. ಮತ್ತು ನಾವು ಅವರೆಲ್ಲರನ್ನೂ ಸಜ್ಜನರಾಗಿಸಿದ್ದೆವು

[70] ನಾವು ಅವರನ್ನು, ನಮ್ಮ ಆದೇಶ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ನಾಯಕರಾಗಿ ಮಾಡಿದೆವು ಮತ್ತು ನಾವು ಅವರಿಗೆ, ಸತ್ಕರ್ಮಗಳನ್ನು ತಿಳಿಸುವ ಮತ್ತು ನಮಾಝನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕೆನ್ನುವ ದಿವ್ಯವಾಣಿಯನ್ನು ಕಳಿಸಿದ್ದೆವು. ಅವರು ನಮ್ಮನ್ನೇ ಆರಾಧಿಸುವವರಾಗಿದ್ದರು

[71] ಇನ್ನು ಲೂತ್‌ರಿಗೆ ನಾವು ಅಧಿಕಾರವನ್ನೂ ಜ್ಞಾನವನ್ನೂ ನೀಡಿದ್ದೆವು ಮತ್ತು ತೀರಾ ಅಶ್ಲೀಲ ಕೃತ್ಯಗಳನ್ನು ಎಸಗುತ್ತಿದ್ದವರ ನಾಡಿನಿಂದ ನಾವು ಅವರನ್ನು ರಕ್ಷಿಸಿದೆವು. ಖಂಡಿತವಾಗಿಯೂ ಅದು ಒಂದು ದುಷ್ಟ ಜನಾಂಗವಾಗಿತ್ತು

[72] ಅವರನ್ನು (ಲೂತ್‌ರನ್ನು) ನಾವು ನಮ್ಮ ಅನುಗ್ರಹದ ವ್ಯಾಪ್ತಿಗೆ ಸೇರಿಸಿಕೊಂಡೆವು. ಅವರು ಖಂಡಿತ ಒಬ್ಬ ಸಜ್ಜನರಾಗಿದ್ದರು

[73] ಈ ಹಿಂದೆ ನೂಹರು ನಮ್ಮನ್ನು ಕರೆದು ಪ್ರಾರ್ಥಿಸಿದಾಗ, ನಾವು ಅವರಿಗೆ ಉತ್ತರಿಸಿದ್ದೆವು ಮತ್ತು ನಾವು ಅವರನ್ನು ಹಾಗೂ ಅವರ ಕಡೆಯವರನ್ನು ಒಂದು ಘೋರ ವಿಪತ್ತಿನಿಂದ ರಕ್ಷಿಸಿದೆವು

[74] ನಮ್ಮ ವಚನಗಳನ್ನು ಸುಳ್ಳೆಂದ ಜನಾಂಗದವರ ವಿರುದ್ಧ ನಾವು ಅವರಿಗೆ ನೆರವಾದೆವು. ಅದು ಖಂಡಿತ ಬಹಳ ದುಷ್ಟ ಜನಾಂಗವಾಗಿತ್ತು. ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು

[75] ಇನ್ನು, ದಾವೂದ್ ಮತ್ತು ಸುಲೈಮಾನರು. ಅವರಿಬ್ಬರೂ ಒಂದು ಹೊಲದ ಕುರಿತು ತೀರ್ಪು ನೀಡಲು ಹೊರಟಿದ್ದರು. ರಾತ್ರಿಯ ವೇಳೆ ಕೆಲವರ ಆಡುಗಳು ಅಲ್ಲಿ (ಆ ಹೊಲದಲ್ಲಿ) ಮೆದ್ದಿದ್ದವು ಮತ್ತು ಅವರ ತೀರ್ಪಿಗೆ ನಾವು ಸಾಕ್ಷಿಗಳಾಗಿದ್ದೆವು

[76] ನಾವು ಸುಲೈಮಾನರಿಗೆ ಅದರ ವಾಸ್ತವವನ್ನು ಸೂಚಿಸಿದೆವು ಮತ್ತು ನಾವು ಅವರಿಬ್ಬರಿಗೂ ಜಾಣ್ಮೆಯನ್ನು ಹಾಗೂ ಜ್ಞಾನವನ್ನು ನೀಡಿದ್ದೆವು ಮತ್ತು ನಾವು ದಾವೂದರ ಜೊತೆ (ನಮ್ಮ) ಪಾವಿತ್ರವನ್ನು ಜಪಿಸುವಂತೆ ಪರ್ವತಗಳನ್ನು ಹಾಗೂ ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಇದನ್ನೆಲ್ಲಾ ನಾವೇ ಮಾಡಿದ್ದೆವು

[77] ನಿಮಗಾಗಿ, ನಿಮ್ಮ ಯುದ್ಧಗಳಲ್ಲಿ ನಿಮ್ಮನ್ನು ರಕ್ಷಿಸುವ (ಉಕ್ಕಿನ) ಕವಚವನ್ನು ನಿರ್ಮಿಸುವ ಕಲೆಯನ್ನು ನಾವು ಅವರಿಗೆ ಕಲಿಸಿದೆವು. (ಇನ್ನಾದರೂ) ನೀವು ಕೃತಜ್ಞರಾಗುವಿರಾ

[78] ಮತ್ತು ನಾವು ಬಿರುಗಾಳಿಯನ್ನು ಸುಲೈಮಾನರಿಗೆ ಅಧೀನಗೊಳಿಸಿದೆವು. ಅದು ಅವರ ಆದೇಶದಂತೆ, ನಾವು ಸಮೃದ್ಧಿಯನ್ನಿಟ್ಟಿರುವ ನೆಲದೆಡೆಗೆ ಚಲಿಸುತ್ತಿತ್ತು. ನಾವಂತು ಎಲ್ಲವನ್ನೂ ಬಲ್ಲವರಾಗಿದ್ದೇವೆ

[79] ಶೈತಾನರ (ಜಿನ್ನ್‌ಗಳ) ಪೈಕಿ ಅವರಿಗಾಗಿ (ಸುಲೈಮಾನರಿಗಾಗಿ, ಸಾಗರದಲ್ಲಿ) ಮುಳುಗಿ ಬರುವ ಹಾಗೂ ಇತರ ಕೆಲಸಗಳನ್ನೂ ಮಾಡುವ ಕೆಲವರಿದ್ದರು. ನಾವೇ ಅವರ ರಕ್ಷಕರಾಗಿದ್ದೆವು

[80] ಮತ್ತು ಅಯ್ಯೂಬರು ‘‘ನಾನು ಭಾರೀ ಸಂಕಷ್ಟದಲ್ಲಿದ್ದೇನೆ ಮತ್ತು ನೀನು ಅತ್ಯಧಿಕ ಕರುಣೆ ತೋರುವವನಾಗಿರುವೆ’’ ಎಂದು ತಮ್ಮ ಒಡೆಯನನ್ನು ಕೂಗಿ ಪ್ರಾರ್ಥಿಸಿದ್ದರು

[81] ಕೊನೆಗೆ ನಾವು ಅವರಿಗೆ ಉತ್ತರ ನೀಡಿದೆವು, ಅವರ ಸಂಕಷ್ಟವನ್ನು ನಿವಾರಿಸಿದೆವು. ಮತ್ತು ನಾವು ಅವರಿಗೂ ಅವರ ಮನೆಯವರಿಗೂ, ಅವರ ಜೊತೆಗಿದ್ದ ಅವರಂತಹ ಇತರರಿಗೂ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಹಾಗೂ ಭಕ್ತರಿಗಾಗಿ ಉಪದೇಶವನ್ನು ಕರುಣಿಸಿದೆವು

[82] ಹಾಗೆಯೇ ಇಸ್ಮಾಈಲ್ ಹಾಗೂ ಇದ್ರೀಸ್ ಹಾಗೂ ಝುಲ್‌ಕಿಫ್ಲ್. ಅವರೆಲ್ಲರೂ ಸಹನಶೀಲರಾಗಿದ್ದರು

[83] ನಾವು ಅವರನ್ನು ನಮ್ಮ ಅನುಗ್ರಹದ ವ್ಯಾಪ್ತಿಗೆ ಸೇರಿಸಿದೆವು. ಅವರು ಖಂಡಿತ ಸಜ್ಜನರಾಗಿದ್ದರು

[84] ಇನ್ನು ಮೀನಿನವರು (ಯೂನುಸ್), ತಾನು ಕೋಪಗೊಂಡು ಹೊರಟು ಬಿಟ್ಟಾಗ, ನಾವು ಅವರನ್ನು ಹಿಡಿಯಲಾರೆವೆಂದು ಭಾವಿಸಿದ್ದರು. ಕೊನೆಗೆ ಅವರು ಕತ್ತಲುಗಳೊಳಗಿಂದ, ‘‘(ಓ ಅಲ್ಲಾಹ್) ನಿನ್ನ ಹೊರತು ಬೇರೆ ದೇವರಿಲ್ಲ. ನೀನು ಪರಮ ಪಾವನನು. ಖಂಡಿತವಾಗಿಯೂ ನಾನೇ ಅಕ್ರಮಿಯಾಗಿದ್ದೆ’’ ಎಂದು ಮೊರೆ ಇಟ್ಟಿದ್ದರು

[85] ನಾವು ಅವರಿಗೆ ಉತ್ತರಿಸಿದೆವು ಮತ್ತು ಅವರನ್ನು ಸಂಕಟದಿಂದ ಪಾರುಗೊಳಿಸಿದೆವು. ಈ ರೀತಿ ನಾವು ವಿಶ್ವಾಸಿಗಳನ್ನು ಕಾಪಾಡುವೆವು

[86] ಮತ್ತು ಝಕರಿಯ್ಯ, ‘‘ನನ್ನೊಡೆಯಾ, ನನ್ನನ್ನು ನೀನು ಒಂಟಿಯಾಗಿ ಬಿಟ್ಟು ಬಿಡಬೇಡ. ನಿಜವಾಗಿ ನೀನೇ ಅತ್ಯುತ್ತಮ ಉತ್ತರಾಧಿಕಾರಿ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟಿದ್ದರು

[87] ನಾವು ಅವರಿಗೆ ಉತ್ತರ ನೀಡಿದೆವು ಮತ್ತು ನಾವು ಅವರಿಗೆ ಯಹ್ಯಾರನ್ನು ದಯಪಾಲಿಸಿದೆವು ಹಾಗೂ ಅವರಿಗಾಗಿ ಅವರ ಪತ್ನಿಯನ್ನು ಗುಣಪಡಿಸಿದೆವು. ಅವರೆಲ್ಲಾ ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವವರು ಮತ್ತು ನಿರೀಕ್ಷೆಯೊಂದಿಗೂ ಭಯದೊಂದಿಗೂ ನಮ್ಮನ್ನು ಪ್ರಾರ್ಥಿಸುವವರಾಗಿದ್ದರು. ಅವರು ನಮ್ಮೆದುರು ತುಂಬಾ ವಿನಯಶೀಲರಾಗಿದ್ದರು

[88] ಮತ್ತು ನಾವು ಮಾನ ಸಂರಕ್ಷಿಸಿದಾಕೆ (ಮರ್ಯಮ್). ಆಕೆಯೊಳಗೆ ನಾವು ನಮ್ಮ ಆತ್ಮದ ಅಂಶವನ್ನು ಊದಿದೆವು ಮತ್ತು ಆಕೆಯನ್ನೂ ಆಕೆಯ ಪುತ್ರನನ್ನೂ ಸರ್ವಲೋಕಗಳ ಪಾಲಿಗೆ ದೃಷ್ಟಾಂತವಾಗಿಸಿದೆವು

[89] ಈ ನಿಮ್ಮ (ಮಾನವರ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಒಡೆಯನು. ನೀವು ನನ್ನನ್ನೇ ಆರಾಧಿಸಿರಿ

[90] ಜನರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟಿದ್ದಾರೆ. (ಕೊನೆಗೆ) ಎಲ್ಲರೂ ನಮ್ಮೆಡೆಗೇ ಮರಳಬೇಕಾಗಿದೆ

[91] ಸತ್ಕರ್ಮವನ್ನು ಮಾಡಿದವನು ವಿಶ್ವಾಸಿಯಾಗಿದ್ದರೆ ಅವನ ಶ್ರಮವು ವ್ಯರ್ಥವಾಗದು. ನಾವು ಎಲ್ಲವನ್ನೂ ದಾಖಲಿಸಿಡುತ್ತಿದ್ದೇವೆ

[92] ನಾವು ನಾಶಪಡಿಸಿರುವ ನಾಡುಗಳ ಜನರು ಮರಳಿ ಬರಲಾರರು –

[93] ಯಅ್ಜೂಜ್ ಮತ್ತು ಮಅ್ಜೂಜ್‌ಗಳು ಬಿಡುಗಡೆಗೊಂಡು ಎಲ್ಲ ದಿಣ್ಣೆಗಳಿಂದ ಇಳಿದು ಬರುವ ತನಕ

[94] ಖಚಿತ ವಾಗ್ದಾನದ ಸಮಯವು (ಪುನರುತ್ಥಾನ ದಿನವು) ಹತ್ತಿರ ಬಂದಾಗ, ಧಿಕ್ಕಾರಿಗಳ ಕಣ್ಣುಗಳು ದಿಗ್ಭ್ರಮೆಗೊಳ್ಳುವವು. ‘‘ಅಯ್ಯೋ ನಮ್ಮ ದುಸ್ಥಿತಿ! ಈ ಕುರಿತು ನಾವು ನಿರ್ಲಕ್ಷದಲ್ಲಿದ್ದೆವು. ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ (ಎಂದು ಅವರು ಹೇಳುವರು)

[95] ಖಂಡಿತವಾಗಿಯೂ ನೀವು ಹಾಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿದ್ದ ವಸ್ತುಗಳೆಲ್ಲಾ ನರಕದ ಇಂಧನಗಳು. ನೀವು ಅದರೊಳಗೆ ಹೋಗುವಿರಿ

[96] ಅವುಗಳೆಲ್ಲಾ ನಿಜಕ್ಕೂ ದೇವರುಗಳಾಗಿದ್ದರೆ ಅದರೊಳಗೆ ಹೋಗುತ್ತಿರಲಿಲ್ಲ. ಅವು ಸದಾಕಾಲ ಅಲ್ಲೇ ಇರುವವು

[97] ಅಲ್ಲಿ (ನರಕದಲ್ಲಿ) ಅವರ ಚೀರಾಟವೇ ಮೆರೆದಿರುವುದು . ಅವರಿಗೆ ಅದರಲ್ಲಿ ಬೇರೇನೂ ಕೇಳಿಸದು

[98] ಅತ್ತ, ನಮ್ಮ ಕಡೆಯಿಂದ ಯಾರ ಪರವಾಗಿ ಹಿತದ ನಿರ್ಧಾರವಾಗಿರುವುದೋ ಅವರನ್ನು ಅದರಿಂದ (ನರಕದಿಂದ) ದೂರವಿಡಲಾಗುವುದು

[99] ಅದರ ಸಪ್ಪಳ ಕೂಡಾ ಅವರಿಗೆ ಕೇಳಿಸದು. ಅವರು ತಮಗಿಷ್ಟವಿರುವಲ್ಲಿ ಸದಾಕಾಲ ಇರುವರು

[100] (ಅಂದಿನ) ಮಹಾ ಚಿಂತೆಯು ಅವರನ್ನು ಕಾಡದು ಮತ್ತು ‘‘ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ದಿನ’’ ಎನ್ನುತ್ತಾ ಮಲಕ್‌ಗಳು ಅವರನ್ನು ಸ್ವಾಗತಿಸುವರು

[101] ಅಂದು ನಾವು ಕಾಗದದ ಪುಟಗಳನ್ನು ಮಡಚಿದಂತೆ ಆಕಾಶವನ್ನು ಮಡಚಿ ಬಿಡುವೆವು. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ಆ (ಸೃಷ್ಟಿ) ಕಾರ್ಯವನ್ನು ಪುನರಾವರ್ತಿಸುವೆವು. ಇದು ನಮ್ಮ ಕರ್ತವ್ಯವಾಗಿರುವ ವಾಗ್ದಾನ. ನಾವು ಖಂಡಿತ ಅದನ್ನು ಮಾಡಿಯೇ ಬಿಡುವೆವು

[102] ನಾವು ಝಬೂರ್‌ನಲ್ಲಿ ಉಪದೇಶದ ಬಳಿಕ, ‘‘ನನ್ನ ಸಜ್ಜನ ದಾಸರೇ ಭೂಮಿಯ ಉತ್ತರಾಧಿಕಾರಿಗಳಾಗುವರು’’ ಎಂದು ಬರೆದಿರುವೆವು

[103] ಭಕ್ತ ಜನರಿಗೆ ಇದರಲ್ಲಿ ಖಂಡಿತ ಶುಭವಾರ್ತೆ ಇದೆ

[104] (ದೂತರೇ,) ನಾವು ನಿಮ್ಮನ್ನು ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಿರುವೆವು

[105] ಹೇಳಿರಿ; ಏಕಮಾತ್ರ ದೇವನೇ ನಿಮ್ಮ ದೇವನೆಂದು ನನ್ನ ಕಡೆಗೆ ದಿವ್ಯವಾಣಿಯನ್ನು ರವಾನಿಸಲಾಗಿದೆ. ಇನ್ನಾದರೂ ನೀವು ಶರಣಾಗುವಿರಾ

[106] (ದೂತರೇ,) ಅವರು ನಿರ್ಲಕ್ಷಿಸಿದರೆ ಹೇಳಿರಿ; ನಾನಂತು ಸಮಾನವಾಗಿ ನಿಮಗೆಲ್ಲಾ ಎಚ್ಚರಿಕೆ ನೀಡಿದ್ದೇನೆ. ನಿಮಗೆ ವಾಗ್ದಾನ ಮಾಡಲಾಗಿರುವ ದಿನವು (ಲೋಕಾಂತ್ಯವು) ಹತ್ತಿರವಿದೆಯೋ ದೂರವಿದೆಯೋ ಎಂಬುದು ನನಗೆ ತಿಳಿಯದು

[107] ಅವನು, ಗುಟ್ಟಿನ ಮಾತುಗಳನ್ನೂ ನೀವು ಅಡಗಿಸಿಡುವ ವಿಷಯಗಳನ್ನೂ ಖಂಡಿತ ಬಲ್ಲನು

[108] ನನಗೆ ತಿಳಿಯದು; ಅದು (ಲೋಕಾಂತ್ಯದಲ್ಲಿನ ವಿಳಂಬವು) ನಿಮ್ಮ ಪಾಲಿಗೆ ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಕಾಲದ ವರೆಗಿನ, ವಿಸ್ತರಣೆಯೂ ಆಗಿರಬಹುದು

[109] ಅವರು (ದೂತರು) ಹೇಳಿದರು; ನನ್ನೊಡೆಯಾ, ನೀನು ನ್ಯಾಯದೊಂದಿಗೆ ತೀರ್ಮಾನಿಸಿಬಿಡು. ನಮ್ಮ ಒಡೆಯನು ಪರಮ ದಯಾಳುವಾಗಿದ್ದಾನೆ. ನೀವು ಆಡುವ ಎಲ್ಲ ಮಾತುಗಳ ಕುರಿತಂತೆ ಅವನಿಂದಲೇ ನೆರವನ್ನು ಬೇಡಲಾಗುತ್ತದೆ

[110] ಮಾನವರೇ, ನಿಮ್ಮ ಒಡೆಯನಿಗೆ ಅಂಜಿರಿ. ಅಂತಿಮ ಘಳಿಗೆಯ ಆ ಕಂಪನವು ನಿಜಕ್ಕೂ ಮಹಾ ಘಟನೆಯಾಗಿರುವುದು

[111] ಅಂದು ನೀವು ಕಾಣುವಿರಿ; ಹಾಲುಣಿಸುವ ಪ್ರತಿಯೊಬ್ಬಳು (ತಾಯಿ) ತಾನು ಹಾಳುಣಿಸುತ್ತಿದ್ದುದನ್ನು (ತನ್ನ ಮಗುವನ್ನು) ಮರೆತು ಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯು ತನ್ನ ಗರ್ಭವನ್ನು ಬೀಳಿಸುವಳು ಮತ್ತು ನಿಮಗೆ, ಜನರು ಅಮಲಿನಲ್ಲಿರುವಂತೆ ಕಾಣುವರು. ಆದರೆ ಅವರು ಅಮಲಿನಲ್ಲಿರಲಾರರು. ನಿಜವಾಗಿ ಅಲ್ಲಾಹನ ಶಿಕ್ಷೆಯು ಅಷ್ಟು ಕಠೋರವಾಗಿರುವುದು

[112] ಜನರಲ್ಲಿ ಕೆಲವರು ಜ್ಞಾನವೇನೂ ಇಲ್ಲದೆ, ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ ಮತ್ತು ಪ್ರತಿಯೊಬ್ಬ ವಿದ್ರೋಹಿ ಶೈತಾನನನ್ನು ಅನುಕರಿಸುತ್ತಾರೆ.4. ಅವನ (ಶೈತಾನನ) ಕುರಿತು, ಅವನು ತನ್ನ ಮಿತ್ರರಾಗುವ ಎಲ್ಲರನ್ನೂ ದಾರಿಗೆಡಿಸುವನು ಮತ್ತು ಅವರನ್ನು ನರಕದ ಶಿಕ್ಷೆಯೆಡೆಗೆ ಮುನ್ನಡೆಸುವನು ಎಂದು ವಿಧಿಸಲಾಗಿದೆ

ಯಾತ್ರೆ

Surah 22

[1] ಮಾನವರೇ, ಮತ್ತೆ ಜೀವಂತವಾಗುವ ಕುರಿತು ನಿಮಗೆ ಸಂಶಯವಿದ್ದರೆ (ನಿಮಗೆ ತಿಳಿದಿರಲಿ); ನಿಮಗೆ (ನಮ್ಮ ಸಾಮರ್ಥ್ಯವನ್ನು) ವಿವರಿಸಲಿಕ್ಕಾಗಿ, ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ಆ ಬಳಿಕ ರಕ್ತಪಿಂಡದಿಂದ ಮತ್ತು ಆ ಬಳಿಕ ಮಾಂಸಪಿಂಡದಿಂದ, ಪೂರ್ಣವಾಗಿಯೂ ಅಪೂರ್ಣವಾಗಿಯೂ ಸೃಷ್ಟಿಸಿರುವೆವು. ನಾವು, ನಾವಿಚ್ಛಿಸಿದ್ದನ್ನು ಒಂದು ನಿರ್ದಿಷ್ಟ ಕಾಲದ ವರೆಗೆ ಗರ್ಭಗಳೊಳಗೆ ತಡೆದಿಡುತ್ತೇವೆ. ತರುವಾಯ, ನಿಮ್ಮನ್ನು ಶಿಶುಗಳಾಗಿ ಹೊರ ತರುತ್ತೇವೆ (ಮತ್ತು) ನೀವು ನಿಮ್ಮ ಯವ್ವನವನ್ನು ತಲುಪುವಂತೆ (ಮಾಡುತ್ತೇವೆ). ಅನಂತರ ನಿಮ್ಮಲ್ಲಿ ಕೆಲವರು ಮೃತರಾಗುತ್ತಾರೆ ಮತ್ತು ಕೆಲವರು, ಬಹಳಷ್ಟು ಅರಿತ ಬಳಿಕ ಮತ್ತೆ ಏನನ್ನೂ ಅರಿತಿಲ್ಲದ, ಅತಿ ವೃಧ್ಧಾಪ್ಯದ ಸ್ಥಿತಿಗೆ ತಲುಪುತ್ತಾರೆ. ಮತ್ತು ನೀವು ಒಣಗಿದ ನೆಲವನ್ನು ಕಾಣುತ್ತೀರಿ. ನಾವು ಅದರ ಮೇಲೆ ನೀರನ್ನು ಸುರಿಸಿದಾಗ ಅದು ಜೀವಂತವಾಗಿ ಅರಳತೊಡಗುತ್ತದೆ ಮತ್ತು ಅದು ಎಲ್ಲ ತರದ ಮುದ್ದಾದ ಬೆಳೆಗಳನ್ನು ಬೆಳೆಯುತ್ತದೆ

[2] ಏಕೆಂದರೆ, ಅಲ್ಲಾಹನೇ ಸತ್ಯವಾಗಿದ್ದಾನೆ ಮತ್ತು ಅವನೇ ನಿರ್ಜೀವಿಗಳನ್ನು ಜೀವಂತಗೊಳಿಸುವವನು ಮತ್ತು ಅವನೇ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[3] ಆ ನಿರ್ಣಾಯಕ ಘಳಿಗೆಯು ಖಂಡಿತ ಬರಲಿದೆ. ಅದರಲ್ಲಿ ಸಂದೇಹವೇ ಇಲ್ಲ. ಇನ್ನು, ಗೋರಿಗಳೊಳಗೆ ಇರುವವರನ್ನೆಲ್ಲಾ ಅಲ್ಲಾಹನು ಮತ್ತೆ ಜೀವಂತಗೊಳಿಸಿ ಎಬ್ಬಿಸಲಿರುವನು

[4] ಜನರಲ್ಲಿ ಕೆಲವರು, ಯಾವುದೇ ಜ್ಞಾನವಾಗಲಿ ಮಾರ್ಗದರ್ಶನವಾಗಲಿ, ಉಜ್ವಲ ಗ್ರಂಥವಾಗಲಿ ಇಲ್ಲದೆಯೇ ಅಲ್ಲಾಹನ ಕುರಿತು ಜಗಳಾಡುತ್ತಾರೆ

[5] ಅಹಂಕಾರದಿಂದ ಕೊರಳು ಸೆಟೆದುಕೊಂಡಿರುವ ಅವರು, ಜನರನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಲು ಶ್ರಮಿಸುತ್ತಾರೆ. ಅಂಥವನಿಗೆ ಈ ಲೋಕದಲ್ಲೂ ಅಪಮಾನವಿದೆ ಮತ್ತು ಪುನರುತ್ಥಾನ ದಿನ ನಾವು ಅವನಿಗೆ ಭುಗಿಲೇಳುವ ಬೆಂಕಿಯ ರುಚಿ ಉಣಿಸಲಿದ್ದೇವೆ

[6] ‘‘ನಿನ್ನ ಕೈಗಳು ಮುಂದೆ ಕಳಿಸಿದ ಕರ್ಮಗಳೇ ಇದಕ್ಕೆ ಕಾರಣ. ಅಲ್ಲಾಹನು ಖಂಡಿತ ತನ್ನ ದಾಸರ ಮೇಲೆ ಅಕ್ರಮ ವೆಸಗುವವನಲ್ಲ’’ (ಎಂದು ಅವನೊಡನೆ ಹೇಳಲಾಗುವುದು)

[7] ಜನರಲ್ಲೊಬ್ಬನು ಅಂಚಿನಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುತ್ತಾನೆ. ಅದರಿಂದ ಅವನಿಗೇನಾದರೂ ಹಿತವಾದರೆ ಅಷ್ಟಕ್ಕೇ ತೃಪ್ತನಾಗಿ ಬಿಡುತ್ತಾನೆ. ಆದರೆ ಅವನಿಗೇನಾದರೂ ಪರೀಕ್ಷೆ ಎದುರಾದರೆ ಅವನು (ಅಲ್ಲಾಹನಿಂದ) ಮುಖ ತಿರುಗಿಸಿ ನಿಲ್ಲುತ್ತಾನೆ. ಅವನು ಇಹಲೋಕವನ್ನೂ ಕಳೆದುಕೊಂಡನು, ಪರಲೋಕವನ್ನೂ ಕಳೆದುಕೊಂಡನು. ಅತ್ಯಂತ ಸ್ಪಷ್ಟ ನಷ್ಟವಿದು

[8] (ತರುವಾಯ) ಅವನು, ಅಲ್ಲಾಹನನ್ನು ಬಿಟ್ಟು, ತನಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಹಾಗೂ ತನಗೆ ಯಾವುದೇ ಲಾಭವನ್ನು ಮಾಡಲಾಗದವರನ್ನು ಕರೆದು ಪ್ರಾರ್ಥಿಸಲಾರಂಭಿಸುತ್ತಾನೆ. ಇದು ತೀರಾ ನಿಕೃಷ್ಟ ಮಟ್ಟದ ದಾರಿಗೇಡಿತನ

[9] ಹಾಗೆಯೇ ಅವನು, ಯಾರ ಲಾಭಕ್ಕಿಂತ ನಷ್ಟವು ಹೆಚ್ಚು ನಿಕಟವಾಗಿದೆಯೋ ಅಂಥವನಿಗೆ ಮೊರೆ ಇಡುತ್ತಾನೆ. ಅವರು ಎಷ್ಟೊಂದು ಕೆಟ್ಟ ಪೋಷಕರು ಮತ್ತು ಅವರು ಎಷ್ಟೊಂದು ಕೆಟ್ಟ ಸಂಗಾತಿಗಳು

[10] ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರನ್ನು ಅಲ್ಲಾಹನು ಖಂಡಿತವಾಗಿಯೂ ಸ್ವರ್ಗಗಳೊಳಗೆ ಸೇರಿಸುವನು. ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಾಹನಂತು ತಾನಿಚ್ಛಿಸಿದ್ದನ್ನು ಮಾಡಬಲ್ಲನು

[11] ಈ ಲೋಕದಲ್ಲೂ ಪರಲೋಕದಲ್ಲೂ ಅಲ್ಲಾಹನು ತನಗೆ ನೆರವಾಗಲಾರನೆಂದು ತೀರ್ಮಾನಿಸಿಕೊಂಡವನು, ಆಕಾಶಕ್ಕೆ ಒಂದು ಹಗ್ಗವನ್ನು ಕಟ್ಟಿ ಅದನ್ನು ಕಡಿದು ಹಾಕಲಿ ಮತ್ತು ತನ್ನ (ಈ) ಕಾರ್ಯಾಚರಣೆಯು ತನ್ನ ಹತಾಶೆಯನ್ನು ನಿವಾರಿಸುವುದೋ ಎಂದು ನೋಡಲಿ

[12] ಈ ರೀತಿ ನಾವು ಇದನ್ನು (ಕುರ್‌ಆನನ್ನು) ಸುಸ್ಪಷ್ಟ ವಚನಗಳೊಂದಿಗೆ ಇಳಿಸಿ ಕೊಟ್ಟಿರುವೆವು. ಮಾರ್ಗದರ್ಶನವನ್ನು ಅಲ್ಲಾಹನೇ ತಾನಿಚ್ಛಿಸಿದವರಿಗೆ ನೀಡುತ್ತಾನೆ

[13] ಖಂಡಿತವಾಗಿಯೂ ವಿಶ್ವಾಸಿಗಳು, ಯಹೂದಿಗಳು, ಸಬಯನರು (ಯಹ್ಯಾರ ಸಮುದಾಯ), ನಸಾರಾಗಳು (ಕ್ರೈಸ್ತರು), ಮಜೂಸರು (ಅಗ್ನಿ ಪೂಜಕರು) ಮತ್ತು ಬಹುದೇವಾರಾಧಕರು – ಅವರೆಲ್ಲರ ನಡುವೆ ಅಲ್ಲಾಹನು ಪುನರುತ್ಥಾನ ದಿನ ತೀರ್ಪು ನೀಡುವನು. ಅಲ್ಲಾಹನು ಖಂಡಿತವಾಗಿಯೂ ಎಲ್ಲ ವಿಷಯಗಳಿಗೆ ಸ್ವತಃ ಸಾಕ್ಷಿಯಾಗಿರುವನು

[14] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ – ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಗಿಡಮರಗಳು, ಜಾನುವಾರುಗಳು ಮತ್ತು ಹೆಚ್ಚಿನ ಮಾನವರು ಅಲ್ಲಾಹನಿಗೇ ಸಾಷ್ಟಾಂಗವೆರಗುತ್ತಾರೆಂಬುದನ್ನು ನೀವು ನೋಡಲಿಲ್ಲವೇ? ಹಲವರ ಮೇಲೆ ಶಿಕ್ಷೆಯು (ಈಗಾಗಲೇ) ಕಡ್ಡಾಯವಾಗಿ ಬಿಟ್ಟಿದೆ. ಅಲ್ಲಾಹನು ಅಪಮಾನಿಸಿದವನನ್ನು ಗೌರವಾನ್ವಿತನಾಗಿಸಬಲ್ಲವರು ಯಾರೂ ಇಲ್ಲ. ಅಲ್ಲಾಹನು ತಾನಿಚ್ಛಿಸಿದ್ದನ್ನೇ ಮಾಡುತ್ತಾನೆ

[15] (ನೋಡಿರಿ;) ಆ ಎರಡು ಗುಂಪುಗಳು ತಮ್ಮ ಒಡೆಯನ ವಿಷಯದಲ್ಲಿ ಜಗಳಾಡಿದವು. (ಅವರ ಪೈಕಿ) ಧಿಕ್ಕಾರಿಗಳಿಗಾಗಿ ನರಕಾಗ್ನಿಯ ಉಡುಗೆಯನ್ನು ಕತ್ತರಿಸಿಡಲಾಗಿದೆ. ಕುದಿಯುವ ನೀರನ್ನು ಅವರ ತಲೆಗಳ ಮೇಲೆ ಸುರಿಯಲಾಗುವುದು

[16] ಅದರಿಂದಾಗಿ ಅವರ ಹೊಟ್ಟೆಗಳಲ್ಲಿರುವ ಎಲ್ಲವೂ ಮತ್ತು ಅವರ ಚರ್ಮಗಳೂ ಸುಟ್ಟು ಹೋಗುವವು

[17] ಅವರಿಗಾಗಿ ಉಕ್ಕಿನ ಸುತ್ತಿಗೆಗಳಿವೆ

[18] ಅಲ್ಲಿನ ಸಂಕಟ ಸಹಿಸಲಾಗದೆ ಅವರು ಅಲ್ಲಿಂದ ಹೊರ ಬರಲು ಹೊರಟಾಗಲೆಲ್ಲಾ ‘‘ಸುಡುವ ಶಿಕ್ಷೆಯನ್ನು ಸವಿಯಿರಿ’’ (ಎನ್ನುತ್ತಾ) ಅವರನ್ನು ಮತ್ತೆ ಅಲ್ಲಿಗೇ ಮರಳಿಸಲಾಗುವುದು

[19] ವಿಶ್ವಾಸಿಗಳನ್ನು ಹಾಗೂ ಸತ್ಕರ್ಮಿಗಳನ್ನು ಅಲ್ಲಾಹನು ಖಂಡಿತವಾಗಿಯೂ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಸೇರಿಸುವನು. ಅದರಲ್ಲಿ ಅವರಿಗೆ ಚಿನ್ನದ ಹಾಗೂ ಮುತ್ತಿನ ಬಳೆಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಗೆಯು ರೇಶ್ಮೆಯದ್ದಾಗಿರುವುದು

[20] ಅವರಿಗೆ ಶುದ್ಧ ಮಾತಿನೆಡೆಗೆ ಮಾರ್ಗದರ್ಶನ ನೀಡಲಾಗಿತ್ತು ಮತ್ತು ಪ್ರಶಂಸಾರ್ಹನಾದವನ (ಅಲ್ಲಾಹನ) ಮಾರ್ಗದೆಡೆಗೆ ಅವರನ್ನು ಮುನ್ನಡೆಸಲಾಗಿತ್ತು

[21] ಧಿಕ್ಕಾರಿಗಳು ಮತ್ತು ಅಲ್ಲಾಹನ ಮಾರ್ಗದಿಂದಲೂ, ಮಸ್ಜಿದುಲ್ ಹರಾಮ್‌ನಿಂದಲೂ ಜನರನ್ನು ತಡೆಯುವವರು (ಶಿಕ್ಷಾರ್ಹರು). ಅದರಲ್ಲಿ (ಮಸ್ಜಿದುಲ್ ಹರಾಮ್‌ನಲ್ಲಿ), ಅದರೊಳಗೆ ತಂಗಿರುವವರೂ ಹೊರಗಿನಿಂದ ಬರುವ ಎಲ್ಲ ಜನರೂ ಸಮಾನರು ಎಂದು ನಾವು ವಿಧಿಸಿರುವೆವು. ಅಲ್ಲಿ ಅಕ್ರಮವಾಗಿ ಅಧರ್ಮವನ್ನು ಆಚರಿಸಲು ಹೊರಟವನಿಗೆ ನಾವು ಯಾತನಾಮಯ ಶಿಕ್ಷೆಯ ರುಚಿ ಉಣಿಸಲಿದ್ದೇವೆ

[22] ಮತ್ತು ನಾವು ಆ ಭವನ (ಕಾಬಾ)ವನ್ನು ಇಬ್ರಾಹೀಮರ ನೆಲೆಯಾಗಿಸಿದಾಗ (ಅವರಿಗೆ ಹೀಗೆಂದು ಆದೇಶಿಸಿದ್ದೆವು); ನೀವು ಏನನ್ನೂ ನನ್ನ ಜೊತೆ ಪಾಲುಗೊಳಿಸಬಾರದು ಮತ್ತು ಪ್ರದಕ್ಷಿಣೆ ಮಾಡುವವರಿಗಾಗಿ, (ಪ್ರಾರ್ಥನೆಗೆಂದು) ನಿಲ್ಲುವವರಿಗಾಗಿ, ಬಾಗುವವರಿಗಾಗಿ ಮತ್ತು ಸಾಷ್ಟಾಂಗ ಎರಗುವವರಿಗಾಗಿ ನನ್ನ ಭವನವನ್ನು ಶುಚಿಯಾಗಿಡಿರಿ

[23] ಮತ್ತು ನೀವು ಜನರಿಗೆ ‘ಹಜ್ಜ್’ನ ಕರೆ ನೀಡಿರಿ. ಅವರು ನಡೆಯುತ್ತಲೂ, ದೂರದ ದಾರಿಗಳನ್ನು ಕ್ರಮಿಸಿ ಬರುವ ಕ್ಷೀಣ ಒಂಟೆಗಳನ್ನೇರಿಯೂ ನಿಮ್ಮ ಬಳಿಗೆ ಬರುವರು –

[24] – ತಮಗೆ ಲಾಭದಾಯಕವಾದವುಗಳನ್ನು ಕಾಣಲಿಕ್ಕಾಗಿ ಹಾಗೂ ಅವರಿಗೆ ನಾವು ದಯಪಾಲಿಸಿರುವ ಜಾನುವಾರುಗಳನ್ನು, ಕೆಲವು ನಿರ್ದಿಷ್ಟ ದಿನಗಳಲ್ಲಿ, ಅಲ್ಲಾಹನ ಹೆಸರಲ್ಲಿ ಬಲಿಯರ್ಪಿಸಲಿಕ್ಕಾಗಿ. ಅದರಿಂದ ನೀವೂ ತಿನ್ನಿರಿ ಮತ್ತು ಬಡ ಬಗ್ಗರಿಗೂ ತಿನ್ನಿಸಿರಿ

[25] ತರುವಾಯ ಅವರು ತಮ್ಮ ಮಾಲಿನ್ಯಗಳಿಂದ ಮುಕ್ತರಾಗಲಿ, ತಮ್ಮ ಹರಕೆಗಳನ್ನು ಪೂರ್ತಿಗೊಳಿಸಲಿ ಮತ್ತು ಅತ್ಯಂತ ಪ್ರಾಚೀನವಾದ ಆ ಭವನದ ಪ್ರದಕ್ಷಿಣೆ ಮಾಡಲಿ

[26] ಇದುವೇ (ದೇವಾದೇಶ). ಅಲ್ಲಾಹನ ಸಂಕೇತಗಳನ್ನು ಗೌರವಿಸುವಾತನ ಪಾಲಿಗೆ, ಅವನ ಒಡೆಯನ ಬಳಿ ಅದುವೇ ಉತ್ತಮವಾಗಿರುವುದು. (ನಿಷಿದ್ಧವೆಂದು) ನಿಮಗೆ ಓದಿ ತಿಳಿಸಲಾದವುಗಳ ಹೊರತು ಉಳಿದೆಲ್ಲ ಜಾನುವಾರುಗಳನ್ನು ನಿಮಗೆ ಸಮ್ಮತಗೊಳಿಸಲಾಗಿದೆ. ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತಿನಿಂದ ದೂರವಿರಿ

[27] ಅಲ್ಲಾಹನಿಗೆ ಸಂಪೂರ್ಣ ನಿಷ್ಠರಾಗಿರಿ ಮತ್ತು ಯಾರನ್ನೂ ಅವನ ಪಾಲುದಾರರಾಗಿಸಬೇಡಿ. ಅಲ್ಲಾಹನ ಜೊತೆಗೆ ಇತರರನ್ನು ಪಾಲುದಾರರಾಗಿಸಿದವನ ಸ್ಥಿತಿಯು ಬಾನಿನಿಂದ ಬಿದ್ದು ಬಿಟ್ಟವನಂತಿರುತ್ತದೆ. ಹದ್ದುಗಳು ಅವನನ್ನು ಹೆಕ್ಕಿಕೊಂಡು ಹೋಗುತ್ತವೆ ಅಥವಾ ಗಾಳಿಯು ಅವನನ್ನು ಯಾವುದಾದರೂ ದೂರದ ಪ್ರದೇಶಕ್ಕೆ ಎಸೆದು ಬಿಡುತ್ತದೆ

[28] ಇದುವೇ (ದೇವಾದೇಶ). ಅಲ್ಲಾಹನ ಸಂಕೇತಗಳನ್ನು ಗೌರವಿಸುವುದು, ಮನದೊಳಗಿನ ಧರ್ಮನಿಷ್ಠೆಯ ಭಾಗವಾಗಿದೆ

[29] ಒಂದು ನಿರ್ದಿಷ್ಟ ಕಾಲದ ವರೆಗೆ ಅವು (ಆ ಜಾನುವಾರು)ಗಳಿಂದ ನೀವು ಲಾಭ ಪಡೆಯಬಹುದು. ಆ ಬಳಿಕ, (ಅಲ್ಲಾಹನ) ಪ್ರಾಚೀನ ಭವನವೇ ಅವುಗಳ ನೆಲೆಯಾಗಿದೆ

[30] ನಾವು ಅವರಿಗೆ ದಯಪಾಲಿಸಿರುವ ಜಾನುವಾರುಗಳನ್ನು ಅವರು ಅಲ್ಲಾಹನ ನಾಮದಲ್ಲಿ ಬಲಿಯರ್ಪಿಸಬೇಕೆಂದು, ನಾವು ಪ್ರತಿಯೊಂದು ಸಮುದಾಯಕ್ಕೂ ಬಲಿದಾನದ ಒಂದು ನಿಯಮವನ್ನು ನಿಶ್ಚಯಿಸಿರುವೆವು. ಆ ಏಕಮಾತ್ರ ದೇವನೇ ನಿಮ್ಮ ದೇವನು. ನೀವು ಅವನಿಗೇ ಶರಣಾಗಿರಿ ಮತ್ತು ಮನಸಾರೆ (ಅಲ್ಲಾಹನ ಮುಂದೆ) ತಲೆಬಾಗುವವರಿಗೆ ಶುಭವಾರ್ತೆ ನೀಡಿರಿ

[31] ಅವರ ಮುಂದೆ ಅಲ್ಲಾಹನನ್ನು ಪ್ರಸ್ತಾಪಿಸಿದೊಡನೆ ಅವರ ಮನಸ್ಸುಗಳು ನಡುಗುತ್ತವೆ ಮತ್ತು ತಮಗೆ ವಿಪತ್ತುಗಳು ಎದುರಾದಾಗ ಅವರು ಸಹನಶೀಲರಾಗಿರುತ್ತಾರೆ. ಅವರು ನಮಾಝ್‌ಅನ್ನು ಪಾಲಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದನ್ನು ಖರ್ಚುಮಾಡುತ್ತಾರೆ

[32] ಇನ್ನು, ಬಲಿದಾನದ ಒಂಟೆಗಳನ್ನು ನಾವು ನಿಮ್ಮ ಪಾಲಿಗೆ ಅಲ್ಲಾಹನ ಸಂಕೇತಗಳಾಗಿ ಮಾಡಿರುವೆವು. ಅವುಗಳಲ್ಲಿ ನಿಮಗೆ ಹಿತವಿದೆ. ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ (ಅವನ ನಾಮದಲ್ಲಿ ಅವುಗಳನ್ನು ಬಲಿ ನೀಡಿರಿ). ಕೊನೆಗೆ, ಅವುಗಳು ಕುಸಿದು ಬಿದ್ದಾಗ ಅವುಗಳಿಂದ ನೀವೂ ತಿನ್ನಿರಿ ಮತ್ತು ಬಡವರಿಗೂ ಭಿಕ್ಷುಕರಿಗೂ ತಿನ್ನಿಸಿರಿ. ಈ ರೀತಿ, ನೀವು ಕೃತಜ್ಞರಾಗಬೇಕೆಂದು, ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿರುವೆವು

[33] ಅವುಗಳ (ಬಲಿಪ್ರಾಣಿಗಳ) ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು (ನಿಮ್ಮ) ಧರ್ಮನಿಷ್ಠೆ ಮಾತ್ರ. ಈ ರೀತಿ, ನಿಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನೀವು ಅಲ್ಲಾಹನ ಮಹಿಮೆಯನ್ನು ಕೊಂಡಾಡಬೇಕೆಂದು, ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿರುವೆವು. ಸತ್ಕರ್ಮಿಗಳಿಗೆ ಶುಭವಾರ್ತೆ ನೀಡಿರಿ

[34] ಖಂಡಿತವಾಗಿಯೂ, ವಿಶ್ವಾಸಿಗಳ ಪರವಾಗಿ ರಕ್ಷಣಾಕಾರ್ಯವನ್ನು ಅಲ್ಲಾಹನೇ ಮಾಡುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಯಾವುದೇ ವಂಚಕ, ಕೃತಘ್ನನನ್ನು ಮೆಚ್ಚುವುದಿಲ್ಲ

[35] ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರಿಗೆ (ಯುದ್ಧ ಹೂಡುವ) ಅನುಮತಿ ನೀಡಲಾಗಿದೆ. ಏಕೆಂದರೆ ಅವರ ಮೇಲೆ ಅಕ್ರಮ ನಡೆದಿದೆ. ಅವರಿಗೆ ನೆರವಾಗಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ

[36] ಅವರು, ‘‘ಅಲ್ಲಾಹನೇ ನಮ್ಮೊಡೆಯ’’ ಎಂದಷ್ಟೇ ಹೇಳಿದ ಕಾರಣಕ್ಕಾಗಿ, ಅನ್ಯಾಯವಾಗಿ ಅವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಒಂದು ವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. ತನಗೆ ನೆರವಾಗುವಾತನಿಗೆ ಅಲ್ಲಾಹನು ಖಂಡಿತ ನೆರವಾಗುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ತುಂಬಾ ಶಕ್ತಿಶಾಲಿಯೂ ಪ್ರಬಲನೂ ಆಗಿದ್ದಾನೆ

[37] ನಾವು ಅವರಿಗೆ (ನಿಷ್ಠ ದಾಸರಿಗೆ) ಭೂಮಿಯಲ್ಲಿ ಅಧಿಕಾರ ನೀಡಿದರೆ, ಅವರು ನಮಾಝ್‌ಅನ್ನು ಪಾಲಿಸುವರು, ಝಕಾತನ್ನು ಪಾವತಿಸುವರು, ಒಳಿತನ್ನು ಆದೇಶಿಸುವರು ಮತ್ತು ಕೆಡುಕಿನಿಂದ ತಡೆಯುವರು. ಎಲ್ಲ ವಿಷಯಗಳಲ್ಲೂ ಅಂತಿಮ ತೀರ್ಮಾನವು ಅಲ್ಲಾಹನದೇ

[38] (ದೂತರೇ,) ಅವರು ನಿಮ್ಮನ್ನು ಸುಳ್ಳುಗಾರನೆನ್ನುತ್ತಿದ್ದರೆ (ನಿಮಗೆ ತಿಳಿದಿರಲಿ;) ಅವರಿಗಿಂತ ಮುಂಚೆ ನೂಹರ ಜನಾಂಗದವರೂ, ಆದ್ ಮತ್ತು ಸಮೂದ್ ಜನಾಂಗದವರೂ ಹಾಗೆಯೇ ಹೇಳಿದ್ದರು

[39] ಇಬ್ರಾಹೀಮರ ಜನಾಂಗ ಹಾಗೂ ಲೂತ್‌ರ ಜನಾಂಗವೂ ಅಷ್ಟೇ

[40] ಮದ್‌ಯನ್‌ನವರೂ ಅಷ್ಟೇ. ಅತ್ತ, ಮೂಸಾರನ್ನೂ ಸುಳ್ಳುಗಾರನೆನ್ನಲಾಗಿತ್ತು. ನಾನು ಧಿಕ್ಕಾರಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಿ, ಆ ಬಳಿಕ ಅವರನ್ನು ಹಿಡಿದು ಬಿಟ್ಟೆನು. ನನ್ನನ್ನು ತಿರಸ್ಕರಿಸಿದ್ದರ ಪರಿಣಾಮವನ್ನು ನೋಡಿರಿ

[41] ಅಕ್ರಮಿಗಳ ಅದೆಷ್ಟೋ ನಾಡುಗಳನ್ನು ನಾವು ನಿರ್ನಾಮಗೊಳಿಸಿ ಬಿಟ್ಟೆವು. (ಇಂದು) ಅವು ತಮ್ಮದೇ ಚಪ್ಪರಗಳ ಮೇಲೆ (ಕವಚಿ) ಬಿದ್ದು ಕೊಂಡಿವೆ ಮತ್ತು ಅದೆಷ್ಟೋ ಬಾವಿಗಳು ಹಾಗೂ ಭದ್ರಕೋಟೆಗಳು ಪಾಳು ಬಿದ್ದಿವೆ

[42] ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರ ಬಳಿ ಆಲೋಚಿಸುವ ಮನಸ್ಸುಗಳಿಲ್ಲವೇ? ಆಲಿಸುವ ಕಿವಿಗಳಿಲ್ಲವೇ? ನಿಜವಾಗಿ ಅವರ ಕಣ್ಣುಗಳು ಕುರುಡಾಗಿರುವುದಿಲ್ಲ – ಅವರ ಎದೆಗಳಲ್ಲಿರುವ ಹೃದಯಗಳು ಕುರುಡಾಗಿ ಬಿಟ್ಟಿವೆ

[43] ಅವರು ನಿಮ್ಮೊಡನೆ ಶಿಕ್ಷೆಗಾಗಿ ಆತುರ ಪಡುತ್ತಾರೆ. ಅಲ್ಲಾಹನು ಎಂದೂ ತಾನು ಕೊಟ್ಟ ಮಾತನ್ನು ತಪ್ಪುವುದಿಲ್ಲ. ಆದರೆ ನಿಮ್ಮ ಒಡೆಯನ ಬಳಿ ಒಂದು ದಿನವೆಂಬುದು ನಿಮ್ಮ ಎಣಿಕೆಯ ಸಾವಿರ ವರ್ಷಗಳಿಗೆ ಸಮಾನವಾಗಿದೆ

[44] ಅಕ್ರಮಿಗಳಾಗಿದ್ದ ಅದೆಷ್ಟೋ ನಾಡುಗಳಿಗೆ ನಾವು ಕಾಲಾವಕಾಶ ನೀಡಿದ್ದೆವು. ಆ ಬಳಿಕ ನಾವು ಅವರನ್ನು ಹಿಡಿದುಕೊಂಡೆವು. (ಕೊನೆಗೆ ಎಲ್ಲರೂ) ನನ್ನೆಡೆಗೇ ಮರಳಬೇಕು

[45] ಹೇಳಿರಿ; ಮಾನವರೇ, ನಾನು ನಿಮಗೆ ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ

[46] ಧರ್ಮದಲ್ಲಿ ನಂಬಿಕೆ ಉಳ್ಳವರು ಮತ್ತು ಸತ್ಕರ್ಮಮಾಡುವವರಿಗೆ ಕ್ಷಮೆ ಹಾಗೂ ಗೌರವಾನ್ವಿತ ಲೌಕಿಕ ಸಂಪತ್ತೂ ಸಿಗಲಿದೆ

[47] ನಮ್ಮ ವಚನಗಳನ್ನು ಸೋಲಿಸಲು ಹೆಣಗಾಡಿದವರು ನರಕವಾಸಿಗಳಾಗುವರು

[48] ನಿಮಗಿಂತ ಮುಂಚೆಯೂ ನಾವು ಕಳಿಸಿದ್ದ ದೇವ ದೂತರು ಹಾಗೂ ಪ್ರವಾದಿಗಳು ಏನಾದರೂ ಅಪೇಕ್ಷಿಸಿದಾಗಲೆಲ್ಲಾ ಶೈನಾನನು ಅವರ ಅಪೇಕ್ಷೆಗಳ ಜೊತೆ ಸಂಶಯವನ್ನು ಸೇರಿಸಿದ್ದಿದೆ. ಆದರೆ ಶೈತಾನನು ಸೇರಿಸಿದ್ದನ್ನು ಅಲ್ಲಾಹನು ಅಳಿಸಿಹಾಕುತ್ತಾನೆ ಮತ್ತು ಆ ಬಳಿಕ ಅಲ್ಲಾಹನು, (ಅವರ ಮನಸ್ಸುಗಳಲ್ಲಿ) ತನ್ನ ವಚನಗಳನ್ನು ಸ್ಥಿರಗೊಳಿಸುತ್ತಾನೆ. ಅಲ್ಲಾಹನು ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[49] ಶೈತಾನನು ಬಿತ್ತಿದ್ದನ್ನು ಅವನು (ಅಲ್ಲಾಹನು) ಮನಸ್ಸುಗಳಲ್ಲಿ ರೋಗವಿರುವವರ ಹಾಗೂ ಕಠೋರ ಮನಸ್ಸಿನವರ ಪಾಲಿಗೆ ಪರೀಕ್ಷೆಯಾಗಿಸುತ್ತಾನೆ. ಖಂಡಿತವಾಗಿಯೂ ಅಕ್ರಮಿಗಳು ತಮ್ಮ ಉದ್ಧಟತನದಲ್ಲಿ ಬಹಳ ದೂರ ಸಾಗಿಬಿಟ್ಟಿದ್ದಾರೆ

[50] ಜ್ಞಾನವುಳ್ಳವರು, ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ ಎಂಬುದನ್ನು ಅರಿತು ಇದರಲ್ಲಿ ನಂಬಿಕೆ ಇಡಲಿ ಹಾಗೂ ಅವರ ಮನಸ್ಸುಗಳು ಇದರ ಪರ ಒಲಿಯಲಿ (ಎಂಬ ಉದ್ದೇಶದಿಂದ ಇದನ್ನೆಲ್ಲಾ ತಿಳಿಸಲಾಗುತ್ತಿದೆ). ಖಂಡಿತವಾಗಿಯೂ ಅಲ್ಲಾಹನೇ ವಿಶ್ವಾಸಿಗಳಿಗೆ ನೇರ ದಾರಿ ತೋರುವವನಾಗಿದ್ದಾನೆ

[51] ಆ (ಅಂತಿಮ) ಘಳಿಗೆಯು ಹಠಾತ್ತನೆ ತಮ್ಮ ಮೇಲೆ ಬಂದೆರಗುವ ತನಕ, ಅಥವಾ ಆ ಅನಿಷ್ಟ ದಿನದ ಶಿಕ್ಷೆಯು ತಮಗೆ ಎದುರಾಗಿ ಬಿಡುವ ತನಕ ಧಿಕ್ಕಾರಿಗಳು ಈ ವಿಷಯದಲ್ಲಿ ಸಂಶಯ ಪೀಡಿತರಾಗಿಯೇ ಇರುವರು

[52] ಅಂದು ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿರುವುದು. ಅವನು ಅವರ ನಡುವೆ ನ್ಯಾಯ ತೀರ್ಮಾನ ಮಾಡುವನು. ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು ಅನುಗ್ರಹ ಭರಿತ ತೋಟಗಳಲ್ಲಿರುವರು

[53] ಇನ್ನು ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ಸುಳ್ಳೆಂದವರು.ಅವರಿಗೆ, ಅಪಮಾನಾತ್ಮಕ ಶಿಕ್ಷೆ ಇದೆ

[54] ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದ ಹಾಗೂ ಆ ಬಳಿಕ ಹತರಾದ ಅಥವಾ ಮೃತರಾದವರಿಗೆ ಅಲ್ಲಾಹನು ಅತ್ಯುತ್ತಮ ಆಹಾರ ನೀಡಲಿದ್ದಾನೆ. ಖಂಡಿತವಾಗಿಯೂ ಅಲ್ಲಾಹನೇ ಅತ್ಯುತ್ತಮ ಅನ್ನದಾತನಾಗಿದ್ದಾನೆ

[55] ಅವನು ಅವರನ್ನು ಅವರು ಮೆಚ್ಚುವಲ್ಲಿಗೆ ತಲುಪಿಸುವನು. ಖಂಡಿತವಾಗಿಯೂ ಅಲ್ಲಾಹನು ಬಲ್ಲವನು ಮತ್ತು ಸಂಯಮಿಯಾಗಿದ್ದಾನೆ

[56] ಇದು (ಅವರ ವಿಷಯ). ಇನ್ನು, ತನಗೆ ನೀಡಲಾದಷ್ಟೇ ಹೊಡೆತವನ್ನು ತಿರುಗಿ ನೀಡಿದವನನ್ನು ಆ ಬಳಿಕ ಮತ್ತೆ ಮರ್ದಿಸಲಾದರೆ – ಅವನಿಗೆ ಅಲ್ಲಾಹನು ಖಂಡಿತ ನೆರವಾಗುವನು. ಅಲ್ಲಾಹನು ಖಂಡಿತ ಮನ್ನಿಸುವವನು ಹಾಗೂ ಕ್ಷಮಿಸುವವನಾಗಿದ್ದಾನೆ

[57] ಏಕೆಂದರೆ ಅಲ್ಲಾಹನು ಇರುಳನ್ನು ಹಗಲೊಳಗೆ ಸೇರಿಸುವವನು ಹಾಗೂ ಹಗಲನ್ನು ಇರುಳಿನೊಳಗೆ ಸೇರಿಸುವವನಾಗಿದ್ದಾನೆ. ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ

[58] ಹಾಗೆಯೇ, ಅಲ್ಲಾಹನೇ ಪರಮ ಸತ್ಯವಾಗಿದ್ದಾನೆ ಮತ್ತು ಅವರು ಅವನ ಹೊರತು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವೆಲ್ಲಾ ಕೇವಲ ಮಿಥ್ಯಗಳು. ಅಲ್ಲಾಹನಂತು ಉನ್ನತ ಹಾಗೂ ಮಹಾನನಾಗಿದ್ದಾನೆ

[59] ನೀವು ಕಾಣಲಿಲ್ಲವೇ, ಅಲ್ಲಾಹನು ಆಕಾಶದಿಂದ ನೀರನ್ನು ಇಳಿಸಿದನು. ಅದರಿಂದ ಭೂಮಿಯು ಅರಳಿ ಹಸಿರಾಯಿತು. ಖಂಡಿತವಾಗಿಯೂ ಅಲ್ಲಾಹನು ಪರಮ ಉದಾರಿ ಹಾಗೂ ಸದಾ ಜಾಗೃತನಾಗಿದ್ದಾನೆ

[60] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ. ಖಂಡಿತವಾಗಿಯೂ ಅಲ್ಲಾಹನು ನಿರಪೇಕ್ಷ ಹಾಗೂ ಪ್ರಶಂಸಾರ್ಹನಾಗಿದ್ದಾನೆ

[61] ನೀವು ಕಾಣಲಿಲ್ಲವೇ, ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವನು ಮತ್ತು ಕಡಲಲ್ಲಿ ಹಡಗುಗಳು ಅವನ ಆದೇಶ ಪ್ರಕಾರವೇ ಚಲಿಸುತ್ತವೆ. ಅವನ ಅನುಮತಿ ಇಲ್ಲದೆ ಭೂಮಿಯ ಮೇಲೆ ಬೀಳದಂತೆ ಆಕಾಶವನ್ನು ಅವನೇ ಹಿಡಿದಿಟ್ಟಿರುವನು. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರಿ ಹಾಗೂ ಕರುಣಾಳುವಾಗಿದ್ದಾನೆ

[62] ಅವನೇ ನಿಮ್ಮನ್ನು ಜೀವಂತಗೊಳಿಸಿರುವನು, ಅವನೇ ನಿಮ್ಮನ್ನು ಸಾಯಿಸುವನು ಮತ್ತು ಅವನೇ ನಿಮ್ಮನ್ನು ಪುನಃ ಜೀವಂತಗೊಳಿಸುವನು. ಮನುಷ್ಯನು ಖಂಡಿತ ಕೃತಘ್ನನು

[63] ನಾವು ಪ್ರತಿಯೊಂದು ಸಮುದಾಯಕ್ಕೂ ಒಂದು ಆರಾಧನಾ ಕ್ರಮವನ್ನು ನಿಶ್ಚಯಿಸಿರುವೆವು. ಅವರು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಅವರು ನಿಮ್ಮೊಡನೆ ಜಗಳಾಡದಿರಲಿ. ನೀವು (ಜನರನ್ನು) ನಿಮ್ಮ ಒಡೆಯನೆಡೆಗೆ ಕರೆಯಿರಿ. ನೀವು ಖಂಡಿತ ಸ್ಥಿರವಾದ ನೇರಮಾರ್ಗದಲ್ಲಿರುವಿರಿ

[64] ಅವರು ನಿಮ್ಮೊಡನೆ ಜಗಳಾಡಿದರೆ ‘‘ನೀವು ಮಾಡುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು’’ ಎನ್ನಿರಿ

[65] ನೀವು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲೂ ಪುನರುತ್ಥಾನ ದಿನ ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು

[66] ನಿಮಗೆ ತಿಳಿದಿಲ್ಲವೇ, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು. ಇದು ಖಂಡಿತ ಒಂದು ಗ್ರಂಥದಲ್ಲಿದೆ. ಅಲ್ಲಾಹನಿಗೆ ಇದು ಖಂಡಿತ ಸುಲಭವಾಗಿದೆ

[67] ಅವರು ಅಲ್ಲಾಹನನ್ನು ಬಿಟ್ಟು, ಅವನು ಯಾರ ಪರವಾಗಿ ಯಾವುದೇ ಪುರಾವೆಯನ್ನಿಳಿಸಿಲ್ಲವೋ ಅವರನ್ನು ಮತ್ತು ತಮಗೆ ಯಾವುದೇ ತಿಳುವಳಿಕೆ ಇಲ್ಲದವರನ್ನು ಆರಾಧಿಸುತ್ತಾರೆ. (ಇಂತಹ) ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ

[68] ಧಿಕ್ಕಾರಿಗಳಿಗೆ ನಮ್ಮ ಸುಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಲಾದಾಗ ಅವರ ಮುಖಗಳಲ್ಲಿ ನೀವು ತಿರಸ್ಕಾರವನ್ನು ಕಾಣುತ್ತೀರಿ. ಅವರು, ತಮಗೆ ನಮ್ಮ ವಚನಗಳನ್ನು ಓದಿಕೇಳಿಸುತ್ತಿರುವವರ ಮೇಲೆಯೇ ಮುಗಿದು ಬೀಳುವರೋ ಎಂಬಂತಿರುತ್ತಾರೆ. ಹೇಳಿರಿ; ನಾನು ನಿಮಗೆ ಇದಕ್ಕಿಂತ ಕೆಟ್ಟದ್ದನ್ನು ತಿಳಿಸಲೇ? ನರಕಾಗ್ನಿ! ಅಲ್ಲಾಹನು ಧಿಕ್ಕಾರಿಗಳಿಗೆ ಅದನ್ನೇ ವಾಗ್ದಾನ ಮಾಡಿರುತ್ತಾನೆ. ಅದು ತೀರಾ ಕೆಟ್ಟ ನೆಲೆಯಾಗಿದೆ

[69] ಮಾನವರೇ, ನಿಮಗೊಂದು ಉದಾಹರಣೆ ನೀಡಲಾಗುತ್ತಿದೆ. ಅದನ್ನು ಆಲಿಸಿರಿ; ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಕೂಗಿ ಪ್ರಾರ್ಥಿಸುತ್ತೀರೋ ಅವರು ಖಂಡಿತ ಒಂದು ನೊಣವನ್ನು ಕೂಡಾ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಂದುಗೂಡಿದರೂ ಸರಿಯೇ. ಇನ್ನು, ಒಂದು ನೊಣವು ಅವರಿಂದ ಏನನ್ನಾದರೂ ಕಿತ್ತುಕೊಂಡರೆ ಅದನ್ನು ಅದರಿಂದ ಬಿಡಿಸಿಕೊಳ್ಳುವುದಕ್ಕೂ ಅವರಿಂದ ಸಾಧ್ಯವಿಲ್ಲ. ಅಪೇಕ್ಷಿಸುವವರೂ ದುರ್ಬಲರು ಮತ್ತು ಯಾರಿಂದ ಅಪೇಕ್ಷಿಸಲಾಗುತ್ತಿದೆಯೋ ಅವರೂ ದುರ್ಬಲರು

[70] ಅವರು ಗುರುತಿಸಬೇಕಾದ ರೀತಿಯಲ್ಲಿ ಅಲ್ಲಾಹನನ್ನು ಗುರುತಿಸಲಿಲ್ಲ. ಅಲ್ಲಾಹನು ಖಂಡಿತ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಬಲನಾಗಿದ್ದಾನೆ

[71] ಅಲ್ಲಾಹನು ಮಲಕ್‌ಗಳಿಂದಲೂ ಮಾನವರಿಂದಲೂ ದೂತರನ್ನು ಆರಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ

[72] ಅವರ ಮುಂದಿರುವ ಎಲ್ಲವನ್ನೂ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅಂತಿಮವಾಗಿ ಎಲ್ಲ ವಿಷಯಗಳು ಅಲ್ಲಾಹನೆಡೆಗೇ ಮರಳುತ್ತವೆ

[73] ವಿಶ್ವಾಸಿಗಳೇ, ನಿಮ್ಮ ಒಡೆಯನಿಗೆ ಬಾಗಿರಿ, ಸಾಷ್ಟಾಂಗವೆರಗಿರಿ ಹಾಗೂ ಅವನನ್ನು ಆರಾಧಿಸಿರಿ ಮತ್ತು ಸತ್ಕರ್ಮಗಳನ್ನು ಮಾಡಿರಿ. ನೀವು ವಿಜಯಿಗಳಾಗಬಹುದು

[74] ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ನಿಮ್ಮನ್ನು ಆರಿಸಿರುವನು ಮತ್ತು ಅವನು ಧರ್ಮದಲ್ಲಿ ನಿಮಗೆ ಯಾವುದೇ ಇಕ್ಕಟ್ಟನ್ನು ಇಟ್ಟಿಲ್ಲ. (ಅದುವೇ) ನಿಮ್ಮ ತಾತ ಇಬ್ರಾಹೀಮರ ಪಂಥ. ಅವನು (ಅಲ್ಲಾಹನು) ನಿಮ್ಮನ್ನು ಮುಸ್ಲಿಮರು ಎಂದು ಹೆಸರಿಸಿರುವನು. ಹಿಂದೆಯೂ, ಇದರಲ್ಲೂ (ಈ ಗ್ರಂಥದಲ್ಲೂ ಇದೇ ನಿಮ್ಮ ಹೆಸರು). ದೂತರು ನಿಮ್ಮ ಕುರಿತು ಸಾಕ್ಷಿಯಾಗಬೇಕು ಮತ್ತು ನೀವು ಮಾನವಕುಲದ ಕುರಿತು ಸಾಕ್ಷಿಯಾಗಬೇಕು. ನೀವಿನ್ನು ನಮಾಝನ್ನು ಪಾಲಿಸಿರಿ ಮತ್ತು ಝಕಾತನ್ನು ಪಾವತಿಸಿರಿ ಮತ್ತು ಪ್ರಬಲವಾಗಿ ಅಲ್ಲಾಹನನ್ನು ಅವಲಂಬಿಸಿರಿ. ಅವನೇ ನಿಮ್ಮ ಸಂರಕ್ಷಕನು. ಅವನು ಅತ್ಯುತ್ತಮ ಸಂರಕ್ಷಕನು ಮತ್ತು ಅತ್ಯುತ್ತಮ ಸಹಾಯಕನು

[75] ವಿಶ್ವಾಸಿಗಳು ಖಂಡಿತ ವಿಜಯಿಗಳಾದರು

[76] ಅವರು ತಮ್ಮ ನಮಾಝ್‌ಗಳಲ್ಲಿ ಭಯಭಕ್ತಿ ಉಳ್ಳವರಾಗಿರುತ್ತಾರೆ

[77] ಅನಗತ್ಯ ಕಾರ್ಯಗಳಿಂದ ದೂರ ಉಳಿದಿರುತ್ತಾರೆ

[78] ಶುಚಿತ್ವವನ್ನು ಪಾಲಿಸುತ್ತಾರೆ

ವಿಶ್ವಾಸಿಗಳು

Surah 23

[1] ತಮ್ಮ ಮಾನವನ್ನು ಕಾಪಾಡಿಕೊಂಡಿರುತ್ತಾರೆ

[2] ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ನಿಂದನೀಯರಲ್ಲ

[3] ಅದರಾಚೆಗೆ ಏನನ್ನಾದರೂ ಅಪೇಕ್ಷಿಸುವವರೇ ಅತಿಕ್ರಮಿಗಳು

[4] ಅವರು (ವಿಜಯಿ ವಿಶ್ವಾಸಿಗಳು) ತಮ್ಮ ಮೇಲಿಡಲಾದ ನಂಬಿಕೆಯನ್ನು ಉಳಿಸಿಕೊಳ್ಳುವವರು ಹಾಗೂ ತಾವು ಮಾಡಿದ ಒಪ್ಪಂದವನ್ನು ಪಾಲಿಸುವವರಾಗಿರುತ್ತಾರೆ

[5] ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ

[6] ಅವರೇ ಉತ್ತರಾಧಿಕಾರಿಗಳು

[7] ಅವರು ಫಿರ್‌ದೌಸ್‌ನ (ಸ್ವರ್ಗದ) ಉತ್ತರಾಧಿಕಾರಿಗಳಾಗುವರು ಮತ್ತು ಅದರಲ್ಲಿ ಸದಾಕಾಲ ಇರುವರು

[8] ನಾವು ಮನುಷ್ಯನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು

[9] ಆ ಬಳಿಕ ನಾವು ಅವನನ್ನು ವೀರ್ಯದ ರೂಪದಲ್ಲಿ ಒಂದು ಸ್ಥಿರವಾದ ಸ್ಥಾನದಲ್ಲಿ ನೆಲೆಸಿದೆವು

[10] ತರುವಾಯ ನಾವು ವೀರ್ಯವನ್ನು ರಕ್ತದ ಪಿಂಡವಾಗಿಸಿದೆವು ಮತ್ತು ಆ ರಕ್ತದ ಪಿಂಡವನ್ನು ಮಾಂಸಪಿಂಡವಾಗಿಸಿದೆವು ಮತ್ತು ಆ ಮಾಂಸಪಿಂಡದಿಂದ ಎಲುಬುಗಳನ್ನು ಸೃಷ್ಟಿಸಿದೆವು ಮತ್ತು ಎಲುಬುಗಳಿಗೆ ಮಾಂಸದ ಉಡುಗೆಯನ್ನು ತೊಡಿಸಿದೆವು. ಅನಂತರ ನಾವು ಆತನನ್ನು ಒಂದು ಹೊಸ ರೂಪದಲ್ಲಿ ಹುಟ್ಟಿಸಿದೆವು. ಅಲ್ಲಾಹನು ಸಮೃದ್ಧನು ಮತ್ತು ಅವನು ಅತ್ಯುತ್ತಮ ಸೃಷ್ಟಿಕರ್ತನು

[11] ಇದಾದ ಬಳಿಕ ನೀವು ಖಂಡಿತ ಸಾಯುವಿರಿ

[12] ಮತ್ತೆ ಪುನರುತ್ಥಾನ ದಿನ ನಿಮ್ಮನ್ನು ಖಂಡಿತ ಜೀವಂತಗೊಳಿಸಿ ಎಬ್ಬಿಸಲಾಗುವುದು

[13] ನಿಮ್ಮ ಮೇಲೆ ನಾವು ಏಳು ದಾರಿಗಳನ್ನು ನಿರ್ಮಿಸಿರುವೆವು. ಸೃಷ್ಟಿಗಳ ಕುರಿತು ನಾವೆಂದೂ ಅಜಾಗೃತರಾಗಿರಲಿಲ್ಲ

[14] ಮತ್ತು ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಇಳಿಸುವೆವು ಹಾಗೂ ಅದನ್ನು ಭೂಮಿಯಲ್ಲಿ ಉಳಿಸುವೆವು. ಅದನ್ನು ತೊಲಗಿಸುವುದಕ್ಕೂ ನಾವು ಶಕ್ತರಾಗಿದ್ದೇವೆ

[15] ಅದರ (ನೀರಿನ) ಮೂಲಕ ನಾವು ನಿಮಗಾಗಿ ಖರ್ಜೂರ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸುತ್ತೇವೆ. ಅದರಿಂದ ಇನ್ನೂ ಅನೇಕ ಫಲಗಳು ಬೆಳೆಯುತ್ತವೆ ಮತ್ತು ನೀವು ಅವುಗಳನ್ನು ತಿನ್ನುತ್ತೀರಿ

[16] ಇನ್ನು, ಸಿನಾಯ್ ಪರ್ವತದಲ್ಲಿ ಹುಟ್ಟುವ (ಝೈತೂನ್) ಮರವು, ತೈಲದೊಂದಿಗೆ ಹಾಗೂ ತಿನ್ನುವವರಿಗಾಗಿ, ಸ್ವಾದಿಷ್ಟ ಖಾದ್ಯಗಳೊಂದಿಗೆ ಬೆಳೆಯುತ್ತದೆ

[17] ಜಾನುವಾರುಗಳಲ್ಲೂ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯಲ್ಲಿರುವುದನ್ನು (ಹಾಲನ್ನು) ನಾವು ನಿಮಗೆ ಕುಡಿಸುತ್ತೇವೆ. ಅವುಗಳಲ್ಲಿ ನಿಮಗೆ (ಇತರ) ಹಲವಾರು ಪ್ರಯೋಜನಗಳಿವೆ ಮತ್ತು ಅವುಗಳಲ್ಲಿ (ಕೆಲವನ್ನು) ನೀವು ತಿನ್ನುತ್ತೀರಿ

[18] ಅವುಗಳ ಮೇಲೂ ಹಡಗುಗಳಲ್ಲೂ ನೀವು ಪ್ರಯಾಣಿಸುತ್ತೀರಿ

[19] ಈ ಹಿಂದೆ ನಾವು ನೂಹ್‌ರನ್ನು ಅವರ ಜನಾಂಗದವರೆಡೆಗೆ ರವಾನಿಸಿದ್ದೆವು. ‘‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?’’ ಎಂದು ಅವರು ಉಪದೇಶಿಸಿದರು

[20] ಅವರ ಜನಾಂಗದಲ್ಲಿದ್ದ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಅವನು ಕೇವಲ ಒಬ್ಬ ಮನುಷ್ಯ. ಅವನು ನಿಮಗಿಂತ ಹಿರಿಮೆ ಉಳ್ಳವನಾಗಬಯಸುತ್ತಾನೆ. ಅಲ್ಲಾಹನು ಬಯಸಿದ್ದರೆ (ದೂತರಾಗಿ) ಮಲಕ್‌ಗಳನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ

[21] ಅವನು ಖಂಡಿತ ಹುಚ್ಚು ಹಿಡಿದ ವ್ಯಕ್ತಿ. ನೀವು ಸ್ವಲ್ಪಕಾಲ ಕಾದು ನೋಡಿರಿ

[22] ಅವರು (ನೂಹ್) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸಿದ್ದಾರೆ. ಈಗ ನೀನೇ ನನಗೆ ನೆರವಾಗು

[23] ಆಗ ನಾವು ಅವರೆಡೆಗೆ (ಹೀಗೆಂದು) ದಿವ್ಯವಾಣಿಯನ್ನು ಕಳಿಸಿದೆವು; ನೀವು ನಮ್ಮ ಮೇಲ್ವಿಚಾರಣೆಯಲ್ಲಿ ಹಾಗೂ ನಮ್ಮ ದಿವ್ಯವಾಣಿಯನುಸಾರ ಒಂದು ಹಡಗನ್ನು ನಿರ್ಮಿಸಿರಿ. ತರುವಾಯ, ನಮ್ಮ ಆದೇಶ ಬಂದಾಗ ಹಾಗೂ ಚಿಲುಮೆಯು ಉಕ್ಕಿ ಹರಿದಾಗ, ಎಲ್ಲ ಜಾತಿಯ ಜೋಡಿ (ಗಂಡು ಹೆಣ್ಣು) ಗಳನ್ನು ಮತ್ತು ನಿಮ್ಮ ಮನೆಯವರ ಪೈಕಿ, ಈಗಾಗಲೇ ತೀರ್ಮಾನವಾಗಿರುವವರ ಹೊರತು, ಇತರರನ್ನು ಅದರಲ್ಲಿ ಕೂರಿಸಿರಿ. ಮತ್ತು ನೀವು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರನ್ನು ಖಂಡಿತ ಮುಳುಗಿಸಲಾಗುವುದು

[24] ಹೀಗೆ ನೀವು ಮತ್ತು ನಿಮ್ಮ ಜೊತೆಗಿರುವವರು, ಹಡಗನ್ನೇರಿದ ಬಳಿಕ, ‘‘ಹೊಗಳಿಕೆಗಳೆಲ್ಲವೂ ನಮ್ಮನ್ನು ಅಕ್ರಮಿಗಳಿಂದ ರಕ್ಷಿಸಿದ ಅಲ್ಲಾಹನಿಗೆ ಸಲ್ಲಲಿ’’ ಎಂದು ಹೇಳಿರಿ

[25] ಮತ್ತು ಹೇಳಿರಿ; ‘‘ನನ್ನೊಡೆಯಾ, ನನ್ನನ್ನು ಒಂದು ಸಮೃದ್ಧ ನೆಲೆಗೆ ತಲುಪಿಸು. ನೀನೇ ಅತ್ಯುತ್ತಮ ನೆಲೆಯನ್ನು ಒದಗಿಸುವವನು’’

[26] ಇದರಲ್ಲಿ ಖಂಡಿತವಾಗಿಯೂ ಪಾಠಗಳಿವೆ ಮತ್ತು ನಾವು ಪರೀಕ್ಷಿಸುತ್ತಲೇ ಇರುತ್ತೇವೆ

[27] ಮುಂದೆ ನಾವು ಅವರ ಬಳಿಕ ಬೇರೊಂದು ಪೀಳಿಗೆಯನ್ನು ಸೃಷ್ಟಿಸಿದೆವು

[28] ಮತ್ತು ನಾವು ಅವರೆಡೆಗೆ, ಅವರೊಳಗಿಂದಲೇ, ‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?‘‘ (ಎಂದು ಸಾರುವ) ದೂತರನ್ನು ಕಳಿಸಿದೆವು

[29] ಅವರ ಜನಾಂಗದಲ್ಲಿನ, ಧಿಕ್ಕಾರಿಗಳಾಗಿದ್ದ ನಾಯಕರು, ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಮತ್ತು ಇಹ ಜೀವನದಲ್ಲಿ ನಾವು ಅವರಿಗೆ ಭಾರೀ ಸಂಪನ್ನತೆಯನ್ನು ನೀಡಿದ್ದೆವು. (ಅವರು) ಹೇಳಿದರು; ಅವನು ಕೇವಲ ನಿಮ್ಮಂತಹ ಒಬ್ಬ ಮನುಷ್ಯ. ನೀವು ತಿನ್ನುವಂತಹದ್ದನ್ನೇ ಅವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವಂತಹದ್ದನ್ನೇ ಅವನೂ ಕುಡಿಯುತ್ತಾನೆ

[30] (ಹೀಗಿರುತ್ತಾ) ನೀವು ನಿಮ್ಮಂತಹ ಒಬ್ಬ ಮಾನವನನ್ನು ಅನುಸರಿಸಿದರೆ ಖಂಡಿತ ನಷ್ಟ ಅನುಭವಿಸುವಿರಿ

[31] ಅವನೇನು, ನೀವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಿಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದೆಂದು ಹೇಳುತ್ತಿದ್ದಾನೆಯೇ

[32] ನಿಮಗೆ ನೀಡಲಾಗುತ್ತಿರುವ ಈ ಆಶ್ವಾಸನೆ ತೀರಾ ಅಸಂಭವನೀಯ

[33] ನಮ್ಮ ಬದುಕು ಏನಿದ್ದರೂ ಈ ಲೋಕದ್ದು ಮಾತ್ರ. ನಾವು (ಇಲ್ಲೇ) ಸಾಯುತ್ತೇವೆ ಮತ್ತು (ಇಲ್ಲೇ) ಬದುಕುತ್ತೇವೆ. ನಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದಿಲ್ಲ

[34] ಈ ವ್ಯಕ್ತಿ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆ. ನಾವಂತು ಅವನನ್ನು ನಂಬುವವರಲ್ಲ

[35] ಅವರು (ದೂತರು) ಹೇಳಿದರು; ನನ್ನೊಡೆಯಾ, ನನಗೆ ನೆರವಾಗು. ಅವರು ನನ್ನನ್ನು ತಿರಸ್ಕರಿಸುತ್ತಿದ್ದಾರೆ

[36] ಅವನು (ಅಲ್ಲಾಹನು) ಹೇಳಿದನು; ಬಹಳ ಅಲ್ಪಾವಧಿಯಲ್ಲೇ ಅವರು ಪರಿತಪಿಸಲಿದ್ದಾರೆ

[37] ಕೊನೆಗೆ ನ್ಯಾಯ ಪ್ರಕಾರ ಒಂದು ಹಠಾತ್ ಸ್ಫೋಟವು ಅವರನ್ನು ಆವರಿಸಿಕೊಂಡಿತು. ಮತ್ತು ನಾವು ಅವರನ್ನು ಕೇವಲ ಕಸಗಳಾಗಿಸಿಬಿಟ್ಟೆವು. ಅಕ್ರಮಿ ಜನಾಂಗಗಳಿಗೆ ವಿನಾಶ ಕಾದಿದೆ

[38] ಮುಂದೆ, ಅವರ ಬಳಿಕ ನಾವು ಇತರ ಪೀಳಿಗೆಗಳನ್ನು ಸೃಷ್ಟಿಸಿದೆವು

[39] ಯಾವುದೇ ಸಮುದಾಯವು ತನ್ನ ನಿರ್ದಿಷ್ಟ ಅವಧಿಗಿಂತ ಮುಂಚೆ ಹೊರಟು ಹೋದದ್ದೂ ಇಲ್ಲ. ಆ ಬಳಿಕ ಉಳಿದದ್ದೂ ಇಲ್ಲ

[40] ತರುವಾಯ ನಾವು ಬೆನ್ನು ಬೆನ್ನಿಗೇ ನಮ್ಮ ದೂತರನ್ನು ಕಳಿಸಿದೆವು. ಪ್ರತಿಯೊಂದು ಸಮುದಾಯದವರೂ ತಮ್ಮ ಬಳಿಗೆ ತಮ್ಮ ದೂತನು ಬಂದಾಗ ಆತನನ್ನು ತಿರಸ್ಕರಿಸಿದರು. ನಾವು ಅವರನ್ನು ಒಬ್ಬರ ಹಿಂದೆ ಇನ್ನೊಬ್ಬರಂತೆ ನಿಲ್ಲಿಸಿದೆವು ಮತ್ತು ನಾವು ಅವರೆಲ್ಲರನ್ನೂ ಕೇವಲ ಕತೆಗಳಾಗಿ ಮಾರ್ಪಡಿಸಿ ಬಿಟ್ಟೆವು. (ಸತ್ಯವನ್ನು) ನಂಬದ ಜನಾಂಗಗಳಿಗೆ ವಿನಾಶ ಕಾದಿದೆ

[41] ಮುಂದೆ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ವಚನಗಳೊಂದಿಗೆ ಹಾಗೂ ಸ್ಪಷ್ಟ ಪುರಾವೆಗಳೊಂದಿಗೆ ಕಳಿಸಿದೆವು –

[42] – ಫಿರ್‌ಔನ್ ಮತ್ತು ಅವನ ಅಧಿಕಾರಿಗಳ ಕಡೆಗೆ. ಆದರೆ ಅವರು ದೊಡ್ಡಸ್ತಿಕೆ ತೋರಿದರು. ಅವರು ಮಹಾ ಅಹಂಕಾರಿಗಳಾಗಿದ್ದರು

[43] ಅವರು ಹೇಳಿದರು; ನಾವೇನು, ನಮ್ಮಂತಹ ಇಬ್ಬರು ವ್ಯಕ್ತಿಗಳನ್ನು ನಂಬಬೇಕೇ? ಅವರ ಜನಾಂಗದವರಂತು ನಮ್ಮ ದಾಸರಾಗಿದ್ದಾರೆ

[44] ಅವರು ಅವರಿಬ್ಬರನ್ನೂ ತಿರಸ್ಕರಿಸಿದರು. ಕೊನೆಗೆ ಅವರನ್ನು ನಾಶ ಮಾಡಲಾಯಿತು

[45] ನಿಜವಾಗಿ, ಆ ಜನರು ಸರಿದಾರಿಯನ್ನು ಕಾಣಲೆಂದು ನಾವು, ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು

[46] ಮುಂದೆ, ನಾವು ಮರ್ಯಮರ ಪುತ್ರ (ಈಸಾ)ರನ್ನು ಹಾಗೂ ಅವರ (ಈಸಾರ) ಮಾತೆಯನ್ನು (ಮರ್ಯಮರನ್ನು) ಪುರಾವೆಯಾಗಿಸಿದೆವು ಮತ್ತು ನಾವು ಚಿಲುಮೆಗಳಿದ್ದ ಎತ್ತರದ ನೆಲೆಯೊಂದರಲ್ಲಿ ಅವರಿಗೆ ಆಶ್ರಯ ನೀಡಿದೆವು

[47] ದೂತರೇ, ಶುದ್ಧವಾದುದನ್ನೇ ತಿನ್ನಿರಿ ಮತ್ತು ಸತ್ಕರ್ಮಗಳನ್ನು ಮಾಡಿರಿ. ನೀವು ಮಾಡುತ್ತಿರುವ ಎಲ್ಲವನ್ನೂ ನಾನು ಖಂಡಿತ ಬಲ್ಲೆನು

[48] ಖಂಡಿವಾಗಿಯೂ ಈ ನಿಮ್ಮ (ಮಾನವ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನೇ ನಿಮ್ಮ ಒಡೆಯನು. ನೀವು ನನಗೇ ಅಂಜಿರಿ

[49] ತರುವಾಯ ಅವರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟರು. ಪ್ರತಿಯೊಂದು ಗುಂಪಿನವರೂ ತಮ್ಮ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟರಾಗಿದ್ದಾರೆ

[50] ಒಂದು ನಿರ್ದಿಷ್ಟ ಸಮಯದ ತನಕ ನೀವು ಅವರನ್ನು ಅವರದೇ ಭ್ರಮೆಯಲ್ಲಿರಲು ಬಿಟ್ಟು ಬಿಡಿರಿ

[51] ಸಂಪತ್ತು ಮತ್ತು ಸಂತಾನಗಳ ಮೂಲಕ ನಾವು ಅವರಿಗೆ ನೀಡುತ್ತಿರುವ ನೆರವಿನ ಕುರಿತು ಅವರು ಏನೆಂದು ಭಾವಿಸಿದ್ದಾರೆ

[52] ಅವರಿಗೆ ಹಿತವನ್ನು ಮಾಡಲು ನಾವು ಆತುರಪಡುತ್ತಿದ್ದೇವೆಂದೇ? ನಿಜವಾಗಿ ಅವರಿಗೆ ಅರಿವಿಲ್ಲ

[53] ಅವರು (ಹಿತಕ್ಕೆ ಅರ್ಹರಾದವರು) ತಮ್ಮ ಒಡೆಯನ ಭಯದಿಂದ ಸದಾ ವಿನಮ್ರರಾಗಿರುತ್ತಾರೆ

[54] ಮತ್ತು ಅವರು ತಮ್ಮ ಒಡೆಯನ ವಚನಗಳನ್ನು ನಂಬುತ್ತಾರೆ

[55] ಅವರು ತಮ್ಮ ಒಡೆಯನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ

[56] ಅವರು (ದಾನವಾಗಿ) ತಾವು ಕೊಡುವುದನ್ನು ಕೊಡುತ್ತಲೇ ಇರುತ್ತಾರೆ ಮತ್ತು ಇಷ್ಟಾಗಿಯೂ ತಾವು ತಮ್ಮ ಒಡೆಯನ ಕಡೆಗೆ ಮರಳಲಿಕ್ಕಿದೆ ಎಂದು ಅವರ ಮನಸ್ಸುಗಳು ಅಂಜುತ್ತಿರುತ್ತವೆ

[57] ಅವರೇ, ಸತ್ಕಾರ್ಯಗಳನ್ನು ಮಾಡಲು ಆತುರ ಪಡುವವರು ಮತ್ತು ಅವುಗಳೆಡೆಗೆ ಸ್ಪರ್ಧಾತ್ಮಕವಾಗಿ ಧಾವಿಸಿ ಹೋಗುವವರು

[58] ನಾವಂತು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ ಮತ್ತು ಸತ್ಯವನ್ನು ಮಾತ್ರ ಹೇಳುವ ಒಂದು ಗ್ರಂಥವು ನಮ್ಮ ಬಳಿ ಇದೆ. (ಆದ್ದರಿಂದ) ಅವರ ಮೇಲೆ ಸ್ವಲ್ಪವೂ ಅನ್ಯಾಯವಾಗದು

[59] ನಿಜವಾಗಿ, ಅವರ (ಧಿಕ್ಕಾರಿಗಳ) ಮನಸ್ಸುಗಳು ಈ (ಸತ್ಯದ) ಕುರಿತು ನಿರಾಸಕ್ತವಾಗಿವೆ. ಇದಲ್ಲದೆ ಅವರು ಇನ್ನೂ ಹಲವು (ದುಷ್ಟ) ಕೃತ್ಯಗಳನ್ನು ಮಾಡುತ್ತಿದ್ದಾರೆ

[60] ಕೊನೆಗೆ, ನಾವು ಅವರಲ್ಲಿನ ಸಂಪನ್ನ ಜನರನ್ನು ಹಿಡಿದು ಶಿಕ್ಷಿಸಿದಾಗ ಅವರು ಮೊರೆ ಇಡಲಾರಂಭಿಸುವರು

[61] (ಆಗ ಅವರೊಡನೆ ಹೇಳಲಾಗುವುದು;) ಇಂದು ನೀವು ಮೊರೆ ಇಡಬೇಡಿ. ನಮ್ಮ ಕಡೆಯಿಂದ ನಿಮಗೆ ಖಂಡಿತ ಯಾವ ನೆರವೂ ಸಿಗದು

[62] ನಮ್ಮ ವಚನಗಳನ್ನು ನಿಮಗೆ ಓದಿ ಕೇಳಿಸಲಾಗುತ್ತಿತ್ತು. ಆಗ ನೀವು ಬೆನ್ನು ತಿರುಗಿಸಿ ಹೊರಟು ಬಿಡುತ್ತಿದ್ದಿರಿ

[63] ಆ ಕುರಿತು ನೀವು ಅಹಂಕಾರ ತೋರುತ್ತಿದ್ದಿರಿ ಮತ್ತು (ಸುಳ್ಳು) ಕತೆಗಳನ್ನು ಕಟ್ಟಿ ತೀರಾ ಕೆಟ್ಟ ಮಾತುಗಳನ್ನು ಆಡುತ್ತಿದ್ದಿರಿ

[64] ಅವರೇನು ಈ ಸಂದೇಶದ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಥವಾ ಅವರ ಪೂರ್ವಜರ ಬಳಿಗೆ ಬಂದಿರದಿದ್ದ ಏನಾದರೂ ಅವರ ಬಳಿಗೆ ಬಂದಿದೆಯೇ

[65] ಅಥವಾ ಅವರೇನು ತಮ್ಮ ದೇವದೂತನನ್ನು ಗುರುತಿಸದ ಕಾರಣ ಆತನನ್ನು ತಿರಸ್ಕರಿಸುತ್ತಿರುವರೇ

[66] ಅಥವಾ, ಆತನಿಗೆ ಹುಚ್ಚು ಹಿಡಿದಿದೆ ಎಂದು ಅವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು (ದೂತರು) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ

[67] ಒಂದು ವೇಳೆ ಸತ್ಯವು ಅವರ ಅಪೇಕ್ಷೆಗಳಿಗೆ ವಿಧೇಯವಾಗಿದ್ದರೆ, ಆಕಾಶಗಳೂ ಭೂಮಿಯೂ, ಅವುಗಳಲ್ಲಿ ಇರುವ ಎಲ್ಲರೂ ವಿನಾಶಕ್ಕೆ ತುತ್ತಾಗಿ ಬಿಡುತ್ತಿದ್ದರು. ನಿಜವಾಗಿ, ನಾವು ಅವರ ಬಳಿಗೆ ಅವರಿಗಾಗಿಯೇ ಇರುವ ಉಪದೇಶವನ್ನು ತಂದಿರುವೆವು. ಆದರೆ ಅವರು ತಮಗಾಗಿಯೇ ಇರುವ ಉಪದೇಶವನ್ನು ಕಡೆಗಣಿಸುತ್ತಿದ್ದಾರೆ

[68] (ದೂತರೇ,) ನೀವೇನು ಅವರೊಡನೆ ಏನಾದರೂ ಪಾವತಿಯನ್ನು ಕೇಳುತ್ತೀರಾ? ನಿಮ್ಮ ಒಡೆಯನ ವೇತನವೇ ನಿಮ್ಮ ಪಾಲಿಗೆ ಉತ್ತಮವಾಗಿದೆ ಮತ್ತು ಅವನು ಅತ್ಯುತ್ತಮ ಅನ್ನದಾತನಾಗಿದ್ದಾನೆ

[69] ನೀವು ಅವರನ್ನು ಸರಿಯಾದ ದಾರಿಯ ಕಡೆಗೆ ಕರೆಯುತ್ತಿರುವಿರಿ

[70] ಪರಲೋಕದಲ್ಲಿ ನಂಬಿಕೆ ಇಲ್ಲದವರು ಖಂಡಿತವಾಗಿಯೂ ನೇರ ಮಾರ್ಗದಿಂದ ದೂರವಿದ್ದಾರೆ

[71] ನಾವು ಅವರ ಮೇಲೆ ಕರುಣೆ ತೋರಿದರೆ ಮತ್ತು ಅವರ ಸಂಕಟವನ್ನು ನಿವಾರಿಸಿದರೆ ಅವರು ತಮ್ಮ ವಿದ್ರೋಹ ಧೋರಣೆಯಲ್ಲಿ ಮತ್ತಷ್ಟು ಸ್ಥಿರಗೊಳ್ಳುವರು ಮತ್ತು (ಸತ್ಯದಿಂದ, ಇನ್ನಷ್ಟು ದೂರ) ಅಲೆದಾಡುವರು

[72] ನಾವು ಶಿಕ್ಷಿಸುವುದಕ್ಕಾಗಿ ಅವರನ್ನು ಹಿಡಿಯುವವರೆಗೂ ಅವರು ವಿನಯ ತೋರಲಿಲ್ಲ ಮತ್ತು ತಮ್ಮ ಒಡೆಯನೆದುರು ಭಕ್ತಿ ಭಾವವನ್ನು ಪ್ರಕಟಿಸಲಿಲ್ಲ

[73] ಕೊನೆಗೆ ನಾವು ಅವರ ಪಾಲಿಗೆ ನಮ್ಮ ಕಠಿಣಶಿಕ್ಷೆಯ ಬಾಗಿಲನ್ನು ತೆರೆದು ಬಿಟ್ಟಾಗ ಅವರು ನಿರಾಶರಾಗಿ ಬಿಡುವರು

[74] ಅವನೇ, ನಿಮಗಾಗಿ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನಿರ್ಮಿಸಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ

[75] ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿ ಬಿಟ್ಟವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು

[76] ಅವನೇ ಬದುಕಿಸುವವನು ಮತ್ತು ಸಾಯಿಸುವವನು. ಅವನ ಆದೇಶಾನುಸಾರವೇ ಇರುಳು ಹಗಲುಗಳು ಬದಲಾಗುತ್ತಿರುತ್ತವೆ. ನೀವೇನು ಆಲೋಚಿಸುವುದಿಲ್ಲವೇ

[77] ನಿಜವಾಗಿ ಹಿಂದಿನವರು ಹೇಳಿದ್ದನ್ನೇ ಅವರೂ ಹೇಳುತ್ತಿದ್ದಾರೆ

[78] ಅವರು ಹೇಳುತ್ತಾರೆ; ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಜೀವಂತಗೊಳಿಸಲಾಗುವುದೇ

[79] ನಮಗೆ ನೀಡಲಾಗುತ್ತಿರುವ ಇದೇ ವಾಗ್ದಾನವನ್ನು ಈ ಹಿಂದೆ ನಮ್ಮ ಪೂರ್ವಜರಿಗೂ ನೀಡಲಾಗಿತ್ತು. ಇದೆಲ್ಲಾ ಕೇವಲ ಗತಕಾಲದ ಕಟ್ಟು ಕತೆಗಳು

[80] ‘‘ನೀವು ಬಲ್ಲವರಾಗಿದ್ದರೆ ತಿಳಿಸಿರಿ, ಈ ಭೂಮಿ ಮತ್ತು ಇದರಲ್ಲಿರುವ ಎಲ್ಲರೂ ಯಾರಿಗೆ ಸೇರಿದವರು?’’ ಎಂದು ಅವರೊಡನೆ ಕೇಳಿರಿ

[81] ‘‘ಅಲ್ಲಾಹನಿಗೆ’’ ಎಂದು ಅವರು ಉತ್ತರಿಸುವರು. ಹೇಳಿರಿ; ನೀವೇನು ಚಿಂತಿಸುವುದಿಲ್ಲವೇ

[82] ಹೇಳಿರಿ; ‘‘ಏಳು ಆಕಾಶಗಳ ಒಡೆಯನು ಯಾರು? ಮತ್ತು ಮಹಾನ್ ವಿಶ್ವಸಿಂಹಾಸನದ ಒಡೆಯನು ಯಾರು?‘‘

[83] ‘‘ಅವೆಲ್ಲಾ ಅಲ್ಲಾಹನಿಗೇ ಸೇರಿವೆ’’ ಎಂದು ಅವರು ಹೇಳುವರು. ಹೇಳಿರಿ; ಹಾಗಾದರೆ ನೀವು ಅಂಜುವುದಿಲ್ಲವೇ

[84] ಹೇಳಿರಿ; ಎಲ್ಲ ವಸ್ತುಗಳ ಮಾಲಕತ್ವವು ಯಾರ ಕೈಯಲ್ಲಿದೆ? ಆಶ್ರಯ ನೀಡುವವನು ಯಾರು? ಮತ್ತು ಯಾರ ವಿರುದ್ಧ ಆಶ್ರಯ ನೀಡಬಲ್ಲವರು ಯಾರೂ ಇಲ್ಲ? ನೀವು ಬಲ್ಲವರಾಗಿದ್ದರೆ ತಿಳಿಸಿರಿ

[85] ‘‘ಅಲ್ಲಾಹನು’’ ಎಂದು ಅವರು ಹೇಳುವರು. ನೀವು ಹೇಳಿರಿ; ಹಾಗಾದರೆ ನೀವು ಅದೆಂತಹ ಭ್ರಮೆಗೆ ತುತ್ತಾಗಿರುವಿರಿ

[86] ನಾವು ಸತ್ಯವನ್ನು ಅವರ ಬಳಿಗೆ ತಂದಿರುವೆವು. ಆದರೆ ಅವರು ಸುಳ್ಳು ಹೇಳುವವರಾಗಿದ್ದಾರೆ

[87] ಅಲ್ಲಾಹನು ಯಾರನ್ನೂ ತನ್ನ ಪುತ್ರನಾಗಿ ಆರಿಸಿಕೊಂಡಿಲ್ಲ ಮತ್ತು ಅವನ ಜೊತೆ ಬೇರಾವ ದೇವರೂ ಇಲ್ಲ. ಹಾಗೆ ಇದ್ದಿದ್ದರೆ ಅವರಲ್ಲಿ ಪ್ರತಿಯೊಬ್ಬರೂ ತಾವು ಸೃಷ್ಟಿಸಿದವುಗಳ ಜೊತೆ ಪ್ರತ್ಯೇಕ ಹೊರಟು ಬಿಡುತ್ತಿದ್ದರು ಮತ್ತು ಅವರೆಲ್ಲಾ ಪರಸ್ಪರರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಅಲ್ಲಾಹನು ಪಾವನನು ಮತ್ತು ಅವರು ಹೊರಿಸುವ ಎಲ್ಲ ಆರೋಪಗಳಿಂದ ಮುಕ್ತನು

[88] ಅವನು ಗುಪ್ತವಾಗಿರುವ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಬಲ್ಲವನು. ಮತ್ತು ನೀವು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ಅವನು ತುಂಬಾ ಉನ್ನತನು

[89] (ದೂತರೇ,) ಹೇಳಿರಿ; ನನ್ನೊಡೆಯಾ, ಅವರಿಗೆ ವಾಗ್ದಾನ ಮಾಡಲಾಗಿರುವುದನ್ನು (ಶಿಕ್ಷೆಯನ್ನು) ನೀನು ನನಗೆ ತೋರಿಸಿ ಕೊಟ್ಟರೂ –

[90] ನನ್ನೊಡೆಯಾ, ನನ್ನನ್ನು ಮಾತ್ರ (ಶಿಕ್ಷಾರ್ಹ) ಅಕ್ರಮಿಗಳ ಸಾಲಿಗೆ ಸೇರಿಸಬೇಡ

[91] ನಿಜವಾಗಿ ನಾವು, ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ ತೋರಿಸಿಕೊಡಲು ಖಂಡಿತ ಶಕ್ತರು

[92] (ಆದರೆ ನೀವು) ಕೆಡುಕನ್ನು ಅತ್ಯುತ್ತಮ ಕೃತ್ಯದ ಮೂಲಕವೇ ಎದುರಿಸಿರಿ. ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು

[93] ಮತ್ತು ನೀವು ಹೇಳಿರಿ; ನನ್ನೊಡೆಯಾ, ಶೈತಾನರ ಎಲ್ಲ ಪ್ರಚೋದನೆಗಳ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ

[94] ಮತ್ತು ನನ್ನೊಡೆಯಾ, ಅವರು (ಶೈತಾನರು) ನನ್ನ ಬಳಿಗೆ ಬರುವುದರ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ

[95] ಅವರ ಪೈಕಿ ಯಾರಾದರೊಬ್ಬರ ಮರಣದ ಸಮಯವು ಬಂದು ಬಿಟ್ಟಾಗ ಅವನು ಹೇಳುತ್ತಾನೆ; ‘‘ನನ್ನೊಡೆಯಾ, ನನ್ನನ್ನು ಮರಳಿ (ಇಹಲೋಕಕ್ಕೆ) ಕಳಿಸು’’

[96] ‘‘ನಾನು ಬಿಟ್ಟು ಬಂದಿರುವ ಜಗತ್ತಿನಲ್ಲಿ ನಾನು ಏನಾದರೂ ಸತ್ಕರ್ಮಗಳನ್ನು ಮಾಡುತ್ತೇನೆ.’’ ಖಂಡಿತ ಇಲ್ಲ. ಅದೆಲ್ಲಾ ಕೇವಲ ಅವನಾಡುವ ಮಾತು ಮಾತ್ರ. ಪುನಃ ಜೀವಂತಗೊಳಿಸಲಾಗುವ ದಿನದವರೆಗೂ ಅವರ ಮುಂದೆ ಒಂದು ತೆರೆ ಇರುವುದು

[97] (ಲೋಕಾಂತ್ಯದ) ಆ ಕಹಳೆಯನ್ನು ಊದಲಾದಾಗ ಅವರ ನಡುವೆ ಯಾವ ಸಂಬಂಧವೂ ಉಳಿದಿರಲಾರದು ಮತ್ತು ಅವರು ಪರಸ್ಪರ ವಿಚಾರಿಸುವ ಗೊಡವೆಗೂ ಹೋಗಲಾರರು

[98] ಅಂದು ಯಾರ (ಸತ್ಕರ್ಮಗಳ) ತಟ್ಟೆಗಳು ಭಾರವಾಗಿರುವವೋ ಅವರೇ ವಿಜಯಿಗಳಾಗುವರು

[99] ಇನ್ನು ಯಾರ ತಟ್ಟೆಗಳು ಹಗುರವಾಗಿರುವವೋ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ತುತ್ತಾಗಿಸಿಕೊಂಡವರಾಗಿರುವರು. ಅವರು ನರಕದಲ್ಲಿ ಸದಾಕಾಲ ಇರುವರು

[100] ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಟ್ಟಿರುವುದು ಮತ್ತು ಅವರು ಅದರಲ್ಲಿ ತೀರಾ ವಿಕೃತ ರೂಪಿಗಳಾಗಿ ಬಿಡುವರು

[101] (ಅವರೊಡನೆ ಹೇಳಲಾಗುವುದು;) ನಿಮಗೇನು, ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ನಿಜವಾಗಿ ನೀವು ಅವುಗಳನ್ನು ಸುಳ್ಳೆಂದು ತಿರಸ್ಕರಿಸಿದ್ದಿರಿ

[102] ಅವರು ಹೇಳುವರು; ನಮ್ಮೊಡೆಯಾ, ನಮ್ಮ ದೌರ್ಭಾಗ್ಯವು ನಮ್ಮನ್ನು ಸೋಲಿಸಿತು. ನಾವು ದಾರಿಗೆಟ್ಟಿದ್ದೆವು

[103] ನಮ್ಮೊಡೆಯಾ, ನಮ್ಮನ್ನು ಇಲ್ಲಿಂದ ಹೊರತೆಗೆ. ಆ ಬಳಿಕ ನಾವು (ಹಳೆಯ ಚಾಳಿಯನ್ನೇ) ಪುನರಾವರ್ತಿಸಿದರೆ, ಆಗ ಖಂಡಿತ ನಾವು ಅಕ್ರಮಿಗಳಾಗುವೆವು

[104] ಅವರೊಡನೆ ಹೇಳಲಾಗುವುದು; ನೀವು ಶಾಪ ಪೀಡಿತರಾಗಿ ಅಲ್ಲೇ (ನರಕದಲ್ಲೇ) ಬಿದ್ದು ಕೊಂಡಿರಿ ಮತ್ತು ನನ್ನೊಡನೆ ಮಾತನಾಡಬೇಡಿ

[105] ಅಲ್ಲಿ (ಇಹಲೋಕದಲ್ಲಿ) ನನ್ನ ದಾಸರ ಒಂದು ಗುಂಪಿತ್ತು. ‘‘ನಮ್ಮೊಡೆಯಾ, ನಾವು ನಂಬಿದೆವು ನಮ್ಮನ್ನು ಕ್ಷಮಿಸಿಬಿಡು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕರುಣಾಳು’’ ಎಂದು ಅವರು ಮೊರೆ ಇಡುತ್ತಿದ್ದರು

[106] ಆಗ ನೀವು ಅವರನ್ನು ಕೇವಲ ತಮಾಷೆಯ ವಸ್ತುಗಳಾಗಿ ಕಂಡಿರಿ. ಎಷ್ಟೆಂದರೆ, ಅವರು ನಿಮಗೆ ನನ್ನ ನೆನಪನ್ನೇ ಮರೆಸಿ ಬಿಟ್ಟರು ಮತ್ತು ನೀವು ಅವರ ಕುರಿತು ನಗುತ್ತಿದ್ದಿರಿ

[107] ಇಂದು, ಅವರ ಸಹನೆಯ ಪ್ರತಿಫಲವನ್ನು ನಾನು ಅವರಿಗೆ ನೀಡಿರುವೆನು. ಅವರು ಖಂಡಿತ ವಿಜಯಿಗಳು

[108] ವರ್ಷಗಳ ಲೆಕ್ಕ ಪ್ರಕಾರ, ನೀವು ಭೂಮಿಯಲ್ಲಿ ಎಷ್ಟು ಕಾಲ ಇದ್ದಿರಿ? ಎಂದು ಅವನು (ಅಲ್ಲಾಹನು) ಕೇಳುವನು

[109] ಅವರು ಹೇಳುವರು; ನಾವು ಒಂದು ದಿನ ಅಥವಾ ದಿನದ ಒಂದು ಭಾಗದಷ್ಟು ಕಾಲ (ಭೂಮಿಯಲ್ಲಿ) ಇದ್ದೆವು. ನೀನು ಲೆಕ್ಕಾಚಾರ ಬಲ್ಲವರೊಡನೆ ಕೇಳಿ ನೋಡು

[110] ಅವನು (ಅಲ್ಲಾಹನು) ಹೇಳುವನು; ನೀವು ತೀರಾ ಅಲ್ಪಕಾಲ ಮಾತ್ರ ಇದ್ದಿರಿ. ನೀವು ಇದನ್ನು ಮೊದಲೇ (ಇಹಲೋಕದಲ್ಲೇ) ಅರಿತಿದ್ದರೆಷ್ಟು ಚೆನ್ನಾಗಿತ್ತು

[111] ನೀವೇನು, ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆಂದೂ, ನಮ್ಮೆಡೆಗೆ ನೀವು ಮರಳಿ ಬರಲಾರಿರೆಂದೂ ಭಾವಿಸಿದ್ದಿರಾ

[112] ಅಲ್ಲಾಹನು ತುಂಬಾ ಉನ್ನತನು. ಅವನೇ ನೈಜ ದೊರೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ, ಗೌರವಾನ್ವಿತ ವಿಶ್ವ ಸಿಂಹಾಸನದ ನೈಜ ಒಡೆಯನು

[113] ಅಲ್ಲಾಹನ ಜೊತೆ ಇತರರನ್ನು ಸೇರಿಸಿ ದೇವರೆಂದು ಪ್ರಾರ್ಥಿಸುವವನ ಬಳಿ, ಆ ಕುರಿತು ಯಾವ ಪುರಾವೆಯೂ ಇಲ್ಲ. ಅವನ ಕರ್ಮಗಳ ಲೆಕ್ಕವು ಅವನ ಒಡೆಯನ ಬಳಿ ಇದೆ. ಧಿಕ್ಕಾರಿಗಳು ಖಂಡಿತ ವಿಜಯಿಗಳಾಗುವುದಿಲ್ಲ

[114] ಮತ್ತು ಹೇಳಿರಿ; ನನ್ನೊಡೆಯಾ, ಕ್ಷಮಿಸು ಮತ್ತು ಕರುಣೆ ತೋರು. ನೀನೇ ಅತ್ಯುತ್ತಮ ಕರುಣಾಳು

[115] ಇದು ನಾವು (ಅಲ್ಲಾಹ್) ಇಳಿಸಿಕೊಟ್ಟಿರುವ ಒಂದು ಅಧ್ಯಾಯ. ನಾವೇ ಇದನ್ನು ವಿಧಿಸಿರುವೆವು. ಮತ್ತು ನೀವು ಚೆನ್ನಾಗಿ ನೆನಪಿಡಬೇಕೆಂದು ಇದರಲ್ಲಿ ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿಕೊಟ್ಟಿರುವೆವು

[116] ವ್ಯಭಿಚಾರವೆಸಗಿದ ಸ್ತ್ರೀ ಮತ್ತು ವ್ಯಭಿಚಾರವೆಸಗಿದ ಪುರುಷ – ಅವರಲ್ಲಿ ಪ್ರತಿಯೊಬ್ಬರಿಗೂ ತಲಾ ನೂರು ಛಡಿ ಏಟುಗಳನ್ನು ಹೊಡೆಯಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅವರ ಮೇಲಿನ ಸಹಾನುಭೂತಿಯು ಅಲ್ಲಾಹನ ಧರ್ಮದ ವಿಷಯದಲ್ಲಿ ನಿಮ್ಮನ್ನು ತಡೆಯದಿರಲಿ ಮತ್ತು ಅವರ ಶಿಕ್ಷೆಯನ್ನು ವಿಶ್ವಾಸಿಗಳ ಒಂದು ಗುಂಪು ನೋಡಲಿ

[117] ವ್ಯಭಿಚಾರಿ ಪುರುಷನು ವ್ಯಭಿಚಾರಿ ಸ್ತ್ರೀಯನ್ನು ಅಥವಾ ಬಹುದೇವಾರಾಧಕಿಯನ್ನು ಮಾತ್ರ ವಿವಾಹವಾಗಲಿ. ಹಾಗೆಯೇ, ವ್ಯಭಿಚಾರಿ ಸ್ತ್ರೀಯನ್ನು ಒಬ್ಬ ವ್ಯಭಿಚಾರಿ ಪುರುಷನು ಅಥವಾ ಒಬ್ಬ ಬಹುದೇವಾರಾಧಕನು ಮಾತ್ರ ವಿವಾಹವಾಗಲಿ. ವಿಶ್ವಾಸಿಗಳ ಪಾಲಿಗೆ ಅದು (ವ್ಯಭಿಚಾರಿಗಳೊಂದಿಗೆ ವಿವಾಹ) ನಿಷಿದ್ಧವಾಗಿದೆ

[118] ಸುಶೀಲ ಸ್ತ್ರೀಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು, ಆ ಕುರಿತು ನಾಲ್ಕು ಮಂದಿ ಸಾಕ್ಷಿಗಳನ್ನು ತರದಿದ್ದರೆ, ಅವರಿಗೆ (ಆರೋಪ ಹೊರಿಸಿದವರಿಗೆ) ಎಂಭತ್ತು ಛಡಿಯೇಟುಗಳನ್ನು ಹೊಡೆಯಿರಿ ಮತ್ತು ಮುಂದೆಂದೂ ಅವರ ಸಾಕ್ಷವನ್ನು ಅಂಗೀಕರಿಸಬೇಡಿ. ಅವರು ಅವಿಧೇಯರು

ಬೆಳಕು

Surah 24

[1] ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[2] ಇನ್ನು, ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸಿದವರ ಬಳಿ ಸ್ವತಃ ತಮ್ಮ ಹೊರತು ಬೇರೆ ಸಾಕ್ಷಿಗಳಿಲ್ಲದಿದ್ದರೆ ಅಂತಹ ಪ್ರತಿಯೊಬ್ಬನು, ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ತಾನು ಖಂಡಿತ ಸತ್ಯವಂತನೆಂದು ಸಾಕ್ಷಿ ಹೇಳಬೇಕು

[3] ಮತ್ತು ಐದನೆಯ ಬಾರಿ, ತಾನು ಸುಳ್ಳು ಹೇಳುತ್ತಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪ ಎರಗಲಿ ಎನ್ನಬೇಕು

[4] ಇನ್ನು, ಆಕೆಯ ಮೇಲಿನ ಶಿಕ್ಷೆಯನ್ನು ನಿವಾರಿಸಲು, ಆಕೆಯು ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ಆತನು ಖಂಡಿತ ಸುಳ್ಳುಗಾರನೆಂದು ಸಾಕ್ಷಿ ಹೇಳಬೇಕು

[5] ಮತ್ತು ಐದನೆಯ ಬಾರಿ, ತಾನು ಸುಳ್ಳು ಹೇಳುತ್ತಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪ ಎರಗಲಿ ಎನ್ನಬೇಕು

[6] ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆ ಇಲ್ಲದೆ ಇದ್ದಿದ್ದರೆ (ಈ ಮಾರ್ಗದರ್ಶನವು ನಿಮಗೆ ಸಿಗುತ್ತಿರಲಿಲ್ಲ). ಮತ್ತು ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಹಾಗೂ ಯುಕ್ತಿವಂತನಾಗಿದ್ದಾನೆ

[7] ಆ ದೊಡ್ಡ ಸುಳ್ಳಾರೋಪವನ್ನು ನಿಮ್ಮೊಳಗೇ ಇರುವ ಒಂದು ಗುಂಪು ಸೃಷ್ಟಿಸಿದೆ. ಅದು ನಿಮ್ಮ ಪಾಲಿಗೆ ಕೆಟ್ಟದೆಂದು ನೀವು ಭಾವಿಸಬೇಡಿ. ನಿಜವಾಗಿ, ಅದು ನಿಮ್ಮ ಪಾಲಿಗೆ ಒಳ್ಳೆಯದೇ ಆಗಿದೆ. ಅವರ ಪೈಕಿ ಪ್ರತಿಯೊಬ್ಬರಿಗೂ ಆತನು ಮಾಡಿದಷ್ಟು ಪಾಪದ ಪಾಲು ಸಿಗಲಿದೆ. ಇನ್ನು ಅವರಲ್ಲಿ ದೊಡ್ಡ ಪಾತ್ರ ವಹಿಸಿದವನಿಗಂತೂ ಘೋರ ಶಿಕ್ಷೆ ಕಾದಿದೆ

[8] ನೀವು ಅದನ್ನು (ಸುಳ್ಳಾರೋಪವನ್ನು) ಕೇಳಿದಾಗ, ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರೆಲ್ಲಾ ತಮ್ಮವರ ಕುರಿತು ಒಳ್ಳೆಯ ಅಭಿಪ್ರಾಯವನ್ನು ತಾಳಿ, ‘‘ಇದು ಶುದ್ಧ ಸುಳ್ಳಾರೋಪ ’’ ಎಂದೇಕೆ ಹೇಳಲಿಲ್ಲ

[9] ಅವರು (ಆರೋಪ ಹೊರಿಸಿದವರು) ಆ ಕುರಿತು ನಾಲ್ವರು ಸಾಕ್ಷಿಗಳನ್ನೇಕೆ ತರಲಿಲ್ಲ? ಈ ರೀತಿ ಅವರು ಸಾಕ್ಷಿಗಳನ್ನು ತರದಿದ್ದಾಗ ಅಲ್ಲಾಹನ ದೃಷ್ಟಿಯಲ್ಲಿ ಅವರೇ ಸುಳ್ಳುಗಾರರಾಗಿರುತ್ತಾರೆ

[10] ನಿಮ್ಮ ಮೇಲೆ ಇಹಲೋಕದಲ್ಲೂ ಪರಲೋಕದಲ್ಲೂ ಅಲ್ಲಾಹನ ಕೃಪೆ ಇಲ್ಲದೆ ಇದ್ದಿದ್ದರೆ, ನೀವು ನಿರತರಾಗಿದ್ದ ಕ್ರಿಯೆಯಿಂದಾಗಿ ಒಂದು ಘೋರ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುತ್ತಿತ್ತು

[11] ನೀವು ಅದನ್ನು ಚರ್ಚಿಸುತ್ತಿದ್ದಾಗ ಮತ್ತು ನಿಮಗೆ ತಿಳಿಯದೆ ಇದ್ದ ವಿಷಯದ ಕುರಿತು ನೀವು ಮಾತನಾಡುತ್ತಿದ್ದಾಗ, ನೀವು ಅದನ್ನು ಒಂದು ಹಗುರ ವಿಚಾರವೆಂದು ಭಾವಿಸಿದ್ದಿರಿ. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಅದು ಭಾರೀ ದೊಡ್ಡ ವಿಚಾರವಾಗಿತ್ತು

[12] ನೀವು ಅದನ್ನು ಕೇಳಿದಾಗಲೇ, ‘‘ನಾವು ಇಂತಹ ಮಾತುಗಳನ್ನಾಡುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ದೋಷರಹಿತನು – ಇದು ಘೋರ ಸುಳ್ಳಾರೋಪವಾಗಿದೆ’’ ಎಂದೇಕೆ ಹೇಳಿ ಬಿಡಲಿಲ್ಲ

[13] ನೀವು ವಿಶ್ವಾಸಿಗಳಾಗಿದ್ದರೆ ಇಂತಹ ಕೃತ್ಯವನ್ನು ಮತ್ತೆಂದೂ ಮಾಡಬೇಡಿ ಎಂದು ಅಲ್ಲಾಹನು ನಿಮಗೆ ಉಪದೇಶಿಸುತ್ತಾನೆ

[14] ಅಲ್ಲಾಹನು ನಿಮಗೆ (ತನ್ನ) ವಚನಗಳನ್ನು ವಿವರಿಸುತ್ತಾನೆ. ಅಲ್ಲಾಹನು ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ

[15] ವಿಶ್ವಾಸಿಗಳ ನಡುವೆ ಅನೈತಿಕತೆಯನ್ನು ಹರಡಬಯಸುವವರಿಗೆ ಖಂಡಿತವಾಗಿಯೂ ಈ ಲೋಕದಲ್ಲೂ ಪರಲೋಕದಲ್ಲೂ ಯಾತನಾಮಯ ಶಿಕ್ಷೆ ಇದೆ. ಅಲ್ಲಾಹನು ಬಲ್ಲನು. ನೀವು ಬಲ್ಲವರಲ್ಲ

[16] ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆಯು ನಿಮ್ಮ ಮೇಲೆ ಇಲ್ಲದೆ ಇದ್ದಿದ್ದರೆ (ನಿಮಗೆ ಈ ಮಾರ್ಗದರ್ಶನವು ಸಿಗುತ್ತಿರಲಿಲ್ಲ). ಮತ್ತು ಅಲ್ಲಾಹನು ತುಂಬಾ ವಾತ್ಸಲ್ಯಮಯಿ ಮತ್ತು ಕರುಣಾಳುವಾಗಿದ್ದಾನೆ

[17] ವಿಶ್ವಾಸಿಗಳೇ, ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸಬೇಡಿ. ಶೈತಾನನು ತನ್ನ ಹೆಜ್ಜೆಗುರುತುಗಳನ್ನು ಅನುಸರಿಸುವವರಿಗೆ ಅನೈತಿಕ ಹಾಗೂ ದುಷ್ಟ ಕೆಲಸಗಳನ್ನು ಆದೇಶಿಸುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಹಾಗೂ ಅವನ ಕೃಪೆ ಇಲ್ಲದೆ ಇದ್ದಿದ್ದರೆ, ನಿಮ್ಮಲ್ಲಿ ಯಾರೊಬ್ಬರೂ ಎಂದಿಗೂ ಶುದ್ಧ ಶೀಲದವರಾಗಿ ಉಳಿದಿರುತ್ತಿರಲಿಲ್ಲ. ನಿಜವಾಗಿ ಅಲ್ಲಾಹನೇ ತಾನಿಚ್ಛಿಸಿದವರನ್ನು ಶುದ್ಧವಾಗಿಡುತ್ತಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ಬಲ್ಲವನಾಗಿದ್ದಾನೆ

[18] ನಿಮ್ಮಲ್ಲಿನ ಸ್ಥಿತಿವಂತರು ಹಾಗೂ ಅನುಕೂಲಸ್ಥರು ಯಾರೂ, ಬಂಧುಗಳಿಗೆ ಬಡವರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ಏನನ್ನೂ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬಾರದು. ಅವರು ಕ್ಷಮಿಸಬೇಕು ಮತ್ತು (ಇತರರ ತಪ್ಪುಗಳನ್ನು) ಕಡೆಗಣಿಸಬೇಕು. ನೀವೇನು, ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[19] ಮಾನವಂತ, ಮುಗ್ಧ, ವಿಶ್ವಾಸಿ ಮಹಿಳೆಯರ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಖಂಡಿತ ಇಹಲೋಕದಲ್ಲೂ ಪರಲೋಕದಲ್ಲೂ ಶಾಪಗ್ರಸ್ತರಾಗಿರುತ್ತಾರೆ ಮತ್ತು ಅವರಿಗೆ ಘೋರ ಶಿಕ್ಷೆ ಸಿಗಲಿದೆ

[20] ಅವರು ಏನೆಲ್ಲಾ ಮಾಡುತ್ತಿದ್ದರೆಂದು ಅವರದೇ ನಾಲಿಗೆಗಳು, ಅವರದೇ ಕೈಗಳು ಮತ್ತು ಅವರದೇ ಕಾಲುಗಳು ಅವರ ವಿರುದ್ಧ ಸಾಕ್ಷ ಹೇಳುವ ದಿನ (ಖಂಡಿತ ಬರಲಿದೆ)

[21] ಆ ದಿನ ಅಲ್ಲಾಹನು ಅವರಿಗೆ ಅವರ ಸಂಪೂರ್ಣ ಪ್ರತಿಫಲವನ್ನು ನ್ಯಾಯೋಚಿತವಾಗಿ ನೀಡುವನು ಮತ್ತು ಅಲ್ಲಾಹನೇ ಅತ್ಯಂತ ವ್ಯಕ್ತ ಸತ್ಯ ಎಂಬುದನ್ನು ಅಂದು ಅವರು ಅರಿಯುವರು

[22] ನೀಚ ಸ್ತ್ರೀಯರು ಇರುವುದೇ ನೀಚ ಪುರುಷರಿಗಾಗಿ ಮತ್ತು ನೀಚ ಪುರುಷರು ಇರುವುದೇ ನೀಚ ಸ್ತ್ರೀಯರಿಗಾಗಿ. ಇನ್ನು, ಸುಶೀಲ ಸ್ತ್ರೀಯರು ಇರುವುದು ಸುಶೀಲ ಪುರುಷರಿಗಾಗಿ ಮತ್ತು ಸುಶೀಲ ಪುರುಷರು ಇರುವುದು ಸುಶೀಲ ಸ್ತ್ರೀಯರಿಗಾಗಿ. ಜನರು ಆಡುವ ಎಲ್ಲ ಮಾತುಗಳಿಂದ ಅವರು ಮುಕ್ತರಾಗಿರುತ್ತಾರೆ. ಅವರಿಗೆ ಕ್ಷಮೆ ಹಾಗೂ ಗೌರವಯುತವಾದ ಸಂಪನ್ನತೆ ದೊರೆಯಲಿದೆ

[23] ವಿಶ್ವಾಸಿಗಳೇ, ನಿಮ್ಮದಲ್ಲದ ಮನೆಯನ್ನು, ಪೂರ್ವಾನುಮತಿ ಪಡೆಯದೆ ಹಾಗೂ ಆ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬಾರದು. ನೀವು ಉಪದೇಶ ಸ್ವೀಕರಿಸುವವರಾಗಿದ್ದರೆ ಇದುವೇ ನಿಮ್ಮ ಪಾಲಿಗೆ ಉತ್ತಮ ಕ್ರಮವಾಗಿದೆ

[24] ಒಂದು ವೇಳೆ ಅಲ್ಲಿ ನಿಮಗೆ ಯಾರೂ ಕಾಣಸಿಗದಿದ್ದರೆ, ಆಗಲೂ ಅನುಮತಿ ಇಲ್ಲದೆ ಅದರೊಳಗೆ ಪ್ರವೇಶಿಸಬೇಡಿ. ಇನ್ನು, ಮರಳಿ ಹೋಗಿರೆಂದು ನಿಮ್ಮೊಡನೆ ಹೇಳಲಾದರೆ ಮರಳಿ ಹೋಗಿರಿ. ನಿಮ್ಮ ಪಾಲಿಗೆ ಅದುವೇ ಹೆಚ್ಚು ಪರಿಶುದ್ಧ ಕ್ರಮವಾಗಿದೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು

[25] ಜನವಾಸ ಇಲ್ಲದ ಮತ್ತು ನಿಮಗೇನಾದರೂ ಲಾಭವಿರುವ ಮನೆಗಳನ್ನು ನೀವು ಪ್ರವೇಶಿಸಿದರೆ ಮಾತ್ರ ನಿಮ್ಮ ಮೇಲೆ ಪಾಪವೇನಿಲ್ಲ. ನೀವು ಪ್ರಕಟಿಸುವ ಮತ್ತು ನೀವು ಬಚ್ಚಿಡುವ ಎಲ್ಲವನ್ನೂ ಅಲ್ಲಾಹನು ಬಲ್ಲನು

[26] ವಿಶ್ವಾಸಿ ಪುರುಷರೊಡನೆ, ತಮ್ಮ ದೃಷ್ಟಿಗಳನ್ನು ತಗ್ಗಿಸಿಡಲು ಹಾಗೂ ತಮ್ಮ ಮಾನಗಳನ್ನು ಕಾಪಾಡಿಕೊಳ್ಳಲು ಹೇಳಿರಿ. ಇದು ಅವರ ಪಾಲಿಗೆ ಹೆಚ್ಚು ಶುದ್ಧ ಕ್ರಮವಾಗಿದೆ. ಅವರು ಮಾಡುತ್ತಿರುವ ಸಕಲವನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ

[27] ವಿಶ್ವಾಸಿ ಸ್ತ್ರೀಯರೊಡನೆ ಹೇಳಿರಿ; ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಡಲಿ, ತಮ್ಮ ಮಾನಗಳನ್ನು ಕಾಪಾಡಿಕೊಳ್ಳಲಿ ಮತ್ತು ಅವರು ತಮ್ಮ ಶೃಂಗಾರವನ್ನು ಪ್ರದರ್ಶಿಸದಿರಲಿ – ಆ ಪೈಕಿ ಸಹಜವಾಗಿ ಪ್ರಕಟವಾಗುವುದರ ಹೊರತು. ಮತ್ತು ಅವರು ತಮ್ಮ ಹೊದಿಕೆಗಳನ್ನು ತಮ್ಮ ಎದೆಯ ಮೇಲೆ ಹೊದ್ದುಕೊಂಡಿರಲಿ. ಮತ್ತು ಅವರು ತಮ್ಮ ಶೃಂಗಾರವನ್ನು ಪ್ರದರ್ಶಿಸಬಾರದು – ತಮ್ಮ ಪತಿ ಅಥವಾ ತಮ್ಮ ತಂದೆ, ಅಥವಾ ತಮ್ಮ ಪತಿಯ ತಂದೆ ಅಥವಾ ತಮ್ಮ ಪುತ್ರರು ಅಥವಾ ತಮ್ಮ ಪತಿಯ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಸಹೋದರರ ಪುತ್ರರು ಅಥವಾ ತಮ್ಮ ಸಹೋದರಿಯರ ಪುತ್ರರು ಅಥವಾ ತಮಗೆ ಆಪ್ತರಾಗಿರುವ ಸ್ತ್ರೀಯರು ಅಥವಾ ತಮ್ಮ ದಾಸಿಯರು ಅಥವಾ ತೀರಾ ನಿರಾಸಕ್ತರಾಗಿರುವ ಸೇವಕ ಪುರುಷರು ಅಥವಾ ಮಹಿಳೆಯರ ಗುಟ್ಟುಗಳ ಅರಿವೇ ಇಲ್ಲದ ಮಕ್ಕಳ ಹೊರತು ಇತರರಿಗೆ. ಮತ್ತು ಅವರು, ತಾವು ಅಡಗಿಸಿಟ್ಟ ಶೃಂಗಾರವು ಪ್ರಕಟವಾಗುವ ರೀತಿಯಲ್ಲಿ ತಮ್ಮ ಕಾಲುಗಳನ್ನು ಅಪ್ಪಳಿಸುತ್ತಾ ನಡೆಯಬಾರದು. ವಿಶ್ವಾಸಿಗಳೇ, ನೀವೆಲ್ಲರೂ ಸೇರಿ ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಿರಿ. ನೀವು ವಿಜಯಿಗಳಾಗಬಹುದು

[28] ನೀವು ನಿಮ್ಮಲ್ಲಿನ ವಿಧವೆಯರು ಹಾಗು ವಿಧುರರಿಗೆ, ನಿಮ್ಮ ಸಜ್ಜನ ದಾಸರಿಗೆ ಮತ್ತು ನಿಮ್ಮ ದಾಸಿಯರಿಗೆ ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರಾಗಿಸುವನು. ಅಲ್ಲಾಹನು ವಿಶಾಲನೂ ಜ್ಞಾನಿಯೂ ಆಗಿದ್ದಾನೆ

[29] ಇನ್ನು ವಿವಾಹವಾಗಲು ಸಾಧ್ಯವಾಗದವರು, ಅಲ್ಲಾಹನು ತನ್ನ ಅನುಗ್ರಹದಿಂದ ತಮ್ಮನ್ನು ಸಂಪನ್ನಗೊಳಿಸುವ ತನಕ ತಮ್ಮನ್ನು ನಿಯಂತ್ರಿಸಿಕೊಂಡಿರಲಿ. ನಿಮ್ಮ ದಾಸ್ಯದಲ್ಲಿರುವವರ ಪೈಕಿ (ಬಿಡುಗಡೆಯ) ಒಪ್ಪಂದ ಮಾಡಿಕೊಳ್ಳಲು ಬಯಸುವವರಲ್ಲಿ ಏನಾದರೂ ಒಳಿತು ಇದೆ ಎಂದು ನಿಮಗೆ ತಿಳಿದಿದ್ದರೆ ನೀವು ಅವರ ಜೊತೆ ಒಪ್ಪಂದ ಮಾಡಿಕೊಳ್ಳಿರಿ ಮತ್ತು ಅಲ್ಲಾಹನು ನಿಮಗೆ ಕೊಟ್ಟಿರುವ ಸಂಪತ್ತಿನ ಒಂದು ಭಾಗವನ್ನು ಅವರಿಗೆ ಕೊಡಿರಿ. ಮತ್ತು ನಿಮ್ಮ ದಾಸಿಯರು ಸುಶೀಲೆಯರಾಗಿರಲು ಬಯಸುತ್ತಿರುವಾಗ ನೀವು ಕೇವಲ ಲೌಕಿಕ ಬದುಕಿನ ಲಾಭಕ್ಕಾಗಿ ಅವರನ್ನು ಅನೈತಿಕ ಕೃತ್ಯಕ್ಕೆ ಬಲವಂತ ಪಡಿಸಬೇಡಿ. ಇನ್ನು ಯಾರಾದರೂ ಅವರ ಮೇಲೆ ಬಲವಂತ ನಡೆಸಿದರೆ, ಆ ಬಳಿಕ (ಆ ದಾಸಿಯರ ಪಾಲಿಗೆ) ಅಲ್ಲಾಹನು ಖಂಡಿತವಾಗಿಯೂ ಕ್ಷಮಾಶೀಲನೂ ಕರುಣಾಳುವೂ ಆಗಿರುತ್ತಾನೆ

[30] ಸ್ಪಷ್ಟವಾದ ವಚನಗಳನ್ನೂ, ನಿಮಗಿಂತ ಹಿಂದೆ ಗತಿಸಿ ಹೋದವರ ಉದಾಹರಣೆಗಳನ್ನೂ, ಧರ್ಮನಿಷ್ಠರಿಗಾಗಿ ಬೋಧನೆಗಳನ್ನೂ ನಾವು ನಿಮ್ಮೆಡೆಗೆ ಇಳಿಸಿ ಕೊಟ್ಟಿರುವೆವು

[31] ಅಲ್ಲಾಹನೇ ಆಕಾಶಗಳ ಮತ್ತು ಭೂಮಿಯ ಪ್ರಕಾಶ. ಅದರ ಉದಾಹರಣೆ ಹೀಗಿದೆ; ಗೋಡೆ ಗೂಡಿನಲ್ಲಿ ಒಂದು ದೀಪವಿದೆ. ದೀಪವು ಗಾಜಿನೊಳಗಿದೆ. ಗಾಜು ಮಿನುಗುವ ನಕ್ಷತ್ರದಂತಿದೆ. ಪೂರ್ವದ್ದಾಗಲಿ ಪಶ್ಚಿಮದ್ದಾಗಲಿ ಅಲ್ಲದ ಸಮೃದ್ಧ ಝೈತೂನ್ ಮರದಿಂದ (ಅದರ ಎಣ್ಣೆ.ಯಿಂದ) ಅದನ್ನು ಬೆಳಗಲಾಗಿದೆ. ಅದು ಬೆಂಕಿ ತಗುಲದಿದ್ದರೂ ಉರಿದು ಬೆಳಗುವಂತಿದೆ, ಪ್ರಕಾಶದ ಮೇಲೆ ಮತ್ತೆ ಪ್ರಕಾಶ. ಅಲ್ಲಾಹನೇ ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ನಡೆಸುತ್ತಾನೆ. ಹೀಗೆ ಅಲ್ಲಾಹನು ಮಾನವರಿಗಾಗಿ ಉದಾಹರಣೆಗಳನ್ನು ಮುಂದಿಡುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನಾಗಿದ್ದಾನೆ

[32] ಆ ಭವನಗಳಲ್ಲಿ (ಮಸೀದಿಗಳಲ್ಲಿ) ತನ್ನ ಹೆಸರನ್ನು ಮೊಳಗಿಸುತ್ತಾ ತನ್ನನ್ನು ಪ್ರಸ್ತಾಪಿಸುತ್ತಿರಬೇಕು ಮತ್ತು ಮುಂಜಾನೆಯಲ್ಲೂ ಸಂಜೆಯ ಹೊತ್ತಿನಲ್ಲೂ ತನ್ನ ಪಾವಿತ್ರವನ್ನು ಜಪಿಸುತ್ತಿರಬೇಕು ಎಂದು ಅಲ್ಲಾಹನು ಆದೇಶಿಸಿರುತ್ತಾನೆ

[33] (ಅಲ್ಲಿರುವವರು ಎಂಥವರೆಂದರೆ,) ಅವರ ವ್ಯಾಪಾರವಾಗಲಿ ವ್ಯವಹಾರವಾಗಲಿ ಅವರನ್ನು ನಮಾಝ್‌ನ ಪಾಲನೆಯಿಂದ ಮತ್ತು ಝಕಾತ್‌ಅನ್ನು ಪಾವತಿಸುವುದರಿಂದ ತಡೆಯುವುದಿಲ್ಲ. ಹೃದಯಗಳು ಹಾಗೂ ದೃಷ್ಟಿಗಳು ಹೊರಳಿ ಬಿಡುವ ಒಂದು ದಿನದ ಕುರಿತು ಅವರು ಅಂಜುತ್ತಿರುತ್ತಾರೆ

[34] ಏಕೆಂದರೆ ಅಲ್ಲಾಹನು ಅವರಿಗೆ ಅವರ ಅತ್ಯುತ್ತಮ ಕರ್ಮಕ್ಕನುಸಾರವಾದ ಪ್ರತಿಫಲ ನೀಡಲಿದ್ದಾನೆ. ಮಾತ್ರವಲ್ಲ, ಅವನು ತನ್ನ ಅನುಗ್ರಹದಿಂದ ಅವರಿಗೆ ಇನ್ನೂ ಹೆಚ್ಚಿನದನ್ನು ನೀಡಲಿದ್ದಾನೆ. ಅಲ್ಲಾಹನಂತು ತಾನಿಚ್ಛಿಸಿದವರಿಗೆ ಎಣಿಕೆ ಇಲ್ಲದಷ್ಟು ದಯಪಾಲಿಸುತ್ತಾನೆ

[35] ಧಿಕ್ಕಾರಿಗಳ ಕರ್ಮಗಳೆಲ್ಲಾ ಬಟ್ಟ ಬಯಲಲ್ಲಿರುವ ಮರೀಚಿಕೆಯಂತಿರುತ್ತವೆ. ದಾಹಿಯು, ಅದುವೇ ನೀರೆಂದು ಭ್ರಮಿಸುತ್ತಾನೆ. ಕೊನೆಗೆ ಅವನು ಅದರ ಹತ್ತಿರ ಹೋದಾಗ ಅಲ್ಲಿ ಅವನು ಏನನ್ನೂ ಕಾಣುವುದಿಲ್ಲ. ನಿಜವಾಗಿ ಅವನು ತನ್ನ ಬಳಿ ಅಲ್ಲಾಹನನ್ನು ಕಾಣುತ್ತಾನೆ ಮತ್ತು ಅವನು (ಅಲ್ಲಾಹನು) ಆತನ ವಿಚಾರಣೆಯನ್ನು ಮುಗಿಸಿ ಬಿಡುತ್ತಾನೆ. ಅಲ್ಲಾಹನಂತು ಬಹಳ ವೇಗವಾಗಿ ವಿಚಾರಣೆ ನಡೆಸುವವನಾಗಿದ್ದಾನೆ

[36] ಅಥವಾ ಅವರ (ಕರ್ಮಗಳ) ಸ್ಥಿತಿಯು, ಕಡಲಿನ ಆಳದಲ್ಲಿರುವ ಕತ್ತಲೆಯಂತಿದೆ. ಅದನ್ನು ಮುಚ್ಚಿಡಲು ಅದರ ಮೇಲೆ ಒಂದು ಅಲೆ ಮತ್ತು ಆ ಅಲೆಯ ಮೇಲೆ ಮತ್ತೊಂದು ಅಲೆ ಇರುತ್ತದೆ ಮತ್ತು ಅದರ ಮೇಲೆ ಮೋಡ ಕವಿದಿರುತ್ತದೆ. ಕತ್ತಲ ಮೇಲೆ ಕತ್ತಲು. ಎಷ್ಟೆಂದರೆ, ಅಲ್ಲಿ ಯಾರಾದರೂ ತನ್ನ ಕೈಯನ್ನು ಹೊರ ಚಾಚಿದರೆ ಅದನ್ನು ಕಾಣಲು ಅವನಿಗೆ ಸಾಧ್ಯವಾಗದು. ಯಾರಿಗೆ ಅಲ್ಲಾಹನು ಪ್ರಕಾಶವನ್ನು ನೀಡಲಿಲ್ಲವೋ ಅವನಿಗೆ ಪ್ರಕಾಶವೇ ಇಲ್ಲ

[37] ನೀವು ನೋಡಲಿಲ್ಲವೇ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಮತ್ತು ರೆಕ್ಕೆ ಹರಡಿಕೊಂಡಿರುವ ಹಕ್ಕಿಗಳೂ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಿವೆ. ಪ್ರತಿಯೊಬ್ಬರಿಗೂ ಅವನನ್ನು ನಮಿಸುವ ಮತ್ತು ಅವನ ಮಹಿಮೆಯನ್ನು ಕೊಂಡಾಡುವ ವಿಧಾನ ತಿಳಿದಿದೆ. ಅಲ್ಲಾಹನಂತು ಅವರು ಮಾಡುತ್ತಿರುವ ಎಲ್ಲವನ್ನೂ ಬಲ್ಲನು

[38] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಎಲ್ಲರೂ ಅಲ್ಲಾಹನೆಡೆಗೇ ಮರಳುವರು

[39] ನೀವು ನೋಡಲಿಲ್ಲವೇ, ಅಲ್ಲಾಹನು ಮೋಡಗಳನ್ನು ಚಲಾಯಿಸುತ್ತಾನೆ. ಆ ಬಳಿಕ ಅವನು ಅವುಗಳನ್ನು ಪರಸ್ಪರ ಜೋಡಿಸುತ್ತಾನೆ. ತರುವಾಯ ಅವನು ಅವುಗಳನ್ನು ಪದರಗಳಾಗಿಸುತ್ತಾನೆ. ಅನಂತರ ಅದರೊಳಗಿಂದ ಮಳೆಯು ಹೊರಡುವುದನ್ನು ನೀವು ಕಾಣುತ್ತೀರಿ. ಮತ್ತು ಆಕಾಶದಿಂದ ಹಿಮ ತುಂಬಿದ ಪರ್ವತಗಳೇ ಇಳಿಯತೊಡಗುತ್ತವೆ. ಆಮೂಲಕ ಅವನು ತಾನಿಚ್ಛಿಸಿದವರನ್ನು ವಿಪತ್ತಿಗೆ ಸಿಲುಕಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅದರಿಂದ ರಕ್ಷಿಸುತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕುರುಡಾಗಿಸುವಂತಿರುತ್ತದೆ

[40] ಅಲ್ಲಾಹನೇ, ಇರುಳು ಮತ್ತು ಹಗಲುಗಳನ್ನು ಪರಿವರ್ತಿಸುತ್ತಿರುವವನು. ಕಾಣಬಲ್ಲವರಿಗೆ (ಬುದ್ಧಿವಂತರಿಗೆ) ಇದರಲ್ಲಿ ಖಂಡಿತ ಪಾಠವಿದೆ

[41] ಅಲ್ಲಾಹನು ಎಲ್ಲ ಜೀವಿಗಳನ್ನು ನೀರಿನಿಂದ ಸೃಷ್ಟಿಸಿರುವನು. ಅವುಗಳಲ್ಲಿ ಕೆಲವು ತಮ್ಮ ಹೊಟ್ಟೆಗೆ ಒರಗಿಕೊಂಡು ಚಲಿಸುತ್ತವೆ, ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತವೆ ಮತ್ತು ಕೆಲವು ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

[42] ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿರುತ್ತೇವೆ. ಇನ್ನು ಅಲ್ಲಾಹನೇ ತಾನಿಚ್ಛಿಸಿದವರನ್ನು ಸ್ಥಿರವಾದ ನೇರಮಾರ್ಗದೆಡೆಗೆ ಮುನ್ನಡೆಸುತ್ತಾನೆ

[43] ನಾವು ಅಲ್ಲಾಹನನ್ನೂ ಅವನ ದೂತರನ್ನೂ ನಂಬಿರುವೆವು ಮತ್ತು ನಾವು (ಅವರ) ಆದೇಶಪಾಲಿಸಿದೆವು ಎಂದು ಅವರು ಹೇಳುತ್ತಾರೆ. ಆ ಬಳಿಕ ಅವರಲ್ಲಿನ ಒಂದು ಗುಂಪು ತಿರುಗಿ ನಿಲ್ಲುತ್ತದೆ. ಅವರು ವಿಶ್ವಾಸಿಗಳಲ್ಲ

[44] ಅವರ ನಡುವೆ ನ್ಯಾಯ ತೀರ್ಮಾನ ಕೈಗೊಳ್ಳುವುದಕ್ಕಾಗಿ ಅವರನ್ನು ಅಲ್ಲಾಹ್ ಮತ್ತು ಅವನ ದೂತರೆಡೆಗೆ ಕರೆದಾಗ ಅವರಲ್ಲಿನ ಒಂದು ಗುಂಪು ಜಾರಿ ಕೊಳ್ಳುತ್ತದೆ

[45] ಒಂದು ವೇಳೆ ಅವರಿಗೇನಾದರೂ ಹಕ್ಕು ಸಿಗಲಿಕ್ಕಿದ್ದರೆ, (ಆಗ ಮಾತ್ರ) ಅವರು ವಿನಯ ಶೀಲರಾಗಿ ನಿಮ್ಮ ಬಳಿಗೆ ಬರುತ್ತಾರೆ

[46] ಅವರ ಮನಗಳಲ್ಲೇನು ರೋಗವಿದೆಯೇ? ಅಥವಾ ಅವರು ಸಂಶಯ ಪೀಡಿತರಾಗಿದ್ದಾರೆಯೇ? ಅಥವಾ ಅಲ್ಲಾಹ್ ಮತ್ತು ಅವನ ದೂತರು ಅವರ ಮೇಲೆ ಅಕ್ರಮವೆಸಗುವರೆಂದು ಅವರು ಅಂಜುತ್ತಿದ್ದಾರೆಯೇ? ನಿಜವಾಗಿ ಅವರೇ ಅಕ್ರಮಿಗಳಾಗಿದ್ದಾರೆ

[47] (ಆದರೆ) ವಿಶ್ವಾಸಿಗಳನ್ನು ಅವರ ನಡುವಣ ನ್ಯಾಯ ತೀರ್ಮಾನಕ್ಕೆಂದು ಅಲ್ಲಾಹ್ ಮತ್ತು ಆತನ ದೂತರ ಕಡೆಗೆ ಕರೆಯಲಾದಾಗ ಅವರು, ನಾವು ಕೇಳಿದೆವು ಮತ್ತು ಅನುಸರಿಸಿದೆವು ಎಂದು ಬಿಡುತ್ತಾರೆ. ಅವರೇ ವಿಜಯಿಗಳು

[48] ಅಲ್ಲಾಹ್ ಮತ್ತವನ ದೂತರ ಆಜ್ಞೆ ಪಾಲಿಸುವವನು, ಅಲ್ಲಾಹನ ಭಯ ಉಳ್ಳವನು ಮತ್ತು ಅವನಿಗೆ ಸದಾ ನಿಷ್ಠನಾಗಿರುವವನು – ಅವರೇ ಜಯಶಾಲಿಗಳು

[49] ನೀವು ಆದೇಶಿಸಿದರೆ ಖಂಡಿತವಾಗಿಯೂ ತಾವು (ಹೋರಾಟಕ್ಕೆ) ಹೊರಟು ಬಿಡುವೆವು ಎಂದು ಅವರು ಜೋರಾಗಿ ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ; ಆಣೆಗಳನ್ನು ಹಾಕಬೇಡಿ. (ನಿಮ್ಮ) ಆಜ್ಞಾಪಾಲನೆ ಎಂತಹದೆಂಬುದು ಎಲ್ಲರಿಗೂ ಗೊತ್ತಿದೆ. ನೀವು ಮಾಡುತ್ತಿರುವುದೆಲ್ಲವೂ ಅಲ್ಲಾಹನಿಗೆ ತಿಳಿದಿದೆ

[50] ಹೇಳಿರಿ; ಅಲ್ಲಾಹನ ಆಜ್ಞೆಗಳನ್ನು ಪಾಲಿಸಿರಿ ಮತ್ತು ದೇವದೂತರ ಆಜ್ಞೆಗಳನ್ನು ಪಾಲಿಸಿರಿ. ನೀವು ಅದನ್ನು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ) ಅವರ ಮೇಲಿರುವ ಕರ್ತವ್ಯಕ್ಕೆ ಮಾತ್ರ ಅವರು ಹೊಣೆಗಾರರಾಗಿರುತ್ತಾರೆ ಮತ್ತು ನಿಮ್ಮ ಮೇಲಿರುವ ಕರ್ತವ್ಯಕ್ಕೆ ನೀವೇ ಹೊಣೆಯಾಗಿರುವಿರಿ. ನೀವು ಅವರ ಆಜ್ಞೆಗಳನ್ನು ಪಾಲಿಸಿದರೆ ನೇರ ಮಾರ್ಗದಲ್ಲಿರುವಿರಿ. ದೇವದೂತರ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊಣೆ ಮಾತ್ರ

[51] ನಿಮ್ಮ ಪೈಕಿ ವಿಶ್ವಾಸಿಗಳಾಗಿದ್ದು ಸತ್ಕರ್ಮ ಮಾಡುತ್ತಿರುವವರಿಗೆ, ಅವರ ಹಿಂದಿನವರಂತೆ ಅವರನ್ನು ತಾನು ಭೂಮಿಯಲ್ಲಿ ಆಡಳಿತಗಾರರಾಗಿ ಮಾಡುವೆನೆಂದು ಹಾಗೂ ತಾನು ಅವರ ಪಾಲಿಗೆ ಮೆಚ್ಚಿರುವ ಅವರ ಧರ್ಮವನ್ನು ಅವರಿಗಾಗಿ ಸ್ಥಿರಗೊಳಿಸುವೆನೆಂದು ಮತ್ತು ಅವರ ಭಯದ ಸ್ಥಿತಿಯನ್ನೇ ತಾನು ಆ ಬಳಿಕ ಶಾಂತಿಯ ಸ್ಥಿತಿಯಾಗಿ ಬದಲಿಸುವೆನೆಂದು ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನೇ ಪೂಜಿಸಲಿ ಮತ್ತು ನನ್ನ ಜೊತೆ ಏನನ್ನೂ ಸೇರಿಸದಿರಲಿ (ಎಂದು ಅವನು ಆದೇಶಿಸಿರುವನು). ಇಷ್ಟಾದ ಬಳಿಕವೂ ಕೃತಘ್ನತೆ ತೋರುವವರೇ ಅವಿಧೇಯರು

[52] ನೀವು (ಅಲ್ಲಾಹನ) ಕರುಣೆಗೆ ಪಾತ್ರರಾಗಲಿಕ್ಕಾಗಿ ನಮಾಝನ್ನು ಪಾಲಿಸಿರಿ, ಝಕಾತನ್ನು ಪಾವತಿಸಿರಿ ಮತ್ತು ದೇವದೂತರ ಆದೇಶಗಳನ್ನು ಪಾಲಿಸಿರಿ

[53] ಧಿಕ್ಕಾರಿಗಳು, ಭೂಮಿಯಲ್ಲಿ ತಾವು (ಸತ್ಯವನ್ನು) ಸೋಲಿಸಬಲ್ಲೆವೆಂದು ಭಾವಿಸದಿರಲಿ. ನರಕವೇ ಅವರ ಅಂತಿಮ ನೆಲೆಯಾಗಿದೆ. ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ

[54] ವಿಶ್ವಾಸಿಗಳೇ, ನಿಮ್ಮ ದಾಸರು ಮತ್ತು ನಿಮ್ಮ ಪೈಕಿ ಇನ್ನೂ ಪ್ರಬುದ್ಧ ವಯಸ್ಸನ್ನು ತಲುಪಿಲ್ಲದವರು, ಮೂರು ಹೊತ್ತು ನಿಮ್ಮ ಅನುಮತಿ ಪಡೆದು ನಿಮ್ಮಲ್ಲಿಗೆ ಬರಲಿ – ಮುಂಜಾವಿನ ನಮಾಝ್‌ಗೆ ಮುನ್ನ, ಹಾಗೂ ಮಧ್ಯಾಹ್ನ, ನೀವು ನಿಮ್ಮ ಮೇಲುಡುಗೆಗಳನ್ನು ಇಳಿಸಿಡುವ ಹೊತ್ತಿನಲ್ಲಿ ಮತ್ತು ಇಶಾ (ರಾತ್ರಿ) ನಮಾಝ್‌ನ ಬಳಿಕ. ಇವು ನಿಮ್ಮ ಪಾಲಿಗೆ ಮರೆಯಲ್ಲಿರುವ (ವಿರಾಮದ) ಸಮಯಗಳು. ಈ ಸಮಯಗಳು ಕಳೆದ ಬಳಿಕ (ಅವರು ಅನುಮತಿ ಪಡೆಯದೆ ಬಂದರೆ) ನಿಮ್ಮ ಮೇಲಾಗಲಿ ಅವರ ಮೇಲಾಗಲಿ ಪಾಪವೇನಿಲ್ಲ. ನೀವು ಪರಸ್ಪರರ ಸುತ್ತಮುತ್ತಲೇ ಇರಬೇಕಾಗುತ್ತದೆ. ಈ ರೀತಿ ಅಲ್ಲಾಹನು (ತನ್ನ) ಆದೇಶಗಳನ್ನು ನಿಮಗೆ ವಿವರಿಸುತ್ತಾನೆ. ಅಲ್ಲಾಹನು ಬಲ್ಲವನು ಹಾಗೂ ಯುಕ್ತಿವಂತನಾಗಿದ್ದಾನೆ

[55] ಇನ್ನು ನಿಮ್ಮಲ್ಲಿನ ಮಕ್ಕಳು ಪ್ರಬುದ್ಧರಾದಾಗ, ಅವರೂ ತಮ್ಮ ಹಿರಿಯರಂತೆ (ಎಲ್ಲ ವೇಳೆಗಳಲ್ಲೂ) ಅನುಮತಿ ಪಡೆಯಲಿ. ಈ ರೀತಿ ಅಲ್ಲಾಹನು ನಿಮಗೆ ತನ್ನ ವಚನಗಳನ್ನು ವಿವರಿಸುತ್ತಾನೆ. ಅಲ್ಲಾಹನು ಎಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ

[56] ವಿವಾಹವಾಗುವ ನಿರೀಕ್ಷೆ ಇಲ್ಲದೆ ಮನೆಯಲ್ಲೇ ಉಳಿದುಕೊಂಡಿರುವ (ವೃದ್ಧ) ಮಹಿಳೆಯರು ತಮ್ಮ ಶೃಂಗಾರವನ್ನು ಪ್ರದರ್ಶಿಸದೆ ತಮ್ಮ ಹೊರ ಹೊದಿಕೆಯನ್ನು ಕಳಚಿಟ್ಟರೆ ಅದು ತಪ್ಪಲ್ಲ. ಅವರು ಮಾನವಂತರಾಗಿ ಉಳಿದರೆ ಅದು ಅವರಿಗೇ ಉತ್ತಮ. ಅಲ್ಲಾಹನಂತು ಎಲ್ಲವನ್ನೂ ಕೇಳುತ್ತಾನೆ ಮತ್ತು ಎಲ್ಲವನ್ನೂ ಅರಿತಿರುತ್ತಾನೆ

[57] ಕಣ್ಣು ಕಾಣಿಸದವನಾಗಿರಲಿ, ನಡೆಯಲಾಗದವನಾಗಿರಲಿ, ರೋಗಪೀಡಿತನಾಗಿರಲಿ ಅಥವಾ ನೀವೇ ಆಗಿರಲಿ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ತಂದೆ-ತಾತಂದಿರ ಮನೆಯಲ್ಲಿ, ನಿಮ್ಮ ತಾಯಿಯ ಮನೆಯಲ್ಲಿ, ನಿಮ್ಮ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಯಲ್ಲಿ ಅಥವಾ ನಿಮ್ಮ ತಂದೆಯ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ತಂದೆಯ ಸಹೋದರಿಯರ ಮನೆಯಲ್ಲಿ ಅಥವಾ ನಿಮ್ಮ ತಾಯಿಯ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ತಾಯಿಯ ಸಹೋದರಿಯರ ಮನೆಯಲ್ಲಿ ಅಥವಾ ಯಾವ ಮನೆಗಳ ಚಾವಿಗಳು ನಿಮ್ಮ ಕೈಯಲ್ಲಿವೆಯೋ ಆ ಮನೆಗಳಲ್ಲಿ ಅಥವಾ ನಿಮ್ಮ ಮಿತ್ರರ ಮನೆಗಳಲ್ಲಿ ನೀವು ಭೋಜನ ಮಾಡುವುದರಲ್ಲಿ ತಪ್ಪೇನಿಲ್ಲ. ನೀವು ಸಾಮೂಹಿಕವಾಗಿ ಭೋಜನ ಮಾಡಿದರೂ ಒಂಟಿಯಾಗಿ ಮಾಡಿದರೂ ತಪ್ಪೇನಿಲ್ಲ. ನೀವು ಮನೆಯನ್ನು ಪ್ರವೇಶಿಸುವಾಗ ನಿಮ್ಮವರಿಗೆ ಸಲಾಮ್ ಹೇಳಿರಿ. ಇದು ಅಲ್ಲಾಹನ ಕಡೆಯಿಂದ ಕಲಿಸಲಾಗಿರುವ ಸಮೃದ್ಧಿದಾಯಕವಾದ, ಶುದ್ಧವಾದ ಶುಭ ಹಾರೈಕೆಯಾಗಿದೆ. ನೀವು ಅರ್ಥ ಮಾಡಿ ಕೊಳ್ಳಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ (ತನ್ನ) ವಚನಗಳನ್ನು ವಿವರಿಸುತ್ತಾನೆ

[58] ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟವರು ಮತ್ತು ಯಾವುದೇ ಸಾಮೂಹಿಕ ಕಾರ್ಯಾಚರಣೆಯಲ್ಲಿ ಅವರ (ದೂತರ) ಜೊತೆಗಿರುವಾಗ ಅವರ ಅನುಮತಿ ಪಡೆಯದೆ ಹೊರಟು ಹೋಗದವರೇ ನಿಜವಾದ ವಿಶ್ವಾಸಿಗಳು. ಖಂಡಿತವಾಗಿಯೂ ನಿಮ್ಮೊಡನೆ (ದೂತರೊಡನೆ) ಅನುಮತಿ ಕೇಳುವವರೇ ನಿಜವಾಗಿ ಅಲ್ಲಾಹ್ ಮತ್ತು ಅವನ ದೂತರಲ್ಲಿ ನಂಬಿಕೆ ಉಳ್ಳವರು. ಅವರು ನಿಮ್ಮ (ದೂತರ) ಬಳಿಗೆ ಬಂದು ತಮ್ಮ ಯಾವುದಾದರೂ (ಖಾಸಗಿ) ಕೆಲಸಕ್ಕಾಗಿ ನಿಮ್ಮೊಡನೆ ಅನುಮತಿ ಕೇಳಿದರೆ, ನೀವು ಅವರ ಪೈಕಿ ನೀವಿಚ್ಛಿಸುವವರಿಗೆ ಅನುಮತಿ ನೀಡಿರಿ. ಮತ್ತು ಅವರ ಕ್ಷಮೆಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ. ಅಲ್ಲಾಹನು ಖಂಡಿತವಾಗಿಯೂ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[59] ನೀವು ನಿಮ್ಮ ನಡುವೆ, ದೇವದೂತರ ಕರೆಯನ್ನು, ನೀವು ಪರಸ್ಪರರಿಗೆ ನೀಡುವ ಕರೆಯಂತೆ ಪರಿಗಣಿಸಬೇಡಿ. ನಿಮ್ಮ ಪೈಕಿ ಗುಟ್ಟಾಗಿ ತಪ್ಪಿಸಿಕೊಳ್ಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವನ ಆದೇಶಕ್ಕೆ ವಿರುದ್ಧವಾಗಿ ನಡೆಯುವವರು ಜಾಗೃತರಾಗಿರಲಿ. ಅವರ ಮೇಲೆ ವಿಪತ್ತೇನಾದರೂ ಬಂದೆರಗಬಹುದು ಅಥವಾ ಯಾತನಾಮಯ ಶಿಕ್ಷೆಗೆ ಅವರು ತುತ್ತಾಗಬಹುದು

[60] ನಿಮಗೆ ತಿಳಿದಿರಲಿ! ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ನೀವು ಯಾವ ಸ್ಥಿತಿಯಲ್ಲಿ ಇರುವಿರೆಂಬುದನ್ನು ಅವನು ಖಚಿತವಾಗಿ ಬಲ್ಲನು. ಅವರು ಅವನೆಡೆಗೆ ಮರಳುವ ದಿನ, ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ

[61] ಬಹಳ ಸಮೃದ್ಧನು – ಸರ್ವಲೋಕಗಳನ್ನು ಎಚ್ಚರಿಸಲಿಕ್ಕೆಂದು ತನ್ನ ದಾಸನಿಗೆ ಫುರ್‌ಕಾನ್‌ಅನ್ನು (ಒಳಿತು ಕೆಡುಕುಗಳನ್ನು ಪ್ರತ್ಯೇಕಿಸಿ ತಿಳಿಸುವ ಒರೆಗಲ್ಲನ್ನು) ಇಳಿಸಿಕೊಟ್ಟವನು (ಅಲ್ಲಾಹನು)

[62] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೆಲ್ಲಾ ಅವನಿಗೇ ಸೇರಿದೆ. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ ಮತ್ತು ಆಧಿಪತ್ಯದಲ್ಲಿ ಯಾರೂ ಅವನ ಪಾಲುದಾರರಲ್ಲ. ಅವನೇ ಎಲ್ಲವನ್ನೂ ಸೃಷ್ಟಿಸಿದವನು ಮತ್ತು ಪ್ರತಿಯೊಂದರ ಇತಿಮಿತಿಗಳನ್ನು ನಿರ್ಧರಿಸಿದವನು

[63] ಅವರು (ಜನರು) ಅವನನ್ನು ಬಿಟ್ಟು ಇತರರನ್ನು ದೇವರಾಗಿಸಿಕೊಂಡರು. ನಿಜವಾಗಿ ಅವರು (ಆ ದೇವರುಗಳು) ಏನನ್ನೂ ಸೃಷ್ಟಿಸಿದವರಲ್ಲ – ಅವರನ್ನೇ ಸೃಷ್ಟಿಸಲಾಗಿದೆ. ಸ್ವತಃ ತಮಗೆ ಯಾವುದೇ ನಷ್ಟ ಅಥವಾ ಲಾಭ ಮಾಡಿಕೊಳ್ಳುವ ಅಧಿಕಾರವೂ ಅವರಿಗಿಲ್ಲ. ಮಾತ್ರವಲ್ಲ ಮರಣದ ಮೇಲಾಗಲಿ, ಜೀವನದ ಮೇಲಾಗಲಿ, ಮರಣಾನಂತರದ ಪುನರುಜ್ಜೀವನದ ಮೇಲಾಗಲಿ ಅವರಿಗೆ ಯಾವ ನಿಯಂತ್ರಣವೂ ಇಲ್ಲ

[64] ‘‘ಅದೆಲ್ಲಾ ಕೇವಲ ಕಟ್ಟುಕತೆ. ಅದನ್ನು ಆತನೇ ರಚಿಸಿಕೊಂಡಿದ್ದಾನೆ. ಇತರ ಕೆಲವರು ಅವನಿಗೆ ನೆರವಾಗಿದ್ದಾರೆ’’ ಎಂದು ಧಿಕ್ಕಾರಿಗಳು ಹೇಳುತ್ತಾರೆ. ಹೀಗೆ ಅವರು ಅಕ್ರಮ ಹಾಗೂ ಸುಳ್ಳು ಪ್ರಚಾರವನ್ನು ಆರಂಭಿಸಿದ್ದಾರೆ

ಮಾನದಂಡ

Surah 25

[1] ಅವರು ಹೇಳುತ್ತಾರೆ; ‘‘ಅವೆಲ್ಲಾ ಕೇವಲ ಗತಕಾಲದ ಕತೆಗಳು. ಅವನೇ ಅದನ್ನು ಬರೆಸಿ ತರುತ್ತಾನೆ. ಮುಂಜಾನೆ ಹಾಗೂ ಸಂಜೆ ಇದನ್ನೆಲ್ಲಾ ಅವನಿಗೆ ಯಾರೋ ಕಲಿಸಿಕೊಡುತ್ತಾರೆ’’

[2] ಹೇಳಿರಿ; ಆಕಾಶಗಳ ಹಾಗೂ ಭೂಮಿಯ ಸಕಲ ರಹಸ್ಯಗಳನ್ನು ಬಲ್ಲವನು ಇದನ್ನು ಇಳಿಸಿಕೊಟ್ಟಿರುವನು ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[3] ಅವರು ಹೇಳುತ್ತಾರೆ; ‘‘ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ನಡೆದಾಡುವ ಆತ ಅದೆಂತಹ ದೂತ? ಅವನ ಜೊತೆಗಿದ್ದು ಜನರನ್ನು ಹೆದರಿಸಲು ಒಬ್ಬ ಮಲಕ್‌ನನ್ನು ಅವನಿಗೇಕೆ ಇಳಿಸಿಕೊಡಲಾಗಿಲ್ಲ?’’

[4] ‘‘ಅಥವಾ ಅವನಿಗೆ ಒಂದು ನಿಧಿಯನ್ನೇಕೆ ನೀಡಲಾಗಿಲ್ಲ? ಅಥವಾ ಅವನಿಗೆ ತಿನ್ನುಣ್ಣುತ್ತಾ ಇರುವುದಕ್ಕೆ ಒಂದು ತೋಟವನ್ನಾದರೂ ಏಕೆ ನೀಡಲಾಗಿಲ್ಲ?’’ ಮತ್ತು ಅಕ್ರಮಿಗಳು (ಜನರೊಡನೆ), ‘‘ನೀವು ಕೇವಲ ಒಬ್ಬ ಮಾಟಪೀಡಿತನನ್ನು ಅನುಸರಿಸುತ್ತಿರುವಿರಿ’’ ಎನ್ನುತ್ತಾರೆ

[5] ನೋಡಿರಿ; ಅವರು ಎಂತೆಂತಹ ಹೋಲಿಕೆಗಳನ್ನು ನಿಮಗೆ ಅನ್ವಯಿಸುತ್ತಿದ್ದಾರೆ! ನಿಜವಾಗಿ ಅವರು ದಾರಿ ತಪ್ಪಿದ್ದಾರೆ ಮತ್ತು ಸರಿದಾರಿಗೆ ಬರಲು ಅವರಿಗೆ ಸಾಧ್ಯವಿಲ್ಲ

[6] ಆ ಮಹಾ ಸಮೃದ್ಧನು (ಅಲ್ಲಾಹನು) ತಾನಿಚ್ಛಿಸಿದರೆ ನಿಮಗೆ ಇವೆಲ್ಲವುಗಳಿಗಿಂತ ಉತ್ತಮವಾದುದನ್ನು ನೀಡಬಲ್ಲನು. ಅಂದರೆ, ತಳದಲ್ಲಿ ನದಿಗಳು ಹರಿಯುವಂತಹ ತೋಟಗಳನ್ನು ನೀಡಬಲ್ಲನು ಮತ್ತು ನಿಮಗಾಗಿ ಅರಮನೆಗಳನ್ನು ಒದಗಿಸಬಲ್ಲನು

[7] ನಿಜವಾಗಿ ಅವರು ಆ ಅಂತಿಮ ಕ್ಷಣವನ್ನು ಸುಳ್ಳೆಂದರು. ಆ ಕ್ಷಣವನ್ನು ಸುಳ್ಳೆಂದವರಿಗಾಗಿ ನಾವು ಅಗ್ನಿಕುಂಡವನ್ನು ಸಿದ್ಧಪಡಿಸಿಟ್ಟಿರುವೆವು

[8] ಅವರನ್ನು ದೂರದಿಂದ ಕಂಡಾಗಲೇ, ಅದು ರೋಷದಿಂದ ಅಬ್ಬರಿಸುವುದನ್ನು ಅವರು ಕೇಳುವರು

[9] ಅವರನ್ನು ಸರಪಣಿಗಳಲ್ಲಿ ಕಟ್ಟಿ ಅದರೊಳಗಿನ ಯಾವುದಾದರೂ ಇಕ್ಕಟ್ಟಾದ ಸ್ಥಳಕ್ಕೆ ಎಸೆದು ಬಿಡಲಾದಾಗ ಅಲ್ಲಿ ಅವರು ಮರಣಕ್ಕಾಗಿ ಹಾತೊರೆಯುತ್ತಿರುವರು

[10] ‘‘ಇಂದು ನೀವು ಕೇವಲ ಒಂದು ಮರಣವನ್ನು ಕೂಗಬೇಡಿ. ಹಲವಾರು ಮರಣಗಳನ್ನು ಕೂಗಿ ಕರೆಯಿರಿ’’ (ಎಂದು ಅವರೊಡನೆ ಹೇಳಲಾಗುವುದು)

[11] ಹೇಳಿರಿ; ಇದು ಉತ್ತಮವೇ, ಅಥವಾ ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಶಾಶ್ವತ ಸ್ವರ್ಗ ತೋಟಗಳು ಉತ್ತಮವೇ? ಅದುವೇ ಅವರ (ಧರ್ಮನಿಷ್ಠರ) ಪ್ರತಿಫಲವಾಗಿರುವುದು ಮತ್ತು ಅವರು ಮರಳುವ ತಾಣವಾಗಿರುವುದು

[12] ಅಲ್ಲಿ ಅವರು ಬಯಸಿದ್ದೆಲ್ಲವೂ ಅವರಿಗೆ ಲಭ್ಯವಿರುವುದು ಮತ್ತು ಅವರು ಅಲ್ಲಿ ಸದಾಕಾಲ ಇರುವರು. ಇದು ನಿಮ್ಮ ಒಡೆಯನ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ – ಪ್ರಾರ್ಥಿಸಿ ಕೇಳಬೇಕಾದ ವಾಗ್ದಾನ

[13] ಅಂದು ಅವನು ಅವರನ್ನೂ, ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿದ್ದ ಎಲ್ಲವುಗಳನ್ನೂ ಒಂದೆಡೆ ಸೇರಿಸಿ ‘‘ಈ ನನ್ನ ದಾಸರನ್ನು ನೀವು ದಾರಿಗೆಡಿಸಿದಿರಾ? ಅಥವಾ ಅವರು ಸ್ವತಃ ದಾರಿಗೆಟ್ಟಿದ್ದರೇ?’’ಎಂದು ಕೇಳುವನು

[14] ಅವರು ಹೇಳುವರು; ನೀನು ಪಾವನನು. ನಿನ್ನ ಹೊರತು ಬೇರೆ ಯಾರನ್ನೂ ನಮ್ಮ ಪೋಷಕರಾಗಿ ಪರಿಗಣಿಸುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು, ಅವರು ನಿನ್ನ ಪ್ರಸ್ತಾಪವನ್ನೇ ಮರೆತು ಬಿಡುವಷ್ಟು ಸಂಪನ್ನತೆಯನ್ನು ಅವರಿಗೂ ಅವರ ಪೂರ್ವಜರಿಗೂ ದಯಪಾಲಿಸಿದೆ. ಅವರಂತೂ ನಾಶವಾಗಲೇಬೇಕಾದ ಜನರಾಗಿದ್ದರು

[15] ನೀವು ಹೇಳಿದ್ದನ್ನೆಲ್ಲಾ ಅವರು ಸುಳ್ಳೆಂದು ತಿರಸ್ಕರಿಸಿದರು. ಇದೀಗ ಅವರ ಮೇಲಿನ ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಅವರಿಗೆ ನೆರವಾಗಲಿಕ್ಕಾಗಲಿ ನಿಮಗೆ ಸಾಧ್ಯವಿಲ್ಲ. ನಿಮ್ಮ ಪೈಕಿ ಅಕ್ರಮವೆಸಗಿದವನಿಗೆ ನಾವು ಭಾರೀ ಶಿಕ್ಷೆಯ ರುಚಿ ಉಣಿಸುವೆವು

[16] (ದೂತರೇ,) ನಾವು ನಿಮಗಿಂತ ಮುಂಚೆ ಕೂಡಾ ಆಹಾರ ಸೇವಿಸುತ್ತಿದ್ದವರನ್ನು ಮತ್ತು ಪೇಟೆಗಳಲ್ಲಿ ನಡೆದಾಡುತ್ತಿದ್ದವರನ್ನೇ ದೂತರಾಗಿ ಕಳಿಸಿದ್ದೆವು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಪಾಲಿಗೆ ಪರೀಕ್ಷೆಯಾಗಿಸಿದ್ದೆವು. ನೀವೀಗ ಸಹನೆ ತೋರುವಿರಾ? ನಿಮ್ಮ ಒಡೆಯನು ಎಲ್ಲವನ್ನೂ ನೋಡುವವನಾಗಿದ್ದಾನೆ

[17] ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ‘‘ನಮ್ಮ ಬಳಿಗೆ ಮಲಕ್‌ಗಳನ್ನೇಕೆ ಕಳಿಸಲಾಗಿಲ್ಲ ಅಥವಾ ನಾವು ನಮ್ಮ ದೇವರನ್ನು ನೋಡುವಂತಿಲ್ಲವೇಕೆ’’ ಎಂದು ಕೇಳುತ್ತಾರೆ. ನಿಜವಾಗಿ ಅವರು ತಮ್ಮ ಮನದೊಳಗೆ ಅಹಂಕಾರ ಪಡುತ್ತಿದ್ದಾರೆ ಮತ್ತು ಭಾರೀ ದೊಡ್ಡ ವಿದ್ರೋಹವೆಸಗುತ್ತಿದ್ದಾರೆ

[18] ಅವರು ಮಲಕ್‌ಗಳನ್ನು ಕಾಣುವ ದಿನ, ಅಪರಾಧಿಗಳಿಗೆ ಯಾವುದೇ ಶುಭವಾರ್ತೆ ಇರದು. ಅಂದು ಅವರು ‘‘ಎಲ್ಲಾದರೂ ಆಶ್ರಯವಿದೆಯೇ?’’ ಎನ್ನುತ್ತಿರುವರು

[19] ಅಂದು ನಾವು ಅವರು ಮಾಡಿರುವ ಕರ್ಮಗಳ ಕಡೆಗೆ ಗಮನ ಹರಿಸುವೆವು ಮತ್ತು ಅವುಗಳನ್ನೆಲ್ಲಾ ಧೂಳಿನಂತೆ ಹಾರಿಸಿ ಬಿಡುವೆವು

[20] ಅಂದು ಸ್ವರ್ಗದವರು ಬಹಳ ಶ್ರೇಷ್ಠ ನೆಲೆಯಲ್ಲಿರುವರು ಮತ್ತು ಅತ್ಯುತ್ತಮ ವಿಶ್ರಾಂತಿ ಧಾಮದಲ್ಲಿರುವರು

[21] ಅದು, ಮೋಡಗಳೊಂದಿಗೆ ಆಕಾಶವು ಬಿರಿದು ಹೋಗುವ ಮತ್ತು ಮಲಕ್‌ಗಳನ್ನು ಇಳಿಸಲಾಗುವ ದಿನವಾಗಿರುವುದು

[22] ಅಂದು ನೈಜ ಆಧಿಪತ್ಯವು ಆ ಪರಮ ದಯಾಮಯನಿಗೆ ಸೇರಿರುವುದು. ಆ ದಿನವು ಧಿಕ್ಕಾರಿಗಳ ಪಾಲಿಗೆ ತುಂಬಾ ಕಷ್ಟದ ದಿನವಾಗಿರುವುದು

[23] ಅಂದು ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುತ್ತಾ ಹೇಳುವನು; ಅಯ್ಯೋ ನಾನು ದೇವದೂತರ ಜೊತೆ ಅವರ ಮಾರ್ಗದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು

[24] ಅಯ್ಯೋ, ನಾನು ಆತನನ್ನು (ಶೈತಾನನನ್ನು) ಮಿತ್ರನಾಗಿಸದೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು

[25] ಉಪದೇಶವು ನನ್ನ ಬಳಿಗೆ ಬಂದ ಬಳಿಕವೂ ನಾನು ಅದನ್ನು ಸ್ವೀಕರಿಸದಂತೆ ಅವನು ನನ್ನನ್ನು ದಾರಿಗೆಡಿಸಿದ್ದನು. ಶೈತಾನನು ನಿಜಕ್ಕೂ ಮಾನವನ ಪಾಲಿಗೆ ವಿಶ್ವಾಸ ದ್ರೋಹಿಯಾಗಿದ್ದಾನೆ

[26] ದೂತರು, ‘‘ನನ್ನೊಡೆಯಾ, ನನ್ನ ಜನಾಂಗವು ಈ ಕುರ್‌ಆನನ್ನು ತಿರಸ್ಕಾರ ಯೋಗ್ಯವಾಗಿ ಪರಿಗಣಿಸಿತ್ತು’’ ಎನ್ನುವರು

[27] ಈ ರೀತಿ ನಾವು ಕೆಲವು ಅಪರಾಧಿಗಳನ್ನು ಎಲ್ಲ ಪ್ರವಾದಿಗಳ ಶತ್ರುಗಳಾಗಿಸಿರುವೆವು. ಮಾರ್ಗದರ್ಶನಕ್ಕೆ ಮತ್ತು ನೆರವಿಗೆ ನಿಮ್ಮ ಒಡೆಯನೇ ಸಾಕು

[28] ಧಿಕ್ಕಾರಿಗಳು, ‘‘ಅವನಿಗೆ ಕುರ್‌ಆನನ್ನು ಒಂದೇ ಬಾರಿಗೆ ಯಾಕೆ ಇಳಿಸಿ ಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ. ಅದು ಹಾಗೆಯೇ. ಆ ಮೂಲಕ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಲಿಕ್ಕಾಗಿ, ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಓದಿ ಕೇಳಿಸುತ್ತೇವೆ

[29] ಅವರು ನಿಮ್ಮ ಬಳಿಗೆ ತರುವ ಪ್ರತಿಯೊಂದು ಆಕ್ಷೇಪದ ಕುರಿತೂ ನಾವು ನಿಮಗೆ ಸರಿಯಾದ ಉತ್ತರವನ್ನು ಮತ್ತು ಅತ್ಯುತ್ತಮ ವಿಶ್ಲೇಷಣೆಯನ್ನು ತಲುಪಿಸುತ್ತೇವೆ

[30] ಅವರ (ಧಿಕ್ಕಾರಿಗಳ) ಮುಖವನ್ನು ನೆಲಕ್ಕೊರಗಿಸಿ ನರಕದೆಡೆಗೆ ಎಳೆದೊಯ್ಯಲಾಗುವುದು. ಅವರೇ ಅತ್ಯಂತ ಕೆಟ್ಟ ಸ್ಥಾನದವರು ಮತ್ತು ನೇರ ಮಾರ್ಗದಿಂದ ತುಂಬಾ ದೂರ ಸಾಗಿದವರು

[31] ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರಾಗಿ ಅವರ ಜೊತೆ ಕಳಿಸಿದ್ದೆವು

[32] ‘‘ನೀವಿಬ್ಬರೂ, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿರುವ ಜನಾಂಗದೆಡೆಗೆ ಹೋಗಿರಿ’’ ಎಂದು ನಾವು ಅವರಿಗೆ ಆದೇಶಿಸಿದೆವು. ಕೊನೆಗೆ ನಾವು, ಅವರನ್ನು (ಆ ಜನಾಂಗವನ್ನು) ಸಂಪೂರ್ಣ ನಾಶಮಾಡಿ ಬಿಟ್ಟೆವು

[33] (ಈ ಹಿಂದೆ) ನೂಹರ ಜನಾಂಗವು ದೇವದೂತರುಗಳನ್ನು ತಿರಸ್ಕರಿಸಿದಾಗ ನಾವು ಅವರನ್ನು ಮುಳುಗಿಸಿ ಬಿಟ್ಟೆವು ಮತ್ತು ಅವರನ್ನು ಜನರ ಪಾಲಿಗೆ ಪಾಠವಾಗಿಸಿದೆವು. ಮತ್ತು ನಾವು ಅಕ್ರಮಿಗಳಿಗಾಗಿ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವೆವು

[34] ಹಾಗೆಯೇ, ಆದ್ ಮತ್ತು ಸಮೂದ್ ಜನಾಂಗದವರು, ಬಾವಿಯವರು ಮತ್ತು ಅವರ ನಡುವಿನ ಹಲವಾರು ಪಂಗಡಗಳು –

[35] – ಅವರಲ್ಲಿ ಪ್ರತಿಯೊಬ್ಬರಿಗೂ ನಾವು ಉದಾಹರಣೆಗಳೊಂದಿಗೆ ಉಪದೇಶಿಸಿದೆವು. ಕೊನೆಗೆ ಅವರೆಲ್ಲರನ್ನೂ ನಿರ್ನಾಮಗೊಳಿಸಿಬಿಟ್ಟೆವು

[36] ಅವರು (ಧಿಕ್ಕಾರಿಗಳು), ವಿನಾಶಕಾರಿ ಮಳೆಯನ್ನು ಸುರಿಸಲಾಗಿದ್ದ (ಲೂತ್‌ರ) ನಾಡಿನಿಂದ ಹಾದು ಹೋಗುತ್ತಾರೆ. ಆದರೂ ಅವರೇನು ಅದನ್ನು ಕಾಣಲಿಲ್ಲವೇ? ನಿಜವಾಗಿ, ಅವರು ಮತ್ತೆ ಜೀವಂತಗೊಳ್ಳುವುದನ್ನು ನಿರೀಕ್ಷಿಸುತ್ತಿಲ್ಲ

[37] (ದೂತರೇ,) ನಿಮ್ಮನ್ನು ಕಂಡಾಗಲೆಲ್ಲಾ ಅವರು, ‘‘ಅಲ್ಲಾಹನು ದೂತನಾಗಿ ಕಳಿಸಿರುವುದು ಈತನನ್ನೇ?’’ ಎಂದು ನಿಮ್ಮನ್ನು ಗೇಲಿಮಾಡುತ್ತಾರೆ

[38] ‘‘ನಾವು ಸ್ಥಿರವಾಗಿಲ್ಲದೆ ಇದ್ದಿದ್ದರೆ ಇವನಂತು ನಮ್ಮನ್ನು ನಮ್ಮ ದೇವರುಗಳಿಂದ ದೂರಗೊಳಿಸಿ ಬಿಡುತ್ತಿದ್ದನು’’ (ಎಂದು ಅವರು ಹೇಳುತ್ತಾರೆ). ಬಹುಬೇಗನೇ, ಅವರು ಶಿಕ್ಷೆಯನ್ನು ಕಾಣುವಾಗ, ಸರಿದಾರಿಯಿಂದ ತೀರಾ ದೂರ ಸಾಗಿಬಿಟ್ಟವರು ಯಾರೆಂಬುದು ಅವರಿಗೆ ತಿಳಿಯಲಿದೆ

[39] ತನ್ನ ಚಿತ್ತವನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ಕಂಡಿರಾ? ನೀವೇನು ಅಂಥವನ ರಕ್ಷಕರಾಗುವಿರಾ

[40] ನೀವೇನು, ಅವರು ಕೇಳಬಲ್ಲರು ಹಾಗೂ ಆಲೋಚಿಸಬಲ್ಲರು ಎಂದು ಕೊಂಡಿದ್ದೀರಾ? ಅವರಂತು ಜಾನುವಾರುಗಳಿಗೆ ಸಮಾನರಾಗಿದ್ದಾರೆ ಮಾತ್ರವಲ್ಲ, ಅವುಗಳಿಗಿಂತ ಹೆಚ್ಚು ದಾರಿಗೆಟ್ಟವರಾಗಿದ್ದಾರೆ

[41] ನಿಮ್ಮ ಒಡೆಯನು ಯಾವ ರೀತಿ ನೆರಳನ್ನು ವಿಸ್ತರಿಸುತ್ತಾನೆಂಬುದನ್ನು ನೀವು ಕಂಡಿರಾ? ಅವನು ಬಯಸಿದ್ದರೆ ಅದನ್ನು ನಿಶ್ಚಲಗೊಳಿಸಬಹುದಿತ್ತು. ಮತ್ತು ನಾವು ಸೂರ್ಯನನ್ನು ಅದರ (ನೆರಳಿನ) ಮಾರ್ಗದರ್ಶಿಯಾಗಿಸಿದ್ದೇವೆ

[42] ತರುವಾಯ ನಾವು ಅದನ್ನು ಕುಗ್ಗಿಸಿ ನಿಧಾನವಾಗಿ ನಮ್ಮ ಕಡೆಗೆ ಸೆಳೆದುಕೊಳ್ಳುತ್ತೇವೆ

[43] ಅವನೇ, ನಿಮ್ಮ ಪಾಲಿಗೆ ರಾತ್ರಿಯನ್ನು ಉಡುಗೆಯಾಗಿಸಿದವನು, ನಿದ್ದೆಯನ್ನು ವಿರಾಮವಾಗಿಸಿದವನು ಮತ್ತು ಹಗಲನ್ನು ಎಚ್ಚರದ ಸಮಯವಾಗಿಸಿದವನು

[44] ಅವನೇ, ತನ್ನ ಅನುಗ್ರಹಕ್ಕೆ ಮುನ್ನ ಶುಭವಾರ್ತೆ ನೀಡುವ ಗಾಳಿಯನ್ನು ಕಳಿಸುವವನು ಮತ್ತು ನಾವೇ ಆಕಾಶದಿಂದ ಶುದ್ಧವಾದ ನೀರನ್ನು ಇಳಿಸುತ್ತೇವೆ –

[45] – ನಿರ್ಜೀವವಾಗಿದ್ದ ನಾಡನ್ನು ಆ ಮೂಲಕ ಜೀವಂತಗೊಳಿಸಲಿಕ್ಕಾಗಿ ಮತ್ತು ನಾವು ಸೃಷ್ಟಿಸಿರುವ ಹಲವಾರು ಜಾನುವಾರುಗಳಿಗೆ ಮತ್ತು ಮಾನವರಿಗೆ ಕುಡಿಸಲಿಕ್ಕಾಗಿ

[46] ಅವರು ಪಾಠಕಲಿಯಲೆಂದು, ನಾವು ಅದನ್ನು ಅವರ ನಡುವೆ ಹಂಚಿ ಬಿಡುತ್ತೇವೆ. ಆದರೆ ಹೆಚ್ಚಿನ ಮಾನವರು ಕೃತಘ್ನರೇ ಆಗಿರುತ್ತಾರೆ

[47] ನಾವು ಬಯಸಿದ್ದರೆ ಪ್ರತಿಯೊಂದು ನಾಡಿಗೂ ಒಬ್ಬ ಎಚ್ಚರಿಸುವಾತನನ್ನು ಕಳಿಸುತ್ತಿದ್ದೆವು

[48] ನೀವು ಧಿಕ್ಕಾರಿಗಳ ಆಜ್ಞೆಯನ್ನು ಪಾಲಿಸಬೇಡಿ. ಅವರ ವಿರುದ್ಧ ಹೋರಾಟ ನಡೆಸಿರಿ – ಮಹಾ ಹೋರಾಟ

[49] ಅವನೇ ಎರಡು ಕಡಲುಗಳನ್ನು ಜೋಡಿಸಿದವನು. ಇದು, ಹಿತಕರವಾದ ಸಿಹಿ ನೀರು ಮತ್ತು ಇದು, ರುಚಿಗೆಟ್ಟ ಉಪ್ಪು ನೀರು. ಅವನು ಅವೆರಡರ ನಡುವೆ ತೆರೆಯನ್ನು ಹಾಗೂ ಬಹಳ ಬಲಿಷ್ಠವಾದ ಒಂದು ತಡೆಯನ್ನು ನಿರ್ಮಿಸಿರುವನು

[50] ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು ಮತ್ತು ಅವನಿಗೆ ರಕ್ತ ಸಂಬಂಧವನ್ನೂ ವಿವಾಹ ಸಂಬಂಧವನ್ನೂ ಒದಗಿಸಿದವನು. ನಿಮ್ಮೊಡೆಯನು ಸಮರ್ಥನು

[51] ಅವರು ಅಲ್ಲಾಹನನ್ನು ಬಿಟ್ಟು, ತಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದ ವಸ್ತುಗಳನ್ನು ಪೂಜಿಸುತ್ತಾರೆ. ಮತ್ತು ಧಿಕ್ಕಾರಿಯು ತನ್ನ ನೈಜ ಒಡೆಯನ ವಿರೋಧಿಯಾಗಿದ್ದಾನೆ

[52] (ದೂತರೇ,) ನಾವು ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ ಕಳುಹಿಸಿರುವೆವು

[53] ಹೇಳಿರಿ; ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಸ್ವೀಕರಿಸಲಿ

[54] ಎಂದೂ ಸಾಯದ, ಸದಾ ಜೀವಂತವಿರುವವನಲ್ಲಿ ಭರವಸೆ ಇಡಿರಿ ಮತ್ತು ಅವನನ್ನು ಹೊಗಳುತ್ತಾ ಅವನ ಪಾವಿತ್ರವನ್ನು ಜಪಿಸಿರಿ. ತನ್ನ ದಾಸರ ಪಾಪಗಳನ್ನು ಅರಿಯಲು ಅವನೇ ಸಾಕು

[55] ಅವನೇ, ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ಆ ಬಳಿಕ ವಿಶ್ವ ಸಿಂಹಾಸನದಲ್ಲಿ ಸ್ಥಾಪಿತನಾದವನು. ಅವನು ಪರಮ ದಯಾಳು. ಅವನ ಕುರಿತು, ಬಲ್ಲವರನ್ನು ಕೇಳಿರಿ

[56] ಆ ಪರಮ ದಯಾಳುವಿಗೆ ಸಾಷ್ಟಾಂಗವೆರಗಿರಿ ಎಂದು ಅವರೊಡನೆ ಹೇಳಿದಾಗ ಅವರು ಪರಮ ದಯಾಮಯನೆಂದರೆ ಏನು? ನಾವೇನು, ನೀನು ಆದೇಶಿಸಿದವರಿಗೆ ಸಾಷ್ಟಾಂಗವೆರಗಬೇಕೇ? ಎನ್ನುತ್ತಾರೆ. ಹೀಗೆ, ಇದು (ಈ ಕರೆಯು) ಅವರ ಜಿಗುಪ್ಸೆಯನ್ನಷ್ಟೇ ಹೆಚ್ಚಿಸಿತು

[57] ಆಕಾಶದಲ್ಲಿ ಭದ್ರಕೋಟೆಗಳನ್ನು (ನಕ್ಷತ್ರಗಳನ್ನು) ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನೂ ಉಜ್ವಲ ಚಂದ್ರನನ್ನೂ ನಿರ್ಮಿಸಿದವನು ತುಂಬಾ ಸಮೃದ್ಧನು

[58] ಇಷ್ಟ ಉಳ್ಳವನು ಉಪದೇಶ ಸ್ವೀಕರಿಸಲಿ ಅಥವಾ ಇಷ್ಟ ಉಳ್ಳವನು ಕೃತಜ್ಞನಾಗಲೆಂದು, ರಾತ್ರಿ ಹಗಲುಗಳನ್ನು ಪರಸ್ಪರರ ಹಿಂಬಾಲಕರಾಗಿಸಿದವನು, ಅವನೇ

[59] ಆ ಪರಮ ದಯಾಳುವಿನ (ನಿಷ್ಠ) ದಾಸರು ಭೂಮಿಯಲ್ಲಿ ವಿನಯದ ನಡಿಗೆ ನಡೆಯುತ್ತಾರೆ ಮತ್ತು ತಮ್ಮೊಡನೆ ಅಜ್ಞಾನಿಗಳು ಮಾತಿಗಿಳಿದರೆ ಅವರು,‘ಸಲಾಮ್’ ಎಂದಷ್ಟೇ ಹೇಳುತ್ತಾರೆ

[60] ಅವರು ರಾತ್ರಿಯನ್ನು ತಮ್ಮ ಒಡೆಯನಿಗೆ ಸಾಷ್ಟಾಂಗ ವೆರಗುತ್ತಲೂ ನಿಲ್ಲುತ್ತಲೂ (ನಮಾಝ್‌ನಲ್ಲಿ) ಕಳೆಯುತ್ತಾರೆ

[61] ಅವರು ಹೇಳುತ್ತಾರೆ; ನಮ್ಮೊಡೆಯಾ, ನರಕದ ಶಿಕ್ಷೆಯನ್ನು ನಮ್ಮಿಂದ ದೂರವಿಡು. ಖಂಡಿತವಾಗಿಯೂ ಅದು ಬಿಡುಗಡೆ ಇಲ್ಲದ ಶಿಕ್ಷೆಯಾಗಿದೆ

[62] ಅದು ಖಂಡಿತ ತೀರಾ ಕೆಟ್ಟ ನೆಲೆಯಾಗಿದೆ ಹಾಗೂ ತೀರಾ ಕೆಟ್ಟ ಸ್ಥಳವಾಗಿದೆ

[63] ಅವರು ಖರ್ಚು ಮಾಡುವಾಗ ದುಂದು ವೆಚ್ಚವನ್ನು ಮಾಡುವುದಿಲ್ಲ, ಜಿಪುಣತೆಯನ್ನೂ ತೋರುವುದಿಲ್ಲ. ಅವೆರಡರ ನಡುವಣ ಮಾರ್ಗವನ್ನು ಪಾಲಿಸುತ್ತಾರೆ

[64] ಅವರು ಅಲ್ಲಾಹನ ಜೊತೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸುವುದಿಲ್ಲ. ಅಲ್ಲಾಹನು ನಿಷೇಧಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ಅವರು ವ್ಯಭಿಚಾರ ಮಾಡುವುದಿಲ್ಲ. ಈ ಕೃತ್ಯಗಳನ್ನು ಮಾಡಿದವನು ಶಿಕ್ಷೆಯನ್ನು ಅನುಭವಿಸುವನು

[65] ಪುನರುತ್ಥಾನ ದಿನ ಅವನಿಗೆ ದುಪ್ಪಟ್ಟು ಶಿಕ್ಷೆ ವಿಧಿಸಲಾಗುವುದು ಮತ್ತು ಅವನು ಅಪಮಾನಿತನಾಗಿ ಸದಾ ಅದರಲ್ಲೇ ಬಿದ್ದಿರುವನು

[66] ಪಶ್ಚಾತ್ತಾಪ ಪಟ್ಟು, ಸತ್ಕರ್ಮ ಮಾಡಿದವರ ಹೊರತು. ಅಲ್ಲಾಹನು ಅವರ ಪಾಪ ಕೃತ್ಯಗಳನ್ನೆಲ್ಲಾ ಸತ್ಕರ್ಮಗಳಾಗಿ ಮಾರ್ಪಡಿಸುವನು. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[67] ಪಶ್ಚಾತ್ತಾಪಪಟ್ಟು ಸತ್ಕರ್ಮ ಮಾಡುವವನು ನಿಜವಾಗಿ ಅಲ್ಲಾಹನೆಡೆಗೆ ಮರಳಬೇಕಾದ ರೀತಿಯಲ್ಲಿ ಮರಳುತ್ತಾನೆ

[68] ಅವರು (ಅಲ್ಲಾಹನ ನಿಷ್ಠ ದಾಸರು) ಎಂದೂ ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ ಮತ್ತು ಸಲ್ಲದ ಕಾರ್ಯಗಳ ಬಳಿಯಿಂದ ಹಾದು ಹೋಗ ಬೇಕಾದಾಗ ಅವರು ಸಭ್ಯ ರೀತಿಯಲ್ಲಿ ಹಾದು ಹೋಗುತ್ತಾರೆ

[69] ತಮ್ಮ ಒಡೆಯನ ವಚನಗಳ ಮೂಲಕ ಅವರಿಗೆ ಉಪದೇಶಿಸಲಾದಾಗ ಅವರು ಅವುಗಳ ಪಾಲಿಗೆ ಕಿವುಡರೂ ಕುರುಡರೂ ಆಗಿ ಬಿಡುವುದಿಲ್ಲ

[70] ನಮ್ಮೊಡೆಯಾ! ನಮ್ಮ ಮಡದಿಯರು ಮತ್ತು ನಮ್ಮ ಮಕ್ಕಳ ಮೂಲಕ ನಮ್ಮ ಕಣ್ಣುಗಳಿಗೆ ಶಾಂತಿಯನ್ನು ಒದಗಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನೇತಾರರಾಗಿಸು, ಎಂದು ಅವರು ಪ್ರಾರ್ಥಿಸುತ್ತಿರುತ್ತಾರೆ

[71] ಅವರ ಸಹನೆಯ ಫಲವಾಗಿ ಅವರಿಗೆ (ಸ್ವರ್ಗದಲ್ಲಿ), ಉನ್ನತವಾದ ನಿವಾಸಗಳನ್ನು ನೀಡಲಾಗುವುದು. ಶುಭ ಹಾಗೂ ಶಾಂತಿಯನ್ನು ಹಾರೈಸುತ್ತಾ ಅವರನ್ನು ಸ್ವಾಗತಿಸಲಾಗುವುದು

[72] ಅವರು ಸದಾಕಾಲ ಅಲ್ಲೇ ಇರುವರು. ಅದು, ಬಹಳ ಸುಂದರ ನಿವಾಸ ಮತ್ತು ಬಹಳ ಉತ್ತಮ ನೆಲೆಯಾಗಿರುವುದು

[73] ಹೇಳಿರಿ; ನೀವು ನನ್ನ ಒಡೆಯನನ್ನು ಪ್ರಾರ್ಥಿಸದಿದ್ದರೆ ಅವನೇನೂ ನಿಮ್ಮನ್ನು ಲೆಕ್ಕಿಸುವವನಲ್ಲ. ನೀವು (ಸತ್ಯವನ್ನು) ತಿರಸ್ಕರಿಸಿರುವಿರಿ. ಅದರ ಶಿಕ್ಷೆ ನಿಮಗೆ ಸಿಗುವುದು ಖಚಿತ

[74] ತ್ವಾ ಸೀನ್ ಮ್ಮೀಮ್

[75] ಇವು ಸುಷ್ಪಷ್ಟ ಗ್ರಂಥದ ವಚನಗಳು

[76] ಅವರು ನಂಬುತ್ತಿಲ್ಲ ಎಂಬ ಚಿಂತೆಯಲ್ಲಿ ನೀವು ನಿಮ್ಮನ್ನೇ ನಾಶ ಪಡಿಸುವಂತಿದೆ

[77] ನಾವು ಬಯಸಿದರೆ, ಅವರಿಗಾಗಿ ಆಕಾಶದಿಂದ ಒಂದು ಪುರಾವೆಯನ್ನು ಇಳಿಸಿ ಅದರ ಮುಂದೆ ಅವರ ಕೊರಳುಗಳು ಬಾಗುವಂತೆ ಮಾಡಬಹುದು

ಕವಿಗಳು

Surah 26

[1] ಅವರು, ಆ ಪರಮ ದಯಾಳುವಿನ ಕಡೆಯಿಂದ ತಮ್ಮ ಬಳಿಗೆ ಬಂದ ಪ್ರತಿಯೊಂದು ಉಪದೇಶವನ್ನೂ ಸಂಪೂರ್ಣ ಕಡೆಗಣಿಸುತ್ತಾರೆ

[2] ಹೀಗೆ ಅವರು (ಸತ್ಯವನ್ನು) ಸುಳ್ಳೆಂದು ತಿರಸ್ಕರಿಸಿ ಬಿಟ್ಟಿದ್ದಾರೆ. ಅವರು ಗೇಲಿ ಮಾಡುತ್ತಿದ್ದ ವಾಸ್ತವವು (ಶಿಕ್ಷೆಯು) ಬಹು ಬೇಗನೇ ಅವರ ಬಳಿಗೆ ಬಂದು ಬಿಡುವುದು

[3] ಅವರೇನು, ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರೊಳಗೆ ಎಷ್ಟೊಂದು ಬಗೆಯ ಶ್ರೇಷ್ಠ ಸಸ್ಯವರ್ಗಗಳನ್ನು ಬೆಳೆಸಿರುವೆವು

[4] ಇದರಲ್ಲಿ ಖಂಡಿತ ಪುರಾವೆ ಇದೆ. ಆದರೆ ಅವರಲ್ಲಿ ಹೆಚ್ಚಿನವರು ನಂಬುವವರಲ್ಲ

[5] ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ

[6] ನಿಮ್ಮ ಒಡೆಯನು ಮೂಸಾರನ್ನು ಕರೆದು ಹೇಳಿದನು; ಅಕ್ರಮಿ ಜನಾಂಗದ ಬಳಿಗೆ ಹೋಗಿರಿ

[7] ಫಿರ್‌ಔನನ ಜನಾಂಗದ ಬಳಿಗೆ. ಅವರೇನು ಅಂಜುವುದಿಲ್ಲವೇ

[8] ಅವರು (ಮೂಸಾ) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸುವರೆಂಬ ಭಯ ನನಗಿದೆ

[9] ನನ್ನ ಮನಸ್ಸು ಕುಗ್ಗುತ್ತಿದೆ. ನನ್ನ ನಾಲಿಗೆ ಚಲಿಸುತ್ತಿಲ್ಲ. ನೀನು (ಈ ಹೊಣೆಯನ್ನು) ಹಾರೂನರೆಡೆಗೆ ಕಳಿಸು

[10] ಅವರ ಬಳಿ ನನ್ನ ವಿರುದ್ಧ ಒಂದು ಆರೋಪವಿದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂಬ ಆತಂಕ ನನಗಿದೆ

[11] ಅವನು (ಅಲ್ಲಾಹನು) ಹೇಳಿದನು; ಖಂಡಿತ ಹಾಗಾಗದು. ಇದೀಗ ನೀವಿಬ್ಬರೂ ನಮ್ಮ ಪುರಾವೆಗಳೊಂದಿಗೆ ಹೋಗಿರಿ. ನಾವು ಎಲ್ಲವನ್ನೂ ಕೇಳುವವರಾಗಿ ನಿಮ್ಮ ಜೊತೆಗೇ ಇರುವೆವು

[12] ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿ ಹೇಳಿರಿ; ನಾವು ಎಲ್ಲ ಜಗತ್ತುಗಳ ಒಡೆಯನ ದೂತರು

[13] ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿ ಬಿಡು

[14] ಅವನು (ಫಿರ್‌ಔನ್) ಹೇಳಿದನು; ನಾವು ನಿನ್ನ ಬಾಲ್ಯದಲ್ಲಿ ನಿನ್ನನ್ನು ನಮ್ಮ ನಡುವೆ ಪೋಷಿಸಿರಲಿಲ್ಲವೇ ಮತ್ತು ನಿನ್ನ ಬದುಕಿನ ಹಲವು ವರ್ಷಗಳನ್ನು ನೀನು ನಮ್ಮ ಜೊತೆಗೆ ಕಳೆದಿರಲಿಲ್ಲವೇ

[15] ಆದರೂ ನೀನು ಆ ನಿನ್ನ ಕೃತ್ಯವನ್ನು ಮಾಡಿಬಿಟ್ಟೆ. ನೀನು ಖಂಡಿತ ಕೃತಘ್ನನು

[16] ಅವರು (ಮೂಸಾ) ಹೇಳಿದರು; ನಾನು ಅಜ್ಞಾನದ ಸ್ಥಿತಿಯಲ್ಲಿ ಆ ಕೃತ್ಯವನ್ನು ಎಸಗಿದ್ದೆ

[17] ಆ ಬಳಿಕ ನಾನು ನಿಮಗೆ ಅಂಜಿ ನಿಮ್ಮ ಬಳಿಯಿಂದ ಓಡಿ ಹೋದೆ. ಆ ಬಳಿಕ ನನ್ನ ಒಡೆಯನು ನನಗೆ ಹೊಣೆಗಾರಿಕೆಯನ್ನು ನೀಡಿದನು ಮತ್ತು ನನ್ನನ್ನು ದೂತನಾಗಿ ನೇಮಿಸಿದನು

[18] ಇನ್ನು, ನೀನು ನನ್ನ ಮೇಲೆ ಋಣ ಹೊರಿಸುವ ಆ ಉಪಕಾರಗಳು. ನಿಜವಾಗಿ, ನೀನು ಇಸ್ರಾಈಲರ ಸಂತತಿಯನ್ನು ದಾಸ್ಯಕ್ಕೆ ಒಳಪಡಿಸಿರುವೆ

[19] ಫಿರ್‌ಔನನು ಕೇಳಿದನು; ಎಲ್ಲ ಲೋಕಗಳ ಒಡೆಯ ಅಂದರೆ ಏನದು

[20] ಅವರು (ಮೂಸಾ) ಹೇಳಿದರು; ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ನಂಬುವವರಾಗಿದ್ದರೆ (ಚೆನ್ನಾಗಿತ್ತು)

[21] ಅವನು (ಫಿರ್‌ಔನ್) ತನ್ನ ಅಕ್ಕಪಕ್ಕದವರೊಡನೆ ಕೇಳಿದನು; ನೀವು ಕೇಳುತ್ತಿಲ್ಲವೇ

[22] ಅವರು (ಮೂಸಾ) ಹೇಳಿದರು; ಅವನು ನಿಮ್ಮ ಒಡೆಯನೂ ಹೌದು, ನಿಮ್ಮ ಹಿಂದಿನ ನಿಮ್ಮ ತಾತ ಮುತ್ತಾತಂದಿರ ಒಡೆಯನೂ ಹೌದು

[23] ಅವನು (ಫಿರ್‌ಔನ್) ಹೇಳಿದನು; ನಿಮ್ಮ ಕಡೆಗೆ ಕಳಿಸಲಾಗಿರುವ ಈ ನಿಮ್ಮ ದೇವದೂತನು ಹುಚ್ಚನೇ ಸರಿ

[24] ಅವರು (ಮೂಸಾ) ಹೇಳಿದರು; ಅವನು ಪೂರ್ವದ ಹಾಗೂ ಪಶ್ಚಿಮದ ಹಾಗೂ ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಬುದ್ಧಿ ಉಳ್ಳವರಾಗಿದ್ದರೆ (ಚೆನ್ನಾಗಿತ್ತು)

[25] ಅವನು (ಫಿರ್‌ಔನ್) ಹೇಳಿದನು; ನೀನು ನನ್ನ ಹೊರತು ಬೇರೆ ಯಾರನ್ನಾದರೂ ದೇವರಾಗಿಸಿಕೊಂಡರೆ ನಾನು ಖಂಡಿತ ನಿನ್ನನ್ನು ಕೈದಿಗಳ ಸಾಲಿಗೆ ಸೇರಿಸುವೆನು

[26] ಅವರು (ಮೂಸಾ) ಹೇಳಿದರು; ನಾನು ನಿನ್ನ ಬಳಿಗೆ ಒಂದು ಸ್ಪಷ್ಟ ಪುರಾವೆಯನ್ನು ತಂದರೂ? (ಹಾಗೆ ಮಾಡುವೆಯಾ)

[27] ಅವನು (ಫಿರ್‌ಔನ್) ಹೇಳಿದನು; ನೀನು ಸತ್ಯವಂತನಾಗಿದ್ದರೆ ಅದನ್ನು ತಂದು ಬಿಡು

[28] ಆಗ ಅವರು (ಮೂಸಾ) ತಮ್ಮ ಊರುಗೋಲನ್ನು ಕೆಳಕ್ಕೆ ಎಸೆದು ಬಿಟ್ಟರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಿನ ರೂಪ ತಾಳಿತು

[29] ಮತ್ತು ಅವರು ತಮ್ಮ ಕೈಯನ್ನು ಹೊರ ತೆಗೆದಾಗ, ನೋಡುವವರ ಮುಂದೆ ಅದು ಉಜ್ವಲವಾಗಿ ಹೊಳೆಯುತ್ತಿತ್ತು

[30] ಅವನು (ಫಿರ್‌ಔನ್) ತನ್ನ ಅಕ್ಕ ಪಕ್ಕ ಇದ್ದ ಸರದಾರರೊಡನೆ ಹೇಳಿದನು; ಅವನು ಖಂಡಿತ ಒಬ್ಬ ತಜ್ಞ ಮಾಂತ್ರಿಕನು

[31] ಅವನು ತನ್ನ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ನೀವೇನು ಸೂಚಿಸುತ್ತೀರಿ

[32] ಅವರು (ಆಸ್ಥಾನಿಗರು ) ಹೇಳಿದರು; ಅವನಿಗೆ ಹಾಗೂ ಅವನ ಸಹೋದರನಿಗೆ ಕಾಲಾವಕಾಶ ಕೊಡಿರಿ ಮತ್ತು ಜನರನ್ನು ಒಟ್ಟು ಸೇರಿಸುವವರನ್ನು ವಿವಿಧ ನಗರಗಳಿಗೆ ರವಾನಿಸಿರಿ

[33] ಅವರು, ಎಲ್ಲ ಪರಿಣತ ಜಾದೂಗಾರರನ್ನು ನಿಮ್ಮ ಬಳಿಗೆ ತರಲಿ

[34] ಹೀಗೆ, ಒಂದು ನಿಶ್ಚಿತ ದಿನ, ನಿರ್ದಿಷ್ಟ ಸಮಯದಲ್ಲಿ ಜಾದೂಗಾರರೆಲ್ಲಾ ಒಟ್ಟು ಸೇರಿದರು

[35] ಜನರೊಡನೆ ಹೇಳಲಾಯಿತು; ನೀವು ಒಟ್ಟು ಸೇರಿರುವಿರಾ

[36] ಜಾದೂಗಾರರು ವಿಜಯಿಗಳಾದರೆ ನಾವೆಲ್ಲಾ ಅವರನ್ನೇ ಅನುಸರಿಸೋಣ

[37] ಜಾದೂಗಾರರೆಲ್ಲಾ ಬಂದು ಸೇರಿದಾಗ ಅವರು ಫಿರ್‌ಔನನೊಡನೆ ಕೇಳಿದರು; ನಾವು ಗೆದ್ದರೆ ನಮಗೆ ಬಹುಮಾನವೇನಾದರೂ ಸಿಕ್ಕೀತೇ

[38] ಅವನು (ಫಿರ್‌ಔನ್) ಹೇಳಿದನು; ಹೌದು, ಆಗ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ

[39] ಅವರೊಡನೆ (ಜಾದೂಗಾರರೊಡನೆ) ಮೂಸಾ, ‘‘ನೀವು ಎಸೆಯ ಬಯಸುವುದನ್ನು ಎಸೆದು ಬಿಡಿರಿ’’ ಎಂದರು

[40] ಅವರು, ತಮ್ಮ ಹಗ್ಗಗಳನ್ನೂ ದಂಡಗಳನ್ನೂ ಎಸೆದರು ಮತ್ತು ‘‘ಫಿರ್‌ಔನನ ಗೌರವದಾಣೆ! ನಾವು ಖಂಡಿತ ಗೆಲ್ಲುವೆವು’’ ಎಂದರು

[41] ಕೊನೆಗೆ ಮೂಸಾ ತಮ್ಮ ಊರುಗೋಲನ್ನು ಎಸೆದರು. ಅದು ಅವರ (ಜಾದೂಗಾರರ) ಎಲ್ಲ ಕೃತಕ ಸೃಷ್ಟಿಗಳನ್ನು ನುಂಗತೊಡಗಿತು

[42] ಅಷ್ಟರಲ್ಲೇ ಜಾದೂಗಾರರೆಲ್ಲಾ ಸಾಷ್ಟಾಂಗವೆರಗಿಬಿಟ್ಟರು

[43] ಅವರು ಹೇಳಿದರು; ನಾವು ನಂಬಿದೆವು, ಸರ್ವಲೋಕಗಳ ಒಡೆಯನನ್ನು

[44] ಮೂಸಾ ಮತ್ತು ಹಾರೂನರ ಒಡೆಯನನ್ನು

[45] ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅವನನ್ನು ನಂಬಿ ಬಿಟ್ಟಿರಿ. ಅವನೇ (ಮೂಸಾ) ನಿಮಗೆ ಜಾದೂ ಕಲಿಸಿದ ನಿಮ್ಮ ಮಹಾ ನಾಯಕನಾಗಿರಬೇಕು. ನಿಮಗೆ ಬಹುಬೇಗನೇ ತಿಳಿಯಲಿದೆ. ನಾನು ಖಂಡಿತ ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸಿ ಬಿಡುವೆನು

[46] ಅವರು ಹೇಳಿದರು; ಪರವಾಗಿಲ್ಲ. ನಾವಂತು ನಮ್ಮ ಒಡೆಯನ ಕಡೆಗೆ ಮರಳಿ ಹೋಗುವವರು

[47] ನಾವು, (ಸತ್ಯವನ್ನು) ನಂಬಿದವರಲ್ಲಿ ಮೊದಲಿಗರಾದ್ದರಿಂದ ನಮ್ಮೊಡೆಯನು ನಮ್ಮ ತಪ್ಪುಗಳನ್ನೆಲ್ಲಾ ಖಂಡಿತ ಕ್ಷಮಿಸಿ ಬಿಡುವನೆಂದು ನಿರೀಕ್ಷಿಸುತ್ತೇವೆ

[48] ಮತ್ತು (ಮುಂದೆ) ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನನ್ನ ದಾಸರೊಂದಿಗೆ ಹೊರಟು ಬಿಡಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು

[49] ಫಿರ್‌ಔನನು (ಈ ಸಂದೇಶದೊಂದಿಗೆ) ಎಲ್ಲ ನಗರಗಳಿಗೆ ಸುದ್ದಿಗಾರರನ್ನು ರವಾನಿಸಿದನು

[50] ‘‘ಅವರು (ಇಸ್ರಾಈಲರ ಸಂತತಿ) ಕೇವಲ ಒಂದು ಸಣ್ಣ ಪಂಗಡ ಮಾತ್ರವಾಗಿದ್ದಾರೆ

[51] ಅವರು ನಮ್ಮನ್ನು ಬಹಳಷ್ಟು ಕೆರಳಿಸಿದ್ದಾರೆ

[52] ನಾವು ಒಂದು ಜಾಗೃತ ಪಡೆಯಾಗಿದ್ದೇವೆ’’

[53] ಕೊನೆಗೆ ನಾವು ಅವರನ್ನು ಹೊರಗಟ್ಟಿಬಿಟ್ಟೆವು, ತೋಟಗಳಿಂದ ಹಾಗೂ ಝರಿಗಳಿಂದ

[54] ಬೊಕ್ಕಸಗಳಿಂದ ಹಾಗೂ ಪ್ರತಿಷ್ಠಿತ ಭವನಗಳಿಂದ

[55] ಈ ರೀತಿ, ನಾವು ಇಸ್ರಾಈಲರ ಸಂತತಿಯನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು

[56] ಸೂರ್ಯೋದಯದ ಹೊತ್ತಿಗೆ ಅವರು (ಫಿರ್‌ಔನನ ಪಡೆಗಳು) ಅವರನ್ನು (ಮೂಸಾರನ್ನು) ಹಿಂಬಾಲಿಸಿದರು

[57] ಎರಡೂ ತಂಡಗಳು ಪರಸ್ಪರರನ್ನು ಕಂಡಾಗ ಮೂಸಾರ ಜೊತೆಗಾರರು ಹೇಳಿದರು; ನಾವು ಸಿಕ್ಕಿ ಬಿದ್ದೆವು

[58] ಅವರು (ಮೂಸಾ) ಹೇಳಿದರು; ಖಂಡಿತ ಇಲ್ಲ. ನನ್ನ ಜೊತೆ ನನ್ನ ಒಡೆಯನಿದ್ದಾನೆ. ಅವನು ಖಂಡಿತ ನನಗೆ ದಾರಿ ತೋರುತ್ತಾನೆ

[59] ನಾವು ಮೂಸಾರಿಗೆ, ‘‘ನಿಮ್ಮ ಊರುಗೋಲಿನಿಂದ ಕಡಲಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳಿಸಿದೆವು. (ಅವರು ಹೊಡೆದಾಗ,) ಅದು (ಸಮುದ್ರವು) ಇಬ್ಭಾಗವಾಗಿ ಬಿಟ್ಟಿತು ಮತ್ತು ಪ್ರತಿಯೊಂದು ಭಾಗವೂ ಒಂದು ಬೃಹತ್ ಪರ್ವತದಂತಿತ್ತು

[60] ಮತ್ತು ನಾವು ಇನ್ನೊಂದು ಗುಂಪನ್ನು (ಫಿರ್‌ಔನನ ಪಡೆಯನ್ನು) ಅದರ ಬಳಿಗೆ ತಂದೆವು

[61] ಕೊನೆಗೆ ನಾವು ಮೂಸಾರನ್ನು ಹಾಗೂ ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು

[62] ಮತ್ತು ಇನ್ನೊಂದು ಗುಂಪನ್ನು ನಾವು ಮುಳುಗಿಸಿ ಬಿಟ್ಟೆವು

[63] ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ

[64] ಮತ್ತು (ದೂತರೇ,) ನಿಮ್ಮ ಒಡೆಯನು ಖಂಡಿತ, ಪ್ರಬಲನು ಹಾಗೂ ಕರುಣಾಳುವಾಗಿದ್ದಾನೆ

[65] ನೀವು ಅವರಿಗೆ ಇಬ್ರಾಹೀಮರ ವೃತ್ತಾಂತವನ್ನು ಓದಿ ಕೇಳಿಸಿರಿ

[66] ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೇನನ್ನು ಪೂಜಿಸುತ್ತಿರುವಿರಿ?’’ ಎಂದು ಕೇಳಿದರು

[67] ಅವರು ಹೇಳಿದರು; ನಾವು ಮೂರ್ತಿಗಳನ್ನು ಪೂಜಿಸುತ್ತೇವೆ ಮತ್ತು ನಾವು ಸದಾ ಅವರಿಗೇ ನಿಷ್ಠರಾಗಿರುತ್ತೇವೆ

[68] ಅವರು (ಇಬ್ರಾಹೀಮ್) ಕೇಳಿದರು; ನೀವು ಪ್ರಾರ್ಥಿಸುವಾಗ ಅವುಗಳು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತವೆಯೇ

[69] ಅಥವಾ ಅವು ನಿಮಗೇನಾದರೂ ಲಾಭವನ್ನುಂಟು ಮಾಡುತ್ತವೆಯೇ? ಅಥವಾ ಅವು ನಿಮಗೇನಾದರೂ ನಷ್ಟ ಉಂಟು ಮಾಡಬಲ್ಲವೇ

[70] ಅವರು (ಜನರು) ಹೇಳಿದರು; ನಿಜವಾಗಿ ನಮ್ಮ ತಾತ ಮುತ್ತಾತಂದಿರು ಹೀಗೆಯೇ ಮಾಡುತ್ತಿದ್ದುದನ್ನು ನಾವು ಕಂಡಿರುತ್ತೇವೆ

[71] ಅವರು (ಇಬ್ರಾಹೀಮ್) ಹೇಳಿದರು; ನೀವು ಪೂಜಿಸುತ್ತಿರುವುದು ಏನನ್ನು ಎಂಬುದನ್ನು ನೀವು ನೋಡಿದಿರಾ

[72] ಹಾಗೆಯೇ, ನೀವು ಮತ್ತು ನಿಮ್ಮ ಗತಕಾಲದ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ)

[73] ಅವರೆಲ್ಲರೂ ಖಂಡಿತ ನನ್ನ ಶತ್ರುಗಳು. ಸರ್ವ ಲೋಕಗಳ ಒಡೆಯನ ಹೊರತು

[74] ಅವನೇ ನನ್ನನ್ನು ಸೃಷ್ಟಿಸಿದವನು ಮತ್ತು ನನಗೆ ಸರಿದಾರಿ ತೋರುವವನು

[75] ಅವನೇ ನನಗೆ ತಿನಿಸುವವನು ಹಾಗೂ ಕುಡಿಸುವವನು

[76] ನಾನು ರೋಗಿಯಾದಾಗ ಅವನೇ ನನ್ನನ್ನು ಗುಣಪಡಿಸುವವನು

[77] ಅವನೇ ನನಗೆ ಮರಣ ನೀಡುವವನು ಮತ್ತು ನನ್ನನ್ನು (ಮತ್ತೆ) ಜೀವಂತ ಗೊಳಿಸುವವನು

[78] (ಅಂತಿಮ) ಪ್ರತಿಫಲದ ದಿನ ನನ್ನ ತಪ್ಪುಗಳನ್ನು ಅವನೇ ಕ್ಷಮಿಸುವನೆಂದು ನಾನು ನಿರೀಕ್ಷಿಸುತ್ತೇನೆ

[79] ನನ್ನೊಡೆಯಾ, ನನಗೆ ಜಾಣ್ಮೆಯನ್ನು ನೀಡು ಮತ್ತು ನನ್ನನ್ನು ಸಜ್ಜನರ ಸಾಲಿಗೆ ಸೇರಿಸು

[80] ಮುಂದಿನ ಜನರಲ್ಲಿ ನನ್ನ ಉತ್ತಮ ಪ್ರಸ್ತಾಪವನ್ನು ಮುಂದುವರಿಸು

[81] ನೀನು ನನ್ನನ್ನು ಅನುಗ್ರಹಗಳು ತುಂಬಿದ ಸ್ವರ್ಗದ ಉತ್ತರಾಧಿಕಾರಿಯಾಗಿಸು

[82] ನನ್ನ ತಂದೆಯನ್ನು ಕ್ಷಮಿಸಿಬಿಡು. ಅವರು ಖಂಡಿತ, ದಾರಿಗೆಟ್ಟವರ ಸಾಲಿಗೆ ಸೇರಿದ್ದರು

[83] ಎಲ್ಲರನ್ನೂ ಮತ್ತೆ ಜೀವಂತಗೊಳಿಸಲಾಗುವ ದಿನ, ನನ್ನನ್ನು ಅಪಮಾನಿಸಬೇಡ

[84] ಅದು, ಸಂಪತ್ತಿನಿಂದಾಗಲಿ, ಸಂತಾನಗಳಿಂದಾಗಲಿ ಯಾರಿಗೂ ಲಾಭವಾಗದ ದಿನವಾಗಿರುವುದು

[85] ನಿರ್ಮಲ ಮನಸ್ಸಿನೊಂದಿಗೆ ಅಲ್ಲಾಹನ ಬಳಿಗೆ ಬಂದವನು ಮಾತ್ರ (ಅಂದು ಸುರಕ್ಷಿತನಾಗಿರುವನು)

[86] ಅಂದು ಸ್ವರ್ಗವನ್ನು ಧರ್ಮನಿಷ್ಠರಿಗೆ ಹತ್ತಿರಗೊಳಿಸಲಾಗುವುದು

[87] ಮತ್ತು ನರಕವನ್ನು ದಾರಿಗೆಟ್ಟವರ ಮುಂದೆ ತರಲಾಗುವುದು

[88] (ಅಂದು) ಅವರೊಡನೆ ಕೇಳಲಾಗುವುದು; ನೀವು ಯಾರನ್ನೆಲ್ಲಾ ಪೊಜಿಸುತ್ತಿದ್ದಿರೋ ಅವರೆಲ್ಲಾ ಎಲ್ಲಿದ್ದಾರೆ

[89] ಅಲ್ಲಾಹನ ಹೊರತು. ಇಂದು ಅವರು ನಿಮಗೆ ನೆರವಾಗಬಲ್ಲರೇ? ಅಥವಾ ಅವರು ಸ್ವತಃ ತಮಗೆ ತಾವೇ ನೆರವಾಗಬಲ್ಲರೇ

[90] ಅವರನ್ನೂ ದಾರಿಗೆಟ್ಟವರನ್ನೂ ಮುಖ ಕೆಳಗಾಗಿಸಿ ಅದರೊಳಗೆ (ನರಕದೊಳಗೆ) ಹಾಕಿ ಬಿಡಲಾಗುವುದು

[91] ಶೈತಾನನ ಪಡೆಯ ಎಲ್ಲರಿಗೂ (ಇದೇ ಗತಿ ಒದಗುವುದು)

[92] ಅದರಲ್ಲಿ ಅವರು ಪರಸ್ಪರ ಜಗಳಾಡುತ್ತಾ ಹೇಳುವರು

[93] ಅಲ್ಲಾಹನಾಣೆ! ನಾವಂತು ಸ್ಪಷ್ಟವಾಗಿ ದಾರಿಗೆಟ್ಟಿದ್ದೆವು –

[94] – ಎಲ್ಲ ಲೋಕಗಳ ಒಡೆಯನಿಗೆ ಸರಿಸಾಟಿಗಳಿದ್ದಾರೆ ಎಂದು ನಾವು ಹೇಳಿದಾಗ

[95] ನಮ್ಮನ್ನು ದಾರಿಗೆಡಿಸಿದವರು ಖಂಡಿತ ಅಪರಾಧಿಗಳು

[96] (ಇಂದು) ನಮ್ಮ ಪರವಾಗಿ ಶಿಫಾರಸು ಮಾಡುವವರು ಯಾರೂ ಇಲ್ಲ

[97] (ನಮಗಿಂದು) ನೈಜ ಮಿತ್ರನೊಬ್ಬನೂ ಇಲ್ಲ

[98] ನಮಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾವು ಖಂಡಿತ ನಂಬಿದವರಾಗಿರುತ್ತಿದ್ದೆವು

[99] ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ

[100] ಮತ್ತು ನಿಮ್ಮೊಡೆಯನು ಖಂಡಿತ, ಪ್ರಬಲ ಹಾಗೂ ಕರುಣಾಮಯಿಯಾಗಿದ್ದಾನೆ

[101] ನೂಹರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು

[102] ಅವರ ಸಹೋದರ ನೂಹರು ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ

[103] ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೂತನಾಗಿದ್ದೇನೆ

[104] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[105] ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಎಲ್ಲ ಲೋಕಗಳ ಒಡೆಯನು ಮಾತ್ರ

[106] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[107] ಅವರು (ನಾಡಿನವರು) ಹೇಳಿದರು; ನಿಮ್ಮನ್ನು ಅನುಸರಿಸುತ್ತಿರುವವರು ಕೀಳು ವರ್ಗದವರು. ಹೀಗಿರುತ್ತಾ ನಾವು ನಿಮ್ಮನ್ನು ನಂಬಬೇಕೇ

[108] ಅವರು (ನೂಹ್) ಹೇಳಿದರು; ಅವರ ಕಸುಬುಗಳ ಕುರಿತು ನನಗೆ ತಿಳಿಯದು

[109] ಅವರ ವಿಚಾರಣೆಯ ಹೊಣೆ ಇರುವುದು ನನ್ನ ಒಡೆಯನಿಗೆ ಮಾತ್ರ. ನಿಮಗೆ ಇದರ ಅರಿವಿದ್ದಿದ್ದರೆ ಚೆನ್ನಾಗಿತ್ತು

[110] ನಾನಂತು ವಿಶ್ವಾಸಿಗಳನ್ನು ದೂರ ಓಡಿಸಲಾರೆ

[111] ನಾನು ಕೇವಲ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ

[112] ಅವರು (ನಾಡಿನವರು) ಹೇಳಿದರು; ಓ ನೂಹ್, ನೀನು (ಇದನ್ನೆಲ್ಲಾ) ನಿಲ್ಲಿಸದಿದ್ದರೆ ಖಂಡಿತ, ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು

[113] ಅವರು (ನೂಹ್) ಹೇಳಿದರು; ನನ್ನೊಡೆಯಾ, ನನ್ನ ಜನಾಂಗದವರು ನನ್ನನ್ನು ತಿರಸ್ಕರಿಸಿದ್ದಾರೆ

[114] ನೀನು ನನ್ನ ಹಾಗೂ ಅವರ ನಡುವೆ ಒಂದು ಸ್ಪಷ್ಟ ತೀರ್ಮಾನ ಮಾಡಿಬಿಡು ಮತ್ತು ನನ್ನನ್ನೂ ನನ್ನ ಜೊತೆಗಿರುವ ವಿಶ್ವಾಸಿಗಳನ್ನೂ ರಕ್ಷಿಸು

[115] ಕೊನೆಗೆ, ನಾವು ಅವರನ್ನೂ, ತುಂಬಿದ ಹಡಗಿನಲ್ಲಿ ಅವರ ಜೊತಗಿದ್ದವರನ್ನೂ ರಕ್ಷಿಸಿದೆವು

[116] ಆ ಬಳಿಕ ನಾವು ಇತರರನ್ನು ಮುಳುಗಿಸಿ ಬಿಟ್ಟೆವು

[117] ಖಂಡಿತವಾಗಿಯೂ ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ

[118] ನಿಮ್ಮೊಡೆಯನು ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ

[119] ಆದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು

[120] ಅವರೊಡನೆ ಅವರ ಸಹೋದರ ಹೂದ್ ಹೇಳಿದ್ದರು; ನೀವೇನು ಅಂಜುವುದಿಲ್ಲವೇ

[121] ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೇವದೂತನಾಗಿದ್ದೇನೆ

[122] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[123] ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಂತು ಎಲ್ಲ ಲೋಕಗಳ ಒಡೆಯನ ಬಳಿಯಲ್ಲೇ ಇದೆ

[124] ನೀವೇನು, ಕೇವಲ ವ್ಯರ್ಥ ಮೋಜಿಗಾಗಿ ಪ್ರತಿಯೊಂದು ಎತ್ತರದ ಸ್ಥಳದಲ್ಲೂ ಒಂದು ಸ್ಮಾರಕವನ್ನು ನಿರ್ಮಿಸುತ್ತೀರಾ

[125] ಮತ್ತು ಇಲ್ಲೇ ಶಾಶ್ವತವಾಗಿ ಇರಲಿಕ್ಕಾಗಿ ನೀವು ಭವ್ಯ ಭವನಗಳನ್ನು ನಿರ್ಮಿಸುತ್ತೀರಾ

[126] ಮತ್ತು ನೀವು ಆಕ್ರಮಿಸುವಾಗ ಬಹಳ ಕ್ರೂರಿಗಳಾಗಿ ಆಕ್ರಮಿಸುತ್ತೀರಿ

[127] (ಇದನ್ನೆಲ್ಲಾ ಬಿಟ್ಟು) ನೀವೀಗ ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[128] ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ನೆರವಾದವನಿಗೆ ಅಂಜಿರಿ

[129] ಅವನು ನಿಮಗೆ ನೆರವಾಗಿರುವನು, ಜಾನುವಾರುಗಳ ಮೂಲಕ ಹಾಗೂ ಸಂತತಿಗಳ ಮೂಲಕ

[130] ತೋಟಗಳ ಹಾಗೂ ಚಿಲುಮೆಗಳ ಮೂಲಕ

[131] ನೀವು ಒಂದು ಮಹಾದಿನದ ಶಿಕ್ಷೆಗೆ ಗುರಿಯಾಗುವಿರೆಂಬ ಭಯ ನನಗಿದೆ

[132] ಅವರು (ಜನಾಂಗದವರು) ಹೇಳಿದರು; ನಮ್ಮ ಮಟ್ಟಿಗೆ ನೀವು ಬೋಧಿಸಿದರೂ ಒಂದೇ, ಬೋಧಿಸದೆ ಇದ್ದರೂ ಒಂದೇ

[133] ಅವೆಲ್ಲಾ ಕೇವಲ ಗತಕಾಲದವರ ಆಚಾರಗಳು

[134] ನಾವು ಯಾವ ಶಿಕ್ಷೆಗೂ ಗುರಿಯಾಗಲಾರೆವು

[135] ಹೀಗೆ, ಅವರು ಅವರನ್ನು (ಹೂದ್‌ರನ್ನು) ತಿರಸ್ಕರಿಸಿದರು ಮತ್ತು ನಾವು ಅವರನ್ನು (ಹೂದ್‌ರ ಜನಾಂಗದವರನ್ನು) ನಾಶಮಾಡಿದೆವು. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ

[136] ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ

[137] ಸಮೂದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು

[138] ಅವರ ಸಹೋದರ ಸಾಲಿಹ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ

[139] ನಾನು ನಿಮ್ಮೆಡೆಗೆ ಬಂದಿರುವ, ನಂಬಲರ್ಹನಾದ ದೇವದೂತನಾಗಿದ್ದೇನೆ

[140] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[141] ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನ್ನ ಪ್ರತಿಫಲವು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರವಿದೆ

[142] ನಿಮ್ಮನ್ನೇನು ಇಲ್ಲೇ ಸದಾ ನಿಶ್ಚಿಂತರಾಗಿರಲು ಬಿಟ್ಟು ಬಿಡಲಾಗುವುದೇ

[143] ಈ ಉದ್ಯಾನಗಳಲ್ಲಿ ಹಾಗೂ ಚಿಲುಮೆಗಳಲ್ಲಿ

[144] ಈ ಹೊಲಗಳಲ್ಲಿ ಹಾಗೂ ನಯ ನಾಜೂಕಿನ ಖರ್ಜೂರದ ಗೊಂಚಲುಗಳಿರುವ ಹೊಲಗಳಲ್ಲಿ

[145] ನೀವು ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸಿ ಸಂಭ್ರಮ ಪಡುತ್ತೀರಿ

[146] ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[147] ನೀವು ಅತಿಕ್ರಮಿಗಳ ಆದೇಶಗಳನ್ನು ಅನುಸರಿಸಬೇಡಿ

[148] ಅವರು ಭೂಮಿಯಲ್ಲಿ ಅಶಾಂತಿ ಹಬ್ಬುವವರೇ ಹೊರತು ಯಾವುದೇ ಸುಧಾರಣೆಯ ಕೆಲಸ ಮಾಡುವವರಲ್ಲ

[149] ಅವರು (ಜನಾಂಗದವರು) ಹೇಳಿದರು; ನೀವು ಒಬ್ಬ ಮಾಟಪೀಡಿತ ವ್ಯಕ್ತಿಯಾಗಿರುವಿರಿ

[150] ನೀವು ಕೇವಲ ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನೀವು ನಿಜಕ್ಕೂ ಸತ್ಯವಂತರಾಗಿದ್ದರೆ ಏನಾದರೂ ಪುರಾವೆ ತನ್ನಿರಿ

[151] ಅವರು (ಸಾಲಿಹ್) ಹೇಳಿದರು; ಈ ಹೆಣ್ಣೊಂಟೆ. ಇದು ನೀರು ಕುಡಿಯುವುದಕ್ಕೆ ಮತ್ತು ನೀವು ನೀರು ಕುಡಿಯುವುದಕ್ಕೆ (ಪ್ರತ್ಯೇಕ) ದಿನ ನಿಗದಿಯಾಗಿರುತ್ತದೆ

[152] ನೀವು ಕೆಟ್ಟ ಸಂಕಲ್ಪದೊಂದಿಗೆ ಇದನ್ನು ಮುಟ್ಟಬೇಡಿ. ಮುಟ್ಟಿದರೆ ನೀವು ಒಂದು ಮಹಾ ದಿನದ ಶಿಕ್ಷೆಗೆ ಗುರಿಯಾಗುವಿರಿ

[153] ಅವರು ಅದನ್ನು ಕಡಿದು ಬಿಟ್ಟರು ಮತ್ತು ಆ ಬಳಿಕ ಬಹಳಷ್ಟು ಪಶ್ಚಾತ್ತಾಪ ಪಟ್ಟರು

[154] ಕೊನೆಗೆ ಶಿಕ್ಷೆಯು ಅವರನ್ನು ಆವರಿಸಿತು. ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ

[155] ಖಂಡಿತವಾಗಿಯೂ ನಿಮ್ಮ ಒಡೆಯನು ಬಹಳ ಪ್ರಬಲನೂ ಕರುಣಾಳುವೂ ಆಗಿದ್ದಾನೆ

[156] ಲೂತ್‌ರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು

[157] ಅವರ ಸಹೋದರ ಲೂತ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ

[158] ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿದ್ದೇನೆ

[159] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[160] ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ

[161] ಸರ್ವ ಜಗತ್ತಿನಲ್ಲಿ ನೀವು ಮಾತ್ರ (ಕಾಮಕ್ಕಾಗಿ) ಪುರುಷರ ಬಳಿಗೆ ಹೋಗುತ್ತೀರಾ

[162] ಮತ್ತು ನೀವು ನಿಮಗಾಗಿ ಅಲ್ಲಾಹನು ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ಬಿಟ್ಟು ಬಿಡುತ್ತೀರಾ? ನಿಜವಾಗಿ, ನೀವು ಅತಿಕ್ರಮಿಗಳಾಗಿರುವಿರಿ

[163] ಅವರು (ಜನರು) ಹೇಳಿದರು; ನೀವು (ನಿಮ್ಮ ಉಪದೇಶವನ್ನು) ನಿಲ್ಲಿಸದಿದ್ದರೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾಗುವುದು

[164] ಅವರು (ಲೂತ್) ಹೇಳಿದರು; ನಿಮ್ಮ ಕೃತ್ಯ (ಸಲಿಂಗಕಾಮ)ದ ಬಗ್ಗೆ ನನಗೆ ಜಿಗುಪ್ಸೆ ಇದೆ

[165] ನನ್ನೊಡೆಯಾ, ನನ್ನನ್ನೂ, ನನ್ನ ಪಾಳಯವರನ್ನೂ, ಅವರ ಕೃತ್ಯಗಳಿಂದ ರಕ್ಷಿಸು

[166] ಕೊನೆಗೆ ನಾವು ಅವರನ್ನೂ ಅವರ ಪಾಳಯದ ಎಲ್ಲರನ್ನೂ ರಕ್ಷಿಸಿದೆವು

[167] ಹಿಂದೆ ಉಳಿದುಕೊಂಡ ಒಬ್ಬ ವೃದ್ದೆಯ ಹೊರತು

[168] ಆ ಬಳಿಕ ನಾವು ಇತರೆಲ್ಲರನ್ನೂ ನಾಶ ಮಾಡಿಬಿಟ್ಟೆವು

[169] ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಎಚ್ಚರಿಸಲಾಗಿದ್ದವರ ಪಾಲಿಗೆ ಅದು ಬಹಳ ಕೆಟ್ಟ ಮಳೆಯಾಗಿತ್ತು

[170] ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ

[171] ನಿಮ್ಮ ಒಡೆಯನಂತು ತುಂಬಾ ಪ್ರಬಲನೂ ಕರುಣಾಳುವೂ ಆಗಿದ್ದಾನೆ

[172] ‘ಐಕಃ’ದವರು (ಹಲವು) ದೂತರನ್ನು ತಿರಸ್ಕರಿಸಿದರು

[173] ಅವರೊಡನೆ (ದೂತ) ಶುಐಬ್ ಹೇಳಿದರು; ನೀವೇನು ಅಂಜುವುದಿಲ್ಲವೇ

[174] ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿರುವೆನು

[175] ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ

[176] ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ

[177] ಪೂರ್ಣವಾಗಿ ಅಳತೆಮಾಡಿರಿ ಮತ್ತು ಅಳತೆಯಲ್ಲಿ ಕಡಿತಗೊಳಿಸಬೇಡಿ

[178] ನೇರವಾಗಿರುವ ತಕ್ಕಡಿಯಲ್ಲೇ ತೂಗಿರಿ

[179] ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಾ ತಿರುಗಬೇಡಿ

[180] ಮತ್ತು ನೀವು, ನಿಮ್ಮನ್ನು ಹಾಗೂ ನಿಮಗಿಂತ ಮೊದಲಿನವರನ್ನು ಸೃಷ್ಟಿಸಿದವನಿಗೆ ಅಂಜಿರಿ

[181] ಅವರು ಹೇಳಿದರು; ನೀನು ಖಂಡಿತ ಮಾಟಪೀಡಿತನಾಗಿರುವೆ

[182] ನೀನು ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನಾವು ನಿನ್ನನ್ನು ಸುಳ್ಳುಗಾರನೆಂದು ಭಾವಿಸುತ್ತೇವೆ

[183] ನೀನು ನಿಜಕ್ಕೂ ಸತ್ಯವಂತನಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು

[184] ಅವರು (ಶುಐಬ್) ಹೇಳಿದರು; ನನ್ನೊಡೆಯಾ, ಅವರೇನು ಮಾಡುತ್ತಿರುವರೆಂಬುದು ನಿನಗೆ ತಿಳಿದಿದೆ

[185] ಅವರು (ಐಕಃದವರು) ಅವರನ್ನು (ಶುಐಬ್‌ರನ್ನು) ತಿರಸ್ಕರಿಸಿದರು. ಕೊನೆಗೆ ನೆರಳಿನ ದಿನದ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. ಅದು ನಿಜಕ್ಕೂ ಒಂದು ಮಹಾ ದಿನದ ಶಿಕ್ಷೆಯಾಗಿತ್ತು

[186] ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ

[187] ಮತ್ತು ಖಂಡಿತವಾಗಿಯೂ ನಿಮ್ಮ ಒಡೆಯನು ಅತ್ಯಂತ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ

[188] ಇದು (ಕುರ್‌ಆನ್) ಎಲ್ಲ ಲೋಕಗಳ ಒಡೆಯನಿಂದಲೇ ಇಳಿಸಲ್ಪಟ್ಟಿದೆ

[189] ನಂಬಲರ್ಹನಾದ ಆತ್ಮನು (ಜಿಬ್ರೀಲ್) ಇದನ್ನು ಹೊತ್ತು ಇಳಿದಿರುವನು –

[190] – ನಿಮ್ಮ (ದೂತರ) ಮನದ ಮೇಲೆ, ನೀವು ಎಚ್ಚರಿಸುವವರಾಗಬೇಕೆಂದು –

[191] – ಸ್ಪಷ್ಟವಾದ ಅರಬೀ ಭಾಷೆಯಲ್ಲಿ

[192] ಖಂಡಿತವಾಗಿಯೂ ಇದು (ಈ ಮಾಹಿತಿ) ಗತಕಾಲದವರ ಗ್ರಂಥಗಳಲ್ಲೂ ಇದೆ

[193] ಇದನ್ನೆಲ್ಲಾ ಇಸ್ರಾಈಲರ ಸಂತತಿಯ ವಿದ್ವಾಂಸರು ಬಲ್ಲರು ಎಂಬುದು ಅವರ ಪಾಲಿಗೆ ಒಂದು ಪುರಾವೆಯಲ್ಲವೇ

[194] ಒಂದು ವೇಳೆ ನಾವು ಇದನ್ನು ಅರಬರಲ್ಲದ ಯಾರಿಗಾದರೂ ಇಳಿಸಿಕೊಟ್ಟಿದ್ದರೆ

[195] ಮತ್ತು ಆತನು ಅವರಿಗೆ ಅದನ್ನು ಓದಿ ಕೇಳಿಸಿದ್ದರೆ, ಆಗಲೂ ಅವರು ಇದನ್ನು ನಂಬುತ್ತಿರಲಿಲ್ಲ

[196] ಈ ರೀತಿ ನಾವು ಅದನ್ನು (ನಿರಾಕರಣೆಯನ್ನು) ಅಪರಾಧಿಗಳ ಮನಸ್ಸುಗಳೊಳಗೆ ನಾಟಿ ಬಿಟ್ಟಿರುವೆವು

[197] ನಿಜವಾಗಿ ಅವರು, ಯಾತನಾಮಯ ಶಿಕ್ಷೆಯನ್ನು ಕಾಣುವವರೆಗೂ ಇದನ್ನು ನಂಬಲಾರರು

[198] ಅದು (ಆ ಶಿಕ್ಷೆಯು) ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರಿಗೆ ಅದರ ಅರಿವೂ ಇರಲಾರದು

[199] ಆಗ ಅವರು, ನಮಗೆ ಒಂದಿಷ್ಟು ಕಾಲಾವಕಾಶ ಸಿಕ್ಕೀತೇ? ಎಂದು ಕೇಳುವರು

[200] ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿರುವರೇ

[201] ನೀವು ಕಂಡಿರಾ? ನಾವು ಅವರನ್ನು ಸುಖಭೋಗದಲ್ಲಿರಲು ವರ್ಷಗಟ್ಟಲೆ ಅವಕಾಶ ನೀಡಿದರೆ

[202] ಮತ್ತು ಆ ಬಳಿಕ, ಅವರಿಗೆ ಏನನ್ನು ವಾಗ್ದಾನ ಮಾಡಲಾಗಿತ್ತೋ ಅದು (ಶಿಕ್ಷೆಯು) ಬಂದುಬಿಟ್ಟರೆ

[203] ಅವರು ಭೋಗಿಸುತ್ತಿದ್ದ ವಸ್ತುಗಳಿಂದ ಅವರಿಗೆ ಯಾವ ಲಾಭವೂ ಆಗದು

[204] ಎಚ್ಚರಿಸುವವರನ್ನು ಕಳಿಸದೆ ನಾವು ಯಾವುದೇ ನಾಡನ್ನು ನಾಶಮಾಡಿಲ್ಲ

[205] ಇದು ಉಪದೇಶ. ನಾವೆಂದೂ ಅಕ್ರಮಿಗಳಾಗಿರಲಿಲ್ಲ

[206] ಇದನ್ನು (ಕುರ್‌ಆನ್‌ಅನ್ನು) ತರುವವರು ಶೈತಾನರಲ್ಲ

[207] ಅವರು ಅದಕ್ಕೆ ಅರ್ಹರೂ ಅಲ್ಲ ಮತ್ತು ಅದು ಅವರಿಗೆ ಸಾಧ್ಯವೂ ಇಲ್ಲ

[208] ಇದನ್ನು ಕೇಳದಂತೆ ಅವರನ್ನು ತಡೆಯಲಾಗಿದೆ

[209] ಅಲ್ಲಾಹನ ಜೊತೆಗೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸಬೇಡಿ. ಅನ್ಯಥಾ ನೀವು ಶಿಕ್ಷೆಗೊಳಗಾಗುವಿರಿ

[210] ನೀವು ನಿಮ್ಮ ಹತ್ತಿರದ ಬಂಧುಗಳನ್ನು (ಮೊದಲು) ಎಚ್ಚರಿಸಿರಿ

[211] ಮತ್ತು ನಂಬಿಕೆ ಇಟ್ಟವರ ಪೈಕಿ ನಿಮ್ಮನ್ನು ಅನುಸರಿಸುವವರ ಪಾಲಿಗೆ ನೀವು ವಿಶೇಷ ವಿನಯ ಉಳ್ಳವರಾಗಿರಿ

[212] ಇನ್ನು ಅವರು ನಿಮಗೆ ಅವಿಧೇಯರಾದರೆ, ನಿಮ್ಮ ಕರ್ಮಗಳಿಗೆ ನಾನು ಹೊಣೆಯಲ್ಲ ಎಂದು ಹೇಳಿಬಿಡಿರಿ

[213] (ದೂತರೇ,) ನೀವು ಆ ಪ್ರಬಲನಾದ ಕರುಣಾಮಯಿಯಲ್ಲಿ ಭರವಸೆ ಇಡಿರಿ

[214] ಅವನು ನಿಮ್ಮನ್ನು ಕಾಣುತ್ತಿರುತ್ತಾನೆ, ನೀವು ನಿಂತಿರುವಾಗ

[215] ಮತ್ತು ಸಾಷ್ಟಾಂಗವೆರಗುವವರ (ನಮಾಝ್ ಸಲ್ಲಿಸುವವರ) ಜೊತೆಗೆ ನೀವು ತಿರುಗಾಡುತ್ತಿರುವಾಗ (ಅವನು ನಿಮ್ಮನ್ನು ಕಾಣುತ್ತಿರುತ್ತಾನೆ)

[216] ಅವನು ಖಂಡಿತ ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ

[217] ಶೈತಾನನು ಯಾರ ಬಳಿಗೆ ಇಳಿದು ಬರುತ್ತಾರೆಂದು ನಾನು ನಿಮಗೆ ತಿಳಿಸಲೇ

[218] ಸುಳ್ಳಾರೋಪಗಳನ್ನು ಹೊರಿಸುವ ಪ್ರತಿಯೊಬ್ಬ ಪಾಪಿಯ ಬಳಿಗೆ ಅವರು ಇಳಿದು ಬರುತ್ತಾರೆ

[219] ಅವರು, ಅವರಿಗೆ ವದಂತಿಗಳನ್ನು ತಲುಪಿಸುತ್ತಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುಳ್ಳಾಗಿರುತ್ತವೆ

[220] ಮತ್ತು ಕವಿಗಳನ್ನು ದಾರಿಗೆಟ್ಟವರು ಮಾತ್ರ ಅನುಸರಿಸುತ್ತಾರೆ

[221] ನೀವು ಕಾಣುತ್ತಿಲ್ಲವೇ, ಅವರು (ಕವಿಗಳು) ಪ್ರತಿಯೊಂದು ಕಣಿವೆಯಲ್ಲೂ ಅಲೆಯುವುದನ್ನು

[222] ಮತ್ತು ಅವರು ತಾವು ಮಾಡಿಲ್ಲದ್ದನ್ನು ಹೇಳುತ್ತಿರುವುದನ್ನು

[223] ಸತ್ಯವನ್ನು ನಂಬಿದವರು ಮತ್ತು ಸತ್ಕರ್ಮಿಗಳು ಇದಕ್ಕೆ ಹೊರತಾಗಿರುತ್ತಾರೆ. ಅವರು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುತ್ತಾರೆ ಮತ್ತು ತಮ್ಮ ಮೇಲೆ ಅನ್ಯಾಯವಾದ ಬಳಿಕವಷ್ಟೇ ಅದಕ್ಕೆ ಪ್ರತೀಕಾರವೆಸಗುತ್ತಾರೆ. ಅನ್ಯಾಯ ಎಸಗಿದವರು, ತಮ್ಮನ್ನು ಎಂತಹ ನೆಲೆಗೆ ಮರಳಿಸಲಾಗುವುದು ಎಂಬುದನ್ನು ಅರಿಯಲಿದ್ದಾರೆ

[224] ತ್ವಾ ಸೀನ್. ಇವು ಕುರ್‌ಆನಿನ ಮತ್ತು ಬಹಳ ಸ್ಪಷ್ಟವಾಗಿರುವ ಗ್ರಂಥದ ವಚನಗಳು

[225] ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಶುಭವಾರ್ತೆ ಇದರಲ್ಲಿದೆ

[226] ಅವರು ನಮಾಝನ್ನು ಪಾಲಿಸುವವರು, ಝಕಾತನ್ನು ಪಾವತಿಸುವವರು ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿರುತ್ತಾರೆ

[227] ನಾವು, ಪರಲೋಕವನ್ನು ನಂಬದವರ ಪಾಲಿಗೆ, ಅವರ ಕರ್ಮಗಳನ್ನು ಖಂಡಿತ, ಚಂದಗಾಣಿಸಿ ಬಿಟ್ಟಿದ್ದೇವೆ. ಆದ್ದರಿಂದ ಅವರು ಕುರುಡಾಗಿ ಅಲೆಯುತ್ತಲೇ ಇರುತ್ತಾರೆ

ಇರುವೆ

Surah 27

[1] ಅವರೇ, ಭಾರೀ ಕೆಟ್ಟ ಶಿಕ್ಷೆಗೆ ಗುರಿಯಾಗುವವರು ಮತ್ತು ಪರಲೋಕದಲ್ಲಿ ಅವರು ಅತ್ಯಧಿಕ ನಷ್ಟ ಅನುಭವಿಸುವರು

[2] ಖಂಡಿತವಾಗಿಯೂ ಈ ಕುರ್‌ಆನನ್ನು ನಿಮಗೆ, ಅತ್ಯಂತ ಯುಕ್ತಿವಂತ, ಜ್ಞಾನಿಯ ಕಡೆಯಿಂದ ನೀಡಲಾಗುತ್ತಿದೆ

[3] ಮೂಸಾ ತಮ್ಮ ಮನೆಯವರೊಡನೆ ಹೇಳಿದರು; ನಾನು ಬೆಂಕಿಯನ್ನು ನೋಡಿದ್ದೇನೆ. ನಾನೀಗ ನಿಮಗಾಗಿ ಅಲ್ಲಿಂದ ಏನಾದರೂ ಸುದ್ದಿಯನ್ನು ತರುವೆನು ಅಥವಾ ನಿಮಗೆ ಚಳಿ ಕಾಯಿಸಿಕೊಳ್ಳುವುದಕ್ಕಾಗಿ ಕೆಂಡವನ್ನಾದರೂ ತರುವೆನು

[4] ಕೊನೆಗೆ ಅವರು ಅದರ ಬಳಿಗೆ ಬಂದಾಗ ಕರೆ ನೀಡಲಾಯಿತು; ‘‘ಈ ಬೆಂಕಿಯ ಒಳಗಿರುವವರು (ಮಲಕ್‌ಗಳು) ಹಾಗೂ ಅದರ ಸುತ್ತ ಇರುವವರನ್ನು (ಮೂಸಾರನ್ನು) ಸಮೃದ್ಧಗೊಳಿಸಲಾಗಿದೆ. ಮತ್ತು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನು ಪರಮ ಪಾವನನು.’’

[5] ‘‘ಓ ಮೂಸಾ, ನಾನೇ, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವ ಅಲ್ಲಾಹ್’’

[6] ‘‘ನೀವು ನಿಮ್ಮ ಊರುಗೋಲನ್ನು ಕೆಳ ಹಾಕಿರಿ.’’ (ಮೂಸಾ ತಮ್ಮ ಊರುಗೋಲನ್ನು ಎಸೆದಾಗ) ಅದು ಹಾವಿನಂತೆ ಸರಿದಾಡುವುದನ್ನು ಕಂಡು, ಅವರು ಮರಳಿ ಹೊರಟರು ಮತ್ತು ಹಿಂದಿರುಗಿ ನೋಡಲಿಲ್ಲ. ಅವರೊಡನೆ ಹೇಳಲಾಯಿತು; ‘‘ಓ ಮೂಸಾ, ಅಂಜಬೇಡಿ. ದೂತರು ನನ್ನ ಬಳಿ ಖಂಡಿತ ಅಂಜುವುದಿಲ್ಲ’’

[7] ‘‘ಅಕ್ರಮವೆಸಗಿದವನ ಹೊರತು. ಆದರೆ ಹಾಗೆ ಕೆಡುಕನ್ನು ಮಾಡಿದ ಬಳಿಕ ಅದನ್ನು ಒಳಿತಾಗಿ ಪರಿವರ್ತಿಸಿದವನ ಪಾಲಿಗೆ ನಾನು ಖಂಡಿತ, ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತೇನೆ’’

[8] ‘‘ನೀವೀಗ ನಿಮ್ಮ ಕೈಯನ್ನು ನಿಮ್ಮ ಅಂಗಿಯೊಳಗೆ ಹಾಕಿರಿ. ಅದು ಸುಲಭವಾಗಿ, ಪ್ರಕಾಶಿಸುತ್ತಾ ಹೊರಬರುವುದು. ಇದು ಫಿರ್‌ಔನ್ ಮತ್ತು ಅವನ ಜನಾಂಗದವರಿಗಾಗಿ ಇರುವ ಒಂಭತ್ತು ಪುರಾವೆಗಳಲ್ಲೊಂದು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದಾರೆ’’

[9] ಕೊನೆಗೆ, ಕಣ್ಣು ತೆರೆಸುವಂತಹ ನಮ್ಮ ಪುರಾವೆಗಳು ಅವರಿಗೆ (ಫಿರ್‌ಔನನ ಜನರಿಗೆ) ತಲುಪಿದಾಗ ಅವರು, ‘‘ಇದೆಲ್ಲಾ ಸ್ಪಷ್ಟ ಇಂದ್ರಜಾಲ’’ ಎಂದರು

[10] ನಿಜವಾಗಿ ಅವರ ಮನಸ್ಸುಗಳಲ್ಲಿ ಆ ಕುರಿತು ನಂಬಿಕೆ ಇದ್ದರೂ ಅವರು ಅಕ್ರಮ ಹಾಗೂ ಅಹಂಕಾರದೊಂದಿಗೆ ಅದನ್ನು ತಿರಸ್ಕರಿಸಿದರು. ಕೊನೆಗೆ ಆ ಗೊಂದಲಕೋರರ ಗತಿ ಏನಾಯಿತೆಂದು ನೋಡಿರಿ

[11] ಮುಂದೆ ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ನೀಡಿದೆವು. ಅವರಿಬ್ಬರೂ ಹೇಳಿದರು; ಪ್ರಶಂಸೆಗಳೆಲ್ಲಾ, ತನ್ನ ಹೆಚ್ಚಿನ ವಿಶ್ವಾಸಿ ದಾಸರಿಗಿಂತ ನಮಗೆ ಹಿರಿಮೆಯನ್ನು ಅನುಗ್ರಹಿಸಿದ ಅಲ್ಲಾಹನಿಗೇ ಮೀಸಲು

[12] ಸುಲೈಮಾನರು, ದಾವೂದರ ಉತ್ತರಾಧಿಕಾರಿಯಾದರು. ಅವರು ಹೇಳಿದರು; ಮಾನವರೇ, ನಮಗೆ ಪಕ್ಷಿಗಳ ಭಾಷೆಯನ್ನು ಕಲಿಸಲಾಗಿದೆ ಮತ್ತು ನಮಗೆ ಎಲ್ಲ ವಸ್ತು

[13] ಗಳನ್ನೂ ನೀಡಲಾಗಿದೆ. ಇದು ಖಂಡಿತ ಒಂದು ಸ್ಪಷ್ಟ ಅನುಗ್ರಹವಾಗಿದೆ

[14] ಮತ್ತು ಸುಲೈಮಾನರಿಗಾಗಿ ಜಿನ್ನ್‌ಗಳು, ಮಾನವರು ಮತ್ತು ಪಕ್ಷಿಗಳನ್ನು ಒಳಗೊಂಡ ಒಂದು ಸೇನೆಯನ್ನು ಸಂಘಟಿಸಲಾಯಿತು ಮತ್ತು ಅವರನ್ನೆಲ್ಲಾ ಶಿಸ್ತಿಗೆ ಒಳಪಡಿಸಲಾಗಿತ್ತು

[15] ಮುಂದೆ, ಒಮ್ಮೆ ಅವರು ಇರುವೆಗಳಿದ್ದ ಒಂದು ಬಯಲಿಗೆ ಬಂದಾಗ ಒಂದು ಇರುವೆ ಹೇಳಿತು; ಇರುವೆಗಳೇ, ನೀವು ನಿಮ್ಮ ಮನೆಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಪಡೆಗಳು ನಿಮ್ಮನ್ನು ತುಳಿದು ನಾಶಮಾಡದಿರಲಿ. ಅವರಿಗೆ ಅದರ ಅರಿವೂ ಇರುವುದಿಲ್ಲ

[16] ಅದರ ಮಾತನ್ನು ಕೇಳಿ ಅವರು (ಸುಲೈಮಾನ್) ನಕ್ಕುಬಿಟ್ಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ನನಗೆ ಹಾಗೂ ನನ್ನ ಹೆತ್ತವರಿಗೆ ಕರುಣಿಸಿರುವ ಅನುಗ್ರಹಗಳಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುವ ಮತ್ತು ನೀನು ಮೆಚ್ಚುವಂತಹ ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ಕರುಣಿಸು ಮತ್ತು ನಿನ್ನ ಅನುಗ್ರಹದಿಂದ ನೀನು ನನ್ನನ್ನು ನಿನ್ನ ಸಜ್ಜನ ದಾಸರ ಸಾಲಿಗೆ ಸೇರಿಸು

[17] ಆ ಬಳಿಕ ಅವರು ಪಕ್ಷಿಗಳ ಸಮೀಕ್ಷೆ ನಡೆಸಿ ಹೇಳಿದರು; ಇದೇನು, ‘ಹುದ್‌ಹುದ್’ (ಪಕ್ಷಿ) ನನಗೆ ಕಾಣಿಸುತ್ತಿಲ್ಲವಲ್ಲಾ? ಅದೇನು ಕಣ್ಮರೆಯಾಗಿ ಬಿಟ್ಟಿತೇ

[18] ಅದು ಸ್ಪಷ್ಟವಾದ ಪುರಾವೆಯನ್ನು ತರದಿದ್ದರೆ, ನಾನು ಅದಕ್ಕೆ ಉಗ್ರ ಶಿಕ್ಷೆ ನೀಡುವೆನು ಅಥವಾ ಅದರ ಕೊರಳು ಕೊಯ್ದು ಬಿಡುವೆನು

[19] ಅದು (ಹುದ್‌ಹುದ್ ಪಕ್ಷಿ) ಹೆಚ್ಚು ತಡಮಾಡಲಿಲ್ಲ. ಅದು ಹೇಳಿತು; ನೀವು ಅರಿತಿಲ್ಲದ್ದನ್ನು ನಾನು ಅರಿತಿದ್ದೇನೆ ಮತ್ತು ನಾನು ನಿಮ್ಮ ಬಳಿಗೆ ಸಬಾದಿಂದ ಒಂದು ಖಚಿತ ಸುದ್ದಿಯನ್ನು ತಂದಿದ್ದೇನೆ

[20] ಅಲ್ಲಿ ನಾನು ಅವರ ರಾಣಿಯಾಗಿರುವ ಒಬ್ಬ ಮಹಿಳೆಯನ್ನು ನೋಡಿದೆ. ಆಕೆಗೆ ಎಲ್ಲವನ್ನೂ ನೀಡಲಾಗಿದೆ ಮತ್ತು ಆಕೆಯ ಬಳಿ ಒಂದು ದೊಡ್ಡ ಸಿಂಹಾಸನವಿದೆ

[21] ಆಕೆ ಮತ್ತು ಆಕೆಯ ಜನಾಂಗದವರು ಅಲ್ಲಾಹನನ್ನು ಬಿಟ್ಟು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ನೋಡಿದೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಚಂದಗಾಣಿಸಿದ್ದಾನೆ ಮತ್ತು ಸರಿದಾರಿಯಿಂದ ಅವರನ್ನು ತಡೆದಿದ್ದಾನೆ. ಅವರು ಸನ್ಮಾರ್ಗವನ್ನು ಆನುಸರಿಸುತ್ತಿಲ್ಲ

[22] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಅಡಗಿರುವವುಗಳನ್ನು ಹೊರ ತರ ಬಲ್ಲ ಮತ್ತು ನೀವು ಗುಪ್ತವಾಗಿಡುವ ಹಾಗೂ ಬಹಿರಂಗಗೊಳಿಸುವ ಎಲ್ಲವನ್ನೂ ಬಲ್ಲ ಅಲ್ಲಾಹನಿಗೆ ಅವರು ಸಾಷ್ಟಾಂಗವೆರಗುವುದಿಲ್ಲ

[23] ಅಲ್ಲಾಹನ ಹೊರತು ಬೇರೆ ದೇವರಿಲ್ಲ. ಅವನು ಮಹಾನ್ ವಿಶ್ವ ಸಿಂಹಾಸನದ ಒಡೆಯನು

[24] ಅವರು (ಸುಲೈಮಾನ್) ಹೇಳಿದರು; ನೀನು ಹೇಳುತ್ತಿರುವುದು ಸತ್ಯವೋ ಅಥವಾ ನೀನು ಸುಳ್ಳು ಹೇಳುತ್ತಿರುವೆಯೋ ಎಂಬುದನ್ನು ನಾವೀಗ ನೋಡಿಕೊಳ್ಳುವೆವು

[25] ನೀನೀಗ ನನ್ನ ಪತ್ರದೊಂದಿಗೆ ಹೋಗು ಮತ್ತು ಅದನ್ನು ಆ ಜನರ ಕಡೆಗೆ ಎಸೆ. ಆ ಬಳಿಕ ಅವರಿಂದ ದೂರನಿಂತು, ಅವರು ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೆಂದು ನೋಡು

[26] ಆಕೆ (ರಾಣಿ) ಹೇಳಿದಳು; ಸರದಾರರೇ, ನನ್ನ ಬಳಿಗೆ ಖಂಡಿತವಾಗಿಯೂ ಗೌರವಾನ್ವಿತವಾದ ಒಂದು ಪತ್ರವನ್ನು ಕಳಿಸಲಾಗಿದೆ

[27] ಅದು ಸುಲೈಮಾನರ ಕಡೆಯಿಂದ ಬಂದಿದೆ. ಮತ್ತು ಅದರಲ್ಲಿ ‘‘ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ’’ ಎಂದಿದೆ

[28] (ಮತ್ತು) ನನ್ನೆದುರು ಬಂಡಾಯದ ನೀತಿ ತೋರದೆ, ಶರಣಾಗಿ ನನ್ನ ಬಳಿಗೆ ಬನ್ನಿರಿ ಎಂದು (ಹೇಳಲಾಗಿದೆ)

[29] (ಮತ್ತೆ) ಆಕೆ ಹೇಳಿದಳು; ಸರದಾರರೇ, ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನಿಮ್ಮ ಉಪಸ್ಥಿತಿ ಇಲ್ಲದೆ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ

[30] ಅವರು ಹೇಳಿದರು; ನಾವು ತುಂಬಾ ಶಕ್ತಿವಂತರು ಮತ್ತು ಉಗ್ರ ಹೋರಾಟ

[31] ಗಾರರು. ತೀರ್ಮಾನ ನಿಮ್ಮ ಕೈಯಲ್ಲಿದೆ. ನಮಗೆ ಏನನ್ನು ಆದೇಶಿಸಬೇಕೆಂದು ನೀವೇ ನಿರ್ಧರಿಸಿರಿ

[32] ಆಕೆ ಹೇಳಿದಳು; ದೊರೆಗಳು ಯಾವುದಾದರೂ ನಾಡನ್ನು ಪ್ರವೇಶಿಸುವಾಗ ಅವರು ಅದನ್ನು ಖಂಡಿತ ನಾಶಮಾಡಿ ಬಿಡುತ್ತಾರೆ ಮತ್ತು ಅವರು ಅಲ್ಲಿನ ಗೌರವಾನ್ವಿತರನ್ನು ಅಪಮಾನಿಸಿ ಬಿಡುತ್ತಾರೆ. ಅವರು ಮಾಡುವುದೇ ಹಾಗೆ

[33] ನಾನು ಅವರೆಡೆಗೆ ಒಂದು ಉಡುಗೊರೆಯನ್ನು ಕಳಿಸಿಕೊಡುತ್ತೇನೆ ಮತ್ತು (ನಮ್ಮ) ದೂತನು ಮರಳಿ ಏನನ್ನು ತರುತ್ತಾನೆಂದು ಕಾದು ನೋಡುತ್ತೇನೆ

[34] ಆತನು (ದೂತನು) ಸುಲೈಮಾನರ ಬಳಿ ಬಂದಾಗ ಅವರು ಹೇಳಿದರು; ನೀವೇನು ಸಂಪತ್ತಿನಿಂದ ನನಗೆ ನೆರವಾಗ ಬಯಸುತ್ತೀರಾ? ನನಗಂತು ಅಲ್ಲಾಹನು ನಿಮಗೆ ನೀಡಿದ್ದಕ್ಕಿಂತ ಉತ್ತಮವಾದುದನ್ನು ನೀಡಿದ್ದಾನೆ. ನೀವು ಮಾತ್ರ ನಿಮ್ಮ ಉಡುಗೊರೆಯಲ್ಲೇ ಸಂತುಷ್ಟರಾಗಿರುವಿರಿ

[35] ನೀನು ಮರಳಿ ಹೋಗು. ಅವರಿಗೆಂದೂ ಎದುರಿಸಲು ಸಾಧ್ಯವಾಗದ ಪಡೆಯೊಂದಿಗೆ ನಾವು ಅವರಲ್ಲಿಗೆ ಬರಲಿದ್ದೇವೆ ಮತ್ತು ನಾವು ಅವರನ್ನು ಅಪಮಾನಿತರಾಗಿಸಿ ಅಲ್ಲಿಂದ ಹೊರಹಾಕಲಿದ್ದೇವೆ. ಆಗ ಅವರು ಸೋತಿರುವರು

[36] ಸರದಾರರೇ, ಆಕೆ ಶರಣಾಗಿ ನನ್ನ ಬಳಿಗೆ ಬರುವ ಮುನ್ನ ನಿಮ್ಮ ಪೈಕಿ ಯಾರು ಆಕೆಯ ಸಿಂಹಾಸನವನ್ನು ನನ್ನ ಬಳಿಗೆ ತರಬಲ್ಲರು? ಎಂದು ಅವರು ಕೇಳಿದರು

[37] ಜಿನ್ನ್‌ಗಳ ಪೈಕಿ ಇಫ್ರೀತ್ ಹೇಳಿದನು; ನೀವು ನಿಮ್ಮ ಸ್ಥಾನದಿಂದ ಎದ್ದೇಳುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ. ನಾನು ಈ ಕೆಲಸವನ್ನು ಮಾಡುವುದಕ್ಕೆ ಖಂಡಿತ ಶಕ್ತನಾಗಿದ್ದೇನೆ ಹಾಗೂ ವಿಶ್ವಾಸಾರ್ಹನಾಗಿದ್ದೇನೆ

[38] ಗ್ರಂಥದ ಜ್ಞಾನವಿದ್ದವನೊಬ್ಬನು, ‘‘ನೀವು ಕಣ್ಮುಚ್ಚಿ ತೆರೆಯುವ ಮುನ್ನ ನಾನು ಅದನ್ನು ನಿಮ್ಮ ಬಳಿಗೆ ತಂದು ಬಿಡುತ್ತೇನೆ‘‘ಎಂದನು. ಅವರು (ಸುಲೈಮಾನ್) ಅದನ್ನು ತನ್ನ ಸಮೀಪ ಇಟ್ಟಿರುವುದಾಗಿ ಕಂಡಾಗ ಹೇಳಿದರು; ಇದು, ನಾನು ಕೃತಜ್ಞನಾಗುತ್ತೇನೋ ಕೃತಘ್ನತೆ ತೋರುತ್ತೇನೋ ಎಂದು ಪರೀಕ್ಷಿಸಲಿಕ್ಕಾಗಿ ನನ್ನ ಒಡೆಯನ ಕಡೆಯಿಂದ ಸಿಕ್ಕಿರುವ ಒಂದು ಅನುಗ್ರಹವಾಗಿದೆ. ಕೃತಜ್ಞನಾದವನು ಸ್ವತಃ ತನ್ನ ಲಾಭಕ್ಕಷ್ಟೇ ಕೃತಜ್ಞನಾಗುತ್ತಾನೆ ಮತ್ತು ಯಾರಾದರೂ ಕೃತಘ್ನತೆ ತೋರಿದರೆ – ನನ್ನ ಒಡೆಯನಂತು ಸಂಪೂರ್ಣ ನಿರಪೇಕ್ಷ ಹಾಗೂ ಉದಾರಿಯಾಗಿದ್ದಾನೆ

[39] ಅವರು (ಸುಲೈಮಾನ್) ಹೇಳಿದರು; ನೀವು ಆಕೆಯ ಸಿಂಹಾಸನದ ಸ್ವರೂಪವನ್ನು ಬದಲಿಸಿ ಬಿಡಿರಿ. ಆಕೆಗೆ ವಾಸ್ತವದ ಅರಿವಾಗುವುದೋ ಅಥವಾ ಆಕೆ ಸತ್ಯವನ್ನು ಕಾಣಲಾಗದವರ ಸಾಲಿಗೆ ಸೇರುವಳೋ ನೋಡೋಣ

[40] ಆಕೆ ಬಂದಾಗ, ನಿನ್ನ ಸಿಂಹಾಸನ ಇದುವೇ? ಎಂದು ಕೇಳಲಾಯಿತು. ಆಕೆ ಹೇಳಿದಳು; ಇದು ಅದರಂತೆಯೇ ಇದೆ. ನಮಗೆ ಈ ಹಿಂದೆಯೇ ಮಾಹಿತಿ ನೀಡಲಾಗಿತ್ತು ಮತ್ತು ನಾವು ಶರಣಾಗಿರುವೆವು

[41] ಅವರು (ಸುಲೈಮಾನರು) ಈ ಹಿಂದೆ ಆಕೆಯು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದವುಗಳಿಂದ ಆಕೆಯನ್ನು ತಡೆದರು. ಈ ಹಿಂದೆ ಆಕೆ ನಿಜಕ್ಕೂ ಒಂದು ಧಿಕ್ಕಾರಿ ಜನಾಂಗದವಳಾಗಿದ್ದಳು

[42] ಅರಮನೆಯನ್ನು ಪ್ರವೇಶಿಸು ಎಂದು ಆಕೆಯೊಡನೆ ಹೇಳಲಾಯಿತು. ಆಕೆ ಅದನ್ನು (ಅಲ್ಲಿಯ ನೆಲವನ್ನು) ಕಂಡಾಗ, ಅದು ಆಳವಾದ ನೀರೆಂದು ಭಾವಿಸಿ ತನ್ನ ವಸ್ತ್ರವನ್ನು ತನ್ನ ಪಾದಮಟ್ಟದಿಂದ ಮೇಲಕ್ಕೆ ಎಳೆದುಕೊಂಡಳು. ಅವರು (ಸುಲೈಮಾನ್) ಹೇಳಿದರು; ಇದು ಗಾಜುಗಳನ್ನು ಜೋಡಿಸಿ ಕಟ್ಟಿದ ಅರಮನೆ. ಆಕೆ ಹೇಳಿದಳು; ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮವೆಸಗಿದ್ದೇನೆ ಮತ್ತು ಸುಲೈಮಾನರ ಜೊತೆ ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಶರಣಾಗುತ್ತೇನೆ

[43] ಮುಂದೆ ನಾವು, ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್‌ರನ್ನು ಕಳಿಸಿದ್ದೆವು – ಅಲ್ಲಾಹನನ್ನೇ ಪೂಜಿಸಿರಿ (ಎಂಬ ಸಂದೇಶದೊಂದಿಗೆ). ಅಷ್ಟರಲ್ಲೇ ಅವರು ಜಗಳಾಡುವ ಎರಡು ಪಂಗಡಗಳಾಗಿ ಬಿಟ್ಟರು

[44] ಅವರು (ಸ್ವಾಲಿಹ್) ಹೇಳಿದರು; ನನ್ನ ಜನಾಂಗದವರೇ, ನೀವು ಒಳಿತಿಗಿಂತ ಮುನ್ನವೇ ಕೆಡುಕಿಗಾಗಿ ಆತುರ ಪಡುತ್ತಿರುವುದೇಕೆ? ನಿಮ್ಮ ಮೇಲೆ ಕರುಣೆ ತೋರುವಂತಾಗಲು ನೀವೇಕೆ ಅಲ್ಲಾಹನೊಡನೆ ಕ್ಷಮೆಯಾಚಿಸುವುದಿಲ್ಲ

[45] ಅವರು (ಜನಾಂಗದವರು) ಹೇಳಿದರು; ನಾವಂತು, ನಿಮ್ಮನ್ನು ಹಾಗೂ ನಿಮ್ಮ ಜೊತೆಗೆ ಇರುವವರನ್ನು ಅಪಶಕುನವೆಂದೇ ತಿಳಿಯುತ್ತೇವೆ. ಅವರು (ಸ್ವಾಲಿಹ್) ಹೇಳಿದರು; ನಿಮ್ಮ ಅಪಶಕುನವೆಲ್ಲಾ ಅಲ್ಲಾಹನ ಬಳಿ ಇದೆ. ನಿಜವಾಗಿ ನೀವು ಪರೀಕ್ಷೆಗೆ ತುತ್ತಾಗಿರುವ ಜನಾಂಗವಾಗಿದ್ದೀರಿ

[46] ಮತ್ತು ನಗರದಲ್ಲಿ ಒಂಭತ್ತು ಮಂದಿ ಇದ್ದರು. ಅವರು ಭೂಮಿಯಲ್ಲಿ ಅಶಾಂತಿಯನ್ನೇ ಹಬ್ಬುತ್ತಿದ್ದರು. ಯಾವುದೇ ಸುಧಾರಣೆಯ ಕೆಲಸ ಮಾಡುತ್ತಿರಲಿಲ್ಲ

[47] ಅವರು ಹೇಳತೊಡಗಿದರು; ನೀವೆಲ್ಲಾ ಅಲ್ಲಾಹನ ಆಣೆ ಹಾಕಿಕೊಳ್ಳಿರಿ. ನಾವು ರಾತ್ರಿಯ ವೇಳೆ ಆತನ ಮೇಲೂ ಆತನ ಮನೆಯವರ ಮೇಲೂ ಧಾಳಿ ಮಾಡೋಣ ಮತ್ತು ಅವನ ಮನೆಯವರು ನಾಶವಾದಾಗ ನಾವು ಹಾಜರಿರಲಿಲ್ಲವೆಂದೂ ನಾವು ಖಂಡಿತ ಸತ್ಯವಂತರೆಂದೂ ಅವನ ಉತ್ತರಾಧಿಕಾರಿಗಳೊಡನೆ ಹೇಳೋಣ

[48] ಹೀಗೆ ಅವರು ಒಂದು ಸಂಚು ಹೂಡಿದರು ಮತ್ತು ನಾವೂ (ಅಲ್ಲಾಹ್) ಒಂದು ಸಂಚು ಹೂಡಿದೆವು. ಅವರಿಗೆ ಅದರ ಅರಿವೇ ಇರಲಿಲ್ಲ

[49] ಕೊನೆಗೆ ಅವರ ಸಂಚಿನ ಗತಿ ಏನಾಯಿತೆಂದು ನೋಡಿರಿ; ನಾವು ಅವರನ್ನು ಹಾಗೂ ಅವರ ಸಂಪೂರ್ಣ ಜನಾಂಗವನ್ನು ನಾಶಮಾಡಿಬಿಟ್ಟೆವು

[50] ಇದೋ ಅವರ ನಿವಾಸಗಳು! ಅವರ ಅಕ್ರಮಗಳ ಕಾರಣ, ಅವು ತಲೆ ಕೆಳಗಾಗಿ ಬಿದ್ದುಕೊಂಡಿವೆ. ಬಲ್ಲವರಿಗೆ, ಇದರಲ್ಲಿ ಖಂಡಿತ ಪಾಠವಿದೆ

[51] ವಿಶ್ವಾಸಿಗಳನ್ನು ಮತ್ತು ಧರ್ಮನಿಷ್ಠರಾಗಿದ್ದವರನ್ನು ನಾವು ರಕ್ಷಿಸಿದೆವು

[52] ಮತ್ತು ಲೂತ್ ತಮ್ಮ ಜನಾಂಗದವರೊಡನೆ ಹೇಳಿದರು; ನೀವೇನು ಕಣ್ಣಾರೆ ಕಂಡೂ ಅಶ್ಲೀಲತೆಯಲ್ಲಿ ತೊಡಗಿರುವಿರಾ

[53] ನೀವೇನು, ಮಹಿಳೆಯರನ್ನು ಬಿಟ್ಟು, ಕಾಮದ ಈಡೇರಿಕೆಗಾಗಿ ಪುರುಷರ ಬಳಿಗೆ ಹೋಗುವಿರಾ? ನಿಜಕ್ಕೂ ನೀವು ಅಜ್ಞಾನಿ ಜನಾಂಗವಾಗಿರುವಿರಿ

[54] ಅವರ ಜನಾಂಗದವರು ನೀಡಿದ ಉತ್ತರ ಕೇವಲ ಇಷ್ಟೇ; ಲೂತ್ ಮತ್ತು ಅವರ ಜೊತೆಗಾರರನ್ನು ನಿಮ್ಮ ನಾಡಿನಿಂದ ಹೊರದಬ್ಬಿ ಬಿಡಿರಿ. ಅವರು ಭಾರೀ ಪಾವಿತ್ರ ಬಯಸುವ ಜನರಾಗಿದ್ದಾರೆ

[55] ಕೊನೆಗೆ ನಾವು ಅವರನ್ನೂ (ಲೂತ್‌ರನ್ನೂ) ಅವರ ಜೊತೆಗಿದ್ದವರನ್ನೂ ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆಯನ್ನು ನಾವು ಹಿಂದೆ ಉಳಿದುಕೊಳ್ಳುವವರ ಸಾಲಿಗೆ ಸೇರಿಸಿದೆವು

[56] ನಾವು ಅವರ ಮೇಲೆ ಒಂದು ಮಳೆಯನ್ನು ಸುರಿಸಿದೆವು. ಎಚ್ಚರಿಸಲ್ಪಟ್ಟವರ ಮೇಲೆ ಸುರಿಸಲಾದ ಆ ಮಳೆ ಎಷ್ಟೊಂದು ಕೆಟ್ಟದಾಗಿತ್ತು

[57] ಹೇಳಿರಿ; ಎಲ್ಲ ಪ್ರಶಂಸೆಗಳು ಅಲ್ಲಾಹನಿಗೆ. ಮತ್ತು ಅವನು ಆರಿಸಿಕೊಂಡ ಅವನ ದಾಸರಿಗೆ ಶಾಂತಿ. ಅಲ್ಲಾಹನು ಶ್ರೇಷ್ಠನೋ ಅಥವಾ ಅವರು ನೇಮಿಸಿಕೊಂಡಿರುವ ಪಾಲುದಾರರೋ

[58] ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು (ಯಾರು)? ಮುಂದೆ ನಾವು ಅದರಿಂದ, ಭವ್ಯ ತೋಟಗಳನ್ನು ಬೆಳೆಸಿದೆವು. ಅವುಗಳಲ್ಲಿರುವ ಮರಗಳನ್ನು ಬೆಳೆಸಲು ನಿಮಗಂತು ಸಾಧ್ಯವಿರಲಿಲ್ಲ. (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನಿಜವಾಗಿ ಅವರು ಜಗಳಗಂಟರಾಗಿದ್ದಾರೆ

[59] ಭೂಮಿಯನ್ನು ವಾಸಕ್ಕೆ ಯೋಗ್ಯಗೊಳಿಸಿದವನು, ಅದರ ನಡುವೆ ನದಿ ನಾಲೆಗಳನ್ನು ಹರಿಸಿದವನು ಹಾಗೂ ಅದಕ್ಕಾಗಿ (ಭೂಮಿಗಾಗಿ) ಪರ್ವತಗಳನ್ನು ನಿರ್ಮಿಸಿದವನು ಮತ್ತು ಎರಡು ಸಮುದ್ರಗಳ ನಡುವೆ ತೆರೆಯನ್ನು ಕಟ್ಟಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ

[60] ನೊಂದವನು ತನ್ನನ್ನು ಪ್ರಾರ್ಥಿಸಿದಾಗ ಅವನ ಮೊರೆಯನ್ನು ಕೇಳಿ ಸಂಕಟವನ್ನು ನಿವಾರಿಸುವವನು ಮತ್ತು ನಿಮ್ಮನ್ನು ಭೂಮಿಯ ಪ್ರತಿನಿಧಿಗಳಾಗಿ ಮಾಡಿದವನು ಯಾರು? ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಕೆಲವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ

[61] ನೆಲಭಾಗದ ಹಾಗೂ ಸಮುದ್ರದ ಕತ್ತಲುಗಳಲ್ಲಿ ನಿಮಗೆ ದಾರಿತೋರಿಸುವವನು ಮತ್ತು ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ ಶುಭವಾರ್ತೆಯಾಗಿ ಗಾಳಿಯನ್ನು ಕಳಿಸುವವನು ಯಾರು? (ಇದನ್ನೆಲ್ಲಾ ಮಾಡಲು) ಆ ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನೀವು ಅವನ ಜೊತೆ ಪಾಲು ಗೊಳಿಸುವ ಎಲ್ಲರಿಗಿಂತಲೂ ಅವನು ತುಂಬಾ ಉನ್ನತನು

[62] ಸೃಷ್ಟಿ ಕ್ರಿಯೆಯನ್ನು ಆರಂಭಿಸಿದವನು ಮತ್ತು ಅದನ್ನು ಪುನರಾವರ್ತಿಸುವವನು ಯಾರು? ಮತ್ತು ನಿಮಗೆ ಆಕಾಶದಿಂದಲೂ ಭೂಮಿಯಿಂದಲೂ ಆಹಾರ ಒದಗಿಸುತ್ತಲಿರುವವನು ಯಾರು? (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ಹೇಳಿರಿ; ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ

[63] ಹೇಳಿರಿ; ಅಲ್ಲಾಹನೊಬ್ಬನ ಹೊರತು, ಗುಪ್ತ ವಿಷಯಗಳನ್ನು ಬಲ್ಲವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಯಾರೂ ಇಲ್ಲ. ತಮ್ಮನ್ನು ಯಾವಾಗ ಮತ್ತೆ ಜೀವಂತಗೊಳಿಸಲಾಗುವುದು ಎಂಬ ಅರಿವೂ ಅವರಿಗೆ (ಇತರರಿಗೆ) ಇಲ್ಲ

[64] ನಿಜವಾಗಿ, ಪರಲೋಕದ ವಿಷಯದಲ್ಲಂತು ಅವರ ಜ್ಞಾನವು ನಿಸ್ತೇಜವಾಗಿ ಬಿಟ್ಟಿದೆ! ನಿಜವಾಗಿ ಅವರು ಆ ಕುರಿತು ಸಂಶಯದಲ್ಲಿದ್ದಾರೆ. ನಿಜವಾಗಿ, ಅವರು ಅದರ ಪಾಲಿಗೆ ಕುರುಡರಾಗಿಬಿಟ್ಟಿದ್ದಾರೆ

[65] ಧಿಕ್ಕಾರಿಗಳು ಹೇಳುತ್ತಾರೆ; ನಾವು ಮತ್ತು ನಮ್ಮ ತಾತ ಮುತ್ತಾತಂದಿರು ಮಣ್ಣಾಗಿ ಮಾಪರ್ಟ್ಟ ಬಳಿಕ, ನಮ್ಮನ್ನೇನು (ನಮ್ಮ ಗೋರಿಗಳಿಂದ) ಹೊರ ತೆಗೆಯಲಾಗುವುದೇ

[66] ಈ ಹಿಂದೆಯೂ ನಮಗೆ ಹಾಗೂ ನಮ್ಮ ತಾತ ಮುತ್ತಾತಂದಿರಿಗೆ, ಇಂತಹದೆ ಆಶ್ವಾಸನೆ ನೀಡಲಾಗಿತ್ತು. ನಿಜವಾಗಿ ಅವೆಲ್ಲಾ ಕೇವಲ ಗತಕಾಲದ ಕತೆಗಳು

[67] ಹೇಳಿರಿ; ನೀವು ಭೂಮಿಯಲ್ಲಿ ಸುತ್ತಾಡಿರಿ ಮತ್ತು ಅಪರಾಧಿಗಳ ಗತಿ ಏನಾಯಿತೆಂಬುದನ್ನು ನೋಡಿರಿ

[68] (ದೂತರೇ,) ಅವರ ಕುರಿತು ನೀವೇನೂ ಚಿಂತಿಸಬೇಡಿ ಮತ್ತು ಅವರ ಸಂಚುಗಳ ಬಗ್ಗೆ ಕಳವಳ ಪಡಬೇಡಿ

[69] ‘‘ನೀವು ಸತ್ಯವಂತರಾಗಿದ್ದರೆ ಈ ಆಶ್ವಾಸನೆ ಈಡೇರುವುದು ಯಾವಾಗ?’’ ಎಂದು ಅವರು ಕೇಳುತ್ತಾರೆ

[70] ಹೇಳಿರಿ; ನೀವು ಯಾವುದಕ್ಕಾಗಿ ಆತುರ ಪಡುತ್ತಿರುವಿರೋ ಅದರ ಕೆಲವು ಭಾಗಗಳು ನಿಮ್ಮ ಸಮೀಪವೇ ಇರಬಹುದು

[71] ನಿಮ್ಮ ಒಡೆಯನಂತು ಖಂಡಿತವಾಗಿಯೂ ಎಲ್ಲ ಮಾನವರ ಪಾಲಿಗೆ ಅನುಗ್ರಹಶಾಲಿಯಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ

[72] ಮತ್ತು ನಿಮ್ಮ ಒಡೆಯನು, ಅವರ ಹೃದಯಗಳಲ್ಲಿ ಅಡಗಿರುವ ವಿಷಯಗಳನ್ನೂ ಅವರು ಪ್ರಕಟಿಸುವ ವಿಷಯಗಳನ್ನೂ ಖಂಡಿತ ಬಲ್ಲನು

[73] ಆಕಾಶಗಳಲ್ಲಿನ ಮತ್ತು ಭೂಮಿಯಲ್ಲಿನ ಯಾವ ರಹಸ್ಯವೂ ಒಂದು ವ್ಯಕ್ತ ಗಂಥದಲ್ಲಿ ದಾಖಲಾಗದೆ ಉಳಿದಿಲ್ಲ

[74] ಖಂಡಿತವಾಗಿಯೂ ಈ ಕುರ್‌ಆನ್, ಇಸ್ರಾಈಲರ ಸಂತತಿಗಳಿಗೆ, ಅವರು ಪರಸ್ಪರ ಭಿನ್ನತೆ ತಾಳಿರುವ ಹೆಚ್ಚಿನೆಲ್ಲ ವಿಷಯಗಳನ್ನು ವಿವರಿಸಿಕೊಡುತ್ತದೆ

[75] ಮತ್ತು ಇದು, ನಂಬುವವರ ಪಾಲಿಗೆ ಖಂಡಿತ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ

[76] ಖಂಡಿತವಾಗಿಯೂ ನಿಮ್ಮ ಒಡೆಯನು ತನ್ನ ಅಧಿಕಾರದಿಂದ ಅವರ ನಡುವೆ ತೀರ್ಪು ನೀಡುವನು. ಅವನು ಭಾರೀ ಪ್ರಬಲನೂ ಜ್ಞಾನವಂತನೂ ಆಗಿರುತ್ತಾನೆ

[77] ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಖಂಡಿತವಾಗಿಯೂ ನೀವು ಬಹಳ ವ್ಯಕ್ತವಾದ ಸತ್ಯದಲ್ಲಿರುವಿರಿ

[78] ಸತ್ತವರಿಗೆ ಕೇಳಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ ಮತ್ತು ಕಿವುಡರು ಬೆನ್ನು ತಿರುಗಿಸಿ ಹೊರಟು ಬಿಟ್ಟಾಗ, ಅವರಿಗೆ ಕೇಳಿಸಲಿಕ್ಕೂ ನಿಮಗೆ ಸಾಧ್ಯವಿಲ್ಲ

[79] ನೀವಿರುವುದು ಕುರುಡರನ್ನು ಅವರ ದಾರಿಗೇಡಿತನದಿಂದ ಹೊರತಂದು ಅವರಿಗೆ ದಾರಿತೋರಿಸುವುದಕ್ಕಲ್ಲ. ನಮ್ಮ ವಚನಗಳನ್ನು ನಂಬುವವರು ಹಾಗೂ ಶರಣಾಗುವವರಿಗೆ ಮಾತ್ರ ನೀವು ಕೇಳಿಸಬಲ್ಲಿರಿ

[80] ಅವರ ವಿಷಯದಲ್ಲಿ (ಅಲ್ಲಾಹನ) ತೀರ್ಪು ಪ್ರಕಟವಾಗುವ ಸಮಯ ಬಂದಾಗ ನಾವು ಅವರಿಗಾಗಿ ಭೂಮಿಯಿಂದ ಒಂದು ಪ್ರಾಣಿಯನ್ನು ಹೊರಡಿಸುವೆವು. ಅದು ಅವರೊಡನೆ ಮಾತನಾಡುವುದು. ಅನ್ಯಥಾ ಜನರು ನಮ್ಮ ವಚನಗಳನ್ನು ದಿಟವಾಗಿ ನಂಬುತ್ತಿರಲಿಲ್ಲ

[81] ನಾವು ಪ್ರತಿಯೊಂದು ಸಮುದಾಯದಿಂದ, ನಮ್ಮ ವಚನಗಳನ್ನು ತಿರಸ್ಕರಿಸುತ್ತಿದ್ದವರ ಒಂದು ದಂಡನ್ನು ಸೇರಿಸುವ ದಿನ ಅವರನ್ನು ಸಾಲುಗಟ್ಟಿಸಲಾಗುವುದು

[82] ಅವರೆಲ್ಲರೂ ಬಂದು ಬಿಟ್ಟಾಗ ಅವನು (ಅಲ್ಲಾಹನು) ಹೇಳುವನು; ನಿಮಗೆ ನನ್ನ ವಚನಗಳ ಕುರಿತು ಜ್ಞಾನದ ಸುಳಿವೇ ಇಲ್ಲದಿದ್ದರೂ ನೀವು ಅವುಗಳನ್ನು ತಿರಸ್ಕರಿಸಿದ್ದಿರಾ? ನೀವು ಅದೇನೆಲ್ಲಾ ಮಾಡುತ್ತಿದ್ದಿರಿ

[83] ಅವರು ಎಸಗಿದ ಅಕ್ರಮದಿಂದಾಗಿ ಅವರ ವಿರುದ್ಧ (ಶಿಕ್ಷೆಯ) ತೀರ್ಪು ಜಾರಿಗೊಳ್ಳಲಿದೆ ಮತ್ತು ಅವರಿಗೆ ಮಾತನಾಡಲಿಕ್ಕೂ ಸಾಧ್ಯವಾಗದು

[84] ಅವರು ವಿಶ್ರಮಿಸಲೆಂದು ನಾವು ರಾತ್ರಿಯನ್ನು ಹಾಗೂ ಎಲ್ಲವನ್ನೂ ಕಾಣಲೆಂದು ಹಗಲನ್ನು ನಿರ್ಮಿಸಿರುವುದನ್ನು ಅವರು ಕಾಣುತ್ತಿಲ್ಲವೇ? ನಂಬುವವರಿಗೆ ಇದರಲ್ಲಿ ಖಂಡಿತ ಪಾಠಗಳಿವೆ

[85] ಮತ್ತು (ಲೋಕಾಂತ್ಯದ) ಕಹಳೆ ಊದಲಾಗುವ ಆ ದಿನ, ಅಲ್ಲಾಹನು ಇಚ್ಛಿಸಿದವರ ಹೊರತು, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವವರೆಲ್ಲಾ ಭಯಭೀತರಾಗಿರುವರು ಮತ್ತು ಎಲ್ಲರೂ ವಿಧೇಯರಾಗಿ ಅವನ ಮುಂದೆ ಬರುವರು

[86] (ಇಂದು) ನೀವು ಪರ್ವತಗಳನ್ನು ಕಂಡು, ಅವು ಬಹಳ ಸ್ಥಿರವಾಗಿವೆ ಎಂದು ಭಾವಿಸುತ್ತೀರಿ. ಆದರೆ (ಅಂದು) ಅವುಗಳು ಮೋಡಗಳಂತೆ ಚಲಿಸುವವು. ಇದೆಲ್ಲಾ ಅಲ್ಲಾಹನ ಕೈಗಾರಿಕೆ. ಅವನು ಎಲ್ಲವನ್ನೂ ಬಹಳ ಪಕ್ವವಾಗಿಯೇ ರೂಪಿಸಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ಖಂಡಿತವಾಗಿ ಬಲ್ಲನು

[87] (ಅಂದು) ಒಳಿತನ್ನು ತರುವಾತನಿಗೆ ಅದಕ್ಕಿಂತ ಉತ್ತಮವಾದುದು ಸಿಗಲಿದೆ ಮತ್ತು ಅಂಥವರು ಅಂದು ಎಲ್ಲ ಭಯಗಳಿಂದ ಮುಕ್ತರಾಗಿ ಸುರಕ್ಷಿತರಾಗಿರುವರು

[88] ಇನ್ನು (ಅಂದು) ಕೆಡುಕನ್ನು ತಂದವನು – ಅಂಥವರನ್ನು ಮುಖ ಕೆಳಗಾಗಿಸಿ ಬೆಂಕಿಗೆ ಎಸೆಯಲಾಗುವುದು. ನಿಮಗೇನು, ನೀವು ಮಾಡುತ್ತಿದ್ದ ಕರ್ಮಗಳಿಗಿಂತ ಭಿನ್ನ ಪ್ರತಿಫಲ ಸಿಗಲಿಕ್ಕುಂಟೇ

[89] (ದೂತರೇ, ಹೇಳಿರಿ;) ನನಗಂತೂ, ಪಾವನಗೊಳಿಸಲಾಗಿರುವ ಈ ನಗರದ ಒಡೆಯನನ್ನೇ ಪೂಜಿಸಬೇಕೆಂದು ಆದೇಶಿಸಲಾಗಿದೆ – ಮತ್ತು ಎಲ್ಲವೂ ಅವನಿಗೇ ಸೇರಿದೆ. ಇನ್ನು ನನಗಂತೂ ನಾನು ಸದಾ (ಅವನಿಗೆ) ಶರಣಾಗಿರಬೇಕೆಂದು ಆದೇಶಿಸಲಾಗಿದೆ

[90] ಮತ್ತು ನಾನು ಕುರ್‌ಆನ್‌ಅನ್ನು ಓದಬೇಕೆಂದು (ನನಗೆ ಆದೇಶಿಸಲಾಗಿದೆ). ಸರಿ ದಾರಿಗೆ ಬರುವವನು ಸ್ವತಃ ತನ್ನ ಹಿತಕ್ಕಾಗಿಯಷ್ಟೇ ಸರಿ ದಾರಿಗೆ ಬರುತ್ತಾನೆ. ಇನ್ನು ಯಾರಾದರೂ ದಾರಿಗೆಟ್ಟಿದ್ದರೆ, ನಾನಂತು ಕೇವಲ ಎಚ್ಚರಿಸುವವನಾಗಿದ್ದೇನೆ

[91] ಮತ್ತು (ದೂತರೇ,) ನೀವು ಹೇಳಿರಿ; ಅಲ್ಲಾಹನಿಗೆ ಪ್ರಶಂಸೆಗಳು. ಅವನು ನಿಮಗೆ ತನ್ನ ಪುರಾವೆಗಳನ್ನು ತೋರಿಸುವನು ಮತ್ತು ನೀವು ಅವುಗಳನ್ನು ಗುರುತಿಸುವಿರಿ. ನೀವು ಮಾಡುತ್ತಿರುವ ಕೃತ್ಯಗಳ ಕುರಿತು ನಿಮ್ಮ ಒಡೆಯನು ಅಜ್ಞನಲ್ಲ

[92] ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

[93] ತ್ವಾ ಸೀನ್ ಮ್ಮೀಮ್

ಕಥೆಗಳು

Surah 28

[1] ಇವು ಬಹಳ ಸ್ಪಷ್ಟವಾಗಿರುವ ಗ್ರಂಥದ ವಚನಗಳು

[2] ನಾವು ನಿಮಗೆ, ಮೂಸಾ ಮತ್ತು ಫಿರ್‌ಔನರ ಕೆಲವು ಸಂಗತಿಗಳನ್ನು ನಿಜರೂಪದಲ್ಲಿ ಓದಿ ಕೇಳಿಸುತ್ತಿದ್ದೇವೆ – ನಂಬುವವರಿಗಾಗಿ

[3] ಖಂಡಿತವಾಗಿಯೂ ಫಿರ್‌ಔನನು ಭೂಮಿಯಲ್ಲಿ ವಿದ್ರೋಹ ಮೆರೆದಿದ್ದನು ಮತ್ತು ಭೂವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದ್ದನು. ಅವನು ಅವರಲ್ಲಿನ ಒಂದು ಪಂಗಡವನ್ನು ದುರ್ಬಲಗೊಳಿಸಿ ಅವರ ಪುತ್ರರ ಕೊರಳು ಕೊಯ್ದು ಬಿಡುತ್ತಿದ್ದನು ಹಾಗೂ ಅವರ ಮಹಿಳೆಯರನ್ನು ಮಾತ್ರ ಜೀವಂತವಿಡುತ್ತಿದ್ದನು. ಖಂಡಿತವಾಗಿಯೂ ಅವನು ಅಶಾಂತಿ ಹಬ್ಬುವವನಾಗಿದ್ದನು

[4] ಇತ್ತ ನಾವು, ಭೂಮಿಯಲ್ಲಿ ಮರ್ದಿತರಾಗಿದ್ದವರಿಗೆ ಉಪಕರಿಸಲು ಮತ್ತು ಅವರನ್ನು ನಾಯಕರಾಗಿಯೂ ಉತ್ತರಾಧಿಕಾರಿಗಳಾಗಿಯೂ ಮಾಡಲು ನಿರ್ಧರಿಸಿದ್ದೆವು

[5] ಮತ್ತು ನಾವು ಅವರನ್ನು ಭೂಮಿಯಲ್ಲಿ ಅಧಿಕಾರಸ್ಥರಾಗಿಸಿ ಫಿರ್‌ಔನ್, ಹಾಮಾನ್ ಮತ್ತು ಅವರ ಪಡೆಗಳಿಗೆ, ಅವರು ಏನನ್ನು ಅಂಜುತ್ತಿದ್ದರೋ ಅದನ್ನು ತೋರಿಸಬಯಸಿದ್ದೆವು

[6] ಮತ್ತು ನಾವು ಮೂಸಾರ ತಾಯಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದೆವು; ನೀನು ಅವನಿಗೆ ಹಾಲುಣ್ಣಿಸುತ್ತಲಿರು, ಅವನ (ಜೀವದ) ಕುರಿತು ನಿನಗೆ ಭಯವಾದರೆ ಅವನನ್ನು ನದಿಯಲ್ಲಿ ಹಾಕಿಬಿಡು. ನೀನು ಅಂಜಬೇಡ ಮತ್ತು ದುಃಖಿಸಬೇಡ. ನಾವು ಅವನನ್ನು ನಿನ್ನ ಬಳಿಗೇ ಮರಳಿಸುವೆವು ಮತ್ತು ಅವನನ್ನು ನಾವು ದೂತನಾಗಿಸುವೆವು

[7] ಮುಂದೆ, ಫಿರ್‌ಔನನ ಕಡೆಯವರು ಅವರನ್ನು (ಮೂಸಾರನ್ನು) ಎತ್ತಿಕೊಂಡರು, ತಮ್ಮ ಪಾಲಿಗೆ ಶತ್ರು ಹಾಗೂ ದುರಂತವಾಗಲಿಕ್ಕಾಗಿ. ಖಂಡಿತವಾಗಿಯೂ ಫಿರ್‌ಔನ್, ಹಾಮಾನ್ ಮತ್ತು ಅವರ ಪಡೆಗಳು ತಪ್ಪಿತಸ್ಥರಾಗಿದ್ದರು

[8] ಫಿರ್‌ಔನನ ಪತ್ನಿ ಹೇಳಿದಳು; ‘‘ಅವನು ನನಗೂ ನಿನಗೂ ಕಣ್ಣಿಗೆ ತಂಪಾಗಿದ್ದಾನೆ. ಅವನನ್ನು ಕೊಲ್ಲಬೇಡ. ಅವನಿಂದ ನಮಗೇನಾದರೂ ಲಾಭವಾಗಬಹುದು ಅಥವಾ ನಾವು ಅವನನ್ನು ಪುತ್ರನಾಗಿಸಿಕೊಳ್ಳಬಹುದು’’. ಅವರಿಗೆ (ವಾಸ್ತವದ) ಅರಿವಿರಲಿಲ್ಲ

[9] ಅತ್ತ ಮೂಸಾರ ತಾಯಿಯ ಮನಸ್ಸು ಕಸಿವಿಸಿಗೊಂಡಿತ್ತು. ಆಕೆ ದೃಢ ವಿಶ್ವಾಸ ಉಳ್ಳವಳಾಗಿ ಉಳಿಯಬೇಕೆಂದು ನಾವು ಆಕೆಯ ಮನಸ್ಸಿಗೆ ಸ್ಥಿರತೆಯನ್ನು ಒದಗಿಸದೆ ಇದ್ದಿದ್ದರೆ, ಆಕೆ ಈ ವಿಷಯವನ್ನು ಬಹಿರಂಗ ಪಡಿಸಿ ಬಿಡುತ್ತಿದ್ದಳು

[10] ಆಕೆ ಅವರ (ಮೂಸಾರ) ಸಹೋದರಿಗೆ ಹೇಳಿದಳು; ನೀನು ಅದನ್ನು (ಮಗುವನ್ನು) ಹಿಂಬಾಲಿಸುತ್ತಾ ನಡೆ ಮತ್ತು ಅವರಿಗೆ (ಫಿರ್‌ಔನನ ಪಾಳಯದವರಿಗೆ) ಅರಿವಾಗದಂತೆ ದೂರದಿಂದ ಅದರ ಮೇಲೆ ಕಣ್ಣಿಟ್ಟಿರು

[11] ನಾವು ಆಗಲೇ, ಹಾಲುಣಿಸುವವರನ್ನು ಆತನಿಂದ ತಡೆದಿಟ್ಟಿದ್ದೆವು. ಆಗ ಆಕೆ (ಮೂಸಾರ ಸಹೋದರಿ) ಹೇಳಿದಳು; ಆತನ ಪೋಷಣೆ ಮಾಡಬಲ್ಲ ಒಂದು ಕುಟುಂಬವನ್ನು ನಾನು ನಿಮಗೆ ತೋರಿಸಿಕೊಡಲೇ? ಅವರು ಆತನ ಪಾಲಿಗೆ ಹಿತೈಷಿಗಳಾಗಿರುವರು

[12] ಹೀಗೆ ನಾವು, ಆತನ ತಾಯಿಯ ಕಣ್ಣು ತಂಪಾಗಲೆಂದು, ಆಕೆ ದುಃಖಿಸಬಾರದೆಂದು ಮತ್ತು ಅಲ್ಲಾಹನು ಕೊಟ್ಟ ಮಾತು ಸತ್ಯವೆಂಬುದನ್ನು ಆಕೆ ಅರಿಯಲೆಂದು ಆತನನ್ನು ಆಕೆಯ ಬಳಿಗೆ ಮರಳಿಸಿದೆವು, ಆದರೆ ಹೆಚ್ಚಿನವರು ಇದನ್ನು ಅರಿತಿಲ್ಲ

[13] ಮುಂದೆ ಅವರು (ಮೂಸಾ) ತಮ್ಮ ಯವ್ವನವನ್ನು ತಲುಪಿದಾಗ ಮತ್ತು ಶಕ್ತರಾದಾಗ ನಾವು ಅವರಿಗೆ ಯುಕ್ತಿಯನ್ನೂ ಜ್ಞಾನವನ್ನೂ ನೀಡಿದೆವು. ಸಜ್ಜನರಿಗೆ ನಾವು ಇದೇ ರೀತಿ ಸತ್ಫಲವನ್ನು ನೀಡುತ್ತೇವೆ

[14] ಒಮ್ಮೆ ನಗರದ ಜನರು ನಿದ್ದೆಯಲ್ಲಿದ್ದಾಗ ಅವರು ನಗರವನ್ನು ಪ್ರವೇಶಿಸಿದರು. ಅಲ್ಲಿ ಅವರು, ಇಬ್ಬರು ಪರಸ್ಪರ ಜಗಳಾಡುತ್ತಿರುವುದನ್ನು ಕಂಡರು. ಅವರಲ್ಲೊಬ್ಬನು ಅವರ ಪಾಳಯದವನಾಗಿದ್ದನು ಮತ್ತು ಇನ್ನೊಬ್ಬನು ಅವರ ಶತ್ರು ಪಾಳಯದವನಾಗಿದ್ದನು. ಅವರ ಪಾಳಯದವನು, ಅವರ ಶತ್ರು ಪಾಳಯದವನ ವಿರುದ್ಧ ಅವರ ನೆರವನ್ನು ಬೇಡಿದನು. ಮೂಸಾ ಆತನಿಗೆ (ಶತ್ರು ಪಾಳಯದವನಿಗೆ) ಹೊಡೆದರು ಮತ್ತು ಅದು ಆತನ ಅಂತ್ಯಕ್ಕೆ ಕಾರಣವಾಯಿತು. ಅವರು (ಮೂಸಾ) ‘‘ಇದು ಶೈತಾನನ ಕೃತ್ಯ. ಅವನು ಖಂಡಿತ ಸ್ಪಷ್ಟವಾಗಿ ದಾರಿಗೆಡಿಸುವ ಶತ್ರುವಾಗಿದ್ದಾನೆ’’ ಎಂದರು

[15] ಅವರು ‘‘ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮ ವೆಸಗಿದ್ದೇನೆ. ನನ್ನನ್ನು ಕ್ಷಮಿಸಿಬಿಡು’’ ಎಂದು ಪ್ರಾರ್ಥಿಸಿದರು. ಅವನು (ಅಲ್ಲಾಹನು) ಅವರನ್ನು ಕ್ಷಮಿಸಿಬಿಟ್ಟನು. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ

[16] ‘‘ನನ್ನೊಡೆಯಾ, ನೀನು ನನ್ನನ್ನು ಅನುಗ್ರಹಿಸಿರುವೆ. (ಹೀಗಿರುತ್ತಾ) ನಾನೆಂದೂ ಅಕ್ರಮಿಗಳ ಸಹಾಯಕನಾಗಲಾರೆ’’ ಎಂದು ಅವರು (ಮೂಸಾ) ಹೇಳಿದರು

[17] ಮರುದಿನ ಅವರು ಅಂಜುತ್ತಾ, ಎಚ್ಚರಿಕೆಯೊಂದಿಗೆ ನಗರವನ್ನು ಪ್ರವೇಶಿಸಿದರು. ಆಗ, ನಿನ್ನೆ ಅವರಿಂದ ನೆರವು ಬೇಡಿದ್ದವನೇ ಮತ್ತೆ ಅವರಲ್ಲಿ ಮೊರೆ ಇಡುತ್ತಿದ್ದನು. ‘‘ನೀನು ಸ್ಪಷ್ಟವಾಗಿ ದಾರಿಗೆಟ್ಟವನು’’ ಎಂದು ಮೂಸಾ ಹೇಳಿದರು

[18] ಅವರು, ತಮ್ಮಿಬ್ಬರ ಪಾಲಿಗೂ ಶತ್ರುವಾಗಿದ್ದವನ ಮೇಲೆ ಕೈ ಮಾಡಲು ಹೊರಟಾಗ ಅವನು ಹೇಳಿದನು; ಓ ಮೂಸಾ, ನೀನು ನಿನ್ನೆ ಒಬ್ಬಾತನನ್ನು ಕೊಂದಂತೆ ನನ್ನನ್ನು ಕೊಲ್ಲ ಬಯಸುವೆಯಾ? ಭೂಮಿಯಲ್ಲಿ ದಬ್ಬಾಳಿಕೆ ನಡೆಸುವುದಷ್ಟೇ ನಿನ್ನ ಬಯಕೆಯಾಗಿದೆ. ನೀನು ಸುಧಾರಕನಾಗಲು ಬಯಸುವುದಿಲ್ಲ

[19] ಅಷ್ಟರಲ್ಲಿ, ನಗರದ ಗಡಿಭಾಗದಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದ; ಓ ಮೂಸಾ, ನಾಯಕರು ನಿಮ್ಮನ್ನು ಕೊಲ್ಲುವುದಕ್ಕಾಗಿ ನಿಮ್ಮ ಕುರಿತು ಸಮಾಲೋಚಿಸುತ್ತಿದ್ದಾರೆ. ನೀವು (ಇಲ್ಲಿಂದ) ಹೊರಟು ಹೋಗಿರಿ. ನಾನು ಖಂಡಿತ ನಿಮ್ಮ ಹಿತೈಷಿಯಾಗಿದ್ದೇನೆ

[20] ಅವರು ಭಯ ಹಾಗೂ ಕುತೂಹಲದೊಂದಿಗೆ ಅಲ್ಲಿಂದ ಹೊರಟರು. ‘‘ನನ್ನೊಡೆಯಾ, ನನ್ನನ್ನು ಅಕ್ರಮಿ ಜನಾಂಗದಿಂದ ರಕ್ಷಿಸು’’ ಎಂದು ಅವರು ಪ್ರಾರ್ಥಿಸಿದರು

[21] ಅವರು ಮದ್‌ಯನ್‌ಕಡೆಗೆ ಹೊರಟಾಗ ‘‘ನನ್ನ ಒಡೆಯನು ನನಗೆ ನೇರ ಮಾರ್ಗವನ್ನು ತೋರಿಸಬಹುದು’’ ಎಂದರು

[22] ಅವರು ಮದ್‌ಯನ್‌ನಲ್ಲಿ, ನೀರಿರುವ ಸ್ಥಳದಲ್ಲಿ, ಜನರ ಗುಂಪೊಂದು (ಕುರಿಗಳಿಗೆ) ನೀರು ಕುಡಿಸುವುದನ್ನು ಕಂಡರು ಮತ್ತು ಇಬ್ಬರು ಮಹಿಳೆಯರು ದೂರ ನಿಂತಿರುವುದನ್ನು ಕಂಡರು. ಅವರು ಆ ಇಬ್ಬರೊಡನೆ, ನಿಮ್ಮ ಸಮಾಚಾರವೇನು? ಎಂದು ವಿಚಾರಿಸಿದರು. ‘‘ಕುರಿ ಕಾಯುವವರು (ತಮ್ಮ ಕುರಿಗಳಿಗೆ) ನೀರು ಕುಡಿಸಿ ಮುಗಿಸುವ ತನಕ ನಾವು ನೀರು ಕುಡಿಸುವಂತಿಲ್ಲ. ಅತ್ತ, ನಮ್ಮ ತಂದೆ ತುಂಬಾ ವೃದ್ಧರು’’ ಎಂದು ಅವರು ಉತ್ತರಿಸಿದರು

[23] ಅವರು ಆ ಇಬ್ಬರು ಮಹಿಳೆಯರಿಗೆ (ಅವರ ಕುರಿಗಳಿಗೆ) ನೀರು ಕುಡಿಸಿ (ವಿಶ್ರಾಂತಿಗಾಗಿ) ನೆರಳಿನೆಡೆಗೆ ಹೊರಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ಕರುಣಿಸುವ ಯಾವ ಹಿತಕ್ಕೂ ನಾನು ಅರ್ಹನಾಗಿದ್ದೇನೆ

[24] ಆಗ ಆ ಮಹಿಳೆಯರಲ್ಲೊಬ್ಬಳು ನಾಚುತ್ತಾ ಅವರ ಬಳಿಗೆ ನಡೆದು ಬಂದಳು. ನೀವು ನಮಗೆ ನೀರನ್ನು ಒದಗಿಸಿದ್ದಕ್ಕಾಗಿ ನಿಮಗೆ ಪುರಸ್ಕಾರ ನೀಡಲು ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಆಕೆ ಹೇಳಿದಳು. ತರುವಾಯ ಅವರು (ಮೂಸಾ) ಅವರ (ಶುಐಬರ) ಬಳಿಗೆ ಬಂದರು ಮತ್ತು ಸಮಾಚಾರವನ್ನೆಲ್ಲಾ ತಿಳಿಸಿದರು. ಅವರು (ಶುಐಬ್) ಹೇಳಿದರು; ನೀವೇನೂ ಅಂಜಬೇಡಿ. ನೀವೀಗ ಅಕ್ರಮಿ ಜನಾಂಗದಿಂದ ಸುರಕ್ಷಿತರಾಗಿರುವಿರಿ

[25] ಅವರಲ್ಲಿ ಒಬ್ಬಾಕೆ ಹೇಳಿದಳು; ನನ್ನಪ್ಪಾ, ಈತನನ್ನು ಸೇವಕನಾಗಿ ನೇಮಿಸಿಕೊಳ್ಳಿರಿ. ನೀವು ಸೇವಕನಾಗಿ ನೇಮಿಸುವುದಕ್ಕೆ ಶಕ್ತಿವಂತ ಹಾಗೂ ನಂಬಲರ್ಹನಾಗಿರುವಾತನೇ ಹೆಚ್ಚು ಯೋಗ್ಯನಾಗಿರುತ್ತಾನೆ

[26] ಅವರು (ಶುಐಬ್) ಹೇಳಿದರು; ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಔದಾರ್ಯವಾಗಿರುವುದು. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ

[27] ಅವರು (ಮೂಸಾ) ಹೇಳಿದರು; ಇದು ನನ್ನ ಹಾಗೂ ನಿಮ್ಮ ನಡುವಣ ಒಪ್ಪಂದ. ನಾನು ಈ ಎರಡು ಅವಧಿಗಳ ಪೈಕಿ ಯಾವುದನ್ನು ಪೂರ್ತಿಗೊಳಿಸಿದರೂ ನನ್ನ ಮೇಲೆ ಯಾವುದೇ ಋಣ ಉಳಿಯದು. ನಮ್ಮ ಮಾತುಗಳಿಗೆ ಅಲ್ಲಾಹನೇ ಸಾಕ್ಷಿ

[28] ಹೀಗೆ, ಮೂಸಾ ಅವಧಿ ಪೂರ್ತಿಗೊಳಿಸಿ ತಮ್ಮ ಮನೆಯವರೊಂದಿಗೆ ಹೊರಟರು. ಅವರು ತೂರ್ ಬೆಟ್ಟದ ಕಡೆ ಒಂದು ಬೆಂಕಿಯನ್ನು ಕಂಡರು. ನೀವು ಇಲ್ಲೇ ಉಳಿಯಿರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ನಿಮಗಾಗಿ ಅಲ್ಲಿಂದೇನಾದರೂ ಮಾಹಿತಿಯನ್ನು ತರಲು ಅಥವಾ ನೀವು ಚಳಿಕಾಯಿಸಿಕೊಳ್ಳುವುದಕ್ಕಾಗಿ ಬೆಂಕಿಯ ಕೆಂಡವನ್ನಾದರೂ ತರಲು ನನಗೆ ಸಾಧ್ಯವಾದೀತು – ಎಂದು ಅವರು ತಮ್ಮ ಮನೆಯವರೊಡನೆ ಹೇಳಿದರು

[29] ಅವರು ಅಲ್ಲಿಗೆ ತಲುಪಿದಾಗ, ಸಮೃದ್ಧ ಸ್ಥಳದಲ್ಲಿದ್ದ ಬಯಲಿನ ಬಲ ಮಗ್ಗುಲಲ್ಲಿದ್ದ ಒಂದು ಮರದಿಂದ ಅವರಿಗೆ ಕರೆ ನೀಡಲಾಯಿತು; ಓ ಮೂಸಾ, ನಾನೇ ಸರ್ವಲೋಕಗಳ ಒಡೆಯನಾದ ಅಲ್ಲಾಹ್

[30] ನೀವೀಗ ನಿಮ್ಮ ಊರುಗೋಲನ್ನು ಕೆಳಕ್ಕೆಸೆಯಿರಿ – ಎನ್ನಲಾಯಿತು. ಅದು ಹೆಬ್ಬಾವಿನಂತೆ ಚಲಿಸುವುದನ್ನು ಕಂಡು ಅವರು ಬೆನ್ನು ತಿರುಗಿಸಿ ಮರಳಿ ಹೊರಟರು ಮತ್ತು ಹಿಂದಿರುಗಿಯೂ ನೋಡಲಿಲ್ಲ. (ಅವರೊಡನೆ ಹೇಳಲಾಯಿತು;) ಓ ಮೂಸಾ, ನೀವು ಮುಂದೆ ಬನ್ನಿ ಮತ್ತು ಅಂಜಬೇಡಿ. ನೀವು ಸುರಕ್ಷಿತರಾಗಿರುವಿರಿ

[31] ನೀವು ನಿಮ್ಮ ಕೈಯನ್ನು ನಿಮ್ಮ ಬಗಲಿಗೆ ಹಾಕಿರಿ. ಅದು ಸುಲಭವಾಗಿ, ಹೊಳೆಯುತ್ತಾ ಹೊರಬರುವುದು. ಮತ್ತು ನೀವು ಭಯಮುಕ್ತರಾಗಲಿಕ್ಕಾಗಿ, ನಿಮ್ಮ ತೋಳುಗಳನ್ನು ನಿಮ್ಮೆಡೆಗೆ ಎಳೆದುಕೊಳ್ಳಿರಿ. ಇವು, ಫಿರ್‌ಔನ್ ಮತ್ತು ಅವನ ಸರದಾರರಿಗಾಗಿ ನಿಮ್ಮೊಡೆಯನ ಕಡೆಯಿಂದ ನೀಡಲಾಗುತ್ತಿರುವ ಎರಡು ಪುರಾವೆಗಳು. ಅವರು ತೀರಾ ಅವಿಧೇಯರಾಗಿ ಬಿಟ್ಟಿದ್ದಾರೆ

[32] ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನಾನು ಅವರಲ್ಲಿನ ಒಬ್ಬ ವ್ಯಕ್ತಿಯ ಹತ್ಯೆ ನಡೆಸಿದ್ದೇನೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂಬ ಆಶಂಕೆ ನನಗಿದೆ

[33] ನನ್ನ ಸಹೋದರ ಹಾರೂನ್ ನನಗಿಂತ ಸ್ಪಷ್ಟವಾಗಿ ಮಾತನಾಡಬಲ್ಲರು. ಸಹಾಯಕರಾಗಿ ಅವರನ್ನು ನನ್ನ ಜೊತೆ ಕಳಿಸು. ಅವರು ನನ್ನನ್ನು ಸಮರ್ಥಿಸಲಿ. ಅವರು (ಫಿರ್‌ಔನ್ ಮತ್ತು ಅವನ ಕಡೆಯವರು) ನನ್ನನ್ನು ತಿರಸ್ಕರಿಸುವರೆಂಬ ಭಯ ನನಗಿದೆ

[34] ಅವನು (ಅಲ್ಲಾಹ್) ಹೇಳಿದನು; ನಾವು ಈಗಲೇ ನಿಮ್ಮ ಸಹೋದರನ ಮೂಲಕ ನಿಮ್ಮ ಕೈಗಳನ್ನು ಬಲಪಡಿಸುವೆವು ಮತ್ತು ನಿಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಲು ಅವರಿಗೆ ಸಾಧ್ಯವಾಗದಂತೆ, ನಾವು ನಮ್ಮ ಪುರಾವೆಗಳ ಮೂಲಕ ನಿಮ್ಮಿಬ್ಬರಿಗೂ ವಿಶೇಷ ಶಕ್ತಿಯನ್ನು ನೀಡುವೆವು. ನಿಮ್ಮಿಬ್ಬರಿಗೂ ನಿಮ್ಮ ಅನುಯಾಯಿಗಳಿಗೂ ವಿಜಯ ಪ್ರಾಪ್ತವಾಗುವುದು

[35] ಮೂಸಾ, ನಾವು ಒದಗಿಸಿದ ಸ್ಪಷ್ಟ ಪುರಾವೆಗಳೊಂದಿಗೆ ಅವರ (ಫಿರ್‌ಔನ್ ಮತ್ತವನ ಜನರ) ಬಳಿಗೆ ಬಂದಾಗ ಅವರು ಹೇಳಿದರು; ಇದೆಲ್ಲಾ ಕೃತಕ ಇಂದ್ರಜಾಲವೇ ಹೊರತು ಬೇರೇನೂ ಇಲ್ಲ. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ

[36] ಮೂಸಾ ಹೇಳಿದರು; ಅವನ ಕಡೆಯಿಂದ ಮಾರ್ಗದರ್ಶನವನ್ನು ತಂದವನು ಯಾರು ಮತ್ತು ಪರಲೋಕದ ಶ್ರೇಷ್ಠ ನೆಲೆಯು ಯಾರಿಗೆ ಸಿಗಲಿದೆ ಎಂಬುದನ್ನು ನನ್ನ ಒಡೆಯನು ಚೆನ್ನಾಗಿ ಬಲ್ಲನು. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ

[37] ಫಿರ್‌ಔನನು ಹೇಳಿದನು; ಸರದಾರರೇ, ನಿಮಗೆ ನನ್ನ ಹೊರತು ಬೇರೊಬ್ಬ ದೇವರಿರುವುದು ನನಗಂತು ತಿಳಿಯದು. ಸದ್ಯ, ಓ ಹಾಮಾನ್, ನೀನು ನನಗಾಗಿ ಆವೆ ಮಣ್ಣನ್ನು ಬೆಂಕಿಯಲ್ಲಿ ಉರಿಸು ಮತ್ತು ನನಗಾಗಿ ಒಂದು ಎತ್ತರದ ಗೋಪುರವನ್ನು ನಿರ್ಮಿಸು. ಆ ಮೂಲಕ ನಾನು ಮೂಸಾನ ದೇವರ ಕಡೆಗೊಮ್ಮೆ ಇಣುಕಿ ನೋಡುತ್ತೇನೆ. ನಾನಂತೂ ಅವನನ್ನು (ಮೂಸಾರನ್ನು) ಸುಳ್ಳುಗಾರನೆಂದೇ ಭಾವಿಸುತ್ತೇನೆ

[38] ಹೀಗೆ ಅವನು (ಫಿರ್‌ಔನ್) ಮತ್ತು ಅವನ ಯೋಧರು, ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆದರು ಮತ್ತು ತಮಗೆ ನಮ್ಮೆಡೆಗೆ ಮರಳಿಬರಲಿಕ್ಕಿಲ್ಲ ಎಂದು ಭಾವಿಸಿಕೊಂಡಿದ್ದರು

[39] ಕೊನೆಗೆ ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದುಕೊಂಡೆವು ಮತ್ತು ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅಕ್ರಮಿಗಳ ಅಂತಿಮ ಗತಿ ಹೇಗಿರುತ್ತದೆಂದು ನೋಡಿರಿ

[40] ನಾವು ಅವರನ್ನು ನಾಯಕರಾಗಿಸಿದ್ದೆವು. ಆದರೆ ಅವರು (ಜನರನ್ನು) ನರಕದೆಡೆಗೆ ಆಮಂತ್ರಿಸುತ್ತಿದ್ದರು. ಪುನರುತ್ಥಾನ ದಿನ ಅವರಿಗೆ ಯಾವ ನೆರವೂ ಸಿಗದು

[41] ಈ ಲೋಕದಲ್ಲಿ ನಾವು ಶಾಪವನ್ನು ಅವರ ಬೆನ್ನು ಹಿಡಿಸಿದ್ದೆವು ಮತ್ತು ಪುನರುತ್ಥಾನ ದಿನ ಅವರು ತೀರಾ ದುಸ್ಥಿತಿಯಲ್ಲಿರುವರು

[42] ನಾವು ಗತಕಾಲದ ಕೆಲವು ಜನಾಂಗಗಳನ್ನು ನಾಶಪಡಿಸಿದ ಬಳಿಕ, ಮೂಸಾರಿಗೆ ಗ್ರಂಥವನ್ನು ನೀಡಿದೆವು. ಜನರ ಕಣ್ಣು ತೆರೆಸುವ, ದಾರಿ ತೋರುವ ಮತ್ತು ಅನುಗ್ರಹವಾಗಿರುವ ಗ್ರಂಥ – ಅವರು (ಜನರು) ಉಪದೇಶ ಸ್ವೀಕರಿಸಲೆಂದು

[43] (ದೂತರೇ,) ನಾವು ಮೂಸಾರಿಗೆ ಆದೇಶ ನೀಡುತ್ತಿದ್ದಾಗ ನೀವು (ತೂರ್ ಬೆಟ್ಟದ) ಪಶ್ಚಿಮದಲ್ಲಿ ಇರಲಿಲ್ಲ ಮತ್ತು ನೀವು ಅದಕ್ಕೆ ಸಾಕ್ಷಿಯಾಗಿರಲಿಲ್ಲ

[44] ನಿಜವಾಗಿ ನಾವು ಹಲವು ಸಮುದಾಯಗಳನ್ನು ಸೃಷ್ಟಿಸಿದೆವು. ಕೊನೆಗೆ ಅವರ ಕಾಲಾವಧಿಯು ಮೀರಿಹೋಯಿತು. ಮದ್‌ಯನ್‌ನವರಿಗೆ ನಮ್ಮ ವಚನಗಳನ್ನು ಕೇಳಿಸಲು ನೀವೇನೂ ಅಲ್ಲಿಯ ನಿವಾಸಿಯಾಗಿರಲಿಲ್ಲ. ನಿಜವಾಗಿ ನಾವೇ (ಆ ಕುರಿತು ನಿಮಗೆ) ಸಂದೇಶವನ್ನು ಕಳಿಸಿದ್ದೆವು

[45] ನಾವು (ಮೂಸಾರನ್ನು) ಕೂಗಿ ಕರೆದಾಗ ನೀವು ತೂರ್‌ನ ಪಕ್ಕದಲ್ಲೇನೂ ಇರಲಿಲ್ಲ. ನಿಜವಾಗಿ (ಇದು) ನಿಮ್ಮ ಒಡೆಯನ ಅನುಗ್ರಹವಾಗಿದೆ. ನಿಮಗಿಂತ ಮುನ್ನ ಎಚ್ಚರಿಸುವವರು ಬಂದಿಲ್ಲದ ಜನಾಂಗದವರು ಉಪದೇಶ ಸ್ವೀಕರಿಸಬಹುದೆಂದು, ಅವರನ್ನು ಎಚ್ಚರಿಸಲಿಕ್ಕಾಗಿ (ನಿಮ್ಮನ್ನು ನೇಮಿಸಲಾಯಿತು)

[46] (ನಾವು ದೂತರನ್ನು ಕಳಿಸದೆ ಇದ್ದಿದ್ದರೆ) ಅವರ ಸ್ವಂತ ಕೈಗಳ ದುಡಿಮೆಯ (ಪಾಪಗಳ) ಫಲವಾಗಿ ಅವರ ಮೇಲೆ ವಿಪತ್ತೇನಾದರೂ ಬಂದಾಗ, ಅವರು; ‘‘ನಮ್ಮಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು ಮತ್ತು ವಿಶ್ವಾಸಿಗಳಾಗಿ ಬಿಡುತ್ತಿದ್ದೆವು ’’ ಎನ್ನುತ್ತಿದ್ದರು

[47] ನಮ್ಮ ಕಡೆಯಿಂದ ಸತ್ಯವು ತಮ್ಮ ಬಳಿಗೆ ಬಂದಾಗ, ಅವರು, ‘‘ಮೂಸಾರಿಗೆ ನೀಡಲಾದುದನ್ನು ನಮಗೇಕೆ ನೀಡಲಾಗಿಲ್ಲ?’’ ಎಂದರು. ಈ ಹಿಂದೆ ಅವರು, ಮೂಸಾರಿಗೆ ನೀಡಲಾದುದನ್ನು ಧಿಕ್ಕರಿಸಿರಲಿಲ್ಲವೇ? ಆಗ ಅವರು, ಇವೆರಡೂ ಪರಸ್ಪರ ಪೂರಕವಾಗಿರುವ ಮಾಟಗಾರಿಕೆಗಳು ಎಂದಿದ್ದರು ಮತ್ತು ನಾವು ಎಲ್ಲವನ್ನೂ ಧಿಕ್ಕರಿಸುತ್ತೇವೆ ಎಂದಿದ್ದರು

[48] ಹೇಳಿರಿ; ನೀವು ಸತ್ಯವಂತರಾಗಿದ್ದರೆ, ಇವೆರಡಕ್ಕಿಂತ (ಕುರ್‌ಆನ್ ಮತ್ತು ತೌರಾತ್‌ಗಿಂತ) ಹೆಚ್ಚು ಮಾರ್ಗದರ್ಶಿಯಾದ ಒಂದು ಗ್ರಂಥವನ್ನು ಅಲ್ಲಾಹನ ಕಡೆಯಿಂದ ತಂದು ಕೊಡಿರಿ. ನಾನೂ ಅದನ್ನೇ ಅನುಸರಿಸುವೆನು

[49] ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ

[50] ಅವರು ಉಪದೇಶ ಸ್ವೀಕರಿಸಬೇಕೆಂದು ನಾವು ಸತತವಾಗಿ (ನಮ್ಮ) ಸಂದೇಶವನ್ನು ಅವರಿಗೆ ಕಳಿಸಿದೆವು

[51] ನಾವು ಇದಕ್ಕಿಂತ (ಕುರ್‌ಆನ್‌ಗಿಂತ) ಮುಂಚೆ ಯಾರಿಗೆ ಗ್ರಂಥ ನೀಡಿದ್ದೆವೋ ಅವರು ಇದರಲ್ಲಿ ನಂಬಿಕೆ ಇಡುತ್ತಾರೆ

[52] ಅವರ ಮುಂದೆ ಇದನ್ನು ಓದಲಾದಾಗ ಅವರು, ‘’ನಾವು ಇದನ್ನು ನಂಬಿದೆವು. ಖಂಡಿತವಾಗಿಯೂ ಇದು ನಮ್ಮೊಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಾವಂತು ಈ ಹಿಂದೆಯೇ ಶರಣಾಗಿದ್ದೆವು’’ ಎನ್ನುತ್ತಾರೆ

[53] ಅವರೇ, ದುಪ್ಪಟ್ಟು ಪ್ರತಿಫಲ ಪಡೆಯುವವರು. ಏಕೆಂದರೆ, ಅವರು ಸಹನಶೀಲರಾಗಿದ್ದಾರೆ, ಕೆಡುಕನ್ನು ಒಳಿತಿನಿಂದ ನಿವಾರಿಸುತ್ತಾರೆ ಮತ್ತು ಅವರಿಗೆ ನಾವು ಏನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡುತ್ತಾರೆ

[54] ವ್ಯರ್ಥವಾದ ಏನನ್ನಾದರೂ ಕೇಳಿಸಿಕೊಂಡಾಗ ಅವರು ಅದರಿಂದ ದೂರ ಉಳಿಯುತ್ತಾರೆ ಮತ್ತು ‘‘ನಮ್ಮ ಕರ್ಮ ನಮಗೆ, ನಿಮ್ಮ ಕರ್ಮ ನಿಮಗೆ. ನಿಮಗಿದೋ ‘ಸಲಾಮ್’ (ಶಾಂತಿ). ನಾವು ಅಜ್ಞಾನಿಗಳೊಂದಿಗೆ ಜಗಳಕ್ಕಿಳಿಯುವುದಿಲ್ಲ’’ ಎನ್ನುತ್ತಾರೆ

[55] (ದೂತರೇ,) ನಿಮ್ಮ ಪ್ರೀತಿ ಪಾತ್ರರನ್ನೆಲ್ಲಾ ಸರಿದಾರಿಗೆ ತರಲು ನಿಮ್ಮಿಂದ ಖಂಡಿತ ಸಾಧ್ಯವಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸರಿದಾರಿಗೆ ತರುತ್ತಾನೆ. ಸರಿದಾರಿಗೆ ಬರುವವರು ಯಾರು ಎಂಬುದನ್ನು ಅವನೇ ಹೆಚ್ಚು ಬಲ್ಲವನು

[56] ‘‘ನಾವು ನಿಮ್ಮ ಜೊತೆಗೆ ಸೇರಿ ಸರಿದಾರಿಯನ್ನು ಅನುಸರಿಸಿದರೆ, ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲಾದೀತು’’ಎಂದು ಅವರು ಹೇಳುತ್ತಾರೆ. ನಾವೇನು ಅವರನ್ನು, ಪವಿತ್ರವಾದ ಸುರಕ್ಷಿತ ಸ್ಥಳದಲ್ಲಿ ನೆಲೆಸಲಿಲ್ಲವೇ? ಅದು ನಮ್ಮ ಕಡೆಯಿಂದ, ಎಲ್ಲ ಫಲಗಳೂ ಆಹಾರ ರೂಪದಲ್ಲಿ ಬಂದು ತಲುಪುವ ಸ್ಥಳ. ಆದರೆ ಅವರಲ್ಲಿ ಹೆಚ್ಚಿನವರಿಗೆ ಏನೂ ತಿಳಿದಿಲ್ಲ

[57] ತಮ್ಮ ಸಂಪನ್ನತೆಯ ಬಗ್ಗೆ ಅಹಂಕಾರ ಪಡುತ್ತಿದ್ದ ಅದೆಷ್ಟು ನಾಡುಗಳನ್ನು ನಾವು ನಾಶಪಡಿಸಿದ್ದೇವೆ! ಅದೋ ಅವರು ನೆಲೆಸಿದ್ದ ಭವನಗಳು! ಅವರ ಬಳಿಕ (ಅವುಗಳಲ್ಲಿ) ಕೇವಲ ಕೆಲವರ ಹೊರತು ಬೇರೆ ಯಾರೂ ನೆಲೆಸಲಿಲ್ಲ. ನಿಜವಾಗಿ ನಾವೇ (ಅವೆಲ್ಲವುಗಳ) ಉತ್ತರಾಧಿಕಾರಿಗಳಾದೆವು

[58] ನಿಮ್ಮ ಒಡೆಯನು ಯಾವುದೇ ನಾಡಿನ ಕೇಂದ್ರ ಸ್ಥಾನಕ್ಕೆ, ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸುವ ಒಬ್ಬ ದೂತನನ್ನು ಕಳಿಸುವ ತನಕ ಆ ನಾಡನ್ನು ನಾಶಪಡಿಸುವುದಿಲ್ಲ. ಮತ್ತು ನಾವು, ಯಾವುದೇ ನಾಡಿನ ಜನರು ಅಕ್ರಮಿಗಳಾಗದೆ ಆ ನಾಡನ್ನು ನಾಶಪಡಿಸುವುದಿಲ್ಲ

[59] ನಿಮಗೆ ನೀಡಲಾಗಿರುವ ಪ್ರತಿಯೊಂದು ವಸ್ತುವೂ ಕೇವಲ ಇಹಲೋಕದ ಬದುಕಿನ ಸೊತ್ತಾಗಿದೆ ಮತ್ತು ಇಲ್ಲಿಗಷ್ಟೇ ಭೂಷಣವಾಗಿದೆ. ಅಲ್ಲಾಹನ ಬಳಿ ಏನಿದೆಯೋ ಅದು ಉತ್ತಮವಾಗಿದೆ ಹಾಗೂ ಅದು ಹೆಚ್ಚು ಕಾಲ ಉಳಿಯುತ್ತದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ

[60] ನಾವು ಹಿತದ ವಾಗ್ದಾನ ಮಾಡಿದ್ದು, ಅದನ್ನು ಪಡೆಯಲಿರುವ ವ್ಯಕ್ತಿಯು, ನಾವು ಇಹಲೋಕದ ಬದುಕಿನಲ್ಲಿ ಸಂಪನ್ನಗೊಳಿಸಿದ್ದು ಆ ಬಳಿಕ ಪುನರುತ್ಥಾನದಿನ (ಬಂಧಿತನಾಗಿ) ಹಾಜರುಗೊಳಿಸಲಿರುವ ವ್ಯಕ್ತಿಗೆ ಸಮಾನನಾಗಬಲ್ಲನೇ

[61] ಅಂದು ಅವನು (ಅಲ್ಲಾಹನು) ಅವರನ್ನು ಕರೆದು, ‘‘ನೀವು ಅವಲಂಬಿಸಿಕೊಂಡಿದ್ದ ಆ ನಿಮ್ಮ ಪಾಲುದಾರರು ಎಲ್ಲಿದ್ದಾರೆ?’’ ಎಂದು ಕೇಳುವನು

[62] ಅದಾಗಲೇ ತೀರ್ಪು ವಿಧಿಸಲ್ಪಟ್ಟವರು ಹೇಳುವರು; ನಮ್ಮೊಡೆಯಾ, ಅವರೇ ನಮ್ಮನ್ನು ದಾರಿಗೆಡಿಸಿದವರು. ನಾವು ಸ್ವತಃ ದಾರಿಗೆಟ್ಟಂತೆ ಅವರನ್ನು ದಾರಿಗೆಡಿಸಿದೆವು. ಅವರು ನಮ್ಮನ್ನು ಪೂಜಿಸುತ್ತಿರಲಿಲ್ಲ ಎಂದು ನಿನ್ನ ಮುಂದೆ ನಾವು ದೋಷಮುಕ್ತಿ ಪ್ರಕಟಿಸುತ್ತಿದ್ದೇವೆ

[63] ನಿಮ್ಮ ಪಾಲುದಾರರನ್ನು (ಉಪದೇವತೆಗಳನ್ನು) ಕರೆಯಿರಿ ಎಂದು ಅವರೊಡನೆ ಹೇಳಲಾಗುವುದು. ಅವರು ಅವುಗಳನ್ನು ಕರೆಯುವರು. ಆದರೆ ಅವುಗಳು ಅವರಿಗೆ ಯಾವುದೇ ಉತ್ತರ ನೀಡಲಾರವು. ಕೊನೆಗೆ ಅವರು ಶಿಕ್ಷೆಯನ್ನು ಕಾಣುವರು. ಅವರು ಸರಿದಾರಿಯನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು

[64] ಅವನು ಅವರನ್ನು ಕರೆಯುವ ದಿನ, ‘‘ದೂತರುಗಳಿಗೆ ನೀವು ಅದೇನು ಉತ್ತರ ನೀಡಿದಿರಿ?’’ ಎಂದು ಕೇಳುವನು

[65] ಆದರೆ ಆ ದಿನ ಅವರಿಗೆ ಏನೇನೂ ತೋಚದು ಮತ್ತು ಪರಸ್ಪರ ವಿಚಾರಿಸಲಿಕ್ಕೂ ಅವರಿಗೆ ಸಾಧ್ಯವಾಗದು

[66] (ಇಹದಲ್ಲಿ) ಪಶ್ಚಾತ್ತಾಪ ಪಟ್ಟು, ಸತ್ಯವನ್ನು ನಂಬಿ, ಸತ್ಕರ್ಮಗಳನ್ನು ಮಾಡಿದವನು ಮಾತ್ರ ಅಂದು ವಿಜಯಿಗಳ ಸಾಲಿಗೆ ಸೇರಬಹುದು

[67] ನಿಮ್ಮ ಒಡೆಯನು ತಾನಿಚ್ಛಿಸಿದವರನ್ನು ಸೃಷ್ಟಿಸುತ್ತಾನೆ ಹಾಗೂ ಆಯ್ದುಕೊಳ್ಳುತ್ತಾನೆ. ಅವರಿಗೆ ಆಯ್ಕೆಯ ಅಧಿಕಾರವೇನಿಲ್ಲ. ಅಲ್ಲಾಹನು ಪಾವನನು ಮತ್ತು ಅವರು ಪಾಲುಗೊಳಿಸುವ ಎಲ್ಲವುಗಳಿಗಿಂತ ಉನ್ನತನು

[68] ಅವರ ಮನಸ್ಸುಗಳಲ್ಲಿ ಅಡಗಿರುವ ಮತ್ತು ಅವರು ಬಹಿರಂಗಪಡಿಸುತ್ತಿರುವ ಎಲ್ಲವನ್ನೂ ನಿಮ್ಮ ಒಡೆಯನು ಬಲ್ಲನು

[69] ಮತ್ತು ಅವನೇ ಅಲ್ಲಾಹ್. ಅವನ ಹೊರತು ಬೇರೆ ದೇವರಿಲ್ಲ. ಮೊದಲೂ (ಇಹ ಲೋಕದಲ್ಲೂ) ಅನಂತರವೂ (ಪರಲೋಕದಲ್ಲೂ) ಹೊಗಳಿಕೆಗಳೆಲ್ಲಾ ಅವನಿಗೇ ಮೀಸಲು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು

[70] ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ, ಶಾಶ್ವತವಾಗಿ ರಾತ್ರಿಯನ್ನೇ ಹೇರಿ ಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನಿಮಗೆ ಬೆಳಕನ್ನು ತಂದು ಕೊಡಬಲ್ಲವರು? ನೀವೇನು ಆಲಿಸುವುದಿಲ್ಲವೇ

[71] ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ ಶಾಶ್ವತವಾಗಿ ಹಗಲನ್ನೇ ಹೇರಿಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನೀವು ವಿಶ್ರಾಂತಿ ಪಡೆಯುವಂತಾಗಲು ನಿಮಗೆ ರಾತ್ರಿಯನ್ನು ತಂದು ಕೊಡಬಲ್ಲವರು? ನೀವೇನು ನೋಡುವುದಿಲ್ಲವೇ

[72] ನಿಜವಾಗಿ, ನೀವು ವಿಶ್ರಾಂತಿ ಪಡೆಯುವಂತಾಗಲು ಹಾಗೂ ಅವನ ಅನುಗ್ರಹವನ್ನು ಅರಸುವಂತಾಗಲು ಮತ್ತು ನೀವು ಕೃತಜ್ಞರಾಗಬೇಕೆಂದು ತನ್ನ ಅನುಗ್ರಹದಿಂದ ನಿಮಗಾಗಿ ರಾತ್ರಿ ಮತ್ತು ಹಗಲನ್ನು ನಿರ್ಮಿಸಿರುವವನು ಅವನೇ

[73] ಅಂದು ಅವನು (ಅಲ್ಲಾಹನು) ಅವರನ್ನು ಕರೆದು, ‘‘ನೀವು ಅವಲಂಬಿಸಿಕೊಂಡಿದ್ದ ಆ ನಿಮ್ಮ ಪಾಲುದಾರರು ಎಲ್ಲಿದ್ದಾರೆ?’’ ಎಂದು ಕೇಳುವನು

[74] ಮತ್ತು ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಮುಂದೆ ತರುವೆವು ಹಾಗೂ ‘‘ನಿಮ್ಮ ಪುರಾವೆಯನ್ನು ಮುಂದಿಡಿರಿ’’ ಎನ್ನುವೆವು. ಆಗ ಅಲ್ಲಾಹನ ಮಾತು ಮಾತ್ರ ಸತ್ಯವೆಂಬುದನ್ನು ಅವರು ಮನಗಾಣುವರು ಮತ್ತು ಅವರು ರಚಿಸಿಕೊಂಡಿದ್ದ ಎಲ್ಲವೂ (ಎಲ್ಲ ಮಿಥ್ಯಗಳೂ) ಅವರಿಂದ ಮರೆಯಾಗಿ ಬಿಡುವವು

[75] ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳಿತು; ನೀನು ದೊಡ್ಡಸ್ತಿಕೆ ಮೆರೆಯಬೇಡ. ದೊಡ್ಡಸ್ತಿಕೆ ಮೆರೆಯುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ

[76] ಅಲ್ಲಾಹನು ನಿನಗೆ ಏನೆಲ್ಲವನ್ನು ನೀಡಿರುವನೋ ಆ ಮೂಲಕ ನೀನು ಪರಲೋಕದ ನೆಲೆಯನ್ನು ಅರಸು ಮತ್ತು (ಅದೇವೇಳೆ) ನೀನು ಇಹಲೋಕದಲ್ಲಿನ ನಿನ್ನ ಪಾಲನ್ನು ಮರೆಯದಿರು ಮತ್ತು ಅಲ್ಲಾಹನು ನಿನಗೆ ಹಿತವನ್ನು ಮಾಡಿರುವಂತೆ ನೀನು (ಜನರಿಗೆ) ಹಿತವನ್ನು ಮಾಡು. ನೀನು ಭೂಮಿಯಲ್ಲಿ ಅಶಾಂತಿಯನ್ನು ಹರಡದಿರು. ಅಶಾಂತಿ ಹರಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ

[77] ಆಗ ಅವನು ಹೇಳಿದನು; ‘‘ಇದನ್ನೆಲ್ಲಾ ನನ್ನಲ್ಲಿರುವ ಒಂದು (ವಿಶೇಷ) ಜ್ಞಾನದ ಕಾರಣ ನನಗೆ ನೀಡಲಾಗಿದೆ.’’ ಅಲ್ಲಾಹನು ಅವನಿಗಿಂತ ಮುಂಚೆ ಅವನಿಗಿಂತ ಹೆಚ್ಚು ಶಕ್ತರಾಗಿದ್ದ ಮತ್ತು ಹೆಚ್ಚು ಜನಬಲಹೊಂದಿದ್ದ ಗುಂಪುಗಳನ್ನು ನಾಶಪಡಿಸಿದ್ದಾನೆ ಎಂಬುದು ಅವನಿಗೆ ತಿಳಿಯದೇ? (ಹಾಗೆ ನಾಶಪಡಿಸುವಾಗ) ಅಪರಾಧಿಗಳೊಡನೆ, ಅವರ ಪಾಪಗಳ ಕುರಿತು ಪ್ರಶ್ನಿಸಲಾಗುವುದಿಲ್ಲ.’’

[78] ಒಮ್ಮೆ ಅವನು (ಕಾರೂನ್) ತನ್ನ ವೈಭವದೊಂದಿಗೆ ತನ್ನ ಜನಾಂಗದವರ ಮುಂದೆ ಹೊರಟನು. ಆಗ, ಕೇವಲ ಈ ಲೋಕದ ಬದುಕನ್ನು ಬಯಸಿದ್ದವರು ‘‘ಕಾರೂನನಿಗೆ ನೀಡಲಾಗಿರುವುದೆಲ್ಲವೂ ನಮ್ಮ ಬಳಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು! ಅವನು ಖಂಡಿತ ಮಹಾ ಭಾಗ್ಯವಂತ!’’ ಎನ್ನತೊಡಗಿದರು

[79] ಆದರೆ ಜ್ಞಾನವಂತರು ಹೇಳಿದರು; ‘‘ನಿಮ್ಮ ಸ್ಥಿತಿಯು ಶೋಚನೀಯವಾಗಿದೆ. ಸತ್ಯವನ್ನು ನಂಬಿದ ಹಾಗೂ ಸತ್ಕರ್ಮ ಮಾಡಿದವನ ಪಾಲಿಗೆ, ಅಲ್ಲಾಹನು ನೀಡುವ ಪ್ರತಿಫಲವೇ (ಇದೆಲ್ಲಕ್ಕಿಂತ) ಶ್ರೇಷ್ಠವಾಗಿದೆ ಮತ್ತು ಅದು ಸಹನಶೀಲರಿಗೆ ಮಾತ್ರ ಸಿಗುತ್ತದೆ.’’

[80] ಕೊನೆಗೆ ನಾವು ಆತ (ಕಾರೂನ್)ನನ್ನು ಮತ್ತು ಅವನ ನಿವಾಸವನ್ನು ಭೂಮಿಯಲ್ಲಿ ಅದುಮಿ ಬಿಟ್ಟೆವು. ಆಗ ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಅವನ ನೆರವಿಗೆ ಲಭ್ಯವಿರಲಿಲ್ಲ ಮತ್ತ್ತು ತನಗೆ ತಾನೇ ನೆರವಾಗಲಿಕ್ಕೂ ಅವನಿಗೆ ಸಾಧ್ಯವಾಗಲಿಲ್ಲ

[81] ನಿನ್ನೆಯವರೆಗೂ ಅವನ ಸ್ಥಾನಮಾನಕ್ಕಾಗಿ ಆಶೆಪಡುತ್ತಿದ್ದವರು ಬೆಳಗಾದಾಗ ಹೇಳ ತೊಡಗಿದರು; ಅಯ್ಯೋ ಅಲ್ಲಾಹನು ಸಂಪತ್ತನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಮತ್ತು ಸೀಮಿತಗೊಳಿಸಿಬಿಡುತ್ತಾನೆ. ನಮ್ಮ ಮೇಲೆ ಅಲ್ಲಾಹನು ಕೃಪೆ ತೋರದೆ ಇದ್ದಿದ್ದರೆ, ಅವನು ನಮ್ಮನ್ನೂ (ಭೂಮಿಯೊಳಗೆ) ಅದುಮಿ ಬಿಡುತ್ತಿದ್ದನು. ಎಷ್ಟೊಂದು ಸತ್ಯ! ಕೃತಘ್ನರು ಎಂದೂ ವಿಜಯಿಗಳಾಗುವುದಿಲ್ಲ

[82] ಇದು ಪರಲೋಕದ ನೆಲೆ. ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆಯಲು ಮತ್ತು ಅಶಾಂತಿ ಹಬ್ಬಲು ಬಯಸದವರಿಗಾಗಿ ನಾವಿದನ್ನು ಮೀಸಲಾಗಿಟ್ಟಿರುವೆವು. ಅಂತಿಮ ಸಾಫಲ್ಯವು ಧರ್ಮನಿಷ್ಠರಿಗೇ ಸೇರಿದೆ

[83] ಸತ್ಕಾರ್ಯಗಳನ್ನು ತಂದವನಿಗೆ ಅದಕ್ಕಿಂತ ಶ್ರೇಷ್ಠವಾದುದು ಸಿಗಲಿದೆ. ಇನ್ನು, ಪಾಪಕೃತ್ಯಗಳನ್ನು ತಂದವನು – ಇಂತಹ ಪಾಪಕೃತ್ಯಗಳನ್ನು ಮಾಡುವವರಿಗೆ ಅವರು ಮಾಡುತ್ತಿದ್ದ ಕೃತ್ಯಗಳಿಗನುಸಾರವಾದ ಪ್ರತಿಫಲವೇ ಸಿಗಲಿದೆ

[84] (ದೂತರೇ,) ಕುರ್‌ಆನನ್ನು ನಿಮಗೆ ಕಡ್ಡಾಯಗೊಳಿಸಿದವನು ಖಂಡಿತವಾಗಿಯೂ ನಿಮ್ಮನ್ನು ಸೂಕ್ತ ನೆಲೆಗೆ ಮರಳಿಸುವನು. ಹೇಳಿರಿ; ಮಾರ್ಗದರ್ಶನವನ್ನು ತಂದಿರುವವನು ಯಾರು ಮತ್ತು ಯಾರು ಸ್ಪಷ್ಟವಾಗಿ ದಾರಿತಪ್ಪಿರುವವನೆಂಬುದನ್ನು ನನ್ನ ಒಡೆಯನು ಚೆನ್ನಾಗಿ ಬಲ್ಲನು

[85] (ದೂತರೇ,) ನಿಮ್ಮೆಡೆಗೆ ಈ ಗ್ರಂಥವನ್ನು ಇಳಿಸಿಕೊಡಲಾಗುವುದೆಂದು ನೀವೆಂದೂ ನಿರೀಕ್ಷಿಸಿರಲಿಲ್ಲ. ಅದು ಕೇವಲ ನಿಮ್ಮ ಒಡೆಯನ ಅನುಗ್ರಹವಾಗಿದೆ. ನೀವಿನ್ನು ಯಾವ ಕಾರಣಕ್ಕೂ ಧಿಕ್ಕಾರಿಗಳ ಸಹಾಯಕರಾಗಬೇಡಿ

[86] ಅಲ್ಲಾಹನ ವಚನಗಳನ್ನು ನಿಮಗೆ ಇಳಿಸಿಕೊಡಲಾದ ಬಳಿಕ, ಅವರು ನಿಮ್ಮನ್ನು ಅವುಗಳಿಂದ ತಡೆದಿಡಬಾರದು. ನೀವು (ಜನರನ್ನು) ನಿಮ್ಮ ಒಡೆಯನ ಕಡೆಗೆ ಆಮಂತ್ರಿಸಿರಿ ಮತ್ತು ನೀವೆಂದೂ ಬಹುದೇವಾರಾಧಕರಾಗಬೇಡಿ

[87] ಅಲ್ಲಾಹನ ಜೊತೆ ಬೇರಾವ ದೇವರನ್ನೂ ಪ್ರಾರ್ಥಿಸಬೇಡಿ. ಅವನ ಹೊರತು ಬೇರೆ ದೇವರಿಲ್ಲ. ಅವನೊಬ್ಬನ ಹೊರತು ಎಲ್ಲವೂ ನಾಶವಾಗಲಿದೆ. ಅಧಿಕಾರವೆಲ್ಲವೂ ಅವನಿಗೇ ಸೇರಿದೆ ಮತ್ತು ನೀವು ಅವನ ಬಳಿಗೇ ಮರಳುವಿರಿ

[88] ಅಲಿಫ್ ಲಾಮ್ ಮ್ಮೀಮ್

ಜೇಡ

Surah 29

[1] ಜನರೇನು, ನಾವು ನಂಬಿದೆವು ಎಂದು ಹೇಳಿದೊಡನೆ ತಮ್ಮನ್ನು ಬಿಟ್ಟು ಬಿಡಲಾಗುವುದೆಂದು ಹಾಗೂ ತಮ್ಮನ್ನು ಪರೀಕ್ಷಿಸಲಾಗುವುದಿಲ್ಲವೆಂದು ಭಾವಿಸಿದ್ದಾರೆಯೇ

[2] ಅವರ ಹಿಂದಿನವರನ್ನೂ ನಾವು ಪರೀಕ್ಷಿಸಿರುವೆವು. ಸತ್ಯವಂತರು ಯಾರೆಂಬುದನ್ನು ಅಲ್ಲಾಹನು, ಖಂಡಿತ ಅರಿಯುವನು ಮತ್ತು ಸುಳ್ಳರನ್ನೂ ಅವನು ಖಂಡಿತ ಅರಿಯುವನು

[3] ದುಷ್ಟ ಕೆಲಸಗಳನ್ನು ಮಾಡುವವರು, ಅವರು ನಮ್ಮನ್ನು ಮೀರಿ ಹೋಗಬಲ್ಲರೆಂದು ಭಾವಿಸಿಕೊಂಡಿರುವರೇ? ಎಷ್ಟೊಂದು ಕೆಟ್ಟ ತೀರ್ಮಾನ ಅವರದು

[4] ಅಲ್ಲಾಹನನ್ನು ಭೇಟಿಯಾಗುವ ನಿರೀಕ್ಷೆ ಉಳ್ಳವರು (ತಿಳಿದಿರಲಿ;) ಅಲ್ಲಾಹನು ನಿಶ್ಚಯಿಸಿರುವ ಆ ಹೊತ್ತು ಖಂಡಿತ ಬರಲಿದೆ ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ

[5] ಪ್ರತಿಯೊಬ್ಬ ಶ್ರಮಿಸುವವನು ಸ್ವತಃ ತನ್ನ ಹಿತಕ್ಕಾಗಿ ಶ್ರಮಿಸುತ್ತಾನೆ. ಅಲ್ಲಾಹನಂತು ಸರ್ವಲೋಕಗಳಿಂದ ನಿರಪೇಕ್ಷನಾಗಿದ್ದಾನೆ

[6] ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡಿದವರಿಂದ ನಾವು ಅವರ ಪಾಪಗಳನ್ನು ನಿವಾರಿಸುವೆವು ಮತ್ತು ಅವರು ಮಾಡಿದ್ದ ಕರ್ಮಗಳಿಗಿಂತ ಪ್ರತಿಫಲವನ್ನು ಅವರಿಗೆ ನೀಡುವೆವು

[7] ಮತ್ತು ನಾವು ಮನುಷ್ಯನಿಗೆ, ತನ್ನ ತಾಯಿ ತಂದೆಯ ಜೊತೆ ಅತ್ಯುತ್ತಮವಾಗಿ ವರ್ತಿಸಬೇಕೆಂದು ಆದೇಶಿಸಿರುವೆವು ಹಾಗೂ (ದೇವರೆಂದು) ನಿನಗೆ ತಿಳಿದಿಲ್ಲದವರನ್ನು ನನ್ನ ಜೊತೆ ಪಾಲುಗೊಳಿಸಲು ಅವರು ನಿನ್ನನ್ನು ಆಗ್ರಹಿಸಿದರೆ, ಅವರನ್ನು ಅನುಸರಿಸಬೇಡ. ಕೊನೆಗೆ ನೀವು ನನ್ನ ಬಳಿಗೇ ಮರಳಿ ಬರುವಿರಿ, ನೀವು ಏನೆಲ್ಲ ಮಾಡುತ್ತಿದ್ದಿರೆಂಬುದನ್ನು ಆಗ ನಾನು ನಿಮಗೆ ತಿಳಿಸುವೆನು

[8] ಸತ್ಯವನ್ನು ನಂಬಿದವರನ್ನು – ಹಾಗೂ ಸತ್ಕರ್ಮಗಳನ್ನು ಮಾಡಿದವರನ್ನು ನಾವು ಸ್ವರ್ಗದೊಳಗೆ ಸಜ್ಜನರ ಜೊತೆ ಸೇರಿಸುವೆವು

[9] ಜನರಲ್ಲೊಬ್ಬನು, ನಾವು ಅಲ್ಲಾಹನನ್ನು ನಂಬಿದೆವು ಎನ್ನುತ್ತಾನೆ. ಆದರೆ ಆ ಬಳಿಕ ಅಲ್ಲಾಹನ ಮಾರ್ಗದಲ್ಲಿ ತನ್ನನ್ನು ಸತಾಯಿಸಲಾದರೆ, ಜನರಿಂದ ಬಂದ ಪರೀಕ್ಷೆಯನ್ನು ಅವನು ಅಲ್ಲಾಹನ ಶಿಕ್ಷೆ ಎಂಬಂತೆ ಪರಿಗಣಿಸುತ್ತಾನೆ. ಇನ್ನು ನಿಮ್ಮ ಒಡೆಯನ ಸಹಾಯ ಬಂದರೆ ಖಂಡಿತವಾಗಿಯೂ ಅವರು, ನಾವು ನಿಮ್ಮ ಜೊತೆಗೇ ಇದ್ದೆವು ಎನ್ನುತ್ತಾರೆ. ಲೋಕದೆಲ್ಲೆಡೆಯ ಜನರ ಮನಸ್ಸುಗಳಲ್ಲಿ ಏನಿದೆ ಎಂಬುದು ಅಲ್ಲಾಹನಿಗೆ ಚೆನ್ನಾಗಿ ತಿಳಿಯದೇ

[10] ಯಾರು ನಂಬಿರುವವರು ಮತ್ತು ಯಾರು ಕಪಟಿಗಳು ಎಂಬುದನ್ನು ಅಲ್ಲಾಹನು ಖಂಡಿತ ಅರಿಯುವನು

[11] ಧಿಕ್ಕಾರಿಗಳು ವಿಶ್ವಾಸಿಗಳೊಡನೆ, ‘‘ನೀವು ನಮ್ಮ ದಾರಿಯನ್ನು ಅನುಸರಿಸಿರಿ, ನಿಮ್ಮ ಪಾಪಗಳನ್ನು ನಾವು ಹೊತ್ತುಕೊಳ್ಳುವೆವು’’ ಎನ್ನುತ್ತಾರೆ. ಆದರೆ ಅವರು, ಅವರ (ವಿಶ್ವಾಸಿಗಳ) ಯಾವ ಪಾಪವನ್ನೂ (ತಮ್ಮಿಚ್ಛೆಯಿಂದ) ಹೊರಲಾರರು. ಅವರು ಖಂಡಿತ ಸುಳ್ಳುಗಾರರು

[12] ಅವರು ಖಂಡಿತ ತಮ್ಮದೇ ಹೊರೆಗಳನ್ನು ಮತ್ತು ತಮ್ಮ ಹೊರೆಗಳ ಜೊತೆ ಇನ್ನಷ್ಟು ಹೊರೆಗಳನ್ನು ಹೊತ್ತಿರುವರು. ಅವರು ರಚಿಸುತ್ತಿದ್ದ ಸುಳ್ಳುಗಳ ಕುರಿತು ಪುನರುತ್ಥಾನ ದಿನ ಅವರನ್ನು ಖಂಡಿತ ಪ್ರಶ್ನಿಸಲಾಗುವುದು

[13] ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳಿಸಿದ್ದ್ದೆವು. ಅವರು ಒಂಭತ್ತುನೂರ ಐವತ್ತು ವರ್ಷಗಳ ಕಾಲ ಅವರ ಜೊತೆಗಿದ್ದರು. ಕೊನೆಗೆ ಬಿರುಗಾಳಿಯು ಆ ಜನರನ್ನು ಆಕ್ರಮಿಸಿತು. ಅವರು ಅಕ್ರಮಿಗಳಾಗಿದ್ದರು

[14] ನಾವು ಅವರನ್ನು (ನೂಹರನ್ನು) ಮತ್ತು ಹಡಗಿನವರನ್ನು ರಕ್ಷಿಸಿದೆವು ಮತ್ತು ಅದನ್ನು (ಆ ಹಡಗನ್ನು) ಸರ್ವಲೋಕದವರ ಪಾಲಿಗೆ ಒಂದು ಪಾಠವಾಗಿಸಿದೆವು

[15] ಮತ್ತು ಇಬ್ರಾಹೀಮರು ತಮ್ಮ ಜನಾಂಗದವರೊಡನೆ ಹೇಳಿದರು; ಅಲ್ಲಾಹನನ್ನೇ ಆರಾಧಿಸಿರಿ ಮತ್ತು ಅವನಿಗೆ ಅಂಜಿರಿ. ನೀವು ಬಲ್ಲವರಾಗಿದ್ದರೆ ನಿಮ್ಮ ಪಾಲಿಗೆ ಅದುವೇ ಉತ್ತಮ

[16] ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸುತ್ತಿರುವಿರಿ ಮತ್ತು ಸುಳ್ಳನ್ನು ಸೃಷ್ಟಿಸುತ್ತಿರುವಿರಿ, ನೀವು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಪೂಜಿಸುತ್ತಿರುವಿರೋ ಅವರು ನಿಮಗೆ ಆಹಾರವನ್ನು ಒದಗಿಸಲು ಶಕ್ತರಲ್ಲ. ಆದ್ದರಿಂದ ನೀವು ಆಹಾರವನ್ನು ಅಲ್ಲಾಹನ ಬಳಿಯಲ್ಲೇ ಹುಡುಕಿರಿ, ಅವನನ್ನೇ ಆರಾಧಿಸಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. (ಕೊನೆಗೆ) ನೀವು ಅವನ ಬಳಿಗೇ ಮರಳುವಿರಿ

[17] ನೀವೀಗ ಇದನ್ನು (ಸತ್ಯವನ್ನು) ತಿರಸ್ಕರಿಸುತ್ತೀರಾದರೆ (ನಿಮಗೆ ತಿಳಿದಿರಲಿ); ನಿಮಗಿಂತ ಹಿಂದಿನ ಸಮುದಾಯಗಳೂ ತಿರಸ್ಕರಿಸಿದ್ದವು. ದೂತರ ಮೇಲಿರುವುದು, ಸ್ಪಷ್ಟವಾಗಿ (ಸತ್ಯವನ್ನು) ತಲುಪಿಸುವ ಹೊಣೆ ಮಾತ್ರ

[18] ಯಾವ ರೀತಿ ಅಲ್ಲಾಹನು ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ ಮತ್ತು ಅದನ್ನು ಪುನರಾವರ್ತಿಸುತ್ತಾನೆ ಎಂಬುದನ್ನು ಅವರು ಕಂಡಿಲ್ಲವೇ? ಅಲ್ಲಾಹನ ಮಟ್ಟಿಗೆ ಅದು ಸರಳ ಕಾರ್ಯವಾಗಿದೆ

[19] ಹೇಳಿರಿ; ನೀವು ಭೂಮಿಯಲ್ಲಿ ಸಂಚರಿಸಿರಿ ಮತ್ತು ಅವನು (ಅಲ್ಲಾಹನು) ಯಾವ ರೀತಿ ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ ಎಂಬುದನ್ನು ನೋಡಿರಿ. ಅದೇ ಅಲ್ಲಾಹನು ಮತ್ತೊಂದು ಬಾರಿ (ಎಲ್ಲವನ್ನೂ) ಜೀವಂತಗೊಳಿಸಲಿದ್ದಾನೆ. ಅಲ್ಲಾಹನಂತು ಎಲ್ಲವನ್ನೂ ಮಾಡಲು ಖಂಡಿತ ಶಕ್ತನಾಗಿದ್ದಾನೆ

[20] ಅವನು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರ ಮೇಲೆ ಕೃಪೆ ತೋರುತ್ತಾನೆ. (ಕೊನೆಗೆ) ನೀವೆಲ್ಲರೂ ಅವನೆಡೆಗೇ ಮರಳುವಿರಿ

[21] ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ (ಅಲ್ಲಾಹನಿಂದ) ತಪ್ಪಿಸಿಕೊಳ್ಳಲು ನಿಮಗೆ ಖಂಡಿತ ಸಾಧ್ಯವಿಲ್ಲ. ಅಲ್ಲಾಹನ ಹೊರತು ನಿಮಗೆ ಬೇರಾರೂ ಪೋಷಕರಾಗಲಿ ಸಹಾಯಕರಾಗಲಿ ಇಲ್ಲ

[22] ಅಲ್ಲಾಹನ ವಚನಗಳನ್ನು ಮತ್ತು ಅವನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ಧಿಕ್ಕರಿಸಿದವರು ನನ್ನ ಕೃಪೆಯ ಕುರಿತು ನಿರಾಶರಾಗಿರುವರು. ಅವರೇ, ಕಠಿಣ ಶಿಕ್ಷೆಗೆ ತುತ್ತಾಗುವವರು

[23] ‘‘ಅವನನ್ನು ಕೊಲ್ಲಿರಿ ಅಥವಾ ಅವನನ್ನು ಸುಟ್ಟುಬಿಡಿರಿ’’ ಎನ್ನುವುದಷ್ಟೇ ಅವರ (ಇಬ್ರಾಹೀಮರ) ಜನಾಂಗದವರ ಉತ್ತರವಾಗಿತ್ತು. ಆದರೆ ಅಲ್ಲಾಹನು ಅವರನ್ನು ಬೆಂಕಿಯಿಂದ ರಕ್ಷಿಸಿದನು. ನಂಬುವ ಜನರಿಗೆ ಇದರಲ್ಲಿ ಖಂಡಿತ ಪಾಠವಿದೆ

[24] ಅವರು (ಇಬ್ರಾಹೀಮರು) ಹೇಳಿದರು; ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ನೆಚ್ಚಿಕೊಂಡಿರುವಿರಿ. ಇಹಲೋಕದ ಬದುಕಿನಲ್ಲಿ ನಿಮ್ಮ ನಡುವೆ ಭಾರೀ ಪ್ರೇಮವಿದೆ. ಆದರೆ ಪುನರುತ್ಥಾನ ದಿನ ನೀವು ಪರಸ್ಪರರನ್ನು ಧಿಕ್ಕರಿಸುವಿರಿ ಮತ್ತು ಪರಸ್ಪರ ಶಪಿಸಿಕೊಳ್ಳುವಿರಿ. ನರಕವೇ ನಿಮ್ಮ ಅಂತಿಮ ನೆಲೆಯಾಗಿರುವುದು ಮತ್ತು ನಿಮಗೆ ಯಾವ ಸಹಾಯಕರೂ ದೊರೆಯಲಾರರು

[25] ಲೂತರು ಆತನಲ್ಲಿ ನಂಬಿಕೆ ಇಟ್ಟರು ಮತ್ತು ಹೇಳಿದರು; ನಾನು ನನ್ನ ಒಡೆಯನ ಕಡೆಗೆ ವಲಸೆ ಹೋಗುತ್ತಿದ್ದೇನೆ. ಖಂಡಿತವಾಗಿಯೂ ಅವನು ಭಾರೀ ಪ್ರಬಲನು ಮತ್ತು ಯುಕ್ತಿವಂತನು

[26] ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಅಕೂಬರನ್ನು ನೀಡಿದೆವು ಮತ್ತು ಅವರ ಸಂತತಿಯ ಕೆಲವರಿಗೆ ಪ್ರವಾದಿತ್ವವನ್ನೂ ಗ್ರಂಥವನ್ನೂ ನೀಡಿದೆವು ಮತ್ತು ಅವರಿಗೆ (ಇಬ್ರಾಹೀಮರಿಗೆ) ಇಹಲೋಕದಲ್ಲಿ ಅವರ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರ ಸಾಲಿನಲ್ಲಿರುವರು

[27] ಲೂತರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವು ತೀರಾ ಅಶ್ಲೀಲ ಕೃತ್ಯವೊಂದನ್ನು ಎಸಗುತ್ತಿರುವಿರಿ. ನಿಮಗಿಂತ ಮುಂಚೆ ಸರ್ವಲೋಕಗಳಲ್ಲಿ ಯಾರೊಬ್ಬರೂ ಇಂತಹ ಕೃತ್ಯದಲ್ಲಿ ತೊಡಗಿರಲಿಲ್ಲ’’

[28] ‘‘ನೀವೇನು ಮಹಿಳೆಯರನ್ನು ಬಿಟ್ಟು ಪುರುಷರ ಜೊತೆ (ಕಾಮದಲ್ಲಿ) ನಿರತರಾಗುತ್ತೀರಾ? ಮತ್ತು ಪ್ರಯಾಣಿಕರನ್ನು ದೋಚುತ್ತೀರಾ? ನೀವಂತೂ ನಿಮ್ಮ ಸಭೆಗಳಲ್ಲೇ ದುಷ್ಟ ಕಾರ್ಯಗಳಲ್ಲಿ ನಿರತರಾಗುತ್ತೀರಿ’’. ಇದಕ್ಕೆ ಉತ್ತರವಾಗಿ ಅವರ ಜನಾಂಗದವರು ಹೇಳಿದ್ದಿಷ್ಟೇ; ‘‘ನೀನು ಸತ್ಯವಂತನಾಗಿದ್ದರೆ ನಮ್ಮ ಮೇಲೆ ಅಲ್ಲಾಹನ ಶಿಕ್ಷೆಯನ್ನು ಎರಗಿಸು’’

[29] ಅವರು (ಲೂತ್), ‘‘ನನ್ನೊಡೆಯಾ ಅಶಾಂತಿ ಹಬ್ಬುವ ಈ ಜನಾಂಗದ ವಿರುದ್ಧ ನನಗೆ ನೆರವಾಗು’’ ಎಂದು ಪ್ರಾರ್ಥಿಸಿದರು

[30] ಶುಭವಾತೆರ್ಯೊಂದಿಗೆ ಇಬ್ರಾಹೀಮರ ಬಳಿಗೆ ಬಂದಿದ್ದ ನಮ್ಮ ದೂತರು (ಮಲಕ್‌ಗಳು) ಹೇಳಿದರು; ‘‘ನಾವು ಆ ನಾಡನ್ನು ಖಂಡಿತ ನಾಶ ಮಾಡುವೆವು. ಏಕೆಂದರೆ ಅದರ ವಾಸಿಗಳು ಅಕ್ರಮಿಗಳಾಗಿದ್ದಾರೆ’’

[31] ಅವರು (ಇಬ್ರಾಹೀಮ್) ‘‘ಅಲ್ಲಿ ಲೂತ್ ಇದ್ದಾರೆ’’ ಎಂದರು. ಅವರು (ಮಲಕ್‌ಗಳು) ಹೇಳಿದರು; ‘‘ಅಲ್ಲಿ ಯಾರೆಲ್ಲಾ ಇದ್ದಾರೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮತ್ತು ಅವರ ಮನೆಯವರನ್ನು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಹಿಂದುಳಿಯುವವರ ಸಾಲಿಗೆ ಸೇರಿದ್ದಾಳೆ

[32] ನಮ್ಮ ದೂತರು (ಮಲಕ್‌ಗಳು) ಲೂತರ ಬಳಿಗೆ ಬಂದಾಗ ಅವರು (ಲೂತರು) ಅವರ ಕುರಿತು ಗಾಬರಿಗೊಂಡರು ಮತ್ತು ಅವರ ಮನಸ್ಸು ತುಂಬಾ ನೊಂದಿತ್ತು. ಆಗ ಅವರು (ಮಲಕ್‌ಗಳು) ಹೇಳಿದರು; ನೀವು ಅಂಜಬೇಡಿ ಮತ್ತು ದುಃಖಿಸಬೇಡಿ. ನಾವು ನಿಮ್ಮನ್ನೂ ನಿಮ್ಮ ಮನೆಯವರನ್ನೂ ರಕ್ಷಿಸುವೆವು – ನಿಮ್ಮ ಪತ್ನಿಯ ಹೊರತು. ಆಕೆ ಹಿಂದುಳಿಯುವವರ ಸಾಲಿಗೆ ಸೇರಿದ್ದಾಳೆ

[33] ಈ ನಾಡಿನವರು ಎಸಗಿದ ದುಷ್ಟ ಕೃತ್ಯಗಳ ಫಲವಾಗಿ ಅವರ ಮೇಲೆ ನಾವು ಆಕಾಶದಿಂದ ಶಿಕ್ಷೆಯನ್ನು ಎರಗಿಸುವೆವು

[34] ಬುದ್ಧಿ ಉಳ್ಳವರಿಗಾಗಿ ನಾವು ಅಲ್ಲಿನ (ಲೂತ್‌ರ ಜನಾಂಗದಲ್ಲಿನ) ಕೆಲವು ಕುರುಹುಗಳನ್ನು ಉಳಿಸಿದೆವು

[35] ಮತ್ತು ನಾವು ಮದ್‌ಯನ್‌ನೆಡೆಗೆ ಅವರ ಸಹೋದರ ಶುಐಬ್‌ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ನೀವು ಅಲ್ಲಾಹನನ್ನೇ ಪೂಜಿಸಿರಿ, ಅಂತಿಮ ದಿನವನ್ನು ನಿರೀಕ್ಷಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ತಿರುಗಾಡಬೇಡಿ

[36] ಅವರು ಆತನನ್ನು ತಿರಸ್ಕರಿಸಿದರು. ಕೊನೆಗೆ ಭೂಕಂಪವು ಅವರನ್ನು ಆಕ್ರಮಿಸಿಕೊಂಡಿತು. ಬೆಳಗಾಗುವ ಹೊತ್ತಿಗೆ ಅವರು ತಮ್ಮದೇ ನಿವಾಸಗಳಲ್ಲಿ ಅಧೋಮುಖರಾಗಿ ಬಿದ್ದುಕೊಂಡಿದ್ದರು

[37] ಹಾಗೆಯೇ, ಆದ್ ಮತ್ತು ಸಮೂದ್ ಜನಾಂಗಗಳು. ನಾವು ಅವರ ವಾಸಸ್ಥಾನಗಳನ್ನು ನಿಮಗೆ ಸ್ಪಷ್ಟವಾಗಿ ತಿಳಿಸಿರುವೆವು. ಶೈತಾನನು ಅವರಿಗೆ ಅವರ ಕರ್ಮಗಳನ್ನು ಚಂದಗಾಣಿಸಿ ಬಿಟ್ಟಿದ್ದನು ಮತ್ತು ಅವರನ್ನು (ಸತ್ಯದ) ಮಾರ್ಗದಿಂದ ತಡೆದಿಟ್ಟಿದ್ದನು. ನಿಜವಾಗಿ, ಅವರು ಬುದ್ಧಿ ಉಳ್ಳವರೇ ಆಗಿದ್ದರು

[38] ಹಾಗೆಯೇ ಕಾರೂನ್, ಫಿರ್‌ಔನ್ ಮತ್ತು ಹಾಮಾನ್. ಅವರ ಬಳಿಗೆ ಮೂಸಾ ಬಹಳ ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ಅವರು ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆದರು. ಕೊನೆಗೆ ಓಡಿಹೋಗಲು ಅವರಿಗೆ ಸಾಧ್ಯವಾಗಲಿಲ್ಲ

[39] ಅವರಲ್ಲಿ ಪ್ರತಿಯೊಬ್ಬರನ್ನೂ ನಾವು ಅವರ ಪಾಪಗಳಿಗಾಗಿ ದಂಡಿಸಿದೆವು. ಅವರಲ್ಲಿ ಕೆಲವರ ಮೇಲೆ ನಾವು ಕಲ್ಲಿನ ಮಳೆಯನ್ನು ಸುರಿಸಿದರೆ, ಕೆಲವರು ಭೀಕರ ಬಿರುಗಾಳಿಗೆ ತುತ್ತಾದರು. ಮತ್ತೆ ಕೆಲವರನ್ನು ನಾವು ಭೂಮಿಯೊಳಗೆ ಅದುಮಿಬಿಟ್ಟರೆ, ಇನ್ನು ಕೆಲವರನ್ನು ನಾವು ಮುಳುಗಿಸಿಬಿಟ್ಟೆವು. ಅಲ್ಲಾಹನು ಅವರ ಮೇಲೆ ಅಕ್ರಮ ಎಸಗುವವನಾಗಿರಲಿಲ್ಲ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿಕೊಂಡರು

[40] ಅಲ್ಲಾಹನ ಹೊರತು ಅನ್ಯರನ್ನು ತಮ್ಮ ಪೋಷಕರಾಗಿಸಿಕೊಂಡವರ ಉದಾಹರಣೆಯು ಒಂದು ಜೇಡರ ಹುಳುವಿನಂತಿದೆ. ಅದು ಒಂದು ಮನೆಯನ್ನು ನಿರ್ಮಿಸುತ್ತದೆ. ಮತ್ತು ಮನೆಗಳ ಪೈಕಿ ಅತ್ಯಂತ ದುರ್ಬಲ ಮನೆ ಜೇಡರ ಹುಳುವಿನ ಮನೆಯಾಗಿರುತ್ತದೆ. ಅವರಿಗೆ ಇದು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು

[41] ಅವರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವನು ಮಹಾ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[42] ಇವು ಮಾನವರಿಗಾಗಿ ನಾವು ಮುಂದಿಡುವ ಉದಾಹರಣೆಗಳು. ಆದರೆ ಬಲ್ಲವರು ಮಾತ್ರ ಇವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ

[43] ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ನ್ಯಾಯೋಚಿತವಾಗಿಯೇ ಸೃಷ್ಟಿಸಿರುವನು. ನಂಬುವವರ ಪಾಲಿಗೆ ಇದರಲ್ಲಿ ಪಾಠವಿದೆ

[44] (ದೂತರೇ,) ನಿಮಗೆ ದಿವ್ಯವಾಣಿಯ ಮೂಲಕ ಕಳಿಸಲಾಗಿರುವುದನ್ನು ನೀವು ಓದಿ ಕೇಳಿಸಿರಿ ಮತ್ತು ನಮಾಝ್‌ಅನ್ನು ಪಾಲಿಸಿರಿ. ಖಂಡಿತವಾಗಿಯೂ ನಮಾಝ್ ಅಶ್ಲೀಲತೆಗಳಿಂದ ಹಾಗೂ ದುಷ್ಟ ಕೃತ್ಯಗಳಿಂದ ತಡೆಯುತ್ತದೆ. ಅಲ್ಲಾಹನ ನೆನಪೇ ದೊಡ್ಡದು. ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು

[45] ಗ್ರಂಥದವರೊಡನೆ ನೀವು ಸದಾ ಅತ್ಯುತ್ತಮ ರೀತಿಯಲ್ಲೇ ಸಂವಾದ ನಡೆಸಿರಿ – ಅವರಲ್ಲಿನ ಅಕ್ರಮಿಗಳನ್ನು ಬಿಟ್ಟು. ನೀವು ಹೇಳಿರಿ; ‘‘ನಾವಂತು, ನಮಗೆ ಇಳಿಸಿಕೊಡಲಾಗಿರುವುದನ್ನೂ (ಕುರ್‌ಆನ್‌ಅನ್ನೂ) ನಿವುಗೆ ಇಳಿಸಿ ಕೊಡಲಾಗಿರುವುದನ್ನೂ (ತೌರಾತ್, ಇನ್‌ಜೀಲ್ ಇತ್ಯಾದಿಗಳನ್ನೂ) ನಂಬಿರುವೆವು. ನಮ್ಮ ದೇವರೂ ನಿಮ್ಮ ದೇವರೂ ಒಬ್ಬನೇ ಮತ್ತು ನಾವು ಅವನಿಗೆ ಶರಣಾಗಿರುವೆವು’’

[46] (ದೂತರೇ,) ಈ ರೀತಿ ನಾವು ನಿಮಗೆ ಈ ಗ್ರಂಥವನ್ನು ಇಳಿಸಿಕೊಟ್ಟಿರುವೆವು. ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ಇದನ್ನು ನಂಬುತ್ತಾರೆ. ಮತ್ತು ಇವರಲ್ಲೂ (ಮಕ್ಕಃದವರಲ್ಲೂ) ಇದನ್ನು ನಂಬುವ ಕೆಲವರಿದ್ದಾರೆ. ಧಿಕ್ಕಾರಿಗಳು ಮಾತ್ರವೇ ನಮ್ಮ ವಚನಗಳ ವಿರುದ್ಧ ಜಗಳಾಡುತ್ತಾರೆ

[47] (ದೂತರೇ,) ಈ ಹಿಂದೆ ನೀವು ಯಾವುದೇ ಗ್ರಂಥವನ್ನು ಓದಿರಲಿಲ್ಲ ಮತ್ತು ನೀವು ನಿಮ್ಮ ಕೈಯಿಂದ ಏನನ್ನೂ ಬರೆದಿರಲಿಲ್ಲ. ಅನ್ಯಥಾ ಮಿಥ್ಯವಾದಿಗಳು ಸಂಶಯ ಪಡುತ್ತಿದ್ದರು

[48] ಬಹಳ ಸ್ಪಷ್ಟವಾಗಿರುವ ಈ ವಚನಗಳು ಜ್ಞಾನಿಗಳ ಮನಸ್ಸುಗಳಲ್ಲಿ ಸುರಕ್ಷಿತವಾಗಿವೆ. ಅಕ್ರಮಿಗಳ ಹೊರತು ಬೇರೆ ಯಾರೂ ನಮ್ಮ ವಚನಗಳ ವಿಷಯಗಳಲ್ಲಿ ಜಗಳಾಡುವುದಿಲ್ಲ

[49] ‘‘ಆತನಿಗೆ ಆತನ ಒಡೆಯನ ಕಡೆಯಿಂದ ಪುರಾವೆಗಳನ್ನೇಕೆ ನೀಡಲಾಗಿಲ್ಲ?’’ ಎಂದು ಅವರು ಕೇಳುತ್ತಾರೆ. ಹೇಳಿರಿ; ಪುರಾವೆಗಳೆಲ್ಲಾ ಅಲ್ಲಾಹನ ಬಳಿಯಲ್ಲಿವೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ

[50] ನೀವು ಅವರಿಗೆ ಓದಿ ಕೇಳಿಸುವ ಗ್ರಂಥವನ್ನು ನಾವು ನಿಮಗೆ ಇಳಿಸಿಕೊಟ್ಟಿರುವುದು ಅವರಿಗೆ ಸಾಲದೇ? ನಂಬುವವರಿಗಾಗಿ ಖಂಡಿತವಾಗಿಯೂ ಇದರಲ್ಲಿ ಅನುಗ್ರಹವಿದೆ ಮತ್ತು ಉಪದೇಶವಿದೆ

[51] ಹೇಳಿರಿ; ನನ್ನ ಹಾಗೂ ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಮಿಥ್ಯವನ್ನು ನಂಬುವವರು ಮತ್ತು ಅಲ್ಲಾಹನನ್ನು ಧಿಕ್ಕರಿಸುವವರು – ಅವರೇ ನಷ್ಟ ಅನುಭವಿಸುವವರಾಗಿದ್ದಾರೆ

[52] ಮತ್ತು ಅವರು ನಿಮ್ಮ ಬಳಿ ಶಿಕ್ಷೆಗಾಗಿ ಆತುರಪಡುತ್ತಾರೆ. ಒಂದು ನಿರ್ದಿಷ್ಟ ಕಾಲವು ಮೊದಲೇ ನಿಗದಿಯಾಗದೆ ಇದ್ದಿದ್ದರೆ ಈಗಾಗಲೇ ಅವರ ಮೇಲೆ ಶಿಕ್ಷೆಯು ಬಂದೆರಗಿರುತ್ತಿತ್ತು. ಮತ್ತು ಅದು, ಅವರಿಗೆ ಅರಿವೇ ಇಲ್ಲದಾಗ ಹಠಾತ್ತನೆ ಅವರ ಮೇಲೆ ಬಂದೆರಗುವುದು

[53] ಅವರು ನಿಮ್ಮ ಬಳಿ ಶಿಕ್ಷೆಗಾಗಿ ಆತುರಪಡುತ್ತಾರೆ. ನಿಜವಾಗಿ ನರಕವು (ಈಗಾಗಲೇ) ಧಿಕ್ಕಾರಿಗಳನ್ನು ಸುತ್ತುವರಿದಿದೆ

[54] ಅವರ ಮೇಲಿಂದಲೂ, ಅವರ ಕಾಲಡಿಯಿಂದಲೂ ಆ (ನರಕದ) ಶಿಕ್ಷೆಯು ಅವರನ್ನು ಆವರಿಸಿ ಕೊಳ್ಳುವ ದಿನ ಅವನು ಅವರೊಡನೆ ‘‘ಸವಿಯಿರಿ, ನಿಮ್ಮ ಕರ್ಮಗಳ ಫಲವನ್ನು’’ ಎನ್ನುವನು

[55] ಸತ್ಯವನ್ನು ನಂಬಿರುವ ನನ್ನ ದಾಸರೇ, ನನ್ನ ಭೂಮಿಯು ಖಂಡಿತ ವಿಶಾಲವಾಗಿದೆ. ನೀವು ನನ್ನನ್ನೇ ಪೂಜಿಸಿರಿ

[56] ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಆ ಬಳಿಕ ನಿಮ್ಮನ್ನು ನಮ್ಮೆಡೆಗೆ ಮರಳಿಸಲಾಗುವುದು

[57] ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡಿದವರನ್ನು ನಾವು ಸ್ವರ್ಗದಲ್ಲಿನ ಮೇಲು ಮನೆಗಳಲ್ಲಿ ವಾಸಗೊಳಿಸುವೆವು ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಿ ಅವರು ಸದಾಕಾಲ ಇರುವರು. (ಎಷ್ಟೊಂದು) ಚೆನ್ನಾಗಿರುತ್ತದೆ, ಸತ್ಕರ್ಮಿಗಳಿಗೆ ಸಿಗುವ ಪ್ರತಿಫಲ

[58] ಅವರು ಸಹನಶೀಲರು ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಉಳ್ಳವರಾಗಿರುತ್ತಾರೆ

[59] ಅದೆಷ್ಟೋ ಜೀವಿಗಳಿವೆ – ಅವೆಲ್ಲಾ ತಮ್ಮ ಆಹಾರವನ್ನು ಸದಾ ಹೊತ್ತು ನಡೆಯುವುದಿಲ್ಲ. ಅಲ್ಲಾಹನೇ ಅವುಗಳಿಗೆ ಆಹಾರ ಒದಗಿಸುತ್ತಾನೆ ಮತ್ತು ನಿಮಗೂ ಒದಗಿಸುವನು. ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[60] ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಮತ್ತು ಸೂರ್ಯ – ಚಂದ್ರರನ್ನು ನಿಯಂತ್ರಣದಲ್ಲಿ ಇಟ್ಟಿರುವವನು ಯಾರು? ಎಂದು ನೀವು ಅವರೊಡನೆ ಕೇಳಿದರೆ ಅವರು ‘‘ಅಲ್ಲಾಹನು’’ ಎಂದು ಉತ್ತರಿಸುತ್ತಾರೆ. ಹಾಗಾದರೆ ಅವರು ಮತ್ತೆಲ್ಲಿ ಅಲೆಯುತ್ತಿದ್ದಾರೆ

[61] ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಪಾಲಿಗೆ ತನ್ನ ಕೊಡುಗೆಗಳನ್ನು ವಿಸ್ತರಿಸುತ್ತಾನೆ ಅಥವಾ ಅವುಗಳನ್ನು ಅವರ ಪಾಲಿಗೆ ಸೀಮಿತಗೊಳಿಸಿ ಬಿಡುತ್ತಾನೆ. ಅಲ್ಲಾಹನು ಖಂಡಿತವಾಗಿಯೂ ಎಲ್ಲವನ್ನೂ ಬಲ್ಲವನಾಗಿದ್ದಾನೆ

[62] ಆಕಾಶದಿಂದ ನೀರನ್ನಿಳಿಸಿ, ಆ ಮೂಲಕ ಭೂಮಿಗೆ ಅದರ ಮರಣಾ ನಂತರ ಜೀವ ನೀಡುವವನು ಯಾರು? ಎಂದು ನೀವು ಅವರೊಡನೆ ಕೇಳಿದರೆ ಅವರು ‘‘ಅಲ್ಲಾಹನು’’ ಎಂದು ಉತ್ತರಿಸುತ್ತಾರೆ. ‘‘ಎಲ್ಲ ಹೊಗಳಿಕೆ ಅಲ್ಲಾಹನಿಗೆ’’ ಎಂದು ಹೇಳಿರಿ. ಆದರೆ ಅವರಲ್ಲಿ ಹೆಚ್ಚಿನವರು ಆಲೋಚಿಸುವುದಿಲ್ಲ

[63] ಇಹಲೋಕದ ಈ ಬದುಕು ಕೇವಲ ಆಟೋಟ ಹಾಗೂ ಮನರಂಜನೆ ಮಾತ್ರವಾಗಿದೆ. ಖಂಡಿತವಾಗಿಯೂ ಪರಲೋಕದ ನೆಲೆಯೇ ನಿಜವಾದ ಬದುಕು. ಅವರು ಅರಿತಿದ್ದರೆ (ಎಷ್ಟು ಚೆನ್ನಾಗಿತ್ತು)

[64] ಅವರು ಹಡಗನ್ನೇರುವಾಗ, ನಿಷ್ಠೆಯನ್ನೆಲ್ಲಾ ಅಲ್ಲಾಹನಿಗೇ ಮೀಸಲಾಗಿಟ್ಟು ಅವನಿಗೆ ಮೊರೆ ಇಡುತ್ತಾರೆ. ಕೊನೆಗೆ ಅವನು ಅವರನ್ನು ರಕ್ಷಿಸಿ ದಡಕ್ಕೆ ತಲುಪಿಸಿದಾಗ ಅವರು (ತಮ್ಮ ನಿಷ್ಠೆಯಲ್ಲಿ) ಇತರರನ್ನು ಪಾಲುಗೊಳಿಸುತ್ತಾರೆ

[65] ಅವರಿಗೆ ನಾವು ಏನನ್ನು ನೀಡಿರುವೆವೋ ಅದಕ್ಕೆಲ್ಲಾ ಕೃತಘ್ನತೆ ತೋರಲಿಕ್ಕಾಗಿ ಮತ್ತು ಮೋಜು ಮಾಡುತ್ತಿರಲಿಕ್ಕಾಗಿ (ಅವರು ಹೀಗೆ ಮಾಡುತ್ತಾರೆ). ಬಹು ಬೇಗನೇ ಅವರಿಗೆ (ಈ ಧೋರಣೆಯ ಫಲಿತಾಂಶ) ತಿಳಿಯಲಿದೆ

[66] ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ಅಪಹರಣ ನಡೆಯುತ್ತಿರುವಾಗ ನಾವು ಈ ಪವಿತ್ರ ಸ್ಥಳವನ್ನು (ಮಕ್ಕಃವನ್ನು) ಪ್ರಶಾಂತ ಸ್ಥಳವಾಗಿಸಿರುವುದನ್ನು ಅವರೇನು ನೋಡುತ್ತಿಲ್ಲವೇ? ಅವರೇನು, ಮಿಥ್ಯವನ್ನು ನಂಬಿ ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆ ತೋರುತ್ತಾರೆಯೇ

[67] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವ ಅಥವಾ ತನ್ನ ಬಳಿಗೆ ಸತ್ಯವು ಬಂದಾಗ ಅದನ್ನು ಸುಳ್ಳೆನ್ನುವಾತನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಧಿಕ್ಕಾರಿಗಳಿಗೇನು ನರಕದಲ್ಲಿ ನೆಲೆ ಇಲ್ಲವೇ

[68] ನಮಗಾಗಿ ಶ್ರಮಿಸುವವರಿಗೆ ನಾವು ನಮ್ಮ ಮಾರ್ಗಗಳನ್ನು ತೋರಿಸಿಕೊಡುತ್ತೇವೆ. ಮತ್ತು ಅಲ್ಲಾಹನು ಖಂಡಿತ ಸತ್ಕರ್ಮಿಗಳ ಜೊತೆಗಿದ್ದಾನೆ

[69] ಅಲಿಫ್ ಲಾಮ್ ಮ್ಮೀಮ್

ರೋಮನ್ನರು

Surah 30

[1] ರೋಮನರು ಸೋತರು

[2] ಪಕ್ಕದ ನಾಡಿನಲ್ಲಿ (ಇದು ಸಂಭವಿಸಿದೆ). ಮತ್ತು ಅವರು ತಮ್ಮ ಈ ಸೋಲಿನ ಬಳಿಕ ಮತ್ತೆ ವಿಜಯಿಗಳಾಗುವರು

[3] ಕೆಲವು ವರ್ಷಗಳಲ್ಲಿ (ಇದು ಸಂಭವಿಸಲಿದೆ). ನೈಜ ಅಧಿಕಾರವು ಅದಕ್ಕಿಂತ ಹಿಂದೆಯೂ, ಅನಂತರವೂ ಅಲ್ಲಾಹನಿಗೇ ಸೇರಿರುತ್ತದೆ. ವಿಶ್ವಾಸಿಗಳು ಸಂಭ್ರಮಿಸುವ ದಿನವೊಂದು ಬರಲಿದೆ

[4] ಅಲ್ಲಾಹನ ನೆರವಿನಿಂದ (ಆ ದಿನ ಬರಲಿದೆ). ಅವನು ತಾನಿಚ್ಛಿಸಿದವರಿಗೆ ನೆರವಾಗುತ್ತಾನೆ. ಅವನು ಪ್ರಚಂಡನೂ ಕರುಣಾಳುವೂ ಆಗಿರುತ್ತಾನೆ

[5] ಇದು ಅಲ್ಲಾಹನ ವಾಗ್ದಾನ. ಅಲ್ಲಾಹನು ತಾನು ನೀಡಿದ ವಾಗ್ದಾನವನ್ನು ಎಂದೂ ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನ ಜನರು ತಿಳಿದಿಲ್ಲ

[6] ಅವರು ತಿಳಿದಿರುವುದು, ಈ ಲೋಕದ ಬದುಕಿನ ಬಾಹ್ಯ ಭಾಗವನ್ನು ಮಾತ್ರ. ಪರಲೋಕದ ಕುರಿತು ಅವರಿಗೆ ಅರಿವಿಲ್ಲ

[7] ಅವರೇನು ಸ್ವತಃ ತಮ್ಮ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನ್ಯಾಯೋಚಿತವಾಗಿ ಹಾಗೂ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುವನು. ಆದರೆ ಜನರಲ್ಲಿ ಹೆಚ್ಚಿನವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ಧಿಕ್ಕರಿಸುತ್ತಾರೆ

[8] ಅವರೇನು ಭೂಮಿಯಲ್ಲಿ ತಿರುಗಾಡಿ, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ಕಾಣುವುದಿಲ್ಲವೇ? ಅವರು (ಹಿಂದಿನವರು) ಇವರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು, ಭೂಮಿಯಲ್ಲಿ ಉಳುಮೆ ನಡೆಸಿದ್ದರು ಮತ್ತು ಅದನ್ನು (ಭೂಮಿಯನ್ನು) ಇವರಿಗಿಂತ ಹೆಚ್ಚು ಸಂಪನ್ನಗೊಳಿಸಿದ್ದರು. ಅವರ ಬಳಿಗೂ ಅವರ ದೂತರು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗುವವನಾಗಿರಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡಿದ್ದರು

[9] ಕೊನೆಗೆ, ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಗತಿಯೂ ಕೆಟ್ಟದಾಗಿ ಬಿಟ್ಟಿತು. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ತಿರಸ್ಕರಿಸಿದ್ದರು ಮತ್ತು ಅವುಗಳನ್ನು ಗೇಲಿಮಾಡುತ್ತಿದ್ದರು

[10] ಅಲ್ಲಾಹನೇ ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ. ಆ ಬಳಿಕ ಅವನೇ ಅದನ್ನು ಪುನರಾವರ್ತಿಸುವನು. ಕೊನೆಗೆ ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು

[11] ಆ ಅಂತಿಮ ಕ್ಷಣವು ಬಂದು ಬಿಟ್ಟಾಗ ಅಪರಾಧಿಗಳು ಸಂಪೂರ್ಣ ನಿರಾಶರಾಗಿ ಬಿಡುವರು

[12] ಅವರ ಪಾಲುದಾರ ದೇವರುಗಳ ಪೈಕಿ ಯಾರೂ ಅವರ ಪರ ಶಿಫಾರಸುದಾರರಾಗಲಾರರು. ಆಗ ಅವರು ಆ ತಮ್ಮ ಪಾಲುದಾರರನ್ನೆಲ್ಲಾ ಧಿಕ್ಕರಿಸಿ ಬಿಡುವರು

[13] ಆ ಅಂತಿಮ ಕ್ಷಣವು ಬರುವ ದಿನ ಅವರೆಲ್ಲರೂ ವಿಚ್ಛಿದ್ರರಾಗಿ ಬಿಡುವರು

[14] ಸತ್ಯವನ್ನು ನಂಬಿದ್ದ ಹಾಗೂ ಸತ್ಕಾರ್ಯಗಳನ್ನು ಮಾಡಿದ್ದ ಜನರು (ಅಂದು) ಒಂದು ಭವ್ಯ ತೋಟದಲ್ಲಿ ಸಂಭ್ರಮಿಸುತ್ತಿರುವರು

[15] ಅತ್ತ, ಸತ್ಯವನ್ನು ಧಿಕ್ಕರಿಸಿದ್ದ ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದ ಜನರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು

[16] ಸಂಜೆಯ ವೇಳೆ ಹಾಗೂ ಮುಂಜಾವಿನ ವೇಳೆ ನೀವು ಅಲ್ಲಾಹನ ಪಾವಿತ್ರವನ್ನು ಜಪಿಸಿರಿ

[17] ಆಕಾಶಗಳಲ್ಲೂ ಭೂಮಿಯಲ್ಲೂ ಹೊಗಳಿಕೆಗಳೆಲ್ಲವೂ ಅವನಿಗೇ ಮೀಸಲು. ಇರುಳಲ್ಲೂ ಮಧ್ಯಾಹ್ನದ ವೇಳೆಯೂ (ನೀವು ಅಲ್ಲಾಹನ ಪಾವಿತ್ರವನ್ನು ಜಪಿಸಿರಿ)

[18] ಅವನು ನಿರ್ಜೀವದಿಂದ ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಭೂಮಿಯು ಸತ್ತ ಬಳಿಕ ಅದನ್ನು ಮತ್ತೆ ಜೀವಂತಗೊಳಿಸುತ್ತಾನೆ. ಇದೇ ರೀತಿ ನಿಮ್ಮನ್ನು (ಮರಣಾನಂತರ, ಜೀವಂತಗೊಳಿಸಿ) ಹೊರ ತೆಗೆಯಲಾಗುವುದು

[19] ಅವನು (ಅಲ್ಲಾಹನು) ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು ಮತ್ತು ಅಂತಹ ನೀವು ಇದೀಗ ಮನುಷ್ಯರಾಗಿ (ಎಲ್ಲೆಡೆ) ಹರಡಿಕೊಂಡಿರುವುದು ಅವನ ಸಂಕೇತಗಳ ಸಾಲಿಗೆ ಸೇರಿವೆ

[20] ಹಾಗೆಯೇ ಅವನು ನಿಮಗಾಗಿ ನಿಮ್ಮೊಳಗಿಂದಲೇ, ನೀವು ನೆಮ್ಮದಿ ಪಡೆಯಬಹುದಾದ ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ನಡುವೆ ಪ್ರೀತಿ, ವಾತ್ಸಲ್ಯಗಳನ್ನು ಬೆಳೆಸಿರುವುದು – (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ

[21] ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ

[22] ರಾತ್ರಿ ಹಾಗೂ ಹಗಲಲ್ಲಿ ನೀವು ಮಾಡುವ ನಿದ್ದೆ ಮತ್ತು ಅವನ ಅನುಗ್ರಹಕ್ಕಾಗಿ ನೀವು ನಡೆಸುವ ಹುಡುಕಾಟ (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ

[23] ಹಾಗೆಯೇ ಅವನು ನಿಮಗೆ ತೋರಿಸುವ, ಭಯವನ್ನೂ ನಿರೀಕ್ಷೆಯನ್ನೂ ಹುಟ್ಟಿಸುವ ಮಿಂಚು ಮತ್ತು ಅವನು ಆಕಾಶದಿಂದ ಸುರಿಸುವ ನೀರು ಮತ್ತು ಆ ಮೂಲಕ ಅವನು ಭೂಮಿಗೆ ಅದರ ಮರಣಾನಂತರ ನೀಡುವ ಮರು ಜೀವ – (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲೋಚಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ

[24] ಆಕಾಶಗಳು ಮತ್ತು ಭೂಮಿಯು ಅವನ ಅಪ್ಪಣೆಯಂತೆ ಸ್ಥಾಪಿತವಾಗಿರುವುದು ಅವನ ಸಂಕೇತಗಳ ಸಾಲಿಗೆ ಸೇರಿದೆ. ಕೊನೆಗೊಮ್ಮೆ ಅವನು ಒಂದು ಕರೆಕೊಟ್ಟು ನಿಮ್ಮನ್ನು ಕರೆದಾಗ ಭೂಮಿಯೊಳಗಿಂದ ನೀವೆಲ್ಲಾ ಹೊರಟು ಬರುವಿರಿ

[25] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ಎಲ್ಲವೂ ಅವನಿಗೆ ವಿಧೇಯವಾಗಿವೆ

[26] ಅವನೇ ಸೃಷ್ಟಿಯನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು. ಅವನ ಪಾಲಿಗೆ ಇದೆಲ್ಲಾ ಸುಲಭದ ಕೆಲಸವಾಗಿದೆ. ಆಕಾಶಗಳಲ್ಲೂ ಭೂಮಿಯಲ್ಲೂ ಅತ್ಯುನ್ನತ ವೈಭವವು ಅವನಿಗೇ ಸೇರಿದೆ. ಅವನು ಅತ್ಯಂತ ಪ್ರಬಲನು ಹಾಗೂ ಯುಕ್ತಿವಂತನು

[27] ಅವನು ನಿಮಗಾಗಿ ನಿಮ್ಮೊಳಗಿಂದಲೇ ಒಂದು ಉದಾಹರಣೆಯನ್ನು ಮುಂದಿಡುತ್ತಾನೆ; ನಿಮ್ಮ ಮಾಲಕತ್ವದಲ್ಲಿರುವ ಗುಲಾಮರ ಪೈಕಿ ಕೆಲವರು, ನಿಮಗೆ ನಾವು ನೀಡಿರುವ ಸಂಪತ್ತಿನಲ್ಲಿ ಪಾಲುದಾರರಾಗಿ, ಅದರಲ್ಲಿ ನೀವು ಅವರಿಗೆ ಸಮಾನರಾಗಿ ಬಿಟ್ಟದ್ದುಂಟೇ? ಮತ್ತು ನೀವು ಪರಸ್ಪರರಿಗೆ ಅಂಜುವಂತೆ ಅವರಿಗೆ ಅಂಜಿದ್ದುಂಟೇ? ಈ ರೀತಿ ನಾವು, ಆಲೋಚಿಸುವವರಿಗಾಗಿ ವಚನಗಳನ್ನು ವಿವರಿಸುತ್ತೇವೆ

[28] ಆದರೆ ಅಕ್ರಮಿಗಳು ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಾರೆ. ಅಲ್ಲಾಹನೇ ದಾರಿಗೆಡಿಸಿಬಿಟ್ಟಾತನನ್ನು ಮತ್ತೆ ಯಾರು ತಾನೇ ಸರಿದಾರಿಗೆ ತರಬಲ್ಲರು? ಅಂಥವರಿಗೆ ಸಹಾಯಕರು ಯಾರೂ ಇಲ್ಲ

[29] ನೀವಿನ್ನು ಏಕಾಗ್ರತೆಯೊಂದಿಗೆ ನಿಮ್ಮ ಗಮನವನ್ನು ಧರ್ಮದಲ್ಲಿ ಕೇಂದ್ರೀಕರಿಸಿರಿ. ಮಾನವನನ್ನು ಅಲ್ಲಾಹನ ಪ್ರಕೃತಿಗನುಸಾರ ರೂಪಿಸಲಾಗಿದೆ. ಅಲ್ಲಾಹನು ಮಾಡಿದ ರಚನೆಯಲ್ಲಿ ಬದಲಾವಣೆ ಇಲ್ಲ. ಇದುವೇ ಸುಸ್ಥಿರ ಧರ್ಮ. ಆದರೆ ಜನರಲ್ಲಿ ಹೆಚ್ಚಿನವರು ಅರಿತಿಲ್ಲ

[30] (ನೀವು) ಅವನತ್ತ ಒಲವು ಉಳ್ಳವರಾಗಿರಿ, ಅವನಿಗೆ ಅಂಜಿರಿ, ನಮಾಝ್ ಅನ್ನು ಪಾಲಿಸಿರಿ ಮತ್ತು ಬಹುದೇವಾರಾಧಕರಾಗಬೇಡಿರಿ

[31] ತಮ್ಮ ಧರ್ಮವನ್ನು ಛಿದ್ರಗೊಳಿಸಿ ವಿವಿಧ ಪಂಗಡಗಳಾಗಿ ಬಿಟ್ಟವರು (ನೀವಾಗಬೇಡಿ). ಪ್ರತಿಯೊಂದು ಗುಂಪೂ ತನ್ನ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟವಾಗಿದೆ

[32] ಜನರಿಗೆ ಏನಾದರೂ ತೊಂದರೆಯಾದಾಗ ಅವರು ತಮ್ಮ ಒಡೆಯನೆಡೆಗೆ ಒಲಿದು ಅವನಿಗೆ ಮೊರೆ ಇಡುತ್ತಾರೆ. ಮುಂದೆ ಅವನು ಅವರಿಗೆ ತನ್ನ ಅನುಗ್ರಹದ ರುಚಿ ಉಣಿಸಿದಾಗ ಅವರಲ್ಲಿನ ಒಂದು ಗುಂಪು ತಮ್ಮ ಒಡೆಯನ ಜೊತೆ ಇತರರನ್ನು ಪಾಲುಗೊಳಿಸುತ್ತದೆ

[33] ನಮ್ಮ ಕೊಡುಗೆಗಳಿಗೆ ಕೃತಘ್ನತೆ ತೋರುವುದಕ್ಕಾಗಿ (ಅವರು ಹೀಗೆ ಮಾಡುತ್ತಾರೆ)! ಸದ್ಯ ಮೋಜುಮಾಡಿರಿ. (ಇದರ ಪರಿಣಾಮವು) ಬೇಗನೇ ನಿಮಗೆ ತಿಳಿಯಲಿದೆ

[34] ಅವರು (ದೇವತ್ವದಲ್ಲಿ) ಪಾಲುಗೊಳಿಸುವವುಗಳ ಪರವಾಗಿ ಮಾತನಾಡುವ ಪುರಾವೆಯನ್ನೇನಾದರೂ ನಾವು ಅವರಿಗೆ ಇಳಿಸಿಕೊಟ್ಟಿದ್ದೇವೆಯೇ

[35] ನಾವು ಜನರಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದಾಗ ಅವರು ಸಂಭ್ರಮಿಸುತ್ತಾರೆ ಮತ್ತು ಅವರೇ ಸಂಪಾದಿಸಿ ಕಳಿಸಿದ ಕರ್ಮಗಳ ಕಾರಣ ಅವರಿಗೇನಾದರೂ ಕೇಡನ್ನು ಮಾಡಿದರೆ, ಅವರು ಸಂಪೂರ್ಣ ನಿರಾಶರಾಗಿ ಬಿಡುತ್ತಾರೆ

[36] ಅವರು ನೋಡುವುದಿಲ್ಲವೇ, ಅಲ್ಲಾಹನು ತಾನಿಚ್ಛಿಸಿದವರಿಗೆ ಸಂಪನ್ನತೆಯನ್ನು ಹೆಚ್ಚಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತಗೊಳಿಸುತ್ತಾನೆ. ನಂಬುವವರಿಗೆ ಖಂಡಿತವಾಗಿಯೂ ಇದರಲ್ಲಿ ಪಾಠಗಳಿವೆ

[37] ನೀವು ಬಂಧುವಿಗೆ, ಬಡವನಿಗೆ ಮತ್ತು ಪ್ರಯಾಣಿಕನಿಗೆ ಅವರ ಹಕ್ಕನ್ನು ಕೊಟ್ಟು ಬಿಡಿರಿ. ಅಲ್ಲಾಹನ ಮೆಚ್ಚುಗೆಯನ್ನು ಬಯಸುವವರಿಗೆ ಇದುವೇ ಉತ್ತಮವಾಗಿದೆ ಮತ್ತು ಅವರೇ ವಿಜಯಿಗಳಾಗುವರು

[38] ಜನರ ಸಂಪತ್ತನ್ನು ಹೆಚ್ಚಿಸಲೆಂದು ನೀವು ನೀಡುವ ಬಡ್ಡಿಯು ಅಲ್ಲಾಹನ ಬಳಿ ಅದನ್ನು ಹೆಚ್ಚಿಸುವುದಿಲ್ಲ. ಆದರೆ ಅಲ್ಲಾಹನ ಮೆಚ್ಚುಗೆಯನ್ನು ಬಯಸಿ ನೀವು ನೀಡುವ ದಾನ (ಅದು ನಿಮ್ಮ ಪ್ರತಿಫಲವನ್ನು ಹೆಚ್ಚಿಸುತ್ತದೆ). ಅವರೇ (ದಾನಶೀಲರೇ) ಹಲವು ಪಟ್ಟು ಅಧಿಕ ಪ್ರತಿಫಲ ಪಡೆಯುವವರು

[39] ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು, ಆ ಬಳಿಕ ನಿಮಗೆ ಆಹಾರ ಒದಗಿಸಿದವನು, ಆ ಬಳಿಕ ನಿಮಗೆ ಮರಣ ನೀಡುವವನು ಮತ್ತು ಆ ಬಳಿಕ ನಿಮ್ಮನ್ನು ಪುನಃ ಜೀವಂತಗೊಳಿಸುವವನಾಗಿದ್ದಾನೆ. ದೇವತ್ವದಲ್ಲಿ ಪಾಲುದಾರರೆಂದು ನೀವು ನಂಬಿರುವ ಯಾರಾದರೂ ಈ ಪೈಕಿ ಯಾವ ಕೆಲಸವನ್ನಾದರೂ ಮಾಡಬಲ್ಲರೇ? ಅವನಂತು (ಅಲ್ಲಾಹನಂತು) ಪಾವನನಾಗಿದ್ದಾನೆ ಮತ್ತು (ಅವನ ಜೊತೆ) ನೀವು ಪಾಲುಗೊಳಿಸುವ ಎಲ್ಲರಿಗಿಂತ ತುಂಬಾ ಉನ್ನತನಾಗಿದ್ದಾನೆ

[40] ಮಾನವರ ಕೃತ್ಯಗಳ ಫಲವಾಗಿ, ನೆಲದಲ್ಲೂ ಜಲದಲ್ಲೂ ಅಶಾಂತಿ ಹಬ್ಬಿದೆ. ಅವರು ಸರಿದಾರಿಗೆ ಮರಳಿಬರಬಹುದೆಂದು, ಅವರ ಕೆಲವು ಕೃತ್ಯಗಳ ರುಚಿಯನ್ನು ಅವರಿಗೆ ಉಣಿಸಲಿಕ್ಕಾಗಿ (ಹೀಗಾಗಿದೆ)

[41] ಹೇಳಿರಿ; ನೀವು ಭೂಮಿಯಲ್ಲಿ ತಿರುಗಾಡಿರಿ ಮತ್ತು ನಿಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು

[42] ಅಲ್ಲಾಹನ ಕಡೆಯಿಂದ, ರದ್ದು ಗೊಳಿಸಲಾಗದ ದಿನವೊಂದು ಬಂದು ಬಿಡುವ ಮುನ್ನ, ನೀವು ನಿಮ್ಮ ಮುಖವನ್ನು ಸ್ಥಿರವಾದ ಧರ್ಮದೆಡೆಗೆ ತಿರುಗಿಸಿಕೊಳ್ಳಿರಿ. ಅಂದು ಎಲ್ಲರೂ ಪ್ರತ್ಯೇಕವಾಗುವರು

[43] ಧಿಕ್ಕರಿಸಿದವನ ಧಿಕ್ಕಾರದ ಹೊಣೆಯು ಸ್ವತಃ ಅವನ ಮೇಲೆಯೇ ಇರುವುದು. ಇನ್ನು, ಸತ್ಕರ್ಮಮಾಡುತ್ತಿರುವವರು ಸ್ವತಃ ತಮಗಾಗಿ ಪೂರ್ವಸಿದ್ಧತೆ ನಡೆಸುತ್ತಿರುವರು

[44] ಅವನು ತನ್ನ ಅನುಗ್ರಹದಿಂದ ವಿಶ್ವಾಸಿಗಳು ಮತ್ತು ಸತ್ಕರ್ಮಿಗಳಿಗೆ ಸತ್ಫಲವನ್ನು ನೀಡುವನು. ಅಲ್ಲಾಹನು ಕೃತಘ್ನರನ್ನು ಖಂಡಿತ ಮೆಚ್ಚುವುದಿಲ್ಲ

[45] ಅವನು, ನಿಮಗೆ ತನ್ನ ಅನುಗ್ರಹದ ರುಚಿಯನ್ನು ಉಣಿಸಲಿಕ್ಕಾಗಿ ಹಾಗೂ ಅವನ ಆದೇಶದಂತೆ ಹಡಗುಗಳನ್ನು ಚಲಿಸಲಿಕ್ಕಾಗಿ ಮತ್ತು ನೀವು ಅವನ ಕೊಡುಗೆಯನ್ನು ಹುಡುಕುತ್ತಾ ಕೃತಜ್ಞತೆ ಸಲ್ಲಿಸಲಿಕ್ಕಾಗಿ ಕಳಿಸುವ, ಶುಭವಾರ್ತೆ ನೀಡುವ ಗಾಳಿಯು, ಅವನ ಪುರಾವೆಗಳ ಸಾಲಿಗೆ ಸೇರಿದೆ

[46] (ದೂತರೇ,) ನಾವು ನಿಮಗಿಂತ ಮುಂಚೆ ಅವರ ಜನಾಂಗದೆಡೆಗೆ ದೂತರನ್ನು ಕಳಿಸಿದ್ದೆವು. ಅವರು ಸ್ಪಷ್ಟವಾದ ಉಪದೇಶಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಕೊನೆಗೆ ನಾವು ಅಪರಾಧಿಗಳ ವಿರುದ್ಧ ಸೇಡು ತೀರಿಸಿದೆವು. ನಂಬಿದವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿತ್ತು

[47] ಅಲ್ಲಾಹನೇ ಗಾಳಿಯನ್ನು ಕಳುಹಿಸುತ್ತಾನೆ, ಅವು ಮೋಡಗಳನ್ನು ಹೊತ್ತು ಚಲಿಸುತ್ತವೆ ಮತ್ತು ಅವನು ಅದನ್ನು (ಮೋಡವನ್ನು) ತಾನಿಚ್ಛಿಸಿದಂತೆ ಆಕಾಶದಲ್ಲಿ ಹರಡಿಬಿಡುತ್ತಾನೆ ಹಾಗೂ ಅದನ್ನು ಛಿದ್ರಗೊಳಿಸುತ್ತಾನೆ ಮತ್ತು ಅದರ ಮಧ್ಯದಿಂದಲೇ ಮಳೆ ಸುರಿಯುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ ಮತ್ತು ಅವರು ಸಂಭ್ರಮಿಸುತ್ತಾರೆ

[48] ನಿಜವಾಗಿ, ಅವರ ಮೇಲೆ ಮಳೆ ಸುರಿಯುವ ಮುನ್ನ ಅವರು ನಿರಾಶರಾಗಿ ಬಿಟ್ಟದ್ದರು

[49] ಅಲ್ಲಾಹನ ಕಾರುಣ್ಯದ ಕುರುಹುಗಳನ್ನು (ಮತ್ತು) ಅವನು ಯಾವ ರೀತಿ ಭೂಮಿಯು ಸತ್ತ ಬಳಿಕ ಅದನ್ನು ಜೀವಂತಗೊಳಿಸುತ್ತಾನೆಂಬುದನ್ನು ನೋಡಿರಿ. ಅವನೇ ಸತ್ತವರನ್ನು ಜೀವಂತಗೊಳಿಸುವವನು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[50] ಇನ್ನು ನಾವು (ಪ್ರತಿಕೂಲ) ಗಾಳಿಯನ್ನು ಕಳಿಸಿ, (ಅದರಿಂದಾಗಿ ಹೊಲಗಳು) ಹಳದಿಯಾಗಿರುವುದನ್ನು ಅವರು ಕಂಡಾಗ ಅವರು ಮತ್ತೆ ದಾರಿಗೆಟ್ಟು ಕೃತಘ್ನರಾಗಿ ಬಿಡುತ್ತಾರೆ

[51] ಮೃತರಿಗೆ ಕೇಳಿಸಲು ನಿಮಗೆ ಖಂಡಿತ ಸಾಧ್ಯವಾಗದು ಮತ್ತು ಕಿವುಡರು ಬೆನ್ನು ತಿರುಗಿಸಿ ಓಡುತ್ತಿರುವಾಗ ಅವರಿಗೆ (ನಿಮ್ಮ) ಕರೆಯನ್ನು ಕೇಳಿಸಲಿಕ್ಕೂ ನಿಮಗೆ ಸಾಧ್ಯವಾಗದು

[52] ಕುರುಡರನ್ನು ಅವರ ದಾರಿಗೇಡಿತನದಿಂದ ರಕ್ಷಿಸಿ ಸರಿದಾರಿಗೆ ತರಲು ನಿಮಗೆ ಸಾಧ್ಯವಾಗದು. ನೀವು, ನಮ್ಮ ವಚನಗಳನ್ನು ನಂಬುವವರಿಗೆ ಮತ್ತು ಶರಣಾದವರಿಗೆ ಮಾತ್ರ ಕೇಳಿಸಬಲ್ಲಿರಿ

[53] ನಿಮ್ಮನ್ನು ತೀರಾ ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದವನು ಮತ್ತು ಆ ಬಳಿಕ ದೌರ್ಬಲ್ಯದ ಸ್ಥಿತಿಯಿಂದ ನಿಮ್ಮನ್ನು ಶಕ್ತಿಶಾಲಿ ಸ್ಥಿತಿಗೆ ಒಯ್ದವನು ಮತ್ತು ಶಕ್ತಿಶಾಲಿ ಸ್ಥಿತಿಯಿಂದ ನಿಮ್ಮನ್ನು ಪುನಃ ದೌರ್ಬಲ್ಯದ ಹಾಗೂ ವೃದ್ಧಾಪ್ಯದ ಸ್ಥಿತಿಗೆ ಒಯ್ಯುವವನು ಅಲ್ಲಾಹನೇ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಎಲ್ಲವನ್ನೂ ಬಲ್ಲವನು ಮತ್ತು ಶಕ್ತನಾಗಿದ್ದಾನೆ

[54] (ಅಂತಿಮ ವಿಚಾರಣೆಯ) ಆ ಕ್ಷಣವು ಬಂದು ಬಿಟ್ಟಾಗ, ಅಪರಾಧಿಗಳು, ತಾವು ಬದುಕಿದ್ದುದು ಒಂದು ಕ್ಷಣ ಮಾತ್ರ ಎಂದು ಆಣೆ ಹಾಕಿ ಹೇಳುವರು. ಹೀಗೆಯೇ ಅವರು (ಇಹ ಲೋಕದ ಬದುಕಿನಲ್ಲಿ) ಭ್ರಮೆಗೊಳಗಾಗಿದ್ದರು

[55] ಜ್ಞಾನ ಹಾಗೂ ವಿಶ್ವಾಸ ನೀಡಲ್ಪಟ್ಟವರು ಹೇಳುವರು; ಅಲ್ಲಾಹನ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಮತ್ತೆ ಜೀವಂತಗೊಳ್ಳುವವರೆಗೂ ನೀವು (ಸತ್ತ ಸ್ಥಿತಿಯಲ್ಲಿ) ಇದ್ದಿರಿ – ಇದೋ, ಮತ್ತೆ ಜೀವಂತಗೊಳ್ಳುವ ದಿನ. ಆದರೆ ನಿಮಗೆ ತಿಳಿದಿರಲಿಲ್ಲ

[56] ಅಂದು ಅಕ್ರಮಗಳಿಗೆ ಅವರ ನೆಪಗಳಿಂದ ಯಾವ ಲಾಭವೂ ಆಗದು ಮತ್ತು ಪಶ್ಚಾತ್ತಾಪ ಪಡುವ ಅವಕಾಶವನ್ನೂ ಅವರಿಗೆ ನೀಡಲಾಗದು

[57] ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿದ್ದೇವೆ. ಆದರೆ (ದೂತರೇ), ನೀವು ಅವರ ಬಳಿಗೆ ಒಂದು ವಚನವನ್ನು ತಂದಾಗಲೆಲ್ಲಾ ಧಿಕ್ಕಾರಿಗಳು ನೀವು ಸುಳ್ಳನ್ನು ರಚಿಸಿ ತರುವವರು ಎಂದೇ ಹೇಳುತ್ತಾರೆ

[58] ಈ ರೀತಿ ಅಲ್ಲಾಹನು ಅರಿವಿಲ್ಲದವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಡುತ್ತಾನೆ

[59] ನೀವು ಸಹನಶೀಲರಾಗಿರಿ. ಅಲ್ಲಾಹನ ಮಾತು ಖಂಡಿತ ಸತ್ಯ. ಅಚಲ ನಂಬಿಕೆ ಇಲ್ಲದವರು ನಿಮ್ಮನ್ನು ಅಸ್ಥಿರಗೊಳಿಸದಿರಲಿ

[60] ಅಲಿಫ್ ಲಾಮ್ ಮ್ಮೀಮ್

ಲುಕ್ಮಾನ್

Surah 31

[1] ಇವು ಯುಕ್ತಿಪೂರ್ಣ ಗ್ರಂಥದ ವಚನಗಳು

[2] ಇದು ಮಾರ್ಗದರ್ಶಿಯಾಗಿದೆ ಹಾಗೂ ಸಜ್ಜನರ ಪಾಲಿಗೆ ಅನುಗ್ರಹವಾಗಿದೆ

[3] ಅವರು ನಮಾಝನ್ನು ಪಾಲಿಸುವವರು, ಝಕಾತನ್ನು ಪಾವತಿಸುವವರು ಮತ್ತು ಪರಲೋಕದ ಕುರಿತು ಖಚಿತ ನಂಬಿಕೆ ಉಳ್ಳವರಾಗಿರುತ್ತಾರೆ

[4] ಅವರೇ ತಮ್ಮ ಒಡೆಯನು ತೋರಿದ ಸರಿದಾರಿಯಲ್ಲಿರುವವರು ಮತ್ತು ಅವರೇ ವಿಜಯಿಗಳು

[5] ಜನರಲ್ಲಿ ಕೆಲವರು ಜ್ಞಾನವಿಲ್ಲದೆ, ಇತರರನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಲಿಕ್ಕಾಗಿ ವ್ಯರ್ಥ ವಸ್ತುಗಳನ್ನು ಖರೀದಿಸುತ್ತಾರೆ. ಅವರು ಅದನ್ನು ಕೇವಲ ತಮಾಷೆ ಎಂದು ಭಾವಿಸುತ್ತಾರೆ. ಅವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ

[6] ಅಂತಹವನಿಗೆ ನೀವು ನಮ್ಮ ವಚನಗಳನ್ನು ಓದಿ ಕೇಳಿಸಿದಾಗ ಅವನು, ತಾನು ಏನನ್ನೂ ಕೇಳಲೇ ಇಲ್ಲವೆಂಬಂತೆ ಅಥವಾ ತನ್ನ ಕಿವಿಗಳು ಕಿವುಡಾಗಿವೆ ಎಂಬಂತೆ ಅಹಂಕಾರದೊಂದಿಗೆ ಮುಖ ತಿರುಗಿಸಿಕೊಳ್ಳುತ್ತಾನೆ. ಅವನಿಗೆ ಬಹಳ ಹಿಂಸಾತ್ಮಕ ಶಿಕ್ಷೆಯ ಸುವಾರ್ತೆ ಕೊಟ್ಟು ಬಿಡಿರಿ

[7] ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಖಂಡಿತವಾಗಿಯೂ ಕೊಡುಗೆಗಳು ತುಂಬಿರುವ ತೋಟಗಳಿವೆ

[8] ಅವರು ಸದಾಕಾಲ ಅವುಗಳಲ್ಲಿರುವರು. ಅಲ್ಲಾಹನು ಕೊಟ್ಟ ಮಾತು ಸತ್ಯವಾಗಿದೆ. ಅವನು ಬಹಳ ಪ್ರಚಂಡನು ಹಾಗೂ ಯುಕ್ತಿವಂತನು

[9] ಅವನು ನಿಮಗೆ ಕಾಣುವಂತಹ ಸ್ತಂಭಗಳಿಲ್ಲದೆಯೇ ಆಕಾಶವನ್ನು ಸೃಷ್ಟಿಸಿರುವನು – ಮತ್ತು ಭೂಮಿಯು ನಿಮ್ಮೊಂದಿಗೆ ಉರುಳಿ ಬಿಡದಂತೆ ಅವನು ಅದರಲ್ಲಿ ಬೆಟ್ಟಗಳನ್ನು ನೆಟ್ಟನು ಮತ್ತು ಅದರಲ್ಲಿ ಎಲ್ಲ ಬಗೆಯ ಜೀವಿಗಳನ್ನು ಹರಡಿದನು. ಮತ್ತು ಅವನು ಆಕಾಶದಿಂದ ನೀರನ್ನಿಳಿಸಿ, ಅದರಲ್ಲಿ (ಭೂಮಿಯಲ್ಲಿ) ಎಲ್ಲ ಬಗೆಯ (ಸಸ್ಯ) ವರ್ಗಗಳನ್ನು ಬೆಳೆಸಿದನು

[10] ಇವು ಅಲ್ಲಾಹನ ಸೃಷ್ಟಿಗಳು. ಅವನ ಹೊರತು ಇತರರು ಏನನ್ನು ಸೃಷ್ಟಿಸಿದ್ದಾರೆಂಬುದನ್ನು ನನಗೆ ತೋರಿಸಿರಿ. ನಿಜವಾಗಿ ಅಕ್ರಮಿಗಳು ಸ್ಪಷ್ಟವಾಗಿ ದಾರಿಗೆಟ್ಟಿರುವರು

[11] ನಾವು ಲುಕ್ಮಾನರಿಗೆ ಜಾಣ್ಮೆಯನ್ನು ನೀಡಿದ್ದೆವು – ಅವರು ಕೃತಜ್ಞರಾಗಬೇಕೆಂದು. ನಿಜವಾಗಿ ಕೃತಜ್ಞತೆ ಸಲ್ಲಿಸುವವನು ಸ್ವತಃ ತನ್ನ ಹಿತಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾನೆ. ಇನ್ನು ಕೃತಘ್ನತೆ ತೋರುವವನು (ತಿಳಿದಿರಲಿ); ಅಲ್ಲಾಹನಂತು ಸರ್ವ ಅಪೇಕ್ಷೆಗಳಿಂದ ಮುಕ್ತನೂ, ಹೊಗಳಿಕೆಗೆ ಅರ್ಹನೂ ಆಗಿದ್ದಾನೆ

[12] ಲುಕ್ಮಾನರು ತಮ್ಮ ಪುತ್ರನಿಗೆ ಬೋಧಿಸುತ್ತಾ ಹೇಳಿದರು; ನನ್ನ ಪುತ್ರಾ! ಅಲ್ಲಾಹನ ಜೊತೆ ಯಾರನ್ನೂ ಪಾಲುಗೊಳಿಸಬೇಡ. ಖಂಡಿತವಾಗಿಯೂ (ಅಲ್ಲಾಹನ ಜೊತೆ) ಪಾಲುದಾರಿಕೆಯು ಮಹಾ ಅಕ್ರಮವಾಗಿದೆ

[13] ಮತ್ತು ನಾವು ಮಾನವರಿಗೆ ಅವನ ಹೆತ್ತವರ ಕುರಿತು ಉಪದೇಶಿಸಿರುವೆವು. ಅವನ ತಾಯಿಯು ಬೆನ್ನು ಬೆನ್ನಿಗೆ ಸಂಕಷ್ಟಗಳನ್ನು ಸಹಿಸಿ ಅವನನ್ನು ತನ್ನ ಹೊಟ್ಟೆಯಲ್ಲಿ ಹೊತ್ತಿದ್ದಳು. ಅವನಿಗೆ ಎದೆಹಾಲು ಬಿಡಿಸಲು ಎರಡು ವರ್ಷಗಳು ತಗುಲಿದವು – ಆದ್ದರಿಂದ ನನಗೂ ನಿನ್ನ ತಾಯಿ – ತಂದೆಗೂ ಕೃತಜ್ಞನಾಗಿರು. ಕೊನೆಗೆ ನೀನು ನನ್ನೆಡೆಗೇ ಮರಳಿ ಬರಬೇಕಾಗಿದೆ

[14] ಒಂದು ವೇಳೆ, ನಿನಗೆ ತಿಳಿದಿಲ್ಲದವರನ್ನು ನನ್ನ ಜೊತೆ ಪಾಲುಗೊಳಿಸಲು ಅವರು ನಿನ್ನನ್ನು ಒತ್ತಾಯಿಸಿದರೆ ಅವರಿಬ್ಬರನ್ನೂ ಅನುಸರಿಸಬೇಡ. ಆದರೂ ಈ ಲೋಕದಲ್ಲಿ ಅವರ ಜೊತೆ ಅತ್ಯುತ್ತಮವಾಗಿ ವರ್ತಿಸು. ಮತ್ತು ನನ್ನೆಡೆಗೆ ಒಲಿಯುತ್ತಲಿರುವವನ ದಾರಿಯನ್ನು ಅನುಸರಿಸು. ಕೊನೆಗೆ ನೀವೆಲ್ಲರೂ ನನ್ನೆಡೆಗೇ ಮರಳಿ ಬರುವಿರಿ ಮತ್ತು ಆಗ, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಾನು ನಿಮಗೆ ತಿಳಿಸುವೆನು

[15] ಓ ನನ್ನ ಪುತ್ರ! ಕೇವಲ ಒಂದು ಸಾಸಿವೆ ಕಾಳಿನಷ್ಟು ಭಾರದ ಒಂದು ವಸ್ತು ಕೂಡಾ, ಅದು ಬಂಡೆಯೊಳಗಿರಲಿ ಅಥವಾ ಆಕಾಶಗಳಲ್ಲಿರಲಿ ಅಥವಾ ಭೂಮಿಯಲ್ಲಿರಲಿ, ಅಲ್ಲಾಹನು ಅದನ್ನು ಹೊರತರುವನು. ಖಂಡಿತವಾಗಿಯೂ ಅಲ್ಲಾಹನು ತುಂಬಾ ಸೂಕ್ಷ್ಮ ಜ್ಞಾನಿಯೂ ಸದಾ ಜಾಗೃತನೂ ಆಗಿದ್ದಾನೆ

[16] ಓ ನನ್ನ ಪುತ್ರ! ನಮಾಝನ್ನು ಪಾಲಿಸು. ಒಳಿತನ್ನು ಆದೇಶಿಸು, ಕೆಡುಕಿನಿಂದ ತಡೆ ಮತ್ತು ನಿನಗೆ ಸಂಕಷ್ಟ ಬಂದಾಗ ಸಹನಶೀಲನಾಗಿರು. ಖಂಡಿತವಾಗಿಯೂ ಇವು ಭಾರೀ ಸಾಹಸದ ಕೆಲಸಗಳಾಗಿವೆ

[17] ಇನ್ನು ನೀನು, ಜನರ ಮುಂದೆ ಮುಖ ಊದಿಸಿಕೊಂಡಿರಬೇಡ. ಮತ್ತು ಭೂಮಿಯಲ್ಲಿ ದರ್ಪದ ನಡಿಗೆ ನಡೆಯಬೇಡ. ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ

[18] ನಿನ್ನ ನಡಿಗೆಯಲ್ಲಿ ವಿನಯವನ್ನು ಪಾಲಿಸು ಮತ್ತು ನಿನ್ನ ಧ್ವನಿಯನ್ನು ತಗ್ಗಿಸಿಡು. ಖಂಡಿತವಾಗಿಯೂ ಧ್ವನಿಗಳಲ್ಲಿ ಕತ್ತೆಯ ಧ್ವನಿಯು ಅತ್ಯಂತ ಕೆಟ್ಟದಾಗಿರುತ್ತದೆ

[19] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ಮತ್ತು ಅವನು ವ್ಯಕ್ತ ಹಾಗೂ ಅವ್ಯಕ್ತವಾದ ತನ್ನ ಅನುಗ್ರಹಗಳನ್ನು ನಿಮಗೆ ಧಾರಾಳವಾಗಿ ನೀಡಿರುವುದನ್ನು ನೀವು ನೋಡುತ್ತಿಲ್ಲವೇ? ಆದರೂ ಜನರಲ್ಲಿ ಕೆಲವರು ಜ್ಞಾನವಾಗಲಿ, ಮಾರ್ಗದರ್ಶನವಾಗಲಿ, ಉಜ್ವಲ ಗ್ರಂಥವಾಗಲಿ ಯಾವುದೂ ಇಲ್ಲದೆಯೇ ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ

[20] ಅಲ್ಲಾಹನು ಇಳಿಸಿಕೊಟ್ಟಿರುವುದನ್ನು ನೀವು ಅನುಸರಿಸಿರಿ ಎಂದು ಅವರೊಡನೆ ಹೇಳಿದಾಗ ಅವರು, ನಾವು ನಮ್ಮ ತಂದೆ-ತಾತಂದಿರನ್ನು ಯಾವ ಹಾದಿಯಲ್ಲಿ ಕಂಡಿರುವೆವೋ ಅದನ್ನು ಮಾತ್ರ ಅನುಸರಿಸುವೆವು ಎನ್ನುತ್ತಾರೆ. ಶೈತಾನನು ಅವರನ್ನು ನರಕದ ಶಿಕ್ಷೆಯೆಡೆಗೆ ಕರೆಯುತ್ತಿದ್ದರೂ (ಅವರು ಆ ಹಾದಿಯನ್ನೇ ಅನುಸರಿಸುವರೇ)

[21] ತನ್ನನ್ನು ಅಲ್ಲಾಹನ ಮುಂದೆ ಶರಣಾಗಿಸಿದವನು ಮತ್ತು ಸತ್ಕರ್ಮಿಯೂ ಆಗಿರುವವನು ಖಂಡಿತವಾಗಿಯೂ ಬಹಳ ಬಲಿಷ್ಠವಾದ ಉರುಳನ್ನು ಹಿಡಿದುಕೊಂಡನು. ಅಂತಿಮವಾಗಿ ಎಲ್ಲ ವ್ಯವಹಾರಗಳೂ ಅಲ್ಲಾಹನ ಬಳಿಗೇ ಮರಳಲಿವೆ

[22] (ದೂತರೇ, ಸತ್ಯವನ್ನು) ಧಿಕ್ಕರಿಸುವವನ ಧಿಕ್ಕಾರವು ನಿಮ್ಮನ್ನು ದುಃಖಿತರಾಗಿಸಬಾರದು. ಅವರು ನಮ್ಮೆಡೆಗೆ ಮರಳಿ ಬರಲಿದ್ದಾರೆ. ಆಗ, ಅವರು ಏನೆಲ್ಲ ಮಾಡುತ್ತಿದ್ದರೆಂಬುದನ್ನು ನಾವು ಅವರಿಗೆ ತಿಳಿಸುವೆವು. ಅಲ್ಲಾಹನು ಮನಸುಗಳೊಳಗಿನ ವಿಚಾರಗಳನ್ನೂ ಖಂಡಿತ ಬಲ್ಲವನಾಗಿದ್ದಾನೆ

[23] (ಇಹಲೋಕದಲ್ಲಿ) ನಾವು ಅವರಿಗೆ ತೀರಾ ಅಲ್ಪ (ಸುಖ)ವನ್ನು ನೀಡುವೆವು ಮತ್ತು ಆ ಬಳಿಕ ನಾವು ಅವರನ್ನು ಭಾರೀ ಕಠೋರವಾದ ಶಿಕ್ಷೆಯೆಡೆಗೆ ಎಳೆದೊಯ್ಯುವೆವು

[24] ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ್ದು ಯಾರೆಂದು ನೀವು ಅವರೊಡನೆ ಕೇಳಿದರೆ, ಅಲ್ಲಾಹನು ಎಂದೇ ಅವರು ಉತ್ತರಿಸುವರು. ಅಲ್ಲಾಹನಿಗೆ ಸ್ತುತಿ ಎಂದು ನೀವು ಹೇಳಿರಿ. ನಿಜವಾಗಿ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ

[25] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಖಂಡಿತವಾಗಿಯೂ ಅಲ್ಲಾಹನು ಸಂಪೂರ್ಣ ನಿರಪೇಕ್ಷನೂ ಪ್ರಶಂಸಿತನೂ ಆಗಿದ್ದಾನೆ

[26] ಭೂಮಿಯಲ್ಲಿನ ಎಲ್ಲ ಸಸ್ಯಗಳೂ ಲೇಖನಿಗಳಾಗಿ, ಸಾಗರವು ಅವುಗಳ ಮಸಿಯಾಗಿ ಬಿಟ್ಟರೂ, ಆ ಬಳಿಕ ಮತ್ತೆ ಏಳು ಸಾಗರಗಳು (ಮಸಿಯಾಗಿ) ಸೇರಿಕೊಂಡರೂ ಅಲ್ಲಾಹನ ವಚನಗಳು ಮುಗಿಯಲಾರವು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[27] (ಅಲ್ಲಾಹನ ಮಟ್ಟಿಗೆ) ನಿಮ್ಮೆಲ್ಲರನ್ನೂ ಒಮ್ಮೆ ಸೃಷ್ಟಿಸುವ ಹಾಗೂ ನಿಮ್ಮನ್ನೆಲ್ಲಾ ಮತ್ತೊಮ್ಮೆ ಜೀವಂತಗೊಳಿಸುವ ಕಾರ್ಯವು ಕೇವಲ ಒಂದು ಜೀವಕ್ಕೆ (ಒಂದು ಜೀವದ ಸೃಷ್ಟಿ ಹಾಗೂ ಮರು ಸೃಷ್ಟಿಗೆ) ಸಮಾನವಾಗಿದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನೂ ನೋಡುವವನೂ ಆಗಿದ್ದಾನೆ

[28] ಅಲ್ಲಾಹನು ಹಗಲೊಳಕ್ಕೆ ರಾತ್ರಿಯನ್ನು ಪೋಣಿಸುವುದನ್ನು ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವುದನ್ನು ಮತ್ತು ಅವನು ಸೂರ್ಯನನ್ನು ಹಾಗೂ ಚಂದ್ರನನ್ನು ನಿಯಂತ್ರಿಸಿಟ್ಟಿರುವುದನ್ನು ನೀವು ಕಾಣುವುದಿಲ್ಲವೇ? ಎಲ್ಲವೂ ಒಂದು ನಿರ್ದಿಷ್ಟ ಕಾಲದವರೆಗೆ ಚಲಿಸುತ್ತಿರುವುದು. ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ಅರಿತಿರುತ್ತಾನೆ

[29] ಏಕೆಂದರೆ ಅಲ್ಲಾಹನೇ ಸತ್ಯವಾಗಿದ್ದಾನೆ ಮತ್ತು ಅವನ ಹೊರತು ನೀವು ಪ್ರಾರ್ಥಿಸುವ ಬೇರೆಲ್ಲವೂ ಮಿಥ್ಯಗಳಾಗಿವೆ ಮತ್ತು ಅಲ್ಲಾಹನೇ ಉನ್ನತನೂ ಮಹಾನನೂ ಆಗಿದ್ದಾನೆ

[30] ಅಲ್ಲಾಹನ ಕೊಡಗೆಗಳನ್ನು ಹೊತ್ತ ಹಡಗುಗಳು ಕಡಲಲ್ಲಿ ಚಲಿಸುವುದನ್ನು ನೀವು ಕಂಡಿಲ್ಲವೇ? ಪ್ರತಿಯೊಬ್ಬ ಸಹನಶೀಲ, ಕೃತಜ್ಞನಿಗೆ ಅದರಲ್ಲಿ ಖಂಡಿತವಾಗಿಯೂ ಪುರಾವೆಗಳಿವೆ. ಈ ಮೂಲಕ ಅವನು (ಅಲ್ಲಾಹನು) ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಾನೆ

[31] ಅಲೆಗಳು, ಚಪ್ಪರಗಳಂತೆ ಅವುಗಳನ್ನು (ಹಡಗುಗಳನ್ನು) ಆವರಿಸಿಕೊಂಡಾಗ, ಅವರು ಭಕ್ತಿಯನ್ನು ಅಲ್ಲಾಹನೊಬ್ಬನಿಗೇ ಮೀಸಲಾಗಿಟ್ಟು ಅವನನ್ನು ಪ್ರಾರ್ಥಿಸುತ್ತಾರೆ. ಕೊನೆಗೆ ಅವನು ಅವರನ್ನು ರಕ್ಷಿಸಿ ದಡ ಸೇರಿಸಿದಾಗ ಅವರಲ್ಲೊಬ್ಬನು ತಟಸ್ಥನಾಗಿ ಬಿಡುತ್ತಾನೆ. ವಚನಭ್ರಷ್ಟ ಕೃತಘ್ನರ ಹೊರತು ಬೇರಾರೂ ನಮ್ಮ ಪುರಾವೆಗಳ ಕುರಿತು ಜಗಳಾಡುವುದಿಲ್ಲ

[32] ಮಾನವರೇ, ನಿಮ್ಮ ಒಡೆಯನಿಗೆ ಅಂಜಿರಿ ಮತ್ತು ಯಾವ ತಂದೆಯೂ ತನ್ನ ಮಗನಿಗೆ ಕಿಂಚಿತ್ತೂ ಉಪಕರಿಸಲಾಗದ ಹಾಗೂ ಯಾವ ಮಗನೂ ತನ್ನ ತಂದೆಗೆ ಕಿಂಚಿತ್ತೂ ಉಪಕರಿಸಲಾಗದ ದಿನದ ಭಯ ನಿಮಗಿರಲಿ. ಖಂಡಿತವಾಗಿಯೂ ಅಲ್ಲಾಹನು ಕೊಟ್ಟ ಮಾತು ಸತ್ಯವಾಗಿದೆ. ಇನ್ನು, ಈ ಲೋಕದ ಬದುಕು ನಿಮ್ಮನ್ನು ವಂಚಿಸದಿರಲಿ ಮತ್ತು ವಂಚಕನು ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸದಿರಲಿ

[33] (ಪುನರುತ್ಥಾನ ದಿನದ) ಆ ಘಳಿಗೆಯ ಜ್ಞಾನವು ಇರುವುದು ಅಲ್ಲಾಹನ ಬಳಿ ಮಾತ್ರ. ಅವನೇ ಮಳೆಯನ್ನು ಸುರಿಸುತ್ತಾನೆ. ಗರ್ಭಗಳೊಳಗೆ ಏನಿದೆ ಎಂಬುದನ್ನು ಅವನೇ ಬಲ್ಲನು. ನಾಳೆ ತಾನೇನು ಮಾಡಲಿರುವೆನೆಂಬುದು ಯಾರಿಗೂ ತಿಳಿಯದು. ತಾನು ಯಾವ ಭೂಮಿಯಲ್ಲಿ ಸಾಯುವೆನೆಂಬುದೂ ಯಾರಿಗೂ ತಿಳಿಯದು. ಖಂಡಿತವಾಗಿಯೂ ಅಲ್ಲಾಹನೇ ಎಲ್ಲವನ್ನೂ ಬಲ್ಲವನು ಹಾಗೂ ಅತ್ಯಂತ ಜಾಗೃತನಾಗಿದ್ದಾನೆ

[34] ಅಲಿಫ್ ಲಾಮ್ ಮ್ಮೀಮ್

ಸಾಷ್ಟಾಂಗ ನಮಸ್ಕಾರ

Surah 32

[1] ಇದು ಎಲ್ಲ ಲೋಕಗಳ ಒಡೆಯನ ಕಡೆಯಿಂದ ಇಳಿಸಲಾಗಿರುವ ಗ್ರಂಥ. ಇದರಲ್ಲಿ ಸಂದೇಹವಿಲ್ಲ

[2] (ದೂತರೇ,) ಅವರೇನು, ಈತನೇ ಇದನ್ನು ರಚಿಸಿಕೊಂಡಿದ್ದಾನೆ ಎನ್ನುತ್ತಾರೆಯೇ? ನಿಜವಾಗಿ ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಿಮಗಿಂತ ಮೊದಲು, ತಮ್ಮ ಬಳಿಗೆ ಎಚ್ಚರಿಸುವವರು ಬಂದಿಲ್ಲದ ಜನಾಂಗವೊಂದನ್ನು ನೀವು ಎಚ್ಚರಿಸಬೇಕೆಂದು. ಮತ್ತು ಅವರು (ಈ ಮೂಲಕ) ಸರಿದಾರಿಗೆ ಬರಬಹುದೆಂದು (ಇದನ್ನು ಕಳಿಸಲಾಗಿದೆ)

[3] ಆಕಾಶಗಳನ್ನು, ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ಅಲ್ಲಾಹನೇ ಆರು ದಿನಗಳಲ್ಲಿ ಸೃಷ್ಟಿಸಿದನು. ಆ ಬಳಿಕ ವಿಶ್ವಸಿಂಹಾಸನವನ್ನು ಆವರಿಸಿದನು. ಅವನ ಹೊರತು ನಿಮಗೆ ರಕ್ಷಕರಾಗಲಿ ಶಿಫಾರಸುದಾರರಾಗಲಿ ಯಾರೂ ಇಲ್ಲ. ನೀವೇನು ಚಿಂತನೆ ನಡೆಸುವುದಿಲ್ಲವೇ

[4] ಆಕಾಶದಿಂದ ಭೂಮಿಯವರೆಗಿನ ಎಲ್ಲ ವ್ಯವಹಾರಗಳನ್ನೂ ಅವನೇ ಯೋಜಿಸುತ್ತಾನೆ. ಕೊನೆಗೆ, ನಿಮ್ಮ ಲೆಕ್ಕಾಚಾರ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾಗಿರುವ ಒಂದು ದಿನ ಇದೆಲ್ಲವೂ ಅವನೆಡೆಗೆ ಮರಳಲಿದೆ

[5] ಅವನು ಗುಪ್ತ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಅರಿತಿರುವ, ಪ್ರಚಂಡನೂ ಕರುಣಾಮಯಿಯೂ ಆಗಿದ್ದಾನೆ

[6] ಅವನು ಎಲ್ಲ ವಸ್ತುಗಳನ್ನೂ ಸುಂದರವಾಗಿ ಸೃಷ್ಟಿಸಿರುವನು ಮತ್ತು ಅವನು ಮಾನವನ ಸೃಷ್ಟಿಯನ್ನು ಮಣ್ಣಿನಿಂದ ಆರಂಭಿಸಿದನು

[7] ಆ ಬಳಿಕ ಅವನು ಆತನ (ಮಾನವನ) ಸಂತತಿಯನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿದನು

[8] ಆ ಬಳಿಕ ಅವನು ಆತನಿಗೆ ಆಕಾರ ನೀಡಿದನು. ಮತ್ತು ಅವನೊಳಗೆ ತನ್ನ ಆತ್ಮವನ್ನು ಊದಿದನು ಮತ್ತು ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನೀಡಿದನು. (ಇಷ್ಟಾಗಿಯೂ) ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ

[9] ‘‘ನಾವು ಭೂಮಿಯೊಳಗೆ ಕಣ್ಮರೆಯಾಗಿ ಹೋದ ಬಳಿಕ ನಮ್ಮನ್ನೇನು ಹೊಸದಾಗಿ ಸೃಷ್ಟಿಸಲಾಗುವುದೇ?’’ ಎಂದು ಅವರು ಕೇಳುತ್ತಾರೆ. ನಿಜವಾಗಿ ಅವರು, ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನಿರಾಕರಿಸುವವರಾಗಿದ್ದಾರೆ

[10] ಹೇಳಿರಿ; ನಿಮ್ಮನ್ನು ಯಾವ ಮರಣ ದೂತನ ವಶಕ್ಕೆ ಒಪ್ಪಿಸಲಾಗಿದೆಯೋ ಅವನು ನಿಮ್ಮನ್ನು ಸಾಯಿಸುವನು. ಆ ಬಳಿಕ ನಿಮ್ಮನ್ನು ನಿಮ್ಮ ಒಡೆಯನ ಬಳಿಗೆ ಮರಳಿಸಲಾಗುವುದು

[11] ಅಪರಾಧಿಗಳು ತಮ್ಮ ಒಡೆಯನ ಮುಂದೆ ತಲೆಬಾಗಿ, ‘‘ನಮ್ಮೊಡೆಯಾ! ನಾವು ಎಲ್ಲವನ್ನೂ ನೋಡಿಕೊಂಡೆವು ಮತ್ತು ಕೇಳಿಕೊಂಡೆವು. ನಮ್ಮನ್ನೀಗ (ಭೂಮಿಗೆ) ಮರಳಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ನಾವೀಗ ದೃಢನಂಬಿಕೆ ಉಳ್ಳವರಾಗಿದ್ದೇವೆ’’ ಎಂದು ಹೇಳುವುದನ್ನು ನೀವು ನೋಡುವಂತಿದ್ದರೆ ಚೆನ್ನಾಗಿತ್ತು

[12] ನಾವು ಬಯಸಿದ್ದರೆ ಪ್ರತಿಯೊಬ್ಬರಿಗೂ ನೇರಮಾರ್ಗವನ್ನು ಅನುಸರಿಸುವ ಭಾಗ್ಯವನ್ನು ನೀಡಿ ಬಿಡುತ್ತಿದ್ದೆವು. ಆದರೆ, ‘‘ಖಂಡಿತ ನಾನು ನರಕವನ್ನು, ಮಾನವರು ಹಾಗೂ ಜಿನ್ನ್‌ಗಳಿಂದ ತುಂಬಿ ಬಿಡಲಿದ್ದೇನೆ’’ ಎಂಬ ನನ್ನ ಮಾತು ನಿಜವಾಗಿ ಬಿಟ್ಟಿದೆ

[13] ನೀವು ಈ ದಿನದ ಭೇಟಿಯನ್ನು ಮರೆತು ಬಿಟ್ಟಿದ್ದರ ಫಲವನ್ನು ಇದೀಗ ಅನುಭವಿಸಿರಿ. ನಾವು ನಿಮ್ಮನ್ನು ಖಂಡಿತ ಮರೆತಿರುವೆವು. ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ, ಶಾಶ್ವತವಾದ ಶಿಕ್ಷೆಯನ್ನು ಅನುಭವಿಸಿರಿ

[14] ನಮ್ಮ ವಚನಗಳನ್ನು ನಂಬುವವರು ಎಂಥವರೆಂದರೆ, ಅವರಿಗೆ ಅವುಗಳನ್ನು ನೆನಪಿಸಿದೊಡನೆ ಅವರು ಸಾಷ್ಟಾಂಗವೆರಗಿ ಬಿಡುತ್ತಾರೆ ಹಾಗೂ ತಮ್ಮ ಒಡೆಯನ ಪಾವಿತ್ರವನ್ನು ಕೊಂಡಾಡುತ್ತಾರೆ ಮತ್ತು ಅವರು ಅಹಂಕಾರ ತೋರುವುದಿಲ್ಲ

[15] ಅವರ ಬೆನ್ನುಗಳು ಅವರ ಚಾಪೆಗಳಿಂದ ದೂರವಿರುತ್ತವೆ. ಅವರು ಭಯ ಹಾಗೂ ನಿರೀಕ್ಷೆಯೊಂದಿಗೆ ತಮ್ಮ ಒಡೆಯನನ್ನು ಪ್ರಾರ್ಥಿಸುತ್ತಲಿರುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದನ್ನು ಅವರು ಖರ್ಚು ಮಾಡುತ್ತಾರೆ

[16] ಅವರ ಕರ್ಮಗಳ ಫಲವಾಗಿ, ಅವರ ಕಣ್ಣುಗಳು ತಂಪಾಗಲು, ಅವರಿಗಾಗಿ ಏನನ್ನು ಗುಪ್ತವಾಗಿ ಸಿದ್ಧಗೊಳಿಸಿಡಲಾಗಿದೆ ಎಂಬುದು, ಯಾರಿಗೂ ತಿಳಿಯದು

[17] ವಿಶ್ವಾಸಿಯಾಗಿರುವವನು ದುಷ್ಕರ್ಮಿಯಂತಾಗಲು ಸಾಧ್ಯವೇ? ಅವರು ಖಂಡಿತ ಸಮಾನರಲ್ಲ

[18] ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರಿಗಾಗಿ, ಅವರು ಮಾಡುತ್ತಿದ್ದ ಕರ್ಮಗಳಿಗೆ ಪ್ರತಿಫಲವಾಗಿ, ಶಾಶ್ವತವಾದ ಭವ್ಯತೋಟಗಳಲ್ಲಿರುವ ನಿವಾಸಗಳಿವೆ

[19] ಇನ್ನು ಅವಿಧೇಯರಾಗಿದ್ದವರ ಪಾಲಿಗೆ ನರಕವೇ ನೆಲೆಯಾಗಿರುವುದು. ಅವರು ಅದರಿಂದ ಹೊರಹೋಗಲು ಬಯಸಿದಾಗಲೆಲ್ಲಾ ಅವರನ್ನು ಮತ್ತೆ ಅದರೊಳಕ್ಕೆ ಮರಳಿಸಿ ಬಿಡಲಾಗುವುದು ಮತ್ತು ಅವರೊಡನೆ, ‘‘ನೀವು ನಿರಾಕರಿಸುತ್ತಿದ್ದ ನರಕದ ಶಿಕ್ಷೆಯನ್ನು ಸವಿಯಿರಿ’’ ಎನ್ನಲಾಗುವುದು

[20] ನಾವು (ಪರಲೋಕದ) ದೊಡ್ಡ ಶಿಕ್ಷೆಗೆ ಮುನ್ನ ಅವರಿಗೆ (ಇಹಲೋಕದಲ್ಲಿ) ಸಣ್ಣ ಶಿಕ್ಷೆಗಳ ಸವಿ ಕಾಣಿಸುವೆವು – ಅವರು (ಸರಿದಾರಿಗೆ) ಮರಳಬಹುದೆಂದು

[21] ತನ್ನ ಒಡೆಯನ ವಚನಗಳ ಮೂಲಕ ಉಪದೇಶಿಸಲ್ಪಟ್ಟ ಬಳಿಕವೂ ಅದನ್ನು ಕಡೆಗಣಿಸಿ ಬಿಟ್ಟವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಖಂಡಿತವಾಗಿಯೂ ನಾವು ಅಪರಾಧಿಗಳ ವಿರುದ್ಧ ಪ್ರತೀಕಾರ ತೀರಿಸುವೆವು

[22] ನಾವು ಈ ಹಿಂದೆ ಮೂಸಾರಿಗೆ, ಗ್ರಂಥವನ್ನು ನೀಡಿದ್ದೆವು. ಅವನನ್ನು (ಅಲ್ಲಾಹನನ್ನು) ಭೇಟಿಯಾಗಲಿರುವ ಕುರಿತು ನೀವು ಸಂಶಯ ತಾಳಬೇಡಿ (ಎಂದು ಅದರಲ್ಲಿ ಉಪದೇಶಿಸಲಾಗಿತ್ತು). ನಾವು ಅದನ್ನು (ಆ ಗ್ರಂಥವನ್ನು) ಬನೀ ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿಸಿದ್ದೆವು

[23] ಅವರು ಸಹನಶೀಲರಾಗಿದ್ದಾಗ, ನಾವು ಅವರಲ್ಲಿ ಕೆಲವರನ್ನು ನಾಯಕರಾಗಿಸಿದ್ದೆವು. ಅವರು ನಮ್ಮ ಆದೇಶದಂತೆ ಜನರಿಗೆ ಮಾರ್ಗದರ್ಶಿಗಳಾಗಿದ್ದರು ಮತ್ತು ನಮ್ಮ ವಚನಗಳಲ್ಲಿ ಅಚಲ ವಿಶ್ವಾಸ ಉಳ್ಳವರಾಗಿದ್ದರು

[24] ನಿಮ್ಮ ಒಡೆಯನು, ಅವರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಪುನರುತ್ಥಾನ ದಿನ ಖಂಡಿತ ಇತ್ಯರ್ಥಗೊಳಿಸುವನು

[25] ನಾವು ಅವರಿಗಿಂತ ಹಿಂದಿನ ಅದೆಷ್ಟೋ ಸಮುದಾಯಗಳನ್ನು ನಾಶ ಮಾಡಿರುವುದು, ಅವರ ಪಾಲಿಗೆ ಮಾರ್ಗದರ್ಶಿಯಾಗಲಿಲ್ಲವೇ? ಅವರ (ಹಿಂದೆ ನಾಶಗೊಂಡವರ) ನೆಲೆಗಳಲ್ಲಿ ಅವರು ನಡೆದಾಡುತ್ತಾರೆ. ಇದರಲ್ಲಿ ಖಂಡಿತ ಪುರಾವೆಗಳಿವೆ. ಅವರೇನು ಕೇಳುತ್ತಿಲ್ಲವೇ

[26] ಅವರು ನೋಡಲಿಲ್ಲವೇ, ನಾವು ಒಣಗಿದ ನೆಲದ ಕಡೆಗೆ ನೀರನ್ನು ಹರಿಸುವುದನ್ನು? ಅದರಿಂದ ನಾವು ಬೆಳೆಯನ್ನು ಹೊರತೆಗೆಯುತ್ತೇವೆ. ಅದನ್ನು ಅವರ ಜಾನುವಾರುಗಳೂ ತಿನ್ನುತ್ತವೆ ಮತ್ತು ಸ್ವತಃ ಅವರೂ ತಿನ್ನುತ್ತಾರೆ. ಅವರೇನು (ಇದನ್ನೆಲ್ಲಾ) ನೋಡುತ್ತಿಲ್ಲವೇ

[27] ನೀವು ಸತ್ಯವಂತರಾಗಿದ್ದರೆ, ತೀರ್ಪಿನ ಆ ದಿನ ಯಾವಾಗ ಬಂದೀತು(ಎಂದು ತಿಳಿಸಿರಿ) ಎಂದು ಅವರು ಹೇಳುತ್ತಾರೆ

[28] ಹೇಳಿರಿ; ತೀರ್ಪಿನ ಆ ದಿನ, ಧಿಕ್ಕಾರಿಗಳಿಗೆ ಅವರ ನಂಬಿಕೆಯಿಂದ ಯಾವ ಲಾಭವೂ ಆಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು

[29] (ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ಕಾಯಿರಿ. ಅವರೂ ಖಂಡಿತ ಕಾಯುತ್ತಿದ್ದಾರೆ

[30] ದೂತರೇ, ಅಲ್ಲಾಹನಿಗೆ ಅಂಜಿರಿ ಮತ್ತು ಧಿಕ್ಕಾರಿಗಳನ್ನು ಹಾಗೂ ಕಪಟಿಗಳನ್ನು ಅನುಸರಿಸಬೇಡಿ. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ

ಒಕ್ಕೂಟಗಳು

Surah 33

[1] ದಿವ್ಯವಾಣಿಯ ಮೂಲಕ ನಿಮ್ಮೊಡೆಯನ ಕಡೆಯಿಂದ ನಿಮಗೆ ನೀಡಲಾಗಿರುವುದನ್ನು ಅನುಸರಿಸಿರಿ. ನೀವು ಮಾಡುವ ಎಲ್ಲ ಕಾರ್ಯಗಳ ಅರಿವು ಅಲ್ಲಾಹನಿಗಿದೆ

[2] ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯ ಸಾಧಕನಾಗಿ ಅಲ್ಲಾಹನೇ ಸಾಕು

[3] ಅಲ್ಲಾಹನು ಯಾರ ಎದೆಯಲ್ಲೂ ಎರಡು ಹೃದಯಗಳನ್ನು ಇಟ್ಟಿಲ್ಲ. ನೀವು ತಾಯಿ ಎಂದು ಕರೆದು ಬಿಟ್ಟ ನಿಮ್ಮ ಪತ್ನಿಯರನ್ನು ಅವನು ನಿಮ್ಮ ತಾಯಂದಿರಾಗಿ ಮಾಡಿಲ್ಲ. ಮತ್ತು ನೀವು ಪುತ್ರರೆಂದು ಕರೆದವರನ್ನು (ದತ್ತು ಪುತ್ರರನ್ನು) ಅವನು ನಿಮ್ಮ ಪುತ್ರರಾಗಿ ಮಾಡಿಲ್ಲ. ಇವೆಲ್ಲಾ ಕೇವಲ ನಿಮ್ಮ ಬಾಯಿ ಮಾತುಗಳು. ಅಲ್ಲಾಹನು ಸತ್ಯವಾಗಿರುವುದನ್ನೇ ಹೇಳುತ್ತಾನೆ ಮತ್ತು ಸರಿದಾರಿಯನ್ನು ತೋರುತ್ತಾನೆ

[4] ನೀವು ಅವರನ್ನು (ದತ್ತು ಸಂತತಿಯನ್ನು) ಅವರ ತಂದೆಯರ ಹೆಸರಿನಿಂದಲೇ ಕರೆಯಿರಿ. ಅಲ್ಲಾಹನ ದೃಷ್ಟಿಯಲ್ಲಿ ಅದುವೇ ಹೆಚ್ಚು ನ್ಯಾಯೋಚಿತವಾಗಿದೆ. ಅವರ ತಂದೆ ಯಾರೆಂದು ನಿಮಗೆ ತಿಳಿದಿಲ್ಲದಿದ್ದರೂ ಅವರು ಧರ್ಮದಲ್ಲಿ ನಿಮ್ಮ ಸಹೋದರರು ಮತ್ತು ನಿಮ್ಮ ಸಂಗಾತಿಗಳಾಗಿರುವರು. ಅಪ್ಪಿತಪ್ಪಿ ನಿಮ್ಮಿಂದ ಪ್ರಮಾದವೇನಾದರೂ ಸಂಭವಿಸಿದರೆ ನೀವು ಹೊಣೆಗಾರರಲ್ಲ . ಆದರೆ ನೀವು ಮನಃಪೂರ್ವಕ ಮಾಡುವ ತಪ್ಪುಗಳಿಗೆ ಮಾತ್ರ (ನೀವೇ ಹೊಣೆಗಾರರು). ಅಲ್ಲಾಹನು ಸದಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[5] ವಿಶ್ವಾಸಿಗಳ ಪಾಲಿಗೆ ದೇವದೂತರು ಸ್ವತಃ ತಮ್ಮ ಜೀವಕ್ಕಿಂತ ಹೆಚ್ಚು ಪ್ರಿಯರಾಗಿರುತ್ತಾರೆ ಮತ್ತು ಅವರ (ದೂತರ) ಪತ್ನಿಯರು, ಅವರ ಪಾಲಿಗೆ ಮಾತೆಯರಾಗಿರುತ್ತಾರೆ. ಇನ್ನು, ಅಲ್ಲಾಹನ ಗ್ರಂಥದ ಪ್ರಕಾರ, ಇತರ ವಿಶ್ವಾಸಿಗಳು ಮತ್ತು ವಲಸಿಗರಿಗಿಂತ ರಕ್ತ ಸಂಬಂಧಿಗಳು, ಪರಸ್ಪರ ಹೆಚ್ಚು ಹಕ್ಕುದಾರರಾಗಿರುತ್ತಾರೆ. ನೀವು ನಿಮ್ಮ ಆಪ್ತ ಮಿತ್ರರಿಗೆ ಮಾಡುವ ಉಪಕಾರವು ಇದಕ್ಕೆ ಹೊರತಾಗಿದೆ. ಇದು ಗ್ರಂಥದಲ್ಲಿ ಬರೆದಿರುವ ನಿಯಮ

[6] (ದೂತರೇ,) ನಾವು ಇತರ ದೂತರಿಂದ, ಅವರ ಪ್ರತಿಜ್ಞೆಯನ್ನು ಪಡೆದೆವು. ಹಾಗೆಯೇ ನಿಮ್ಮಿಂದ, ನೂಹರಿಂದ, ಇಬ್ರಾಹೀಮರಿಂದ, ಮೂಸಾರಿಂದ ಮತ್ತು ಮರ್ಯಮರ ಪುತ್ರ ಈಸಾರಿಂದಲೂ ನಾವು ಪಕ್ವವಾದ ಪ್ರತಿಜ್ಞೆಯನ್ನು ಪಡೆದೆವು

[7] ಅವನು ಆ ಸತ್ಯವಂತರೊಡನೆ (ಪ್ರಸ್ತುತ ಪ್ರತಿಜ್ಞೆಯ ವಿಷಯದಲ್ಲಿ) ಅವರ ಸತ್ಯವಂತಿಕೆಯ ಕುರಿತು ವಿಚಾರಿಸುವನು. ಇನ್ನು, ಧಿಕ್ಕಾರಿಗಳಿಗಾಗಿ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವನು

[8] ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ಸ್ಮರಿಸಿರಿ. ಹಲವು ಪಡೆಗಳು ನಿಮ್ಮ ವಿರುದ್ಧ ಏರಿ ಬಂದಾಗ ನಾವು ಅವರ ಮೇಲೆ, ಬಿರುಗಾಳಿಯನ್ನು ಹಾಗೂ ನಿಮಗೆ ಕಾಣಿಸದಂತಹ ಪಡೆಗಳನ್ನು ಎರಗಿಸಿದೆವು. ಅಲ್ಲಾಹನಂತು ನೀವು ಮಾಡುತ್ತಿರುವ ಎಲ್ಲವನ್ನೂ ನೊಡುತ್ತಲೇ ಇರುತ್ತಾನೆ

[9] ಅವರು ನಿಮ್ಮ ಮೇಲಿಂದಲೂ ನಿಮ್ಮ ಕೆಳಗಿಂದಲೂ ನಿಮ್ಮ ವಿರುದ್ಧ ಏರಿಬಂದ, ಮತ್ತು (ನಿಮ್ಮ) ಕಣ್ಣುಗಳು ನಿಶ್ಚಲವಾಗಿ ಬಿಟ್ಟಿದ್ದ, ಹೃದಯಗಳು ಕೊರಳನ್ನು ತಲುಪಿದ್ದ ಮತ್ತು ನೀವು ಅಲ್ಲಾಹನ ಕುರಿತು ಏನೇನೋ ಆಲೋಚಿಸಿಕೊಂಡಿದ್ದ ಸಂದರ್ಭ (ನೆನಪಿರಲಿ)

[10] ಈ ರೀತಿ ವಿಶ್ವಾಸಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಯಿತು ಹಾಗೂ ಅವರನ್ನು ತೀವ್ರವಾಗಿ ಝರ್ಝರಿತಗೊಳಿಸಿ ಬಿಡಲಾಯಿತು

[11] ಆಗ ಕಪಟಿಗಳು ಮತ್ತು ರೋಗಗ್ರಸ್ತ ಮನಸ್ಸಿನವರು ‘‘ಅಲ್ಲಾಹನು ಮತ್ತು ಅವನ ದೂತರು ನಮಗೆ ನೀಡಿದ್ದ ಭರವಸೆ ಕೇವಲ ಮೋಸವಾಗಿತ್ತು’’ ಎನ್ನತೊಡಗಿದ್ದರು

[12] ಮತ್ತು ಅವರಲ್ಲಿನ ಒಂದು ಗುಂಪಿನವರು ‘‘ಮದೀನಾದವರೇ, ನಿಮಗಿನ್ನು ಯಾವ ಅವಕಾಶವೂ ಇಲ್ಲ, ನೀವು ಮರಳಿ ಹೋಗಿರಿ’’ ಎನ್ನುತ್ತಿದ್ದರು. ಹಾಗೆಯೇ ಅವರಲ್ಲಿನ ಇನ್ನೊಂದು ಪಂಗಡವು – ‘‘ನಮ್ಮ ಮನೆಗಳು ಅಭದ್ರವಾಗಿವೆ’’ ಎನ್ನುತ್ತಾ (ಯುದ್ಧರಂಗದಿಂದ ಮರಳಿಹೋಗಲು) ದೇವದೂತರ ಬಳಿ ಅನುಮತಿ ಕೇಳತೊಡಗಿತ್ತು. ನಿಜವಾಗಿ ಅವುಗಳು ಅಭದ್ರವಾಗಿರಲಿಲ್ಲ. ಅವರು ಪಲಾಯನ ಮಾಡಬಯಸಿದ್ದರು, ಅಷ್ಟೇ

[13] ಒಂದು ವೇಳೆ (ಶತ್ರು ಸೇನೆಯು) ಎಲ್ಲ ದಿಕ್ಕುಗಳಿಂದ ಅವರ ಮೇಲೆ ಆಕ್ರಮಣ ಮಾಡಿದ್ದರೆ ಹಾಗೂ (ಸನ್ನಿವೇಶವು) ಅವರನ್ನು ವಿದ್ರೋಹಿಗಳಾಗಲು ಆಗ್ರಹಿಸಿದ್ದರೆ, ಅವರು (ತಮ್ಮ ನಂಬಿಕೆಯನ್ನು) ಬಿಟ್ಟುಕೊಡುತ್ತಿದ್ದರು ಮತ್ತು ಅವರು ಹೆಚ್ಚೇನೂ ವಿಳಂಬಿಸದೆ ಅದನ್ನು (ವಿದ್ರೋಹವನ್ನು) ಮಾಡಿ ಬಿಡುತ್ತಿದ್ದರು

[14] ನಿಜವಾಗಿ ಅವರು ಈ ಹಿಂದೆ, ತಾವು ಪಲಾಯನ ಮಾಡುವುದಿಲ್ಲ ಎಂದು ಅಲ್ಲಾಹನೊಂದಿಗೆ ಕರಾರು ಮಾಡಿಕೊಂಡಿದ್ದರು. ಅಲ್ಲಾಹನೊಂದಿಗೆ ಮಾಡಿದ ಕರಾರಿನ ಕುರಿತು ಖಂಡಿತ (ಅವರನ್ನು) ಪ್ರಶ್ನಿಸಲಾಗುವುದು

[15] ಹೇಳಿರಿ; ನೀವು ಪಲಾಯನ ಮಾಡುತ್ತಿರುವುದು ಮರಣದಿಂದ ಅಥವಾ ಹತ್ಯೆಯಿಂದ ಎಂದಾದರೆ, ಆ ನಿಮ್ಮ ಪಲಾಯನದಿಂದ ನಿಮಗೆ ಯಾವ ಲಾಭವೂ ಆಗದು. ಹೆಚ್ಚೆಂದರೆ ತೀರಾ ಅಲ್ಪಕಾಲ ಮಾತ್ರ ನೀವು ಸುಖಿಸಬಲ್ಲಿರಿ

[16] (ದೂತರೇ,) ಹೇಳಿರಿ; ಒಂದು ವೇಳೆ ಅಲ್ಲಾಹನು ನಿಮಗೇನಾದರೂ ಹಾನಿ ಮಾಡಬಯಸಿದರೆ ಯಾರು ತಾನೇ ನಿಮ್ಮನ್ನು ಅವನಿಂದ ರಕ್ಷಿಸಬಲ್ಲರು? ಅಥವಾ ಅವನು ನಿಮ್ಮನ್ನು ಅನುಗ್ರಹಿಸಲು ಬಯಸಿದರೆ (ಅದನ್ನು ಯಾರು ತಾನೇ ತಡೆಯಬಲ್ಲರು)? ಅವರು ತಮಗಾಗಿ ಅಲ್ಲಾಹನ ಹೊರತು ಯಾವ ರಕ್ಷಕನನ್ನೂ ಯಾವ ಸಹಾಯಕನನ್ನೂ ಕಾಣಲಾರರು

[17] ನಿಮ್ಮ ಪೈಕಿ, ಜನರನ್ನು ಹೋರಾಟದಿಂದ ತಡೆಯುವವರು ಮತ್ತು ತಮ್ಮ ಸಹೋದರರೊಡನೆ, ನೀವು ನಮ್ಮ ಕಡೆಗೆ ಬನ್ನಿ ಎಂದು ಹೇಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವರು ಹೋರಾಟದಲ್ಲಿ ಭಾಗವಹಿಸುವುದು ತೀರಾ ಅಪರೂಪ

[18] ನಿಮ್ಮ (ಜೊತೆ ಸೇರುವ) ವಿಷಯದಲ್ಲಿ ಅವರು ತುಂಬಾ ಜಿಪುಣತೆ ತೋರುತ್ತಾರೆ. ಅವರಿಗೆ ಏನಾದರೂ ಅಪಾಯ ಎದುರಾದಾಗ ಅವರು ನಿಮ್ಮೆಡೆಗೆ ನೋಡ ತೊಡಗುತ್ತಾರೆ. ಆಗ ಅವರ ಕಣ್ಣುಗಳು ಮರಣದ ಮೂರ್ಛೆಯು ಬಾಧಿಸಿರುವಂತೆ ಚಲಿಸುತ್ತಿರುತ್ತವೆ. ಅಪಾಯ ದೂರವಾದೊಡನೆ ಅವರು ತಮ್ಮ ಹರಿತವಾದ ನಾಲಿಗೆಗಳಿಂದ ನಿಮ್ಮನ್ನು ದೂಷಿಸಲಾರಂಭಿಸುತ್ತಾರೆ. ಸತ್ಕಾರ್ಯದ ವಿಷಯದಲ್ಲಿ ಅವರು ತೀರಾ ಜಿಪುಣರಾಗಿರುತ್ತಾರೆ. ಅವರು ವಿಶ್ವಾಸ ಉಳ್ಳವರಲ್ಲ. ಅಲ್ಲಾಹನು ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿರುವನು. ಅದು ಅಲ್ಲಾಹನ ಮಟ್ಟಿಗೆ ಸುಲಭದ ಕೆಲಸವಾಗಿದೆ

[19] ಶತ್ರು ಸೇನೆಗಳಿನ್ನೂ ಹೊರಟುಹೋಗಿಲ್ಲ ಎಂದು ಅವರು ಭಾವಿಸಿದ್ದಾರೆ. ಒಂದು ವೇಳೆ ಆ ಸೇನೆಗಳು ಧಾಳಿ ನಡೆಸಿದರೂ, ಅವರು, ತಾವು ಎಲ್ಲಾದರೂ ಹಳ್ಳಿಗಳಲ್ಲಿ ಅವಿತುಕೊಂಡು (ಅಲ್ಲಿಂದಲೇ) ನಿಮ್ಮ ಕುರಿತು ವಿಚಾರಿಸುತ್ತಾ ಇದ್ದಿದ್ದರೆ ಚೆನ್ನಾಗಿತ್ತು ಎಂದು ಅಪೇಕ್ಷಿಸುವರು. ಇನ್ನು ಅವರು ನಿಮ್ಮ ನಡುವೆಯೇ ಇದ್ದರೂ, ಅವರು ಹೋರಾಟದಲ್ಲಿ ಭಾಗವಹಿಸುವುದು ತೀರಾ ಅಪರೂಪ

[20] ಖಂಡಿತವಾಗಿಯೂ ಅಲ್ಲಾಹನ ದೂತರಲ್ಲಿ ನಿಮಗೆ ಅತ್ಯುತ್ತಮ ಆದರ್ಶವಿದೆ. ಅಲ್ಲಾಹನ ಕುರಿತು ಹಾಗೂ ಆ ಅಂತಿಮ ದಿನದ ಕುರಿತು ಶುಭ ನಿರೀಕ್ಷೆ ಉಳ್ಳವರಿಗೆ ಮತ್ತು ಅಲ್ಲಾಹನನ್ನು ಪದೇ ಪದೇ ಸ್ಮರಿಸುತ್ತಿರುವವರಿಗೆ (ಇದು ಅನ್ವಯಿಸುತ್ತದೆ)

[21] ವಿಶ್ವಾಸಿಗಳು, ಶತ್ರು ಪಡೆಗಳನ್ನು ಕಂಡಾಗ, ‘‘ಇದುವೇ ಅಲ್ಲಾಹನು ಮತ್ತು ಅವನ ದೂತರು ನಮಗೆ ನೀಡಿದ್ದ ವಾಗ್ದಾನ. ಅಲ್ಲಾಹ್ ಮತ್ತವನ ದೂತರು ಸತ್ಯವನ್ನೇ ಹೇಳಿದ್ದರು’’ ಎನ್ನುತ್ತಾರೆ. ಅದರಿಂದ ಅವರ ವಿಶ್ವಾಸ ಮತ್ತು ಅರ್ಪಣಾಭಾವವು ಮತ್ತಷ್ಟು ಹೆಚ್ಚುತ್ತದೆ

[22] ವಿಶ್ವಾಸಿಗಳ ಪೈಕಿ, ಅಲ್ಲಾಹನ ಜೊತೆ ತಾವು ಮಾಡಿರುವ ಪ್ರತಿಜ್ಞೆ ಪ್ರಾಮಾಣಿಕವೆಂದು ಸಾಬೀತು ಪಡಿಸಿರುವ ಕೆಲವರಿದ್ದಾರೆ. ಅವರಲ್ಲಿ ಕೆಲವರು ತಮ್ಮ ಹರಕೆಯನ್ನು ಪೂರ್ತಿಗೊಳಿಸಿದ್ದಾರೆ ಮತ್ತು ಕೆಲವರು ಕಾಯುತ್ತಿದ್ದಾರೆ. ಅವರು (ತಮ್ಮ ಸಂಕಲ್ಪವನ್ನು) ಬದಲಿಸಿಲ್ಲ

[23] ಅಲ್ಲಾಹನು ಸತ್ಯನಿಷ್ಠರಿಗೆ ಅವರ ಸತ್ಯನಿಷ್ಠೆಯ ಪ್ರತಿಫಲವನ್ನು ನೀಡುವನು ಮತ್ತು ತಾನಿಚ್ಛಿಸಿದರೆ ಕಪಟಿಗಳನ್ನು ಶಿಕ್ಷಿಸುವನು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಹಾಗೂ ಕರುಣಾಮಯಿ ಯಾಗಿದ್ದಾನೆ

[24] ಧಿಕ್ಕಾರಿಗಳು ಆಕ್ರೋಶಿತರಾಗಿದ್ದ ಸ್ಥಿತಿಯಲ್ಲೇ ಅಲ್ಲಾಹನು ಅವರನ್ನು ಮರಳಿಸಿಬಿಟ್ಟನು. ಅವರಿಗೆ ಯಾವ ಲಾಭವೂ ಸಿಗಲಿಲ್ಲ. ಯುದ್ಧದಲ್ಲಿ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ತುಂಬಾ ಶಕ್ತಿಶಾಲಿ ಹಾಗೂ ಪ್ರಬಲನಾಗಿದ್ದಾನೆ

[25] ಗ್ರಂಥದವರ ಪೈಕಿ, ಅವರಿಗೆ (ಧಿಕ್ಕಾರಿಗಳಿಗೆ) ನೆರವಾದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿಬಿಟ್ಟಿರುವನು ಮತ್ತು ಅವರ ಮನಸ್ಸುಗಳಲ್ಲಿ ಭಯವನ್ನು ನೆಟ್ಟಿರುವನು. ಇದೀಗ ಅವರಲ್ಲಿ ಕೆಲವರನ್ನು ನೀವು ಕೊಂದಿರುವಿರಿ ಮತ್ತು ಕೆಲವರನ್ನು ಬಂಧಿಸಿರುವಿರಿ

[26] ಅವನು (ಅಲ್ಲಾಹನು) ನಿಮ್ಮನ್ನು ಅವರ ಭೂಮಿ, ಅವರ ಮನೆಗಳು, ಅವರ ಸಂಪತ್ತು ಹಾಗೂ ನೀವು ಈವರೆಗೂ ಕಾಲಿಟ್ಟಿಲ್ಲದ ನೆಲದ ಉತ್ತರಾಧಿಕಾರಿಗಳಾಗಿಸಿರುವನು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಸಮರ್ಥನಾಗಿದ್ದಾನೆ

[27] ದೂತರೇ, ನಿಮ್ಮ ಪತ್ನಿಯರೊಡನೆ ಹೇಳಿರಿ; ನೀವು ಕೇವಲ ಈ ಲೋಕದ ಬದುಕನ್ನು ಮತ್ತು ಅದರ ವೈಭವವನ್ನು ಬಯಸುವುದಾದರೆ, ಬನ್ನಿ, ನಾನು ನಿಮಗೆ ಒಂದಿಷ್ಟು ಸಂಪತ್ತನ್ನು ಕೊಟ್ಟು ಉತ್ತಮ ರೀತಿಯಲ್ಲಿ ನಿಮ್ಮನ್ನು ಬಿಟ್ಟು ಬಿಡುತ್ತೇನೆ

[28] ಇನ್ನು, ನೀವು ಅಲ್ಲಾಹನನ್ನು, ಅವನ ದೂತನನ್ನು ಹಾಗೂ ಪರಲೋಕದ ನಿವಾಸವನ್ನು ಬಯಸುವುದಾದರೆ, ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಪೈಕಿ ಸತ್ಕರ್ಮಿಗಳಿಗಾಗಿ ಮಹಾನ್ ಪ್ರತಿಫಲವನ್ನು ಸಿದ್ಧಗೊಳಿಸಿಟ್ಟಿರುವನು

[29] ದೂತರ ಪತ್ನಿಯರೇ, ನಿಮ್ಮ ಪೈಕಿ ಯಾರಾದರೂ ವ್ಯಕ್ತವಾದ ಅಶ್ಲೀಲ ಕೃತ್ಯವನ್ನು ಎಸಗಿದರೆ ಆಕೆಗೆ ದುಪ್ಪಟ್ಟು ಶಿಕ್ಷೆ ಸಿಗಲಿದೆ. ಅಲ್ಲಾಹನ ಪಾಲಿಗೆ ಅದು ಸುಲಭವಾಗಿರುತ್ತದೆ

[30] ಇನ್ನು, ನಿಮ್ಮ ಪೈಕಿ ಅಲ್ಲಾಹನಿಗೆ ಹಾಗೂ ಅವನ ದೂತರಿಗೆ ವಿಧೇಯರಾಗಿದ್ದು, ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ನಾವು ದುಪ್ಪಟ್ಟು ಪ್ರತಿಫಲವನ್ನು ನೀಡುವೆವು. ಮತ್ತು ನಾವು ಅಂಥವರಿಗಾಗಿ ಗೌರವಾರ್ಹವಾದ ಸಂಪನ್ನತೆಯನ್ನು ಸಜ್ಜುಗೊಳಿಸಿಟ್ಟಿರುವೆವು

[31] ದೂತರ ಪತ್ನಿಯರೇ, ನೀವು ಇತರ ಮಹಿಳೆಯರಂತಲ್ಲ. ನೀವು ನೀವಿನ್ನು, ಮನದಲ್ಲಿ ರೋಗವಿರುವವನು ದುರಾಶೆ ಪಡುವ ರೀತಿಯಲ್ಲಿ ಅತಿನಯವಾಗಿ ಮಾತನಾಡಬೇಡಿ. ನಿಯಮಾನುಸಾರ ಮಾತನಾಡಿರಿ

[32] ನೀವು ನಿಮ್ಮ ಮನೆಗಳಲ್ಲಿ ಸಂತೃಪ್ತರಾಗಿರಿ ಮತ್ತು ಹಿಂದಿನ, ಅಜ್ಞಾನ ಕಾಲದಂತಹ ಆಡಂಬರ ಮೆರೆಯುತ್ತಾ ತಿರುಗಬೇಡಿ. ನಮಾಝನ್ನು ಪಾಲಿಸಿರಿ, ಝಕಾತ್‌ಅನ್ನು ಪಾವತಿಸಿರಿ ಮತ್ತು ಅಲ್ಲಾಹನಿಗೆ ಹಾಗೂ ಅವನ ದೂತರಿಗೆ ವಿಧೇಯರಾಗಿರಿ. (ದೂತರ) ಮನೆಯವರೇ, ಅಲ್ಲಾಹನು ನಿಮ್ಮ ಮೇಲಿನ ಕಳಂಕವನ್ನು ನಿವಾರಿಸಿ ನಿಮ್ಮನ್ನು ಸಂಪೂರ್ಣ ನಿರ್ಮಲಗೊಳಿಸ ಬಯಸುತ್ತಾನೆ

[33] ನಿಮ್ಮ ಮನೆಗಳಲ್ಲಿ ಓದಲಾಗುವ ಅಲ್ಲಾಹನ ವಚನಗಳನ್ನೂ ಯುಕ್ತಿಪೂರ್ಣ ನುಡಿಗಳನ್ನೂ ನೆನಪಿಡಿರಿ. ಖಂಡಿತವಾಗಿಯೂ ಅಲ್ಲಾಹನು ಅತ್ಯಂತ ಸೂಕ್ಷ್ಮ ದೃಷ್ಟಿಯುಳ್ಳವನು ಹಾಗೂ ಎಲ್ಲ ವಿಷಯಗಳ ಅರಿವುಳ್ಳವನಾಗಿದ್ದಾನೆ

[34] ಖಂಡಿತವಾಗಿಯೂ (ಅಲ್ಲಾಹನಿಗೆ) ಶರಣಾದ ಪುರುಷರು ಮತ್ತು ಶರಣಾದ ಸ್ತ್ರೀಯರು, ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರು, ವಿಧೇಯ ಪುರುಷರು ಮತ್ತು ವಿಧೇಯ ಸ್ತ್ರೀಯರು, ಸತ್ಯವಂತ ಪುರುಷರು ಮತ್ತು ಸತ್ಯವಂತ ಸ್ತ್ರೀಯರು, ಸಹನಶೀಲ ಪುರುಷರು ಮತ್ತು ಸಹನಶೀಲ ಸ್ತ್ರೀಯರು, ಭಯ ಭಕ್ತಿ ಉಳ್ಳ ಪುರುಷರು ಮತ್ತು ಭಯ ಭಕ್ತಿ ಉಳ್ಳ ಸ್ತ್ರೀಯರು, ದಾನಶೀಲ ಪುರುಷರು ಮತ್ತು ದಾನಶೀಲ ಸ್ತ್ರೀಯರು, ಉಪವಾಸಿ ಪುರುಷರು ಮತ್ತು ಉಪವಾಸಿ ಸ್ತ್ರೀಯರು, ತಮ್ಮ ಮಾನವನ್ನು ಸಂರಕ್ಷಿಸುವ ಪುರುಷರು ಮತ್ತು ಅಂತಹ ಸ್ತ್ರೀಯರು ಮತ್ತು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುವ ಪುರುಷರು ಮತ್ತು ಅಂತಹ ಸ್ತ್ರೀಯರು – ಅವರಿಗಾಗಿ ಅಲ್ಲಾಹನು ಕ್ಷಮೆಯನ್ನು ಹಾಗೂ ಭವ್ಯ ಪ್ರತಿಫಲವನ್ನು ಸಿದ್ಧ ಪಡಿಸಿರುವನು

[35] ಅಲ್ಲಾಹನು ಮತ್ತು ಅವನ ದೂತರು ಒಂದು ವಿಷಯದಲ್ಲಿ ತೀರ್ಪು ನೀಡಿ ಬಿಟ್ಟ ಬಳಿಕ ವಿಶ್ವಾಸಿ ಪುರುಷರಿಗಾಗಲಿ ವಿಶ್ವಾಸಿ ಸ್ತ್ರೀಯರಿಗಾಗಲಿ ಆ ತಮ್ಮ ವಿಷಯದಲ್ಲಿ ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ. ಅಲ್ಲಾಹ್ ಮತ್ತು ಅವನ ದೂತರ ಆದೇಶವನ್ನು ಮೀರಿ ನಡೆದವನು ಸ್ಪಷ್ಟವಾಗಿ ದಾರಿಗೆಟ್ಟವನಾಗಿದ್ದಾನೆ

[36] (ದೂತರೇ,) ಅಲ್ಲಾಹನು ಬಹಳಷ್ಟು ಅನುಗ್ರಹಿಸಿರುವ ಹಾಗೂ ನಿಮ್ಮ ಔದಾರ್ಯಕ್ಕೂ ಪಾತ್ರನಾಗಿರುವ ಒಬ್ಬ ವ್ಯಕ್ತಿಯೊಡನೆ (ಝೈದ್‌ರೊಡನೆ) ನೀವು, ‘‘ನಿನ್ನ ಪತ್ನಿಯನ್ನು ನಿನ್ನ ಬಳಿಯೇ ತಡೆದಿಟ್ಟುಕೋ ಮತ್ತು ಅಲ್ಲಾಹನಿಗೆ ಅಂಜುತ್ತಿರು’’ ಎಂದು ಹೇಳುತ್ತಿದ್ದಾಗ ನೀವು ನಿಮ್ಮ ಮನಸ್ಸಿನಲ್ಲಿದ್ದ ಒಂದು ವಿಷಯವನ್ನು ಅಡಗಿಸಿಟ್ಟಿದ್ದಿರಿ. ಅಲ್ಲಾಹನು ಅದನ್ನು ಬಹಿರಂಗಗೊಳಿಸ ಬಯಸಿದ್ದನು. ನೀವು ಜನರಿಗೆ ಅಂಜಿದಿರಿ. ನಿಜವಾಗಿ ಅಲ್ಲಾಹನು ಅಂಜಿಕೆಗೆ ಹೆಚ್ಚು ಅರ್ಹನು. ಕೊನೆಗೆ ಝೈದ್ ಆಕೆಯ ಜೊತೆ ತನ್ನ ಅಗತ್ಯವನ್ನು ಪೂರೈಸಿ ಕೊಂಡಾಗ (ಆಕೆಯನ್ನು ವಿಚ್ಛೇಧಿಸಿದಾಗ), ನಾವು ನಿಮ್ಮ ಜೊತೆ ಆಕೆಯ ವಿವಾಹ ಮಾಡಿಸಿದೆವು. ತಮ್ಮ ದತ್ತು ಪುತ್ರರು ತಮ್ಮ ಅಗತ್ಯವನ್ನು ಪೂರೈಸಿಕೊಂಡ (ವಿಚ್ಛೇದಿಸಿದ) ಪತ್ನಿಯರ ವಿಷಯದಲ್ಲಿ ವಿಶ್ವಾಸಿಗಳಿಗೆ ಯಾವುದೇ ಅಡೆ ತಡೆ ಇರಬಾರದು ಎಂಬುದೇ ಇದರ ಉದ್ದೇಶವಾಗಿತ್ತು. ಅಲ್ಲಾಹನಂತು ತನ್ನ ಆದೇಶವನ್ನು ಅನುಷ್ಠಾನಿಸಿಯೇ ಬಿಡುತ್ತಾನೆ

[37] ತನಗೆ ಅಲ್ಲಾಹನು ಕಡ್ಡಾಯಗೊಳಿಸಿರುವ ವಿಷಯದಲ್ಲಿ ದೂತರಿಗೆ ಯಾವುದೇ ಹಿಂಜರಿಕೆ ಇರಬಾರದು. ಗತಕಾಲಗಳ ಜನರ ವಿಷಯದಲ್ಲಿ ಅಲ್ಲಾಹನ ನಿಯಮ ಇದೇ ಆಗಿತ್ತು. ಇನ್ನು ಅಲ್ಲಾಹನ ಆದೇಶಗಳು ಅತ್ಯಂತ ಪರಿಪಕ್ವ ಸ್ವರೂಪದಲ್ಲಿ ರೂಪಿತವಾಗಿರುತ್ತವೆ

[38] ಅಲ್ಲಾಹನ ಸಂದೇಶಗಳನ್ನು ತಲುಪಿಸುವವರು ಅವನನ್ನು ಅಂಜುತ್ತಿರುತ್ತಾರೆ ಮತ್ತು ಅವರು ಅಲ್ಲಾಹನ ಹೊರತು ಬೇರೆ ಯಾರನ್ನೂ ಅಂಜುವುದಿಲ್ಲ. ಇನ್ನು, ವಿಚಾರಣೆಗೆ ಅಲ್ಲಾಹನೇ ಸಾಕು

[39] ಮುಹಮ್ಮದ್(ಸ) ನಿಮ್ಮ ಪೈಕಿ ಯಾವುದೇ ಪುರುಷನ ತಂದೆಯಲ್ಲ. ಅವರು ಅಲ್ಲಾಹನ ದೂತ ಮತ್ತು ಕೊನೆಯ ಪ್ರವಾದಿಯಾಗಿರುವರು. ಅಲ್ಲಾಹನು ಎಲ್ಲ ವಿಷಯಗಳ ಜ್ಞಾನ ಉಳ್ಳವನಾಗಿದ್ದಾನೆ

[40] ವಿಶ್ವಾಸಿಗಳೇ, ಅಲ್ಲಾಹನನ್ನು ಪದೇ ಪದೇ ಸ್ಮರಿಸುತ್ತಲಿರಿ

[41] ಮತ್ತು ಮುಂಜಾವಿನಲ್ಲೂ ಸಂಜೆ ಹೊತ್ತಿನಲ್ಲೂ ಅವನ ಪಾವಿತ್ರವನ್ನು ಜಪಿಸಿರಿ

[42] ನಿಮ್ಮನ್ನು ಕತ್ತಲೆಯಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುವುದಕ್ಕಾಗಿ, ಅವನು ಮತ್ತು ಅವನ ಮಲಕ್‌ಗಳು ನಿಮಗೆ ಶುಭ ಹಾರೈಸುತ್ತಾ ಇರುತ್ತಾರೆ. ಅವನು ವಿಶ್ವಾಸಿಗಳ ಪಾಲಿಗೆ ಸದಾ ಕರುಣಾಮಯಿಯಾಗಿದ್ದಾನೆ

[43] ಅವರು ಅವನನ್ನು ಕಾಣುವ ದಿನ ಅವರನ್ನು ‘ಸಲಾಮ್’(ಶಾಂತಿ) ಎಂದು ಹರಸಲಾಗುವುದು ಮತ್ತು ಅವನು ಅವರಿಗಾಗಿ ಬಹಳ ಶ್ರೇಷ್ಠ ಪ್ರತಿಫಲವನ್ನು ಸಿದ್ಧಗೊಳಿಸಿಟ್ಟಿರುವನು

[44] ದೂತರೇ, ನಾವು ನಿಮ್ಮನ್ನು ಸಾಕ್ಷಿಯಾಗಿ, ಶುಭವಾರ್ತೆ ನೀಡುವವರಾಗಿ ಮತ್ತು ಎಚ್ಚರಿಸುವವರಾಗಿ ಕಳಿಸಿರುವೆವು

[45] (ಹಾಗೆಯೇ,) ಅಲ್ಲಾಹನ ಆದೇಶ ಪ್ರಕಾರ ಜನರನ್ನು ಅವನೆಡೆಗೆ ಕರೆಯುವವರಾಗಿ ಮತ್ತು ಉಜ್ವಲ ಸೂರ್ಯನಾಗಿ (ಕಳಿಸಿರುವೆವು)

[46] ವಿಶ್ವಾಸಿಗಳಿಗಾಗಿ ಅಲ್ಲಾಹನ ಕಡೆಯಿಂದ ಭಾರೀ ಉದಾರ ಪ್ರತಿಫಲ ಇದೆಯೆಂದು ನೀವು ಅವರಿಗೆ ಶುಭವಾರ್ತೆ ನೀಡಿರಿ

[47] ಮತ್ತು ನೀವು ಧಿಕ್ಕಾರಿಗಳ ಹಾಗೂ ಕಪಟಿಗಳ ಆದೇಶ ಪಾಲಿಸಬೇಡಿ ಮತ್ತು ಅವರ ಕಿರುಕುಳಗಳ ಕುರಿತು ಚಿಂತಿಸಬೇಡಿ. ನೀವು ಅಲ್ಲಾಹನಲ್ಲಿ ಭರವಸೆ ಇಡಿರಿ. ಕಾರ್ಯ ಸಾಧಕನಾಗಿ ಅಲ್ಲಾಹನೇ ಸಾಕು

[48] ವಿಶ್ವಾಸಿಗಳೇ, ನೀವು ವಿಶ್ವಾಸಿ ಸ್ತ್ರೀಯರನ್ನು ವಿವಾಹವಾಗಿ, ಅವರನ್ನು ಸ್ಪರ್ಶಿಸುವ ಮುನ್ನ ಅವರನ್ನು ವಿಚ್ಛೇದಿಸಿದರೆ, ಅವರು ‘ಇದ್ದತ್’(ಅವಧಿ) ಪೂರ್ತಿಗೊಳಿಸಬೇಕೆಂದು ಆಗ್ರಹಿಸುವ ಅಧಿಕಾರ ನಿಮಗಿಲ್ಲ. ಅವರಿಗೆ ಒಂದಷ್ಟು ಸಂಪತ್ತನ್ನು ಕೊಟ್ಟು ಅತ್ಯುತ್ತಮ ರೀತಿಯಲ್ಲಿ ಅವರನ್ನು ಕಳಿಸಿಕೊಡಿರಿ

[49] ದೂತರೇ, ನೀವು ಯಾರಿಗೆ ಅವರ ಮೆಹ್ರ್ ಅನ್ನು ಪಾವತಿಸಿರುವಿರೋ ಆ ನಿಮ್ಮ ಪತ್ನಿಯರು ಮತ್ತು ಅಲ್ಲಾಹನು ಯುದ್ಧ ಪ್ರಾಪ್ತಿಯಾಗಿ ನಿಮಗೊಪ್ಪಿಸಿರುವ ದಾಸಿಯರು, ಮತ್ತು ನಿಮ್ಮ ತಂದೆಯ ಸಹೋದರರ ಪುತ್ರಿಯರು ಮತ್ತು ನಿಮ್ಮ ತಂದೆಯ ಸಹೋದರಿಯರ ಪುತ್ರಿಯರು, ಮತ್ತು ನಿಮ್ಮ ತಾಯಿಯ ಸಹೋದರರ ಪುತ್ರಿಯರು ಮತ್ತು ನಿಮ್ಮ ತಾಯಿಯ ಸಹೋದರಿಯರ ಪುತ್ರಿಯರು, ನಿಮ್ಮ ಜೊತೆಗೆ ವಲಸೆ ಹೋದವರು, ತಮ್ಮನ್ನು ದೇವದೂತರಿಗೆಂದೇ ಮುಡಿಪಾಗಿಡುವ ಹರಕೆ ಹೊತ್ತವರು – ದೇವದೂತರು ಅವರನ್ನು ವಿವಾಹವಾಗ ಬಯಸುವುದಾದರೆ – ಅವರನ್ನು ನಾವು ನಿಮ್ಮ ಪಾಲಿಗೆ ಸಮ್ಮತಗೊಳಿಸಿರುವೆವು. ಇದು ಇತರ ವಿಶ್ವಾಸಿಗಳಿಗೆ ಅನ್ವಯವಾಗದ, ನಿಮಗೆ ಮಾತ್ರ ಇರುವ ನಿಯಮ. ಅವರ ಪತ್ನಿಯರು ಹಾಗೂ ದಾಸಿಯರ ವಿಷಯದಲ್ಲಿ ನಾವು ಅವರಿಗೆ ವಿಧಿಸಿರುವ ನಿಯಮಗಳ ಕುರಿತು ನಾವು ಬಲ್ಲೆವು. ನಿಮ್ಮ ಪಾಲಿನ ಅಡೆ ತಡೆಗಳ ನಿವಾರಣೆಗಾಗಿ (ಇದನ್ನು ತಿಳಿಸಲಾಗಿದೆ). ಅಲ್ಲಾಹನು ಕ್ಷಮಿಸುವವನು ಹಾಗೂ ಕರುಣಾಳುವಾಗಿದ್ದಾನೆ

[50] (ದೂತರೇ,) ನೀವು ಅವರ (ನಿಮ್ಮ ಪತ್ನಿಯರ) ಪೈಕಿ ನೀವಿಚ್ಛಿಸುವವರನ್ನು ದೂರವಿಡಬಹುದು ಮತ್ತು ನೀವಿಚ್ಛಿಸುವವರನ್ನು ನಿಮ್ಮ ಜೊತೆಗೆ ಉಳಿಸಿಕೊಳ್ಳಬಹುದು. ಇನ್ನು, ಅವರ ಪೈಕಿ, ನೀವು ದೂರಗೊಳಿಸಿದವರನ್ನೇ ಮತ್ತೆ ನೀವು ನಿಮ್ಮ ಬಳಿಗೆ ಕರೆಸಿಕೊಳ್ಳುವುದಕ್ಕೆ ತಡೆಯೇನೂ ಇಲ್ಲ. ಅವರ (ದೂತರ ಪತ್ನಿಯರ) ಕಣ್ಣುಗಳು ತಂಪಾಗಿರುವುದಕ್ಕೆ ಹಾಗೂ ಅವರು ದುಃಖಿತರಾಗದೆ ಇರುವುದಕ್ಕೆ ಮತ್ತು ಅವರು ನೀವು ಕೊಟ್ಟದ್ದರಲ್ಲೇ ಸಂತೃಪ್ತರಾಗಿರುವುದಕ್ಕೆ ಇದು ಸಮರ್ಪಕ ಧೋರಣೆಯಾಗಿದೆ. ನಿಮ್ಮ ಮನಸ್ಸುಗಳಲ್ಲಿ ಇರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು. ಅಲ್ಲಾಹನು ಜ್ಞಾನ ಉಳ್ಳವನೂ ಯುಕ್ತಿವಂತನೂ ಆಗಿದ್ದಾನೆ

[51] (ದೂತರೇ,) ಇದರ ಬಳಿಕ ಬೇರೆ ಮಹಿಳೆಯರು ನಿಮ್ಮ ಪಾಲಿಗೆ ಸಮ್ಮತರಲ್ಲ ಮತ್ತು ನಿಮಗೆ ಯಾರದಾದರೂ ಸೌಂದರ್ಯವು ಎಷ್ಟೇ ಆಕರ್ಷಕವೆನಿಸಿದರೂ ನೀವು ಇವರ (ಹಾಲಿ ಪತ್ನಿಯರ) ಸ್ಥಾನದಲ್ಲಿ ಇತರರನ್ನು ತರುವಂತಿಲ್ಲ – ನಿಮ್ಮ ದಾಸಿಯರ ಹೊರತು. ಅಲ್ಲಾಹನಂತು ಎಲ್ಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ

[52] ವಿಶ್ವಾಸಿಗಳೇ, ಭೋಜನಕ್ಕಾಗಿ ಆಮಂತ್ರಣ ಸಿಗದೆ ನೀವು ದೇವದೂತರ ಮನೆಗಳೊಳಗೆ ಪ್ರವೇಶಿಸಬೇಡಿ ಮತ್ತು ಭೋಜನ ಸಿದ್ಧವಾಗುವುದಕ್ಕಾಗಿ ಕಾಯುತ್ತಾ ಕೂತಿರಬೇಡಿ. ನಿಮ್ಮನ್ನು ಕರೆಯಲಾದಾಗ ನೀವು ಪ್ರವೇಶಿಸಿರಿ ಮತ್ತು ಭೋಜನ ಮುಗಿದೊಡನೆ, ಹೊರಟು ಹೋಗಿರಿ ಮತ್ತು ಸುಮ್ಮನೆ ಮಾತುಕತೆಯಲ್ಲಿ ತೊಡಗಿರಬೇಡಿ. ನಿಮ್ಮ ಈ ತರದ ವರ್ತನೆಯಿಂದ ದೇವದೂತರಿಗೆ ಕಿರುಕುಳವಾಗುತ್ತದೆ. ಆದರೆ ಅವರು ನಿಮ್ಮ ಮುಂದೆ ಸಂಕೋಚ ಪಡುತ್ತಾರೆ. ಅಲ್ಲಾಹನು ಸತ್ಯವನ್ನು ಮುಂದಿಡುವುದಕ್ಕೆ ಹಿಂಜರಿಯುವುದಿಲ್ಲ. ನೀವು ಅವರೊಡನೆ (ದೂತರ ಪತ್ನಿಯರೊಡನೆ) ಯಾವುದೇ ವಸ್ತುವನ್ನು ಕೇಳುವಾಗ, ತೆರೆಯ ಮರೆಯಿಂದಲೇ ಕೇಳಿರಿ. ಇದು ನಿಮ್ಮ ಮನಸ್ಸುಗಳಿಗೂ ಅವರ ಮನಸ್ಸುಗಳಿಗೂ ಒಳ್ಳೆಯದು. ನೀವು ದೂತರಿಗೆ ಕಿರುಕುಳ ನೀಡಬಾರದು ಮತ್ತು ಅವರ ನಿಧನಾನಂತರ ಅವರ ಪತ್ನಿಯರನ್ನು ನೀವೆಂದೂ ವಿವಾಹವಾಗಬಾರದು. ಖಂಡಿತವಾಗಿಯೂ ಇವೆಲ್ಲಾ ಅಲ್ಲಾಹನ ದೃಷ್ಟಿಯಲ್ಲಿ ದೊಡ್ಡ ವಿಷಯಗಳಾಗಿವೆ

[53] ನೀವು ಯಾವುದಾದರೂ ವಿಷಯವನ್ನು ಬಹಿರಂಗಗೊಳಿಸಿದರೂ ಗುಪ್ತವಾಗಿಟ್ಟರೂ ಅಲ್ಲಾಹನಂತು ಖಂಡಿತ ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದಾನೆ

[54] ಅವರು (ಮಹಿಳೆಯರು) ತಮ್ಮ ತಂದೆಯರು, ತಮ್ಮ ಪುತ್ರರು, ತಮ್ಮ ಸಹೋದರರು, ತಮ್ಮ ಸಹೋದರರ ಪುತ್ರರು, ತಮ್ಮ ಸಹೋದರಿಯರ ಪುತ್ರರು, ತಮ್ಮ ಬಳಗದ ಸ್ತ್ರೀಯರು ಮತ್ತು ತಮ್ಮ ದಾಸಿಯರ ಮುಂದೆ (ಹಿಜಾಬ್‌ನ ನಿಯಮಗಳನ್ನು) ಪಾಲಿಸದಿದ್ದರೆ ಅವರ ಮೇಲೆ ಪಾಪವೇನಿಲ್ಲ. ನೀವು (ಮಹಿಳೆಯರು) ಅಲ್ಲಾಹನಿಗೆ ಅಂಜುತ್ತಲಿರಿ. ಅಲ್ಲಾಹನು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿರುತ್ತಾನೆ

[55] ಖಂಡಿತವಾಗಿಯೂ ಅಲ್ಲಾಹ್ ಮತ್ತು ಅವನ ಮಲಕ್‌ಗಳು, ಪ್ರವಾದಿವರ್ಯರಿಗೆ ಶುಭ ಹಾರೈಸುತ್ತಿರುತ್ತಾರೆ. ವಿಶ್ವಾಸಿಗಳೇ, ನೀವೂ ಅವರಿಗೆ ಶುಭ ಹಾರೈಸಿರಿ ಹಾಗೂ ಶಾಂತಿಯನ್ನು ಕೋರಿರಿ

[56] ಅಲ್ಲಾಹ್ ಮತ್ತು ಅವನ ದೂತರಿಗೆ ಕಿರುಕುಳ ನೀಡಲು ಯತ್ನಿಸುವವರನ್ನು ಅಲ್ಲಾಹನು ಈ ಲೋಕದಲ್ಲಿ ಖಂಡಿತ ಶಪಿಸುವನು ಮತ್ತು ಪರಲೋಕದಲ್ಲಿ ಅವರಿಗಾಗಿ ಅಪಮಾನಾತ್ಮಕ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವನು

[57] ಸತ್ಯವಿಶ್ವಾಸಿ ಪುರುಷರು ಹಾಗೂ ಸ್ತ್ರೀಯರು ಏನನ್ನೂ (ಯಾವ ದುಷ್ಕೃತ್ಯವನ್ನೂ) ಮಾಡಿಲ್ಲದಿರುವಾಗ, ಅವರಿಗೆ ಕಿರುಕುಳ ನೀಡುವವರು ಭಾರೀ ಅಪರಾಧ ಹಾಗೂ ಸ್ಪಷ್ಟ ಪಾಪದ ಹೊರೆ ಹೊರುತ್ತಿದ್ದಾರೆ

[58] ದೂತರೇ, ನಿಮ್ಮ ಪತ್ನಿಯರು, ನಿಮ್ಮ ಪುತ್ರಿಯರು ಮತ್ತು ವಿಶ್ವಾಸಿ ಸ್ತ್ರೀಯರೊಡನೆ, ತಮ್ಮ ಶಾಲುಗಳ ಭಾಗವನ್ನು ತಮ್ಮ ಮೇಲೆ ಹೊದ್ದುಕೊಳ್ಳಲು ಹೇಳಿರಿ. ಅವರನ್ನು ಗುರುತಿಸುವುದಕ್ಕೆ ಮತ್ತು ಯಾರೂ ಅವರನ್ನು ಪೀಡಿಸದೆ ಇರುವುದಕ್ಕೆ ಇದು ಹೆಚ್ಚು ಸಮರ್ಪಕವಾಗಿದೆ. ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ

[59] ಕಪಟಿಗಳು, ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಮತ್ತು ಮದೀನಾದಲ್ಲಿ ಸುಳ್ಳು ವದಂತಿಗಳನ್ನು ಹಬ್ಬುವವರು (ಈ ಕೃತ್ಯಗಳಿಂದ) ದೂರ ಉಳಿಯದಿದ್ದರೆ, ಖಂಡಿತ ನಾವು ನಿಮ್ಮನ್ನು ಅವರ ಮೇಲೆ ಹೇರುವೆವು ಮತ್ತು ಅವರು ಇಲ್ಲಿ (ಮದೀನಾದಲ್ಲಿ) ನಿಮ್ಮ ಪಕ್ಕದಲ್ಲಿ ಬಹುಕಾಲ ಉಳಿಯಲಾರರು

[60] ಅವರು ಶಾಪಗ್ರಸ್ತರಾಗಿರುವರು. ಅವರು ಸಿಕ್ಕಿದಲ್ಲೆಲ್ಲಾ ಬಂಧಿಸಲ್ಪಡುವರು ಹಾಗೂ ಬಹಳ ಕ್ರೂರವಾಗಿ ಕೊಲ್ಲಲ್ಪಡುವರು

[61] ಹಿಂದಿನವರ ವಿಷಯದಲ್ಲೂ ಇದುವೇ ಅಲ್ಲಾಹನ ನಿಯಮವಾಗಿತ್ತು. ನೀವು ಅಲ್ಲಾಹನ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಕಾಣಲಾರಿರಿ

[62] (ದೂತರೇ,) ಜನರು ನಿಮ್ಮೊಡನೆ (ಲೋಕಾಂತ್ಯದ) ಆ ಕ್ಷಣದ ಕುರಿತು ವಿಚಾರಿಸುತ್ತಾರೆ. ಹೇಳಿರಿ; ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ. ನಿಮಗೇನು ಗೊತ್ತು? ಆ ಕ್ಷಣವು ತೀರಾ ಹತ್ತಿರವೇ ಇರಬಹುದು

[63] ಅಲ್ಲಾಹನು ಧಿಕ್ಕಾರಿಗಳನ್ನು ಶಪಿಸಿರುವನು ಮತ್ತು ಅವರಿಗಾಗಿ ಭುಗಿಲೇಳುವ ಬೆಂಕಿಯನ್ನು ಸಜ್ಜುಗೊಳಿಸಿಟ್ಟಿರುವನು

[64] ಅವರು ಅದರಲ್ಲಿ ಸದಾಕಾಲ ಇರುವರು. ಅವರಿಗೆ ಪೋಷಕನಾಗಲಿ, ಸಹಾಯಕನಾಗಲಿ ಸಿಗಲಾರನು

[65] ಅವರ (ಧಿಕ್ಕಾರಿಗಳ) ಮುಖಗಳನ್ನು ನರಕದ ಬೆಂಕಿಯಲ್ಲಿ ತಿರುಚಿ ಮಗುಚಿ, ಸುಡಲಾಗುವ ಆ ದಿನ ಅವರು, ‘‘ಅಯ್ಯೋ, ನಾವು ಅಲ್ಲಾಹನ ಹಾಗೂ ಅವನ ದೂತರ ಆಜ್ಞೆಗಳನ್ನು ಪಾಲಿಸಿದ್ದರೆ ಎಷ್ಟು ಚೆನ್ನಾಗಿತ್ತು’’ ಎನ್ನುವರು

[66] ಮತ್ತು ಅವರು ಹೇಳುವರು; ‘‘ನಮ್ಮೊಡೆಯಾ, ನಾವು ನಮ್ಮ ನಾಯಕರು ಮತ್ತು ನಮ್ಮ ದೊಡ್ಡವರ ಆಜ್ಞೆಗಳನ್ನು ಪಾಲಿಸಿದೆವು ಮತ್ತು ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು’’

[67] ‘‘ನಮ್ಮೊಡೆಯಾ, ನೀನು ಅವರಿಗೆ ದುಪ್ಪಟ್ಟು ಶಿಕ್ಷೆಯನ್ನು ನೀಡು ಮತ್ತು ಅವರನ್ನು ಮಹಾಶಾಪಕ್ಕೆ ಗುರಿಪಡಿಸು’’

[68] ವಿಶ್ವಾಸಿಗಳೇ, ಮೂಸಾರನ್ನು ಪೀಡಿಸಿದವರಂತೆ ನೀವಾಗಬೇಡಿ. ಅವರ ಆರೋಪಗಳಿಂದ ಅಲ್ಲಾಹನು, ಅವರನ್ನು (ಮೂಸಾರನ್ನು) ಮುಕ್ತಗೊಳಿಸಿದನು. ಅಲ್ಲಾಹನ ದೃಷ್ಟಿಯಲ್ಲಿ ಅವರು (ಮೂಸಾ) ಬಹಳ ಗೌರವಾನ್ವಿತರಾಗಿದ್ದರು

[69] ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ ಮತ್ತು ಸದಾ ನೇರವಾದ ಮಾತನ್ನೇ ಆಡಿರಿ

[70] ಅಲ್ಲಾಹನು ನಿಮ್ಮ ಕರ್ಮಗಳನ್ನು ಸುಧಾರಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನ ಹಾಗೂ ಅವನ ದೂತರ ಆಜ್ಞೆಗಳನ್ನು ಪಾಲಿಸಿದವನು ನಿಜಕ್ಕೂ ಮಹಾ ವಿಜಯವನ್ನು ಸಾಧಿಸಿದನು

[71] ನಾವು ಈ ಹೊಣೆಯನ್ನು ಆಕಾಶಗಳ, ಭೂಮಿಯ ಹಾಗೂ ಪರ್ವತಗಳ ಮುಂದಿಟ್ಟೆವು. ಅವುಗಳು ಈ ಹೊಣೆ ಹೊರುವುದಕ್ಕೆ ಹಿಂಜರಿದವು ಮತ್ತು ಇದಕ್ಕೆ ಅಂಜಿದವು. ಕೊನೆಗೆ ಮನುಷ್ಯನು ಈ ಹೊಣೆಯನ್ನು ಹೊತ್ತನು. ನಿಜಕ್ಕೂ ಅವನು ಅಕ್ರಮಿ ಹಾಗೂ ಅಜ್ಞಾನಿಯಾಗಿದ್ದಾನೆ

[72] ಅಲ್ಲಾಹನು ಕಪಟ ಪುರುಷರು ಹಾಗೂ ಸ್ತ್ರೀಯರನ್ನು ಮತ್ತು ಬಹುದೇವಾರಾಧಕ ಪುರುಷರು ಹಾಗೂ ಸ್ತ್ರೀಯರನ್ನು ಶಿಕ್ಷಿಸುವನು ಮತ್ತು ವಿಶ್ವಾಸಿ ಪುರುಷರು ಹಾಗೂ ವಿಶ್ವಾಸಿ ಸ್ತ್ರೀಯರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನಂತು ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[73] ಹೊಗಳಿಕೆಗಳೆಲ್ಲಾ ಅಲ್ಲಾಹನಿಗೆ. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅವನಿಗೇ ಸೇರಿವೆ. ಪರಲೋಕದಲ್ಲೂ ಎಲ್ಲ ಪ್ರಶಂಸೆಗಳು ಅವನಿಗೇ ಸಲ್ಲುವವು ಮತ್ತು ಅವನು ಅತ್ಯಂತ ಯುಕ್ತಿವಂತ ಹಾಗೂ ಅರಿವು ಉಳ್ಳವನಾಗಿದ್ದಾನೆ

ಶೆಬಾ

Surah 34

[1] ಏನೆಲ್ಲಾ ಭೂಮಿಯೊಳಗೆ ಹೋಗುತ್ತದೆ ಮತ್ತು ಏನೆಲ್ಲಾ ಅದರಿಂದ ಹೊರಬರುತ್ತದೆ ಎಂಬುದನ್ನು ಹಾಗೂ ಆಕಾಶದಿಂದ ಏನೆಲ್ಲಾ ಇಳಿಯುತ್ತದೆ ಹಾಗೂ ಏನೆಲ್ಲಾ ಅದರೊಳಕ್ಕೆ ಏರಿ ಹೋಗುತ್ತದೆ ಎಂಬುದನ್ನು ಅವನು ಚೆನ್ನಾಗಿ ಬಲ್ಲನು ಮತ್ತು ಅವನು ಕರುಣಾಳುವೂ ಕ್ಷಮಾಶೀಲನೂ ಆಗಿರುವನು

[2] ಧಿಕ್ಕಾರಿಗಳು, ‘‘ನಮ್ಮ ಪಾಲಿಗೆ ಲೋಕಾಂತ್ಯದ ಕ್ಷಣ ಎಂದೂ ಬರಲಾರದು‘‘ ಎನ್ನುತ್ತಾರೆ. ನೀವು ಹೇಳಿರಿ; ಯಾಕಿಲ್ಲ ? ನನ್ನೊಡೆಯನಾಣೆ, ಅದು ಖಂಡಿತ ನಿಮ್ಮ ಮೇಲೆ ಬಂದೆರಗುವುದು. ಅವನು ಎಲ್ಲ ಗುಪ್ತ ವಿಷಯಗಳನ್ನೂ ಬಲ್ಲವನು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಇರುವ ಒಂದು ಅಣು ಗಾತ್ರದ ವಸ್ತು ಕೂಡಾ ಅವನಿಂದ ಮರೆಯಾಗಿರುವುದಿಲ್ಲ. ಇನ್ನು, ಅದಕ್ಕಿಂತ ಸಣ್ಣ ಅಥವಾ ದೊಡ್ಡ ಯಾವ ವಿಷಯವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ

[3] ನಂಬಿದವರಿಗೆ ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಅವನು (ಅಲ್ಲಾಹನು) ಪ್ರತಿಫಲ ನೀಡುವನು. ಅವರಿಗೆ ಕ್ಷಮೆ ಮತ್ತು ಗೌರವಾನ್ವಿತ ಸಂಪನ್ನತೆ ಪ್ರಾಪ್ತವಾಗಲಿದೆ

[4] ನಮ್ಮ ವಚನಗಳನ್ನು ಕೀಳಾಗಿ ಕಾಣಿಸಲು ಹೆಣಗುತ್ತಿರುವವರಿಗೆ ತೀರಾ ಕಠೋರ ಶಿಕ್ಷೆ ಸಿಗಲಿದೆ

[5] ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿಕೊಡಲಾಗಿರುವ ಸಂದೇಶವೇ ಸತ್ಯ ಮತ್ತು ಅದು, ಆ ಪ್ರಬಲ ಪ್ರಶಂಸಾರ್ಹನ (ಅಲ್ಲಾಹನ) ಮಾರ್ಗದೆಡೆಗೆ ಮುನ್ನಡೆಸುತ್ತದೆ ಎಂಬುದನ್ನು ಜ್ಞಾನ ಪ್ರಾಪ್ತವಾಗಿರುವವರು ಕಾಣುತ್ತಿದ್ದಾರೆ

[6] ಧಿಕ್ಕಾರಿಗಳು (ಗೇಲಿ ಮಾಡುತ್ತಾ) ಹೇಳುತ್ತಾರೆ; ‘‘ನಾವು ನಿಮಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಬೇಕೇ? ನೀವು ಸಂಪೂರ್ಣವಾಗಿ ಛಿದ್ರರಾದ ಬಳಿಕ ನಿಮ್ಮನ್ನು ಮತ್ತೆ ಹೊಸದಾಗಿ ಜೀವಂತಗೊಳಿಸಲಾಗುವುದು ಎಂದು ಅವನು ನಿಮ್ಮನ್ನು ಎಚ್ಚರಿಸುತ್ತಾನೆ’’

[7] ‘‘ಅವನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆ. ಅಥವಾ ಅವನಿಗೆ ಹುಚ್ಚು ಹಿಡಿದಿದೆ’’. ನಿಜವಾಗಿ, ಪರಲೋಕದಲ್ಲಿ ನಂಬಿಕೆ ಇಲ್ಲದವರು ಶಿಕ್ಷೆಗೆ ಗುರಿಯಾಗುವರು ಮತ್ತು ಅವರು ಸಂಪೂರ್ಣ ದಾರಿಗೆಟ್ಟಿರುವರು

[8] ಅವರೇನು, ಅವರ ಮುಂದೆಯೂ ಅವರ ಹಿಂದೆಯೂ ಇರುವ ಆಕಾಶವನ್ನು ಹಾಗೂ ಭೂಮಿಯನ್ನು ನೋಡುವುದಿಲ್ಲವೇ? ನಾವು ಬಯಸಿದರೆ ಅವರನ್ನು ಭೂಮಿಯೊಳಗೆ ಹೂತು ಬಿಡಬಲ್ಲೆವು ಅಥವಾ ಆಕಾಶದ ಒಂದು ತುಂಡನ್ನು ಅವರ ಮೇಲೆ ಬೀಳಿಸಬಲ್ಲೆವು. ಖಂಡಿತವಾಗಿಯೂ ಇದರಲ್ಲಿ, (ದೇವರೆಡೆಗೆ) ಒಲವು ತೋರುವ ಪ್ರತಿಯೊಬ್ಬ ದಾಸನಿಗೆ ಪಾಠವಿದೆ

[9] ನಾವು ದಾವೂದರಿಗೆ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಕರುಣಿಸಿದ್ದೆವು. ಪರ್ವತಗಳೇ, ಅವನ ಜೊತೆಗೂಡಿ ಕೀರ್ತನೆ ಮಾಡಿರಿ (ಎಂದು ಆದೇಶಿಸಲಾಗಿತ್ತು) ಮತ್ತು ಪಕ್ಷಿಗಳಿಗೂ (ಹಾಗೆಂದು ಆದೇಶಿಸಲಾಗಿತ್ತು) ಮತ್ತು ನಾವು ಉಕ್ಕನ್ನು ಅವರ ಪಾಲಿಗೆ ಮೃದುವಾಗಿಸಿದ್ದೆವು

[10] ವಿಶಾಲ ಕವಚಗಳನ್ನು ರಚಿಸಿರಿ ಹಾಗೂ ಕುಣಿಕೆಗಳನ್ನು ಸಂತುಲಿತವಾಗಿ ಜೋಡಿಸಿರಿ ಮತ್ತು ನೀವು ಸತ್ಕರ್ಮಗಳನ್ನು ಮಾಡಿರಿ. ನೀವು ಮಾಡುವ ಎಲ್ಲವನ್ನೂ ನಾನು ಖಂಡಿತ ನೋಡುತ್ತಿರುತ್ತೇನೆ (ಎಂದು ಅವರೊಡನೆ ಹೇಳಲಾಗಿತ್ತು)

[11] ಹಾಗೆಯೇ, ನಾವು ಸುಲೈಮಾನರ ಪಾಲಿಗೆ ಗಾಳಿಯನ್ನು ವಿಧೇಯಗೊಳಿಸಿದೆವು – ಅದರ ಬೆಳಗ್ಗಿನ ಗುರಿ ಒಂದು ತಿಂಗಳಷ್ಟು ದೂರ ಮತ್ತು ಸಂಜೆಯ ಗುರಿ ಒಂದು ತಿಂಗಳಷ್ಟು ದೂರವಿತ್ತು. ನಾವು ಅವರಿಗಾಗಿ ತಾಮ್ರದ ಧಾರೆಯನ್ನು ಹರಿಸಿದೆವು ಮತ್ತು ಕೆಲವು ಜಿನ್ನ್‌ಗಳು ಅವರ ಒಡೆಯನ (ಅಲ್ಲಾಹನ) ಆದೇಶದಂತೆ ಅವರೆದುರು ಕೆಲಸ ಮಾಡುತ್ತಿದ್ದವು. ಅವರ ಪೈಕಿ ನಮ್ಮ ಆದೇಶವನ್ನು ಮೀರಿ ನಡೆದವರಿಗೆ ನಾವು ನರಕಾಗ್ನಿಯ ರುಚಿಯನ್ನು ಉಣಿಸುವೆವು

[12] ಅವು (ಆ ಜಿನ್ನ್‌ಗಳು) ಅವರು (ಸುಲೈಮಾನರು) ಬಯಸಿದಂತೆ ಅವರಿಗಾಗಿ, ಬೃಹತ್ ಕಟ್ಟಡಗಳನ್ನೂ ಪ್ರತಿಮೆಗಳನ್ನೂ, ಕೊಳಗಳಂತಹ ಹರಿವಾಣಗಳನ್ನೂ ಸ್ಥಿರವಾಗಿರುವ ಬೃಹತ್ ಪಾಕಪಾತ್ರೆಗಳನ್ನೂ ನಿರ್ಮಿಸಿ ಕೊಡುತ್ತಿದ್ದವು. ದಾವೂದರ ಸಂತತಿಗಳೇ, ನೀವು ಕೃತಜ್ಞರಾಗಿ, ಸತ್ಕರ್ಮಗಳನ್ನು ಮಾಡಿರಿ. ನನ್ನ ದಾಸರಲ್ಲಿ ಕೆಲವರು ಮಾತ್ರ ಕೃತಜ್ಞರು

[13] ಕೊನೆಗೆ ನಾವು ಅವರಿಗೆ (ಸುಲೈಮಾನರಿಗೆ) ಮರಣವನ್ನು ವಿಧಿಸಿದೆವು. ಗೆದ್ದಲುಗಳು ಅವರ ದಂಡವನ್ನು ತಿಂದು ಬಿಡುವವರೆಗೂ ಅವುಗಳಿಗೆ (ಜಿನ್ನ್‌ಗಳಿಗೆ), ಅವರ ಮರಣದ ಕುರಿತು ತಿಳಿದೇ ಇರಲಿಲ್ಲ. ಅದು ಬಿದ್ದು ಬಿಟ್ಟಾಗ, ಅವುಗಳಿಗೆ ವಿಷಯ ತಿಳಿಯಿತು. ಒಂದು ವೇಳೆ ಅವುಗಳಿಗೆ ಅಜ್ಞಾತ ವಿಷಯಗಳ ಜ್ಞಾನ ಇದ್ದಿದ್ದರೆ, ಅವು ಆ ರೀತಿ ಅಪಮಾನಕಾರಿ ಶಿಕ್ಷೆಗೆ ತುತ್ತಾಗುತ್ತಿರಲಿಲ್ಲ

[14] ಸಬಾ ಜನಾಂಗದವರಿಗಾಗಿ ಅವರ ನಾಡಿನಲ್ಲೇ ಒಂದು ಪಾಠವಿತ್ತು. ಅಲ್ಲಿ ಎರಡು ತೋಟಗಳಿದ್ದುವು. ಒಂದು ಬಲಭಾಗದಲ್ಲಿ ಮತ್ತು ಇನ್ನೊಂದು ಎಡಭಾಗದಲ್ಲಿ. ನಿಮ್ಮ ಒಡೆಯನ ಕಡೆಯಿಂದ ದಯಪಾಲಿಸಲಾಗಿರುವ ಆಹಾರವನ್ನು ಉಣ್ಣಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಪಾವನ ನಗರ ಮತ್ತು ಕ್ಷಮಾಶೀಲ ಒಡೆಯ

[15] ಆದರೆ ಅವರು ಕಡೆಗಣಿಸಿದರು. ಆಗ ನಾವು ಅವರ ಮೇಲೆ ಪ್ರವಾಹವನ್ನು ಎರಗಿಸಿದೆವು ಮತ್ತು ನಾವು ಅವರ ಎರಡೂ ತೋಟಗಳನ್ನು ಕಹಿಯಾದ ಫಲಗಳು, ಮುಳ್ಳು ಗಿಡಗಳು ಮತ್ತು ತೀರಾ ಕಡಿಮೆ ಫಲ ನೀಡುವ ಕೆಲವು ಮರಗಳು ಮಾತ್ರ ಇರುವ ತೋಟಗಳಾಗಿ ಮಾರ್ಪಡಿಸಿ ಬಿಟ್ಟೆವು

[16] ಅದು ಅವರ ಕೃತಘ್ನತೆಯ ಕಾರಣ ನಾವು ಅವರಿಗೆ ನೀಡಿದ ಶಿಕ್ಷೆ. ನಾವೇನು ಕೃತಘ್ನರ ಹೊತರು ಬೇರೆ ಯಾರನ್ನಾದರೂ (ಈರೀತಿ) ಶಿಕ್ಷಿಸುತ್ತೇವೆಯೇ

[17] ಮುಂದೆ ನಾವು, ಅವರ ಹಾಗೂ ನಾವು ಸಮೃದ್ಧಗೊಳಿಸಿರುವ ನಾಡುಗಳ ನಡುವೆ, ಎದ್ದು ಕಾಣುವಂತಹ (ಸುಂದರ, ಸಂಪನ್ನ) ನಾಡುಗಳನ್ನು ನೆಲೆಸಿದೆವು ಮತ್ತು ಅವುಗಳನ್ನು ಸಂಚಾರದ ಹಾದಿಯಾಗಿಸಿದೆವು. (ಇಲ್ಲಿ) ನೀವು ಇರುಳಲ್ಲೂ ಹಗಲಲ್ಲೂ ನಿರ್ಭಯವಾಗಿ ಸಂಚರಿಸಿರಿ (ಎಂದು ಅವರಿಗೆ ಸೂಚಿಸಲಾಗಿತ್ತು)

[18] ಆದರೆ ಅವರು, ‘‘ನಮ್ಮೊಡೆಯಾ, ನಮ್ಮ ಪ್ರಯಾಣದ ಗುರಿಗಳ ನಡುವಣ ಅಂತರವನ್ನು ಹೆಚ್ಚಿಸು’’ ಎಂದು ಪ್ರಾರ್ಥಿಸಿದರು. ಹೀಗೆ ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿದರು. ಕೊನೆಗೆ ನಾವು ಅವರನ್ನು ಕಥೆಗಳಾಗಿಸಿ ಬಿಟ್ಟೆವು ಮತ್ತು ನಾವು ಅವರನ್ನು ಸಂಪೂರ್ಣ ವಿಚ್ಛಿದ್ರಗೊಳಿಸಿ ಬಿಟ್ಟೆವು. ಪ್ರತಿಯೊಬ್ಬ ಸಹನಶೀಲ, ಕೃತಜ್ಞನಿಗೆ ಇದರಲ್ಲಿ ಖಂಡಿತ ಪಾಠವಿದೆ

[19] ಶೈತಾನನು ಅವರ ಕುರಿತಂತೆ ತನ್ನ ನಿರೀಕ್ಷೆ ನಿಜವಾದುದನ್ನು ಕಂಡನು. ವಿಶ್ವಾಸಿಗಳ ಒಂದು ಗುಂಪಿನ ಹೊರತು ಉಳಿದೆಲ್ಲರೂ ಅವನನ್ನು ಹಿಂಬಾಲಿಸಿದರು

[20] ನಿಜವಾಗಿ ಅವನಿಗೆ (ಶೈತಾನನಿಗೆ) ಅವರ ಮೇಲೆ ನಿಯಂತ್ರಣವೇನೂ ಇರಲಿಲ್ಲ. ನಾವಂತು ಪರಲೋಕದಲ್ಲಿ ನಂಬಿಕೆ ಉಳ್ಳವರು ಯಾರು ಮತ್ತು ಆ ಕುರಿತು ಸಂದೇಹ ಉಳ್ಳವರು ಯಾರು ಎಂಬುದನ್ನು ಮಾತ್ರ ತಿಳಿಯ ಬಯಸಿದ್ದೆವು. ನಿಮ್ಮ ಒಡೆಯನೇ ಎಲ್ಲ ವಸ್ತುಗಳ ರಕ್ಷಕನು

[21] ಹೇಳಿರಿ; ಅಲ್ಲಾಹನ ಹೊರತು ನೀವು (ದೇವರೆಂದು) ನಂಬಿಕೊಂಡಿರುವವರನ್ನೆಲ್ಲಾ ಪ್ರಾರ್ಥಿಸಿ ನೋಡಿರಿ. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಒಂದು ಅಣುಗಾತ್ರದ ವಸ್ತುವಿಗೂ ಅವರು ಮಾಲಕರಲ್ಲ. ಅವೆರಡರಲ್ಲೂ ಅವರಿಗೆ ಯಾವ ಪಾಲೂ ಇಲ್ಲ ಮತ್ತು ಅವರಲ್ಲಿ ಯಾರೂ ಸಹಾಯಕರಲ್ಲ

[22] ಅವನು ಅನುಮತಿಸಿದವರ ಹೊರತು ಬೇರೆ ಯಾರ ಶಿಫಾರಸ್ಸೂ ಅವನ ಬಳಿ ಉಪಯುಕ್ತವಾಗದು. ಎಷ್ಟೆಂದರೆ, (ಮಲಕ್‌ಗಳು ಕೂಡಾ) ತಮ್ಮ ಮನದ ಆತಂಕವು ತೊಲಗಿದಾಗ, ‘‘ನಿಮ್ಮೊಡೆಯನು ಏನಂದನು?’’ ಎಂದು ಕೇಳುವರು. ಅವರು (ಇತರ ಮಲಕ್‌ಗಳು), ‘‘ಅವನು ಸತ್ಯವನ್ನೇ ಹೇಳಿರುವನು ಮತ್ತು ಅವನು ಶ್ರೇಷ್ಠನೂ ಉನ್ನತನೂ ಆಗಿರುವನು’’ ಎನ್ನುವರು

[23] ‘‘ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರವನ್ನು ಒದಗಿಸುವವನು ಯಾರು?’’ ಎಂದು ಕೇಳಿರಿ. ಮತ್ತು ಹೇಳಿರಿ: ‘‘ಅಲ್ಲಾಹನು. ಇನ್ನು, ಒಂದೋ ನಾವು ಮಾತ್ರ ಅಥವಾ ನೀವು ಮಾತ್ರ (ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ) ಸನ್ಮಾರ್ಗದಲ್ಲಿರುವರು ಅಥವಾ (ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ) ಸ್ಪಷ್ಟವಾಗಿ ದಾರಿಗೆಟ್ಟಿರುವರು’’

[24] ಹೇಳಿರಿ; ನಾವು ಮಾಡಿದ ಅಪರಾಧಗಳ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು ಮತ್ತು ನಿಮ್ಮ ಕರ್ಮಗಳ ಕುರಿತು ನಮ್ಮನ್ನು ವಿಚಾರಿಸಲಾಗದು

[25] ಹೇಳಿರಿ; ನಮ್ಮೊಡೆಯನು ನಮ್ಮನ್ನು ಒಂದೆಡೆ ಸೇರಿಸುವನು ಮತ್ತು ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಮಾಡುವನು. ಅವನು ಅರಿವುಳ್ಳ ತೀರ್ಪುಗಾರ ನಾಗಿದ್ದಾನೆ

[26] ಹೇಳಿರಿ; ನೀವು ಅವನ (ಅಲ್ಲಾಹನ) ಜೊತೆ ಸೇರಿಸಿ, ಅವನ ಪಾಲುದಾರರಾಗಿಸಿ ಬಿಟ್ಟವರನ್ನು ನನಗೆ ತೋರಿಸಿರಿ. ಇಲ್ಲ! (ಅವರು ಯಾರೂ ಅವನ ಪಾಲುದಾರರಲ್ಲ). ನಿಜವಾಗಿ, ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[27] (ದೂತರೇ,) ಖಂಡಿತವಾಗಿಯೂ ನಾವು ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ, ಸಂಪೂರ್ಣ ಮಾನವ ಕುಲದೆಡೆಗೆ ಕಳುಹಿಸಿರುವೆವು. ಆದರೆ ಮಾನವರಲ್ಲಿ ಹೆಚ್ಚಿನವರು ತಿಳಿದಿಲ್ಲ

[28] ಮತ್ತು ಅವರು, ‘‘ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನಿತ ದಿನವು ಬರುವುದು ಯಾವಾಗ?’’ ಎಂದು ಕೇಳುತ್ತಾರೆ

[29] ಹೇಳಿರಿ; ನಿಮಗೆ ವಾಗ್ದಾನ ಮಾಡಲಾಗಿರುವ ದಿನವು ನಿಶ್ಚಿತವಾಗಿದೆ. ಅದನ್ನು ಒಂದು ಕ್ಷಣದ ಮಟ್ಟಿಗೂ ಮುಂದೂಡಲು ಅಥವಾ ಹಿಂದೂಡಲು ನಿಮಗೆ ಸಾಧ್ಯವಿಲ್ಲ

[30] ಮತ್ತು ಧಿಕ್ಕಾರಿಗಳು, ನಾವು ಈ ಕುರ್‌ಆನನ್ನಾಗಲಿ ಇದಕ್ಕಿಂತ ಹಿಂದಿನ ಗ್ರಂಥಗಳನ್ನಾಗಲಿ ನಂಬುವುದಿಲ್ಲ ಎನ್ನುತ್ತಾರೆ. ಆ ಅಕ್ರಮಿಗಳನ್ನು ಅವರ ಒಡೆಯನ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! (ಅಂದು) ಅವರಲ್ಲಿ ಪ್ರತಿಯೊಬ್ಬನೂ ತನ್ನ ಮಾತನ್ನು ಇನ್ನೊಬ್ಬರ ಮೇಲೆ ಆರೋಪಿಸುವನು. ಅಂದು ಮರ್ದಿತರು ಅಹಂಕಾರಿಗಳೊಡನೆ, ‘‘ನೀವು ಇಲ್ಲದೆ ಇದ್ದಿದ್ದರೆ ನಾವು ವಿಶ್ವಾಸಿಗಳಾಗಿರುತ್ತಿದ್ದೆವು’’ ಎನ್ನುವರು

[31] ಆಗ ಅಹಂಕಾರಿಗಳು ಮರ್ದಿತರೊಡನೆ, ‘‘ನಿಮ್ಮ ಬಳಿಗೆ ಮಾರ್ಗದರ್ಶನವು ಬಂದಿದ್ದಾಗ, ನಾವೇನು ನಿಮ್ಮನ್ನು ಅದರಿಂದ ತಡೆದು ನಿಲ್ಲಿಸಿದ್ದೆವೇ? ನಿಜವಾಗಿ, ನೀವೇ ಅಪರಾಧಿಗಳಾಗಿದ್ದಿರಿ’’ ಎನ್ನುವರು

[32] ಮತ್ತು (ಇದಕ್ಕುತ್ತರವಾಗಿ) ಮರ್ದಿತರು, ಅಹಂಕಾರಿಗಳೊಡನೆ, ‘‘(ನೀವು) ಇರುಳಲ್ಲೂ ಹಗಲಲ್ಲೂ ಸಂಚುಗಳನ್ನು ಹೂಡುತ್ತಾ, ನಾವು ಅಲ್ಲಾಹನನ್ನು ಧಿಕ್ಕರಿಸಬೇಕೆಂದೂ ಇತರರನ್ನು ಅವನ ಜೊತೆ ಪಾಲುಗೊಳಿಸಬೇಕೆಂದೂ ನಮಗೆ ಆದೇಶಿಸುತ್ತಿದ್ದಿರಿ’’ ಎನ್ನುವರು. ಶಿಕ್ಷೆಯನ್ನು ಕಂಡಾಗ ಅವರೆಲ್ಲಾ ತಮ್ಮ ಪರಿತಾಪವನ್ನು ಬಚ್ಚಿಡುವರು ಮತ್ತು ನಾವು, ಧಿಕ್ಕಾರಿಗಳ ಕೊರಳಿಗೆ ಸರಪಣಿಗಳನ್ನು ಹಾಕಿ ಬಿಡುವೆವು. ಅವರಿಗೆ ಅವರ ಕರ್ಮಗಳ ಪ್ರತಿಫಲವಲ್ಲದೆ ಬೇರೇನಾದರೂ ಸಿಗಲುಂಟೇ

[33] ನಾವು ಎಚ್ಚರಿಸುವವರನ್ನು ಕಳಿಸಿರುವ ಪ್ರತಿಯೊಂದು ನಾಡಿನಲ್ಲೂ ಅಲ್ಲಿನ ಶ್ರೀಮಂತರು, ‘‘ನಿಮ್ಮ ಜೊತೆ ಕಳಿಸಲಾಗಿರುವುದನ್ನು (ಸತ್ಯ ಸಂದೇಶವನ್ನು) ನಾವು ತಿರಸ್ಕರಿಸುತ್ತೇವೆ’’ ಎಂದೇ ಹೇಳಿರುವರು

[34] ಹಾಗೆಯೇ ಅವರು, ‘‘ನಾವು (ನಿಮಗಿಂತ) ಹೆಚ್ಚಿನ ಸಂಪತ್ತು ಹಾಗೂ ಸಂತಾನ ಉಳ್ಳವರು. ನಾವು ಖಂಡಿತ ಶಿಕ್ಷೆಗೆ ಗುರಿಯಾಗಲಾರೆವು’’ ಎಂದಿರುವರು

[35] ಹೇಳಿರಿ; ನನ್ನೊಡೆಯನು ತಾನಿಚ್ಛಿಸಿದವರಿಗೆ ಆದಾಯವನ್ನು ವಿಸ್ತಾರಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತ ಗೊಳಿಸಿ ಬಿಡುತ್ತಾನೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿದಿಲ್ಲ

[36] ನಮ್ಮ ದೃಷ್ಟಿಯಲ್ಲಿ ನಿಮ್ಮ ಸಂಪತ್ತಾಗಲಿ ನಿಮ್ಮ ಸಂತಾನಗಳಾಗಲಿ ಸ್ಥಾನಮಾನದಲ್ಲಿ ನಿಮ್ಮನ್ನು ನಮಗೆ ಹತ್ತಿರಗೊಳಿಸಿ ಬಿಡುವುದಿಲ್ಲ. ವಿಶ್ವಾಸಿಗಳು ಮತ್ತು ಸತ್ಕಾರ್ಯಗಳನ್ನು ಮಾಡಿದವರು ಮಾತ್ರ (ನಮಗೆ ಹತ್ತಿರವಿರುತ್ತಾರೆ). ಅವರಿಗೆ, ಅವರು ಮಾಡಿದ್ದ ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲ ಸಿಗಲಿದೆ ಮತ್ತು ಅವರು (ಸ್ವರ್ಗದಲ್ಲಿ) ಮೇಲಂತಸ್ತುಗಳಲ್ಲಿ ನೆಮ್ಮದಿಯಾಗಿರುವರು

[37] ನಮ್ಮ ವಚನಗಳನ್ನು ಸೋಲಿಸಲು ಶ್ರಮಿಸುವವರೇ ಶಿಕ್ಷೆಗೆ ತುತ್ತಾಗುವವರಾಗಿದ್ದಾರೆ

[38] ಹೇಳಿರಿ; ನನ್ನೊಡೆಯನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಆದಾಯವನ್ನು ವಿಸ್ತಾರಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತ ಗೊಳಿಸಿ ಬಿಡುತ್ತಾನೆ. ನೀವು ಸತ್ಕಾರ್ಯದಲ್ಲಿ ಮಾಡುವ ಪ್ರತಿಯೊಂದು ಖರ್ಚಿಗೂ ಅವನು ಪ್ರತಿಫಲ ನೀಡುವನು. ಅವನು ಅತ್ಯುತ್ತಮ ಅನ್ನದಾತನಾಗಿದ್ದಾನೆ

[39] ಒಂದು ದಿನ, ಅವನು ಅವರೆಲ್ಲರನ್ನೂ ಒಂದೆಡೆ ಸೇರಿಸುವನು ಮತ್ತು ‘‘ಅವರು ಆರಾಧಿಸುತ್ತಿದ್ದುದು ನಿಮ್ಮನ್ನೇ?’’ ಎಂದು ಮಲಕ್‌ಗಳೊಡನೆ ಕೇಳುವನು

[40] ಅವರು ಹೇಳುವರು; ‘‘ನೀನು ಪಾವನನು ಮತ್ತು ನಮ್ಮ ಪೋಷಕನು ನೀನೇ ಹೊರತು, ಅವರೇನಲ್ಲ. ನಿಜವಾಗಿ ಅವರು ಜಿನ್ನ್‌ಗಳನ್ನು ಪೂಜಿಸುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಅವುಗಳನ್ನೇ ನಂಬಿಕೊಂಡಿದ್ದರು’’

[41] ಹೀಗೆ, ಇಂದು ನಿಮ್ಮಲ್ಲಿ ಯಾರಿಗೂ ಪರಸ್ಪರರಿಗೆ ಯಾವುದೇ ಲಾಭವನ್ನಾಗಲಿ ಹಾನಿಯನ್ನಾಗಲಿ ಮಾಡುವ ಸಾಮರ್ಥ್ಯವಿಲ್ಲ. ಅಕ್ರಮ ವೆಸಗಿದವರೊಡನೆ ನಾವು, ‘‘ನೀವು ಧಿಕ್ಕರಿಸಿದ್ದರ ಫಲವಾಗಿ ಇಂದು ಬೆಂಕಿಯ ಶಿಕ್ಷೆಯನ್ನು ಸವಿಯಿರಿ’’ ಎನ್ನುವೆವು

[42] ಅವರಿಗೆ, ಬಹಳ ಸ್ಪಷ್ಟವಾಗಿರುವ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು, ‘‘ಈ ವ್ಯಕ್ತಿ ನಿಮ್ಮನ್ನು, ನಿಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ತಡೆದು ದೂರವಿಡಲು ಬಯಸುತ್ತಾನೆ’’ ಎನ್ನುತ್ತಾರೆ. ಮತ್ತು ಅವರು ‘‘ಇದು ಕೇವಲ ಕಟ್ಟುಕತೆಯಲ್ಲದೆ ಬೇರೇನೂ ಅಲ್ಲ’’ ಎನ್ನುತ್ತಾರೆ. ಇನ್ನು ಸತ್ಯವು ತಮ್ಮ ಬಳಿಗೆ ಬಂದಾಗ, ಧಿಕ್ಕಾರಿಗಳು ಅದರ ಕುರಿತು ‘‘ಇದು ಸ್ಪಷ್ಟವಾದ ಇಂದ್ರಜಾಲವೇ ಹೊರತು ಬೇರೇನೂ ಅಲ್ಲ’’ ಎನ್ನುತ್ತಾರೆ

[43] (ದೂತರೇ,) ನಾವು ಅವರಿಗೆ, ಅವರು ಓದುವಂತಹ ಯಾವುದೇ ಗ್ರಂಥವನ್ನು ನೀಡಿಲ್ಲ ಮತ್ತು ನಿಮಗಿಂತ ಮುಂಚೆ ಅವರೆಡೆಗೆ ಯಾವುದೇ ಎಚ್ಚರಿಸುವವನನ್ನೂ ಕಳುಹಿಸಿಲ್ಲ

[44] ಇವರ ಹಿಂದಿನವರೂ ಧಿಕ್ಕರಿಸಿದ್ದರು ಮತ್ತು ಅವರಿಗೆ ನಾವು ನೀಡಿದ್ದಕ್ಕೆ ಹೋಲಿಸಿದರೆ ಇವರು ಅದರ ಹತ್ತರಲ್ಲೊಂದಂಶವನ್ನೂ ಪಡೆದಿಲ್ಲ. ಅವರು ನನ್ನ ದೂತರನ್ನು ತಿರಸ್ಕರಿಸಿದರು. ಕೊನೆಗೆ, ಹೇಗಿತ್ತು ನನ್ನ ಶಿಕ್ಷೆ

[45] (ದೂತರೇ,) ಹೇಳಿರಿ; ನಾನು ನಿಮಗೆ ಕೇವಲ ಒಂದು ವಿಷಯವನ್ನು ಬೋಧಿಸುತ್ತೇನೆ. ನೀವು ಇಬ್ಬಿಬ್ಬರಾಗಿಯೂ ಒಬ್ಬೊಬ್ಬರಾಗಿಯೂ ಅಲ್ಲಾಹನಿಗಾಗಿ ನಿಂತು ಚಿಂತನೆ ನಡೆಸಿರಿ. ಈ ನಿಮ್ಮ ಸಂಗಾತಿಗೆ (ದೇವದೂತರಿಗೆ) ಹುಚ್ಚೇನೂ ಇಲ್ಲ. ಅವರು, ಘೋರ ಶಿಕ್ಷೆಯು ಬಂದು ಬಿಡುವ ಮುನ್ನ ನಿಮ್ಮನ್ನು ಎಚ್ಚರಿಸುವವರು ಮಾತ್ರ

[46] (ದೂತರೇ,) ಹೇಳಿರಿ; ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಅದು ನಿಮಗೇ ಇರಲಿ. ನನ್ನ ಪತ್ರಿಫಲವು ಕೇವಲ ಅಲ್ಲಾಹನ ಬಳಿ ಇದೆ. ಅವನು ಎಲ್ಲದಕ್ಕೂ ಸಾಕ್ಷಿಯಾಗಿದ್ದಾನೆ

[47] ಹೇಳಿರಿ; ಖಂಡಿತವಾಗಿಯೂ ನನ್ನ ಒಡೆಯನೇ ಸತ್ಯಕ್ಕೆ ಪ್ರಾಬಲ್ಯ ನೀಡುತ್ತಾನೆ. ಅವನು ಎಲ್ಲ ಗುಪ್ತ ವಿಷಯಗಳ ಜ್ಞಾನಿಯಾಗಿದ್ದಾನೆ

[48] ಹೇಳಿರಿ; ಸತ್ಯವು ಬಂದು ಬಿಟ್ಟಿದೆ. ಇನ್ನು ಮಿಥ್ಯವು ಏನನ್ನೂ ಆರಂಭಿಸಲಿಕ್ಕಾಗಲಿ, ಪುನರಾರಂಭಿಸಲಿಕ್ಕಾಗಲಿ ಅಶಕ್ತವಾಗಿದೆ

[49] ಹೇಳಿರಿ; ಒಂದು ವೇಳೆ ನಾನು ದಾರಿ ತಪ್ಪಿದ್ದರೆ, ನನ್ನ ದಾರಿಗೇಡಿತನದ ನಷ್ಟವನ್ನೂ ನಾನೇ ಅನುಭವಿಸುವೆನು. ಇನ್ನು ನಾನು ಸರಿದಾರಿಯಲ್ಲಿದ್ದರೆ, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗಿರುವ ದಿವ್ಯ ಸಂದೇಶವೇ ಅದಕ್ಕೆ ಕಾರಣವಾಗಿದೆ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ (ಎಲ್ಲರ) ಸಮೀಪ ಇರುವವನಾಗಿದ್ದಾನೆ

[50] ನೀವು ಆ ದೃಶ್ಯವನ್ನು ಕಾಣುವಂತಿರಬೇಕಿತ್ತು. ಅವರು (ಧಿಕ್ಕಾರಿಗಳು) ತೀರಾ ಭಯಗ್ರಸ್ತರಾಗಿರುವರು. ಆದರೆ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗದು. ಹತ್ತಿರದ ಒಂದು ಪ್ರದೇಶದಲ್ಲೇ ಅವರು ಸಿಕ್ಕಿ ಬೀಳುವರು

[51] ಆಗ ಅವರು, ನಾವು ಇದನ್ನು ನಂಬಿದೆವು ಎನ್ನುವರು. ಆದರೆ ಅಷ್ಟು ದೂರ ಹೋದ ಬಳಿಕ ಅವರಿಗೆಲ್ಲಿರುವುದು, ಆಶ್ರಯ

[52] ಈ ಹಿಂದೆ ಅವರು ಇದನ್ನು ಧಿಕ್ಕರಿಸಿದ್ದರು ಮತ್ತು ದೂರ ನಿಂತು ಗುಪ್ತವಾಗಿ (ಈ ಕುರಿತು) ಏನೇನೋ ಮಾತುಗಳನ್ನಾಡುತ್ತಿದ್ದರು

[53] ಗತಕಾಲದ ಅವರ ಕುಲಬಾಂಧವರಿಗೆ ಮಾಡಿದಂತೆ, ಇದೀಗ ಅವರ ಹಾಗೂ ಅವರ ಬಯಕೆಗಳ ನಡುವೆ ತೆರೆಯನ್ನು ಎಳೆದು ಬಿಡಲಾಗುವುದು. ಅವರು ಭಾರೀ ಸಂಶಯದಲ್ಲಿದ್ದರು

[54] ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ. ಆಕಾಶಗಳನ್ನು ಹಾಗೂ ಭೂಮಿಯನ್ನು ನಿರ್ಮಿಸಿದವನು (ಮತ್ತು) ತಲಾ ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳಿರುವ ಮಲಕ್‌ಗಳನ್ನು ದೂತರಾಗಿ ಕಳಿಸಿದವನು ಅವನೇ. ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಛಿಸಿದ್ದನ್ನು ಹೆಚ್ಚಿಸುತ್ತಾನೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ

ಸೃಷ್ಟಿಕರ್ತ

Surah 35

[1] ಅಲ್ಲಾಹನು ಮಾನವರ ಪಾಲಿಗೆ ತೆರೆದುಕೊಟ್ಟ ಅನುಗ್ರಹವನ್ನು ತಡೆಯಬಲ್ಲವರು ಯಾರೂ ಇಲ್ಲ. ಇನ್ನು, ಅವನು ಏನನ್ನಾದರೂ ತಡೆದಿಟ್ಟರೆ, ಅದನ್ನು ಕೊಡಿಸಬಲ್ಲವರುಯಾರೂ ಇಲ್ಲ. ಮತ್ತು ಅವನು, ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ

[2] ಮಾನವರೇ, ಅಲ್ಲಾಹನು ನಿಮಗೆ ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ನಿಮಗೇನು, ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತನಿದ್ದಾನೆಯೇ? ಅವನು ನಿಮಗೆ ಆಕಾಶಗಳಿಂದಲೂ ಭೂಮಿಯಿಂದಲೂ ಆಹಾರವನ್ನು ಒದಗಿಸುತ್ತಾನೆ. ಅವನ ಹೊರತು ಪೂಜಾರ್ಹರು ಬೇರಿಲ್ಲ. ಹೀಗಿರುತ್ತಾ, ನೀವು ಅದೆಲ್ಲಿ ಅಲೆಯುತ್ತಿರುವಿರಿ

[3] (ದೂತರೇ,) ಅವರು ನಿಮ್ಮನ್ನು ತಿರಸ್ಕರಿಸುತ್ತಿದ್ದರೆ (ನಿಮಗೆ ತಿಳಿದಿರಲಿ), ನಿಮಗಿಂತ ಹಿಂದಿನ ದೂತರುಗಳನ್ನೂ ತಿರಸ್ಕರಿಸಲಾಗಿತ್ತು. ಕೊನೆಗೆ, ಎಲ್ಲ ವಿಷಯಗಳೂ (ತೀರ್ಪಿಗಾಗಿ) ಅಲ್ಲಾಹನ ಬಳಿಗೇ ಮರಳಲಿವೆ

[4] ಮಾನವರೇ, ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಇನ್ನು, ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸದಿರಲಿ. ಹಾಗೆಯೇ, ವಂಚಿಸುವವನು ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ

[5] ಶೈತಾನನು ಖಂಡಿತ ನಿಮ್ಮ ಶತ್ರುವಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಶತ್ರುವೆಂದೇ ಪರಿಗಣಿಸಿರಿ. ತನ್ನ ಪಗಂಡದವರೆಲ್ಲಾ ನರಕವಾಸಿಗಳಾಗಿ ಬಿಡಲೆಂದು ಅವನು ಅವರನ್ನು (ಅದರೆಡೆಗೆ) ಕರೆಯುತ್ತಲೇ ಇರುತ್ತಾನೆ

[6] ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ. ಇನ್ನು, ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡಿದವರಿಗೆ ಕ್ಷಮೆ ಹಾಗೂ ದೊಡ್ಡ ಪ್ರತಿಫಲವಿದೆ

[7] ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಚಿಸಿದವರಿಗೆ ಸರಿದಾರಿಯನ್ನು ತೋರಿಸುತ್ತಾನೆ. ನೀವು ಅವರ (ಧಿಕ್ಕಾರಿಗಳ) ಕುರಿತು ನೊಂದುಕೊಳ್ಳಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು

[8] ಅಲ್ಲಾಹನೇ ಮಾರುತಗಳನ್ನು ಕಳಿಸುತ್ತಾನೆ. ಅವು ಮೋಡಗಳನ್ನು ಹೊತ್ತು ಸಾಗುತ್ತವೆ. ಆ ಬಳಿಕ ನಾವು ಅದನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಹಾಗೂ ಭೂಮಿಯನ್ನು ಅದರ ಮರಣಾನಂತರ ಮತ್ತೆ ಜೀವಂತಗೊಳಿಸುತ್ತೇವೆ ಹೀಗೆಯೇ ಇರುತ್ತದೆ, (ಮರಣಾನಂತರದ) ಪುನರುಜ್ಜೀವನ

[9] ಗೌರವ ಬಯಸುವವನು (ತಿಳಿದಿರಲಿ), ಗೌರವವೆಲ್ಲವೂ ಅಲ್ಲಾಹನಿಗೇ ಸೇರಿದೆ. ಶುದ್ಧ ವಚನವು ಅವನೆಡೆಗೆ ಏರಿ ಹೋಗುತ್ತದೆ ಮತ್ತು ಸತ್ಕಾರ್ಯವು ಅದನ್ನು ಮೇಲೇರಿಸುತ್ತದೆ. ದುಷ್ಟ ಕೃತ್ಯಗಳಿಗಾಗಿ ಸಂಚು ಹೂಡುತ್ತಿರುವವರಿಗೆ ತೀವ್ರವಾದ ಶಿಕ್ಷೆ ಕಾದಿದೆ ಮತ್ತು ಅವರ ಸಂಚುಗಳೆಲ್ಲಾ ನಾಶವಾಗಲಿವೆ

[10] ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು ಜೊತೆಗಳಾಗಿ ಮಾಡಿದನು. ಅವನ ಅರಿವಿನಲ್ಲಿಲ್ಲದೆ ಯಾವ ಹೆಣ್ಣೂ ಗರ್ಭ ಧರಿಸುವುದಿಲ್ಲ, ಹೆರುವುದೂ ಇಲ್ಲ. ಒಬ್ಬ ವ್ಯಕ್ತಿಯ ವಯಸ್ಸಿನಲ್ಲಿ ಆಗುವ ಹೆಚ್ಚಳವಿರಲಿ, ಅವನ ವಯಸ್ಸಿನಲ್ಲಾಗುವ ಕಡಿತವಿರಲಿ, ಎಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿದೆ. ಇದೆಲ್ಲವೂ ಅಲ್ಲಾಹನ ಪಾಲಿಗೆ ಖಂಡಿತ ಸುಲಭವಾಗಿದೆ

[11] ಎರಡು ಕಡಲುಗಳು ಒಂದೇ ತೆರನಾಗಿಲ್ಲ. ಒಂದು ಸಿಹಿಯಾಗಿದ್ದು ದಾಹ ತಣಿಸುವಂತಿದೆ ಮತ್ತು ಕುಡಿಯಲು ಹಿತಕರವಾಗಿದೆ. ಇನ್ನೊಂದು ಖಾರವಾಗಿ ಕಹಿಯಾಗಿದೆ. ಆದರೆ ನೀವು ಅವೆರಡರಿಂದಲೂ (ವಿವಿಧ ಮೀನುಗಳ) ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವ (ಮುತ್ತಿನ) ಆಭರಣಗಳನ್ನು ಅವುಗಳಿಂದ ಹೊರತೆಗೆಯುತ್ತೀರಿ. ಮತ್ತು ನೀವು ಅವನ (ಅಲ್ಲಾಹನ) ಅನುಗ್ರಹಗಳನ್ನು ಅರಸುತ್ತಾ ಕೃತಜ್ಞತೆ ಸಲ್ಲಿಸುತ್ತಿರಲಿಕ್ಕಾಗಿ, ಅದರಲ್ಲಿ ಹಡಗುಗಳು (ನೀರನ್ನು) ಸೀಳುತ್ತಾ ಸಾಗುವುದನ್ನು ನೀವು ಕಾಣುತ್ತೀರಿ

[12] ಅವನೇ ಹಗಲಿನೊಳಗೆ ರಾತ್ರಿಯನ್ನು ಪೋಣಿಸುವವನು ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವವನು ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದವನು. ಎಲ್ಲವೂ ಒಂದು ನಿರ್ದಿಷ್ಟ ಅವಧಿಯ ತನಕ ಚಲಿಸುತ್ತಿರುತ್ತದೆ. ಆ ಅಲ್ಲಾಹನೇ ನಿಮ್ಮ ಒಡೆಯನು. ವಿಶ್ವ ಸಾಮ್ರಾಜ್ಯವು ಅವನಿಗೇ ಸೇರಿದೆ. ಅತ್ತ, ಅವನ ಹೊರತು ನೀವು ಪ್ರಾರ್ಥಿಸುವ ಬೇರೆ ಯಾರೂ ಒಂದು ಖರ್ಜೂರದ ಬೀಜದ ತೊನ್ನಿಗೂ ಮಾಲಕರಲ್ಲ

[13] ನೀವು ಅವರಿಗೆ ಮೊರೆ ಇಟ್ಟರೆ ನಿಮ್ಮ ಮೊರೆ ಅವರಿಗೆ ಕೇಳಿಸುವುದಿಲ್ಲ. ಒಂದು ವೇಳೆ ಅವರು ಅದನ್ನು ಕೇಳಿಸಿಕೊಂಡರೂ ನಿಮಗೆ ಉತ್ತರ ನೀಡಲು ಅವರಿಗೆ ಸಾಧ್ಯವಿಲ್ಲ. ಮುಂದೆ, ಪುನರುತ್ಥಾನದ ದಿನ ಅವರು, ನೀವು ಅವರನ್ನು (ದೇವತ್ವದಲ್ಲಿ) ಪಾಲುದಾರರಾಗಿಸಿದ್ದ ವಿಷಯವನ್ನೇ ನಿರಾಕರಿಸಿಬಿಡುವರು. ಆ ಬಲ್ಲವನು (ಅಲ್ಲಾಹನು) ಎಚ್ಚರಿಸುವಂತೆ ನಿಮ್ಮನ್ನು ಎಚ್ಚರಿಸುವವನು ಬೇರಾರೂ ಇಲ್ಲ

[14] ಮಾನವರೇ, ನೀವು ಅಲ್ಲಾಹನ ನೆರವನ್ನು ಅವಲಂಬಿಸಿರುವಿರಿ. ಆದರೆ ಅಲ್ಲಾಹನು ಎಲ್ಲ ಅವಲಂಬನೆಗಳಿಂದ ಮುಕ್ತನಾಗಿದ್ದಾನೆ ಮತ್ತು ಹೊಗಳಿಕೆಗೆ ಅರ್ಹನಾಗಿದ್ದಾನೆ

[15] ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸತೊಂದು ಸೃಷ್ಟಿಯನ್ನು ತರಬಲ್ಲನು

[16] ಅಲ್ಲಾಹನ ಮಟ್ಟಿಗೆ ಅದು ಕಷ್ಟವೇನಲ್ಲ

[17] (ಪುನರುತ್ಥಾನ ದಿನ) ಯಾವ ಹೊರೆ ಹೊರುವಾತನೂ ಇನ್ನೊಬ್ಬರ ಹೊರೆಯನ್ನು ಹೊರಲಾರನು. (ಪಾಪಗಳ) ಹೊರೆ ಹೊತ್ತವನು, ತನ್ನ ಹೊರೆಯೆಡೆಗೆ (ಅದನ್ನು ಹಂಚಿಕೊಳ್ಳಲು) ಯಾರನ್ನಾದರೂ ಕರೆದರೆ, ಯಾರೂ ಅದರ ಸಣ್ಣ ಭಾಗವನ್ನೂ ಹೊರಲಾರರು – ಅವನು ಅವರ ಹತ್ತಿರದ ಬಂಧುವಾಗಿದ್ದರೂ ಸರಿಯೇ! ತಮ್ಮ ಒಡೆಯನನ್ನು ಕಾಣದೆಯೇ ಅವನಿಗೆ ಅಂಜುತ್ತಿರುವವರನ್ನು ಹಾಗೂ ನಮಾಝನ್ನು ಪಾಲಿಸುತ್ತಿರುವವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಶುದ್ಧನಾಗಿರುವವನು ಸ್ವತಃ ತನ್ನ ಹಿತಕ್ಕಾಗಿ ಶುದ್ಧನಾಗುತ್ತಾನೆ. ಅಂತಿಮವಾಗಿ (ಎಲ್ಲರೂ) ಅಲ್ಲಹನೆಡೆಗೇ ಮರಳ ಬೇಕಾಗಿದೆ

[18] ಕುರುಡನು ಮತ್ತು ಕಾಣುವವನು ಸಮಾನರಲ್ಲ

[19] ಕತ್ತಲುಗಳು ಮತ್ತು ಬೆಳಕು ಸಮಾನವಲ್ಲ

[20] ನೆರಳು ಮತ್ತು ಸುಡು ಬಿಸಿಲು ಒಂದಲ್ಲ

[21] ಜೀವಂತರು ಹಾಗೂ ಸತ್ತವರು ಸಮಾನರಲ್ಲ. ಅಲ್ಲಾಹನು ತಾನಿಚ್ಛಿಸಿದವರಿಗೆ ಖಂಡಿತ ಕೇಳಿಸಬಲ್ಲನು. ಆದರೆ ಗೋರಿಗಳಲ್ಲಿರುವವರಿಗೆ ಕೇಳಿಸಲು ನಿಮಗೆ ಸಾಧ್ಯವಾಗದು

[22] ನೀವು ಎಚ್ಚರಿಸುವವರು ಮಾತ್ರ

[23] (ದೂತರೇ,) ನಾವು ಖಂಡಿತ ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ, ಸತ್ಯದೊಂದಿಗೆ ಕಳಿಸಿರುವೆವು. ನಿಜವಾಗಿ, ಎಚ್ಚರಿಸುವವನೊಬ್ಬನು ಬಂದಿಲ್ಲದ ಯಾವ ಸಮುದಾಯವೂ ಇಲ್ಲ

[24] ಅವರು ನಿಮ್ಮನ್ನು (ದೇವದೂತರನ್ನು) ತಿರಸ್ಕರಿಸುತ್ತಾರೆಂದಾದರೆ, (ನಿಮಗೆ ತಿಳಿದಿರಲಿ), ಅವರ ಹಿಂದಿನವರೂ ತಿರಸ್ಕರಿಸಿದ್ದಾರೆ. ಅವರ (ಕಾಲದ) ದೂತರು, ಸ್ಪಷ್ಟ ಪುರಾವೆಗಳೊಂದಿಗೆ, ದಾಖಲೆಗಳೊಂದಿಗೆ ಹಾಗೂ ಉಜ್ವಲ ಗ್ರಂಥದೊಂದಿಗೆ ಅವರ ಬಳಿಗೆ ಬಂದಿದ್ದರು

[25] ಕೊನೆಗೆ ನಾನು ಧಿಕ್ಕಾರಿಗಳನ್ನು ದಂಡಿಸಿದೆನು. (ನೋಡಿರಿ) ನನ್ನ ಶಿಕ್ಷೆ ಹೇಗಿತ್ತೆಂದು

[26] ನೀವು ನೋಡಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸುತ್ತಾನೆ. ಅದರ ಮೂಲಕ ನಾವು ವಿವಿಧ ಬಣ್ಣದ ಫಲಗಳನ್ನು ಬೆಳೆಸುತ್ತೇವೆ. ಅತ್ತ ಪರ್ವತಗಳಲ್ಲಿ ವಿವಿಧ ಘಟ್ಟಗಳಿವೆ. ಅವು ಬಿಳಿ, ಕೆಂಪು ಹಾಗೂ ವಿವಿಧ ಬಣ್ಣಗಳಲ್ಲಿರುತ್ತವೆ. ಕೆಲವು ಗಾಢವಾದ ಕಪ್ಪು ಬಣ್ಣದ್ದಾಗಿರುತ್ತವೆ

[27] ಜನರಲ್ಲಿ, ವಿವಿಧ ಜಂತುಗಳಲ್ಲಿ ಮತ್ತು ಜಾನುವಾರುಗಳಲ್ಲಿ ಅನೇಕರ ಬಣ್ಣಗಳು ಭಿನ್ನವಾಗಿರುತ್ತವೆ. ದಾಸರ ಪೈಕಿ ಜ್ಞಾನವುಳ್ಳವರು ಮಾತ್ರ ಅಲ್ಲಾಹನಿಗೆ ಅಂಜುತ್ತಾರೆ. ಅಲ್ಲಾಹನು ಖಂಡಿತ, ಪ್ರಚಂಡನೂ ಕ್ಷಮಿಸುವವನೂ ಆಗಿದ್ದಾನೆ

[28] ಅಲ್ಲಾಹನ ಗ್ರಂಥವನ್ನು ಓದುವವರು, ನಮಾಝನ್ನು ಪಾಲಿಸುವವರು ಮತ್ತು ನಾವು ತಮಗೆ ನೀಡಿರುವುದನ್ನು ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ಖರ್ಚು ಮಾಡುವವರು ಖಂಡಿತ, ನಷ್ಟವಿಲ್ಲದ ವ್ಯವಹಾರವೊಂದರ ನಿರೀಕ್ಷೆಯಲ್ಲಿದ್ದಾರೆ

[29] ಅವನು (ಅಲ್ಲಾಹನು) ತಮಗೆ ತಮ್ಮ ಪ್ರತಿಫಲವನ್ನು ನೀಡುವನೆಂದು ಹಾಗೂ ಅವನು ತನ್ನ ಅನುಗ್ರಹದಿಂದ ಇನ್ನಷ್ಟು ಹೆಚ್ಚಿಸಿ ನೀಡುವನೆಂದು (ಅವರು ನಿರೀಕ್ಷಿಸುತ್ತಿದ್ದಾರೆ). ಅವನು ಖಂಡಿತ ಕ್ಷಮಿಸುವವನು ಮತ್ತು ಪುರಸ್ಕರಿಸುವವನಾಗಿದ್ದಾನೆ

[30] (ದೂತರೇ,) ನಾವು ನಿಮಗೆ ಇಳಿಸಿಕೊಟ್ಟಿರುವ ಗ್ರಂಥವೇ ಸತ್ಯವಾಗಿದೆ. ಅದು, ಈಗಾಗಲೇ ಅವರ ಬಳಿ ಇರುವುದನ್ನು ಸಮರ್ಥಿಸುತ್ತದೆ. ಅಲ್ಲಾಹನು ಖಂಡಿತವಾಗಿಯೂ ತನ್ನ ದಾಸರ ಕುರಿತು ಅರಿವುಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ

[31] ಮುಂದೆ, ನಮ್ಮ ದಾಸರ ಪೈಕಿ ನಾವು ಆರಿಸಿದವರನ್ನು ನಾವು ಗ್ರಂಥದ ಉತ್ತರಾಧಿಕಾರಿಗಳಾಗಿಸಿದೆವು. ಇದೀಗ ಅವರಲ್ಲಿ ಕೆಲವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುವವರಾಗಿದ್ದಾರೆ. ಅವರಲ್ಲಿ ಮಧ್ಯಮ ನಿಲುವಿನವರೂ ಇದ್ದಾರೆ ಮತ್ತು ಅವರಲ್ಲಿ ಅಲ್ಲಾಹನ ಆದೇಶದಂತೆ ಸತ್ಕಾರ್ಯಗಳಲ್ಲಿ ಸ್ಪರ್ಧಿಸಿ ಮುನ್ನಡೆಯುವವರೂ ಇದ್ದಾರೆ. ಇದು (ಉತ್ತರಾಧಿಕಾರವು) ಮಹಾ ಔದಾರ್ಯವಾಗಿದೆ

[32] ಅವರು ಶಾಶ್ವತವಾದ ತೋಟಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಂಕಣಗಳನ್ನು ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಗೆಯು ರೇಶ್ಮೆಯದ್ದಾಗಿರುವುದು

[33] ಅವರು ಹೇಳುವರು; ನಮ್ಮ ಸಂಕಟವನ್ನು ನಿವಾರಿಸಿದ ಅಲ್ಲಾಹನಿಗೆ ಪ್ರಶಂಸೆಗಳು ಸಲ್ಲಲಿ, ಖಂಡಿತವಾಗಿಯೂ ನಮ್ಮೊಡೆಯನು ಕ್ಷಮಿಸುವವನು ಹಾಗೂ ಪುರಸ್ಕರಿಸುವವನಾಗಿದ್ದಾನೆ

[34] ಅವನೇ, ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತವಾದ ನಿವಾಸಗಳಲ್ಲಿ ನೆಲೆಸಿದವನು. ಇಲ್ಲಿ ಯಾವ ಸಂಕಟವೂ ನಮ್ಮನ್ನು ಬಾಧಿಸಲಾರದು ಮತ್ತು ಇಲ್ಲಿ ಯಾವ ದಣಿವೂ ನಮಗೆ ತಟ್ಟದು

[35] ಅತ್ತ, ಧಿಕ್ಕಾರಿಗಳಿಗೆ ನರಕದ ಬೆಂಕಿ ಸಿಗಲಿದೆ. ಅಲ್ಲಿ ಅವರಿಗೆ ಸಾವನ್ನೂ ವಿಧಿಸಲಾಗದು ಮತ್ತು ಅವರ ಶಿಕ್ಷೆಯಲ್ಲಿ ಕಿಂಚಿತ್ ಕಡಿತವನ್ನೂ ಮಾಡಲಾಗದು. ಹೀಗಿರುವುದು, ಪ್ರತಿಯೊಬ್ಬ ಕೃತಘ್ನನಿಗೆ ನಾವು ನೀಡುವ ಪ್ರತಿಫಲ

[36] ಅವರು ಅದರೊಳಗೆ ಚೀತ್ಕರಿಸುವರು; ನಮ್ಮೊಡೆಯಾ! ನಮ್ಮನ್ನು (ಇಲ್ಲಿಂದ) ಹೊರತೆಗೆ, ನಾವು ಈ ಹಿಂದೆ ಮಾಡಿದ್ದಕ್ಕಿಂತ ಭಿನ್ನವಾದ, ಸತ್ಕರ್ಮಗಳನ್ನು ಮಾಡುವೆವು. (ಅವರೊಡನೆ ಹೇಳಲಾಗುವುದು); ನಾವು ನಿಮಗೊಂದು ಆಯುಷ್ಯವನ್ನು ನೀಡಿರಲಿಲ್ಲವೇ? (ಅದರಲ್ಲಿ) ಉಪದೇಶ ಸ್ವೀಕರಿಸುವವನು ಉಪದೇಶ ಸ್ವೀಕರಿಸಬಹುದಿತ್ತು. ಮತ್ತು ಎಚ್ಚರಿಸುವವರೂ ನಿಮ್ಮ ಬಳಿಗೆ ಬಂದಿದ್ದರು. ಇದೀಗ ಸವಿಯಿರಿ, ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ

[37] ಅಲ್ಲಾಹನು, ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ವಿಷಯಗಳನ್ನೂ ಖಂಡಿತ ಬಲ್ಲನು. ಅವನಂತು ಮನಸ್ಸಿನೊಳಗಿನ ವಿಚಾರಗಳನ್ನೂ ಖಚಿತವಾಗಿ ಬಲ್ಲನು

[38] ಅವನೇ, ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ನೇಮಿಸಿದವನು. ಧಿಕ್ಕರಿಸಿದವನು ತನ್ನ ಧಿಕ್ಕಾರದ ಫಲವನ್ನು ತಾನೇ ಅನುಭವಿಸುವನು. ಇನ್ನು, ಧಿಕ್ಕಾರಿಗಳ ಧಿಕ್ಕಾರವು ಅವರ ಒಡೆಯನ ಕ್ರೋಧವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ. ಹಾಗೆಯೇ, ಧಿಕ್ಕಾರಿಗಳ ಧಿಕ್ಕಾರವು ನಷ್ಟವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ

[39] ಹೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಪ್ರಾರ್ಥಿಸುವ ಆ ನಿಮ್ಮ ಪಾಲುದಾರರನ್ನು ನೀವು ನೋಡಿದಿರಾ? ಅವರು ಭೂಮಿಯಲ್ಲಿನ ಏನನ್ನು ಸೃಷ್ಟಿಸಿದ್ದಾರೆ ಎಂಬುದನ್ನು ನನಗೆ ತೋರಿಸಿರಿ. ಅಥವಾ ಆಕಾಶಗಳಲ್ಲಿ ಅವರಿಗೇನಾದರೂ ಪಾಲಿದೆಯೇ? ಅವರು ಅಧಿಕೃತ ದಾರಿಯಲ್ಲಿದ್ದಾರೆನ್ನುವುದಕ್ಕೆ ಪುರಾವೆಯಾಗಿ ನಾವೇನು ಅವರಿಗೆ ಗ್ರಂಥವನ್ನು ನೀಡಿದ್ದೇವೆಯೇ? ನಿಜವಾಗಿ ಅಕ್ರಮಿಗಳು ಪರಸ್ಪರರಿಗೆ ನೀಡುವ ಆಶ್ವಾಸನೆಗಳೆಲ್ಲಾ ಕೇವಲ ಮೋಸಗಳಾಗಿರುತ್ತವೆ

[40] ಖಂಡಿತ ಅಲ್ಲಾಹನೇ ಆಕಾಶಗಳನ್ನು ಹಾಗೂ ಭೂಮಿಯನ್ನು, ಅವು ಸರಿದು ಹೋಗದಂತೆ ನಿಯಂತ್ರಿಸಿಟ್ಟಿರುವನು. ಒಂದು ವೇಳೆ ಅವು ಸರಿದು ಬಿಟ್ಟರೆ ಆ ಬಳಿಕ ಅವುಗಳನ್ನು ನಿಯಂತ್ರಿಸಬಲ್ಲವರು ಯಾರೂ ಇಲ್ಲ. ಅವನು ಖಂಡಿತ ಅತ್ಯಂತ ಸಂಯಮಿ ಹಾಗೂ ಕ್ಷಮಾಶೀಲನಾಗಿದ್ದಾನೆ

[41] ಎಚ್ಚರಿಸುವ ದೂತರು ನಮ್ಮ ಬಳಿಗೆ ಬಂದರೆ, ನಾವು ಇತರೆಲ್ಲ ಸಮುದಾಯಗಳಿಗಿಂತ ಹೆಚ್ಚು ಸನ್ಮಾರ್ಗಿಗಳಾಗುವೆವು ಎಂದು ಅವರು ಅಲ್ಲಾಹನ ಹೆಸರಲ್ಲಿ ಭಾರೀ ಆಣೆಗಳನ್ನು ಹಾಕಿ ಹೇಳುತ್ತಿದ್ದರು. ಕೊನೆಗೆ, ಎಚ್ಚರಿಸುವ ದೂತರು ಅವರ ಬಳಿಗೆ ಬಂದಾಗ, ತೀವ್ರವಾಗಿ ಬಿಟ್ಟದ್ದು ಅವರ ಜಿಗುಪ್ಸೆ ಮಾತ್ರ

[42] (ಅವರು) ಭೂಮಿಯಲ್ಲಿ ಮೆರೆದ ಅಹಂಕಾರ ಹಾಗೂ (ಅವರ) ದುಷ್ಟಸಂಚುಗಳೇ ಅದಕ್ಕೆ ಕಾರಣವಾಗಿದ್ದವು. ದುಷ್ಟ ಸಂಚುಗಳು, ಅವುಗಳನ್ನು ರಚಿಸುವವರ ಪಾಲಿಗೇ ಘಾತಕವಾಗಿರುತ್ತವೆ. ಅವರು, ಕಾಯುತ್ತಿರುವುದು ಗತ ಕಾಲದವರಿಗೆ ಅನ್ವಯಿಸಲಾದ ಸಂಹಿತೆಗಾಗಿಯೇ ತಾನೇ? ಅಲ್ಲಾಹನ ಸಂಹಿತೆಯಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಮತ್ತು ನೀವು ಅಲ್ಲಾಹನ ನಿಯಮದಲ್ಲಿ ಯಾವುದೇ ಪರಿವರ್ತನೆಯನ್ನು ಕಾಣಲಾರಿರಿ

[43] ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದು ಅವರಿಗೆ ಕಾಣುವಂತಾಗಲು ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರಂತು ಇವರಿಗಿಂತ ತುಂಬಾ ಶಕ್ತಿಶಾಲಿಗಳಾಗಿದ್ದರು. ಆದರೆ ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಮಣಿಸಬಲ್ಲ ಯಾವ ವಸ್ತುವೂ ಇಲ್ಲ. ಖಂಡಿತವಾಗಿಯೂ ಅವನು ಎಲ್ಲವನ್ನೂ ಬಲ್ಲ ಸರ್ವಶಕ್ತನಾಗಿದ್ದಾನೆ

[44] ಒಂದು ವೇಳೆ ಅಲ್ಲಾಹನು ಮನುಷ್ಯರನ್ನು ಅವರ ಕೃತ್ಯಗಳಿಗಾಗಿ (ತಕ್ಷಣವೇ) ಶಿಕ್ಷಿಸುವುದಾಗಿದ್ದರೆ, ಅವನು ಇದರ (ಭೂಮಿಯ) ಮೇಲೆ ಒಬ್ಬ ಜೀವಿಯನ್ನೂ ಉಳಿಸುತ್ತಿರಲಿಲ್ಲ. ನಿಜವಾಗಿ ಅವನು ಅವರಿಗೆ ಒಂದು ನಿಗದಿತ ಸಮಯದ ತನಕ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಆ ನಿಗದಿತ ಸಮಯವು ಬಂದು ಬಿಟ್ಟಾಗ (ಶಿಕ್ಷೆ ಆರಂಭವಾಗುತ್ತದೆ). ಅಲ್ಲಾಹನು ಖಂಡಿತ ತನ್ನ ದಾಸರನ್ನು ನೋಡುತ್ತಿರುತ್ತಾನೆ

[45] ಯಾ ಸೀನ್

ಯಾ-ಸೀನ್

Surah 36

[1] ಯುಕ್ತಿಪೂರ್ಣವಾಗಿರುವ ಕುರ್‌ಆನಿನಾಣೆ

[2] (ದೂತರೇ,) ನೀವು ಖಂಡಿತ ಒಬ್ಬ ದೇವದೂತರಾಗಿರುವಿರಿ

[3] ನೀವು ನೇರ ಮಾರ್ಗದಲ್ಲಿರುವಿರಿ

[4] ಪ್ರಬಲನೂ ಕರುಣಾಮಯಿಯೂ ಆಗಿರುವವನು ಇದನ್ನು ಇಳಿಸಿಕೊಟ್ಟಿರುವನು –

[5] – ಯಾರ ಗತ ಪೀಳಿಗೆಯನ್ನು ಎಚ್ಚರಿಸಲಾಗಿರಲಿಲ್ಲವೋ ಅವರನ್ನು ಎಚ್ಚರಿಸಲಿಕ್ಕಾಗಿ. ಅವರು ಅರಿವಿಲ್ಲದವರು

[6] ಅವರಲ್ಲಿ ಹೆಚ್ಚಿನವರ ಕುರಿತು (ಅಲ್ಲಾಹನ) ಮಾತು ಈಗಾಗಲೇ ಸತ್ಯವಾಗಿದೆ. ಅವರಿನ್ನು ವಿಶ್ವಾಸಿಗಳಾಗುವುದಿಲ್ಲ

[7] ನಾವು ಅವರ ಕೊರಳುಗಳಿಗೆ, ಗಲ್ಲದವರೆಗೂ ಬಿಗಿದಿಡುವ ನೊಗಗಳನ್ನು ಹಾಕಿರುವೆವು. ಇದರಿಂದಾಗಿ ಅವರ ತಲೆಗಳು ಸೆಟೆದುಕೊಂಡಿವೆ

[8] ನಾವು ಅವರ ಮುಂದೆ ಒಂದು ಗೋಡೆಯನ್ನು ಹಾಗೂ ಅವರ ಹಿಂದೆ ಒಂದು ಗೋಡೆಯನ್ನು ನಿರ್ಮಿಸಿರುವೆವು ಮತ್ತು ಅವರನ್ನು ಮುಚ್ಚಿ ಬಿಟ್ಟಿರುವೆವು. ಆದ್ದರಿಂದ ಅವರಿಗೆ ಏನೂ ಕಾಣಿಸುತ್ತಿಲ್ಲ

[9] ನೀವು ಅವರನ್ನು ಎಚ್ಚರಿಸಿದರೂ ಒಂದೇ, ಎಚ್ಚರಿಸದೆ ಬಿಟ್ಟರೂ ಒಂದೇ. ಅವರಂತು ನಂಬುವವರಲ್ಲ

[10] ಉಪದೇಶವನ್ನು ಅನುಸರಿಸುವ ಹಾಗೂ ಕಣ್ಣಾರೆ ಕಾಣದೆಯೇ ಆ ಅಪಾರ ದಯಾಳುವಿಗೆ (ಅಲ್ಲಾಹನಿಗೆ) ಅಂಜುತ್ತಿರುವ ವ್ಯಕ್ತಿಯನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಅಂಥವನಿಗೆ ನೀವು ಕ್ಷಮೆ ಹಾಗೂ ಉದಾರ ಪ್ರತಿಫಲದ ಶುಭವಾರ್ತೆ ನೀಡಿರಿ

[11] ಖಂಡಿತವಾಗಿಯೂ ನಾವೇ ಸತ್ತವರನ್ನು ಜೀವಂತಗೊಳಿಸುತ್ತೇವೆ ಮತ್ತು ಅವರು ಮುಂದಕ್ಕೆ ಕಳಿಸಿರುವ ಹಾಗೂ ತಮ್ಮ ಹಿಂದೆ ಬಿಟ್ಟು ಹೋಗಿರುವ ಎಲ್ಲವನ್ನೂ ನಾವು ಒಂದು ಸ್ಪಷ್ಟ ಗ್ರಂಥದಲ್ಲಿ ಎಣಿಸಿಟ್ಟಿರುವೆವು

[12] ನೀವು ಅವರಿಗೆ ಆ ನಾಡಿನವರ ಸಮಾಚಾರವನ್ನು ತಿಳಿಸಿರಿ; ಅವರ ಬಳಿಗೆ ದೂತರು ಬಂದಿದ್ದರು

[13] ನಾವು ಅವರ ಬಳಿಗೆ ಇಬ್ಬರು ದೂತರನ್ನು ಕಳಿಸಿದಾಗ ಅವರಿಬ್ಬರನ್ನೂ ಅವರು ತಿರಸ್ಕರಿಸಿದರು. ಕೊನೆಗೆ ನಾವು ಮೂರನೆಯ ದೂತನ ಮೂಲಕ ಅವರಿಗೆ ಬಲ ಒದಗಿಸಿದೆವು. ‘‘ನಮ್ಮನ್ನು ಖಚಿತವಾಗಿ ನಿಮ್ಮೆಡೆಗೇ ರವಾನಿಸಲಾಗಿದೆ’’ ಎಂದು ಅವರು ಹೇಳಿದರು

[14] ಆಗ ಅವರು (ನಾಡಿನವರು) ಹೇಳಿದರು; ನೀವು ನಮ್ಮಂತಹ ಮಾನವರು ಮಾತ್ರ. ಆ ಪರಮ ದಯಾಮಯನು (ಅಲ್ಲಾಹನು) ಏನನ್ನೂ ಇಳಿಸಿಕೊಟ್ಟಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿರುವಿರಿ

[15] ಅವರು (ದೂತರು) ಹೇಳಿದರು; ನಾವು ನಿಮ್ಮೆಡೆಗೆ ಕಳಿಸಲ್ಪಟ್ಟವರು ಎಂಬುದನ್ನು ನಮ್ಮೊಡೆಯನು ಖಚಿತವಾಗಿ ಬಲ್ಲನು

[16] ನಮ್ಮ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ

[17] ಅವರು (ನಾಡಿನವರು) ಹೇಳಿದರು; ನಾವು ನಿಮ್ಮನ್ನು ಕೇವಲ ಅಪಶಕುನಗಳಾಗಿ ಕಂಡಿರುವೆವು. ನೀವು ದೂರ ನಿಲ್ಲದಿದ್ದರೆ (ಸತ್ಯಪ್ರಚಾರವನ್ನು ನಿಲ್ಲಿಸದಿದ್ದರೆ) ನಾವು ನಿಮ್ಮನ್ನು ಕಲ್ಲೆಸೆದು ಕೊಲ್ಲುವೆವು ಮತ್ತು ಖಂಡಿತವಾಗಿಯೂ ನಮ್ಮ ಕಡೆಯಿಂದ ನಿಮಗೆ ಕಠಿಣ ಶಿಕ್ಷೆ ಸಿಗುವುದು

[18] ಆಗ ಅವರು (ದೂತರು) ಹೇಳಿದರು; ನಿಮ್ಮ ಅಪಶಕುನವೆಲ್ಲಾ ನಿಮ್ಮ ಜೊತೆಗೇ ಇದೆ. ನಿಮಗೆ ಬೋಧನೆ ತಲುಪಿದೆಯಲ್ಲವೇ? ನಿಜವಾಗಿ ನೀವು ಎಲ್ಲೆ ಮೀರುವವರಾಗಿದ್ದೀರಿ

[19] ನಗರದ ಮೂಲೆಯಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದನು; ನನ್ನ ಜನಾಂಗದವರೇ, ದೇವದೂತರನ್ನು ಅನುಸರಿಸಿರಿ

[20] ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸದ ಹಾಗೂ ಮಾರ್ಗದರ್ಶನ ಪಡೆದಿರುವ, ಅವರನ್ನು ಅನುಸರಿಸಿರಿ

[21] ನನ್ನನ್ನು ರೂಪಿಸಿದಾತನನ್ನು ನಾನೇಕೆ ಪೂಜಿಸಬಾರದು? ಕೊನೆಗಂತು, ನಿಮ್ಮೆಲ್ಲರನ್ನೂ ಅವನ ಕಡೆಗೇ ಮರಳಿಸಲಾಗುವುದು

[22] ನಾನೇನು, ಅವನ ಹೊರತು ಇತರ ಯಾರನ್ನಾದರೂ ದೇವರಾಗಿಸಿಕೊಳ್ಳಬೇಕೆ? ನಿಜವಾಗಿ, ಆ ಪರಮ ದಯಾಳು ನನಗೇನಾದರೂ ಹಾನಿಯನ್ನುಂಟು ಮಾಡ ಬಯಸಿದರೆ, ಅವರ (ಅನ್ಯರ) ಶಿಫಾರಸ್ಸು ನನ್ನ ಯಾವ ಕೆಲಸಕ್ಕೂ ಬಾರದು ಮತ್ತು ನನ್ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗದು

[23] ಹಾಗೆ ಮಾಡಿದರೆ (ಅನ್ಯರನ್ನು ಪೂಜಿಸಿದರೆ), ನಾನು ಸ್ಪಷ್ಟ ದಾರಿಗೇಡಿತನದಲ್ಲಿ ಇದ್ದಂತಾಗುವುದು

[24] ನೀವು ನನ್ನ ಮಾತನ್ನು ಕೇಳಿರಿ ನಾನು ನಿಮ್ಮ ನೈಜ ಒಡೆಯನನ್ನು ನಂಬಿದ್ದೇನೆ

[25] (ಅವರು ಆತನನ್ನು ಕೊಂದಾಗ) ‘ಸ್ವರ್ಗವನ್ನು ಪ್ರವೇಶಿಸು’ ಎಂದು ಅವನೊಡನೆ ಹೇಳಲಾಯಿತು. ಅವನು ಹೇಳಿದನು; ‘‘ಅಯ್ಯೋ, ನನ್ನ ಜನಾಂಗದವರಿಗೆ (ಇದು) ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!’’

[26] ‘‘ನನ್ನ ಒಡೆಯನು ನನ್ನನ್ನು ಕ್ಷಮಿಸಿರುವನು ಮತ್ತು ನನ್ನನ್ನು ಗೌರವಾನ್ವಿತರ ಸಾಲಿಗೆ ಸೇರಿಸಿರುವನೆಂಬುದು (ಅವರಿಗೆ ತಿಳಿದಿರಬೇಕಿತ್ತು)’’

[27] ಆತನ (ಮರಣದ ಬಳಿಕ) ನಾವೇನೂ ಅವನ ಜನಾಂಗದ ವಿರುದ್ಧ ಆಕಾಶದಿಂದ ಯಾವುದೇ ಪಡೆಯನ್ನು ಇಳಿಸಲಿಲ್ಲ. ಇಳಿಸುವ ಅಗತ್ಯವೂ ನಮಗಿರಲಿಲ್ಲ

[28] ಅದು (ಅವರ ಶಿಕ್ಷೆ) ಕೇವಲ ಒಂದು ಭೀಕರ ಬಿರುಗಾಳಿಯಾಗಿತ್ತು. ಅಷ್ಟಕ್ಕೇ ಅವರು ಆರಿ ಹೋದರು

[29] ಎಷ್ಟೊಂದು ಶೋಚನೀಯವಾಗಿದೆ, ದಾಸರ ಸ್ಥಿತಿ! ಅವರ ಬಳಿಗೆ ಬಂದ ಯಾವ ದೂತನನ್ನೂ ಅವರು ಗೇಲಿ ಮಾಡದೆ ಬಿಟ್ಟದ್ದಿಲ್ಲ

[30] ಅವರೇನು ನೋಡಿಲ್ಲವೇ, ಅವರಿಗಿಂತ ಹಿಂದೆ ಅದೆಷ್ಟು ನಾಡುಗಳನ್ನು ನಾವು ನಾಶಗೊಳಿಸಿ ಬಿಟ್ಟಿದ್ದೇವೆಂದು? ಅವರೆಂದೂ ಅವರ ಬಳಿಗೆ ಮರಳಿ ಬರಲಾರರು

[31] ಅವರಲ್ಲಿನ ಪ್ರತಿಯೊಬ್ಬರನ್ನೂ ನಮ್ಮ ಬಳಿ ಒಟ್ಟಾಗಿ ಹಾಜರುಪಡಿಸಲಾಗುವುದು

[32] ನಿರ್ಜೀವ ಭೂಮಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದನ್ನು ಜೀವಂತಗೊಳಿಸಿದೆವು ಹಾಗೂ ಅದರಿಂದ ಧಾನ್ಯಗಳನ್ನು ಉತ್ಪಾದಿಸಿದೆವು. ಅವುಗಳನ್ನೇ ಅವರು ತಿನ್ನುತ್ತಾರೆ

[33] ಮತ್ತು ನಾವು ಅದರಲ್ಲಿ ಖರ್ಜೂರದ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸಿದೆವು ಮತ್ತು ಅದರಲ್ಲಿ ನದಿಗಳನ್ನು ಹರಿಸಿದೆವು

[34] ಅವರು ಅದರ ಫಲಗಳನ್ನು ಉಣ್ಣಲೆಂದು (ನಾವು ಇದನ್ನೆಲ್ಲಾ ಮಾಡಿರುವೆವು). ಇದಾವುದನ್ನೂ ಅವರ ಕೈಗಳು ನಿರ್ಮಿಸಿಲ್ಲ. ಇಷ್ಟಾಗಿಯೂ ಅವರೇನು ಕೃತಜ್ಞತೆ ಸಲ್ಲಿಸುವುದಿಲ್ಲವೇ

[35] ಭೂಮಿಯು ಬೆಳೆಯುವ ಎಲ್ಲ ವಸ್ತುಗಳನ್ನೂ, ಸ್ವತಃ ಅವರನ್ನೂ, ಅವರಿಗೆ ತಿಳಿದಿಲ್ಲದ (ಹಲವು) ಜೀವಿಗಳನ್ನೂ – ಎಲ್ಲವನ್ನೂ ಜೋಡಿಗಳಾಗಿ ಸೃಷ್ಟಿಸಿದವನು (ಅಲ್ಲಾಹನು), ಪಾವನನು

[36] ರಾತ್ರಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದರಿಂದ ಹಗಲನ್ನು ಇಳಿಸಿಬಿಟ್ಟಾಗ, ಅವರು ಕತ್ತಲನ್ನು ಪಡೆಯುತ್ತಾರೆ

[37] ಮತ್ತು ಸೂರ್ಯನು, ತನಗೆ ನಿಗದಿ ಪಡಿಸಲಾಗಿರುವ ದಾರಿಯಲ್ಲಿ ಚಲಿಸುತ್ತಿರುತ್ತಾನೆ. ಇದು ಆ ಪ್ರಚಂಡ, ಸರ್ವಜ್ಞನು (ಅಲ್ಲಾಹನು) ಸ್ಥಾಪಿಸಿರುವ ವ್ಯವಸ್ಥೆ

[38] ಇನ್ನು ಚಂದ್ರನಿಗೆ ನಾವು ಕೆಲವು ಹಂತಗಳನ್ನು ನಿಗದಿ ಪಡಿಸಿರುವೆವು. ಎಷ್ಟೆಂದರೆ ಅದು (ಬಾಲಚಂದ್ರ) ಖರ್ಜೂರದ ಹಳೆಯ ಗೆಲ್ಲಿನಂತಾಗಿ ಬಿಡುತ್ತದೆ

[39] ಚಂದ್ರನನ್ನು ಹಿಡಿಯಲು ಸೂರ್ಯನಿಗೆ ಸಾಧ್ಯವಿಲ್ಲ, ಹಗಲನ್ನು ಮೀರಿ ಬರಲು ರಾತ್ರಿಗೂ ಸಾಧ್ಯವಿಲ್ಲ. ಎಲ್ಲವೂ ಒಂದು ವೃತ್ತದಲ್ಲಿ ಚಲಿಸುತ್ತಿವೆ

[40] ನಾವು ಅವರ ಸಂತತಿಯನ್ನು ತುಂಬಿದ ಹಡಗಿಗೆ ಹತ್ತಿಸಿದ್ದು, ಅವರ ಪಾಲಿಗೆ ಪುರಾವೆಯಾಗಿದೆ

[41] ಮತ್ತು ನಾವು ಅವರಿಗಾಗಿ, ಅವರು ಸವಾರಿ ಮಾಡುವ ಇನ್ನೂ ಹಲವು ವಸ್ತುಗಳನ್ನು ಸೃಷ್ಟಿಸಿರುವುದು (ಪುರಾವೆಯಾಗಿದೆ)

[42] ನಾವು ಬಯಸಿದ್ದರೆ ಅವರನ್ನು ಮುಳುಗಿಸಿ ಬಿಡಬಹುದು. ಆಗ ಅವರ ಮೊರೆ ಕೇಳುವವರು ಯಾರೂ ಇರಲಾರರು ಮತ್ತು ಅವರು ರಕ್ಷಣೆ ಪಡೆಯಲಾರರು

[43] ಆದರೆ, ಕೇವಲ ಒಂದು ನಿರ್ದಿಷ್ಟ ಕಾಲದವರೆಗೆ ಅವರು ನಮ್ಮ ಅನುಗ್ರಹದ ಫಲಾನುಭವಿಗಳಾಗಿರುತ್ತಾರೆ

[44] ನೀವು (ಅಲ್ಲಾಹನ) ಕೃಪೆಗೆ ಪಾತ್ರರಾಗಲು, ನಿಮ್ಮ ಮುಂದಿನ ಹಾಗೂ ನಿಮ್ಮ ಹಿಂದಿನ (ಕರ್ಮಗಳ) ಕುರಿತು ಎಚ್ಚರವಾಗಿರಿ ಎಂದು ಅವರೊಡನೆ ಹೇಳಿದಾಗಲೆಲ್ಲಾ

[45] ಮತ್ತು ತಮ್ಮ ಒಡೆಯನ ಪುರಾವೆಗಳ ಪೈಕಿ ಯಾವುದೇ ಪುರಾವೆ ಅವರ ಬಳಿಗೆ ಬಂದಾಗಲೆಲ್ಲಾ, ಅವರು ಅದನ್ನು ಕಡೆಗಣಿಸಿದ್ದಾರೆ

[46] ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ, (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ ಎಂದು ತಮ್ಮೊಡನೆ ಹೇಳಿದಾಗಲೆಲ್ಲಾ (ಅವರು ಕಡೆಗಣಿಸಿದ್ದಾರೆ). ಧಿಕ್ಕಾರಿಗಳು, ವಿಶ್ವಾಸಿಗಳೊಡನೆ ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿದ್ದರೆ ಸ್ವತಃ ಅವನೇ ಯಾರಿಗೆ ಉಣಿಸಿ ಬಿಡುತ್ತಿದ್ದನೋ, ಅಂಥವನಿಗೇನು ನಾವು ಉಣಿಸಬೇಕೇ? ನೀವಂತು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದೀರಿ

[47] ಮತ್ತು ಅವರು, ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನ (ಪುನರುತ್ಥಾನ) ಈಡೇರುವುದು ಯಾವಾಗ (ಎಂಬುದನ್ನು ತಿಳಿಸಿ)? ಎಂದು ಕೇಳುತ್ತಾರೆ

[48] ನಿಜವಾಗಿ ಅವರು ಯಾವುದಕ್ಕಾಗಿ ಕಾಯುತ್ತಿರುವರೋ ಅದು ಹಠಾತ್ತನೆ ಬಂದೆರಗುವ ಒಂದು ಸಿಡಿಲು ಮಾತ್ರವಾಗಿರುವುದು – ಅವರು ಜಗಳಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳುವುದು

[49] ಉಯಿಲನ್ನು ಉಪದೇಶಿಸಲಿಕ್ಕಾಗಲಿ, ತಮ್ಮ ಮನೆಯವರ ಬಳಿಗೆ ಮರಳಿ ಹೋಗಲಿಕ್ಕಾಗಲಿ ಅವರಿಗೆ ಸಾಧ್ಯವಾಗದು

[50] ಮತ್ತು (ಇನ್ನೊಮ್ಮೆ) ಕಹಳೆಯನ್ನು ಊದಲಾದಾಗ ಅವರೆಲ್ಲರೂ ಗೋರಿಗಳಿಂದ ಹಠಾತ್ತನೆ ಎದ್ದು ತಮ್ಮ ಒಡೆಯನೆಡೆಗೆ ಧಾವಿಸುವರು

[51] ಅವರು ಹೇಳುವರು: ಅಯ್ಯೋ ನಮ್ಮ ದುಸ್ಥಿತಿ! ನಮ್ಮನ್ನು ನಮ್ಮ ಗೋರಿಗಳಿಂದ ಎಬ್ಬಿಸಿದವರು ಯಾರು? ನಿಜವಾಗಿ, ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ. ದೇವದೂತರು ಸತ್ಯವನ್ನೆ ಹೇಳಿದ್ದರು

[52] ಅದು ಕೇವಲ ಒಂದು ಸಿಡಿಲಾಗಿರುವುದು. ಅಷ್ಟರಲ್ಲೇ ಅವರೆಲ್ಲರನ್ನೂ ನಮ್ಮ ಮುಂದೆ ಹಾಜರು ಪಡಿಸಲಾಗುವುದು

[53] ಇಂದು ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗದು ಮತ್ತು ನಿಮಗೆ, ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲದ ಹೊರತು ಬೇರೇನೂ ಸಿಗದು

[54] ಸ್ವರ್ಗವಾಸಿಗಳು ಅಂದು ಖಂಡಿತ ಮೋಜಿನಲ್ಲಿ ನಿರತರಾಗಿರುವರು

[55] ಅವರು ಮತ್ತವರ ಜೀವನ ಸಂಗಾತಿಗಳು ನೆರಳುಗಳಲ್ಲಿ ಸುಖವಾಗಿ ಒರಗಿ ಕೊಂಡಿರುವರು

[56] ಅಲ್ಲಿ ಅವರಿಗಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳಿರುವವು ಮತ್ತು ಅವರು ಅಪೇಕ್ಷಿಸಿದ್ದೆಲ್ಲವೂ ಅವರಿಗೆ ಸಿಗುವುದು

[57] ಸಲಾಮ್ (ಶಾಂತಿ) ಎಂಬ, ಕರುಣಾಳು ಒಡೆಯನ ಮಾತು (ಅಲ್ಲಿ ಮೊಳಗುತ್ತಿರುವುದು)

[58] ಅಪರಾಧಿಗಳೇ, ಇಂದು ನೀವು ಪ್ರತ್ಯೇಕವಾಗಿರಿ

[59] ಆದಮರ ಸಂತತಿಗಳೇ, ನಾನು ನಿಮಗೆ ಆದೇಶಿಸಿರಲಿಲ್ಲವೇ, ನೀವು ಶೈತಾನನ ಆರಾಧಕರಾಗಬೇಡಿ, ಅವನು ಖಂಡಿತ ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆಂದು

[60] ಮತ್ತು ನೀವು ನನ್ನೊಬ್ಬನನ್ನೇ ಆರಾಧಿಸಬೇಕು, ಅದುವೇ ನೇರ ಮಾರ್ಗವೆಂದು

[61] ಅವನು ನಿಮ್ಮಲ್ಲಿ ಬಹು ಮಂದಿಯನ್ನು ದಾರಿಗೆಡಿಸಿದ್ದಾನೆ. ನೀವೇನು ಬುದ್ಧಿಯನ್ನು ಬಳಸಿರಲಿಲ್ಲವೇ

[62] ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ನರಕ

[63] ನೀವು (ಸತ್ಯವನ್ನು) ಧಿಕ್ಕರಿಸಿದ್ದರ ಪ್ರತಿಫಲವಾಗಿ ಇಂದು ಇದರೊಳಗೆ ಪ್ರವೇಶಿಸಿರಿ

[64] ಇಂದು ನಾವು ಅವರ (ಧಿಕ್ಕಾರಿಗಳ) ಬಾಯಿಗಳಿಗೆ ಮುದ್ರೆ ಜಡಿದಿರುವೆವು. ನಮ್ಮೊಡನೆ ಅವರ ಕೈಗಳು ಮಾತನಾಡುವವು ಮತ್ತು ಅವರು ಏನೆಲ್ಲಾ ಮಾಡಿದ್ದರೆಂದು ಅವರ ಕಾಲುಗಳು ಸಾಕ್ಷಿ ಹೇಳುವವು

[65] ನಾವು ಬಯಸಿದರೆ ಅವರ ಕಣ್ಣುಗಳನ್ನು ನುಚ್ಚು ನೂರುಗೊಳಿಸಿ ಬಿಡಬಲ್ಲೆವು. ಆ ಬಳಿಕ ಅವರು ದಾರಿಯೆಡೆಗೆ ಧಾವಿಸಲಿ. ಅವರು ಏನನ್ನು ತಾನೇ ಕಾಣಬಲ್ಲರು

[66] ನಾವು ಬಯಸಿದರೆ, ಅವರು ಇರುವಲ್ಲೇ ಅವರ ರೂಪಗಳನ್ನು ವಿಕೃತಗೊಳಿಸಿ ಬಿಡಬಲ್ಲೆವು – ಆ ಬಳಿಕ ಅವರಿಗೆ ಮುಂದೆ ಹೋಗಲಿಕ್ಕೂ ಸಾಧ್ಯವಾಗದು, ಮರಳಲಿಕ್ಕೂ ಆಗದು

[67] ನಾವು ಯಾರಿಗೆ ಧೀರ್ಘ ಆಯುಷ್ಯವನ್ನು ಕೊಡುತ್ತೇವೋ, ಅವರನ್ನು ರಚನೆಯಲ್ಲಿ (ದುರ್ಬಲ ಸ್ಥಿತಿಗೆ) ಮರಳಿಸಿ ಬಿಡುತ್ತೇವೆ. ಅವರೇನು ಬುದ್ದಿಯನ್ನು ಬಳಸುವುದಿಲ್ಲವೇ

[68] ನಾವು ಅವರಿಗೆ (ದೂತರಿಗೆ) ಕಾವ್ಯವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶವಾಗಿದೆ ಮತ್ತು ಸ್ಪಷ್ಟವಾದ ಕುರ್‌ಆನ್ ಆಗಿದೆ

[69] ಜೀವಂತವಿರುವ ಎಲ್ಲರನ್ನೂ ಅವರು (ದೂತರು) ಎಚ್ಚರಿಸಬೇಕೆಂದು ಹಾಗೂ ಧಿಕ್ಕಾರಿಗಳ ವಿರುದ್ಧ ಸಾಕ್ಷವು ಪೂರ್ತಿಯಾಗಲೆಂದು (ನಾವು ಇದನ್ನು ಕಳಿಸಿರುವೆವು)

[70] ಅವರು ನೋಡುತ್ತಿಲ್ಲವೇ, ಅವರು ಮಾಲಕರಾಗಿರುವ ಜಾನುವಾರುಗಳನ್ನು ನಾವು ಅವರಿಗಾಗಿ ನಮ್ಮ ಕೈಯಾರೆ ಸೃಷ್ಟಿಸಿರುವೆವು

[71] ನಾವು ಅವುಗಳನ್ನು ಅವರಿಗೆ ವಿಧೇಯಗೊಳಿಸಿರುವೆವು. ಅವರು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸಿದರೆ, ಕೆಲವನ್ನು ಆಹಾರವಾಗಿ ಬಳಸುತ್ತಾರೆ

[72] ಅವುಗಳಲ್ಲಿ ಅವರಿಗೆ ಹಲವು ಲಾಭಗಳಿವೆ, ಕುಡಿಯುವ ವಸ್ತುಗಳೂ ಇವೆ. ಇಷ್ಟಿದ್ದೂ ಅವರು ಕೃತಜ್ಞತೆ ತೋರುವುದಿಲ್ಲವೇ

[73] ಅವರು ಅಲ್ಲಾಹನ ಹೊರತು ಇತರರಿಂದ ತಮಗೆ ನೆರವು ದೊರಕೀತೆಂದು ಅವರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ

[74] ಅವರು ಇವರಿಗೆ ನೆರವಾಗಲು ಶಕ್ತರಲ್ಲ. ಆದರೂ, ಇವರು ಅವರ ಮುಂದೆ ದಂಡುಗಳಂತೆ ಹಾಜರಾಗುತ್ತಾರೆ

[75] (ದೂತರೇ,) ಅವರ ಮಾತುಗಳಿಂದ ನೀವು ದುಃಖಿತರಾಗಬೇಡಿ. ಅವರು ಬಚ್ಚಿಡುವ ಹಾಗೂ ಪ್ರಕಟ ಪಡಿಸುವ ಎಲ್ಲವನ್ನೂ ನಾವು ಬಲ್ಲೆವು

[76] ಮನುಷ್ಯನು ಕಂಡಿಲ್ಲವೇ, ನಾವು ಅವನನ್ನು ವೀರ್ಯದಿಂದ ಸೃಷ್ಟಿಸಿರುವುದನ್ನು? ಇಷ್ಟಾಗಿಯೂ ಅವನು ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು

[77] ಅವನು ನಮ್ಮ ಕುರಿತು (ಏನೇನೋ) ಹೋಲಿಕೆಗಳನ್ನು ಕಟ್ಟುತ್ತಾನೆ. ನಿಜವಾಗಿ ಅವನು ತನ್ನ ಜನನವನ್ನು ಮರೆತಿದ್ದಾನೆ. ಎಲುಬುಗಳು ಕರಗಿ ಹೋದ ಬಳಿಕ ಅವುಗಳನ್ನು ಯಾರು ತಾನೆ ಜೀವಂತಗೊಳಿಸಬಲ್ಲರು? ಎಂದು ಅವನು ಪ್ರಶ್ನಿಸುತ್ತಾನೆ

[78] ಹೇಳಿರಿ; ಅವುಗಳನ್ನು ಮೊದಲ ಬಾರಿ ಸೃಷ್ಟಿಸಿದವನೇ ಅವುಗಳನ್ನು ಮತ್ತೆ ಸೃಷ್ಟಿಸುವನು. ಅವನು ಎಲ್ಲ ಬಗೆಯ ಸೃಷ್ಟಿ ಕಾರ್ಯವನ್ನು ಬಲ್ಲವನಾಗಿದ್ದಾನೆ

[79] ಅವನೇ, ನಿಮಗಾಗಿ ಹಸಿರು ಮರದಿಂದ ಬೆಂಕಿಯನ್ನು ಉತ್ಪಾದಿಸಿದವನು, ನೀವೀಗ ಅದರಿಂದಲೇ ಬೆಂಕಿಯನ್ನು ಉರಿಸುತ್ತೀರಿ

[80] ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಇವರಂಥವರನ್ನು ಸೃಷ್ಟಿಸಲು ಅಸಮರ್ಥನೇ? ಖಂಡಿತ ಅಲ್ಲ. ಅವನಂತು, ಎಲ್ಲವನ್ನೂ ಬಲ್ಲ, ತಜ್ಞ ಸೃಷ್ಟಿಕರ್ತನಾಗಿದ್ದಾನೆ

[81] ಅವನು ಏನನ್ನಾದರೂ ಮಾಡಲು ಇಚ್ಛಿಸಿದಾಗ, ಅದಕ್ಕೆ ‘ಆಗು’ ಎಂದಷ್ಟೆ ಹೇಳುತ್ತಾನೆ ಮತ್ತು ಅಷ್ಟರಲ್ಲೇ ಅದು ಆಗಿ ಬಿಟ್ಟಿರುತ್ತದೆ

[82] ಅವನು ಪಾವನನು, ಎಲ್ಲ ವಸ್ತುಗಳ ಪರಮಾಧಿಕಾರವು ಅವನ ಕೈಯಲ್ಲಿದೆ. (ಕೊನೆಗೆ) ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು

[83] ಶಿಸ್ತು ಬದ್ಧವಾಗಿ ಸಾಲುಗಟ್ಟಿರುವವರ (ಮಲಕ್‌ಗಳ) ಆಣೆ

ಶ್ರೇಣಿಯನ್ನು ಹೊಂದಿಸುವವರು

Surah 37

[1] ಉಗ್ರವಾಗಿ ಗದರಿಸುವವರಾಣೆ

[2] ಉಪದೇಶವನ್ನು ಓದುವವರಾಣೆ

[3] ನಿಮ್ಮ ಆರಾಧ್ಯನು ಖಂಡಿತ ಒಬ್ಬನೇ

[4] ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯ ಮತ್ತು ಪೂರ್ವಗಳ ಒಡೆಯನಾಗಿದ್ದಾನೆ

[5] ಖಂಡಿತವಾಗಿಯೂ ನಾವು ಭೂಲೋಕದ ಆಕಾಶವನ್ನು ನಕ್ಷತ್ರಗಳ ಸೊಬಗಿನಿಂದ ಅಲಂಕರಿಸಿರುವೆವು

[6] ಮತ್ತು ನಾವು ಅದನ್ನು ಪ್ರತಿಯೊಬ್ಬ ವಿದ್ರೋಹಿ ಶೈತಾನನಿಂದ ರಕ್ಷಿಸಿಟ್ಟಿರುವೆವು

[7] ಮೇಲಿನ ಲೋಕದ ಏನನ್ನೂ ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಎಲ್ಲ ಕಡೆಯಿಂದಲೂ ಅವರ ಮೇಲೆ ಪ್ರಹಾರವಾಗುತ್ತದೆ

[8] ಅವರನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಲಾಗುತ್ತದೆ. ಅಲ್ಲದೆ ಅವರಿಗೆ ಶಾಶ್ವತ ಶಿಕ್ಷೆ ಇದೆ

[9] ಇಷ್ಟಾಗಿಯೂ ಕಿತ್ತುಕೊಂಡು ಓಡಿದವನು – ಒಂದು ಉರಿಯುವ ಜ್ವಾಲೆಯು ಅವನ ಬೆನ್ನು ಹಿಡಿಯುತ್ತದೆ

[10] ನೀವು ಅವರೊಡನೆ ಕೇಳಿ ನೋಡಿರಿ; ಅವರನ್ನು ಸೃಷ್ಟಿಸುವುದು ಹೆಚ್ಚು ಕಷ್ಟವೋ ಅಥವಾ ನಮ್ಮ (ಇತರ) ಸೃಷ್ಟಿಗಳನ್ನೋ? ಅವರನ್ನಂತು ನಾವು ಅಂಟುವ ಮಣ್ಣಿನಿಂದ ಸೃಷ್ಟಿಸಿರುವೆವು

[11] (ದೂತರೇ,) ನೀವು (ಅಲ್ಲಾಹನ ಮಹಿಮೆಯ ಕುರಿತು) ಅಚ್ಚರಿ ಪಡುತ್ತೀರಿ ಮತ್ತು ಅವರು ಗೇಲಿ ಮಾಡುತ್ತಾರೆ

[12] ಅವರಿಗೆ ಉಪದೇಶಿಸಲಾದಾಗ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ

[13] ಅವರು ಯಾವುದಾದರೂ ಪುರಾವೆಯನ್ನು ಕಂಡಾಗ, ಅದನ್ನು ಗೇಲಿ ಮಾಡುತ್ತಾರೆ

[14] ಮತ್ತು ಅವರು, ಇದು ಸ್ಪಷ್ಟವಾದ ಜಾದೂಗಾರಿಕೆಯೇ ಹೊರತು ಬೇರೇನೂ ಅಲ್ಲ ಎಂದು ಬಿಡುತ್ತಾರೆ

[15] ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಪುನಃ ಜೀವಂತ ಗೊಳಿಸಲಾಗುವುದೇ

[16] ಅಥವಾ, ನಮ್ಮ ತಾತ ಮುತ್ತಾತಂದಿರನ್ನು ಕೂಡಾ (ಜೀವಂತಗೊಳಿಸಲಾಗುವುದೇ? ಎಂದು ಅವರು ಪ್ರಶ್ನಿಸುತ್ತಾರೆ)

[17] ಹೇಳಿರಿ, ಹೌದು, ಮತ್ತು ನೀವು ಅಪಮಾನಿತರಾಗುವಿರಿ

[18] ಅದು (ಲೋಕಾಂತ್ಯದ ಕಹಳೆ) ಕೇವಲ ಒಂದು ಎಚ್ಚರಿಕೆಯ ಧ್ವನಿಯಾಗಿರುವುದು. ಅಷ್ಟರಲ್ಲೆ ಅವರು ದಂಗಾಗಿ ನೋಡ ತೊಡಗುವರು

[19] ಮತ್ತು ಅವರು, ‘‘ಅಯ್ಯೋ ನಮ್ಮ ದುಸ್ಥಿತಿ! ಇದುವೇ ಆ ಪ್ರತಿಫಲದ ದಿನ’’ ಎನ್ನುವರು

[20] ಇದುವೇ, ನೀವು ನಿರಾಕರಿಸುತ್ತಿದ್ದ ತೀರ್ಮಾನದ ದಿನ

[21] (ಅಂದು ಮಲಕ್‌ಗಳೊಡನೆ ಹೇಳಲಾಗುವುದು;) ‘‘ಅಕ್ರಮಿಗಳನ್ನು, ಅವರ ಜೊತೆಗಾರರನ್ನು ಮತ್ತು ಅವರು (ಅಲ್ಲಾಹನ ಹೊರತು) ಯಾರನ್ನೆಲ್ಲಾ ಆರಾಧಿಸುತ್ತಿದ್ದರೋ ಅವರನ್ನೆಲ್ಲಾ ಒಟ್ಟು ಸೇರಿಸಿರಿ‘‘ –

[22] ‘‘ – ಅಲ್ಲಾಹನ ಹೊರತು. ಮತ್ತು ನೀವು ಅವರಿಗೆ ನರಕದ ದಾರಿ ತೋರಿಸಿರಿ

[23] ಮತ್ತು ಅವರನ್ನು ತಡೆಯಿರಿ. ಖಂಡಿತವಾಗಿಯೂ ಅವರ ವಿಚಾರಣೆ ನಡೆಯಬೇಕಾಗಿದೆ

[24] ನಿಮಗೇನಾಗಿದೆ? ನೀವೇಕೆ ಪರಸ್ಪರ ನೆರವಾಗುತ್ತಿಲ್ಲ

[25] ನಿಜವಾಗಿ, ಇಂದು ಅವರು ಸಂಪೂರ್ಣ ಶರಣಾಗಿ ಬಿಟ್ಟಿದ್ದಾರೆ

[26] (ಅಂದು) ಅವರಲ್ಲಿ ಕೆಲವರು ಮತ್ತೆ ಕೆಲವರೆಡೆಗೆ ತಿರುಗಿ ಪ್ರಶ್ನೆಗಳನ್ನು ಕೇಳುವರು

[27] (ಅವರು ತಮ್ಮ ನಾಯಕರೊಡನೆ) ‘‘ನೀವು ಬಲ ಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ (ಸತ್ಯದಿಂದ ನಮ್ಮನ್ನು ತಡೆಯುತ್ತಿದ್ದಿರಿ)’’ ಎನ್ನುವರು

[28] ಅವರು (ನಾಯಕರು) ಹೇಳುವರು; ‘‘ನಿಜವಾಗಿ, ನೀವು ಸತ್ಯವನ್ನು ನಂಬುವವರೇ ಆಗಿರಲಿಲ್ಲ’’

[29] ‘‘ನಿಮ್ಮ ಮೇಲೆ ನಮಗೆ ಅಧಿಕಾರವೇನೂ ಇರಲಿಲ್ಲ. ನಿಜವಾಗಿ ನೀವೇ ವಿದ್ರೋಹಿ ಪಂಗಡವಾಗಿದ್ದಿರಿ’’

[30] ‘‘ಇದೀಗ ನಮ್ಮ ಕುರಿತು ನಮ್ಮ ಒಡೆಯನ ಮಾತು ಸತ್ಯವಾಗಿ ಬಿಟ್ಟಿದೆ. ನಾವೀಗ (ಶಿಕ್ಷೆಯನ್ನು) ಖಂಡಿತ ಸವಿಯಲಿದ್ದೇವೆ’’

[31] ‘‘ನಾವು ನಿಮ್ಮನ್ನು ದಾರಿಗೆಡಿಸಿದ್ದು ಮಾತ್ರವಲ್ಲ, ಸ್ವತಃ ನಾವೇ ದಾರಿಗೆಟ್ಟಿದ್ದೆವು’’

[32] ಕೊನೆಗೆ, ಅವರೆಲ್ಲರೂ ಜೊತೆಯಾಗಿಯೇ ಶಿಕ್ಷೆ ಅನುಭವಿಸುವರು

[33] ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ

[34] ಅಲ್ಲಾಹನ ಹೊರತು ಬೇರಾರೂ ಪೂಜಾರ್ಹರಲ್ಲ ಎಂದು ಅವರೊಡನೆ ಹೇಳಲಾದಾಗ ಅವರು ಅಹಂಕಾರ ತೋರಿದ್ದರು

[35] ಮತ್ತು ‘‘ನಾವೇನು ಒಬ್ಬ ಹುಚ್ಚು ಪೀಡಿತ ಕವಿಗಾಗಿ ನಮ್ಮ ದೇವರುಗಳನ್ನು ಬಿಟ್ಟು ಬಿಡಬೇಕೇ?’’ ಎಂದು ಅವರು ಕೆೇಳುತ್ತಿದ್ದರು

[36] ನಿಜವಾಗಿ ಅವರು (ದೇವದೂತರು), ಸತ್ಯದೊಂದಿಗೆ ಬಂದಿರುತ್ತಾರೆ ಮತ್ತು ಅವರು (ಹಿಂದಿನ) ದೇವದೂತರುಗಳನ್ನು ಸಮರ್ಥಿಸುತ್ತಾರೆ

[37] ನೀವು ಖಂಡಿತ ಯಾತನಾಮಯ ಶಿಕ್ಷೆಯನ್ನು ಸವಿಯುವಿರಿ

[38] ಮತ್ತು ನಿಮಗೆ ನೀವೆಸಗುತ್ತಿದ್ದ ಕರ್ಮಗಳ ಫಲವಷ್ಟೇ ಸಿಗಲಿದೆ

[39] ಅಲ್ಲಾಹನ ಆಯ್ದ ದಾಸರ ಹೊರತು

[40] ಅವರಿಗಾಗಿ ನಿರ್ದಿಷ್ಟ ಆಹಾರವಿದೆ

[41] ಹಣ್ಣುಗಳೂ ಇವೆ ಮತ್ತು ಅವರು ಗೌರವಾನ್ವಿತರಾಗಿರುವರು

[42] ಕೊಡುಗೆಗಳು ತುಂಬಿರುವ ಸ್ವರ್ಗ ತೋಟಗಳಲ್ಲಿ

[43] ಎದುರು ಬದಿರಾಗಿರುವ ಆಸನಗಳಲ್ಲಿ

[44] ಹರಿಯುವ ಚಿಲುಮೆಗಳ ಪಾನೀಯಗಳನ್ನು ಅವರ ಸುತ್ತ ಒಯ್ಯಲಾಗುವುದು

[45] ಅವು ಶುಭ್ರವಾಗಿದ್ದು, ಕುಡಿಯುವವರಿಗೆ ರುಚಿಕರವಾಗಿರುವವು

[46] ಅದರಿಂದ, ಯಾವುದೇ ಸಂಕಟವಾಗದು ಮತ್ತು ಅವರು ಮದ ಮತ್ತರಾಗಲಾರರು

[47] ಅವರ ಬಳಿ ದೃಷ್ಟಿ ತಗ್ಗಿಸಿರುವ, ವಿಶಾಲ ಕಣ್ಣಿನವರು (ಸೇವಕಿಯರು) ಇರುವರು

[48] ಅವರು, ಅಡಗಿಸಿಟ್ಟ ಮೊಟ್ಟೆಗಳಂತೆ (ಶುಭ್ರ ಹಾಗೂ ನಿರ್ಮಲರಾಗಿ) ಇರುವರು

[49] ಅವರು (ಸ್ವರ್ಗವಾಸಿಗಳು) ಎದುರು ಬದುರಾಗಿ ಪರಸ್ಪರರೊಡನೆ ವಿಚಾರಿಸುವರು

[50] ಅವರಲ್ಲೊಬ್ಬನು ಹೇಳುವನು; ನನಗೊಬ್ಬ ಸಂಗಾತಿ ಇದ್ದನು

[51] ಅವನು ನನ್ನೊಡನೆ ಹೇಳುತ್ತಿದ್ದನು; ‘‘ನೀನೇನು (ಪರಲೋಕವನ್ನು) ನಂಬುವವನಾಗಿರುವೆಯಾ?’’

[52] ‘‘ನಾವು ಸತ್ತು ಕೇವಲ ಮಣ್ಣು ಹಾಗೂ ಎಲುಬುಗಳಾಗಿ ಬಿಟ್ಟ ಬಳಿಕ ನಮಗೆ ಪ್ರತಿಫಲ ಸಿಗಲಿಕ್ಕಿದೆಯೇ?’’

[53] ಅವನು (ಮತ್ತೆ) ‘‘ನೀವೀಗ (ಆತ ಎಲ್ಲಿದ್ದಾನೆಂದು) ಇಣುಕಿ ನೋಡಲು ಬಯಸುತ್ತೀರಾ?’’ ಎಂದು ಕೇಳುವನು

[54] ತರುವಾಯ ಅವನು (ಸ್ವತಃ) ಇಣುಕಿ ನೋಡುವನು ಹಾಗೂ ತನ್ನ ಸಂಗಾತಿಯನ್ನು ನರಕದ ಮಧ್ಯದಲ್ಲಿ ಕಾಣುವನು

[55] ಮತ್ತು ಅವನು ಹೇಳುವನು; ‘‘ಅಲ್ಲಾಹನಾಣೆ! ನೀನಂತು ನನ್ನನ್ನು ನಾಶ ಮಾಡಿಯೇ ಬಿಡುತ್ತಿದ್ದೆ’’

[56] ನನ್ನ ಒಡೆಯನ ಅನುಗ್ರಹವಿಲ್ಲದೆ ಹೋಗಿದ್ದರೆ, ನಾನೂ (ಬಂಧಿಗಳಾಗಿ) ಹಾಜರುಗೊಳಿಸಲಾದವರ ಸಾಲಿಗೆ ಸೇರಿರುತ್ತಿದ್ದೆ

[57] (ಸ್ವರ್ಗವಾಸಿಗಳು ಹೇಳುವರು;) ಇನ್ನು ನಮಗೇನು ಮರಣವಿಲ್ಲವೇ

[58] – ನಮ್ಮ ಪ್ರಥಮ ಮರಣದ ಹೊರತು? ಮತ್ತು ನಾವು ಶಿಕ್ಷೆಗೂ ಗುರಿಯಾಗಲಾರೆವು

[59] ಖಂಡಿತವಾಗಿಯೂ ಇದುವೇ ಮಹಾ ಸೌಭಾಗ್ಯವಾಗಿದೆ

[60] ಶ್ರಮಿಸುವವರೆಲ್ಲಾ ಇದಕ್ಕಾಗಿಯೇ ಶ್ರಮಿಸಬೇಕು

[61] ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ

[62] ಖಂಡಿತವಾಗಿಯೂ ನಾವು ಅದನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು

[63] ಅದು ನರಕದ ತಳದಿಂದ ಬೆಳೆಯುವ ಮರ

[64] ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು

[65] ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು

[66] ಹಾಗೆಯೇ, ಅಲ್ಲಿ ಅವರಿಗಾಗಿ ಮಾಲಿನ್ಯ ಬೆರೆತ, ಕುದಿಯುತ್ತಿರುವ ಪಾನೀಯವಿರುವುದು

[67] ಕೊನೆಗೆ, ನರಕವೇ ಅವರು ಮರಳುವ ನೆಲೆಯಾಗಿರುವುದು

[68] ಅವರು, ತಮ್ಮ ಪೂರ್ವಜರು ದಾರಿಗೆಟ್ಟಿದ್ದನ್ನು ಕಂಡಿದ್ದರು

[69] ಆದರೂ, ಅವರು ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸಿದರು

[70] ನಿಜವಾಗಿ, ಅವರಿಗಿಂತ ಹಿಂದಿನ, ಅವರ ಪೂರ್ವಜರಲ್ಲಿ ಹೆಚ್ಚಿನವರು ದಾರಿಗೆಟ್ಟಿದ್ದರು

[71] ನಾವು ಅವರ ನಡುವೆ ದೂತರನ್ನು ಕಳಿಸಿದ್ದೆವು

[72] ಹೀಗೆ ಎಚ್ಚರಿಕೆ ಪಡೆದವರ ಗತಿ ಏನಾಯಿತೆಂಬುದನ್ನು ನೋಡಿರಿ

[73] ಅಲ್ಲಾಹನ ಆಯ್ದ ದಾಸರ ಸ್ಥಿತಿ ಮಾತ್ರ ಭಿನ್ನವಾಗಿದೆ

[74] ನೂಹರು ನಮಗೆ ಮೊರೆ ಇಟ್ಟರು. ನಾವು (ಮೊರೆಗಳಿಗೆ) ಅತ್ಯುತ್ತಮ ಉತ್ತರ ನೀಡುವವರಾಗಿದ್ದೇವೆ

[75] ನಾವು ಅವರನ್ನೂ ಅವರ ಮನೆಯವರನ್ನೂ ಮಹಾ ವಿಪತ್ತಿನಿಂದ ರಕ್ಷಿಸಿದೆವು

[76] ಮತ್ತು ನಾವು ಅವರ ಸಂತತಿಯನ್ನು ಬಹುಕಾಲ ಉಳಿಸಿದೆವು

[77] ಮತ್ತು ನಾವು ಮುಂದಿನವರಲ್ಲಿ ಅವರ ನೆನಪನ್ನು ಸಂರಕ್ಷಿಸಿದೆವು

[78] ನೂಹರಿಗೆ ಶಾಂತಿ, ಸರ್ವಲೋಕಗಳಲ್ಲಿ

[79] ಖಂಡಿತವಾಗಿಯೂ ನಾವು ಇದೇ ರೀತಿ ಸತ್ಕರ್ಮಿಗಳನ್ನು ಪುರಸ್ಕರಿಸುತ್ತೇವೆ

[80] ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಾಗಿದ್ದರು

[81] ತರುವಾಯ ನಾವು ಇತರರನ್ನು ಮುಳುಗಿಸಿ ಬಿಟ್ಟೆವು

[82] ಇನ್ನು, ಇಬ್ರಾಹೀಮರಂತು ಅವರ (ನೂಹರ) ಹಾದಿಯಲ್ಲೇ ನಡೆಯುವವರಾಗಿದ್ದರು

[83] ಅವರು ನಿರ್ಮಲ ಮನಸ್ಸಿನೊಂದಿಗೆ ತಮ್ಮ ಒಡೆಯನ ಸನ್ನಿಧಿಗೆ ಬಂದರು

[84] ಮತ್ತು ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗದವರೊಡನೆ ಕೇಳಿದರು; ‘‘ನೀವು ಅದೇನನ್ನು ಪೂಜಿಸುತ್ತಿರುವಿರಿ?’’

[85] ‘‘ನೀವೇನು, ಅಲ್ಲಾಹನ ಜೊತೆ ಮಿಥ್ಯ ಶಕ್ತಿಗಳನ್ನು ದೇವರಾಗಿಸಲು ಬಯಸುವಿರಾ?’’

[86] ‘‘ಎಲ್ಲ ಲೋಕಗಳ ಒಡೆಯನ ಕುರಿತು ನಿಮ್ಮ ಅಭಿಪ್ರಾಯವೇನು?’’

[87] ಆ ಬಳಿಕ ಅವರು ನಕ್ಷತ್ರಗಳೆಡೆಗೆ ದೃಷ್ಟಿ ಬೀರಿದರು

[88] ಮತ್ತು ನಾನು ಅಸ್ವಸ್ಥನಾಗಿ ಬಿಟ್ಟಿದ್ದೇನೆ ಎಂದರು

[89] ಅವರೆಲ್ಲಾ (ಜನಾಂಗದವರೆಲ್ಲಾ) ಅವರನ್ನು (ಇಬ್ರಾಹೀಮರನ್ನು) ಬಿಟ್ಟು ಹೊರಟು ಹೋದರು

[90] ಅವರು (ಇಬ್ರಾಹೀಮರು) ಅವರ (ತಮ್ಮ ಜನಾಂಗದವರ) ದೇವರುಗಳೆಡೆಗೆ (ವಿಗ್ರಹಗಳೆಡೆಗೆ) ಗಮನ ಹರಿಸಿದರು ಮತ್ತು ಕೇಳಿದರು; ‘‘ನೀವು ಏನನ್ನೂ ತಿನ್ನುವುದಿಲ್ಲವೇ?’’

[91] ‘‘ನಿಮಗೇನಾಗಿದೆ? ನೀವೇಕೆ ಮಾತನಾಡುತ್ತಿಲ್ಲ?’’

[92] ಕೊನೆಗೆ ಅವರು ಅವುಗಳ ಮೇಲೆ ಮುಗಿಬಿದ್ದು ಬಲವಾಗಿ ಹೊಡೆದರು

[93] ಅವರೆಲ್ಲಾ (ಜನಾಂಗದವರೆಲ್ಲಾ) ಅವರೆಡೆಗೆ ಧಾವಿಸಿ ಬಂದರು

[94] ಅವರು (ಇಬ್ರಾಹೀಮರು ಹೇಳಿದರು;) ‘‘ನೀವೇನು, ಸ್ವತಃ ನೀವೇ ಕೆತ್ತಿ ನಿರ್ಮಿಸಿದವುಗಳನ್ನು ಪೂಜಿಸುತ್ತೀರಾ?’’

[95] ‘‘ನಿಮ್ಮನ್ನು ಮತ್ತು ನೀವು ರಚಿಸುವವುಗಳನ್ನೆಲ್ಲಾ ಅಲ್ಲಾಹನೇ ಸೃಷ್ಟಿಸಿರುವನು’’

[96] ಅವರು (ಜನಾಂಗದವರು, ಪರಸ್ಪರರೊಡನೆ) ‘‘ಅವನಿಗಾಗಿ ಒಂದು ಅಗ್ನಿ ಕುಂಡವನ್ನು ರಚಿಸಿರಿ ಮತ್ತು ಅವನನ್ನು ಬೆಂಕಿಗೆಸೆದು ಬಿಡಿರಿ’’ ಎಂದರು

[97] ಅವರು (ಜನಾಂಗದವರು), ಅವರಿಗೆ ಹಾನಿ ಮಾಡ ಬಯಸಿದ್ದರು. ಆದರೆ ನಾವು ಅವರನ್ನು ಕೀಳಾಗಿಸಿಬಿಟ್ಟೆವು

[98] ಅವರು (ಇಬ್ರಾಹೀಮ್) ಹೇಳಿದರು; ನಾನು ನನ್ನ ಒಡೆಯನೆಡೆಗೆ ತೆರಳುತ್ತೇನೆ. ಅವನು ನನಗೆ ಸರಿದಾರಿಯನ್ನು ತೋರಬಹುದು

[99] ‘‘ನನ್ನೊಡೆಯಾ, ನನಗೆ ಶ್ರೇಷ್ಠ ಸಂತತಿಗಳನ್ನು ದಯ ಪಾಲಿಸು’’ (ಎಂದು ಅವರು ಪ್ರಾರ್ಥಿಸಿದರು)

[100] ಕೊನೆಗೆ ನಾವು ಅವರಿಗೆ ಒಬ್ಬ ವಿವೇಕವಂತ ಪುತ್ರನ (ಇಸ್ಮಾಈಲರ) ಶುಭವಾರ್ತೆ ನೀಡಿದೆವು

[101] ಅವರು (ಇಸ್ಮಾಈಲರು) ಅವರ ಜೊತೆ ಓಡಾಡಬಲ್ಲವರಾದಾಗ ಅವರು ಹೇಳಿದರು; ‘‘ನಾನು ನಿನ್ನ ಕೊರಳು ಕೊಯ್ಯುತ್ತಿರುವುದಾಗಿ ಸ್ವಪ್ನದಲ್ಲಿ ಕಂಡಿದ್ದೇನೆ. ಈ ಕುರಿತು ನಿನ್ನ ಅನಿಸಿಕೆ ಏನು?’’ ಅವರು (ಇಸ್ಮಾಈಲ್) ಹೇಳಿದರು ; ‘‘ಅಪ್ಪಾ, ನಿಮಗೆ ಆದೇಶಿಸಲಾಗಿರುವುದನ್ನು ನೀವು ಮಾಡಿಬಿಡಿ. ಅಲ್ಲಾಹನಿಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ’’

[102] ಹೀಗೆ ಅವರಿಬ್ಬರೂ ವಿಧೇಯತೆ ತೋರಿದರು ಮತ್ತು ಅವರು (ಇಬ್ರಾಹೀಮರು) ಅವರನ್ನು (ಪುತ್ರನನ್ನು), ಮುಖ ಕೆಳಗಾಗಿಸಿ ಮಲಗಿಸಿದರು

[103] ಆಗ ನಾವು ಅವರನ್ನು ಕರೆದೆವು ; ‘‘ಇಬ್ರಾಹೀಮರೇ,’’

[104] ‘‘ನೀವು ಸ್ವಪ್ನವನ್ನು ಸಾಕಾರಗೊಳಿಸಿದಿರಿ’’. ನಾವು ಸಜ್ಜನರನ್ನು ಖಂಡಿತ ಇದೇ ರೀತಿ ಪುರಸ್ಕರಿಸುತ್ತೇವೆ

[105] ಅದು ಖಂಡಿತ ಒಂದು ಸ್ಪಷ್ಟ ಪರೀಕ್ಷೆಯಾಗಿತ್ತು

[106] ನಾವು ಅವರಿಗೆ (ಬಲಿದಾನಕ್ಕಾಗಿ) ಒಂದು ಮಹಾ ಬಲಿಪಶುವನ್ನು ನೀಡಿದೆವು

[107] ಮತ್ತು ನಾವು ಅದರ (ಆ ಘಟನೆಯ) ನೆನಪನ್ನು ಮುಂದಿನವರಲ್ಲಿ ಉಳಿಸಿದೆವು

[108] ಇಬ್ರಾಹೀಮರಿಗೆ ಶಾಂತಿ

[109] ನಾವು ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ

[110] ಅವರು ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು

[111] ಮುಂದೆ ನಾವು ಅವರಿಗೆ ಇಸ್‌ಹಾಕ್‌ರ ಶುಭ ವಾರ್ತೆಯನ್ನು ನೀಡಿದೆವು. ಅವರೊಬ್ಬ ಸಜ್ಜನ ದೇವದೂತರಾಗಿದ್ದರು

[112] ನಾವು ಅವರಿಗೂ ಇಸ್‌ಹಾಕರಿಗೂ ಸಮೃದ್ಧಿಯನ್ನು ನೀಡಿದೆವು. ಅವರಿಬ್ಬರ ಸಂತತಿಗಳಲ್ಲಿ ಸಜ್ಜನರೂ ಇದ್ದರು, ಸ್ವತಃ ತಮ್ಮ ಮೇಲೆ ಸ್ಪಷ್ಟ ಅಕ್ರಮವೆಸಗಿದವರೂ ಇದ್ದಾರೆ

[113] ನಾವು ಮೂಸಾ ಮತ್ತು ಹಾರೂನರ ಮೇಲೆ ಕೃಪೆ ತೋರಿದೆವು

[114] ಮತ್ತು ನಾವು ಅವರಿಬ್ಬರನ್ನೂ ಅವರ ಜನಾಂಗದವರನ್ನೂ ಮಹಾ ಸಂಕಟದಿಂದ ವಿಮೋಚಿಸಿದೆವು

[115] ನಾವು ಅವರಿಗೆ ನೆರವಾದೆವು. ಆದ್ದರಿಂದ ಅವರು ವಿಜಯಿಗಳಾದರು

[116] ನಾವು ಅವರಿಬ್ಬರಿಗೂ ಸವಿಸ್ತಾರವಾದ ಗ್ರಂಥವನ್ನು ನೀಡಿದ್ದೆವು

[117] ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿದ್ದೆವು

[118] ಮುಂದಿನವರಲ್ಲಿ ನಾವು ಅವರ ನೆನಪನ್ನು ಉಳಿಸಿದೆವು

[119] ಮೂಸಾ ಮತ್ತು ಹಾರೂನರಿಗೆ ಶಾಂತಿ ಸಿಗಲಿ

[120] ನಾವು ಸಜ್ಜನರನ್ನು ಖಂಡಿತ ಇದೇರೀತಿ ಪುರಸ್ಕರಿಸುತ್ತೇವೆ

[121] ಅವರಿಬ್ಬರೂ ನಮ್ಮ ವಿಶ್ವಾಸಿ ದಾಸರಾಗಿದ್ದರು

[122] ಮತ್ತು ಇಲ್ಯಾಸ್ ಖಂಡಿತ ದೇವದೂತರಲ್ಲೊಬ್ಬರಾಗಿದ್ದರು

[123] ಅವರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು (ಅಲ್ಲಾಹನಿಗೆ) ಅಂಜುವುದಿಲ್ಲವೇ?’’

[124] ‘‘ನೀವೇನು ‘ಬಅ್ಲ್‌’ ದೇವಿಗೆ ಮೊರೆ ಇಡುತ್ತೀರಾ? ಮತ್ತು ಸರ್ವ ಶ್ರೇಷ್ಠ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?’’

[125] ‘‘ಅಲ್ಲಾಹನೇ ನಿಮ್ಮ ಒಡೆಯನೂ ಹೌದು ನಿಮ್ಮ ಪೂರ್ವಜರ ಒಡೆಯನೂ ಹೌದು’’

[126] ಅವರು (ಜನಾಂಗದವರು) ಅವರನ್ನು ತಿರಸ್ಕರಿಸಿದರು. ಅವರನ್ನು ಖಂಡಿತ (ಶಿಕ್ಷೆಗಾಗಿ) ಹಾಜರು ಪಡಿಸಲಾಗುವುದು

[127] ಅಲ್ಲಾಹನ ಆಯ್ದ ದಾಸರ ಹೊರತು

[128] ಅವರ (ಇಲ್ಯಾಸರ) ನೆನಪನ್ನು ನಾವು ಮುಂದಿನವರಲ್ಲಿ ಉಳಿಸಿರುವೆವು

[129] ಇಲ್ಯಾಸ್‌ರಿಗೆ ಶಾಂತಿ ಸಿಗಲಿ

[130] ನಾವು ಖಂಡಿತ ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ

[131] ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು

[132] ಇನ್ನು ಲೂತರು ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು

[133] ನಾವು ಅವರನ್ನು ಹಾಗೂ ಅವರ ಮನೆಯವರನ್ನೆಲ್ಲಾ ರಕ್ಷಿಸಿದೆವು

[134] ಹಿಂದೆ ಉಳಿದುಕೊಂಡ ಒಬ್ಬ ವೃದ್ಧೆಯ ಹೊರತು

[135] (ಅವರ ಜನಾಂಗದ) ಇತರರನ್ನು ನಾವು ನಾಶ ಮಾಡಿಬಿಟ್ಟೆವು

[136] ನೀವಂತು ಅವರ (ನಾಡುಗಳ) ಮೇಲಿಂದಲೇ ಹಾದು ಹೋಗುತ್ತೀರಿ – ಹಗಲಲ್ಲಿ –

[137] ಮತ್ತು ಇರುಳಲ್ಲಿ. ನೀವೇನು ಆಲೋಚಿಸುವುದಿಲ್ಲವೇ

[138] ಯೂನುಸ್ ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು

[139] ಅವರು ತಮ್ಮ ತುಂಬಿದ ಹಡಗಿನೆಡೆಗೆ ಧಾವಿಸಿದರು

[140] (ಹಡಗು ಮುಳುಗುವ ಹಂತದಲ್ಲಿ) ಅವರು (ಅದೃಷ್ಟದ) ಚೀಟಿ ಎತ್ತುವುದಕ್ಕೆ ಒಪ್ಪಿದರು ಮತ್ತು ಸೋತು ಹೋದರು

[141] ಕೊನೆಗೆ (ಸಮುದ್ರಕ್ಕೆಸೆಯಲಾದ) ಅವರನ್ನು ಮೀನು ನುಂಗಿತು. ಆಗ ಅವರು ತಮ್ಮನ್ನೇ ದೂಷಿಸಿಕೊಂಡರು

[142] ಒಂದು ವೇಳೆ ಅವರು ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿರುವವರಾಗದೆ ಇದ್ದಿದ್ದರೆ

[143] ಪುನರುತ್ಥಾನದ ದಿನದವರೆಗೂ ಅವರು ಅದರ (ಮೀನಿನ) ಹೊಟ್ಟೆಯಲ್ಲೇ ಉಳಿಯುತ್ತಿದ್ದರು

[144] ಕೊನೆಗೆ ನಾವು ಅವರನ್ನು ಬಯಲಿಗೆ ಎಸೆದು ಬಿಟ್ಟೆವು. ಆಗ ಅವರು ತುಂಬಾ ಕ್ಷೀಣರಾಗಿದ್ದರು

[145] ನಾವು ಅವರ ಬಳಿ ಬಳ್ಳಿಗಳಿರುವ ಗಿಡವನ್ನು ಬೆಳೆಸಿದೆವು

[146] ಮತ್ತು ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನರಿದ್ದಲ್ಲಿಗೆ ಕಳಿಸಿದೆವು

[147] ಅವರು (ಆ ನಾಡಿನವರು) ನಂಬಿದರು ಮತ್ತು ಒಂದು ನಿರ್ದಿಷ್ಟ ಕಾಲದ ತನಕ ನಾವು ಅವರಿಗೆ ಧಾರಾಳ ಸಂಪನ್ನತೆ ನೀಡಿದೆವು

[148] ಇದೀಗ ಅವರೊಡನೆ ಕೇಳಿರಿ. ನಿಮ್ಮ ಒಡೆಯನಿಗೆ ಪುತ್ರಿಯರು ಮತ್ತು ಅವರಿಗೆ ಪುತ್ರರೇ

[149] ನಾವೇನು ಮಲಕ್‌ಗಳನ್ನು ಸ್ತ್ರೀಯರಾಗಿ ಸೃಷ್ಟಿಸಿರುವೆವೇ ? ಅದಕ್ಕೇನು ಅವರು ಸಾಕ್ಷಿಗಳಾಗಿದ್ದರೇ

[150] ನಿಮಗೆ ತಿಳಿದಿರಲಿ. ಅವರು ಖಂಡಿತ ತಾವೇ ರಚಿಸಿಕೊಂಡ ಸುಳ್ಳುಗಳನ್ನು ಹೇಳುತ್ತಿದ್ದಾರೆ

[151] ಅಲ್ಲಾಹನಿಗೆ ಸಂತತಿಗಳಿದ್ದಾರೆಂದು (ಅವರು ಹೇಳುತ್ತಾರೆ). ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ

[152] ಅವನೇನು ಪುತ್ರರಿಗಿಂತ ಪುತ್ರಿಯರಿಗೆ ಪ್ರಾಶಸ್ತ್ಯ ನೀಡಿದನೇ

[153] ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ

[154] ನೀವು ಪಾಠ ಕಲಿಯುವುದಿಲ್ಲವೇ

[155] ಅಥವಾ ನಿಮ್ಮ ಬಳಿ ಸ್ಪಷ್ಟ ಪುರಾವೆಯೇನಾದರೂ ಇದೆಯೇ

[156] ನೀವು ಸತ್ಯವಂತರಾಗಿದ್ದರೆ ತನ್ನಿರಿ, ನಿಮ್ಮ ಗ್ರಂಥವನ್ನು

[157] ಅವರು ಅವನ (ಅಲ್ಲಾಹನ) ಹಾಗೂ ಜಿನ್ನ್‌ಗಳ ನಡುವೆ ಸಂಬಂಧ ಕಲ್ಪಿಸುತ್ತಾರೆ. ತಮ್ಮನ್ನು (ನರಕದೆದುರು) ಹಾಜರುಗೊಳಿಸಲಾಗುವುದೆಂದು (ಧಿಕ್ಕಾರಿ) ಜಿನ್ನ್‌ಗಳಿಗೆ ಖಂಡಿತ ತಿಳಿದಿದೆ

[158] ಅಲ್ಲಾಹನು ಅವರ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದಾನೆ

[159] ಅಲ್ಲಾಹನು ಆಯ್ದುಕೊಂಡ ದಾಸರು ಮಾತ್ರ ಭಿನ್ನರಾಗಿರುತ್ತಾರೆ

[160] ಖಂಡಿತವಾಗಿಯೂ ನೀವು ಮತ್ತು ನೀವು ಪೂಜಿಸುವ ವಸ್ತುಗಳು –

[161] ಅವನ (ಅಲ್ಲಾಹನ) ವಿಷಯದಲ್ಲಿ ಯಾರನ್ನೂ ಮೋಸಗೊಳಿಸುವಂತಿಲ್ಲ –

[162] ನರಕಕ್ಕೆ ಹೋಗುವವನೆಂದು ವಿಧಿಸಲ್ಪಟ್ಟವನ ಹೊರತು

[163] (ಮಲಕ್‌ಗಳು ಹೇಳುತ್ತಾರೆ:) ‘‘ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವು ನಿಶ್ಚಿತವಾಗಿದೆ

[164] ಮತ್ತು ನಾವು (ಅಲ್ಲಾಹನ ಮಂದೆ) ಸಾಲುಗಟ್ಟಿ ನಿಂತಿರುತ್ತೇವೆ

[165] ಮತ್ತು ನಾವು ಖಂಡಿತ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿರುತ್ತೇವೆ‘‘

[166] ಈ ಹಿಂದೆ ಅವರು (ಧಿಕ್ಕಾರಿಗಳು) ಹೇಳುತ್ತಿದ್ದರು

[167] ‘‘ನಮ್ಮ ಬಳಿ ಗತ ಕಾಲದವರ ಬೋಧನೆಗಳು (ದಿವ್ಯ ಗ್ರಂಥ) ಇದ್ದಿದ್ದರೆ

[168] ನಾವು ಖಂಡಿತ ಆಯ್ದ ದಾಸರ ಸಾಲಿಗೆ ಸೇರಿರುತ್ತಿದ್ದೆವು’’

[169] ಆದರೆ (ದಿವ್ಯ ಗ್ರಂಥವು ಬಂದಾಗ) ಅವರು ಅದನ್ನು ಧಿಕ್ಕರಿಸಿದರು. ಇದೀಗ ಅದರ ಪರಿಣಾಮವು ಅವರಿಗೆ ತಿಳಿಯಲಿದೆ

[170] ದೂತರಾಗಿರುವ ನಮ್ಮ ದಾಸರ ವಿಷಯದಲ್ಲಿ ನಮ್ಮ ಹೇಳಿಕೆಯು ಈಗಾಗಲೇ ವಿಧಿತವಾಗಿದೆ

[171] (ಅದೇನೆಂದರೆ), ಅವರಿಗೆ ಖಂಡಿತ ಸಹಾಯ ಸಿಗಲಿದೆ

[172] ಮತ್ತು ಖಂಡಿತವಾಗಿಯೂ ನಮ್ಮ ಪಡೆಗಳೇ ಗೆಲ್ಲುವವು

[173] (ದೂತರೇ,) ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು (ಧಿಕ್ಕಾರಿಗಳನ್ನು) ಕಡೆಗಣಿಸಿರಿ

[174] ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು

[175] ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿದ್ದಾರೆಯೇ

[176] ಅದು ಅವರ ಅಂಗಳಕ್ಕೆ ಬಂದಿಳಿದಾಗ, ಈಗಾಗಲೆ ಎಚ್ಚರಿಸಲ್ಪಟ್ಟವರ ಪಾಲಿಗೆ ಅದು ಬಹಳ ಕೆಟ್ಟ ಮುಂಜಾನೆಯಾಗಿರುವುದು

[177] ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು ಕಡೆಗಣಿಸಿರಿ

[178] ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು

[179] ನಿಮ್ಮ ಪಾವನ (ಗೌರವಾನ್ವಿತ) ಒಡೆಯನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನಾಗಿದ್ದಾನೆ

[180] ದೂತರಿಗೆ ಶಾಂತಿ ಸಿಗಲಿ

[181] ಮತ್ತು ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು

[182] ಸ್ವಾದ್. ಉಪದೇಶ ತುಂಬಿರುವ ಕುರ್‌ಆನಿನಾಣೆ

ಸ್ವಾಡ್

Surah 38

[1] ನಿಜವಾಗಿ ಧಿಕ್ಕಾರಿಗಳು ಅಹಂಕಾರ ಹಾಗೂ ಹಠಮಾರಿತನದಲ್ಲಿದ್ದಾರೆ

[2] ಅವರಿಗಿಂತ ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಗೋಗರೆದರು. ಆದರೆ, ಅವರ ಬಿಡುಗಡೆಗೆ ಕಾಲಾವಧಿ ಉಳಿದಿರಲಿಲ್ಲ

[3] ಅವರ ಪೈಕಿಯೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿಪಟ್ಟರು ಮತ್ತು ಧಿಕ್ಕಾರಿಗಳು ಹೇಳಿದರು; ‘‘ಅವನು ಸುಳ್ಳು ಹೇಳುತ್ತಿರುವ ಒಬ್ಬ ಮಾಟಗಾರನಾಗಿದ್ದಾನೆ’’

[4] ‘‘ಅವನು ಎಲ್ಲ ದೇವರುಗಳನ್ನು ಒಬ್ಬ ದೇವರಾಗಿಸಿ ಬಿಟ್ಟಿದ್ದಾನೆ. ಇದು ಖಂಡಿತ ವಿಚಿತ್ರವಾಗಿದೆ’’

[5] ಅವರ ಕೆಲವು ನಾಯಕರು ಹೊರಟು ಹೋಗುತ್ತಾ ಹೇಳಿದರು; ‘‘ಹೊರಡಿರಿ ಮತ್ತು ನಿಮ್ಮ ದೇವರುಗಳಿಗೇ ನಿಷ್ಠರಾಗಿರಿ. ಅದರ (ಸತ್ಯ ಸಂದೇಶದ) ಹಿಂದೆ ಖಂಡಿತ ಏನೋ ಸ್ವಾರ್ಥವಿದೆ’’

[6] ‘‘ನಾವು ಗತಕಾಲದ ಧರ್ಮದಲ್ಲಿ ಅಂತಹದೇನನ್ನೂ ಕೇಳಿಲ್ಲ. ಅದು ಖಂಡಿತ (ಅವನ) ಸ್ವಂತ ರಚನೆಯಾಗಿದೆ’’

[7] ‘‘ಉಪದೇಶವನ್ನು ನಮ್ಮ ನಡುವೆ ಇವನಿಗೇ ಇಳಿಸಿಕೊಡಲಾಗಿದೆಯೇ?’’ ನಿಜವಾಗಿ ಅವರು ನನ್ನ ಉಪದೇಶದ ಕುರಿತು ಸಂಶಯದಲ್ಲಿದ್ದಾರೆ. ಅವರಿನ್ನೂ ಶಿಕ್ಷೆಯ ರುಚಿಯನ್ನು ಕಂಡಿಲ್ಲ

[8] ಪ್ರಬಲನೂ ಉದಾರಿಯೂ ಆಗಿರುವ ನಿಮ್ಮ ಒಡೆಯನ ಅನುಗ್ರಹದ ಭಂಡಾರಗಳೇನು ಅವರ ಬಳಿ ಇವೆಯೇ

[9] ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಸರ್ವಾಧಿಕಾರವೇನು ಅವರಿಗೆ ಸೇರಿದೆಯೇ? ಹಾಗಾದರೆ ಅವರು ಏಣಿಗಳನ್ನೇರಿ ಹತ್ತಿನೋಡಲಿ

[10] ಅವರೊಂದು ಸೋತ ಸೇನೆಯಾಗಿದ್ದಾರೆ

[11] ಅವರಿಗಿಂತ ಹಿಂದಿನವರೂ ತಿರಸ್ಕರಿಸಿದ್ದರು. ನೂಹರ ಜನಾಂಗದವರು, ಆದ್ (ಜನಾಂಗದವರು) ಹಾಗೂ ಮೊಳೆಯವನಾದ ಫಿರ್‌ಔನ್‌ನ ಜನರು

[12] ಹಾಗೆಯೇ ಸಮೂದರು ಹಾಗೂ ಲೂತ್‌ರ ಜನಾಂಗದವರು ಮತ್ತು ಐಕಃದವರು. ಅವರೆಲ್ಲಾ (ಸತ್ಯವಿರೋಧಿ) ಪಡೆಗಳಾಗಿದ್ದರು. ಅವರೆಲ್ಲರೂ ದೂತರುಗಳನ್ನು ತಿರಸ್ಕರಿಸಿದರು. ಕೊನೆಗೆ, ಅವರ ಮೇಲೆ ನನ್ನ ಶಿಕ್ಷೆಯು ಬಂದೆರಗಿತು

[13] ಅವರು ಕಾಯುತ್ತಿರುವ ಘಟನೆಯು, ಕೇವಲ ಒಂದು ಆರ್ಭಟವಾಗಿರುವುದು. ಆಬಳಿಕ ಯಾವ ರಿಯಾಯ್ತಿಯೂ ಸಿಗದು

[14] ಅವರು (ವ್ಯಂಗ್ಯವಾಗಿ) ಹೇಳಿದರು; ನಮ್ಮೊಡೆಯಾ, ನಮಗೆ ನಮ್ಮ ಪಾಲನ್ನು ವಿಚಾರಣೆಯ ದಿನಕ್ಕಿಂತ ಮೊದಲೇ ತುರ್ತಾಗಿ ಕೊಟ್ಟುಬಿಡು

[15] (ದೂತರೇ,) ಅವರು ಆಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ ಮತ್ತು ನಮ್ಮ ಶಕ್ತಿಶಾಲಿ ದಾಸರಾಗಿದ್ದ ದಾವೂದರನ್ನು ಸ್ಮರಿಸಿರಿ. ಅವರು ಖಂಡಿತ ಪದೇ ಪದೇ (ಅಲ್ಲಾಹನೆಡೆಗೆ) ಮರಳುವವರಾಗಿದ್ದರು

[16] ನಾವು ಅವರ ಜೊತೆಗೆ ಪರ್ವತಗಳನ್ನು ವಿಧೇಯಗೊಳಿಸಿದ್ದೆವು. ಅವು ಸಂಜೆ ಹಾಗೂ ಮುಂಜಾನೆ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿದ್ದವು

[17] ಹಾಗೆಯೇ, ಪಕ್ಷಿಗಳು ಅವರ ಬಳಿ ಬಂದು ಸೇರುತ್ತಿದ್ದವು. ಅವೆಲ್ಲವೂ ಅವರೆಡೆಗೆ ಮರಳುತ್ತಿದ್ದವು

[18] ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿದ್ದೆವು ಮತ್ತು ಅವರಿಗೆ ಯುಕ್ತಿಯನ್ನು ಹಾಗೂ ನಿರ್ಣಾಯಕ ತೀರ್ಪು ನೀಡುವ ಸಾಮರ್ಥ್ಯವನ್ನು ನೀಡಿದ್ದೆವು

[19] ಆ ಜಗಳ ನಿರತರ ವೃತ್ತಾಂತವು ನಿಮಗೆ ತಲುಪಿದೆಯೇ? ಅವರು ಗೋಡೆ ಹಾರಿ ಮಸೀದಿಯೊಳಗೆ ಬಂದು ಬಿಟ್ಟಿದ್ದರು

[20] ಅವರು ಹಠಾತ್ತನೆ ದಾವೂದರ ಬಳಿಗೆ ಬಂದಾಗ ಅವರು ಬೆಚ್ಚಿ ಬಿದ್ದರು. ಅವರು ಹೇಳಿದರು ; ಅಂಜಬೇಡಿ, ನಾವು ಎರಡು ಜಗಳ ನಿರತ ಗುಂಪುಗಳು. ನಮ್ಮಲ್ಲಿ ಒಂದು ಗುಂಪು ಇನ್ನೊಂದರ ಮೇಲೆ ಅನ್ಯಾಯವೆಸಗಿದೆ. ನೀವೀಗ ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಿರಿ ಮತ್ತು ಅತಿರೇಕವೆಸಗಬೇಡಿ. ಸರಿಯಾದ ಮಾರ್ಗದೆಡೆಗೆ ನೀವು ನಮಗೆ ಮಾರ್ಗದರ್ಶನ ಮಾಡಿರಿ

[21] ಇವನು ನನ್ನ ಸಹೋದರ. ಇವನ ಬಳಿ ತೊಂಭತ್ತೊಂಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದು ಕುರಿ ಮಾತ್ರ ಇದೆ. ಅವನೀಗ ‘‘ಅದನ್ನೂ ನನಗೆ ಕೊಟ್ಟು ಬಿಡು’’ ಎನ್ನುತ್ತಿದ್ದಾನೆ ಮತ್ತು ಮಾತಿನಲ್ಲಿ ಅವನು ನನ್ನನ್ನು ಸೋಲಿಸಿದ್ದಾನೆ

[22] ಅವರು (ದಾವೂದರು) ಹೇಳಿದರು ; ‘‘ನಿನ್ನ ಕುರಿಯನ್ನು ತನ್ನ ಕುರಿಗಳ ರಾಶಿಗೆ ಸೇರಿಸಲು ಆಗ್ರಹಿಸುವ ಮೂಲಕ ಅವನು ಖಂಡಿತ ನಿನ್ನ ಮೇಲೆ ಅಕ್ರಮವೆಸಗಿರುವನು. ಖಂಡಿತವಾಗಿಯೂ, ಜೊತೆಗೂಡಿ ಬದುಕುವವರಲ್ಲಿ ಹೆಚ್ಚಿನವರು ಪರಸ್ಪರ ಅನ್ಯಾಯವೆಸಗುತ್ತಾರೆ – ವಿಶ್ವಾಸಿಗಳು ಮತ್ತು ಸತ್ಕರ್ಮಿಗಳ ಹೊರತು. ಮತ್ತು ಅಂಥವರು ತುಂಬಾ ಕಡಿಮೆ‘‘. (ಈ ಮೂಲಕ) ನಾವು ತಮ್ಮನ್ನು ಪರೀಕ್ಷಿಸಿದೆವೆಂಬುದನ್ನು ದಾವೂದರು ಮನಗಂಡರು ಮತ್ತು ಅವರು ತಮ್ಮ ಒಡೆಯನ ಮುಂದೆ ಕ್ಷಮೆಯಾಚಿಸುತ್ತಾ, ಅವನಿಗೆ ಶರಣಾಗಿ, ಬಾಗುತ್ತಾ ಸಾಷ್ಟಾಂಗವೆರಗಿ ಬಿಟ್ಟರು

[23] ಕೊನೆಗೆ ನಾವು ಅವರಿಗಾಗಿ ಅದನ್ನು (ಅವರ ಪ್ರಮಾದವನ್ನು) ಕ್ಷಮಿಸಿ ಬಿಟ್ಟೆವು ಮತ್ತು ಅವರಿಗಾಗಿ ನಮ್ಮ ಬಳಿ ಸಾಮೀಪ್ಯ ಹಾಗೂ ಶ್ರೇಷ್ಠ ಫಲಿತಾಂಶವಿದೆ

[24] ದಾವೂದರೇ, ನಾವು ಖಂಡಿತ ನಿಮ್ಮನ್ನು ಭೂಮಿಯಲ್ಲಿ (ನಮ್ಮ) ಪ್ರತಿನಿಧಿಯಾಗಿಸಿರುವೆವು. ನೀವು ಜನರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಕೈಗೊಳ್ಳಿರಿ ಮತ್ತು ಸ್ವೇಚ್ಛೆಯನ್ನು ಅನುಸರಿಸಬೇಡಿ. ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಿ ಬಿಡುವುದು. ಅಲ್ಲಾಹನ ಮಾರ್ಗದಿಂದ ದೂರ ಸರಿದು ಬಿಟ್ಟವರಿಗೆ, ಅವರು ವಿಚಾರಣೆಯ ದಿನವನ್ನು ಮರೆತುದಕ್ಕಾಗಿ ಖಂಡಿತ, ತೀವ್ರ ಶಿಕ್ಷೆ ಇದೆ

[25] ನಾವು ಆಕಾಶವನ್ನಾಗಲಿ, ಭೂಮಿಯನ್ನಾಗಲಿ ಅವೆರಡರ ನಡುವೆ ಇರುವ ಯಾವುದನ್ನೇ ಆಗಲಿ ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಕೇವಲ ಧಿಕ್ಕಾರಿಗಳ ಭ್ರಮೆಯಾಗಿದೆ. ಧಿಕ್ಕಾರಿಗಳಿಗೆ ವಿನಾಶವಿದೆ, ಅಗ್ನಿಯ ಮೂಲಕ

[26] ನಾವೇನು, ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು, ಭೂಮಿಯಲ್ಲಿ ಅಶಾಂತಿ ಹಬ್ಬುವವರಂತೆ ಮಾಡುವೆವೇ? ನಾವೇನು ಧರ್ಮ ನಿಷ್ಠರನ್ನು ದುಷ್ಕರ್ಮಿಗಳಂತೆ ಮಾಡುವೆವೇ

[27] ನಾವು ನಿಮ್ಮೆಡೆಗೆ ಒಂದು ಸಮೃದ್ಧ ಗ್ರಂಥವನ್ನು ಇಳಿಸಿರುವೆವು, ಜನರು ಅದರ ವಚನಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿ ಉಳ್ಳವರು ಪಾಠ ಕಲಿಯಲೆಂದು

[28] ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ದಯಪಾಲಿಸಿದೆವು. ಅವರೊಬ್ಬ ಶ್ರೇಷ್ಠ ದಾಸರಾಗಿದ್ದರು. ಅವರು ಖಂಡಿತ ಪದೇ ಪದೇ (ಅಲ್ಲಾಹನೆಡೆಗೆ) ಮರಳುವವರಾಗಿದ್ದರು

[29] ಒಂದು ಸಂಜೆ ಭಾರೀ ಬಲಿಷ್ಠ ಕುದುರೆಗಳನ್ನು ಅವರ ಮುಂದೆ ಹಾಜರು ಪಡಿಸಲಾಯಿತು

[30] ಅವರು ಹೇಳಿದರು; ‘‘ನಾನು ನನ್ನ ಒಡೆಯನ ನೆನಪಿಗಿಂತ, ಸಂಪತ್ತಿನ ಪ್ರೇಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿಬಿಟ್ಟೆನು. ಎಷ್ಟೆಂದರೆ (ವಾಸ್ತವವು) ತೆರೆಯ ಮರೆಗೆ ಸರಿದು ಬಿಟ್ಟಿತು’’

[31] ‘‘ಅವುಗಳನ್ನು (ಆ ಕುದುರೆಗಳನ್ನು) ಮತ್ತೆ ನನ್ನ ಮುಂದೆ ತನ್ನಿರಿ’’. ಆ ಬಳಿಕ ಅವರು ಅವುಗಳ ಪಾದಗಳನ್ನು ಹಾಗೂ ಕೊರಳುಗಳನ್ನು ನೇವರಿಸಿದರು

[32] ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ಶರೀರವನ್ನು ಹಾಕಿ ಬಿಟ್ಟೆವು. ಆ ಬಳಿಕ ಅವರು (ಅಲ್ಲಾಹನ ಬಳಿಗೆ) ಮರಳಿದರು

[33] ಅವರು ಹೇಳಿದರು; ‘‘ನನ್ನೊಡೆಯಾ, ನನ್ನನ್ನು ಕ್ಷಮಿಸು ಮತ್ತು ನನ್ನ ಬಳಿಕ ಯಾರಿಗೂ ಸಿಗದಂತಹ ಸಾಮ್ರಾಜ್ಯವನ್ನು ನನಗೆ ನೀಡು. ನೀನು ಖಂಡಿತ ಉದಾರಿಯಾಗಿರುವೆ’’

[34] ಹೀಗೆ ನಾವು ಗಾಳಿಯನ್ನು ಅವರಿಗೆ ವಿಧೇಯಗೊಳಿಸಿದೆವು. ಅದು ಅವರ ಆದೇಶದಂತೆ, ಅವರು ಬಯಸುವಲ್ಲಿಗೆ ನಿಧಾನವಾಗಿ ಚಲಿಸುತ್ತಿತ್ತು

[35] ಕಟ್ಟಡಗಳನ್ನು ಕಟ್ಟುವ ಹಾಗೂ ನೀರಿನ ಆಳಕ್ಕಿಳಿಯುವ ಶೈತಾನರನ್ನು (ವಿದ್ರೋಹಿ ಜಿನ್ನ್‌ಗಳನ್ನು)

[36] ಮತ್ತು ಸರಪಣಿಗಳಲ್ಲಿ ಬಂಧಿತವಾಗಿದ್ದ ಇತರ ಕೆಲವು ಜೀವಿಗಳನ್ನು (ಅವರಿಗೆ ವಿಧೇಯಗೊಳಿಸಲಾಗಿತ್ತು)

[37] ಇದು ನಮ್ಮ ಕೊಡುಗೆ. (ಇದರಿಂದ) ಇತರರಿಗೆ ಕೊಡಿರಿ ಅಥವಾ ಎಣಿಕೆ ಮಾಡದೆ ನೀವೇ ಇಟ್ಟು ಕೊಳ್ಳಿರಿ

[38] ಅವರಿಗಾಗಿ ಖಂಡಿತ ನಮ್ಮ ಬಳಿ ಸಾಮೀಪ್ಯ ಹಾಗೂ ಶ್ರೇಷ್ಠ ಫಲಿತಾಂಶವಿದೆ

[39] ನೀವು ನಮ್ಮ ದಾಸ ಅಯ್ಯೂಬರನ್ನು ಸ್ಮರಿಸಿರಿ. ಅವರು ತಮ್ಮ ಒಡೆಯನಿಗೆ ಮೊರೆ ಇಟ್ಟರು; ‘‘ಶೈತಾನನು ನನ್ನನ್ನು ಸಂಕಟಕ್ಕೀಡು ಮಾಡಿದ್ದಾನೆ ಮತ್ತು ನನ್ನನ್ನು ತುಂಬಾ ಹಿಂಸಿಸಿದ್ದಾನೆ’’

[40] ನಾವು ಹೇಳಿದೆವು; ‘‘ನೀವು ಕಾಲಿನಿಂದ (ನೆಲಕ್ಕೆ) ಒದೆಯಿರಿ. ಇದೋ, ಸ್ನಾನಕ್ಕೆ ಹಾಗೂ ಕುಡಿಯುವುದಕ್ಕೆ, ಹಿತವಾದ ತಣ್ಣೀರು’’

[41] ನಾವು ಅವರಿಗೆ, ಅವರ ಮನೆಯವರಿಗೆ ಹಾಗೂ ಅವರ ಜೊತೆಗಿದ್ದ ಅವರಂತಹ ಇತರರಿಗೆ ನಮ್ಮ ಕಡೆಯಿಂದ ಅನುಗ್ರಹವನ್ನು ದಯಪಾಲಿಸಿದೆವು. ಬುದ್ಧಿ ಯುಳ್ಳವರಿಗೆ ಅದರಲ್ಲಿ ಉಪದೇಶವಿದೆ

[42] ‘‘ನೀವು ಪೊರಕೆಯನ್ನು ಕೈಗೆತ್ತಿಕೊಂಡು ಹೊಡೆಯಿರಿ. ಮತ್ತು ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಬೇಡಿ’’ (ಎಂದು ನಾವು ಹೇಳಿದೆವು). ನಾವು ಅವರನ್ನು ಸಹನಶೀಲರಾಗಿ ಕಂಡೆವು. ಅವರು ಶ್ರೇಷ್ಠ ದಾಸರಾಗಿದ್ದರು ಮತ್ತು ಅವರು ಖಂಡಿತ ಮರಳುವವರಾಗಿದ್ದರು

[43] ನಮ್ಮ ದಾಸರಾದ ಇಬ್ರಾಹೀಮರನ್ನು, ಇಸ್‌ಹಾಕರನ್ನು ಮತ್ತು ಯಅ್ಕೂಬ್‌ರನ್ನು ಸ್ಮರಿಸಿರಿ. ಅವರು ಶಕ್ತಿವಂತರೂ ದೂರದೃಷ್ಟಿ ಉಳ್ಳವರೂ ಆಗಿದ್ದರು

[44] ನಾವು ಅವರಲ್ಲಿ ಒಂದು ವಿಶೇಷ ಗುಣವನ್ನು ಮೈಗೂಡಿಸಿದ್ದೆವು – ಪರಲೋಕದ ಸ್ಮರಣೆ (ಎಂಬ ಗುಣ)

[45] ನಮ್ಮ ಬಳಿ ಅವರು, ಆಯ್ದ, ಅತ್ಯುತ್ತಮ ವ್ಯಕ್ತಿಗಳಾಗಿದ್ದರು

[46] ನೀವು ಇಸ್ಮಾಈಲ್‌ರನ್ನು ಅಲ್‌ಯಸಅರನ್ನು ಹಾಗೂ ಝುಲ್‌ಕಿಫ್ಲ್‌ರನ್ನು ಸ್ಮರಿಸಿರಿ. ಅವರೆಲ್ಲರೂ ಅತ್ಯುತ್ತಮರಾಗಿದ್ದರು

[47] ಇದು ಒಂದು ಉಪದೇಶವಾಗಿದೆ. ಧರ್ಮನಿಷ್ಠರಿಗೆ ಖಂಡಿತ, ಅತ್ಯುತ್ತಮ ನೆಲೆ ಸಿಗಲಿದೆ

[48] ಶಾಶ್ವತವಾದ ಉದ್ಯಾನಗಳ ಬಾಗಿಲುಗಳು ಅವರಿಗಾಗಿ ತೆರೆದಿರುವವು

[49] ಅವರು ಅವುಗಳಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು. ಧಾರಾಳ ಹಣ್ಣು ಹಂಪಲುಗಳನ್ನು ಹಾಗೂ ಪಾನೀಯಗಳನ್ನು ತರಿಸುವರು

[50] ಸದಾ ದೃಷ್ಟಿ ತಗ್ಗಿಸಿಕೊಂಡಿರುವ (ಮಾನವಂತ) ಸಹವಯಸ್ಕ ಸ್ತ್ರೀಯರು ಅವರ ಜೊತೆಗಿರುವರು

[51] ಇವು ವಿಚಾರಣೆಯ ದಿನದ ಕುರಿತಂತೆ ನಿಮಗೆ ನೀಡಲಾಗುತ್ತಿರುವ ಆಶ್ವಾಸನೆಗಳು

[52] ಇವು ಖಂಡಿತ ಕೊಡುಗೆಗಳಾಗಿವೆ. ಇವುಗಳಿಗೆ ಅಂತ್ಯವಿಲ್ಲ

[53] ಇದು (ಸಜ್ಜನರ ಪ್ರತಿಫಲ). ಅತ್ತ, ವಿದ್ರೋಹಿಗಳಿಗೆ ಅತ್ಯಂತ ನಿಕೃಷ್ಟ ನೆಲೆ ಇದೆ

[54] ಅವರು ನರಕವನ್ನು ಪ್ರವೇಶಿಸುವರು. ಅದು ತೀರಾ ಕೆಟ್ಟ ನೆಲೆ

[55] ಇದು (ಅವರ ಗತಿ). ಸವಿಯಿರಿ ಕುದಿಯುವ ನೀರನ್ನು ಹಾಗೂ ತೀರಾ ಕೊಳಕು ದ್ರವ್ಯವನ್ನು

[56] ಮತ್ತು ಅಲ್ಲಿ, ಇದೇ ತರದ ಇನ್ನೂ ಅನೇಕ ವಸ್ತುಗಳಿರುವವು

[57] ಇದೋ ಈ ಗುಂಪೂ ನಿಮ್ಮ ಜೊತೆ ನರಕಕ್ಕೆ ನುಸುಳುತ್ತಿದೆ. ಅವರನ್ನು ಸ್ವಾಗತಿಸುವವರು ಯಾರೂ ಇಲ್ಲ. ಅವರು ಖಂಡಿತ ನರಕಾಗ್ನಿಯಲ್ಲಿ ಸುಟ್ಟು ಹೋಗುವರು

[58] ಅವರು (ತಮಗಿಂತ ಮೊದಲು ಬಂದವರೊಡನೆ) ಹೇಳುವರು; ನಿಮಗೂ ಇಲ್ಲಿ ಸ್ವಾಗತವೇನಿಲ್ಲ. ನೀವೇ ನಮ್ಮನ್ನು ಇಲ್ಲಿಗೆ ಮುನ್ನಡೆಸಿದವರು. ಬಹಳ ಕೆಟ್ಟ ನೆಲೆ ಇದು

[59] ಅವರು ಹೇಳುವರು; ನಮ್ಮೊಡೆಯಾ, ನಮ್ಮನ್ನು ಇಲ್ಲಿಗೆ ಮುನ್ನಡೆಸಿದವರಿಗೆ ನರಕದಲ್ಲಿನ ಶಿಕ್ಷೆಯನ್ನು ಹೆಚ್ಚಿಸಿ ದುಪ್ಪಟ್ಟುಗೊಳಿಸಿಬಿಡು

[60] ಮತ್ತು ಅವರು ಹೇಳುವರು; ನಮಗೆ ಇದೇನಾಗಿದೆ? ದುಷ್ಟರೆಂದು ನಾವು ಪರಿಗಣಿಸಿದ್ದ ಜನರು (ಇಲ್ಲಿ) ನಮಗೆ ಕಾಣಿಸುತ್ತಿಲ್ಲವಲ್ಲಾ

[61] ನಾವು ಅವರನ್ನು ಗೇಲಿ ಮಾಡುತ್ತಿದ್ದೆವು. (ನಮ್ಮ) ಕಣ್ಣುಗಳೇನು ಅವರನ್ನು ಕಾಣಲು ಅಸಮರ್ಥವಾಗಿವೆಯೇ

[62] ಖಂಡಿತವಾಗಿಯೂ ಇದು ಸತ್ಯ. ನರಕದವರು (ಹೀಗೆಯೇ) ಜಗಳಾಡುವರು

[63] (ದೂತರೇ,) ಹೇಳಿರಿ; ನಾನು ಕೇವಲ ಎಚ್ಚರಿಸುವವನು. ಏಕ ಮಾತ್ರನೂ ಬಲಿಷ್ಠನೂ ಆಗಿರುವ ಅಲ್ಲಾಹನ ಹೊರತು ಬೇರೆ ದೇವರಿಲ್ಲ

[64] ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನೂ, ಭಾರೀ ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿರುವನು

[65] ಹೇಳಿರಿ; ಇದೊಂದು ದೊಡ್ಡ (ಮಹತ್ವದ) ಸುದ್ದಿ

[66] ಆದರೆ, ನೀವು ಇದನ್ನು ಕಡೆಗಣಿಸುತ್ತಿರುವಿರಿ

[67] ಮೇಲಿನ ಲೋಕದಲ್ಲಿ ಅವರು ಜಗಳಾಡಿದ ಕುರಿತು ನನಗೆ ಯಾವ ಮಾಹಿತಿಯೂ ಇರಲಿಲ್ಲ

[68] ಇದೆಲ್ಲಾ ನನಗೆ ನೀಡಲಾಗಿರುವ ದಿವ್ಯ ಸಂದೇಶವಾಗಿದೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ

[69] ನಿಮ್ಮೊಡೆಯನು ಮಲಕ್‌ಗಳೊಡನೆ ಹೇಳಿದನು; ‘‘ನಾನು ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ’’

[70] ‘‘ನಾನು ಆತನನ್ನು ರಚಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ’’

[71] ಮಲಕ್‌ಗಳೆಲ್ಲರೂ ಜೊತೆಯಾಗಿ ಸಾಷ್ಟಾಂಗವೆರಗಿದರು

[72] ಆದರೆ ಇಬ್ಲೀಸನ ಹೊರತು. ಅವನು ಅಹಂಕಾರ ತೋರಿದನು ಮತ್ತು ಅವನು ಧಿಕ್ಕಾರಿಯಾಗಿದ್ದನು

[73] ಅವನು (ಅಲ್ಲಾಹನು) ಹೇಳಿದನು; ಇಬ್ಲೀಸನೇ, ನಾನು ನನ್ನ ಕೈಯ್ಯರೆ ಸೃಷ್ಟಿಸಿ ದವನ ಮುಂದೆ ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದ ಅಂಶ ಯಾವುದು? ನೀನು ಅಹಂಕಾರ ತೋರಿದೆಯಾ? ಅಥವಾ ನೀನೇನು ತುಂಬಾ ಉನ್ನತ ಸ್ಥಾನದವನೇ

[74] ಅವನು(ಶೈತಾನನು) ಹೇಳಿದನು; ನಾನು ಅವನಿಗಿಂತ (ಮಾನವನಿಗಿಂತ) ಶ್ರೇಷ್ಠನು. ನೀನು ನನ್ನನ್ನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ನೀನು ಮಣ್ಣಿನಿಂದ ಸೃಷ್ಟಿಸಿರುವೆ

[75] ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ನೀನು ನಿಂದ್ಯನಾಗಿರುವೆ

[76] ಖಂಡಿತವಾಗಿಯೂ ಅಂತಿಮ ಪ್ರತಿಫಲದ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು

[77] ಅವನು (ಶೈತಾನನು) ಹೇಳಿದನು; ನನ್ನೊಡೆಯಾ ಎಲ್ಲರನ್ನೂ ಮತ್ತೆ ಜೀವಂತಗೊಳಿಸುವ ದಿನದ ತನಕ ನನಗೆ ಕಾಲಾವಕಾಶ ನೀಡು

[78] ಅವನು (ಅಲ್ಲಾಹನು) ಹೇಳಿದನು; ಸರಿ, ನಿನಗೆ ಅವಕಾಶ ನೀಡಲಾಗಿದೆ

[79] ಒಂದು ನಿರ್ದಿಷ್ಟ ಕಾಲದ ತನಕ

[80] ಅವನು (ಶೈತಾನ್) ಹೇಳಿದನು; ನಿನ್ನ ಗೌರವದಾಣೆ! ನಾನು ಅವರೆಲ್ಲರನ್ನೂ ದಾರಿಗೆಡಿಸಿ ಬಿಡುವೆನು

[81] ಅವರ ಪೈಕಿ ನೀನು ಆರಿಸಿಕೊಂಡ ದಾಸರ ಹೊರತು

[82] ಅವನು (ಅಲ್ಲಾಹನು) ಹೇಳಿದನು; ಇದು ಸತ್ಯ, ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ

[83] ನಾನು ನರಕವನ್ನು ನಿನ್ನಿಂದ ಹಾಗೂ ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ತುಂಬಿ ಬಿಡಲಿದ್ದೇನೆ

[84] (ದೂತರೇ,) ಹೇಳಿರಿ; ನಾನು ಇದಕ್ಕಾಗಿ (ಸತ್ಯ ಪ್ರಸಾರಕ್ಕಾಗಿ) ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ ಮತ್ತು ನಾನು ವಂಚಕನಲ್ಲ

[85] ಇದು (ಕುರ್‌ಆನ್) ಸರ್ವ ಲೋಕಗಳಿಗಿರುವ ಉಪದೇಶವಾಗಿದೆ

[86] ಇದರ ವಾಸ್ತವವು ತುಸುಕಾಲದ ಬಳಿಕ ನಿಮಗೆ ಖಂಡಿತ ತಿಳಿಯಲಿದೆ

[87] (ಇದು) ಪ್ರಬಲನೂ ಯುಕ್ತಿವಂತನೂ ಆಗಿರುವ ಅಲ್ಲಾಹನ ಕಡೆಯಿಂದ ಇಳಿಸಿ ಕೊಡಲಾಗಿರುವ ಗ್ರಂಥ

[88] (ದೂತರೇ,) ಖಂಡಿತವಾಗಿಯೂ ನಾವು ಇದನ್ನು ಸತ್ಯದೊಂದಿಗೆ ನಿಮ್ಮೆಡೆಗೆ ಇಳಿಸಿಕೊಟ್ಟಿರುತ್ತೇವೆ. ನೀವಿನ್ನು ನಿಷ್ಠೆಯನ್ನು ಅವನಿಗೇ ಮೀಸಲಾಗಿಟ್ಟು, ಅವನನ್ನು ಆರಾಧಿಸಿರಿ

ಗುಂಪುಗಳು

Surah 39

[1] ನೆನಪಿರಲಿ, ನಿಷ್ಠೆಯು ಅಲ್ಲಾಹನಿಗೇ ಮೀಸಲಾಗಿರಲಿ. ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರು, ‘‘ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸುವರೆಂದು ಮಾತ್ರ ನಾವು ಅವರನ್ನು ಪೂಜಿಸುತ್ತೇವೆ’’ ಎನ್ನುತ್ತಾರೆ. ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅಲ್ಲಾಹನೇ ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನಾಗಿರುವ ಕೃತಘ್ನನಿಗೆ ಅಲ್ಲಾಹನು ಖಂಡಿತ ಸರಿ ದಾರಿಯನ್ನು ತೋರುವುದಿಲ್ಲ

[2] ಅಲ್ಲಾಹನು ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳಲು ಬಯಸಿದ್ದರೆ, ಅವನು ತನ್ನ ಸೃಷ್ಟಿಗಳ ಪೈಕಿ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಿದ್ದನು. ಅವನು ಪಾವನನು. ಆ ಅಲ್ಲಾಹನು, ಅನುಪಮನಾಗಿದ್ದಾನೆ ಹಾಗೂ ಭಾರೀ ಶಕ್ತಿಶಾಲಿಯಾಗಿದ್ದಾನೆ

[3] ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಅವನೇ ರಾತ್ರಿಯನ್ನು ಹಗಲ ಮೇಲೆ ಆವರಿಸುತ್ತಾನೆ ಹಾಗೂ ಹಗಲನ್ನು ರಾತ್ರಿಯ ಮೇಲೆ ಆವರಿಸುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದ್ದಾನೆ. ಎಲ್ಲವೂ ಒಂದು ನಿರ್ದಿಷ್ಟ ಅವಧಿಗಾಗಿ ಚಲನೆಯಲ್ಲಿದೆ. ನೆನಪಿರಲಿ, ಅವನು ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿದ್ದಾನೆ

[4] ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ ನಿಮಗಾಗಿ ಎಂಟು ಜೋಡಿಗಳನ್ನು ತಯಾರಿಸಿದನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಕತ್ತಲುಗಳಲ್ಲಿ, ಹಂತ ಹಂತವಾಗಿ ಸೃಷ್ಟಿಸಿರುವನು. ಆ ಅಲ್ಲಾಹನೇ ನಿಮ್ಮ ಒಡೆಯನು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ನೀವು ಅದೆಲ್ಲಿ ಅಲೆಯುತ್ತಿರುವಿರಿ

[5] ನೀವು ಕೃತಘ್ನತೆ ತೋರಿದರೆ, ಅಲ್ಲಾಹನಂತು ನಿಮ್ಮ ಅಗತ್ಯವೇ ಇಲ್ಲದವನಾಗಿದ್ದಾನೆ. ಆದರೆ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯ ನಿಲುವನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞತೆ ತೋರುವುದಾದರೆ ಅದನ್ನೇ ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ. ಹೊರೆ ಹೊರುವ ಯಾರು ಇನ್ನೊಬ್ಬರ ಹೊರೆಯನ್ನು ಹೊರಲಾರನು. ಕೊನೆಗೊಮ್ಮೆ ನೀವು ನಿಮ್ಮ ಒಡೆಯನ ಬಳಿಗೇ ಮರಳಿ ಹೋಗುವಿರಿ ಮತ್ತು ಅವನು, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಿಮಗೆ ತಿಳಿಸುವನು. ಖಂಡಿತವಾಗಿಯೂ ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ

[6] ಮತ್ತು ಮಾನವನಿಗೆ ಸಂಕಟವೇನಾದರೂ ತಟ್ಟಿದರೆ, ಅವನು ತನ್ನೊಡೆಯನೆಡೆಗೆ ಒಲಿದು, ಅವನಿಗೆ ಮೊರೆ ಇಡುತ್ತಾನೆ. ತರುವಾಯ ಅವನು (ಅಲ್ಲಾಹನು) ಆತನಿಗೆ ತನ್ನ ಅನುಗ್ರಹವನ್ನು ದಯ ಪಾಲಿಸಿದಾಗ, ಆತನು ಈ ಹಿಂದೆ ತಾನು ಯಾರಿಗೆ ಮೊರೆ ಇಟ್ಟಿದ್ದೆನೆಂಬುದನ್ನೇ ಮರೆತು ಬಿಡುತ್ತಾನೆ ಮತ್ತು ಅಲ್ಲಾಹನಿಗೆ ಪಾಲುದಾರರನ್ನು ನೇಮಿಸುತ್ತಾನೆ – ಅವರು ಆತನನ್ನು ಅವನ (ಅಲ್ಲಾಹನ) ದಾರಿಯಿಂದ ದೂರಗೊಳಿಸಿ ಬಿಡುತ್ತಾರೆ. (ಅಂಥವನಿಗೆ) ಹೇಳಿರಿ; ತುಸುಕಾಲ ನೀನು ನಿನ್ನ ಕೃತಘ್ನತೆಯ ಸುಖವನ್ನು ಅನುಭವಿಸು. ನೀನು ಖಂಡಿತ ನರಕವಾಸಿಯಾಗಿರುವೆ

[7] (ಅವನು ಶ್ರೇಷ್ಠನೋ, ಅಥವಾ) ರಾತ್ರಿಯ ವೇಳೆ ಸಾಷ್ಟಾಂಗವೆರಗಿಕೊಂಡೂ, ನಿಂತುಕೊಂಡೂ ಆರಾಧಿಸುತ್ತಾ, ಪರಲೋಕದ ಕುರಿತು ಸದಾ ಜಾಗೃತನಾಗಿದ್ದು, ತನ್ನ ಒಡೆಯನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವನು ಶ್ರೇಷ್ಠನೋ? ಹೇಳಿರಿ; ಅರಿತಿಲ್ಲದವರು ಮತ್ತು ಅರಿತಿರುವವರು ಸಮಾನರಾಗಬಲ್ಲರೇ? ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ

[8] ಹೇಳಿರಿ; ನನ್ನ (ಅಲ್ಲಾಹನ) ವಿಶ್ವಾಸಿ ದಾಸರೇ, ನಿಮ್ಮ ಒಡೆಯನಿಗೆ ಅಂಜಿರಿ. ಈ ಲೋಕದಲ್ಲಿ ಒಳಿತನ್ನು ಮಾಡಿದವರಿಗೆ, ಒಳಿತು ಸಿಗಲಿದೆ. ಅಲ್ಲಾಹನ ಭೂಮಿಯು ವಿಶಾಲವಾಗಿದೆ. ಸಹನಶೀಲರಿಗೆ ಅಪಾರ ಪ್ರತಿಫಲ ಸಿಗಲಿದೆ

[9] ಹೇಳಿರಿ; ನನಗಂತು, ನಿಷ್ಠೆಯನ್ನು ಅಲ್ಲಾಹನಿಗೇ ಮಿಸಲಾಗಿಟ್ಟು, ಅವನನ್ನು ಆರಾಧಿಸಲು ಆದೇಶಿಸಲಾಗಿದೆ

[10] ಮತ್ತು ನಾನೇ ಪ್ರಥಮವಾಗಿ ಮುಸ್ಲಿಮ (ಶರಣಾಗತ)ನಾಗಬೇಕೆಂದು ನನಗೆ ಆದೇಶಿಸಲಾಗಿದೆ

[11] ಹೇಳಿರಿ; ನಾನು ನನ್ನ ಒಡೆಯನ ಆದೇಶವನ್ನು ಮೀರಿ ನಡೆದರೆ ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ

[12] ಹೇಳಿರಿ; ನಾನು ನನ್ನ ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು ಅವನನ್ನೇ ಆರಾಧಿಸುತ್ತೇನೆ

[13] ನೀವು ಅವನ ಹೊರತು ಯಾರನ್ನು ಬೇಕಾದರೂ ಆರಾಧಿಸಿರಿ. ಹೇಳಿರಿ; ತಮ್ಮನ್ನು ಹಾಗೂ ತಮ್ಮ ಮನೆಯವರನ್ನು ಪುನರುತ್ಥಾನ ದಿನ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸುವವರಾಗಿದ್ದಾರೆ. (ನಿಮಗೆ) ತಿಳಿದಿರಲಿ; ಅದುವೇ ಸ್ಪಷ್ಟವಾದ ನಷ್ಟ

[14] ಅವರಿಗಾಗಿ (ನರಕದಲ್ಲಿ), ಅವರ ಮೇಲೂ ಅವರನ್ನು ಆವರಿಸುವ ಬೆಂಕಿಯ ಜ್ವಾಲೆಗಳಿರುವವು ಮತ್ತು ಅವರ ಕೆಳಗೂ ಅವರನ್ನು ಆವರಿಸುವ ಜ್ವಾಲೆಗಳಿರುವವು. ಅಲ್ಲಾಹನು ಆ ಕುರಿತು ತನ್ನ ದಾಸರನ್ನು ಎಚ್ಚರಿಸುತ್ತಾನೆ. ನನ್ನ ದಾಸರೇ, ನನಗೆ ಅಂಜಿರಿ

[15] ಅವನ ಆರಾಧನೆಗಾಗಿ, ಮಿಥ್ಯ ಶಕ್ತಿಗಳನ್ನೆಲ್ಲಾ ತೊರೆದು ಅಲ್ಲಾಹನೆಡೆಗೆ ಒಲವು ತೋರಿದವರಿಗೆ ಶುಭವಾರ್ತೆ ಇದೆ. ಅಂತಹ ನನ್ನ ಭಕ್ತರಿಗೆ ಶುಭವಾರ್ತೆ ನೀಡಿರಿ

[16] ಅವರು ಮಾತನ್ನು ಸರಿಯಾಗಿ ಆಲಿಸಿ, ಅದರ ಅತ್ಯುತ್ತಮ ಆಯಾಮವನ್ನು ಅನುಸರಿಸುತ್ತಾರೆ. ಅವರೇ ಅಲ್ಲಾಹನಿಂದ ಮಾರ್ಗದರ್ಶನ ಪಡೆದವರು ಮತ್ತು ಅವರೇ ಬುದ್ಧಿವಂತರು

[17] ಈಗಾಗಲೇ ಶಿಕ್ಷೆಯ ತೀರ್ಪು ವಿಧಿಸಲ್ಪಟ್ಟವನನ್ನು ಮತ್ತು ಈಗಾಗಲೇ ಬೆಂಕಿಗೆ ಬಿದ್ದು ಬಿಟ್ಟಿರುವವನನ್ನು ನೀವು ರಕ್ಷಿಸಬಲ್ಲಿರಾ

[18] ಆದರೆ, ತಮ್ಮ ಒಡೆಯನ ಭಕ್ತರಾಗಿದ್ದವರಿಗಾಗಿ, ಮಾಳಿಗೆಗಳು ಮತ್ತು ಅವುಗಳ ಮೇಲೆ ಮತ್ತಷ್ಟು ಸಿದ್ಧ ಮಾಳಿಗೆಗಳು ಇರುವವು. ಅವುಗಳ ತಳದಲ್ಲಿ ಹರಿಯುವ ನದಿಗಳಿರುವವು. ಇದು ಅಲ್ಲಾಹನ ವಾಗ್ದಾನ. ಅಲ್ಲಾಹನೆಂದೂ ತಾನು ಕೊಟ್ಟ ಮಾತನ್ನು ಮೀರುವುದಿಲ್ಲ

[19] ನೀವು ಕಾಣಲಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅದನ್ನು ಚಿಲುಮೆಗಳಾಗಿಸಿ ಭೂಮಿಯಲ್ಲಿ ಹರಿಸುತ್ತಾನೆ. ತರುವಾಯ ಅವನು ಅಲ್ಲಿಂದ ವಿವಿಧ ಬಣ್ಣದ ಬೆಳೆಗಳನ್ನು ಹೊರತೆಗೆಯುತ್ತಾನೆ. ಆ ಬಳಿಕ ಅದು ಒಣಗಿ ಬಿಡುತ್ತದೆ ಮತ್ತು ಅದು ಹಳದಿಯಾಗುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ಅದನ್ನು ಚೂರು ಚೂರಾಗಿಸಿ ಬಿಡುತ್ತಾನೆ. ಇದರಲ್ಲಿ ಬುದ್ಧಿವಂತರಿಗೆ ಖಂಡಿತ ಪಾಠವಿದೆ

[20] ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ತೆರೆದು ಬಿಟ್ಟನೋ, ಅವನು ತನ್ನ ಒಡೆಯನ ಕಡೆಯಿಂದ ಬೆಳಕಿನಲ್ಲಿದ್ದಾನೆ. ಅಲ್ಲಾಹನನ್ನು ನೆನಪಿಸಲಾಗದಷ್ಟು ಹೃದಯವು ಕಠಿಣವಾಗಿ ಬಿಟ್ಟವರಿಗೆ ವಿನಾಶ ಕಾದಿದೆ. ಅವರು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ

[21] ಅಲ್ಲಾಹನು, ಸಮರೂಪದ, ಆವರ್ತಿತ ವಚನಗಳಿರುವ ಅತ್ಯುತ್ತಮ ಗ್ರಂಥವನ್ನು ಇಳಿಸಿಕೊಟ್ಟಿದ್ದಾನೆ. ತಮ್ಮ ಒಡೆಯನ ಭಕ್ತಿ ಉಳ್ಳವರಿಗೆ ಅದರಿಂದ ರೋಮಾಂಚನವಾಗುತ್ತದೆ. ತರುವಾಯ ಅವರ ಚರ್ಮಗಳೂ (ಬಾಹ್ಯವೂ) ಹೃದಯಗಳೂ (ಅಂತರಂಗವೂ)ಅಲ್ಲಾಹನ ನೆನಪಿನೆಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ. ಅವನು ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಇನ್ನು ಅಲ್ಲಾಹನೇ ದಾರಿ ತಪ್ಪಿಸಿದವನಿಗೆ ಸರಿ ದಾರಿ ತೋರಬಲ್ಲವರು ಯಾರೂ ಇಲ್ಲ

[22] ಪುನರುತ್ಥಾನ ದಿನ, ತನ್ನ ಮುಖವನ್ನು ಆ ಕೆಟ್ಟ ಶಿಕ್ಷೆಯಿಂದ ರಕ್ಷಿಸಲು ಹೆಣಗುತ್ತಿರುವವನು (ಸ್ವರ್ಗವಾಸಿಗಳಿಗೆ ಸಮಾನನಾಗಬಲ್ಲನೇ)? ಅಂದು ಅಕ್ರಮಿಗಳೊಡನೆ ‘‘ಸವಿಯಿರಿ, ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನು’’ ಎನ್ನಲಾಗುವುದು

[23] ಅವರಿಗಿಂತ ಹಿಂದಿನವರೂ (ಸತ್ಯವನ್ನು) ತಿರಸ್ಕರಿಸಿದ್ದರು. ಕೊನೆಗೆ ಅವರಿಗೆ ಅರಿವೇ ಇಲ್ಲದಂತೆ, ಅವರ ಮೇಲೆ ಶಿಕ್ಷೆಯು ಬಂದೆರಗಿತು

[24] ಅಲ್ಲಾಹನು ಈ ಲೋಕದ ಬದುಕಿನಲ್ಲೇ ಅವರಿಗೆ ನಷ್ಟದ ರುಚಿಯನ್ನು ಉಣಿಸಿದನು. ಇನ್ನು ಪರಲೋಕದ ಶಿಕ್ಷೆಯಂತು ಇದಕ್ಕಿಂತ ತುಂಬಾ ದೊಡ್ಡದಾಗಿರುವುದು. ಅವರು ಇದನ್ನು ಅರಿತಿರಬೇಕಿತ್ತು

[25] ಖಂಡಿತವಾಗಿಯೂ ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು – ಅವರು ಉಪದೇಶವನ್ನು ಸ್ವೀಕರಿಸಬೇಕೆಂದು

[26] ಅರಬೀ ಭಾಷೆಯಲ್ಲಿರುವ, ಯಾವ ವಕ್ರತೆಯೂ ಇಲ್ಲದ ಕುರ್‌ಆನ್. ಅವರು ಧರ್ಮನಿಷ್ಠರಾಗಬೇಕೆಂದು (ಇದನ್ನು ಕಳುಹಿಸಲಾಗಿದೆ)

[27] ಅಲ್ಲಾಹನು ಒಂದು ಉದಾಹರಣೆಯನ್ನು ಮುಂದಿಡುತ್ತಾನೆ: ಒಬ್ಬನು ಪರಸ್ಪರರ ಪಾಲಿಗೆ ತೀರಾ ಹಠಮಾರಿಗಳಾಗಿರುವ ಹಲವರ ದಾಸನಾಗಿದ್ದಾನೆ ಮತ್ತು ಇನ್ನೊಬ್ಬನು ಕೇವಲ ಒಬ್ಬನ ದಾಸನಾಗಿದ್ದಾನೆ. ಅವರಿಬ್ಬರ ಸ್ಥಿತಿಯು ಸಮಾನವಾಗಿರಲು ಸಾಧ್ಯವೇ? ಅಲ್ಲಾಹನಿಗೆ ಸ್ತುತಿಗಳು. ಆದರೆ, ಹೆಚ್ಚಿನವರು ಅರಿತಿಲ್ಲ

[28] (ದೂತರೇ,) ನೀವು ಖಂಡಿತ ಸಾಯುವಿರಿ ಮತ್ತು ಅವರೂ (ವಿರೋಧಿಗಳೂ) ಖಂಡಿತ ಸಾಯುವರು

[29] ಮತ್ತು ನೀವು (ವಿರೋಧಿಗಳು) ಪುನರುತ್ಥಾನದಿನ ನಿಮ್ಮ ಒಡೆಯನ ಮುಂದೆ ಖಂಡಿತ ಪರಸ್ಪರ ಜಗಳಾಡುವಿರಿ. ಕಾಂಡ –

[30] ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಹಾಗೂ ಸತ್ಯವು ತನ್ನ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಧಿಕ್ಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ

[31] ಸತ್ಯವನ್ನು ತಂದವನು ಮತ್ತು ಅದನ್ನು ಸಮರ್ಥಿಸಿದವನು – ಅವರೇ ಧರ್ಮನಿಷ್ಠರು

[32] ಅವರಿಗಾಗಿ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಇದೆ. ಅದುವೇ ಸತ್ಕರ್ಮಿಗಳ ಪ್ರತಿಫಲ

[33] ಅಲ್ಲಾಹನು ಅವರ ಕರ್ಮಗಳಲ್ಲಿನ ದೋಷಗಳನ್ನು ನಿವಾರಿಸುವನು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗನುಸಾರ ಅವರಿಗೆ ಅವರ ಪ್ರತಿಫಲವನ್ನು ನೀಡುವನು

[34] ತನ್ನ ದಾಸರ ಪಾಲಿಗೆ ಅಲ್ಲಾಹನು ಸಾಕಾಗಲಾರನೇ? ಅವರು ನಿಮ್ಮನ್ನು ಅವನ ಹೊರತು ಇತರರ ಹೆಸರಲ್ಲಿ ಹೆದರಿಸುತ್ತಾರೆ. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವರಿಗೆ ಯಾರೂ ಸರಿ ದಾರಿಯನ್ನು ತೋರಲಾರರು

[35] ಇನ್ನು, ಅಲ್ಲಾಹನೇ ಸರಿದಾರಿಯಲ್ಲಿ ನಡೆಸಿದವರನ್ನು ಯಾರೂ ದಾರಿ ತಪ್ಪಿಸಲಾರರು. ಪ್ರಬಲನಾದ ಅಲ್ಲಾಹನೇನು ಪ್ರತೀಕಾರ ತೀರಿಸಲಾರನೇ

[36] ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರು? ಎಂದು ನೀವು ಅವರೊಡನೆ ಕೇಳಿದರೆ. ಖಂಡಿತ ಅಲ್ಲಾಹನೆಂದೇ ಅವರು ಹೇಳುವರು. ಹೇಳಿರಿ; ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರನ್ನು ನೀವು ನೋಡಿದಿರಾ? ಅಲ್ಲಾಹನು ನನಗೇನಾದರೂ ಹಾನಿ ಮಾಡ ಬಯಸಿದರೆ, ಅವರು ಅವನ ಹಾನಿಯನ್ನು ನಿವಾರಿಸಬಲ್ಲರೇ? ಅಥವಾ ಅವನು ನನ್ನನ್ನು ಅನುಗ್ರಹಿಸಲು ಬಯಸಿದರೆ, ಅವರು ಆತನ ಅನುಗ್ರಹವನ್ನು ತಡೆಯಬಲ್ಲರೇ? ಹೇಳಿರಿ; ನನಗಂತು ಅಲ್ಲಾಹನೇ ಸಾಕು. ಅವಲಂಬಿಸುವವರು ಅವನನ್ನೇ ಅವಲಂಬಿಸುತ್ತಾರೆ

[37] ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ. ನಾನೂ ಸಕ್ರಿಯನಾಗಿರುತ್ತೇನೆ. ನಿಮಗೆ ಬೇಗನೇ ತಿಳಿಯಲಿದೆ –

[38] – ಅಪಮಾನಿಕಾರಿಯಾದ ಶಿಕ್ಷೆ ಹಾಗೂ ಶಾಶ್ವತವಾದ ಶಿಕ್ಷೆಯು ಯಾರ ಮೇಲೆ ಬಂದೆರಗುವುದೆಂದು

[39] (ದೂತರೇ,) ಖಂಡಿತವಾಗಿಯೂ ನಾವು ನಿಮಗೆ ಮಾನವರಿಗಾಗಿ, ಸತ್ಯದೊಂದಿಗೆ, ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದೀಗ ಯಾರಾದರೂ ಸನ್ಮಾರ್ಗವನ್ನು ಅನುಸರಿಸಿದರೆ ಅದು ಅವನದೇ ಹಿತಕ್ಕಾಗಿರುವುದು ಮತ್ತು ಯಾರಾದರೂ ತಪ್ಪುದಾರಿ ಹಿಡಿದರೆ, ಅದರ ಹೊಣೆಯೂ ಅವನ ಮೇಲೆಯೇ ಇರುವುದು. ನೀವು ಅವರ ಮೇಲಿನ ಕಾವಲುಗಾರರೇನೂ ಅಲ್ಲ

[40] ಅಲ್ಲಾಹನು ಜೀವಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುತ್ತಾನೆ. ಮತ್ತು ಮೃತವಾಗದ ಜೀವಗಳನ್ನೂ ಅವನು, ಅವುಗಳ ನಿದ್ದೆಯ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ – ಆ ಪೈಕಿ ಮರಣವು ವಿಧಿಸಲ್ಪಟ್ಟಿರುವ ಜೀವವನ್ನು ಮಾತ್ರ ಅವನು ತಡೆದಿಟ್ಟು ಕೊಳ್ಳುತ್ತಾನೆ ಹಾಗೂ ಇತರ ಜೀವಗಳನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮರಳಿಸುತ್ತಾನೆ. ಚಿಂತಿಸುವ ಜನರಿಗೆ ಇದರಲ್ಲಿ ಖಂಡಿತ ಪಾಠಗಳಿವೆ

[41] ಅವರೇನು ಅಲ್ಲಾಹನ ಹೊರತು ಅನ್ಯರನ್ನು ಶಿಫಾರಸ್ಸುದಾರರಾಗಿಸಿಕೊಂಡಿರುವರೇ? ಹೇಳಿರಿ; ಅವರ ಬಳಿ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರಿಗೆ ಏನೂ ಅರ್ಥವಾಗದಿದ್ದರೂ (ನೀವೇನು ಅವರನ್ನೇ ಅವಲಂಬಿಸುವಿರಾ)

[42] ಹೇಳಿರಿ; ಶಿಫಾರಸಿನ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೂ ಅವನಿಗೇ ಸೇರಿದೆ. ಕೊನೆಗೆ ನೀವೆಲ್ಲಾ ಅವನೆಡೆಗೇ ಮರಳುವಿರಿ

[43] ಏಕಮಾತ್ರನಾದ ಅಲ್ಲಾಹನ ಪ್ರಸ್ತಾಪವೆತ್ತಿದೊಡನೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳಲ್ಲಿ ಜಿಗುಪ್ಸೆ ಉಕ್ಕುತ್ತದೆ ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಿದೊಡನೆ ಅವರು ಸಂತುಷ್ಟರಾಗಿ ಬಿಡುತ್ತಾರೆ

[44] ಹೇಳಿರಿ; ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿರುವ, ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಅಲ್ಲಾಹನೇ, ನಿನ್ನ ದಾಸರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವವನು ನೀನೇ

[45] ಅಕ್ರಮವೆಸಗಿದವರ ಬಳಿ, ಭೂಮಿಯಲ್ಲಿರುವ ಎಲ್ಲವೂ ಹಾಗೂ ಅಷ್ಟೇ ಪ್ರಮಾಣದ ಇನ್ನಷ್ಟು (ಸಂಪತ್ತು) ಇದ್ದರೂ ಪುನರುತ್ಥಾನ ದಿನದ ಶಿಕ್ಷೆಯಿಂದ ಮುಕ್ತರಾಗಲು ಅವರು ಅದೆಲ್ಲವನ್ನೂ ಕೊಟ್ಟು ಬಿಡಲು ಮುಂದಾಗುವರು. ಆದರೆ, ಅವರು ಊಹಿಸಿಯೂ ಇಲ್ಲದ್ದನ್ನು (ಅಂತಹ ಘೋರ ಶಿಕ್ಷೆಯನ್ನು) ಅಲ್ಲಾಹನು ಅವರ ಮುಂದೆ ಅನಾವರಣಗೊಳಿಸುವನು

[46] ಮತ್ತು ಆ ದಿನ, ಅವರು ಮಾಡುತ್ತಿದ್ದ ಎಲ್ಲ ದುಷ್ಟ ಕೃತ್ಯಗಳು ಅವರ ಮುಂದೆ ಪ್ರಕಟವಾಗುವವು ಹಾಗೂ ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿಕೊಳ್ಳುವುದು

[47] ಮನುಷ್ಯನಿಗೆ ಏನಾದರೂ ಸಂಕಟವಾದಾಗ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ಆ ಬಳಿಕ ನಾವು ನಮ್ಮ ಕಡೆಯಿಂದ ಆತನಿಗೇನಾದರೂ ಕೊಡುಗೆಯನ್ನು ದಯಪಾಲಿಸಿದರೆ ಅವನು, ಅದನ್ನು ನನಗೆ ನನ್ನ ಜ್ಞಾನದ ಆಧಾರದಲ್ಲಿ ನೀಡಲಾಗಿದೆ ಎನ್ನುತ್ತಾನೆ. ನಿಜವಾಗಿ ಅದೊಂದು ಪರೀಕ್ಷೆಯಾಗಿದೆ. ಆದರೆ, ಹೆಚ್ಚಿನವರು ಇದನ್ನು ತಿಳಿದಿಲ್ಲ

[48] ಅವರಿಗಿಂತ ಹಿಂದಿನವರೂ ಖಂಡಿತ, ಇದನ್ನೇ ಹೇಳಿದ್ದರು. ಆದರೆ, ತಮ್ಮ ಕೃತ್ಯಗಳಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ

[49] ಅವರು ಮಾಡಿದ ದುಷ್ಟ ಕೃತ್ಯಗಳು ಅವರ ಮೇಲೆಯೇ ಬಂದೆರಗಿದವು. (ಇದೀಗ) ಆ ಜನರ ಪೈಕಿ ಅಕ್ರಮವೆಸಗಿದವರು ಮಾಡಿರುವ ದುಷ್ಟ ಕೃತ್ಯಗಳು ಬಹು ಬೇಗನೇ ಅವರ ಮೇಲೆ ಬಂದೆರಗಲಿವೆ. (ಅಲ್ಲಾಹನನ್ನು) ನಿರ್ಬಂಧಿಸಲು ಅವರಿಂದ ಸಾಧ್ಯವಿಲ್ಲ

[50] ಸಂಪನ್ನತೆಯನ್ನು ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರ ಪಾಲಿಗೆ ಸೀಮಿತಗೊಳಿಸುತ್ತಾನೆ ಎಂಬುದು ಅವರಿಗೆ ತಿಳಿಯದೇ? ಖಂಡಿತವಾಗಿಯೂ ವಿಶ್ವಾಸಿಗಳಿಗೆ ಇದರಲ್ಲಿ ಧಾರಾಳ ಪಾಠಗಳಿವೆ

[51] ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ

[52] ನೀವಿನ್ನು ನಿಮ್ಮ ಒಡೆಯನ ಕಡೆಗೆ ಗಮನ ಹರಿಸಿರಿ ಮತ್ತು ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವ ಹಾಗೂ ನಿಮಗೆ ಎಲ್ಲಿಂದಲೂ ನೆರವು ಸಿಗದ ಸ್ಥಿತಿ ಬರುವುದಕ್ಕಿಂತ ಮುನ್ನ ಅವನಿಗೆ ಶರಣಾಗಿ ಬಿಡಿರಿ

[53] ಮತ್ತು ನಿಮಗೆ ಅರಿವೇ ಇಲ್ಲದಂತೆ, ಹಠಾತ್ತನೆ ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವುದಕ್ಕೆ ಮುನ್ನ, ನೀವು ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶದ ಅತ್ಯುತ್ತಮ ವ್ಯಾಖ್ಯಾನವನ್ನು ಅನುಸರಿಸಿರಿ

[54] ಏಕೆಂದರೆ ಅಂದು ಯಾರೂ, ಅಯ್ಯೋ ನನ್ನ ದುಸ್ಥಿತಿ! ಅಲ್ಲಾಹನ ವಿಷಯದಲ್ಲಿ ನನ್ನಿಂದ ಪ್ರಮಾದಗಳಾದವು ಹಾಗೂ ನಾನು (ಸತ್ಯವನ್ನು) ಗೇಲಿ ಮಾಡಿದ್ದೆ, ಎನ್ನುವಂತಾಗಬಾರದು

[55] ಅಥವಾ ಯಾರೂ, ಅಲ್ಲಾಹನು ನನಗೆ ಸರಿದಾರಿ ತೋರಿದ್ದರೆ ನಾನು ಧರ್ಮ ನಿಷ್ಠನಾಗಿರುತ್ತಿದ್ದೆ ಎನ್ನುವಂತಾಗಬಾರದು

[56] ಅಥವಾ ಯಾರೂ, ಶಿಕ್ಷೆಯನ್ನು ಕಂಡು, ನನಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾನು ಸಜ್ಜನನಾಗಿ ಬುದುಕುತ್ತಿದ್ದೆ ಎನ್ನುವಂತಾಗಬಾರದು

[57] (ಆಗ ಅಲ್ಲಾಹನು ಹೇಳುವನು;) ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದವು. ಆದರೆ, ನೀನು ಅವುಗಳನ್ನು ತಿರಸ್ಕರಿಸಿದೆ, ಅಹಂಕಾರ ತೋರಿದೆ ಮತ್ತು ನೀನು ಧಿಕ್ಕಾರಿಯಾಗಿದ್ದೆ

[58] ಪುನರುತ್ಥಾನ ದಿನ ನೀವು ಕಾಣುವಿರಿ; ಅಲ್ಲಾಹನ ಕುರಿತು ಸುಳ್ಳು ಹೇಳಿದವರ ಮುಖಗಳು ಕರಾಳವಾಗಿರುವವು. ಅಹಂಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ

[59] ಧರ್ಮನಿಷ್ಠರಾಗಿದ್ದವರಿಗೆ ಅಲ್ಲಾಹನು ಯಶಸ್ಸಿನ ಜೊತೆ ಮುಕ್ತಿಯನ್ನು ನೀಡುವನು. ಯಾವ ಸಂಕಟವೂ ಅವರನ್ನು ತಟ್ಟದು ಮತ್ತು ಅವರು ದುಃಖಿತರಾಗಲಾರರು

[60] ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನೇ ಎಲ್ಲ ವಸ್ತುಗಳ ಮೇಲ್ವಿಚಾರಕನು

[61] ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಬಳಿ ಇವೆ. ಅಲ್ಲಾಹನ ವಚನಗಳನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸುವವರಾಗಿದ್ದಾರೆ

[62] ಹೇಳಿರಿ; ಅಜ್ಞಾನಿಗಳೇ, ನಾನು ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಕೆಂದು ನೀವು ನನಗೆ ಆದೇಶಿಸುತ್ತೀರಾ

[63] (ದೂತರೇ,) ನೀವು ಹಲವರ ಆರಾಧಕರಾಗಿ ಬಿಟ್ಟರೆ ನಿಮ್ಮ ಎಲ್ಲ ಕರ್ಮಗಳು ವ್ಯರ್ಥವಾಗುವವು ಮತ್ತು ನೀವು ನಷ್ಟ ಅನುಭವಿಸಿದವರ ಸಾಲಿಗೆ ಸೇರುವಿರೆಂದು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯವಾಣಿಯನ್ನು ಕಳಿಸಲಾಗಿತ್ತು

[64] ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞರ ಸಾಲಿಗೆ ಸೇರಿರಿ

[65] ಅವರು ಅಲ್ಲಾಹನನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಿಲ್ಲ. ಪುನರುತ್ಥಾನ ದಿನ ಸಂಪೂರ್ಣ ಭೂಮಿಯು ಅವನ ಮುಷ್ಠಿಯೊಳಗಿರುವುದು ಮತ್ತು ಆಕಾಶಗಳೆಲ್ಲಾ ಮಡಚಿದ ಸ್ಥಿತಿಯಲ್ಲಿ ಅವನ ಬಲಗೈಯಲ್ಲಿರುವವು. ಅವನು ಪರಿಶುದ್ಧನು ಹಾಗೂ ಅವರು (ಅವನೊಂದಿಗೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿರುವನು

[66] ಅಂತಿಮ ಕಹಳೆ ಊದಲಾದಾಗ ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬನೂ ಪ್ರಜ್ಞಾಹೀನನಾಗಿ ಬಿಡುವನು – ಅಲ್ಲಾಹನಿಚ್ಛಿಸಿದವನ ಹೊರತು. ಮತ್ತೊಮ್ಮೆ ಕಹಳೆ ಊದಲಾದಾಗ ಅವರೆಲ್ಲರೂ ಎದ್ದು ನಿಂತು (ಅಚ್ಚರಿಯಿಂದ) ನೋಡ ತೊಡಗುವರು

[67] ಮತ್ತು ಭೂಮಿಯು ತನ್ನ ಒಡೆಯನ ಪ್ರಕಾಶದಿಂದ ಬೆಳಗಿ ಬಿಡುವುದು ಹಾಗೂ (ಕರ್ಮಗಳ) ಗ್ರಂಥವನ್ನು ತೆರೆದಿಡಲಾಗುವುದು ಮತ್ತು ದೂತರನ್ನೂ ಸಾಕ್ಷಿಗಳನ್ನೂ ಮುಂದೆ ತರಲಾಗುವುದು ಹಾಗೂ ಅವರ (ಜನರ) ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು. ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು

[68] (ಅಂದು) ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವು ಸಿಗುವುದು. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಚೆನ್ನಾಗಿ ಅರಿತಿರುವನು

[69] (ಅಂದು) ಧಿಕ್ಕಾರಿಗಳನ್ನು ದಂಡು ದಂಡುಗಳಾಗಿ ಅಟ್ಟಿಸಿಕೊಂಡು ನರಕದೆಡೆಗೆ ಸಾಗಿಸಲಾಗುವುದು. ಅವರು ಅಲ್ಲಿಗೆ ತಲುಪಿದಾಗ ನರಕದ ಬಾಗಿಲುಗಳನ್ನು ತೆರೆದು ಬಿಡಲಾಗುವುದು. ಆಗ ಅಲ್ಲಿನ (ನರಕದ) ಪಾಲಕರು ಅವರೊಡನೆ, ‘‘ನಿಮ್ಮ ಒಡೆಯನ ವಚನಗಳನ್ನು ನಿಮಗೆ ಓದಿ ಕೇಳಿಸುವ ಮತ್ತು ಈ ದಿನವನ್ನು ಎದುರಿಸಲಿಕ್ಕಿದೆ ಎಂದು ನಿಮ್ಮನ್ನು ಎಚ್ಚರಿಸುವ ದೂತರು ಯಾರೂ ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು ‘‘ಖಂಡಿತ ಬಂದಿದ್ದರು’’ ಎನ್ನುವರು. ಆದರೆ, ಅದಾಗಲೇ ಧಿಕ್ಕಾರಿಗಳ ವಿರುದ್ಧ ಶಿಕ್ಷೆಯ ಆದೇಶವು ಜಾರಿಯಾಗಿರುವುದು

[70] ಅವರೊಡನೆ, ‘‘ನರಕದ ಬಾಗಿಲುಗಳೊಳಗೆ ಪ್ರವೇಶಿಸಿ, ಶಾಶ್ವತವಾಗಿ ಅದರೊಳಗೆ ವಾಸಿಸಿರಿ’’ ಎನ್ನಲಾಗುವುದು. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತೀರಾ ಕೆಟ್ಟದಾಗಿರುವುದು

[71] ತಮ್ಮ ಒಡೆಯನಿಗೆ ನಿಷ್ಠರಾಗಿದ್ದವರನ್ನು ದಂಡು ದಂಡುಗಳಾಗಿ ಸ್ವರ್ಗದೆಡೆಗೆ ಕರೆದೊಯ್ಯಲಾಗುವುದು. ಅವರು ಅಲ್ಲಿಗೆ ತಲುಪಿದಾಗ, ಅದರ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ಅದರ ಪಾಲಕರು ಅವರೊಡನೆ ಹೇಳುವರು; ‘‘ನಿಮಗೆ ಶಾಂತಿ ಸಿಗಲಿ. ನೀವು ಸಜ್ಜನರು. ಶಾಶ್ವತವಾಗಿ ಇದರೊಳಗೆ ಪ್ರವೇಶಿಸಿರಿ’’

[72] ಅವರು ಹೇಳುವರು; ಪ್ರಶಂಸೆಗಳೆಲ್ಲಾ, ನಮಗೆ ನೀಡಿದ ತನ್ನ ವಾಗ್ದಾನವನ್ನು ಈಡೇರಿಸಿದ ಹಾಗೂ ನಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿಸಿದ ಅಲ್ಲಾಹನಿಗೆ ಸಲ್ಲಲಿ. ನಾವೀಗ ಸ್ವರ್ಗದಲ್ಲಿ ನಾವಿಚ್ಛಿಸುವಲ್ಲಿ ನೆಲೆಸಬಹುದು. ಎಷ್ಟೊಂದು ಚೆನ್ನಾಗಿದೆ ಸತ್ಕರ್ಮಿಗಳ ಪ್ರತಿಫಲ

[73] ಮತ್ತು ನೀವು ಕಾಣುವಿರಿ, ಮಲಕ್‌ಗಳು ವಿಶ್ವ ಸಿಂಹಾಸನದ ಸುತ್ತ ಸಾಲುಗಟ್ಟಿಕೊಂಡು, ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸುತ್ತಿರುವರು. ಅವರ (ಜನರ) ನಡುವೆ ಅಂದು ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು ಮತ್ತು ಹೇಳಲಾಗುವುದು; ‘‘ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು’’

[74] ಹಾ ಮೀಮ್

[75] ಈ ಗ್ರಂಥವನ್ನು ಅಲ್ಲಾಹನ ಕಡೆಯಿಂದ ಇಳಿಸಿಕೊಡಲಾಗಿದೆ. ಅವನು ಪ್ರಬಲನೂ ಬಲ್ಲವನೂ ಆಗಿದ್ದಾನೆ

ಕ್ಷಮಿಸುವವನು

Surah 40

[1] ಅವನು ಪಾಪಗಳನ್ನು ಕ್ಷಮಿಸುವವನು, ಪಶ್ಚಾತ್ತಾಪ ಸ್ವೀಕರಿಸುವವನು, ತೀವ್ರವಾಗಿ ದಂಡಿಸುವವನು ಮತ್ತು ತುಂಬಾ ಸಮರ್ಥನಾಗಿದ್ದಾನೆ. ಅವನ ಹೊರತು ಬೇರಾರೂ ಪೂಜಾರ್ಹರಲ್ಲ. ಕೊನೆಗೆ (ಎಲ್ಲರೂ) ಅವನೆಡೆಗೇ ಮರಳಬೇಕಾಗಿದೆ

[2] ಧಿಕ್ಕಾರಿಗಳ ಹೊರತು ಬೇರಾರೂ ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವುದಿಲ್ಲ. ಇನ್ನು, ನಾಡುಗಳಲ್ಲಿನ ಅವರ ಮೆರೆದಾಟವು ನಿಮ್ಮನ್ನು ಮೋಸಗೊಳಿಸದಿರಲಿ

[3] ಅವರಿಗಿಂತ ಹಿಂದೆ ನೂಹರ ಜನಾಂಗದವರು ಮತ್ತು ಅವರ ಬಳಿಕ ದಂಡುಗಳು (ಸತ್ಯವನ್ನು) ತಿರಸ್ಕರಿಸಿದ್ದಾರೆ. ಪ್ರತಿಯೊಂದು ಸಮುದಾಯದವರೂ ತಮ್ಮ ದೇವದೂತರನ್ನು ಸೆರೆ ಹಿಡಿಯಲು ನಿರ್ಧರಿಸಿದ್ದರು ಹಾಗೂ ಅನ್ಯಾಯವಾಗಿ ಅವರೊಡನೆ ಜಗಳಾಡಿ ಆಮೂಲಕ ಸತ್ಯವನ್ನು ಹತ್ತಿಕ್ಕಲು ಶ್ರಮಿಸಿದರು. ಕೊನೆಗೆ ನಾವು ಅವರನ್ನು ದಂಡಿಸಿದೆವು. ಕೊನೆಗೆ ನಮ್ಮ ಶಿಕ್ಷೆ ಹೇಗಿತ್ತೆಂದು (ನೋಡಿರಿ)

[4] ಈ ರೀತಿ, ಧಿಕ್ಕಾರಿಗಳು ನರಕವಾಸಿಗಳೆಂಬ ನಿಮ್ಮ ಒಡೆಯನ ಮಾತು, ಅವರ ವಿರುದ್ಧ ಸಾಬೀತಾಗಿ ಬಿಟ್ಟಿತು

[5] ವಿಶ್ವ ಸಿಂಹಾಸನವನ್ನು ಹೊತ್ತಿರುವವರು ಮತ್ತು ಅದರ ಸುತ್ತ ಇರುವವರು (ಮಲಕ್‌ಗಳು) ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವರ ಪಾವಿತ್ರವನ್ನು ಜಪಿಸುತ್ತಿರುತ್ತಾರೆ. ಅವರು ಅವನಲ್ಲಿ ನಂಬಿಕೆ ಇಟ್ಟಿರುತ್ತಾರೆ ಮತ್ತು ವಿಶ್ವಾಸಿಗಳ ಪರವಾಗಿ ಕ್ಷಮೆಯಾಚಿಸುತ್ತಿರುತ್ತಾರೆ; ‘‘ನಮ್ಮೊಡೆಯಾ, ನಿನ್ನ ಕೃಪೆ ಹಾಗೂ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ಪಶ್ಚಾತ್ತಾಪ ಪಡುವವರನ್ನು ಹಾಗೂ ನಿನ್ನ ಮಾರ್ಗವನ್ನು ಅನುಸರಿಸುವವರನ್ನು ಕ್ಷಮಿಸಿಬಿಡು ಮತ್ತು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸು’’

[6] ‘‘ನಮ್ಮೊಡೆಯಾ, ಅವರನ್ನು ಹಾಗೂ ಅವರ ತಾತ ಮುತ್ತಾತಂದಿರು, ಅವರ ಪತ್ನಿಯರು ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾಗಿರುವವರನ್ನು, ನೀನು ಅವರಿಗೆ ವಾಗ್ದಾನ ಮಾಡಿರುವಂತಹ ಶಾಶ್ವತ ಸ್ವರ್ಗೋದ್ಯಾನಗಳೊಳಗೆ ಸೇರಿಸು. ಖಂಡಿತವಾಗಿಯೂ ನೀನು ಪ್ರಬಲನೂ ಯುಕ್ತಿವಂತನೂ ಆಗಿರುವೆ’’

[7] ‘‘ನೀನು ಅವರನ್ನು ಕೆಡುಕುಗಳಿಂದ ಸಂರಕ್ಷಿಸು. ಇಂದಿನ ದಿನ, ಪಾಪಗಳಿಂದ ರಕ್ಷಿತನಾಗಿರುವವನು ನಿನ್ನ ಕೃಪೆಗೆ ಪಾತ್ರನಾದನು. ಇದುವೇ ಮಹಾ ಸೌಭಾಗ್ಯ’’

[8] (ಪರಲೋಕದಲ್ಲಿ) ಧಿಕ್ಕಾರಿಗಳನ್ನು ಖಂಡಿತ ಕರೆಯಲಾಗುವುದು (ಮತ್ತು ಹೇಳಲಾಗುವುದು;) ‘‘ಇಂದು ನಿಮ್ಮ ಕುರಿತು ಸ್ವತಃ ನಿಮಗೇ ಜಿಗುಪ್ಸೆ ಇದೆ. ಆದರೆ, (ಈ ಹಿಂದೆ) ವಿಶ್ವಾಸದೆಡೆಗೆ ನಿಮ್ಮನ್ನು ಕರೆಯಲಾದ ವೇಳೆ, ನೀವು ಧಿಕ್ಕರಿಸಿದಾಗ, ಇದಕ್ಕಿಂತ ಹೆಚ್ಚಿನ ಜಿಗುಪ್ಸೆ, ನಿಮ್ಮ ಕುರಿತು ಅಲ್ಲಾಹನಿಗಿತ್ತು’’

[9] ಅವರು ಹೇಳುವರು; ‘‘ನೀನು ಎರಡು ಬಾರಿ ನಮ್ಮನ್ನು ಸಾಯಿಸಿದೆ ಮತ್ತು ಎರಡು ಬಾರಿ ನಮ್ಮನ್ನು ಜೀವಂತಗೊಳಿಸಿದೆ. ನಾವಿದೋ (ನಮ್ಮ ತಪ್ಪನ್ನು) ಒಪ್ಪಿಕೊಂಡೆವು. ಇದೀಗ (ನಮಗೆ) ಇಲ್ಲಿಂದ ಹೊರಟು ಹೋಗಲು ಏನಾದರೂ ದಾರಿ ಇದೆಯೇ?’’

[10] (ಅವರೊಡನೆ ಹೇಳಲಾಗುವುದು;) ‘‘ನಿಮಗೆ ಹೀಗಾಗಿರುವುದು ಏಕೆಂದರೆ, ಒಬ್ಬ ಅಲ್ಲಾಹನನ್ನು ಪ್ರಾರ್ಥಿಸುವಾಗ ನೀವು ಧಿಕ್ಕರಿಸುತ್ತಿದ್ದಿರಿ ಮತ್ತು (ಯಾರನ್ನಾದರೂ) ಅವನ ಜೊತೆ ಪಾಲುಗೊಳಿಸಲಾದಾಗ ನೀವು ನಂಬುತ್ತಿದ್ದಿರಿ. ಅಧಿಕಾರವು, ಉನ್ನತನೂ ಮಹಾನನೂ ಆಗಿರುವ ಅಲ್ಲಾಹನಿಗೇ ಸೇರಿದೆ’’

[11] ಅವನೇ ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಿರುವವನು ಮತ್ತು ನಿಮಗಾಗಿ ಆಕಾಶದಿಂದ ಆಹಾರವನ್ನು ಇಳಿಸಿಕೊಡುವವನು. (ಅಲ್ಲಾಹನೆಡೆಗೆ) ಒಲವು ತೋರುವವರು ಮಾತ್ರವೇ ಉಪದೇಶವನ್ನು ಸ್ವೀಕರಿಸುತ್ತಾರೆ

[12] ನೀವು ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು, ಅವನನ್ನು ಪ್ರಾರ್ಥಿಸಿರಿ – ಧಿಕ್ಕಾರಿಗಳಿಗೆ ಅದೆಷ್ಟು ಅಪ್ರಿಯವಾಗಿದ್ದರೂ ಸರಿ

[13] (ಅವನು) ಉನ್ನತ ಸ್ಥಾನಗಳುಳ್ಳವನು. ವಿಶ್ವ ಸಿಂಹಾಸನದ ಮಾಲಕನು. ಅವನು ದಿವ್ಯ ಸಂದೇಶವನ್ನು ತಾನಿಚ್ಛಿಸಿದವರಿಗೆ ದಯ ಪಾಲಿಸುತ್ತಾನೆ – ಅವರು ಭೇಟಿಯ ದಿನದ (ಪುನರುತ್ಥಾನದ) ಕುರಿತು ಎಚ್ಚರಿಸಲೆಂದು

[14] ಅವರು ಹಾಜರಾಗುವ ದಿನ, ಅವರ ಕುರಿತಾದ ಯಾವ ವಿಷಯವೂ ಅಲ್ಲಾಹನಿಂದ ಗುಪ್ತವಾಗಿರದು. ‘‘ಇಂದು ಆಧಿಪತ್ಯವು ಯಾರಿಗೆ ಸೇರಿದೆ?‘‘ ‘‘ಭಾರೀ ಪ್ರಚಂಡನಾದ ಅಲ್ಲಾಹನಿಗೆ ಮಾತ್ರ‘‘ (ಎಂಬ ಘೋಷಣೆಯೇ ಅಂದು ಎಲ್ಲೆಲ್ಲೂ ಮೊಳಗುತ್ತಿರುವುದು)

[15] ಇಂದು ಪ್ರತಿಯೊಬ್ಬನಿಗೂ ಆತನ ಕರ್ಮಗಳ ಫಲವನ್ನು ನೀಡಲಾಗುವುದು. ಇಂದು ಯಾವುದೇ ಅನ್ಯಾಯ ನಡೆಯದು. ಖಂಡಿತವಾಗಿಯೂ ಅಲ್ಲಾಹನು ವೇಗವಾಗಿ ವಿಚಾರಣೆ ಮುಗಿಸುವವನಾಗಿದ್ದಾನೆ

[16] ಶೀಘ್ರವೇ ಬರಲಿರುವ ಆ ದಿನದ ಕುರಿತು ನೀವು ಅವರನ್ನು ಎಚ್ಚರಿಸಿರಿ. ಅಂದು ಸಂಕಟ ತುಂಬಿ, ಹೃದಯಗಳು ಕೊರಳಿಗೆ ಬರುವವು. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರನಾಗಲಿ, ಅನುಸರಣಾರ್ಹ ಶಿಫಾರಸ್ಸುದಾರನಾಗಲಿ ಇರಲಾರನು

[17] ಅವನು (ಅಲ್ಲಾಹನು), ಕಣ್ಣುಗಳು ಮಾಡುವ ಮೋಸವನ್ನೂ ಮನಸ್ಸುಗಳಲ್ಲಿ ಅಡಗಿರುವ ವಿಷಯಗಳನ್ನೂ ಬಲ್ಲನು

[18] ಅಲ್ಲಾಹನು ನ್ಯಾಯೋಚಿತವಾಗಿಯೇ ತೀರ್ಪು ನೀಡುವನು. ಜನರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರು ಯಾವ ತೀರ್ಪನ್ನೂ ನೀಡಲಾರರು. ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ

[19] ಅವರೇನು ಭೂಮಿಯಲ್ಲಿ ನಡೆದಾಡಿ, ತಮಗಿಂತ ಹಿಂದೆ ಇದ್ದವರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಅವರು ಇವರಿಗಿಂತ ಹೆಚ್ಚು ಶಕ್ತಿ ಶಾಲಿಗಳಾಗಿದ್ದರು ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟು ಹೋಗಿದ್ದರು. ಕೊನೆಗೆ ಅಲ್ಲಾಹನು ಅವರ ಪಾಪಗಳ ಕಾರಣ ಅವರನ್ನು ದಂಡಿಸಿದನು ಮತ್ತು ಅವರನ್ನು ಅಲ್ಲಾಹನಿಂದ ರಕ್ಷಿಸ ಬಲ್ಲವರು ಯಾರೂ ಇರಲಿಲ್ಲ

[20] ಇದೇಕೆಂದರೆ, ಅವರ ದೂತರು ಅವರ ಬಳಿಗೆ ಬಹಳ ಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಆದರೂ ಅವರು ಧಿಕ್ಕರಿಸಿದ್ದರು ಮತ್ತು ಅಲ್ಲಾಹನು ಅವರನ್ನು ದಂಡಿಸಿದನು. ಅವನು ಖಂಡಿತ ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಕಠೋರ ಶಿಕ್ಷೆ ನೀಡುವವನಾಗಿದ್ದಾನೆ

[21] ಮೂಸಾರನ್ನು ನಾವು ನಮ್ಮ ಪುರಾವೆಗಳೊಂದಿಗೆ ಹಾಗೂ ಸ್ಪಷ್ಟ ಪ್ರಮಾಣದೊಂದಿಗೆ ಕಳಿಸಿದ್ದೆವು

[22] ಫಿರ್‌ಔನ್, ಹಾಮಾನ್ ಹಾಗೂ ಕಾರೂನರ ಕಡೆಗೆ. ಆದರೆ ಅವರೆಲ್ಲ ಅವರನ್ನು ಮಾಟಗಾರನೆಂದೂ ಸುಳ್ಳುಗಾರನೆಂದೂ ಕರೆದರು

[23] ಅವರು ನಮ್ಮ ಕಡೆಯಿಂದ ಸತ್ಯದೊಂದಿಗೆ ಅವರ ಬಳಿಗೆ ತಲುಪಿದಾಗ ಅವರು, ‘‘ಅವನ ಜೊತೆ ವಿಶ್ವಾಸಿಗಳಾಗಿರುವವರ ಪುತ್ರರನ್ನೆಲ್ಲಾ ಕೊಂದು ಬಿಡಿ ಮತ್ತು ಅವರ ಪುತ್ರಿಯರನ್ನು ಮಾತ್ರ ಜೀವಂತ ಬಿಟ್ಟು ಬಿಡಿ’’ ಎಂದರು. ಆದರೆ, ಧಿಕ್ಕಾರಿಗಳ ಸಂಚು ವಿಫಲವಾಗಿಬಿಟ್ಟಿತು

[24] ಮತ್ತು ಫಿರ್‌ಔನ್ ಹೇಳಿದನು; ‘‘ನನ್ನನ್ನು ಬಿಟ್ಟು ಬಿಡಿ, ನಾನು ಮೂಸಾನನ್ನು ಕೊಂದು ಬಿಡುವೆನು, ಅವನು ತನ್ನ ದೇವರನ್ನು ಕರೆಯಲಿ. ಅವನು ನಿಮ್ಮನ್ನು ಮತಾಂತರಿಸಬಹುದು ಅಥವಾ ಭೂಮಿಯಲ್ಲಿ ಅಶಾಂತಿ ಹರಡಬಹುದೆಂಬ ಆತಂಕ ನನಗಿದೆ’’

[25] ಮತ್ತು ಮೂಸಾ ಹೇಳಿದರು; ‘‘ವಿಚಾರಣೆಯ ದಿನದಲ್ಲಿ ನಂಬಿಕೆ ಇಲ್ಲದ ಪ್ರತಿಯೊಬ್ಬ ಅಹಂಕಾರಿಯ ವಿರುದ್ಧ ನಾನು, ನನ್ನೊಡೆಯನೂ ನಿನ್ನೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ’’

[26] ಮತ್ತು ಫಿರ್‌ಔನ್‌ನ ಬಳಗದಲ್ಲಿದ್ದ ಹಾಗೂ ತನ್ನ ನಂಬಿಕೆಯನ್ನು ಗುಪ್ತವಾಗಿಟ್ಟಿದ್ದ ವಿಶ್ವಾಸಿಯೊಬ್ಬನು ಹೇಳಿದನು; ‘‘ನೀವೇನು, ಅಲ್ಲಾಹನೇ ನನ್ನೊಡೆಯನೆಂದು ಹೇಳಿದ ಮಾತ್ರಕ್ಕೆ, ನಿಮ್ಮೆಡೆಯನ ಕಡೆಯಿಂದ ಸ್ಪಷ್ಟ ನಿದರ್ಶನಗಳನ್ನು ತಂದಿರುವ ವ್ಯಕ್ತಿಯೊಬ್ಬನನ್ನು ಕೊಂದು ಬಿಡುವಿರಾ? ಒಂದು ವೇಳೆ ಅವನು ಸುಳ್ಳುಗಾರನಾಗಿದ್ದರೆ, ಅವನ ಸುಳ್ಳಿನ ಹೊಣೆಯು ಅವನ ಮೇಲೆಯೇ ಇರುವುದು. ಇನ್ನು, ಅವನು ಸತ್ಯವಂತನಾಗಿದ್ದರೆ, ಅವನು ನಿಮಗೆ ವಾಗ್ದಾನ ಮಾಡಿರುವ ಶಿಕ್ಷೆಯ ಒಂದಷ್ಟು ಭಾಗವಂತು ನಿಮಗೆ ಖಂಡಿತ ಸಿಗಲಿದೆ. ಅಲ್ಲಾಹನು ಅತಿಕ್ರಮಿಯಾಗಿರುವ ಸುಳ್ಳುಗಾರನಿಗೆ ಖಂಡಿತ ಸರಿದಾರಿಯನ್ನು ತೋರಿಸುವುದಿಲ್ಲ’’

[27] ‘‘ನನ್ನ ಜನಾಂಗದವರೇ, ಇಂದು ಆಧಿಪತ್ಯವು ನಿಮಗೆ ಸೇರಿದೆ. ನೀವು ಭೂಮಿಯಲ್ಲಿ ಪ್ರಭಾವಶಾಲಿಗಳಾಗಿರುವಿರಿ. ಆದರೆ, ಅಲ್ಲಾಹನ ಪ್ರಕೋಪವು ನಮ್ಮ ಮೇಲೆ ಬಂದೆರಗಿದರೆ, ಯಾರು ತಾನೇ ನಮಗೆ ನೆರವಾಗಬಲ್ಲರು?’’ ಫಿರ್‌ಔನ್ ಹೇಳಿದನು; ನಾನು ನನಗೆ ತೋಚಿದ್ದನ್ನೇ ನಿಮಗೆ ಹೇಳುತ್ತಿದ್ದೇನೆ ಮತ್ತು ನಾನು ನಿಮಗೆ ಒಳಿತಿನ ದಾರಿಯನ್ನೇ ತೋರಿಸುತ್ತಿದ್ದೇನೆ’’

[28] ಮತ್ತು ವಿಶ್ವಾಸಿಯಾಗಿದ್ದವನು ಹೇಳಿದನು; ‘‘ನನ್ನ ಜನಾಂಗದವರೇ, (ಗತಕಾಲದ) ದಂಡುಗಳು ಕಂಡ (ವಿನಾಶದ) ದಿನವು ನಿಮ್ಮ ಪಾಲಿಗೂ ಬಂದು ಬಿಡುವುದೆಂಬ ಆಶಂಕೆ ನನಗಿದೆ’’

[29] ‘‘ನೂಹ್, ಆದ್ ಮತ್ತು ಸಮೂದ್‌ರ ಜನಾಂಗದವರು ಹಾಗೂ ಅವರ ಅನಂತರದವರು ಎದುರಿಸಿದ ಗತಿಯೇ (ನಿಮಗೂ ಒದಗೀತು). ಅಲ್ಲಾಹನಂತು ತನ್ನ ದಾಸರ ಮೇಲೆ ಅಕ್ರಮವೆಸಗ ಬಯಸುವುದಿಲ್ಲ’’

[30] ‘‘ನನ್ನ ಜನಾಂಗದವರೇ, ಹಾಹಾಕಾರದ ದಿನವೊಂದನ್ನು ನೀವು ಎದುರಿಸಬೇಕಾದೀತೆಂಬ ಆಶಂಕೆ ನನಗಿದೆ’’

[31] ‘‘ಅಂದು ನೀವು ಬೆನ್ನು ತಿರುಗಿಸಿ ಓಡುವಿರಿ (ಮತ್ತು) ಅಲ್ಲಾಹನಿಂದ ನಿಮ್ಮನ್ನು ರಕ್ಷಿಸಬಲ್ಲವರು ಯಾರೂ ಇರಲಾರರು. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವನಿಗೆ ಯಾರೂ ಸರಿದಾರಿಯನ್ನು ತೋರಲಾರರು’’

[32] ಈ ಹಿಂದೆ ನಿಮ್ಮ ಬಳಿಗೆ ಯೂಸುಫರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ, ಅವರು ನಿಮ್ಮ ಬಳಿಗೆ ತಂದಿದ್ದ ಸಂದೇಶದ ಕುರಿತು ನೀವು ಸಂಶಯಗ್ರಸ್ತರಾಗಿದ್ದಿರಿ. ಕೊನೆಗೆ ಅವರು ಮೃತರಾದಾಗ ನೀವು, ಅವರ ಬಳಿಕ ಅಲ್ಲಾಹನು ಇನ್ನಾರನ್ನೂ ದೂತರಾಗಿ ಕಳಿಸಲಾರನೆಂದು ಹೇಳಿದಿರಿ. ಅತಿಕ್ರಮಿಯಾಗಿರುವ ಸಂಶಯಗ್ರಸ್ತನನ್ನು ಅಲ್ಲಾಹನು ಇದೇ ರೀತಿ ದಾರಿಗೆಡಿಸುತ್ತಾನೆ

[33] ಅವರು ತಮ್ಮ ಬಳಿಗೆ ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುತ್ತಾರೆ. ಇದು ಅಲ್ಲಾಹನ ಬಳಿಯಲ್ಲೂ, ಸತ್ಯವಿಶ್ವಾಸಿಗಳ ಬಳಿಯಲ್ಲೂ ತೀರಾ ಅಪ್ರಿಯ ವಿಷಯವಾಗಿದೆ. ಅಹಂಕಾರಿ ಹಾಗೂ ವಿದ್ರೋಹಿಯಾಗಿರುವ ಪ್ರತಿಯೊಬ್ಬನ ಹೃದಯದ ಮೇಲೂ ಅಲ್ಲಾಹನು ಇದೇ ರೀತಿ ಮುದ್ರೆಯೊತ್ತಿ ಬಿಟ್ಟಿರುತ್ತಾನೆ

[34] ಫಿರ್‌ಔನ್ ಹೇಳಿದನು; ‘‘ಓ (ಸಚಿವ) ಹಾಮಾನ್, ನನಗೊಂದು ಎತ್ತರದ ಗೋಪುರವನ್ನು ರಚಿಸಿಕೊಡು. ಆ ಮೂಲಕ ಕೆಲವು ದಾರಿಗಳನ್ನು ತಲುಪಲು ನನಗೆ ಸಾಧ್ಯವಾದೀತು’’

[35] ‘‘ಆಕಾಶದ ಆ ದಾರಿಗಳ ಮೂಲಕ ನಾನು ಮೂಸಾರ ದೇವರೆಡೆಗೆ ಇಣುಕಿ ನೋಡುವೆನು. ನಾನಂತು ಆತ (ಮೂಸಾ)ನನ್ನು ಸುಳ್ಳುಗಾರನೆಂದೇ ಭಾವಿಸುತ್ತೇನೆ’’. ಈ ರೀತಿ ಫಿರ್‌ಔನ್‌ನ ಪಾಲಿಗೆ ಆತನ ದುಷ್ಟ ಕೃತ್ಯಗಳನ್ನು ಚಂದಗಾಣಿಸಿ ಬಿಡಲಾಯಿತು ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಯಿತು. ಕೊನೆಗೆ ಫಿರ್‌ಔನನ ಎಲ್ಲ ಸಂಚುಗಳೂ ವಿಫಲವಾಗಿಬಿಟ್ಟವು

[36] ವಿಶ್ವಾಸಿಯಾಗಿದ್ದವನು ಹೇಳಿದನು; ‘‘ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುವೆನು’’

[37] ‘‘ನನ್ನ ಜನಾಂಗದವರೇ, ಇಹಲೋಕದ ಈ ಬದುಕು ಕೇವಲ ತಾತ್ಕಾಲಿಕ. ನಿಜವಾಗಿ, ಪರಲೋಕವೇ ಶಾಶ್ವತ ನೆಲೆಯಾಗಿದೆ’’

[38] ‘‘ದುಷ್ಟ ಕರ್ಮಗಳನ್ನು ಮಾಡಿದವನಿಗೆ ಅಂತಹದೇ ಪ್ರತಿಫಲ ಸಿಗುವುದು ಮತ್ತು ಸತ್ಕರ್ಮಗಳನ್ನು ಮಾಡಿದ ವ್ಯಕ್ತಿ, ಪುರುಷನಿರಲಿ, ಸ್ತ್ರೀ ಇರಲಿ, ವಿಶ್ವಾಸಿಯಾಗಿದ್ದರೆ, ಅವರೇ ಸ್ವರ್ಗವನ್ನು ಸೇರುವರು. ಅಲ್ಲಿ ಅವರಿಗೆ ಅಪಾರ ಸಂಪನ್ನತೆಯನ್ನು ನೀಡಲಾಗುವುದು’’

[39] ‘‘ಮತ್ತು, ನನ್ನ ಜನಾಂಗದವರೇ, ಇದೇನು, ನಾನು ನಿಮ್ಮನ್ನು ವಿಮೋಚನೆಯೆಡೆಗೆ ಕರೆಯುತ್ತಿದ್ದೇನೆ. ಆದರೆ, ನೀವು ನನ್ನನ್ನು ನರಕದೆಡೆಗೆ ಆಮಂತ್ರಿಸುತ್ತಿರುವಿರಿ’’

[40] ‘‘ಅಲ್ಲಾಹನನ್ನು ನಾನು ಧಿಕ್ಕರಿಸಬೇಕು ಹಾಗೂ ನನಗೆ ಅರಿವೇ ಇಲ್ಲದವುಗಳನ್ನು ಅವನ ಜೊತೆ ಪಾಲುಗೊಳಿಸಬೇಕೆಂದು ನೀವು ನನಗೆ ಕರೆ ನೀಡುತ್ತಿರುವಿರಿ. ಇತ್ತ ನಾನು ನಿಮ್ಮನ್ನು ಅತ್ಯಂತ ಪ್ರಬಲನೂ ಕ್ಷಮಾಶೀಲನೂ ಆಗಿರುವಾತನ (ಅಲ್ಲಾಹನ) ಕಡೆಗೆ ಆಮಂತ್ರಿಸುತ್ತಿದ್ದೇನೆ’’

[41] ‘‘ನೀವು ಯಾರೆಡೆಗೆ ನನ್ನನ್ನು ಆಮಂತ್ರಿಸುತ್ತಿರುವಿರೋ ಆತನಿಗೆ ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಖಂಡಿತ ಯಾವ ಸ್ಥಾನವೂ ಇಲ್ಲ. ಕೊನೆಗೆ ನಾವೆಲ್ಲರೂ ಅಲ್ಲಾಹನೆಡೆಗೆ ಮರಳಬೇಕಾಗಿದೆ. ಮತ್ತು ಅತಿಕ್ರಮಿಗಳೇ ನರಕ ವಾಸಿಗಳಾಗುವರು’’

[42] ‘‘ನಾನೀಗ ನಿಮಗೆ ಹೇಳುತ್ತಿರುವುದನ್ನು ಬಹು ಬೇಗನೇ ನೀವು ನೆನಪಿಸಿಕೊಳ್ಳುವಿರಿ. ನಾನು ನನ್ನ ವಿಷಯವನ್ನು ಅಲ್ಲಾಹನಿಗೆ ಒಪ್ಪಿಸಿರುವೆನು. ಖಂಡಿತವಾಗಿಯೂ ಅಲ್ಲಾಹನು ದಾಸರ ಮೇಲೆ ಕಣ್ಣಿಟ್ಟಿತ್ತಿರುತ್ತಾನೆ’’

[43] ಕೊನೆಗೆ ಅಲ್ಲಾಹನು ಆತನನ್ನು ಅವರ ದುಷ್ಟ ಸಂಚುಗಳಿಂದ ರಕ್ಷಿಸಿದನು ಮತ್ತು ಹೀನಾಯ ಶಿಕ್ಷೆಯೊಂದು ಫಿರ್‌ಔನ್‌ನ ಬಳಗವನ್ನು ಆವರಿಸಿಕೊಂಡಿತು

[44] ಮುಂಜಾನೆಯೂ ಸಂಜೆಯೂ ಅವರನ್ನು ಬೆಂಕಿಯ ಮುಂದೆ ಹಾಜರು ಪಡಿಸಲಾಗುತ್ತದೆ. (ಪುನರುತ್ಥಾನದ) ನಿರ್ಣಾಯಕ ಘಳಿಗೆಯು ಬಂದುಬಿಟ್ಟಾಗ, ‘‘ಫಿರ್‌ಔನನ ಬಳಗವನ್ನು ಅತ್ಯಂತ ಘೋರ ಶಿಕ್ಷೆಯೊಳಕ್ಕೆ ತಳ್ಳಿರಿ’’ (ಎಂದು ಆದೇಶಿಸಲಾಗುವುದು)

[45] ಮತ್ತು ಅವರು ನರಕದೊಳಗೆ ಪರಸ್ಪರ ಜಗಳಾಡುವರು. (ಇಹಲೋಕದಲ್ಲಿ) ದುರ್ಬಲರಾಗಿದ್ದವರು, ದೊಡ್ಡಸ್ತಿಕೆ ಮೆರೆಯುತ್ತಿದ್ದವರೊಡನೆ ಹೇಳುವರು; ‘‘(ಅಲ್ಲಿ) ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ಈ ಬೆಂಕಿಯನ್ನು ಸ್ವಲ್ಪ ಮಟ್ಟಿಗಾದರೂ ನಮ್ಮಿಂದ ನಿವಾರಿಸಬಲ್ಲಿರಾ?’’

[46] (ಇಹದಲ್ಲಿ) ದೊಡ್ಡಸ್ತಿಕೆ ಮೆರೆಯುತ್ತಿದ್ದವರು ಹೇಳುವರು; ‘‘ಇದೀಗ ನಾವೆಲ್ಲರೂ ಇದರೊಳಗಿದ್ದೇವೆ. ಅಲ್ಲಾಹನು ಈಗಾಗಲೆ ದಾಸರ ನಡುವೆ ತೀರ್ಪು ನೀಡಿ ಬಿಟ್ಟಿದ್ದಾನೆ’’

[47] ನರಕದೊಳಗಿರುವವರು, ಅದರ ಕಾವಲುಗಾರರೊಡನೆ, ‘‘ಒಂದು ದಿನದ ಮಟ್ಟಿಗಾದರೂ ನಮ್ಮ ಪಾಲಿಗೆ ಶಿಕ್ಷೆಯನ್ನು ತುಸು ಹಗುರಗೊಳಿಸಬೇಕೆಂದು ನಿಮ್ಮ ಒಡೆಯನನ್ನು ಪ್ರಾರ್ಥಿಸಿರಿ’’ ಎನ್ನುವರು

[48] ಅವರು (ಕಾವಲುಗಾರರು), ‘‘ನಿಮ್ಮ ಬಳಿಗೆ ನಿಮ್ಮ ದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು, ‘‘ಹೌದು ಬಂದಿದ್ದರು’’ ಎನ್ನುವರು. ಆಗ ಅವರು (ಕಾವಲುಗಾರರು) ಹೇಳುವರು; ‘‘ಹಾಗಾದರೆ ನೀವೇ ಪ್ರಾರ್ಥಿಸಿರಿ. ಧಿಕ್ಕಾರಿಗಳ ಪ್ರಾರ್ಥನೆಯು ಸದಾ ನಿಷ್ಫಲವಾಗಿರುತ್ತದೆ’’

[49] ನಾವು ನಮ್ಮ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಈ ಲೋಕದಲ್ಲೂ, (ಮುಂದೆ ಪರಲೋಕದಲ್ಲಿ) ಸಾಕ್ಷಿಗಳು ನಿಲ್ಲುವ ದಿನವೂ ಖಂಡಿತ ನೆರವಾಗುವೆವು

[50] ಅಂದು ಅಕ್ರಮಿಗಳಿಗೆ, ಅವರು ಹೂಡುವ ನೆಪಗಳಿಂದ ಯಾವ ಲಾಭವೂ ಆಗದು. ಅವರು ನಿಂದಿತರಾಗಿರುವರು ಮತ್ತು ಅತ್ಯಂತ ನಿಕೃಷ್ಟ ನೆಲೆಯು ಅವರದಾಗಿರುವುದು

[51] ನಾವು ಮೂಸಾರಿಗೆ ಮಾರ್ಗದರ್ಶನ ನೀಡಿದ್ದೆವು ಮತ್ತು ಇಸ್ರಾಈಲರ ಸಂತತಿಗಳನ್ನು ಗ್ರಂಥದ (ತೌರಾತ್‌ನ) ಉತ್ತರಾಧಿಕಾರಿಗಳಾಗಿ ಮಾಡಿದೆವು

[52] ಅದು (ತೌರಾತ್) ಬುದ್ಧಿಯುಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಸದುಪದೇಶವಾಗಿದೆ

[53] (ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಮತ್ತು ನೀವು ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಬೇಡಿರಿ. ಹಾಗೂ ಸಂಜೆ, ಮುಂಜಾನೆಗಳಲ್ಲಿ ನಿಮ್ಮೊಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ

[54] ಖಂಡಿತವಾಗಿಯೂ, ತಮ್ಮ ಬಳಿಗೆ (ಅಲ್ಲಾಹನ ಕಡೆಯಿಂದ) ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರ ಮನಸ್ಸುಗಳಲ್ಲಿ (ತಾವೇ ಮಾಹಾನರೆಂಬ) ಅಹಂಕಾರ ತುಂಬಿದೆ. ಆದರೆ, ಅವರೆಂದೂ ಅದನ್ನು (ಮಹಾನತೆಯನ್ನು) ಸಾಧಿಸಲಾರರು. ನೀವು ಅಲ್ಲಾಹನ ರಕ್ಷಣೆಯನ್ನು ಕೋರಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ

[55] ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯು ಮಾನವರ ಸೃಷ್ಟಿಗಿಂತ ದೊಡ್ಡ ಸಾಧನೆಯಾಗಿದೆ. ಆದರೆ, ಹೆಚ್ಚಿನ ಮಾನವರು ಇದನ್ನು ಅರಿತಿಲ್ಲ

[56] ಕುರುಡನು ಮತ್ತು ಕಾಣುವವನು ಸಮಾನರಲ್ಲ. ನಂಬಿಕೆಯುಳ್ಳವರು, ಸತ್ಕರ್ಮಗಳನ್ನು ಮಾಡುವವರು ಮತ್ತು ದುರಾಚಾರಗಳಿಂದ ದೂರ ಉಳಿಯುವವರು (ಇತರರಂತಲ್ಲ). ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ

[57] (ಲೋಕಾಂತ್ಯದ) ಆ ಕ್ಷಣವು ಖಂಡಿತ ಬರಲಿದೆ. ಅದರಲ್ಲಿ ಸಂದೇಹವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ನಂಬುವುದಿಲ್ಲ

[58] ನಿಮ್ಮ ಒಡೆಯನು ಹೇಳಿರುವನು; ನೀವು ನನ್ನನ್ನು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುವೆನು. ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಭಾವ ತೋರುವವರು ಖಂಡಿತವಾಗಿಯೂ ಅಪಮಾನಿತರಾಗಿ ನರಕವನ್ನು ಪ್ರವೇಶಿಸುವರು

[59] ನೀವು ವಿಶ್ರಾಂತಿ ಪಡುವುದಕ್ಕಾಗಿ ನಿಮಗಾಗಿ ರಾತ್ರಿಯನ್ನು ರೂಪಿಸಿದವನು ಹಾಗೂ ಹಗಲನ್ನು ಬೆಳಗಿಸಿದವನು ಅಲ್ಲಾಹನು. ಅಲ್ಲಾಹನು ತನ್ನ ದಾಸರ ಪಾಲಿಗೆ ಖಂಡಿತ ಉದಾರಿಯಾಗಿದ್ದಾನೆ. ಆದರೆ, ಜನರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ

[60] ಅವನೇ ನಿಮ್ಮ ಒಡೆಯನಾದ ಅಲ್ಲಾಹ್. ಅವನು ಎಲ್ಲ ವಸ್ತುಗಳ ಸೃಷ್ಟಿಕರ್ತ. ಅವನ ಹೊರತು ಬೇರೆ ದೇವರಿಲ್ಲ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ

[61] ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರು ಇದೇ ರೀತಿ ಅಲೆಯುತ್ತಿರುತ್ತಾರೆ

[62] ಅಲ್ಲಾಹನೇ ನಿಮ್ಮ ಪಾಲಿಗೆ ಭೂಮಿಯನ್ನು ವಾಸದ ನೆಲೆಯಾಗಿಸಿದವನು ಮತ್ತು ಆಕಾಶವನ್ನು ಚಪ್ಪರವಾಗಿಸಿದವನು ಮತ್ತು ನಿಮಗೆ ರೂಪವನ್ನು ನೀಡಿದವನು ಹಾಗೂ ನಿಮ್ಮ ರೂಪವನ್ನು ಅಂದಗೊಳಿಸಿದವನು ಮತ್ತು ನಿರ್ಮಲ ವಸ್ತುಗಳ ಮೂಲಕ ನಿಮಗೆ ಆಹಾರವನ್ನು ಒದಗಿಸಿದವನು. ಅವನೇ ನಿಮ್ಮ ಒಡೆಯನಾದ ಅಲ್ಲಾಹ್. ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು

[63] ಅವನು (ಅಲ್ಲಾಹನು) ಸದಾ ಜೀವಂತನು. ಅವನ ಹೊರತು ಬೇರೆ ದೇವರಿಲ್ಲ. ನಿಷ್ಠೆಯನ್ನು ಅವನೊಬ್ಬನಿಗೇ ಮೀಸಲಾಗಿಟ್ಟು, ಅವನನ್ನು ಪ್ರಾರ್ಥಿಸಿರಿ. ಎಲ್ಲ ಪ್ರಶಂಸೆಗಳು, ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು

[64] (ದೂತರೇ,) ಹೇಳಿರಿ; ನನ್ನ ಬಳಿಗೆ ನನ್ನ ಒಡೆಯನ ಕಡೆಯಿಂದ ಸ್ಪಷ್ಟವಾದ ಪ್ರಮಾಣಗಳು ಬಂದಿರುವಾಗ, ಅಲ್ಲಾಹನ ಹೊರತು ನೀವು ಪ್ರಾರ್ಥಿಸುವವುಗಳನ್ನು ನಾನು ಪೂಜಿಸಬಾರದೆಂದು ನನ್ನನ್ನು ತಡೆಯಲಾಗಿದೆ. ಮತ್ತು ನಾನು ಎಲ್ಲ ಲೋಕಗಳ ಒಡೆಯನಿಗೆ ಶರಣಾಗಬೇಕೆಂದು ನನಗೆ ಆದೇಶಿಸಲಾಗಿದೆ

[65] ಅವನೇ ನಿಮ್ಮನ್ನು (ಮೊದಲು) ಮಣ್ಣಿನಿಂದ, ಆ ಬಳಿಕ ವೀರ್ಯದಿಂದ ಮತ್ತು ಆ ಬಳಿಕ ಮಾಂಸ ಪಿಂಡದಿಂದ ಸೃಷ್ಟಿಸಿದವನು. ತರುವಾಯ ಅವನು ನಿಮ್ಮನ್ನು (ತಾಯಿಯ ಗರ್ಭದಿಂದ) ಶಿಶುವಾಗಿ ಹೊರತೆಗೆಯುತ್ತಾನೆ – ನೀವು ಯವ್ವನವನ್ನು ತಲುಪಲು ಹಾಗೂ ಆ ಬಳಿಕ ವೃದ್ಧರಾಗಿ ಬಿಡಲು. ನಿಮ್ಮಲ್ಲಿ ಕೆಲವರು ಅದಕ್ಕೆ ಮುನ್ನವೇ ಮೃತರಾಗಿ ಬಿಡುತ್ತಾರೆ ಮತ್ತು (ಇತರರು ಉಳಿದಿರುತ್ತಾರೆ) – ನೀವು ಒಂದು ನಿರ್ದಿಷ್ಟ ಅವಧಿಯನ್ನು ತಲುಪಬೇಕು ಹಾಗೂ ಬುದ್ಧಿವಂತರಾಗಬೇಕೆಂದು

[66] ಅವನೇ ಜೀವನ ನೀಡುವವನು ಹಾಗೂ ಮರಣವನ್ನು ನೀಡುವವನು. ಅವನು ಏನನ್ನಾದರೂ ನಿರ್ಧರಿಸಿದರೆ ಅದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ

[67] ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರನ್ನು ನೀವು ಕಂಡಿರಾ? ಅವರು ಅದೆಲ್ಲಿ ಅಲೆಯುತ್ತಿದ್ದಾರೆ

[68] ಅವರು ದಿವ್ಯ ಗ್ರಂಥವನ್ನು ಮತ್ತು ನಮ್ಮ ದೂತರ ಜೊತೆ ನಾವು ಕಳಿಸಿದ್ದನ್ನು ತಿರಸ್ಕರಿಸಿದರು. (ಇದರ ಪರಿಣಾಮವನ್ನು) ಅವರು ಬಹು ಬೇಗನೇ ಅರಿಯುವರು

[69] ಅವರ ಕೊರಳುಗಳಲ್ಲಿ ನೊಗ ಹಾಗೂ ಸರಪಳಿಗಳಿರುವವು ಮತ್ತು ಅವರನ್ನು ಎಳೆದೊಯ್ಯಲಾಗುವುದು

[70] ಕುದಿಯುವ ನೀರಿಗೆ ಮತ್ತು ಆ ಬಳಿಕ ಬೆಂಕಿಗೆ ಅವರನ್ನು ಎಸೆದು ಬಿಡಲಾಗುವುದು

[71] ಆ ಬಳಿಕ ಅವರೊಡನೆ ಕೇಳಲಾಗುವುದು; ‘‘ಎಲ್ಲಿದ್ದಾರೆ ನೀವು (ದೇವತ್ವದಲ್ಲಿ) ಪಾಲುಗೊಳಿಸಿದ್ದವರು?’’

[72] ‘‘- ಅಲ್ಲಾಹನ ಹೊರತು?’’. ಅವರು ಹೇಳುವರು; ‘‘ಅವರೆಲ್ಲಾ ನಮ್ಮಿಂದ ಕಳೆದು ಹೋಗಿದ್ದಾರೆ. ನಾವು ಈ ಹಿಂದೆ ಯಾರನ್ನೂ ಪ್ರಾರ್ಥಿಸುತ್ತಿರಲಿಲ್ಲ’’. ಇದೇ ರೀತಿ ಅಲ್ಲಾಹನು ಧಿಕ್ಕಾರಿಗಳನ್ನು ದಾರಿಗೆಡಿಸಿ ಬಿಡುತ್ತಾನೆ

[73] ಇದು, ನೀವು ಅನ್ಯಾಯವಾಗಿ ಭೂಮಿಯಲ್ಲಿ ಆಚರಿಸುತ್ತಿದ್ದ ಸಂಭ್ರಮ ಹಾಗೂ ನೀವು ಮೆರೆಯುತ್ತಿದ್ದ ದೊಡ್ಡಸ್ತಿಕೆಯ ಪ್ರತಿಫಲವಾಗಿದೆ

[74] ಪ್ರವೇಶಿಸಿರಿ, ನರಕದ ಬಾಗಿಲುಗಳೊಳಗೆ ಮತ್ತು ಸದಾಕಾಲ ಅಲ್ಲೇ ವಾಸಿಸಿರಿ. ಎಷ್ಟೊಂದು ಕೆಟ್ಟದು, ಅಹಂಕಾರಿಗಳ ಅಂತಿಮ ನೆಲೆ

[75] (ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯ. ನಾವು ಅವರಿಗೆ ವಾಗ್ದಾನ ಮಾಡಿರುವುದರ (ಆ ಶಿಕ್ಷೆಯ) ಒಂದಂಶವನ್ನು ನಿಮಗೆ ತೋರಿಸಿದರೂ ಅಥವಾ (ಅದಕ್ಕೆ ಮುನ್ನ) ನಿಮಗೆ ಮರಣವನ್ನು ನೀಡಿದರೂ ಅವರಂತು ನಮ್ಮ ಕಡೆಗೇ ಮರಳಿ ಬರಬೇಕಾಗಿದೆ

[76] ನಾವು ನಿಮಗಿಂತ ಹಿಂದೆಯೂ ದೂತರನ್ನು ಕಳಿಸಿರುವೆವು. ಅವರಲ್ಲಿ ಕೆಲವರ ಸಮಾಚಾರವನ್ನು ನಾವು ನಿಮಗೆ ತಿಳಿಸಿರುವೆವು ಮತ್ತು ಇತರ ಕೆಲವರ ಸಮಾಚಾರವನ್ನು ನಿಮಗೆ ತಿಳಿಸಿಲ್ಲ. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ದೂತನ ಬಳಿಗೆ ಒಂದು ವಚನವೂ ಬರುವುದಿಲ್ಲ. ಕೊನೆಗೆ, ಅಲ್ಲಾಹನ ಆದೇಶವು ಬಂದು ಬಿಟ್ಟಾಗ, ನ್ಯಾಯೋಚಿತವಾಗಿ ತೀರ್ಪು ನೀಡಿ ಬಿಡಲಾಗುತ್ತದೆ. ಆಗ ಮಿಥ್ಯವಾದಿಗಳು ನಷ್ಟದಲ್ಲಿರುತ್ತಾರೆ

[77] ಅಲ್ಲಾಹನೇ ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದನು. ನೀವು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸುತ್ತೀರಿ ಮತ್ತು ಕೆಲವನ್ನು ತಿನ್ನುತ್ತೀರಿ

[78] ನಿಮಗೆ ಅವುಗಳಲ್ಲಿ ಹಲವಾರು ಪ್ರಯೋಜನಗಳಿವೆ ನಿಮ್ಮ ಮನಸ್ಸು ಬಯಸುವಲ್ಲಿಗೆ ನಿಮ್ಮನ್ನು ತಲುಪಿಸಲು (ಅವು ನೆರವಾಗುತ್ತವೆ). ಮತ್ತು ಅವುಗಳ ಮೇಲೂ ನಾವೆಗಳಲ್ಲೂ ನೀವು ಪ್ರಯಾಣಿಸುತ್ತೀರಿ

[79] ಅವನು ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಲಿರುತ್ತಾನೆ. ನೀವು ಅಲ್ಲಾಹನ ಯಾವೆಲ್ಲ ಪುರಾವೆಗಳನ್ನು ನಿರಾಕರಿಸುವಿರಿ

[80] ಅವರೇನು, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ತಿರುಗಾಡುವುದಿಲ್ಲವೇ? ಅವರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಇವರಿಗಿಂತ ಬಲಿಷ್ಠರಾಗಿದ್ದರು ಮತ್ತು ಭೂಮಿಯಲ್ಲಿ ಭಾರೀ ಸ್ಮಾರಕಗಳನ್ನು ನಿರ್ಮಿಸಿದ್ದರು. ಆದರೆ, ಅವರ ಯಾವ ಗಳಿಕೆಯೂ ಅವರ ಪಾಲಿಗೆ ಉಪಯುಕ್ತವಾಗಲಿಲ್ಲ

[81] ಅವರ ದೇವದೂತರು ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ, ಅವರು ತಮ್ಮ ಬಳಿ ಇದ್ದ ತಿಳುವಳಿಕೆಯ ಕುರಿತು ಸಂತೃಪ್ತರಾಗಿದ್ದರು. ಆದರೆ ಅವರು ಏನನ್ನು ಲೇವಡಿ ಮಾಡುತ್ತಿದ್ದರೋ ಅದುವೇ (ಸತ್ಯವೇ) ಅವರನ್ನು ಆವರಿಸಿಕೊಂಡಿತು

[82] ಕೊನೆಗೆ ಅವರು ನಮ್ಮ ಶಿಕ್ಷೆಯನ್ನು ಕಂಡಾಗ, ‘‘ನಾವು ಏಕ ಮಾತ್ರನಾದ ಅಲ್ಲಾಹನನ್ನು ನಂಬಿದೆವು ಮತ್ತು ಅವನ ಜೊತೆ ನಾವು ಯಾರನ್ನೆಲ್ಲಾ ಪಾಲುಗೊಳಿಸುತ್ತಿದ್ದೆವೋ ಅವರನ್ನೆಲ್ಲಾ ತಿರಸ್ಕರಿಸಿದೆವು’’ ಎಂದು ಬಿಟ್ಟರು

[83] ಆದರೆ, ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರಿಟ್ಟ ನಂಬಿಕೆಯಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ. ಗತಕಾಲಗಳಲ್ಲೂ ತನ್ನ ದಾಸರ ವಿಷಯದಲ್ಲಿ ಇದುವೇ ಅಲ್ಲಾಹನ ನಿಯಮವಾಗಿತ್ತು ಮತ್ತು ಧಿಕ್ಕಾರಿಗಳು ನಷ್ಟದಲ್ಲೇ ಉಳಿದರು

[84] ಹಾ ಮೀಮ್

[85] ಅಪಾರ ದಯಾಳುವೂ ಕರುಣಾಮಯಿಯೂ ಆಗಿರುವವನು ಇಳಿಸಿಕೊಟ್ಟಿರುವ ಸಂದೇಶವಿದು

ವಿವರವಾಗಿ ವಿವರಿಸಲಾಗಿದೆ

Surah 41

[1] ಇದು, ಸವಿಸ್ತಾರವಾಗಿ ವಿವರಿಸಿದ ವಚನಗಳಿರುವ ಗ್ರಂಥ – ಬುದ್ಧಿವಂತರಿಗಾಗಿ, ಅರಬೀ ಭಾಷೆಯಲ್ಲಿರುವ ಕುರ್‌ಆನ್‌

[2] ಶುಭವಾರ್ತೆ ನೀಡುವ ಹಾಗೂ ಎಚ್ಚರಿಸುವ (ಗ್ರಂಥ). ಅವರಲ್ಲಿ ಹೆಚ್ಚಿನವರು ಇದನ್ನು ಕಡೆಗಣಿಸುತ್ತಿದ್ದಾರೆ. ಅವರು ಆಲಿಸುವುದಿಲ್ಲ

[3] ‘‘ನೀವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಅದರ ಪಾಲಿಗೆ ನಮ್ಮ ಮನಸ್ಸುಗಳು ಮುಚ್ಚಿವೆ ಹಾಗೂ ನಮ್ಮ ಕಿವಿಗಳಲ್ಲಿ ಕಿವುಡಿದೆ ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಒಂದು ತೆರೆ ಇದೆ. ನೀವು ನಿಮ್ಮ ಕೆಲಸ ಮಾಡಿರಿ ನಾವು ನಮ್ಮ ಕೆಲಸ ಮಾಡುವೆವು’’ ಎಂದು ಅವರು ಹೇಳುತ್ತಾರೆ

[4] ಹೇಳಿರಿ; ನಾನು ಕೇವಲ ನಿಮ್ಮಂತಹ ಮಾನವ. ಏಕ ಮಾತ್ರ ದೇವರೇ ನಿಮ್ಮ ದೇವರೆಂದು ನನಗೆ ದಿವ್ಯವಾಣಿಯನ್ನು ಕಳಿಸಲಾಗಿದೆ. ನೀವು ಸ್ಥಿರವಾಗಿ ಅವನಿಗೆ ನಿಷ್ಠರಾಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ. ಬಹುದೇವಾರಾಧಕರಿಗೆ ವಿನಾಶ ಕಾದಿದೆ

[5] ಅವರು ಝಕಾತ್‌ಅನ್ನು ಪಾವತಿಸುವುದಿಲ್ಲ ಮತ್ತು ಪರಲೋಕವನ್ನು ಧಿಕ್ಕರಿಸುತ್ತಾರೆ

[6] ಸತ್ಯವನ್ನು ನಂಬುವವರಿಗೆ ಮತ್ತು ಸತ್ಕರ್ಮಗಳನ್ನು ಮಾಡುವವರಿಗೆ ಖಂಡಿತ ಎಂದೂ ಮುಗಿಯದ ಪ್ರತಿಫಲವಿದೆ

[7] ಹೇಳಿರಿ; ನೀವೇನು, ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದವನನ್ನು ಧಿಕ್ಕರಿಸುವಿರಾ? ಮತ್ತು ನೀವು ಅವನಿಗೆ ಪ್ರತಿಸ್ಪರ್ಧಿಗಳನ್ನು ನೇಮಿಸುವಿರಾ? ಅವನು ಸರ್ವಲೋಕಗಳ ಒಡೆಯನು

[8] ಮತ್ತು ಅವನು ನಾಲ್ಕು ದಿನಗಳಲ್ಲಿ, ಅದರ (ಭೂಮಿಯ) ಮೇಲೆ ಪರ್ವತಗಳನ್ನು ನಿರ್ಮಿಸಿದನು ಹಾಗೂ ಅದನ್ನು ಸಮೃದ್ಧಗೊಳಿಸಿದನು ಮತ್ತು ಅದರಲ್ಲಿ ಅವರ (ಎಲ್ಲ ಜೀವಿಗಳ) ಆಹಾರವನ್ನು ನಿರ್ಮಿಸಿದನು. ಸಮಾನವಾಗಿ, ಎಲ್ಲ ಅಪೇಕ್ಷರಿಗಾಗಿ

[9] ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿದನು. ಅದು ಹೊಗೆಯಾಗಿತ್ತು. ಅವನು ಅದರೊಡನೆ (ಆಕಾಶದೊಡನೆ) ಹಾಗೂ ಭೂಮಿಯೊಡನೆ, ಇಷ್ಟವಿದ್ದರೂ, ಇಲ್ಲದಿದ್ದರೂ ನೀವಿಬ್ಬರೂ ಮುಂದೆ ಬನ್ನಿ ಎಂದನು. ಅವೆರಡೂ, ‘‘ನಾವು ಸಂತೋಷದಿಂದ ಬಂದಿರುವೆವು’’ ಎಂದವು

[10] ತರುವಾಯ ಅವನು ಎರಡು ದಿನಗಳಲ್ಲಿ, ಏಳು-ಆಕಾಶಗಳನ್ನು ನಿರ್ಮಿಸಿದನು ಹಾಗೂ ಪ್ರತಿಯೊಂದು ಆಕಾಶಕ್ಕೂ ಸೂಕ್ತ ಆದೇಶಗಳನ್ನು ನೀಡಿದನು ಮತ್ತು ನಾವು ಭೂಮಿಯ ಆಕಾಶವನ್ನು ದೀಪ (ನಕ್ಷತ್ರ) ಗಳಿಂದ ಅಲಂಕರಿಸಿದೆವು ಹಾಗೂ ಅದನ್ನು ರಕ್ಷಾಕವಚವಾಗಿ ಮಾಡಿದೆವು

[11] (ದೂತರೇ,) ಅವರು (ಸತ್ಯಸಂದೇಶವನ್ನು) ಕಡೆಗಣಿಸಿದರೆ ಹೇಳಿರಿ; ನಾನು ನಿಮಗೆ ಒಂದು ಭೀಕರ ಚಂಡಮಾರುತದ ಮುನ್ನೆಚ್ಚರಿಕೆ ನೀಡುತ್ತಿದ್ದೇನೆ. ಆದ್ ಮತ್ತು ಸಮೂದ್ ಜನಾಂಗದವರ ಮೇಲೆ ಬಂದೆರಗಿದಂತಹ ಚಂಡಮಾರುತ

[12] ಅವರ ಬಳಿಗೆ ದೂತರು ಬಂದು, ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಡಿ ಎಂದು ಅವರ ಮುಂದೆಯೂ ಹಿಂದೆಯೂ ಮನವಿ ಮಾಡಿದ್ದರು. ಆಗ ಅವರು, ನಮ್ಮ ಒಡೆಯನು ಬಯಸಿದ್ದರೆ ಖಂಡಿತ ಮಲಕ್‌ಗಳನ್ನು (ದೂತರಾಗಿ) ಕಳಿಸುತ್ತಿದ್ದನು. ನೀವು ತಂದಿರುವ ಸಂದೇಶವನ್ನು ನಾವು ಧಿಕ್ಕರಿಸುತ್ತೇವೆ ಎಂದಿದ್ದರು

[13] ಅತ್ತ, ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ಮೆರೆಯ ತೊಡಗಿದ್ದರು. ಯಾರಿದ್ದಾರೆ, ನಮಗಿಂತ ಬಲಿಷ್ಠರು? ಎಂದು ಅವರು ಕೇಳುತ್ತಿದ್ದರು. ಅವರನ್ನು ಸೃಷ್ಟಿಸಿರುವ ಅಲ್ಲಾಹನು ಅವರಿಗಿಂತ ಬಲಿಷ್ಠನೆಂಬುದನ್ನು ಅವರು ಕಾಣುತ್ತಿಲ್ಲವೇ? ಅವರು ನಮ್ಮ ವಚನಗಳನ್ನು ತಿರಸ್ಕರಿಸಿದ್ದರು

[14] ಕೊನೆಗೆ ನಾವು ಇಹಲೋಕದಲ್ಲೇ ಅವರಿಗೆ ಅಪಮಾನದ ಶಿಕ್ಷೆಯನ್ನು ಉಣಿಸಲಿಕ್ಕಾಗಿ ಕೆಲವು ಕೆಟ್ಟ ದಿನಗಳಲ್ಲಿ ಅವರ ಮೇಲೆ ಭಾರೀ ವೇಗದ ಚಂಡಮಾರುತವನ್ನು ಎರಗಿಸಿದೆವು. ಪರಲೋಕದ ಶಿಕ್ಷೆಯು ಇದಕ್ಕಿಂತಲೂ ಹೆಚ್ಚು ಅಪಮಾನಕಾರಿಯಾಗಿರುವುದು ಮತ್ತು ಅವರಿಗೆ ಯಾವ ನೆರವೂ ಸಿಗದು

[15] ಸಮೂದ್ ಜನಾಂಗದವರಿಗೆ ನಾವು ಸರಿದಾರಿಯನ್ನು ತೋರಿಸಿದೆವು. ಆದರೆ, ಅವರು ಸರಿದಾರಿಯನ್ನು ಕಾಣುವ ಬದಲು ಕುರುಡರಾಗಿರಲು ಇಷ್ಟಪಟ್ಟರು. ಕೊನೆಗೆ ಅವರ ಕೃತ್ಯಗಳ ಫಲವಾಗಿ ಒಂದು ಭೀಕರ ಚಂಡ ಮಾರುತವು, ಅಪಮಾನಕಾರಿ ಶಿಕ್ಷೆಯಾಗಿ ಅವರನ್ನು ಆವರಿಸಿಕೊಂಡಿತು

[16] ಮತ್ತು ನಾವು ವಿಶ್ವಾಸಿಗಳಾಗಿದ್ದವರನ್ನು ಹಾಗೂ ಧರ್ಮನಿಷ್ಠರಾಗಿದ್ದವರನ್ನು ರಕ್ಷಿಸಿದೆವು

[17] ಅಲ್ಲಾಹನ ಎಲ್ಲ ಶತ್ರುಗಳನ್ನು ನರಕದೆಡೆಗೆ ಅಟ್ಟಲಾಗುವ ದಿನ, ಅವರನ್ನು ಪ್ರತ್ಯೇಕಿಸಲಾಗುವುದು

[18] ಅವರು ಅದರ ಬಳಿಗೆ ತಲುಪಿದಾಗ, ಹಿಂದೆ ಅವರು ಏನೆಲ್ಲಾ ಮಾಡಿದ್ದರೆಂಬ ಕುರಿತು ಅವರ ಕಿವಿಗಳು, ಕಣ್ಣುಗಳು ಮತ್ತು ಅವರ ಚರ್ಮಗಳು ಅವರ ವಿರುದ್ಧ ಸಾಕ್ಷ ಹೇಳುವವು

[19] ಅವರು ತಮ್ಮ ಚರ್ಮಗಳೊಡನೆ, ನೀವೇಕೆ ನಮ್ಮ ವಿರುದ್ಧ ಸಾಕ್ಷ ಹೇಳಿದಿರಿ? ಎಂದು ಕೇಳುವರು. ಆಗ ಅವು ಹೇಳುವವು; ಎಲ್ಲ ವಸ್ತುಗಳನ್ನು ಮಾತನಾಡಿಸಿರುವ ಅಲ್ಲಾಹನೇ ನಮ್ಮನ್ನೂ ಮಾತನಾಡಿಸಿರುವನು. ಅವನೇ ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು ಮತ್ತು ಅವನ ಕಡೆಗೇ ನಿಮ್ಮನ್ನು ಮರಳಿಸಲಾಗಿದೆ

[20] ನೀವು ಗುಟ್ಟಾಗಿ ಕೆಲವು (ಪಾಪ) ಕೃತ್ಯ ಗಳನ್ನು ಮಾಡುತ್ತಿದ್ದಾಗ, ನಿಮ್ಮ ಕಿವಿಗಳಾಗಲಿ, ನಿಮ್ಮ ಕಣ್ಣುಗಳಾಗಲಿ, ನಿಮ್ಮ ಚರ್ಮಗಳಾಗಲಿ ನಿಮ್ಮ ವಿರುದ್ಧ ಸಾಕ್ಷ ಹೇಳಲಾರವು ಎಂದು ನೀವು ಭಾವಿಸಿದ್ದಿರಿ. ಮಾತ್ರವಲ್ಲ, ನೀವಂತು, ನಿಮ್ಮ ಹೆಚ್ಚಿನ ಕರ್ಮಗಳ ಕುರಿತು ಅಲ್ಲಾಹನಿಗೂ ತಿಳಿದಿರುವುದಿಲ್ಲ ಎಂದು ಭಾವಿಸಿ ಕೊಂಡಿದ್ದಿರಿ

[21] ನಿಮ್ಮ ಒಡೆಯನ ಕುರಿತು ನಿಮಗಿದ್ದ ಈ ನಿಮ್ಮ ಭ್ರಮೆಯೇ ನಿಮ್ಮನ್ನು ನಾಶಪಡಿಸಿತು ಮತ್ತು ನೀವು ನಷ್ಟ ಅನುಭವಿಸುವವರಾದಿರಿ

[22] ಇದೀಗ ಅವರು ಸಹಿಸಿಕೊಂಡರೂ ನರಕವೇ ಅವರ ನೆಲೆಯಾಗಿರುವುದು ಮತ್ತು ಅವರು ಕ್ಷಮೆಯಾಚಿಸಿದರೂ ಅವರಿಗೆಂದೂ ಕ್ಷಮೆ ದೊರೆಯದು

[23] (ಇಹಲೋಕದಲ್ಲಿ) ನಾವು ಅವರಿಗೆ ಕೆಲವು ಸಂಗಾತಿಗಳನ್ನು ನೇಮಿಸಿರುವೆವು. ಅವರು, ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಅವರಿಗೆ ಚಂದಗಾಣಿಸಿಕೊಡುತ್ತಾರೆ. ಅವರ ವಿರುದ್ಧ ಹಾಗೂ ಅವರಿಗಿಂತ ಹಿಂದೆ ಬದುಕಿದ್ದ ಜಿನ್ನ್ ಹಾಗೂ ಮಾನವ ಸಮುದಾಯಗಳ ವಿರುದ್ಧ (ಅಲ್ಲಾಹನ) ಮಾತು ಅನುಷ್ಠಾನವಾಗಿ ಬಿಟ್ಟಿತು. ಅವರು ಖಂಡಿತ ನಷ್ಟ ಅನುಭವಿಸುವವರಾಗಿದ್ದರು

[24] ಧಿಕ್ಕಾರಿಗಳು ಹೇಳಿದರು; ‘‘ನೀವು ವಿಜಯಿಗಳಾಗಬೇಕಿದ್ದರೆ, ಆ ಕುರ್‌ಆನನ್ನು ಆಲಿಸಬೇಡಿ, ಅದರಲ್ಲಿ (ಅದರ ಪಠಣ ನಡೆಯುವಲ್ಲಿ) ಗದ್ದಲವೆಬ್ಬಿಸಿರಿ’’

[25] ಧಿಕ್ಕಾರಿಗಳಿಗೆ ನಾವು ಖಂಡಿತ ಕಠೋರ ಶಿಕ್ಷೆಯ ರುಚಿ ಉಣಿಸುವೆವು ಮತ್ತು ನಾವು ಅವರ ಅತ್ಯಂತ ದುಷ್ಟ ಕರ್ಮಗಳಿಗನುಸಾರ ಅವರಿಗೆ ಪ್ರತಿಫಲ ನೀಡುವೆವು

[26] ಈ ನರಕವೇ ಅಲ್ಲಾಹನ ಶತ್ರುಗಳಿಗಿರುವ ಪ್ರತಿಫಲ. ಅವರಿಗಾಗಿ ಅದರೊಳಗೇ ಶಾಶ್ವತ ನೆಲೆ ಇದೆ. ಇದು, ಅವರು ನಮ್ಮ ವಚನಗಳನ್ನು ತಿರಸ್ಕರಿಸಿದ್ದರ ಪ್ರತಿಫಲ

[27] (ಅಲ್ಲಿ) ಧಿಕ್ಕಾರಿಗಳು ಹೇಳುವರು; ನಮ್ಮೊಡೆಯಾ, ಜಿನ್ನ್ ಮತ್ತು ಮಾನವರ ಪೈಕಿ ನಮ್ಮನ್ನು ದಾರಿಗೆಡಿಸಿದವರನ್ನು ನಮಗೆ ತೋರಿಸು. ಅವರು ತೀರಾ ಅಪಮಾನಿತರಾಗುವಂತೆ ನಾವು ಅವರನ್ನು ನಮ್ಮ ಪಾದಗಳ ಕೆಳಗಿಡುವೆವು

[28] ಅಲ್ಲಾಹನೇ ನಮ್ಮ ಒಡೆಯನೆಂದು ಘೋಷಿಸಿದವರು ಮತ್ತು ಸ್ಥಿರವಾಗಿ ನಿಂತವರು – ಅವರಿಗಾಗಿ ಖಂಡಿತ ನಾವು ಮಲಕ್‌ಗಳನ್ನು ಇಳಿಸಿ ಕೊಡುವೆವು. (ಅವರು ಸಾಂತ್ವನ ಹೇಳುವರು;) ನೀವು ಅಂಜಬೇಡಿ ಮತ್ತು ದುಃಖಿಸಬೇಡಿ. ನಿಮಗೆ ಸ್ವರ್ಗದ ವಾಗ್ದಾನ ನೀಡಲಾಗುತ್ತಿದೆ. ಆ ಕುರಿತು ಸಂತೋಷ ಪಡಿರಿ

[29] ಇಹಲೋಕದ ಬದುಕಿನಲ್ಲೂ ಪರಲೋಕದಲ್ಲೂ ನಾವೇ ನಿಮ್ಮ ಸಂಗಾತಿಗಳು. ಅಲ್ಲಿ ನಿಮಗಾಗಿ, ನಿಮ್ಮ ಚಿತ್ತಗಳು ಆಶೆ ಪಡುವ ಮತ್ತು ನೀವು ಅಪೇಕ್ಷಿಸುವ ಎಲ್ಲವೂ ಇರುವುದು

[30] ಇದು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವಾತನ (ಅಲ್ಲಾಹನ) ಆತಿಥ್ಯ

[31] (ಜನರನ್ನು) ಅಲ್ಲಾಹನೆಡೆಗೆ ಕರೆಯುತ್ತಿರುವ ಹಾಗೂ (ಸ್ವತಃ) ಸತ್ಕರ್ಮಗಳನ್ನು ಮಾಡುತ್ತಿರುವ ಮತ್ತು ನಾನು ಖಂಡಿತ ಒಬ್ಬ ಮುಸ್ಲಿಮ್ (ಶರಣಾದವನು) ಆಗಿದ್ದೇನೆ ಎಂದು ಹೇಳುವಾತನಿಗಿಂತ ಉತ್ತಮ ಮಾತು ಯಾರದು

[32] ಒಳಿತು ಮತ್ತು ಕೆಡುಕುಗಳು ಸಮಾನವಲ್ಲ. ನೀವು ಕೆಡಕನ್ನು ಒಳಿತಿನಿಂದ ಎದುರಿಸಿರಿ – ಆಗ ನಿಮ್ಮ ವಿರುಧ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಂತಾಗಿ ಬಿಡುವನು

[33] ಸಹನಶೀಲರ ಹೊರತು ಇತರರಿಗೆ ಇದು (ಈ ಸಾಮರ್ಥ್ಯ) ಪ್ರಾಪ್ತವಾಗುವುದಿಲ್ಲ. ಮತ್ತು ಮಹಾ ಸೌಭಾಗ್ಯವಂತರ ಹೊರತು ಇತರರಿಗೆ ಇದು ಪ್ರಾಪ್ತವಾಗುವುದಿಲ್ಲ

[34] ಒಂದು ವೇಳೆ ನೀವು ಶೈತಾನನಿಂದ ಪ್ರಚೋದಿತರಾದರೆ, ಅಲ್ಲಾಹನ ಆಶ್ರಯ ಕೋರಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ

[35] ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ

[36] ಇನ್ನು ಅವರು ಅಹಂಕಾರ ತೋರಿದರೆ, ನಿಮ್ಮ ಒಡೆಯನ ಬಳಿಯಲ್ಲಂತೂ ಇರುಳಲ್ಲೂ ಹಗಲಲ್ಲೂ ಅವನ ಪಾವಿತ್ರವನ್ನು ಜಪಿಸುತ್ತಿರುವವರಿದ್ದಾರೆ ಮತ್ತು ಅವರು ದಣಿಯುವುದೂ ಇಲ್ಲ

[37] ಇದು ಅವನ (ಅಲ್ಲಾಹನ) ಪುರಾವೆಗಳಲ್ಲೊಂದು; ಭೂಮಿಯು ತೀರಾ ಒಣಗಿರುವುದನ್ನು ನೀವು ಕಾಣುತ್ತೀರಿ. ಆದರೆ, ನಾವು ಅದರ ಮೇಲೆ ನೀರನ್ನು ಇಳಿಸಿದಾಗ ಅದು ನಳನಳಿಸತೊಡಗುತ್ತದೆ ಹಾಗೂ ಅರಳಿ ಬಿಡುತ್ತದೆ. ಖಂಡಿತವಾಗಿಯೂ ಅದನ್ನು ಜೀವಂತಗೊಳಿಸಿದವನೇ, ಸತ್ತವರನ್ನು ಜೀವಂತಗೊಳಿಸುವನು. ಅವನು ಖಂಡಿತ ಎಲ್ಲವನ್ನೂ ಮಾಡ ಬಲ್ಲವನಾಗಿದ್ದಾನೆ

[38] ನಮ್ಮ ವಚನಗಳನ್ನು ತಿರುಚುವವರು ನಮ್ಮಿಂದ ಕಣ್ಮರೆಯಾಗಿಲ್ಲ. ಪುನರುತ್ಥಾನ ದಿನ ಬೆಂಕಿಗೆ ಎಸೆಯಲ್ಪಡುವವನು ಉತ್ತಮನೋ ಅಥವಾ ಅಂದು ಸುರಕ್ಷಿತ ಸ್ಥಿತಿಯಲ್ಲಿ ಹಾಜರಾಗುವವನು ಉತ್ತಮನೋ? ಸದ್ಯ ನೀವು ನಿಮಗಿಷ್ಟವಿರುವುದನ್ನು ಮಾಡಿರಿ. ಖಂಡಿತವಾಗಿಯೂ ಅವನು (ಅಲ್ಲಾಹನು) ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ

[39] ನಮ್ಮ ಉಪದೇಶವು ತಮ್ಮ ಬಳಿಗೆ ಬಂದಾಗ ಅದನ್ನು ಧಿಕ್ಕರಿಸಿದವರು (ತಿಳಿದಿರಲಿ); ಇದೊಂದು ಗೌರವಾನ್ವಿತ ಗ್ರಂಥವಾಗಿದೆ

[40] ಮಿಥ್ಯವು ಇದರ ಮುಂದಿನಿಂದಾಗಲಿ ಹಿಂದಿನಿಂದಾಗಲಿ ಇದನ್ನು ಸಮೀಪಿಸುವುದಿಲ್ಲ. ಇದನ್ನು, ಯುಕ್ತಿವಂತನೂ ಪ್ರಶಂಸಾರ್ಹನೂ ಆಗಿರುವಾತನ ಕಡೆಯಿಂದ ಇಳಿಸಿ ಕೊಡಲಾಗಿದೆ

[41] (ದೂತರೇ,) ನಿಮಗಿಂತ ಹಿಂದಿನ ದೇವದೂತರಿಗೆ ಹೇಳಲಾಗಿದ್ದ ಮಾತುಗಳನ್ನೇ ನಿಮಗೆ ಹೇಳಲಾಗುತ್ತಿದೆ. ಖಂಡಿತವಾಗಿಯೂ ನಿಮ್ಮೊಡೆಯನು ತುಂಬಾ ಕ್ಷಮಿಸುವವನು ಮತ್ತು ಯಾತನಾಮಯ ಶಿಕ್ಷೆ ನೀಡುವವನಾಗಿದ್ದಾನೆ

[42] ನಾವು ಅರಬೇತರ ಭಾಷೆಯಲ್ಲಿ ಕುರ್‌ಆನನ್ನು ಕಳಿಸಿದ್ದರೆ, ಅವರು, ಇದರ ವಚನಗಳೇಕೆ ಸ್ಪಷ್ಟವಾಗಿಲ್ಲ? ಅರಬೇತರ ಗ್ರಂಥ ಮತ್ತು ಅರಬೀ ದೂತನೇ? ಎನ್ನುತ್ತಿದ್ದರು. ಹೇಳಿರಿ; ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಗುಣಕಾರಿಯಾಗಿದೆ. ನಂಬದವರ ಕಿವಿಗಳು ಕಿವುಡಾಗಿವೆ ಮತ್ತು ಇದು ಅವರ ಪಾಲಿನ ಕುರುಡುತನವಾಗಿದೆ. ಅವರ ಸ್ಥಿತಿಯು ಬಹು ದೂರದಿಂದ ಕರೆಯಲ್ಪಡುವವರಂತಿದೆ

[43] ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು. ಆ ಕುರಿತು ಭಿನ್ನತೆಗಳು ಎದುರಾದವು. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ, ಅವರ ವಿಷಯದಲ್ಲಿ ತೀರ್ಪು ಬಂದು ಬಿಡುತ್ತಿತ್ತು. ಅವರು ಖಂಡಿತ ಈ ಕುರಿತು ಸಂಶಯದಲ್ಲಿದ್ದಾರೆ

[44] ಸತ್ಕಾರ್ಯವನ್ನು ಮಾಡುವವನು ಸ್ವತಃ ತನ್ನ ಹಿತಕ್ಕಾಗಿ ಅದನ್ನು ಮಾಡುತ್ತಾನೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವಾತನ ಕೆಡುಕಿನ ಹೊಣೆಯು ಅವನ ಮೇಲೆಯೇ ಇರುತ್ತದೆ. ನಿಮ್ಮ ಒಡೆಯನಂತು ದಾಸರ ಮೇಲೆ ಅನ್ಯಾಯ ಎಸಗುವವನಲ್ಲ

[45] ಅಂತಿಮ ಘಳಿಗೆಯ ಕುರಿತಾದ ಜ್ಞಾನವು ಅವನ (ಅಲ್ಲಾಹನ) ವಶದಲ್ಲೇ ಇದೆ. ಅವನಿಗೆ ಅರಿವಿಲ್ಲದೆ ಯಾವ ಹಣ್ಣೂ ತನ್ನ ಗೊನೆಯಿಂದ ಹೊರ ಹೊಮ್ಮಲಾರದು, ಯಾವ ಹೆಣ್ಣೂ ಗರ್ಭ ಧರಿಸಲಾರಳು ಮತ್ತು ಪ್ರಸವಿಸಲಾರಳು. ‘‘ಎಲ್ಲಿದ್ದಾರೆ ನನ್ನ ಪಾಲುದಾರರು?’’ ಎಂದು ಆ ದಿನ ಅವನು ಅವರೊಡನೆ ಕೂಗಿ ಕೇಳುವನು. ಅವರು ಹೇಳುವರು; ‘‘ನಾವು ನಿನಗೆ ತಿಳಿಸಿರುವೆವು, ನಮ್ಮಲ್ಲೊಬ್ಬರೂ ಅದರ ಸಮರ್ಥಕರಲ್ಲ’’

[46] ಅವರು ಈ ಹಿಂದೆ ಪ್ರಾರ್ಥಿಸುತ್ತಿದ್ದವರೆಲ್ಲಾ ಅವರಿಂದ ಕಳೆದು ಹೋಗಿರುವರು ಮತ್ತು ತಮಗಿನ್ನು ಬಿಡುಗಡೆಯೇ ಇಲ್ಲ ಎಂಬುದು ಅವರಿಗೆ ಮನವರಿಕೆಯಾಗುವುದು

[47] ಮನುಷ್ಯನು ಹಿತವನ್ನು ಬೇಡಿ ದಣಿಯುವುದಿಲ್ಲ. ಆದರೆ, ತನಗೆ ಅಹಿತವೇನಾದರೂ ತಟ್ಟಿದೊಡನೆ ಅವನು ನಿರಾಶನಾಗಿ, ಹತಾಶನಾಗಿ ಬಿಡುತ್ತಾನೆ

[48] ಸಂಕಟದ ಬಳಿಕ ನಾವು ಅವನಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದರೆ, ಅವನು ಖಂಡಿತ ಹೀಗೆನ್ನುತ್ತಾನೆ; ‘‘ಇದಂತು ನನಗೆ ಸಿಗಲೇ ಬೇಕಾದದ್ದು. ಅಂತಿಮ ಘಳಿಗೆಯೊಂದು ಬರಲಿದೆಯೆಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ನನ್ನನ್ನು ನನ್ನೊಡೆಯನ ಕಡೆಗೆ ಮರಳಿಸಲಾದರೂ ಅವನ ಬಳಿಯೂ ನನಗೆ ಹಿತವೇ ಸಿಗುವುದು‘‘. ನಿಜವಾಗಿ ನಾವು ಧಿಕ್ಕಾರಿಗಳಿಗೆ, ಅವರು ಏನೆಲ್ಲಾ ಮಾಡಿದ್ದರೆಂಬುದನ್ನು ತಿಳಿಸುವೆವು ಮತ್ತು ಅವರಿಗೆ ಬಹಳ ಕಠೋರ ಶಿಕ್ಷೆಯ ರುಚಿಯನ್ನು ಉಣಿಸುವೆವು

[49] ನಾವು ಮನುಷ್ಯನಿಗೆ ನಮ್ಮ ಕೊಡುಗೆಗಳನ್ನು ದಯಪಾಲಿಸಿದಾಗ ಅವನು ಮುಖ ತಿರುಗಿಸಿಕೊಂಡು, ನಿರ್ಲಕ್ಷ ತೋರುತ್ತಾನೆ. ಆದರೆ ಅವನಿಗೆ ಕೆಟ್ಟದೇನಾದರೂ ಸಂಭವಿಸಿದರೆ ಅವನು ಭಾರೀ ಉದ್ದುದ್ದ ಪ್ರಾರ್ಥನೆಗಳನ್ನು ಸಲ್ಲಿಸುವವನಾಗಿ ಬಿಡುತ್ತಾನೆ

[50] ಹೇಳಿರಿ; ನೀವು (ಚಿಂತಿಸಿ) ನೋಡಿದಿರಾ, ಒಂದು ವೇಳೆ ಇದು (ಕುರ್‌ಆನ್) ನಿಜಕ್ಕೂ ಅಲ್ಲಾಹನ ಕಡೆಯಿಂದ ಬಂದಿದ್ದು, ನೀವು ಇದನ್ನು ಧಿಕ್ಕರಿಸಿದರೆ, ಅಂತಹ ಪರಮ ಹಠಮಾರಿಗಿಂತ ಹೆಚ್ಚು ದಾರಿಗೆಟ್ಟವರು ಯಾರಿದ್ದಾರೆ

[51] ಇದು (ಕುರ್‌ಆನ್) ಸತ್ಯವೆಂಬುದು ಅವರಿಗೆ ಸ್ಪಷ್ಟವಾಗುವಂತಹ ಪುರಾವೆಗಳನ್ನು ನಾವು ಅವರಿಗೆ ಹೊರ ಜಗತ್ತಿನಲ್ಲೂ ಸ್ವತಃ ಅವರೊಳಗೂ ತೋರಿಸಿ ಕೊಡುವೆವು. ನಿಮ್ಮ ಒಡೆಯನೇ ಎಲ್ಲದಕ್ಕೂ ಸಾಕ್ಷಿಯಾಗಿರುವನೆಂಬುದು ಸಾಲದೇ

[52] ಅವರೇನು, ತಮ್ಮ ಒಡೆಯನನ್ನು ಭೇಟಿಯಾಗಲಿರುವ ಕುರಿತು ಸಂಶಯದಲ್ಲಿದ್ದಾರೆಯೇ? ತಿಳಿದಿರಲಿ. ಅವನು ಖಂಡಿತ ಎಲ್ಲವನ್ನೂ ಆವರಿಸಿಕೊಂಡಿರುವನು

[53] ಹಾ ಮೀಮ್

[54] ಐನ್ ಸೀನ್ ಕ್ವಾಫ್

ಸಮಾಲೋಚನೆ

Surah 42

[1] ಇದೇ ರೀತಿ ನಿಮ್ಮೊಡೆಯನು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯ ಸಂದೇಶವನ್ನು ಕಳಿಸಿರುವನು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುವನು

[2] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅವನಿಗೇ ಸೇರಿದೆ. ಅವನು ತುಂಬಾ ಉನ್ನತನೂ ಮಹಾನನೂ ಆಗಿರುವನು

[3] ಅವರ ಮೇಲಿಂದ ಆಕಾಶಗಳು ಸಿಡಿದು ಬೀಳುವ ಸಾಧ್ಯತೆ ಇದೆ. (ಅದರೆ) ಮಲಕ್‌ಗಳು ತಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸುತ್ತಿದ್ದಾರೆ. ಮತ್ತು ಭೂಮಿಯಲ್ಲಿರುವವರ ಪರವಾಗಿ ಕ್ಷಮೆಯಾಚಿಸುತ್ತಿದ್ದಾರೆ. ನಿಮಗೆ ತಿಳಿದಿರಲಿ; ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಳುವೂ ಆಗಿರುವನು

[4] (ದೂತರೇ,) ತನ್ನ (ಅಲ್ಲಾಹನ) ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರ ಪಾಲಿಗೆ ಅಲ್ಲಾಹನೇ ಮೇಲ್ವಿಚಾರಕನಾಗಿದ್ದಾನೆ. ಅವರ ವಿಷಯದಲ್ಲಿ ನೀವೇನೂ ಹೊಣೆಗಾರರಲ್ಲ

[5] ಈ ರೀತಿ ನಾವು ನಿಮಗೆ ದಿವ್ಯವಾಣಿಯ ಮೂಲಕ ಅರಬೀ ಭಾಷೆಯ ಕುರ್‌ಆನ್‌ಅನ್ನು ನೀಡಿರುವೆವು. ನೀವು ಕೇಂದ್ರ ನಗರ (ಮಕ್ಕಾ)ದವರನ್ನು ಮತ್ತು ಅದರ ಸುತ್ತಮುತ್ತಲಿನವರನ್ನು ಎಚ್ಚರಿಸಬೇಕೆಂದು ಹಾಗೂ ನೀವು, ನಿಸ್ಸಂದೇಹವಾಗಿ ಬರಲಿರುವ ಸಮ್ಮೇಳನದ ದಿನ (ಪುನರುತ್ಥಾನ)ದ ಕುರಿತು ಮುನ್ನೆಚ್ಚರಿಕೆ ನೀಡಬೇಕೆಂದು. ಕೊನೆಗೆ ಒಂದು ಪಂಗಡವು ಸ್ವರ್ಗದಲ್ಲಿರುವುದು ಮತ್ತು ಇನ್ನೊಂದು ಪಂಗಡವು ನರಕದಲ್ಲಿರುವುದು

[6] ಅಲ್ಲಾಹನು ಬಯಸಿದ್ದರೆ ಅವರನ್ನೆಲ್ಲಾ ಒಂದೇ ಸಮುದಾಯವಾಗಿಸಿ ಬಿಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ಮಾತ್ರ ತನ್ನ ಕೃಪಾಶ್ರಯದೊಳಗೆ ಸೇರಿಸುತ್ತಾನೆ. ಅಕ್ರಮಿಗಳಿಗೆ ಪೋಷಕರಾಗಲಿ ರಕ್ಷಕರಾಗಲಿ ಯಾರೂ ಇಲ್ಲ

[7] ಅವರೇನು, ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿ ಕೊಂಡಿದ್ದಾರೆಯೇ? ನಿಜವಾಗಿ ಅಲ್ಲಾಹನೇ ಎಲ್ಲರ ಪೋಷಕನಾಗಿದ್ದಾನೆ ಮತ್ತು ಅವನೇ ಸತ್ತವರನ್ನು ಜೀವಂತಗೊಳಿಸುತ್ತಾನೆ. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[8] ನೀವು ಪರಸ್ಪರ ಭಿನ್ನತೆ ತಾಳಿರುವ ಪ್ರತಿಯೊಂದು ವಿಷಯದ ಅಂತಿಮ ತೀರ್ಪು ಅಲ್ಲಾಹನ ಬಳಿ ಇದೆ. ಆ ಅಲ್ಲಾಹನೇ ನನ್ನ ಒಡೆಯ. ನಾನು ಅವನಲ್ಲಿ ಭರವಸೆ ಇಟ್ಟಿರುತ್ತೇನೆ ಮತ್ತು ನಾನು ಅವನೆಡೆಗೇ ಮರಳುತ್ತೇನೆ

[9] ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿದವನು ಅವನು. ನಿಮಗಾಗಿ ನಿಮ್ಮೊಳಗಿಂದಲೇ ಜೋಡಿಗಳನ್ನು ರಚಿಸಿಕೊಟ್ಟವನು ಮತ್ತು ಜಾನುವಾರುಗಳ ಜೊತೆಗಳನ್ನು ರಚಿಸಿದವನು ಅವನು. ಇದರಲ್ಲಿ (ಭೂಮಿಯಲ್ಲಿ) ನಿಮ್ಮನ್ನು ಹರಡಿದವನು ಅವನು. ಯಾವ ವಸ್ತುವೂ ಅವನಂತಿಲ್ಲ. ಅವನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ

[10] ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಕೈಯಲ್ಲಿವೆ. ಅವನು ತಾನಿಚ್ಛಿಸಿದವರ ಪಾಲಿಗೆ ತನ್ನ ಕೊಡುಗೆಯನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರ ಪಾಲಿಗೆ ಅದನ್ನು ಸೀಮಿತಗೊಳಿಸಿ ಬಿಡುತ್ತಾನೆ. ಅವನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ

[11] ನೂಹರಿಗೆ ಉಪದೇಶಿಸಲಾಗಿದ್ದ ಹಾಗೂ ನಿಮಗೆ ನಾವು ದಿವ್ಯವಾಣಿಯ ಮೂಲಕ ತಲುಪಿಸಿರುವ ಮತ್ತು ನಾವು ಇಬ್ರಾಹೀಮ್, ಮೂಸಾ ಹಾಗೂ ಈಸಾರಿಗೆ ಬೋಧಿಸಿದ್ದ ಧರ್ಮವನ್ನೇ ಅವನು ನಿಮಗಾಗಿ ವಿಧಿಸಿದ್ದಾನೆ. ಧರ್ಮವನ್ನು ಸ್ಥಾಪಿಸಿರಿ ಮತ್ತು ಈ ವಿಷಯದಲ್ಲಿ ವಿಭಿನ್ನರಾಗಬೇಡಿ. ಬಹುದೇವಾರಾಧಕರಿಗೆ ನೀವು ನೀಡುತ್ತಿರುವ ಕರೆಯು ತೀರಾ ಅಪ್ರಿಯವಾಗಿದೆ. ಅಲ್ಲಾಹನು ತನ್ನೆಡೆಗೆ (ಬರುವುದಕ್ಕೆ) ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಾನೆ ಮತ್ತು ಅವನು (ತನ್ನತ್ತ) ಒಲಿಯುವವರಿಗೆ ತನ್ನೆಡೆಗೆ ಮಾರ್ಗದರ್ಶನ ನೀಡುತ್ತಾನೆ

[12] ತಮ್ಮ ಬಳಿಗೆ ಜ್ಞಾನವು ಬಂದ ಬಳಿಕವಷ್ಟೇ ಅವರು ಕೇವಲ ಪರಸ್ಪರ ಹಗೆತನದಿಂದಾಗಿ, ವಿಭಿನ್ನರಾದರು. ನಿಮ್ಮ ಒಡೆಯನ ಕಡೆಯಿಂದ, ಒಂದು ನಿರ್ದಿಷ್ಟ ಅವಧಿಯ ತನಕ ಕಾಲಾವಕಾಶ ಕೊಡುವ ನಿರ್ಧಾರವಾಗದೆ ಇದ್ದಿದ್ದರೆ, ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ಉತ್ತರಾಧಿಕಾರಿಗಳಾದವರು ಖಂಡಿತ ಆ ಕುರಿತು ಗೊಂದಲಮಯ ಸಂದೇಹದಲ್ಲಿದ್ದಾರೆ

[13] (ದೂತರೇ,) ನೀವು ಇದರೆಡೆಗೆ (ಜನರನ್ನು) ಕರೆಯಿರಿ. ಮತ್ತು ನಿಮಗೆ ಆದೇಶಿಸಲಾಗಿರುವಂತೆ (ಸತ್ಯದಲ್ಲಿ) ಸ್ಥಿರರಾಗಿರಿ. ಮತ್ತು ನೀವು ಹೇಳಿರಿ; ಅಲ್ಲಾಹನು ಇಳಿಸಿರುವ ಎಲ್ಲ ಗ್ರಂಥಗಳಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯ ಪಾಲಿಸಬೇಕೆಂದು ನನಗೆ ಆದೇಶಿಸಲಾಗಿದೆ. ಅಲ್ಲಾಹನು ನಮ್ಮೊಡೆಯನೂ ಹೌದು ನಿಮ್ಮೊಡೆಯನೂ ಹೌದು. ನಮ್ಮ ಕರ್ಮಗಳು ನಮಗೆ ಮತ್ತು ನಿಮ್ಮ ಕರ್ಮಗಳು ನಿಮಗೆ. ನಮ್ಮ ಹಾಗೂ ನಿಮ್ಮ ನಡುವೆ ಜಗಳವೇನಿಲ್ಲ. (ಎಲ್ಲರೂ) ಅವನೆಡೆಗೇ ಮರಳಬೇಕಾಗಿದೆ

[14] ಅಲ್ಲಾಹನ ಕರೆಗೆ ಓಗೊಟ್ಟ ಬಳಿಕ ಅವನ ವಿಷಯದಲ್ಲಿ ಜಗಳಾಡುವವರ ವಾದವು ಅವರ ಒಡೆಯನ ಬಳಿ ತೀರಾ ವ್ಯರ್ಥವಾಗಿದೆ. ಅವರ ಮೇಲೆ ಅಲ್ಲಾಹನ ಕ್ರೋಧವಿದೆ ಹಾಗೂ ಅವರಿಗೆ ಕಠಿಣ ಶಿಕ್ಷೆ ಸಿಗಲಿದೆ

[15] ಅಲ್ಲಾಹನೇ ಈ ಗ್ರಂಥವನ್ನು ಸತ್ಯದೊಂದಿಗೆ ಹಾಗೂ ನ್ಯಾಯದ ತಕ್ಕಡಿಯಾಗಿ ಇಳಿಸಿರುವನು. ನಿಮಗೇನು ಗೊತ್ತು? ಅಂತಿಮ ಕ್ಷಣವು ಹತ್ತಿರವೇ ಇರಬಹುದು

[16] ಅದರಲ್ಲಿ ನಂಬಿಕೆ ಇಲ್ಲದವರು ಅದಕ್ಕಾಗಿ ಆತುರಪಡುತ್ತಾರೆ ಮತ್ತು ಅದನ್ನು ನಂಬುವವರು, ಅದರ ಕುರಿತು ಅಂಜಿಕೊಂಡಿರುತ್ತಾರೆ ಹಾಗೂ ಅದು ಸತ್ಯ ಎಂಬುದನ್ನು ಅವರು ಅರಿತಿರುತ್ತಾರೆ. ತಿಳಿದಿರಲಿ! ಆ ಕ್ಷಣದ ಕುರಿತು ಜಗಳಾಡುವವರು ದಾರಿಗೇಡಿತನದಲ್ಲಿ ತುಂಬಾ ದೂರ ಸಾಗಿ ಬಿಟ್ಟಿದ್ದಾರೆ

[17] ಅಲ್ಲಾಹನು ತನ್ನ ದಾಸರ ಪಾಲಿಗೆ ಉದಾರಿಯಾಗಿದ್ದಾನೆ. ಅವನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅವನು ಬಲಿಷ್ಠನೂ ಪ್ರಬಲನೂ ಆಗಿದ್ದಾನೆ

[18] ಪರಲೋಕದ ಬೆಳೆಯನ್ನು ಬಯಸುವಾತನಿಗಾಗಿ ನಾವು ಅವನ ಬೆಳೆಯನ್ನು ಹೆಚ್ಚಿಸುತ್ತೇವೆ. ಮತ್ತು (ಕೇವಲ) ಇಹಲೋಕದ ಬೆಳೆಯನ್ನು ಬಯಸುವಾತನಿಗೆ ನಾವು ಇಲ್ಲಿಂದಲೇ ಕೊಟ್ಟು ಬಿಡುತ್ತೇವೆ. ಅವನಿಗೆ ಪರಲೋಕದಲ್ಲಿ ಯಾವ ಪಾಲೂ ಸಿಗದು

[19] ಅಲ್ಲಾಹನು ಅನುಮತಿಸಿಲ್ಲದ ಧರ್ಮವನ್ನು ಅವರಿಗೆ ವಿಧಿಸುವ ದೇವರುಗಳು ಅವರಿಗಿದ್ದಾರೆಯೇ? ನಿರ್ದಿಷ್ಟ ನಿರ್ಧಾರವೊಂದು ಇಲ್ಲದೆ ಇದ್ದಿದ್ದರೆ, ಈಗಾಗಲೇ ಅವರ ನಡುವೆ ತೀರ್ಪು ನೀಡಿ ಬಿಡಲಾಗುತ್ತಿತ್ತು. ಅಕ್ರಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ಇದೆ

[20] (ಪುನರುತ್ಥಾನ ದಿನ) ಅಕ್ರಮಿಗಳು ತಮ್ಮ ಕೃತ್ಯಗಳ ಕಾರಣ ಭಯಭೀತರಾಗಿರುವುದನ್ನು ನೀವು ಕಾಣುವಿರಿ. ಆದರೆ ಅದು (ಅವರ ಕೃತ್ಯಗಳ ಫಲಿತಾಂಶವು) ಅವರ ಮುಂದೆ ಬಂದೇ ತೀರುವುದು. ಮತ್ತು ವಿಶ್ವಾಸಿಗಳು ಹಾಗೂ ಸತ್ಕರ್ಮಗಳನ್ನು ಮಾಡಿದವರು ಸ್ವರ್ಗದ ತೋಟಗಳಲ್ಲಿರುವರು. ಅವರಿಗೆ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಸಿಗುವುದು. ಇದುವೇ ಮಹಾ ಅನುಗ್ರಹವಾಗಿದೆ

[21] ಅಲ್ಲಾಹನು ತನ್ನ ವಿಶ್ವಾಸಿ ಹಾಗೂ ಸತ್ಕರ್ಮಿ ದಾಸರಿಗೆ ನೀಡಿರುವ ಆಶ್ವಾಸನೆ ಇದು. ಹೇಳಿರಿ; ಬಂಧುತ್ವದ ಪ್ರೀತಿಯ ಹೊರತು ನಿಮ್ಮಿಂದ ಬೇರಾವ ಪ್ರತಿಫಲವನ್ನೂ ನಾನು ಬಯಸುವುದಿಲ್ಲ. ಒಳಿತನ್ನು ಸಂಪಾದಿಸಿದವನಿಗೆ ನಾವು ಇನ್ನಷ್ಟು ಒಳಿತನ್ನು ಹೆಚ್ಚಿಸಿ ಕೊಡುವೆವು. ಅಲ್ಲಾಹನು ಖಂಡಿತ ಕ್ಷಮಿಸುವವನು ಹಾಗೂ ಪುರಸ್ಕರಿಸುವವನಾಗಿದ್ದಾನೆ

[22] ಈತನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹನು ಬಯಸಿದ್ದರೆ ನಿಮ್ಮ ಮನಸ್ಸಿಗೆ ಮುದ್ರೆಯೊತ್ತಿ ಬಿಡುತ್ತಿದ್ದನು. ಅಲ್ಲಾಹನು ಮಿಥ್ಯವನ್ನು ಅಳಿಸಿ ಬಿಡುತ್ತಾನೆ ಮತ್ತು ತನ್ನ ನುಡಿಗಳ ಮೂಲಕ ಸತ್ಯವನ್ನು ಸಾಬೀತು ಪಡಿಸುತ್ತಾನೆ. ಅವನು ಮನಸ್ಸುಗಳ ಒಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ

[23] ಮತ್ತು ಅವನೇ (ಅಲ್ಲಾಹನೇ) ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಹಾಗೂ ಪಾಪಗಳನ್ನು ಕ್ಷಮಿಸುವವನು ಮತ್ತು ನೀವು ಮಾಡುವ ಎಲ್ಲವನ್ನೂ ಬಲ್ಲವನಾಗಿದ್ದಾನೆ

[24] ವಿಶ್ವಾಸಿಗಳಾಗಿರುವವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಪ್ರಾರ್ಥನೆಗಳನ್ನು ಅವನು ಸ್ವೀಕರಿಸುತ್ತಾನೆ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಮತ್ತಷ್ಟನ್ನು ದಯಪಾಲಿಸುತ್ತಾನೆ. ಧಿಕ್ಕಾರಿಗಳಿಗೆ ಮಾತ್ರ ತೀವ್ರ ಶಿಕ್ಷೆ ಸಿಗಲಿದೆ

[25] ಒಂದು ವೇಳೆ ಅಲ್ಲಾಹನು ತನ್ನ ದಾಸರಿಗೆಲ್ಲಾ ಧಾರಾಳ ಸಂಪನ್ನತೆಯನ್ನು ನೀಡಿ ಬಿಟ್ಟಿದ್ದರೆ, ಅವರು ಭೂಮಿಯಲ್ಲಿ ಬಂಡಾಯವೇಳುತ್ತಿದ್ದರು. ಆದ್ದರಿಂದ ಅವನು, ತಾನಿಚ್ಛಿಸುವಷ್ಟನ್ನು ಮಾತ್ರ ಮಿತವಾಗಿ ಇಳಿಸಿಕೊಡುತ್ತಾನೆ. ಅವನು ಖಂಡಿತ ತನ್ನ ದಾಸರ ಕುರಿತು ಅರಿವು ಉಳ್ಳವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ

[26] ಮತ್ತು ಅವರು ನಿರಾಶರಾಗಿ ಬಿಟ್ಟ ಬಳಿಕ ಮಳೆ ಸುರಿಸುವವನು ಹಾಗೂ ತನ್ನ ಅನುಗ್ರಹವನ್ನು ಎಲ್ಲೆಡೆಗೆ ತಲುಪಿಸುವವನು ಅವನೇ. ಅವನು ಪೋಷಕನೂ, ಪ್ರಶಂಸಾರ್ಹನೂ ಆಗಿದ್ದಾನೆ

[27] ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ಅವುಗಳಲ್ಲಿ ಅವನು ಹರಡಿರುವ ಜೀವಿಗಳೆಲ್ಲಾ ಅವನ ಪುರಾವೆಗಳ ಸಾಲಿಗೆ ಸೇರಿವೆ. ಮತ್ತು ತಾನಿಚ್ಛಿಸಿದಾಗ ಅವರನ್ನೆಲ್ಲಾ ಒಂದೆಡೆ ಸೇರಿಸಲು ಅವನು ಸಮರ್ಥನಾಗಿದ್ದಾನೆ

[28] ನಿಮಗೆ ಬಂದೆರಗುವ ಪ್ರತಿಯೊಂದು ವಿಪತ್ತು ಸ್ವತಃ ನಿಮ್ಮದೇ ಕೈಗಳ ಗಳಿಕೆಯಾಗಿರುತ್ತದೆ. ನಿಜವಾಗಿ ಹೆಚ್ಚಿನ ಪಾಪಗಳನ್ನು ಅವನು ಕ್ಷಮಿಸಿ ಬಿಡುತ್ತಾನೆ

[29] ಭೂಮಿಯಲ್ಲಿ (ಅವನನ್ನು) ಮಣಿಸಲು ನಿಮ್ಮಿಂದ ಸಾಧ್ಯವಿಲ್ಲ. ಅವನ ಹೊರತು ನಿಮಗೆ ಬೇರೆ ಪೋಷಕರಾಗಲಿ, ಸಹಾಯಕರಾಗಲಿ ಇಲ್ಲ

[30] ಸಮುದ್ರದಲ್ಲಿ ಚಲಿಸುವ ಬೆಟ್ಟದಂತಹ ಹಡಗುಗಳು ಅವನ ಪುರಾವೆಗಳ ಸಾಲಿಗೆ ಸೇರಿವೆ

[31] ಅವನು ಬಯಸಿದರೆ ಗಾಳಿಯನ್ನು ತಡೆದು ಅವುಗಳನ್ನು (ಹಡಗುಗಳನ್ನು) ಅದರ (ಸಮುದ್ರದ) ತಟದಲ್ಲೇ ನಿಲ್ಲಿಸಿಬಿಡಬಹುದು. ಸಹನಶೀಲರಾಗಿರುವ ಹಾಗೂ ಕೃತಜ್ಞರಾಗಿರುವ ಪ್ರತಿಯೊಬ್ಬರಿಗೆ ಇದರಲ್ಲಿ ಖಂಡಿತ ಪಾಠವಿದೆ

[32] ಅಥವಾ ಅವನು (ಬಯಸಿದರೆ) ಅವರ ಕರ್ಮಗಳ ಕಾರಣ ಅವರನ್ನು ನಾಶಮಾಡಿ ಬಿಡಬಹುದು. ಆದರೆ ಅವನು ಹೆಚ್ಚಿನವರನ್ನು ಕ್ಷಮಿಸಿ ಬಿಡುತ್ತಾನೆ

[33] ನಮ್ಮ ವಚನಗಳ ವಿಷಯದಲ್ಲಿ ಜಗಳಾಡುವವರು ತಿಳಿದಿರಲಿ, ಅವರಿಗೆ ಯಾವ ಆಶ್ರಯವೂ ಇಲ್ಲ

[34] (ಇಲ್ಲಿ) ನಿಮಗೆ ನೀಡಲಾಗುತ್ತಿರುವ ಪ್ರತಿಯೊಂದು ವಸ್ತುವೂ ಕೇವಲ ಇಹ ಜೀವನದ (ತಾತ್ಕಾಲಿಕ) ಸೊತ್ತಾಗಿದೆ. ನಿಜವಾಗಿ ಸತ್ಯವನ್ನು ನಂಬಿರುವವರ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಪಾಲಿಗೆ, ಅಲ್ಲಾಹನ ಬಳಿ ಏನಿದೆಯೋ ಅದುವೇ ಶ್ರೇಷ್ಠ ಹಾಗೂ ಶಾಶ್ವತವಾಗಿದೆ

[35] ಅವರು ದೊಡ್ಡ ಪಾಪ ಕೃತ್ಯಗಳಿಂದ ಹಾಗೂ ಅಶ್ಲೀಲ ಕೃತ್ಯಗಳಿಂದ ದೂರ ಉಳಿಯುತ್ತಾರೆ ಮತ್ತು ತಮಗೆ ಕೋಪ ಬಂದಾಗ ಕ್ಷಮಿಸಿ ಬಿಡುತ್ತಾರೆ

[36] ಮತ್ತು ಅವರು, ತಮ್ಮ ಒಡೆಯನ ಕರೆಗೆ ಓಗೊಡುವವರು ಹಾಗೂ ನಮಾಝನ್ನು ಪಾಲಿಸುವವರಾಗಿರುತ್ತಾರೆ. ಅವರ ವ್ಯವಹಾರಗಳೆಲ್ಲಾ ಪರಸ್ಪರ ಸಮಾಲೋಚನೆಯಿಂದ ನಡೆಯುತ್ತವೆ ಮತ್ತು ನಾವು ಅವರಿಗೆ ನೀಡಿರುವುದನ್ನು ಅವರು ಖರ್ಚು ಮಾಡುತ್ತಾರೆ

[37] ಅವರ ಮೇಲೇನಾದರೂ ಅತಿರೇಕವಾದಾಗ ಅವರು ಪ್ರತೀಕಾರವೆಸಗುತ್ತಾರೆ

[38] ಕೆಡುಕಿಗೆ, ಅಷ್ಟು ಮಾತ್ರ ಕೆಡುಕು ಪ್ರತಿಕ್ರಮವಾಗಿರುತ್ತದೆ. ಇನ್ನು, ಕ್ಷಮಿಸಿಬಿಟ್ಟು (ಸಂಬಂಧ) ಸುಧಾರಣೆ ಮಾಡಿಕೊಂಡವನಿಗೆ ಪ್ರತಿಫಲ ನೀಡುವ ಹೊಣೆ ಅಲ್ಲಾಹನ ಮೇಲಿದೆ. ಅವನು ಅಕ್ರಮಿಗಳನ್ನು ಖಂಡಿತ ಪ್ರೀತಿಸುವುದಿಲ್ಲ

[39] ತನ್ನ ಮೇಲೆ ಅಕ್ರಮವಾದ ಬಳಿಕ ಪ್ರತೀಕಾರವೆಸಗಿದವರ ಮೇಲೆ ಯಾವುದೇ ಆರೋಪವಿಲ್ಲ

[40] ಆದರೆ ಜನರ ಮೇಲೆ ಅಕ್ರಮವೆಸಗುತ್ತಾ, ಅನ್ಯಾಯವಾಗಿ ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಿರುವವರ ವಿರುದ್ಧ ಪ್ರತಿಕ್ರಮಕ್ಕೆ ಅವಕಾಶವಿದೆ. ಅವರಿಗೆ ಭಾರೀ ಕಠಿಣ ಶಿಕ್ಷೆ ಕಾದಿದೆ

[41] ಸಹನಶೀಲನಾಗಿದ್ದು, ಕ್ಷಮಿಸಿ ಬಿಡುವವನು (ತಿಳಿದಿರಲಿ); ಅದು ಖಂಡಿತ ಮಹಾ ಸಾಹಸವಾಗಿದೆ

[42] ಅಲ್ಲಾಹನೇ ಯಾರನ್ನಾದರೂ ದಾರಿಗೆಡಿಸಿ ಬಿಟ್ಟರೆ, ಆ ಬಳಿಕ ಅವನಿಗೆ ಯಾರೂ ಪೋಷಕರಿಲ್ಲ. ನೀವು ಕಾಣುವಿರಿ; ಅಕ್ರಮಿಗಳು ಶಿಕ್ಷೆಯನ್ನು ಕಂಡಾಗ, (ಇಲ್ಲಿಂದ) ಮರಳಿಹೋಗಲು ದಾರಿ ಏನಾದರೂ ಇದೆಯೇ ಎಂದು ಕೇಳುವರು

[43] ಮತ್ತು ನೀವು ಕಾಣುವಿರಿ; ಅವರನ್ನು ಅದರ (ನರಕದ) ಮುಂದೆ ಹಾಜರು ಪಡಿಸಲಾದಾಗ ಅವರು ಅಪಮಾನದಿಂದ, ದೀನರಾಗಿ ಅರ್ಧ ತೆರೆದ ಕಣ್ಣುಗಳಿಂದ ನೋಡುತ್ತಿರುವರು. ಮತ್ತು ವಿಶ್ವಾಸಿಗಳು ಹೇಳುವರು; ಪುನರುತ್ಥಾನ ದಿನ ತಮ್ಮನ್ನು ಹಾಗೂ ತಮ್ಮ ಬಂಧುಗಳನ್ನು ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸಿದವರಾಗಿದ್ದಾರೆ. ನಿಮಗೆ ತಿಳಿದಿರಲಿ. ಅಕ್ರಮಿಗಳು ಖಂಡಿತ ಶಾಶ್ವತವಾದ ಶಿಕ್ಷೆಗೊಳಗಾಗುವರು

[44] ಅಲ್ಲಾಹನ ಹೊರತು, ಅವರಿಗೆ ನೆರವಾಗಲು ಯಾವ ಪೋಷಕರೂ ಇರಲಾರರು. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವನಿಗೆ ಸರಿದಾರಿ ಸಿಗದು

[45] ಯಾರಿಂದಲೂ ರದ್ದುಗೊಳಿಸಲಾಗದ ದಿನವೊಂದು ಅಲ್ಲಾಹನ ಕಡೆಯಿಂದ ಬರುವ ಮುನ್ನವೇ ನೀವು ನಿಮ್ಮ ಒಡೆಯನ ಕರೆಗೆ ಓಗೊಡಿರಿ. ಆ ದಿನ ನಿಮಗೆ ಯಾವ ಆಶ್ರಯವೂ ಸಿಗದು ಮತ್ತು ನಿಮಗೆ ನಿರಾಕರಣೆಯ ಅವಕಾಶವೂ ಇರದು

[46] ಅವರು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ), ನಾವೇನೂ ನಿಮ್ಮನ್ನು ಅವರ ರಕ್ಷಕರಾಗಿ ನೇಮಿಸಿಲ್ಲ. ನಿಮ್ಮ ಮೇಲಿರುವುದು (ಸತ್ಯವನ್ನು) ತಲುಪಿಸಿ ಬಿಡುವ ಹೊಣೆ ಮಾತ್ರ. ನಾವು ಮನುಷ್ಯನಿಗೆ ನಮ್ಮ ಕಡೆಯಿಂದ ಏನಾದರೂ ಅನುಗ್ರಹವನ್ನು ದಯಪಾಲಿಸಿದರೆ ಅವನು ಆ ಕುರಿತು ಸಂಭ್ರಮಿಸ ತೊಡಗುತ್ತಾನೆ. ಆದರೆ, ಅವರದೇ ಕೈಗಳ ಗಳಿಕೆಯ ಕಾರಣ ಅವರಿಗೇನಾದರೂ ಅಹಿತ ಸಂಭವಿಸಿದರೆ – ಮಾನವನು ಖಂಡಿತ ಕೃತಘ್ನನಾಗಿ ಬಿಡುತ್ತಾನೆ

[47] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ತಾನಿಚ್ಛಿಸಿದವರಿಗೆ ಪುತ್ರಿಯರನ್ನು ಮತ್ತು ತಾನಿಚ್ಛಿಸಿದವರಿಗೆ ಪುತ್ರರನ್ನು ದಯ ಪಾಲಿಸುತ್ತಾನೆ

[48] ಅಥವಾ ಅವನು ಜೊತೆ ಜೊತೆಯಾಗಿ ಪುತ್ರರನ್ನೂ ಪುತ್ರಿಯರನ್ನೂ ನೀಡುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಸಂತಾನರಹಿತರಾಗಿಸುತ್ತಾನೆ. ಅವನು ಖಂಡಿತ ಬಲ್ಲವನು ಹಾಗೂ ಸರ್ವ ಶಕ್ತನಾಗಿದ್ದಾನೆ

[49] ಯಾವುದೇ ಮಾನವನೊಂದಿಗೆ ಅಲ್ಲಾಹನು ಮಾತನಾಡುವುದಿಲ್ಲ – ದಿವ್ಯವಾಣಿಯ ಮೂಲಕ ಅಥವಾ ತೆರೆಮರೆಯಿಂದ (ಮಾತನಾಡುವ) ಹೊರತು, ಅಥವಾ ಅವನು ಒಬ್ಬ (ಮಲಕ್) ದೂತನನ್ನು ಕಳಿಸುತ್ತಾನೆ ಮತ್ತು ಅವನು ಆತನ ಆದೇಶ ಪ್ರಕಾರ, ಆತನು ಬಯಸುವ ದಿವ್ಯವಾಣಿಯನ್ನು ತಲುಪಿಸುತ್ತಾನೆ. ಅವನು ಖಂಡಿತ ಉನ್ನತನೂ ಯುಕ್ತಿವಂತನೂ ಆಗಿದ್ದಾನೆ

[50] (ದೂತರೇ,) ಈ ರೀತಿ ನಾವು ನಮ್ಮ ಅಪ್ಪಣೆಯಂತೆ ನಿಮ್ಮ ಕಡೆಗೆ ದಿವ್ಯ ಸಂದೇಶವನ್ನು ಕಳಿಸಿರುವೆವು. ಈ ಹಿಂದೆ ನೀವು ಗ್ರಂಥವೆಂದರೇನು ಅಥವಾ ನಂಬಿಕೆ ಎಂದರೇನು ಎಂಬುದನ್ನು ಬಲ್ಲವರಾಗಿರಲಿಲ್ಲ. ಹೀಗಿರುತ್ತಾ ನಾವು ಇದನ್ನು (ಈ ಗ್ರಂಥವನ್ನು) ಬೆಳಕಾಗಿಸಿ ಕಳುಹಿಸಿದೆವು. ಈ ಮೂಲಕ ನಾವು ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ಸರಿದಾರಿಯನ್ನು ತೋರಿಸುವೆವು. ನೀವು ಖಂಡಿತವಾಗಿಯೂ (ಜನರನ್ನು) ಸುಸ್ಥಿರವಾದ ಸನ್ಮಾರ್ಗದೆಡೆಗೇ ಮುನ್ನಡೆಸುವಿರಿ

[51] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಯಾರಿಗೆ ಸೇರಿವೆಯೋ ಆ ಅಲ್ಲಾಹನ ದಾರಿಯೆಡೆಗೆ. ತಿಳಿದಿರಲಿ! ಎಲ್ಲ ವಿಷಯಗಳು ಅಂತಿಮವಾಗಿ ಅಲ್ಲಾಹನೆಡೆಗೇ ತಲುಪುತ್ತವೆ

[52] ಹಾ ಮೀಮ್

[53] ಸುಸ್ಪಷ್ಟವಾಗಿರುವ ಗ್ರಂಥದಾಣೆ

ಚಿನ್ನದ ಆಭರಣಗಳು

Surah 43

[1] ನಾವಿದನ್ನು ಅರಬೀ ಭಾಷೆಯ ಕುರ್‌ಆನ್ ಆಗಿ ಕಳಿಸಿರುವೆವು, ನೀವು ಅರಿಯಬೇಕೆಂದು

[2] ಅದು ಖಂಡಿತ ನಮ್ಮ ಬಳಿ ಮೂಲ ಗ್ರಂಥದಲ್ಲಿದೆ. ಅದು ಉನ್ನತ ಹಾಗೂ ಯುಕ್ತಿ ಪೂರ್ಣವಾಗಿದೆ

[3] ನೀವು ಅತಿಕ್ರಮಿಗಳೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ಕಿತ್ತುಕೊಳ್ಳಬೇಕೇ

[4] ನಾವು ಹಿಂದಿನವರಲ್ಲಿ ಅದೆಷ್ಟೋ ಪ್ರವಾದಿಗಳನ್ನು ಕಳಿಸಿದ್ದೆವು

[5] ಆದರೆ ಅವರು ತಮ್ಮ ಬಳಿಗೆ ಬಂದ ಯಾವ ಪ್ರವಾದಿಯನ್ನೂ ಗೇಲಿ ಮಾಡದೆ ಬಿಟ್ಟಿರಲಿಲ್ಲ

[6] ನಾವು ಅವರಿಗಿಂತ (ಮಕ್ಕಃದವರಿಗಿಂತ) ಬಲಿಷ್ಠರಾಗಿದ್ದವರನ್ನು ನಾಶ ಮಾಡಿರುವೆವು. (ಹೀಗೆ), ಗತಿಸಿಹೋದವು, ಗತ ಕಾಲದವರ ಸಮಾಚಾರಗಳು

[7] ನೀವು ಅವರೊಡನೆ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರೆಂದು ಕೇಳಿದರೆ, ಪ್ರಬಲನಾಗಿರುವ, ಎಲ್ಲವನ್ನೂ ಬಲ್ಲವನು ಅವುಗಳನ್ನು ಸೃಷ್ಟಿಸಿರುವನೆಂದು ಅವರು ಖಂಡಿತ ಹೇಳುವರು

[8] ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು ಮತ್ತು ನಿಮಗೆ ದಿಕ್ಕು ಸಿಗಲೆಂದು ಅದರಲ್ಲಿ ನಿಮಗಾಗಿ ದಾರಿಗಳನ್ನು ನಿರ್ಮಿಸಿದವನು

[9] ಅವನೇ ನಿರ್ದಿಷ್ಟ ಪ್ರಮಾಣದಲ್ಲಿ ಆಕಾಶದಿಂದ ನೀರನ್ನು ಸುರಿಸಿದವನು. ಆ ಮೂಲಕ ನಾವು ಮೃತವಾಗಿದ್ದ ನಾಡನ್ನು ಜೀವಂತಗೊಳಿಸಿದೆವು. ಇದೇ ರೀತಿ ನಿಮ್ಮನ್ನು (ಮೃತ ಸ್ಥಿತಿಯಿಂದ) ಹೊರತೆಗೆಯಲಾಗುವುದು

[10] ಅವನೇ ಎಲ್ಲ ವಿಧಗಳನ್ನು ಸೃಷ್ಟಿಸಿದವನು ಹಾಗೂ ನಿಮಗಾಗಿ, ನೀವು ಪ್ರಯಾಣಕ್ಕೆ ಬಳಸುವ ನಾವೆಗಳನ್ನು ಹಾಗೂ ಜಾನುವಾರುಗಳನ್ನು ಒದಗಿಸಿದವನು –

[11] – ಮತ್ತು ನೀವು ಅವುಗಳ ಮೇಲೆ ಸವಾರರಾಗಬೇಕೆಂದು. ನೀವು ಅವುಗಳ ಮೇಲೆ ಸವಾರರಾಗುವಾಗ ಅಲ್ಲಾಹನ ಅನುಗ್ರಹವನ್ನು ಸ್ಮರಿಸುತ್ತಾ ಹೇಳಿರಿ; ‘‘ಇದನ್ನು ನಮಗೆ ಅಧೀನಗೊಳಿಸಿಕೊಟ್ಟವನು ಪಾವನನು. ಅನ್ಯಥಾ ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿರಲಿಲ್ಲ’’

[12] ‘‘ಮತ್ತು ನಾವು ಖಂಡಿತ ನಮ್ಮ ಒಡೆಯನ ಕಡೆಗೇ ಮರಳಲಿದ್ದೇವೆ’’

[13] ಅವರು ಅವನ ದಾಸರಲ್ಲಿ ಕೆಲವರನ್ನು ಅವನ ಭಾಗಗಳೆಂದು ಪರಿಗಣಿಸಿದ್ದಾರೆ. ಖಂಡಿತವಾಗಿಯೂ ಮಾನವನು ಸ್ಪಷ್ಟ ಕೃತಘ್ನನಾಗಿದ್ದಾನೆ

[14] ಅವನೇನು, ತನ್ನ ಸೃಷ್ಟಿಗಳ ಪೈಕಿ ಪುತ್ರಿಯರನ್ನು ತನಗಾಗಿ ಆಯ್ದುಕೊಂಡು ಪುತ್ರರನ್ನು ನಿಮಗೆ ಮೀಸಲಾಗಿಟ್ಟಿರುವನೇ

[15] ಅವರು ಆ ಪರಮ ದಯಾಳುವಿಗೆ ಏನನ್ನು ಆರೋಪಿಸುತ್ತಾರೋ (ಪುತ್ರಿಯರು) ಅದನ್ನೇ ಅವರಲ್ಲಿ ಯಾರಿಗಾದರೂ ಶುಭವಾರ್ತೆಯಾಗಿ (ನಿಮಗೆ ಪುತ್ರಿ ಹುಟ್ಟಿದ್ದಾಳೆಂದಾಗ) ತಿಳಿಸಿದಾಗ ಅವನ ಮುಖವು ಕಪ್ಪಾಗಿ ಬಿಡುತ್ತದೆ ಮತ್ತು ಅವನು ತುಂಬಾ ದುಃಖಿತನಾಗುತ್ತಾನೆ

[16] (ಅವರ ಪ್ರಕಾರ ಪುತ್ರಿಯರೆಂದರೆ) ಆಭರಣಗಳಲ್ಲಿ ಬೆಳೆಯುವವರಾಗಿರುತ್ತಾರೆ ಹಾಗೂ ಜಗಳವಾದಾಗ ಸ್ಪಷ್ಟವಾಗಿ ಮಾತನಾಡಲು ಅಸಮರ್ಥರಾಗಿರುತ್ತಾರೆ

[17] ಅವರು ಆ ಪರಮ ದಯಾಳುವಿನ ದಾಸರಾದ ಮಲಕ್‌ಗಳನ್ನು ಸ್ತ್ರೀಯರೆಂದು ಪರಿಗಣಿಸುತ್ತಾರೆ. ಅವರನ್ನು (ಮಲಕ್‌ಗಳನ್ನು) ಸೃಷ್ಟಿಸುವಾಗ ಇವರೇನು ನೋಡಿದ್ದರೇ? ಅವರ ಹೇಳಿಕೆಯನ್ನು ಬರೆದಿಡಲಾಗುವುದು ಮತ್ತು ಅವರನ್ನು ಪ್ರಶ್ನಿಸಲಾಗುವುದು

[18] ಆ ಪರಮ ದಯಾಳುವು ಬಯಸಿದ್ದರೆ, ನಾವು (ಅನ್ಯರನ್ನು) ಪೂಜಿಸುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಅದರ ಅರಿವಿಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ

[19] ಅವರೇನು, ಈ ಹಿಂದೆ ತಮ್ಮ ಬಳಿಗೆ ಬಂದ ಯಾವುದಾದರೂ ಗ್ರಂಥವನ್ನು ಅವಲಂಬಿಸಿಕೊಂಡಿರುವರೇ

[20] ಅವರು ಹೇಳುತ್ತಾರೆ; ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ

[21] ಇದೇ ರೀತಿ ನಾವು ನಿಮಗಿಂತ ಹಿಂದೆ ಯಾವುದೇ ನಾಡಿಗೆ ಎಚ್ಚರಿಸುವವರನ್ನು ಕಳಿಸಿದ್ದಾಗಲೆಲ್ಲಾ ಅಲ್ಲಿನ ಸ್ಥಿತಿವಂತರು, ‘‘ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ’’ ಎಂದು ಹೇಳಿದ್ದರು

[22] ‘‘ನಿಮ್ಮ ಪೂರ್ವಜರನ್ನು ನೀವು ಯಾವ ಹಾದಿಯಲ್ಲಿ ಕಂಡಿದ್ದಿರೋ ಅದಕ್ಕಿಂತ ಉತ್ತಮ ಹಾದಿಯನ್ನು ನಾನು ನಿಮ್ಮ ಬಳಿಗೆ ತಂದಿದ್ದರೆ?’’ ಎಂದು ಅವರು (ಪ್ರವಾದಿ) ಕೇಳಿದಾಗ, ಅವರು ‘‘ನಿಮ್ಮಿಂದಿಗೆ ಕಳಿಸಲಾಗಿರುವುದನ್ನು ನಾವು ಧಿಕ್ಕರಿಸುತ್ತೇವೆ’’ ಎಂದರು

[23] ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು. ಇದೀಗ (ಸತ್ಯವನ್ನು) ತಿರಸ್ಕರಿಸಿದವರ ಗತಿ ಏನಾಯಿತೆಂದು ನೋಡಿರಿ

[24] ಇಬ್ರಾಹೀಮರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ ಹೇಳಿದರು;‘‘ನೀವು ಪೂಜಿಸುವ ಎಲ್ಲವುಗಳಿಂದ ನಾನು ಸಂಪೂರ್ಣ ಮುಕ್ತನಾಗಿದ್ದೇನೆ -’’

[25] ‘‘ – ನನ್ನನ್ನು ಸೃಷ್ಟಿಸಿದವನ ಹೊರತು. ಅವನು ಖಂಡಿತ ನನಗೆ ಸರಿದಾರಿಯನ್ನು ತೋರಿಸುವನು’’

[26] ಅವರು ಇದನ್ನು ( ಈ ಧೋರಣೆಯನ್ನು) ಶಾಶ್ವತ ವಚನದ ರೂಪದಲ್ಲಿ ತಮ್ಮ ಮುಂದಿನವರಲ್ಲಿ ಉಳಿಸಿದರು – ಅವರು (ಸತ್ಯದೆಡೆಗೆ) ಮರಳಬೇಕೆಂದು

[27] ನಾನು ಅವರಿಗೂ ಅವರ ಪೂರ್ವಜರಿಗೂ ಸಾಕಷ್ಟು ಸಂಪತ್ತನ್ನು ನೀಡಿದೆನು. ಕೊನೆಗೆ ಅವರ ಬಳಿಗೆ ಸತ್ಯವು ಬಂದಿತು ಹಾಗೂ ಸುಸ್ಪಷ್ಟ ದೂತರೂ ಬಂದರು

[28] ಆದರೆ ಸತ್ಯವು ಅವರ ಬಳಿಗೆ ಬಂದಾಗ ಅವರು, ‘‘ಇದು ಕೇವಲ ಮಾಟಗಾರಿಕೆಯಾಗಿದೆ ಮತ್ತು ನಾವು ಇದನ್ನು ಧಿಕ್ಕರಿಸುತ್ತೇವೆ’’ ಎಂದು ಬಿಟ್ಟರು

[29] ಮತ್ತು ಅವರು, ‘‘ಈ ಕುರ್‌ಆನನ್ನು ಎರಡು ನಗರ (ಮಕ್ಕಃ ಮತ್ತು ತಾಯಿಫ್)ಗಳ ಯಾರಾದರೊಬ್ಬ ದೊಡ್ಡ ವ್ಯಕ್ತಿಗೆ ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ

[30] ನಿಮ್ಮ ಒಡೆಯನ ಅನುಗ್ರಹಗಳನ್ನು ವಿತರಿಸುವವರು ಅವರೇನು? ನಿಜವಾಗಿ ಇಹಲೋಕದ ಜೀವನದಲ್ಲಿ ಅವರ ಆದಾಯವನ್ನು ಅವರ ನಡುವೆ ನಾವೇ ವಿತರಿಸುತ್ತೇವೆ ಮತ್ತು ನಾವೇ ಅವರಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಹೆಚ್ಚಿನ ಸ್ಥಾನಮಾನವನ್ನು ನೀಡಿರುತ್ತೇವೆ – ಅವರು ಪರಸ್ಪರರಿಂದ ಸೇವೆಯನ್ನು ಪಡೆಯಲೆಂದು. ನಿಜವಾಗಿ ನಿಮ್ಮ ಒಡೆಯನ ಕೃಪೆಯು ಅವರು ಸಂಗ್ರಹಿಸುವ ಎಲ್ಲವುಗಳಿಗಿಂತ ಉತ್ತಮವಾಗಿದೆ

[31] ಎಲ್ಲ ಮಾನವರೂ ಒಂದೇ ಪಂಥದವರಾಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ ನಾವು, ಪರಮ ದಯಾಳುವನ್ನು ಧಿಕ್ಕರಿಸುವವರ ಮನೆಗಳ ಚಪ್ಪರಗಳನ್ನೂ ಅವರು (ಮಾಳಿಗೆಗಳಿಗೆ) ಏರುವ ಏಣಿಗಳನ್ನೂ ಬೆಳ್ಳಿಯದ್ದಾಗಿಸಿ ಬಿಡುತ್ತಿದ್ದೆವು

[32] (ಮಾತ್ರವಲ್ಲ), ಅವರ ಮನೆಗಳ ಬಾಗಿಲುಗಳನ್ನೂ ಅವರು ಒರಗಿ ಕೂರುವ ಪೀಠಗಳನ್ನೂ –

[33] – ಚಿನ್ನದ್ದಾಗಿಸಿ ಬಿಡುತ್ತಿದ್ದೆವು. ಇವೆಲ್ಲಾ ಕೇವಲ ಇಹಲೋಕ ಜೀವನದ ಸೊತ್ತುಗಳು. ಪರಲೋಕವು ನಿಮ್ಮ ಒಡೆಯನ ಬಳಿ ಧರ್ಮ ಮೀಸಲಾಗಿದೆ

[34] ಪರಮ ದಯಾಳುವನ್ನು ನೆನಪಿಸುವ ವಿಷಯದಲ್ಲಿ ಆಲಸ್ಯ ತೋರುವಾತನ ಮೇಲೆ ನಾವು ಶೈತಾನನನ್ನು ಹೇರಿ ಬಿಡುತ್ತೇವೆ. ಆ ಬಳಿಕ ಅವನೇ ಆತನ ಸಂಗಾತಿಯಾಗಿರುತ್ತಾನೆ

[35] ಮತ್ತು ಅವರು (ಶೈತಾನರು) ಅವರನ್ನು ಸರಿದಾರಿಯಿಂದ ತಡೆದು ದೂರವಿಡುತ್ತಾರೆ. ಆದರೆ, ಅವರು ತಾವು ಸನ್ಮಾರ್ಗದಲ್ಲಿದ್ದೇವೆ ಎಂದು ಭಾವಿಸಿ ಕೊಂಡಿರುತ್ತಾರೆ

[36] ಕೊನೆಗೆ ಅವರು ನಮ್ಮ ಬಳಿಗೆ ಬಂದಾಗ ಅವನು, ‘‘ಅಯ್ಯೋ, ನನ್ನ ಹಾಗೂ ನಿನ್ನ (ಶೈತಾನನ) ನಡುವೆ ಎರಡು ಪೂರ್ವಗಳಷ್ಟು ಅಂತರ ಇದ್ದಿದ್ದರೆ ಚೆನ್ನಾಗಿತ್ತು’’ ಎನ್ನುವನು. ಅವನು ಬಹಳ ಕೆಟ್ಟ ಸಂಗಾತಿ

[37] ನೀವು ಅಕ್ರಮಿಗಳಾಗಿದ್ದರೆ ಇದಾವುದೂ ನಿಮಗೆ ಉಪಯುಕ್ತವಾಗದು. ಶಿಕ್ಷೆಯಲ್ಲಿ ನೀವು ಸಮಾನ ಪಾಲುದಾರರಾಗಿರುವಿರಿ

[38] ನೀವೇನು ಕಿವುಡರಿಗೆ ಕೇಳಿಸಬಲ್ಲಿರಾ? ಅಥವಾ ಕುರುಡರಿಗೆ ಮತ್ತು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವವರಿಗೆ ಸರಿದಾರಿಯನ್ನು ತೋರಿಸಲು ನಿಮ್ಮಿಂದ ಸಾಧ್ಯವೇ

[39] (ದೂತರೇ,) ನಾನು ನಿಮ್ಮನ್ನು ಕರೆಸಿಕೊಂಡರೂ (ಸಾಯಿಸಿದರೂ) ಅವರ ವಿರುದ್ಧ ಮಾತ್ರ ನಾವು ಖಂಡಿತ ಪ್ರತೀಕಾರ ತೀರಿಸುವೆವು

[40] ಅಥವಾ ನಾವು ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ (ನಿಮ್ಮ ಬದುಕಿನ ಅವಧಿಯಲ್ಲೇ) ತೋರಿಸುವೆವು. ಅವರ ಮೇಲೆ ನಮಗೆ ಸಂಪೂರ್ಣ ಹತೋಟಿ ಇದೆ

[41] ನಿಮಗೆ ದಿವ್ಯವಾಣಿಯ ಮೂಲಕ ನೀಡಲಾಗಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ನೀವು ಖಂಡಿತ ಸ್ಥಿರವಾದ ಸನ್ಮಾರ್ಗದಲ್ಲಿರುವಿರಿ

[42] ಇದು ನಿಸ್ಸಂದೇಹವಾಗಿಯೂ ನಿಮಗೆ ಹಾಗೂ ನಿಮ್ಮ ಜನಾಂಗದವರಿಗೆ ಒಂದು ಉಪದೇಶವಾಗಿದೆ. ಬೇಗನೇ ನಿಮ್ಮನ್ನು ವಿಚಾರಿಸಲಾಗುವುದು

[43] ನಿಮಗಿಂತ ಹಿಂದೆ ನಾವು ಕಳಿಸಿದ್ದ ದೂತರನ್ನು ಕೇಳಿ ನೋಡಿರಿ. ನಾವು ಪರಮ ದಯಾಳುವಿನ (ಅಲ್ಲಾಹನ) ಹೊರತು ಬೇರೆ ಯಾರನ್ನಾದರೂ ಪೂಜಾರ್ಹ ದೇವರಾಗಿ ನೇಮಿಸಿದ್ದೇವೆಯೇ

[44] ನಾವು ಮೂಸಾರನ್ನು ನಮ್ಮ ಪುರಾವೆಗಳೊಂದಿಗೆ ಫಿರ್‌ಔನ್ ಮತ್ತು ಅವನ ಸರದಾರರೆಡೆಗೆ ಕಳಿಸಿದ್ದೆವು. ಅವರು, ನಿಸ್ಸಂದೇಹವಾಗಿ ನಾನು ಎಲ್ಲ ಲೋಕಗಳ ಒಡೆಯನ ದೂತನಾಗಿದ್ದೇನೆ ಎಂದರು

[45] ಹೀಗೆ ಅವರು ನಮ್ಮ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು (ಗೇಲಿ ಮಾಡಿ) ನಕ್ಕು ಬಿಟ್ಟರು

[46] ನಾವು ಅವರಿಗೆ ತೋರಿಸಿದ ಪ್ರತಿಯೊಂದು ಪುರಾವೆಯೂ ತನಗಿಂತ ಮೊದಲು ಬಂದ ಪುರಾವೆಗಿಂತ ದೊಡ್ಡದಾಗಿತ್ತು ಮತ್ತು ಅವರು (ಸತ್ಯದೆಡೆಗೆ) ಮರಳಬಹುದೆಂದು ನಾವು ಅವರನ್ನು ಶಿಕ್ಷೆಗೆ ಒಳಪಡಿಸಿದೆವು

[47] ಅವರು ಹೇಳಿದರು; ‘‘ಓ ಜಾದೂಗಾರನೇ, ನಿನಗೆ ನೀಡಲಾಗಿರುವ ವಾಗ್ದಾನದ ಅನುಷ್ಠಾನಕ್ಕಾಗಿ ನೀನು ನಮಗಾಗಿ ನಿನ್ನ ಒಡೆಯನೊಡನೆ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗದಲ್ಲಿ ನಡೆಯುವೆವು’’

[48] ಕೊನೆಗೆ ನಾವು ಅವರ ಮೇಲಿಂದ ಶಿಕ್ಷೆಯನ್ನು ನಿವಾರಿಸಿದಾಗ ಅವರು ವಚನ ಭಂಗ ಮಾಡಿದರು

[49] ಫಿರ್‌ಔನನು ತನ್ನ ಜನಾಂಗಕ್ಕೊಂದು ಕರೆ ನೀಡಿದನು. ಅವನು ಹೇಳಿದನು; ನನ್ನ ಜನಾಂಗದವರೇ, ಈಜಿಪ್ತ್‌ನ ಆಧಿಪತ್ಯ ನನಗೆ ಸೇರಿದ್ದಲ್ಲವೇ? ಮತ್ತು ಈ ನದಿಗಳು ನನಗೆ ಅಧೀನವಾಗಿ ಹರಿಯುತ್ತಿವೆಯಲ್ಲವೇ? ನೀವೇನು ನೋಡುತ್ತಿಲ್ಲವೇ

[50] ಕೀಳು ವರ್ಗದ ಹಾಗೂ ಸ್ಪಷ್ಟವಾಗಿ ಮಾತನಾಡಲಾಗದ ಆ ವ್ಯಕ್ತಿಗಿಂತ (ಮೂಸಾರಿಗಿಂತ) ನಾನು ಶ್ರೇಷ್ಠನಲ್ಲವೇ

[51] (ಅತನು ನಿಜಕ್ಕೂ ದೇವ ದೂತನಾಗಿದ್ದರೆ) ಅವನಿಗೆ ಚಿನ್ನದ ಬಳೆಗಳನ್ನೇಕೆ ನೀಡಲಾಗಿಲ್ಲ? ಅಥವಾ ಅವನ ಜೊತೆ ಸಾಲುಗಟ್ಟಿರುವ ಮಲಕ್‌ಗಳೇಕೆ ಬಂದಿಲ್ಲ

[52] ಹೀಗೆ ಅವನು ತನ್ನ ಜನಾಂಗದವರನ್ನು ಮಣಿಸಿದನು ಮತ್ತು ಅವರು ಆತನನ್ನು ಅನುಸರಿಸಿದರು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದರು

[53] ಕೊನೆಗೆ ಅವರು ನಮ್ಮನ್ನು ಉದ್ರೇಕಿಸಿದಾಗ ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು

[54] ಮತ್ತು ನಾವು ಅವರನ್ನು ಗತಕಾಲದವರಾಗಿ ಹಾಗೂ ಮುಂದಿನವರ ಪಾಲಿಗೆ ಒಂದು ಕತೆಯಾಗಿ ಮಾರ್ಪಡಿಸಿ ಬಿಟ್ಟೆವು

[55] (ದೂತರೇ,) ಮರ್ಯಮರ ಪುತ್ರ (ಈಸಾ)ರ ಉದಾಹರಣೆಯನ್ನು ಮುಂದಿಟ್ಟಾಗ ನಿಮ್ಮ ಜನಾಂಗದವರು ನಕ್ಕು ಬಿಡುತ್ತಾರೆ

[56] ನಮ್ಮ ದೇವರುಗಳು ಉತ್ತಮರೋ ಅಥವಾ ಆತನೋ? ಎಂದವರು ಕೇಳುತ್ತಾರೆ. ಅವರು ನಿಮ್ಮ ಮುಂದೆ ಅದನ್ನು ಪ್ರಸ್ತಾಪಿಸುವುದು ಕೇವಲ ಜಗಳಾಡುವುದಕ್ಕೆ ಮಾತ್ರ. ನಿಜವಾಗಿ ಅವರು ಒಂದು ಜಗಳಗಂಟ ಜನಾಂಗವಾಗಿದ್ದಾರೆ

[57] ಅವರು (ಈಸಾ) ನಮ್ಮಿಂದ ಬಹುಮಾನಿತರಾಗಿದ್ದ ಒಬ್ಬ ದಾಸರಾಗಿದ್ದರು. ನಾವು ಅವರನ್ನು ಇಸ್ರಾಈಲರ ಸಂತತಿಗಳಿಗೆ ಆದರ್ಶವಾಗಿಸಿದ್ದೆವು

[58] ನಾವು ಬಯಸಿದ್ದರೆ ಭೂಮಿಯಲ್ಲಿ ನಿಮ್ಮ ಮೂಲಕ ಮಲಕ್‌ಗಳನ್ನು ಸೃಷ್ಟಿಸುತ್ತಿದ್ದೆವು ಮತ್ತು ಅವರು ನಿಮ್ಮ ಉತ್ತರಾಧಿಕಾರಿಗಳಾಗುತ್ತಿದ್ದರು

[59] ಅವರು ಖಂಡಿತ ಅಂತಿಮ ಘಳಿಗೆಯ ಒಂದು ಸೂಚನೆಯಾಗಿದ್ದಾರೆ. ನೀವು ಆ ಕುರಿತು ಸಂಶಯಿಸಬೇಡಿ ಮತ್ತು ನನ್ನನ್ನು ಅನುಸರಿಸಿರಿ. ಇದುವೇ ನೇರಮಾರ್ಗವಾಗಿದೆ

[60] ಶೈತಾನನು ನಿಮ್ಮನ್ನು (ಸತ್ಯದಿಂದ) ತಡೆಯದಿರಲಿ. ಅವನು ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆ

[61] ಈಸಾ, ಸ್ಪಷ್ಟ ಪುರಾವೆಗಳೊಂದಿಗೆ ಬಂದು ಹೇಳಿದರು; ನಾನು ನಿಮ್ಮ ಬಳಿಗೆ ಯುಕ್ತಿಯನ್ನು ತಂದಿರುವೆನು ಹಾಗೂ ನೀವು ಪರಸ್ಪರ ಭಿನ್ನತೆ ತಾಳಿರುವ ವಿಷಯಗಳ ವಾಸ್ತವವನ್ನು ನಿಮಗೆ ವಿವರಿಸಲಿಕ್ಕಾಗಿ (ಬಂದಿರುವೆನು). ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನ ಆದೇಶವನ್ನು ಪಾಲಿಸಿರಿ

[62] ಅಲ್ಲಾಹನು ಖಂಡಿತ ನನ್ನ ಒಡೆಯನೂ ಹೌದು, ನಿಮ್ಮ ಒಡೆಯನೂ ಹೌದು. ನೀವು ಅವನನ್ನೇ ಪೂಜಿಸಿರಿ. ಅದುವೇ ನೇರ ಮಾರ್ಗ

[63] ಆ ಬಳಿಕ ವಿವಿಧ ಗುಂಪುಗಳು ಪರಸ್ಪರ ಭಿನ್ನಾಭಿಪ್ರಾಯ ತಾಳಿದವು. ಅಕ್ರಮಿಗಳಿಗೆ, ಒಂದು ಕಠಿಣ ದಿನದ ಶಿಕ್ಷೆಯ ಮೂಲಕ ವಿನಾಶವಿದೆ

[64] ಅವರು ಕಾಯುತ್ತಿರುವುದು ಅಂತಿಮ ಘಳಿಗೆಯನ್ನೇ ತಾನೇ? ಅದು, ಅವರಿಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ ಹಠಾತ್ತನೆ ಅವರ ಮೇಲೆ ಬಂದೆರಗಲಿದೆ

[65] ಧರ್ಮನಿಷ್ಠರ ಹೊರತು ಇತರೆಲ್ಲ ಮಿತ್ರರೂ ಅಂದು ಪರಸ್ಪರ ಶತ್ರುಗಳಾಗಿ ಬಿಡುವರು

[66] (ಅವರೊಡನೆ ಹೇಳಲಾಗುವುದು;) ನನ್ನ ದಾಸರೇ, ಇಂದು ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ

[67] ನಮ್ಮ ವಚನಗಳನ್ನು ನಂಬಿದ್ದವರು ಮತ್ತು ಶರಣಾಗಿದ್ದವರು

[68] (ಅವರೊಡನೆ ಹೇಳಲಾಗುವುದು;) ‘‘ನೀವು ಮತ್ತು ನಿಮ್ಮ ಜೀವನ ಸಂಗಾತಿಗಳು ಸ್ವರ್ಗದೊಳಗೆ ಪ್ರವೇಶಿಸಿರಿ. ನಿಮ್ಮನ್ನು ಸಂತೋಷ ಪಡಿಸಲಾಗುವುದು’’

[69] ಚಿನ್ನದ ತಟ್ಟೆ ಹಾಗೂ ಲೋಟೆಗಳನ್ನು ಅವರ ಮುಂದಿಡಲಾಗುವುದು. ಮನಸ್ಸುಗಳು ಅಪೇಕ್ಷಿಸುವ ಹಾಗೂ ಕಣ್ಣುಗಳಿಗೆ ರುಚಿಸುವ ಎಲ್ಲವೂ ಅಲ್ಲಿರುವುದು ಮತ್ತು ಅಲ್ಲಿ ನೀವು ಸದಾಕಾಲ ಇರುವಿರಿ

[70] ಇದುವೇ, ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ ನೀವು ಉತ್ತರಾಧಿಕಾರಿಗಳಾಗಿರುವ ಸ್ವರ್ಗ

[71] ಇಲ್ಲಿ ನಿಮಗಾಗಿ, ನೀವು ತಿನ್ನುವ ಹಲವು ಬಗೆಯ ಹಣ್ಣು ಹಂಪಲುಗಳಿವೆ

[72] ಅಪರಾಧಿಗಳು ಖಂಡಿತ ನರಕದ ಶಿಕ್ಷೆಯಲ್ಲಿ ಸದಾಕಾಲ ಇರುವರು

[73] (ಶಿಕ್ಷೆಯನ್ನು) ಅವರ ಪಾಲಿಗೆ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅಲ್ಲಿ ಅವರು ನಿರಾಶರಾಗಿ ಬಿದ್ದಿರುವರು

[74] ನಾವೇನೂ ಅವರ ಮೇಲೆ ಅಕ್ರಮವೆಸಗಲಿಲ್ಲ. ಅವರು ಸ್ವತಃ ಅಕ್ರಮಿಗಳಾಗಿದ್ದರು

[75] ‘‘ಓ ಮಾಲಿಕ್ (ನರಕದ ಕಾವಲುಗಾರ), ನಿಮ್ಮ ಒಡೆಯನು ನಮ್ಮನ್ನು ಮುಗಿಸಿ ಬಿಡಲಿ’’ ಎಂದು ಅವರು ಮೊರೆ ಇಡುವರು. ಅವನು, ‘‘ನೀವು ಸದಾ ಇಲ್ಲೇ ಇರ ಬೇಕಾದವರು’’ ಎನ್ನುವನು

[76] ನಾವು ನಿಮ್ಮ ಬಳಿಗೆ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಿದ್ದರು

[77] ಅವರೊಂದು ನಿರ್ಧಾರ ಕೈಗೊಂಡಿರುವರೇ? ನಾವೂ ಒಂದು ನಿರ್ಧಾರ ಕೈಗೊಂಡಿರುವೆವು

[78] ಅವರೇನು, ನಾವು ಅವರ ಪಿಸುಮಾತುಗಳನ್ನು ಹಾಗೂ ಗುಟ್ಟಿನ ಸಂಭಾಷಣೆಗಳನ್ನು ಆಲಿಸುತ್ತಿಲ್ಲವೆಂದು ಭಾವಿಸಿದ್ದಾರೆಯೇ? ಯಾಕಿಲ್ಲ? ಅವರ ಬಳಿಯಲ್ಲೇ ಇರುವ ನಮ್ಮ ದೂತರು (ಮಲಕ್‌ಗಳು) ಅದನ್ನು ಬರೆದಿಡುತ್ತಾರೆ

[79] (ದೂತರೇ,) ಹೇಳಿರಿ; ಒಂದು ವೇಳೆ ಆ ಪರಮ ದಯಾಳುವಿಗೆ ಒಬ್ಬ ಪುತ್ರನು ಇದ್ದಿದ್ದರೆ, (ಅವನನ್ನು) ಪೂಜಿಸುವವರಲ್ಲಿ ನಾನೇ ಮೊದಲಿಗನಾಗಿರುತ್ತಿದ್ದೆ

[80] ಆಕಾಶಗಳ ಮತ್ತು ಭೂಮಿಯ ಒಡೆಯನು ಹಾಗೂ ವಿಶ್ವ ಸಿಂಹಾಸನದ ಒಡೆಯನು ಅವರು ಆರೋಪಿಸುವ ಎಲ್ಲ ಗುಣಗಳಿಂದ ಮುಕ್ತನಾಗಿದ್ದು ಪಾವನನಾಗಿದ್ದಾನೆ

[81] ನೀವು ಅವರನ್ನು ಬಿಟ್ಟು ಬಿಡಿ, ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ವ್ಯರ್ಥ ಮಾತುಗಳನ್ನಾಡುತ್ತಾ ಮೋಜು ಮಾಡುತ್ತಿರಲಿ

[82] ಆಕಾಶದಲ್ಲೂ ಅವನೇ (ಅಲ್ಲಾಹನೇ) ದೇವರು ಮತ್ತು ಭೂಮಿಯಲ್ಲೂ ಅವನೇ ದೇವರು. ಅವನು ತುಂಬಾ ಯುಕ್ತಿವಂತನೂ ಜ್ಞಾನವುಳ್ಳವನೂ ಆಗಿದ್ದಾನೆ

[83] ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಆಧಿಪತ್ಯವು ಯಾರಿಗೆ ಸೇರಿದೆಯೋ ಅವನು (ಅಲ್ಲಾಹನು) ತುಂಬಾ ಸಮೃದ್ಧನು. ಅಂತಿಮ ಘಳಿಗೆಯ ಜ್ಞಾನವು ಅವನ ಬಳಿಯಲ್ಲೇ ಇದೆ. (ಕೊನೆಗೆ) ನೀವು ಅವನೆಡೆಗೇ ಮರಳುವಿರಿ

[84] ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಾರೋ ಅವರಿಗೆ ಶಿಫಾರಸ್ಸಿನ ಅಧಿಕಾರವಿರುವುದಿಲ್ಲ – ಸತ್ಯದ ಪರವಾಗಿ ಸಾಕ್ಷಿ ಹೇಳುವವರ ಹೊರತು. ಮತ್ತು ಅವರು (ಆ ಸಾಕ್ಷಿಗಳು) ಬಲ್ಲವರಾಗಿರುವರು

[85] ಅವರನ್ನು ಸೃಷ್ಟಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ, ಖಂಡಿತವಾಗಿಯೂ ಅವರು ಅಲ್ಲಾಹನೆಂದೇ ಉತ್ತರಿಸುತ್ತಾರೆ. ಹಾಗಾದರೆ ಮತ್ತೆ ಅವರು ಅದೆಲ್ಲಿ ಅಲೆಯುತ್ತಿದ್ದಾರೆ

[86] ‘‘ನನ್ನೊಡೆಯಾ, ಈ ಜನರು ಖಂಡಿತ ನಂಬುವವರಲ್ಲ’’ ಎಂಬ ಅವರ (ದೂತರ) ಮಾತು (ಅಲ್ಲಾಹನಿಗೆ ತಿಳಿದಿದೆ)

[87] (ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ‘ಸಲಾಮ್’ (ನಿಮಗೆ ಶಾಂತಿ ಸಿಗಲಿ) ಎಂದು ಹೇಳಿರಿ. ಬೇಗನೇ ಅವರು ಅರಿಯುವರು

[88] ಹಾ ಮೀಮ್

[89] ಸ್ಪಷ್ಟವಾಗಿರುವ ಗ್ರಂಥದಾಣೆ

ಧೂಮ

Surah 44

[1] ನಾವಿದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಇಳಿಸಿ ಕೊಟ್ಟಿರುವೆವು. ಖಂಡಿತ ನಾವು ಎಚ್ಚರಿಸುವವರಾಗಿದ್ದೇವೆ

[2] ಇದರಲ್ಲಿ, ಎಲ್ಲ ವಿಷಯಗಳನ್ನು ಯುಕ್ತಿ ಪೂರ್ಣವಾಗಿ ಸ್ಪಷ್ಟಪಡಿಸಲಾಗಿದೆ

[3] ಇದು ನಮ್ಮ ಕಡೆಯಿಂದ ಬಂದಿರುವ ಆದೇಶ. ಖಂಡಿತ, ನಾವೇ ಇದನ್ನು ಕಳಿಸುವವರು

[4] ಇದು ನಿಮ್ಮ ಒಡೆಯನ ಅನುಗ್ರಹ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ

[5] ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನಾಗಿದ್ದಾನೆ – ನೀವು ಅಚಲ ನಂಬಿಕೆ ಉಳ್ಳವರಾಗಿದ್ದರೆ (ಇದು ನಿಮಗೆ ಮನವರಿಕೆಯಾಗಿರುತ್ತದೆ)

[6] ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ಅವನೇ ನಿಮ್ಮೊಡೆಯನು ಮತ್ತು ನಿಮ್ಮ ಹಿಂದಿನ ಪೂರ್ವಜರ ಒಡೆಯನು

[7] ಇಷ್ಟಾಗಿಯೂ ಅವರು ಸಂಶಯಗ್ರಸ್ತರಾಗಿ, (ಸತ್ಯದೊಂದಿಗೆ) ಆಟವಾಡುತ್ತಿದ್ದಾರೆ

[8] ನೀವಿನ್ನು, ಆಕಾಶವು ಒಂದು ಪ್ರತ್ಯಕ್ಷ ಹೊಗೆಯನ್ನು ಹೊರ ತರುವ ದಿನಕ್ಕಾಗಿ ಕಾಯಿರಿ

[9] ಅದು ಮಾನವರನ್ನು ಆವರಿಸುವುದು. ಅದು ಕಠಿಣ ಶಿಕ್ಷೆಯಾಗಿರುವುದು

[10] ನಮ್ಮೊಡೆಯಾ, ನಮ್ಮಿಂದ ಶಿಕ್ಷೆಯನ್ನು ನಿವಾರಿಸು. ನಾವು ವಿಶ್ವಾಸಿಗಳಾಗಿರುವೆವು’’ (ಎಂದು ಅವರು ಮೊರೆ ಇಡುವರು)

[11] ಅವರಿಗೆ ಇನ್ನೆಲ್ಲಿಯ ಉಪದೇಶ? ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸುವ ದೂತರು ಈಗಾಗಲೇ ಅವರ ಬಳಿಗೆ ಬಂದಿದ್ದಾರೆ

[12] ಆದರೆ ಅವರು, ಅವರನ್ನು ಕಡೆಗಣಿಸಿದರು ಹಾಗೂ ಅವರನ್ನು, ಯಾರಿಂದಲೋ ಕಲಿತು ಬರುವ ಹುಚ್ಚನೆಂದು ಕರೆದರು

[13] ನಾವು ಸ್ವಲ್ಪ ಮಟ್ಟಿಗೆ ಶಿಕ್ಷೆಯನ್ನು ತೊಲಗಿಸುವೆವು. ಆದರೆ ನೀವು ಖಂಡಿತ (ಹಳೆಯ ಚಾಳಿಗೆ) ಮರಳುವಿರಿ

[14] ನಾವು ನಿಮ್ಮನ್ನು ಕಠೋರವಾಗಿ ಹಿಡಿಯುವ ದಿನ, ನಾವು ಖಂಡಿತ ಪ್ರತೀಕಾರ ತೀರಿಸುವೆವು

[15] ಅವರಿಗಿಂತ ಹಿಂದೆ ನಾವು ಫಿರ್‌ಔನ್‌ನ ಜನಾಂಗವನ್ನು ಪರೀಕ್ಷಿಸಿರುವೆವು. ಅವರ ಬಳಿಗೆ ಗೌರವಾನ್ವಿತ ದೂತರು ಬಂದಿದ್ದರು

[16] (ಅವರು ಹೇಳಿದ್ದರು;) ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿರಿ. ನಿಸ್ಸಂದೇಹವಾಗಿಯೂ ನಾನು ವಿಶ್ವಾಸಾರ್ಹ ದೂತನಾಗಿದ್ದೇನೆ

[17] ಅಲ್ಲಾಹನೆದುರು ವಿದ್ರೋಹ ತೋರಬೇಡಿ. ನಾನು ಸ್ಪಷ್ಟ ಪ್ರಮಾಣದೊಂದಿಗೆ ನಿಮ್ಮ ಬಳಿಗೆ ಬಂದಿರುವೆನು

[18] ಮತ್ತು ನೀವು ನನ್ನನ್ನು ಕಲ್ಲೆಸೆದು ಕೊಲ್ಲುವ ವಿರುದ್ಧ ನಾನು ನನ್ನೊಡೆಯನೂ ನಿಮ್ಮೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ

[19] ನೀವು ನನ್ನನ್ನು ನಂಬುವುದಿಲ್ಲವೆಂದಾದರೆ ನನ್ನಿಂದ ದೂರ ಉಳಿಯಿರಿ

[20] ಕೊನೆಗೆ ಅವರು (ದೂತರು) ‘‘ಇವರೊಂದು ಅಪರಾಧಿ ಜನಾಂಗವಾಗಿದ್ದಾರೆ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು

[21] (ಅಲ್ಲಾಹನು ಆದೇಶಿಸಿದನು;) ರಾತ್ರಿಯ ವೇಳೆ ನೀವು ನಮ್ಮ ದಾಸರನ್ನು ಕರೆದುಕೊಂಡು ಹೋಗಿರಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು

[22] ಸಮುದ್ರವು ಪ್ರಶಾಂತವಾಗಿರುವ ಸ್ಥಿತಿಯಲ್ಲೇ ನೀವು ಅದನ್ನು ದಾಟಿ ಹೋಗಿರಿ. ಅವರು (ಶತ್ರುಗಳು) ಖಂಡಿತ ಮುಳುಗಿ ಹೋಗುವರು

[23] ಕೊನೆಗೆ ಅವರು (ಶತ್ರುಗಳು) ಬಿಟ್ಟು ಹೋದರು; ಅದೆಷ್ಟು ತೋಟಗಳನ್ನು ಹಾಗೂ ಚಿಲುಮೆಗಳನ್ನು

[24] ಮತ್ತು ಹೊಲಗಳನ್ನು ಹಾಗೂ ಭವ್ಯ ಮನೆಗಳನ್ನು

[25] ಮತ್ತು ತಾವು ಭೋಗಿಸುತ್ತಿದ್ದ ಕೊಡುಗೆಗಳನ್ನು

[26] ಹೀಗೆ, ನಾವು ಬೇರೊಂದು ಜನಾಂಗದವರನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು

[27] ಅವರಿಗಾಗಿ ಆಕಾಶವಾಗಲಿ ಭೂಮಿಯಾಗಲಿ ರೋದಿಸಲಿಲ್ಲ. ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗಲಿಲ್ಲ

[28] ನಾವು ಇಸ್ರಾಈಲರ ಸಂತತಿಯನ್ನು ಅಪಮಾನಕಾರಿ ಯಾತನೆಯಿಂದ ವಿಮೋಚಿಸಿದೆವು

[29] ಫಿರ್‌ಔನನಿಂದ (ಅವರನ್ನು ರಕ್ಷಿಸಿದೆವು). ಅವನು ಅತಿರೇಕವೆಸಗಿದ ವಿದ್ರೋಹಿಯಾಗಿದ್ದನು

[30] ನಾವು ಜ್ಞಾನದ ಆಧಾರದಲ್ಲಿ, ಎಲ್ಲ ಲೋಕಗಳವರ ಪೈಕಿ ಅವರನ್ನು ಆರಿಸಿಕೊಂಡಿದ್ದೆವು

[31] ಮತ್ತು ನಾವು ಅವರಿಗೆ ಪುರಾವೆಗಳನ್ನು ನೀಡಿದ್ದೆವು. ಅವುಗಳಲ್ಲಿ ಸ್ಪಷ್ಟ ಪರೀಕ್ಷೆ ಇತ್ತು

[32] ಅವರು ಖಂಡಿತ ಹೇಳುತ್ತಾರೆ

[33] ‘‘ಈ ನಮ್ಮ ಪ್ರಥಮ ಮರಣವೇ ಅಂತಿಮ. ನಮ್ಮನ್ನು ಮತ್ತೆ ಜೀವಂತ ಗೊಳಿಸಲಾಗುವುದಿಲ್ಲ’’

[34] ‘‘ನೀವು ಸತ್ಯವಂತರಾಗಿದ್ದರೆ, ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ’’

[35] ಅವರು ಉತ್ತಮರೋ ಅಥವಾ ತುಬ್ಬಅ್ ಜನಾಂಗದವರು ಹಾಗೂ ಅವರಿಗಿಂತ ಹಿಂದೆ ಇದ್ದವರು ಉತ್ತಮರೋ? ನಾವು ಅವರನ್ನು ನಾಶ ಮಾಡಿದೆವು. ಅವರು ಅಪರಾಧಿಗಳಾಗಿದ್ದರು

[36] ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವೇನೂ ಮೋಜಿಗಾಗಿ ಸೃಷ್ಟಿಸಿಲ್ಲ

[37] ಅವುಗಳನ್ನು ನಾವು ನ್ಯಾಯೋಚಿತವಾಗಿಯೇ ಸೃಷ್ಟಿಸಿರುವೆವು. ಆದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ

[38] ಖಂಡಿತವಾಗಿಯೂ, ಅಂತಿಮ ತೀರ್ಪಿನ ದಿನವೇ ಅವರೆಲ್ಲರಿಗಿರುವ ನಿಶ್ಚಿತ ಅವಧಿಯಾಗಿದೆ

[39] ಆ ದಿನ ಯಾವ ಮಿತ್ರನೂ ತನ್ನ ಮಿತ್ರನಿಗೆ ಕಿಂಚಿತ್ತೂ ನೆರವಾಗಲಾರನು ಮತ್ತು ಅವರಿಗೆ ಸಹಾಯ ಸಿಗಲಾರದು –

[40] – ಅಲ್ಲಾಹನೇ ಕೃಪೆ ತೋರಿದವರ ಹೊರತು. ಅವನು ಖಂಡಿತ, ಮಹಾ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ

[41] ಖಂಡಿತವಾಗಿಯೂ, ಝಕ್ಕೂಮ್ ಮರ

[42] ಅದುವೇ ಪಾಪಿಗಳ ಆಹಾರವಾಗಿರುವುದು

[43] ಅದು ಹೊಟ್ಟೆಗಳೊಳಗೆ, ಕರಗಿದ ತಾಮ್ರದಂತೆ ಕುದಿಯುತ್ತಿರುವುದು

[44] ತೀವ್ರವಾಗಿ ಕುದಿಯುವ ನೀರಿನಂತೆ

[45] ಹಿಡಿಯಿರಿ ಅವನನ್ನು ಮತ್ತು ನರಕದ ಮಧ್ಯಭಾಗದವರೆಗೂ ಎಳೆದುಕೊಂಡು ಹೋಗಿರಿ

[46] ಮತ್ತು ಕುದಿಯುವ ನರಕದ ಭಾಗವನ್ನು ಅವನ ತಲೆಗೆ ಹಾಕಿರಿ

[47] ಸವಿ! ನೀನು ಭಾರೀ ಪ್ರಬಲ ಹಾಗೂ ಗೌರವಾನ್ವಿತನಾಗಿ ಮೆರೆಯುತ್ತಿದ್ದೆ

[48] ನೀವು ಸಂಶಯಿಸುತ್ತಿದ್ದುದು ಇದನ್ನೇ

[49] ಧರ್ಮ ನಿಷ್ಠರು ಅಂದು ಪ್ರಶಾಂತ ನೆಲೆಯಲ್ಲಿರುವರು

[50] ಸ್ವರ್ಗ ತೋಟಗಳಲ್ಲಿ ಮತ್ತು ಚಿಲುಮೆಗಳಲ್ಲಿ

[51] ಅವರು ಶುಭ್ರ ರೇಶ್ಮೆ ಹಾಗೂ ಅಲಂಕೃತ ರೇಶ್ಮೆಯ ಉಡುಗೆಗಳನ್ನು ಧರಿಸಿ ಪರಸ್ಪರರ ಮುಂದಿರುವರು

[52] ಹೀಗೆಯೇ ಇರುವುದು. ವಿಶಾಲ ಕಣ್ಣಿನ ಹೂರ್‌ಗಳನ್ನು ನಾವು ಅವರ ಜೊತೆಗಳಾಗಿಸುವೆವು

[53] ಅವರು ನೆಮ್ಮದಿಯಿಂದ ಎಲ್ಲ ಬಗೆಯ ಹಣ್ಣುಗಳನ್ನು ತರಿಸುವರು

[54] (ಇಹಲೋಕದ) ಪ್ರಥಮ ಮರಣದ ಹೊರತು, ಅಲ್ಲಿ ಅವರು ಮರಣವನ್ನು ಎದುರಿಸಲಾರರು. ಅವನು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸಿರುವನು

[55] ಇದು ನಿಮ್ಮ ಒಡೆಯನ ಅನುಗ್ರಹ. ಇದು ನಿಜಕ್ಕೂ ಮಹಾ ವಿಜಯವಾಗಿದೆ

[56] ನಾವಿದನ್ನು ನಿಮ್ಮ ಭಾಷೆಯಲ್ಲಿ ಸುಲಭಗೊಳಿಸಿರುವೆವು. ಅವರು ಉಪದೇಶ ಸ್ವೀಕರಿಸಲೆಂದು

[57] ನೀವೀಗ ಕಾಯಿರಿ. ಅವರೂ ಖಂಡಿತ ಕಾಯುತ್ತಿದ್ದಾರೆ

[58] ಹಾ ಮೀಮ್

[59] ಇದು, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವಾತನ ಕಡೆಯಿಂದ ಇಳಿಸಿಕೊಡಲಾಗಿರುವ ಗ್ರಂಥ

ಕುಳಿತುಕೊಳ್ಳುವುದು

Surah 45

[1] ಖಂಡಿತವಾಗಿಯೂ ವಿಶ್ವಾಸಿಗಳಿಗೆ ಆಕಾಶಗಳಲ್ಲೂ ಭೂಮಿಯಲ್ಲೂ ಪುರಾವೆಗಳಿವೆ

[2] ಮತ್ತು ಅಚಲ ನಂಬಿಕೆಯುಳ್ಳವರಿಗೆ ನಿಮ್ಮ ಸೃಷ್ಟಿಯಲ್ಲಿ ಹಾಗೂ ಅವನು (ಅಲ್ಲಾಹನು) ಭೂಮಿಯಲ್ಲಿ ಹರಡಿರುವ ಜಾನುವಾರುಗಳಲ್ಲಿ ಪುರಾವೆಗಳಿವೆ

[3] ಹಾಗೆಯೇ, ರಾತ್ರಿ ಹಾಗೂ ಹಗಲುಗಳ ಪರಿವರ್ತನೆ ಹಾಗೂ ಅಲ್ಲಾಹನು ಆಕಾಶದಿಂದ ಇಳಿಸಿಕೊಡುವ ಆಹಾರ ಹಾಗೂ ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ನೀಡುವ ಪುನಶ್ಚೇತನ ಮತ್ತು ಗಾಳಿಯ ಚಲನೆ – (ಇವೆಲ್ಲಾ) ಬುದ್ಧಿಯುಳ್ಳವರ ಪಾಲಿಗೆ ಪುರಾವೆಗಳಾಗಿವೆ

[4] ಇವು, ಸತ್ಯದೊಂದಿಗೆ ನಿಮಗೆ ಓದಿ ಕೇಳಿಸಲಾಗುತ್ತಿರುವ, ಅಲ್ಲಾಹನ ವಚನಗಳು, ಅಲ್ಲಾಹ್ ಮತ್ತು ಅವನ ವಚನಗಳ ಬಳಿಕ ಮತ್ತೇನನ್ನು ತಾನೇ ಅವರು ನಂಬುವರು

[5] ಸುಳ್ಳನ್ನು ಸೃಷ್ಟಿಸುವ ಪ್ರತಿಯೊಬ್ಬ ಪಾಪಿಗೆ ವಿನಾಶವಿದೆ

[6] ಅವನು ತನಗೆ ಓದಿ ಕೇಳಿಸಲಾದ ಅಲ್ಲಾಹನ ವಚನಗಳನ್ನು ಕೇಳುತ್ತಾನೆ. ಆ ಬಳಿಕ ತಾನು ಅದನ್ನು ಕೇಳಿಯೇ ಇಲ್ಲವೆಂಬಂತೆ ಅಹಂಕಾರ ಮೆರೆಯುತ್ತಾ ಉದ್ಧಟನಾಗಿರುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಶುಭವಾರ್ತೆ ಕೊಟ್ಟು ಬಿಡಿರಿ

[7] ಅವನಿಗೆ ನಮ್ಮ ಯಾವುದಾದರೂ ವಚನದ ಕುರಿತು ತಿಳಿದಾಗ ಅವನು ಅದನ್ನು ಗೇಲಿ ಮಾಡುತ್ತಾನೆ. ಅವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ

[8] ನರಕವು ಅವರ ಮುಂದಿದೆ. ಅವರ ಸಂಪಾದನೆಯಿಂದ ಅವರಿಗೆ ಯಾವ ಪ್ರಯೋಜನವೂ ಆಗದು. ಅಲ್ಲಾಹನ ಹೊರತು ಅವರು ನೆಚ್ಚಿಕೊಂಡಿರುವ ಪೋಷಕರಿಂದಲೂ ಅಷ್ಟೇ, (ಯಾವ ಲಾಭವೂ ಆಗದು). ಅವರಿಗೆ ಭಾರೀ ಶಿಕ್ಷೆ ಸಿಗಲಿದೆ

[9] ಇದು ಮಾರ್ಗದರ್ಶಿ. ತಮ್ಮ ಒಡೆಯನ ವಚನಗಳನ್ನು ಧಿಕ್ಕರಿಸಿದವರಿಗೆ ಅತ್ಯಂತ ಕಠಿಣ ಶಿಕ್ಷೆ ಸಿಗಲಿದೆ

[10] ಸಮುದ್ರದಲ್ಲಿ ತನ್ನ ಆದೇಶಾನುಸಾರ ಹಡಗುಗಳು ತೇಲುವಂತೆ ಹಾಗೂ ಆ ಮೂಲಕ ನೀವು ಅವನ ಅನುಗ್ರಹವನ್ನು ಹುಡುಕುವಂತೆ, ಸಮುದ್ರವನ್ನು ನಿಮಗೆ ವಿಧೇಯಗೊಳಿಸಿರುವವನು ಅಲ್ಲಾಹನು. ನೀವು ಅವನಿಗೆ ಕೃತಜ್ಞರಾಗಬೇಕೆಂದು (ಅವನು ಇದನ್ನು ಮಾಡಿರುವನು)

[11] ಹಾಗೆಯೇ, ಅವನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ತನ್ನ ವತಿಯಿಂದ ನಿಮಗೆ ವಿಧೇಯಗೊಳಿಸಿರುವನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪುರಾವೆಗಳಿವೆ

[12] ಅಲ್ಲಾಹನ ದಿನಗಳನ್ನು ನಿರೀಕ್ಷಿಸದವರನ್ನು ಕ್ಷಮಿಸಬೇಕೆಂದು ವಿಶ್ವಾಸಿಗಳೊಡನೆ ಹೇಳಿರಿ. ಜನರಿಗೆ ಅವರ ಗಳಿಕೆಗೆ ಅನುಸಾರವಾದ ಪ್ರತಿಫಲವನ್ನು ಅವನೇ ನೀಡುವನು

[13] ಸತ್ಕರ್ಮಗಳನ್ನು ಮಾಡುವವನು ಸ್ವತಃ ತನಗಾಗಿ ಮಾಡುತ್ತಾನೆ ಮತ್ತು ಕೆಡುಕನ್ನು ಮಾಡಿದವನು ಕೂಡಾ (ಅದರ ಫಲವನ್ನು) ತಾನೇ ಅನುಭವಿಸಬೇಕಾಗುವುದು. ಕೊನೆಗೆ ನಿಮ್ಮನ್ನು ನಿಮ್ಮ ಒಡೆಯನೆಡೆಗೆ ಮರಳಿಸಲಾಗುವುದು

[14] ಇಸ್ರಾಈಲರ ಸಂತತಿಗಳಿಗೆ ನಾವು ಗ್ರಂಥವನ್ನು, ಅಧಿಕಾರವನ್ನು ಹಾಗೂ ಪ್ರವಾದಿತ್ವವನ್ನು ನೀಡಿದೆವು ಮತ್ತು ನಾವು ಅವರಿಗೆ ಶುದ್ಧ ಆಹಾರವನ್ನು ದಯಪಾಲಿಸಿದೆವು ಹಾಗೂ ಅವರಿಗೆ ಸರ್ವಲೋಕಗಳ ಇತರೆಲ್ಲರಿಗಿಂತ ಶ್ರೇಷ್ಠ ಸ್ಥಾನವನ್ನು ಕರುಣಿಸಿದೆವು

[15] ನಾವು ಅವರಿಗೆ ಬಹಳ ಸ್ಪಷ್ಟವಾದ ಆದೇಶಗಳನ್ನು ನೀಡಿದ್ದೆವು. ಆದರೆ ತಮ್ಮ ಬಳಿಗೆ ಜ್ಞಾನವು ಬಂದ ಬಳಿಕ ಅವರು ಕೇವಲ ಪರಸ್ಪರ ಹಗೆತನದಿಂದಾಗಿ ಭಿನ್ನಾಭಿಪ್ರಾಯ ತಾಳಿದರು

[16] (ದೂತರೇ,) ಆ ಬಳಿಕ ಇದೀಗ ನಾವು ನಿಮ್ಮನ್ನು ಧರ್ಮದ ಒಂದು ನಿರ್ದಿಷ್ಟ ಹಾದಿಯಲ್ಲಿ ನಡೆಸಿರುವೆವು. ನೀವು ಅದನ್ನು ಅನುಸರಿಸಿರಿ ಮತ್ತು ನೀವು ಜ್ಞಾನವಿಲ್ಲದವರ ಇಚ್ಛೆಗಳನ್ನು ಅನುಸರಿಸಬೇಡಿ

[17] ಖಂಡಿತವಾಗಿಯೂ ಅಲ್ಲಾಹನೆದುರು ಅವರು ನಿಮ್ಮ ಯಾವ ನೆರವಿಗೂ ಬರಲಾರರು. ಅಕ್ರಮಿಗಳು ಖಂಡಿತ ಪರಸ್ಪರರ ಪೋಷಕರಾಗಿರುತ್ತಾರೆ ಮತ್ತು ಧರ್ಮ ನಿಷ್ಠರ ಪಾಲಿಗೆ ಅಲ್ಲಾಹನೇ ಪೋಷಕನಾಗಿರುತ್ತಾನೆ

[18] ಇದು (ಕುರ್‌ಆನ್) ಮಾನವರ ಕಣ್ಣು ತೆರಸುವ ಸಾಧನವಾಗಿದೆ ಮತ್ತು ಅಚಲ ನಂಬಿಕೆ ಉಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಕೃಪೆಯಾಗಿದೆ

[19] ಪಾಪಗಳನ್ನು ಸಂಪಾದಿಸಿದವರು, ನಾವು ಅವರನ್ನು, (ಸತ್ಯದಲ್ಲಿ) ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರಿಗೆ ಸಮಾನರಾಗಿ ಮಾಡುತ್ತೇವೆಂದು ಅವರ ಬದುಕು ಮತ್ತು ಅವರ ಸಾವು (ವಿಶ್ವಾಸಿ ಸತ್ಕರ್ಮಿಗಳಿಗೆ) ಸಮಾನವಾಗಿರುವುದೆಂದು ಭಾವಿಸಿದ್ದಾರೆಯೇ? ಅವರ ಲೆಕ್ಕಾಚಾರ ಬಹಳ ಕೆಟ್ಟದಾಗಿದೆ

[20] ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದ ಆಧಾರದಲ್ಲಿ ಸೃಷ್ಟಿಸಿರುವನು. (ಆದ್ದರಿಂದ) ಪ್ರತಿಯೊಬ್ಬನಿಗೂ ಅವನ ಗಳಿಕೆಯನುಸಾರ ಪ್ರತಿಫಲ ಸಿಗಲಿದೆ ಹಾಗೂ ಅವರ ಮೇಲೆ ಅನ್ಯಾಯವಾಗದು

[21] ತನ್ನ ಸ್ವೇಚ್ಛೆಯನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ನೋಡಿದಿರಾ? ಅವನು ತಿಳುವಳಿಕೆ ಉಳ್ಳವನಾಗಿದ್ದರೂ ಅಲ್ಲಾಹನು, ಅವನನ್ನು ದಾರಿಗೆಡಿಸಿ ಬಿಟ್ಟಿರುವನು ಮತ್ತು ಅವನ ಕಿವಿ ಹಾಗೂ ಅವನ ಹೃದಯದ ಮೇಲೆ ಮುದ್ರೆ ಒತ್ತಿ ಬಿಟ್ಟಿರುವನು ಮತ್ತು ಅವನ ಕಣ್ಣಿನ ಮೇಲೆ ತೆರೆ ಎಳೆದಿರುವನು. ಅಲ್ಲಾಹನ ಬಳಿಕ ಬೇರೆ ಯಾರು ತಾನೇ ಅವನಿಗೆ ಸರಿದಾರಿ ತೋರಿಸಬಲ್ಲನು? ನೀವೇನು ಅರ್ಥ ಮಾಡಿ ಕೊಳ್ಳುವುದಿಲ್ಲವೇ

[22] ‘‘ನಮ್ಮ ಇಹಲೋಕದ ಬದುಕಿನ ಆಚೆ ಬೇರೇನೂ ಇಲ್ಲ. ನಾವು ಸಾಯುತ್ತೇವೆ ಮತ್ತು ನಾವು ಬದುಕುತ್ತೇವೆ. ನಮ್ಮನ್ನು ನಾಶ ಮಾಡುವುದು ಕಾಲ ಮಾತ್ರ’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಈ ಕುರಿತು ಯಾವ ಜ್ಞಾನವೂ ಇಲ್ಲ ಅವರು ಕೇವಲ ಊಹಿಸುತ್ತಿದ್ದಾರೆ

[23] ನೀವು ಅವರಿಗೆ ನಮ್ಮ ಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಿದಾಗ, ‘‘ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ’’ ಎನ್ನುವುದಷ್ಟೇ ಅವರ ವಾದವಾಗಿರುತ್ತದೆ

[24] ಹೇಳಿರಿ; ಅಲ್ಲಾಹನೇ ನಿಮ್ಮನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ನಿಮ್ಮನ್ನು ಸಾಯಿಸುತ್ತಾನೆ. ಆ ಬಳಿಕ ನಿಸ್ಸಂದೇಹವಾಗಿ ಬರಲಿರುವ ಪುನರುತ್ಥಾನದ ದಿನ ಅವನೇ ನಿಮ್ಮನ್ನು ಒಟ್ಟು ಸೇರಿಸಲಿದ್ದಾನೆ. ಆದರೆ ಹೆಚ್ಚಿನ ಮಾನವರಿಗೆ ಅರಿವಿಲ್ಲ

[25] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅಂತಿಮ ಕ್ಷಣವು ಬಂದು ಬಿಟ್ಟ ದಿನ ಮಿಥ್ಯವಾದಿಗಳು ನಷ್ಟ ಅನುಭವಿಸುವರು

[26] ಅಂದು ನೀವು, ಎಲ್ಲ ಸಮುದಾಯಗಳು ಮೊಣಕಾಲೂರಿ ಬಿದ್ದಿರುವುದನ್ನು ಕಾಣುವಿರಿ. (ಅಂದು) ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮಗಳ ದಾಖಲೆಯ ಕಡೆಗೆ ಕರೆಯಲಾಗುವುದು. (ಮತ್ತು ಹೇಳಲಾಗುವುದು;) ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲ ಸಿಗಲಿದೆ

[27] ಇದು ನಿಮ್ಮ ಕುರಿತು ಸತ್ಯವನ್ನೇ ಹೇಳುವ ನಮ್ಮ ದಾಖಲೆ. ನೀವು ಮಾಡುತ್ತಿದ್ದ ಎಲ್ಲವನ್ನೂ ನಾವು ಬರೆಸಿಡುತ್ತಿದ್ದೆವು

[28] ವಿಶ್ವಾಸಿಗಳಾಗಿದ್ದವರನ್ನು ಹಾಗೂ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅವರ ಒಡೆಯನು ತನ್ನ ಕೃಪೆಯೊಳಗೆ ಸೇರಿಸುವನು. ಇದುವೇ ಸ್ಪಷ್ಟ ವಿಜಯವಾಗಿದೆ

[29] ಅತ್ತ ಧಿಕ್ಕಾರಿಗಳೊಡನೆ ಹೇಳಲಾಗುವುದು; ನಿಮಗೆ ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ಆದರೆ ನೀವು ಅಹಂಕಾರ ತೋರಿದಿರಿ ಮತ್ತು ನೀವು ಅಪರಾಧಿಗಳಾಗಿದ್ದಿರಿ

[30] ‘‘ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ ಮತ್ತು ಅಂತಿಮ ಕ್ಷಣವು ಬರುವುದರಲ್ಲಿ ಸಂದೇಹವಿಲ್ಲ ಎಂದು (ನಿಮ್ಮಾಡನೆ) ಹೇಳಲಾದಾಗ ನೀವು, – ಅಂತಿಮ ಘಳಿಗೆ ಅಂದರೇನೆಂದು ನಮಗೇನೂ ತಿಳಿಯದು, ನಾವು ಅದನ್ನು ಕೇವಲ ಒಂದು ಭ್ರಮೆ ಎಂದು ಪರಿಗಣಿಸುತ್ತೇವೆ ಮತ್ತು ನಾವಂತು ನಂಬುವವರಲ್ಲ – ಎನ್ನುತ್ತಿದ್ದಿರಿ’’

[31] ಅವರು ಮಾಡಿದ್ದ ಪಾಪಕೃತ್ಯಗಳು ಅವರ ಮುಂದೆ ಪ್ರಕಟವಾಗಿ ಬಿಡುವವು ಮತ್ತು ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದುವೇ (ಆ ಶಿಕ್ಷೆಯೇ) ಅವರನ್ನು ಆವರಿಸಿಕೊಳ್ಳುವುದು

[32] ಮತ್ತು ಅವರೊಡನೆ ಹೇಳಲಾಗುವುದು; ‘‘ನೀವು ಈ ದಿನದ ಭೇಟಿಯನ್ನು ಮರೆತಿದ್ದಂತೆ ಇಂದು ನಾವು ನಿಮ್ಮನ್ನು ಮರೆತು ಬಿಟ್ಟಿರುವೆವು. ನರಕವೇ ನಿಮ್ಮ ನೆಲೆಯಾಗಿದೆ ಮತ್ತು ನಿಮಗೆ ಸಹಾಯಕರು ಯಾರೂ ಇಲ್ಲ’’

[33] ‘‘ಇದೇಕೆಂದರೆ, ನೀವು ಅಲ್ಲಾಹನ ವಚನಗಳನ್ನು ಗೇಲಿ ಮಾಡುತ್ತಿದ್ದಿರಿ ಮತ್ತು ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸಿತ್ತು’’. ಇಂದು ಅವರಿಗೆ ಇಲ್ಲಿಂದ ಹೊರ ಹೋಗಲಿಕ್ಕೂ ಸಾಧ್ಯವಿಲ್ಲ ಮತ್ತು ಅವನನ್ನು (ಅಲ್ಲಾಹನನ್ನು) ಮೆಚ್ಚಿಸಲಿಕ್ಕೂ ಅವಕಾಶವಿಲ್ಲ

[34] ಅಲ್ಲಾಹನಿಗೆ ಕೃತಜ್ಞತೆಗಳು. ಅವನೇ ಆಕಾಶಗಳ ಒಡೆಯನೂ ಭೂಮಿಯ ಒಡೆಯನೂ ಸರ್ವ ಲೋಕಗಳ ಒಡೆಯನೂ ಆಗಿರುವನು

[35] ಆಕಾಶಗಳಲ್ಲೂ ಭೂಮಿಯಲ್ಲೂ ಹಿರಿಮೆಯು ಅವನಿಗೇ ಸೇರಿದೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[36] ಹಾ ಮೀಮ್

[37] ಇದು, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವಾತನ ಕಡೆಯಿಂದ ಇಳಿಸಿಕೊಡಲಾಗಿರುವ ಗ್ರಂಥ

ಮರಳ ದಿಬ್ಬಗಳು

Surah 46

[1] ಖಂಡಿತವಾಗಿಯೂ ವಿಶ್ವಾಸಿಗಳಿಗೆ ಆಕಾಶಗಳಲ್ಲೂ ಭೂಮಿಯಲ್ಲೂ ಪುರಾವೆಗಳಿವೆ

[2] ಮತ್ತು ಅಚಲ ನಂಬಿಕೆಯುಳ್ಳವರಿಗೆ ನಿಮ್ಮ ಸೃಷ್ಟಿಯಲ್ಲಿ ಹಾಗೂ ಅವನು (ಅಲ್ಲಾಹನು) ಭೂಮಿಯಲ್ಲಿ ಹರಡಿರುವ ಜಾನುವಾರುಗಳಲ್ಲಿ ಪುರಾವೆಗಳಿವೆ

[3] ಹಾಗೆಯೇ, ರಾತ್ರಿ ಹಾಗೂ ಹಗಲುಗಳ ಪರಿವರ್ತನೆ ಹಾಗೂ ಅಲ್ಲಾಹನು ಆಕಾಶದಿಂದ ಇಳಿಸಿಕೊಡುವ ಆಹಾರ ಹಾಗೂ ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ನೀಡುವ ಪುನಶ್ಚೇತನ ಮತ್ತು ಗಾಳಿಯ ಚಲನೆ – (ಇವೆಲ್ಲಾ) ಬುದ್ಧಿಯುಳ್ಳವರ ಪಾಲಿಗೆ ಪುರಾವೆಗಳಾಗಿವೆ

[4] ಇವು, ಸತ್ಯದೊಂದಿಗೆ ನಿಮಗೆ ಓದಿ ಕೇಳಿಸಲಾಗುತ್ತಿರುವ, ಅಲ್ಲಾಹನ ವಚನಗಳು, ಅಲ್ಲಾಹ್ ಮತ್ತು ಅವನ ವಚನಗಳ ಬಳಿಕ ಮತ್ತೇನನ್ನು ತಾನೇ ಅವರು ನಂಬುವರು

[5] ಸುಳ್ಳನ್ನು ಸೃಷ್ಟಿಸುವ ಪ್ರತಿಯೊಬ್ಬ ಪಾಪಿಗೆ ವಿನಾಶವಿದೆ

[6] ಅವನು ತನಗೆ ಓದಿ ಕೇಳಿಸಲಾದ ಅಲ್ಲಾಹನ ವಚನಗಳನ್ನು ಕೇಳುತ್ತಾನೆ. ಆ ಬಳಿಕ ತಾನು ಅದನ್ನು ಕೇಳಿಯೇ ಇಲ್ಲವೆಂಬಂತೆ ಅಹಂಕಾರ ಮೆರೆಯುತ್ತಾ ಉದ್ಧಟನಾಗಿರುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಶುಭವಾರ್ತೆ ಕೊಟ್ಟು ಬಿಡಿರಿ

[7] ಅವನಿಗೆ ನಮ್ಮ ಯಾವುದಾದರೂ ವಚನದ ಕುರಿತು ತಿಳಿದಾಗ ಅವನು ಅದನ್ನು ಗೇಲಿ ಮಾಡುತ್ತಾನೆ. ಅವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ

[8] ನರಕವು ಅವರ ಮುಂದಿದೆ. ಅವರ ಸಂಪಾದನೆಯಿಂದ ಅವರಿಗೆ ಯಾವ ಪ್ರಯೋಜನವೂ ಆಗದು. ಅಲ್ಲಾಹನ ಹೊರತು ಅವರು ನೆಚ್ಚಿಕೊಂಡಿರುವ ಪೋಷಕರಿಂದಲೂ ಅಷ್ಟೇ, (ಯಾವ ಲಾಭವೂ ಆಗದು). ಅವರಿಗೆ ಭಾರೀ ಶಿಕ್ಷೆ ಸಿಗಲಿದೆ

[9] ಇದು ಮಾರ್ಗದರ್ಶಿ. ತಮ್ಮ ಒಡೆಯನ ವಚನಗಳನ್ನು ಧಿಕ್ಕರಿಸಿದವರಿಗೆ ಅತ್ಯಂತ ಕಠಿಣ ಶಿಕ್ಷೆ ಸಿಗಲಿದೆ

[10] ಸಮುದ್ರದಲ್ಲಿ ತನ್ನ ಆದೇಶಾನುಸಾರ ಹಡಗುಗಳು ತೇಲುವಂತೆ ಹಾಗೂ ಆ ಮೂಲಕ ನೀವು ಅವನ ಅನುಗ್ರಹವನ್ನು ಹುಡುಕುವಂತೆ, ಸಮುದ್ರವನ್ನು ನಿಮಗೆ ವಿಧೇಯಗೊಳಿಸಿರುವವನು ಅಲ್ಲಾಹನು. ನೀವು ಅವನಿಗೆ ಕೃತಜ್ಞರಾಗಬೇಕೆಂದು (ಅವನು ಇದನ್ನು ಮಾಡಿರುವನು)

[11] ಹಾಗೆಯೇ, ಅವನು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ತನ್ನ ವತಿಯಿಂದ ನಿಮಗೆ ವಿಧೇಯಗೊಳಿಸಿರುವನು. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪುರಾವೆಗಳಿವೆ

[12] ಅಲ್ಲಾಹನ ದಿನಗಳನ್ನು ನಿರೀಕ್ಷಿಸದವರನ್ನು ಕ್ಷಮಿಸಬೇಕೆಂದು ವಿಶ್ವಾಸಿಗಳೊಡನೆ ಹೇಳಿರಿ. ಜನರಿಗೆ ಅವರ ಗಳಿಕೆಗೆ ಅನುಸಾರವಾದ ಪ್ರತಿಫಲವನ್ನು ಅವನೇ ನೀಡುವನು

[13] ಸತ್ಕರ್ಮಗಳನ್ನು ಮಾಡುವವನು ಸ್ವತಃ ತನಗಾಗಿ ಮಾಡುತ್ತಾನೆ ಮತ್ತು ಕೆಡುಕನ್ನು ಮಾಡಿದವನು ಕೂಡಾ (ಅದರ ಫಲವನ್ನು) ತಾನೇ ಅನುಭವಿಸಬೇಕಾಗುವುದು. ಕೊನೆಗೆ ನಿಮ್ಮನ್ನು ನಿಮ್ಮ ಒಡೆಯನೆಡೆಗೆ ಮರಳಿಸಲಾಗುವುದು

[14] ಇಸ್ರಾಈಲರ ಸಂತತಿಗಳಿಗೆ ನಾವು ಗ್ರಂಥವನ್ನು, ಅಧಿಕಾರವನ್ನು ಹಾಗೂ ಪ್ರವಾದಿತ್ವವನ್ನು ನೀಡಿದೆವು ಮತ್ತು ನಾವು ಅವರಿಗೆ ಶುದ್ಧ ಆಹಾರವನ್ನು ದಯಪಾಲಿಸಿದೆವು ಹಾಗೂ ಅವರಿಗೆ ಸರ್ವಲೋಕಗಳ ಇತರೆಲ್ಲರಿಗಿಂತ ಶ್ರೇಷ್ಠ ಸ್ಥಾನವನ್ನು ಕರುಣಿಸಿದೆವು

[15] ನಾವು ಅವರಿಗೆ ಬಹಳ ಸ್ಪಷ್ಟವಾದ ಆದೇಶಗಳನ್ನು ನೀಡಿದ್ದೆವು. ಆದರೆ ತಮ್ಮ ಬಳಿಗೆ ಜ್ಞಾನವು ಬಂದ ಬಳಿಕ ಅವರು ಕೇವಲ ಪರಸ್ಪರ ಹಗೆತನದಿಂದಾಗಿ ಭಿನ್ನಾಭಿಪ್ರಾಯ ತಾಳಿದರು

[16] (ದೂತರೇ,) ಆ ಬಳಿಕ ಇದೀಗ ನಾವು ನಿಮ್ಮನ್ನು ಧರ್ಮದ ಒಂದು ನಿರ್ದಿಷ್ಟ ಹಾದಿಯಲ್ಲಿ ನಡೆಸಿರುವೆವು. ನೀವು ಅದನ್ನು ಅನುಸರಿಸಿರಿ ಮತ್ತು ನೀವು ಜ್ಞಾನವಿಲ್ಲದವರ ಇಚ್ಛೆಗಳನ್ನು ಅನುಸರಿಸಬೇಡಿ

[17] ಖಂಡಿತವಾಗಿಯೂ ಅಲ್ಲಾಹನೆದುರು ಅವರು ನಿಮ್ಮ ಯಾವ ನೆರವಿಗೂ ಬರಲಾರರು. ಅಕ್ರಮಿಗಳು ಖಂಡಿತ ಪರಸ್ಪರರ ಪೋಷಕರಾಗಿರುತ್ತಾರೆ ಮತ್ತು ಧರ್ಮ ನಿಷ್ಠರ ಪಾಲಿಗೆ ಅಲ್ಲಾಹನೇ ಪೋಷಕನಾಗಿರುತ್ತಾನೆ

[18] ಇದು (ಕುರ್‌ಆನ್) ಮಾನವರ ಕಣ್ಣು ತೆರಸುವ ಸಾಧನವಾಗಿದೆ ಮತ್ತು ಅಚಲ ನಂಬಿಕೆ ಉಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಕೃಪೆಯಾಗಿದೆ

[19] ಪಾಪಗಳನ್ನು ಸಂಪಾದಿಸಿದವರು, ನಾವು ಅವರನ್ನು, (ಸತ್ಯದಲ್ಲಿ) ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರಿಗೆ ಸಮಾನರಾಗಿ ಮಾಡುತ್ತೇವೆಂದು ಅವರ ಬದುಕು ಮತ್ತು ಅವರ ಸಾವು (ವಿಶ್ವಾಸಿ ಸತ್ಕರ್ಮಿಗಳಿಗೆ) ಸಮಾನವಾಗಿರುವುದೆಂದು ಭಾವಿಸಿದ್ದಾರೆಯೇ? ಅವರ ಲೆಕ್ಕಾಚಾರ ಬಹಳ ಕೆಟ್ಟದಾಗಿದೆ

[20] ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದ ಆಧಾರದಲ್ಲಿ ಸೃಷ್ಟಿಸಿರುವನು. (ಆದ್ದರಿಂದ) ಪ್ರತಿಯೊಬ್ಬನಿಗೂ ಅವನ ಗಳಿಕೆಯನುಸಾರ ಪ್ರತಿಫಲ ಸಿಗಲಿದೆ ಹಾಗೂ ಅವರ ಮೇಲೆ ಅನ್ಯಾಯವಾಗದು

[21] ತನ್ನ ಸ್ವೇಚ್ಛೆಯನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ನೋಡಿದಿರಾ? ಅವನು ತಿಳುವಳಿಕೆ ಉಳ್ಳವನಾಗಿದ್ದರೂ ಅಲ್ಲಾಹನು, ಅವನನ್ನು ದಾರಿಗೆಡಿಸಿ ಬಿಟ್ಟಿರುವನು ಮತ್ತು ಅವನ ಕಿವಿ ಹಾಗೂ ಅವನ ಹೃದಯದ ಮೇಲೆ ಮುದ್ರೆ ಒತ್ತಿ ಬಿಟ್ಟಿರುವನು ಮತ್ತು ಅವನ ಕಣ್ಣಿನ ಮೇಲೆ ತೆರೆ ಎಳೆದಿರುವನು. ಅಲ್ಲಾಹನ ಬಳಿಕ ಬೇರೆ ಯಾರು ತಾನೇ ಅವನಿಗೆ ಸರಿದಾರಿ ತೋರಿಸಬಲ್ಲನು? ನೀವೇನು ಅರ್ಥ ಮಾಡಿ ಕೊಳ್ಳುವುದಿಲ್ಲವೇ

[22] ‘‘ನಮ್ಮ ಇಹಲೋಕದ ಬದುಕಿನ ಆಚೆ ಬೇರೇನೂ ಇಲ್ಲ. ನಾವು ಸಾಯುತ್ತೇವೆ ಮತ್ತು ನಾವು ಬದುಕುತ್ತೇವೆ. ನಮ್ಮನ್ನು ನಾಶ ಮಾಡುವುದು ಕಾಲ ಮಾತ್ರ’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಈ ಕುರಿತು ಯಾವ ಜ್ಞಾನವೂ ಇಲ್ಲ ಅವರು ಕೇವಲ ಊಹಿಸುತ್ತಿದ್ದಾರೆ

[23] ನೀವು ಅವರಿಗೆ ನಮ್ಮ ಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಿದಾಗ, ‘‘ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ’’ ಎನ್ನುವುದಷ್ಟೇ ಅವರ ವಾದವಾಗಿರುತ್ತದೆ

[24] ಹೇಳಿರಿ; ಅಲ್ಲಾಹನೇ ನಿಮ್ಮನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ನಿಮ್ಮನ್ನು ಸಾಯಿಸುತ್ತಾನೆ. ಆ ಬಳಿಕ ನಿಸ್ಸಂದೇಹವಾಗಿ ಬರಲಿರುವ ಪುನರುತ್ಥಾನದ ದಿನ ಅವನೇ ನಿಮ್ಮನ್ನು ಒಟ್ಟು ಸೇರಿಸಲಿದ್ದಾನೆ. ಆದರೆ ಹೆಚ್ಚಿನ ಮಾನವರಿಗೆ ಅರಿವಿಲ್ಲ

[25] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅಂತಿಮ ಕ್ಷಣವು ಬಂದು ಬಿಟ್ಟ ದಿನ ಮಿಥ್ಯವಾದಿಗಳು ನಷ್ಟ ಅನುಭವಿಸುವರು

[26] ಅಂದು ನೀವು, ಎಲ್ಲ ಸಮುದಾಯಗಳು ಮೊಣಕಾಲೂರಿ ಬಿದ್ದಿರುವುದನ್ನು ಕಾಣುವಿರಿ. (ಅಂದು) ಪ್ರತಿಯೊಂದು ಸಮುದಾಯವನ್ನೂ ಅದರ ಕರ್ಮಗಳ ದಾಖಲೆಯ ಕಡೆಗೆ ಕರೆಯಲಾಗುವುದು. (ಮತ್ತು ಹೇಳಲಾಗುವುದು;) ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲ ಸಿಗಲಿದೆ

[27] ಇದು ನಿಮ್ಮ ಕುರಿತು ಸತ್ಯವನ್ನೇ ಹೇಳುವ ನಮ್ಮ ದಾಖಲೆ. ನೀವು ಮಾಡುತ್ತಿದ್ದ ಎಲ್ಲವನ್ನೂ ನಾವು ಬರೆಸಿಡುತ್ತಿದ್ದೆವು

[28] ವಿಶ್ವಾಸಿಗಳಾಗಿದ್ದವರನ್ನು ಹಾಗೂ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅವರ ಒಡೆಯನು ತನ್ನ ಕೃಪೆಯೊಳಗೆ ಸೇರಿಸುವನು. ಇದುವೇ ಸ್ಪಷ್ಟ ವಿಜಯವಾಗಿದೆ

[29] ಅತ್ತ ಧಿಕ್ಕಾರಿಗಳೊಡನೆ ಹೇಳಲಾಗುವುದು; ನಿಮಗೆ ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ಆದರೆ ನೀವು ಅಹಂಕಾರ ತೋರಿದಿರಿ ಮತ್ತು ನೀವು ಅಪರಾಧಿಗಳಾಗಿದ್ದಿರಿ

[30] ‘‘ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ ಮತ್ತು ಅಂತಿಮ ಕ್ಷಣವು ಬರುವುದರಲ್ಲಿ ಸಂದೇಹವಿಲ್ಲ ಎಂದು (ನಿಮ್ಮಾಡನೆ) ಹೇಳಲಾದಾಗ ನೀವು, – ಅಂತಿಮ ಘಳಿಗೆ ಅಂದರೇನೆಂದು ನಮಗೇನೂ ತಿಳಿಯದು, ನಾವು ಅದನ್ನು ಕೇವಲ ಒಂದು ಭ್ರಮೆ ಎಂದು ಪರಿಗಣಿಸುತ್ತೇವೆ ಮತ್ತು ನಾವಂತು ನಂಬುವವರಲ್ಲ – ಎನ್ನುತ್ತಿದ್ದಿರಿ’’

[31] ಅವರು ಮಾಡಿದ್ದ ಪಾಪಕೃತ್ಯಗಳು ಅವರ ಮುಂದೆ ಪ್ರಕಟವಾಗಿ ಬಿಡುವವು ಮತ್ತು ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದುವೇ (ಆ ಶಿಕ್ಷೆಯೇ) ಅವರನ್ನು ಆವರಿಸಿಕೊಳ್ಳುವುದು

[32] ಮತ್ತು ಅವರೊಡನೆ ಹೇಳಲಾಗುವುದು; ‘‘ನೀವು ಈ ದಿನದ ಭೇಟಿಯನ್ನು ಮರೆತಿದ್ದಂತೆ ಇಂದು ನಾವು ನಿಮ್ಮನ್ನು ಮರೆತು ಬಿಟ್ಟಿರುವೆವು. ನರಕವೇ ನಿಮ್ಮ ನೆಲೆಯಾಗಿದೆ ಮತ್ತು ನಿಮಗೆ ಸಹಾಯಕರು ಯಾರೂ ಇಲ್ಲ’’

[33] ‘‘ಇದೇಕೆಂದರೆ, ನೀವು ಅಲ್ಲಾಹನ ವಚನಗಳನ್ನು ಗೇಲಿ ಮಾಡುತ್ತಿದ್ದಿರಿ ಮತ್ತು ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸಿತ್ತು’’. ಇಂದು ಅವರಿಗೆ ಇಲ್ಲಿಂದ ಹೊರ ಹೋಗಲಿಕ್ಕೂ ಸಾಧ್ಯವಿಲ್ಲ ಮತ್ತು ಅವನನ್ನು (ಅಲ್ಲಾಹನನ್ನು) ಮೆಚ್ಚಿಸಲಿಕ್ಕೂ ಅವಕಾಶವಿಲ್ಲ

[34] ಅಲ್ಲಾಹನಿಗೆ ಕೃತಜ್ಞತೆಗಳು. ಅವನೇ ಆಕಾಶಗಳ ಒಡೆಯನೂ ಭೂಮಿಯ ಒಡೆಯನೂ ಸರ್ವ ಲೋಕಗಳ ಒಡೆಯನೂ ಆಗಿರುವನು

[35] ಆಕಾಶಗಳಲ್ಲೂ ಭೂಮಿಯಲ್ಲೂ ಹಿರಿಮೆಯು ಅವನಿಗೇ ಸೇರಿದೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

ಮುಹಮ್ಮದ್

Surah 47

[1] (ಸತ್ಯವನ್ನು) ಧಿಕ್ಕರಿಸಿದವರ ಹಾಗೂ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರ ಕರ್ಮಗಳೆಲ್ಲಾ ವ್ಯರ್ಥವಾಗಿ ಬಿಟ್ಟವು

[2] ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರು ಹಾಗೂ ಮುಹಮ್ಮದರಿಗೆ ಇಳಿಸಿ ಕೊಡಲಾಗಿರುವ ಸಂದೇಶವು ತಮ್ಮ ಒಡೆಯನ ಕಡೆಯಿಂದ (ಬಂದ) ಸತ್ಯವೆಂದು ನಂಬಿದವರು – ಅವರ ಪಾಪಗಳನ್ನು ಅವನು (ಅಲ್ಲಾಹನು) ಪರಿಹರಿಸಿದನು ಮತ್ತು ಅವರ ಸ್ಥಿತಿಯನ್ನು ಸುಧಾರಿಸಿದನು

[3] ಏಕೆಂದರೆ, ಧಿಕ್ಕಾರಿಗಳು ಮಿಥ್ಯವನ್ನು ಅನುಸರಿಸಿದರು ಹಾಗೂ ವಿಶ್ವಾಸಿಗಳು ತಮ್ಮ ಒಡೆಯನ ಕಡೆಯಿಂದ ಬಂದ ಸತ್ಯವನ್ನು ಅನುಸರಿಸಿದರು. ಅಲ್ಲಾಹನು ಈ ರೀತಿ ಮಾನವರಿಗಾಗಿ ಉದಾಹರಣೆಗಳನ್ನು ಮುಂದಿಡುತ್ತಾನೆ

[4] (ಯುದ್ಧದಲ್ಲಿ) ನೀವು ಧಿಕ್ಕಾರಿಗಳನ್ನು ಎದುರಿಸಿದಾಗ, ಕೊರಳುಗಳನ್ನು ಕತ್ತರಿಸಿರಿ. ಅವರನ್ನು ಚೆನ್ನಾಗಿ ಸದೆಬಡಿದ ಬಳಿಕ (ಉಳಿದವರನ್ನು) ಬಿಗಿಯಾಗಿ ಕಟ್ಟಿ ಹಾಕಿರಿ ಆ ಬಳಿಕ ನೀವು (ಅವರ ಮೇಲೆ) ಔದಾರ್ಯ ತೋರಬಹುದು ಅಥವಾ ಪರಿಹಾರ ಪಡೆಯಬಹುದು. ಯುದ್ಧವು ಮುಗಿಯುವ ತನಕ (ಪಾಲಿಸಬೇಕಾದ ನಿಯಮ) ಇದು. ಅಲ್ಲಾಹನು ಬಯಸಿದ್ದರೆ, ಅವರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದನು. ಆದರೆ ಅವನು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಮೂಲಕ ಪರೀಕ್ಷಿಸ ಬಯಸುತ್ತಾನೆ. ಅಲ್ಲಾಹನ ಮಾರ್ಗದಲ್ಲಿ ಹತರಾದವರ ಕರ್ಮಗಳು ವ್ಯರ್ಥವಾಗಲಾರವು

[5] ಅಲ್ಲಾಹನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು

[6] ಮತ್ತು ಅವನು ಅವರಿಗೆ ಪರಿಚಯಿಸಿರುವ ಸ್ವರ್ಗದೊಳಗೆ ಅವರನ್ನು ಸೇರಿಸುವನು

[7] ವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ನೆರವಾದರೆ ಅಲ್ಲಾಹನು ನಿಮಗೆ ನೆರವಾಗುವನು ಹಾಗೂ ನಿಮ್ಮ ಹೆಜ್ಜೆಗಳನ್ನು ಸ್ಥಿರಗೊಳಿಸುವನು

[8] ಧಿಕ್ಕರಿಸಿದವರಿಗೆ ವಿನಾಶವಿದೆ ಮತ್ತು (ಅವನು) ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿ ಬಿಡುವನು

[9] ಏಕೆಂದರೆ, ಅಲ್ಲಾಹನು ಇಳಿಸಿಕೊಟ್ಟ ಸಂದೇಶದ ಕುರಿತು ಅವರು ಜಿಗುಪ್ಸೆ ತೋರಿದರು ಮತ್ತು (ಅವನು) ಅವರ ಕರ್ಮಗಳನ್ನು ನಿರ್ನಾಮಗೊಳಿಸಿಬಿಟ್ಟನು

[10] ಅವರೇನು, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ಕಾಣಲು, ಭೂಮಿಯಲ್ಲಿ ತಿರುಗಾಡುವುದಿಲ್ಲವೇ? ಅಲ್ಲಾಹನು ಅವರ ಮೇಲೆ ವಿನಾಶವನ್ನು ಎರಗಿಸಿದನು. ಧಿಕ್ಕಾರಿಗಳಿಗೆ ಹೀಗೆಯೇ ಆಗಲಿದೆ

[11] ಏಕೆಂದರೆ, ಅಲ್ಲಾಹನು ವಿಶ್ವಾಸಿಗಳ ಪೋಷಕನಾಗಿರುತ್ತಾನೆ ಮತ್ತು ಧಿಕ್ಕಾರಿಗಳಿಗೆ ಯಾರೂ ಪೋಷಕರಿಲ್ಲ

[12] ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅಲ್ಲಾಹನು ಖಂಡಿತವಾಗಿಯೂ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳೊಳಗೆ ಸೇರಿಸುವನು. ಧಿಕ್ಕಾರಿಗಳು ಮೋಜು ಮಾಡುತ್ತಿದ್ದಾರೆ ಮತ್ತು ಜಾನುವಾರುಗಳು ತಿಂದಂತೆ ತಿನ್ನುತ್ತಿದ್ದಾರೆ. ನರಕವೇ ಅವರ ನೆಲೆಯಾಗಿರುವುದು

[13] ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳಿದ್ದವು. ನಾವು ಅವರನ್ನು (ಆ ನಾಡುಗಳ ಜನರನ್ನು) ನಾಶ ಮಾಡಿದೆವು. ಅವರಿಗೆ ನೆರವಾಗುವವರು ಯಾರೂ ಇರಲಿಲ್ಲ

[14] ತನ್ನ ಒಡೆಯನ ಕಡೆಯಿಂದ (ತೋರಲಾದ) ಸ್ಪಷ್ಟವಾದ ಮಾರ್ಗದಲ್ಲಿರುವವನು, ಯಾರಿಗೆ ತನ್ನ ದುಷ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆಯೋ ಅವನಂತಾಗಬಲ್ಲನೇ? ಅವರಂತು ತಮ್ಮ ಸ್ವೇಚ್ಛೆಗಳನ್ನಷ್ಟೇ ಅನುಸರಿಸುತ್ತಾರೆ

[15] ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು (ಹೀಗಿರುತ್ತದೆ); ಅದರಲ್ಲಿ ಎಂದೂ ಮಲಿನವಾಗದ ನೀರಿರುವ ನದಿಗಳಿರುವವು ಹಾಗೂ ರುಚಿ ಬದಲಾಗದ ಹಾಲಿನ ನದಿಗಳು, ಕುಡಿಯುವವರಿಗೆ ತುಂಬಾ ಸ್ವಾದಿಷ್ಟವಾಗಿರುವ ಮದಿರೆಯ ನದಿಗಳು ಮತ್ತು ಶುದ್ಧ ಜೇನಿನ ನದಿಗಳಿರುವವು. ಅಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲಗಳಿರುವವು ಮತ್ತು ಅವರ ಒಡೆಯನ ಕಡೆಯಿಂದ ಕ್ಷಮಾದಾನ ಸಿಗುವುದು. ಇಂಥವರು (ಸ್ವರ್ಗವಾಸಿಗಳು), ಸದಾಕಾಲ ನರಕದಲ್ಲೇ ಇರುವ ಹಾಗೂ ಕರುಳುಗಳನ್ನು ಚೂರು ಚೂರಾಗಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವ ವ್ಯಕ್ತಿಗೆ ಸಮನಾಗಬಲ್ಲರೇ

[16] (ದೂತರೇ,) ಅವರಲ್ಲಿ ಕೆಲವರು, ನಿಮ್ಮ ಮಾತನ್ನು ಆಲಿಸುತ್ತಾರೆ. ತರುವಾಯ ನಿಮ್ಮ ಬಳಿಯಿಂದ ಹೊರಟು ಹೋದ ಬಳಿಕ, ಜ್ಞಾನ ನೀಡಲಾಗಿರುವವರೊಡನೆ, (ಏನನ್ನೂ ಕೇಳದವರಂತೆ) ‘‘ಆತ ಈಗ ತಾನೇ ಹೇಳಿದ್ದೇನನ್ನು?’’ ಎಂದು ಕೇಳುತ್ತಾರೆ. ಅಲ್ಲಾಹನು ಅಂಥವರ ಮನಸ್ಸುಗಳಿಗೆ ಮುದ್ರೆ ಒತ್ತಿರುತ್ತಾನೆ ಮತ್ತು ಅವರು ತಮ್ಮ ಸ್ವೇಚ್ಛೆಯನ್ನೇ ಅನುಸರಿಸುತ್ತಾರೆ

[17] ಸನ್ಮಾರ್ಗವನ್ನು ಅನುಸರಿಸುವವರಿಗೆ ಅಲ್ಲಾಹನು ಇನ್ನಷ್ಟು ಮಾರ್ಗದರ್ಶನ ನೀಡುತ್ತಾನೆ ಮತ್ತು ಅವರಿಗೆ ಧರ್ಮನಿಷ್ಠೆಯನ್ನೂ ದಯಪಾಲಿಸುತ್ತಾನೆ

[18] ಅವರು ಕಾಯುತ್ತಿರುವುದು ಲೋಕಾಂತ್ಯದ ಕ್ಷಣವು ಹಠಾತ್ತನೆ ತಮ್ಮ ಮೇಲೆ ಬಂದೆರಗುವುದಕ್ಕೆ ತಾನೇ? ಅದರ ಮುನ್ಸೂಚನೆಗಳು ಈಗಾಗಲೇ ಬಂದಿವೆ. ಅದು ಬಂದು ಬಿಟ್ಟ ಬಳಿಕ ಅವರಿಗೆ ಉಪದೇಶ ಸ್ವೀಕರಿಸುವ ಅವಕಾಶವೇ ಎಲ್ಲಿರುವುದು

[19] ನಿಮಗೆ ತಿಳಿದಿರಲಿ. ಆ ಅಲ್ಲಾಹನ ಹೊರತು ಬೇರೆ ದೇವರಿಲ್ಲ. ನೀವು ನಿಮ್ಮ ಹಾಗೂ ಎಲ್ಲ ವಿಶ್ವಾಸಿ ಪುರುಷರ ಹಾಗೂ ವಿಶ್ವಾಸಿ ಸ್ತ್ರೀಯರ ಪರವಾಗಿ ಕ್ಷಮೆ ಬೇಡಿರಿ. ನೀವು ನಡೆದಾಡುವ ಸ್ಥಳಗಳನ್ನೂ ನೀವು ವಿರಮಿಸುವ ಸ್ಥಳಗಳನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು

[20] (ದೂತರೇ,) ವಿಶ್ವಾಸಿಗಳಾದವರು, ಒಂದು ಅಧ್ಯಾಯವನ್ನೇಕೆ ಇಳಿಸಲಾಗಿಲ್ಲ ಎಂದು ಕೇಳುತ್ತಾರೆ. ಕೊನೆಗೆ, ಬಹಳ ಸ್ಪಷ್ಟ ಆದೇಶವಿರುವ ಹಾಗೂ ಯುದ್ಧದ ಪ್ರಸ್ತಾಪವಿರುವ ಒಂದು ಅಧ್ಯಾಯವನ್ನು ಇಳಿಸಲಾದಾಗ, ಮನದಲ್ಲಿ ರೋಗವಿರುವವರು, ಮಾರಣಾಂತಿಕ ಮೂರ್ಛೆಗೊಳಗಾದವರು ನೋಡುವಂತೆ ನಿಮ್ಮತ್ತ ನೋಡ ತೊಡಗುತ್ತಾರೆ. ಅವರಿಗೆ ವಿನಾಶ ಕಾದಿದೆ

[21] ಅನುಸರಣೆ ಹಾಗೂ ಸೌಜನ್ಯದ ಮಾತು (ಇದು ಅವರ ಕರ್ತವ್ಯ). ಮತ್ತು ವಿಷಯವು ನಿರ್ಧಾರವಾದ ಬಳಿಕ ಅವರು, ಅಲ್ಲಾಹನ ಜೊತೆಗಿನ ತಮ್ಮ ಕರಾರಿನ ಪಾಲನೆ ಮಾಡಿದ್ದರೆ – ಅವರ ಪಾಲಿಗೆ ಅದುವೇ ಚೆನ್ನಾಗಿರುತ್ತಿತ್ತು

[22] ಇನ್ನು ನೀವು ತಿರುಗಿ ನಿಂತರೆ, ನೀವು ಅಧಿಕಾರಸ್ಥರಾದಾಗ ನೀವು ಭೂಮಿಯಲ್ಲಿ ಅಶಾಂತಿಯನ್ನು ಮೆರೆದು ನಿಮ್ಮ ಬಾಂಧವ್ಯಗಳನ್ನೆಲ್ಲಾ ಮುರಿದು ಬಿಡುವ ಸಾಧ್ಯತೆ ಇಲ್ಲವೇ

[23] ಅವರೇ, ಅಲ್ಲಾಹನ ಶಾಪಕ್ಕೆ ತುತ್ತಾದವರು. ಅವನು ಅವರನ್ನು ಕಿವುಡರಾಗಿಸಿರುವನು ಮತ್ತು ಅವರ ಕಣ್ಣುಗಳನ್ನು ಕುರುಡಾಗಿಸಿರುವನು

[24] ಅವರೇನು, ಕುರ್‌ಆನಿನ ಕುರಿತು ಚಿಂತನೆ ನಡೆಸುವುದಿಲ್ಲವೇ? ಅವರ ಮನಸ್ಸುಗಳಿಗೇನು ಬೀಗ ಜಡಿದಿದೆಯೇ

[25] ಸನ್ಮಾರ್ಗವು ತಮಗೆ ಸ್ಪಷ್ಟವಾದ ಬಳಿಕ (ಅದರಿಂದ) ಬೆನ್ನು ತಿರುಗಿಸಿ ಹೊರಟವರನ್ನು ಖಂಡಿತವಾಗಿಯೂ ಶೈತಾನನು ವಂಚಿಸಿದನು ಮತ್ತು ಅವರಲ್ಲಿ ಹುಸಿ ನಿರೀಕ್ಷೆಗಳನ್ನು ಬೆಳೆಸಿದನು

[26] ಏಕೆಂದರೆ ಅವರು, ಅಲ್ಲಾಹನು ಇಳಿಸಿ ಕೊಟ್ಟಿರುವ ಸಂದೇಶವನ್ನು (ಕುರ್‌ಆನನ್ನು) ದ್ವೇಷಿಸುವವರೊಡನೆ, ‘‘ನಾವು ಕೆಲವು ವಿಷಯಗಳಲ್ಲಿ ನಿಮ್ಮ ಆದೇಶ ಪಾಲಿಸುವೆವು’’ ಎಂದು ಹೇಳಿರುವರು. ಅವರ ಗುಪ್ತ ಮಾತುಗಳನ್ನು ಅಲ್ಲಾಹನು ಬಲ್ಲನು

[27] ಮಲಕ್‌ಗಳು, ಅವರ ಮುಖ ಮತ್ತು ಅವರ ಬೆನ್ನುಗಳಿಗೆ ಹೊಡೆಯುತ್ತಾ ಅವರ ಜೀವವನ್ನು ವಶಪಡಿಸಿಕೊಳ್ಳುವಾಗ (ಅವರ ಸ್ಥಿತಿ) ಹೇಗಿದ್ದೀತು

[28] ಇದೇಕೆಂದರೆ, ಅವರು ಅಲ್ಲಾಹನನ್ನು ಕೋಪಗೊಳಿಸಿದವರನ್ನು ಅನುಸರಿಸಿದರು ಮತ್ತು ಅವನ ಮೆಚ್ಚುಗೆಯು ಅವರಿಗೆ ಅಪ್ರಿಯವಾಗಿತ್ತು. ಅವನು ಅವರ ಕರ್ಮಗಳನ್ನೆಲ್ಲಾ ವ್ಯರ್ಥಗೊಳಿಸಿಬಿಟ್ಟನು

[29] ಮನಸ್ಸುಗಳಲ್ಲಿ ರೋಗವಿರುವವರು, ತಮ್ಮೊಳಗೆ ಅಡಗಿರುವ ದ್ವೇಷವನ್ನು ಅಲ್ಲಾಹನು ಹೊರ ತರಲಾರನೆಂದು ಭಾವಿಸಿದ್ದಾರೆಯೇ

[30] (ದೂತರೇ,) ನಾವು ಬಯಸಿದರೆ, ಅವರನ್ನು ನಿಮಗೆ ತೋರಿಸಿ ಬಿಡುವೆವು. ಆಗ ನೀವು ಅವರ ಮುಖಗಳಿಂದಲೇ ಅವರನ್ನು ಅರಿಯುವಿರಿ ಹಾಗೂ ಅವರ ಮಾತಿನ ಶೈಲಿಯಿಂದ ನೀವು ಅವರನ್ನು ಗುರುತಿಸುವಿರಿ. ಅಲ್ಲಾಹನು ನಿಮ್ಮ ಕರ್ಮಗಳನ್ನು ಬಲ್ಲನು

[31] ನಿಮ್ಮಲ್ಲಿ ಹೋರಾಟಗಾರರು ಯಾರು ಹಾಗೂ ಸಹನಶೀಲರು ಯಾರು ಎಂಬುದು ನಮಗೆ ತಿಳಿಯುವ ತನಕ ನಾವು ನಿಮ್ಮನ್ನು ಪರೀಕ್ಷಿಸುವೆವು ಮತ್ತು ನಾವು ನಿಮ್ಮ ಸ್ಥಿತಿಗತಿಗಳನ್ನು ಪರೀಕ್ಷಿಸುತ್ತಿರುವೆವು

[32] ಸನ್ಮಾರ್ಗವು ತಮಗೆ ಸ್ಪಷ್ಟವಾದ ಬಳಿಕ (ಅದನ್ನು) ಧಿಕ್ಕರಿಸಿದವರು, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ದೂತರನ್ನು ವಿರೋಧಿಸಿದವರು, ಅಲ್ಲಾಹನಿಗೆ ಖಂಡಿತ ಯಾವ ಹಾನಿಯನ್ನೂ ಮಾಡಲಾರರು. ಅವನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು

[33] ವಿಶ್ವಾಸಿಗಳೇ, ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಹಾಗೂ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ನಿಮ್ಮ ಕರ್ಮಗಳನ್ನು ವ್ಯರ್ಥಗೊಳಿಸಬೇಡಿ

[34] (ಸತ್ಯವನ್ನು) ಧಿಕ್ಕರಿಸಿದವರು ಹಾಗೂ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ಧಿಕ್ಕಾರಿಗಳಾಗಿಯೇ ಸತ್ತು ಹೋದವರು – ಅಲ್ಲಾಹನು ಅವರನ್ನು ಖಂಡಿತ ಕ್ಷಮಿಸಲಾರನು

[35] ನೀವಿನ್ನು ಎದೆಗುಂದಬೇಡಿ ಹಾಗೂ ಸಂಧಾನಕ್ಕಾಗಿ ಮೊರೆ ಇಡಬೇಡಿ. ನೀವೇ ವಿಜಯಿಗಳಾಗುವಿರಿ. ಅಲ್ಲಾಹನು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮ ಕರ್ಮಗಳನ್ನು (ಅವುಗಳ ಪ್ರತಿಫಲವನ್ನು) ಕಡಿಮೆಗೊಳಿಸಲಾರನು

[36] ಇಹಲೋಕದ ಬದುಕು ಕೇವಲ ಆಟ ಹಾಗೂ ಮೋಜಾಗಿದೆ. ನೀವು ವಿಶ್ವಾಸಿಗಳೂ ಧರ್ಮನಿಷ್ಠರೂ ಆಗಿದ್ದರೆ ಅವನು ನಿಮಗೆ ನಿಮ್ಮ ಪ್ರತಿಫಲವನ್ನು ನೀಡುವನು ಹಾಗೂ ಅವನು ನಿಮ್ಮೊಡನೆ ನಿಮ್ಮ ಸಂಪತ್ತನ್ನು ಕೇಳಲಾರನು

[37] ಅವನು ನಿಮ್ಮೊಡನೆ ಅದನ್ನು (ನಿಮ್ಮ ಸಂಪತ್ತನ್ನು) ಕೇಳಿದರೆ ಮತ್ತು ಬೆನ್ನು ಬಿಡದೆ ಕೇಳುತ್ತಲೇ ಇದ್ದರೆ, ನೀವು ಜಿಪುಣತೆ ತೋರುವಿರಿ ಮತ್ತು ನಿಮ್ಮ ಒಳಗಿನ ದ್ವೇಷವೆಲ್ಲಾ ಪ್ರಕಟವಾಗಿ ಬಿಡುವುದು

[38] ಹೌದು ನೀವು ಅಂಥವರು. ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರೆಂದು ನಿಮಗೆ ಕರೆ ನೀಡಲಾದಾಗ, ನಿಮ್ಮಲ್ಲಿ ಕೆಲವರು ಜಿಪುಣತೆ ತೋರುತ್ತಾರೆ. ನಿಜವಾಗಿ ಜಿಪುಣತೆ ತೋರುವವನು ಸ್ವತಃ ತನ್ನ ವಿರುದ್ಧವೇ ಜಿಪುಣತೆ ತೋರುತ್ತಾನೆ. ಅಲ್ಲಾಹನಂತು ಸಂಪನ್ನನಾಗಿದ್ದಾನೆ ಮತ್ತು ನೀವು ಬಡವರು. ನೀವು ಮುಖ ತಿರುಗಿಸಿಕೊಂಡರೆ, ಅವನು ನಿಮ್ಮ ಬದಲಿಗೆ ಬೇರೊಂದು ಸಮುದಾಯವನ್ನು ಮುಂದೆ ತರುವನು. ಅವರು ನಿಮ್ಮಂತಿರಲಾರರು

ವಿಜಯ

Surah 48

[1] (ದೂತರೇ,) ನಾವು ಖಂಡಿತ ನಿಮಗೆ ಒಂದು ಸ್ಪಷ್ಟ ವಿಜಯವನ್ನು ನೀಡಿರುವೆವು

[2] ಅಲ್ಲಾಹನು ನಿಮಗಾಗಿ ನಿಮ್ಮ ಹಿಂದಿನ ಹಾಗೂ ಮುಂದಿನ ಪಾಪಗಳನ್ನು ಕ್ಷಮಿಸಿ, ನಿಮ್ಮ ಪಾಲಿಗೆ ತನ್ನ ಅನುಗ್ರಹಗಳನ್ನು ಸಂಪೂರ್ಣಗೊಳಿಸಿ ನಿಮ್ಮನ್ನು ಸ್ಥಿರವಾದ ಸನ್ಮಾರ್ಗದಲ್ಲಿ ಮುನ್ನಡೆಸಲಿದ್ದಾನೆ

[3] ಮತ್ತು ಪ್ರಬಲ ಬೆಂಬಲದ ಮೂಲಕ ನಿಮಗೆ ನೆರವಾಗಲಿದ್ದಾನೆ

[4] ಅವನೇ, ವಿಶ್ವಾಸಿಗಳ ವಿಶ್ವಾಸಕ್ಕೆ ಇನ್ನಷ್ಟು ವಿಶ್ವಾಸವನ್ನು ಸೇರಿಸುವುದಕ್ಕಾಗಿ, ಅವರ ಮನಸ್ಸುಗಳಿಗೆ ಪ್ರಶಾಂತತೆಯನ್ನು ಇಳಿಸಿಕೊಟ್ಟವನು. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪಡೆಗಳೆಲ್ಲಾ ಅವನಿಗೇ ಸೇರಿವೆ ಮತ್ತು ಅವನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[5] ಅವನು ವಿಶ್ವಾಸಿ ಪುರುಷರು ಹಾಗೂ ವಿಶ್ವಾಸಿ ಸ್ತ್ರೀಯರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅಲ್ಲಿ ಅವರು ಸದಾಕಾಲ ಇರುವರು. ಮತ್ತು ಅವನು ಅವರಿಂದ ಅವರ ಪಾಪಗಳನ್ನು ನಿವಾರಿಸುವನು. ಅಲ್ಲಾಹನ ಬಳಿ ಇದು ಮಹಾ ವಿಜಯವಾಗಿದೆ

[6] ಮತ್ತು ಅಲ್ಲಾಹನು ತನ್ನ ಕುರಿತು ಅಪನಂಬಿಕೆ ಇಟ್ಟುಕೊಂಡಿದ್ದ ಕಪಟ ಪುರುಷರು ಹಾಗೂ ಕಪಟ ಸ್ತ್ರೀಯರನ್ನು ಮತ್ತು ಬಹುದೇವಾರಾಧಕ ಪುರುಷರನ್ನು ಹಾಗೂ ಬಹುದೇವಾರಾಧಕ ಸ್ತ್ರೀಯರನ್ನು ಶಿಕ್ಷಿಸಲಿದ್ದಾನೆ. ದೌರ್ಭಾಗ್ಯವು ಅವರನ್ನು ಸುತ್ತುವರಿದುಕೊಂಡಿದೆ. ಅವರ ವಿರುಧ್ಧ ಅಲ್ಲಾಹನು ಕೋಪಗೊಂಡಿರುವನು ಹಾಗೂ ಅವರನ್ನು ಶಪಿಸಿರುವನು ಮತ್ತು ಅವರಿಗಾಗಿ ನರಕವನ್ನು ಸಿದ್ಧಗೊಳಿಸಿರುವನು. ಅದು ಬಹಳ ಕೆಟ್ಟ ನೆಲೆಯಾಗಿದೆ

[7] ಆಕಾಶಗಳ ಹಾಗೂ ಭೂಮಿಯ ಪಡೆಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[8] (ದೂತರೇ,) ನಾವು ಖಂಡಿತ ನಿಮ್ಮನ್ನು ಸಾಕ್ಷಿಯಾಗಿ, ಶುಭವಾರ್ತೆ ನೀಡುವವರಾಗಿ ಹಾಗೂ ಮುನ್ನೆಚ್ಚರಿಸುವವರಾಗಿ ಕಳಿಸಿರುವೆವು

[9] (ಜನರೇ,) ನೀವು ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಡಬೇಕು ಹಾಗೂ ಅವರಿಗೆ ನೆರವಾಗಬೇಕು ಮತ್ತು ಅವರನ್ನು ಗೌರವಿಸಬೇಕೆಂದು ಹಾಗೆಯೇ ನೀವು ಮುಂಜಾನೆ ಮತ್ತು ಸಂಜೆ ಅವನ(ಅಲ್ಲಾಹನ) ಪಾವಿತ್ರವನ್ನು ಜಪಿಸಬೇಕೆಂದು

[10] (ದೂತರೇ,) ನಿಮ್ಮ ಮುಂದೆ ಪ್ರಮಾಣ ಮಾಡುತ್ತಿರುವವರು ನಿಜವಾಗಿ ಅಲ್ಲಾಹನ ಮುಂದೆ ಪ್ರಮಾಣ ಮಾಡಿದರು. ಅವರ ಕೈಗಳ ಮೇಲೆ ಅಲ್ಲಾಹನ ಕೈ ಇದೆ. ಇನ್ನು, ಪ್ರಮಾಣ ಮುರಿದವರು ನಿಜವಾಗಿ ಸ್ವತಃ ತಮ್ಮ ವಿರುದ್ಧವೇ ಪ್ರಮಾಣವನ್ನು ಮುರಿದರು. ಅಲ್ಲಾಹನ ಜೊತೆ ಮಾಡಿಕೊಂಡ ಪ್ರಮಾಣವನ್ನು ಪೂರ್ತಿಗೊಳಿಸಿದವನಿಗೆ ಮಹಾ ಪ್ರತಿಫಲವು ಸಿಗಲಿದೆ

[11] (ಕಾರ್ಯಾಚರಣೆಯಲ್ಲಿ ಭಾಗವಹಿಸದೆ) ಹಿಂದುಳಿದುಕೊಂಡ ಹಳ್ಳಿಯವರು, ‘‘ನಮ್ಮ ಸಂಪತ್ತು ಹಾಗೂ ನಮ್ಮ ಕುಟುಂಬಗಳು ನಮ್ಮನ್ನು ಕಾರ್ಯನಿರತವಾಗಿಟ್ಟಿದ್ದವು. ನೀವೀಗ ನಮ್ಮ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ’’ ಎಂದು ನಿಮ್ಮೊಡನೆ ಹೇಳುವರು. ನಿಜವಾಗಿ, ಅವರು ತಮ್ಮ ಮನಸ್ಸುಗಳಲ್ಲಿ ಇಲ್ಲದ ಮಾತನ್ನು ತಮ್ಮ ನಾಲಗೆಯಿಂದ ಹೇಳುತ್ತಾರೆ. ಅಲ್ಲಾಹನು ನಿಮಗೆ ಹಾನಿ ಮಾಡ ಬಯಸಿದರೂ ಹಿತವನ್ನು ಮಾಡಬಯಸಿದರೂ ಅವನೆದುರು ನಿಮಗೆ ನೆರವಾಗುವ ಅಧಿಕಾರ ಯಾರಿಗಿದೆ? ನೀವು ಮಾಡುತ್ತಿರುವ ಎಲ್ಲವುಗಳ ಕುರಿತು ಅವನಿಗೆ ಅರಿವಿದೆ

[12] ನಿಜವಾಗಿ, ದೇವದೂತರು ಹಾಗೂ ವಿಶ್ವಾಸಿಗಳು ಎಂದೆಂದಿಗೂ (ಕಾರ್ಯಾಚರಣೆಯಿಂದ) ಮರಳಿ, ತಮ್ಮ ಮನೆಯವರ ಬಳಿಗೆ ಬರಲಾರರೆಂದೇ ಅವರು ಗ್ರಹಿಸಿದ್ದರು. ಇದು (ಈ ಆಲೋಚನೆಯು) ನಿಮ್ಮ ಮನಸ್ಸುಗಳಿಗೆ ಚೆನ್ನಾಗಿ ತೋಚಿತು ಮತ್ತು ನೀವು ಒಂದು ಲೆಕ್ಕಾಚಾರ ಮಾಡಿರಿ – ಬಹಳ ಕೆಟ್ಟ ಲೆಕ್ಕಾಚಾರ. ನೀವು ವಿನಾಶಶೀಲ ಜನಾಂಗವಾಗಿರುವಿರಿ

[13] ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಲ್ಲದವರು – ಅಂತಹ ಧಿಕ್ಕಾರಿಗಳಿಗಾಗಿ ಖಂಡಿತ ನಾವು ಭುಗಿಲೇಳುವ ಬೆಂಕಿಯನ್ನು ತಯಾರಿಸಿಟ್ಟಿರುವೆವು

[14] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೆ ಸೇರಿದೆ. ಅವನು ತಾನಿಚ್ಚಿಸಿದವರನ್ನು ಕ್ಷಮಿಸುತ್ತಾನೆ ಹಾಗೂ ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅವನು ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ

[15] ನೀವು (ಖೈಬರ್‌ನ) ಯುದ್ಧ ಸಂಪಾದನೆಯನ್ನು ಸಂಗ್ರಹಿಸಲು ಹೊರಟಾಗ, ಹಿಂದುಳಿದುಕೊಂಡಿದ್ದ ಆ ಜನರು, ‘‘ನಮ್ಮನ್ನೂ ನಿಮ್ಮ ಹಿಂದೆ ಬರಲು ಬಿಡಿರಿ’’ ಎನ್ನುತ್ತಾರೆ. ಅವರು ಅಲ್ಲಾಹನ ಆದೇಶವನ್ನು ಬದಲಿಸ ಬಯಸುತ್ತಾರೆ. ‘‘ನೀವು ನಮ್ಮ ಹಿಂದೆ ಬರಬೇಡಿ. ಹಾಗೆಂದು ಅಲ್ಲಾಹನು ಮೊದಲೇ ನಿಮ್ಮ ಕುರಿತು ಹೇಳಿರುವನು’’ ಎಂದು ಹೇಳಿರಿ. ಆಗ ಅವರು, ‘‘ನಮ್ಮ ಕುರಿತು ನೀವು ಅಸೂಯೆ ಪಡುತ್ತಿದ್ದೀರಿ’’ ಎನ್ನುವರು. ನಿಜವಾಗಿ ಅವರು ಅರ್ಥ ಮಾಡಿಕೊಳ್ಳುವುದೇ ತೀರಾಕಡಿಮೆ

[16] ಹಳ್ಳಿಗರ ಪೈಕಿ ಈ ರೀತಿ ಹಿಂದೆ ಉಳಿದುಕೊಂಡವರೊಡನೆ ಹೇಳಿರಿ; ‘‘ಭಾರೀ ಶಕ್ತಿಶಾಲಿ ಪಂಗಡವೊಂದರ ವಿರುದ್ಧ (ಹೋರಾಟಕ್ಕೆ) ನಿಮ್ಮನ್ನು ಶೀಘ್ರವೇ ಕರೆಯಲಾಗುವುದು. ಒಂದೋ ನೀವು ಅವರ ವಿರುದ್ಧ ಯುದ್ಧ ಮಾಡುತ್ತಲೇ ಇರಬೇಕು ಅಥವಾ ಅವರು ಶರಣಾಗಬೇಕು. ನೀವು ಆದೇಶ ಪಾಲಿಸಿದರೆ ಅಲ್ಲಾಹನು ನಿಮಗೆ ಉತ್ತಮ ಪ್ರತಿಫಲ ನೀಡುವನು. ಇನ್ನು ನೀವು, ಈ ಹಿಂದೆ ತಿರುಗಿನಿಂತಂತೆ, ತಿರುಗಿನಿಂತರೆ ಅವನು (ಅಲ್ಲಾಹನು) ನಿಮಗೆ ಕಠಿಣ ಶಿಕ್ಷೆ ನೀಡುವನು’’

[17] ಕುರುಡನ ಮೇಲೆ ಪಾಪವೇನಿಲ್ಲ, ಕುಂಟನ ಮೇಲೂ ಪಾಪವಿಲ್ಲ, ರೋಗಗ್ರಸ್ತನ ಮೇಲೂ ಪಾಪವಿಲ್ಲ. (ಅವರಿಗೆಲ್ಲಾ ಯುದ್ಧದಿಂದ ವಿನಾಯ್ತಿ ಇದೆ). ಅಲ್ಲಾಹ್ ಹಾಗೂ ಅವನ ದೂತರ ಆದೇಶ ಪಾಲಿಸುವವನನ್ನು ಅವನು, ತಳದಲ್ಲಿ ನದಿಗಳು ಹರಿಯುತ್ತಿರುವ ತೋಟಗಳೊಳಗೆ ಸೇರಿಸುವನು ಮತ್ತು ಅವಿಧೇಯನಾದವನಿಗೆ ಕಠಿಣ ಶಿಕ್ಷೆಯನ್ನು ನೀಡುವನು

[18] (ದೂತರೇ,) ಮರದ ಕೆಳಗೆ, ನಿಮ್ಮೊಂದಿಗೆ ಪ್ರಮಾಣ ಮಾಡುತ್ತಿದ್ದ ವಿಶ್ವಾಸಿಗಳಿಂದ ಅಲ್ಲಾಹನು ಖಂಡಿತ ಸಂತುಷ್ಟನಾದನು. ಅವರ ಮನಸ್ಸುಗಳಲ್ಲಿ ಏನಿತ್ತೆಂಬುದನ್ನು ಅವನು ಬಲ್ಲನು. ಅವನು ಅವರಿಗೆ ನೆಮ್ಮದಿಯನ್ನು ಇಳಿಸಿಕೊಟ್ಟನು ಹಾಗೂ ಅವರಿಗೆ ಒಂದು ಶೀಘ್ರ ವಿಜಯದ ಪುರಸ್ಕಾರವನ್ನು ದಯಪಾಲಿಸಿದನು

[19] ಮತ್ತು ಅವರು ಧಾರಾಳ ಯುದ್ಧ ಸಂಪತ್ತನ್ನು ಗಳಿಸಿದರು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುವನು

[20] ಅಲ್ಲಾಹನು ನಿಮಗೆ, ನೀವು ಧಾರಾಳ ಯುದ್ಧ ಸಂಪತ್ತನ್ನು ಗಳಿಸುವಿರೆಂದು ವಾಗ್ದಾನ ಮಾಡಿದ್ದನು. ಅವನೀಗ ಬಹುಬೇಗನೇ ಅದನ್ನು ನಿಮಗೆ ಕೊಟ್ಟಿರುವನು ಹಾಗೂ ನಿಮ್ಮ ವಿರುದ್ಧ (ಎತ್ತದಂತೆ) ಜನರ ಕೈಗಳನ್ನು ತಡೆದಿಟ್ಟಿರುವನು. (ಇದು,) ವಿಶ್ವಾಸಿಗಳ ಪಾಲಿಗೆ ಪುರಾವೆಯಾಗಲಿಕ್ಕಾಗಿ ಹಾಗೂ ನಿಮ್ಮನ್ನು ಸ್ಥಿರವಾದ ಸನ್ಮಾರ್ಗದೆಡೆಗೆ ನಡೆಸಲಿಕ್ಕಾಗಿ

[21] ನಿಮ್ಮ ನಿಯಂತ್ರಣದಲ್ಲಿಲ್ಲದ ಇನ್ನೂ ಹಲವು (ವಿಷಯಗಳು) ಇವೆ. ಅಲ್ಲಾಹನು ಅವುಗಳನ್ನು ಆವರಿಸಿಕೊಂಡಿದ್ದಾನೆ. ಅವನಂತೂ ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[22] ಒಂದು ವೇಳೆ ಧಿಕ್ಕಾರಿಗಳು ನಿಮ್ಮ ವಿರುದ್ಧ ಯುದ್ಧ ಮಾಡಿದ್ದರೆ ಅವರು ಬೆನ್ನು ತಿರುಗಿಸಿ ಓಡಬೇಕಾಗುತ್ತಿತ್ತು ಮತ್ತು ಅವರಿಗೆ ರಕ್ಷಕರಾಗಲಿ ಸಹಾಯಕರಾಗಲಿ ಯಾರೂ ಸಿಗುತ್ತಿರಲಿಲ್ಲ

[23] ಇದು, ಹಿಂದಿನಿಂದಲೂ ನಡೆದು ಬಂದಿರುವ ಅಲ್ಲಾಹನ ನಿಯಮ. ಅಲ್ಲಾಹನ ನಿಯಮದಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ

[24] ನಿಮಗೆ ಅವರ (ಧಿಕ್ಕಾರಿಗಳ) ವಿರುದ್ಧ ಪ್ರಾಬಲ್ಯ ಒದಗಿಸಿದ ಬಳಿಕ, ಮಕ್ಕಃದಲ್ಲಿ ಅವರು ನಿಮ್ಮ ಮೇಲೆ ಕೈ ಎತ್ತದಂತೆ ಹಾಗೂ ನೀವು ಅವರ ಮೇಲೆ ಕೈ ಎತ್ತದಂತೆ ತಡೆದವನು ಅವನೇ (ಅಲ್ಲಾಹನೇ). ನೀವು ಮಾಡುತ್ತಿದ್ದ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದನು

[25] ಅವರೇ ಧಿಕ್ಕರಿಸಿದವರು ಹಾಗೂ ನಿಮ್ಮನ್ನು ಮಸ್ಜಿದುಲ್ ಹರಾಮ್‌ಗೆ ಹೋಗದಂತೆ ತಡೆದವರು ಹಾಗೂ ಬಲಿಗಾಗಿ ನಿಲ್ಲಿಸಲಾಗಿದ್ದ ಪ್ರಾಣಿಗಳು ಅವುಗಳ ನೆಲೆಯನ್ನು ತಲುಪದಂತೆ ತಡೆದವರು. ಒಂದು ವೇಳೆ (ಮಕ್ಕಃದಲ್ಲಿ) ನೀವು ನಿಮಗೆ ಪರಿಚಯವಿಲ್ಲದ ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ನಾಶ ಮಾಡಿ, ಆ ಮೂಲಕ, ನಿಮಗೆ ಅರಿವಿಲ್ಲದೆ ಒಂದು ದೊಡ್ಡ ಪ್ರಮಾದ ಎಸಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ (ಯುದ್ಧವನ್ನು ಸಮ್ಮತಿಸಲಾಗುತ್ತಿತ್ತು). ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯೊಳಗೆ ಸೇರಿಸುವಂತಾಗಲು (ಅದನ್ನು ವಿಳಂಬಿಸಲಾಯಿತು). ಒಂದು ವೇಳೆ (ವಿಶ್ವಾಸಿಗಳು ಹಾಗೂ ಧಿಕ್ಕಾರಿಗಳು) ಸಂಪೂರ್ಣ ಬೇರ್ಪಟ್ಟಿದ್ದರೆ ನಾವು ಅವರ ಪೈಕಿ ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದೆವು

[26] ಧಿಕ್ಕಾರಿಗಳು ತಮ್ಮ ಮನಗಳಲ್ಲಿ ಉದ್ಧಟತನವನ್ನು (ಮಾತ್ರವಲ್ಲ,) ಅಜ್ಞಾನದ ಉದ್ಧಟತನವನ್ನು ಬೆಳೆಸಿಕೊಂಡಾಗ, ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಮನಃ ಶಾಂತಿಯನ್ನು ಇಳಿಸಿಕೊಟ್ಟನು ಮತ್ತು ಅವರನ್ನು ಧರ್ಮನಿಷ್ಠೆಯ ಮಾತಿನಲ್ಲಿ ಸ್ಥಿರಗೊಳಿಸಿದನು. ಅವರು ಅದಕ್ಕೆ ಹೆಚ್ಚು ಅರ್ಹರು ಹಾಗೂ ಯೋಗ್ಯರಾಗಿದ್ದರು. ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ

[27] ಅಲ್ಲಾಹನು ನಿಜಕ್ಕೂ ತನ್ನ ದೂತರಿಗೆ ಸತ್ಯಕ್ಕನುಸಾರವಾದ ಕನಸನ್ನೇ ತೋರಿಸಿದ್ದನು; ಅಲ್ಲಾಹನಿಚ್ಛಿಸಿದರೆ ನೀವು ಖಂಡಿತ ಶಾಂತಿಯೊಂದಿಗೆ, ಮಸ್ಜಿದುಲ್ ಹರಾಮನ್ನು ಪ್ರವೇಶಿಸುವಿರಿ. (ಕೆಲವರು) ತಲೆಬೋಳಿಸಿಕೊಂಡು ಹಾಗೂ (ಕೆಲವರು) ಕೂದಲು ಕತ್ತರಿಸಿಕೊಂಡು (ಪ್ರವೇಶಿಸುವರು). ನಿಮಗೆ ಯಾವ ಭಯವೂ ಇರದು. ನಿಮಗೆ ತಿಳಿದಿಲ್ಲದ ಸಂಗತಿಗಳನ್ನು ಅವನು ತಿಳಿದಿರುವನು. ಇದು (ಮಕ್ಕಃ ವಿಜಯ) ಮಾತ್ರವಲ್ಲದೆ, ಬೇರೊಂದು ವಿಜಯವನ್ನೂ ಅವನು ಈಗಾಗಲೇ ನಿಮಗೆ ನೀಡಿರುವನು

[28] ಅವನೇ, ತನ್ನ ದೂತರನ್ನು ಮಾರ್ಗದರ್ಶನ ಹಾಗೂ ಸತ್ಯಧರ್ಮದೊಂದಿಗೆ ಕಳಿಸಿರುವವನು – ಅದನ್ನು ಇತರೆಲ್ಲ ಧರ್ಮಗಳೆದುರು ವಿಜಯಿಯಾಗಿಸಲಿಕ್ಕಾಗಿ. ಇದಕ್ಕೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು

[29] ಮುಹಮ್ಮದರು ಅಲ್ಲಾಹನ ದೂತರು. ಅವರ ಜೊತೆಗಿರುವವರು ಧಿಕ್ಕಾರಿಗಳ ಪಾಲಿಗೆ ಕಠೋರರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅವರು (ಅಲ್ಲಾಹನ ಮುಂದೆ) ಬಾಗುತ್ತಲೂ ಸಾಷ್ಟಾಂಗ ವೆರಗುತ್ತಲೂ ಇರುವುದನ್ನು ಮತ್ತು ಅಲ್ಲಾಹನ ಅನುಗ್ರಹ ಹಾಗೂ ಅವನ ಮೆಚ್ಚುಗೆಯನ್ನು ಅರಸುತ್ತಲಿರುವುದನ್ನು ನೀವು ಕಾಣುವಿರಿ. ಅವರ ಲಕ್ಷಣವೇನೆಂದರೆ, ಸಾಷ್ಟಾಂಗವಂದನೆಯ ಪ್ರಭಾವವು ಅವರ ಮುಖಗಳಲ್ಲಿರುವುದು. ತೌರಾತ್‌ನಲ್ಲಿ ಅವರ ಲಕ್ಷಣವು ಹೀಗೆಯೇ ಇದೆ ಮತ್ತು ಇಂಜೀಲ್‌ನಲ್ಲಿ ಅವರ ಲಕ್ಷಣವು ಹೀಗಿದೆ; ತನ್ನ ತೆನೆಯನ್ನು ಮೊಳೆಯಿಸುವ ಒಂದು ಹೊಲದಂತೆ. ಅದು ಅದನ್ನು ಬಲಪಡಿಸುತ್ತಿರುತ್ತದೆ. ಕೊನೆಗೆ ಅದು ಬಲಿಷ್ಠವಾಗಿ ಸ್ವತಃ ತನ್ನ ಕಾಂಡದ ಮೇಲೆ ನಿಲ್ಲುತ್ತದೆ. ಅದನ್ನು ಕಂಡು ಕೃಷಿಕರಿಗೆ ಸಂತಸವಾಗುತ್ತದೆ. ಧಿಕ್ಕಾರಿಗಳು ಉರಿದು ಬೀಳಲೆಂದು (ವಿಶ್ವಾಸಿಗಳನ್ನು ಈ ರೀತಿ ಬೆಳೆಸಲಾಗುತ್ತದೆ). ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುವವರಿಗೆ ಅಲ್ಲಾಹನು ಕ್ಷಮೆ ಹಾಗೂ ಮಹಾ ಪ್ರತಿಫಲದ ಭರವಸೆ ನೀಡಿರುವನು

ಕೊಠಡಿಗಳು

Surah 49

[1] ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಮತ್ತು ಅವನ ದೂತರನ್ನು ಮೀರಿ ಹೋಗಬೇಡಿ. ಅಲ್ಲಾಹನಿಗೆ ಅಂಜಿರಿ, ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ

[2] ವಿಶ್ವಾಸಿಗಳೇ, ಪ್ರವಾದಿಯ ಮಾತಿಗೆ ಎದುರಾಗಿ ನೀವು ಧ್ವನಿ ಏರಿಸಬೇಡಿ ಮತ್ತು ನೀವು ಪರಸ್ಪರರೊಡನೆ ಧ್ವನಿಯೇರಿಸಿ ಮಾತನಾಡುವಂತೆ ಅವರೆದುರು ಧ್ವನಿಯೇರಿಸಿ ಮಾತನಾಡಬೇಡಿ. (ತಪ್ಪಿದರೆ) ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಕರ್ಮಗಳು ವ್ಯರ್ಥವಾಗಬಹುದು

[3] ಅಲ್ಲಾಹನ ದೂತರ ಮುಂದೆ ಸೌಮ್ಯ ಧ್ವನಿಯಲ್ಲಿ ಮಾತನಾಡುವವರ ಮನಸ್ಸುಗಳನ್ನು ಅಲ್ಲಾಹನು ಧರ್ಮನಿಷ್ಠೆಯ ವಿಷಯದಲ್ಲಿ ಪರೀಕ್ಷಿಸಿರುವನು. ಅವರಿಗೆ ಕ್ಷಮೆ ಹಾಗೂ ಮಹಾ ಪುರಸ್ಕಾರ ಸಿಗಲಿದೆ

[4] (ದೂತರೇ,) ಕೊಠಡಿಗಳ ಹೊರಗಿನಿಂದ ನಿಮ್ಮನ್ನು ಕೂಗುವವರಲ್ಲಿ ಹೆಚ್ಚಿನವರು ಖಂಡಿತ ಬುದ್ಧಿವಂತರಲ್ಲ

[5] ನೀವು ಹೊರಟು ಅವರೆಡೆಗೆ ಹೋಗುವ ತನಕ ಅವರು ಕಾದಿದ್ದರೆ, ಅದು ಅವರ ಪಾಲಿಗೆ ಉತ್ತಮವಾಗಿತ್ತು. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[6] ವಿಶ್ವಾಸಿಗಳೇ, ದುಷ್ಟನೊಬ್ಬನು ನಿಮ್ಮ ಬಳಿಗೆ ಒಂದು ಸುದ್ದಿಯನ್ನು ತಂದರೆ ಆ ಕುರಿತು ಸಾಕಷ್ಟು ತನಿಖೆ ನಡೆಸಿರಿ. (ತಪ್ಪಿದರೆ,) ನೀವು ಅರಿವಿಲ್ಲದೆ ಯಾವುದಾದರೂ ಜನಾಂಗಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಬೇಕಾದೀತು

[7] ನಿಮಗೆ ತಿಳಿದಿರಲಿ, ಅಲ್ಲಾಹನ ದೂತರು ನಿಮ್ಮ ನಡುವೆ ಇದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಇಚ್ಛೆಯಂತೆ ನಡೆದರೆ, ನೀವೇ ಸಂಕಟಕ್ಕೆ ಸಿಲುಕುವಿರಿ. ಆದರೆ ಅಲ್ಲಾಹನು ವಿಶ್ವಾಸವನ್ನು ನಿಮಗೆ ಪ್ರಿಯವಾಗಿಸಿರುವನು ಹಾಗೂ ಅದನ್ನು ನಿಮ್ಮ ಮನಸ್ಸುಗಳೊಳಗೆ ಅಲಂಕರಿಸಿರುವನು ಮತ್ತು ಅವನು ಧಿಕ್ಕಾರ ಹಾಗೂ ಪಾಪಕೃತ್ಯಗಳನ್ನು ಹಾಗೂ ಅವಿಧೇಯತೆಯನ್ನು ನಿಮಗೆ ಅಪ್ರಿಯವಾಗಿಸಿರುವನು. ಇಂಥವರೇ, ಸನ್ಮಾರ್ಗದಲ್ಲಿರುವವರು

[8] (ಇದು) ಅಲ್ಲಾಹನ ಅನುಗ್ರಹ ಮತ್ತು ಕೊಡುಗೆ. ಅಲ್ಲಾಹನು ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[9] ವಿಶ್ವಾಸಿಗಳಲ್ಲಿನ ಎರಡು ಗುಂಪುಗಳು ಪರಸ್ಪರ ಜಗಳಾಡಿದರೆ ಅವರ ನಡುವೆ ಸಂಧಾನ ಏರ್ಪಡಿಸಿರಿ. ಇನ್ನು, ಅವರಲ್ಲಿನ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿರೇಕವೆಸಗುತ್ತಿದ್ದರೆ. ಅತಿರೇಕ ಎಸಗುತ್ತಿರುವವರು ಅಲ್ಲಾಹನ ಆದೇಶದೆಡೆಗೆ ಮರಳುವ ತನಕವೂ ಅವರ ವಿರುದ್ಧ ನೀವು ಹೋರಾಡಿರಿ. ಕೊನೆಗೆ ಅವರು (ಅಲ್ಲಾಹನ ಆದೇಶದೆಡೆಗೆ) ಮರಳಿದಾಗ, ಆ ಎರಡು ಗುಂಪುಗಳ ನಡುವೆ ನ್ಯಾಯೋಚಿತ ರೀತಿಯಲ್ಲಿ ಸಂಧಾನವನ್ನು ಏರ್ಪಡಿಸಿರಿ. ಮತ್ತು ನೀವು ಸದಾ ನ್ಯಾಯ ಪಾಲಿಸಿರಿ. ಅಲ್ಲಾಹನು ನ್ಯಾಯವಂತರನ್ನು ಖಂಡಿತ ಪ್ರೀತಿಸುತ್ತಾನೆ

[10] ವಿಶ್ವಾಸಿಗಳು ಪರಸ್ಪರ ಸಹೋದರರು. ನೀವು ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ಏರ್ಪಡಿಸಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ನೀವು ಅವನ ಕರುಣೆಗೆ ಪಾತ್ರರಾಗಬಹುದು

[11] ವಿಶ್ವಾಸಿಗಳೇ, (ನಿಮ್ಮಲ್ಲಿನ ಪುರುಷರ) ಒಂದು ಗುಂಪು ಇನ್ನೊಂದು ಗುಂಪನ್ನು ಗೇಲಿ ಮಾಡಬಾರದು. ಏಕೆಂದರೆ, ಅವರು, ಇವರಿಗಿಂತ ಉತ್ತಮರಾಗಿರಬಹುದು. ಹಾಗೆಯೇ, ಸ್ತ್ರೀಯರು ಇತರ ಸ್ತ್ರೀಯರನ್ನು ಗೇಲಿ ಮಾಡಬಾರದು. ಏಕೆಂದರೆ, ಅವರು ಇವರಿಗಿಂತ ಉತ್ತಮರಾಗಿರಬಹುದು. ಇನ್ನು ನೀವು, ಪರಸ್ಪರರ ದೋಷ ಹುಡುಕುತ್ತಿರಬೇಡಿ ಮತ್ತು ಯಾರನ್ನೂ ಅಡ್ಡ ಹೆಸರುಗಳಿಂದ ಕರೆಯಬೇಡಿ. ವಿಶ್ವಾಸಿಗಳಾದ ಬಳಿಕ ದುಷ್ಟ ಕೃತ್ಯಗಳಲ್ಲಿ ಹೆಸರುಗಳಿಸುವುದು ಪಾಪವಾಗಿದೆ. (ತಪ್ಪು ಮಾಡಿ) ಪಶ್ಚಾತ್ತಾಪ ಪಡದವರೇ ಅಕ್ರಮಿಗಳು

[12] ವಿಶ್ವಾಸಿಗಳೇ, ಹೆಚ್ಚಿನ ಸಂಶಯಗಳಿಂದ ದೂರವಿರಿ. ಕೆಲವು ಸಂಶಯಗಳು ಪಾಪಗಳಾಗಿವೆ. ಮತ್ತು ನೀವು ಪರಸ್ಪರ ಬೇಹುಗಾರಿಕೆ ನಡೆಸಬೇಡಿ ಹಾಗೂ ನಿಮ್ಮಲ್ಲಿ ಯಾರೂ ಇನ್ನೊಬ್ಬರನ್ನು ಅವರ ಬೆನ್ನ ಹಿಂದೆ ದೂಷಿಸಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಮೆಚ್ಚುತ್ತಾನೆಯೇ? ಖಂಡಿತ, ಅದು ನಿಮಗೆ ತೀರಾ ಅಪ್ರಿಯವಾಗಿದೆ. ಹಾಗಾದರೆ, ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ

[13] ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ

[14] ಆ ಹಳ್ಳಿಗರು, ‘‘ನಾವು ವಿಶ್ವಾಸಿಗಳಾದೆವು’’ ಎನ್ನುತ್ತಾರೆ. ಹೇಳಿರಿ; ‘‘ನೀವು ವಿಶ್ವಾಸಿಗಳೇನೂ ಆಗಿಲ್ಲ. ನಾವು ಶರಣಾಗಿರುವೆವು ಎಂದಷ್ಟೆ ಹೇಳಿರಿ. ಏಕೆಂದರೆ ವಿಶ್ವಾಸವು ಇನ್ನೂ ನಿಮ್ಮ ಮನಸ್ಸುಗಳನ್ನು ಪ್ರವೇಶಿಸಿಲ್ಲ. ನೀವು ಅಲ್ಲಾಹ್ ಮತ್ತು ಅವನ ದೂತರ ಆದೇಶಗಳನ್ನು ಪಾಲಿಸಿದರೆ, ನಿಮ್ಮ ಕರ್ಮಗಳಲ್ಲಿ ಏನೂ ಕಡಿತವಾಗದು. ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಳುವೂ ಆಗಿದ್ದಾನೆ’’

[15] ನಿಜವಾದ ವಿಶ್ವಾಸಿಗಳು, ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟ ಬಳಿಕ ಎಂದೂ ಸಂಶಯಪಡುವುದಿಲ್ಲ ಮತ್ತು ಅವರು ತಮ್ಮ ಸಂಪತ್ತುಗಳನ್ನೂ ತಮ್ಮ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ. ಅವರೇ ಸತ್ಯವಂತರು

[16] ಹೇಳಿರಿ; ನೀವೇನು, ನಿಮ್ಮ ಧಾರ್ಮಿಕತೆಯನ್ನು ಅಲ್ಲಾಹನಿಗೆ ತಿಳಿಸಬಯಸುವಿರಾ? ಅಲ್ಲಾಹನಂತು ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ಬಲ್ಲವನಾಗಿದ್ದಾನೆ ಮತ್ತು ಅಲ್ಲಾಹನು ಎಲ್ಲ ವಿಷಯಗಳ ಜ್ಞಾನ ಉಳ್ಳವನಾಗಿದ್ದಾನೆ

[17] (ದೂತರೇ,) ಅವರು, ತಾವು ಮುಸ್ಲಿಮರಾಗಿದ್ದೇವೆಂದು ನಿಮ್ಮ ಮೇಲೆ ಋಣ ಹೊರಿಸುತ್ತಿದ್ದಾರೆ. ಹೇಳಿರಿ; ನೀವು ಮುಸ್ಲಿಮರಾದುದಕ್ಕೆ ನನ್ನ ಮೇಲೇನೂ ಋಣ ಹೊರಿಸಬೇಡಿ. ನೀವು ಸತ್ಯವಂತರಾಗಿದ್ದರೆ, ನಿಮ್ಮನ್ನು ವಿಶ್ವಾಸದೆಡೆಗೆ ಮುನ್ನಡೆಸಿದ್ದಕ್ಕಾಗಿ, ನಿಮ್ಮ ಮೇಲೆ ಅಲ್ಲಾಹನು ತನ್ನ ಋಣವನ್ನು ಹೊರಿಸುತ್ತಾನೆ

[18] ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ರಹಸ್ಯಗಳನ್ನೆಲ್ಲಾ ಖಂಡಿತ ಬಲ್ಲನು ಮತ್ತು ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ

ಖಾಫ್

Surah 50

[1] ಕ್ವಾಫ್. ಗೌರವಾನ್ವಿತ ಕುರ್‌ಆನಿನ ಆಣೆ

[2] ಅವರಲ್ಲೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿ ಪಡುತ್ತಿದ್ದಾರೆ. ಆದ್ದರಿಂದಲೇ ಧಿಕ್ಕಾರಿಗಳು ಹೇಳುತ್ತಾರೆ; ‘‘ಇದು ತೀರಾ ವಿಚಿತ್ರವಾಗಿದೆ’’

[3] ‘‘ನಾವು ಸತ್ತು ಮಣ್ಣಾದ ಬಳಿಕ (ಮತ್ತೆ ಜೀವ ಪಡೆಯುವುದೇ)? ಆ ಪುನರಾಗಮನ ತೀರಾ ದೂರದ ಸಾಧ್ಯತೆಯಾಗಿದೆ (ಅಸಾಧ್ಯವಾಗಿದೆ)’’

[4] ಭೂಮಿಯು ಅವರಿಂದ (ಅವರ ಮೃತ ಶರೀರದಿಂದ) ಏನನ್ನು ಕಿತ್ತುಕೊಂಡಿದೆ ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನೂ ಸುರಕ್ಷಿತವಾಗಿ ದಾಖಲಿಸಿಡುವ ಗ್ರಂಥವಿದೆ

[5] ನಿಜವಾಗಿ, ಸತ್ಯವು ತಮ್ಮ ಬಳಿಗೆ ಬಂದಾಗ ಅವರು ಅದನ್ನು ತಿರಸ್ಕರಿಸಿರುವರು ಮತ್ತು ಅವರು ಗೊಂದಲದಲ್ಲಿದ್ದಾರೆ

[6] ಅವರೇನು, ತಮ್ಮ ಮೇಲಿರುವ ಆಕಾಶದೆಡೆಗೆ, ನಾವು ಅದನ್ನು ಹೇಗೆ ರಚಿಸಿದ್ದೇವೆ ಮತ್ತು ಹೇಗೆ ಅದನ್ನು ಅಲಂಕರಿಸಿದ್ದೇವೆಂದು ನೋಡುವುದಿಲ್ಲವೇ? ಅದರಲ್ಲಿ ಯಾವ ಕುಂದು ಕೊರತೆಯೂ ಇಲ್ಲ

[7] ಭೂಮಿಯನ್ನು ನಾವು ಹರಡಿ ಬಿಟ್ಟರುವೆವು ಮತ್ತು ನಾವು ಅದರಲ್ಲಿ ಪರ್ವತಗಳನ್ನು ನೆಟ್ಟಿರುವೆವು. ಹಾಗೂ ಅದರಲ್ಲಿ ಎಲ್ಲ ಬಗೆಯ ಸುಂದರ ವಸ್ತುಗಳನ್ನು ಬೆಳೆಸಿರುವೆವು

[8] ಇವು (ಅಲ್ಲಾಹನೆಡೆಗೆ) ಒಲಿಯುವ ಪ್ರತಿಯೊಬ್ಬ ದಾಸನ ಕಣ್ಣು ತೆರೆಸುವ ಮತ್ತು ಅವನಿಗೆ ಪಾಠವಾಗುವ ಸಾಧನಗಳಾಗಿವೆ

[9] ಅದೇ ರೀತಿ, ನಾವು ಆಕಾಶದಿಂದ ಸಮೃದ್ಧ ನೀರನ್ನು ಇಳಿಸಿರುವೆವು ಹಾಗೂ ಆ ಮೂಲಕ ತೋಟಗಳನ್ನು ಮತ್ತು ಹೊಲಗಳ ಧಾನ್ಯಗಳನ್ನು ಬೆಳೆಸಿರುವೆವು

[10] ಮತ್ತು (ಅದರಿಂದಲೇ), ಸಂಪನ್ನ ಗೊಂಚಲುಗಳಿರುವ, ಎತ್ತರದ ಖರ್ಜೂರದ ಗಿಡಗಳನ್ನು ಬೆಳೆಸಿರುವೆವು

[11] ಇವೆಲ್ಲಾ (ನಮ್ಮ) ದಾಸರಿಗಾಗಿರುವ ಆಹಾರಗಳು. ಮತ್ತು ನಾವು, ನಿರ್ಜೀವವಾಗಿರುವ ನಾಡುಗಳಿಗೆ ಆ (ನೀರಿನ) ಮೂಲಕ, ಮರು ಜೀವ ನೀಡುವೆವು. ಹೀಗೆಯೇ ನಡೆಯಲಿದೆ ಸತ್ತವರನ್ನು (ಮತ್ತೆ ಜೀವಂತಗೊಳಿಸಿ) ಹೊರತೆಗೆಯುವ ಕ್ರಿಯೆ

[12] ಅವರಿಗಿಂತ ಹಿಂದೆ ನೂಹರ ಜನಾಂಗದವರು, ರಸ್ಸ್‌ನ ನಿವಾಸಿಗಳು ಮತ್ತು ಸಮೂದ್ ಜನಾಂಗದವರು ತಿರಸ್ಕರಿಸಿದ್ದರು

[13] ಹಾಗೆಯೇ, ಆದ್ ಜನಾಂಗದವರು, ಫಿರ್‌ಔನ್ ಹಾಗೂ ಲೂತ್‌ರ ಬಂಧುಗಳು

[14] ಐಕಃದವರು ಹಾಗೂ ತುಬ್ಬಅ್ ಜನಾಂಗದವರು – ಅವರೆಲ್ಲರೂ ದೇವದೂತರನ್ನು ತಿರಸ್ಕರಿಸಿದ್ದರು. ಅವರಿಗೆ ನೀಡಲಾಗಿದ್ದ (ಶಿಕ್ಷೆಯ) ಮುನ್ನೆಚ್ಚರಿಕೆಯು ಅನುಷ್ಠಾನವಾಗಿಬಿಟ್ಟಿತ್ತು

[15] ನಾವೇನು ಪ್ರಥಮ ಬಾರಿಯ ಸೃಷ್ಟಿ ಕ್ರಿಯೆಯಿಂದ ದಣಿದು ಹೋಗಿದ್ದೇವೆಯೇ? ನಿಜವಾಗಿ, (ಮತ್ತೆ) ಹೊಸದಾಗಿ ಸೃಷ್ಟಿಯಾಗುವ ಕುರಿತು ಅವರು ಸಂಶಯದಲ್ಲಿದ್ದಾರೆ

[16] ನಾವೇ ಮನುಷ್ಯನನ್ನು ಸೃಷ್ಟಿಸಿರುವೆವು ಮತ್ತು ಅವನ ಮನಸ್ಸಿನೊಳಗಿನ ಗೊಂದಲಗಳನ್ನೂ ನಾವು ಚೆನ್ನಾಗಿ ಬಲ್ಲೆವು. ನಿಜವಾಗಿ ನಾವು ಅವನ ಜೀವನಾಡಿಗಿಂತಲೂ ಅವನಿಗೆ ಹತ್ತಿರವಾಗಿರುವೆವು

[17] ಅವನ ಬಲಭಾಗದಲ್ಲೂ ಎಡ ಭಾಗದಲ್ಲೂ ಕುಳಿತಿರುವ ಇಬ್ಬರು ಬರಹಗಾರರು (ಅವನ ಎಲ್ಲ ಕರ್ಮಗಳನ್ನು) ಬರೆದಿಡುತ್ತಾರೆ

[18] ಅವನು ಆಡುವ ಯಾವ ಮಾತನ್ನೂ, ಸದಾ ಜಾಗೃತನಾಗಿರುವ ಕಾವಲುಗಾರನೊಬ್ಬನು ದಾಖಲಿಸದೆ ಇರುವುದಿಲ್ಲ

[19] ಕೊನೆಗೆ, ನಿಜಕ್ಕೂ ಮರಣದ ಅಮಲು ಬಂದುಬಿಟ್ಟಾಗ (ಅವನೊಡನೆ), ‘‘ನೀನು ಅಂಜುತ್ತಿದ್ದುದು ಇದನ್ನೇ’’ ಎನ್ನಲಾಗುವುದು

[20] ಮತ್ತು ಕಹಳೆಯನ್ನು ಊದಲಾಗುವುದು. ಅದುವೇ, ಮುನ್ನೆಚ್ಚರಿಕೆ ನೀಡಲಾಗಿದ್ದ ದಿನ

[21] ಅಂದು ಪ್ರತಿಯೊಬ್ಬನೂ (ಅಲ್ಲಾಹನ ಮುಂದೆ) ಹಾಜರಾಗುವನು. ಅವನ ಜೊತೆ (ಅವನನ್ನು) ನಡೆಸುವ ಒಬ್ಬನಿರುವನು ಮತ್ತು ಒಬ್ಬ ಸಾಕ್ಷಿಯೂ ಇರುವನು

[22] (ಅವನೊಡನೆ ಹೇಳಲಾಗುವುದು;) ‘‘ನೀನು ಈ (ದಿನದ) ಕುರಿತು ನಿಶ್ಚಿಂತನಾಗಿದ್ದೆ. ಇದೀಗ ನಾವು ನಿನ್ನ ತೆರೆಯನ್ನು ನಿನ್ನಿಂದ ಸರಿಸಿ ಬಿಟ್ಟಿರುವೆವು. ಇದೋ, ಇಂದು ನಿನ್ನ ದೃಷ್ಟಿ ಬಹಳ ತೀಕ್ಷ್ಣವಾಗಿದೆ’’

[23] ಅವನ ಜೊತೆಗಿರುವವನು ಹೇಳುವನು; ‘‘ಇದು ನನ್ನ ಬಳಿ ಸಿದ್ಧವಾಗಿರುವ, (ಅವನ ಕರ್ಮಗಳ) ದಾಖಲೆ’’

[24] (ಅಪ್ಪಣೆಯಾಗುವುದು;) ‘‘ನೀವಿಬ್ಬರು, ಪ್ರತಿಯೊಬ್ಬ ಕೃತಘ್ನ, ವಿದ್ರೋಹಿಯನ್ನು ನರಕದೊಳಕ್ಕೆ ಎಸೆದು ಬಿಡಿರಿ’’

[25] ‘‘ಸತ್ಕಾರ್ಯಕ್ಕೆ ತಡೆಯೊಡ್ಡುತ್ತಿದ್ದ, ಅತಿರೇಕವೆಸಗುತ್ತಿದ್ದ (ಹಾಗೂ) ಸಂಶಯ ಬಿತ್ತುತ್ತಿದ್ದಾತನನ್ನು (ನರಕದೊಳಕ್ಕೆ ಎಸೆಯಿರಿ)’’

[26] ‘‘ಅವನು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿಕೊಂಡಿದ್ದನು. ಇದೀಗ ಅವನನ್ನು ಕಠಿಣ ಶಿಕ್ಷೆಯೊಳಕ್ಕೆ (ನರಕಕ್ಕೆ) ಎಸೆದುಬಿಡಿರಿ’’

[27] ಅವನ ಸಂಗಾತಿಯಾಗಿದ್ದವನು ಹೇಳುವನು; ‘‘ನಮ್ಮೊಡೆಯಾ, ಅವನನ್ನು ವಿದ್ರೋಹಿಯಾಗಿಸಿದವನು ನಾನಲ್ಲ. ಸ್ವತಃ ಅವನೇ ತಪ್ಪು ದಾರಿಯಲ್ಲಿ ಬಹುದೂರ ಹೊರಟು ಹೋಗಿದ್ದನು’’

[28] (ಅಲ್ಲಾಹನು) ಹೇಳುವನು; ನೀವು ನನ್ನ ಮುಂದೆ ಜಗಳಾಡಬೇಡಿ, ನಿಮಗೆ ನಾನು ಮುನ್ನೆಚ್ಚರಿಕೆಯನ್ನು ಹಿಂದೆಯೇ ಕಳಿಸಿಕೊಟ್ಟಿದ್ದೆ

[29] ನನ್ನ ಬಳಿ ಮಾತು ಬದಲಾಗುವುದಿಲ್ಲ. ಮತ್ತು ನಾನು ದಾಸರ ಮೇಲೆ ಅಕ್ರಮವೆಸಗುವವನಲ್ಲ

[30] ಅಂದು ನಾವು ನರಕದೊಡನೆ, ‘‘ನೀನು ತುಂಬಿದೆಯಾ?’’ ಎಂದು ಕೇಳುವೆವು. ಅದು ‘‘ಇನ್ನಷ್ಟು ಇದೆಯೇ?’’ ಎನ್ನುವುದು

[31] ಮತ್ತು ನಾವು ಸ್ವರ್ಗವನ್ನು ನಿಕಟಗೊಳಿಸುವೆವು. ಅದೆಂದೂ (ಅವರಿಂದ) ದೂರವಾಗದು

[32] ಇದನ್ನೇ ವಾಗ್ದಾನ ಮಾಡಲಾಗಿತ್ತು; ನಿಮಗೆ ಹಾಗೂ (ಅಲ್ಲಾಹನತ್ತ) ಒಲವು ತೋರುತ್ತಲಿರುವ ಮತ್ತು ಸದಾ ಜಾಗೃತನಾಗಿರುವ ಪ್ರತಿಯೊಬ್ಬನಿಗೆ

[33] (ಹಾಗೆಯೇ) ಕಣ್ಣಾರೆ ಕಾಣದೆಯೇ, ಆ ಅಪಾರ ದಯಾಮಯನ ಭಕ್ತನಾಗಿರುವವನಿಗೆ ಮತ್ತು ಪದೇ ಪದೇ (ಅಲ್ಲಾಹನತ್ತ) ಒಲಿಯುವ ಮನಸ್ಸಿನೊಂದಿಗೆ ಬಂದಿರುವವನಿಗೆ

[34] (ಅವರೊಡನೆ ಹೇಳಲಾಗುವುದು;) ಶಾಂತಿಯೊಂದಿಗೆ ಇದನ್ನು ಪ್ರವೇಶಿಸಿರಿ. ಇದುವೇ, ಶಾಶ್ವತ ದಿನ

[35] ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗಲಿದೆ, ಮಾತ್ರವಲ್ಲ, ನಮ್ಮ ಬಳಿ ಮತ್ತಷ್ಟಿದೆ

[36] ಅವರಿಗಿಂತ (ಮಕ್ಕಃದವರಿಗಿಂತ) ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಇವರಿಗಿಂತ ತುಂಬಾ ಆದರೆ, ಕೊನೆಗೆ ‘‘ಪಲಾಯನಕ್ಕೆ ದಾರಿಯುಂಟೇ?’’ ಎನ್ನುತ್ತಾ ಅವರು ನಾಡು ನಾಡು ಅಲೆಯ ತೊಡಗಿದರು

[37] ಇದರಲ್ಲಿ ಖಂಡಿತ ಪಾಠವಿದೆ, ಮನಸ್ಸುಳ್ಳವರಿಗೆ ಅಥವಾ ಕಿವಿಗೊಟ್ಟು ಕೇಳುವವರು ಮತ್ತು ನೋಡುವವರಿಗೆ

[38] ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಆರು ದಿನಗಳಲ್ಲಿ ಸೃಷ್ಟಿಸಿರುವೆವು ಮತ್ತು ನಮ್ಮನ್ನು ಯಾವ ದಣಿವೂ ಬಾಧಿಸಲಿಲ್ಲ

[39] ಅವರಾಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ. ಮತ್ತು ಸೂರ್ಯೋದಯಕ್ಕೆ ಮುನ್ನವೂ ಸೂರ್ಯಾಸ್ತಮಾನಕ್ಕೆ ಮುನ್ನವೂ ನಿಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ

[40] ಮತ್ತು ರಾತ್ರಿಯ ವೇಳೆಯಲ್ಲೂ ಸಾಷ್ಟಾಂಗವೆರಗಿದ ಬಳಿಕವೂ ಅವನ ಪಾವಿತ್ರವನ್ನು ಜಪಿಸಿರಿ

[41] ಕೇಳಿರಿ, ಕೂಗುವವನು ಹತ್ತಿರದಿಂದಲೇ ಕೂಗುವ ಒಂದು ದಿನ (ಬರಲಿದೆ)

[42] ಅಂದು ಅವರು ನಿಜಕ್ಕೂ ಒಂದು ಆರ್ಭಟವನ್ನು ಕೇಳುವರು. ಅದುವೇ

[43] (ಗೋರಿಗಳಿಂದ) ಹೊರಡುವ ದಿನವಾಗಿರುವುದು

[44] ಖಂಡಿತ ನಾವೇ ಜೀವನವನ್ನು ನೀಡುತ್ತೇವೆ ಮತ್ತು ನಾವೇ ಸಾಯಿಸುತ್ತೇವೆ ಮತ್ತು ನಮ್ಮೆಡೆಗೇ (ಎಲ್ಲರೂ) ಮರಳಬೇಕಾಗಿದೆ

[45] ಅವರ ಮೇಲಿಂದ ಭೂಮಿಯು ಬಿರಿದು ಬಿಡುವ ದಿನ ಅವರು (ಅದರೊಳಗಿಂದ) ಧಾವಿಸುವರು. ಈ ಜಮಾವಣೆಯು ನಮ್ಮ ಮಟ್ಟಿಗೆ ಸುಲಭವಾಗಿದೆ

ಗೂಟದ ಗಾಳಿ

Surah 51

[1] ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ನೀವು ಅವರನ್ನು ಬಲವಂತ ಪಡಿಸುವವರಲ್ಲ. ನನ್ನ ಮುನ್ನೆಚ್ಚರಿಕೆಯನ್ನು ಅಂಜುವವರಿಗೆ ನೀವು ಕುರ್‌ಆನಿನ ಮೂಲಕ ಉಪದೇಶಿಸಿರಿ

[2] ಧೂಳೆಬ್ಬಿಸುವ ಸುಳಿಗಾಳಿಗಳಾಣೆ

[3] ಅವು (ಮೋಡಗಳ) ಹೊರೆಯನ್ನು ಹೊತ್ತಿರುತ್ತವೆ

[4] ತರುವಾಯ ಅವು, ಸೌಮ್ಯವಾಗಿ ಚಲಿಸತೊಡಗುತ್ತವೆ

[5] ಮತ್ತು ಆದೇಶಾನುಸಾರ (ಮಳೆಯನ್ನು) ವಿತರಿಸುತ್ತವೆ

[6] ನಿಮಗೆ ನೀಡಲಾಗಿರುವ ವಾಗ್ದಾನವು ಖಂಡಿತ ಸತ್ಯವಾಗಿದೆ

[7] ಪ್ರತಿಫಲದ ದಿನವು ಖಂಡಿತ ಬರಲಿದೆ

[8] ದಾರಿಗಳಿರುವ ಆಕಾಶದಾಣೆ

[9] ನೀವು ವಿವಿಧ ವಾದಗಳಲ್ಲಿ ತಲ್ಲೀನರಾಗಿರುವಿರಿ

[10] ದೂರಗೊಳಿಸಲ್ಪಟ್ಟವನು ಮಾತ್ರ ಇದರಿಂದ (ಸತ್ಯದಿಂದ) ದೂರವಾಗುತ್ತಾನೆ

[11] ನಾಶವಾದರು, ಊಹಾಪೋಹಗಳನ್ನು ನೆಚ್ಚಿ ಕೊಂಡವರು

[12] ಅವರು ಎಚ್ಚರವಿಲ್ಲದೆ, ಮೈ ಮರೆತ ಸ್ಥಿತಿಯಲ್ಲಿದ್ದಾರೆ

[13] ಪ್ರತಿಫಲದ ದಿನ ಯಾವಾಗ ಬಂದೀತೆಂದು ಅವರು ಕೇಳುತ್ತಾರೆ

[14] ಅಂದು ಅವರು ಬೆಂಕಿಯ ಮೇಲೆ ಹೊರಳಾಡಿಸಲ್ಪಡುವರು

[15] (ಅವರೊಡನೆ ಹೇಳಲಾಗುವುದು;) ಸವಿಯಿರಿ ನಿಮ್ಮ ಕಿಡಿಗೇಡಿತನವನ್ನು, ನೀವು ಆತುರ ಪಡುತ್ತಿದ್ದ ವಸ್ತು ಇದುವೇ

[16] ಖಂಡಿತ (ಸ್ವರ್ಗದ) ತೋಟಗಳಲ್ಲಿ ಹಾಗೂ ಚಿಲುಮೆಗಳಲ್ಲಿರುವರು

[17] ತಮ್ಮ ಒಡೆಯನು ನೀಡಿದ್ದನ್ನು ಸ್ವೀಕರಿಸುತ್ತಿರುವರು. ಈ ಹಿಂದೆ (ಇಹಲೋಕದಲ್ಲಿ) ಅವರು ಸತ್ಕರ್ಮಿಗಳಾಗಿದ್ದರು

[18] ಅವರು ರಾತ್ರಿಯಲ್ಲಿ ತುಸು ಹೊತ್ತು ಮಾತ್ರ ನಿದ್ರಿಸುತ್ತಿದ್ದರು

[19] ಮುಂಜಾವಿನಲ್ಲಿ ಅವರು (ಅಲ್ಲಾಹನೊಡನೆ) ಕ್ಷಮೆಯಾಚಿಸುತ್ತಿದ್ದರು

[20] ಅವರ ಸಂಪತ್ತಿನಲ್ಲಿ, ಬೇಡುವವರಿಗೆ ಹಾಗೂ ವಂಚಿತರಿಗೆ ಹಕ್ಕಿತ್ತು

[21] ಅಚಲ ನಂಬಿಕೆ ಉಳ್ಳವರಿಗೆ ಭೂಮಿಯಲ್ಲಿ (ಪಾಠದಾಯಕ) ಪುರಾವೆಗಳಿವೆ

[22] ಮತ್ತು ನೀವೇನು ಸ್ವತಃ ನಿಮ್ಮನ್ನೇ ನೋಡುವುದಿಲ್ಲವೇ

[23] ಮತ್ತು ಆಕಾಶದಲ್ಲಿ ನಿಮ್ಮ ಆಹಾರವಿದೆ ಮತ್ತು ನಿಮಗೆ ವಾಗ್ದಾನ ಮಾಡಲಾಗಿರುವ ವಸ್ತುವೂ ಇದೆ

[24] ಆಕಾಶ ಮತ್ತು ಭೂಮಿಯ ಒಡೆಯನಾಣೆ, ಅದು (ಪರಲೋಕ) ಸತ್ಯ. ನೀವು ಮಾತನಾಡಬಲ್ಲಿರೆಂಬುದು ಸತ್ಯವಾಗಿರುವಂತೆ

[25] ಇಬ್ರಾಹೀಮರ ಆದರಣೀಯ ಅತಿಥಿಗಳ ಸಮಾಚಾರ ನಿಮಗೆ ತಲುಪಿದೆಯೇ

[26] ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ‘ಸಲಾಮ್’ ಎಂದರು. ಅವರು, ‘‘ಸಲಾಮ್, ಅಪರಿಚಿತರೇ’’ ಎಂದರು

[27] ಆ ಬಳಿಕ ಅವರು, ತಮ್ಮ ಮನೆಯವರ ಬಳಿಗೆ ಹೋಗಿ ಒಂದು ದಷ್ಟಪುಷ್ಟವಾದ (ಹುರಿದ) ಕರುವನ್ನು ತಂದರು

[28] ಅವರು (ಇಬ್ರಾಹೀಮರು), ಅವರ (ಅತಿಥಿಗಳ) ಬಳಿಗೆ ಹೋಗಿ, ನೀವು ಉಣ್ಣುವುದಿಲ್ಲವೇ? ಎಂದರು

[29] ಅವರಿಗೆ (ಇಬ್ರಾಹೀಮರಿಗೆ) ಅವರ ಕುರಿತು ಭಯವಾಯಿತು. ಅವರು (ಅತಿಥಿಗಳು), ‘‘ನೀವು ಅಂಜಬೇಡಿ’’ ಎಂದರು ಮತ್ತು ಅವರಿಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡಿದರು

[30] ಅವರ ಪತ್ನಿಯು ಮುಂದೆ ಬಂದು ಅಚ್ಚರಿಯಿಂದ ತನ್ನ ಮುಖಕ್ಕೆ ಕೈ ಇಟ್ಟು, ‘‘ಬಂಜೆಯಾಗಿರುವ ವೃದ್ಧೆಗೆ (ಮಗುವಾಗುವುದೇ)?’’ ಎಂದರು

[31] ಅವರು (ಅತಿಥಿಗಳು) ಹೇಳಿದರು; ‘‘ಹಾಗೆಯೇ ಆಗುವುದು. (ಹಾಗೆಂದು) ನಿಮ್ಮ ಒಡೆಯನು ಹೇಳಿರುವನು. ಅವನು ಖಂಡಿತ ಯುಕ್ತಿವಂತನೂ ಜ್ಞಾನಿಯೂ ಆಗಿರುವನು’’

[32] ಅವರು (ಇಬ್ರಾಹೀಮ್) ಕೇಳಿದರು; ದೂತರೇ, ನಿಮ್ಮ ಗುರಿ ಏನು

[33] ಅವರು (ಮಲಕ್‌ಗಳು) ಹೇಳಿದರು; ‘‘ಒಂದು ಅಪರಾಧಿ ಜನಾಂಗದೆಡೆಗೆ ನಮ್ಮನ್ನು ಕಳಿಸಲಾಗಿದೆ’’

[34] ‘‘ಅವರ ಮೇಲೆ ಮಣ್ಣಿನ ಕಲ್ಲುಗಳನ್ನು ಸುರಿಸಬೇಕೆಂದು ನಮಗೆ ಆದೇಶಿಸಲಾಗಿದೆ’’

[35] ‘‘ನಿಮ್ಮ ಒಡೆಯನ ಬಳಿ ಅವುಗಳನ್ನು (ಆ ಕಲ್ಲುಗಳನ್ನು), ಅತಿರೇಕ ಎಸಗುವವರಿಗೆಂದೇ ಗುರುತಿಸಿಡಲಾಗಿದೆ’’

[36] ಕೊನೆಗೆ ನಾವು, ಅಲ್ಲಿದ್ದ ವಿಶ್ವಾಸಿಗಳನ್ನು ಹೊರತೆಗೆದೆವು

[37] ಅಲ್ಲಿ (ಆ ನಾಡಿನಲ್ಲಿ) ನಾವು ಮುಸ್ಲಿಮರ ಒಂದು ಮನೆಯನ್ನು ಮಾತ್ರ ಕಂಡೆವು

[38] ಮತ್ತು ಕಠಿಣ ಶಿಕ್ಷೆಯನ್ನು ಅಂಜುವವರಿಗಾಗಿ ಅಲ್ಲಿ ನಾವು ಒಂದು ಪಾಠದಾಯಕ ಸೂಚನೆಯನ್ನು ಬಿಟ್ಟಿರುವೆವು

[39] ಮತ್ತು ಮೂಸಾರಲ್ಲೂ (ಪಾಠವಿದೆ). ಅವರನ್ನು ನಾವು ಸ್ಪಷ್ಟವಾದ ಆಧಾರದೊಂದಿಗೆ ಫಿರ್‌ಔನನ ಕಡೆಗೆ ಕಳಿಸಿದಾಗ

[40] ಅವನು (ಫಿರ್‌ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು

[41] ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದೆವು ಹಾಗೂ ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅವನು ನಿಂದನೆಗೆ ಅರ್ಹನಾಗಿದ್ದನು

[42] ಮತ್ತು ಆದ್ ಜನಾಂಗದಲ್ಲೂ (ಪಾಠವಿದೆ). ನಾವು ಅವರ ಮೇಲೆ ಒಂದು ಮಾರಕ ಚಂಡಮಾರುತವನ್ನು ಹೇರಿದೆವು

[43] ಅದು ತನ್ನೆದುರು ಬಂದ ಪ್ರತಿಯೊಂದು ವಸ್ತುವನ್ನೂ ಕೊಳೆತ ಮೂಳೆಯಂತಾಗಿಸಿ ಬಿಡುತ್ತಿತ್ತು

[44] ಮತ್ತು ಸಮೂದ್ ಜನಾಂಗದಲ್ಲೂ (ಪಾಠವಿದೆ). ಒಂದು ನಿರ್ದಿಷ್ಟ ಅವಧಿಯ ತನಕ ಸುಖ ಅನುಭವಿಸಿರಿ ಎಂದು ಅವರೊಡನೆ ಹೇಳಲಾದಾಗ

[45] ಅವರು ತಮ್ಮ ಒಡೆಯನ ಆದೇಶದೆದುರು ಬಂಡಾಯವೆದ್ದರು. ಕೊನೆಗೆ, ಅವರು ನೋಡುತ್ತಿದ್ದಂತೆಯೇ ಸಿಡಿಲೊಂದು ಅವರ ಮೇಲೆರಗಿತು

[46] ಕೊನೆಗೆ ಅವರು ಎದ್ದು ನಿಲ್ಲಲಿಕ್ಕೂ ಅಶಕ್ತರಾದರು ಮತ್ತು ಪ್ರತೀಕಾರವೆಸಗಲಿಕ್ಕೂ ಅಸಮರ್ಥರಾದರು

[47] ಅವರಿಗಿಂತ ಹಿಂದಿನ ನೂಹರ ಜನಾಂಗದಲ್ಲೂ (ಪಾಠವಿದೆ). ಅವರು ಅವಿಧೇಯರಾಗಿದ್ದರು

[48] ನಾವು ಆಕಾಶವನ್ನು ಕೈಯಾರೆ ನಿರ್ಮಿಸಿರುವೆವು. ನಾವು ಖಂಡಿತ ವಿಶಾಲ ಸಾಮರ್ಥ್ಯ ಉಳ್ಳವರಾಗಿರುವೆವು

[49] ಮತ್ತು ಭೂಮಿಯನ್ನು ನಾವು ಹಾಸಿನಂತಾಗಿಸಿರುವೆವು. ನಾವಂತೂ ಅತ್ಯುತ್ತಮವಾಗಿ ಹಾಸುವವರಾಗಿರುವೆವು

[50] ನಾವು ಪ್ರತಿಯೊಂದು ವಸ್ತುವಿನಿಂದಲೂ ಎರಡು ಬಗೆಗಳನ್ನು (ಜೊತೆಗಳನ್ನು ) ಸೃಷ್ಟಿಸಿರುವೆವು. ನೀವು ಪಾಠ ಕಲಿಯಬೇಕೆಂದು

[51] ನೀವು ಅಲ್ಲಾಹನೆಡೆಗೆ ಧಾವಿಸಿರಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ

[52] ಮತ್ತು ನೀವು ಅಲ್ಲಾಹನ ಜೊತೆ ಬೇರೊಬ್ಬರನ್ನು ದೇವರಾಗಿಸಿಕೊಳ್ಳಬೇಡಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ

[53] ಇದೇ ರೀತಿ, ಅವರಿಗಿಂತ ಹಿಂದಿನವರು ತಮ್ಮ ಬಳಿಗೆ ಬಂದಿದ್ದ ಯಾವ ದೂತರನ್ನೂ ಜಾದೂಗಾರ ಅಥವಾ ಹುಚ್ಚ ಎಂದು ಕರೆಯದೆ ಬಿಟ್ಟಿರಲಿಲ್ಲ

[54] ಅವರೇನು ಪರಸ್ಪರರಿಗೆ ಇದನ್ನೇ ಬೋಧಿಸಿರುವರೇ? ನಿಜವಾಗಿ ಅವರು ವಿದ್ರೋಹಿಗಳಾಗಿದ್ದಾರೆ

[55] ನೀವು ಅವರನ್ನು ಕಡೆಗಣಿಸಿರಿ. ನಿಮ್ಮ ಮೇಲೆ ಯಾವ ದೋಷವೂ ಇಲ್ಲ

[56] ನೀವು ಉಪದೇಶಿಸಿರಿ. ಖಂಡಿತವಾಗಿಯೂ ಉಪದೇಶವು ವಿಶ್ವಾಸಿಗಳ ಪಾಲಿಗೆ ಲಾಭದಾಯಕವಾಗಿರುತ್ತದೆ

[57] ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸೃಷ್ಟಿಸಿರುವೆನು

[58] ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ

[59] ಖಂಡಿತವಾಗಿಯೂ ಅಲ್ಲಾಹನೇ ಎಲ್ಲರ ಅನ್ನದಾತನೂ ಭಾರೀ ಶಕ್ತಿ ಶಾಲಿಯೂ ಪರಮ ಸಮರ್ಥನೂ ಆಗಿದ್ದಾನೆ

[60] ಅಕ್ರಮವೆಸಗಿದವರಿಗಾಗಿ (ಅವರ ಶಿಕ್ಷೆಗಾಗಿ), ಅವರ ಸಂಗಾತಿಗಳಿಗೆ ನಿಶ್ಚಿತವಾಗಿದ್ದಂತಹದೇ ಕಾಲವೊಂದು ನಿಶ್ಚಿತವಾಗಿದೆ. ಆದ್ದರಿಂದ ಅವರು ಆತುರ ಪಡದಿರಲಿ

ಪರ್ವತ

Surah 52

[1] ತಮಗೆ ವಾಗ್ದಾನ ಮಾಡಲಾದ (ಪುನರುತ್ಥಾನ) ದಿನವನ್ನು ಧಿಕ್ಕರಿಸಿದವರಿಗೆ ವಿನಾಶ ಕಾದಿದೆ

[2] ತೂರ್ ಪರ್ವತದಾಣೆ

[3] ಲಿಖಿತ ಗ್ರಂಥದಾಣೆ

[4] ಅದು ತೆರೆದ ಪುಟದಲ್ಲಿದೆ

[5] ಮತ್ತು ಜನ ಸಂಪನ್ನ ಆಲಯದಾಣೆ

[6] ಎತ್ತರಗೊಳಿಸಲಾಗಿರುವ ಚಪ್ಪರದಾಣೆ

[7] ಮತ್ತು ಭೋರ್ಗರೆಯುವ ಸಮುದ್ರದಾಣೆ

[8] ನಿಮ್ಮ ಒಡೆಯನ ಶಿಕ್ಷೆಯು ಖಂಡಿತ ಬರಲಿದೆ

[9] ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ

[10] ಆಕಾಶವು ಭೀಕರವಾಗಿ ತಲ್ಲಣಿಸುವ ದಿನ

[11] ಮತ್ತು ಪರ್ವತಗಳು ಛಿದ್ರವಾಗುವ ದಿನ

[12] (ಸತ್ಯವನ್ನು) ತಿರಸ್ಕರಿಸಿದವರಿಗೆ ಆ ದಿನ ವಿನಾಶವಿದೆ

[13] (ಇಂದು) ಅವರು ಮೋಜಾಟಗಳಲ್ಲಿ ತಲ್ಲೀನರಾಗಿದ್ದಾರೆ

[14] ಆ ದಿನ ಅವರನ್ನು ತಳ್ಳುತ್ತಾ ನರಕದೆಡೆಗೆ ಒಯ್ಯಲಾಗುವುದು

[15] (ಮತ್ತು ಹೇಳಲಾಗುವುದು;) ಇದುವೇ, ನೀವು ತಿರಸ್ಕರಿಸುತ್ತಿದ್ದ ನರಕಾಗ್ನಿ

[16] ಇದೇನು ಇಂದ್ರಜಾಲವೇ? ಅಥವಾ ನಿಮಗೇನೂ ಕಾಣಿಸುತ್ತಿಲ್ಲವೇ

[17] ಇದರೊಳಗೆ ಪ್ರವೇಶಿಸಿರಿ. ನೀವಿನ್ನು ಸಹನೆ ತೋರಿದರೂ ಸಹನೆ ತೋರದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿರುತ್ತದೆ. ನಿಮಗಂತು, ನೀವು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲವನ್ನಷ್ಟೇ ನೀಡಲಾಗುತ್ತಿದೆ

[18] (ಅಂದು) ಧರ್ಮ ನಿಷ್ಠರು ಉದ್ಯಾನಗಳಲ್ಲಿ ಹಾಗೂ ಅನುಗ್ರಹದಲ್ಲಿರುವರು

[19] ತಮಗೆ ತಮ್ಮ ಒಡೆಯನು ನೀಡಿದ್ದರಲ್ಲಿ ಸಂತುಷ್ಟರಾಗಿರುವರು. ಮತ್ತು ಅವರನ್ನು ಅವರ ಒಡೆಯನು ನರಕದ ಹಿಂಸೆಯಿಂದ ಸುರಕ್ಷಿತರಾಗಿಟ್ಟಿರುವನು

[20] ನೀವು ಮಾಡಿದ್ದ ಕರ್ಮಗಳ ಫಲವಾಗಿ, (ಇಂದು) ಮನ ತುಂಬಾ ಉಣ್ಣಿರಿ ಮತ್ತು ಕುಡಿಯಿರಿ (ಎಂದು ಅವರೊಡನೆ ಹೇಳಲಾಗುವುದು)

[21] ಅವರು ಸಾಲು ಸಾಲಾಗಿ ದಿಂಬುಗಳಿಗೆ ಒರಗಿ ವಿರಮಿಸುತ್ತಿರುವರು ಮತ್ತು ನಾವು ವಿಶಾಲ ಕಣ್ಣಿನ ‘ಹೂರ್’ಗಳನ್ನು ಅವರ ಜೊತೆಗಳಾಗಿಸಿರುವೆವು

[22] ವಿಶ್ವಾಸಿಗಳಾಗಿದ್ದವರು ಮತ್ತು ವಿಶ್ವಾಸಿಗಳಾಗಿ ಅವರನ್ನು ಅನುಸರಿಸಿದ, ಅವರ ಸಂತತಿಗಳು – ಅವರನ್ನು ನಾವು ಅವರ ಸಂತತಿಗಳೊಂದಿಗೆ ಸೇರಿಸಿರುವೆವು – ಮತ್ತು ನಾವು ಅವರ ಕರ್ಮಗಳಲ್ಲಿ ಏನನ್ನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಕರ್ಮಗಳಿಗೆ ಪ್ರತಿಯಾಗಿ ಒತ್ತೆಯಾಳಾಗಿದ್ದಾನೆ

[23] ನಾವು ಹಣ್ಣು ಹಂಪಲುಗಳನ್ನು ಮತ್ತು ಅವರು ಮೆಚ್ಚುವ ಮಾಂಸಾಹಾರವನ್ನು ಅವರಿಗೆ ಒದಗಿಸುತ್ತಿರುವೆವು

[24] ಅಲ್ಲಿ ಅವರು (ಮೋಜಿಗಾಗಿ) ಪಾನಪಾತ್ರೆಗಳನ್ನು ಎಳೆದಾಡುವರು. ಯಾವುದೇ ಅನಗತ್ಯದ ಸಂಭಾಷಣೆಯಾಗಲಿ, ಪಾಪದ ಮಾತಾಗಲಿ ಅಲ್ಲಿ ಇರಲಾರದು

[25] ಅವರ ಸೇವೆಗಾಗಿ, ಸುರಕ್ಷಿತ ಮುತ್ತುಗಳೋ ಎಂಬಂತಿರುವ ಬಾಲಕರು ಅವರ ಸುತ್ತ ತಿರುಗಾಡುತ್ತಿರುವರು

[26] ಅವರು (ಸ್ವರ್ಗವಾಸಿಗಳು) ಪರಸ್ಪರರನ್ನು ಉದ್ದೇಶಿಸಿ ವಿಚಾರಿಸುವರು

[27] ಅವರು ಹೇಳುವರು; ಹಿಂದೆ ನಾವು ನಮ್ಮವರ ನಡುವೆ ಭೀತರಾಗಿದ್ದೆವು

[28] ಕೊನೆಗೆ, ಅಲ್ಲಾಹನು ನಮ್ಮ ಮೇಲೆ ದಯೆ ತೋರಿದನು ಮತ್ತು ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸಿದನು

[29] ನಾವು ಈ ಹಿಂದೆ ಅವನನ್ನೇ ಕರೆದು ಪ್ರಾರ್ಥಿಸುತ್ತಿದ್ದೆವು. ಖಂಡಿತವಾಗಿಯೂ ಅವನು ಮಹಾ ಉಪಕಾರಿ ಹಾಗೂ ಕರುಣಾಮಯಿಯಾಗಿದ್ದಾನೆ

[30] (ದೂತರೇ,) ನೀವು ಉಪದೇಶಿಸಿರಿ. ನಿಮ್ಮ ಒಡೆಯನ ಅನುಗ್ರಹದಿಂದ ನೀವು ಮಾಂತ್ರಿಕರೂ ಅಲ್ಲ, ಮನೋರೋಗಿಯೂ ಅಲ್ಲ

[31] ‘‘ಅವನೊಬ್ಬ ಕವಿ. ಅವನು ಕಾಲದ ಪ್ರಹಾರಕ್ಕೆ ತುತ್ತಾಗುವುದನ್ನು ಕಾಣಲು ನಾವು ಕಾಯುತ್ತಿದ್ದೇವೆ’’ ಎಂದು ಅವರು ಹೇಳುತ್ತಿದ್ದಾರೆಯೇ

[32] ನೀವು ಹೇಳಿರಿ; ನೀವು ಕಾಯುತ್ತಲೇ ಇರಿ. ನಿಮ್ಮ ಜೊತೆ ನಾನೂ ಕಾದಿರುತ್ತೇನೆ

[33] ಅವರ ಬುದ್ಧಿಗಳು ಅವರಿಗೆ ಇದನ್ನೇ ಕಲಿಸುತ್ತಿವೆಯೇ? ಅಥವಾ ಅವರೇನು ವಿದ್ರೋಹಿಗಳಾಗಿ ಬಿಟ್ಟಿರುವರೇ

[34] ‘‘ಅವನು ಇದನ್ನು (ಕುರ್‌ಆನನ್ನು) ತಾನೇ ರಚಿಸಿಕೊಂಡಿದ್ದಾನೆ’’ ಎಂದವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು ನಂಬುತ್ತಿಲ್ಲ

[35] ಅವರು ಸತ್ಯವಂತರಾಗಿದ್ದರೆ, ಇಂತಹ ಒಂದು ವಚನವನ್ನು ಅವರು ರಚಿಸಿ ತರಲಿ

[36] ಅವರೇನು ಶೂನ್ಯದಿಂದ ಸೃಷ್ಟಿಸಲ್ಪಟ್ಟಿರುವರೇ ಅಥವಾ ಸ್ವತಃ ಅವರು ಸೃಷ್ಟಿಕರ್ತರಾಗಿರುವರೇ

[37] ಆಕಾಶಗಳನ್ನು ಹಾಗೂ ಭೂಮಿಯನ್ನೇನು ಅವರು ಸೃಷ್ಟಿಸಿರುವರೇ? ನಿಜವಾಗಿ ಅವರಿಗೆ ದೃಢ ನಂಬಿಕೆ ಇಲ್ಲ

[38] ನಿಮ್ಮೊಡೆಯನ ಭಂಡಾರಗಳೇನು ಅವರ ಬಳಿ ಇವೆಯೇ? ಅಥವಾ ಅವರೇನು (ನಾಡಿನ) ಕಾವಲುಗಾರರೇ

[39] ಅವರ ಬಳಿಯೇನು ಏಣಿ ಇದೆಯೇ? ಅವರೇನು ಅದರ ಮೇಲೇರಿ (ಆಕಾಶ ಲೋಕದ ಸಮಾಚಾರಗಳಿಗೆ) ಕಿವಿ ಗೊಡುತ್ತಿದ್ದಾರೆಯೇ? ಹಾಗಾದರೆ (ಆ ರೀತಿ) ಕಿವಿ ಗೊಡುವ ಅವರ ವ್ಯಕ್ತಿಯು ಸ್ಪಷ್ಟವಾದ ಪುರಾವೆಯನ್ನು ತರಲಿ

[40] ಅವನಿಗೆ (ಅಲ್ಲಾಹನಿಗೆ) ಪುತ್ರಿಯರು ಮತ್ತು ಅವರಿಗೆ ಪುತ್ರರೇ

[41] (ದೂತರೇ,) ನೀವೇನು ಅವರಿಂದ ಏನಾದರೂ ಪ್ರತಿಫಲವನ್ನು ಅಪೇಕ್ಷಿಸಿರುವಿರಾ ಮತ್ತು ಅವರು ತಲೆದಂಡದ ಭಾರದಡಿ ನರಳುತ್ತಿರುವರೇ

[42] ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತಲೋಕದ ಜ್ಞಾನವೇನಾದರೂ ಇದೆಯೇ

[43] ಅವರೇನು, ಯಾವುದಾದರೂ ಸಂಚು ಹೂಡ ಬಯಸುತ್ತಾರೆಯೇ? ಕೊನೆಗೆ ಧಿಕ್ಕಾರಿಗಳೇ ಸಂಚಿಗೆ ತುತ್ತಾಗುವರು

[44] ಅವರಿಗೇನು ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅಲ್ಲಾಹನಂತು, ಅವರು ಪಾಲುಗೊಳಿಸುವ ಎಲ್ಲವುಗಳಿಂದ ಮುಕ್ತನಾಗಿದ್ದಾನೆ

[45] ಅವರು, ಆಕಾಶದ ಒಂದು ತುಂಡು ಮುರಿದು ಬೀಳುವುದನ್ನು ಕಂಡರೂ, ಅದು ಗಟ್ಟಿಯಾಗಿದ್ದ ಮೋಡ ಎಂದಷ್ಟೇ ಹೇಳುವರು

[46] ಅವರು ತಮ್ಮನ್ನು ಮೂರ್ಛೆ ಹೋಗಿಸುವ ದಿನವನ್ನು ಕಾಣುವ ತನಕ, ನೀವು ಅವರನ್ನು ಬಿಟ್ಟು ಬಿಡಿರಿ

[47] ಆ ದಿನ ಅವರ ಸಂಚು ಅವರ ಯಾವ ಕೆಲಸಕ್ಕೂ ಬಾರದು ಮತ್ತು ಅವರಿಗೆ ಯಾವ ನೆರವೂ ಸಿಗದು

[48] ಮತ್ತು ಅಕ್ರಮಿಗಳಿಗೆ ಇದಲ್ಲದೆ ಇನ್ನೂ ಹೆಚ್ಚಿನ ಶಿಕ್ಷೆಯೂ ಖಂಡಿತ ಸಿಗುವುದು. ಅದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ

[49] (ದೂತರೇ,) ನೀವು ನಿಮ್ಮ ಪ್ರಭುವಿನ ಆದೇಶದಂತೆ ಸಹನಶೀಲರಾಗಿರಿ. ನೀವು ಖಂಡಿತ ನಮ್ಮ ಕಣ್ಣ ಮುಂದಿರುವಿರಿ. ನೀವು ಎದ್ದೇಳುವಾಗ, ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ

ನಕ್ಷತ್ರ

Surah 53

[1] ಹಾಗೆಯೇ, ಇರುಳಲ್ಲೂ, ನಕ್ಷತ್ರಗಳು ಕಣ್ಮರೆಯಾಗುವ ವೇಳೆಯೂ ನೀವು ಅವನ ಪಾವಿತ್ರವನ್ನು ಜಪಿಸಿರಿ

[2] ನಕ್ಷತ್ರವು ಕಣ್ಮರೆಯಾಗುವ ಸಮಯದ ಆಣೆ

[3] ನಿಮ್ಮ ಸಂಗಾತಿ (ದೂತರು) ದಾರಿತಪ್ಪಿಲ್ಲ ಮತ್ತು ಅವರು ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲ

[4] ಅವರು ತಮ್ಮ ಅಪೇಕ್ಷೆಯಿಂದ ಮಾತನಾಡುವುದಿಲ್ಲ

[5] ಇದು, (ಕುರ್‌ಆನ್) – ಅವರಿಗೆ ನೀಡಲಾಗಿರುವ ದಿವ್ಯ ಸಂದೇಶವಲ್ಲದೆ ಬೇರೇನಲ್ಲ

[6] ಇದನ್ನು ಅವರಿಗೆ ಶಕ್ತಿಶಾಲಿಯಾಗಿರುವವನು (ಮಲಕ್) ಕಲಿಸಿ ಕೊಟ್ಟಿರುವನು

[7] ಅವನು ತುಂಬಾ ಬಲಿಷ್ಠನು. ಅವನು (ನಿಜರೂಪದಲ್ಲಿ) ಮುಂದೆ ಬಂದನು

[8] ಅವನು ಬಾನಿನ ಎತ್ತರದ ಅಂಚಿನಲ್ಲಿದ್ದನು

[9] ಮತ್ತೆ ಅವನು ಹತ್ತಿರ ಬಂದನು ಮತ್ತು ಇನ್ನಷ್ಟು ನಿಕಟನಾದನು

[10] ಕೊನೆಗೆ ಅವನು ಬಿಲ್ಲಿನ ಎರಡು ತುದಿಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿದ್ದನು

[11] ಆಬಳಿಕ, ಅವನು (ಅಲ್ಲಾಹನು) ತನ್ನ ದಾಸನಿಗೆ ನೀಡಬೇಕಾದ ಸಂದೇಶವನ್ನು ನೀಡಿದನು

[12] ತಾನು ಕಂಡದ್ದು ಸುಳ್ಳೆಂದು ಅವರ (ದೂತರ) ಮನಸ್ಸು ಹೇಳಲಿಲ್ಲ

[13] ನೀವೀಗ, ಅವರು ಕಂಡದ್ದರ ಕುರಿತು ಅವರೊಡನೆ ಜಗಳಾಡುವಿರಾ

[14] ಅವರು ಆತನನ್ನು ಎರಡನೇ ಬಾರಿಯೂ ಕಂಡರು

[15] ‘ಸಿದ್ರತುಲ್ ಮುನ್‌ತಹಾ’ದ ಬಳಿ

[16] ಅದರ ಬಳಿಯೇ ಇದೆ, ಸ್ವರ್ಗದ ವಿಶ್ರಾಂತಿ ನಿಲಯ

[17] ಸಿದ್ರಃವನ್ನು ಏನು ಆವರಿಸಿತೋ ಅದು ಆವರಿಸಿದಾಗ

[18] ದೃಷ್ಟಿಯು ಎಡವಲೂ ಇಲ್ಲ, ಮಿತಿಮೀರಲೂ ಇಲ್ಲ

[19] ಖಚಿತವಾಗಿ ಅವರು ತಮ್ಮ ಒಡೆಯನ ಕೆಲವು ದೊಡ್ಡ ಪ್ರಮಾಣಗಳನ್ನು ಕಂಡರು

[20] ನೀವು ಕಂಡಿರಾ ‘ಲಾತ್’ ಹಾಗೂ ‘ಉಝ್ಝಾ’ ಗಳನ್ನು

[21] ಮತ್ತು ‘ಮನಾತ್’ ಎಂಬ ಮೂರನೆಯದೊಂದನ್ನು

[22] ನಿಮಗೆ ಪುತ್ರರು ಮತ್ತು ಅವನಿಗೆ ಪುತ್ರಿಯರೇ

[23] ಇದು ತೀರಾ ಅಸಮರ್ಪಕ ವಿತರಣೆಯಾಗಿದೆ

[24] ನಿಜವಾಗಿ ಅವೆಲ್ಲಾ ಕೇವಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟು ಬಿಟ್ಟಿರುವ ಕೆಲವು ಹೆಸರುಗಳು ಮಾತ್ರ. ಅದರ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿ ಕೊಟ್ಟಿಲ್ಲ. ಅವರು ಕೇವಲ ತಮ್ಮ ಊಹೆಯನ್ನು ಹಾಗೂ ಸ್ವೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ಇದೀಗ ಅವರ ಬಳಿಗೆ ಅವರ ಒಡೆಯನ ಕಡೆಯಿಂದ ಮಾರ್ಗದರ್ಶನವು ಬಂದಿದೆ

[25] ಮನುಷ್ಯನಿಗೇನು, ಅವನು ಬಯಸಿದ್ದೆಲ್ಲವೂ ಸಿಕ್ಕಿ ಬಿಡುತ್ತದೆಯೇ

[26] ನಿಜವಾಗಿ, ಅಂತ್ಯವೂ ಆದಿಯೂ ಅಲ್ಲಾಹನಿಗೇ ಸೇರಿದೆ

[27] ಆಕಾಶಗಳಲ್ಲಿ ಅದೆಷ್ಟೋ ‘ಮಲಕ್’ಗಳಿದ್ದಾರೆ. ಅವರ ಶಿಫಾರಸ್ಸಿನಿಂದ ಯಾವ ಲಾಭವೂ ಆಗುವುದಿಲ್ಲ – ತಾನಿಚ್ಛಿಸುವವನ ಪರವಾಗಿ ಅಲ್ಲಾಹನು ಅನುಮತಿ ನೀಡುವ ಹಾಗೂ ಅವನು ಇಷ್ಟ ಪಡುವ ಮುನ್ನ

[28] ಪರಲೋಕದಲ್ಲಿ ನಂಬಿಕೆ ಇಲ್ಲದವರು ಮಲಕ್‌ಗಳಿಗೆ ಹೆಣ್ಮಕ್ಕಳ ಹೆಸರುಗಳನ್ನಿಡುತ್ತಾರೆ

[29] ಅವರಿಗೆ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಮತ್ತು ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಲ್ಲ

[30] ನಮ್ಮ ಉಪದೇಶದಿಂದ ಮುಖ ತಿರುಗಿಸಿ ಕೊಂಡಿರುವವನನ್ನು ಕಡೆಗಣಿಸಿರಿ – ಅವನು ಬಯಸುವುದು ಕೇವಲ ಇಹಲೋಕದ ಬದುಕನ್ನು ಮಾತ್ರ

[31] ಅದುವೇ ಅವರ ಜ್ಞಾನದ ಮಿತಿಯಾಗಿದೆ. ಖಂಡಿತವಾಗಿಯೂ ನಿಮ್ಮ ಒಡೆಯನು – ತನ್ನ ಮಾರ್ಗದಿಂದ ದೂರ ಸರಿದಿರುವವನು ಯಾರೆಂಬುದನ್ನು ಚೆನ್ನಾಗಿ ಬಲ್ಲನು ಮತ್ತು ಸರಿದಾರಿಯಲ್ಲಿರುವವನು ಯಾರೆಂಬುದನ್ನೂ ಅವನು ಚೆನ್ನಾಗಿ ಬಲ್ಲನು

[32] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಅವನು ಅವರ ಕರ್ಮಕ್ಕನುಸಾರವಾದ ಪ್ರತಿಫಲವನ್ನು ನೀಡುವನು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಸತ್ಫಲವನ್ನು ನೀಡುವನು

[33] ಅವರು (ಸತ್ಕರ್ಮಿಗಳು), ಸಣ್ಣ ಪುಟ್ಟ ಪ್ರಮಾದಗಳ ಹೊರತು, ಎಲ್ಲ ದೊಡ್ಡ ಪಾಪಕೃತ್ಯಗಳಿಂದ ಹಾಗೂ ಅಶ್ಲೀಲ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಖಂಡಿತವಾಗಿಯೂ ನಿಮ್ಮೊಡೆಯನು ವಿಶಾಲ ಕ್ಷಮಾ ಗುಣ ಉಳ್ಳವನಾಗಿದ್ದಾನೆ. ಅವನಂತೂ, ತಾನು ನಿಮ್ಮನ್ನು ಭೂಮಿಯಿಂದ ಹುಟ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಹೊಟ್ಟೆಗಳೊಳಗೆ ಪುಟ್ಟ ಮಕ್ಕಳಾಗಿದ್ದಾಗಲೂ ನಿಮ್ಮನ್ನು ಚೆನ್ನಾಗಿ ಬಲ್ಲನು. ನೀವು ನಿಮ್ಮ ಪಾವಿತ್ರದ ಕುರಿತು ಕೊಚ್ಚಿಕೊಳ್ಳಬೇಡಿ. ಧರ್ಮನಿಷ್ಠನು ಯಾರೆಂಬುದನ್ನು ಅವನು ಚೆನ್ನಾಗಿ ಬಲ್ಲನು

[34] ನೀವು ನೋಡಿದಿರಾ, ಮುಖ ತಿರುಗಿಸಿ ಕೊಂಡವನನ್ನು

[35] ಅವನು ಸ್ವಲ್ಪವನ್ನು ಮಾತ್ರ (ದಾನವಾಗಿ) ಕೊಟ್ಟನು ಮತ್ತು (ಉಳಿದುದನ್ನು) ತಡೆದಿಟ್ಟುಕೊಂಡನು

[36] ಅವನ ಬಳಿ ಕಾಣದ ಲೋಕದ ಜ್ಞಾನವಿದೆಯೇ ಮತ್ತು ಅವನು ಅದನ್ನು (ಕಾಣದ ಲೋಕವನ್ನು) ಕಾಣುತ್ತಿದ್ದಾನೆಯೇ

[37] ಅವನಿಗೆ ತಿಳಿಸಲಾಗಿಲ್ಲವೇ, ಮೂಸಾರ ಹೊತ್ತಗೆಗಳಲ್ಲಿರುವ ವಿಷಯವನ್ನು

[38] ಮತ್ತು (ದಿವ್ಯಾದೇಶಗಳನ್ನು) ಪಾಲಿಸಿದ ಇಬ್ರಾಹೀಮರ (ಸಮಾಚಾರವನ್ನು)

[39] (ಪರಲೋಕದಲ್ಲಿ) ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು

[40] ಮತ್ತು ಮಾನವನಿಗೆ, ಅವನು ಶ್ರಮಿಸಿದಷ್ಟಲ್ಲದೆ ಬೇರೇನೂ ಸಿಗದು

[41] ಮತ್ತು ಅವನ ಶ್ರಮವು (ಪ್ರತಿಫಲದ ರೂಪದಲ್ಲಿ) ಬೇಗನೇ ಕಾಣಲು ಸಿಗುವುದು

[42] ಆ ಬಳಿಕ ಅವನಿಗೆ ಪೂರ್ಣ ಪ್ರತಿಫಲ ನೀಡಲಾಗುವುದು

[43] ಮತ್ತು (ಎಲ್ಲವೂ ತೆರಳುವ) ಅಂತಿಮ ನೆಲೆಯು ನಿಮ್ಮ ಒಡೆಯನ ಕಡೆಗೇ ಇದೆ

[44] ಖಂಡಿತವಾಗಿಯೂ ಅವನೇ (ಅಲ್ಲಾಹನೇ) ನಗಿಸುತ್ತಾನೆ ಮತ್ತು ಅಳಿಸುತ್ತಾನೆ

[45] ಮತ್ತು ಅವನೇ ಸಾಯಿಸುತ್ತಾನೆ ಮತ್ತು ಬದುಕಿಸುತ್ತಾನೆ

[46] ಅವನೇ, ಗಂಡು ಮತ್ತು ಹೆಣ್ಣೆಂಬ ಜೊತೆಗಳನ್ನು ಸೃಷ್ಟಿಸಿದವನು –

[47] – ಸುರಿಸಲಾದ ವೀರ್ಯದಿಂದ

[48] ಪುನಃ ಜೀವಂತಗೊಳಿಸುವ ಹೊಣೆಯೂ ಅವನ ಮೇಲೆಯೇ ಇದೆ

[49] ಅವನೇ, ಸ್ವಾಯತ್ತಗೊಳಿಸಿದವನು ಹಾಗೂ ಸಂಪನ್ನಗೊಳಿಸಿದವನು

[50] ಅವನೇ ‘ಶಿಅ್ರಾ’ದ (ತಾರೆಯ) ಒಡೆಯನು

[51] ಅವನೇ, ಪ್ರಥಮ ‘ಆದ್’ರನ್ನು ನಾಶ ಮಾಡಿದವನು

[52] ಮತ್ತು ಸಮೂದರನ್ನೂ ಅಷ್ಟೇ. ಅವನು (ಅವರಲ್ಲಿ) ಯಾರನ್ನೂ ಉಳಿಸಲಿಲ್ಲ

[53] ಈ ಹಿಂದೆ ನೂಹರ ಜನಾಂಗವನ್ನು (ಅವನು ನಾಶಮಾಡಿದ್ದನು). ಖಂಡಿತವಾಗಿಯೂ ಅವರು ತುಂಬಾ ಅಕ್ರಮಿಗಳಾಗಿದ್ದರು ಹಾಗೂ ವಿದ್ರೋಹಿಗಳಾಗಿದ್ದರು

[54] ಮತ್ತು ಅವನು ಮಗುಚಿ ಬಿದ್ದ (ಲೂತ್‌ರ ಜನಾಂಗದ) ನಾಡನ್ನು ನುಚ್ಚು ನೂರು ಮಾಡಿದನು

[55] ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು

[56] (ಮಾನವಾ,) ನೀನಿನ್ನು ನಿನ್ನೊಡೆಯನ ಯಾವೆಲ್ಲ ಕೊಡುಗೆಗಳ ಕುರಿತು ಸಂಶಯಿಸುವೆ

[57] ಅವರು (ದೂತರು) ಈ ಹಿಂದೆ ಎಚ್ಚರಿಸಲು ಬಂದವರ ಸಾಲಿನ, ಒಬ್ಬ ಎಚ್ಚರಿಸುವವರಾಗಿದ್ದಾರೆ

[58] ಹತ್ತಿರ ಬರಬೇಕಾದುದು (ಲೋಕಾಂತ್ಯದ ಘಳಿಗೆ) ಹತ್ತಿರ ಬಂದು ಬಿಟ್ಟಿದೆ

[59] ಅಲ್ಲಾಹನ ಹೊರತು ಬೇರಾರೂ ಅದನ್ನು ನಿವಾರಿಸಲಾರರು

[60] ನೀವೇನು ಈ ಮಾತಿನ ಕುರಿತು ಅಚ್ಚರಿ ಪಡುತ್ತಿದ್ದೀರಾ

[61] ಮತ್ತು ನೀವು ನಗುತ್ತೀರಿ, ಅಳುವುದಿಲ್ಲ

[62] ನೀವು ಭಾರೀ ದೊಡ್ಡಸ್ತಿಕೆ ಮೆರೆಯುತ್ತೀರಿ

ಚಂದ್ರ

Surah 54

[1] ಇನ್ನಾದರೂ, ನೀವು ಅಲ್ಲಾಹನಿಗೆ ಸಾಷ್ಟಾಂಗ ವಂದಿಸಿರಿ ಮತ್ತು ಅವನನ್ನೇ ಆರಾಧಿಸಿರಿ

[2] (ಲೋಕಾಂತ್ಯದ) ಆ ಕ್ಷಣವು ಸಮೀಪಿಸಿತು ಮತ್ತು ಚಂದ್ರವು ಸೀಳಿಹೋಯಿತು

[3] ಅವರು ಯಾವುದಾದರೂ ಪುರಾವೆಯನ್ನು ಕಂಡಾಗ ಮುಖ ತಿರುಗಿಸಿಕೊಳ್ಳುತ್ತಾರೆ ಮತ್ತು ಇದು ತೀರ ತಾತ್ಕಾಲಿಕ ಜಾದೂಗಾರಿಕೆ ಎನ್ನುತ್ತಾರೆ

[4] ಅವರು (ಸತ್ಯವನ್ನು) ತಿರಸ್ಕರಿಸಿದರು ಮತ್ತು ಸ್ವೇಚ್ಛೆಯನ್ನು ಅನುಸರಿಸಿದರು. ನಿಜವಾಗಿ, ಎಲ್ಲ ವಿಷಯಗಳಿಗೂ ಒಂದು ಕಾಲ ನಿಶ್ಚಿತವಾಗಿರುತ್ತದೆ

[5] ಖಂಡಿತ, ಪಾಠದಾಯಕ ಮಾಹಿತಿಗಳು ಅವರ ಬಳಿಗೆ ಬಂದಿವೆ

[6] ಪರಿಪೂರ್ಣ ಜಾಣ್ಮೆಯ (ಉಪದೇಶವು ತಲುಪಿದೆ). ಆದರೆ ಎಚ್ಚರಿಸುವವರಿಂದ ಅವರಿಗೇನೂ ಲಾಭವಾಗಿಲ್ಲ

[7] (ದೂತರೇ,) ನೀವು ಅವರನ್ನು ಕಡೆಗಣಿಸಿಬಿಡಿರಿ. (ಶೀಘ್ರದಲ್ಲೇ) ಕರೆಯುವವನೊಬ್ಬನು ತೀರಾ ಅಪ್ರಿಯವಾದುದರ ಕಡೆಗೆ (ಅವರನ್ನು) ಕರೆಯುವನು

[8] ಆಗ ಅವರ ದೃಷ್ಟಿಗಳು ತಗ್ಗಿರುವವು. ಅವರು ಚದುರಿದ ಮಿಡತೆಗಳೋ ಎಂಬಂತೆ ಗೋರಿಗಳಿಂದ ಎದ್ದು ಬರುವರು

[9] ಕೂಗುವಾತನೆಡೆಗೆ ಅವರು ಧಾವಿಸುತ್ತಿರುವರು. ಅಂದು ಧಿಕ್ಕಾರಿಯು ಹೇಳುವನು; ಇದು ತುಂಬಾ ಕಠಿಣ ದಿನ

[10] ಅವರಿಗಿಂತ ಹಿಂದೆ ನೂಹ್‌ರ ಜನಾಂಗವು (ಸತ್ಯವನ್ನು) ತಿರಸ್ಕರಿಸಿತ್ತು. ಅವರು, ನಮ್ಮ ದಾಸರನ್ನು ತಿರಸ್ಕರಿಸಿದ್ದರು ಮತ್ತು ಅವರನ್ನು ಹುಚ್ಚನೆಂದು ಕರೆದರು ಹಾಗೂ ಅವರಿಗೆ ಬೆದರಿಕೆ ಒಡ್ಡಿದರು

[11] ಕೊನೆಗೆ ಅವರು (ನೂಹರು), ನಾನಿದೋ ಸೋತು ಹೋಗಿದ್ದೇನೆ. ಇದೀಗ ನೀನೇ ಪ್ರತೀಕಾರ ತೀರಿಸು ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು

[12] ನಾವು, ಧಾರಾಳವಾಗಿ ಸುರಿಯುವ ಮಳೆಯ ಮೂಲಕ ಆಕಾಶದ ಬಾಗಿಲುಗಳನ್ನು ತೆರೆದುಬಿಟ್ಟೆವು

[13] ಮತ್ತು ನಾವು ಭೂಮಿಯಿಂದ ಚಿಲುಮೆಗಳನ್ನು ಹರಿಸಿಬಿಟ್ಟೆವು. ಕೊನೆಗೆ, ಮೊದಲೇ ನಿರ್ಧಾರವಾಗಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು

[14] ಮತ್ತು ನಾವು ಅವರನ್ನು (ನೂಹರನ್ನು), ಹಲಗೆಗಳು ಹಾಗೂ ಮೊಳೆಗಳಿದ್ದ ವಸ್ತುವಿಗೆ (ಹಡಗಿಗೆ) ಹತ್ತಿಸಿದೆವು

[15] ಅದು ನಮ್ಮ ಕಣ್ಣ ಮುಂದೆಯೇ (ನಮ್ಮ ಕಾವಲಿನಲ್ಲಿ) ಚಲಿಸುತ್ತಿತ್ತು. (ಹೀಗಿತ್ತು) ಧಿಕ್ಕರಿಸಲ್ಪಟ್ಟವನ ಪರವಾಗಿ ತೀರಿಸಲಾದ ಪ್ರತೀಕಾರ

[16] ಮತ್ತು ನಾವು ಅದನ್ನು ಒಂದು ಪುರಾವೆಯಾಗಿ ಉಳಿಸಿದೆವು. ಪಾಠ ಕಲಿಯುವವರು ಯಾರಾದರೂ ಇದ್ದಾರೆಯೇ

[17] (ನೋಡಿರಿ,) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ

[18] ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು

[19] ಆದ್ ಜನಾಂಗದವರೂ (ಸತ್ಯವನ್ನು) ತಿರಸ್ಕರಿಸಿದ್ದರು. (ಅವರ ವಿಷಯದಲ್ಲೂ) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ

[20] ಒಂದು ಅಶುಭ ದಿನದಂದು, ನಾವು ಅವರ ವಿರುದ್ಧ ಪ್ರಚಂಡ ಬಿರುಗಾಳಿಯನ್ನು ಕಳಿಸಿದೆವು. ಅದು ಬೀಸುತ್ತಲೇ ಇತ್ತು

[21] ಅದು ಜನರನ್ನು, ಉರುಳಿ ಬಿದ್ದ ಖರ್ಜೂರ ಗಿಡದ ಬುಡಗಳೆಂಬಂತೆ ಕಿತ್ತೆಸೆಯುತ್ತಿತ್ತು

[22] ಹೇಗಿತ್ತು, ನನ್ನ ಶಿಕ್ಷೆ ಹಾಗೂ ಎಚ್ಚರಿಕೆ

[23] ಉಪದೇಶಕ್ಕಾಗಿ, ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು

[24] ಸಮೂದ್ ಜನಾಂಗದವರು, ಎಚ್ಚರಿಸುವವರನ್ನು ತಿರಸ್ಕರಿಸಿದರು

[25] ಅವರು ಹೇಳಿದರು; ನಾವೇನು, ನಮ್ಮೊಳಗಿನ ಒಬ್ಬ ಮಾನವನನ್ನು ಹಿಂಬಾಲಿಸಬೇಕೇ? ಹಾಗೆ ಮಾಡಿದರೆ ನಾವು ದಾರಿಗೆಟ್ಟವರು ಹಾಗೂ ಹುಚ್ಚರಾಗಿ ಬಿಡುವೆವು

[26] ನಮ್ಮ ಪೈಕಿ ಅವನಿಗೆ ದಿವ್ಯ ಬೋಧನೆಯನ್ನು ಇಳಿಸಿಕೊಡಲಾಗಿದೆಯೇ? ಅವನಂತು ಸುಳ್ಳುಗಾರ ಹಾಗೂ ತನ್ನನ್ನೇ ಹೊಗಳುವವನಾಗಿದ್ದಾನೆ

[27] ಸುಳ್ಳುಗಾರ ಮತ್ತು ತನ್ನನ್ನೇ ಹೊಗಳುವವನು ಯಾರೆಂಬುದು ಅವರಿಗೆ ನಾಳೆ ತಿಳಿಯಲಿದೆ

[28] ನಾವು ಅವರ ಪಾಲಿಗೆ ಪರೀಕ್ಷೆಯಾಗಿ ಒಂದು ಹೆಣ್ಣೊಂಟೆಯನ್ನು ಕಳಿಸುವೆವು (ಸಾಲಿಹರೇ,) ನೀವು ಅವರನ್ನು ನೋಡುತ್ತಲಿರಿ ಹಾಗೂ ಸಹನಶೀಲರಾಗಿರಿ

[29] ಮತ್ತು ನೀರನ್ನು ಅವರ ನಡುವೆ ಹಂಚಲಾಗಿದೆ. ಪ್ರತಿಯೊಬ್ಬರೂ ನೀರು ಕುಡಿಯುವ ತಮ್ಮ ಸರದಿಯ ವೇಳೆ ಹಾಜರಿರಬೇಕು ಎಂದು ಅವರಿಗೆ ತಿಳಿಸಿರಿ (ಎನ್ನಲಾಯಿತು)

[30] ಅವರು (ಊರವರು) ತಮ್ಮ ಸಂಗಾತಿಯನ್ನು ಕರೆದರು. ಅವನು ಅತಿಕ್ರಮಕ್ಕಿಳಿದನು ಹಾಗೂ ಅವನು (ಒಂಟೆಯನ್ನು) ಕಡಿದು ಬಿಟ್ಟನು

[31] ಕೊನೆಗೆ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆ (ಎಂಬುದನ್ನು ನೋಡಿರಿ)

[32] ನಾವು ಅವರ ಮೇಲೆ ಒಂದೇ ಒಂದು ಅಬ್ಬರದ ಸಿಡಿಲನ್ನು ಎರಗಿಸಿಬಿಟ್ಟೆವು. ಅಷ್ಟಕ್ಕೇ ಅವರು ಒಣ ಹುಲ್ಲಿನಂತಾಗಿ ಬಿಟ್ಟರು

[33] ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಉಪದೇಶ ಸ್ವೀಕರಿಸುವವನು ಯಾರಾದರೂ ಇದ್ದಾನೆಯೇ

[34] ಲೂತ್‌ರ ಜನಾಂಗದವರು, ಎಚ್ಚರಿಸುವವರನ್ನು ತಿರಸ್ಕರಿಸಿದರು

[35] ನಾವು ಅವರ ಮೇಲೆ ಕಲ್ಲುಗಳನ್ನು ಸುರಿಸುವ ಬಿರುಗಾಳಿಯನ್ನು ಎರಗಿಸಿದೆವು – ಲೂತ್‌ರ ಮನೆಯವರ ಹೊರತು. ಅವರನ್ನು ನಾವು ಮುಂಜಾವಿನ ಸಮಯದಲ್ಲೇ ರಕ್ಷಿಸಿದೆವು

[36] ಅದು ನಮ್ಮ ವತಿಯಿಂದ (ನೀಡಲಾದ) ಕೊಡುಗೆಯಾಗಿತ್ತು. ಕೃತಜ್ಞನಾದವನನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ

[37] ಅವರು (ಲೂತರು) ನಮ್ಮ ಶಿಕ್ಷೆಯ ಕುರಿತು ಅವರನ್ನು (ತಮ್ಮ ಜನಾಂಗದವರನ್ನು) ಎಚ್ಚರಿಸಿದ್ದರು. ಆದರೆ ಅವರು ಆ ಎಚ್ಚರಿಕೆಯ ಕುರಿತು ಜಗಳಾಡ ತೊಡಗಿದರು

[38] ಮತ್ತು ಅವರು, ಅವರ (ಲೂತರ) ಅತಿಥಿಗಳನ್ನು ಅವರಿಂದ ಕಸಿದುಕೊಳ್ಳ ಬಯಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು – ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು

[39] ಮುಂಜಾನೆಯೇ ಅವರ ಮೇಲೆ ಶಾಶ್ವತ ಶಿಕ್ಷೆಯೊಂದು ಎರಗಿಬಿಟ್ಟಿತು

[40] ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು

[41] ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳಗೊಳಿಸಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು

[42] ಮತ್ತು ಫಿರ್‌ಔನನ ಜನಾಂಗದವರ ಬಳಿಗೂ ಎಚ್ಚರಿಸುವವರು ಬಂದಿದ್ದರು

[43] ಅವರು ನಮ್ಮ ಎಲ್ಲ ಪುರಾವೆಗಳನ್ನೂ ತಿರಸ್ಕರಿಸಿದರು. ಕೊನೆಗೆ ನಾವು ಅವರನ್ನು ಹಿಡಿದೆವು. ಅದು ಭಾರೀ ಪ್ರಬಲನೂ ಬಲಿಷ್ಠನೂ ಆಗಿರುವವನ ಹಿಡಿತವಾಗಿತ್ತು

[44] ನಿಮ್ಮಲ್ಲಿನ ಧಿಕ್ಕಾರಿಗಳೇನು ಅವರಿಗಿಂತ ಉತ್ತಮರೇ? ಅಥವಾ (ಗತಕಾಲದ) ದಿವ್ಯ ಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮಾ ಪತ್ರ ನೀಡಲಾಗಿದೆಯೇ

[45] ನಾವು ಪ್ರತೀಕಾರ ತೀರಿಸಬಲ್ಲ (ಶಕ್ತಿಶಾಲಿ) ಪಡೆಯಾಗಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆಯೇ

[46] ಬಹು ಬೇಗನೇ ಆ ಪಡೆ ಸೋತು ಹೋಗಲಿದೆ ಮತ್ತು ಅವರು ಬೆನ್ನು ತಿರುಗಿಸಿ ಓಡಲಿದ್ದಾರೆ

[47] ಅವರಿಗೆ (ಪುನರುತ್ಥಾನದ) ಆ ಕ್ಷಣದ ವಾಗ್ದಾನ ಮಾಡಲಾಗಿದೆ ಮತ್ತು ಆ ಕ್ಷಣವು ತುಂಬಾ ಕಠಿಣ ಹಾಗೂ ಅಸಹನೀಯವಾಗಿರುವುದು

[48] ಖಂಡಿತವಾಗಿಯೂ ಅಪರಾಧಿಗಳು ದಾರಿಗೆಟ್ಟಿದ್ದಾರೆ ಹಾಗೂ ಸಂಪೂರ್ಣ ಅಜ್ಞಾನದ ಸ್ಥಿತಿಯಲ್ಲಿದ್ದಾರೆ

[49] ಅವರ ಮುಖಗಳನ್ನು ನೆಲಕ್ಕೆ ಒರಗಿಸಿ ಅವರನ್ನು ಎಳೆಯುತ್ತಾ ನರಕಕ್ಕೆ ಸಾಗಿಸಲಾಗುವ ದಿನ ‘‘ಸವಿಯಿರಿ ಬೆಂಕಿಯ ಉರಿಯನ್ನು’’ (ಎಂದು ಅವರೊಡನೆ ಹೇಳಲಾಗುವುದು)

[50] ನಾವು ಪ್ರತಿಯೊಂದು ವಸ್ತುವನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಸೃಷ್ಟಿಸಿರುವೆವು

[51] ಮತ್ತು ನಮ್ಮ ಆದೇಶವು ಕಣ್ಮುಚ್ಚಿ ತೆರೆಯುವಷ್ಟು ಕ್ಷಿಪ್ರವಾದ ಕೇವಲ ಒಂದು ಸೂಚನೆಯಾಗಿರುತ್ತದೆ

[52] ನಾವು ನಿಮ್ಮ ಸಹವರ್ತಿಗಳನ್ನು ನಾಶ ಮಾಡಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು

[53] ಅವರು ಮಾಡಿದ್ದೆಲ್ಲವೂ ಗ್ರಂಥಗಳಲ್ಲಿ ದಾಖಲಾಗಿದೆ

[54] ಸಣ್ಣ ಹಾಗೂ ದೊಡ್ಡ ಎಲ್ಲ ವಿಷಯಗಳೂ ಲಿಖಿತವಾಗಿವೆ

[55] ಧರ್ಮನಿಷ್ಠರು ಖಂಡಿತ ಭವ್ಯ ತೋಟಗಳಲ್ಲಿ ಹಾಗೂ ನದಿಗಳಲ್ಲಿರುವರು

ಉಪಕಾರಿ

Surah 55

[1] ನಿರ್ಮಲ ಸ್ಥಾನದಲ್ಲಿ, ಸರ್ವಶಕ್ತನಾದ ದೊರೆಯ (ಅಲ್ಲಾಹನ) ಸಮೀಪ

[2] ಅಪಾರ ದಯಾಳು

[3] (ಅವನೇ) ಕುರ್‌ಆನನ್ನು ಕಲಿಸಿರುವನು

[4] ಮನುಷ್ಯನನ್ನು ಸೃಷ್ಟಿಸಿರುವನು

[5] ಅವನಿಗೆ ಮಾತನಾಡಲು ಕಲಿಸಿರುವನು

[6] ಸೂರ್ಯ ಮತ್ತು ಚಂದ್ರ ಒಂದು ನಿರ್ದಿಷ್ಟ ಸೂತ್ರಕ್ಕೆ ಬದ್ಧವಾಗಿವೆ

[7] ಗಿಡಗಳು ಹಾಗೂ ಮರಗಳು ಸಾಷ್ಟಾಂಗವೆರಗುತ್ತವೆ

[8] ಅವನು ಆಕಾಶಗಳನ್ನು ಎತ್ತರಿಸಿರುವನು ಹಾಗೂ ಸಮತೋಲನವನ್ನು ಸ್ಥಾಪಿಸಿರುವನು –

[9] – ನೀವು ಸಮತೋಲನವನ್ನು ಮೀರಬಾರದೆಂದು

[10] ಮತ್ತು ನೀವು ನ್ಯಾಯೋಚಿತವಾಗಿ ತೂಗಿರಿ ಮತ್ತು ತೂಕದಲ್ಲಿ ಕಡಿತ ಮಾಡಬೇಡಿ

[11] ಮತ್ತು ಅವನು ಭೂಮಿಯನ್ನು ಜೀವಿಗಳಿಗಾಗಿ ಹಾಸಿರುವನು

[12] ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗೂ ಕವಚವಿರುವ ಖರ್ಜೂರಗಳಿವೆ

[13] ಹೊಟ್ಟು ಹಾಗೂ ಪರಿಮಳದ ಪುಷ್ಪವಿರುವ ಧಾನ್ಯಗಳಿವೆ

[14] ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

[15] ಅವನು ಮನುಷ್ಯನನ್ನು ಹಂಚಿನಂತಹ ಗಾರೆಮಣ್ಣಿನಿಂದ ಸೃಷ್ಟಿಸಿರುವನು

[16] ಮತ್ತು ಅವನು ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿರುವನು

[17] ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

[18] ಅವನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನು

[19] ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ

[20] ಅವನು ಎರಡು ಸಮುದ್ರಗಳನ್ನು ಪರಸ್ಪರ ಒಂದು ಗೂಡಿಸಿರುವನು

[21] ಅವುಗಳ ನಡುವೆ ಒಂದು ತೆರೆ ಇದೆ. ಅವು ಅದನ್ನು ಮೀರುವುದಿಲ್ಲ

[22] ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[23] ಅವೆರಡರಿಂದಲೂ ಮುತ್ತು ಹಾಗೂ ಹವಳಗಳು ಹೊರಡುತ್ತವೆ

[24] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[25] ಕಡಲಲ್ಲಿ ಪರ್ವತಗಳಂತೆ ಚಲಿಸುವ ಹಡಗುಗಳ ನಿಯಂತ್ರಣವು ಅವನಿಗೇ ಸೇರಿವೆ

[26] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[27] ಅದರಲ್ಲಿ (ಭೂಮಿಯಲ್ಲಿ) ಇರುವ ಎಲ್ಲವೂ ನಾಶವಾಗಲಿದೆ

[28] ಮತ್ತು ವೈಭವಪೂರ್ಣ ಹಾಗೂ ಮಾನ್ಯನಾದ ನಿಮ್ಮ ಒಡೆಯನು ಮಾತ್ರ ಉಳಿಯುವನು

[29] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[30] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನೊಡನೆಯೇ ಬೇಡುತ್ತಾರೆ. ಅವನು ನಿತ್ಯವೂ ಸಕ್ರಿಯನಾಗಿರುತ್ತಾನೆ

[31] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲಾ ಅನುಗ್ರಹಗಳನ್ನು ಅಲ್ಲಗಳೆಯುವಿರಿ

[32] ಎರಡು ಭಾರಗಳೇ (ಮಾನವರೇ ಹಾಗೂ ಜಿನ್ನ್‌ಗಳೇ), ಬಹು ಬೇಗನೇ ನಾವು ನಿಮ್ಮತ್ತ ಗಮನ ಹರಿಸಲಿದ್ದೇವೆ

[33] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[34] ಜಿನ್ನ್‌ಗಳೇ ಮತ್ತು ಮಾನವರೇ, ಆಕಾಶಗಳ ಹಾಗೂ ಭೂಮಿಯ ಗಡಿಗಳನ್ನು ಮೀರಿ ಹೋಗಲು ನಿಮಗೆ ಸಾಧ್ಯವಿದ್ದರೆ ಮೀರಿ ಹೋಗಿರಿ. (ಅಲ್ಲಾಹನ) ಆದೇಶವಿಲ್ಲದೆ ಮೀರಿ ಹೋಗಲು ನಿಮಗೆ ಸಾಧ್ಯವಾಗದು

[35] ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ

[36] ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಹಾಗೂ ಹೊಗೆಯನ್ನು ಎರಗಿಸಲಾಗುವುದು ಮತ್ತು (ಅವುಗಳನ್ನು) ಎದುರಿಸಲು ನಿಮಗೆ ಸಾಧ್ಯವಾಗದು

[37] ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ

[38] ಮತ್ತು ಆಕಾಶವು ಬಿರಿದು ಬಿಡುವಾಗ, ಅದು ಬೆಂದ ಚರ್ಮದಂತೆ ಕೆಂಪಾಗಿ ಬಿಡುವುದು

[39] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[40] ಆ ದಿನ ಯಾವ ಮಾನವನೊಡನೆಯೂ ಯಾವ ಜಿನ್ನಿನೊಡನೆಯೂ ಅವನ ಪಾಪಗಳ ಕುರಿತು ಪ್ರಶ್ನಿಸಲಾಗುವುದು

[41] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[42] (ಅಂದು) ಅಪರಾಧಿಗಳು ತಮ್ಮ ಮುಖಗಳಿಂದಲೇ ಗುರುತಿಸಲ್ಪಡುವರು ಮತ್ತು ಅವರನ್ನು (ಎಳೆದೊಯ್ಯಲು) ಅವರ ಹಣೆ ಹಾಗೂ ಕಾಲುಗಳಿಂದಲೇ ಹಿಡಿಯಲಾಗುವುದು

[43] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[44] ಇದುವೇ, ಅಪರಾಧಿಗಳು ಅಲ್ಲಗಳೆಯುತ್ತಿದ್ದ ನರಕ

[45] (ಅಂದು) ಅವರು ಅದರ (ನರಕಾಗ್ನಿಯ) ಹಾಗೂ ಕುದಿಯುವ ನೀರಿನ ನಡುವೆ ಅಲೆದಾಡುತ್ತಿರುವರು

[46] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[47] ತನ್ನೊಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನಿಗೆ (ಅಂದು) ಎರಡೆರಡು ತೋಟಗಳಿರುವವು

[48] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[49] ಅವು ಧಾರಾಳ ಶಾಖೆಗಳಿರುವ (ತೋಟಗಳಾಗಿರುವವು)

[50] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[51] ಅವುಗಳಲ್ಲಿ ಎರಡೆರಡು ಝರಿಗಳು ಹರಿಯುತ್ತಿರುವವು

[52] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[53] ಅವುಗಳಲ್ಲಿ ಎಲ್ಲ ಜಾತಿಯ ಹಣ್ಣುಗಳ ಎರಡೆರಡು ಬಗೆಗಳಿರುವವು

[54] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[55] ಅವರು ರೇಶ್ಮೆ ಹೊದಿಸಿದ ನೆಲದಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು ಮತ್ತು ಎರಡೂ ತೋಟಗಳ ಹಣ್ಣುಗಳು ಅವರಿಗೆ ಸಮೀಪವಾಗಿರುವವು

[56] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[57] ಅವುಗಳಲ್ಲಿ, ದೃಷ್ಟಿ ತಗ್ಗಿಸಿರುವ ಸ್ತ್ರೀಯರಿರುವರು. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು

[58] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[59] ಅವರೆಲ್ಲ ಮಾಣಿಕ್ಯ ಹಾಗೂ ಹವಳಗಳೋ ಎಂಬಂತಿರುವರು

[60] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[61] ಸೌಜನ್ಯದ ಪ್ರತಿಫಲ ಸೌಜನ್ಯವಲ್ಲದೆ ಮತ್ತೇನು

[62] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[63] ಅವೆರಡಲ್ಲದೆ ಇನ್ನೂ ಎರಡು ತೋಟಗಳಿವೆ

[64] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡೆಗೆಗಳನ್ನು ಅಲ್ಲಗಳೆಯುವಿರಿ

[65] ಹಚ್ಚ ಹಸಿರು ವರ್ಣದವುಗಳು

[66] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[67] ಅವುಗಳಲ್ಲಿ ಉತ್ಸಾಹದಿಂದ ಉಕ್ಕಿ ಹರಿಯುವ ಎರಡು ಚಿಲುಮೆಗಳಿವೆ

[68] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[69] ಅವುಗಳಲ್ಲಿ, ಹಣ್ಣು ಹಂಪಲುಗಳು, ಖರ್ಜೂರದ ಗಿಡಗಳು ಹಾಗೂ ದಾಳಿಂಬೆ ಹಣ್ಣುಗಳಿವೆ

[70] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಅನುಗ್ರಹಗಳನ್ನು ಅಲ್ಲಗಳೆಯುವಿರಿ

[71] ಅವುಗಳಲ್ಲಿ ಸುಶೀಲೆಯರಾದ ಸುಂದರಿಯರಿರುವರು

[72] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[73] ಆ ಸ್ವರ್ಗ ಕನ್ಯೆಯರು ಶಿಬಿರಗಳಲ್ಲಿ ಅವಿತಿರುವರು

[74] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[75] ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು

[76] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

[77] ಅವರು ಹಸಿರು ಹೊದಿಕೆ ಹಾಗೂ ನುಣುಪಾದ ದಿಂಬುಗಳ ಮೇಲೆ ಒರಗಿರುವರು

[78] ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ

ಅನಿವಾರ್ಯ

Surah 56

[1] ವೈಭವಪೂರ್ಣ ಹಾಗೂ ಗೌರವಾನ್ವಿತನಾದ ನಿಮ್ಮ ಒಡೆಯನ ಹೆಸರು ಸಮೃದ್ಧಿದಾಯಕವಾಗಿದೆ

[2] ಸಂಭವಿಸಬೇಕಾದುದು ಸಂಭವಿಸಿ ಬಿಟ್ಟಾಗ

[3] ಅದರ ಸಂಭವ ಸುಳ್ಳಾಗಿರದು

[4] ಅದು (ಕೆಲವರನ್ನು) ಕೀಳಾಗಿಸುವುದು ಮತ್ತು (ಕೆಲವರನ್ನು) ಮೇಲಾಗಿಸುವುದು

[5] ಭೂಮಿಯು ತೀವ್ರ ಕಂಪನದಿಂದ ತತ್ತರಿಸಿ ಬಿಡುವುದು

[6] ಮತ್ತು ಪರ್ವತಗಳು ನುಚ್ಚು ನೂರಾಗಿ ಬಿಡುವವು

[7] ಮತ್ತು ಅವು ಧೂಳಾಗಿ ಹಾರಾಡ ತೊಡಗುವವು

[8] ಮತ್ತು ನೀವು ಮೂರು ವರ್ಗಗಳಾಗುವಿರಿ

[9] ಬಲ ಭಾಗದವರು. ಎಂತಹ (ಭಾಗ್ಯವಂತರು) ಆ ಬಲಭಾಗದವರು

[10] ಮತ್ತು ಎಡ ಭಾಗದವರು. ಎಂತಹ (ಭಾಗ್ಯಹೀನರು) ಆ ಎಡ ಭಾಗದವರು

[11] ಮತ್ತು ಮುಂದೆ ಹೋದವರು ಮುಂದೆಯೇ ಇರುವರು

[12] ಅವರು (ಅಲ್ಲಾಹನ) ಸಮೀಪ ವರ್ತಿಗಳಾಗಿರುವರು

[13] (ಅವರು) ಅನುಗ್ರಹಗಳು ತುಂಬಿದ ಉದ್ಯಾನಗಳಲ್ಲಿರುವರು

[14] (ಅವರಲ್ಲಿ) ಹೆಚ್ಚಿನವರು ಹಿಂದಿನ ಕಾಲದವರಾಗಿರುವರು

[15] ಮತ್ತು ಕಡಿಮೆ ಮಂದಿ ಅನಂತರದವರಾಗಿರುವರು

[16] ಅವರು ಸ್ವರ್ಣಾಲಂಕೃತ ಪೀಠಗಳಲ್ಲಿರುವರು

[17] ಅವುಗಳಲ್ಲಿ ದಿಂಬುಗಳಿಗೊರಗಿ ಎದುರು ಬದುರಾಗಿರುವರು

[18] ಶಾಶ್ವತ ಬಾಲಕರು ಅವರ ಸುತ್ತ ಚಲಿಸುತ್ತಿರುವರು –

[19] – ಲೋಟೆ ಹಾಗೂ ಹೂಜಿಗಳಲ್ಲಿ ಶುದ್ಧವಾದ ಪಾನೀಯಗಳನ್ನು ಹೊತ್ತು

[20] ಅದರಿಂದ ಅವರಿಗೆ ತಲೆ ನೋವಾಗದು ಮತ್ತು ಬುದ್ಧಿಯೂ ಮಂದವಾಗದು

[21] (ಅಲ್ಲಿ) ಅವರ ಆಯ್ಕೆಯ ಹಣ್ಣು ಹಂಪಲುಗಳಿರುವವು

[22] ಅವರು ಅಪೇಕ್ಷಿಸುವ ಪಕ್ಷಿಯ ಮಾಂಸವಿರುವುದು

[23] ಮತ್ತು ವಿಶಾಲ ಕಣ್ಣಿನ ಸ್ವರ್ಗ ಕನ್ಯೆಯರಿರುವರು

[24] ಅವರು ಜೋಪಾನವಾಗಿ ಮುಚ್ಚಿಟ್ಟ ಮುತ್ತಿನಂತಿರುವರು

[25] (ಇದು) ಅವರು ಮಾಡಿದ ಕರ್ಮಗಳ ಪ್ರತಿಫಲ

[26] ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನಾಗಲಿ ಕೆಟ್ಟ ಸಂಭಾಷಣೆಯನ್ನಾಗಲಿ ಕೇಳಲಾರರು

[27] ‘ಸಲಾಮ್, ಸಲಾಮ್’ (ಶಾಂತಿ, ಶಾಂತಿ) ಎಂಬ ಹಾರೈಕೆಯ ಹೊರತು

[28] ಮತ್ತು ಬಲ ಭಾಗದವರು, (ಎಂತಹ ಭಾಗ್ಯವಂತರು) ಆ ಬಲ ಭಾಗದವರು

[29] (ಅವರಿರುವಲ್ಲಿ ಲಭ್ಯವಿರುವವು;) ಮುಳ್ಳಿಲ್ಲದ ಬುಗರಿಗಳು

[30] ಗೊನೆ ಗೊನೆಯಾಗಿರುವ ಬಾಳೆ ಹಣ್ಣುಗಳು

[31] ವ್ಯಾಪಕ ನೆರಳು

[32] ಹರಿಯುವ ನೀರು

[33] ಮತ್ತು ಧಾರಾಳ ಹಣ್ಣು ಹಂಪಲುಗಳು

[34] ಅವು ಎಂದೂ ಮುಗಿದು ಹೋಗಲಾರವು ಮತ್ತು (ಅವುಗಳ ಬಳಕೆಗೆ) ಯಾವುದೇ ಅಡೆತಡೆಯೂ ಇರಲಾರದು

[35] (ಅವರು) ಎತ್ತರದ ಆಸನಗಳಲ್ಲಿರುವರು

[36] ನಾವೇ ಅವರನ್ನು (ಸ್ವರ್ಗ ಕನ್ಯೆಯರನ್ನು ) ಸೃಷ್ಟಿಸಿರುವೆವು

[37] ನಾವು ಅವರನ್ನು ಕನ್ಯೆಯರಾಗಿಸಿರುವೆವು

[38] ಪ್ರೀತಿಪಾತ್ರರಾಗಿ, ಸಹವಯಸ್ಕರಾಗಿ ಮಾಡಿರುವೆವು –

[39] – ಬಲಭಾಗದವರಿಗಾಗಿ

[40] (ಅವರಲ್ಲಿ) ಹಿಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು

[41] ಮತ್ತು ಮುಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು

[42] ಇನ್ನು ಎಡಭಾಗದವರು. (ಎಂತಹ ಭಾಗ್ಯಹೀನರು) ಆ ಎಡಭಾಗದವರು

[43] ಅವರು ಉರಿಯುವ ಗಾಳಿ ಹಾಗೂ ಕುದಿಯುವ ನೀರಿನಲ್ಲಿರುವರು

[44] ಕರಾಳ ಹೊಗೆಯ ನೆರಳಲ್ಲಿರುವರು

[45] ಅದರಲ್ಲಿ ತಂಪೂ ಇರದು, ಹಿತವೂ ಇರದು

[46] ಈ ಹಿಂದೆ ಅವರು ಭಾರೀ ಸುಖ ಭೋಗದಲ್ಲಿದ್ದರು

[47] ಮಹಾ ಪಾಪ ಕೃತ್ಯಗಳಲ್ಲಿ ತಲ್ಲೀನರಾಗಿ ಉದ್ಧಟರಾಗಿದ್ದರು

[48] ಮತ್ತು ಅವರು ಹೇಳುತ್ತಿದ್ದರು; ನಾವು ಸತ್ತು ಮಣ್ಣಾಗಿ ಹಾಗೂ ಎಲುಬುಗಳಾಗಿ ಮಾರ್ಪಟ್ಟ ಬಳಿಕ, ನಮ್ಮನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ

[49] ನಮ್ಮ ತಾತ ಮುತ್ತಾತಂದಿರನ್ನೂ (ಜೀವಂತಗೊಳಿಸಲಾಗುವುದೇ)

[50] ಹೇಳಿರಿ; ಖಂಡಿತವಾಗಿಯೂ ಹಿಂದಿನವರನ್ನೂ ಮುಂದಿನವರನ್ನೂ

[51] ಒಂದು ನಿರ್ದಿಷ್ಟ ದಿನದ ವೇಳೆ ಒಟ್ಟು ಸೇರಿಸಲಾಗುವುದು

[52] ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು

[53] ‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು

[54] ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು

[55] ಅದರ ಜೊತೆಗೆ ಕುದಿಯುವ ನೀರನ್ನೂ ಕುಡಿಯಬೇಕಾಗುವುದು

[56] ಬಾಯಾರಿದ ಒಂಟೆಯಂತೆ ಅದನ್ನು ನೀವು ಕುಡಿಯುವಿರಿ

[57] ಇದುವೇ, ಪ್ರತಿಫಲದ ದಿನ ಅವರಿಗೆ ಸಿಗಲಿರುವ ಆತಿಥ್ಯ

[58] ನಾವು ನಿಮ್ಮನ್ನು ಸೃಷ್ಟಿಸಿರುವೆವು. ಇಷ್ಟಾಗಿಯೂ ನೀವೇಕೆ (ಅದನ್ನು) ಅಂಗೀಕರಿಸುವುದಿಲ್ಲ

[59] ನೀವು (ಗರ್ಭದೊಳಕ್ಕೆ) ಹರಿಸಿ ಬಿಡುವ ವಸ್ತುವನ್ನು (ವೀರ್ಯವನ್ನು) ನೀವು ನೋಡಿದಿರಾ

[60] ಅದನ್ನು (ಶಿಶುವಾಗಿ) ಸೃಷ್ಟಿಸುವವರು ನೀವೋ, ಅಥವಾ ನಾವು ಅದರ ಸೃಷ್ಟಿಕರ್ತರೋ

[61] ನಾವು ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿ ಬಿಟ್ಟಿರುವೆವು. ಮತ್ತು ನಾವು ಖಂಡಿತ ಅಶಕ್ತರಲ್ಲ

[62] – ನಿಮ್ಮ ಬದಲಿಗೆ ನಿಮ್ಮಂತಹ ಇತರರನ್ನು ತರುವುದಕ್ಕೆ. ಮತ್ತು ನಿಮಗೆ ಅರಿವೇ ಇಲ್ಲದ ಸ್ಥಳದಲ್ಲಿ ನಿಮ್ಮನ್ನು ಜೀವಂತಗೊಳಿಸುವುದಕ್ಕೆ

[63] (ನಿಮ್ಮ) ಪ್ರಥಮ ಜನನದ ಕುರಿತು ನಿಮಗೆ ಖಂಡಿತ ತಿಳಿದಿದೆ. ಹೀಗಿರುತ್ತಾ ನೀವೇಕೆ ಚಿಂತನೆ ನಡೆಸುವುದಿಲ್ಲ

[64] ನೀವು ಬಿತ್ತುವ ವಸ್ತುವನ್ನು ನೀವು ನೋಡಿದಿರಾ

[65] ಅದನ್ನು (ಆ ಬೀಜವನ್ನು, ಬೆಳೆಯಾಗಿ) ಬೆಳೆಸುವವರು ನೀವೋ ಅಥವಾ ನಾವು ಅದರ ಬೆಳೆಗಾರರೋ

[66] ನಾವು ಬಯಸಿದರೆ ಅದನ್ನು ಕೇವಲ ಹೊಟ್ಟಾಗಿಸಿ ಬಿಡಬಲ್ಲೆವು ಮತ್ತು ನೀವು ಏನೇನೋ ಹತಾಶ ಮಾತುಗಳನ್ನಾಡುತ್ತಾ ಉಳಿಯ ಬೇಕಾಗುವುದು –

[67] – ನಾವು ಸಂಪೂರ್ಣವಾಗಿ ದಂಡನೆಗೆ ತುತ್ತಾದೆವೆಂದು

[68] ಮತ್ತು ನಾವು ಸಂಪೂರ್ಣ ವಂಚಿತರಾಗಿ ಬಿಟ್ಟೆವೆಂದು

[69] ನೀವು ಕುಡಿಯುವ ನೀರನ್ನು ನೀವು ನೋಡಿದಿರಾ

[70] ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ಸುರಿಸುವವರು ನಾವೋ

[71] ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿಸ ಬಲ್ಲೆವು. ಇಷ್ಟಾಗಿಯೂ ನೀವೇಕೆ ಕೃತಜ್ಞರಾಗುವುದಿಲ್ಲ

[72] ನೀವು ಉರಿಸುವ ಬೆಂಕಿಯನ್ನು ನೀವು ನೋಡಿದಿರಾ

[73] ಅದರ ಮರವನ್ನು ಹುಟ್ಟಿಸುವವರು ನೀವೋ ಅಥವಾ ಹುಟ್ಟಿಸುವವರು ನಾವೋ

[74] ಅದನ್ನು ನಾವು, (ನರಕವನ್ನು) ನೆನಪಿಸುವ ಸಾಧನವಾಗಿಸಿರುವೆವು ಮತ್ತು ಪ್ರಯಾಣಿಕರ ಪಾಲಿಗೆ ಲಾಭದಾಯಕವಾಗಿಸಿರುವೆವು

[75] ನೀವೀಗ ನಿಮ್ಮ ಮಹಾನ್ ಒಡೆಯನ ಹೆಸರಿನ ಪಾವಿತ್ರವನ್ನು ಜಪಿಸಿರಿ

[76] ನಾನಿದೋ, ನಕ್ಷತ್ರಗಳು ಪತನವಾಗುವ ನೆಲೆಯ ಆಣೆ ಹಾಕುತ್ತೇನೆ

[77] ನೀವು ಅರ್ಥ ಮಾಡಿಕೊಳ್ಳುವುದಾದರೆ ಇದು ನಿಜಕ್ಕೂ ಒಂದು ಮಹಾನ್ ಪ್ರಮಾಣವಾಗಿದೆ

[78] ಈ ಕುರ್‌ಆನ್, ಖಂಡಿತ ಗೌರವಾನ್ವಿತವಾಗಿದೆ

[79] ಇದೊಂದು ಸುರಕ್ಷಿತ ಗ್ರಂಥದಲ್ಲಿದೆ

[80] ಪಾವನರಲ್ಲದವರು ಅದನ್ನು ಮುಟ್ಟುವುದಿಲ್ಲ

[81] ಸಕಲ ಲೋಕಗಳ ಒಡೆಯನು ಇದನ್ನು ಇಳಿಸಿ ಕೊಟ್ಟಿರುವನು

[82] ನೀವೇನು ಈ ಸಂದೇಶವನ್ನು ಕಡೆಗಣಿಸುತ್ತಿರುವಿರಾ

[83] ಮತ್ತು ನಿಮಗೆ ನೀಡಲಾಗಿರುವ ಕೊಡುಗೆಯನ್ನು ಅಲ್ಲಗಳೆಯುತ್ತಿರುವಿರಾ

[84] ಹಾಗಾದರೆ, (ನಿಮ್ಮ ಆಪ್ತನ) ಜೀವವು ಕೊರಳಿಗೆ ಮುಟ್ಟಿದಾಗ

[85] ಆಗ ನೀವು ಕೇವಲ ನೋಡುತ್ತಿರುತ್ತೀರಿ

[86] ಮತ್ತು ಆಗ ನಾವು ಆತನಿಗೆ, ನಿಮಗಿಂತ ಸಮೀಪವಿರುತ್ತೇವೆ – ಆದರೆ ನಿಮಗೆ ಕಾಣಿಸುವುದಿಲ್ಲ

[87] ನೀವು ಸ್ವತಂತ್ರರಾಗಿದ್ದರೆ, ಹೀಗೇಕೆ

[88] ನೀವು ಸತ್ಯವಂತರಾಗಿದ್ದರೆ, ಅದನ್ನು (ಆತನ ಆತ್ಮವನ್ನು) ಮರಳಿಸಿರಿ –

[89] ಅವನು (ಅಲ್ಲಾಹನ) ಆಪ್ತನಾಗಿದ್ದರೆ –

[90] (ಅವನಿಗಾಗಿ) ಕಂಪು ತುಂಬಿದ ಪುಷ್ಪಗಳು ಹಾಗೂ ಅನುಗ್ರಹ ತುಂಬಿದ ಸ್ವರ್ಗೋದ್ಯಾನಗಳಿವೆ

[91] ಇನ್ನು ಅವನು, ಬಲಭಾಗದವನಾಗಿದ್ದರೆ, –

[92] ’’ಬಲಭಾಗದವರ ಕಡೆಯಿಂದ ನಿನಗೆ ಸಲಾಮ್ (ಶಾಂತಿ)’’ (ಎಂದು ಹಾರೈಸಲಾಗುವುದು)

[93] ಅವನು ಸತ್ಯವನ್ನು ತಿರಸ್ಕರಿಸಿ, ದಾರಿಗೆಟ್ಟವನಾಗಿದ್ದರೆ –

[94] ಅವನ ಆತಿಥ್ಯಕ್ಕೆ ಕುದಿಯುವ ನೀರು ಇರುವುದು

[95] ಮತ್ತು ಅವನನ್ನು ನರಕಾಗ್ನಿಗೆ ಎಸೆಯಲಾಗುವುದು

[96] ಇದು ಖಚಿತ ಸಂಭವವಾಗಿದೆ

ಕಬ್ಬಿಣ

Surah 57

[1] (ದೂತರೇ,) ನೀವು ನಿಮ್ಮ ಮಹಾನ್ ಒಡೆಯನ ನಾಮದೊಂದಿಗೆ, ಅವನ ಪಾವಿತ್ರವನ್ನು ಜಪಿಸಿರಿ

[2] ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುವನು

[3] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅವನಿಗೇ ಸೇರಿದೆ. ಅವನೇ ಜೀವಂತಗೊಳಿಸುವವನು ಹಾಗೂ ಸಾಯಿಸುವವನು ಮತ್ತು ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[4] ಅವನೇ ಆದಿ, ಅವನೇ ಅಂತ್ಯ. ಅವನು ವ್ಯಕ್ತನೂ ಹೌದು, ಗುಪ್ತನೂ ಹೌದು ಮತ್ತು ಅವನು ಎಲ್ಲವನ್ನೂ ಬಲ್ಲವನಾಗಿದ್ದಾನೆ

[5] ಅವನೇ, ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ವಿಶ್ವ ಸಿಂಹಾಸನದಲ್ಲಿ ನೆಲೆಸಿದವನು. ಭೂಮಿಯೊಳಗೆ ಏನೆಲ್ಲಾ ಪ್ರವೇಶಿಸುತ್ತದೆ ಮತ್ತು ಏನೆಲ್ಲ ಅದರಿಂದ ಹೊರ ಹೊಮ್ಮುತ್ತದೆಂಬುದನ್ನು ಹಾಗೂ ಆಕಾಶದಿಂದ ಏನೆಲ್ಲ ಇಳಿದು ಬರುತ್ತದೆ ಮತ್ತು ಏನೆಲ್ಲಾ ಅದರೊಳಕ್ಕೆ ಏರಿ ಹೋಗುತ್ತದೆ ಎಂಬುದನ್ನು ಅವನೇ ಬಲ್ಲನು. ಮತ್ತು ನೀವು ಇರುವಲ್ಲೆಲ್ಲಾ ಅವನಿದ್ದಾನೆ. ಮತ್ತು ಅಲ್ಲಾಹನು ನೀವು ಮಾಡುವ ಎಲ್ಲವನ್ನೂ ನೋಡುತ್ತಿರುತ್ತಾನೆ

[6] ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅವನಿಗೇ ಸೇರಿದೆ. ಕೊನೆಗೆ ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳಲಿವೆ

[7] ಅವನು ಇರುಳನ್ನು ಹಗಲೊಳಗೆ ಪೋಣಿಸುತ್ತಾನೆ ಮತ್ತು ಹಗಲನ್ನು ಇರುಳಿನೊಳಗೆ ಪೋಣಿಸುತ್ತಾನೆ. ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ

[8] ನೀವು ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಡಿರಿ ಮತ್ತು ಅವನು ನಿಮ್ಮನ್ನು ಯಾವುದರ ಉತ್ತರಾಧಿಕಾರಿಗಳಾಗಿಸಿರುವನೋ ಅದರಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ವಿಶ್ವಾಸವಿಟ್ಟು (ಸತ್ಕಾರ್ಯಕ್ಕೆ) ಖರ್ಚು ಮಾಡುವವರಿಗೆ ಮಹಾ ಪ್ರತಿಫಲವಿದೆ

[9] ನಿಮಗೇನಾಗಿದೆ? ನೀವೇಕೆ ಅಲ್ಲಾಹನಲ್ಲಿ ನಂಬಿಕೆ ಇಡುತ್ತಿಲ್ಲ? ದೇವ ದೂತರು ನಿಮ್ಮನ್ನು ನಿಮ್ಮ ಒಡೆಯನಲ್ಲಿ ನಂಬಿಕೆ ಇಡ ಬೇಕೆಂದು ಆಮಂತ್ರಿಸುತ್ತಿದ್ದಾರೆ. ಅವನಂತೂ (ಅಲ್ಲಾಹನಂತು) ಈ ಕುರಿತು ನಿಮ್ಮಿಂದ ಪ್ರಮಾಣವನ್ನು ಪಡೆದಿರುವನು. ನೀವು ನಂಬುವವರಾಗಿದ್ದರೆ (ಇದು ನಿಮಗೆ ತಿಳಿದಿರಬೇಕಿತ್ತು)

[10] ಅವನೇ, ನಿಮ್ಮನ್ನು ಕತ್ತಲುಗಳಿಂದ ಹೊರ ತೆಗೆದು ಬೆಳಕಿನೆಡೆಗೆ ನಡೆಸುವುದಕ್ಕಾಗಿ ತನ್ನ ದಾಸನಿಗೆ ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿ ಕೊಡುವವನು. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಪಾಲಿಗೆ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿದ್ದಾನೆ

[11] ನಿಮಗೇನಾಗಿದೆ? ನೀವೇಕೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲ? ಆಕಾಶಗಳ ಮತ್ತು ಭೂಮಿಯ ಅಂತಿಮ ಉತ್ತರಾಧಿಕಾರವು ಅಲ್ಲಾಹನಿಗೇ ಸೇರಿದೆ. ನಿಮ್ಮ ಪೈಕಿ, ವಿಜಯಕ್ಕೆ ಮುನ್ನ ಖರ್ಚು ಮಾಡಿದವರು ಮತ್ತು ಯುದ್ಧದಲ್ಲಿ ಪಾಲ್ಗೊಂಡವರು (ಇತರರಿಗೆ) ಸಮಾನರಲ್ಲ. ಅವರು, ಅದರ (ವಿಜಯದ) ನಂತರ ಖರ್ಚು ಮಾಡಿದವರಿಗಿಂತ ಮತ್ತು (ವಿಜಯದ ನಂತರ) ಯುದ್ದ ಮಾಡಿದವರಿಗಿಂತ ಸ್ಥಾನದಲ್ಲಿ ಉನ್ನತರು. ಅದರೆ ಅವರೆಲ್ಲರಿಗೂ ಅಲ್ಲಾಹನು ಶ್ರೇಷ್ಠವಾದುದನ್ನೇ ವಾಗ್ದಾನ ಮಾಡಿರುತ್ತಾನೆ. ಮತ್ತು ಅಲ್ಲಾಹನು ನೀವು ಮಾಡುವ ಎಲ್ಲ ಕೃತ್ಯಗಳ ಕುರಿತು ಅರಿವು ಉಳ್ಳವನಾಗಿದ್ದಾನೆ

[12] ಯಾರಿದ್ದಾನೆ, ಅಲ್ಲಾಹನಿಗೆ ಶ್ರೇಷ್ಠ ಸಾಲವನ್ನು ನೀಡುವವನು? ಕೊನೆಗೆ ಅವನು (ಅಲ್ಲಾಹನು) ಅದನ್ನು ಬಹಳಷ್ಟು ಹೆಚ್ಚಿಸಿ ಆತನಿಗೆ ಮರಳಿಸುವನು ಮತ್ತು ಆತನಿಗೆ ಉದಾರ ಪ್ರತಿಫಲವೂ ಸಿಗಲಿದೆ

[13] ಒಂದು ದಿನ ನೀವು ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರನ್ನು ಕಾಣುವಿರಿ; ಅವರ (ವಿಶ್ವಾಸದ) ಬೆಳಕು ಅವರ ಮುಂದೆಯೂ ಅವರ ಬಲ ಭಾಗದಲ್ಲೂ ಧಾವಿಸುತ್ತಿರುವುದು. ‘‘ಇಂದು ನಿಮಗೆ, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ತೋಟಗಳ ಶುಭ ವಾರ್ತೆ ಇದೆ’’ (ಎಂದು ಅವರೊಡನೆ ಹೇಳಲಾಗುವುದು). ಅವುಗಳಲ್ಲಿ ಅವರು ಸದಾಕಾಲ ಇರುವರು. ಇದುವೇ ಮಹಾ ವಿಜಯವಾಗಿದೆ

[14] ಆ ದಿನ ಕಪಟಿ ಪುರುಷರು ಮತ್ತು ಕಪಟಿ ಸ್ತ್ರೀಯರು ವಿಶ್ವಾಸಿಗಳೊಡನೆ, ‘‘ಸ್ವಲ್ಪ ನಮ್ಮ ಕಡೆಗೆ ನೋಡಿರಿ, ನಿಮ್ಮ ಬೆಳಕಿನಿಂದ ಸ್ವಲ್ಪ ಭಾಗ ನಮಗೂ ಸಿಗಲಿ’’ ಎಂದು ಹೇಳುವರು. ಆಗ ಅವರೊಡನೆ, ‘‘ನೀವು ನಿಮ್ಮ ಹಿಂಭಾಗಕ್ಕೆ ಮರಳಿರಿ – ಮತ್ತು (ಅಲ್ಲಿ) ಬೆಳಕನ್ನು ಹುಡುಕಿರಿ’’ ಎನ್ನಲಾಗುವುದು. ಆ ಬಳಿಕ ಅವರ (ಕಪಟಿಗಳ ಮತ್ತು ಧರ್ಮ ವಿಶ್ವಾಸಿಗಳ) ನಡುವೆ ಒಂದು ಗೋಡೆಯನ್ನು ನಿರ್ಮಿಸಲಾಗುವುದು. ಅದಕ್ಕೊಂದು ಬಾಗಿಲು ಇರುವುದು. ಅದರ ಒಳಭಾಗದಲ್ಲಿ ಅನುಗ್ರಹವು ತುಂಬಿರುವುದು ಮತ್ತು ಹೊರ ಭಾಗದಲ್ಲಿ ಶಿಕ್ಷೆ ಇರುವುದು

[15] ಅವರು (ಕಪಟಿಗಳು) ಅವರನ್ನು (ವಿಶ್ವಾಸಿಗಳನ್ನು) ಕೂಗಿ ಕರೆದು, ‘‘ನಾವೇನು ನಿಮ್ಮ ಜೊತೆಗಿರಲಿಲ್ಲವೇ?’’ ಎಂದು ಕೇಳುವರು. ಆಗ ಅವರು ಹೇಳುವರು; ‘‘ಖಂಡಿತ ಇದ್ದಿರಿ. ಅದರೆ ನೀವು ಸ್ವತಃ ನಿಮ್ಮನ್ನೇ ಪರೀಕ್ಷೆಗೆ ಒಡ್ಡಿಕೊಂಡಿರಿ – ಮತ್ತು ನೀವು ಕಾಯುತ್ತಲೇ ಇದ್ದಿರಿ ಹಾಗೂ ನೀವು ಸಂಶಯ ಪೀಡಿತರಾಗಿದ್ದಿರಿ. ಕೊನೆಗೆ, ಅಲ್ಲಾಹನ ಆದೇಶವು ಬಂದು ಬಿಡುವವರೆಗೂ ನಿಮ್ಮ ಹುಸಿ ನಿರೀಕ್ಷೆಗಳು ನಿಮ್ಮನ್ನು ವಂಚಿಸಿದುವು ಮತ್ತು ವಂಚಿಸುವವನು (ಶೈತಾನನು) ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ವಂಚಿಸಿ ಬಿಟ್ಟನು’’

[16] ಇಂದು ನಿಮ್ಮಿಂದಾಗಲಿ ಧಿಕ್ಕಾರಿಗಳಿಂದಾಗಲೀ ಯಾವ ಪರಿಹಾರವನ್ನೂ ಸ್ವೀಕರಿಸಲಾಗದು. ನರಕವೇ ನಿಮ್ಮ ನೆಲೆಯಾಗಿದೆ. ಅದುವೇ ನಿಮ್ಮ ಆಪ್ತನಾಗಿರುವುದು. ಮತ್ತು ಅದು (ನರಕವು) ಬಹಳ ಕೆಟ್ಟ ವಾಸಸ್ಥಾನವಾಗಿದೆ

[17] ವಿಶ್ವಾಸಿಗಳು ಅಲ್ಲಾಹನನ್ನು ನೆನಪಿಸುವುದಕ್ಕೆ ಮತ್ತು ಅವನು ಇಳಿಸಿ ಕೊಟ್ಟಿರುವ ಸತ್ಯಕ್ಕನುಸಾರವಾಗಿ ತಮ್ಮ ಮನಸ್ಸುಗಳಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಇನ್ನೂ ಸಮಯ ಬಂದಿಲ್ಲವೇ? ಅವರು ತಮಗಿಂತ ಹಿಂದೆ ಗ್ರಂಥ ನೀಡಲಾಗಿದ್ದವರಂತೆ ಆಗದಿರಲಿ. ಅವರಿಗೆ ಸಾಕಷ್ಟು ಧೀರ್ಘ ಕಾಲಾವಧಿ ನೀಡಲಾಗಿತ್ತು. ಆದರೆ ಅವರ ಮನಸ್ಸುಗಳು ಕಠಿಣವಾಗಿ ಬಿಟ್ಟವು. ಮತ್ತು ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದರು

[18] ನಿಮಗೆ ತಿಳಿದಿರಲಿ, ಅಲ್ಲಾಹನೇ ಭೂಮಿಯು ಸತ್ತ ಬಳಿಕ ಅದನ್ನು ಮತ್ತೆ ಜೀವಂತ ಗೊಳಿಸುತ್ತಾನೆ. ನೀವು ಅರ್ಥ ಮಾಡಿಕೊಳ್ಳಬೇಕೆಂದು (ಈ ರೀತಿ) ನಾವು ನಮ್ಮ ವಚನಗಳನ್ನು ನಿಮಗೆ ವಿವರಿಸಿರುವೆವು

[19] ದಾನಶೀಲ ಪುರುಷರು ಹಾಗೂ ದಾನಶೀಲ ಸ್ತ್ರೀಯರು ಮತ್ತು ಅಲ್ಲಾಹನಿಗೆ ಶ್ರೇಷ್ಠ ಸಾಲ ನೀಡಿದವರಿಗಾಗಿ, ಅವನು ಅದನ್ನು (ಅವರ ಸಂಪತ್ತನ್ನು) ಬಹಳಷ್ಟು ಹೆಚ್ಚಿಸುವನು ಮತ್ತು ಅವರಿಗೆ ಉದಾರ ಪ್ರತಿಫಲವನ್ನು ನೀಡುವನು

[20] ಅಲ್ಲಾಹನಲ್ಲಿ ಮತ್ತು ಅವನ ದೂತರಲ್ಲಿ ನಂಬಿಕೆ ಇಟ್ಟವರು – ಅವರೇ ತಮ್ಮ ಒಡೆಯನ ದೃಷ್ಟಿಯಲ್ಲಿ ಪರಮ ಸತ್ಯವಂತರು ಮತ್ತು (ಸತ್ಯದ) ಸಾಕ್ಷಿಗಳಾಗಿರುತ್ತಾರೆ. ಅವರಿಗೆ ಅವರ ಪ್ರತಿಫಲ ಹಾಗೂ ದಿವ್ಯ ಬೆಳಕು ಸಿಗಲಿದೆ. ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರು ಮತ್ತು ತಿರಸ್ಕರಿಸಿದವರು – ಅವರೇ ನರಕವಾಸಿಗಳು

[21] ನಿಮಗೆ ತಿಳಿದಿರಲಿ, ಇಹಲೋಕದ ಬದುಕೆಂಬುದು ಕೇವಲ ಆಟ, ವಿನೋದ, ಅಲಂಕಾರ, ನಿಮ್ಮ ನಡುವಣ ಪರಸ್ಪರ ಜಂಭ ಮತ್ತು ಸಂತಾನ ಹಾಗೂ ಸಂಪತ್ತಿನ ಸ್ಪರ್ಧೆ ಮಾತ್ರವಾಗಿದೆ – ಮಳೆ ಸುರಿದಾಗ ರೈತನಿಗೆ ತನ್ನ ಬೆಳೆ ಚಂದಗಾಣುವಂತೆ. ಆ ಬಳಿಕ ಅದು ಒಣಗಲಾರಂಭಿಸುತ್ತದೆ ಮತ್ತು ನೀವು ನೋಡುತ್ತಿದ್ದಂತೆಯೇ ಅದು (ಬೆಳೆ) ಹಳದಿಯಾಗುತ್ತದೆ ಮತ್ತು ಕೊನೆಗೆ ಚೂರು ಚೂರಾಗಿ ಬಿಡುತ್ತದೆ. ಅತ್ತ, ಪರಲೋಕದಲ್ಲಿ (ಒಂದೆಡೆ) ಕಠಿಣ ಶಿಕ್ಷೆಯೂ ಇದೆ ಮತ್ತು (ಇನ್ನೊಂದೆಡೆ) ಅಲ್ಲಾಹನ ಕಡೆಯಿಂದ ಕ್ಷಮೆ ಹಾಗೂ ಪ್ರಸನ್ನತೆಯೂ ಇದೆ. ಇಹಲೋಕದ ಬದುಕು ಕೇವಲ ವಂಚಕ ಸಾಧನವಾಗಿದೆ

[22] ಧಾವಿಸಿರಿ, ನಿಮ್ಮ ಒಡೆಯನ ಕ್ಷಮೆಯೆಡೆಗೆ ಮತ್ತು ತನ್ನ ವೈಶಾಲ್ಯದಲ್ಲಿ ಆಕಾಶ ಹಾಗೂ ಭೂಮಿಯಂತಿರುವ ಸ್ವರ್ಗದೆಡೆಗೆ. ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟವರಿಗಾಗಿ ಅದನ್ನು ಸಿದ್ಧಪಡಿಸಲಾಗಿದೆ. ಅದು ಅಲ್ಲಾಹನ ಅನುಗ್ರಹ. ಅದನ್ನು ಅವನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹಿಯಾಗಿದ್ದಾನೆ

[23] ಭೂಮಿಯಲ್ಲಾಗಲೀ ಸ್ವತಃ ನಿಮ್ಮ ಜೀವದಲ್ಲಾಗಲೀ ಸಂಭವಿಸುವ ಪ್ರತಿಯೊಂದು ಸಂಕಟವೂ, ಅದು ಸಂಭವಿಸುವುದಕ್ಕೆ ಬಹಳ ಮುಂಚಿತವಾಗಿಯೇ ಒಂದು ಗ್ರಂಥದಲ್ಲಿ ಬರೆದಿರುತ್ತದೆ. ಅಲ್ಲಾಹನ ಪಾಲಿಗೆ ಇದು ಸುಲಭದ ಕೆಲಸವಾಗಿದೆ

[24] ನಿಮ್ಮಿಂದ ಕಳೆದು ಹೋದ ಯಾವುದರ ಕುರಿತೂ ನೀವು ಕೊರಗಬಾರದೆಂದು ಮತ್ತು ನಿಮಗೆ ನೀಡಲಾಗಿರುವ ಯಾವುದರ ಕುರಿತೂ ನೀವು ದುರಭಿಮಾನ ಪಡಬಾರದೆಂದು (ಇದನ್ನು ನಿಮಗೆ ತಿಳಿಸಲಾಗಿದೆ.) ದೊಡ್ಡಸ್ತಿಕೆ ಮೆರೆಯುವ ಯಾವುದೇ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ

[25] ಅವರು ಸ್ವತಃ ಜಿಪುಣರೂ ಜನರಿಗೆ ಜಿಪುಣತೆಯನ್ನು ಬೋಧಿಸುವವರು ಆಗಿರುತ್ತಾರೆ. ಇನ್ನು ಯಾರಾದರೂ (ಈ ಉಪದೇಶವನ್ನು) ಕಡೆಗಣಿಸುವುದಾದರೆ (ಅವನು ತಿಳಿದಿರಲಿ), ಅಲ್ಲಾಹನಂತೂ ಎಲ್ಲ ಅಗತ್ಯಗಳಿಂದ ಮುಕ್ತನೂ ಪ್ರಶಂಸಾರ್ಹನೂ ಆಗಿದ್ದಾನೆ

[26] ನಾವು ನಮ್ಮ ದೂತರನ್ನು ಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿರುವೆವು ಮತ್ತು ಜನರು ನ್ಯಾಯ ಪಾಲಿಸಬೇಕೆಂದು ನಾವು ಅವರ (ದೂತರ) ಜೊತೆಗೆ ಗ್ರಂಥವನ್ನು ಹಾಗೂ ತಕ್ಕಡಿಯನ್ನು (ನ್ಯಾಯದ ನಿಯಮಗಳನ್ನು) ಇಳಿಸಿರುವೆವು. ಹಾಗೆಯೇ ನಾವು ಉಕ್ಕನ್ನು ಇಳಿಸಿರುವೆವು. ಅದರಲ್ಲಿ ಭಾರೀ ಶಕ್ತಿ ಇದೆ ಮತ್ತು ಜನರಿಗೆ ಹಲವು ಪ್ರಯೋಜನಗಳಿವೆ. ಮತ್ತು ಯಾರು ಕಣ್ಣಾರೆ ಕಾಣದೆ ತನಗೆ ಮತ್ತು ತನ್ನ ದೂತರಿಗೆ ನೆರವಾಗುವರೆಂಬುದನ್ನು ಅಲ್ಲಾಹನು ಅರಿಯಬಯಸುತ್ತಾನೆ. ಅಲ್ಲಾಹನಂತೂ ಭಾರೀ ಶಕ್ತಿ ಶಾಲಿಯೂ ಪ್ರಬಲನೂ ಆಗಿದ್ದಾನೆ

[27] (ಈ ಹಿಂದೆ) ನಾವು ನೂಹರನ್ನು ಹಾಗೂ ಇಬ್ರಾಹೀಮರನ್ನು ಕಳುಹಿಸಿದ್ದೆವು. ಮತ್ತು ನಾವು ಅವರ ಸಂತತಿಯಲ್ಲಿ ಪ್ರವಾದಿಗಳ ಹಾಗೂ ಗ್ರಂಥದ ಸರಣಿಯನ್ನು ಮುಂದುವರಿಸಿದೆವು. ಅವರಲ್ಲಿ ಕೆಲವರು ಸರಿದಾರಿಯನ್ನು ಪಡೆದರು ಮತ್ತು ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದರು

[28] ತರುವಾಯ ನಾವು ಅವರ ಬೆನ್ನಿಗೇ ಸತತವಾಗಿ ನಮ್ಮ (ಇತರ) ದೂತರನ್ನು ರವಾನಿಸಿದೆವು ಮತ್ತು ಅವರ ಬೆನ್ನಿಗೆ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅವರ ಅನುಯಾಯಿಗಳ ಮನದಲ್ಲಿ ನಾವು ಸೌಮ್ಯತೆ ಮತ್ತು ಅನುಕಂಪವನ್ನು ಬೆಳೆಸಿದೆವು. ಆದರೆ ಸನ್ಯಾಸವನ್ನು ಅವರೇ ಆರಂಭಿಸಿದರು – ನಾವು ಅದನ್ನು ಅವರ ಮೇಲೆ ಕಡ್ಡಾಯಗೊಳಿಸಿರಲಿಲ್ಲ, ಅಲ್ಲಾಹನ ಮೆಚ್ಚುಗೆಗಾಗಿ (ಅವರು ಅದನ್ನು ಆರಂಭಿಸಿದ್ದರು) ಆದರೆ ಅವರು ಅದನ್ನು ನಿಭಾಯಿಸಬೇಕಾದ ರೀತಿಯಲ್ಲಿ ನಿಭಾಯಿಸಲಿಲ್ಲ. ಅವರ ಪೈಕಿ ವಿಶ್ವಾಸಿಗಳಿಗೆ ನಾವು ಅವರ ಪ್ರತಿಫಲವನ್ನು ನೀಡಿರುವೆವು. ಅವರಲ್ಲಿ ಹೆಚ್ಚಿನವರು ಅವಿಧೇಯರಾದರು

[29] ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ. ಮತ್ತು ಅವನ ದೂತರಲ್ಲಿ ನಂಬಿಕೆ ಇಡಿರಿ. ಅವನು ತನ್ನ ಅನುಗ್ರಹದಿಂದ ನಿಮಗೆ ದುಪ್ಪಟ್ಟು ಪ್ರತಿಫಲವನ್ನು ನೀಡುವನು ಮತ್ತು ನಿಮಗೆ ಬೆಳಕನ್ನು ಒದಗಿಸುವನು. ನೀವು ಅದರಲ್ಲಿ (ಆ ಬೆಳಕಿನಲ್ಲಿ) ನಡೆಯುವಿರಿ. ಮತ್ತು ಅವನು ನಿಮಗೆ ಕ್ಷಮೆಯನ್ನು ನೀಡುವನು. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

ವಾದಿಸುವ ಮಹಿಳೆ

Surah 58

[1] ಅಲ್ಲಾಹನ ಅನುಗ್ರಹದ ಮೇಲೆ ತಮಗೆ ಕಿಂಚಿತ್ತೂ ನಿಯಂತ್ರಣವಿಲ್ಲವೆಂಬುದು ಗ್ರಂಥದವರಿಗೆ ಮನವರಿಕೆಯಾಗಲೆಂದು (ಇದನ್ನು ವಿವರಿಸಲಾಗಿದೆ) ಮತ್ತು ಅನುಗ್ರಹವು ಅಲ್ಲಾಹನ ಕೈಯಲ್ಲೇ ಇದೆ. ಅವನು ತಾನಿಚ್ಛಿಸಿದವರಿಗೆ ಅದನ್ನು ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹಶಾಲಿಯಾಗಿದ್ದಾನೆ

[2] (ದೂತರೇ,) ತನ್ನ ಪತಿಯ ವಿಷಯದಲ್ಲಿ ನಿಮ್ಮೊಡನೆ ವಾದಿಸಿದ ಮತ್ತು ಅಲ್ಲಾಹನ ಬಳಿ ದೂರು ಸಲ್ಲಿಸಿದ ಮಹಿಳೆಯ ಮಾತನ್ನು ಅಲ್ಲಾಹನು ಕೇಳಿರುವನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದನು.ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ

[3] ನಿಮ್ಮ ಪೈಕಿ ‘ಝಿಹಾರ್’ ಮಾಡಿದವರ (ತಮ್ಮ ಪತ್ನಿಯನ್ನು ತಾಯಿ ಎಂದು ಕರೆದವರ) ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರು ಮಾತ್ರ ಅವರ ತಾಯಂದಿರು. ಅವರು ತೀರಾ ಕೆಟ್ಟ ಮಾತನ್ನು ಹಾಗೂ ಸುಳ್ಳನ್ನು ಹೇಳುತ್ತಿದ್ದಾರೆ. ಆದರೆ ಅಲ್ಲಾಹನು ಖಂಡಿತ ಮನ್ನಿಸುವವನೂ ಕ್ಷಮಿಸುವವನೂ ಆಗಿದ್ದಾನೆ

[4] ಇನ್ನು ತಮ್ಮ ಪತ್ನಿಯರನ್ನು ತಾಯಿ ಎಂದು ಘೋಷಿಸಿದವರು, ಆ ಬಳಿಕ ತಮ್ಮ ಮಾತನ್ನು ಹಿಂದೆಗೆದುಕೊಂಡರೆ ಅವರು ಪರಸ್ಪರ ಮುಟ್ಟುವ ಮುನ್ನ ಒಬ್ಬ ದಾಸನನ್ನು ಸ್ವತಂತ್ರಗೊಳಿಸಬೇಕು. ಇದು ನಿಮಗೆ ನೀಡಲಾಗುತ್ತಿರುವ ಉಪದೇಶ. ನೀವು ಮಾಡುವ ಎಲ್ಲ ಕೃತ್ಯಗಳ ಕುರಿತು ಅಲ್ಲಾಹನು ಅರಿವು ಉಳ್ಳವನಾಗಿದ್ದಾನೆ

[5] ದಾಸರಿಲ್ಲದವರು ಪರಸ್ಪರ ಮುಟ್ಟುವ ಮುನ್ನ ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು. ಇದನ್ನೂ ಮಾಡಲಾಗದವರು – ಅರುವತ್ತು ಮಂದಿ ಬಡ ಜನರಿಗೆ ಉಣಿಸಬೇಕು. ನೀವು ಅಲ್ಲಾಹ್ ಮತ್ತು ಅವನ ರಸೂಲರಲ್ಲಿ ನಂಬಿಕೆ ಉಳ್ಳವರಾಗಬೇಕೆಂದು (ಇದನ್ನು ವಿಧಿಸಲಾಗಿದೆ). ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಮತ್ತು ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆ ಸಿಗಲಿದೆ

[6] ಅಲ್ಲಾಹ್ ಮತ್ತವನ ದೂತರ ಆಜ್ಞೆ ಮೀರುವವರು, ತಮ್ಮ ಹಿಂದಿನವರು ಅಪಮಾನಿತರಾದಂತೆ ಅಪಮಾನಿತರಾಗುವರು. ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿರುವೆವು. ಧಿಕ್ಕಾರಿಗಳಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ

[7] ಅಲ್ಲಾಹನು ಅವರೆಲ್ಲರನ್ನೂ (ಮತ್ತೆ) ಜೀವಂತ ಗೊಳಿಸುವ ದಿನ ಅವರು ಏನೆಲ್ಲಾ ಮಾಡಿದ್ದರೆಂದು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಅದೆಲ್ಲವನ್ನೂ ಸುರಕ್ಷಿತವಾಗಿಟ್ಟಿರುವನು ಮತ್ತು ಅವರು ಅದನ್ನು ಮರೆತಿರುವರು. ಅಲ್ಲಾಹನು ಎಲ್ಲ ವಿಷಯಗಳಿಗೆ ಸಾಕ್ಷಿಯಾಗಿದ್ದಾನೆ

[8] ನೀವು ಕಂಡಿಲ್ಲವೇ, ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಬಲ್ಲನು. ಮೂರು ಮಂದಿ ಗುಪ್ತ ಸಮಾಲೋಚನೆ ನಡೆಸುವಾಗ ಅವರ ನಾಲ್ಕನೆಯವನಾಗಿ ಅವನು (ಅಲ್ಲಾಹನು) ಇಲ್ಲದಿರುವುದಿಲ್ಲ. ಹಾಗೆಯೇ ಐದು ಮಂದಿ ಇರುವಾಗ ಆರನೆಯವನಾಗಿ ಅವನಿಲ್ಲದೆ ಇರುವುದಿಲ್ಲ. ಇನ್ನು (ಜನರು) ಅದಕ್ಕಿಂತ ಕಡಿಮೆಯಿರಲಿ ಅಥವಾ ಹೆಚ್ಚಿರಲಿ, ಅವರೆಲ್ಲೇ ಇದ್ದರೂ ಅವನು ಅವರ ಜೊತೆ ಇಲ್ಲದಿರುವುದಿಲ್ಲ. ಕೊನೆಗೆ, ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ

[9] ಗುಪ್ತ ಸಮಾಲೋಚನೆ ನಡೆಸದಂತೆ ತಡೆಯಲ್ಪಟ್ಟವರನ್ನು ನೀವು ನೋಡಲಿಲ್ಲವೇ? ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅವರು ಮತ್ತೆ ಅದನ್ನೇ ಮಾಡುತ್ತಾರೆ. ಮತ್ತು ಅವರು ಪಾಪದ, ವಿದ್ರೋಹದ ಮತ್ತು ದೇವದೂತರಿಗೆ ಅವಿಧೇಯತೆ ತೋರುವ ವಿಷಯಗಳನ್ನು ಗುಪ್ತವಾಗಿ ಸಮಾಲೋಚಿಸುತ್ತಾರೆ. ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಹಾರೈಸಿಲ್ಲದ ರೀತಿಯಲ್ಲಿ ಅವರು ನಿಮ್ಮನ್ನು ಹಾರೈಸುತ್ತಾರೆ. ಮತ್ತು ನಾವು ಆಡಿದ ಈ ಮಾತಿಗಾಗಿ ಅಲ್ಲಾಹನು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ? ಎಂದು ತಮ್ಮ ಮನಸ್ಸುಗಳಲ್ಲೇ ಹೇಳಿ ಕೊಳ್ಳುತ್ತಾರೆ. ಅವರಿಗೆ ನರಕವೇ ಸಾಕು. ಅದರೊಳಕ್ಕೆ ಅವರನ್ನು ಎಸೆಯಲಾಗುವುದು. ಅದು ಬಹಳ ಕೆಟ್ಟ ನೆಲೆಯಾಗಿದೆ

[10] ವಿಶ್ವಾಸಿಗಳೇ, ನೀವು ಗುಪ್ತವಾಗಿ ಸಮಾಲೋಚಿಸುವಾಗ ಪಾಪದ, ವಿದ್ರೋಹದ ಮತ್ತು ದೇವದೂತರಿಗೆ ಅವಿಧೇಯತೆ ತೋರುವ ವಿಷಯಗಳನ್ನು ಚರ್ಚಿಸಬೇಡಿ. ಸತ್ಕಾರ್ಯ ಮತ್ತು ಧರ್ಮನಿಷ್ಠೆಯ ವಿಷಯಗಳನ್ನು ಚರ್ಚಿಸಿರಿ. ಮತ್ತು ಅಲ್ಲಾಹನಿಗೆ ಅಂಜಿರಿ. ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು

[11] ಗುಪ್ತ ಸಮಾಲೋಚನೆಯು ವಿಶ್ವಾಸಿಗಳನ್ನು ನೋಯಿಸಲಿಕ್ಕಾಗಿ ಶೈತಾನನಿಂದ ನಡೆಯುವ ಸಂಚಾಗಿದೆ. ಆದರೆ ಅಲ್ಲಾಹನ ಆದೇಶವಿಲ್ಲದೆ ಅವನು (ಶೈತಾನನು) ಅವರಿಗೆ ಯಾವ ಹಾನಿಯನ್ನೂ ಮಾಡಲಾರನು. ವಿಶ್ವಾಸಿಗಳು ಸಂಪೂರ್ಣವಾಗಿ ಅಲ್ಲಾಹನಲ್ಲೇ ಭರವಸೆ ಇಟ್ಟಿರಬೇಕು

[12] ವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ವೈಶಾಲ್ಯವನ್ನು ಪಾಲಿಸಿರೆಂದು ನಿಮ್ಮೊಡನೆ ಹೇಳಲಾದಾಗ ವೈಶಾಲ್ಯವನ್ನು ಪಾಲಿಸಿರಿ. ಅಲ್ಲಾಹನು ನಿಮಗೆ ವೈಶಾಲ್ಯವನ್ನು ದಯ ಪಾಲಿಸುವನು. ನಿಮ್ಮೊಡನೆ ಎದ್ದು ನಿಲ್ಲಲು ಹೇಳಲಾದಾಗ ಎದ್ದು ನಿಲ್ಲಿರಿ. ಅಲ್ಲಾಹನು ನಿಮ್ಮಲ್ಲಿನ ವಿಶ್ವಾಸಿಗಳಿಗೆ ಔನ್ನತ್ಯವನ್ನು ನೀಡುವನು ಮತ್ತು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು. ಅಲ್ಲಾಹನಿಗೆ ನೀವು ಮಾಡುವ ಎಲ್ಲ ಕರ್ಮಗಳ ಅರಿವಿದೆ

[13] ವಿಶ್ವಾಸಿಗಳೇ, ನೀವು ದೇವ ದೂತರೊಡನೆ ಯಾವುದಾದರೂ ಗುಟ್ಟಿನ ಮಾತನ್ನಾಡುವ ಮುನ್ನ (ಬಡವರಿಗೆ) ಏನಾದರೂ ದಾನ ಮಾಡಿರಿ. ಇದು ನಿಮ್ಮ ಪಾಲಿಗೆ ಉತ್ತಮ ಹಾಗೂ ಪರಿಶುದ್ಧ ಕ್ರಮವಾಗಿದೆ. ಒಂದು ವೇಳೆ (ದಾನ ಮಾಡಲು) ನಿಮಗೇನೂ ಸಿಗದಿದ್ದರೆ ಅಲ್ಲಾಹನು ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು

[14] ನೀವೇನು, ದೇವದೂತರೊಡನೆ ಗುಟ್ಟಿನ ಮಾತನಾಡುವ ಮುನ್ನ (ಬಡವರಿಗೆ) ದಾನ ನೀಡಬೇಕೆಂಬ ಆದೇಶದಿಂದ ಅಂಜಿ ಬಿಟ್ಟಿರಾ? ನಿಮಗೆ ಅದು ಸಾಧ್ಯವಾಗದಿದ್ದಾಗ ಅಲ್ಲಾಹನು ನಿಮ್ಮನ್ನು ಕ್ಷಮಿಸಿದನು. ನೀವೀಗ ನಮಾಝನ್ನು ಸಲ್ಲಿಸಿರಿ, ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನ ಹಾಗೂ ಅವನ ದೂತರ ಆದೇಶವನ್ನು ಪಾಲಿಸಿರಿ. ನೀವು ಮಾಡುತ್ತಿರುವ ಎಲ್ಲ ಕರ್ಮಗಳ ಅರಿವು ಅಲ್ಲಾಹನಿಗಿದೆ

[15] ಅಲ್ಲಾಹನ ಕೋಪಕ್ಕೆ ತುತ್ತಾದವರನ್ನು ತಮ್ಮ ಆಪ್ತರಾಗಿಸಿ ಕೊಂಡವರನ್ನು ನೀವು ನೋಡಿಲ್ಲವೆ? ಅವರು ನಿಮ್ಮ ಕಡೆಯವರೂ ಅಲ್ಲ ಅವರ ಕಡೆಯವರೂ ಅಲ್ಲ. ಅವರು ತಿಳಿದೂ ತಿಳಿದೂ ಸುಳ್ಳಿನ ಪರವಾಗಿ ಪ್ರಮಾಣ ಮಾಡುತ್ತಾರೆ

[16] ಅಲ್ಲಾಹನು ಅವರಿಗಾಗಿ ಕಠಿಣ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವನು. ನಿಜಕ್ಕೂ ಅವರು ತುಂಬಾ ಕೆಟ್ಟ ಕೃತ್ಯಗಳನ್ನು ಮಾಡುತ್ತಿರುವರು

[17] ಅವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಬಳಸಿಕೊಂಡರು. ಮತ್ತು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆದರು. ಅವರಿಗೆ ಅಪಮಾನಕಾರಿ ಶಿಕ್ಷೆ ಸಿಗಲಿದೆ

[18] ಅವರ ಸಂಪತ್ತುಗಳಾಗಲಿ, ಸಂತಾನಗಳಾಗಲಿ ಅವರನ್ನು ಅಲ್ಲಾಹನಿಂದ ಕಿಂಚಿತ್ತೂ ರಕ್ಷಿಸಲಾರವು. ಅವರು ನರಕದವರು. ಅವರು ಅದರಲ್ಲೇ ಸದಾಕಾಲ ಇರುವರು

[19] ಅಲ್ಲಾಹನು ಎಲ್ಲರನ್ನೂ ಮತ್ತೆ ಜೀವಂತ ಗೊಳಿಸುವಂದು ಅವರು ನಿಮ್ಮ ಮುಂದೆ ಪ್ರತಿಜ್ಞೆ ಮಾಡುವಂತೆ ಅವನ (ಅಲ್ಲಾಹನ) ಮುಂದೆಯೂ ಪ್ರತಿಜ್ಞೆ ಮಾಡುವರು. ಮತ್ತು ತಾವೇನೊ ವಿಜಯ ಸಾಧಿಸಿದೆವೆಂದು ಅವರು ಭಾವಿಸುವರು. ನಿಮಗೆ ತಿಳಿದಿರಲಿ, ಖಂಡಿತ ಅವರೇ ಸುಳ್ಳುಗಾರರು

[20] ಶೈತಾನನು ಅವರನ್ನು ನಿಯಂತ್ರಿಸಿ ಕೊಂಡಿರುವನು ಮತ್ತು ಅವರು ಅಲ್ಲಾಹನ ನೆನಪನ್ನೇ ಮರೆಯುವಂತೆ ಮಾಡಿರುವನು. ಅವರೇ ಶೈತಾನನ ಬಳಗದವರು. ನಿಮಗೆ ತಿಳಿದಿರಲಿ, ಶೈತಾನನ ಬಳಗದವರೇ ಸೋಲುಣ್ಣುವವರಾಗಿದ್ದಾರೆ

[21] ಅಲ್ಲಾಹ್ ಮತ್ತು ಅವನ ದೂತರನ್ನು ವಿರೋಧಿಸುವವರು – ಅವರೇ ಅತ್ಯಂತ ನೀಚರ ಸಾಲಿಗೆ ಸೇರಿದವರು

[22] ‘‘ನಾನು ಮತ್ತು ನನ್ನ ದೂತರು ಖಂಡಿತ ವಿಜಯಿಗಳಾಗುವೆವು’’ ಎಂದು ಅಲ್ಲಾಹನು ಬರೆದಿಟ್ಟಿರುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅತ್ಯಂತ ಶಕ್ತಿಶಾಲಿಯೂ ಪ್ರಬಲನೂ ಆಗಿರುವನು

ಗಡಿಪಾರು

Surah 59

[1] ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಅಲ್ಲಾಹ್ ಮತ್ತು ಅವನ ದೂತರ ಶತ್ರುಗಳೊಂದಿಗೆ ಸ್ನೇಹ ಬೆಳೆಸುವುದನ್ನು ನೀವೆಂದೂ ಕಾಣಲಾರಿರಿ – ಅವರು, ತಮ್ಮ ಹೆತ್ತವರು ಅಥವಾ ತಮ್ಮ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಬಂಧುಗಳಾಗಿದ್ದರೂ ಸರಿಯೇ. ಅಲ್ಲಾಹನು ಅವರ ಮನಸ್ಸುಗಳಲ್ಲಿ ವಿಶ್ವಾಸದ ಮುದ್ರೆಯೊತ್ತಿ ಬಿಟ್ಟಿರುವನು ಮತ್ತು ಅವನು ತನ್ನ ಕಡೆಯಿಂದ ವಿಶೇಷ ಚೈತನ್ಯವನ್ನೊದಗಿಸಿ ಅವರಿಗೆ ನೆರವಾಗಿರುವನು. ಮತ್ತು ಅವನು ಅವರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಅವರೇ ಅಲ್ಲಾಹನ ಬಳಗದವರು. ನಿಮಗೆ ತಿಳಿದಿರಲಿ, ಅಲ್ಲಾಹನ ಬಳಗದವರೇ ವಿಜಯಿಗಳಾಗುವರು

[2] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[3] ಅವನೇ, ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು ಪ್ರಥಮ ಉಚ್ಚಾಟನೆಯ ವೇಳೆ ಅವರ ಮನೆಗಳಿಂದ ಹೊರಡಿಸಿದವನು. ಅವರು ಹೊರಡುವರೆಂದು ನೀವೆಂದೂ ಭಾವಿಸಿರಲಿಲ್ಲ. ಅತ್ತ ಅವರು, ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ರಕ್ಷಿಸಬಲ್ಲವೆಂದು ಭಾವಿಸಿ ಕೊಂಡಿದ್ದರು. ಆದರೆ ಅಲ್ಲಾಹನು ಅವರೆಂದೂ ಊಹಿಸಿಲ್ಲದ ಕಡೆಯಿಂದ ಅವರ ಬಳಿಗೆ ಬಂದನು – ಮತ್ತು ಅವರ ಮನಸ್ಸುಗಳಲ್ಲಿ ಭೀತಿಯನ್ನು ಬಿತ್ತಿದನು. (ಇದರ ಫಲವಾಗಿ) ಅವರು ಸ್ವತಃ ತಮ್ಮ ಕೈಗಳಿಂದ ತಮ್ಮ ನಿವಾಸಗಳನ್ನು ಕೆಡವಿ ಹಾಕ ತೊಡಗಿದರು. ವಿಶ್ವಾಸಿಗಳ ಕೈಗಳಿಂದಲೂ (ಅದನ್ನೇ ಮಾಡಿಸಲಾಯಿತು). ದೃಷ್ಟಿಯುಳ್ಳವರೇ, ಪಾಠ ಕಲಿಯಿರಿ

[4] ಒಂದು ವೇಳೆ ಅವರು ನಾಡು ಬಿಟ್ಟು ಹೋಗ ಬೇಕೆಂದು ಅಲ್ಲಾಹನು ಮೊದಲೇ ಬರೆದಿಲ್ಲದಿರುತ್ತಿದ್ದರೆ ಅವನು ಇಹ ಲೋಕದಲ್ಲೇ ಅವರನ್ನು ಖಂಡಿತ ಶಿಕ್ಷಿಸುತ್ತಿದ್ದನು. ಪರಲೋಕದಲ್ಲಂತು ಅವರಿಗೆ ನರಕಾಗ್ನಿಯ ಶಿಕ್ಷೆ ಇದ್ದೇ ಇದೆ

[5] ಇದೇಕೆಂದರೆ, ಅವರು ಅಲ್ಲಾಹ್ ಮತ್ತವನ ದೂತರನ್ನು ವಿರೋಧಿಸಿದ್ದರು. ಅಲ್ಲಾಹನನ್ನು ವಿರೋಧಿಸಿದವರಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ನೀಡುವನು

[6] (ವಿಶ್ವಾಸಿಗಳೇ,) ನೀವು ಖರ್ಜೂರದ ಕೆಲವು ಗಿಡಗಳನ್ನು ಕಡಿದು ಹಾಕಿದ್ದು ಅಥವಾ ಕೆಲವನ್ನು ಅವುಗಳ ಕಾಂಡದಲ್ಲಿ ನಿಂತಿರಲು ಬಿಟ್ಟದ್ದು (ಇವೆರಡೂ) ಅಲ್ಲಾಹನ ಆದೇಶಕ್ಕನುಸಾರವಾಗಿತ್ತು ಹಾಗೂ ಅವಿಧೇಯರನ್ನು ಅಪಮಾನಿಸುವುದಕ್ಕಾಗಿತ್ತು

[7] ಅಲ್ಲಾಹನು ಅವರಿಂದ ತನ್ನ ದೂತರಿಗೆ ಕೊಡಿಸಿದ ಸಂಪತ್ತಿಗಾಗಿ ನೀವು ನಿಮ್ಮ ಕುದುರೆಗಳನ್ನಾಗಲೀ ಒಂಟೆಗಳನ್ನಾಗಲೀ ಓಡಿಸಿಲ್ಲ. ನಿಜವಾಗಿ ಅಲ್ಲಾಹನೇ ತನ್ನ ದೂತರಿಗೆ ತಾನಿಚ್ಛಿಸಿದವರ ಮೇಲೆ ನಿಯಂತ್ರಣವನ್ನು ಕೊಟ್ಟು ಬಿಡುತ್ತಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[8] ಹಳ್ಳಿಯವರಿಂದ ಅಲ್ಲಾಹನು ತನ್ನ ದೂತರಿಗೆ ಕೊಡಿಸಿದ ಸಂಪತ್ತು ಅಲ್ಲಾಹನಿಗೆ, ದೂತರಿಗೆ, ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ. ಸಂಪತ್ತು ಕೇವಲ ನಿಮ್ಮ ಶ್ರೀಮಂತರ ನಡುವೆ ಸೀಮಿತವಾಗಿ ಉಳಿಯಬಾರದೆಂದು (ಇದನ್ನು ವಿಧಿಸಲಾಗಿದೆ). ದೂತರು ನಿಮಗೆ ನೀಡಿದ್ದನ್ನು ಸ್ವೀಕರಿಸಿ ಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ

[9] (ಮತ್ತು ಈ ಸಂಪತ್ತು), ತಮ್ಮ ಮನೆ ಮತ್ತು ಸೊತ್ತುಗಳಿಂದ ದೂರಗೊಳಿಸಲಾದ ಬಡ ಮುಹಾಜಿರ್‌ಗಳಿಗೆ (ವಲಸಿಗರಿಗೆ) ಸೇರಿದೆ. ಅವರು ಅಲ್ಲಾಹನ ಅನುಗ್ರಹವನ್ನು ಮತ್ತು ಅವನ ಮೆಚ್ಚುಗೆಯನ್ನು ಅರಸುತ್ತಿರುತ್ತಾರೆ ಮತ್ತು ಅವರು ಅಲ್ಲಾಹ್ ಮತ್ತವನ ದೂತರ ಸಹಾಯಕರಾಗಿರುತ್ತಾರೆ. ಅವರೇ ಸತ್ಯವಂತರು

[10] ಹಾಗೆಯೇ (ಈ ಸಂಪತ್ತು) ಅವರಿಗಿಂತ (ವಲಸಿಗರಿಗಿಂತ) ಮುನ್ನ, ವಲಸೆಯ ಸ್ಥಾನ (ಮದೀನ)ದಲ್ಲಿ ನೆಲೆಸಿದ್ದ ಹಾಗೂ ವಿಶ್ವಾಸಿಗಳಾಗಿದ್ದವರಿಗೆ (ಅನ್ಸಾರ್‌ಗಳಿಗೆ) ಸೇರಿದೆ. ಅವರು ತಮ್ಮ ಬಳಿಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ, ಅವರಿಗೆ ಏನನ್ನು ನೀಡಲಾಯಿತೋ ಆ ಕುರಿತು ಅವರು ತಮ್ಮ ಮನದಲ್ಲಿ ಆಸೆ ಪಡುವುದಿಲ್ಲ ಮತ್ತು ಸ್ವತಃ ತಾವು ಕಷ್ಟದಲ್ಲಿದ್ದರೂ ಅವರಿಗೆ (ವಲಸಿಗರಿಗೆ) ಪ್ರಾಶಸ್ತ್ಯ ನೀಡುತ್ತಾರೆ. ಮನಸ್ಸಿನ ಸಣ್ಣ ತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು

[11] ಹಾಗೆಯೇ ಅದು, ಅವರ ನಂತರ ಬಂದವರಿಗೂ (ಸೇರಿದೆ). ‘‘ ನಮ್ಮೊಡೆಯಾ, ನಮ್ಮನ್ನು ಹಾಗೂ ನಮಗಿಂತ ಮುನ್ನ ವಿಶ್ವಾಸಿಗಳಾಗಿದ್ದ ನಮ್ಮ ಸಹೋದರರನ್ನು ಕ್ಷಮಿಸು. ವಿಶ್ವಾಸಿಗಳ ಕುರಿತು ನಮ್ಮ ಮನಸ್ಸುಗಳಲ್ಲಿ ಯಾವುದೇ ದುರ್ಭಾವನೆಯನ್ನು ಬೆಳೆಸಬೇಡ. ನಮ್ಮೊಡೆಯಾ ನೀನು ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವೆ’’ ಎಂದು ಅವರು ಪ್ರಾರ್ಥಿಸುತ್ತಾರೆ

[12] ನೀವು ಕಪಟಿಗಳನ್ನು ನೋಡಲಿಲ್ಲವೇ? ಅವರು, ಗ್ರಂಥದವರ ಪೈಕಿ ತಮ್ಮ ಧಿಕ್ಕಾರಿ ಸಹೋದರರೊಡನೆ ‘‘ಒಂದು ವೇಳೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾದರೆ ನಾವು ಕೂಡಾ ನಿಮ್ಮ ಜೊತೆ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವೆಂದೂ ಯಾರನ್ನೂ ಅನುಸರಿಸಲಾರೆವು – ಮತ್ತು ನಿಮ್ಮ ವಿರುದ್ಧ ಯುದ್ಧ ನಡೆದರೆ ನಾವು ನಿಮಗೆ ನೆರವಾಗುವೆವು ’’ ಎಂದು ಹೇಳುತ್ತಾರೆ. ಅವರು ಸುಳ್ಳು ಹೇಳುತ್ತಿದ್ದಾರೆಂಬುದಕ್ಕೆ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ

[13] ಒಂದು ವೇಳೆ ಅವರನ್ನು (ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು) ಹೊರಹಾಕಲಾದರೆ ಇವರೇನೂ ಅವರ ಜೊತೆ ಹೊರಡಲಾರರು ಮತ್ತು ಒಂದು ವೇಳೆ ಅವರ ವಿರುದ್ಧ ಯುದ್ಧ ನಡೆದರೆ ಇವರೇನೂ ಅವರಿಗೆ ನೆರವಾಗಲಾರರು. ಒಂದು ವೇಳೆ ನೆರವಾದರೂ (ಬಹು ಬೇಗನೆ) ಬೆನ್ನು ತಿರುಗಿಸಿ ಓಡುವರು ಮತ್ತು ಅವರಿಗೆ ಎಲ್ಲಿಂದಲೂ ನೆರವು ದೊರಯದು

[14] (ವಿಶ್ವಾಸಿಗಳೇ,) ಇದೀಗ ಅವರ ಮನಗಳಲ್ಲಿ ಅಲ್ಲಾಹನಿಗಿಂತ ಹೆಚ್ಚಾಗಿ ನಿಮ್ಮ ಭಯವು ನೆಲೆಸಿದೆ. ಇದೇಕೆಂದರೆ ಅವರು ವಿವೇಚನೆ ಇಲ್ಲದವರಾಗಿದ್ದಾರೆ

[15] ಅವರೆಲ್ಲರೂ ಒಂದಾದರೂ ನಿಮ್ಮ ವಿರುದ್ಧ ನೇರ ಯುದ್ಧಕ್ಕೆ ಇಳಿಯಲಾರರು. ಹೆಚ್ಚೆಂದರೆ ಅವರು ಭದ್ರ ಕೋಟೆಗಳಲ್ಲಿ ಅವಿತು ಕೊಂಡು ಅಥವಾ ಗೋಡೆಗಳ ಮರೆಯಿಂದ ಮಾತ್ರ ಹೋರಾಡ ಬಲ್ಲರು. ಅವರ ಪರಸ್ಪರ ವೈಷಮ್ಯವು ತೀವ್ರವಾಗಿದೆ. ಅವರು ಒಗ್ಗಟ್ಟಾಗಿರುವರೆಂದು ನೀವು ಭಾವಿಸುತ್ತೀರಿ. ಆದರೆ ಅವರ ಮನಸ್ಸುಗಳು ಛಿದ್ರವಾಗಿವೆ. ಇದೇಕೆಂದರೆ, ಅವರು ಬುದ್ಧಿ ಉಳ್ಳವರಲ್ಲ

[16] ಅವರ ಸ್ಥಿತಿಯು ಇತ್ತೀಚೆಗಷ್ಟೇ ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದ ಅವರ ಹಿಂದಿನವರಂತಿದೆ. ಅವರಿಗಾಗಿ ಕಠಿಣ ಶಿಕ್ಷೆಯು ಸಿದ್ಧವಾಗಿದೆ

[17] (ಕಪಟಿಗಳ) ಸ್ಥಿತಿಯು ಶೈತಾನನಂತಿದೆ. ಅವನು ಮಾನವನೊಡನೆ ‘‘(ಸತ್ಯವನ್ನು) ದಿಕ್ಕರಿಸು’’ ಎನ್ನುತ್ತಾನೆ. ಮುಂದೆ ಅವನು ಧಿಕ್ಕರಿಸಿದಾಗ, ‘‘ನನಗೆ ನಿನ್ನೊಂದಿಗೆ ಯಾವ ಸಂಬಂಧವೂ ಇಲ್ಲ. ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಅಂಜುತ್ತೇನೆ’’ ಎಂದು ಬಿಡುತ್ತಾನೆ

[18] ಅವರಿಬ್ಬರ ಪಾಲಿಗೂ ನರಕಾಗ್ನಿಯೇ ಅಂತಿಮ ನೆಲೆಯಾಗಿರುವುದು ಮತ್ತು ಅವರು ಸದಾ ಕಾಲ ಅಲ್ಲೇ ಇರುವರು. ಅಕ್ರಮಿಗಳಿಗಿರುವ ಪ್ರತಿಫಲವಿದು

[19] ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ. ಮತ್ತು ಪ್ರತಿಯೊಬ್ಬನೂ ತಾನು ನಾಳೆಗಾಗಿ (ಪರಲೋಕಕ್ಕಾಗಿ) ಏನನ್ನು ಮುಂದೆ ಕಳಿಸಿರುವೆನೆಂದು ನೋಡಲಿ. ನೀವು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮೆಲ್ಲ ಕರ್ಮಗಳ ಅರಿವುಳ್ಳವನಾಗಿದ್ದಾನೆ

[20] ನೀವು ಅಲ್ಲಾಹನನ್ನು ಮರೆತವರಂತಾಗಬೇಡಿ. ನಿಜವಾಗಿ ಅವರು ಸ್ವತಃ ತಮ್ಮನ್ನೇ ಮರೆತಿರುವರು. ಅವರೇ ಅವಿಧೇಯರು

[21] ನರಕದವರು ಮತ್ತು ಸ್ವರ್ಗದವರು ಸಮಾನರಲ್ಲ. ಸ್ವರ್ಗದವರೇ ವಿಜಯಿಗಳು

[22] ಒಂದು ವೇಳೆ ನಾವು ಈ ಕುರ್‌ಆನನ್ನು ಒಂದು ಪರ್ವತದ ಮೇಲೆ ಇಳಿಸಿದ್ದರೆ, ಅದು ಅಲ್ಲಾಹನಿಗೆ ಅಂಜಿ ಅವನ ಭಯದಿಂದ ಕಂಪಿಸಿ ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದಿರಿ. ಇವು, ಅವರು ಚಿಂತನೆ ನಡೆಸಲೆಂದು, ನಾವು ಜನರ ಮುಂದಿಡುತ್ತಿರುವ ಉದಾಹರಣೆಗಳು

[23] ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ಗುಪ್ತವನ್ನೂ ಬಹಿರಂಗವನ್ನೂ ಬಲ್ಲವನು. ಅವನು ಪರಮ ದಯಾಳು, ಕರುಣಾಮಯಿ

[24] ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ನೈಜ ದೊರೆಯೂ, ಪರಮ ಪಾವನನೂ, ಶಾಂತಿ ಸ್ವರೂಪನೂ, ಅಭಯದಾತನೂ, ಮೇಲ್ವಿಚಾರಕನೂ, ಪ್ರಬಲನೂ, ಬಲಿಷ್ಠನೂ, ಮಹಾನನೂ ಆಗಿರುವನು. ಅವರು (ಅವನ ದೇವತ್ವದಲ್ಲಿ) ಪಾಲುಗೊಳಿಸುವ ಎಲ್ಲವುಗಳಿಂದ ಅವನು ಮುಕ್ತನು

ಪರಿಶೀಲಿಸಬೇಕಾದವಳು

Surah 60

[1] ಅವನೇ ಸೃಷ್ಟಿಕರ್ತನೂ ಪ್ರಾರಂಭಿಸುವವನೂ, ರೂಪ ನೀಡುವವನೂ ಆಗಿದ್ದಾನೆ. ಅತ್ಯುತ್ತಮ ನಾಮಗಳು ಅವನಿಗಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ, ಯುಕ್ತಿವಂತನೂ ಆಗಿರುವನು

[2] ವಿಶ್ವಾಸಿಗಳೇ, ನನ್ನ ಶತ್ರು ಮತ್ತು ನಿಮ್ಮ ಶತ್ರುವನ್ನು ನೀವು ನಿಮ್ಮ ಆಪ್ತರಾಗಿಸಿ ಕೊಳ್ಳಬೇಡಿ. ನೀವು ಅವರೆಡೆಗೆ ಸ್ನೇಹದ ಸಂದೇಶಗಳನ್ನು ಕಳುಹಿಸುತ್ತಿರುವಿರಿ. ಆದರೆ ಅವರು, ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಧಿಕ್ಕರಿಸುತ್ತಿದ್ದಾರೆ. ನೀವು ನಿಮ್ಮೊಡೆಯನಾದ ಅಲ್ಲಾಹನನ್ನು ನಂಬಿರುವಿರಿ ಎಂಬ ಕಾರಣಕ್ಕಾಗಿ ಅವರು ದೇವ ದೂತರನ್ನು ಮತ್ತು ನಿಮ್ಮನ್ನು (ನಿಮ್ಮ ನಾಡಿನಿಂದ) ಹೊರ ಹಾಕುತ್ತಾರೆ. ನೀವು ನನ್ನ (ಅಲ್ಲಾಹನ) ಮಾರ್ಗದಲ್ಲಿ ಹೋರಾಡಲು ಹೊರಟವರಾಗಿದ್ದರೆ ಮತ್ತು ನನ್ನ ಮೆಚ್ಚುಗೆಯನ್ನು ಬಯಸುವವರಾಗಿದ್ದರೆ (ಶತ್ರುಗಳ ಸ್ನೇಹಕ್ಕಾಗಿ ಕಾತರಿಸಬೇಡಿ). ನೀವು ಗುಪ್ತವಾಗಿ ಅವರಿಗೆ ಸ್ನೇಹದ ಸಂದೇಶಗಳನ್ನು ಕಳುಹಿಸುತ್ತಿರುವಿರಿ. ನೀವು ಗುಪ್ತವಾಗಿಡುವ ಮತ್ತು ಬಹಿರಂಗ ಪಡಿಸುವ ಎಲ್ಲವನ್ನೂ ನಾನು ಬಲ್ಲೆನು. ನಿಮ್ಮ ಪೈಕಿ ಆ ಕೃತ್ಯವನ್ನು ಮಾಡಿದವರು ನೇರ ಮಾರ್ಗದಿಂದ ದೂರ ಸರಿದಿರುವರು

[3] ಒಂದು ವೇಳೆ ನೀವು ಅವರ ನಿಯಂತ್ರಣಕ್ಕೆ ಸಿಕ್ಕಿದರೆ ಅವರು ನಿಮ್ಮ ಶತ್ರುಗಳಾಗಿ ಬಿಡುವರು ಮತ್ತು ನಿಮ್ಮನ್ನು ಹಿಂಸಿಸಲು ತಮ್ಮ ಕೈಗಳನ್ನೂ ನಾಲಗೆಗಳನ್ನೂ ಚಾಚುವರು. ಅವರು ನಿಮ್ಮನ್ನು ಧಿಕ್ಕಾರದೆಡೆಗೆ ಮರಳಿಸ ಬಯಸುತ್ತಾರೆ

[4] ಪುನರುತ್ಥಾನ ದಿನ, ನಿಮ್ಮ ಬಂಧುಗಳಿಂದಾಗಲೀ ನಿಮ್ಮ ಮಕ್ಕಳಿಂದಾಗಲೀ ನಿಮಗೆ ಯಾವ ಲಾಭವೂ ಆಗದು. (ಅಂದು) ಅವನು (ಅಲ್ಲಾಹನು) ನಿಮ್ಮ ಮಧ್ಯೆ ತೀರ್ಪು ನೀಡಿ ಬಿಡುವನು ಮತ್ತು ಅಲ್ಲಾಹನು, ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ

[5] ಇಬ್ರಾಹೀಮ್ ಹಾಗೂ ಅವರ ಜೊತೆಗಿದ್ದವರಲ್ಲಿ ನಿಮಗೆ ಶ್ರೇಷ್ಠ ಆದರ್ಶವಿದೆ. ‘‘ನಾವು ನಿಮ್ಮಿಂದ ಹಾಗೂ ಅಲ್ಲಾಹನ ಹೊರತು ನೀವು ಪೂಜಿಸುವ ಎಲ್ಲವುಗಳಿಂದ ಸಂಬಂಧ ಕಡಿದು ಕೊಂಡಿರುವೆವು. ಏಕ ಮಾತ್ರನಾದ ಅಲ್ಲಾಹನನ್ನು ನೀವು ನಂಬುವ ತನಕವೂ ನಾವು ನಿಮ್ಮನ್ನು ಧಿಕ್ಕರಿಸುವೆವು ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಶಾಶ್ವತವಾಗಿ ದ್ವೇಷ ಮತ್ತು ವೈಷಮ್ಯವಿರುವುದು’’ ಎಂದು ಅವರು ತಮ್ಮ ಜನಾಂಗದವರೊಡನೆ ಹೇಳಿದ್ದರು. ಆದರೆ ಇಬ್ರಾಹೀಮರು ತಮ್ಮ ತಂದೆಯೊಡನೆ ಹೇಳಿದ್ದ ಒಂದು ಮಾತು ಇದಕ್ಕೆ ಹೊರತಾಗಿದೆ (ಅದು ನಿಮಗೆ ಆದರ್ಶವಲ್ಲ). ಅವರು ಹೇಳಿದ್ದರು; ‘‘ನಾನು ನಿಮ್ಮ ಕ್ಷಮೆಗಾಗಿ ಖಂಡಿತ ಪ್ರಾರ್ಥಿಸುವೆನು. ಆದರೆ ಅಲ್ಲಾಹನೆದುರು ಮಾತ್ರ ನಿಮಗಾಗಿ ಏನು ಮಾಡಲಿಕ್ಕೂ ನಾನು ಶಕ್ತನಲ್ಲ. ನಮ್ಮೊಡೆಯಾ, ನಾವು ನಿನ್ನಲ್ಲೇ ಭರವಸೆ ಇಟ್ಟಿರುವೆವು. ನಿನ್ನ ಕಡೆಗೇ ಒಲಿಯುತ್ತಿರುವೆವು ಮತ್ತು ನಿನ್ನೆಡೆಗೇ (ನಾವು) ಮರಳ ಬೇಕಾಗಿದೆ’’

[6] ‘‘ನಮ್ಮೊಡೆಯಾ, ನಮ್ಮನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಬೇಡ (ನಮ್ಮನ್ನು ಅವರ ಹಿಂಸೆಗೆ ತುತ್ತಾಗಿಸಬೇಡ), ಮತ್ತು ನಮ್ಮೊಡೆಯಾ, ನಮ್ಮನ್ನು ಕ್ಷಮಿಸು. ನೀನು ಖಂಡಿತ ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿರುವೆ’’

[7] ನಿಮಗೆ ಹಾಗೂ ಅಲ್ಲಾಹನ ಕುರಿತೂ ಪರಲೋಕದ ಕುರಿತೂ ಶುಭ ನಿರೀಕ್ಷೆ ಉಳ್ಳವರಿಗೆ ಅವರಲ್ಲಿ ಶ್ರೇಷ್ಠ ಆದರ್ಶವಿದೆ. ಇನ್ನು, ಅದನ್ನು ಕಡೆಗಣಿಸುವವನು (ತಿಳಿದಿರಲಿ); ಅಲ್ಲಾಹನು ಖಂಡಿತ ಅಪಾರ ಸಂಪನ್ನನೂ ಪ್ರಶಂಸಾರ್ಹನೂ ಆಗಿರುವನು

[8] ಅಲ್ಲಾಹನು, ನಿಮ್ಮ ಹಾಗೂ ನಿಮ್ಮ ಶತ್ರುಗಳ ನಡುವೆ ಸ್ನೇಹವನ್ನು ಬೆಳೆಸಬಹುದು. ಅಲ್ಲಾಹನು ಶಕ್ತನಾಗಿದ್ದಾನೆ ಮತ್ತು ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[9] ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ

[10] ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಸಾರಿದವರು, ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿದವರು ಮತ್ತು ನಿಮ್ಮನ್ನು ಹೊರ ಹಾಕುವುದಕ್ಕೆ ಇತರರಿಗೆ ನೆರವಾದವರು – ಅವರನ್ನು ಮಾತ್ರ ನೀವು ನಿಮ್ಮ ಆಪ್ತರಾಗಿಸಿ ಕೊಳ್ಳದಂತೆ ಅಲ್ಲಾಹನು ನಿಮ್ಮನ್ನು ತಡೆದಿರುವನು. ಅಂಥವರನ್ನು ತಮ್ಮ ಆಪ್ತರಾಗಿಸಿ ಕೊಂಡವರೇ ಅಕ್ರಮಿಗಳು

[11] ವಿಶ್ವಾಸಿಗಳೇ; ವಲಸಿಗರಾದ ವಿಶ್ವಾಸಿ ಸ್ತ್ರೀಯರು ನಿಮ್ಮ ಬಳಿಗೆ ಬಂದಾಗ ಅವರನ್ನು ಪರೀಕ್ಷಿಸಿರಿ. ಅವರ ವಿಶ್ವಾಸದ ಕುರಿತು ಅಲ್ಲಾಹನು ಹೆಚ್ಚು ಬಲ್ಲನು. ಅವರು ವಿಶ್ವಾಸಿನಿಯರೆಂದು ನಿಮಗೆ ತಿಳಿದಿದ್ದರೆ ಅವರನ್ನು ಧಿಕ್ಕಾರಿಗಳ ಬಳಿಗೆ ಮರಳಿಸಬೇಡಿ. ಅವರು ( ಆ ಸ್ತ್ರೀಯರು) ಅವರ ಪಾಲಿಗೆ ಸಮ್ಮತರಲ್ಲ. ಮತ್ತು ಅವರು (ಧಿಕ್ಕಾರಿಗಳು) ಇವರ ಪಾಲಿಗೂ ಸಮ್ಮತರಲ್ಲ. ಅವರು (ಇವರಿಗಾಗಿ) ಖರ್ಚು ಮಾಡಿದ್ದನ್ನು (ಮಹ್ರ್ ಇತ್ಯಾದಿಯನ್ನು) ಅವರಿಗೆ ಮರಳಿಸಿರಿ. ನೀವು ಅವರ ವಿವಾಹ ಶುಲ್ಕ (ಮಹರ್) ವನ್ನು ಪಾವತಿಸಿ ಅವರನ್ನು ವಿವಾಹವಾಗುವುದರಲ್ಲಿ ಪಾಪವೇನಿಲ್ಲ. ಮತ್ತು ನೀವು ಧಿಕ್ಕಾರಿ ಮಹಿಳೆಯರನ್ನು (ಪತ್ನಿಯರಾಗಿ) ಉಳಿಸಿಕೊಳ್ಳ ಬೇಡಿ. ಅವರಿಗಾಗಿ ನೀವು ಖರ್ಚು ಮಾಡಿದ್ದನ್ನು ನೀವು ಅವರಿಂದ (ಧಿಕ್ಕಾರಿಗಳಿಂದ) ಪಡೆಯಿರಿ. ಅವರು (ಧಿಕ್ಕಾರಿಗಳು) ತಾವು ಖರ್ಚು ಮಾಡಿದ್ದನ್ನು ನಿಮ್ಮಿಂದ ಪಡೆಯಲಿ. ಇದು ಅಲ್ಲಾಹನ ಆದೇಶ. ಅವನು ನಿಮ್ಮ ನಡುವೆ ತೀರ್ಪನ್ನು ನೀಡುತ್ತಾನೆ. ಅಲ್ಲಾಹನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿದ್ದಾನೆ

[12] ನಿಮ್ಮ ಪತ್ನಿಯರಲ್ಲಿ ಯಾರಾದರೂ ಧಿಕ್ಕಾರಿಗಳೆಡೆಗೆ ಹೊರಟು ಹೋಗಿದ್ದರೆ, ಮುಂದೆ ನಿಮಗೆ ಪ್ರಾಬಲ್ಯ ಪ್ರಾಪ್ತವಾದಾಗ, ಯಾರ ಪತ್ನಿಯರು ಹೊರಟು ಹೋಗಿದ್ದರೋ ಅವರಿಗೆ, ಅವರು ಖರ್ಚು ಮಾಡಿದ್ದಷ್ಟನ್ನು ಪಾವತಿಸಿರಿ. ನೀವು ನಂಬಿರುವ ಅಲ್ಲಾಹನಿಗೆ ಅಂಜಿರಿ

[13] ಪ್ರವಾದಿವರ್ಯರೇ, ವಿಶ್ವಾಸಿ ಮಹಿಳೆಯರು ತಮ್ಮ ಬಳಿಗೆ ಬಂದು, ತಾವು ಅಲ್ಲಾಹನ ಜೊತೆ ಏನನ್ನೂ ಪಾಲುಗೊಳಿಸುವುದಿಲ್ಲ, ಕಳ್ಳತನ ಮಾಡುವುದಿಲ್ಲ, ವ್ಯಭಿಚಾರವೆಸಗುವುದಿಲ್ಲ, ತಮ್ಮ ಸಂತತಿಯ ಹತ್ಯೆ ಮಾಡುವುದಿಲ್ಲ, ಉದ್ದೇಶಪೂರ್ವಕ ಯಾವುದೇ ಸುಳ್ಳಾರೋಪವನ್ನು ಸ್ವತಃ ರಚಿಸಿ ತರುವುದಿಲ್ಲ ( ತಮ್ಮದಲ್ಲದ ಮಗುವನ್ನು ತಮ್ಮದೆಂದು ಪತಿಯನ್ನು ನಂಬಿಸಿ ವಂಚಿಸುವುದಿಲ್ಲ) ಮತ್ತು ಸತ್ಕಾರ್ಯದಲ್ಲಿ ನಿಮ್ಮ ಆದೇಶವನ್ನು ಉಲ್ಲಂಘಿಸುವುದಿಲ್ಲ – ಎಂದು ಪ್ರಮಾಣ ಮಾಡ ಬಯಸಿದರೆ ಅವರ ಪ್ರಮಾಣವನ್ನು ಸ್ವೀಕರಿಸಿರಿ. ಮತ್ತು ಅಲ್ಲಾಹನ ಬಳಿ ಅವರ ಕ್ಷಮೆಗಾಗಿ ಪ್ರಾರ್ಥಿಸಿರಿ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರುಣಾಮಯಿಯೂ ಆಗಿದ್ದಾನೆ

ಶ್ರೇಣಿಗಳು

Surah 61

[1] ವಿಶ್ವಾಸಿಗಳೇ, ಅಲ್ಲಾಹನ ಕೋಪಕ್ಕೆ ತುತ್ತಾಗುವವರನ್ನು ನಿಮ್ಮ ಆಪ್ತರಾಗಿಸಿಕೊಳ್ಳಬೇಡಿ. ಧಿಕ್ಕಾರಿಗಳು, ಗೋರಿಗಳಲ್ಲಿರುವವರ (ಮರು ಜೀವನದ) ಕುರಿತು ನಿರಾಶರಾಗಿರುವಂತೆಯೇ, ಅವರು (ಅಲ್ಲಾಹನ ಕೋಪಕ್ಕೆ ಪಾತ್ರರಾದವರು) ಪರಲೋಕದ ಕುರಿತು ನಿರಾಶರಾಗಿರುವರು

[2] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುವನು

[3] ವಿಶ್ವಾಸಿಗಳೇ, ನೀವು ಮಾಡದ್ದನ್ನು ಯಾಕೆ ಹೇಳುತ್ತೀರಿ

[4] ನೀವು ಮಾಡದ್ದನ್ನು ಹೇಳುವುದು ಅಲ್ಲಾಹನ ದೃಷ್ಟಿಯಲ್ಲಿ ತೀರಾ ಅಪ್ರಿಯವಾಗಿದೆ

[5] ತಾವು ಸೀಸ ಹೊಯ್ದ ಗೋಡೆಗಳೆಂಬಂತೆ ಸಾಲಾಗಿ (ಸಂಘಟಿತರಾಗಿ) ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ

[6] ನನ್ನ ಜನಾಂಗದವರೇ, ನಾನು ನಿಮ್ಮೆಡೆಗೆ ಬಂದಿರುವ, ಅಲ್ಲಾಹನ ದೂತನೆಂಬುದನ್ನು ಅರಿತಿದ್ದೂ ನೀವೇಕೆ ನನ್ನನ್ನು ಹಿಂಸಿಸುತ್ತಿರುವಿರಿ? ಎಂದು ಮೂಸಾ ತಮ್ಮ ಜನಾಂಗದವರೊಡನೆ ಕೇಳಿದರು. ಅವರು (ಮೂಸಾರ ಜನಾಂಗದವರು) ವಕ್ರ ಬುದ್ಧಿ ತೋರಿದಾಗ ಅಲ್ಲಾಹನು ಅವರ ಮನಸ್ಸುಗಳನ್ನು ವಕ್ರಗೊಳಿಸಿಬಿಟ್ಟನು. ಅಲ್ಲಾಹನು ಅವಿಧೇಯರಿಗೆ ಸರಿದಾರಿಯನ್ನು ತೋರಿಸುವುದಿಲ್ಲ

[7] ‘‘ಇಸ್ರಾಈಲರ ಸಂತತಿಗಳೇ, ನಾನು ನಿಮ್ಮ ಬಳಿಗೆ ಅಲ್ಲಾಹನ ದೂತನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ ಈಸಾ ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು

[8] ತನ್ನನ್ನು ಇಸ್ಲಾಮಿನ ಕಡೆಗೆ ಕರೆಯಲಾದಾಗ, ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ

[9] ಅವರು ಅಲ್ಲಾಹನ ಬೆಳಕನ್ನು ತಮ್ಮ ಬಾಯಿಗಳಿಂದ (ಊದಿ) ನಂದಿಸಬಯಸುತ್ತಾರೆ. ಅಲ್ಲಾಹನಂತೂ ತನ್ನ ಬೆಳಕನ್ನು ಸಂಪೂರ್ಣ ವ್ಯಾಪಿಸಿಯೇ ತೀರುವನು. ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ

[10] ಅವನೇ, ಮಾರ್ಗದರ್ಶನ ಮತ್ತು ಸತ್ಯಧರ್ಮದೊಂದಿಗೆ ತನ್ನ ದೂತನನ್ನು ಕಳುಹಿಸಿ ಕೊಟ್ಟವನು. ಅದನ್ನು ಅವನು, ಇತರ ಎಲ್ಲ ಧರ್ಮಗಳೆದುರು ವಿಜಯಿಯಾಗಲಿಕ್ಕಾಗಿ ಕಳಿಸಿರುವನು. ಅದು ಬಹುದೇವಾರಾಧಕರಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿ

[11] ವಿಶ್ವಾಸಿಗಳೇ, ನಾನು ನಿಮಗೆ ನಿಮ್ಮನ್ನು (ನರಕದ) ಕಠಿಣ ಶಿಕ್ಷೆಯಿಂದ ರಕ್ಷಿಸುವ ವ್ಯವಹಾರವೊಂದನ್ನು ತಿಳಿಸಲೇ

[12] ನೀವು ಅಲ್ಲಾಹನಲ್ಲಿ ಮತ್ತು ಅವನ ದೂತರಲ್ಲಿ ನಂಬಿಕೆ ಇಡಿರಿ. ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ ಅದುವೇ ನಿಮ್ಮ ಪಾಲಿಗೆ ಉತ್ತಮ

[13] ಆಗ ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗತೋಟಗಳೊಳಗೆ ನಿಮ್ಮನ್ನು ಸೇರಿಸುವನು. ಮತ್ತು ಶಾಶ್ವತವಾದ ಆ ಸ್ವರ್ಗತೋಟಗಳಲ್ಲಿ (ನಿಮಗೆ) ನಿವಾಸಗಳನ್ನು ಒದಗಿಸುವನು. ಇದುವೇ ಮಹಾ ವಿಜಯವಾಗಿದೆ

[14] ಹಾಗೆಯೇ, ನೀವು ಪ್ರೀತಿಸುವ ಇನ್ನೊಂದು ವಸ್ತು – ಅಲ್ಲಾಹನ ನೆರವು ಮತ್ತು ಶೀಘ್ರ ವಿಜಯ (ಕೂಡಾ ನಿಮಗೆ ಸಿಗಲಿವೆ). ವಿಶ್ವಾಸಿಗಳಿಗೆ ಶುಭ ವಾರ್ತೆ ನೀಡಿರಿ

ಶುಕ್ರವಾರ

Surah 62

[1] ವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿರಿ – ಮರ್ಯಮರ ಪುತ್ರ ಈಸಾ ತಮ್ಮ ಆಪ್ತ ಶಿಷ್ಯರೊಡನೆ ‘‘ಅಲ್ಲಾಹನ ಮಾರ್ಗದಲ್ಲಿ ನನಗೆ ನೆರವಾಗುವವರು ಯಾರಿದ್ದಾರೆ?’’ ಎಂದಂತೆ. ಅವರ ಆಪ್ತ ಶಿಷ್ಯರು ‘‘ನಾವು ಅಲ್ಲಾಹನ ಸಹಾಯಕರು’’ ಎಂದರು. ಆ ಬಳಿಕ ಇಸ್ರಾಈಲರ ಸಂತತಿಯಲ್ಲಿನ ಒಂದು ಗುಂಪು ವಿಶ್ವಾಸವಿಟ್ಟಿತು ಮತ್ತು ಇನ್ನೊಂದು ಗುಂಪು ಧಿಕ್ಕರಿಸಿತು. ನಾವು ವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ದ ನೆರವು ಒದಗಿಸಿದೆವು ಮತ್ತು ಅವರು ವಿಜಯಿಗಳಾದರು

[2] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ನೈಜ ಅಧಿಪತಿಯೂ ಪರಮ ಪಾವನನೂ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[3] ಅವನೇ ನಿರಕ್ಷರಿಗಳ ಮಧ್ಯೆ, ಅವರಲ್ಲೊಬ್ಬನನ್ನು ದೂತನಾಗಿ ಕಳುಹಿಸಿದನು. ಅವರು (ಆ ದೂತರು) ಅವರಿಗೆ ಆತನ ವಚನಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುತ್ತಾರೆ. ಈ ಹಿಂದೆ ಆ ಜನರು ಸ್ಪಷ್ಟವಾಗಿ ದಾರಿಗೆಟ್ಟಿದ್ದರು

[4] ಇದಲ್ಲದೆ, ಅವರ ಪೈಕಿ, ಅವರಿನ್ನೂ ಭೇಟಿಯಾಗಿಲ್ಲದವರ ಕಡೆಗೂ ಅವರನ್ನು (ದೂತರಾಗಿ) ಕಳುಹಿಸಲಾಗಿದೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ

[5] ಇದು ಅಲ್ಲಾಹನ ಅನುಗ್ರಹ. ಅವನು ತಾನಿಚ್ಛಿಸಿದವರಿಗೆ ಇದನ್ನು ದಯಪಾಲಿಸುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹಶಾಲಿಯಾಗಿದ್ದಾನೆ

[6] ತೌರಾತಿನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನಿರ್ವಹಿಸದೆ ಇದ್ದವರ ಉದಾಹರಣೆಯು ಗ್ರಂಥಗಳ ಹೊರೆ ಹೊತ್ತ ಕತ್ತೆಯಂತಿದೆ. ಅಲ್ಲಾಹನ ವಚನಗಳನ್ನು ತಿರಸ್ಕರಿಸಿದವರ ಸ್ಥಿತಿಯು ನಿಜಕ್ಕೂ ಕೆಟ್ಟದಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ

[7] ಹೇಳಿರಿ; ‘‘ಯಹೂದಿಗಳೇ, ಇತರೆಲ್ಲ ಮಾನವರನ್ನು ಬಿಟ್ಟು, ನೀವು ಮಾತ್ರ ಅಲ್ಲಾಹನಿಗೆ ಪರಮ ಆಪ್ತರು ಎಂಬ ದೊಡ್ಡಸ್ತಿಕೆ ನಿಮಗಿದ್ದರೆ ಮತ್ತು ನೀವು ಸತ್ಯವಂತರಾಗಿದ್ದರೆ, ನೀವು ಮರಣವನ್ನು ಅಪೇಕ್ಷಿಸಿರಿ’’

[8] ಅವರು ಅದನ್ನೆಂದೂ ಅಪೇಕ್ಷಿಸಲಾರರು. (ಏಕೆಂದರೆ) ಅವರ ಕೈಗಳು ಮುಂದೆ ಕಳಿಸಿರುವ ಕರ್ಮಗಳು ಹಾಗಿವೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು

[9] ಹೇಳಿರಿ; ನೀವು ಯಾವ ಮರಣದಿಂದ ದೂರ ಓಡುತ್ತಿರುವಿರೊ ಅದು ಖಂಡಿತ ನಿಮ್ಮ ಮುಂದೆ ಬರಲಿದೆ. ಆ ಬಳಿಕ ನಿಮ್ಮನ್ನು, ಗುಪ್ತ ಹಾಗೂ ಬಹಿರಂಗವಾದ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಆಗ ಅವನು ನಿಮಗೆ ತಿಳಿಸುವನು

[10] ವಿಶ್ವಾಸಿಗಳೇ, ಶುಕ್ರವಾರದ ದಿನ ನಿಮ್ಮನ್ನು ನಮಾಝ್‌ಗಾಗಿ ಕರೆಯಲಾದಾಗ ಅಲ್ಲಾಹನ ಸ್ಮರಣೆಯೆಡೆಗೆ ಧಾವಿಸಿರಿ ಮತ್ತು ಇತರೆಲ್ಲಾ ವ್ಯವಹಾರಗಳನ್ನು ಬಿಟ್ಟು ಬಿಡಿರಿ. ನೀವು ಅರಿಯುವವರಾಗಿದ್ದರೆ ನಿಮ್ಮ ಪಾಲಿಗೆ ಇದುವೇ ಉತ್ತಮ

[11] ನೀವು ನಮಾಝನ್ನು ಮುಗಿಸಿದ ಬಳಿಕ ಭೂಮಿಯಲ್ಲಿ ಚದುರಿರಿ ಹಾಗೂ ಅಲ್ಲಾಹನ ಅನುಗ್ರಹವನ್ನು ಹುಡುಕಿರಿ ಮತ್ತು ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ. ನೀವು ವಿಜಯಿಗಳಾಗಬಹುದು

ಕಪಟಿಗಳು

Surah 63

[1] (ದೂತರೇ,) ಅವರು (ಕೆಲವರು) ಯಾವುದಾದರೂ ವ್ಯಾಪಾರ ಅಥವಾ ಮನರಂಜಕ ವಸ್ತುವನ್ನು ಕಂಡಾಗ ನಿಮ್ಮನ್ನು ನಿಂತಲ್ಲೇ ಬಿಟ್ಟು ಅವುಗಳೆಡೆಗೆ ಧಾವಿಸಿ ಬಿಡುತ್ತಾರೆ. ಹೇಳಿರಿ ಅಲ್ಲಾಹನ ಬಳಿ ಏನಿದೆಯೋ ಅದು ಸಕಲ ಮನರಂಜನೆ ಮತ್ತು ಸರ್ವ ವ್ಯಾಪಾರಗಳಿಗಿಂತಲೂ ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ

[2] (ದೂತರೇ,) ಕಪಟಿಗಳು ನಿಮ್ಮ ಬಳಿಗೆ ಬಂದಾಗ, ‘‘ನೀವು ಖಂಡಿತ ಅಲ್ಲಾಹನ ದೂತರೆಂದು ನಾವು ಸಾಕ್ಷಿ ಹೇಳುತ್ತೇವೆ’’ ಎನ್ನುತ್ತಾರೆ. ನೀವು ತನ್ನ ದೂತರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಮತ್ತು, ಈ ಕಪಟಿಗಳು ಖಂಡಿತ ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ

[3] ಅವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಬಳಸಿಕೊಳ್ಳುತ್ತಾರೆ. ಮತ್ತು ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಅವರು ಮಾಡುತ್ತಿರುವ ಕೃತ್ಯಗಳು ತೀರಾ ಕೆಟ್ಟವು

[4] ಇದೇಕೆಂದರೆ ಅವರು ವಿಶ್ವಾಸಿಗಳಾದ ಬಳಿಕ ಮತ್ತೆ ಧಿಕ್ಕಾರಿಗಳಾದರು. ಆದ್ದರಿಂದ ಅವರ ಮನಸ್ಸುಗಳಿಗೆ ಮುದ್ರೆ ಜಡಿಯಲಾಯಿತು. ಈಗ ಅವರಿಗೆ ಏನೂ ಅರ್ಥವಾಗುವುದಿಲ್ಲ

[5] ನೀವು ಅವರನ್ನು ಕಂಡಾಗ ಅವರ ಶರೀರಗಳು ನಿಮಗೆ ಚಂದಗಾಣುತ್ತವೆ. ಅವರು ಮಾತನಾಡಿದರೆಂದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುತ್ತೀರಿ. ಆದರೆ ಅವರ ಸ್ಥಿತಿಯು ಗೋಡೆಗೆ ಒರಗಿಸಿದ ಹಲಗೆಯಂತೆ, ತೀರಾ ಬರಡಾಗಿದೆ. ಯಾವುದಾದರೂ ದೊಡ್ಡ ಶಬ್ದವು ಕೇಳಿಸಿದೊಡನೆ, ಅವರು ಅದನ್ನು, ತಮ್ಮ ವಿರುದ್ಧ (ಏನೋ ಆಪತ್ತು ಎರಗಲಿದೆ) ಎಂದು ಭಾವಿಸುತ್ತಾರೆ. ಅವರು ಶತ್ರುಗಳು. ಅವರ ಕುರಿತು ಎಚ್ಚರವಾಗಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರು ಅದೆಲ್ಲಿ ಅಲೆಯುತ್ತಿದ್ದಾರೆ

[6] (ದೂತರೇ,) ‘‘ಬನ್ನಿ, ಅಲ್ಲಾಹನ ದೂತರು ನಿಮಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಲಿ’’ ಎಂದು ಹೇಳಿದಾಗ ಅವರು ಮುಖ ತಿರುಗಿಸಿ ಕೊಳ್ಳುತ್ತಾರೆ ಮತ್ತು ಅವರು ಅಹಂಕಾರ ಮೆರೆಯುತ್ತಾ, ತಪ್ಪಿಸಿಕೊಳ್ಳುವುದನ್ನು ನೀವು ಕಾಣುತ್ತೀರಿ

[7] ನೀವು ಅವರ ಕ್ಷಮೆಗಾಗಿ ಪ್ರಾರ್ಥಿಸಿದರೂ ಒಂದೇ ಪ್ರಾರ್ಥಿಸದಿದ್ದರೂ ಒಂದೇ. ಅಲ್ಲಾಹನಂತು ಅವರನ್ನು ಕ್ಷಮಿಸಲಾರನು. ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರುವುದಿಲ್ಲ

[8] ‘‘ದೇವ ದೂತರ ಜೊತೆ ಇರುವವರಿಗಾಗಿ ಏನನ್ನೂ ಖರ್ಚು ಮಾಡಬೇಡಿ. ಅವರು (ತಾವಾಗಿಯೇ) ಹೊರಟು ಹೋಗುವರು’’ ಎಂದವರು ಅವರೇ. ಆಕಾಶಗಳ ಮತ್ತು ಭೂಮಿಯ ಭಂಡಾರಗಳೆಲ್ಲವೂ ಅಲ್ಲಾಹನಿಗೇ ಸೇರಿವೆ. ಆದರೆ ಕಪಟಿಗಳಿಗೆ ಇದು ಅರ್ಥವಾಗುವುದಿಲ್ಲ

[9] ‘‘ನಾವು ಮದೀನಾದೆಡೆಗೆ ಮರಳಿದಾಗ, ನಮ್ಮಲ್ಲಿನ ಗೌರವಾನ್ವಿತರು ಹೀನರನ್ನು ಅಲ್ಲಿಂದ ಹೊರ ಹಾಕುವರು’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಗೌರವವೆಲ್ಲವೂ ಅಲ್ಲಾಹನಿಗೆ, ಅವನ ದೂತರಿಗೆ ಮತ್ತು ವಿಶ್ವಾಸಿಗಳಿಗೆ ಸೇರಿದೆ. ಆದರೆ ಕಪಟಿಗಳಿಗೆ ಇದು ತಿಳಿದಿಲ್ಲ

[10] ವಿಶ್ವಾಸಿಗಳೇ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತಾನಗಳು ನಿಮ್ಮನ್ನು ಅಲ್ಲಾಹನ ನೆನಪಿನಿಂದ ದೂರ ಗೊಳಿಸದಿರಲಿ. ಹಾಗೆ ಮಾಡಿದವರೇ ನಿಜವಾಗಿ ನಷ್ಟ ಅನುಭವಿಸುವವರು

[11] ನಿಮ್ಮಲ್ಲಿ ಯಾರಿಗಾದರೂ ಮರಣವು ಬರುವ ಮನ್ನವೇ, ನಾವು ನಿಮಗೇನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡಿರಿ. (ಮರಣವು ಒಂದು ಬಿಟ್ಟಾಗ) ಅವನು, ‘‘ನನ್ನೊಡೆಯಾ, ನೀನು ನನಗೆ ಒಂದಿಷ್ಟು ಹೆಚ್ಚು ಕಾಲಾವಕಾಶವನ್ನೇಕೆ ಕೊಟ್ಟಿಲ್ಲ? (ಕೊಟ್ಟಿದ್ದರೆ) ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಸಾಲಿಗೆ ಸೇರುತ್ತಿದ್ದೆ’’ ಎನ್ನುವನು

ಪರಸ್ಪರ ಭ್ರಮೆ

Surah 64

[1] ಒಬ್ಬ ವ್ಯಕ್ತಿಯ ಮರಣದ ಸಮಯವು ಬಂದು ಬಿಟ್ಟರೆ, ಅಲ್ಲಾಹನು ಅದನ್ನು ಕಿಂಚಿತ್ತೂ ಮುಂದೂಡುವುದಿಲ್ಲ. ನೀವು ಮಾಡುವ ಎಲ್ಲ ಕೃತ್ಯಗಳ ಅರಿವು ಅಲ್ಲಾಹನಿಗಿದೆ

[2] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಆಧಿಪತ್ಯವು ಅವನಿಗೇ ಸೇರಿದೆ. ಪ್ರಶಂಸೆಗಳು ಅವನಿಗೇ ಮೀಸಲು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[3] ಅವನೇ ನಿಮ್ಮನ್ನು ಸೃಷ್ಟಿಸಿದವನು. ಇನ್ನು, ನಿಮ್ಮಲ್ಲಿ ಧಿಕ್ಕಾರಿಗಳೂ ಇದ್ದಾರೆ ಮತ್ತು ನಿಮ್ಮಲ್ಲಿ ವಿಶ್ವಾಸಿಗಳೂ ಇದ್ದಾರೆ. ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ

[4] ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತವಾಗಿ ಸೃಷ್ಟಿಸಿರುವನು. ಅವನೇ ನಿಮಗೆ ರೂಪ ನೀಡಿದವನು. ಮತ್ತು ಅವನು ನಿಮಗೆ ಬಹಳ ಶ್ರೇಷ್ಠ ರೂಪವನ್ನು ನೀಡಿರುವನು. (ಕೊನೆಗೆ ಎಲ್ಲರೂ) ಅವನ ಕಡೆಗೇ ಮರಳ ಬೇಕಾಗಿದೆ

[5] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲವನ್ನೂ ಅವನು ಬಲ್ಲನು. ಹಾಗೂ ನೀವು ಗುಟ್ಟಾಗಿಡುವ ಮತ್ತು ಪ್ರಕಟ ಪಡಿಸುವ ಎಲ್ಲವನ್ನೂ ಅವನು ಬಲ್ಲನು. ಅಲ್ಲಾಹನು ಮನಸ್ಸಿನ ರಹಸ್ಯಗಳನ್ನೂ ಬಲ್ಲವನಾಗಿದ್ದಾನೆ

[6] ಗತಕಾಲದ ಧಿಕ್ಕಾರಿಗಳ ಸಮಾಚಾರವು ನಿಮಗೆ ತಲುಪಿಲ್ಲವೇ? ಅವರು ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದರು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ

[7] ಏಕೆಂದರೆ ಅವರ (ಕಾಲದ) ದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು, ‘‘ಏನು? ಮನುಷ್ಯರು ನಮ್ಮ ಮಾರ್ಗದರ್ಶಿಗಳಾಗುವುದೇ?’’ ಎನ್ನುತ್ತಾ ಧಿಕ್ಕರಿಸಿದರು ಹಾಗೂ ಮುಖ ತಿರುಗಿಸಿ ಕೊಂಡರು. ಅಲ್ಲಾಹನು ಅವರನ್ನು ಕಡೆಗಣಿಸಿ ಬಿಟ್ಟನು. ಅಲ್ಲಾಹನು ಅಪೇಕ್ಷೆಗಳಿಲ್ಲದವನು ಮತ್ತು ಪ್ರಶಂಸಾರ್ಹನಾಗಿದ್ದಾನೆ

[8] ಧಿಕ್ಕಾರಿಗಳು, ತಮ್ಮನ್ನು ಮತ್ತೆ ಜೀವಂತ ಗೊಳಿಸಲಾಗದು ಎಂದು ನಂಬಿ ಕೊಂಡಿದ್ದಾರೆ. ಹೇಳಿರಿ; ಯಾಕಿಲ್ಲ? ನನ್ನೊಡೆಯನಾಣೆ, ನಿಮ್ಮನ್ನು ಖಂಡಿತ ಮತ್ತೆ ಜೀವಂತ ಗೊಳಿಸಲಾಗುವುದು ಮತ್ತು ನೀವು ಮಾಡಿದ್ದೆಲ್ಲವನ್ನೂ ಖಂಡಿತ ನಿಮಗೆ ತಿಳಿಸಲಾಗುವುದು. ಇದು ಅಲ್ಲಾಹನ ಮಟ್ಟಿಗೆ ತುಂಬಾ ಸುಲಭದ ಕೆಲಸವಾಗಿದೆ

[9] ಅಲ್ಲಾಹನಲ್ಲಿ ಮತ್ತವನ ದೂತರಲ್ಲಿ ಹಾಗೂ ನಾವು ಇಳಿಸಿ ಕೊಟ್ಟ ಬೆಳಕಿನಲ್ಲಿ ನಂಬಿಕೆ ಇಡಿರಿ. ಅಲ್ಲಾಹನಿಗೆ, ನಿಮ್ಮ ಎಲ್ಲ ಕೃತ್ಯಗಳ ಅರಿವಿದೆ

[10] ಅವನು ನಿಮ್ಮನ್ನು ಒಟ್ಟು ಸೇರಿಸುವ ದಿನ, ಅಂತಿಮ ಸಮಾವೇಶದ ಆ ದಿನವು, ಭಾರೀ ನಷ್ಟದ ದಿನವಾಗಿರುವುದು. ಅಲ್ಲಾಹನು, ತನ್ನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನ ಎಲ್ಲ ಪಾಪಗಳನ್ನು ನಿವಾರಿಸುವನು ಮತ್ತು ಅವನನ್ನು, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗದೊಳಗೆ ಸೇರಿಸುವನು. ಅವರು ಅಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ಸೌಭಾಗ್ಯವಾಗಿದೆ

[11] ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರು ಮತ್ತು ತಿರಸ್ಕರಿಸಿದವರು. ಅವರು, ನರಕ ವಾಸಿಗಳು. ಅವರು ಸದಾಕಾಲ ಅದರಲ್ಲೇ ಇರುವರು ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ

[12] ಅಲ್ಲಾಹನ ಆದೇಶವಿಲ್ಲದೆ, ಯಾವ ವಿಪತ್ತೂ ಎರಗುವುದಿಲ್ಲ. ಅಲ್ಲಾಹನು ತನ್ನಲ್ಲಿ ನಂಬಿಕೆ ಇಟ್ಟವರ ಮನಸ್ಸಿಗೆ ಮಾರ್ಗದರ್ಶನ ನೀಡುತ್ತಾನೆ. ಮತ್ತು ಅಲ್ಲಾಹನು ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ

[13] ಮತ್ತು ನೀವು ಅಲ್ಲಾಹನ ಆದೇಶ ಪಾಲಿಸಿರಿ ಹಾಗೂ ದೂತರ ಆದೇಶ ಪಾಲಿಸಿರಿ. ನೀವು ಅದನ್ನು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ) ನಮ್ಮ ದೂತರ ಮೇಲಿರುವುದು, ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊಣೆ ಮಾತ್ರ

[14] ಅಲ್ಲಾಹ್ – ಅವನ ಹೊರತು ಪೂಜಾರ್ಹರು ಬೇರಿಲ್ಲ. ವಿಶ್ವಾಸಿಗಳಾಗಿರುವವರು ಸಂಪೂರ್ಣವಾಗಿ ಅಲ್ಲಾಹನಲ್ಲೇ ಭರವಸೆ ಇಟ್ಟಿರುತ್ತಾರೆ

[15] ವಿಶ್ವಾಸಿಗಳೇ, ನಿಮ್ಮ ಪತ್ನಿಯರು ಮತ್ತು ನಿಮ್ಮ ಸಂತಾನಗಳಲ್ಲಿ ನಿಮ್ಮ ಶತ್ರುಗಳಿದ್ದಾರೆ. ಅವರ ಕುರಿತು ಎಚ್ಚರವಾಗಿರಿ. ಇನ್ನು ನೀವು ಮನ್ನಿಸಿದರೆ, ಕಡೆಗಣಿಸಿದರೆ ಮತ್ತು ಕ್ಷಮಿಸಿದರೆ, ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ

[16] ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷೆಗಳಾಗಿವೆ. ಮತ್ತು ಅಲ್ಲಾಹನ ಬಳಿ ಭವ್ಯ ಪ್ರತಿಫಲವಿದೆ

[17] ನಿಮಗೆ ಸಾಧ್ಯವಿದ್ದಷ್ಟು, ಅಲ್ಲಾಹನಿಗೆ ಅಂಜಿರಿ. ಹಾಗೂ (ಅವನ ಆದೇಶಗಳನ್ನು) ಆಲಿಸಿರಿ ಮತ್ತು ಅನುಸರಿಸಿರಿ ಮತ್ತು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಅದು ನಿಮ್ಮ ಪಾಲಿಗೇ ಉತ್ತಮವಾಗಿದೆ. ತಮ್ಮ ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ನಿಜವಾದ ವಿಜಯಿಗಳು

[18] ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡಿದರೆ ಅವನು ಅದನ್ನು ನಿಮಗಾಗಿ ಹೆಚ್ಚಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ಪುರಸ್ಕರಿಸುವವನು ಮತ್ತು ಸಂಯಮಿಯಾಗಿದ್ದಾನೆ

ವಿಚ್ಛೇದನ

Surah 65

[1] ಅವನು ಗುಪ್ತ ಮತ್ತು ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ

[2] ಪ್ರವಾದಿ ವರ್ಯರೇ, (ವಿಶ್ವಾಸಿಗಳೊಡನೆ ಹೇಳಿರಿ;) ನೀವು ಮಹಿಳೆಯರಿಗೆ (ಪತ್ನಿಯರಿಗೆ) ತಲಾಕ್ ನೀಡುವಾಗ (ವಿಚ್ಛೇದಿಸುವಾಗ) ಅವರ (ನೈರ್ಮಲ್ಯದ) ಅವಧಿಯಲ್ಲಿ ತಲಾಕ್ ನೀಡಿರಿ ಮತ್ತು ಅವಧಿಯ ದಿನಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮೊಡೆಯನಾದ ಅಲ್ಲಾಹನಿಗೆ ಅಂಜಿರಿ. ಅವರು ಸ್ಪಷ್ಟವಾದ ಅಶ್ಲೀಲ ಕೃತ್ಯವನ್ನು ಎಸಗಿರದಿದ್ದರೆ, ಅವರನ್ನು (ಇದ್ದತ್‌ನ ಅವಧಿಯಲ್ಲಿ) ಅವರ ಮನೆಗಳಿಂದ ಹೊರ ಹಾಕ ಬೇಡಿ, ಮತ್ತು ಸ್ವತಃ ಅವರೂ ಹೊರ ಹೋಗದಿರಲಿ. ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಅಲ್ಲಾಹನು ನಿಶ್ಚಯಿಸಿರುವ ಮಿತಿಗಳನ್ನು ಉಲ್ಲಂಘಿಸಿದವನು ಸ್ವತಃ ತನ್ನ ಮೇಲೆ ಅಕ್ರಮವೆಸಗಿ ಕೊಂಡನು. ನಿಮಗೆ ತಿಳಿಯದು, ಇಷ್ಟಾದ ಬಳಿಕ ಅಲ್ಲಾಹನು ಹೊಸ ಮಾರ್ಗವನ್ನೇನಾದರೂ ತೋರಿಸಲೂ ಬಹುದು

[3] ಮುಂದೆ ಅವರು ತಮ್ಮ ಅವಧಿಯ ಕೊನೆಯನ್ನು ಮುಟ್ಟಿದಾಗ ಅವರನ್ನು ನಿಯಮಾನುಸಾರ (ಪತ್ನಿಯರಾಗಿ) ಇಟ್ಟುಕೊಳ್ಳಿರಿ ಅಥವಾ ನಿಯಮಾನುಸಾರ ಅವರನ್ನು ಪ್ರತ್ಯೇಕಿಸಿರಿ ಹಾಗೂ ನಿಮ್ಮ ಪೈಕಿ ಇಬ್ಬರು ನ್ಯಾಯವಂತರನ್ನು ಸಾಕ್ಷಿಯಾಗಿಸಿಕೊಳ್ಳಿರಿ. ಮತ್ತು ನೀವು, ಅಲ್ಲಾಹನಿಗಾಗಿ ಸಾಕ್ಷಿ ಹೇಳಿರಿ. ಇವು, ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನಿಗೆ ನೀಡಲಾಗುತ್ತಿರುವ ಉಪದೇಶಗಳು. ಅಲ್ಲಾಹನ ಭಯ ಉಳ್ಳವನಿಗೆ ಅವನು (ಅಲ್ಲಾಹನು, ಸಂಕಟಗಳಿಂದ) ಹೊರ ಬರುವ ದಾರಿ ತೋರುವನು

[4] ಮತ್ತು ಅವನು ಊಹಿಸಿಯೂ ಇಲ್ಲದ ಕಡೆಯಿಂದ ಅವನಿಗೆ ಸಾಧನಗಳನ್ನು ಒದಗಿಸುವನು. ಅಲ್ಲಾಹನಲ್ಲಿ ಭರವಸೆ ಇಟ್ಟವನಿಗೆ ಅವನೇ (ಅಲ್ಲಾಹನೇ) ಸಾಕು. ಅಲ್ಲಾಹನು ತನ್ನ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುವನು. (ಆದರೆ) ಅಲ್ಲಾಹನು ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಪ್ರಮಾಣವನ್ನು ನಿಶ್ಚಯಿಸಿರುವನು

[5] ನಿಮ್ಮ (ವಿಚ್ಛೇದಿತ) ಮಹಿಳೆಯರ ಪೈಕಿ ಋತು ಸ್ರಾವದ ಕುರಿತು ನಿರಾಶರಾಗಿರುವವರ (ಋತುಸ್ರಾವ ನಿಂತವರ) ಅವಧಿಯ ವಿಷಯದಲ್ಲಿ ನಿಮಗೆ ಸಂಶಯವಿದ್ದರೆ, ಅವರ ಅವಧಿ ಮೂರು ತಿಂಗಳಾಗಿದೆ. ಇನ್ನೂ ಋತುಸ್ರಾವ ಆರಂಭವಾಗಿಲ್ಲದವರಿಗೂ ಇದು ಅನ್ವಯಿಸುತ್ತದೆ. ಗರ್ಭಿಣಿಯರ ಅವಧಿಯು ಪ್ರಸವದವರೆಗಿರುತ್ತದೆ. ಅಲ್ಲಾಹನು, ತನ್ನನ್ನು ಅಂಜುವವನಿಗೆ ಅವನ ವ್ಯವಹಾರಗಳನ್ನು ಸುಲಭಗೊಳಿಸಿ ಕೊಡುತ್ತಾನೆ

[6] ಇವು ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಅಲ್ಲಾಹನ ಆದೇಶಗಳು. ಅಲ್ಲಾಹನು ತನ್ನನ್ನು ಅಂಜುವವನ ಪಾಪಗಳನ್ನೆಲ್ಲಾ ನಿವಾರಿಸುವನು ಮತ್ತು ಅವನಿಗೆ ಭವ್ಯ ಪ್ರತಿಫಲವನ್ನು ನೀಡುವನು

[7] (ಇದ್ದತ್‌ನ ಅವಧಿಯಲ್ಲಿ ) ಸಾಧ್ಯವಾದಷ್ಟು ಮಟ್ಟಿಗೆ ಆ ಮಹಿಳೆಯರನ್ನು ನೀವು ವಾಸಿಸುವಲ್ಲೇ ವಾಸಗೊಳಿಸಿರಿ ಮತ್ತು ಅವರ ಬದುಕನ್ನು ದುಸ್ತರಗೊಳಿಸಲಿಕ್ಕಾಗಿ ಅವರಿಗೆ ಕಿರುಕುಳ ನೀಡಬೇಡಿ. ಒಂದು ವೇಳೆ ಅವರು ಗರ್ಭಿಣಿಯರಾಗಿದ್ದರೆ ಅವರು ಪ್ರಸವಿಸುವ ತನಕ ಅವರ ಖರ್ಚು ವೆಚ್ಚಗಳನ್ನು ಭರಿಸಿರಿ. ಅವರು ನಿಮಗಾಗಿ (ಮಗುವಿಗೆ) ಮೊಲೆಹಾಲುಣಿಸಿದರೆ – ಅವರಿಗೆ ಅವರ ಸಂಭಾವನೆಯನ್ನು ನೀಡಿರಿ. ನೀವು (ಎಲ್ಲ ವಿಷಯಗಳನ್ನೂ) ನಿಯಮಾನುಸಾರ ಪರಸ್ಪರ ಸಮಾಲೋಚಿಸಿ ನಿರ್ಧರಿಸಿರಿ. ಇನ್ನು, ನಿಮಗೆ ಕಷ್ಟವೆನಿಸಿದರೆ, ಅದಕ್ಕೆ (ಮಗುವಿಗೆ) ಬೇರೊಬ್ಬಳು ಮೊಲೆ ಹಾಲುಣಿಸಲಿ

[8] ಸ್ಥಿತಿವಂತನು ತನ್ನ ಸಾಮರ್ಥ್ಯಾನುಸಾರ ಖರ್ಚುಮಾಡಲಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವನು ತನಗೆ ಅಲ್ಲಾಹನು ನೀಡಿರುವಷ್ಟರಿಂದ ಖರ್ಚುಮಾಡಲಿ. ಅಲ್ಲಾಹನು ಯಾವ ಜೀವಿಯ ಮೇಲೂ ತಾನು ಅದಕ್ಕೆ ನೀಡಿರುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ. ಅಲ್ಲಾಹನು ದಾರಿದ್ರದ ಬೆನ್ನಿಗೇ ಸಂಪನ್ನತೆಯನ್ನು ನೀಡಬಹುದು

[9] ಅದೆಷ್ಟೋ ನಾಡುಗಳ ಜನರು ತಮ್ಮ ಒಡೆಯನ ಹಾಗೂ ಅವನ ದೂತರ ಆದೇಶಗಳ ವಿಷಯದಲ್ಲಿ ವಿದ್ರೋಹವೆಸಗಿದರು. ನಾವು ಅವರನ್ನು ಬಹಳ ಕಠಿಣ ವಿಚಾರಣೆಗೊಳಪಡಿಸಿದೆವು ಮತ್ತು ಅವರಿಗೆ ಭಾರೀ ಶಿಕ್ಷೆಯನ್ನು ನೀಡಿದೆವು

[10] ಹೀಗೆ ಅವರು ತಮ್ಮ ಕೃತ್ಯದ ಫಲವನ್ನು ಉಂಡರು ಮತ್ತು ನಷ್ಟವೇ ಅವರ ಅಂತಿಮ ಗತಿಯಾಯಿತು

[11] ಅಲ್ಲಾಹನು ಅವರಿಗಾಗಿ ಘೋರ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುವನು. ಆದ್ದರಿಂದ, ಬುದ್ಧಿಯುಳ್ಳ ವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ನಿಮಗಾಗಿ ಈ ಬೋಧನೆಯನ್ನು ಇಳಿಸಿಕೊಟ್ಟಿರುವನು

[12] ದೂತರು, ವಿಶ್ವಾಸಿಗಳನ್ನು ಮತ್ತು ಸತ್ಕರ್ಮಿಗಳನ್ನು ಕತ್ತಲೆಯಿಂದ ಹೊರತಂದು ಬೆಳಕಿನೆಡೆಗೆ ಮುನ್ನಡೆಸಲಿಕ್ಕಾಗಿ, ನಿಮಗೆ ಅಲ್ಲಾಹನ ಸುಸ್ಪಷ್ಟ ವಚನಗಳನ್ನು ಓದಿ ಕೇಳಿಸುತ್ತಾರೆ. ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನನ್ನು ಅವನು ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನದೊಳಗೆ ಸೇರಿಸುವನು. ಅವರು ಸದಾಕಾಲ ಅಲ್ಲೇ ಇರುವರು. ಅಲ್ಲಾಹನು ಅವರಿಗೆ ಧಾರಾಳ ಸಂಪನ್ನತೆಯನ್ನು ನೀಡುವನು

ನಿಷೇಧ

Surah 66

[1] ಏಳು ಆಕಾಶಗಳನ್ನು ಮತ್ತು ಅದೇ ಪ್ರಕಾರ ಭೂಮಿಯನ್ನು ಸೃಷ್ಟಿಸಿದವನು ಅಲ್ಲಾಹನೇ. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತಲೇ ಇರುತ್ತವೆ – ಅಲ್ಲಾಹನು ಸರ್ವ ಶಕ್ತನೆಂಬುದನ್ನು ಮತ್ತು ಅಲ್ಲಾಹನು ತನ್ನ ಜ್ಞಾನದ ಮೂಲಕ ಎಲ್ಲವನ್ನೂ ಆವರಿಸಿ ಕೊಂಡಿರುವನು ಎಂಬುದನ್ನು ನೀವು ಅರಿಯುವಂತಾಗಲಿಕ್ಕಾಗಿ

[2] ಪ್ರವಾದಿ ವರ್ಯರೇ, ಅಲ್ಲಾಹನು ನಿಮಗೆ ಸಮ್ಮತಿಸಿರುವ ವಸ್ತುವನ್ನು (ಜೇನನ್ನು) ನೀವೇಕೆ ನಿಮ್ಮ ಮೇಲೆ ನಿಷೇಧಿಸಿ ಕೊಂಡಿರಿ? ನೀವು ನಿಮ್ಮ ಪತ್ನಿಯರನ್ನು ಮೆಚ್ಚಿಸಲು ಹೊರಟಿರಿ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವನು

[3] (ವಿಶ್ವಾಸಿಗಳೇ,) ಅಲ್ಲಾಹನು ನಿಮ್ಮ ಪ್ರಮಾಣಗಳ ಕುರಿತಂತೆ (ವಚನ ಭಂಗಕ್ಕೆ) ಪ್ರಾಯಶ್ಚಿತ್ತವನ್ನು ನಿಶ್ಚಯಿಸಿರುವನು. ಅಲ್ಲಾಹನೇ ನಿಮ್ಮ ಕಾರ್ಯ ಸಾಧಕನು ಮತ್ತು ಅವನು ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುವನು

[4] ಪ್ರವಾದಿವರ್ಯರು ತಮ್ಮ ಒಬ್ಬ ಪತ್ನಿಗೆ ಗುಟ್ಟಾಗಿಒಂದು ವಿಷಯವನ್ನು ತಿಳಿಸಿದ್ದರು. ಆಕೆ ಅದನ್ನು (ಇನ್ನೊಬ್ಬಪತ್ನಿಗೆ) ತಿಳಿಸಿ ಬಿಟ್ಟರು. ಮತ್ತು ಈ ಸಮಾಚಾರವನ್ನು ಅಲ್ಲಾಹನು ಅವರಿಗೆ(ಪ್ರವಾದಿಗೆ) ಬಹಿರಂಗ ಪಡಿಸಿದನು. ಅವರು(ಪ್ರವಾದಿಯು) ಈ ಸಮಾಚಾರವನ್ನು (ಆಕೆಗೆ)ಭಾಗಶಃತಿಳಿಸಿದರು ಮತ್ತು ಭಾಗಶಃ ಕಡೆಗಣಿಸಿದರು. ಅವರು ಈ ವಿಷಯವನ್ನು ಆಕೆಗೆ ತಿಳಿಸಿದಾಗ,‘‘ಇದನ್ನೆಲ್ಲಾ ನಿಮಗೆ ಯಾರು ತಿಳಿಸಿದರು?’’ ಎಂದು ಆಕೆ ಕೇಳಿದರು. ಅವರು, ‘‘ಎಲ್ಲವನ್ನೂ ಬಲ್ಲವನು ಹಾಗೂ ಎಲ್ಲದರ ಅರಿವುಳ್ಳವನು ನನಗೆ ಇದನ್ನು ತಿಳಿಸಿರುವನು’’ಎಂದರು

[5] ಇದೀಗ ನೀವಿಬ್ಬರೂ (ಪತ್ನಿಯರು) ಅಲ್ಲಾಹನೆದುರು ಪಶ್ಚಾತ್ತಾಪ ಪಡುವುದು ಒಳ್ಳೆಯದು. ನಿಮ್ಮ ಮನಸ್ಸುಗಳು ವಾಲಿಕೊಂಡಿವೆ. ನೀವಿಬ್ಬರೂ ಅವರಿಗೆ (ಪ್ರವಾದಿಗೆ) ಎದುರಾಗಿ ಪರಸ್ಪರ ನೆರವಿಗೆ ಇಳಿದಿದ್ದರೆ (ನಿಮಗೆ ತಿಳಿದಿರಲಿ;) ಅಲ್ಲಾಹನು ಅವರ ರಕ್ಷಕನಾಗಿದ್ದಾನೆ ಮತ್ತು ಜಿಬ್ರೀಲ್ ಹಾಗೂ ಸಕಲ ಸಜ್ಜನ ವಿಶ್ವಾಸಿಗಳು ಮತ್ತು ಮಲಕ್‌ಗಳು ಅವರ ಸಹಾಯಕರಾಗಿದ್ದಾರೆ

[6] ಅವರು (ಪ್ರವಾದಿ) ನಿಮ್ಮನ್ನು ವಿಚ್ಛೇದಿಸಿದರೆ, ಅವರ ಒಡೆಯನು ಅವರಿಗೆ ನಿಮಗಿಂತ ಉತ್ತಮರಾದವರನ್ನು ನೀಡಬಹುದು. ಅವರು ಮುಸ್ಲಿಮರೂ, ವಿಶ್ವಾಸಿನಿಯರೂ, ವಿಧೇಯರೂ, ಪಶ್ಚಾತ್ತಾಪ ಪಡುವವರೂ, ಆರಾಧನಾ ನಿರತರೂ, ಉಪವಾಸಿಗರೂ ಆಗಿರುವ ವಿವಾಹಾನುಭವ ಉಳ್ಳವರು ಅಥವಾ ಕನ್ಯೆಯರಾಗಿರುವರು

[7] ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿರಿ. ಮಾನವರು ಮತ್ತು ಕಲ್ಲುಗಳು ಅದರ ಇಂಧನಗಳಾಗಿರುವವು. ಕಠೋರರೂ ಬಲಿಷ್ಠರೂ ಆಗಿರುವ ಮಲಕ್‌ಗಳು ಅದರ ಮೇಲ್ವಿಚಾರಕರಾಗಿರುವರು. ಅವರು ಅಲ್ಲಾಹನು ತಮಗೆ ನೀಡುವ ಯಾವ ಆದೇಶವನ್ನೂ ಮೀರಲಾರರು ಮತ್ತು ಅವರು ತಮಗೆ ಆದೇಶಿಸಿಲಾದುದನ್ನೇ ಮಾಡುವರು

[8] ಧಿಕ್ಕಾರಿಗಳೇ, ಇಂದು ನೆಪಗಳನ್ನು ಹೂಡ ಬೇಡಿ. ನೀವು ಏನನ್ನು ಮಾಡಿದ್ದಿರೊ ಅದರ ಪ್ರತಿಫಲವನ್ನಷ್ಟೇ ನಿಮಗೆ ನೀಡಲಾಗುತ್ತಿದೆ

[9] ವಿಶ್ವಾಸಿಗಳೇ, ನಿರ್ಮಲ ಮನಸ್ಸಿನೊಂದಿಗೆ ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಿರಿ. ನಿಮ್ಮ ಒಡೆಯನು ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸಬಹುದು ಮತ್ತು ನಿಮ್ಮನ್ನು ತಳದಲ್ಲಿ ನದಿಗಳು ಹರಿಯುವ ಸ್ವರ್ಗದೊಳಗೆ ಸೇರಿಸಬಹುದು. ಅಂದು ಅಲ್ಲಾಹನು ಪ್ರವಾದಿಯನ್ನಾಗಲೀ ಅವರ ಜೊತೆಗಿರುವ ವಿಶ್ವಾಸಿಗಳನ್ನಾಗಲೀ ಅಪಮಾನಿಸಲಾರನು. ಅವರ ಪ್ರಕಾಶವು ಅವರ ಮುಂಭಾಗದಲ್ಲೂ ಬಲ ಭಾಗದಲ್ಲೂ ಚಲಿಸುತ್ತಿರುವುದು. ಅವರು ಹೇಳುವರು; ‘‘ನಮ್ಮೊಡೆಯಾ, ನಮ್ಮ ಬೆಳಕನ್ನು ಸಂಪೂರ್ಣ ಗೊಳಿಸು ಮತ್ತು ನಮ್ಮನ್ನು ಕ್ಷಮಿಸು. ನೀನು ಎಲ್ಲವನ್ನೂ ಮಾಡ ಬಲ್ಲೆ’’

[10] ಪ್ರವಾದಿವರ್ಯರೇ, ಧಿಕ್ಕಾರಿಗಳು ಮತ್ತು ಕಪಟಿಗಳ ವಿರುದ್ಧ ಹೋರಾಡಿರಿ ಮತ್ತು ಅವರ ವಿರುದ್ಧ ಕಠಿಣ ನಿಲುವು ತಾಳಿರಿ. ನರಕವೇ ಅವರ ನೆಲೆಯಾಗಿರುವುದು ಮತ್ತು ಅದು ತೀರಾ ನಿಕೃಷ್ಟ ನೆಲೆಯಾಗಿದೆ

[11] ಅಲ್ಲಾಹನು ಧಿಕ್ಕಾರಿಗಳಿಗಾಗಿ, ನೂಹರ ಪತ್ನಿ ಮತ್ತು ಲೂತರ ಪತ್ನಿಯ ಉದಾಹರಣೆಯನ್ನು ಮುಂದಿಟ್ಟಿರುವನು; ಅವರಿಬ್ಬರೂ ನಮ್ಮ ಇಬ್ಬರು ಸಜ್ಜನ ದಾಸರ ಅಧೀನದಲ್ಲಿದ್ದರು. ಆದರೆ ಅವರು ಅವರನ್ನು (ತಮ್ಮ ಪತಿಯರನ್ನು) ವಂಚಿಸಿದರು. ಕೊನೆಗೆ ಅಲ್ಲಾಹನೆದುರು ಅವರಿಂದ (ತಮ್ಮ ಪತಿಯರಿಂದ) ಅವರಿಗೆಯಾವ ಲಾಭವೂ ಆಗಲಿಲ್ಲ. ‘‘ನರಕದೊಳಗೆ ಸೇರಿ ಕೊಂಡವರ ಜೊತೆ ನೀವೂ ಸೇರಿಕೊಳ್ಳಿರಿ’’ ಎಂದು ಅವರೊಡನೆ ಹೇಳಲಾಯಿತು

[12] ಮತ್ತು ಅಲ್ಲಾಹನು ವಿಶ್ವಾಸಿಗಳಿಗಾಗಿ, ಫಿರ್‌ಔನನ ಪತ್ನಿಯ ಮಾದರಿಯನ್ನು ಮುಂದಿಡುತ್ತಾನೆ. ಆಕೆ ಹೇಳಿದರು; ‘‘ನನ್ನೊಡೆಯಾ, ಸ್ವರ್ಗದಲ್ಲಿ ನೀನು ನನಗಾಗಿ ನಿನ್ನ ಬಳಿ ಒಂದು ನಿವಾಸವನ್ನು ಒದಗಿಸು ಮತ್ತು ಫಿರ್‌ಔನ್ ಹಾಗೂ ಅವನ ದುಷ್ಕರ್ಮಗಳಿಂದ ನನ್ನನ್ನು ರಕ್ಷಿಸು. ಮತ್ತು ನೀನು ನನ್ನನ್ನು ಅಕ್ರಮಿಗಳಿಂದ ವಿಮೋಚಿಸು’’

ಸಾರ್ವಭೌಮತ್ವ

Surah 67

[1] ಹಾಗೆಯೇ, ಇಮ್ರಾನರ ಪುತ್ರಿ ಮರ್ಯಮ್, ತನ್ನ ಮಾನವನ್ನು ಕಾಪಾಡಿಕೊಂಡಿದ್ದಳು. ನಾವು ಅದರೊಳಗೆ (ಆಕೆಯ ಗರ್ಭದೊಳಗೆ) ನಮ್ಮ ಆತ್ಮದ ಭಾಗವನ್ನು ಊದಿದೆವು. ಆಕೆಯು ತನ್ನೊಡೆಯನ ವಚನಗಳು ಹಾಗೂ ಗ್ರಂಥಗಳು ಸತ್ಯವೆಂದು ಸಮರ್ಥಿಸುವವಳಾಗಿದ್ದಳು ಮತ್ತು ಆಕೆಯು ವಿಧೇಯಳಾಗಿದ್ದಳು

[2] ಅವನು ಸಮೃದ್ಧನು. ಆಧಿಪತ್ಯವು ಅವನ ಕೈಯಲ್ಲಿದೆ ಮತ್ತು ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ

[3] ನಿಮ್ಮಲ್ಲಿ ಯಾರು ಸತ್ಕರ್ಮಗಳನ್ನು ಮಾಡುವರೆಂದು ಪರೀಕ್ಷಿಸಲು, ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು. ಅವನು ಬಹಳ ಪ್ರಬಲನೂ ಕ್ಷಮಾಶೀಲನೂ ಆಗಿರುವನು

[4] ಅವನು ಏಳು ಆಕಾಶಗಳನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಆ ಪರಮ ದಯಾಳುವಿನ ಸೃಷ್ಟಿಯಲ್ಲಿ ಯಾವ ಕುಂದೂ ನಿನಗೆ ಕಾಣಿಸದು. ಇನ್ನೊಮ್ಮೆ ನೋಡು, ನಿನಗೆ ದೋಷವೇನಾದರೂ ಕಾಣಿಸುತ್ತಿದೆಯೇ

[5] ಮತ್ತೊಮ್ಮೆ ತಿರುಗಿ, ಎರಡೆರಡು ಬಾರಿ ನೋಡು, ನಿನ್ನ ದೃಷ್ಟಿಯು ಸೋತು, ದಣಿದು ನಿನ್ನತ್ತಲೇ ಮರಳಿ ಬರುವುದು

[6] ನಾವು ಇಹಲೋಕದ ಆಕಾಶವನ್ನು (ನಕ್ಷತ್ರಗಳೆಂಬ) ದೀಪಗಳಿಂದ ಅಲಂಕರಿಸಿರುವೆವು ಮತ್ತು ಅವುಗಳನ್ನು ಶೈತಾನರಿಗೆ ಹೊಡೆಯುವ ಸಾಧನಗಳಾಗಿಸಿರುವೆವು. ಮತ್ತು ನಾವು ಅವರಿಗಾಗಿ ಭುಗಿಲೇಳುವ ಬೆಂಕಿಯನ್ನು ಸಿದ್ದಪಡಿಸಿಟ್ಟಿರುವೆವು

[7] ತಮ್ಮಡೆಯನನ್ನು ಧಿಕ್ಕರಿಸಿದವರಿಗೆ ನರಕದ ಶಿಕ್ಷೆ ಸಿಗಲಿದೆ ಮತ್ತು ಅದು ತುಂಬಾ ಹೀನ ನೆಲೆಯಾಗಿದೆ

[8] ಅವರನ್ನು ಅದರೊಳಗೆ ಹಾಕಲಾದಾಗ ಅವರು ಅದರ ಆರ್ಭಟವನ್ನು ಕೇಳುವರು ಮತ್ತು ಅದು ಕುದಿಯುತ್ತಿರುವುದು

[9] ಅದು ಆವೇಶದಿಂದ ಇನ್ನೇನು ಸ್ಫೋಟಗೊಳ್ಳುವುದೋ, ಎಂಬಂತಿರುವುದು. ಅವರಲ್ಲಿನ ಯಾವುದಾದರೂ ತಂಡವನ್ನು ಅದರೊಳಗೆ ಹಾಕಲಾದಾಗ ಅದರ ದ್ವಾರಪಾಲಕರು ಅವರೊಡನೆ ‘‘ಎಚ್ಚರಿಸುವವರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು

[10] ಅವರು ಹೇಳುವರು; ‘‘ಯಾಕಿಲ್ಲ? ಎಚ್ಚರಿಸುವವರು ನಮ್ಮ ಬಳಿಗೆ ಖಂಡಿತ ಬಂದಿದ್ದರು. ಆದರೆ ನಾವು ಅವರನ್ನು ತಿರಸ್ಕರಿಸಿದೆವು ಮತ್ತು ಅಲ್ಲಾಹನು ಏನನ್ನೂ ಕಳುಹಿಸಿಕೊಟ್ಟಿಲ್ಲ, ನೀವು ಮಹಾ ಮೋಸಕ್ಕೆ ಸಿಲುಕಿರುವಿರೆಂದು ಹೇಳಿದ್ದೆವು’’ ಎನ್ನುವರು

[11] ಮತ್ತು ಅವರು ಹೇಳುವರು; ‘‘ಒಂದು ವೇಳೆ ನಾವು (ದೂತರ ಸಂದೇಶವನ್ನು) ಕೇಳಿದ್ದರೆ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದರೆ (ಇಂದು) ನಾವು ನರಕದವರ ಸಾಲಲ್ಲಿರುತ್ತಿರಲಿಲ್ಲ

[12] ಹೀಗೆ, ಅವರು ತಮ್ಮ ಪಾಪವನ್ನು ಒಪ್ಪಿಕೊಳ್ಳುವರು. ಆದರೆ ನರಕದವರು ಶಾಪಗ್ರಸ್ತರಾಗಿರುವರು

[13] ತಮ್ಮ ಒಡೆಯನನ್ನು ಕಣ್ಣಾರೆ ಕಾಣದೆಯೇ ಅವನಿಗೆ ಅಂಜಿಕೊಂಡಿದ್ದವರಿಗೆ ಕ್ಷಮೆ ಇದೆ ಮತ್ತು ಮಹಾ ಪ್ರತಿಫಲವಿದೆ

[14] ನೀವು ನಿಮ್ಮ ಮಾತನ್ನು ಗುಟ್ಟಾಗಿಡಿರಿ ಅಥವಾ ಅದನ್ನು ಬಹಿರಂಗಪಡಿಸಿರಿ. ಅವನಂತು ಮನಸ್ಸುಗಳೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ

[15] ಸೃಷ್ಟಿಸಿದವನೇನು ಅರಿಯದಿರುತ್ತಾನೆಯೇ? ಅವನು ತೀರಾ ಸೂಕ್ಷ್ಮ ವಿಷಯಗಳನ್ನೂ ಬಲ್ಲವನು ಮತ್ತು ಅರಿವುಳ್ಳವನಾಗಿದ್ದಾನೆ

[16] ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು. ನೀವು ಅದರಲ್ಲಿನ ದಾರಿಗಳಲ್ಲಿ ನಡೆಯಿರಿ ಮತ್ತು ಅವನು ಒದಗಿಸಿರುವ ಆಹಾರವನ್ನು ಸೇವಿಸಿರಿ. ಕೊನೆಗೆ ಅವನ ಬಳಿಯೇ ಮತ್ತೆ ಜೀವಂತಗೊಳ್ಳಬೇಕಾಗಿದೆ

[17] ನೀವೇನು, ಆಕಾಶದಲ್ಲಿರುವವನು ನಿಮ್ಮನ್ನು ಭೂಮಿಯಲ್ಲಿ ಹೂತುಬಿಡುವ ಹಾಗೂ ಅದು (ಭೂಮಿಯು) ಹಠಾತ್ತನೆ ನಡುಗಲಾರಂಭಿಸುವ (ಸಾಧ್ಯತೆಯ) ಕುರಿತು ನಿಶ್ಚಿಂತರಾಗಿರುವಿರಾ

[18] ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ, ಕಲ್ಲು ತುಂಬಿದ ಬಿರುಗಾಳಿಯನ್ನು ಬೀಸಿ ಬಿಡುವ (ಸಾಧ್ಯತೆಯ) ಕುರಿತು ನೀವು ನಿಶ್ಚಿಂತರಾಗಿರುವಿರಾ? ನನ್ನ ಎಚ್ಚರಿಕೆ ಎಂತಹದೆಂಬುದು ನಿಮಗೆ ಬೇಗನೇ ತಿಳಿಯಲಿದೆ

[19] ಅವರ ಹಿಂದಿನವರು (ಸತ್ಯವನ್ನು) ತಿರಸ್ಕರಿಸಿದ್ದರು. ಹೇಗಿತ್ತು ನನ್ನ ಶಿಕ್ಷೆ

[20] ತಮ್ಮ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಅವರು ನೋಡಲಿಲ್ಲವೇ? ಅವುಗಳು ತಮ್ಮ ರೆಕ್ಕೆಗಳನ್ನು ಹರಡಿಕೊಂಡೂ ಇರುತ್ತವೆ, ಅವುಗಳನ್ನು ಮಡಚಿಕೊಂಡೂ ಇರುತ್ತವೆ. ಅವುಗಳನ್ನು ಆಧರಿಸಿ ಕೊಂಡಿರುವವನು, ಆ ಪರಮ ದಯಾಳುವಿನ ಹೊರತು ಬೇರಾರೂ ಅಲ್ಲ. ಅವನು ಖಂಡಿತ ಎಲ್ಲವನ್ನೂ ನೋಡುತ್ತಿರುತ್ತಾನೆ

[21] ಆ ಪರಮ ದಯಾಳುವಿನ ವಿರುದ್ಧ ನಿಮಗೆ ನೆರವಾಗಬಲ್ಲ ಯಾವ ಪಡೆ ತಾನೇ ನಿಮ್ಮ ಬಳಿ ಇದೆ? ಧಿಕ್ಕಾರಿಗಳು ನಿಜಕ್ಕೂ ಮೋಸಕ್ಕೊಳಗಾಗಿದ್ದಾರೆ

[22] ಅವನು ನಿಮಗೆ ತನ್ನ ಕಡೆಯಿಂದ ಆಹಾರ ಒದಗಿಸುವುದನ್ನು ನಿಲ್ಲಿಸಿ ಬಿಟ್ಟರೆ ಯಾರಿದ್ದಾನೆ ನಿಮಗೆ ಆಹಾರ ಒದಗಿಸುವವನು? ನಿಜವಾಗಿ ಅವರು (ಧಿಕ್ಕಾರಿಗಳು) ವಿದ್ರೋಹ ಮತ್ತು ವಿದ್ವೇಷದ ಧೋರಣೆಗೆ ಅಂಟಿಕೊಂಡಿದ್ದಾರೆ

[23] ತನ್ನ ಮುಖವನ್ನು ನೆಲಕ್ಕೊರಗಿಸಿಕೊಂಡು ಏಳುತ್ತಾ ಬೀಳುತ್ತಾ ನಡೆಯುವವನು ಹೆಚ್ಚು ಸನ್ಮಾರ್ಗದಲ್ಲಿರುವನೋ ಅಥವಾ ನೇರ ಮಾರ್ಗದಲ್ಲಿ ನೆಟ್ಟಗೆ ನಡೆಯುವವನೋ

[24] ಹೇಳಿರಿ; ಅವನೇ ನಿಮ್ಮನ್ನು ಸೃಷ್ಟಿಸಿದವನು, ನಿಮಗೆ ಕಿವಿಗಳನ್ನೂ, ಕಣ್ಣುಗಳನ್ನೂ, ಮನಸ್ಸುಗಳನ್ನೂ ನೀಡಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ಮಾತ್ರ ತೀರಾ ಕಡಿಮೆ

[25] ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು

[26] ‘‘ನೀವು ಸತ್ಯವಂತರಾಗಿದ್ದರೆ, (ಲೋಕಾಂತ್ಯದ) ಆ ವಾಗ್ದಾನ ಈಡೇರುವುದು ಯಾವಾಗ?’’ ಎಂದು ಅವರು ಕೇಳುತ್ತಾರೆ

[27] ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಇದೆ. ಮತ್ತು ನಾನು ಕೇವಲ ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ

[28] ನಿಜವಾಗಿ ಅದು (ಲೋಕಾಂತ್ಯದ ಸಮಯವು) ಹತ್ತಿರ ಬರುವುದನ್ನು ಕಂಡಾಗ ಧಿಕ್ಕಾರಿಗಳ ಮುಖಗಳು ವಿಕಾರ ಗೊಳ್ಳುವವು. ಆಗ ಅವರೊಡನೆ, ‘‘ನಿಮಗೆ ವಾಗ್ದಾನ ಮಾಡಲಾಗಿದ್ದುದು ಇದನ್ನೇ’’ ಎಂದು ಹೇಳಲಾಗುವುದು

[29] (ದೂತರೇ,) ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ಅಲ್ಲಾಹನು ನನ್ನನ್ನು ಹಾಗೂ ನನ್ನ ಜೊತೆಗೆ ಇರುವವರನ್ನು ನಾಶ ಮಾಡಿದರೂ ನಮ್ಮ ಮೇಲೆ ಕರುಣೆ ತೋರಿದರೂ, ಧಿಕ್ಕಾರಿಗಳನ್ನು ಕಠಿಣ ಶಿಕ್ಷೆಯಿಂದ ಯಾರು ತಾನೇ ರಕ್ಷಿಸ ಬಲ್ಲರು

[30] ಹೇಳಿರಿ; ನಾವು ಆ ಪರಮ ದಯಾಳುವನ್ನು ನಂಬಿರುವೆವು ಮತ್ತು ಅವನಲ್ಲಿಯೇ ಭರವಸೆ ಇಟ್ಟಿರುವೆವು. ಯಾರು ಸ್ಪಷ್ಟವಾಗಿ ದಾರಿ ಗೆಟ್ಟವನೆಂಬುದು ನಿಮಗೆ ಬೇಗನೇ ತಿಳಿಯಲಿದೆ

ಲೇಖನಿ

Surah 68

[1] ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ನೀವು ಬಳಸುವ ನೀರು ಇಂಗಿ ಹೋದರೆ ಯಾರಿದ್ದಾರೆ, ನಿಮಗೆ ಸಿಹಿ ನೀರಿನ ಚಿಲುಮೆಗಳನ್ನು ತಂದು ಕೊಡುವವರು

[2] ನೂನ್ – ಲೇಖನಿಯ ಮತ್ತು ಅವರ (ಮಲಕ್‌ಗಳ) ಬರಹದ ಆಣೆ

[3] (ದೂತರೇ,) ನಿಮ್ಮ ಒಡೆಯನ ಅನುಗ್ರಹದಿಂದ ನೀವು ಹುಚ್ಚರೇನಲ್ಲ

[4] ನಿಮಗೆ, ಎಂದೂ ಮುಗಿಯದ ಪ್ರತಿಫಲವು ಸಿಗಲಿದೆ

[5] ನೀವು ಖಂಡಿತ ಅತ್ಯುನ್ನತ ಮಟ್ಟದ ಚಾರಿತ್ರವಂತರು

[6] ಶೀಘ್ರವೇ ನೀವು ನೋಡುವಿರಿ ಮತ್ತು ಅವರೂ ನೋಡುವರು –

[7] – ನಿಮ್ಮ ಪೈಕಿ ಹುಚ್ಚನು ಯಾರೆಂದು

[8] ತನ್ನ ದಾರಿಯಿಂದ ದೂರ ಸರಿದವನು ಯಾರೆಂಬುದನ್ನು ಚೆನ್ನಾಗಿ ಬಲ್ಲವನು ಆ ನಿಮ್ಮ ಒಡೆಯನು. ಯಾರು ಸರಿ ದಾರಿಯಲ್ಲಿದ್ದಾರೆ ಎಂಬುದನ್ನೂ ಅವನೇ ಬಲ್ಲನು

[9] ನೀವು ಸುಳ್ಳುಗಾರರನ್ನು ಅನುಸರಿಸಬೇಡಿರಿ

[10] ನೀವು ತುಸು ಮೃದು ಧೋರಣೆ ತಾಳಿದರೆ ತಾವೂ ಮೃದುವಾಗಬೇಕೆಂದು ಅವರು ಅಪೇಕ್ಷಿಸುತ್ತಿದ್ದಾರೆ

[11] ನೀವು ಖಂಡಿತ ಅನುಸರಿಸಬೇಡಿ – ಪದೇ ಪದೇ ಪ್ರಮಾಣ ಮಾಡುವ ನೀಚನನ್ನು

[12] ದೂಷಿಸುತ್ತಾ ನಿಂದಿಸುತ್ತಾ ತಿರುಗಾಡುವಾತನನ್ನು

[13] ಸತ್ಕಾರ್ಯಕ್ಕೆ ಖರ್ಚು ಮಾಡದವನನ್ನು, ಅತಿರೇಕ ವೆಸಗುವ ಪಾಪಿಯನ್ನು

[14] ಉಗ್ರ ಸ್ವಭಾವದವನನ್ನು, ಚಾರಿತ್ರಹೀನನನ್ನು

[15] ತನ್ನ ಬಳಿ ಸಂಪತ್ತಿದೆ ಮತ್ತು ಪುತ್ರರಿದ್ದಾರೆಂದು (ಅವನು ಅಹಂಕರಿಸುತ್ತಾನೆ)

[16] ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ‘‘ಅವೆಲ್ಲಾ ಗತಕಾಲದ ಕಥೆಗಳು’’ ಎನ್ನುತ್ತಾನೆ

[17] ಶೀಘ್ರವೇ ನಾವು ಅವನ ಮೂಗಿನ ಮೇಲೆ ಬರೆ ಎಳೆಯಲಿದ್ದೇವೆ

[18] ಹಿಂದೆ ತೋಟದವರನ್ನು ಪರೀಕ್ಷಿಸಿದಂತೆ ನಾವು ಅವರನ್ನು ಪರೀಕ್ಷಿಸಿದ್ದೇವಷ್ಟೆ. ‘‘ನಾವು ಅದರ (ಆ ತೋಟದ) ಬೆಳೆಯನ್ನು ನಾಳೆ ಮುಂಜಾನೆ ಖಂಡಿತ ಕೊಯ್ಯುವೆವು’’ ಎಂದು ಅವರು ಪ್ರಮಾಣ ಮಾಡಿ ಘೋಷಿಸಿದ್ದರು

[19] ಇನ್ನೊಂದು ಸಾಧ್ಯತೆಯನ್ನು ಅವರು ಪ್ರಸ್ತಾಪಿಸಲಿಲ್ಲ. (‘ಅಲ್ಲಾಹನಿಚ್ಛಿಸಿದರೆ’ ಎನ್ನಲಿಲ್ಲ)

[20] ಅವರು ನಿದ್ರಿಸುತ್ತಿದ್ದಾಗಲೇ ನಿಮ್ಮೊಡೆಯನ ಕಡೆಯಿಂದ ಅದರ (ಆ ತೋಟದ) ಮೇಲೊಂದು ವಿಪತ್ತು ಬಂದೆರಗಿತು

[21] ಬೆಳಗಾಗುವ ಹೊತ್ತಿಗೆ ಅದು ಬೆಳೆ ಕೊಯ್ದ ಹೊಲದಂತಾಗಿ ಬಿಟ್ಟಿತು

[22] ಬೆಳಿಗ್ಗೆ ಅವರು ಪರಸ್ಪರರನ್ನು ಕೂಗಿ ಕರೆಯಲಾರಂಭಿಸಿದರು

[23] ‘‘ನಿಮಗೆ ಫಲ ಕೊಯ್ಯಲಿಕ್ಕಿದ್ದರೆ ಮುಂಜಾವಿನಲ್ಲೇ ನಿಮ್ಮ ತೋಟವನ್ನು ತಲುಪಿರಿ’’ (ಎನ್ನ ತೊಡಗಿದರು)

[24] ಹೀಗೆ, ಅವರು ಹೊರಟರು ಮತ್ತು ಅವರು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು

[25] ‘‘ಇಂದು ಯಾವ ಬಡ ವ್ಯಕ್ತಿಯೂ ನಿಮ್ಮ ಬಳಿಗೆ ಬರದಂತೆ ನೋಡಿಕೊಳ್ಳಿ’’ (ಎಂದು)

[26] ಅವರು, ತಾವು ಭಾರೀ ಶಕ್ತರೆಂದು ಬೀಗುತ್ತಾ ಹೊರಟರು

[27] ಕೊನೆಗೆ ಅವರು, ಅದನ್ನು (ತೋಟವನ್ನು) ಕಂಡಾಗ, ‘‘ನಾವು ದಾರಿ ತಪ್ಪಿದ್ದೇವೆ’’ ಎನ್ನತೊಡಗಿದರು

[28] ‘‘ನಿಜವಾಗಿ, ನಾವು ಭಾಗ್ಯಹೀನರು’’ (ಎಂದು ಕೆಲವರು ಹೇಳಿದರು)

[29] ಅವರಲ್ಲಿನ ಸಂತುಲಿತ ವ್ಯಕ್ತಿಯೊಬ್ಬನು ಹೇಳಿದನು; ‘‘(ಹೀಗಾದೀತೆಂದು) ನಾನು ನಿಮಗೆ ಹೇಳಿರಲಿಲ್ಲವೇ? ನೀವೇಕೆ (ಅಲ್ಲಾಹನ) ಪಾವಿತ್ರವನ್ನು ಜಪಿಸುವುದಿಲ್ಲ?’’

[30] ಮರುದಿನ (ಮುಂಜಾನೆ) ಅವರು ಹೇಳಿದರು; ‘‘ನಮ್ಮ ಒಡೆಯನು ಪಾವನನು. ನಾವು ಖಂಡಿತಾ ಅಕ್ರಮಿಗಳಾಗಿದ್ದೆವು’’

[31] ಆ ಬಳಿಕ ಅವರು ಪರಸ್ಪರರನ್ನು ದೂಷಿಸಲು ಆರಂಭಿಸಿದರು

[32] ಅವರು ಹೇಳಿದರು; ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಎಲ್ಲೆ ಮೀರಿ ಬಿಟ್ಟಿದ್ದೆವು’’

[33] ‘‘ನಮ್ಮ ಒಡೆಯನು ನಮಗೆ ಇದಕ್ಕಿಂತ ಉತ್ತಮವಾದುದನ್ನು ನೀಡಬಹುದು. ನಾವು ನಮ್ಮೊಡೆಯನೆಡೆಗೆ ಒಲಿಯುತ್ತಿದ್ದೇವೆ’’

[34] ಹೀಗಿರುತ್ತದೆ, ನಮ್ಮ ಶಿಕ್ಷೆ. ಪರಲೋಕದ ಶಿಕ್ಷೆಯಂತೂ ಇದಕ್ಕಿಂತ ಹಿರಿದಾಗಿರುತ್ತದೆ. ಅದನ್ನು ಅವರು ಅರಿತಿದ್ದರೆ ಚೆನ್ನಾಗಿತ್ತು

[35] ಧರ್ಮನಿಷ್ಠರಿಗಾಗಿ, ಅವರ ಒಡೆಯನ ಬಳಿ ಅನುಗ್ರಹಗಳು ತುಂಬಿದ ಉದ್ಯಾನಗಳಿವೆ

[36] ನಾವೇನು, ಮುಸ್ಲಿಮರಿಗೆ (ಶರಣಾದವರಿಗೆ) ಮತ್ತು ಅಪರಾಧಿಗಳಿಗೆ ಒಂದೇ ಗತಿಯನ್ನು ಒದಗಿಸುವೆವೇ

[37] ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ

[38] ನಿಮ್ಮ ಬಳಿ ನೀವು ಓದುವ ದಿವ್ಯ ಗ್ರಂಥವೇನಾದರೂ ಇದೆಯೇ

[39] ಅದರಲ್ಲಿ ನಿಮಗೆ ಇಷ್ಟವಿರುವ ಎಲ್ಲವೂ ಸಿಗುತ್ತಿದೆಯೇ

[40] ಅಥವಾ ನೀವು ತೀರ್ಮಾನಿಸಿದ್ದನ್ನೆಲ್ಲಾ ನಾವು ನಿಮಗೆ ಕೊಟ್ಟು ಬಿಡಬೇಕೆಂದು, ಪುನರುತ್ಥಾನದ ದಿನದವರೆಗೂ ನಾವು ಪಾಲಿಸಲೇ ಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದಿರುವಿರಾ

[41] ಅವರ ಪೈಕಿ ಅದರ ಹೊಣೆಯನ್ನು ವಹಿಸಿಕೊಂಡವರು ಯಾರೆಂದು ಅವರೊಡನೆ ಕೇಳಿರಿ

[42] ಅಥವಾ ಅವರ ಬಳಿ (ದೇವತ್ವದ) ಪಾಲುದಾರರು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಆ ತಮ್ಮ ಪಾಲುದಾರರನ್ನು ಹಾಜರುಪಡಿಸಲಿ

[43] ಹಾಲಾಹಲ ಮೆರೆದಿರುವ (ಪುನರುತ್ಥಾನದ) ದಿನ, ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗುವುದು. ಆದರೆ ಅವರಿಗೆ ಅದು ಸಾಧ್ಯವಾಗದು

[44] ಭಯದಿಂದ ಅವರ ದೃಷ್ಟಿಗಳು ತಗ್ಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿರುವುದು. ಈ ಹಿಂದೆ ಅವರು ಸ್ವಸ್ಥರಾಗಿದ್ದಾಗ ಸಾಷ್ಟಾಂಗವೆರಗಲು ಅವರನ್ನು ಕರೆಯಲಾಗಿತ್ತು. (ಅವರು ಅದನ್ನು ಕಡೆಗಣಿಸಿದ್ದರು)

[45] ನನ್ನನ್ನು ಬಿಟ್ಟು ಬಿಡಿ. ಈ ಸಂದೇಶವನ್ನು ತಿರಸ್ಕರಿಸಿದವನನ್ನು ನಾನು (ಅಲ್ಲಾಹ್) ನೋಡಿಕೊಳ್ಳುವೆನು. ಅವರಿಗೆ ಅರಿವೇ ಇಲ್ಲದಂತೆ ನಾವು ಕ್ರಮೇಣ ಅವರನ್ನು ಹಿಡಿದುಕೊಳ್ಳುವೆವು

[46] ಸದ್ಯ ನಾನು ಅವರಿಗೆ ಕಾಲಾವಕಾಶ ಕೊಡುತ್ತಿದ್ದೇನೆ. ನನ್ನ ಯೋಜನೆಯು ಖಂಡಿತ ಬಲಿಷ್ಠವಾಗಿರುತ್ತದೆ

[47] (ದೂತರೇ,) ನೀವೇನು ಅವರೊಡನೆ ಏನಾದರೂ ಸಂಭಾವನೆಯನ್ನು ಕೇಳಿರುವಿರಾ? ಮತ್ತು ಅವರು ಅದರ ಭಾರದಡಿಯಲ್ಲಿ ನರಳುತ್ತಿದ್ದಾರೆಯೇ

[48] ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತ ಜ್ಞಾನವೇನಾದರೂ ಇದೆಯೇ

[49] (ದೂತರೇ,) ನೀವು ನಿಮ್ಮೊಡೆಯನ ಆದೇಶ ಬರುವ ತನಕ ಸಹನಶೀಲರಾಗಿರಿ. ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗದಿರಿ. ಅವರು ಬಹಳ ನೊಂದ ಸ್ಥಿತಿಯಲ್ಲಿ (ಅಲ್ಲಾಹನಿಗೆ) ಮೊರೆ ಇಟ್ಟಿದ್ದರು

[50] ಅವರ ಒಡೆಯನ ಅನುಗ್ರಹವು ಅವರಿಗೆ ನೆರವಾಗದೆ ಇದ್ದಿದ್ದರೆ ಅವರು ತೀರಾ ಕೆಟ್ಟ ಸ್ಥಿತಿಯಲ್ಲಿ ಒಂದು ಬಟ್ಟ ಬಯಲಿಗೆ ಎಸೆಯಲ್ಪಡುತ್ತಿದ್ದರು

[51] ಅವರ ಒಡೆಯನು ಅವರನ್ನು ಆಯ್ದುಕೊಂಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿಸಿದನು

[52] (ದೂತರೇ,) ಧಿಕ್ಕಾರಿಗಳು ಉಪದೇಶವನ್ನು ಕೇಳಿದಾಗ ತಮ್ಮ ದೃಷ್ಟಿಯಿಂದಲೇ ನಿಮ್ಮನ್ನು ನುಚ್ಚುನೂರು ಮಾಡುವರೋ ಎಂಬಂತೆ ನಿಮ್ಮೆಡೆಗೆ ನೋಡುತ್ತಾರೆ ಮತ್ತು ‘‘ಅವನು ಖಂಡಿತ ಹುಚ್ಚ’’ ಎನ್ನುತ್ತಾರೆ

ನಿಜಾಂಶ

Surah 69

[1] ನಿಜವಾಗಿ, ಇದು ಸರ್ವಲೋಕಗಳಿಗಾಗಿ ಇರುವ ಒಂದು ಉಪದೇಶವಾಗಿದೆ

[2] ನೈಜ ಸಂಭವ

[3] ಏನದು ನೈಜ ಸಂಭವ

[4] ನಿಮಗೇನು ಗೊತ್ತು, ಆ ನೈಜ ಸಂಭವದ ಕುರಿತು

[5] ಸಮೂದ್ ಮತ್ತು ಆದ್ ಜನಾಂಗದವರು ಆ ಹಠಾತ್ ಸಂಭವವನ್ನು ಅಲ್ಲಗಳೆದರು

[6] ಕೊನೆಗೆ ಸಮೂದರನ್ನು ಸಿಡಿಲಿಗೆ ತುತ್ತಾಗಿಸಿ ನಾಶ ಮಾಡಲಾಯಿತು

[7] ಇನ್ನು, ಆದ್‌ರನ್ನು ತೀವ್ರ ವೇಗದ ಬಿರುಗಾಳಿಯೊಂದರ ಮೂಲಕ ನಾಶ ಮಾಡಲಾಯಿತು

[8] ಅದನ್ನು ಸತತ ಏಳು ರಾತ್ರಿ ಹಾಗೂ ಎಂಟು ದಿನಗಳ ಕಾಲ ಅವರ ಮೇಲೆ ಹೇರಲಾಯಿತು. ಮತ್ತು ಅಲ್ಲಿದ್ದವರೆಲ್ಲರೂ ಟೊಳ್ಳಾದ ಖರ್ಜೂರದ ಕಾಂಡಗಳೋ ಎಂಬಂತೆ ಸತ್ತು ಬಿದ್ದಿರುವುದು ನಿಮಗೆ ಕಾಣಿಸುತ್ತಿತ್ತು

[9] ಅವರ ಪೈಕಿ ಉಳಿದಿರುವ ಯಾರಾದರೂ ನಿಮಗೆ ಕಾಣಿಸುತ್ತಿದ್ದಾರೆಯೇ

[10] ಫಿರ್‌ಔನ್ ಹಾಗೂ ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡಿನವರು ಅಪರಾಧಗಳನ್ನು ಎಸಗಿದ್ದರು

[11] ಅವರು ತಮ್ಮ ಒಡೆಯನ (ಅಲ್ಲಾಹನ) ದೂತರ ಆದೇಶಗಳನ್ನು ಮೀರಿ ನಡೆದಾಗ ಅವನು ಅವರನ್ನು ಬಹಳ ಕಠೋರವಾಗಿ ದಂಡಿಸಿದನು

[12] ಪ್ರವಾಹವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿದೆವು

[13] ಅದನ್ನು ನಿಮ್ಮ ಪಾಲಿಗೆ ಸ್ಮಾರಕವಾಗಿಸಲಿಕ್ಕಾಗಿ ಮತ್ತು ನೆನಪಿಡುವ ಕಿವಿಗಳು ಅದನ್ನು ನೆನಪಿಡಲೆಂದು

[14] ಕಹಳೆಯನ್ನು ಒಂದು ಬಾರಿ ಊದಿದಾಗ

[15] ಭೂಮಿಯನ್ನೂ ಪರ್ವತಗಳನ್ನೂ ಮೇಲಕ್ಕೆತ್ತಲಾಗುವುದು ಮತ್ತು ಅವೆರಡನ್ನೂ ಪುಡಿಗಟ್ಟಿ ಒಮ್ಮೆಗೇ ನೆಲಸಮಗೊಳಿಸಲಾಗುವುದು

[16] ಅಂದು ಸಂಭವಿಸಲಿದೆ, ಆ ನೈಜ ಸಂಭವ

[17] ಆಕಾಶವು ಬಿರಿದು ಬಿಡುವುದು ಮತ್ತು ಅಂದು ಅದು ತೀರಾ ದುರ್ಬಲ ವಾಗಿರುವುದು

[18] ಮಲಕ್‌ಗಳು ಅದರ ಸುತ್ತಲೂ ಇರುವರು, ಮತ್ತು ಆ ದಿನ ಎಂಟು ಮಂದಿ (ಮಲಕ್‌ಗಳು) ನಿಮ್ಮೊಡೆಯನ ಪೀಠವನ್ನು ತಮ್ಮ ಮೇಲೆ ಹೊತ್ತಿರುವರು

[19] ಅಂದು ನಿಮ್ಮನ್ನು (ಎಲ್ಲರ ಮುಂದೆ) ಹಾಜರುಪಡಿಸಲಾಗುವುದು ಮತ್ತು ನಿಮ್ಮ ಯಾವ ವಿಷಯವೂ ಗುಪ್ತವಾಗಿ ಉಳಿಯದು

[20] ಕರ್ಮಪತ್ರವನ್ನು ಬಲಗೈಯಲ್ಲಿ ನೀಡಲಾದವನು (ಇತರರೊಡನೆ) ಹೇಳುವನು; ‘‘ಇದೋ ನನ್ನ ಕರ್ಮಪತ್ರವನ್ನು ಓದಿರಿ’’

[21] ‘‘ನಾನು ನನ್ನ ವಿಚಾರಣೆಯನ್ನು ಖಂಡಿತ ಎದುರಿಸಬೇಕಾಗುವುದು ಎಂದು ನಾನು ಮೊದಲೇ ನಂಬಿದ್ದೆ’’

[22] ಅವನು ಧಾರಾಳ ಸುಖಃದಲ್ಲಿರುವವನು

[23] ಎತ್ತರವಾದ ಸ್ವರ್ಗ ತೋಟಗಳಲ್ಲಿ

[24] ಅಲ್ಲಿಯ ಹಣ್ಣಿನ ಗೊಂಚಲುಗಳು ಬಾಗಿರುವವು

[25] (ಅವರೊಡನೆ ಹೇಳಲಾಗುವುದು;) ಕಳೆದು ಹೋದ ದಿನಗಳಲ್ಲಿ ನೀವು ಮಾಡಿದ್ದ ಕರ್ಮಗಳ ಫಲವಾಗಿ (ಇಂದು) ಮೋಜು ಮಾಡುತ್ತಾ ತಿನ್ನಿರಿ ಹಾಗೂ ಕುಡಿಯಿರಿ

[26] ಕರ್ಮ ಪತ್ರವನ್ನು ಎಡಗೈಯಲ್ಲಿ ನೀಡಲಾದವನು ಹೇಳುವನು; ‘‘ಅಯ್ಯೋ, ನನಗೆ ನನ್ನ ಕರ್ಮಪತ್ರವು ಸಿಗದೆ ಇದ್ದಿದ್ದರೆ ಚೆನ್ನಾಗಿತ್ತು!’’

[27] ‘‘ಮತ್ತು ನನ್ನ ಫಲಿತಾಂಶ ಏನೆಂಬುದು ನನಗೆ ತಿಳಿಯದೆ ಇದ್ದಿದ್ದರೆ ಚೆನ್ನಾಗಿತ್ತು’’

[28] ‘‘ಅಯ್ಯೋ, ಆ ನನ್ನ ಮರಣವೇ ಅಂತಿಮವಾಗಿದ್ದರೆ ಚೆನ್ನಾಗಿತ್ತು’’

[29] ‘‘ಇಂದು ನನ್ನ ಸಂಪತ್ತಿನಿಂದ ನನಗೆ ಯಾವ ಲಾಭವೂ ಇಲ್ಲ’’

[30] ‘‘ನನ್ನ ಅಧಿಕಾರವೆಲ್ಲವೂ ನನ್ನಿಂದ ಕಳೆದು ಹೋಗಿದೆ’’

[31] ಆಗ ಆದೇಶಿಸಲಾಗುವುದು; ಅವನನ್ನು ಹಿಡಿಯಿರಿ ಮತ್ತು ನೊಗವನ್ನು ತೊಡಿಸಿರಿ

[32] ಮತ್ತು ಅವನನ್ನು ನರಕದ ಬೆಂಕಿಗೆ ಎಸೆದು ಬಿಡಿರಿ

[33] ಮತ್ತು ಅವನನ್ನು ಎಪ್ಪತ್ತು ಗಜ ಉದ್ದದ ಸಂಕೋಲೆಯಲ್ಲಿ ಬಿಗಿದು ಕಟ್ಟಿರಿ

[34] ಅವನು ಮಹೋನ್ನತನಾದ ಅಲ್ಲಾಹನಲ್ಲಿ ನಂಬಿಕೆ ಇಟ್ಟಿರಲಿಲ್ಲ

[35] ಮತ್ತು ಅವನು ಬಡವರಿಗೆ ಉಣಿಸುವುದಕ್ಕೆ ಯಾರನ್ನೂ ಪ್ರೇರೇಪಿಸುತ್ತಿರಲಿಲ್ಲ

[36] ಇಂದು, ಅವನಿಗಿಲ್ಲಿ ಮಿತ್ರರು ಯಾರೂ ಇಲ್ಲ

[37] ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ ದಕ್ಕದು

[38] ಮತ್ತು ಅದನ್ನು ಅಪರಾಧಿಗಳ ಹೊರತು ಬೇರೆ ಯಾರೂ ತಿನ್ನಲಾರರು

[39] ನಾನು ನಿಮಗೆ ಕಾಣುವ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ

[40] ಮತ್ತು ನಾನು ನಿಮಗೆ ಕಾಣದ ವಸ್ತುಗಳ ಆಣೆ ಹಾಕಿ ಹೇಳುತ್ತಿದ್ದೇನೆ

[41] ಖಂಡಿತವಾಗಿಯೂ ಇದು ಒಬ್ಬ ಗೌರವಾನ್ವಿತ ದೂತನ ಮಾತು

[42] ಇದು ಯಾವುದೇ ಕವಿಯ ಮಾತಲ್ಲ. ಅದರೆ ನೀವು ನಂಬುವುದು ಮಾತ್ರ ಕಡಿಮೆ

[43] ಇದು ಯಾವುದೇ ಮಾಂತ್ರಿಕನ ಮಾತಲ್ಲ. ನೀವು ಪಾಠ ಕಲಿಯುವುದು ತುಂಬಾ ಕಡಿಮೆ

[44] ಇದು ಸಕಲ ಲೋಕಗಳ ಒಡೆಯನು ಇಳಿಸಿ ಕೊಟ್ಟಿರುವ ಸಂದೇಶ

[45] ಒಂದು ವೇಳೆ ಅವರು (ದೂತರು) ನಮ್ಮ ಕುರಿತು ಏನಾದರೂ ಸುಳ್ಳು ಹೇಳುತ್ತಿದ್ದರೆ

[46] ನಾವು ಅವರ ಬಲಗೈಯನ್ನು ಹಿಡಿಯುತ್ತಿದ್ದೆವು

[47] ಮತ್ತು ನಾವು ಅವರ ಜೀವನಾಡಿಯನ್ನು ಕತ್ತರಿಸಿ ಬಿಡುತ್ತಿದ್ದೆವು

[48] ನಿಮ್ಮ ಪೈಕಿ ಯಾರಿಗೂ ನಮ್ಮನ್ನು ತಡೆಯಲು ಸಾಧ್ಯವಿರಲಿಲ್ಲ

[49] ಇದು (ಈ ಗ್ರಂಥವು) ಖಂಡಿತ ಧರ್ಮನಿಷ್ಠರ ಪಾಲಿಗೆ ಒಂದು ಉಪದೇಶವಾಗಿದೆ

[50] ನಿಮ್ಮ ನಡುವೆ ಸುಳ್ಳುಗಾರರು ಇರುವ ಕುರಿತು ನಮಗೆ ತಿಳಿದಿದೆ

[51] ಖಂಡಿತವಾಗಿಯೂ ಇದು, ಧಿಕ್ಕಾರಿಗಳು ಪರಿತಪಿಸುವುದಕ್ಕೆ ಕಾರಣವಾಗಲಿದೆ

[52] ಇದು ನಿಸ್ಸಂದೇಹವಾಗಿಯೂ ನಂಬಲರ್ಹ ಸತ್ಯವಾಗಿದೆ

ಏರುವ ಮಾರ್ಗಗಳು

Surah 70

[1] ನೀವು ಮಹೋನ್ನತನಾದ ನಿಮ್ಮ ಒಡೆಯನ ನಾಮದ ಪಾವಿತ್ರವನ್ನು ಜಪಿಸಿರಿ

[2] ಪ್ರಶ್ನಿಸುವವನೊಬ್ಬನು, (ಧಿಕ್ಕಾರಿಗಳ ಮೇಲೆ) ಖಂಡಿತ ಬಂದೆರಗಲಿರುವ ಶಿಕ್ಷೆಯ ಕುರಿತು ಪ್ರಶ್ನಿಸಿದ್ದಾನೆ

[3] ಧಿಕ್ಕಾರಿಗಳ ಮೇಲೆ ಅದು ಬಂದೆರಗುವುದನ್ನು ನಿವಾರಿಸಲು ಯಾರಿಂದಲೂ ಸಾಧ್ಯವಾಗದು

[4] ಅತ್ಯುನ್ನತ ಸ್ಥಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಬರಲಿದೆ)

[5] ಐವತ್ತು ಸಾವಿರ ವರ್ಷಗಳಷ್ಟು ಧೀರ್ಘವಾಗಿರುವ ಒಂದು ದಿನ, ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ಅವನೆಡೆಗೆ ಏರಿ ಹೋಗುತ್ತಾರೆ

[6] (ದೂತರೇ,) ಸದ್ಯ ನೀವು ಸಂಯಮ ತೋರಿರಿ. ಸಭ್ಯವಾದ ಸಂಯಮ

[7] ಅವರು ಅದನ್ನು (ವಿಚಾರಣೆಯ ದಿನವನ್ನು) ತುಂಬಾ ದೂರದಲ್ಲಿ ಕಾಣುತ್ತಿದ್ದಾರೆ

[8] ಆದರೆ ನಾವು ಅದನ್ನು ತೀರಾ ಹತ್ತಿರದಲ್ಲಿ ಕಾಣುತ್ತಿದ್ದೇವೆ

[9] ಆಕಾಶವು ಕರಗಿದ ತಾಮ್ರದಂತಾಗುವ ಆ ದಿನ

[10] ಪರ್ವತಗಳೆಲ್ಲಾ ಉಣ್ಣೆಯ ಚೂರುಗಳಂತಾಗಿ ಬಿಡುವವು

[11] (ಅಂದು) ಯಾವ ಮಿತ್ರನೂ ತನ್ನ ಮಿತ್ರನ ಕುರಿತು ವಿಚಾರಿಸಲಾರನು

[12] ನಿಜವಾಗಿ, ಅವರು ಪರಸ್ಪರರನ್ನು ನೋಡುತ್ತಿರುವರು

[13] ಅಂದು ಅಪರಾಧಿಯು ಶಿಕ್ಷೆಗೆ ಪರಿಹಾರವಾಗಿ ತನ್ನ ಪುತ್ರರನ್ನು ನೀಡಲು ಸಿದ್ದನಾಗುವನು

[14] (ಮಾತ್ರವಲ್ಲ,) ತನ್ನ ಪತ್ನಿ ಮತ್ತು ತನ್ನ ಸಹೋದರರನ್ನೂ ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನೂ

[15] ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ (ಪರಿಹಾರವಾಗಿ ಕೊಟ್ಟು) ಶಿಕ್ಷೆಯಿಂದ ಪಾರಾಗಲು ಬಯಸುವನು

[16] ಖಂಡಿತ ಇಲ್ಲ. ಅದು, ಭುಗಿದೇಳುವ ಬೆಂಕಿಯಾಗಿರುವುದು

[17] ಚರ್ಮವನ್ನು ಸುಲಿದು ಬಿಡುವ ಬೆಂಕಿ

[18] ಸತ್ಯವನ್ನು ಕಡೆಗಣಿಸಿ ದೊಡ್ಡಸ್ತಿಕೆ ಮೆರೆದವನನ್ನು ಅದು (ನರಕವು) ಕರೆಯುವುದು

[19] ಸಂಪತ್ತನ್ನು ಸಂಗ್ರಹಿಸಿ ಮುಚ್ಚಿಟ್ಟವನನ್ನೂ (ಅದು ಕರೆಯುವುದು)

[20] ಖಂಡಿತವಾಗಿಯೂ ಮಾನವನನ್ನು ಚಂಚಲನಾಗಿ ಸೃಷ್ಟಿಸಲಾಗಿದೆ

[21] ಸಂಕಷ್ಟವೇನಾದರೂ ಎದುರಾದೊಡನೆ ಅವನು ಗಾಬರಿಗೊಳ್ಳುತ್ತಾನೆ

[22] ಸುಖ ಪ್ರಾಪ್ತವಾದಾಗ ಜಿಪುಣನಾಗಿ ಬಿಡುತ್ತಾನೆ

[23] ಆದರೆ ನಮಾಝ್ ಸಲ್ಲಿಸುವವರು ಮಾತ್ರ (ಹಾಗಿರುವುದಿಲ್ಲ)

[24] ಅವರು ಸದಾ ಕಟ್ಟುನಿಟ್ಟಾಗಿ ನಮಾಝನ್ನು ಪಾಲಿಸುತ್ತಾರೆ

[25] ಅವರ ಸಂಪತ್ತುಗಳಲ್ಲಿ ನಿರ್ದಿಷ್ಟವಾದ ಹಕ್ಕು ಇದೆ

[26] ಬೇಡುವವನಿಗೆ ಮತ್ತು ವಂಚಿತನಿಗೆ

[27] ಪ್ರತಿಫಲದ ದಿನವಿರುವುದು ಸತ್ಯ ಎಂದು ಅವರು ನಂಬುತ್ತಾರೆ

[28] ಅವರು ತಮ್ಮೊಡೆಯನ ಶಿಕ್ಷೆಗೆ ಅಂಜುತ್ತಾರೆ

[29] ಅವರ ಒಡೆಯನ ಶಿಕ್ಷೆ ಎಂತಹದ್ದೆಂದರೆ, ಆ ಕುರಿತು ನಿಶ್ಚಿಂತರಾಗಿರಲು ಸಾಧ್ಯವೇ ಇಲ್ಲ

[30] ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳುತ್ತಾರೆ

[31] ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ಖಂಡನಾರ್ಹರಲ್ಲ

[32] ಅದರ ಆಚಿನದನ್ನು ಅಪೇಕ್ಷಿಸುವವರು – ಅವರೇ ಎಲ್ಲೆ ಮೀರುವವರು

[33] ಅವರು (ಸ್ವರ್ಗಕ್ಕೆ ಅರ್ಹರಾದ ಸಜ್ಜನರು) ತಮ್ಮನ್ನು ನಂಬಿ ಒಪ್ಪಿಸಲಾದ ಹೊಣೆಗಳನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಕರಾರುಗಳನ್ನು ಪಾಲಿಸುತ್ತಾರೆ

[34] ಅವರು ತಮ್ಮ ಸಾಕ್ಷಗಳಲ್ಲಿ ಸ್ಥಿರರಾಗಿರುತ್ತಾರೆ

[35] ಅವರು ತಮ್ಮ ನಮಾಝ್‌ಗಳ ಕುರಿತು ಎಚ್ಚರ ವಹಿಸುತ್ತಾರೆ

[36] ಅವರೇ, ಗೌರವಾನ್ವಿತರಾಗಿ ಸ್ವರ್ಗ ತೋಟಗಳಲ್ಲಿ ಇರುವವರು

[37] ಇದೇನಾಗಿದೆ ಧಿಕ್ಕಾರಿಗಳಿಗೆ? ಅವರೇಕೆ ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ

[38] ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪು ಗುಂಪಾಗಿ ಬರುತ್ತಿದ್ದಾರೆ

[39] ಅವರ ಪೈಕಿ ಪ್ರತಿಯೊಬ್ಬರೂ ಅನುಗ್ರಹ ತುಂಬಿದ ಸ್ವರ್ಗದೊಳಗೆ ಪ್ರವೇಶಿಸಲು ಆಶಿಸುತ್ತಿದ್ದಾರೆ

[40] ಖಂಡಿತ ಸಾಧ್ಯವಿಲ್ಲ. ಅವರಿಗೆ ತಿಳಿದಿರುವ ಒಂದು ವಸ್ತುವಿನಿಂದ ನಾವೇ ಅವರನ್ನು ಸೃಷ್ಟಿಸಿರುವೆವು

[41] ಖಂಡಿತ ಇಲ್ಲ. ನಾನು ಪೂರ್ವಗಳ ಮತ್ತು ಪಶ್ಚಿಮಗಳ ಒಡೆಯನ ಆಣೆ ಹಾಕಿ ಹೇಳುತ್ತಿದ್ದೇನೆ, ನಾವು ಖಂಡಿತ ಅದನ್ನು ಮಾಡಬಲ್ಲೆವು

[42] ಅವರ ಸ್ಥಾನದಲ್ಲಿ ನಾವು ಅವರಿಗಿಂತ ಉತ್ತಮರನ್ನು ತರಬಲ್ಲೆವು. ಯಾರೂ ನಮ್ಮನ್ನು ಸೋಲಿಸಲಾರರು

[43] ಅವರನ್ನು ಬಿಟ್ಟು ಬಿಡಿರಿ. ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ನಿರರ್ಥಕ ಕೆಲಸಗಳಲ್ಲಿ ಮತ್ತು ಆಟ ವಿನೋದಗಳಲ್ಲಿ ನಿರತರಾಗಿರಲಿ

[44] ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರರಾಗಿ ಧಾವಿಸುತ್ತಿರುವರು

ನೂಹ್

Surah 71

[1] ಅವರ ದೃಷ್ಟಿಗಳು ಭೀತವಾಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿ ಕೊಂಡಿರುವುದು. ಅದುವೇ ಅವರಿಗೆ ವಾಗ್ದಾನ ಮಾಡಲಾಗಿದ್ದ ದಿನ

[2] ‘‘ನಿಮ್ಮ ಜನಾಂಗದವರ ಮೇಲೆ ಕಠಿಣ ಶಿಕ್ಷೆಯು ಬಂದೆರಗುವ ಮುನ್ನ ಅವರನ್ನು ಎಚ್ಚರಿಸಿರಿ’’ ಎನ್ನುತ್ತಾ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು

[3] ಅವರು (ನೂಹ್) ಹೇಳಿದರು; ‘‘ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ’’

[4] ‘‘ನೀವು ಅಲ್ಲಾಹನನ್ನು ಆರಾಧಿಸಿರಿ, ಅವನಿಗೆ ಅಂಜಿರಿ ಮತ್ತು ನನ್ನ ಆದೇಶ ಪಾಲಿಸಿರಿ’’

[5] ‘‘ಅವನು (ಅಲ್ಲಾಹನು) ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನು ನಿಶ್ಚಯಿಸಿರುವ ಸಮಯ ಬಂದು ಬಿಟ್ಟರೆ ಅದನ್ನು ನಿವಾರಿಸಲಾಗುವುದಿಲ್ಲ. ನೀವು ಇದನ್ನು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು

[6] ಅವರು (ನೂಹ್) ಹೇಳಿದರು; ‘‘ನನ್ನೊಡೆಯಾ, ನಾನು ಹಗಳಿರುಳೂ ನನ್ನ ಜನಾಂಗದವರನ್ನು (ಸತ್ಯದೆಡೆಗೆ) ಕರೆದಿದ್ದೇನೆ’’

[7] ‘‘ಆದರೆ ನನ್ನ ಕರೆಯು (ಸತ್ಯದಿಂದ) ಅವರ ಪಲಾಯನವನ್ನಷ್ಟೇ ಹೆಚ್ಚಿಸಿದೆ’’

[8] ‘‘ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಆಮಂತ್ರಿಸಿದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿ ಕೊಂಡರು ಹಾಗೂ ತಮ್ಮ ವಸ್ತ್ರಗಳನ್ನು ತಮ್ಮ ಮೇಲೆ ಎಳೆದು ಕೊಂಡರು ಮತ್ತು ಅವರು ಉದ್ಧಟತನ ತೋರಿದರು ಹಾಗೂ ಭಾರೀ ಅಹಂಕಾರ ಪ್ರದರ್ಶಿಸಿದರು’’

[9] ‘‘ನಾನು ಅವರನ್ನು ಕೂಗಿ ಕರೆದೆನು’’

[10] ‘‘ಬಹಿರಂಗವಾಗಿಯೂ ಗುಪ್ತವಾಗಿಯೂ ನಾನು ಅವರಿಗೆ ಉಪದೇಶಿಸಿದೆನು’’

[11] ‘‘ನಾನು ಅವರೊಡನೆ ಹೇಳಿದೆನು; ನೀವು ನಿಮ್ಮ ಒಡೆಯನ ಬಳಿ ಕ್ಷಮೆ ಕೇಳಿರಿ. ಅವನು ಖಂಡಿತ ಕ್ಷಮಿಸುವವನಾಗಿದ್ದಾನೆ’’

[12] ‘‘ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳ ಮಳೆಯನ್ನು ಸುರಿಸುವನು’’

[13] ‘‘ಸಂಪತ್ತು ಹಾಗೂ ಸಂತತಿಗಳ ಮೂಲಕ ಅವನು ನಿಮಗೆ ನೆರವಾಗುವನು ಮತ್ತು ನಿಮಗಾಗಿ ತೋಟಗಳನ್ನು ರಚಿಸುವನು ಹಾಗೂ ನಿಮಗಾಗಿ ನದಿಗಳನ್ನೂ ಹರಿಸುವನು’’

[14] ‘‘ನಿಮಗೇನಾಗಿದೆ? ನೀವು ಅಲ್ಲಾಹನಿಂದ ಯಾವುದೇ ಗೌರವವನ್ನೇಕೆ ನಿರೀಕ್ಷಿಸುವುದಿಲ್ಲ?’’

[15] ‘‘ಅವನು ವಿವಿಧ ಹಂತಗಳಲ್ಲಿ ನಿಮ್ಮನ್ನು ಸೃಷ್ಟಿಸಿರುವನು’’

[16] ‘‘ನೀವು ನೋಡಿಲ್ಲವೇ, ಅಲ್ಲಾಹನು ಯಾವ ರೀತಿ ಕ್ರಮಬದ್ಧವಾಗಿ ಏಳು ಆಕಾಶಗಳನ್ನು ಸೃಷ್ಟಿಸಿರುವನೆಂದು?’’

[17] ‘‘ಮತ್ತು ಯಾವ ರೀತಿ ಅವನು ಅವುಗಳಲ್ಲಿ ಬೆಳಕಾಗಿ ಚಂದ್ರನನ್ನು ಹಾಗೂ ದೀಪವಾಗಿ ಸೂರ್ಯನನ್ನು ನಿರ್ಮಿಸಿರುವನೆಂದು?’’

[18] ‘‘ಅಲ್ಲಾಹನೇ ನಿಮ್ಮನ್ನು ಭೂಮಿಯಿಂದ ಬೆಳೆಸಿದನು’’

[19] ‘‘ಅವನು ಮತ್ತೆ ನಿಮ್ಮನ್ನು ಅದರೊಳಕ್ಕೆ ಮರಳಿಸುವನು ಮತ್ತು ಅದರಿಂದಲೇ ನಿಮ್ಮನ್ನು ಹೊರ ತೆಗೆಯುವನು’’

[20] ‘‘ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸಿನಂತಾಗಿಸಿರುವನು’’

[21] ‘‘- ನೀವು ಅದರಲ್ಲಿನ ವಿಶಾಲ ದಾರಿಗಳಲ್ಲಿ ಸಂಚರಿಸುವಂತಾಗಲು’’

[22] ನೂಹರು ಹೇಳಿದರು; ‘‘ನನ್ನೊಡೆಯಾ, ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಯಾರಿಗೆ ತಮ್ಮ ಸಂಪತ್ತು ಮತ್ತು ಸಂತಾನಗಳಿಂದ ನಷ್ಟ ಮಾತ್ರ ಆಗಿದೆಯೋ, ಅಂಥವರನ್ನು ಅವರು ಅನುಸರಿಸುತ್ತಿದ್ದಾರೆ’’

[23] ‘‘ಅವರು ಭಾರೀ ಸಂಚುಗಳನ್ನು ಹೂಡಿದ್ದಾರೆ’’

[24] ‘‘ಮತ್ತು ಅವರು – ನಿಮ್ಮ ದೇವರುಗಳನ್ನು ಖಂಡಿತ ಕೈ ಬಿಡಬೇಡಿ. ವದ್ದ್ ಅನ್ನಾಗಲೀ ಸುವಾಅ್ ಅನ್ನಾಗಲೀ ಯಗೂಸ್, ಯಊಕ್ ಮತ್ತು ನಸ್ರ್‌ರನ್ನಾಗಲೀ ಕೈ ಬಿಡಬೇಡಿ – ಎನ್ನುತ್ತಿದ್ದಾರೆ’’

[25] ‘‘ನನ್ನೊಡೆಯಾ, ಅವರು ಅನೇಕರನ್ನು ದಾರಿಗೆಡಿಸಿರುವರು. ನೀನು ಈ ಆಕ್ರಮಿಗಳನ್ನು ಮತ್ತಷ್ಟು ದಿಕ್ಕುಗೆಡಿಸಿ ಬಿಡು.’’

[26] ಕೊನೆಗೆ, ಅವರ ಅಪರಾಧಗಳ ಕಾರಣ, ಅವರನ್ನು ನೀರಲ್ಲಿ ಮುಳುಗಿಸಲಾಯಿತು ಮತ್ತು ಬೆಂಕಿಯೊಳಗೆ ಎಸೆಯಲಾಯಿತು. ಆಗ ಅಲ್ಲಾಹನ ಹೊರತು ಅವರಿಗೆ ಯಾವ ಸಹಾಯಕರೂ ಸಿಗಲಿಲ್ಲ

[27] ಮತ್ತು ನೂಹರು ಹೇಳಿದರು; ‘‘ನನ್ನೊಡೆಯಾ, ಧಿಕ್ಕಾರಿಗಳ ಪೈಕಿ ಒಬ್ಬನನ್ನೂ ಭೂಮಿಯಲ್ಲಿ ಜೀವಂತ ಬಿಟ್ಟು ಬಿಡಬೇಡ’’

[28] ‘‘ನೀನು ಅವರನ್ನು ಬಿಟ್ಟು ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮತ್ತು ಅವರ ಸಂತತಿಗಳೂ ಕೇವಲ ದುಷ್ಟರೂ ಕೃತಘ್ನರೂ ಆಗಿರುವರು’’

ಜಿನ್

Surah 72

[1] ‘‘ನನ್ನೊಡೆಯಾ, ನನಗೂ ನನ್ನ ಹೆತ್ತವರಿಗೂ ವಿಶ್ವಾಸಿಗಳಾಗಿ ನನ್ನ ಮನೆಯೊಳಗೆ ಬಂದಿರುವವರಿಗೂ ಎಲ್ಲ ವಿಶ್ವಾಸಿ ಪುರುಷರಿಗೂ ಸ್ತ್ರೀಯರಿಗೂ ಕ್ಷಮೆಯನ್ನು ನೀಡು ಮತ್ತು ಅಕ್ರಮಿಗಳಿಗೆ ವಿನಾಶದ ಹೊರತು ಬೇರೇನನ್ನೂ ಹೆಚ್ಚಿಸಬೇಡ’’

[2] (ದೂತರೇ,) ಹೇಳಿರಿ; ನನ್ನ ಬಳಿಗೆ ದಿವ್ಯ ಸಂದೇಶವು ಬಂದಿದೆ. (ಅದರ ಪ್ರಕಾರ,) ಜಿನ್ನ್‌ಗಳ ಒಂದು ತಂಡವು ಇದನ್ನು (ಈ ಕುರ್‌ಆನನ್ನು) ಕೇಳಿ, ಹೀಗೆಂದಿತು; ‘‘ನಾವು ಒಂದು ವಿಶಿಷ್ಟ ಕುರ್‌ಆನನ್ನು ಕೇಳಿರುವೆವು’’

[3] ‘‘ಅದು ಸನ್ಮಾರ್ಗವನ್ನು ತೋರಿಸುತ್ತದೆ. ನಾವು ಅದರಲ್ಲಿ ನಂಬಿಕೆ ಇಟ್ಟಿರುವೆವು. ನಾವಿನ್ನು ನಮ್ಮ ಒಡೆಯನ ಜೊತೆ ಯಾರನ್ನೂ ಪಾಲುದಾರರಾಗಿಸಲಾರೆವು.’’

[4] ‘‘ನಮ್ಮ ಒಡೆಯನ ಸ್ಥಾನ ತುಂಬಾ ಉನ್ನತವಾದುದು. ಅವನು ಯಾರನ್ನೂ ತನ್ನ ಪತ್ನಿ ಅಥವಾ ಪುತ್ರನಾಗಿಸಿ ಕೊಂಡಿಲ್ಲ’’

[5] ‘‘ನಮ್ಮಲ್ಲಿನ ಕೆಲವು ಮೂರ್ಖರು ಅಲ್ಲಾಹನ ಕುರಿತು ಸುಳ್ಳುಗಳನ್ನು ಸೃಷ್ಟಿಸಿ ಹೇಳುತ್ತಾರೆ’’

[6] ‘‘ಜಿನ್ನ್‌ಗಳು ಮತ್ತು ಮಾನವರು ಅಲ್ಲಾಹನ ಕುರಿತು ಸುಳ್ಳು ಹೇಳುವುದಿಲ್ಲ ಎಂದು ನಾವು ನಂಬಿದ್ದೆವು

[7] ‘‘ಕೆಲವು ಮಾನವರು ಜಿನ್ನ್‌ಗಳ ಆಶ್ರಯ ಪಡೆದುದರಿಂದ ಅವರ (ಜಿನ್ನ್‌ಗಳ) ಬಂಡಾಯವು ಮತ್ತಷ್ಟು ಹೆಚ್ಚಿತು’’

[8] ‘‘ಅಲ್ಲಾಹನು ಯಾರನ್ನೂ ಮತ್ತೆ ಜೀವಂತಗೊಳಿಸಲಾರನೆಂದು ನೀವು ನಂಬಿರುವಂತೆ ಅವರೂ (ಆ ಜಿನ್ನ್‌ಗಳೂ) ನಂಬಿದ್ದರು’’

[9] ‘‘ನಾವು ಆಕಾಶವನ್ನು ಸಮೀಕ್ಷಿಸಿ ನೋಡಿದೆವು. ಅದನ್ನು ಬಲಿಷ್ಠ ಕಾವಲುಗಾರರು ರಕ್ಷಿಸುತ್ತಿರುವುದನ್ನು ಹಾಗೂ ಅದು ಬೆಂಕಿಯಿಂದ ತುಂಬಿರುವುದನ್ನು ಕಂಡೆವು’’

[10] ‘‘ಹಿಂದೆ ನಾವು ಸುದ್ದಿ ಕೇಳಲಿಕ್ಕಾಗಿ ಅಲ್ಲಿ ಹಲವೆಡೆ ಕೂರುತ್ತಿದ್ದೆವು. ಆದರೆ ಈಗ, ಹಾಗೆ ಕೇಳ ಹೊರಟವನು, ತನ್ನ ಮೇಲೆ ಬೆಂಕಿಯ ದಾಳಿಯನ್ನು ಎದುರಿಸ ಬೇಕಾಗುತ್ತದೆ

[11] ‘‘ಭೂವಾಸಿಗಳ ಒಡೆಯನು ಅವರಿಗೆ ಏನಾದರೂ ಅಹಿತವನ್ನು ಮಾಡಬಯಸುತ್ತಾನೋ ಅಥವಾ ಹಿತವನ್ನು ಮಾಡಬಯಸುತ್ತಾನೋ ಎಂಬುದು ನಮಗೆ ತಿಳಿಯದು’’

[12] ‘‘ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಮತ್ತು ಇತರ ಬಗೆಯವರೂ ಇದ್ದಾರೆ. ನಮ್ಮಲ್ಲಿ ವಿಭಿನ್ನ ಪಂಥಗಳಿವೆ’’

[13] ‘‘ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲು ನಮ್ಮಿಂದ ಸಾಧ್ಯವಿಲ್ಲ ಮತ್ತು ಅವನಿಂದ ತಪ್ಪಿಸಿಕೊಳ್ಳುವ ಮೂಲಕ ಅವನನ್ನು ಮಣಿಸಲಿಕ್ಕೂ ನಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ನಾವು ಮನಗಂಡಿದ್ದೇವೆ

[14] ‘‘ಮಾರ್ಗದರ್ಶಿ ಸಂದೇಶವನ್ನು (ಕುರ್‌ಆನನ್ನು) ಕೇಳಿದೊಡನೆ ನಾವು ಅದನ್ನು ನಂಬಿದೆವು. ತನ್ನ ಒಡೆಯನನ್ನು ನಂಬಿದವನಿಗೆ ಯಾವುದೇ ನಷ್ಟದ ಅಥವಾ ಅಕ್ರಮದ ಭಯ ಇರುವುದಿಲ್ಲ’’

[15] ‘‘ನಮ್ಮಲ್ಲಿ ಕೆಲವರು ಶರಣಾದವರಿದ್ದಾರೆ (ಮುಸ್ಲಿಮರಿದ್ದಾರೆ) ಮತ್ತು ಕೆಲವರು ದಾರಿಗೆಟ್ಟವರಿದ್ದಾರೆ. ಶರಣಾದವರು ಸನ್ಮಾರ್ಗವನ್ನು ಪಡೆದರು’’

[16] ‘‘ಇನ್ನು ಪಾಪಿಗಳು, ಅವರಂತು ನರಕದ ಇಂಧನವಾಗಿಬಿಟ್ಟರು’’

[17] (ದೂತರೇ,) ಒಂದು ವೇಳೆ ಅವರು (ಮಕ್ಕಃದ ಬರ ಪೀಡಿತರು) ನೇರ ಮಾರ್ಗದಲ್ಲೇ ಇದ್ದಿದ್ದರೆ ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಒದಗಿಸುತ್ತಿದ್ದೆವು –

[18] – ಆ ಮೂಲಕ ಅವರನ್ನು ಪರೀಕ್ಷಿಸಲಿಕ್ಕಾಗಿ. ತನ್ನ ಒಡೆಯನ ಸ್ಮರಣೆಯನ್ನು ಕಡೆಗಣಿಸುವಾತನನ್ನು ಅವನು (ಅಲ್ಲಾಹನು) ಕಠಿಣ ಶಿಕ್ಷೆಗೆ ಒಳಪಡಿಸುವನು

[19] ಮಸ್ಜಿದ್ (ಮಸೀದಿ)ಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಅವುಗಳಲ್ಲಿ ಅಲ್ಲಾಹನ ಜೊತೆ ಬೇರೆ ಯಾರನ್ನೂ ಪ್ರಾರ್ಥಿಸಬೇಡಿ

[20] ಅಲ್ಲಾಹನ ದಾಸನು (ದೂತರು, ಕಅ್ಬ:ದಲ್ಲಿ) ಅವನನ್ನು ಪ್ರಾರ್ಥಿಸಲಿಕ್ಕೆಂದು ನಿಂತಾಗ ಅವರು (ಮಕ್ಕಃದ ವಿಗ್ರಹಾರಾಧಕರು) ಆತನ ಮೇಲೆ ಮುಗಿದು ಬೀಳಲು ಹೊರಡುತ್ತಾರೆ

[21] ಹೇಳಿರಿ; ನಾನಂತು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ ಮತ್ತು ನಾನು ಅವನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ

[22] ಹೇಳಿರಿ; ನಿಮಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಅಧಿಕಾರ ನನಗೆ ಖಂಡಿತ ಇಲ್ಲ

[23] ಹೇಳಿರಿ; ಅಲ್ಲಾಹನಿಗೆದುರಾಗಿ ನನಗೆ ಆಶ್ರಯ ನೀಡಬಲ್ಲವರು ಯಾರೂ ಇಲ್ಲ, ಮತ್ತು ನಾನು ಅವನ ಹೊರತು ಬೇರೆಲ್ಲೂ ಆಶ್ರಯವನ್ನು ಕಾಣುವುದಿಲ್ಲ

[24] ಅಲ್ಲಾಹನ ಕಡೆಯಿಂದ (ಸಿಕ್ಕಿದ್ದನ್ನು) ಮತ್ತು ಅವನ ಸಂದೇಶಗಳನ್ನು ತಲುಪಿಸುವುದು (ಇಷ್ಟೇ ನನ್ನ ಕೆಲಸ). ಅಲ್ಲಾಹ್ ಮತ್ತವನ ದೂತರ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ ಖಂಡಿತ ನರಕಾಗ್ನಿಯೇ ಗತಿ. ಅವರು ಅದರಲ್ಲಿ ಸದಾ ಕಾಲ ಇರುವರು

[25] ಅವರು, ತಮಗೆ ವಾಗ್ದಾನ ಮಾಡಲಾಗಿರುವ ಘಟನೆಯನ್ನು ಕಂಡಾಗ, ಯಾರ ಸಹಾಯಕನು ಅತ್ಯಂತ ದುರ್ಬಲನೆಂಬುದು, ಹಾಗೂ ಯಾರ ಸಹಾಯಕರ ಸಂಖ್ಯೆ ತೀರಾ ನಗಣ್ಯಎಂಬುದು ಅವರಿಗೆ ಮನವರಿಕೆಯಾಗಲಿದೆ. 25. ಹೇಳಿರಿ; ನಿಮಗೆ ವಾಗ್ದಾನ ಮಾಡಲಾಗುತ್ತಿರುವ ದಿನವು ತೀರಾ ಸಮೀಪವಿದೆಯೋ ಅಥವಾ ನನ್ನೊಡೆಯನು ಅದರ ಅವಧಿಯನ್ನು ವಿಸ್ತರಿಸಿರುವನೋ ಎಂಬುದು ನನಗೆ ತಿಳಿಯದು

[26] ಅವನೇ ಎಲ್ಲಾ ಗುಪ್ತ ವಿಷಯಗಳನ್ನು ಬಲ್ಲವನು. ಅವನು ಆ ತನ್ನ ಗುಪ್ತ ವಿಷಯಗಳನ್ನು ಯಾರೊಬ್ಬರಿಗೂ ತಿಳಿಸುವುದಿಲ್ಲ

[27] ದೂತರ ಪೈಕಿ ಅವನ ಮೆಚ್ಚುಗೆಗೆ ಪಾತ್ರರಾದವರ ಹೊರತು. (ಅವರಿಗೆ ಅವನು ಗುಪ್ತ ವಿಷಯಗಳನ್ನು ತಿಳಿಸುತ್ತಾನೆ.) ಮತ್ತು ಅವರ ಮುಂದೆಯೂ ಹಿಂದೆಯೂ ಕಾವಲುಗಾರರನ್ನು ನೇಮಿಸುತ್ತಾನೆ –

[28] – ಅವರು ತಮ್ಮ ಒಡೆಯನ ಸಂದೇಶವನ್ನು ತಲುಪಿಸಿರುವರೆಂಬುದನ್ನು ಅರಿಯಲಿಕ್ಕಾಗಿ. ಮತ್ತು ಅವನು, ಅವರ ಬಳಿ ಇರುವ ಎಲ್ಲವನ್ನೂ ಆವರಿಸಿಕೊಂಡಿರುತ್ತಾನೆ. ಮತ್ತು ಅವನು ಪ್ರತಿಯೊಂದು ವಸ್ತುವನ್ನೂ ಎಣಿಸಿಟ್ಟಿರುತ್ತಾನೆ

ಸುತ್ತುವರಿದವನು

Surah 73

[1] ಹೊದಿಕೆ ಹೊದ್ದವರೇ (ದೂತರೇ)

[2] ರಾತ್ರಿಯ ವೇಳೆ (ನಮಾಝ್‌ಗೆ) ನಿಲ್ಲಿರಿ – ಸ್ವಲ್ಪ ಹೊತ್ತಿನ ಹೊರತು

[3] ಅದರ (ರಾತ್ರಿಯ) ಅರ್ಧ ಭಾಗವನ್ನು ಅಥವಾ ಅದನ್ನು ತುಸು ಕಡಿತ ಗೊಳಿಸಿ (ಅದಕ್ಕಿಂತ ತುಸು ಕಡಿಮೆ ಭಾಗವನ್ನು) –

[4] – ಅಥವಾ ಅದನ್ನು ಸ್ವಲ್ಪ ಹೆಚ್ಚಿಸಿಕೊಂಡು, (ನಮಾಝ್‌ನಲ್ಲಿ) ಕುರ್‌ಆನನ್ನು ನೆಮ್ಮದಿಯಿಂದ, ಕ್ರಮಬದ್ಧವಾಗಿ ಓದಿರಿ

[5] ನಾವು ನಿಮ್ಮ ಮೇಲೆ ಒಂದು ಘನವಾದ ಸಂದೇಶವನ್ನು ಇಳಿಸಲಿದ್ದೇವೆ

[6] ರಾತ್ರಿಯ ವೇಳೆ (ಆರಾಧನೆಗಾಗಿ ನಡೆಸುವ) ಜಾಗರಣೆಯು ಖಂಡಿತ ಚಿತ್ತಕ್ಕೆ ಸ್ಥಿರತೆಯನ್ನೊದಗಿಸುತ್ತದೆ ಮತ್ತು ಮಾತನ್ನು ಪರಿಣಾಮಕಾರಿಯಾಗಿಸುತ್ತದೆ

[7] ಹಗಲಲ್ಲಂತೂ ನಿಮ್ಮ ಮೇಲೆ ಹಲವಾರು ಹೊಣೆಗಾರಿಕೆಗಳಿರುತ್ತವೆ

[8] ನೀವು ನಿಮ್ಮ ಒಡೆಯನ ನಾಮವನ್ನು ಸ್ಮರಿಸಿರಿ ಮತ್ತು (ಇತರ) ಎಲ್ಲರನ್ನೂ ತೊರೆದು ಅವನಲ್ಲಿ ಒಲವು ತೋರಿರಿ

[9] ಅವನೇ ಪೂರ್ವ ಮತ್ತು ಪಶ್ಚಿಮಗಳ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಕಾರ್ಯಸಾಧಕನಾಗಿ ನೀವು ಅವನನ್ನೇ ನೆಚ್ಚಿಕೊಳ್ಳಿರಿ

[10] ಅವರಾಡುವ ಮಾತುಗಳ ವಿಷಯದಲ್ಲಿ ಸಂಯಮ ಪಾಲಿಸಿರಿ. ಮತ್ತು ಅತ್ಯುತ್ತಮ ರೀತಿಯಲ್ಲಿ ಅವರಿಂದ ಬೇರ್ಪಡಿರಿ

[11] ಬಿಟ್ಟು ಬಿಡಿರಿ ನನ್ನನ್ನು, ಮತ್ತು ಸತ್ಯವನ್ನು ತಿರಸ್ಕರಿಸುವ ಸ್ಥಿತಿವಂತರನ್ನು. (ಅವರನ್ನು ನಾನು ನೋಡಿಕೊಳ್ಳುವೆನು). ಮತ್ತು ಅವರಿಗೆ ಇನ್ನಷ್ಟು ಕಾಲಾವಕಾಶ ನೀಡಿರಿ

[12] ನಮ್ಮ ಬಳಿ (ಅವರಿಗಾಗಿ) ಕೈಕೋಳಗಳು ಮತ್ತು ಧಗಧಗಿಸುವ ಬೆಂಕಿ ಇದೆ

[13] ಗಂಟಲಲ್ಲೇ ಉಳಿಯುವ ಆಹಾರ ಮತ್ತು ಕಠಿಣ ಶಿಕ್ಷೆ ಇದೆ

[14] ಭೂಮಿ ಮತ್ತು ಪರ್ವತಗಳು ನಡುಗಲಾರಂಭಿಸುವ ಆ ದಿನ, ಪರ್ವತಗಳು ಕೇವಲ ಮರಳ ರಾಶಿಗಳಂತಾಗಿ ಬಿಡುವವು

[15] (ಜನರೇ,) ನಾವು ಫಿರ್‌ಔನನ ಕಡೆಗೆ ದೂತರನ್ನು ಕಳುಹಿಸಿದಂತೆ ನಿಮ್ಮ ಕಡೆಗೆ ದೂತರನ್ನು ಕಳುಹಿಸಿರುವೆವು. ಅವರು ನಿಮ್ಮ ವಿಷಯದಲ್ಲಿ ಸಾಕ್ಷಿಯಾಗುವರು

[16] ಫಿರ್‌ಔನನು ದೇವದೂತರಿಗೆ ಅವಿಧೇಯತೆ ತೋರಿದಾಗ ನಾವು ಅವನನ್ನು ಹಿಡಿದೆವು ಮತ್ತು ಭಾರೀ ಸಂಕಟಕ್ಕೆ ಸಿಲಕಿಸಿದೆವು

[17] ನೀವು ಧಿಕ್ಕರಿಸಿದರೆ, ಮಕ್ಕಳನ್ನು ವೃದ್ಧರಾಗಿಸುವ ಆ ದಿನ, ನೀವು ಹೇಗೆ ತಾನೇ ಸುರಕ್ಷಿತರಾಗಿ ಉಳಿಯುವಿರಿ

[18] ಅಂದು ಆಕಾಶವು ಬಿರಿದು ಬೀಳಲಿದೆ. ಇದು ಅವನ (ಅಲ್ಲಾಹನ) ವಾಗ್ದಾನ. ಇದು ಈಡೇರುವುದು ಖಚಿತ

[19] ಇದು (ಕುರ್‌ಆನ್) ಒಂದು ಉಪದೇಶ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ

[20] ನಿಮ್ಮ ಒಡೆಯನಿಗೆ ಖಂಡಿತ ತಿಳಿದಿದೆ; ನೀವು ಮತ್ತು ನಿಮ್ಮ ಜೊತೆಗಿರುವ ಕೆಲವರು, ಕೆಲವೊಮ್ಮೆ ರಾತ್ರಿಯ ಸುಮಾರು ಮೂರನೇ ಎರಡು ಭಾಗವನ್ನು, ಇನ್ನು ಕೆಲವೊಮ್ಮೆ ಅರ್ಧ ಭಾಗವನ್ನು ಮತ್ತೆ ಕೆಲವೊಮ್ಮೆ ಮೂರನೇ ಒಂದು ಭಾಗವನ್ನು (ನಮಾಝ್‌ನಲ್ಲಿ) ನಿಂತುಕೊಂಡು ಕಳೆಯುತ್ತೀರಿ. ಅಲ್ಲಾಹನೇ ರಾತ್ರಿ ಮತ್ತು ಹಗಲನ್ನು ರೂಪಿಸಿದವನು. ಅದನ್ನು (ಈ ಆದೇಶವನ್ನು) ಬಹುಕಾಲ ಪಾಲಿಸಲು ನಿಮಗೆ ಸಾಧ್ಯವಾಗದೆಂಬುದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ದಯೆ ತೋರಿರುವನು. ನೀವಿನ್ನು ಕುರ್‌ಆನ್‌ನಿಂದ, ಸುಲಭವಾಗಿ ಓದಲು ಸಾಧ್ಯವಾಗುವಷ್ಟನ್ನು ಓದಿರಿ. ನಿಮ್ಮಲ್ಲಿ ಕೆಲವರು ರೋಗಿಗಳಿದ್ದಾರೆ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸುತ್ತಾ ಭೂಮಿಯಲ್ಲಿ ಸಂಚರಿಸುತ್ತಿರುತ್ತಾರೆ ಮತ್ತು ಕೆಲವರು ಅಲ್ಲಾಹನ ಮಾರ್ಗದಲ್ಲಿ ಹೋರಾಟನಿರತರಾಗಿರುತ್ತಾರೆ. ಆದ್ದರಿಂದ ನೀವು, ಅದರಿಂದ (ಕುರ್‌ಆನಿನಿಂದ) ಸುಲಭವಾಗಿ ಓದಬಹುದಾದಷ್ಟನ್ನು ಓದಿರಿ ಹಾಗೂ ನಮಾಝನ್ನು ಪಾಲಿಸಿರಿ, ಝಕಾತನ್ನು ಪಾವತಿಸಿರಿ. ಮತ್ತು ಅಲ್ಲಾಹನಿಗೆ ಸತ್ಕರ್ಮಗಳ ಸಾಲವನ್ನು ನೀಡಿರಿ. ನೀವು ನಿಮಗಾಗಿ ಮುಂದೆ ಕಳುಹಿಸಿರುವ ಪ್ರತಿಯೊಂದು ಸತ್ಕರ್ಮವನ್ನು ಅಲ್ಲಾಹನ ಬಳಿ ಕಾಣುವಿರಿ. ಆಗ ಅದು ಇನ್ನಷ್ಟು ಉತ್ತಮ ರೂಪದಲ್ಲಿರುವುದು ಮತ್ತು ಭಾರೀ ಪ್ರತಿಫಲದಾಯಕವಾಗಿರುವುದು. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುತ್ತಾನೆ

ಕವಚ ಹೊದ್ದವನು

Surah 74

[1] ಹೊದ್ದುಕೊಂಡಿರುವವರೇ

[2] ಎದ್ದೇಳಿರಿ ಮತ್ತು ಎಚ್ಚರಿಸಿರಿ

[3] ನಿಮ್ಮ ಒಡೆಯನ ಹಿರಿಮೆಯನ್ನು ಕೊಂಡಾಡಿರಿ

[4] ನಿಮ್ಮ ವಸ್ತ್ರಗಳನ್ನು ಶುಚಿಯಾಗಿಡಿ

[5] ಮಾಲಿನ್ಯಗಳಿಂದ ದೂರ ಉಳಿಯಿರಿ

[6] (ಉಪಕೃತನಿಂದ) ಹೆಚ್ಚಿನದನ್ನು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ

[7] ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ

[8] (ಲೋಕಾಂತ್ಯದ) ಕಹಳೆಯನ್ನು ಊದಲಾದಾಗ

[9] ಆ ದಿನವು ಬಹಳ ಕಠಿಣ ದಿನವಾಗಿರುವುದು

[10] ಧಿಕ್ಕಾರಿಗಳ ಪಾಲಿಗೆ ಅದು ಸುಲಭವಾಗಿರಲಾರದು

[11] ಬಿಟ್ಟು ಬಿಡಿರಿ, ನನ್ನನ್ನು ಮತ್ತು ನಾನು ಸೃಷ್ಟಿಸುವಾಗ ಒಂಟಿಯಾಗಿದ್ದಾತನನ್ನು

[12] (ಮುಂದೆ) ನಾನು ಅವನಿಗೆ ಧಾರಾಳ ಸಂಪತ್ತನ್ನು ನೀಡಿದೆನು

[13] ಮತ್ತು ಸದಾ ಅವನ ಜೊತೆಗಿರುವ ಪುತ್ರರನ್ನು ನೀಡಿದೆನು

[14] ಮತ್ತು ಅವನಿಗೆ ಎಲ್ಲ ಬಗೆಯ ಸಾಧನಗಳನ್ನು ಒದಗಿಸಿದೆನು

[15] ಆದರೆ ಅವನು, ನಾನು ಮತ್ತಷ್ಟು ನೀಡಬೇಕೆಂದು ಆಸೆ ಪಡುತ್ತಿದ್ದಾನೆ

[16] ಹಾಗಾಗದು; ಅವನು ನಮ್ಮ ವಚನಗಳ ಶತ್ರುವಾಗಿರುವನು

[17] ನಾನು ಅವನನ್ನು (ನರಕದ) ದುರ್ಗಮ ಬೆಟ್ಟವನ್ನು ಹತ್ತಿಸಲಿರುವೆನು

[18] ಅವನು ಯೋಚಿಸಿದನು ಮತ್ತು ನಿರ್ಧರಿಸಿಕೊಂಡನು

[19] ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

[20] ಮತ್ತೆ, ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು

[21] ಮತ್ತೆ ಅವನು ನೋಡಿದನು

[22] ಮತ್ತೆ ಅವನು ಹುಬ್ಬೇರಿಸಿ ಮುಖ ತಿರುಚಿಕೊಂಡನು

[23] ಮತ್ತೆ ಅವನು ತಿರುಗಿ ನಿಂತನು ಮತ್ತು ಅಹಂಕಾರ ತೋರಿದನು

[24] ಮತ್ತೆ ಅವನು ಹೇಳಿದನು; ‘‘ಇದು ಪರಂಪರಾಗತ ಮಾಟಗಾರಿಕೆಯೇ ಹೊರತು ಬೇರೇನಲ್ಲ’’

[25] ‘‘ಇದು ಕೇವಲ ಮನುಷ್ಯನ ಮಾತೇ ಹೊರತು ಬೇರೇನಲ್ಲ’’

[26] ನಾವು ಅವನನ್ನು ‘ಸಕರ್’ಗೆ (ನರಕಕ್ಕೆ) ಎಸಯಲಿರುವೆವು

[27] ಸಕರ್ ಏನೆಂದು ನಿಮಗೇನು ಗೊತ್ತು

[28] ಅದು ಉಳಿಯಲೂ ಬಿಡದು ಅಳಿಯಲೂ ಬಿಡದು

[29] ಅದು ಮನುಷ್ಯನನ್ನು ಸುಟ್ಟು ಕರ್ರಗಾಗಿಸುವುದು

[30] ಅದರ ಮೇಲೆ ಹತ್ತೊಂಭತ್ತು ಮಂದಿ (ಕಾವಲುಗಾರರು) ಇರುವರು

[31] ನಾವು ಮಲಕ್‌ಗಳನ್ನೇ ನರಕದ ಕಾವಲುಗಾರರಾಗಿಸಿರುವೆವು ಮತ್ತು ಅವರ ಸಂಖ್ಯೆಯನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು – ಗ್ರಂಥದವರು ನಂಬಲೆಂದು ಹಾಗೂ ವಿಶ್ವಾಸಿಗಳ ವಿಶ್ವಾಸವು ಹೆಚ್ಚಲೆಂದು ಮತ್ತು ಗ್ರಂಥದವರಾಗಲಿ ವಿಶ್ವಾಸಿಗಳಾಗಲಿ ಸಂಶಯಕ್ಕೆ ತುತ್ತಾಗಬಾರದೆಂದು ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಧಿಕ್ಕಾರಿಗಳು ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎಂದು ಕೇಳಲೆಂದು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ನಿಮ್ಮ ಒಡೆಯನ ಪಡೆಗಳ ಕುರಿತು ಅವನ ಹೊರತು ಬೇರೆ ಯಾರಿಗೂ ತಿಳಿಯದು. ಇದು ಮಾನವರಿಗಾಗಿರುವ ಉಪದೇಶ ಮಾತ್ರವಾಗಿದೆ

[32] ಹಾಗೇನೂ ಅಲ್ಲ, ಚಂದ್ರನಾಣೆ

[33] ಮತ್ತು ಇರುಳು ಮರಳುವಾಗಿನ ಆಣೆ

[34] ಮತ್ತು ಮುಂಜಾವು ಬೆಳಗುವಾಗಿನಾಣೆ

[35] ಅದು (ನರಕವು) ಒಂದು ಮಹಾ ವಿಪತ್ತಾಗಿದೆ

[36] ಜನರು ಅಂಜ ಬೇಕಾದ ವಸ್ತುವಾಗಿದೆ

[37] ನಿಮ್ಮ ಪೈಕಿ ಇಷ್ಟ ಉಳ್ಳವನು ಮುಂದೆ ಹೋಗಲಿ ಅಥವಾ ಹಿಂದೆ ಉಳಿಯಲಿ

[38] ಪ್ರತಿಯೊಬ್ಬನೂ ತನ್ನ ಕರ್ಮಗಳ ಬದಲಿಗೆ ಒತ್ತೆಯಾಳಾಗಿರುವನು

[39] ಬಲಭಾಗದವರ ಹೊರತು

[40] ಅವರು ಸ್ವರ್ಗ ತೋಟಗಳಲ್ಲಿ ಇರುವರು ಮತ್ತು ಪ್ರಶ್ನಿಸುವರು

[41] ಅಪರಾಧಿಗಳೊಡನೆ

[42] ‘‘ನೀವೇಕೆ ನರಕಕ್ಕೆ ಹೋದಿರಿ?’’

[43] ಅವರು ಹೇಳುವರು; ‘‘ನಾವು ನಮಾಝ್ ಸಲ್ಲಿಸುವವರಾಗಿರಲಿಲ್ಲ’’

[44] ‘‘ಮತ್ತು ನಾವು ಬಡವರಿಗೆ ಉಣಿಸುತ್ತಿರಲಿಲ್ಲ’’

[45] ‘‘ನಿರರ್ಥಕ ಮಾತುಗಳನ್ನಾಡುವವರ ಜೊತೆಗಿದ್ದು ನಾವೂ ನಿರರ್ಥಕ ಮಾತುಗಳನ್ನಾಡುತ್ತಿದ್ದೆವು’’

[46] ‘‘ಮತ್ತು ನಾವು ಅಂತಿಮ ವಿಚಾರಣೆಯ ದಿನವನ್ನು ಅಲ್ಲಗಳೆಯುತ್ತಿದ್ದೆವು’’

[47] ‘‘ಕೊನೆಗೆ ಖಚಿತವಾದ ಆ ಸಂಭವವು (ಮರಣ) ನಮ್ಮ ಬಳಿಗೆ ಬಂದು ಬಿಟ್ಟಿತು’’

[48] ಶಿಫಾರಸುದಾರರ ಶಿಫಾರಸಿನಿಂದ ಅವರಿಗೆ ಯಾವ ಲಾಭವೂ ಆಗದು

[49] ಅವರಿಗೇನಾಗಿದೆ? ಉಪದೇಶವನ್ನು ಅವರೇಕೆ ಕಡೆಗಣಿಸುತ್ತಿದ್ದಾರೆ

[50] ಅವರು (ಸತ್ಯದ ಮುಂದೆ) ಕತ್ತೆಗಳಂತೆ ಬೆಚ್ಚಿ ಬೀಳುತ್ತಿದ್ದಾರೆ

[51] ಸಿಂಹಕ್ಕೆ ಅಂಜಿ ಓಡುತ್ತಿರುವ (ಕತ್ತೆಗಳಂತೆ)

[52] ನಿಜವಾಗಿ ಅವರ ಪೈಕಿ ಪ್ರತಿಯೊಬ್ಬರೂ, ತಮ್ಮ ಬಳಿಗೆ ತೆರೆದ ಗ್ರಂಥವೊಂದು (ಆಕಾಶದಿಂದ ಇಳಿದು) ಬರಬೇಕೆಂದು ಅಪೇಕ್ಷಿಸುತ್ತಿದ್ದಾರೆ

[53] ಹಾಗೇನೂ ಅಲ್ಲ. ನಿಜವಾಗಿ ಅವರಿಗೆ ಪರಲೋಕದ ಭಯವಿಲ್ಲ

[54] ಹಾಗೇನೂ ಅಲ್ಲ. ಇದು ಖಂಡಿತ ಒಂದು ಉಪದೇಶವಾಗಿದೆ

[55] ಇಷ್ಟವುಳ್ಳವನು ಇದನ್ನು ನೆನಪಿಡಲಿ

[56] ಅಲ್ಲಾಹನು ಇಚ್ಛಿಸುವವನು ಮಾತ್ರ ಇದನ್ನು ನೆನಪಿಡುವನು. ಅವನು (ಅಲ್ಲಾಹನು) ಭಕ್ತಿಗೆ ಅರ್ಹನು ಹಾಗೂ ಕ್ಷಮಿಸುವವನಾಗಿದ್ದಾನೆ

ಪುನರುತ್ಥಾನ

Surah 75

[1] ಅಲ್ಲ, ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ

[2] ಅಲ್ಲ, ನಾನು ದೂಷಿಸುವ ಚಿತ್ತದ ಆಣೆ ಹಾಕುತ್ತೇನೆ

[3] ಮನುಷ್ಯನೇನು, ಅವನ ಎಲುಬುಗಳನ್ನು ನಾವು (ಮತ್ತೆ) ಸಂಘಟಿಸಲಾರೆವೆಂದು ಭಾವಿಸಿದ್ದಾನೆಯೇ

[4] ಯಾಕಿಲ್ಲ? ನಾವಂತೂ ಅವನ ಬೆರಳ ತುದಿಗಳನ್ನೂ ಮತ್ತೆ ರಚಿಸಲು ಸಮರ್ಥರಾಗಿದ್ದೇವೆ

[5] ನಿಜವಾಗಿ, ಮನುಷ್ಯನು ತನ್ನ ಪಾಪಕೃತ್ಯಗಳಲ್ಲೇ ಮುಂದುವರಿಯ ಬಯಸುತ್ತಾನೆ

[6] ‘‘ಪುನರುತ್ಥಾನ ದಿನವು ಅದೆಂದು ಬಂದೀತು?’’ ಎಂದು ಅವನು (ವ್ಯಂಗ್ಯವಾಗಿ) ಪ್ರಶ್ನಿಸುತ್ತಾನೆ

[7] ಕಣ್ಣುಗಳು ಕೋರೈಸುವಾಗ

[8] ಚಂದ್ರಕ್ಕೆ ಗ್ರಹಣವಾದಾಗ

[9] ಮತ್ತು ಸೂರ್ಯ ಹಾಗೂ ಚಂದ್ರರನ್ನು ಒಂದು ಗೂಡಿಸಲಾದಾಗ

[10] ಆ ದಿನ ಮನುಷ್ಯನು ‘‘ಪಲಾಯನಕ್ಕೆ ದಾರಿ ಎಲ್ಲಿದೆ?’’ ಎಂದು ಕೇಳುವನು

[11] ಖಂಡಿತ ಇಲ್ಲ, ಎಲ್ಲೂ ಆಶ್ರಯವಿಲ್ಲ

[12] ಅಂದು ಆಶ್ರಯವಿರುವುದು ನಿಮ್ಮೊಡೆಯನ ಬಳಿಯಲ್ಲಿ ಮಾತ್ರ

[13] ಅಂದು ಅವನು ಮನುಷ್ಯನಿಗೆ ತಿಳಿಸುವನು, ಆತನು ಮುಂದೆ ಕಳಿಸಿದ್ದ ಮತ್ತು ಹಿಂದೆ ಬಿಟ್ಟು ಬಂದಿದ್ದ ಕರ್ಮಗಳ ಕುರಿತು

[14] ನಿಜವಾಗಿ ಮನುಷ್ಯನು ತನ್ನ ಕುರಿತು ತಾನೇ ಸಾಕ್ಷಿಯಾಗಿದ್ದಾನೆ

[15] ಅವನು ಅದೆಷ್ಟೇ ನೆಪಗಳನ್ನೊಡ್ಡಿದರೂ ಸರಿಯೇ

[16] (ದೂತರೇ,) ನೀವು ಇದಕ್ಕಾಗಿ (ದಿವ್ಯವಾಣಿಯನ್ನು ನೆನಪಿಟ್ಟುಕೊಳ್ಳಲಿಕ್ಕಾಗಿ) ಆತುರವಾಗಿ ನಿಮ್ಮ ನಾಲಿಗೆಯನ್ನು ಚಲಿಸಬೇಡಿ

[17] ಇದನ್ನು ಸಂಗ್ರಹಿಸುವ ಹಾಗೂ ಓದಿಸುವ ಹೊಣೆ ಖಂಡಿತ ನಮ್ಮ ಮೇಲಿದೆ

[18] ಆದ್ದರಿಂದ ನಾವು ಇದನ್ನು ಓದುವಾಗ, ನೀವು ಇದರ ಪಠಣವನ್ನು ಅನುಸರಿಸಿರಿ

[19] ಆ ಬಳಿಕ ಇದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ

[20] ಹಾಗೇನೂ ಅಲ್ಲ. (ಜನರೇ,) ನೀವು ತುರ್ತಾಗಿ ಸಿಗುವುದನ್ನು (ಇಹ ಲೋಕವನ್ನು) ಮಾತ್ರ ಪ್ರೀತಿಸುತ್ತೀರಿ

[21] ಮತ್ತು ಅನಂತರದ್ದನ್ನು (ಪರಲೋಕವನ್ನು) ಬಿಟ್ಟು ಬಿಡುತ್ತೀರಿ

[22] ಅಂದು ಹಲವು ಮುಖಗಳು ಅರಳಿರುವವು

[23] ಅವು ತಮ್ಮ ಒಡೆಯನೆಡೆಗೆ ನೋಡುತ್ತಿರುವವು

[24] ಮತ್ತೆ ಕೆಲವು ಮುಖಗಳು ಅಂದು ಬಾಡಿರುವವು

[25] ತಮ್ಮ ಜೊತೆ ಸೊಂಟ ಮುರಿಯುವಂತಹ ವ್ಯವಹಾರ ನಡೆಯುವುದನ್ನ್ನು ಅವು ನಿರೀಕ್ಷಿಸುತ್ತಿರುವವು

[26] ಹಾಗಲ್ಲ. ಜೀವವು ಕೊರಳನ್ನು ತಲುಪಿದಾಗ

[27] ಜನರು, ‘‘ಮಾಂತ್ರಿಕನೆಲ್ಲಿದ್ದಾನೆ?’’ ಎನ್ನುವರು

[28] ಅದು (ತನ್ನ) ವಿದಾಯದ ಸಮಯ ಎಂದು (ಸಾಯುತ್ತಿರುವವನಿಗೆ) ಅನಿಸುವುದು

[29] (ಸತ್ತವನ) ಮೊಣ ಕಾಲುಗಳನ್ನು ಸೇರಿಸಿ ಕಟ್ಟಲಾಗುವುದು

[30] ಅಂದು ನೀನು ನಿನ್ನ ಒಡೆಯನೆಡೆಗೆ ಹೊರಡ ಬೇಕಾಗುವುದು

[31] ಅವನು ಸತ್ಯವನ್ನು ಸಮರ್ಥಿಸಲಿಲ್ಲ ಮತ್ತು ನಮಾಝನ್ನು ಸಲ್ಲಿಸಲಿಲ್ಲ

[32] ಅವನು (ಸತ್ಯವನ್ನು) ತಿರಸ್ಕರಿಸಿದನು ಹಾಗೂ ಕಡೆಗಣಿಸಿದನು

[33] ಮತ್ತು ಹೆಮ್ಮೆಯಿಂದ ಬೀಗುತ್ತಾ ತನ್ನ ಮನೆಯವರ ಬಳಿಗೆ ಹೊರಟನು

[34] ಅಯ್ಯೋ ನಿನ್ನ ದುಸ್ಥಿತಿಯೇ

[35] ಅಯ್ಯೋ ನಿನ್ನ ದುಸ್ಥಿತಿಯೇ

[36] ಮನುಷ್ಯನೇನು, ತನ್ನನ್ನು ಹೀಗೆಯೇ ಬಿಟ್ಟು ಬಿಡಲಾಗುವುದೆಂದು ಕೊಂಡಿದ್ದಾನೆಯೇ

[37] ಅವನೇನು, ಕೇವಲ ಹರಿಸಿ ಬಿಡಲಾದ ಒಂದು ಹನಿ ವೀರ್ಯವಾಗಿರಲಿಲ್ಲವೇ

[38] ತರುವಾಯ ಅವನು ರಕ್ತ ಪಿಂಡವಾದನು. ಆ ಬಳಿಕ ಅವನು (ಅಲ್ಲಾಹನು) ಅವನನ್ನು ಸೃಷ್ಟಿಸಿದನು ಮತ್ತು ರೂಪಿಸಿದನು

[39] ಮುಂದೆ ಅದರಿಂದಲೇ ಪುರುಷ ಮತ್ತು ಸ್ತ್ರೀ ಎಂಬ ಇಬ್ಬರ ಜೋಡಿಯನ್ನುಂಟು ಮಾಡಿದನು

[40] ಅಂಥವನು (ಇಷ್ಟೆಲ್ಲಾ ಮಾಡಿದವನು) ಸತ್ತವರನ್ನು ಜೀವಂತಗೊಳಿಸಲು ಅಸಮರ್ಥನೇ

ಸಮಯ

Surah 76

[1] ಮನುಷ್ಯನು, ತಾನೊಂದು ಪ್ರಸ್ತಾಪ ಯೋಗ್ಯ ವಸ್ತುವೇ ಅಲ್ಲವಾಗಿದ್ದ ಕಾಲವೊಂದನ್ನು ಕಳೆದಿಲ್ಲವೇ

[2] ನಾವು ಮನುಷ್ಯನನ್ನು ಪರೀಕ್ಷಿಸಲಿಕ್ಕಾಗಿ, ಅವನನ್ನು ಮಿಶ್ರಿತ ವೀರ್ಯದಿಂದ ಸೃಷ್ಟಿಸಿರುವೆವು. ಮತ್ತು ನಾವು ಅವನನ್ನು ಕೇಳ ಬಲ್ಲವನಾಗಿಯೂ ನೋಡ ಬಲ್ಲವನಾಗಿಯೂ ಮಾಡಿರುವೆವು

[3] ನಾವೇ ಅವನಿಗೆ ದಾರಿಯನ್ನು ತೋರಿಸಿದೆವು. ಇನ್ನವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ

[4] ನಾವು ಧಿಕ್ಕಾರಿಗಳಿಗಾಗಿ ಸರಪಣಿಗಳನ್ನೂ ನೊಗಗಳನ್ನೂ ಭುಗಿಲೇಳುವ ಬೆಂಕಿಯನ್ನೂ ಸಿದ್ಧಪಡಿಸಿಟ್ಟಿರುವೆವು

[5] ಸಜ್ಜನರು (ಸ್ವರ್ಗದಲ್ಲಿ) ಪಾನ ಪಾತ್ರೆಯಿಂದ ಕರ್ಪೂರ ಮಿಶ್ರಿತ ಪಾನೀಯವೊಂದನ್ನು ಸೇವಿಸುತ್ತಿರುವರು

[6] ಆ ಚಿಲುಮೆಯಿಂದ ಅಲ್ಲಾಹನ ದಾಸರು ಕುಡಿಯುವರು ಮತ್ತು ಅದರಿಂದ ಹಲವು ಕಾಲುವೆಗಳನ್ನು ಹೊರಡಿಸುವರು

[7] (ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ

[8] ಅವರು ಅವನ (ಅಲ್ಲಾಹನ) ಮೆಚ್ಚುಗೆಗಾಗಿ ನಿರ್ಗತಿಕರಿಗೆ, ಅನಾಥರಿಗೆ ಮತ್ತು ಕೈದಿಗಳಿಗೆ ಉಣ ಬಡಿಸುತ್ತಾರೆ

[9] (ಮತ್ತು ಅವರು ಹೇಳುತ್ತಾರೆ;) ‘‘ನಾವು ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ನಿಮಗೆ ಉಣಿಸುತ್ತಿದ್ದೇವೆ. ನಿಮ್ಮಿಂದ ನಾವು ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ’’

[10] ‘‘ನಮಗೆ ನಮ್ಮೊಡೆಯನ ಕಡೆಯಿಂದ ಬರಲಿರುವ ಕರಾಳ ಹಾಗೂ ಕಠೋರ (ಪುನರುತ್ಥಾನ) ದಿನದ ಭಯವಿದೆ’’

[11] ಅಲ್ಲಾಹನು ಅವರನ್ನು ಆ ದಿನದ ಹಾನಿಯಿಂದ ರಕ್ಷಿಸುವನು. ಮತ್ತು ಅವರಿಗೆ ಉಲ್ಲಾಸ ಹಾಗೂ ಸಂತೋಷವನ್ನು ನೀಡುವನು

[12] ಅವರ ಸಹನೆಯ ಫಲವಾಗಿ ಅವರಿಗೆ ಸ್ವರ್ಗ ಹಾಗೂ ರೇಶ್ಮೆಯ ಉಡುಗೆಯನ್ನು ದಯಪಾಲಿಸುವನು

[13] ಅಲ್ಲಿ ಅವರು ಆಸನಗಳ ಮೇಲೆ ದಿಂಬುಗಳಿಗೆ ಒರಗಿ ಕೊಂಡಿರುವರು. ಅಲ್ಲಿ ಅವರು ತೀಕ್ಷ್ಣ ಬಿಸಿಲನ್ನಾಗಲಿ ತೀವ್ರ ಚಳಿಯನ್ನಾಗಲೀ ಕಾಣಲಾರರು

[14] ಅದರ (ಸ್ವರ್ಗ ತೋಟದ) ನೆರಳು ಅವರನ್ನು ಆವರಿಸಿರುವುದು. ಅದರಲ್ಲಿನ ಹಣ್ಣಿನ ಗೊಂಚಲುಗಳು ಅವರಿಗೆ ಎಟುಕುತ್ತಿರುವವು

[15] ಬೆಳ್ಳಿಯ ಪಾತ್ರೆಗಳನ್ನೂ ಶುಭ್ರವಾದ ಗಾಜಿನ ಪಾನ ಪಾತ್ರೆಗಳನ್ನೂ ಅವರ ಸುತ್ತ ಒಯ್ಯಲಾಗುವುದು

[16] ಅದು ಕಲಾತ್ಮಕವಾಗಿ ಅಲಂಕರಿಸಿದ ಬೆಳ್ಳಿಯ ಗಾಜಾಗಿರುವುದು ಮತ್ತು ಅವುಗಳನ್ನು ತುಂಬುವವರು ಸರಿಯಾದ ಪ್ರಮಾಣದಲ್ಲಿ ತುಂಬಿರುವರು

[17] ಅಲ್ಲಿ ಅವರಿಗೆ ಶುಂಠಿಯ ಮಿಶ್ರಣವಿರುವ ಪಾನೀಯಗಳನ್ನು ಕುಡಿಸಲಾಗುವುದು

[18] ಅಲ್ಲಿ ಸಲ್ ಸಬೀಲ್ ಎಂಬ ಹೆಸರಿನ ಒಂದು ಚಿಲುಮೆ ಇರುವುದು

[19] ಸದಾ ಬಾಲಕರಾಗಿರುವವರು ಅಲ್ಲಿ ಸಂಚರಿಸುತ್ತಿರುವರು. ನೀವು ಅವರನ್ನು ಕಂಡರೆ, ಅವರು ಚದುರಿದ ಮುತ್ತುಗಳೆಂದು ಭಾವಿಸುವಿರಿ

[20] ಅಲ್ಲಿ ನೀವು ಎಲ್ಲಿ ನೋಡಿದರೂ ಧಾರಾಳ ಅನುಗ್ರಹಗಳನ್ನು ಮತ್ತು ಒಂದು ಬೃಹತ್ ಸಾಮ್ರಾಜ್ಯವನ್ನೇ ಕಾಣುವಿರಿ

[21] ಅವರ ಮೇಲುಡುಪು ನುಣ್ಣಗೆಯ ಹಸಿರು ರೇಷ್ಮೆ ಹಾಗೂ ಉಣ್ಣೆಯದ್ದಾಗಿರುವುದು ಮತ್ತು ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರ ಒಡೆಯನು ಅವರಿಗೆ ಒಂದು ನಿರ್ಮಲ ಪಾನೀಯವನ್ನು ಕುಡಿಸುವನು

[22] ‘‘ಇದು ನಿಮ್ಮ ಪ್ರತಿಫಲ. ನಿಮ್ಮ ಶ್ರಮವು ಸ್ವೀಕೃತವಾಗಿದೆ’’ (ಎಂದು ಅವರೊಡನೆ ಹೇಳಲಾಗುವುದು)

[23] ದೂತರೇ, ನಾವು ಈ ಕುರ್‌ಆನನ್ನು ಹಂತ ಹಂತವಾಗಿ ನಿಮಗೆ ಇಳಿಸಿ ಕೊಟ್ಟಿರುವೆವು

[24] ನೀವು ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ ಮತ್ತು ಅವರ (ಧಿಕ್ಕಾರಿಗಳ) ಪೈಕಿ ಯಾವುದೇ ಪಾಪಿಯ ಅಥವಾ ಕೃತಘ್ನನ ಮಾತನ್ನು ಅನುಸರಿಸಬೇಡಿರಿ

[25] ಸಂಜೆ ಮತ್ತು ಮುಂಜಾನೆಯ ವೇಳೆ ನೀವು ನಿಮ್ಮ ಒಡೆಯನ ನಾಮ ಸ್ಮರಣೆ ಮಾಡಿರಿ

[26] ಮತ್ತು ಇರುಳಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಹಾಗೂ ಇರುಳಿನ ಧೀರ್ಘ ಭಾಗದಲ್ಲಿ ಅವನ ಪಾವಿತ್ರವನ್ನು ಜಪಿಸಿರಿ

[27] ಅವರು ಬೇಗನೆ ಸಿಗುವುದನ್ನು (ಇಹಲೋಕವನ್ನು) ಪ್ರೀತಿಸುತ್ತಾರೆ ಮತ್ತು ತಮ್ಮ ಮುಂದಿರುವ (ಲೋಕಾಂತ್ಯದ) ಮಹಾ ದಿನವನ್ನು ಕಡೆಗಣಿಸಿ ಬಿಡುತ್ತಾರೆ

[28] ನಾವೇ ಅವರನ್ನು ಸೃಷ್ಟಿಸಿರುವೆವು ಮತ್ತು ಅವರ ಶರೀರದ ಗಂಟುಗಳನ್ನು ಬಲ ಪಡಿಸಿರುವೆವು ಮತ್ತು ನಾವು ಬಯಸಿದರೆ ಅವರ ಬದಲಿಗೆ ಅವರಂತಹ ಇತರರನ್ನು ತರಬಲ್ಲೆವು

[29] ಇದೊಂದು ಉಪದೇಶವಾಗಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ

[30] ಅಲ್ಲಾಹನು ಇಚ್ಛಿಸುವ ತನಕ ನಿಮ್ಮ ಯಾವ ಇಚ್ಛೆಯೂ ನಡೆಯದು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುತ್ತಾನೆ

[31] ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹದೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗಾಗಿ ಅವನು ಕಠಿಣ ಶಿಕ್ಷೆಯನ್ನು ಸಿದ್ದವಾಗಿಟ್ಟಿದ್ದಾನೆ

ರಾಯಭಾರಿಗಳು

Surah 77

[1] ಮೃದುವಾಗಿ ಚಲಿಸುವ ವಸ್ತುವಿನ (ವಾಯುವಿನ) ಆಣೆ

[2] ಕ್ರಮೇಣ ಅದು ಬಿರುಸಾಗಿ ಬಿಡುತ್ತದೆ

[3] (ಮೋಡಗಳನ್ನು) ವಿವಿಧೆಡೆಗಳಿಗೆ ತಲುಪಿಸುತ್ತದೆ

[4] ಕೊನೆಗೆ ಅವುಗಳನ್ನು ಚದುರಿಸಿ ಬಿಡುತ್ತದೆ

[5] ದಿವ್ಯ ಉಪದೇಶವನ್ನು ತಲುಪಿಸುವವರ (ಮಲಕ್‌ಗಳ) ಆಣೆ

[6] ಪುರಾವೆಯ ರೂಪದಲ್ಲಾಗಲೀ ಎಚ್ಚರಿಕೆಯ ರೂಪದಲ್ಲಾಗಲೀ

[7] ನಿಮಗೇನನ್ನು ವಾಗ್ದಾನ ಮಾಡಲಾಗಿದೆಯೋ ಅದು ಖಂಡಿತ ಸಂಭವಿಸಲಿದೆ

[8] ನಕ್ಷತ್ರಗಳು ನಿಸ್ತೇಜವಾದಾಗ

[9] ಆಕಾಶವು ಬಿರಿದು ಬಿಟ್ಟಾಗ

[10] ಪರ್ವತಗಳು (ಚೂರು ಚೂರಾಗಿ) ಹಾರಾಡುತ್ತಿರುವಾಗ

[11] ದೇವ ದೂತರುಗಳನ್ನು ಒಟ್ಟು ಸೇರಿಸಲಾದಾಗ

[12] (ಅವರ ವಿಚಾರಣೆಯನ್ನು) ಯಾವ ದಿನಕ್ಕಾಗಿ ಮುಂದೂಡಲಾಗಿದೆ

[13] (ಅಂತಿಮ) ತೀರ್ಪಿನ ದಿನಕ್ಕಾಗಿ

[14] ಆ ತೀರ್ಪಿನ ದಿನ ಏನೆಂಬುದು ನಿಮಗೇನು ಗೊತ್ತು

[15] ಅಂದು ಧಿಕ್ಕಾರಿಗಳಿಗೆ ವಿನಾಶವಿದೆ

[16] ನಾವೇನು ಹಿಂದಿನವರನ್ನು ನಾಶ ಮಾಡಿಲ್ಲವೇ

[17] ಆ ಬಳಿಕ ನಾವು ಮುಂದಿನವರನ್ನು ಅವರ ಹಿಂದೆ ನಡೆಸಿದೆವು

[18] ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ

[19] ಅಂದು ಧಿಕ್ಕಾರಿಗಳಿಗೆ ವಿನಾಶವಿದೆ

[20] ನಾವೇನು ನಿಮ್ಮನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿಲ್ಲವೇ

[21] ತರುವಾಯ ನಾವು ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿಟ್ಟೆವು

[22] ಒಂದು ನಿರ್ದಿಷ್ಟ ಕಾಲದವರೆಗೆ

[23] ತರುವಾಯ ನಾವು (ಅದರ) ಪ್ರಮಾಣವನ್ನು ನಿಶ್ಚಯಿಸಿದೆವು. ನಾವು ಅತ್ಯುತ್ತಮವಾಗಿ ಪ್ರಮಾಣವನ್ನು ನಿಶ್ಚಯಿಸುತ್ತೇವೆ

[24] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[25] ನಾವು ಭೂಮಿಯನ್ನು ಬಾಚುವ ವಸ್ತುವಾಗಿಸಿಲ್ಲವೇ –

[26] – ಜೀವಿಸಿರುವವರನ್ನೂ ಸತ್ತವರನ್ನೂ

[27] ನಾವು ಅದರೊಳಗೆ ಎತ್ತರದ ಪರ್ವತಗಳನ್ನಿಟ್ಟಿರುವೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಸಿರುವೆವು

[28] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[29] ಇದೀಗ, ನೀವು ಯಾವುದನ್ನು ತಿರಸ್ಕರಿಸುತ್ತಲಿದ್ದಿರೋ ಅದರೆಡೆಗೆ ನಡೆಯಿರಿ

[30] ನಡೆಯಿರಿ, ಮೂರು ಮಜಲುಗಳಿರುವ ಕತ್ತಲೆಯೆಡೆಗೆ

[31] ಅಲ್ಲಿ ನೆರಳು ಇರದು ಮತ್ತು ಅಗ್ನಿಯ ಆಲಿಂಗನದಿಂದ ರಕ್ಷೆಯೂ ಇರದು

[32] ಅದು ಕೋಟೆಗಳ ಗಾತ್ರದ ಬೆಂಕಿಯ ಕಿಡಿಗಳನ್ನು ಸುರಿಸುತ್ತಿರುವುದು

[33] ಅವು ಹಳದಿ ಒಂಟೆಗಳಂತಿರುವವು

[34] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[35] ಅದು ಅವರಿಗೆ ಮಾತನಾಡಲಾಗದ ದಿನವಾಗಿರುವುದು

[36] ನೆಪಗಳನ್ನೊಡ್ಡಲು, ಅಂದು ಅವರಿಗೆ ಅನುಮತಿ ಸಿಗದು

[37] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[38] ಇದು ಅಂತಿಮ ತೀರ್ಪಿನ ದಿನ. (ಇಂದು) ನಾವು ನಿಮ್ಮನ್ನೂ ನಿಮ್ಮ ಹಿಂದಿನವರನ್ನೂ ಒಟ್ಟು ಸೇರಿಸಿರುವೆವು

[39] ನಿಮ್ಮ ಬಳಿ ಏನಾದರೂ ಸಂಚು ಇದ್ದರೆ ಹೂಡಿ ನೋಡಿರಿ

[40] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[41] (ಅಂದು) ಧರ್ಮನಿಷ್ಠರು ನೆರಳುಗಳಲ್ಲಿರುವರು ಮತ್ತು (ಅವರ ಬಳಿ) ಚಿಲುಮೆಗಳಿರುವವು

[42] ಹಾಗೂ ಅವರು ಮೆಚ್ಚುವ ಹಣ್ಣು ಹಂಪಲುಗಳಿರುವವು

[43] ‘‘ನೀವು ಮಾಡಿದ್ದ ಕರ್ಮಗಳ ಫಲವಾಗಿ, ಧಾರಾಳವಾಗಿ ತಿನ್ನಿರಿ ಮತ್ತು ಕುಡಿಯಿರಿ’’ (ಎಂದು ಅವರೊಡನೆ ಹೇಳಲಾಗುವುದು)

[44] ಸಜ್ಜನರನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ

[45] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[46] (ಧಿಕ್ಕಾರಿಗಳೇ, ಇಹಲೋಕದಲ್ಲಿ) ಅಲ್ಪಾವಧಿಗಾಗಿ ತಿನ್ನಿರಿ ಮತ್ತು ಕುಡಿಯಿರಿ – ನೀವು ಖಂಡಿತ ಅಪರಾಧಿಗಳಾಗಿರುವಿರಿ

[47] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ

[48] ‘‘(ಅಲ್ಲಾಹನ ಮುಂದೆ) ಬಾಗಿರಿ’’ ಎಂದು ಅವರೊಡನೆ ಹೇಳಿದಾಗ ಅವರು ಬಾಗುವುದಿಲ್ಲ

[49] ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ. 50. ಇದರ (ಕುರ್‌ಆನಿನ) ಬಳಿಕ, ಅವರಿನ್ನು ಯಾವ ಮಾತನ್ನು ತಾನೇ ನಂಬುವರು

[50] ಅವರು ಯಾವುದರ ಕುರಿತು ವಿಚಾರಿಸುತ್ತಿದ್ದಾರೆ

ಸುದ್ದಿ

Surah 78

[1] ಆ ಮಹಾ ವಾರ್ತೆಯ ಕುರಿತೇ

[2] ಆ ವಿಷಯದಲ್ಲಿ ಅವರ ನಿಲುವುಗಳು ತೀರಾ ಭಿನ್ನವಾಗಿವೆ

[3] ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ

[4] ಮತ್ತೆ, ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ

[5] ಭೂಮಿಯನ್ನು ನಾವು ಹಾಸಿಗೆಯಾಗಿಸಿಲ್ಲವೇ

[6] ಮತ್ತು ಪರ್ವತಗಳನ್ನು ಮೊಳೆಗಳಾಗಿಸಿಲ್ಲವೇ

[7] ಮತ್ತು ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿರುವೆವು

[8] ಮತ್ತು ನಾವು ನಿಮ್ಮ ನಿದ್ರೆಯನ್ನು (ನಿಮ್ಮ ಪಾಲಿಗೆ) ವಿಶ್ರಾಂತಿಯಾಗಿಸಿರುವೆವು

[9] ಮತ್ತು ನಾವು ರಾತ್ರಿಯನ್ನು ಮರೆಯಾಗಿಸಿರುವೆವು

[10] ಮತ್ತು ನಾವು ಹಗಲನ್ನು ಸಂಪಾದನೆಯ ಸಮಯವಾಗಿಸಿರುವೆವು

[11] ಮತ್ತು ನಿಮ್ಮ ಮೇಲೆ ಬಲಿಷ್ಠವಾದ ಏಳು ವಸ್ತು (ಆಕಾಶ)ಗಳನ್ನು ನಿರ್ಮಿಸಿರುವೆವು

[12] ಮತ್ತು ನಾವು ಸೂರ್ಯನನ್ನು ಒಂದು ಉಜ್ವಲ ಜ್ಯೋತಿಯಾಗಿಸಿರುವೆವು

[13] ಮತ್ತು ನಾವು ಮೋಡಗಳಿಂದ ಧಾರಾಕಾರ ನೀರನ್ನು ಸುರಿಸಿರುವೆವು

[14] ಆ ಮೂಲಕ ವಿವಿಧ ಬೆಳೆ ಹಾಗೂ ತರಕಾರಿಗಳನ್ನು ಬೆಳೆಸಲಿಕ್ಕಾಗಿ

[15] ಮತ್ತು ದಟ್ಟವಾದ ತೋಟಗಳನ್ನು ಬೆಳೆಸಲಿಕ್ಕಾಗಿ

[16] ತೀರ್ಪಿನ ದಿನವು ಈಗಾಗಲೇ ನಿಶ್ಚಿತವಾಗಿದೆ

[17] ಕಹಳೆಯನ್ನು ಊದುವ ದಿನ ನೀವು ದಂಡು ದಂಡುಗಳಾಗಿ ಬರುವಿರಿ

[18] ಆಕಾಶವನ್ನು ತೆರೆದು ಬಿಡಲಾಗುವುದು ಮತ್ತು ಅದರಲ್ಲಿ (ಎಲ್ಲೆಲ್ಲೂ) ಬಾಗಿಲುಗಳೇ ಇರುವವು

[19] ಮತ್ತು ಪರ್ವತಗಳನ್ನು ನಡೆಸಲಾಗುವುದು, ಅವು ಮರಳಿನಂತಾಗಿ ಬಿಡುವವು

[20] ಖಂಡಿತವಾಗಿಯೂ ನರಕವು ಹೊಂಚು ಹಾಕುತ್ತಿದೆ

[21] ಅದುವೇ ವಿದ್ರೋಹಿಗಳ ನೆಲೆಯಾಗುವುದು

[22] ಯುಗ ಯುಗಾಂತರ ಕಾಲ ಅವರು ಅದರಲ್ಲಿ ಬಿದ್ದು ಕೊಂಡಿರುವರು

[23] ಅಲ್ಲಿ ಅವರು ಯಾವುದೇ ತಂಪು ವಸ್ತುವಿನ ಅಥವಾ ಯಾವುದೇ ಪಾನೀಯದ ರುಚಿ ಕಾಣಲಾರರು

[24] ಅಲ್ಲಿ ಅವರಿಗೆ ಸಿಗುವುದು, ಕುದಿಯುವ ನೀರು ಮತ್ತು ಹರಿಯುವ ಕೀವು ಮಾತ್ರ

[25] ಇದು ಸೂಕ್ತ ಪ್ರತಿಫಲವಾಗಿದೆ

[26] ಅವರು (ಪರಲೋಕದ) ವಿಚಾರಣೆಯನ್ನು ನಿರೀಕ್ಷಿಸಿಯೇ ಇರಲಿಲ್ಲ

[27] ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸುತ್ತಿದ್ದರು

[28] ನಾವು ಎಲ್ಲವನ್ನೂ ಬರೆದು ಭದ್ರವಾಗಿಟ್ಟಿರುವೆವು

[29] ಇದೀಗ ಸವಿಯಿರಿ. ಇನ್ನು ನಿಮ್ಮ ಪಾಲಿಗೆ ಶಿಕ್ಷೆಯ ಹೊರತು ಬೇರೇನೂ ಹೆಚ್ಚದು

[30] ಧರ್ಮ ನಿಷ್ಠರಿಗೆ ಖಂಡಿತ ವಿಜಯ ಸಿಗಲಿದೆ

[31] ತೋಟಗಳು ಮತ್ತು ದ್ರಾಕ್ಷಿಗಳು

[32] ಮತ್ತು ಸಹ ವಯಸ್ಕ ಯುವತಿಯರು

[33] ತುಂಬಿ ತುಳುಕುವ ಪಾನ ಪಾತ್ರೆಗಳು (ಅವರಿಗಾಗಿ ಕಾದಿವೆ)

[34] ಅಲ್ಲಿ ಅವರು ಯಾವುದೇ ಅಸಭ್ಯ ಮಾತನ್ನಾಗಲೀ ಸುಳ್ಳನ್ನಾಗಲೀ ಕೇಳಲಾರರು

[35] ಇದು ಸತ್ಫಲವಾಗಿದೆ, ನಿಮ್ಮ ಒಡೆಯನ ಕಡೆಯಿಂದ. (ಅಲ್ಲದೆ ನಿಮಗಾಗಿ) ಧಾರಾಳ ಉಡುಗೊರೆಗಳಿವೆ

[36] ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು, ಅವನು ಪರಮ ದಯಾಮಯನು. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ

[37] ರೂಹ್ (ಜಿಬ್‌ರೀಲ್) ಮತ್ತು ಇತರ ಮಲಕ್‌ಗಳು ಸಾಲಾಗಿ ನಿಲ್ಲುವ ಆ ದಿನ, ಆ ಪರಮ ದಯಾಮಯನ ಅಪ್ಪಣೆ ಪಡೆದವರು ಹಾಗೂ ಸರಿಯಾದುದನ್ನು ಹೇಳುವವರ ಹೊರತು ಯಾರಿಗೂ ಮಾತನಾಡಲು ಸಾಧ್ಯವಾಗದು

[38] ಆ ದಿನವು ನಿಜಕ್ಕೂ ಬರಲಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಬಳಿ ಆಶ್ರಯವನ್ನು ಪಡೆದು ಕೊಳ್ಳಲಿ

[39] ನಾನಂತೂ ನಿಮ್ಮನ್ನು, ಶೀಘ್ರವೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಸುತ್ತಿರುವೆನು. ಅಂದು ಪ್ರತಿಯೊಬ್ಬನೂ ತನ್ನ ಕೈಗಳು ಮುಂದೆ ಕಳಿಸಿರುವುದನ್ನು (ಕರ್ಮವನ್ನು) ಕಾಣುವನು ಮತ್ತು ಧಿಕ್ಕಾರಿಯು, ‘‘ಅಯ್ಯೋ, ನಾನು ಮಣ್ಣಾಗಿದ್ದರೆ ಚೆನ್ನಾಗಿತ್ತು’’ ಎನ್ನುವನು

[40] ಮುಳುಗಿ ಏಳುವವರ ಆಣೆ

ಸೆಳೆದು ತರುವವರು

Surah 79

[1] ಮೃದುವಾಗಿ ಬಿಡಿಸುವವರ ಆಣೆ

[2] ತೇಲುತ್ತಾ ಚಲಿಸುವವರ ಆಣೆ

[3] ಹುರುಪಿನಿಂದ ಮುನ್ನುಗ್ಗುವವರಾಣೆ

[4] (ಜಗತ್ತಿನ)ವ್ಯವಹಾರಗಳನ್ನು ನೋಡಿ ಕೊಳ್ಳುವವರಾಣೆ

[5] ಭೂಮಿಯು ಅಲ್ಲೋಲ ಕಲ್ಲೋಲವಾಗುವ ದಿನ

[6] ಅದರ ಬೆನ್ನಿಗೇ ಮತ್ತೆ ಅಲ್ಲೋಲ ಕಲ್ಲೋಲವಾಗುವುದು

[7] ಅಂದು ಮನಸ್ಸುಗಳು ಭಯ ಭೀತವಾಗಿರುವವು

[8] ದೃಷ್ಟಿಗಳು ಭಯದಿಂದ ತಗ್ಗಿರುವವು

[9] (ಧಿಕ್ಕಾರಿಗಳು) ಕೇಳುತ್ತಾರೆ ನಾವು ಮರಳಿ ಮತ್ತೆ ಬರಲಿಕ್ಕುಂಟೇ

[10] ನಾವು ಟೊಳ್ಳು ಮೂಳೆಗಳಾದ ಬಳಿಕ (ಮರಳಿ ಬರುವುದೇ)

[11] ಆ ಮರಳಿಕೆಯು ತೀರಾ ನಷ್ಟದ ವ್ಯವಹಾರವಾಗಿದೆ ಎಂದು ಅವರು ಹೇಳುತ್ತಾರೆ

[12] ಅದೊಂದು ಭೀಕರ ಶಬ್ದವಾಗಿರುವುದು

[13] ಅದರ ಬೆನ್ನಿಗೇ ಅವರೆಲ್ಲಾ ಒಂದು ಬಯಲಲ್ಲಿ ಸೇರುವರು

[14] ನಿಮಗೆ ಮೂಸಾರ ವೃತ್ತಾಂತವು ತಲುಪಿದೆಯೇ

[15] ಅವರ ಒಡೆಯನು ಅವರನ್ನು ಪವಿತ್ರ ‘‘ತುವಾ’’ ಬೆಟ್ಟದಿಂದ ಕರೆದು (ಹೇಳಿದನು)

[16] ಹೋಗಿರಿ ಫಿರ್‌ಔನ್‌ನೆಡೆಗೆ, ಅವನು ವಿದ್ರೋಹಿಯಾಗಿದ್ದಾನೆ

[17] ಮತ್ತು ಅವನೊಡನೆ ಹೇಳಿರಿ – ನೀನು ನಿರ್ಮಲನಾಗ ಬಯಸುವೆಯಾ

[18] ನಾನು ನಿನಗೆ ನಿನ್ನೊಡೆಯನ ಕಡೆಗಿರುವ ದಾರಿಯನ್ನು ತೋರಬಲ್ಲೆನು – ನೀನು ಭಯಭಕ್ತಿ ಉಳ್ಳವನಾಗಬೇಕೆಂದು

[19] ಅವರು ಅವನಿಗೆ ದೊಡ್ಡ ಪುರಾವೆಯನ್ನು ತೋರಿಸಿದರು

[20] ಆದರೆ ಅವನು ತಿರಸ್ಕರಿಸಿದನು ಮತ್ತು ಅವರ ಆದೇಶವನ್ನು ಮೀರಿದನು

[21] ಆ ಬಳಿಕ ಅವನು ಮರಳಿ ಸಂಚು ಹೂಡ ತೊಡಗಿದನು

[22] ಮತ್ತು ಜನರನ್ನು ಸೇರಿಸಿ ಕರೆ ಕೊಟ್ಟನು

[23] ಮತ್ತು ನಾನೇ ನಿಮ್ಮ ಅತಿ ದೊಡ್ಡ ಒಡೆಯನು ಎಂದು ಘೋಷಿಸಿದನು

[24] ಕೊನೆಗೆ ಅಲ್ಲಾಹನು ಅವನನ್ನು ಹಿಡಿದು ಪರಲೋಕದ ಮತ್ತು ಇಹಲೋಕದ ಶಿಕ್ಷೆಗೆ ಗುರಿಪಡಿಸಿದನು

[25] ಭಯಭಕ್ತಿ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ

[26] ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಅಕಾಶಗಳನ್ನೋ? ಅವನು ಅವುಗಳನ್ನು ರಚಿಸಿರುವನು

[27] ಅವನು ಅವುಗಳನ್ನು ಎತ್ತರಕ್ಕೇರಿಸಿರುವನು ಹಾಗೂ ಅವುಗಳಿಗೆ ರೂಪ ಕೊಟ್ಟಿರುವನು

[28] ಅವನು ಇರುಳನ್ನು ಕತ್ತಲಾಗಿಸಿರುವನು ಮತ್ತು ಬಿಸಿಲನ್ನು ಹೊರಡಿಸಿರುವನು

[29] ತರುವಾಯ ಭೂಮಿಯನ್ನು ಹರಡಿರುವನು

[30] ಅವನು ಅದರಿಂದ ನೀರನ್ನು ಹೊರಡಿಸಿ ಮೇವನ್ನು ಬೆಳೆಸಿರುವನು

[31] ಮತ್ತು ಅದರ ಮೇಲೆ ಪರ್ವತಗಳನ್ನು ಹೊರಿಸಿರುವನು

[32] ಇದೆಲ್ಲಾ ನಿಮ್ಮ ಲಾಭಕ್ಕಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ

[33] ಆ ಮಹಾ ವಿಪತ್ತು ಬಂದು ಬಿಟ್ಟಾಗ

[34] ಅಂದು ಮನುಷ್ಯನು ತಾನು ಮಾಡಿದ್ದೆಲ್ಲವನ್ನೂ ಸ್ಮರಿಸಿ ಕೊಳ್ಳುವನು

[35] ಮತ್ತು ನೋಡುವವರ ಮುಂದೆ ನರಕವನ್ನು ತಂದಿಡಲಾಗುವುದು

[36] ವಿದ್ರೋಹ ವೆಸಗಿದವನು

[37] ಮತ್ತು ಇಹಲೋಕ ಬದುಕಿಗೆ ಪ್ರಾಶಸ್ತ್ಯ ಕೊಟ್ಟವನು –

[38] – ನರಕವೇ ಅವನ ನೆಲೆಯಾಗಿರುವುದು

[39] ಇನ್ನು ತನ್ನ ಒಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನು ಮತ್ತು ತನ್ನ ಸ್ವೇಚ್ಛೆಯನ್ನು ನಿಯಂತ್ರಿಸುತ್ತಿದ್ದವನು –

[40] – ಸ್ವರ್ಗವೇ ಅವನ ನೆಲೆಯಾಗಿರುವುದು

[41] (ಪುನರುತ್ಥಾನದ) ಆ ಘಳಿಗೆಯು ಎಂದು ಬರುವುದು? ಎಂದು ಅವರು ಪ್ರಶ್ನಿಸುತ್ತಾರೆ

[42] ಅದನ್ನು ಪ್ರಸ್ತಾಪಿಸಿ ನಿಮಗೆ ಏನಾಗಬೇಕಾಗಿದೆ

[43] ಆ ಕುರಿತು ಅಂತಿಮ ಜ್ಞಾನವು ನಿಮ್ಮೊಡೆಯನ ಬಳಿ ಇದೆ

[44] (ದೂತರೇ,) ನೀವಂತು ಭಯ ಭಕ್ತಿ ಉಳ್ಳವರನ್ನು ಎಚ್ಚರಿಸುವವರು ಮಾತ್ರ

[45] ಅವರು ಅದನ್ನು (ಪರಲೋಕವನ್ನು) ಕಣ್ಣಾರೆ ಕಂಡಾಗ, ತಾವು (ಇಹಲೋಕದಲ್ಲಿ) ಕಳೆದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಕೊಳ್ಳುವರು

[46] ಅವರು (ದೂತರು) ಅತೃಪ್ತರಾದರು ಮತ್ತು ಮುಖ ತಿರುಗಿಸಿಕೊಂಡರು –

ಅವರು ಹುಬ್ಬು ಗಂಟಿಕ್ಕಿದರು

Surah 80

[1] – ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು

[2] (ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು

[3] ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ

[4] ಉಪದೇಶದಿಂದ ಲಾಭವಾಗ ಬಹುದು

[5] (ನಿಮ್ಮನ್ನು) ಕಡೆಗಣಿಸುವವನು

[6] ಅವನೆಡೆಗೆ ನೀವು ಗಮನ ಹರಿಸುತ್ತೀರಿ

[7] ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ

[8] ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ

[9] ಅವನು ಭಯಭಕ್ತಿ ಉಳ್ಳವನು

[10] ನೀವು ಅವನನ್ನು ನಿರ್ಲಕ್ಷಿಸುತ್ತೀರಿ

[11] ಹಾಗಲ್ಲ, ಇದು (ಕುರ್‌ಆನ್) ಒಂದು ಉಪದೇಶವಾಗಿದೆ

[12] ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ

[13] ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ

[14] ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ

[15] ಅದು ಬರೆಯುವವರ ಕೈಯಲ್ಲಿದೆ

[16] ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು

[17] ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು

[18] ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ

[19] ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು

[20] ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು

[21] ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು

[22] ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು

[23] ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ

[24] ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ

[25] ನೀರು ಸುರಿಸಿದವರು ನಾವು

[26] ಭೂಮಿಯನ್ನು ಸೀಳಿದವರು ನಾವು

[27] ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು

[28] ದ್ರಾಕ್ಷಿಗಳು ಹಾಗೂ ತರಕಾರಿಗಳು

[29] ಝೈತೂನ್ ಹಾಗೂ ಖರ್ಜೂರಗಳು

[30] ದಟ್ಟವಾದ ತೋಟಗಳು

[31] ಹಣ್ಣುಗಳು ಹಾಗೂ ಮೇವು

[32] ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು

[33] ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ

[34] ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು

[35] ತನ್ನ ತಂದೆಯಿಂದಲೂ ತಾಯಿಯಿಂದಲೂ

[36] ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು)

[37] ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು

[38] ಅಂದು ಕೆಲವು ಮುಖಗಳು ಉಜ್ವಲವಾಗಿರುವವು

[39] ನಗುತ್ತಾ ಸಂಭ್ರಮಿಸುತ್ತಿರುವವು

[40] ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು

[41] (ಮತ್ತು ) ಕರಾಳತೆ ಕವಿದಿರುವುದು

[42] ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು

ಉರುಳಿಸುವುದು

Surah 81

[1] ಸೂರ್ಯನನ್ನು ಮಡಚಿ ಬಿಡಲಾದಾಗ

[2] ನಕ್ಷತ್ರಗಳು ನಿಸ್ತೇಜವಾದಾಗ

[3] ಪರ್ವತಗಳನ್ನು ಚಲಾಯಿಸಲಾದಾಗ

[4] ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ

[5] ಕಾಡು ಪ್ರಾಣಿಗಳನ್ನೆಲ್ಲಾ ಒಟ್ಟು ಸೇರಿಸಲಾದಾಗ

[6] ಸಮುದ್ರಗಳನ್ನು ಉಕ್ಕೇರಿಸಲಾದಾಗ

[7] ಜೀವಗಳನ್ನು (ಶರೀರಗಳೊಂದಿಗೆ) ಜೋಡಿಸಲಾದಾಗ

[8] ಜೀವಂತ ಹೂಳಲ್ಪಟ್ಟವಳೊಡನೆ ಪ್ರಶ್ನಿಸಲಾದಾಗ –

[9] ಯಾವ ಪಾಪಕ್ಕಾಗಿ ಆಕೆಯನ್ನು ಕೊಲ್ಲಲಾಯಿತೆಂದು

[10] ಕರ್ಮ ಪತ್ರಗಳನ್ನು ತೆರೆಯಲಾದಾಗ

[11] ಮತ್ತು ಆಕಾಶದ ಕವಚವನ್ನು ಸರಿಸಲಾದಾಗ

[12] ನರಕದ ಅಗ್ನಿಯನ್ನು ಭುಗಿಲೆಬ್ಬಿಸಲಾದಾಗ

[13] ಸ್ವರ್ಗವನ್ನು ಹತ್ತಿರ ತರಲಾದಾಗ

[14] ಪ್ರತಿಯೊಬ್ಬನಿಗೂ ತಿಳಿದು ಬಿಡುವುದು ತಾನೇನು ತಂದಿರುವೆನೆಂದು

[15] ಹಾಗಲ್ಲ – ನಾನು, ಹಿನ್ನಡೆಯುವ ನಕ್ಷತ್ರಗಳ ಆಣೆ ಹಾಕುತ್ತೇನೆ

[16] ಅವು ಸಂಚರಿಸುತ್ತವೆ ಮತ್ತು ಕಣ್ಮರೆಯಾಗುತ್ತವೆ

[17] ಮತ್ತು ಇರುಳು ಕಣ್ಮರೆಯಾಗುವ ಹೊತ್ತಿನ ಆಣೆ

[18] ಮತ್ತು ಮುಂಜಾವು ಉಸಿರಾಡ ತೊಡಗುವಾಗಿನಾಣೆ

[19] ಇದು (ಕುರ್‌ಆನ್) ಗೌರವಾನ್ವಿತ ದೂತನೊಬ್ಬನು ತಲುಪಿಸಿರುವ ಸಂದೇಶವಾಗಿದೆ

[20] ಅವನು ತುಂಬಾ ಬಲಿಷ್ಠನೂ ವಿಶ್ವ ಸಿಂಹಾಸನದ ಒಡೆಯನ ಬಳಿ ಉನ್ನತ ಸ್ಥಾನ ಉಳ್ಳವನೂ ಆಗಿದ್ದಾನೆ

[21] ಅವನು ಅನುಸರಣೀಯನೂ ವಿಶ್ವಾಸಾರ್ಹನೂ ಆಗಿರುತ್ತಾನೆ

[22] ನಿಮ್ಮ ಸಂಗಾತಿ (ದೂತರು) ಹುಚ್ಚರೇನಲ್ಲ

[23] ಅವರು ತೆರೆದ ಬಾನಿನಂಚಿನಲ್ಲಿ ಆತನನ್ನು (ಜಿಬ್‌ರೀಲ್‌ರನ್ನು) ಕಂಡರು

[24] ಅವರು ಅಜ್ಞಾತ ಲೋಕದ ಮಾಹಿತಿಗಳನ್ನು ತಲುಪಿಸುವುದರಲ್ಲಿ ಜಿಪುಣರಲ್ಲ

[25] ಇದು (ಕುರ್‌ಆನ್) ಶಪಿತ ಶೈತಾನನ ವಚನವಲ್ಲ

[26] ನೀವು ಅದೆಲ್ಲಿ ಅಲೆಯುತ್ತಿರುವಿರಿ

[27] ಇದು ಸರ್ವ ಲೋಕಕ್ಕಾಗಿರುವ ಉಪದೇಶವಾಗಿರುತ್ತದೆ

[28] ನಿಮ್ಮ ಪೈಕಿ ಇಷ್ಟ ಉಳ್ಳವನು ನೇರ ಮಾರ್ಗವನ್ನು ಹಿಡಿಯಲಿ

[29] ನಿಮ್ಮ ಇಚ್ಛೆಯಿಂದ ಏನೂ ಆಗುವುದಿಲ್ಲ – ಸರ್ವಲೋಕಗಳ ಒಡೆಯನಾದ ಅಲ್ಲಾಹನು ಇಚ್ಛಿಸುವ ತನಕ

ಸೀಳುವುದು

Surah 82

[1] ಆಕಾಶವು ಬಿರಿದು ಬೀಳುವಾಗ

[2] ಮತ್ತು ನಕ್ಷತ್ರಗಳು ಉದುರುವಾಗ

[3] ಸಮುದ್ರಗಳು ವಿಲೀನವಾದಾಗ

[4] ಗೋರಿಗಳನ್ನು ಬಿಚ್ಚಲಾದಾಗ

[5] ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು

[6] ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು

[7] ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು

[8] ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು

[9] ಹಾಗಲ್ಲ – ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ

[10] ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ

[11] (ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು

[12] ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು

[13] ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು

[14] ದುಷ್ಟರು ನರಕಾಗ್ನಿಯಲ್ಲಿರುವರು

[15] ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು

[16] ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು

[17] ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು

[18] ಹೌದು – ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು

[19] ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು

ವಂಚನೆ

Surah 83

[1] ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ

[2] ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ

[3] ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ

[4] ಅವರನ್ನು ಮತ್ತೆ ಜೀವಂತ ಗೊಳಿಸಲಾಗುವುದೆಂದು ಅವರಿಗೇನು ತಿಳಿಯದೇ

[5] ಒಂದು ಮಹಾದಿನ ಅದು ಸಂಭವಿಸುವುದು

[6] ಅಂದು ಮಾನವರೆಲ್ಲಾ ವಿಶ್ವದೊಡೆಯನ ಮುಂದೆ ನಿಲ್ಲುವರು

[7] ನಿಮಗೆ ತಿಳಿದಿರಲಿ, ದುಷ್ಟರ ಕರ್ಮಗಳು ‘ಸಿಜ್ಜೀನ್’ನಲ್ಲಿವೆ

[8] ಸಿಜ್ಜೀನ್ ಅಂದರೆ ಏನೆಂದು ನಿಮಗೇನು ಗೊತ್ತು

[9] ಅದೊಂದು ಲಿಖಿತ ಗ್ರಂಥ

[10] ಅಂದು ವಿನಾಶವಿದೆ – ಧಿಕ್ಕಾರಿಗಳಿಗೆ

[11] ಅವರು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತಾರೆ

[12] ನಿಜವಾಗಿ, ಎಲ್ಲೆ ಮೀರಿದ ಪಾಪಿ ಮಾತ್ರ ಅದನ್ನು ಧಿಕ್ಕರಿಸುತ್ತಾನೆ

[13] ಅವನಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವನು, ಇವೆಲ್ಲ ಗತಕಾಲದ ಕಥೆಗಳು ಎನ್ನುತ್ತಾನೆ

[14] ಹಾಗಲ್ಲ – ನಿಜವಾಗಿ ಅವರು ಮಾಡಿದ್ದ ಕರ್ಮಗಳು ಅವರ ಮನಸ್ಸುಗಳಿಗೆ ತುಕ್ಕು ಹಿಡಿಸಿವೆ

[15] ಹಾಗಲ್ಲ – ಅಂದು ಅವರು ತನ್ನ ಒಡೆಯನಿಂದ ಮರೆಯಲ್ಲಿರುವರು

[16] ತರುವಾಯ ಅವರು ನರಕವನ್ನು ಸೇರುವರು

[17] ನೀವು ತಿರಸ್ಕರಿಸುತ್ತಿದ್ದುದು ಇದನ್ನೇ ಎಂದು ಅವರೊಡನೆ ಹೇಳಲಾಗುವುದು

[18] ನಿಮಗೆ ತಿಳಿದಿರಲಿ ಸಜ್ಜನರ ಕರ್ಮ ಪತ್ರವು ‘ಇಲ್ಲಿಯ್ಯೀನ್’ನಲ್ಲಿರುವುದು

[19] ಇಲ್ಲಿಯ್ಯೀನ್ ಅಂದರೇನೆಂದು ನಿಮಗೇನು ಗೊತ್ತು

[20] ಅದೊಂದು (ಕರ್ಮಗಳ) ಲಿಖಿತ ಗ್ರಂಥ

[21] (ಅಲ್ಲಾಹನಿಗೆ) ನಿಕಟರಾಗಿರುವವರು ಅದರ ಬಳಿ ಹಾಜರಿರುವರು

[22] ಸಜ್ಜನರು ಖಂಡಿತ ಐಶಾರಾಮದಲ್ಲಿರುವರು

[23] ವೈಭವದ ಆಸನಗಳಲ್ಲಿದ್ದು ದೃಶ್ಯಗಳನ್ನು ಆಸ್ವದಿಸುವರು

[24] ನೀವು ಅವರ ಮುಖಗಳಲ್ಲಿ ಸುಖದ ಉಲ್ಲಾಸವನ್ನು ಕಾಣುವಿರಿ

[25] ಅವರಿಗೆ ಮುದ್ರೆ ಹಾಕಿ ಮುಚ್ಚಿಟ್ಟಿದ್ದ ಶುದ್ಧ ಮದಿರೆಯನ್ನು ಕುಡಿಸಲಾಗುವುದು

[26] ಅದರ ಮುದ್ರೆ ಕಸ್ತೂರಿಯದ್ದಾಗಿರುವುದು, ಸ್ಪರ್ಧಿಸುವವರು ಇದನ್ನು ಪಡೆಯಲು ಸ್ಪರ್ಧಿಸಲಿ

[27] ಅದರಲ್ಲಿ ತಸ್ನೀಮ್‌ನ ಮಿಶ್ರಣವಿರುವುದು

[28] ಅದೊಂದು ಚಿಲುಮೆ. ಅಲ್ಲಾಹನ ಆಪ್ತರಾಗಿರುವವರು (ಸ್ವರ್ಗವಾಸಿಗಳು) ಅದನ್ನು ಸೇವಿಸುವರು

[29] ಅಪರಾಧಿಗಳು (ಇಹಲೋಕದಲ್ಲಿ) ವಿಶ್ವಾಸಿಗಳನ್ನು ಕಂಡು (ಗೇಲಿ ಮಾಡಿ) ನಗುತ್ತಿದ್ದರು

[30] ಅವರ ಬಳಿಯಿಂದ ಹಾದು ಹೋಗುವಾಗ ತಾತ್ಸಾರದಿಂದ ಕೈ ಸನ್ನೆಗಳನ್ನು ಮಾಡುತ್ತಿದ್ದರು

[31] ಅವರು ತಮ್ಮ ಮನೆಯವರ ಬಳಿಗೆ ಮರಳುವಾಗ ಹೆಮ್ಮೆಯಿಂದ ಬೀಗುತ್ತಾ ಮರಳುತ್ತಿದ್ದರು

[32] ಅವರು ಇವರನ್ನು (ವಿಶ್ವಾಸಿಗಳನ್ನು) ಕಂಡಾಗ, ಇವರು ದಾರಿಗೆಟ್ಟವರು ಎನ್ನುತ್ತಿದ್ದರು

[33] ನಿಜವಾಗಿ ಅವರನ್ನು ಇವರ ಮೇಲ್ವಿಚಾರಣೆಗೇನೂ ಕಳಿಸಲಾಗಿರಲಿಲ್ಲ

[34] ಆದರೆ ಇಂದು ವಿಶ್ವಾಸಿಗಳು ಧಿಕ್ಕಾರಿಗಳನ್ನು ಕಂಡು ನಗುವರು

[35] ವೈಭವದ ಆಸನದಲ್ಲಿದ್ದು (ಧಿಕ್ಕಾರಿಗಳ ಗತಿಯನ್ನು) ಕಾಣುತ್ತಿರುವರು

[36] ಧಿಕ್ಕಾರಿಗಳಿಗೆ ಸಿಕ್ಕಿ ಬಿಟ್ಟಿತೇ, ಅವರು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲ

ತೆರೆಯುವುದು

Surah 84

[1] ಆಕಾಶವು ಸ್ಫೋಟಿಸುವಾಗ

[2] ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು

[3] ಭೂಮಿಯನ್ನು ಸಮ ತಟ್ಟಾಗಿಸಲಾಗುವುದು

[4] ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು

[5] ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು

[6] ಮಾನವನೇ, ನೀನು ಕ್ರಮೇಣ ನಿನ್ನೊಡೆಯನ ಕಡೆಗೇ ಹೋಗುತ್ತಿರುವೆ, ನೀನು ಖಂಡಿತ ಅವನನ್ನು ಭೇಟಿಯಾಗುವೆ

[7] ಯಾರ ಕರ್ಮ ಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಯಿತೋ –

[8] ಅವನ ವಿಚಾರಣೆಯು ಸುಲಭವಾಗಿ ನಡೆಯುವುದು

[9] ಮತ್ತು ಅವನು ತನ್ನ ಮನೆಯವರ ಜೊತೆ ಸಂತುಷ್ಟನಾಗಿರುವನು

[10] ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಯಿತೋ

[11] ಅವನು ಮರಣಕ್ಕಾಗಿ ಪ್ರಾರ್ಥಿಸುವನು

[12] ಮತ್ತು ಅವನು ನರಕವನ್ನು ಪ್ರವೇಶಿಸುವನು

[13] (ಇಹಲೋಕದಲ್ಲಿ) ಅವನು ತನ್ನ ಮನೆಯವರ ಜೊತೆ ಮೈ ಮರೆತಿದ್ದನು

[14] ತಾನೆಂದೂ (ತನ್ನ ಒಡೆಯನ ಬಳಿಗೆ) ಹೋಗಲಿಕ್ಕೇ ಇಲ್ಲವೆಂದು ಭಾವಿಸಿದ್ದನು

[15] ಯಾಕಿಲ್ಲ; ಅವನ ಒಡೆಯನಂತೂ ಅವನನ್ನು ನೋಡುತ್ತಲೇ ಇದ್ದನು

[16] ಅಲ್ಲ; ನಾನು ಸಂಜೆಯ ಕೆಂಬಣ್ಣದ ಆಣೆ ಹಾಕುತ್ತೇನೆ

[17] ಮತ್ತು ಇರುಳಿನ ಹಾಗೂ ಅದು ಏನನ್ನೆಲ್ಲಾ ಆವರಿಸುತ್ತದೋ ಅವುಗಳ ಆಣೆ

[18] ಮತ್ತು ಚಂದ್ರನ ಹಾಗೂ ಅದು ಪೂರ್ಣವಾಗುವಾಗಿನಾಣೆ

[19] ನೀವು ಹಂತ ಹಂತವಾಗಿ ಮೇಲೇರುವಿರಿ

[20] ಜನರಿಗೇನಾಗಿದೆ, ಅವರೇಕೆ ನಂಬುವುದಿಲ್ಲ

[21] ಅವರ ಮುಂದೆ ಕುರ್‌ಆನನ್ನು ಓದಲಾದಾಗ ಅವರೇಕೆ ಸಾಷ್ಟಾಂಗ ವೆರಗುವುದಿಲ್ಲ

[22] ನಿಜವಾಗಿ, ಧಿಕ್ಕಾರಿಗಳು ಇದನ್ನು ಸುಳ್ಳೆನ್ನುತ್ತಾರೆ

[23] ಅವರು ತಮ್ಮ ಮನಸ್ಸುಗಳಲ್ಲಿ ಅಡಗಿಸಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು

[24] ಅವರಿಗೆ ಒಂದು ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ

[25] ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ

ನಕ್ಷತ್ರ ಪುಂಜಗಳು

Surah 85

[1] ಗೋಪುರಗಳಿರುವ ಆಕಾಶದಾಣೆ

[2] ವಾಗ್ದಾನ ಮಾಡಲಾಗಿರುವ ಆ ದಿನದ ಆಣೆ

[3] ಹಾಜರಾಗುವವನ ಮತ್ತು ಯಾರ ಮುಂದೆ ಹಾಜರು ಪಡಿಸಲಾಗುವುದೋ ಅವನಾಣೆ

[4] ನಾಶವಾದರು, ಕಂದಕಗಳನ್ನು ಅಗೆದವರು

[5] ಅವರು ಅದರಲ್ಲಿ ಉರಿಯುವ ಕೆಂಡಗಳನ್ನು ತುಂಬಿದ್ದರು

[6] ಅವರು ಅದರ ಸುತ್ತಲೂ ಕುಳಿತಿದ್ದರು

[7] ಮತ್ತು ಅವರು ವಿಶ್ವಾಸಿಗಳಿಗೆ ತಾವು ನೀಡುತ್ತಿದ್ದುದನ್ನು (ಚಿತ್ರ ಹಿಂಸೆಯನ್ನು) ನೋಡುತ್ತಿದ್ದರು

[8] ಅವರು ಆ ವಿಶ್ವಾಸಿಗಳ ವಿರುದ್ಧ ಪ್ರತೀಕಾರವೆಸಗಲು ಇಳಿದುದಕ್ಕೆ, ಅವರು (ಆ ವಿಶ್ವಾಸಿಗಳು) ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನಲ್ಲಿ ನಂಬಿಕೆ ಇಟ್ಟರು ಎಂಬುದಷ್ಟೇ ಕಾರಣವಾಗಿತ್ತು

[9] ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೇ (ಅಲ್ಲಾಹನಿಗೆ) ಸೇರಿದೆ. ಮತ್ತು ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ

[10] ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ಹಿಂಸಿಸಿದವರು ಹಾಗೂ ಆ ಕುರಿತು ಪಶ್ಚಾತ್ತಾಪ ಪಡದವರು – ಅವರಿಗೆ ನರಕದ ಶಿಕ್ಷೆ ಕಾದಿದೆ ಮತ್ತು ಅವರಿಗೆ ಸುಡುವ ಶಿಕ್ಷೆ ಕಾದಿದೆ

[11] ವಿಶ್ವಾಸಿಗಳಿಗೆ ಹಾಗೂ ಸತ್ಕರ್ಮಗಳನ್ನು ಮಾಡಿದವರಿಗೆ ತಳದಲ್ಲಿ ನದಿಗಳು ಹರಿಯುವ ಸ್ವರ್ಗ ತೋಟಗಳು ಸಿಗುವವು. ಇದು ನಿಜಕ್ಕೂ ದೊಡ್ಡ ಸೌಭಾಗ್ಯವಾಗಿದೆ

[12] ನಿನ್ನ ಒಡೆಯನ ಹಿಡಿತವು ಬಹಳ ಕಠಿಣವಾಗಿರುತ್ತದೆ

[13] ಖಂಡಿತವಾಗಿಯೂ ಅವನೇ ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು (ಪುನಃ ಸೃಷ್ಟಿಸುವನು)

[14] ಅವನು ಕ್ಷಮಿಸುವವನೂ ಪ್ರೀತಿಸುವವನೂ ಆಗಿದ್ದಾನೆ

[15] ಅವನು ಗೌರವಾನ್ವಿತ ವಿಶ್ವ ಪೀಠದ ಒಡೆಯನು

[16] ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ

[17] ಪಡೆಗಳ ಸಮಾಚಾರವು ನಿಮಗೆ ತಲುಪಿದೆಯೇ

[18] ಅಂದರೆ ಫಿರ್‌ಔನ್ ಮತ್ತು ಸಮೂದರ ಪಡೆಗಳು

[19] ನಿಜವಾಗಿ ಧಿಕ್ಕಾರಿಗಳು (ಸತ್ಯವನ್ನು) ಅಲ್ಲಗಳೆಯುತ್ತಿದ್ದಾರೆ

[20] ಅಲ್ಲಾಹನು ಅವರನ್ನು ಎಲ್ಲ ಕಡೆಯಿಂದಲೂ ಸುತ್ತುವರಿದಿದ್ದಾನೆ

[21] ನಿಜವಾಗಿ ಇದು ಗೌರವಾನ್ವಿತ ಕುರ್‌ಆನ್ ಆಗಿದೆ

[22] ಇದು ಸುರಕ್ಷಿತ ಗ್ರಂಥದಲ್ಲಿದೆ

ಮುಂಜಾನೆಯ ನಕ್ಷತ್ರ

Surah 86

[1] ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ

[2] ‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು

[3] ಅದು ಮಿನುಗುವ ತಾರೆ

[4] ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ

[5] ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ

[6] ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ

[7] ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ

[8] ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ

[9] ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ

[10] ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು

[11] ಮಳೆ ಸುರಿಸುವ ಆಕಾಶದಾಣೆ

[12] ಬಿರಿಯುವ ಭೂಮಿಯಾಣೆ

[13] ಇದು ನಿರ್ಣಾಯಕ ಸಂದೇಶ

[14] ಇದು ತಮಾಷೆಯಲ್ಲ

[15] ಅವರು ಸಂಚುಗಳನ್ನು ಹೂಡುತ್ತಿದ್ದಾರೆ

[16] ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ

[17] ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ

ಅತ್ಯುನ್ನತ

Surah 87

[1] (ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ

[2] (ಅವನು) ನಿಮ್ಮನ್ನು ಸೃಷ್ಟಿಸಿದವನು ಮತ್ತು ರೂಪಿಸಿದವನು

[3] ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು

[4] ಮೇವನ್ನು ಬೆಳೆಸಿದವನು

[5] ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು

[6] ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ

[7] ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು

[8] ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು

[9] ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ

[10] (ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು

[11] ದುಷ್ಟನು ಅದರಿಂದ ದೂರ ಉಳಿಯುವನು

[12] ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು

[13] ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು

[14] ಖಂಡಿತ ವಿಜಯಿಯಾದನು – ಶುದ್ಧನಾದವನು

[15] ಮತ್ತು ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು

[16] ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ

[17] ನಿಜವಾಗಿ ಪರಲೋಕವು ಉತ್ತಮವಾಗಿದೆ – ಮತ್ತು ಅದು ಸದಾ ಉಳಿದಿರುತ್ತದೆ

[18] ಗತಕಾಲದ ಗ್ರಂಥಗಳಲ್ಲಿ ಇದನ್ನೇ ಹೇಳಲಾಗಿದೆ –

[19] – ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ

ಮಿತಿಮೀರಿದ

Surah 88

[1] ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ

[2] ಅಂದು ಕೆಲವು ಮುಖಗಳು ಭೀತವಾಗಿರುವವು

[3] ತೀವ್ರವಾಗಿ ದಣಿದು ಸೋತಿರುವವು

[4] ಅವರು ಉರಿಯುವ ಬೆಂಕಿಯನ್ನು ಸೇರುವರು

[5] ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು

[6] ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ ಸಿಗದು

[7] ಅದರಿಂದ ಅವರಿಗೆ ಪುಷ್ಟತೆಯೂ ಸಿಗದು ಮತ್ತು ಅವರ ಹಸಿವೂ ನೀಗದು

[8] ಕೆಲವು ಮುಖಗಳು ಅಂದು ಸಂಭ್ರಮಿಸುತ್ತಿರುವವು

[9] ತಮ್ಮ ಗಳಿಕೆಯಿಂದ ಅವರು ಸಂತೃಪ್ತರಾಗಿರುವರು

[10] ಅವರು ಉನ್ನತವಾದ ತೋಟಗಳಲ್ಲಿರುವರು

[11] ವ್ಯರ್ಥವಾದ ಯಾವುದನ್ನೂ ಅವರು ಅಲ್ಲಿ ಕೇಳಲಾರರು

[12] ಅಲ್ಲಿ ಚಿಲುಮೆಗಳು ಹರಿಯುತ್ತಿರುವವು

[13] ಅಲ್ಲಿ ಎತ್ತರದಲ್ಲಿ ಹಾಸಿರುವ ಪೀಠಗಳಿರುವವು

[14] ಸಾಲಾಗಿಟ್ಟ ಪಾನ ಪಾತ್ರೆಗಳಿರುವವು

[15] ಸಾಲುಸಾಲಾಗಿ ದಿಂಬುಗಳಿರುವವು

[16] ಮತ್ತು ನುಣುಪಾದ ಹಾಸುಗಳು ಇರುವವು

[17] ಅವರು ಹೆಣ್ಣೊಂಟೆಯತ್ತ ನೋಡುವುದಿಲ್ಲವೇ – ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು

[18] ಮತ್ತು ಆಕಾಶದೆಡೆಗೆ, (ನೋಡುವುದಿಲ್ಲವೇ,) ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು

[19] ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು

[20] ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು

[21] (ದೂತರೇ,) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ

[22] ನೀವು ಅವರ ಕಾವಲುಗಾರರೇನಲ್ಲ

[23] ಇನ್ನು ಕಡೆಗಣಿಸಿದವನ ಮತ್ತು ಧಿಕ್ಕರಿಸಿದವನ ವಿಚಾರ –

[24] ಅಲ್ಲಾಹನು ಅವನನ್ನು ದೊಡ್ಡ ಶಿಕ್ಷೆಗೆ ಗುರಿಪಡಿಸುವನು

[25] ಅವರು ಖಂಡಿತ ನಮ್ಮೆಡೆಗೇ ಮರಳಿ ಬರಬೇಕಾಗಿದೆ

[26] ಮತ್ತು ಅವರ ವಿಚಾರಣೆಯ ಹೊಣೆಯು ನಮ್ಮ ಮೇಲಿದೆ

ಬೆಳಗಿನ ಜಾವ

Surah 89

[1] ಮುಂಜಾವಿನಾಣೆ

[2] ಮತ್ತು ಹತ್ತು ರಾತ್ರಿಗಳಾಣೆ

[3] ಮತ್ತು ಸಮ ಹಾಗೂ ಬೆಸ ಸಂಖ್ಯೆಗಳಾಣೆ

[4] ಮತ್ತು ರಾತ್ರಿಯು ತೆರಳುವಾಗಿನಾಣೆ

[5] ಬುದ್ಧಿಜೀವಿಗಳಿಗೆ ಈ ಪ್ರಮಾಣಗಳು ಸಾಕೇ

[6] ನೀವು ನೋಡಿದಿರಾ, ನಿಮ್ಮ ಒಡೆಯನು ಆದ್ ಜನಾಂಗದವರಿಗೆ ಏನು ಮಾಡಿದನೆಂಬುದನ್ನು

[7] ಇರಮ್‌ನ ಸ್ತಂಭದವರನ್ನು

[8] ನಾಡುಗಳ ಪೈಕಿ ಅಂತಹ ಇನ್ನೊಂದು ನಾಡು ಸೃಷ್ಟಿಯಾಗಿಲ್ಲ

[9] ಬಯಲುಗಳಲ್ಲಿ ಕಠೋರ ಕಲ್ಲುಗಳನ್ನು ಕೆತ್ತಿದ್ದ ಸಮೂದರು –

[10] ಮತ್ತು ಬೃಹತ್ ಮೊಳೆಗಳ ಫಿರ್‌ಔನ್

[11] ಅವರೆಲ್ಲಾ (ತಮ್ಮ) ನಾಡುಗಳಲ್ಲಿ ಬಂಡಾಯವೆದ್ದಿದ್ದರು

[12] ಮತ್ತು ಅವರು ಅಲ್ಲಿ ಅಶಾಂತಿಯನ್ನು ಮೆರೆದಿದ್ದರು

[13] ಕೊನೆಗೆ ನಿಮ್ಮೊಡೆಯನು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬೀಸಿದನು

[14] ನಿಮ್ಮ ಒಡೆಯನಂತು ಹೊಂಚಿನಲ್ಲಿದ್ದಾನೆ

[15] ಮನುಷ್ಯನನ್ನು ಅವನ ಒಡೆಯನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವವನ್ನೂ. ಅನುಗ್ರಹವನ್ನೂ ದಯಪಾಲಿಸಿದಾಗ ಅವನು, ನನ್ನೊಡೆಯನು ನನ್ನನ್ನು ಗೌರವಾನ್ವಿತನಾಗಿಸಿದ್ದಾನೆ ಎನ್ನುತ್ತಾನೆ

[16] ಇನ್ನು ಅವನು ಆತನನ್ನು ಪರೀಕ್ಷೆಗೊಳಪಡಿಸಿ ಅವನ ಆದಾಯವನ್ನು ಸೀಮಿತ ಗೊಳಿಸಿದಾಗ ಅವನು ನನ್ನೊಡೆಯನು ನನ್ನನ್ನು ನೀಚನಾಗಿಸಿದ್ದಾನೆ ಎನ್ನುತ್ತಾನೆ

[17] ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ

[18] ಬಡವನಿಗೆ ಉಣಿಸುವಂತೆ (ಪರಸ್ಪರ) ಪ್ರೋತ್ಸಾಹಿಸುವುದಿಲ್ಲ

[19] ಮತ್ತು ನೀವು ವಾರೀಸು ಸೊತ್ತನ್ನು (ಅಕ್ರಮವಾಗಿ) ಕಬಳಿಸುತ್ತೀರಿ

[20] ನೀವು ಸಂಪತ್ತನ್ನು ಅಪಾರವಾಗಿ ಪ್ರೀತಿಸುತ್ತೀರಿ

[21] ಹಾಗಲ್ಲ, ಭೂಮಿಯನ್ನು ಕುಟ್ಟಿ ಕುಟ್ಟಿ ತಗ್ಗಿಸಲಾದಾಗ

[22] ನಿಮ್ಮೊಡೆಯನು ಬಂದಾಗ, ಹಾಗೂ ಮಲಕ್‌ಗಳು ಸಾಲುಗಟ್ಟಿದಾಗ

[23] ಅಂದು ನರಕವನ್ನು ಮುಂದೆ ತರಲಾಗುವುದು. ಅಂದು ಮನುಷ್ಯನಿಗೆ ವಿಷಯವು ಅರ್ಥವಾಗುವುದು. ಆದರೆ ಅಂದು ಅರ್ಥವಾದರೆ ಅವನಿಗೇನು ಲಾಭ

[24] ಅವನು ಹೇಳುವನು; ಅಯ್ಯೋ, ನಾನು ಈ ಬದುಕಿಗೆ ಪೂರ್ವ ಸಿದ್ಧತೆ ನಡೆಸಬೇಕಿತ್ತು

[25] ಅಂದು ಅವನು (ಅಲ್ಲಾಹನು) ನೀಡುವಂತಹ ಶಿಕ್ಷೆಯನ್ನು ಬೇರೆ ಯಾರೂ ನೀಡಲಾರರು

[26] ಮತ್ತು ಅವನು ಕಟ್ಟಿಡುವ ರೀತಿಯಲ್ಲಿ ಬೇರೆ ಯಾರೂ ಕಟ್ಟಿಡಲಾರನು

[27] (ಸಜ್ಜನರೊಡನೆ ಹೇಳಲಾಗುವುದು;) ಸಂತೃಪ್ತ ಚಿತ್ತವೇ

[28] ಸಂತೃಪ್ತನಾಗಿ ಮರಳು ನಿನ್ನ ಒಡೆಯನೆಡೆಗೆ – ಅವನೂ ನಿನ್ನಿಂದ ಸಂತೃಪ್ತ ನಾಗಿರುವನು

[29] ನನ್ನ ದಾಸರ ಜೊತೆ ಪ್ರವೇಶಿಸು

[30] ನನ್ನ ಸ್ವರ್ಗವನ್ನೂ ಪ್ರವೇಶಿಸು

ನಗರ

Surah 90

[1] ಇಲ್ಲ, ನಾನು ಈ ನಗರದ ಆಣೆ ಹಾಕುತ್ತೇನೆ

[2] ನೀವು ಇದೇ ನಗರದಲ್ಲಿ ಇರುವವರು

[3] ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ

[4] ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ

[5] ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ

[6] ನಾನು ಬಹಳಷ್ಟು ಸಂಪತ್ತನ್ನು ವ್ಯರ್ಥಗೊಳಿಸಿದ್ದೇನೆ ಎಂದವನು ಹೇಳುತ್ತಾನೆ

[7] ಅವನೇನು, ತನ್ನನ್ನು ಯಾರೂ ನೋಡಿಲ್ಲವೆಂದು ಭಾವಿಸಿದ್ದಾನೆಯೇ

[8] ನಾವೇನು ಅವನಿಗೆ ಎರಡು ಕಣ್ಣುಗಳನ್ನು ನೀಡಿಲ್ಲವೇ

[9] ನಾಲಿಗೆ ಹಾಗೂ ಎರಡು ತುಟಿಗಳನ್ನು ನೀಡಿಲ್ಲವೇ

[10] ಮತ್ತು ಅವನಿಗೆ ಎರಡು ದಾರಿಗಳನ್ನು ತೋರಿಸಿಲ್ಲವೇ

[11] ಆದರೆ ಅವನು ಏರು ಹಾದಿಯನ್ನು ಕ್ರಮಿಸಲು ನಿರಾಕರಿಸಿದನು

[12] ನಿಮಗೇನು ಗೊತ್ತು ಆ ಏರು ಹಾದಿ ಏನೆಂದು

[13] (ದಾಸ್ಯದಲ್ಲಿರುವವರ) ಕೊರಳನ್ನು ಬಿಡಿಸುವುದು

[14] ಅಥವಾ ಹಸಿವಿನ ದಿನ ಉಣಿಸುವುದು

[15] ಸಂಬಂಧಿಕನಾಗಿರುವ ಅನಾಥನನ್ನು ಪೋಷಿಸುವುದು

[16] ಸಂಕಷ್ಟದಲ್ಲಿರುವ ಬಡವನಿಗೆ ನೆರವಾಗುವುದು

[17] (ಇದನ್ನು ಮಾಡಿದವನು) ವಿಶ್ವಾಸಿಗಳ, ಪರಸ್ಪರ ಸಹನೆಯನ್ನು ಬೋಧಿಸುವವರ ಹಾಗೂ ಪರಸ್ಪರ ಕರುಣೆಯನ್ನು ಬೋಧಿಸುವವರ ಸಾಲಿಗೆ ಸೇರಿರಬೇಕು

[18] ಅವರೇ ಬಲ ಭಾಗದವರು (ಸೌಭಾಗ್ಯವಂತರು)

[19] ಇನ್ನು, ನಮ್ಮ ವಚನಗಳನ್ನು ಧಿಕ್ಕರಿಸಿದವರೇ ಎಡಭಾಗದವರು (ಭಾಗ್ಯಹೀನರು)

[20] ಅವರನ್ನು ನರಕಾಗ್ನಿಯಲ್ಲಿ ಮುಚ್ಚಿ ಬಿಡಲಾಗುವುದು

ಸೂರ್ಯ

Surah 91

[1] ಸೂರ್ಯನ ಹಾಗೂ ಅದರ ಬೆಳಕಿನಾಣೆ

[2] ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ

[3] ಹಗಲಿನ ಹಾಗೂ ಅದನ್ನು ಬೆಳಗಿಸಿದವನಾಣೆ

[4] ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ

[5] ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ

[6] ಭೂಮಿಯ ಹಾಗೂ ಅದನ್ನು ಹರಡಿದವನಾಣೆ

[7] ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ

[8] ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ

[9] ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು

[10] ಅದನ್ನು ಮಲಿನ ಗೊಳಿಸಿದವನು ಸೋತನು

[11] ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು

[12] ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು

[13] ಆಗ ಅಲ್ಲಾಹನ ದೂತರು – ಅಲ್ಲಾಹನ ಒಂಟೆ ಮತ್ತು ಅವರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ – ಎಂದರು

[14] ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು

[15] ಅದರ ಪರಿಣಾಮವೇನಾದೀತು ಎಂದು ಅವನು ಅಂಜಲಿಲ್ಲ

ರಾತ್ರಿ

Surah 92

[1] ರಾತ್ರಿಯಾಣೆ – ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ

[2] ಹಗಲಿನಾಣೆ – ಅದು ಬೆಳಗಿದಾಗ

[3] ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ

[4] ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ

[5] ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು

[6] ಮತ್ತು ಒಳಿತನ್ನು ಸಮರ್ಥಿಸಿದವನು –

[7] – ಅವನ ಪಾಲಿಗೆ ನಾವು ಸರಳವಾದ ಮಾರ್ಗದ ಸುಲಭ ಗೊಳಿಸುವೆವು

[8] ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು

[9] ಮತ್ತು ಒಳಿತನ್ನು ತಿರಸ್ಕರಿಸಿದವನು –

[10] – ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು

[11] ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು

[12] ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ

[13] ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ

[14] ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ

[15] ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು –

[16] – ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು

[17] ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು

[18] ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ

[19] ಅವನು ಮರು ಪಾವತಿಸಬೇಕಾದ ಯಾವ ಋಣವೂ ಅವನ ಮೇಲಿಲ್ಲ –

[20] ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ

[21] ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು

ಬೆಳಗಿನ ಸಮಯ

Surah 93

[1] ಬಿಸಿಲೇರುವ ಸಮಯದಾಣೆ

[2] ಇರುಳು ಆವರಿಸುವಾಗಿನಾಣೆ

[3] (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ

[4] ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ

[5] ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು

[6] ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ

[7] ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ

[8] ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ

[9] ನೀವಿನ್ನು ಅನಾಥರನ್ನು ಗದರಿಸಬೇಡಿ

[10] ಮತ್ತು ಬೇಡುವವನನ್ನು ಜರೆಯಬೇಡಿ

[11] ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ

ನಿವಾರಣೆ

Surah 94

[1] (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ

[2] ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ

[3] ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು

[4] ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ

[5] ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ

[6] ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ

[7] ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ

[8] ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ

ಅಂಜೂರದ ಹಣ್ಣು

Surah 95

[1] ಅಂಜೂರದಾಣೆ ಹಾಗೂ ಇಪ್ಪೆಯಾಣೆ

[2] ಸೀನೀನ್ (ಸಿನಾಯ್) ಪರ್ವತದಾಣೆ

[3] ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ

[4] ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು

[5] ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು

[6] ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ

[7] (ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ

[8] ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು ಅಲ್ಲಾಹನಲ್ಲವೇ

ರಕ್ತದ ಹೆಪ್ಪುಗಟ್ಟುವಿಕೆ

Surah 96

[1] ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ

[2] ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು

[3] ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ

[4] ಅವನು ಲೇಖನಿಯ ಮೂಲಕ ಕಲಿಸಿದನು

[5] ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು

[6] ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ

[7] ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ

[8] ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ

[9] ನೀವು ನೋಡಿದಿರಾ, ತಡೆಯುವವನನ್ನು

[10] (ನಮ್ಮ) ದಾಸನು ನಮಾಝ್ ಸಲ್ಲಿಸುವಾಗ (ತಡೆಯುವವನನ್ನು)

[11] ನೀವು ನೋಡಿದಿರಾ? ಒಂದು ವೇಳೆ ಅವನು ಸರಿದಾರಿಯಲ್ಲಿದ್ದರೆ

[12] ಅಥವಾ ಅವನು ಸತ್ಯನಿಷ್ಠೆಯನ್ನು ಬೋಧಿಸಿದ್ದರೆ (ಅವನನ್ನು ತಡೆದವನ ಗತಿ ಏನಾದೀತು)

[13] ನೀವು ನೋಡಿದಿರಾ? ಅವನು (ತಡೆಯುವವನು, ಸತ್ಯವನ್ನು) ತಿರಸ್ಕರಿಸುವವನು ಹಾಗೂ ಕಡೆಗಣಿಸುವವನಾಗಿದ್ದರೆ (ಅವನ ಗತಿ ಏನಾದೀತು)

[14] ಅಲ್ಲಾಹನು ನೋಡುತ್ತಿರುವನೆಂದು ಅವನಿಗೆ ತಿಳಿಯದೇ

[15] ಒಂದು ವೇಳೆ ಅವನು ತನ್ನನ್ನು ತಡೆಯದಿದ್ದರೆ, ನಾವು ಅವನ ತಲೆಯ ಜುಟ್ಟನ್ನು ಹಿಡಿದು ಎಳೆದೊಯ್ಯುವೆವು

[16] ಸುಳ್ಳುಗಾರ, ಪಾಪಿ ಹಣೆ ಅದು

[17] ಅವನೀಗ ತನ್ನ ಕೂಟವನ್ನು ಕರೆಯಲಿ

[18] ನಾವು ನಮ್ಮ ಪಡೆಯನ್ನು ಕರೆಯುವೆವು

[19] (ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ

ಶಕ್ತಿ

Surah 97

[1] ನಾವು ಇದನ್ನು ಗೌರವಾನ್ವಿತ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು

[2] ಗೌರವಾನ್ವಿತ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು

[3] ಆ ಗೌರವಾನ್ವಿತ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ

[4] ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ

[5] ಶಾಂತಿಯಾಗಿರುತ್ತದೆ – ಅದು, ಬೆಳಗಿನ ಉದಯದ ತನಕ

ಸ್ಪಷ್ಟ ಪುರಾವೆ

Surah 98

[1] ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ

[2] (ಇದೀಗ) ಪಾವನ ಪುಟಗಳನ್ನು ಓದಿ ಕೇಳಿಸುವ ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು)

[3] ಅದರಲ್ಲಿ ಖಚಿತ ಆದೇಶಗಳು ಲಿಖಿತವಾಗಿವೆ

[4] (ಈ ಹಿಂದೆಯೂ) ಗ್ರಂಥದವರು, ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವಷ್ಟೇ, ಛಿನ್ನ ಭಿನ್ನರಾಗಿದ್ದರು

[5] ನಿಷ್ಠೆಯನ್ನು ಅವನಿಗೇ (ಅಲ್ಲಾಹನಿಗೇ) ಮೀಸಲಾಗಿಟ್ಟು, ಏಕಾಗ್ರತೆಯೊಂದಿಗೆ ಅಲ್ಲಾಹನನ್ನು ಆರಾಧಿಸಬೇಕು, ನಮಾಝನ್ನು ಸಲ್ಲಿಸಬೇಕು ಮತ್ತು ಝಕಾತನ್ನು ಪಾವತಿಸಬೇಕು – ಇದುವೇ ಸ್ಥಿರವಾದ ಧರ್ಮ ಎಂದೇ (ಈ ಹಿಂದೆಯೂ) ಅವರಿಗೆ ಆದೇಶಿಸಲಾಗಿತ್ತು

[6] ಗ್ರಂಥದವರ ಹಾಗೂ ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು ಸದಾಕಾಲ ನರಕದಲ್ಲಿರುವರು – ಅವರೇ ಅತ್ಯಂತ ನೀಚ ಜೀವಿಗಳು

[7] ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು – ಖಂಡಿತ ಅವರೇ ಅತ್ಯುತ್ತಮ ಜೀವಿಗಳು

[8] ಅವರ ಪ್ರತಿಫಲವು ಅವರ ಒಡೆಯನ ಬಳಿ – ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗದ ರೂಪದಲ್ಲಿದೆ. ಅದರಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾಗಿರುವರು. ಇದು ತಮ್ಮ ಒಡೆಯನಿಗೆ ಅಂಜುತ್ತಿದ್ದವರಿಗಾಗಿ ಇರುವ ಪ್ರತಿಫಲ

ಭೂಕಂಪ

Surah 99

[1] ಭೂಮಿಯು ಭೂಕಂಪದಿಂದ ಕಂಪಿಸುವಾಗ

[2] ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ

[3] ಮತ್ತು ಮಾನವನು – ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ

[4] ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು

[5] ಏಕೆಂದರೆ, ಅದರ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು

[6] ಅಂದು ಜನರು ಗುಂಪು ಗುಂಪಾಗಿ ಹೊರ ಬರುವರು – ತಮ್ಮ ಕರ್ಮಗಳನ್ನು ಕಾಣಲಿಕ್ಕಾಗಿ

[7] ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು

[8] ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು

ಚಾರ್ಜರ್‌ಗಳು

Surah 100

[1] ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ

[2] ಅವು ಕಿಡಿ ಹಾರಿಸುತ್ತವೆ

[3] ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ

[4] ಅವು ಧೂಳೆಬ್ಬಿಸಿ ಬಿಡುತ್ತವೆ

[5] ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ

[6] ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ

[7] ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ

[8] ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ

[9] ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು

[10] ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು

[11] ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು

ವಿಪತ್ತು

Surah 101

[1] ಭಾರೀ ಆಘಾತ

[2] ಏನದು, ಭಾರೀ ಆಘಾತ

[3] ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು

[4] ಅಂದು ಜನರು ಚದರಿದ ಹಾತೆಗಳಂತಾಗುವರು

[5] ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು

[6] ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ –

[7] – ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು

[8] ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ –

[9] – ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು

[10] ಅದೇನೆಂದು ನಿಮಗೇನು ಗೊತ್ತು

[11] ಅದು ಉರಿಯುವ ಬೆಂಕಿಯಾಗಿರುವುದು

ಜಗತ್ತಿನಲ್ಲಿ ಪೈಪೋಟಿ

Surah 102

[1] (ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ

[2] ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ)

[3] ಖಂಡಿತ ಇದು ಸರಿಯಲ್ಲ, ನಿಮಗೆ ಬೇಗನೇ ತಿಳಿಯಲಿದೆ

[4] ಮತ್ತೆ , ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ

[5] ಖಂಡಿತ ಇದು ಸರಿಯಲ್ಲ, ನಿಮಗೆ (ಈ ವಾಸ್ತವವು) ಜ್ಞಾನ ತುಂಬಿದ ನಂಬಿಕೆಯೊಂದಿಗೆ ತಿಳಿದಿದ್ದರೆ ಚೆನ್ನಾಗಿತ್ತು

[6] ಖಂಡಿತ ನೀವು ನರಕವನ್ನು ಕಾಣುವಿರಿ

[7] ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ

[8] ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ ನೀಡಲಾಗಿದ್ದ ಕೊಡುಗೆಗಳ ಕುರಿತು ಪ್ರಶ್ನಿಸಲಾಗುವುದು

ಕ್ಷೀಣಿಸುತ್ತಿರುವ ದಿನ

Surah 103

[1] ಕಾಲದಾಣೆ

[2] ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ

[3] ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರರಿಗೆ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು

ತೆಗಳುವವನು

Surah 104

[1] ವಿನಾಶಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ

[2] ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ

[3] ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ

[4] ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು

[5] ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು

[6] ಅದು ಅಲ್ಲಾಹನು ಉರಿಸಿದ ಬೆಂಕಿ

[7] ಅದು ಹೃದಯಗಳನ್ನೂ ತಲುಪುವುದು

[8] ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು

[9] ಉದ್ದದ ಸ್ತಂಭಗಳ ರೂಪದಲ್ಲಿ

ಆನೆ

Surah 105

[1] ನೀವು ಕಂಡಿಲ್ಲವೇ, ನಿಮ್ಮೊಡನೆಯನು ಆನೆಯವರಿಗೆ ಏನು ಮಾಡಿದನೆಂದು

[2] ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ

[3] ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು

[4] ಅವು ಅವರ ಮೇಲೆ ಹರಳು ಕಲ್ಲುಗಳನ್ನು ಎಸೆಯುತ್ತಿದ್ದವು

[5] ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು

ಖುರೈಶ್

Surah 106

[1] (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದ್ದಕ್ಕಾಗಿ

[2] ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ

[3] ಅವರು ಈ ಭವನ (ಕಅ್ಬ:)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ

[4] ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು

ಸಣ್ಣ ಉಪಕಾರಗಳು

Surah 107

[1] ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು

[2] ಅವನೇ, ಅನಾಥನನ್ನು ದೂರ ದಬ್ಬುವವನು

[3] ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು

[4] ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ

[5] ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ

[6] ಅವರು ಡಂಬಾಚಾರ ಮಾಡುತ್ತಾರೆ

[7] ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ

ಸಮೃದ್ಧಿ

Surah 108

[1] (ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ’ಕೌಸರ್’ ನೀಡಿದ್ದೇವೆ

[2] ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ

[3] ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು

ಧಿಕ್ಕರಿಸುವವರು

Surah 109

[1] (ದೂತರೇ,) ಹೇಳಿರಿ; ಧಿಕ್ಕಾರಿಗಳೇ

[2] ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ

[3] ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ

[4] ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ

[5] ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ

[6] ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ

ನೆರವು

Surah 110

[1] ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ

[2] ಮತ್ತು ಜನರು ಸಮೂಹಗಳಾಗಿ ಅಲ್ಲಾಹನ ಧರ್ಮದೊಳಗೆ ಪ್ರವೇಶಿಸುವುದನ್ನು ನೀವು ಕಂಡಾಗ

[3] ನಿಮ್ಮೊಡೆಯನ ಪ್ರಶಂಸೆಯೊಂದಿಗೆ, ಅವನ ಗುಣಗಾನ ಮಾಡಿರಿ ಮತ್ತು ಅವನಿಂದ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪದೇ ಪದೇ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ

ಜ್ವಾಲೆ

Surah 111

[1] ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು

[2] ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ

[3] ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು

[4] ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ

[5] ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು

ಪ್ರಾಮಾಣಿಕತೆ

Surah 112

[1] ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು)

[2] ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು

[3] ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ

[4] ಮತ್ತು ಅವನಿಗೆ ಸರಿಸಾಟಿಯಾಗಲು ಯಾರಿಗೂ ಸಾಧ್ಯವಿಲ್ಲ

ಬೆಳಗಿನ ಜಾವ

Surah 113

[1] ಹೇಳಿರಿ; ನಾನು, ಮುಂಜಾವಿನ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ –

[2] ಅವನು ಸೃಷ್ಟಿಸಿರುವ ಎಲ್ಲ ಕೆಡುಕುಗಳಿಂದ (ಸುರಕ್ಷಿತನಾಗಿರಲು)

[3] ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)

[4] ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ

[5] ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)

ಮಾನವಕುಲ

Surah 114

[1] ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ

[2] ಅವನು (ಅಲ್ಲಾಹನು) ಮಾನವರ ದೊರೆ

[3] ಮಾನವರ ಆರಾಧ್ಯ

[4] ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ)

[5] ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ

[6] ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು